ಗುರುವಾರ, ಡಿಸೆಂಬರ್ 28, 2017
ಅಪೂರ್ವ ನವ ವರ್ಣ-ಮಾತ್ರಾವೃತ್ತಗಳ ಅನ್ವೇಷಣಕಾರ ಛಂದೋನಿಜಗುಣಿ ಡಾ.ಸಿ.ನಾಗಭೂಷಣ
ಗುಣಮಧುರನ ತಮಟಕಲ್ಲು ಶಾಸನದ ಮಹತ್ವ
ಗುಣಮಧುರನ
ತಮಟಕಲ್ಲು ಶಾಸನದ
ಮಹತ್ವ
ಡಾ.ಸಿ.ನಾಗಭೂಷಣ
ಕನ್ನಡ ಸಾಹಿತ್ಯದ ಪ್ರಥಮ
ಘಟ್ಟದ ಅವಶೇಷಗಳೆಂದರೆ ಶಾಸನಗಳು. ಪಂಪಪೂರ್ವ ಯಗದಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ಅಥವ
ಕಾವ್ಯಗುಣಗಳುಳ್ಳ ಬಿಡಿಮುಕ್ತಕಗಳು ಕಂಡುಬರುವುದು ಚಿತ್ರದುರ್ಗದ ತಮಟ ಕಲ್ಲಿನ ಶಾಸನ ಮತ್ತು
ಶ್ರವಣ ಬೆಳಗೊಳದ ನಿಷದಿ ಶಾಸನಗಳು. ನಿಷಿಧಿ ಶಾಸನಗಳನ್ನು ನಾಡಿನ ಪ್ರಥಮ
ಸಾಹಿತ್ಯ ಪಾಠಗಳೆಂದು ಈಗಾಗಲೇ ವಿದ್ವಾಂಸರು ಗುರುತಿಸಿರುವುದು ಪರಿಶೀಲ ನಾರ್ಹವಾಗಿದೆ.
ಪೂರ್ವ ಹಳಗನ್ನಡದ ಭಾಷೆಯನ್ನು ಒಳಗೊಂಡು ಸಾಹಿತ್ಯ ದೃಷ್ಟಿಯಿಂದ ಗಮನಾರ್ಹವಾದ ಶಾಸನವೆಂದರೆ
ಚಿತ್ರದುರ್ಗ ಜಿಲ್ಲೆಯ ತಮಟಕಲ್ಲಿನ ಗ್ರಾಮದ ಪೂರ್ವಕ್ಕಿರುವ ಹೊಲದಲ್ಲಿ ಪೂರ್ವಾಭಿಮುಖವಾಗಿ
ನೆಲದಲ್ಲಿ ಹೂಳಲ್ಪಟ್ಟಿರುವ ಗುಣಮಧುರನಿಗೆ ಸಂಬಂಧಿಸಿದ ಶಾಸನ. ಚಿತ್ರದುರ್ಗ ನಗರದ ಸಮೀಪವಿರುವ ತಮಟಕಲ್ಲು ಗ್ರಾಮದ ಪ್ರಾಚೀನ ಹೆಸರನ್ನು 'ಮಾಸಿಕಪುರ' ಎಂದು
ಉಲ್ಲೇಖಿಸಲಾಗಿದೆ. ಒಂದು ಸಂಸ್ಕೃತ ಭಾಷೆಯ ಗದ್ಯಶಾಸನವಾದರೆ ಮತ್ತೊಂದು ಕನ್ನಡ ಭಾಷೆಯಲ್ಲಿಯ ಪದ್ಯಶಾಸನ. (E.C.XI. ಚಿತ್ರದುರ್ಗ 43).
ಬಿ.ಎಲ್.ರೈಸ್ ಅವರು ಈ ಶಾಸನವನ್ನು ಶೋಧಿಸಿ ಮೊದಲಿಗೆ
ಸಂಪಾದಿಸಿ ಪ್ರಕಟಿಸಿದರು. ಈ ಶಾಸನವು ಎಪಿಗ್ರಫಿಯಾ ಕರ್ನಾಟಿಕಾ ಸಂಪಟ
XI ರಲ್ಲಿ ( ಚಿತ್ರದುರ್ಗ-೪೩)
ಪ್ರಕಟವಾಗಿದ್ದು ನಂತರದಲ್ಲಿ ಪ್ರಾಚೀನ ಕನ್ನಡ ಭಾಷೆ ಸಾಹಿತ್ಯ ಮತ್ತು ಛಂದಸ್ಸನ್ನು ಕುರಿತು ಅಧ್ಯಯನ
ಮಾಡುವ ಎಲ್ಲಾ ವಿದ್ವಾಂಸರು ಈ ಶಾಸನವನ್ನು ಒಂದಿಲ್ಲೊಂದು ರೀತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಶಾಸನವು ಕ್ರಿ.ಶ. ೫೦೦ರ (೫ನೇ
ಶತಮಾನದ ಅಂತ್ಯ ಅಥವಾ ೬ನೇ ಶತಮಾನದ ಆರಂಭ) ಕಾಲಘಟ್ಟಕ್ಕೆ ಸೇರಿದ್ದಾಗಿದೆ ಎಂಬುದು
ಚರ್ಚೆಯಿಂದ ವಿದಿತವಾದರೂ ಸುಮಾರು ಐದನೆಯ ಶತಮಾನದ್ದಿರ ಬೇಕೆಂಬ ಊಹೆ ಸ್ವೀಕಾರಾರ್ಹವಾಗಿದೆ. ಚಿತ್ರದುರ್ಗ ಜಿಲ್ಲೆಯ ತಮಟಕಲ್ಲು
ಗ್ರಾಮದಲ್ಲಿ ದೊರೆತಿರುವ 'ಗುಣಮಧುರನ ಶಾಸನ'ವು ವೀರಗಲ್ಲು ಶಾಸನವಾಗಿದ್ದು, ಕೇವಲ ಇತಿಹಾಸದ
ದೃಷ್ಟಿಯಿಂದಷ್ಟೇ ಅಲ್ಲದೆ, ಕನ್ನಡ ಭಾಷೆ, ಛಂದಸ್ಸು
ಮತ್ತು ಸಾಹಿತ್ಯದ ಪ್ರಾಚೀನತೆಯನ್ನು ಅರಿಯುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ದಾಖಲೆಯಾಗಿದೆ. ಗುಣಮಧುರನಿಗೆ ಸಂಬಂಧಿಸಿದ ಶಾಸನಗಳ ವಿವರಗಳನ್ನು
ನೋಡುವುದಾದರೆ ʻಸಂಸ್ಕೃತ ಭಾಷೆಯ ಶಾಸನವಿರುವ ಶಿಲೆಯ ವಿವರಗಳು ಈ ರೀತಿ
ಇವೆ. ಈ ಶಿಲೆ ನೆಲದಲ್ಲಿ ಎಷ್ಟು ಹೂತು ಹೋಗಿದೆಯೋ ತಿಳಿಯದು. ಈಗಿರುವಂತೆ ಭೂಮಿಯಿಂದ ಮೂರು ಅಡಿ
ಎತ್ತರ ಹಾಗೂ ಐದು ಅಡಿ ಅಗಲವಿದೆ. ಈ ಕಲ್ಲಿನಲ್ಲಿ ಮೇಲಿನಿಂದ ಅರ್ಧ ಅಡಿ ಸ್ಥಳ ಬಿಟ್ಟು ಒಂದೂವರೆ
ಅಡಿ ಅಗಲ ಮತ್ತು ಎರಡೂವರೆ ಅಡಿ ಉದ್ದದ ಚೌಕದಲ್ಲಿ ಶಿಲ್ಪವನ್ನು ಬಿಡಿಸಲಾಗಿದೆ. ಇದೊಂದು ವಿಶಿಷ್ಟವಾದ ವೀರಗಲ್ಲು ಶಿಲ್ಪವನ್ನು ಹೊಂದಿದೆ. ಒಂದೇ ಫಲಕದಲ್ಲಿ ಮೂವರು ವೀರರು
ಒಂದೇ ಸಾಲಿನಲ್ಲಿ ನಿಂತಿರುವ ದೃಶ್ಯವನ್ನು ಇಲ್ಲಿ ಕೆತ್ತಲಾಗಿದೆ. ಅವರು ಎಡಗೈಯಲ್ಲಿ ಬಿಲ್ಲು
ಹಾಗೂ ಬಲಗೈಯಲ್ಲಿ ಕತ್ತಿಯನ್ನು ಹಿಡಿದಿದ್ದಾರೆ. ಅವರ ಕಾಲಿನ ಬಳಿ ಬಾಣಗಳು ಬಿದ್ದಿರುವ
ಚಿತ್ರಣವಿದೆ. ಇದು ಯುದ್ಧ ಅಥವಾ ಕಾದಾಟದ ಸನ್ನಿವೇಶವನ್ನು ಪ್ರತಿನಿಧಿಸುತ್ತದೆ. ಮೂವರು ವೀರರು ಬಿಲ್ಲು
ಬಾಣಗಳನ್ನು ಹಿಡಿದು ವೀರಗಲ್ಲಿನ ಎಡಭಾಗದಿಂದ ಬಲಭಾಗಕ್ಕೆ ಬರುವಂತೆಯೂ ಈ ವೀರರ ಪಾದಗಳಿಗೆ
ಶತ್ರುಗಳು ಬಿಟ್ಟ ಬಾಣಗಳು ನಾಟಿರುವಂತೆಯೂ ಬಿಡಿಸಲಾಗಿದೆ. ಕರ್ನಾಟಕದ ಎಲ್ಲಾ ವೀರಗಲ್ಲುಗಳಲ್ಲಿಯೂ
ವೀರನು ಮುಡಿ ಕಟ್ಟಿರುವಂತೆ ಬಿಡಿಸಲಾಗಿರುತ್ತದೆ. ಶರಣಾಗತನಾದವನ ಮುಡಿ ಮಾತ್ರ ಕೆಲವೊಮ್ಮೆ
ಕೆದರಿರುವಂತೆ ಬಿಡಿಸಲಾಗಿರುತ್ತದೆ.ʼ(ತಮಟಕಲ್ಲಿನ ಗುಣಮಧುರನ ಶಾಸನಗಳು ಪುನರ್ ಪರಿಶೀಲನೆ, ದೇವರ ಕೊಂಡಾರೆಡ್ಡಿ ಮತ್ತು
ಆರ್. ಶೇಷಶಾಸ್ತ್ರಿ, ಸಾಧನೆ ಸಂ.೧೦.ಸಂ.೩, ಪು.೭೦), ಈ ಶಾಸನದ ಸ್ವರೂಪದ
ಬಗೆಗೆ ನೋಡುವುದಾದರೆ
ಶಾಸನ ಕೆತ್ತಲಾಗಿರುವ ಸ್ಥಳದಲ್ಲಿ ಶಿಲೆಯನ್ನು ನುಣ್ಣಗೆ ಮಾಡಲಾಗಿದ್ದು
ಅಕ್ಷರಗಳನ್ನು ಆಳಕ್ಕೆ ಕೆತ್ತಲಾಗಿಲ್ಲ. ಮತ್ತೊಂದು ಶಾಸನಕಲ್ಲಿನ ಮೇಲೆ
ವೀರಗಲ್ಲಿನ ವೀರನಾದ ಗುಣಮಧುರನ ಸ್ತುತಿಯನ್ನು ಕೆತ್ತಲ್ಪಟ್ಟಿದ್ದು,
ಬಹುಶಃ ಶಿಲ್ಪವಿರುವ ಶಾಸನ ಕಲ್ಲಿನ ಮೇಲೆ ಈ ಪಾಠವನ್ನು ಕೊರೆಯಲು ಸ್ಥಳ ಸಾಲದೆ ಮತ್ತೊಂದು ಕಲ್ಲಿನ ಮೇಲೆ
ಕೆತ್ತಿರಬಹುದೆಂದು ಊಹಿಸ ಬಹುದಾಗಿದೆ. ಈ ಶಾಸನಗಳ ಲಿಪಿಯ ಬಗೆಗೆ ಹೇಳುವುದಾದರೆ ಸಂಸ್ಕೃತದ ಶಾಸನದ ಕನ್ನಡ
ಲಿಪಿಯು ತನ್ನ ಕಾಲಘಟ್ಟದ
ಇತರೆ ಶಾಸನಗಳ ಹಾಗೆ ಸಾರ್ವತ್ರಿಕ ಲಕ್ಷಣಗಳಿಂದ
ಕೂಡಿದ್ದರೆ, ಕನ್ನಡ ಪದ್ಯ ಶಾಸನದ ಲಿಪಿಯು ಕನ್ನಡದ
ಆರಂಭಕಾಲದ ವೈಲಕ್ಷಣ್ಯಗಳೊಂದಿಗೆ ವ್ಯಕ್ತಿ ಚಿತ್ರಣದ ವಿಶೇಷತೆಯನ್ನು ಒಳಗೊಂಡಿದೆ.
ತಮಟಕಲ್ಲಿನ ಶಾಸನದ ಲಿಪಿಗಳ ಬಗೆಗೆ ಹೇಳುವುದಾದರೆ, ಲಿಪಿ
ಶಾಸ್ತ್ರಜ್ಞರ ಪ್ರಕಾರ ಈ ಶಾಸನದಲ್ಲಿಯೂ ತ್ರಿಕೋಣಾಕಾರದ ಛಾಯೆಯನ್ನು 'ಪ, ರ, ವ,
ಭ' ಮುಂತಾದ ಅಕ್ಷರಗಳಲ್ಲಿ ಕಾಣಬಹುದಾಗಿದೆ. ತಮಟಕಲ್ಲಿನ ಸಂಸ್ಕೃತ ಶಾಸನದ
ಲಿಪಿಯಲ್ಲಿಯ 'ಆ' ದೀರ್ಘವಾಗಿ ಹತ್ತಿದಾಗ ಬಲಕ್ಕೆ ಹೆಚ್ಚಾಗಿ
ಬಾಗಿರುವುದು, 'ಏ' ಕಾರದ ದೀರ್ಘ ಎಡಕ್ಕೆ ಹೆಚ್ಚಾಗಿ ಅಷ್ಟಾಗಿ ಬಾಗದಿರುವುದು ಮತ್ತು ರ, ಅ, ಕ,
ಮತ್ತು ಉ ಕಾರದ ಗೆರೆಗಳು ಮೇಲ್ಮುಖವಾಗಿ ಹರಿದು ಇರುವುದರಿಂದ ಈ ಶಾಸನ ಲಿಪಿಯು ಸ್ವಲ್ಪಮಟ್ಟಿಗೆ
ಚಿತ್ರದುರ್ಗ ಜಿಲ್ಲೆಯ ಇನ್ನೊಂದು ಸಮಕಾಲೀನ ಶಾಸನವಾದ
ಅಣಜಿ ( ಈಗ ದಾವಣಗೆರೆ ಜಿಲ್ಲೆ) ಶಾಸನದ ಕಾಲಕ್ಕಿಂತ ತುಸು ನಂತರದ್ದು ಎಂಬ ಅಭಿಪ್ರಾಯವನ್ನು
ತಾಳಿದ್ದಾರೆ. ಅದೇ ರೀತಿ ಕನ್ನಡ ಪದ್ಯ ಶಾಸನದಲ್ಲಿಯ ಲಿಪಿಯಲ್ಲಿ ಇದಕ್ಕಿಂತಲೂ
ಸ್ವಲ್ಪ ಭಿನ್ನವಾದ ಶೈಲಿ ಯನ್ನು ಕಾಣಬಹುದು. ಈ ಪದ್ಯಶಾಸನದ ಲಿಪಿಯ ಸ್ವರೂಪವು ವ್ಯಕ್ತಿ ಪ್ರಶಂಸೆಯ ರೀತಿಯ ಬರವಣಿಗೆಯಾಗಿದೆ. ಲಿಪಿಕಾರನು ತಲೆಕಟ್ಟನ್ನು ಕೊಡುವಲ್ಲಿ ತನ್ನದೇ ಆದ ರೀತಿಯನ್ನು ಅನುಸರಿಸಿದ್ದಾನೆ. ಈ ನಾಲ್ಕು
ಸಾಲಿನ ಪುಟ್ಟ ಶಾಸನದಲ್ಲಿ, ಒಂದೇ ಅಕ್ಷರವನ್ನು ಹಲವಾರು ಶೈಲಿಗಳಲ್ಲಿ
ಬರೆದಿರುವುದನ್ನು ಈಗಾಗಲೇ ಲಿಪಿಶಾಸ್ತ್ರಜ್ಞರು ಗುರುತಿಸಿದ್ದಾರೆ. ʻಣ'ಕಾರ ನಾಲ್ಕು ಸಾಲುಗಳಲ್ಲಿ ಒಂಭತ್ತು ಸಾರಿ
ಬರೆದಿದ್ದರೂ ಒಂದು ಇದ್ದಂತೆ ಇನ್ನೊಂದು ಇಲ್ಲ. ಹಾಗೆಯೇ 'ಲ' ಕಾರವನ್ನು ಮೂರು ರೀತಿಯಲ್ಲಿ ಕೆತ್ತಿದ್ದಾನೆ. ಒಂದೇ
ಅಕ್ಷರವನ್ನು ಹಲವಾರು ರೀತಿಯಲ್ಲಿ ಕೆತ್ತಿದ್ದರೂ
ಅದರ ಮೂಲರೂಪದಿಂದ ತೀರಾ ಭಿನ್ನರೀತಿಯಲ್ಲಿ ಕಂಡು ಬಂದಿಲ್ಲದಿರುವುದು
ಗಮನಾರ್ಹವಾಗಿದೆ. ಈ ಶಾಸನದಲ್ಲಿ ಕೆಲವೊಮ್ಮೆ ಅಕ್ಷರವನ್ನೇ ಕೂಡಿಸಿ ಬರೆದಿರುವ
ರೀತಿಯನ್ನು ಮೊದಲ ಸಾಲಿನ 'ಅನು' ಎಂಬಲ್ಲಿ ಗಮನಿಸಬಹುದು. ಈ ತರದ ಲಿಪಿಗೆ ಸಂಬಂಧಿಸಿದ ಹಲವಾರು ಸೂಚನೆಗಳನ್ನು ಗ್ರಹಿಸದ ಕಾರಣದಿಂದಾಗಿ ಈ ಶಾಸನದ ಪಾಠವನ್ನು ಪ್ರಥಮವಾಗಿ
ಓದಿ ಪ್ರಕಟಿಸಿದ ಈ ಶಾಸನ ಪದ್ಯದ ಸಾಲುಗಳಲ್ಲಿಯ ಪದಗಳನ್ನು ಓದುವಲ್ಲಿ ತೊಡಕಾಗಿ
ಪರಿಣಮಿಸಿರುವುದನ್ನು ನಂತರದ ವಿದ್ವಾಂಸರು ಗುರುತಿಸಿದ್ದಾರೆ.
ರೈಸ್
ಅವರು ಸಂಪಾದಿಸಿ ಪ್ರಕಟಿಸಿರುವ ಕನ್ನಡ ಲಿಪಿಯಲ್ಲಿಯ ಶಾಸನದ ಪಾಠ ಈ ಕೆಳಕಂಡಂತೆ
ಇದೆ.
ಬಿಣಮಣಿ ಅನ್ತು ಭೋಗಿ ಬಿಣದುಳ್ಮಣಿ ವಿಲ್ಮನದೋನ್
ರಣಮುಖದುಳ್ಳ ಕೋಲನೆರಿಯರ್ಕ್ಕು ಮನಿನ್ದ್ಯಗುಣನ್.
ಪ್ರಣಯಿ ಜನಕ್ಕೆ ಕಾಮನಸಿತೋತ್ಪಲ ವರ್ಣನವನ್
ಗುಣಮದುರಾಂಕ್ಕ ದಿವ್ಯ ಪುರುಷನ್ಪುರುಷ ಪ್ರವರನ್
ಇದೇ
ಶಾಸನದ ಪಾಠವನ್ನು ರೋಮನ್ ಲಿಪಿಯಲ್ಲಿಯ ಕೊಟ್ಟಿದ್ದಾರೆ. ಕನ್ನಡ ಲಿಪಿಯಲ್ಲಿರುವ ಈ ಪಾಠವನ್ನು
ರೋಮನ್ ಲಿಪಿಯಲ್ಲಿರುವ ಪಾಠದೊಂದಿಗೆ ಹೋಲಿಸಿ ನೋಡಿದಾಗ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ.
1 ಮೊದಲ
ಸಾಲಿನಲ್ಲಿ 'ಬಿಣಮಣಿ' ಎಂಬುದಕ್ಕೆ ಬದಲಾಗಿ 'ಫಣಿಮಣಿ'-ಎಂದಿದೆ.
2
ಹಾಗೆಯೇ 'ಬಿಣದುಳ್ಮಣಿ'- ಎಂಬುದಕ್ಕೆ ಬದಲಾಗಿ 'ಫಣದುಳ್ಮಣಿ'-ಎಂದಿದೆ.
3
ಎರಡನೆಯ ಸಾಲಿನಲ್ಲಿ 'ರಣಮುಖದುಳ್ಳ'- ಎಂಬುದಕ್ಕೆ ಬದಲಾಗಿ 'ರಣಮುಖದುಳ್ಳೆ'- ಎಂದಿದೆ.
ಈ ಶಾಸನ ವಿರುವ ಸ್ಥಳಕ್ಕೆ ಭೇಟಿಕೊಟ್ಟು ಶಾಸನದ ಪಡಿಯಚ್ಚನ್ನು
ತೆಗೆದು ಪರಿಶೀಲಿಸಿದ ಶಾಸನತಜ್ಞರಾದ
ದೇವರಕೊಂಡಾರೆಡ್ಡಿ ಮತ್ತು ಆರ್. ಶೇಷಶಾಸ್ತ್ರೀ ಯವರು ಶಾಸನದಲ್ಲಿ ಪದಗಳ ಸರಿಯಾದ ರೂಪವನ್ನು ಗುರುತಿಸಿದ್ದಾರೆ.
ಅವರ ಪ್ರಕಾರ ಶಾಸನದಲ್ಲಿ
'ಫಣಮಣಿ' ಎಂದಿದೆ. 'ಫಣಿಮಣಿ' ಅಲ್ಲ, 'ಫಣದುಳ್ಮಣಿ' ಎಂಬುದೇ ಸರಿಯಾದ
ಪಾಠ. ಎರಡನೇ ಸಾಲಿನಲ್ಲಿ ರಣಮುಖದುಳ್ಳೆ ಎಂಬುದೇ ಸರಿಯಾದ ಪಾಠ. ಇಲ್ಲಿ
'ಳ' ಕಾರಕ್ಕೆ 'ಎ' ಕಾರ ಕೊಟ್ಟಿರುವುದು ಸ್ಪಷ್ಟವಾಗಿದೆ. ಈ ದೃಷ್ಟಿಯಿಂದ ಕನ್ನಡ ಲಿಪಿಯ ಪಾಠ
ಕ್ಕಿಂತಲೂ, ರೋಮನ್ ಲಿಪಿಯ ಪಾಠವೇ ಮೂಲ ಶಾಸನದ ಪಾಠಕ್ಕೆ ತೀರಾ ಹತ್ತಿರವಾಗಿದೆ ಎಂಬ ಅನಿಸಿಕೆಯನ್ನು
ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಎರಡನೆಯ ಸಾಲಿನಲ್ಲಿ 'ಬರುವ ಕೋಲನೆರಿಯರ್ಕು' ಎಂಬುದಾಗಿ ಓದಿರುವ ಪಾಠವು ಸಮರ್ಪಕವಾಗಿರುವಂತೆ ತೋರುವುದಿಲ್ಲ. ಅವರು ಆ
ರೀತಿ ಓದುವುದಕ್ಕೆ ಕಾರಣವು ಇಲ್ಲದಿಲ್ಲ. ಶಾಸನದ ಲಿಪಿಯನ್ನು ಗಮನಿಸಿದಾಗ 'ಕ'ಕಾರಕ್ಕೆ ದೀರ್ಘ
ವನ್ನು ನೀಡುವಾಗ ಬಲಗಡೆಯಿಂದ ಎಡಗಡೆಗೆ ಮೇಲ್ಮುಖವಾಗಿ ಬಾಗಿಸಿ ಮತ್ತೆ ಬಲಕ್ಕೆ ಸ್ವಲ್ಪ ಡೊಂಕಾಗಿ
ತಿರುಗಿಸಿ ಬಾಗಿಸಿರುವುದನ್ನು ಕಾಣಬಹುದು. ಮುಂದಿನ ಶತಮಾನಗಳಲ್ಲಿ 'ಕೋ' ಅಕ್ಷರವನ್ನು ಇದೇರೀತಿ
ಬರೆದಿರುತ್ತಾರೆ. ಆ ವೊಂದು ಹಿನ್ನೆಲೆಯಲ್ಲಿ ಈ ಅಕ್ಷರವನ್ನು 'ಕೋ' ಎಂದೇ ಓದಿರುತ್ತಾರೆ. ಇದೇ
ಶಾಸನದಲ್ಲಿ 'ಎ' ಕಾರ ಮತ್ತು 'ಓ' ಕಾರಗಳನ್ನು ಬಳಸಿರುವುದನ್ನು ('ಮನದೋನ್', 'ತೋತ್ಪಲ)
ಗಮನಿಸಿದರೆ ಅವುಗಳಿಗಿಂತಲೂ ಈ 'ಎ' ಕಾರ ಭಿನ್ನವಾಗಿರುವುದನ್ನು ಕಾಣಬಹುದು. ಆದ್ದರಿಂದ ಇದು 'ಕಾ'
ಅಲ್ಲ 'ಕಾ'. ಹಾಗೆಯೇ ಇದೇ ಸಾಲಿನಲ್ಲಿ ಅವರು ಓದಿರುವ “ನೆರಿಯರ್ಕು' ಎಂಬುದು ಸಹ ಇದೇ ತೆರನ
ಕಪ್ಪಿನ ದೋಷದಿಂದ ಸಿದ್ಧವಾದ ಪಾಠವಾಗಿದೆ. 'ನೆ' ಎಂಬ ಅಕ್ಷರವನ್ನು ಗಮನಿಸಿದಾಗ ಅಲ್ಲಿ ಇದಕ್ಕೆ
ಕೊಟ್ಟಿರುವ 'ಎ' ಕಾರದ ಗುಡಿಸೆಂದು ಓದಿದರೆ, ಇದೇ ರೀತಿ ತಲೆಕಟ್ಟು ಪಡೆದಿರುವ ಇದೇ ಅಕ್ಷರದ
ಹಿಂದಿನ ಅಕ್ಷರವಾದ 'ದು' ಅನ್ನು ಮೊದಲ ಸಾಲಿನ 'ಫಣದುಳ್ಳಣಿ' ಎಂಬ ಪದದ ʻಳ' ಕಾರಕ್ಕೆ ಕೊಟ್ಟಿರುವ ತಲೆಕಟ್ಟನ್ನೂ, ಕೊನೆಯ
ಸಾಲಿನಲ್ಲಿ ಬರುವ 'ಪುರುಷ' ಎಂಬ ಪದದʻಷ' ಕಾರಕ್ಕೆ ನೀಡಿರುವ ತಲೆಕಟ್ಟನ ʻಎ' ಕಾರದ ಬೆಲೆಯೊಂದಿಗೇ ಓದಬೇಕಾಗುತ್ತದೆ. ಆದರೆ
'ಎ' ಕಾರದ ಗುಡಿಸು ಕೊಡಲು ಲಿಪಿಕಾರ ಬಳಸಿರುವ ರೀತಿಯನ್ನು 'ರಣಮುಖದುಳ್ಳೆ' ಎಂಬಲ್ಲಿಯ “ಜನಕ್ಕೆ' ಎಂಬಲ್ಲಿಯೂ
ಗುರುತಿಸಬಹುದು. ಆದ್ದರಿಂದ ಇದು ನಿಃಸಂಶಯವಾಗಿ ʻನ' ಹೊರತು 'ನೆ' ಅಲ್ಲ. ಅಂದರೆ ಈ ಸಾಲನ್ನು ಈ
ರೀತಿ ಓದಬೇಕು.
'ರಣಮುಖದುಳ್ಳೆ ಕಾಲನರಿಯರ್ಕು ಮನಿನ್ದ್ಯಗುಣನ್'-ಎಂದು ಶಾಸನದ ಲಿಪಿಕಾರ ʻನ'ಕಾರಕ್ಕೆ 'ಆ' ಕಾರದ ತಲೆಕಟ್ಟು ಕೂಡುವಾಗ ಈ ರೀತಿ
ಬರೆದಿದ್ದಾರೆ.
ನಾಲ್ಕನೆಯ
ಸಾಲಿನಲ್ಲಿ ಬರುವ 'ಮಧುರಾಂಕ್ಕ' ಎಂಬ ಪದದಲ್ಲಿ 'ಅನುಸ್ವಾರ' ಪ್ರಯೋಗವಾಗಿರುವಂತೆ ಕನ್ನಡ ಲಿಪಿಯಲ್ಲಿ ಪಾಠವನ್ನು
ಕೊಡಲಾಗಿದೆ. ಆದರೆ ವಾಸ್ತವವಾಗಿ ಅನಂಸ್ಕಾರದ ಪ್ರಯೋಗ ಪ್ರಸ್ತುತ ಶಾಸನದಲ್ಲಿ ಇಲ್ಲ. ಅನು
ಸ್ವಾರಕ್ಕೆ ಅನುನಾಸಿಕವಾದ 'ನ' ಕಾರವನ್ನು ಬಳಸಿರುವುದನ್ನು ಕಾಣಬಹುದು. ಆದ್ದರಿಂದ ಇದರ ಸರಿಯಾದ
ಪಾಠ 'ಗುಣಮಧುರಾನ್ಕ' ಎಂಬುದಾಗಿ ಗುರುತಿಸಿದ್ದಾರೆ. ((ತಮಟಕಲ್ಲಿನ ಗುಣಮಧುರನ
ಶಾಸನಗಳು ಪುನರ್ ಪರಿಶೀಲನೆ,
ದೇವರ ಕೊಂಡಾರೆಡ್ಡಿ ಮತ್ತು ಆರ್. ಶೇಷಶಾಸ್ತ್ರಿ,
ಸಾಧನೆ ಸಂ.೧೦.ಸಂ.೩, ಪು.೭೫)
ಶಾಸನದಲ್ಲಿ ಬರುವ ಪದ್ಯ
ಸಾಲುಗಳು ಕದಂಬರು ಮತ್ತು ಬದಾಮಿ ಚಾಲುಕ್ಯರ
ಕಾಲದಲ್ಲಿಯೇ ಕನ್ನಡವು ಸಾಹಿತ್ಯದ ಅಥವಾ ಕಾವ್ಯಭಾಷೆಯಾಗಿ ವಿಕಸನ ಹೊಂದಿದ್ದಿತ್ತು ಎಂಬುದನ್ನು ಸೂಚಿಸುತ್ತದೆ. ಕನ್ನಡ ನಾಡಿನ ಯಾವುದೇ ಪ್ರಮುಖ ರಾಜ ಮನೆತನಕ್ಕೆ ಸೇರಿರದ
ವ್ಯಕ್ತಿಯ ಗುಣ ವಿಶೇಷಗಳನ್ನು ಕುರಿತ ಈ ಕಾವ್ಯಸ್ವರೂಪದ ದಾಖಲೆಯ ಲಿಪಿಯೂ ಕನ್ನಡವೇ ಆಗಿದೆ.
ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದಂತೆ ಇರುವ ಎರಡು ಪ್ರತ್ಯೇಕ ವೀರ ಅಥವಾ ಪ್ರಶಸ್ತಿ ಶಾಸನಗಳ ಪೈಕಿ
ಒಂದು ಕನ್ನಡ ಭಾಷೆ ಮತ್ತು ಲಿಪಿಯಲ್ಲೂ, ಮತ್ತೊಂದು ಸಂಸ್ಕೃತ ಭಾಷೆ
ಮತ್ತು ಕನ್ನಡ ಲಿಪಿಯಲ್ಲೂ ಇವೆ. ಒಬ್ಬನೇ ವೀರನ ಎರಡು ಪ್ರಶಸ್ತಿ ಶಾಸನಗಳು ಒಂದೆಡೆಯೇ ಇರುವುದು
ಒಂದು ಅಪರೂಪ ಎಂದೇ ಹೇಳಬೇಕು. ಈ ಶಾಸನದಲ್ಲಿ ದಾನ ಅಥವಾ ವೀರನ ಸಾವಿನ ಪ್ರಸ್ತಾಪ ಇಲ್ಲ. ಅಪ್ಪಟ
ಗುಣ ವರ್ಣನೆ ಇದೆ. ಶಾಸನವು ಸಂಸ್ಕೃತ ಮತ್ತು ಕನ್ನಡ
ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ.
ಗುಣಮಧುರನ ಸಂಸ್ಕೃತ ಮತ್ತು ಕನ್ನಡ ಭಾಷೆಯ ಶಾಸನದ
ಪಾಠ:
ಸಂಸ್ಕೃತ ಶಾಸನ:
1.
ಸ್ವಸ್ತಿಶ್ರೀಮತ್ಮಾಸಿಕ್ಕಾಪುರಾಧಿಪತಿ : ಅಥ ಭಾರದ್ವಾಜ ವಂ [ಶೇ]1 ಧನಾಗಮ ಸ್ಯ ಪುತ್ರೋ ಮನಾ
2.
ಗಮಃತ ಸ್ಕೈವ ಸೂನುಃ ಗುಣಮಧುರೋ ನಾಮ ಸತಾಂತ್ಯಾಗ ವಾನಿತಿ ಪ್ರಶಸ್ತ್ರ:
ಕನ್ನಡ ಪದ್ಯ ಶಾಸನ:
ಬಿಣಮಣಿ
(ಫಣಮಣಿ) ಅನ್ತುಭೋಗಿ ಬಿಣ(ಫಣ)ದುಳ್ಮಣಿ ವಿಲ್ಮನದೋನ್
ರಣಮುಖದುಳ್ಳೆ ಕೋಲಂ ನೆರಿಯರ್ಕುಮನಿದ್ದ್ಯ ಗುಣನ್
ಪ್ರಣಯಿಜನಕ್ಕೆ
ಕಾಮನಸಿತೋತ್ಪಲ ವರ್ಣನವನ್
ಗುಣಮಧುರಾನ್ಕ ದಿವ್ಯಪುರುಷ ನ್ಪುರುಷ ಪ್ರವರನ್
ಸಂಸ್ಕೃತ ಭಾಷೆಯ ಶಾಸನದ ಪಠ್ಯದಲ್ಲಿ, ಮಾಸಿಕ್ಕಾಪುರಾಧಿಪತಿಯಾದ
ಭಾರದ್ವಾಜ ವಂಶದ ಧನಾಗಮನ ಮಗ ಗುಣಮಧುರನು ತ್ಯಾಗವಂತನೆಂದು ಹೆಸರಾದವನು ಎಂಬ ವಿಶೇಷ ಗುಣವನ್ನು
ಪ್ರಸ್ತಾಪಿಸುವ ಶಾಸನದ ಭಾಷೆ ಸಂಸ್ಕೃತ ಮತ್ತು ಲಿಪಿ ಕನ್ನಡ. ಇದರ ಲಿಪಿ ಮತ್ತು ಭಾಷೆಗಳೆರಡೂ ಇದು ಬಹುಪ್ರಾಚೀನ
ಎಂಬುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ, ಈ ವೃತ್ತದ ಛಂದಸ್ಸು ಅತ್ಯಂತ ಅಪೂರ್ವವಾದುದು
ಇದರಲ್ಲಿನ ಸಂಸ್ಕೃತ ಶಬ್ದ ಬಾಹುಳ್ಯವು ಗಮನಾರ್ಹವಾಗಿರುವಂತೆ ಇದರ ಕಾವ್ಯ ಗುಣವು ಮನೋಜ್ಞವಾಗಿದೆ.
ಇಂತಹ ಕಾವ್ಯಮಯವಾದ ಶಿಲಾಶಾಸನ ಹುಟ್ಟಬೇಕಾದರೆ ಅದಕ್ಕೂ ಹಿಂದೆ ಸಾಕಷ್ಟು ಸೃಷ್ಠಿ ನಡೆದಿರಬಹುದು
ಎಂದು ಊಹಿಸಲು ಅವಕಾಶವಿದೆ. ಶಾಸನದ ಪಕ್ಕದಲ್ಲೇ ಇರುವ ಗುಣಮಧುರನನ್ನೇ ಕುರಿತ ಕನ್ನಡ ಶಾಸನವೂ
ಕಾವ್ಯಾತ್ಮಕವಾಗಿದೆ.
ಪದಶಃ ಮತ್ತು ವಾಕ್ಯಶಃ ಅರ್ಥ
(ಅನ್ವಯ)
ಬಿಣಮಣಿ(ಫಣಮಣಿ)
ಅನ್ತುಭೋಗಿ ಬಿಣ(ಫಣ)ದುಳ್ಮಣಿ ವಿಲ್ಮನದೋನ್: ಹಾವು (ಭೋಗಿ) ತನ್ನ ಹೆಡೆಯ (ಫಣಿ/ಬಿಣ) ಮೇಲಿರುವ ಮಣಿಯನ್ನು ಕಾಪಾಡಿಕೊಳ್ಳುವಂತೆ,
ತನ್ನವರನ್ನು ಕಾಯುವವನು ಮತ್ತು ಶತ್ರುಗಳಿಗೆ ಎಂದಿಗೂ ತಲೆಬಾಗದ ಧೀರನು.
ರಣಮುಖದುಳ್ಳೆ ಕೋಲಂ
ನೆರಿಯರ್ಕುಮನಿನ್ದ್ಯಗುಣನ್: ರಣರಂಗದಲ್ಲಿ (ರಣಮುಖ) ತನ್ನಲ್ಲಿರುವ
ಬಾಣಗಳಿಂದ (ಕೋಲಂ) ಶತ್ರುಗಳನ್ನು ಸೀಳುವವನು (ನೆರಿಯರ್ಕುಮ್) ಹಾಗೂ
ನಿಂದೆಗೆ ಒಳಗಾಗದ ಅಥವಾ ಕಳಂಕವಿಲ್ಲದ (ಅನಿಂದ್ಯ) ಗುಣವುಳ್ಳವನು.
ಪ್ರಣಯಿ ಜನಕ್ಕೆ ಕಾಮನಸಿತೋತ್ಪಲ ವರ್ಣನವನ್: ಒಲಿದುಬಂದ
ಪ್ರಣಯಿಗಳಿಗೆ ಮನ್ಮಥನಂತಿರುವವನು (ಕಾಮನ್) ಮತ್ತು ನೈದಿಲೆಯಂತೆ (ಅಸಿತೋತ್ಪಲ) ಕಪ್ಪು
ವರ್ಣದವನು.
ಗುಣಮಧುರಾನ್ಕ
ದಿವ್ಯಪುರುಷನ್ ಪುರುಷ ಪ್ರವರನ್: ಇಂತಹ 'ಗುಣಮಧುರ' ಎಂಬ ಅಂಕಿತವುಳ್ಳವನೇ ದಿವ್ಯಪುರುಷ ಹಾಗೂ ಪುರುಷರಲ್ಲಿ ಶ್ರೇಷ್ಠ (ಪ್ರವರನ್).
ಕನ್ನಡ ಭಾಷೆಯ ಶಾಸನ ಪದ್ಯದಲ್ಲಿ, ಗುಣಮಧುರನು ಹಣೆ(ಹೆಡೆ)ಯಲ್ಲಿ
ರತ್ನವುಳ್ಳ ನಾಗನಂತೆ ಭೋಗಿಯೂ(ಸುಖಿ: ಹೆಡೆಯುಳ್ಳುದು) ಹಣೆಯಲ್ಲಿ
ಮಣಿಯನ್ನು ಧರಿಸಿಯೂ (ಕಿರೀಟಧಾರಿಯಾಗಿಯೂ) ಬಿಲ್ಲಿನಂಥ ಮನಸ್ಸುಳ್ಳವನೂ ಯುದ್ಧ ರಂಗದಲ್ಲಿ ಮಾತ್ರ
(ಶತ್ರುಗಳಿಗೆ) ಯಮಸ್ವರೂಪನೂ (ಆದರೆ) ಶತ್ರುಗಳೂ ಇವನನ್ನು ನಿಂದಿಸಲಾಗದಷ್ಟು ಶುದ್ಧ
ಚಾರಿತ್ರ್ಯವುಳ್ಳವನೂ, ಅರ್ಥಾತ್ ಶತ್ರುಗಳಿಗೆ
ಎಂದಿಗೂ ತಲೆಬಾಗದ ಧೀರನು. ನಿಂದಿಸಲಾಗದಷ್ಟು ಶುದ್ಧ ಚಾರಿತ್ರ್ಯವುಳ್ಳವನೂ, ಅಸಿತೋತ್ಪಲ ವರ್ಣದವನು (ಆದರೂ) ಪ್ರಣಯಿಜನಕ್ಕೆ ಕಾಮನಂತಿದ್ದವನೂ ಆದ ಈ ಗುಣಮಧುರನು ದಿವ್ಯ
ಪುರುಷನಷ್ಟೇ ಅಲ್ಲ ಪೌರುಷವುಳ್ಳವರಲ್ಲಿ
ಶ್ರೇಷ್ಠನು. ಈ ರೀತಿಯಾಗಿ
ಮೇಲಿನ ಪದ್ಯದಲ್ಲಿ ಪರಸ್ಪರ
ವಿರುದ್ಧ ಗುಣಗಳನ್ನು ಹೇಳಿ ಆ ಗುಣಗಳನ್ನು ಗುಣಮಧುರನು ಹೊಂದಿರುವುದರಿಂದ ಇವನನ್ನು ಪುರುಷ ಶ್ರೇಷ್ಠನೆಂದು ಬಣ್ಣಿಸಿದ್ದಾನೆ. ಶಾಸನವು 'ಗುಣಮಧುರ' ಎಂಬ
ನಾಯಕನ ಅಥವಾ ವೀರನ ಗುಣಸ್ವಭಾವಗಳನ್ನು ಮತ್ತು ಶೌರ್ಯವನ್ನು ವರ್ಣಿಸುತ್ತದೆ. ಗುಣಮಧುರನು ಯಾವುದೇ
ಪ್ರಸಿದ್ಧ ದೊಡ್ಡ ರಾಜಮನೆತನಕ್ಕೆ ಸೇರಿದವನಲ್ಲ; ಆತ
'ಮಾಸಿಕಪುರ' (ಇಂದಿನ ತಮಟಕಲ್ಲು) ಎನ್ನುವ
ಒಂದು ಸಣ್ಣ ಪಾಳೆಯದ ನಾಯಕ ಅಥವಾ ಊರೊಡೆಯ. ೫-೬ನೇ ಶತಮಾನವು ಕದಂಬರ ಅವನತಿ ಮತ್ತು ಚಾಲುಕ್ಯರ
ಉದಯದ ಸಂಕ್ರಮಣ ಕಾಲವಾಗಿತ್ತು. ಇಂತಹ ರಾಜಕೀಯ ಅಸ್ಥಿರತೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಸೈನ್ಯ ಬಂದು ಊರನ್ನು ಕಾಯುವುದು ಕಷ್ಟವಿತ್ತು. ಆಗ ಸ್ಥಳೀಯ ಯುವಕರು
ಊರಿನ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದರು ಅಂತಹವರಲ್ಲಿ ಗುಣಮಧುರನಂತವರು ಇರುತ್ತಿದ್ದರು.
ಶಾಸನವು ಆತನನ್ನು
ಅತ್ಯಂತ ಉದಾರ, ದಯಾಮಯಿ ಹಾಗೂ ಶೂರ ಎಂದು ಬಣ್ಣಿಸುತ್ತದೆ. ಆತ
ಮೈಬಣ್ಣದಲ್ಲಿ ಕಪ್ಪಗಿದ್ದರೂ, ತನ್ನ ಮಧುರವಾದ ಗುಣಸ್ವಭಾವಗಳಿಂದಾಗಿ
ಆಕರ್ಷಕನಾಗಿದ್ದನು ಮತ್ತು ಮಹಿಳೆಯರ ಅಚ್ಚುಮೆಚ್ಚಿನವನಾಗಿದ್ದನು ಎನ್ನುವ ಸ್ವಭಾವಚಿತ್ರವನ್ನು
ಶಾಸನವು ಬಹಳ ಆಸಕ್ತಿದಾಯಕವಾಗಿ ಕಟ್ಟಿಕೊಡುತ್ತದೆ. ಸಾಮಾನ್ಯವಾಗಿ
ವೀರಗಲ್ಲು ಅಥವಾ ರಾಜಪ್ರಶಸ್ತಿ ಶಾಸನಗಳಲ್ಲಿ ನಾಯಕನ ಪರಾಕ್ರಮ,
ಕೊಂದ ಶತ್ರುಗಳ ಸಂಖ್ಯೆ ಅಥವಾ ವಂಶಾವಳಿಯ ವೈಭವೀಕರಣ ಇರುತ್ತದೆ. ಆದರೆ,
ಇಲ್ಲಿನ ದೃಷ್ಟಿಕೋನ ಅತ್ಯಂತ ಭಿನ್ನವಾಗಿದೆ. ಶಾಸನಕವಿ
ಗುಣಮಧುರನನ್ನು "ಅಸಿತೋತ್ಪಲ ವರ್ಣನವನ್" (ಕಪ್ಪು ಬಣ್ಣದವನು) ಎಂದು
ಬಣ್ಣಿಸುತ್ತಾನೆ. ಪ್ರಾಚೀನ ಪರಂಪರೆಯಲ್ಲಿ ಬಿಳಿ ಅಥವಾ ಹೊಂಬಣ್ಣವನ್ನು ಸೌಂದರ್ಯದ ಸಂಕೇತವಾಗಿ
ವರ್ಣಿಸುವ ರೂಢಿಯ ನಡುವೆ, ಕಪ್ಪು ಬಣ್ಣವನ್ನೇ ಕಮಲ/ನೈದಿಲೆಗೆ ಹೋಲಿಸಿ,
ಅವನು "ಪ್ರಣಯಿ ಜನಕ್ಕೆ ಕಾಮ"ನಾಗಿದ್ದ ಎಂದು ಹೇಳಿರುವುದು ಅಂದಿನ ಶಾಸನ
ಕವಿಯ ದೇಶಿ ಸೌಂದರ್ಯ ಪ್ರಜ್ಞೆಯನ್ನು ಎತ್ತಿತೋರಿಸುತ್ತದೆ. ಶಾಸನ ಕವಿಯು
ಬಳಸಿರುವ 'ಹಾವಿನ ಹೆಡೆಯ ಮೇಲಿನ ಮಣಿ'ಯ ರೂಪಕವು
ಅದ್ಭುತವಾದ ದೃಶ್ಯಕಾವ್ಯವನ್ನು ಕಟ್ಟಿಕೊಡುತ್ತದೆ. ಇದು ಕೇವಲ ಶೌರ್ಯದ ಸಂಕೇತವಲ್ಲ; ಹಾವು ತನ್ನ ಮಣಿಯನ್ನು ಎಷ್ಟು ಎಚ್ಚರಿಕೆಯಿಂದ ಕಾಯುತ್ತದೋ, ಗುಣಮಧುರ
ತನ್ನ ಊರನ್ನು (ಮಾಸಿಕಪುರ) ಅಷ್ಟೇ ಎಚ್ಚರಿಕೆಯಿಂದ ಕಾಯುತ್ತಿದ್ದ ಎಂಬ ಜವಾಬ್ದಾರಿಯ ಸಂಕೇತವನ್ನು
ಸಾಂಕೇತಿಕವಾಗಿ ತಿಳಿಸಿದೆ.
ಸಂಸ್ಕೃತ
ಶಾಸನದಲ್ಲಿ ಪರಿಚಯಗೊಂಡ ಗುಣಮಧುರನ ಗುಣಸ್ವಭಾವಗಳನ್ನು ಕನ್ನಡ ವೃತ್ತದಲ್ಲಿ ವಿವರಿಸಲಾಗಿದೆ. ಈ
ಗುಣಮಧುರ ಯಾವುದೇ ಪ್ರಸಿದ್ಧ ರಾಜಮನೆತನಕ್ಕೆ ಸೇರಿದ ವ್ಯಕ್ತಿಯಲ್ಲ. ಒಂದು ಪಟ್ಟಣದ ವ್ಯಾಪ್ತಿಗೆ
ಸೇರಿದ್ದ ಪ್ರದೇಶದ ಅಧಿಪತಿ ಅಷ್ಟೇ. ಇಂತಹ ವ್ಯಕ್ತಿಯ ಪ್ರಶಸ್ತಿಗೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡರ ಬಳಕೆ ಆಗಿರುವುದು ಗಮನಿಸ ಬಹುದು. ಇನ್ನೊಂದು ಸಂಗತಿ
ಎಂದರೆ ಸಂಸ್ಕೃತ ಭಾಷೆಯಲ್ಲಿ ಕೇವಲ ಪರಿಚಯವಿದೆ. ಗುಣ ವಿಶೇಷಣಗಳು ಕನ್ನಡದಲ್ಲಿವೆ. ಈ ವಿಷಯವನ್ನು
ಗಮನಿಸಿದಾಗ ಪ್ರಬಲವಾಗುತ್ತಿದ್ದ ಕನ್ನಡ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಬಳಕೆಯಾಗುತ್ತಿದ್ದ
ಸಂಸ್ಕೃತದ ಸ್ಥಿತಿಯನ್ನು ಗಮನಿಸಬಹುದು. ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳನ್ನು ಶಾಸನಗಳಲ್ಲಿ
ಬಳಸುವ ಕ್ರಮವು ಕ್ರಿ.ಶ. ಐದನೆಯ ಶತಮಾನದ ಕೊನೆಯ ಭಾಗದಲ್ಲಿ ಕಾಣಿಸಿ ಕೊಂಡಿದೆ. ಸಾಮಾನ್ಯವಾಗಿ ವೀರಗಲ್ಲುಗಳು ನಾಯಕನ ರೌದ್ರಾವತಾರವನ್ನು,
ರಣಾಂಗಣದಲ್ಲಿ ಆತ ಕತ್ತರಿಸಿದ ತಲೆಗಳನ್ನು ವೈಭವೀಕರಿಸುತ್ತವೆ. ಆದರೆ ಇಲ್ಲಿ,
ವೀರನಿಗೆ ಸಂಬಂಧಿಸಿದ "ಪ್ರಣಯಿ
ಜನಕ್ಕೆ ಕಾಮನ್" (ಪ್ರೀತಿಸುವ ಮಹಿಳೆಯರಿಗೆ ಆತ ಮನ್ಮಥ) ಎನ್ನುವ ಸಾಲು ಬಹಳ ವಿಶಿಷ್ಟವಾಗಿದ್ದು
ಇದು ಸ್ತ್ರೀ ಸಂವೇದನೆ ಮತ್ತು ನಾಯಕನ ಕಲ್ಪನೆಯ ಪ್ರತೀಕವಾಗಿದೆ.
ಭಾಷಿಕ ಮಹತ್ವ: ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸುವಾಗ ನಾವು ಸಾಮಾನ್ಯವಾಗಿ ಹಲ್ಮಿಡಿ ಶಾಸನ
(ಕ್ರಿ.ಶ. ೪೫೦) ಮತ್ತು ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ (ಕ್ರಿ.ಶ. ೭೦೦) ಗಳನ್ನು
ಉಲ್ಲೇಖಿಸುತ್ತೇವೆ. ಆದರೆ ತಮಟಕಲ್ಲು ಶಾಸನವು ಈ ಎರಡರ ನಡುವಿನ ಅತಿಮುಖ್ಯವಾದ ʻಸಂಪರ್ಕ ಕೊಂಡಿ'ಯಾಗಿದೆ.ಹಲ್ಮಿಡಿ
ಶಾಸನವು ಸಂಪೂರ್ಣವಾಗಿ ʻಗದ್ಯ'
ರೂಪದಲ್ಲಿದೆ ಮತ್ತು ಸಂಸ್ಕೃತ ಭೂಯಿಷ್ಠವಾಗಿದೆ. ಆದರೆ, ಕೇವಲ ೫೦ ವರ್ಷಗಳ ಅಂತರದಲ್ಲಿ ಹುಟ್ಟಿದ ತಮಟಕಲ್ಲು ಶಾಸನವು (ಕ್ರಿ.ಶ. ೫೦೦) 'ಪದ್ಯ' ರೂಪದಲ್ಲಿದೆ. ಅಂದರೆ ಕನ್ನಡಿಗರು ಕನ್ನಡ ಭಾಷೆಯನ್ನು
ಕೇವಲ ಆಡಳಿತಕ್ಕಾಗಿ ಮಾತ್ರವಲ್ಲದೆ, ಕಾವ್ಯ
ರಚನೆಗಾಗಿಯೂ ಪ್ರಬುದ್ಧವಾಗಿ ಬೆಳೆಸಿದ್ದರು ಎಂಬುದಕ್ಕೆ ತಮಟಕಲ್ಲು ಶಾಸನ ನಿದರ್ಶನವಾಗಿದೆ.
ಶಾಸನದಲ್ಲಿ ಬಳಕೆಯಾಗಿರುವ ಪ್ರಾಚೀನ ಪದಗಳು ಭಾಷಾವಿಜ್ಞಾನದ ದೃಷ್ಟಿಯಿಂದ
ಗಮನಿಸುವಂತಹವುಗಳಾಗಿವೆ. ಈ ಶಾಸನದಲ್ಲಿಯ ನೆರೆಯರ್ಕುಮ್ ಪದವು ಶತ್ರುಗಳನ್ನು ಸೀಳುವವನು ಅಥವಾ ನಾಶಮಾಡುವವನು ಎಂಬುದನ್ನು ಧ್ವನಿಸುತ್ತದೆ. ಇದು ಪೂರ್ವದ ಹಳಗನ್ನಡದ ಕ್ರಿಯಾಪದದ
ರೂಪ. ಅದೇ ರೀತಿ ಕೋಲಂ: ಕೋಲು ಎಂದರೆ ಕೇವಲ ದೊಣ್ಣೆ ಅಲ್ಲ; ಹಳಗನ್ನಡದಲ್ಲಿ ಇದರ ಅರ್ಥ 'ಬಾಣ'. ಬಾಣಗಳಿಂದ
ಶತ್ರುಗಳನ್ನು ಸದೆಬಡಿಯುತ್ತಿದ್ದ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಈ ಶಾಸನದ ಛಂದಸ್ಸು ಸಂಸ್ಕೃತದ್ದಾದರೂ, ಅದರೊಳಗೆ ತುಂಬಿರುವ ಜೀವ ಮತ್ತು ಭಾಷೆ ಅಚ್ಚ ಕನ್ನಡದ್ದಾಗಿದೆ (ಉದಾ: ಬಿಣ, ಕೋಲಂ, ನೆರೆಯರ್ಕುಮ್). ಕವಿರಾಜಮಾರ್ಗಕಾರನು ಹೇಳುವ 'ಕನ್ನಡದೊಳ್ ಮಾರ್ಗಮ್' (ಸಂಸ್ಕೃತ-ಕನ್ನಡಗಳಮಿಶ್ರ ) ಎನ್ನುವ ಪರಿಕಲ್ಪನೆ ೫ನೇ ಶತಮಾನದಲ್ಲೇ ಪ್ರಾಯೋಗಿಕವಾಗಿ ಜಾರಿಯಲ್ಲಿತ್ತು ಎಂಬುದನ್ನು
ತಮಟಕಲ್ಲು ಶಾಸನ ಸಾಬೀತುಪಡಿಸುತ್ತದೆ. ತಮಟಕಲ್ಲು ಶಾಸನವು ಕೇವಲ ಪದ್ಯದ ದಾಖಲೆಯಲ್ಲ; ಇದು ಪೂರ್ವದ ಹಳಗನ್ನಡದ ಕಾವ್ಯ
ಪ್ರಬುದ್ಧತೆಗೆ ಜೀವಂತ ಸಾಕ್ಷಿ. ಕವಿರಾಜಮಾರ್ಗ (ಕ್ರಿ.ಶ. ೮೫೦) ರಚನೆಯಾಗುವುದಕ್ಕೂ ಮೂರುವರೆ
ಶತಮಾನಗಳಿಗೂ ಮುನ್ನವೇ ಕನ್ನಡ ಭಾಷೆ ದೇಶಿ ಮತ್ತು ಮಾರ್ಗ ಪರಂಪರೆಗಳನ್ನು ಅರಗಿಸಿಕೊಂಡು
ಛಂದೋಬದ್ಧ ಕಾವ್ಯಭಾಷೆಯಾಗಿ ವಿಕಸನಗೊಂಡಿತ್ತು ಎಂಬುದಕ್ಕೆ ಈ ಶಾಸನವು ಪ್ರಮುಖ ಆಕರ ಎನಿಸಿದೆ.
ತಮಟಕಲ್ಲು ಶಾಸನದ ಛಂದಸ್ಸು: ಕನ್ನಡ ಸಾಹಿತ್ಯದ (ಹಾಗೂ ಶಾಸನ ಸಾಹಿತ್ಯದ) ಮೊಟ್ಟಮೊದಲ ಉಪಲಬ್ಧ ಪದ್ಯವಾಗಿದೆ. ಈ ಶಾಸನದ ಮೂಲಕ ಕನ್ನಡದಲ್ಲಿ
ಆರನೆಯ ಶತಮಾನದ ಹೊತ್ತಿಗಾಗಲೇ ಕಾವ್ಯ ಮೌಲ್ಯವುಳ್ಳ ಪದ್ಯರಚನೆ ಪ್ರಾರಂಭವಾಗಿದ್ದರ
ಜೊತೆಗೆ ಸಂಸ್ಕೃತ ವರ್ಣ ವೃತ್ತಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಈ ಶಾಸನ ಪದ್ಯವು ಪ್ರತಿ ಸಾಲಿಗೆ ೧೭
ಅಕ್ಷರಗಳನ್ನು ಒಳಗೊಂಡಿರುವ 'ಅತ್ಯಷ್ಟಿ' ಛಂದಸ್ಸಿನ
'ಸುಮಂಗಲಿ' ಎಂಬ ಸಂಸ್ಕೃತದ
ವರ್ಣವೃತ್ತದಲ್ಲಿದೆ. ಗೋವಿಂದ ಪೈ ಅವರು ಇದಕ್ಕೆ ಕನಕಾಬ್ಜಿನಿ, ನರ್ಕುಟಕ ಎಂದು ಕರೆದಿದ್ದಾರೆ. ಛಂದೋಂಬುಧಿಯ ಸಂಪಾದನಾ ಸಮಯದಲ್ಲಿ ಕಿಟೆಲರು ನರ್ಕುಟುಕ ವೃತ್ತವು
ಮತ್ತು ಕನಕಾಬ್ಜಿನಿಯು ಒಂದೇ ಎಂದು ಹೇಳಿರುವರು.
ಇದನ್ನು ಸುಮಂಗಲಿ ಅಥವಾ ನರ್ಕುಟಕ ಎಂದು ಬಿ.ಎಂ.ಶ್ರೀಯವರು
ಕನ್ನಡ ಕೈಪಿಡಿಯಲ್ಲಿ ಹೆಸರಿಸಿದ್ದಾರೆ. ಇದು ಸಂಸ್ಕೃತ ವೃತ್ತವೇ ಆದರೂ ಸಂಸ್ಕೃತ ಸಾಹಿತ್ಯದಲ್ಲಿ
ಎಲ್ಲಿಯೂ ಕಾಣಸಿಗದು. ಕನ್ನಡದಲ್ಲಿ ಸಂಸ್ಕೃತ ವೃತ್ತವನ್ನು ಬಳಸುವಾಗ ಹೊಸತನವಿರ ಬೇಕೆಂಬ
ಹಿನ್ನೆಲೆಯಲ್ಲಿ ಶಾಸನ ಕವಿಯು ಇದನ್ನು ಬಳಸಿರ ಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಕನ್ನಡದ ವರ್ಣಛಂದಸ್ಸಿನ ಮೊದಲ ದಾಖಲೆಯನ್ನು ಶಾಸನದಲ್ಲಿ ಮಾತ್ರವೇ ಗುರುತಿಸಬಹುದು. ಕ್ರಿ.ಶ ೫೦೦ರ
ಚಿತ್ರದುರ್ಗದ ತಮಟಕಲ್ಲು ಶಾಸನದಲ್ಲಿನ ವೃತ್ತವು ಕನ್ನಡದ ಮೊದಲ ವರ್ಣ ವೃತ್ತವೆಂದು ಹೇಳಬಹುದು.
ಇದು ಸಾಹಿತ್ಯಪರವಾಗಿಯೂ ಕನ್ನಡದ ಮೊದಲ ಪದ್ಯವಾಗಿದೆ.
೧೭ ಅಕ್ಷರಗಳುಳ್ಳ ಇದು ವರ್ಣ
ಛಂದಸ್ಸಿನ ಸಮವೃತ್ತದ ೧೭ನೇ ಅಕ್ಷರವೃತ್ತವಾದ ಅತ್ಯಷ್ಟಿಯಲ್ಲಿನ ʻಕನಕಾಬ್ಜಿನಿ ವೃತ್ತʼದಲ್ಲಿ ಮೂಡಿದೆ. ʻನಜಭಜಜಂಲಗಂʼ ಗಣವಿನ್ಯಾಸ
ಕ್ರಮವನ್ನು ನಾಗವರ್ಮನು ʻಕನಕಾಬ್ಜನೀಯಂʼ ಎಂದು ಹೆಸರಿಸಿರುವನು. “ನಜಭಜಜಂಲಗಂ ಬರೆ
ಸುಮಂಗಲಿಯೆಂಬರದಂ,ಇದಕ್ಕೆ ನರ್ಕುಟಕ ಎಂದು
ಮತ್ತೊಂದು ಹೆಸರು”ಇಲ್ಲಿ ಈ ವೃತ್ತದ ಗಣ ವಿಂಗಡಣಾ ಸೂತ್ರವು ಸಹ ಬಂದಿರುವುದು ಕಾಣಬಹುದು. ಈ ಲಕ್ಷಣದ ಪ್ರಕಾರ ಪ್ರತಿಪಾದದಲ್ಲಿ ನಗಣ, ಜಗಣ, ಭಗಣ, ಜಗಣ, ಜಗಣ, ಒಂದು ಲಘು ಮತ್ತು ಒಂದು ಗುರು ಬರುವುದು. ಇದೇ
ನಿಯಮಕ್ಕೆ ಸಾಮಿಪ್ಯವಿರುವ ಮತ್ತೊಂದು ಅಕ್ಷರ ವೃತ್ತದ ಕುರಿತು ಪಿಂಗಲನು ಚರ್ಚಿಸಿರುವುದನ್ನು
ಕಾಣಬಹುದು. ಆದರೆ ಎರಡಕ್ಕೂ ಇರುವ ವ್ಯತ್ಯಾಸವಿರುವುದು ಯತಿ ಪ್ರಯೋಗದಲ್ಲಿ. ಇಲ್ಲಿ ಪಾದದ
ಕೊನೆಯಲ್ಲಿ ಯತಿಯನ್ನು ಪಾಲಿಸಲಾಗಿದೆ. “ಇದೇ ಗಣವಿನ್ಯಾಸದ ವೃತ್ತವು ನಿರ್ದಿಷ್ಟ ಸ್ಥಳದಲ್ಲಿ
ಪಾಲಿತವಾಗಿದ್ದರೆ ʻಕೋಕಿಲಕʼವೆನ್ನಿಸುವುದೆಂದು
ಪಿಂಗಲಾದ್ಯರೇ ಇನ್ನೊಂದು ಪ್ರಭೇದವನ್ನು ಗುರುತಿಸಿದ್ದಾರೆ.”
ಇಲ್ಲಿನ ಆದಿಪ್ರಾಸ ಮತ್ತು
ಅಂತ್ಯಪ್ರಾಸದ ಪ್ರಯೋಗವು ಸಹ ಆರಂಭಕಾಲದ ಶಾಸನ ಸಾಹಿತ್ಯವನ್ನು, ಕಟ್ಟುವಿಕೆಯ
ಪಾಂಡಿತ್ಯತೆಯನ್ನು ಬಿಂಬಿಸುತ್ತದೆ. ಗುಣಮಧುರನ ವ್ಯಕ್ತಿತ್ವವನ್ನು ಚಿತ್ರಿಸಲು ಬಳಸಿದ ಈ
ಕನಕಾಬ್ಜಿನಿ ವೃತ್ತವು ಕನ್ನಡದ ಮೊದಲ ಛಂದೋಬಂಧವಾದರೂ, ಆ ನಂತರದ
ಕನ್ನಡದ ಶಾಸನಗಳಲ್ಲಿ ಎಲ್ಲಿಯೂ ಹೆಚ್ಚಾಗಿ ಸಿಕ್ಕಿರುವುದಿಲ್ಲ. ಹಳಗನ್ನಡ ಗ್ರಂಥಗಳಲ್ಲಿ ಗಮನಿಸಿದಾಗ ನಾಗವರ್ಮ, ನೇಮಿಚಂದ್ರ ಮುಂತಾದ
ಚಂಪೂ ಕವಿಗಳ ಕೃತಿಗಳಲ್ಲಿ ಅಲ್ಲಲ್ಲಿ ಗೋಚರವಾಗಿರುವುದನ್ನು ನೋಡಬಹುದಷ್ಟೆ. ಈ ಕಾರಣಕ್ಕೆ ಇದೊಂದು
ಅಪರೂಪದ ವರ್ಣವೃತ್ತವಾಗಿದೆ. ಕನ್ನಡದಲ್ಲಿ ಸಿಗುವ ಪ್ರಥಮ ಸಾಹಿತ್ಯಾತ್ಮಕ ಶಾಸನದಲ್ಲಿಯೇ ಇಷ್ಟು ಪ್ರೌಢಿಮೆಯುಳ್ಳ ವೃತ್ತವನ್ನು ಅಳವಡಿಸಿರುವುದನ್ನು
ಗಮನಿಸಿದಾಗ ಅದಕ್ಕೂ ಹಿಂದಿನ ಕನ್ನಡ ಕವಿಗಳು ಮತ್ತು ಲಾಕ್ಷಣಿಕರಲ್ಲಿ ಇದ್ದಂತಹ ವೃತ್ತಗಳ
ಛಂದೋಬಂಧದ ಬಳಕೆ ಮತ್ತು ಪಾಂಡಿತ್ಯತೆಯನ್ನು ತಿಳಿಯಬಹುದು. ಇದು ಕನ್ನಡದಲ್ಲಿ ೫ನೇ ಶತಮಾನಕ್ಕೂ
ಪೂರ್ವದ ವರ್ಣವೃತ್ತಗಳ ಸ್ಥಿತಿಗತಿಗಳ ಸ್ವರೂಪವನ್ನು ತಿಳಿಯಲು ಸಹಾಯಕವಾಗಿದೆ. ಪೂರ್ವದ ಹಳಗನ್ನಡದಲ್ಲಿರುವ ಈ ಶಾಸನವು, 'ಕವಿರಾಜಮಾರ್ಗ'
(ಕ್ರಿ.ಶ. ೮೫೦) ರಚನೆಯಾಗುವ ಮುನ್ನವೇ, ಅಂದರೆ
ಬಾದಾಮಿ ಚಾಲುಕ್ಯರ ಕಾಲದ ಹೊತ್ತಿಗಾಗಲೇ ಕನ್ನಡವು ಒಂದು ಪ್ರಬುದ್ಧ ಕಾವ್ಯಭಾಷೆಯಾಗಿ ವಿಕಸನ
ಹೊಂದಿದ್ದಿತು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಈ ಶಾಸನವು ಕೇವಲ ಯುದ್ಧದ ವರ್ಣನೆಯಾಗಿ
ಉಳಿಯುವುದಿಲ್ಲ. ಗುಣಮಧುರನನ್ನು 'ಅನಿಂದ್ಯ ಗುಣನ್' (ಕಳಂಕವಿಲ್ಲದವನು) ಎಂದು ಕರೆದಿರುವುದು ಆ ಕಾಲದ ನೈತಿಕ ಮೌಲ್ಯಗಳನ್ನು ಬಿಂಬಿಸುತ್ತದೆ. ಐದನೆಯ
ಶತಮಾನದ ವೀರಗಲ್ಲುಗಳಲ್ಲಿ ಕಂಡುಬರುವ ಇಂತಹ ಶೌರ್ಯ, ನೈತಿಕತೆ
ಮತ್ತು ತ್ಯಾಗದ ಆದರ್ಶಗಳೇ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ
ಬೆಳೆದುಬಂದ ವಚನ-ಶರಣ ಸಾಹಿತ್ಯ ಮತ್ತು ಭಕ್ತಿಪರಂಪರೆಯ ಮಾನವತಾವಾದಿ
ಮೌಲ್ಯಗಳಿಗೆ ಒಂದು ಭದ್ರವಾದ ಸಾಂಸ್ಕೃತಿಕ ಭಿತ್ತಿಯನ್ನು ನಿರ್ಮಿಸಿದವು ಎನ್ನಬಹುದು. ಒಟ್ಟಾರೆಯಾಗಿ, ಗುಣಮಧುರನ ತಮಟಕಲ್ಲು ಶಾಸನವು ಕೇವಲ
ಒಬ್ಬ ವೀರನ ಸ್ಮಾರಕವಲ್ಲ; ಅದು ಕನ್ನಡದ ಕಾವ್ಯ ಪರಂಪರೆ, ಛಂದಸ್ಸು ಮತ್ತು ಭಾಷಿಕ ಶ್ರೀಮಂತಿಕೆಯ ಬೇರುಗಳನ್ನು ಐದನೆಯ ಶತಮಾನದಷ್ಟು
ಪೂರ್ವಕ್ಕೆ ಕೊಂಡೊಯ್ಯುವ ಕನ್ನಡನಾಡಿನ
ಅತಿಮುಖ್ಯ ಐತಿಹಾಸಿಕ ಆಕರವಾಗಿದೆ.
ಗುಣಮಧುರನ ತಮಟಕಲ್ಲು ಶಾಸನವು ಕೇವಲ ಮೇಲ್ನೋಟದ ಅಧ್ಯಯನಕ್ಕೆ ಸೀಮಿತವಾಗಿರದೆ, ಶಾಸನಶಾಸ್ತ್ರ, ಭಾಷಾವಿಜ್ಞಾನ, ಸೌಂದರ್ಯ
ಮೀಮಾಂಸೆ ಮತ್ತು ಸಾಮಾಜಿಕ ಇತಿಹಾಸದ ಸೂಕ್ಷ್ಮ ಕನ್ನಡಿಯ ಮೂಲಕ ನೋಡಿದಾಗ
ಈ ಶಾಸನದ ಮಹತ್ವ ಎಂತಹದ್ದು ಎಂಬುದು ಗೊತ್ತಾಗುತ್ತದೆ. ತಮಟಕಲ್ಲು
ಶಾಸನವು ಕೇವಲ ʻಕನ್ನಡದ ಮೊದಲ ಪದ್ಯಶಾಸನ'
ಎನ್ನುವ ಹೆಗ್ಗಳಿಕೆಗೆ ಮಾತ್ರ ಸೀಮಿತವಲ್ಲ. ಇದು ಪ್ರಾಚೀನ ಕರ್ನಾಟಕದ ಸ್ಥಳೀಯ
ರಾಜಕೀಯ ವ್ಯವಸ್ಥೆ, ದ್ರಾವಿಡ ಸೌಂದರ್ಯ ಪ್ರಜ್ಞೆ, ಕಾವ್ಯ ಮೀಮಾಂಸೆ ಮತ್ತು ನೈತಿಕ ಆದರ್ಶ ಮತ್ತು ಮೌಲ್ಯಗಳನ್ನು
ತನ್ನ ಗರ್ಭದಲ್ಲಿ ಹುದುಗಿಸಿಟ್ಟುಕೊಂಡಿರುವ ಒಂದು ಸಾಂಸ್ಕೃತಿಕ ಕಿರುಕಾವ್ಯವಾಗಿದೆ.
ಪರಾಮರ್ಶನ ಗ್ರಂಥಗಳು
೧. ಶಾಸನ ಸಂಗ್ರಹ ಸಂ. ಎ.ಎಂ.ಅಣ್ಣಿಗೇರಿ
ಮತ್ತು ಆರ್ ಶೇಷಶಾಸ್ತ್ರಿ
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು,೨೦೧೩
೨. ಎಪಿಗ್ರಫಿಯಾ ಕರ್ನಾಟಿಕಾ ಶಾಸನ ಸಂಪುಟ.XI, ಚಿತ್ರದುರ್ಗ, ಸಂಖ್ಯೆ.೪೩
೩. ಎಂ.ಚಿದಾನಂದಮೂರ್ತಿ, ಹೊಸತು ಹೊಸತು
ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩
೪. ಸಿ.ನಾಗಭೂಷಣ, ಕನ್ನಡ ಸಾಹಿತ್ಯ ಸಂಸ್ಕೃತಿ ಬಾಗಿನ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೨೦
೫. ಎಂ.ಬಿ.ನೇಗಿನಹಾಳ: ಪೂರ್ವದ ಹಳಗನ್ನಡ ಶಾಸನಗಳ ಸಾಹಿತ್ಯಕ ಅಧ್ಯಯನ
ಪ್ರಸಾರಾಂಗ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,1994
೬. ತಮಟಕಲ್ಲಿನ ಗುಣಮಧುರನ ಶಾಸನಗಳು ಪುನರ್ ಪರಿಶೀಲನೆ
ದೇವರ ಕೊಂಡಾರೆಡ್ಡಿ ಮತ್ತು ಆರ್.ಶೇಷಶಾಸ್ತ್ರಿ, ಸಾಧನೆ, ಸಂ.೧೦.ಸಂ.೩,ಪ್ರಸಾರಾಂಗ
ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. ಜುಲೈ-ಸೆಪ್ಟಂಬರ್,
೧೯೮೧
ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು ...
-
ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಶಾಸನಗಳು:ಇತ್ತೀಚಿನ ಸಂಶೋಧನಾ ನಿಲುವುಗಳು ...
-
ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಳ ಗ್ರಹಿಕೆ ಡಾ.ಸಿ.ನಾಗಭೂಷಣ ಭಾರತೀಯ ...
-
ಕನ್ನಡ ಹಸ್ತಪ್ರತಿಗಳು: ಬಹುಮುಖಿ ಪ್ರಯೋಜನ ( ಚಾರಿತ್ರಿಕ , ಸಾಂಸ್ಕೃತಿಕ , ಸಾಹಿತ್ಯಕ ಹಾಗೂ ಭಾಷಿಕ ಮಹತ್ವ ) ಡಾ.ಸಿ.ನಾ...