ಸೋಮವಾರ, ಆಗಸ್ಟ್ 22, 2022

 

   ಮಧ್ಯಕಾಲೀನ ಕನ್ನಡ ಸಾಹಿತ್ಯ: ದೇಸಿಯತೆಯ ಹುಡುಕಾಟದ ಅನುಸಂಧಾನ

                                           ಡಾ.ಸಿ.ನಾಗಭೂಷಣ

ದೇಸಿ ಪದವು ಸಾಹಿತ್ಯ ಪರಿಕಲ್ಪನೆಯಲ್ಲಿ ಪರಿಚಿತವಾದ ಪದ. ದೇಶಿವಾದ ಎನ್ನುವ ಪಾರಿಭಾಷಿಕ ಪದಕ್ಕೆ ಖಚಿತವಾದ ವ್ಯಾಖ್ಯೆ ದೊರೆತಿಲ್ಲವಾದರೂ ಹೆಸರನ್ನು ಹೊಂದಿರುವ ಸಾಹಿತ್ಯಕ ಚಳುವಳಿಯೊಂದು ಕನ್ನಡ ಸಾಹಿತ್ಯದಲ್ಲಿ ಮಹತ್ವ ಪಡೆದಿದ್ದು ಹಲವಾರು ಶ್ರೇಷ್ಠ ಕೃತಿಗಳ ಹುಟ್ಟಿಗೆ ಕಾರಣವಾಗಿರುವ ಮತ್ತು ಕಾಲ ಕಾಲಕ್ಕೆ ವಿಮರ್ಶೆಯ ಒಲವನ್ನು ಪ್ರಭಾವಿಸಿರುವ ಪ್ರವೃತ್ತಿಯೊಂದರ ದ್ಯೋತಕವಾಗಿದೆ.

ದೇಸಿಯತೆ ಎಂದರೆ ಒಂದು ಪ್ರದೇಶಕ್ಕೆ ಸಂಬಂಧಪಟ್ಟ ಅಂದರೆ ಆಯಾ ಪ್ರದೇಶದ ಜನಸಮುದಾಯದ ಚಿಂತನೆ ಭಾವನೆ, ಸಂಸ್ಕೃತಿ ಆಚರಣೆಗಳು, ಅದೇ ರೀತಿ ಇತರರಿಗಿಂತ ಭಿನ್ನವಾದುದು, ವೈದೃಶ್ಯವಾದುದು ಸರಳೀಕೃತಗೊಳಿಸಿ ಹೇಳುವುದಾದರೆ ನಮ್ಮಗೆ ಮಾತ್ರ ಸೇರಿದ ವಿಷಯವಾಗಿದೆ.

ದೇಸಿ, ದೇಸಿಯತೆಗಳು ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದುದು ಆಗಿರದೆ ಮನೋಧರ್ಮಕ್ಕೆ, ಬದುಕನ್ನು ಅರಿಯುವ ರೀತಿಗೆ ಸಂಬಂಧಪಟ್ಟ ಸಂಗತಿಯೂ ಹೌದು. ದೇಸಿತನವನ್ನು ಕುರಿತ ಹುಡುಕಾಟಗಳು ನಮ್ಮ ತನದ ಹುಡುಕಾಟದ ಒಂದು ಭಾಗವೇ ಆಗಿದೆ. ದೇಸಿತನದ ಬಗೆಗಳು ಕೇವಲ ಸಾಹಿತ್ಯದಲ್ಲಿ ಮಾತ್ರವಲ್ಲದೆ ಬದುಕಿನಲ್ಲೂ ಗುರುತಿಸಿ ಉಳಿಸಿಕೊಳ್ಳಬೇಕಾಗಿದೆ. ದೇಸಿ ಎಂಬುದು ಸಿದ್ಧವಾಗಿ ಬಳಕೆಗೆ ಲಭ್ಯವಿರುವ ವಸ್ತುವಲ್ಲಎಂಬುದನ್ನು ಗಮನಿಸ ಬೇಕು.

    ದೇಸಿವಾದ ಎಂಬುದು ಇಂಗ್ಲೀಷ್ ನೆಟಿವಿಸಂ ಗೆ ಸಂವಾದಿಯಾಗಿರುವ ಪದ. ದೇಸಿ ಮತ್ತು ದೇಶೀ ಇವೆರಡೂ ದೇಶ್ಯ ಎನ್ನುವ ಪದದಿಂದಲೇ ಹುಟ್ಟಿದೆ. ದೇಸಿ ಎನ್ನುವುದು ಮೂಲತಃ ಅಭಿವ್ಯಕ್ತಿಗೆ ಭಾಷೆಯ ಬಳಕೆಗೆ ಸಂಬಂಧಪಟ್ಟುದಾಗಿದೆ. ದೇಸಿಯ ಬಳಕೆಯ ಹಿಂದೆ ದೇಶಿವಾದದ ಒಲವು ಕಂಡುಬರುತ್ತದೆ. ದೇಸಿವಾದದ ಹರವು ಭಾಷೆಯ ಬಳಕೆಯನ್ನಲ್ಲದೆ, ಸಾಹಿತ್ಯ, ವಸ್ತು, ನಿರೂಪಣೆ, ಬರಹಗಾರರ ಮೂಲ ಕಲ್ಪನೆ ಮತ್ತು ಕೃತಿಯ ಒಟ್ಟು ಸಾಂಸ್ಕೃತಿಕ ಸಂದರ್ಭವನ್ನು, ಮೀಮಾಂಸೆಯ ಧೋರಣೆಗಳನ್ನು ಪ್ರಭಾವಿಸುವ ಒಂದು ಪ್ರವೃತ್ತಿಯಾಗಿಯೂ ಕಾಣಬಹುದಾಗಿದೆ. ದೇಶ್ಯಎಂಬ ಪದದಿಂದ ನಿಷ್ಪನ್ನವಾಗಿರುವದೇಸೀಪದ, ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ವಿಭಿನ್ನ ಅರ್ಥವಲಯಗಳಲ್ಲಿ ಬಳಕೆಗೊಂಡಿದೆ. ಪ್ರಧಾನವಾಗಿ ಕನ್ನಡದ ಪ್ರಾದೇಶಿಕ ಉಪಭಾಷೆಗಳನ್ನು, ಅವುಗಳ ವೈಲಕ್ಷಣದಿಂದಾಗಿ ತನ್ನ ಅನನ್ಯತೆ ಕಾಪಾಡಿಕೊಂಡಿರುವ ಶೈಲಿಯಾಗಿ ಬಳಕೆಗೊಂಡಿದೆ. ತತ್ಸಮ-ತದ್ಭವವಾಗಿ ಸಮಸಂಸ್ಕೃತವಾಗಿ, ಮಾರ್ಗಸಂಸ್ಕೃತಿ-ದ್ರಾವಿಡಸಂಸ್ಕೃತಿಯ ಸಮ್ಮಿಲನದ ಉತ್ಪನ್ನವಾಗಿ, ಕನ್ನಡದಲ್ಲಿ ಕಾವ್ಯಸಂಪ್ರದಾಯವೊಂದರ ಹುಟ್ಟಿಗೆ ದೇಸಿಯು ಕಾರಣವಾಗಿರುವುದನ್ನು ಕನ್ನಡ ಕವಿಗಳು ದಾಖಲಿಸಿದ್ದಾರೆ. ಸಂಸ್ಕೃತ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿಯೂ ತನ್ನ ವಿಶಿಷ್ಟತೆಯ ಸೊಬಗನ್ನು, ಚಲುವನ್ನುಳಿಸಿ ಬೆಳೆಸಿಕೊಂಡು ಬಂದಿದೆ. ಕನ್ನಡ ಕಾವ್ಯಪರಂಪರೆ, ಸ್ಥಳಿಯವಾದ, ಪ್ರಾದೇಶಿಕವಾದುದನ್ನು ಅಂತಸ್ತಗೊಳಿಸಿಕೊಂಡು, ಒಂದು ವಿಶಿಷ್ಟ ಕಾವ್ಯಸಂಪ್ರದಾಯದ ಚಾಲನೆಗೆ ಕಾರಣವಾಗುವುದರೊಂದಿಗೆದೇಸೀಎನ್ನುವುದು ಕನ್ನಡತನದ ಮುದ್ರೆಯಾಗಿ ನಿರ್ವಚಿಸಿಕೊಂಡು ಬಂದಿದೆ. ದೇಸೀ ಎಂಬುದನ್ನು ಕುರಿತಾಗಿಅದು ಮೂಲತಃ ದೇಶ್ಯ ಅಥವಾದೇಶಿಪದವೇದೇಸೀ ಎಂಬ ನಿಲುವು ವ್ಯಕ್ತವಾಗಿದೆ. ಯಾವ ಲಕ್ಷಣಕ್ಕೂ ಒಳಗಾಗದೆ ದೇಸಿಗಬ್ಬಿಗರ ಪ್ರತಿಭಾ ಬಲದಿಂದ ಪದ-ಹಾಡುಗಳ ರೂಪದಲ್ಲಿ ಉದಯಿಸಿದುದು ಎಂದು ಅದರ ತಾತ್ಪರ್ಯವಿರಬೇಕು. ದೇಸೀ ಎನ್ನುವುದು ಬರೀ ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಬದುಕನ್ನು, ಮನುಷ್ಯನ ಜೀವನ ಶೈಲಿಯನ್ನು ಅವಲಂಭಿಸಿರುವುದು, ಸಹಜ ಜೀವನವೇ ಆಗಿರುವಂತಹದು. ದೇಸೀಗೆ ದೇಶಸಂಬಂಧಿ ಎಂಬುದು ವಾಚ್ಯಾರ್ಥ, ಲಕ್ಷಣಮುಕ್ತವಾದ ರಚನೆ ಎಂಬುದು ವಿಶೇಷಾರ್ಥ. ಪ್ರಾಚೀನ ಸಾಹಿತ್ಯ ಸಂದರ್ಭದಲ್ಲಿ ದೇಸೀ ಎಂಬುದು ಶೈಲಿಯಾಗಿ ಬಳಕೆಯಾಗಿದೆ.’ ದೇಸೀ ಎಂಬುದು ಕೇವಲ ಭಾಷಿಕವಾಗಿ ಮಾತ್ರ ಪರಿಗಣಿಸದೇ ಸಾಂಸ್ಕೃತಿಕ ಒಳ ಒತ್ತಡದಿಂದ ಬಂದುದು ಮತ್ತು ಇದು ಜನಪದ ಸಮುದಾಯವನ್ನೇ ಪ್ರತಿನಿಧಿಸುವಂತಹದು ಆಗಿದೆ ಎನ್ನ ಬಹುದು. ‘ಪರಂಪರಾಗತವಾದ ಸಂಸ್ಕೃತಿಯ ಎಲ್ಲಾ ನೆಲೆಗಳು ಮೂಲ ಸ್ವರೂಪದಲ್ಲಿ ಅಭಿವ್ಯಕ್ತಿಗೊಳ್ಳುವುದನ್ನು ದೇಸೀಯತೆ ಎನ್ನುತ್ತೇವೆ. ‘ಸ್ಥಳೀಯವಾದ, ಒಂದು ಪ್ರದೇಶದ ಪರಂಪರಾಗತವಾದ, ಸಾಂಸ್ಕೃತಿಕ ಅಕೃತ್ರಿಮವಾದ ಬದುಕಿನ ಅನುಭವದ ನೆಲೆಗಳನ್ನು ಮೂಲ ಸ್ವರೂಪದಲ್ಲಿಯೇ ಕಟ್ಟಿಕೊಡುವ ಒಂದು ಬಗೆಯ ತಿಳುವಳಿಕೆಯೇ ದೇಸೀಯತೆಯಾಗಿದೆ. ‘ದೇಸೀಯತೆಎನ್ನುವುದು ಅದುಒಂದು ಪ್ರದೇಶಕ್ಕೆ ಸಂಬಂಧಪಟ್ಟ ಅಂದರೆ ಆಯಾ ಪ್ರದೇಶದ ಜನಸಮುದಾಯದ ಚಿಂತನೆ, ಭಾವನೆ, ಸಂಸ್ಕೃತಿ, ಮತ್ತು ಆಚರಣೆಗಳು ಇದೇ ರೀತಿ ಇತರರಿಗಿಂತ ಭಿನ್ನವಾದುದು, ವೈದೃಶ್ಯವಾದುದು ಅಂತಹದು ಯಾವುದಿದ್ದರೂ ಅದು ಅಲ್ಲಿಯ ದೇಸೀಯತೆ ಎಂದು ಪರಿಗಣಿಸಬೇಕು. ಸರಳವಾಗಿ ಹೇಳುವುದಾದರೆ ಅದು ತಮ್ಮತನ ತಮಗೆ ಮಾತ್ರ ಸೇರಿದ ವಿಷಯ.’ ಒಂದು ರೀತಿಯಲ್ಲಿ ಅದು ಸ್ವಂತಿಕೆಯಂದೇ ಹೇಳಬಹುದು.

ದೇಸಿವಾದ ಎಂದರೆ, ಒಂದು ಸಾಹಿತ್ಯದ ಸತ್ವವನ್ನು ಸಾಹಿತ್ಯವು ಹುಟ್ಟಿಕೊಳ್ಳುವ ಭಾಷಾ ಸಮುದಾಯದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಪ್ರದಾಯದ ವಿಶಿಷ್ಟ ಒಲವುಗಳನ್ನು, ಸಮುದಾಯದ ಸಾಂಸ್ಕೃತಿಕ ಅನನ್ಯತೆಯನ್ನು, ಸಾಹಿತ್ಯಕ್ಕಿರುವ ತನ್ನದೇ ಆದ ಸ್ವಾಯತ್ತತೆಯನ್ನು ಗುಣಾತ್ಮಕವೆಂದು ಒಪ್ಪಿಕೊಳ್ಳುವ ಧೋರಣೇ ಅಥವಾ ಸಿದ್ಧಾಂತ ಎಂಬ ವಿದ್ವಾಂಸರ ಅನಿಸಿಕೆಯು ಸ್ವೀಕಾರಾರ್ಹವಾಗಿದೆ. ದೇಸಿವಾದವು ನಿರ್ದಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿ ಬದುಕುವ ಭಾಷಾ ಸಮುದಾಯವೊಂದರ ಇರುವಿಕೆಯನ್ನು ಸೂಚಿಸುತ್ತದೆ. ಪ್ರಾದೇಶಿಕವಾದದ ಪ್ರತೀಕವಾದ ದೇಸಿಯ ಚೌಕಟ್ಟು ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿರುವ ಭಾಷಾ ಸಮುದಾಯವೊಂದರ ವಾಸ್ತವಿಕ ಜೀವನದ ಹೊರ ಆವರಣವಾಗಿರುತ್ತದೆ.

ದೇಸಿವಾದದ ಹಿಂದಿರುವ ಸಂಸ್ಕೃತಿ-ಸಾಹಿತ್ಯದ ಪರಿಕಲ್ಪನೆಯ ಪ್ರಕಾರ ಪ್ರತಿಯೊಂದು ಸಂಸ್ಕೃತಿಯೂ ತನ್ನದೇ ಆದ ಕೆಲವು ಲಕ್ಷಣ ಚರ್ಯೆಗಳನ್ನು ಹೊಂದಿರುತ್ತದೆ. ಲಕ್ಷಣಗಳು ಸಂಸ್ಕೃತಿಯ ಒಡಲಾಳದಲ್ಲಿರುವ ಸತ್ವಶೀಲತೆಯೊಂದರ ದ್ಯೋತಕಗಳಾಗಿರುತ್ತವೆ. ಸತ್ವಶೀಲತೆ ಕೆಲವು ನಿರ್ದಿಷ್ಟವಾದ ಕಾಲಮಾನದಲ್ಲಿ ಪ್ರಕಟವಾಗಿಬಿಡುವಂತಹದ್ದಲ್ಲ. ದೇಸಿಯು ಚರಿತ್ರೆಯು ತರಬಹುದಾದ ಎಲ್ಲಾ ಬೆಳವಣಿಗೆ ಮತ್ತು ಬದಲಾವಣೆಗಳ ಮಧ್ಯೆಯೂ ನಿರಂತವಾಗಿ ಉಳಿದುಕೊಂಡು ಬರುವಂತ ಸತ್ವಶೀಲತೆಯುಳ್ಳದ್ದು. ಸತ್ವ ಶೀಲತೆಯ ಬಹುಮುಖ್ಯ ಅಭಿವ್ಯಕ್ತಿ ಎಂದರೆ ಆಯಾ ಸಂಸ್ಕೃತಿಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆ.

ದೇಸಿವಾದದ ಕೆಲವು ವಿಶಿಷ್ಟ ಲಕ್ಷಣಗಳು.

ಸಾಮಾನ್ಯವಾಗಿ ದೇಶಿಯವೆನ್ನಲಾಗುವ ಪರಿಕಲ್ಪನೆಯ ಬಗ್ಗೆ ನಿರ್ದಿಷ್ಟತೆ ಇಲ್ಲದಿದ್ದರೂ ದೇಶಿಯವಲ್ಲದ ಪರಿಕರಗಳನ್ನು ಹೆಚ್ಚು ಸ್ಪಷ್ಟವಾಗಿ ವಿವೇಚಿಸುತ್ತದೆ. ಮಾರ್ಗ ದೇಸಿ, ವಸ್ತುಕ-ವರ್ಣಕ, ಆಗಮಿಕ-ಲೌಕಿಕ, ಸ್ಥಾವರ-ಜಂಗಮ ರೀತಿಯ ಪ್ರಕಾರಗಳ ವಿಂಗಡಣೆ ಕೂಡ ದ್ವಂದ್ವಾತ್ಮಕತೆಯುಳ್ಳದ್ದು. ಪರಿಕಲ್ಪನೆಗಳ ಹಿಂದೆ ಸ್ಥೂಲವಾದ ದೇಶಿವಾದದ ಹಿನ್ನೆಲೆಯನ್ನು ಕಾಣಬಹುದಾಗಿದೆ.

   ಭಾಷೆ ಅಸ್ತಿತ್ವಕ್ಕೆ ಬಂದಾಗ, ಆ ಭಾಷೆಗೆ ಲಿಪಿ ಪ್ರಾಪ್ತವಾದಾಗ, ಸಾಹಿತ್ಯ ಚಟುವಟಿಕೆಗಳು ಆರಂಭವಾದಾಗ, ನಮ್ಮತನ ಎಂಬುದು ಜಾಗೃತಗೊಳ್ಳುತ್ತದೆ. ಕನ್ನಡದಲ್ಲಿ ದೊರೆತ ಮೊದಲ ಶಾಸ್ತ್ರ ಗ್ರಂಥ ಕವಿರಾಜಮಾರ್ಗವು ಕನ್ನಡ ಭಾಷೆ ಸಾಹಿತ್ಯ ಸಂಸ್ಕರಣಗೊಂಡ ಪ್ರಬುದ್ಧ ಭಾಷೆಯಾಗಬೇಕೆಂಬ ಕಳಕಳಿಯಿಂದ ರಚಿತಗೊಂಡುದು. ಕನ್ನಡ ನಾಡಿನ ವಿಸ್ತಾರವನ್ನು ಕನ್ನಡ ಜನಪದದ ಹಿರಿಮೆಯನ್ನು, ಕನ್ನಡಿಗರ ರೂಪ ಗುಣ ಶೌರ್ಯಗಳನ್ನು ಎದೆತುಂಬಿ ವರ್ಣಿಸುವ ಕೃತಿ ಕರ್ತೃವಿನ ಹೃದಯದಲ್ಲಿ ದೇಸಿಯತೆಯ ಹಿರಿಮೆ ಅಡಗಿರುವುದನ್ನು ನೋಡಬಹುದಾಗಿದೆ. ಕನ್ನಡ ಕಾವ್ಯಪರಂಪರೆಯ ಪರಿಭಾಷೆಯ ನೆಲೆಯಲ್ಲಿ ಹೇಳುವುದಾದರೆ ಕಾವ್ಯ ಎನ್ನುವುದು, ಭಾಷೆ ಎಲ್ಲೆಲ್ಲಿ ತನ್ನ ಸಮಾಜದೊಂದಿಗೆ ಸಂಪರ್ಕವನ್ನೇ ಕಳೆದುಕೊಳ್ಳುವಷ್ಟರಮಟ್ಟಿಗೆ ಪ್ರೌಢಾವಸ್ಥೆಯನ್ನು ತಾಳಿದೆಯೋ ಅಲ್ಲೆಲ್ಲ ಅದುಮಾರ್ಗ ಕಾವ್ಯಪದ್ಧತಿಯಾಗಿ ಮತ್ತು ಎಲ್ಲೆಲ್ಲಿ ಒಂದು ಸ್ಥಿತಿಯಿಂದ ಕೆಳಗಿಳಿದು ಅದು ಕಳೆದುಕೊಂಡ ಸಾಮಾಜಿಕ ಸಂಪರ್ಕವನ್ನು ಮತ್ತೆ ಸ್ಥಾಪಿಸಿಕೊಳ್ಳುವ ಹೋರಾಟದ ಸಂದರ್ಭಗಳಲ್ಲಿದೇಸೀಕಾವ್ಯಪದ್ಧತಿಯಾಗಿ ಕಾಣಿಸಿಕೊಳ್ಳುತ್ತಾ ಬಂದಿದೆ.  

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದೇಸಿಯ ಕಲ್ಪನೆ ಪ್ರಾಚೀನ ಕಾಲದಿಂದಲೇ ಬಂದಿದೆ. ದೇಸಿಯ ಮೊತ್ತಮೊದಲ ಉಲ್ಲೇಖ ದೊರೆಯುವುದು ಕವಿರಾಜಮಾರ್ಗದಲ್ಲಿ . ಕನ್ನಡಂಗಳ್ ಎಂದು ಬಹುವಚನ ಬಳಸಿ ಅದರ ವೈವಿಧ್ಯವನ್ನು ಹೇಳಿರುವುದಲ್ಲದೆ ಅವುಗಳು ಪರಸ್ಪರ ಅರಿಯಲಾರದಷ್ಟು, ವಾಸುಗಿಯೂ ತಿಳಿಯಲಾರದಷ್ಟು ಭಿನ್ನವಾಗಿದೆ ಎಂಬ ವಿವರಣೆ ಕಂಡು ಬರುತ್ತದೆ. ದೇಸಿ ಎನ್ನುವಲ್ಲಿ ಶ್ರೀವಿಜಯ ಕನ್ನಡದ ಪ್ರಾದೇಶಿಕ ಪ್ರಭೇಧಗಳನ್ನು ಗಮನಿಸಿದ್ದಾನೆ. ಕನ್ನಡ ಸಾವಿರಾರು ವರ್ಷಗಳಿಂದ ಸಾಗಿಬಂದಿರುವ ಅಚ್ಚಗನ್ನಡ ದೇಶಿಯ ಭಾಷೆಯಾದರೂ ಮತ್ತೇ ಅದರಲ್ಲೂ ದೇಶಿಯತೆ ಎನ್ನುವುದು ಏನನ್ನೂ ಎಂಬುದಕ್ಕೆ ಅದರ ಪ್ರಾದೇಶಿಕತೆ ಎಂಬುದಕ್ಕೆ ಕವಿರಾಜ ಮಾರ್ಗದ ಪದ್ಯದಿಂದಲೇ ತಿಳಿದುಬರುತ್ತದೆ. ಸಾಂಸ್ಕೃತಿಕ ರಾಜಕೀಯ ಒತ್ತಡದ ಪರಿಣಾಮದಿಂದ ಕನ್ನಡದಲ್ಲಿ ದೊರೆತ ಮೊದಲ ಶಾಸ್ತ್ರ ಗ್ರಂಥ ಕವಿರಾಜಮಾರ್ಗ. ಹಿನ್ನೆಲೆಯಲ್ಲಿ ಕನ್ನಡದಲ್ಲಿ ಸುಲಲಿತವಾದ ಸಂಸ್ಕೃತ ಶಬ್ದಗಳನ್ನು ಬೆರೆಸಬಹುದು. ಆದರೆ ದೇಶ್ಯ ಮತ್ತು ಸಂಸ್ಕೃತ ಬೆರೆತ ಅರಿಸಮಾಸವನ್ನು ಮಾಡಬಾರದು ಎಂಬ ಹಿತೋಕ್ತಿ ಕನ್ನಡತನವನ್ನು ಬಿಂಬಿಸುವ ನುಡಿ. ಅಂತಹ ತಮ್ಮತನದ ಆಯಾಮಗಳನ್ನು ನಾವು ಮೊಟ್ಟಮೊದಲು ಕಾಣುವುದು ಕನ್ನಡದ ಅಲಂಕಾರಿಕ ಕಾವ್ಯವಾದ ಕವಿರಾಜಮಾರ್ಗದಲ್ಲಿಯೇ. ಕವಿರಾಜಮಾರ್ಗವು ದೈನಂದಿನಲ್ಲಿ ಚಲಾವಣೆಯಲ್ಲಿರುವ ಕನ್ನಡ ಭಾಷೆಯ ವೈವಿಧ್ಯತೆಯನ್ನು ಒಂದು ದೋಷವೆಂದು ಪರಿಭಾವಿಸದೇ ಅವುಗಳ ವೈವಿಧ್ಯತೆಯಲ್ಲಿಯೂ ವಿವಿಧ ಅರ್ಥಗಳು ಇರುವುದನ್ನು ಲಕ್ಷಿಸಿ ಭಿನ್ನಭಿನ್ನ ಪ್ರದೇಶದಲ್ಲಿ ಬೇರೆಬೇರೆ ಅರ್ಥಪ್ರತೀತಿ ಇರುವುದನ್ನು ಗುರುತಿಸಿದೆ. ಕನ್ನಡದ ಉಪಭಾಷೆಗಳು ಇರುವುದನ್ನು ಲಕ್ಷಿಸಿ, ಅವುಗಳಲ್ಲಿ ಅನೇಕ ದೇಸೀತನ ಇರುವುದನ್ನು ಮಾರ್ಗಕಾರ ಗಮನಿಸಿದ್ದಾನೆ. ಒಂದು ಶಿಷ್ಟದೇಶೀಯನ್ನು ಮಂಡಿಸುತ್ತಲೇ ಹಲವು ಕನ್ನಡದ ಬದಲಾಗಿ ಸಾಮಾನ್ಯವಾಗಿ ಎಲ್ಲರ ಗ್ರಹಿಕೆಗೆ ಪಕ್ಕಾಗುವ ಕನ್ನಡವೊಂದನ್ನು ಪ್ರತಿಪಾದಿಸುತ್ತಾನೆ. ಕವಿರಾಜಮಾರ್ಗ ಎಂಬುದು ಕವಿಗಳು ತಮ್ಮ ಕಾವ್ಯಾಭಿವ್ಯಕ್ತಿಗೆ ಕಂಡುಕೊಂಡ ಒಂದು ರಾಜಮಾರ್ಗ. ಪಂಡಿತ ಕವಿಗಳು ಅನುಸರಿಸಬಹುದಾದ ಮಾರ್ಗ ಇದಾದರೂ ಮಾರ್ಗಕಾರನು ಅಲ್ಲಲ್ಲಿ ದೇಸೀಕವಿಗಳ ಅಥವಾ ಜನಪದರ ಕಾವ್ಯ ವಿಚಾರಗಳನ್ನೆ. ಕನ್ನಡ ನಾಡು-ನುಡಿಗಳ ವಿಷಯದಲ್ಲಿ ಕವಿಗೆ ಸಾಕಷ್ಟು ಹೆಮ್ಮೆಯಿದೆ. ಅಭಿಮಾನವಿದೆ. ಆದ್ದರಿಂದಲೇ ಆತ ಕನ್ನಡಿಗರು ಸುಭಟರೆಂದು, ಕವಿಗಳೆಂದು, ಗುಣಿಗಳೆಂದು, ಅಭಿಮಾನಿಗಳೆಂದು ಹೊಗಳುವುದರ ಜೊತೆಯಲ್ಲಿಯೇ ನಾಡಿನ ಜನಪದರೂ ಶಿಷ್ಟ ಪಂಡಿತರಲ್ಲವೆಂದರೂ, ಕಾವ್ಯಕಟ್ಟಿ ಹಾಡಬಲ್ಲರೆಂದು ನಾಡವರನ್ನು ಹೊಗಳುವಲ್ಲಿಯೂ ಗಮನ ಸೆಳೆದಿದ್ದಾನೆ. ಜನಪದರು ಹಾಡಿಕೊಂಡ ಕಾವ್ಯ ಕವಿಯ ಮನಸ್ಸನ್ನು ಸೂರೆಗೊಂಡಂತಿದೆ. ಆದ್ದರಿಂದಲೇ ಮಾರ್ಗೀಯ ಸಾಹಿತ್ಯ ಪ್ರಕಾರಗಳನ್ನು ಹೇಳುವುದರ ಜೊತೆಗೆ ದೇಸೀ ಸಾಹಿತ್ಯದ ವಿವಿಧ ಪ್ರಕಾರಗಳಾದ ಬೆದಂಡೆ, ಚತ್ತಾಣ, ಹಾಡುಗಬ್ಬಗಳನ್ನು ಪ್ರಸ್ತಾಪಿಸುವುದರರ ಜೊತೆಗೆ ಬಯಲಾಟ, ನಾಳ್ಪಗರಣಗಳನ್ನು ಉಲ್ಲೇಖಿಸಿದ್ದಾನೆ.

      ನಮ್ಮ ಕವಿಗಳು ದೇಸಿ ಪದವನ್ನು ಬಳಸಿರುವ ಸಂದರ್ಭಗಳನ್ನು ಪರಿಶೀಲಿಸಿದರೆ ಅದರಲ್ಲಿ ದೇಸಿಯ ಬಗೆಗೆ ಕೆಲವೊಂದು ಅಂಶಗಳು ಗಮನಕ್ಕೆ ಬರುತ್ತವೆ. ನಾಡಿನ ನುಡಿಯ ನಾಡಿ ಮಿಡಿತ ಅಥವಾ ಜೀವಭಾವದ ಉಸಿರಾಗಿ ಹೊಮ್ಮುವ ನುಡಿಯ ಬೆಡಗು ಎಂಬ ಅರ್ಥವನ್ನು ಭಾಷೆಯ ದೃಷ್ಟಿಯಿಂದ ದೇಸಿ ಸೂಸುತ್ತದೆಜಾತಿ-ಜಾಣ್ಎಂದು ಕವಿರಾಜ ಮಾರ್ಗಕಾರನು ಪದ ಪ್ರಯೋಗ ಮಾಡಿದುದು ದೇಸಿಯ ಹಿನ್ನೆಲೆಯಲ್ಲಿಯೇ ಆಗಿದೆ. ದೇಸಿ ಎಂಬುದು ಮಾತಿನ ಸಹಜತೆಯನ್ನು ಸೂಚಿಸುತ್ತದೆ. ದೇಸಿಯ ನಿಲುವು ನಿರಾಡಂಭರವಾದುದು. ದೇಸಿ, ದೇಶೀಯ ಎಂದರೆ ಒಂದು ಪ್ರದೇಶಕ್ಕೆ ವಿಶಿಷ್ಟವಾದ ರೀತಿಯನ್ನು ನಡೆಯ          ಬಗೆಯನ್ನು ಸೂಚಿಸುತ್ತದೆ. ನಾಡಿನ ಅಥವಾ ದೇಸೀ ಸಂಸ್ಕೃತಿ ಪ್ರಸಾರಮಾಡಿ ಜನಮನದಲ್ಲಿ ಅದು ಅಚ್ಚೊತ್ತಿ ನಿಲ್ಲುವಂತೆ ಮಾಡುವಲ್ಲಿ ಪಂಡಿತ ಕವಿಗಳಿಗಿಂತಲೂ ಜನಪದ ಕವಿಗಳೇ ಮೇಲು ಎನ್ನುವ ನಿಲುವು ಮಾರ್ಗಕಾರನದಾಗಿದೆ ಎಂದರೂ ತಪ್ಪಾಗಲಾರದು. ಅಂತೆಯೇ ಆತ

ಪದನಱಿದು ನುಡಿಯಲುಂ ನುಡಿ

ದುದನಱಿದಾರಯಲುಮಾರ್ಪರಾ ನಾಡವರ್ಗಳ್

ಚದುರರ್ ನಿಜದಿಂ ಕುಱಿತೋ

ದದೆಯುಂ ಕಾವ್ಯ ಪ್ರಯೋಗ ಪಱಿಣತಮತಿಗಳ್ ಎನ್ನುತ್ತಾನೆ.  

ಜನಪದ ಕವಿಗಳ ಕಾವ್ಯ ಸಾಮರ್ಥ್ಯವನ್ನು ಕುರಿತು ಹೇಳಿ ಬೆದಂಡೆ, ಚತ್ತಾಣ, ಬಾಜನೆಗಬ್ಬ, ಗದ್ಯಕಥಾ ಇತ್ಯಾದಿಯಾಗಿ ಹೆಸರಿಸಿ, ಪ್ರಕಾರಗಳು ಕನ್ನಡದ್ದೇ ಆದ ದೇಸೀಛಂದಸ್ಸಿನ ದೇಸೀಕಾವ್ಯ ಪ್ರಕಾರಗಳು. ಇವು ಜನಮಾನಸದಲ್ಲಿ ನಿತ್ಯವಾಗಿ ಬಳಕೆಗೊಂಡಿದ್ದು, ಮೌಖಿಕ ಪರಂಪರೆಯಲ್ಲಿ ಜನಪದರು ಒಂದು ಮಹಾಕಾವ್ಯವಾಗಿದ್ದರು ಎಂದಿದ್ದಾನೆ. ಅದುವರೆಗೆ ಕನ್ನಡದಲ್ಲಿ ಲಕ್ಷಣಗ್ರಂಥವಿರಲಿಲ್ಲವೆಂದು ಅಭಿಪ್ರಾಯಿಸಿ, ಕನ್ನಡದ ದೇಸೀ ಮತ್ತು ಮಾರ್ಗಸಮನ್ವಯವನ್ನು ಅವನು ಪ್ರತಿಪಾದಿಸಿದ್ದಲ್ಲದೇ ತನ್ನ ಕೃತಿಯಲ್ಲಿ ಅದನ್ನು ತೋರಿಸಿದ್ದಾನೆ. ಪ್ರಾದೇಶಿಕವಾದ ಸ್ಥಳಿಯ ಭಾಷೆಯೊಂದನ್ನು ಶಿಷ್ಟಭಾಷೆಯೆಂದು ಮಂಡಿಸುವ ಕವಿರಾಜಮಾರ್ಗಕಾರ, ಸಂಸ್ಕೃತ ಸಾಹಿತ್ಯದ ಪ್ರತಿಯಾಗಿ ಇದನ್ನು ರೂಪಿಸುತ್ತಾನೆ. ಇದು ಒಂದು ಸಂಘರ್ಷದ ಬದಲಾಗಿ ಸಮನ್ವಯದ ನೆಲೆಯಲ್ಲಿ ಮಂಡಿತವಾಗಿದೆ. ಭಿನ್ನತೆಯ ಮಧ್ಯದಲ್ಲಿಯೂ ಅನುಸಂಧಾನದ, ಸಮನ್ವಯದ ಅಗತ್ಯತೆಯನ್ನು ನಿರೂಪಿಸಿದ್ದಾನೆ. ಸಂದರ್ಭದಲ್ಲಿ ಅವನು ಬಳಸಿದ ನುಡಿಗಟ್ಟುಗಳು, ಹೋಲಿಕೆಗಳು, ನಾಣ್ಣುಡಿಗಳು ಇವೆಲ್ಲವೂ ದೇಸೀಯತೆಯನ್ನು ಪ್ರಕಟಿಸುವ ಪರಿಕರಗಳಾಗಿವೆ. ಸಂಸ್ಕೃತ ಪದಗಳನ್ನೂ, ಕನ್ನಡ ಪದಗಳನ್ನೂ ಸಮಾಸೋಕ್ತಿಗಳಲ್ಲಿ ಬೆರೆಸಬಾರದೆಂದು, ಬೆರೆಸಿದರೆ ದೋಷವಾಗುತ್ತದೆ. ಅದು ಕುದಿಯುವ ಹಾಲಿಗೆ ಮಜ್ಜಿಗೆ ಹನಿಗಳನ್ನು ಹಾಕಿದಂತೆ. ಅಂಥ ಸ್ವಲ್ಪವೇ ದೋಷದಿಂದಲೂ ಕೃತಿ ಕೆಡುತ್ತದೆ ಎಂದು ಹೇಳುವಲ್ಲಿ ಮತ್ತು ಕವಿ ಹಂತಹಂತವಾಗಿ ಕೊಡುವ ಗಾದೆಮಾತುಗಳಲ್ಲಿಯೂ ದೇಸೀ ವ್ಯಕ್ತವಾಗುತ್ತದೆ. ಹಿನ್ನೆಲೆಯಲ್ಲಿ ಕವಿರಾಜಮಾರ್ಗ ಆಯಾ ಪ್ರಾದೇಶಿಕ ಜನರ ಮತ್ತು ಅವರ ಬದುಕಿನ ತುಡಿತ ಮಿಡಿತಗಳಿಗೆ ಪ್ರತಿಸ್ಪಂದಿಸುತ್ತಿರುವುದರ ಹಿನ್ನೆಲೆಯಲ್ಲಿ, ಮಾರ್ಗಕಾವ್ಯದಲ್ಲಿಯ ದೇಸೀಯತೆ ಪ್ರಮುಖವಾಗಿ ನಿಲ್ಲುತ್ತದೆ. ಹೀಗೆ ದೇಸೀಯತೆ ಎನ್ನುವುದು ನಮ್ಮ ಬದುಕಿನ ಮೂಲ ಗ್ರಹಿಕೆಗಳನ್ನು ಕಟ್ಟಿಕೊಡುವಂಥದ್ದಾಗಿದೆ. ಅಂದಂದಿನ ನಮ್ಮ ಸಾಮಾನ್ಯರ ಬದುಕಿನ ಚಹರೆಗಳನ್ನು ಕಟ್ಟಿಕೊಡುವಲ್ಲಿ ಕವಿರಾಜಮಾರ್ಗಕಾರನು ಬಳಸಿದ ನಾಣ್ಣುಡಿ, ಒಗಟು, ಗಾದೆ, ಪದಪ್ರಯೋಗ ಪದ ಕೋಶದ ಬಗೆಗಿರುವ ಅವನ ಎಚ್ಚರ ರುಚಿಶುದ್ಧಿ ದೇಸೀಯತೆಯ ವಿವಿಧ ಆಯಾಮಗಳನ್ನು ದಾಖಲಿಸುತ್ತಾನೆ.  

ಕನ್ನಡಿಗರ ಭಾಷೆ ‘’ಕನ್ನಡವೆಂದುಕರೆಸಿಕೊಂಡಾಗಲೇ ಕನ್ನಡದಲ್ಲಿ ದೇಸಿಯತೆ ತಲೆಯೆತ್ತಿತ್ತು. ಅದಿಲ್ಲದಿದ್ದರೆ ಅದು ಕನ್ನಡವಾಗುತ್ತಿರಲಿಲ್ಲ. ಸಂಸ್ಕೃತದಲ್ಲಿದ್ದ ರಾಮಾಯಣ ಮಹಾಭಾರತಗಳು ಕನ್ನಡದಲ್ಲೂ ತಲೆಯೆತ್ತಬೇಕೆಂದು ಕನ್ನಡ ಜನಪದ ಆಶಿಸಿದಾಗಲೇ ದೇಸಿಯತೆ ಕಾಣಿಸಿಕೊಂಡಿತು ಮೂಲಕಥೆಯ ಅಸ್ಥಿಪಂಜರಕ್ಕೆ ಕನ್ನಡದ್ದೇ ಆದ ರಕ್ತ ಮಾಂಸಗಳು ತುಂಬಿ ಕಳೆಯೇರಿಸಿದವು. ಕನ್ನಡದಲ್ಲಿ ಅಪೂರ್ವವಾದ ಭಾರತ ಕಥೆಯನ್ನು ಹೇಳಿದವರು ಮುನ್ನ ಯಾರೂ ಇಲ್ಲ. ಕಥೆಯ ಮೈಗೆಡದಂತೆ ಹೇಳಲು ಪಂಪನೊಬ್ಬನೇ ಸಮರ್ಥ ಎಂದು ಪಂಡಿತಲೋಕ ಉಗ್ಗಡಿಸಿದಾಗ ಪಂಪ ಅದಕ್ಕೆ ಸಿದ್ಧನಾಗಿ ಮಹಾಭಾರತದ ಗಣಿಯ ಚಿನ್ನವನ್ನು ಕಾಸಿ ತನ್ನ ಪ್ರತಿಭೆಯ ಅಚ್ಚಿನಲ್ಲಿ ಎರಕಹೊಯ್ದ. ಕನ್ನಡಿಗರಲ್ಲಿ ನೆಲೆಗೊಂಡಿದ್ದ ಮತ ಮೇರೆಗಳನ್ನು ನಿರಾಕರಿಸಿ ಮಾನವ ಮೌಲ್ಯವೊಂದನ್ನೇ ಗಮನಿಸುವ ಗುಣಕ್ಕೆ ವಿಕ್ರಮಾರ್ಜುನ ವಿಜಯವೇ ನಿದರ್ಶನ ಇದುವೇ ನಿಜವಾದ ದೇಸಿಯತೆ ಕನ್ನಡದ ನಮ್ಮತನ.

     ಹೊಸಗನ್ನಡ ಸಾಹಿತ್ಯವನ್ನು ಹೊರತುಪಡಿಸಿ ನೋಡಿದರೆ, ಪ್ರಾಚೀನ ಸಾಹಿತ್ಯದ ಮಟ್ಟಿಗೆಮಾರ್ಗ’, ‘ದೇಸೀಎಂಬುವು ಸಾಹಿತ್ಯದ ಭಾಷೆಯ ಎರಡು ಮುಖ್ಯ ರೂಪಲಕ್ಷಣಗಳನ್ನು ಸೂಚಿಸುತ್ತವೆ. ಎರಡೂ, ಕನ್ನಡ ಸಾಹಿತ್ಯದಲ್ಲಿ ಒಂದರ ಹಿಂದೊಂದು ಅಥವಾ ಒಂದರ ಜೊತೆಗೊಂದು ಎನ್ನುವಂತೆ ಬಂದಿವೆ. ಕನ್ನಡ ಸಾಹಿತ್ಯಾರಂಭದ ಮೊದಲೆರಡು ಶತಮಾನಗಳಲ್ಲಿ ಅದು ನೂರಕ್ಕೆ ಎಂಭತ್ತರಷ್ಟುಮಾರ್ಗವಾದದ್ದು ಅನಂತರದ ಕಾಲದಲ್ಲಿ ಅಂದರೆ ಹನ್ನೆರಡನೆಯ ಶತಮಾನದ ನಯಸೇನನಿಂದ ಹಿಡಿದು ಕುಮಾರವ್ಯಾಸನವರೆಗೆಮಾರ್ಗದೇಸೀಗಳೆರಡೂ ಜೊತೆಜೊತೆಯಾಗಿ ಕಾಣಿಸಿ ಕೊಂಡರೂ ದೇಸಿಯೇ ಮೇಲುಗೈ ಪಡೆದಿದೆ.ದೇಸೀಎಂದರೆ, ಯಾವ ಬರವಣಿಗೆ ಸರಳವೂ, ಜನರ ಆಡುಮಾತಿಗೆ ಸಮೀಪವೂ ಆಗಿದ್ದಾಗಿದೆಯೋ ಅದು ದೇಸೀ. ದೇಸೀಯದು ಸರಳವಾಗಿರಲು ಕಾರಣ ಸಂಸ್ಕೃತದ ಪ್ರಭಾವದಿಂದ ತಪ್ಪಿಸಿಕೊಂಡು ದೈನಂದಿನ ಸರಳ ಭಾಷೆಯಲ್ಲಿ ಜನಕ್ಕೆ ಪರಿಚಿತವಾದ ಜನಪದ ಛಂದಸ್ಸಿನಲ್ಲಿ ರಚಿತವಾದದ್ದು. ಕಾವ್ಯಪರಂಪರೆಯ ಹಿನ್ನೆಲೆಯಿಂದ ಕನ್ನಡಕಾವ್ಯ ರೂಪುತಾಳುತ್ತಿದ್ದ ಸಂದರ್ಭದಲ್ಲಿ ತನ್ನ ಸಾಮಾಜಿಕ ಪರಿಸರದಲ್ಲಿನಾಳ್ನುಡಿ - ನಾಡನುಡಿಅಥವಾ ಜನರಾಡುವ ಭಾಷೆಯೊಂದು ಇದೆ. ಅದರಲ್ಲಿ ಒಂದುಬೆಡಂಗುಅಥವಾ ಸೊಗಸು ಇದೆ. ಕವಿ ಬರೆಯುವ ಕಾವ್ಯಭಾಷೆಯಲ್ಲಿ ನಾಳ್ನುಡಿಯ ಬೆಡಂಗುಬಂದು ಸೇರಬೇಕು. ಎನ್ನುವ ಎಚ್ಚರ ಇದ್ದುದು ತುಂಬಾ ಮಹತ್ವದ ಸಂಗತಿಯಾಗಿದೆ. ಕವಿರಾಜಮಾರ್ಗಕಾರನು ಹೇಳಿದನಾಡು-ನುಡಿಯ ಬೆಡಂಗುಅವನಿಗೆ ತನ್ನ ಪರಿಸರದ ಪುಲಿಗೆರೆಯು ಕನ್ನಡದಲ್ಲಿ ಕಾಣಿಸಿತು. ಕವಿರಾಜಮಾರ್ಗಕಾರನ ಪೂರ್ವದಲ್ಲಿ ಉಪಯೋಗಿಸಲ್ಪಡುತ್ತಿದ್ದ ಕನ್ನಡ ದೇಸೀಪದಗಳ ವಿಶಿಷ್ಟ ರೀತಿ ಪಳಗನ್ನಡ. ಅಥವಾ ಹಳೆಯ ರೀತಿಯಾದರೆ ಅಲ್ಲಿಂದ ಮುಂದೆ ಬಂದ ಸಂಸ್ಕೃತ ಮಿಶ್ರಿತ ಪದಪದ್ಧತಿಯು ಬರಬರುತ್ತ ಅತಿರೇಕಕ್ಕೆ ಹೋಗಿ ನಯಸೇನನ ಕಾಲಕ್ಕೆ ಬರುವ ಹೊತ್ತಿಗೆ ಕನ್ನಡಕ್ಕಾಗಿ ಚಿಂತಿಸುವ ಗತಿ ಕವಿಗಳಿಗೆ ಬಂದಿತು.

ಕಾವ್ಯಲಕ್ಷಣಗಳಲ್ಲಿ ಹೇಳಿದ ದೇಸಿ ಮಾರ್ಗ ಪ್ರಭೇಧಗಳಲ್ಲಿ ದೇಸಿಯತೆಯ ಒಳಹುಗಳನ್ನು ಕಾಣಬಹುದಾಗಿದೆ. ಭಾಷಿಕವಾಗಿ ಪಂಪನ ಮಾತಿನ ಮೋಡಿಯಲ್ಲಿ ವಿಶಿಷ್ಟ ಪದಗಳಲ್ಲಿ ನುಡಿಗಟ್ಟುಗಳಲ್ಲಿ ದೇಸಿಯತೆಯ ಸುಳುಹುಗಳು ಇದ್ದುದರಿಂದಲೇ ಪಂಪನ ದೇಸಿಯತೆಯ ಮಾದರಿ ನಂತರದ ಕವಿಗಳಿಗೆ ನಿದರ್ಶನವಾಯಿತು.  ನಿದರ್ಶನಕ್ಕೆ ರನ್ನನು ತನ್ನ ಗದಾಯುದ್ಧ ಕಾವ್ಯದಲ್ಲಿ ಪ್ರಸ್ತಾಪಿಸಿರುವ ತುರುಗೋಳ್. ಪೆಣ್ಬುಯಲ್, ಊರಳಿವು ಪ್ರಸ್ತಾಪಗಳಲ್ಲಿಯ, ಗಂಡಸಾದವನು ತನ್ನ ಪ್ರಾಣದ ಹಂಗುತೊರೆದು ಹೋರಾಡಬೇಕೆಂಬುದು ಕನ್ನಡ ನಾಡಿನ ವೀರ ಯುಗದ ಆದರ್ಶ, ಆ ರೀತಿ ಹೋರಾಡಿ ಮಡಿದವರ ಸ್ಮಾರಕಕ್ಕೆ ನಿಲ್ಲಿಸಿದ ವೀರಗಲ್ಲುಗಳು ಕನ್ನಡ ನಾಡಿನಲ್ಲಿ ಅಸಂಖ್ಯಾತವಾಗಿ ದೊರೆತಿವೆ. ಇದು ಒಂದು ರೀತಿಯಲ್ಲಿ ದೇಸಿಯೆ ಅಗಿದೆ ಎನ್ನ ಬಹುದು.

ಕನ್ನಡದಲ್ಲಿ ಸುಲಲಿತವಾದ ಸಂಸ್ಕೃತ ಶಬ್ದಗಳನ್ನು ಬೆರೆಸಬಹುದು ಆದರೆ ದೇಶ್ಯ ಮತ್ತು ಸಂಸ್ಕೃತ ಬೆರೆತ ಅರಿಸಮಾಸವನ್ನೂ ಮಾಡಬಾರದು, ಎಂಬ ಹಿತೋಕ್ತಿ ಕನ್ನಡತನವನ್ನು ದೇಸಿಯನ್ನುಬಿಂಬಿಸುವ ನುಡಿಯಾಗಿದೆ. ಶಾಸ್ತ್ರಗ್ರಂಥಗಳನ್ನು ರಚಿಸಿದ ನಾಗವರ್ಮ ಕೇಶಿರಾಜ, ಭಟ್ಟಾಕಳಂಕರು ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಸ್ಕೃತದ ಚೌಕಟ್ಟನ್ನು ಬಳಸಿದರೂ ಕನ್ನಡದ ನಿಜಸ್ವರೂಪವೇನೆಂದು ವಿವರಿಸಲು ಹೊರಟಿದ್ದು ಕನ್ನಡಕ್ಕಿರುವ ವೈಶಿಷ್ಟ್ಯವಾಗಿದೆ.ಕನ್ನಡದ ದೇಸಿಯತೆ ಕಣ್ಮರೆಯಾಗಿ ಸಂಸ್ಕೃತವೇ ವಿಜೃಂಭಿಸಿದಾಗ ಮುತ್ತನ್ನು ಮೆಣಸನ್ನು ಕೋದಂತೆ ತುಪ್ಪವನ್ನು ಎಣ್ಣೆಯನ್ನು ಬೆರೆಸಿದಂತೆ ಎಂಬ ಅಭಿಪ್ರಾಯವು ದೇಸಿ ಕವಿಗಳಿಂದ ವ್ಯಕ್ತವಾಗಿರುವುದನ್ನು ಇಲ್ಲಿ ಪ್ರಸ್ತಾಪಿಸ ಬಹುದಾಗಿದೆ. ಕನ್ನಡದಲ್ಲಿ ದೇಸೀಯಾದ ಅನೇಕ ಭಾಷಾ ಪ್ರಬೇಧಗಳಿಗೆ ಪ್ರಾದೇಶಿಕ ವೈಲಕ್ಷಣವಿರುವುದನ್ನು ಲಕ್ಷಿಸಿದ್ದಾನೆ. ಪ್ರಬೇಧಗಳಲ್ಲಿನ ಇತರ ಪ್ರದೇಶಗಳಲ್ಲಿನ ಭಾಷಾ ಬಳಕೆ ದೋಷವಾಗಿ ಕಂಡಿರಬೇಕು. ಸಾವಿರ ನಾಲಗೆಯುಳ್ಳ ವಾಸುಕಿಯೂ ಸಹ ದೇಸೀ ಪ್ರಬೇಧಗಳನ್ನು ಕಂಡು ಬೇಸರಿಸಿಕೊಂಡಿದುದಾಗಿ ಹೇಳುತ್ತ ದೇಸೀಯತೆಯ ಪ್ರಬೇಧಗಳನ್ನು ಗುರುತಿಸುತ್ತಾನೆ. ಕವಿರಾಜಮಾರ್ಗಕಾರ ದೇಸೀಯನ್ನು ದೋಷವೆಂದು ಭಾವಿಸದೆಕನ್ನಡಂಗಳುಎಂದು ಗುರುತಿಸಿ ಕನ್ನಡದ ಅನೇಕ ಉಪಭಾಷೆಗಳು ಇರುವುದನ್ನು ಗಮನಿಸಿ ಕನ್ನಡದ ವಿವಿಧ ದೇಸೀಗಳನ್ನು ಸ್ವೀಕರಿಸಿಯೇ ಒಂದು ರೂಢಿಗತವಾಗಬಹುದಾದ ದೇಸಿಯನ್ನು ಅಪೇಕ್ಷಿಸುತ್ತಾನೆ. ಮಾರ್ಗಸಾಹಿತ್ಯದ ಬದಲಾಗಿ ಪ್ರತಿರೋಧದ ನೆಲೆಯಲ್ಲಿ ದೇಸೀಭಾಷೆಯನ್ನು ಸ್ಥಾಪಿಸುತ್ತಾನೆ. ಒಟ್ಟಿನಲ್ಲಿ ಪ್ರಾದೇಶಿಕವಾದ ಭಿನ್ನತೆಯೇ ದೇಸೀಯಾಗಿರುವುದು ಇಲ್ಲಿ ಗಮನಾರ್ಹ.

ನಡುಗನ್ನಡ ಸಾಹಿತ್ಯದ ಕಾಲ ಕನ್ನಡ ಸಾಹಿತ್ಯವು ಮಾರ್ಗದಿಂದ ದೇಸಿಗೆ ಸಂಕ್ರಮಣ ಹೊಂದಿದ ಯುಗವಾಗಿದೆ. ಮಾರ್ಗ ಕಾವ್ಯದ ಪ್ರಭಾವ ಯುಗದ ಮೇಲೆ ಆಗಿದ್ದರೂ ದೇಸಿಗೆ ವಿಶಿಷ್ಟವಾದ ಸ್ವಾತಂತ್ರ್ಯ ವಿಷಯ, ಧೋರಣೆ, ಛಂದಸ್ಸು ಭಾಷೆಗಳಲ್ಲಿ ತಲೆದೋರಿದೆ. ಕನ್ನಡದ ಮಹತ್ತರವಾದ ಕಾವ್ಯಗಳು ಈ ಯುಗದಲ್ಲಿ ರಚನೆಯಾಗಿ ಕನ್ನಡ ಅಂತಸತ್ವವನ್ನು ಪರಿಚಯಿಸಿವೆ. ಯುಗದ ವೈಶಿಷ್ಟ್ಯ. ವಚನ ಎಂಬುದು ಭಾವಗೀತೆಯ ಲಕ್ಷಣದಿಂದ ಕೂಡಿದ ಅನುಭಾವ ಗದ್ಯ. ಶಿವಶರಣರ ಅಂತರಂಗ ಆಳವಾದ ಅನುಭವ ಅಭಿವ್ಯಕ್ತಿಗೊಂಡಿದೆ. ಆತ್ಮನಿರೀಕ್ಷಣೆ, ಸಮಾಜದ ವಿಮರ್ಶೆ ಅಭಿವ್ಯಕ್ತಿಗೊಂಡಿದೆ. ರಗಳೆ, ಷಟ್ಟದಿ, ತ್ರಿಪದಿ, ಸಾಂಗತ್ಯ   ಅಚ್ಚಗನ್ನಡ ರೂಪಗಳಲ್ಲಿ ಗ್ರಂಥರಚನೆ ನಡೆಯಿತು. ಸಾಹಿತ್ಯ ಪ್ರಕಾರಗಳನ್ನು ವಿರಳವಾಗಿ ಚಂಪೂ ಕಾವ್ಯಗಳಲ್ಲಿ ಬಳಸುತ್ತಿದ್ದರು. ಇವುಗಳನ್ನೇ ಸಾಹಿತ್ಯ ಪ್ರಕಾರವನ್ನಾಗಿಸಿ ಒಂದೊಂದು ಸಾಹಿತ್ಯ ಪ್ರಕಾರದಲ್ಲಿಯೂ ಕಾವ್ಯ ರಚನೆ ಮಾಡತೊಡಗಿದ್ದು ಯುಗದ ಮಹತ್ತರ ಸಾಧನೆ. ವಚನಕಾರರು  ವಚನಗಳಿಗೆ, ಹರಿಹರ ರಾಘವಾಂಕರು ರಗಳೆ,ಷಟ್ಟದಿಗೆ ಮೊದಲಿಗರಾದರು. ಮಧ್ಯಕಾಲೀನ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಭಾಷೆ ರೂಪ, ಅಭಿವ್ಯಕ್ತಿ ಸೌಲಭ್ಯ ದರ್ಶನ ದೃಷ್ಟಿ ಇವುಗಳಿಂದ ಅಪಾರ ಮನ್ನಣೆ ಪಡೆದಿದ್ದು ವಚನ ಸಾಹಿತ್ಯ ಪ್ರಕಾರ. ಕಾಲದ ಸಾಹಿತ್ಯ ಜನಾಶ್ರಯದ ನೆರವಿನಿಂದ ರಚಿತವಾಯಿತು.

ಹೊಸಬಗೆಯ ಸಾಹಿತ್ಯಕ್ಕೆ ನಾಂದಿ ಹಾಡಿದವರೇ ವಚನಕಾರರು. ಅದುವರೆಗೂ ಮಾರ್ಗ ಮತ್ತು ದೇಸೀಗಳ ಸಮನ್ವಯ ರೂಪದಲ್ಲಿ ಪ್ರವಹಿಸುತ್ತಿದ್ದ, ರಾಜಾಶ್ರಯ ಪ್ರೇರಿತ ಕನ್ನಡ ಸಾಹಿತ್ಯಕ್ಕೆ ತೀವ್ರ ತಿರುವು ಕೊಟ್ಟು ಕನ್ನಡಪರವಾಗಿಸಿ ಜನಮುಖಿಗೊಳಿಸಿದರು. ಸಾಹಿತ್ಯಮೀಮಾಂಸೆಯ ಪರಿವೆ ಇಲ್ಲದೆ ಜನಪರ ಸಾಹಿತ್ಯ ಕೃಷಿ ಮಾಡಿದರು. ಹಿಂದಿನ ಅನುಭಾವ ಸಾಹಿತ್ಯದಲ್ಲಿನ, ಹಿಂದಿನ ದೀರ್ಘ ಕತೆಗಳಾಗಲೀ, ಅಷ್ಟಾದಶ ವರ್ಣನೆಗಳಾಗಲಿ ಇಲ್ಲವಾಗಿ, ಒಂದು ಅನುಭವ ತಕ್ಷಣದ ಅನಿಸಿಕೆಯನ್ನು ಸೆರೆಹಿಡಿಯುವ ಸಂಕ್ಷಿಪ್ತವೂ ಸ್ವಯಂಪೂರ್ಣವೂ ಆದ ಮುಕ್ತಕಗಳಾಗಿ ಮೈಪಡೆದವು. ಇವೆಲ್ಲವೂ ಸಾಂದರ್ಭಿಕವಾಗಿ ರಚಿತವಾದಂತವುಗಳಾಗಿವೆ. ತೀವ್ರ ಸಾಮಾಜಿಕ ಪ್ರಜ್ಞೆಯನ್ನೊಳಗೊಂಡ ಇವು ಅದುವರೆಗಿನ ಸ್ಥಗಿತ ಸಾಮಾಜಿಕ ಕಟ್ಟಳೆಗಳಿಂದ ಹೊರಬಂದವುಗಳು. ಮತ, ಸಂಪ್ರದಾಯ, ಕವಿಸಮಯ, ರಾಜ್ಯತ್ವದ ನಿಲುವು, ಮತ್ತು ಸಂಸ್ಕೃತ ಭೂಯಿಷ್ಟತೆ ಮುಂತಾದ ಸಂಕೋಲೆಗಳಿಂದ ಬಿಡುಗಡೆ ಪಡೆದ ವಚನಗಳು ಹಲವು ಉಪಸಂಸ್ಕೃತಿಗಳನ್ನು ಕರಗಿಸಿಕೊಂಡು ಭವಿ ಮತ್ತು ಭಕ್ತ ಎಂಬ ವಿಂಗಡಣೆಯ ಶಿವ ಸಂಸ್ಕೃತಿಯಾಗಿ ರೂಪುಗೊಂಡವು. ಹೀಗೆ ಚಲನಶೀಲತೆಯನ್ನು ಪಡೆದು ಶಿವ ಸಂಸ್ಕೃತಿಯಲ್ಲಿ ರೂಪುಗೊಂಡ ವಚನ ಸಂಕುಲವು ಸಾಮಾಜಿಕ ಆಂದೋಲನಕ್ಕೆ ಪ್ರಚೋದನೆ ನೀಡಿತು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡವನ್ನು ಅದರ ಎಲ್ಲಾ ಆಯಾಮಗಳಲ್ಲೂ ಬಳಸಿ, ಅದಕ್ಕೆ ಸಾಹಿತ್ಯದಲ್ಲಿ ಉನ್ನತ ಪೀಠವನ್ನು ಕಲ್ಪಿಸಿಕೊಟ್ಟದ್ದು ಪ್ರಮುಖ ಸಂಗತಿ. ಅಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯಕ್ಕೆ ವಚನಕಾರರು ನೀಡಿದ ಅಪೂರ್ವವೆನಿಸಿದ ವಿಶಿಷ್ಟ ಕೊಡುಗೆ ಎಂದೇ ಗುರುತಿಸಲ್ಪಟ್ಟಿತು. ಎಲ್ಲವುಗಳಿಗೆ ಮುಖ್ಯ ಕಾರಣ ವಚನಕಾರರ ವಚನಗಳಲ್ಲಿ ಸುಪ್ತವಾಗಿ ಅಡಗಿರುವ, ತನ್ನತನದ ಅಥವಾ ದೇಸೀಯತೆಯ ತುಡಿತ. ಇಂತಹ ಸಾಂಸ್ಕೃತಿಕ ದೈನಂದಿನ ಬದುಕಿನ ತುಡಿತದ ತಳಮಳಗಳನ್ನು, ಆಯ್ದ ವಚನಕಾರ್ತಿಯರ ವಚನಗಳನ್ನು ಲಕ್ಷಿಸಿ ದೇಸೀಯತೆಯ ಸ್ವರೂಪವನ್ನು ಸ್ವಷ್ಟಪಡಿಸಿಕೊಳ್ಳಲಾಗಿದೆ. ವಚನ ಸಂಸ್ಕೃತಿಗೂ, ದೇಸೀ ಸಂಸ್ಕೃತಿಗೂ ತುಂಬಾ ಸಾಮ್ಯತೆಯಿರುವಂತೆ ಅಷ್ಟೇ ಭಿನ್ನತೆಯೂ ಕಂಡುಬರುತ್ತದೆ. ವಚನಕಾರ್ತಿಯರೂ ಕೂಡಾ ಮೂಲತಃ ಜನಪದ ಮಹಿಳೆಯರೆ. ಅನುಭವ ಮಂಟಪದ ಚರ್ಚೆಯ ಮೂಲಕ ಅವರು ವೈಚಾರಿಕವಾಗಿ ಬೆಳೆದು ನಿಂತವರು. ಅಂತಹ ವಚನಕಾರ್ತಿಯರು ತಮ್ಮ ವಚನಗಳುದ್ದಕ್ಕೂ ಬಳಸಿದ ಗಾದೆ, ನೇರನುಡಿ, ನಿಷ್ಟುರತೆ, ಮತ್ತು ವ್ರತಾಚರಣೆ ಕುರಿತಾದ ಅಭಿವ್ಯಕ್ತಿಸುವಲ್ಲಿ ದೇಸೀ ಸಂಸ್ಕೃತಿಯ ಬಿಂಬ ಎದ್ದು ತೋರುತ್ತದೆ.ಅನುಭವ ಸಾಧನೆಯಲ್ಲಿ, ವೈಚಾರಿಕತೆಯಲ್ಲಿ ದೇಸೀಯತೆ ಎಂಬುದು ಅವರಲ್ಲಿ ತಾಯಿಬೇರಿನ ಮೂಲ ಸೆಲೆಯಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ನಾಡಿನ ಜನಪದ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುವ ಪುಣ್ಯಕೋಟಿಯ ಕತೆ ಕೇವಲ ಸಾಹಿತ್ಯ ಮಾತ್ರವಾಗಿರದೆ ನಮ್ಮ ಸಂಸ್ಕೃತಿಯ ಮೂಲ ನೆಲೆಯಾಗಿದೆ. ಪುಣ್ಯಕೋಟಿ ಎಂಬುದು ಒಂದು ಗೋವು ಮಾತ್ರವಲ್ಲ, ಅದು ಸತ್ಯ-ನಿಷ್ಟುರತೆಯ, ಪ್ರಾಮಾಣಿಕತೆಯ, ಅಂತಃಕರಣದ ಸಂಕೇತವಾಗಿದೆ. ಅಹಿಂಸೆಯ ಪ್ರತೀಕವಾದ ಪುಣ್ಯಕೋಟಿ, ಹಿಂಸಾಮೂಲದ ಹುಲಿಯ ಮನಸ್ಸನ್ನೇ ಬದಲಿಸಿಬಿಟ್ಟಿದ್ದು ಒಂದು ಕತೆಯಾದರೂ ದೇಸೀ ಸಂಸ್ಕೃತಿಯಲ್ಲಿ ಬೆಳೆದು ನಿಂತಿರುವ ಇಂತಹ ಅನೇಕ ಜೀವನ ಮೌಲ್ಯಗಳು ವಚನಕಾರ್ತಿಯರ ಬದುಕು ಮತ್ತು ಬರಹದಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ದೇಸೀ ಎಂಬುದು ವಚನಕಾರ್ತಿಯರಲ್ಲಿ ತಳಸಂಸ್ಕೃತಿಯಾಗಿ ಬೇರುಬಿಟ್ಟಿದೆ ಎಂದೇಳಬಹುದಾಗಿದೆ.

    ಕನ್ನಡದ ದೇಸಿಯತೆಯ ಸತ್ಯವನ್ನು ಮೇಲೆತ್ತಬೇಕೆಂಬ ಆಕಾಂಕ್ಷೆಯಿಂದಲೇ ಅಚ್ಚಗನ್ನಡದಲ್ಲೇ ಕಾವ್ಯ ರಚನೆ ಮಾಡಬೇಕೆಂದು ಹೊರಟ ಆಂಡಯ್ಯನ ಪ್ರಯತ್ನ ಕನ್ನಡದ ದೇಶೀಯತೆಯ ಸ್ವಾಭಿಮಾನದ ಹೆಗ್ಗುರುತು. ಭಾಷಾ ಮಾಧ್ಯಮದಲ್ಲಿ ಮಾತ್ರವಲ್ಲದೇ ಕಾವ್ಯ ವಸ್ತುವಿನಲ್ಲಿಯೂ ದೇಶೀಯತೆಯ ದೃಷ್ಠಿ ತಲೆಯೆತ್ತಿತ್ತು. ಹೊಸ ಕಾವ್ಯ ಸಂಪ್ರದಾಯವನ್ನು  ನಿರ್ಮಿಸಿ, ಅನೇಕ ಕೃತಿಗಳನ್ನು ರಚಿಸಿ, ಭಕ್ತಿಕವಿ ಎಂಬ ಖ್ಯಾತಿಗೆ ಪಾತ್ರನಾದ ಹರಿಹರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾನೆ.

     ವಚನಸಾಹಿತ್ಯದ ಆಶಯ ಹಾಗೂ ಶರಣರ ಜೀವನ ಇವುಗಳಿಂದ ಸ್ಫೂರ್ತಿಹೊಂದಿ ಸಾಹಿತ್ಯ ನಿರ್ಮಾಣ ಮಾಡಿದ  ಕವಿಗಳಲ್ಲಿ ಹರಿಹರನು ಪ್ರಮುಖನಾಗಿ ಕಂಡು ಬರುತ್ತಾನೆ.  ಹರಿಹರನ ಕಾವ್ಯದ ವಸ್ತು ಮಾತ್ರವಲ್ಲದೇ ಧೋರಣೆಯಲ್ಲಿಯೂ  ವಚನಕಾರರ ಪ್ರಭಾವವನ್ನು ಕಾಣಬಹುದು. ಸ್ವಂತಿಕೆಯ ಪ್ರಜ್ಞೆಯಿದ್ದ ಆ ಕವಿ ತನ್ನ ಕಾವ್ಯ ಪ್ರಕಾರಕ್ಕೆ ರಗಳೆಯನ್ನು ಆರಿಸಿಕೊಂಡು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನಕಾರರು ಹೊಸ ಮಾರ್ಗವೊಂದನ್ನು ತೆರೆದು ತೋರಿಸಿದಂತೆ ತಾನೂ ಹೊಸ ಮಾರ್ಗವೊಂದರ ಪ್ರವರ್ತಕನಾದ. ವಚನಕಾರರನ್ನೂ ಅವರ ಚಿಂತನೆಗಳನ್ನೂ ಕಥನ ರೂಪವಾಗಿ ವ್ಯಾಖ್ಯಾನಿಸಿ ಜನಕ್ಕೆ ಕೊಡುವ ಅಗತ್ಯವಿದ್ದಿತು. ಹರಿಹರನನ್ನು ವಚನಕಾರರ ಕಥನರೂಪದ ವ್ಯಾಖ್ಯಾನಕಾರನೆಂಬ ಎಂ.ಚಿದಾನಂದಮೂರ್ತಿಯವರ ಅನಿಸಿಕೆ ಒಂದು ದೃಷ್ಟಿಯಲ್ಲಿ ಸ್ವೀಕಾರಾರ್ಹವಾಗಿದೆ. ಇದು ಅವನ ಸ್ವಂತಿಕೆಯನ್ನು ಇಲ್ಲವಾಗಿಸುವುದಿಲ್ಲವಾದರೂ ಅವನು ಮಾಡಿದ ಕೆಲಸದ ಸ್ವರೂಪವನ್ನು ಸಂಕೇತಿಸುತ್ತದೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಚರಿತ್ರೆಯೇ ಪ್ರಮುಖವಾಗಿದ್ದು, ಇವರು ಸಾಮಾನ್ಯ ನೆಲೆಯಿಂದ ಅಸಾಮಾನ್ಯ ನೆಲೆಗೆ ಏರಿದವರಾಗಿದ್ದಾರೆ. ಹರಿಹರನು ಶಿವಶರಣರ ಕಥೆಯನ್ನು ವಿವರಿಸುವ ರಗಳೆಗಳಲ್ಲಿ ಶಿವನ ಕೈಲಾಸದ ಒಡ್ಡೋಲಗದ ಚಿತ್ರಣವು ಕಥೆಗೊಂಡು ಪೌರಾಣಿಕ ಚೌಕಟ್ಟನ್ನು ಒದಗಿಸುತ್ತದೆ. ರಗಳೆಯ ಕಥಾನಾಯಕರು ಭೂಲೋಕಕ್ಕೆ ಬಂದು ಮಾಡುವ ಕೆಲಸಗಳೆಲ್ಲವೂ ವಚನಕಾರರು ಕಟ್ಟಿಗೊಂಡಿದ್ದ ಸಾಮಾಜಿಕ ಆದರ್ಶಗಳ ಸಾಂಕೇತಿಕ ಅಭಿವ್ಯಕ್ತಿಗಳೇ ಆಗಿವೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಕಾರ್ಯಚಟುವಟಿಕೆಗಳು ಕೇವಲ ಕಟ್ಟುಕತೆಯ ಪವಾಡಗಳಲ್ಲ. ಅವುಗಳಿಗೆ ಸಾಮಾಜಿಕ ಆಯಾಮವಿದೆ. ಹರಿಹರನು ಶಿವಭಕ್ತರನ್ನು ಚಿತ್ರಿಸಿದಂತೆ ಅವರಲ್ಲಿಯ ವಚನಕಾರರನ್ನು  ಚಿತ್ರಿಸಿದ್ದಾನೆ. ಅವನ ರಗಳೆಗಳಲ್ಲಿಯ ಪದ್ಯ ಹಾಗೂ ಗದ್ಯಗಳಲ್ಲಿ ಅನೇಕ ವಚನಗಳು ಹುದುಗಿರುವುದನ್ನು  ಗುರುತಿಸ ಬಹುದಾಗಿದೆ.

    ವಚನಸಾಹಿತ್ಯದಿಂದ ಪ್ರಭಾವಿತನಾಗಿ ಭಾಷೆ ಮತ್ತು ಧೋರಣೆಗಳ ದೃಷ್ಟಿಯಿಂದ ಪೂರ್ವದ ಪರಂಪರೆಯ ಕವಿಗಳಿಗಿಂತ ಭಿನ್ನವಾದ ನಿಲುವನ್ನು ಹೊಂದಿದವನು. ವಚನಕಾರರ ಚರಿತ್ರೆಯನ್ನು ಹರಿಹರ  ಕಥನಕಾವ್ಯವನ್ನಾಗಿಸಿದ. ಇತಿಹಾಸ ಪುರಾಣಗಳನ್ನು ಕುರಿತು ಕಾವ್ಯ ಬರೆಯಬೇಕೆನ್ನುವ ಪರಂಪರೆಯಲ್ಲಿ ಪ್ರಥಮ ಬಾರಿಗೆ ಹರಿಹರನು ಬರೆಯಲು ಆರಿಸಿಕೊಂಡ ಶಿವಶರಣರು ಸಾಮಾನ್ಯವಾಗಿ ಜನ ಸಾಮಾನ್ಯ ಸ್ತರದಿಂದ ಬಂದವರಾಗಿದ್ದಾರೆ. ಶರಣರ ಬದುಕನ್ನು ಕಾವ್ಯವನ್ನಾಗಿಸುವುದರ ಮೂಲಕ ಹರಿಹರ   ಮೊದಲಿಗನಾಗಿ ಕಂಡು ಬರುತ್ತಾನೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಚರಿತ್ರೆಯೇ ಪ್ರಮುಖವಾಗಿದ್ದು, ಇವರು ಸಾಮಾನ್ಯ ನೆಲೆಯಿಂದ ಅಸಾಮಾನ್ಯ ನೆಲೆಗೆ ಏರಿದವರಾಗಿದ್ದಾರೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಕಾರ್ಯಚಟುವಟಿಕೆಗಳು ಕೇವಲ ಕಟ್ಟುಕತೆಯ ಪವಾಡಗಳಲ್ಲ. ಅವುಗಳಿಗೆ ಸಾಮಾಜಿಕ ಆಯಾಮವಿದೆ. ವಚನಕಾರರ ಸಾಂಸ್ಕೃತಿಕ ಕಾಳಜಿಯನ್ನು ಹರಿಹರನು ರಗಳೆಗಳ ಕಥನಕ್ರಮದಲ್ಲಿ ಪುನರ್ ಸೃಷ್ಟಿಸಿದ್ದಾನೆ. ಹರಿಹರನು ಶಿವಭಕ್ತರನ್ನು ಚಿತ್ರಿಸಿದಂತೆ ಅವರಲ್ಲಿಯ ವಚನಕಾರರನ್ನು  ಚಿತ್ರಿಸಿದ್ದಾನೆ. ಅವನ ರಗಳೆಗಳಲ್ಲಿಯ ಪದ್ಯ ಹಾಗೂ ಗದ್ಯಗಳಲ್ಲಿ ಅನೇಕ ವಚನಗಳು ಹುದುಗಿರುವುದನ್ನು  ಗುರುತಿಸ ಬಹುದಾಗಿದೆ. ವಚನಕಾರರರ ವಚನಗಳಿಂದ ಪ್ರೇರಿತನಾಗಿಯೇ ಅವರ ಜೀವನ ಚರಿತ್ರೆಯನ್ನು ರಗಳೆಗಳ ಮೂಲಕ ಕಟ್ಟಿಕೊಟ್ಟಿದ್ದಾನೆ. ವಚನಕಾರರ ಸಾಂಸ್ಕೃತಿಕ ಕಾಳಜಿಗಳು ಹರಿಹರನ ರಗಳೆಗಳಲ್ಲಿ ಮತ್ತೊಮ್ಮೆ ಅಭಿವ್ಯಕ್ತಗೊಂಡಿವೆ.

    ಮನುಷ್ಯರ ಮೇಲೆ, ಸಾವವರ ಮೇಲೆ ಕಾವ್ಯ ಕಟ್ಟಿ ಅವರನ್ನು ಇಂದ್ರ ಚಂದ್ರರೆಂದು ಹೊಗಳುವುದನ್ನು ಹರಿಹರ ಧಿಕ್ಕರಿಸಿದ. ತಮಿಳುನಾಡಿನ ಶಿವಭಕ್ತರನ್ನು ಶಿವಶರಣರನ್ನು ಕುರಿತು ಕಾವ್ಯ ರಚಿಸಿದ. ಹರಿಹರನ ಜೀವನದೃಷ್ಟಿ ಪ್ರಧಾನವಾಗಿ ವಚನಕಾರರದ್ದಾಗಿದೆ. ಅವನು ಬದುಕನ್ನು ಕಂಡ ರೀತಿ, ಅನುಭವಿಸಿದ ರೀತಿ ಇವು ಎಲ್ಲಾ ಕಡೆಯಲ್ಲೂ ಕಾಣುವ ಅವನ ತಾತ್ವಿಕ ಚೌಕಟ್ಟು ವಚನಕಾರರಿಂದ ರೂಪಿತವಾದದ್ದೆಂಬುದನ್ನು ದೃಢಪಡಿಸುತ್ತವೆ. ಹರಿಹರನ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ತ್ವದ ಸ್ಥಾನಗಳಿಸಿರುವುದು ಈತ ರಚಿಸಿರುವ ರಗಳೆ ಕಾವ್ಯಗಳ ಮೂಲಕ.  ಶಿವನನ್ನು, ಶಿವಶರಣರನ್ನು ಸ್ತುತಿಸಲು ಮಾತ್ರ ಕಾವ್ಯಶಕ್ತಿಯನ್ನು ಬಳಸಬೇಕಲ್ಲದೆ ಮಾನವರನ್ನು ಹೊಗಳಲು ಅಲ್ಲವೆಂಬ ಸಂಪ್ರದಾಯ ವನ್ನು ಕನ್ನಡ ಸಾಹಿತ್ಯದಲ್ಲಿ ರೂಢಿಗೆ ತಂದ. ಹಳಗನ್ನಡ ಭಾಷೆಯಲ್ಲಿ ಪ್ರಾಸದ ಬಗೆಗಿದ್ದ ಮೂರು ಬಗೆಯ ‘ಳ’ಕಾರಗಳಿಗೆ ಪ್ರತಿಯಾಗಿ ಒಂದನ್ನೇ ರೂಢಿಸುವ ದಿಟ್ಟತನವನ್ನೂ ಈತ ತೋರಿದ. ಅದುವರೆಗೆ ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪೂ ಕಾವ್ಯಪರಂಪರೆಯನ್ನು ಹಿಂದೆ ಸರಿಸಿ ರಗಳೆಗಳಲ್ಲಿ ಕಾವ್ಯ ರಚಿಸುವ ಹೊಸ ಸಂಪ್ರದಾಯಕ್ಕೆ ಅಸ್ತಿಭಾರ ಹಾಕಿದ. ತಮಿಳು ದೇಶದ ಅರವತ್ತು ಮೂವರು ಪುರಾತನರ,ಕೊಂಡಗುಳಿ ಕೇಶಿರಾಜ, ಬಸವಣ್ಣ, ದೇವರದಾಸಿಮಯ್ಯ, ಪ್ರಭುದೇವ ಮುಂತಾದ ಶಿವಶರಣರ, ಅಲ್ಲದೆ ಸ್ತೋತ್ರ, ಆತ್ಮನಿವೇದನ ರೂಪವಾದ ನೂರಾರು ರಗಳೆಗಳನ್ನು ರಚಿಸುವುದರ ಮೂಲಕ ದೇಸಿಗೆ ದೃಢತೆಯನ್ನು ತಂದು ಕೊಟ್ಟನು.  ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ. `ಜನಬದುಕಬೇಕೆಂದು ಕಾವ್ಯಮುಖದಿಂ ಪೇಳ್ದನನಪೇಕ್ಷೆಯಿಂದ' ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ `ವರಸುತ'ನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು. ತನ್ನದೇ ಅದೊಂದು ಪರಂಪರೆಯನ್ನು ನಿರ್ಮಿಸಿಕೊಂಡವ. ತನಗೆ ಹಿನ್ನಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ, ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ತ್ವದ ಸಾಧನೆ. ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ, ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತ್ತೊಬ್ಬ ಕವಿ ರಾಘವಾಂಕ. ಹರಿಹರ ರಗಳೆಯ ಛಂದಸ್ಸಿನಲ್ಲಿ ಇಡೀ ಕಾವ್ಯವನ್ನೇ ಬರೆಯಲು ಮೊದಲಿಗನಾದರೆ ಅವನ ಸೋದರಳಿಯನೂ ಶಿಷ್ಯನೂ ಆದ ರಾಘವಾಂಕ ಷಟ್ಪದಿಯಲ್ಲಿ ಕಾವ್ಯ ರಚನೆ ಮಾಡಿರುವವರಲ್ಲಿ ಮೊದಲನೆಯವನಾಗಿದ್ದಾನೆ. ಹರಿಶ್ಚಂದ್ರ ಪರಮ ಶಿವಭಕ್ತನೆಂದೂ ಸತ್ಯವೆಂಬುದೆ ಹರನು, ಹರನೆಂಬುದೇ ಸತ್ಯ ಎಂಬ ತತ್ತ್ವವನ್ನು ಲೋಕಕ್ಕೆ ಬೆಳಗಿದವನು. ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮ ಪ್ರಭುವಿನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಹರಿಹರ ತನ್ನ ಪ್ರಭುದೇವರ ರಗಳೆಯಲ್ಲಿ ಅಲ್ಲಮ ಕಾಮಲತೆಗೆ ಮರುಳಾಗಿ ವಿರಹದಿಂದ ಬೆಂದು ವೈರಾಗ್ಯ ಪಡೆದಂತೆ ಚಿತ್ರಿಸಿದ್ದರೆ, ಈತನು ತನ್ನ ಕಾವ್ಯ `ಸತ್ತವರ ಕಥೆಯಲ್ಲ ಜನನದ ಕುತ್ತದಲ್ಲಿ ಕುದಿ ಕುದಿದು ಕರ್ಮದ ಕತ್ತಲೆಗೆ ಸಿಲುಕುವರ ಸೀಮೆಯ ಮಾತು ತಾನಲ್ಲ’ ಎಂದು ಘೋಷಿಸಿ `ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು’ ಎಂದಿದ್ದಾನೆ. ಭಾವ ಭಾಷೆಗಳಲ್ಲಿನ ಅಪೂರ್ವವಾದ ಹೊಂದಾಣಿಕೆಯಿಂದಲೂ ಉಜ್ಜ್ವಲವಾದ ಉಪಮೆ ರೂಪಕ ದೃಷ್ಟಾಂತಗಳಿಂದಲೂ ಸಮಯೋಚಿತವಾದ ವರ್ಣನೆ ಮತ್ತು ದೇಶೀಯ ಬೆಡಗಿನ ಪರಿಣಾಮದ ಉತ್ಕಟತೆಯಿಂದಲೂ ಇವನ ಶೈಲಿ ಇವನ ಸ್ವತಂತ್ರ ಕವಿತಾಮಾರ್ಗದ ಮುಖಬಿಂಬದಂತಿದೆ.

    ಹರಿಹರ ರಾಘವಾಂಕರಂತಹ ಕವಿಗಳು ಹಾಕಿಕೊಟ್ಟ ಪರಂಪರೆಯನ್ನು ಸ್ವತಂತ್ರ ಮನೋಧರ್ಮವನ್ನು ಅನುಸರಿಸಿ ಹೊಸ ಕಾವ್ಯ ಪ್ರಕಾರಗಳಲ್ಲಿ ನಡುಗನ್ನಡ ಕವಿಗಳು ಕಾವ್ಯ ರಚನೆ ಮಾಡಿದ್ದು ಮಹತ್ತರ ಸಾಧನೆ. ವಚನ ರಗಳೆ ಷಟ್ಪದಿ ತ್ರಿಪದಿ ಸಾಂಗತ್ಯ ಇತ್ಯಾದಿ ಪ್ರಕಾರಗಳು ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರದ ರೂಪುಗೊಂಡಿದ್ದು ನಡುಗನ್ನಡ ಕವಿಗಳ ಮೂಲಕ 10 ರಿಂದ 12ನೇ ಶತಮಾನದ ವರೆಗೆ ಚಂಪೂ ಕಾವ್ಯಪ್ರಕಾರ ಇದ್ದರೆ 12 ರಿಂದ 14ನೇ ಶತಮಾನದಲ್ಲಿ ಸುಮಾರು 200 ವರ್ಷಗಳ ಅವಧಿಯಲ್ಲಿ ವಚನ ರಗಳೆ ಸಾಂಗತ್ಯ ಷಟ್ಪದಿ, ಸಾಹಿತ್ಯ ಪ್ರಕಾರಗಳು ರೂಪುಗೊಂಡಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕ್ರಾಂತಿಕಾರಕ ಘಟನೆಯಾಗಿದೆ. ಹದಿನೈದನೆಯ ಶತಮಾನ ಮತ್ತು ನಂತರದ ಕಾಲದಲ್ಲಿ ಷಟ್ಪದಿ, ಸಾಂಗತ್ಯದಂತಹ ಸಾಹಿತ್ಯ ರೂಪಗಳಲ್ಲಿ ಕಾವ್ಯ ನಿರ್ಮಿತಿ ಅಧಿಕ ಗೊಂಡಿತು. ವೈವಿಧ್ಯಮಯ ಕಥಾ ಪಾತ್ರಗಳು ಮತ್ತು ಸಹಜ ದೇಸಿಶೈಲಿಯಲ್ಲಿ ಕುಮಾರವ್ಯಾಸ, ಚಾಮರಸ, ನಂಜುಂಡ, ಲಕ್ಷ್ಮೀಶ, ರತ್ನಾಕರವರ್ಣಿಯಂತಹ ಕವಿಗಳು ಕಾವ್ಯಗಳನ್ನು ರಚಿಸುವುದರ ಮೂಲಕ ಕಾವ್ಯದ ಎತ್ತರವನ್ನು ಹೆಚ್ಚಿಸಿದರು. ಕನ್ನಡ ಸಾಹಿತ್ಯ ಪರಂಪರೆಯ ನಿರ್ಮಾತೃಗಳು ಎಂಬ ಹೆಗ್ಗಳಿಕೆಗೂ ಪಾತ್ರರಾದರು.    

   ಕನ್ನಡದ ದೇಸೀಯತೆ ಕಣ್ಮರೆಯಾಗಿ ಸಂಸ್ಕೃತವೇ ವಿಜೃಂಭಿಸಿದಾಗಮುತ್ತನ್ನು ಮೆಣಸನ್ನು ಕೋದಂತೆ ತುಪ್ಪವನ್ನು ಎಣ್ಣೆಯನ್ನು ಬೆರೆಸಿದಂತೆಎಂಬ ಕಟುವಿಮರ್ಶೆ ಕವಿ ನಯಸೇನನಿಂದ ಬಂದುದು ದೇಸೀತನದಿಂದಲೇ. ಸಂಸ್ಕೃತವನ್ನು ಬೆರೆಸಿದಲ್ಲದೇ ಕನ್ನಡದಲ್ಲಿ ಕಾವ್ಯರಚನೆ ಸಾಧ್ಯವಾಗದು ಎಂಬುದರ ಮಾತಿಗೆ ಸವಾಲಾಗಿ, ಅಚ್ಚಗನ್ನಡದಲ್ಲೇ ಕಾವ್ಯ ರಚನೆ ಮಾಡುತ್ತೇನೆಂದು ಹೊರಟ ಕವಿ ಆಂಡಯ್ಯನ ಪ್ರಯತ್ನ ಕನ್ನಡದ ದೇಸೀಯತೆಯ ಸ್ವಾಭಿಮಾನದ ಹೆಗ್ಗುರುತಾಗಿದೆ. ಇದರ ಪರಿಣಾಮದಿಂದಾಗಿ ಭಾಷಾ ಮಾಧ್ಯಮದಲ್ಲಿ ಮಾತ್ರವಲ್ಲದೇ ಸಾಹಿತ್ಯ ವಸ್ತುವಿನಲ್ಲಿಯೂ ದೇಸೀಯತೆಯ ದೃಷ್ಟಿ ತಲೆಯೆತ್ತಿತು. ಅರಸೊತ್ತಿಗೆಯ ಅವಿವೇಕಾದಿಗಳನ್ನು ತಾವು ಅರಸನ ಆಶ್ರಯದಲ್ಲೇ ಇದ್ದರೂ ಹಂಗಿಲ್ಲದೇ ಹಳಿದು, ಆತನು ಕೊಟ್ಟ ಜೋಳದ ಹಂಗನ್ನು ಎಲ್ಲಾ ರೀತಿಯಿಂದಲೂ ತೀರಿಸಿದೆನೆಂಬ ಸಂತೃಪ್ತಿಯ ಕ್ರಾಂತಿಯ ಕಿಡಿ ಪಂಪನಿಂದಲೇ ವ್ಯಕ್ತವಾದದು ಕವಿ ಪಂಪನ ದೇಸೀತನದ ಹೆಗ್ಗುರುತು. ಮುಂದೆ ಹರಿಹರ ಬಸವಣ್ಣಾದಿಗಳಿಂದ ಉಚ್ಚ-ನೀಚ, ಬೇಧವನ್ನು ತೊಡೆದುಹಾಕುವ ಮಹಾಯತ್ನ ವೀರಶೈವ ಆಂದೋಲನವಾಗಿ ರೂಪಗೊಂಡಿತು. ವಚನಸಾಹಿತ್ಯದ ಧೋರಣೆಗಳೆಲ್ಲ ದೇಸೀಯ ನೆಲೆಯಿಂದಲೇ ರೂಪುಪಡೆದುಕೊಂಡಿವೆ. ಕನ್ನಡ ಭಾಷೆಯ ಮೇಲಿರುವ ಸಂಸ್ಕೃತದ ಅವಲಂಬನೆಯನ್ನು ದೂರುಸರಿಸಿ ಸರಳ, ನೇರ ನುಡಿಗೆ ಇಂಬಾಯಿತು. ಜನರ ಎದೆಯಲ್ಲಿ ಮಿಡಿಯುವ ಭಾವನೆಗಳಿಗೆ ನುಡಿ ಪಡೆನುಡಿಯಾಯಿತು. ವಿಶೇಷವಾಗಿ ಹರಿದಾಸರಲ್ಲಿ ಪ್ರಮುಖರಾದ ಪುರಂದರ, ಕನಕದಾಸರು ಹರಿಭಕ್ತಿಯನ್ನು ಸಾರಲು ಸಂಗೀತ ಮಾಧ್ಯಮವನ್ನು ಬಳಸಿಕೊಂಡರೂ ಜನಸಾಮಾನ್ಯರ ಜೀವನ ವಿಧಾನ ಸಾಮಾಜಿಕ ಸುಧಾರಣೆ, ಅಂಧಾನುಕರಣೆಯ ವಿಮರ್ಶೆ, ಟೀಕೆ, ಮುಂತಾದ ವಿಚಾರ ಹೇಳುವಲ್ಲಿ ಹರಿದಾಸರು ದೇಸೀಯತೆಯನ್ನು ಮೆರೆದಿದ್ದಾರೆ. ಅದರಲ್ಲೂ ಕನಕದಾಸರ ರಾಮಧಾನ್ಯ ಚರಿತೆಯು ಭತ್ತ ಮತ್ತು ರಾಗಿಯ ನಡುವಣ ಅಂತರವನ್ನು ಕಾವ್ಯಾತ್ಮಕವಾಗಿ ವಿಶ್ಲೇಷಿಸಿ ಬಡವರ, ದೀನರ, ಆಹಾರ ಧಾನ್ಯವನ್ನು ಹೆಗ್ಗಳಿಕೆಯ ಸ್ಥಾನಕ್ಕೇರಿಸುವಲ್ಲಿ ದಾಸರ ಸ್ವಂತಿಕೆ, ಎದ್ದು ತೋರುತ್ತದೆ. ಅಷ್ಟೇ ಅಲ್ಲದೇ ಕಾಲಮಾನದ ದೃಷ್ಟಿಯಿಂದ ಇಂತಹ ಶತಮಾನದ್ದೆಂದು, ಇಂತಹ ವರ್ಷದ್ದೆಂದು ಹೇಳಲು ಸಾಧ್ಯವಾಗದ ಜನಪದ ಸಾಹಿತ್ಯರಾಶಿಯು ನಮ್ಮಲ್ಲಿ ಸಾಕಷ್ಟಿದೆ. ನಮ್ಮ ಜನಗಳ ನೋವು-ನಲಿವುಗಳನ್ನು, ಸಾಹಸ-ಶೌರ್ಯಗಳನ್ನು ನಮ್ಮ ನೆಲ-ಜಲದ ಸೊಬಗನ್ನು ಹಾಡಿ ಹೊಗಳುವ ಜೀವನ ಪ್ರೀತಿಯಲ್ಲಿ ದೇಸೀಯತೆಯು ಸದಾ ಜಾಗೃತವಾಗಿ, ಜನಮಾನಸದ ದೈನಂದಿನ ಬದುಕಿನಲ್ಲಿ ಬಿಂಬಿತವಾಗಿದೆ.

      ನಯಸೇನನು ಕತೆಗಳ ಮೂಲಕ ಧರ್ಮಪ್ರಸಾರಕ್ಕೆ ತೊಡಗಿದ ಜಿನಧರ್ಮದ ಹಿರಿಮೆಯನ್ನು ಸಾರುವ ಸಂದರ್ಭದಲ್ಲಿಯೇ ಅದರಲ್ಲಿ ಪರಿಸರದ ಮೂಲಕ ತೂರಿಬಂದ ಅಂಧಶ್ರದ್ಧೆ ಮೂಢನಂಬಿಕೆಗಳನ್ನು ಟೀಕಿಸದೇ ಬಿಟ್ಟಿಲ್ಲ. ಯಾವುದೇ ಪಕ್ಷಪಾತಕ್ಕೊಳಗಾಗದೇ ನಿರ್ದಾಕ್ಷಿಣ್ಯವಾಗಿ ದೋಷಗಳನ್ನು ಎತ್ತಿ ತೋರಿ ತನ್ನ ಪ್ರಾಮಾಣಿಕತನವನ್ನು ಸಮರ್ಥಿಸಿಕೊಂಡಿದ್ದಾನೆ. ನಯಸೇನ ಹೋಲಿಕೆ, ಉಪಮೆ, ಸಾದೃಶ್ಯಗಳನ್ನು ಬಳಸುವಲ್ಲಿ ಧಾರಾಳತನವನ್ನು ಮೆರೆದವನು. ಒಂದು ಕಟ್ಟುವ ಕಡೆ ಹತ್ತಿಪ್ಪತ್ತು ಹೋಲಿಕೆಗಳನ್ನು ತಂದಿಕ್ಕುವ ನಯಸೇನ ಕೆಲ ವಿಮರ್ಶಕರ ಟೀಕೆಗೆ ಗುರಿಯಾಗಿದ್ದುದ್ದೂ ಉಂಟು. ಆದರೆ ಜನ ಬದುಕಲೆಂದು ಕಾವ್ಯ ರಚನೆಗೆ ತೊಡಗಿದ ಕವಿ ನಯಸೇನ ತನ್ನೆಲ್ಲ ಲೋಕಜ್ಞಾನ, ಸಮಾಜದ ಸೂಕ್ಷ್ಮನಿರೀಕ್ಷಣೆ, ಲೋಕಾನುಭವಗಳ ಒತ್ತಡದಿಂದ ದೂರ ಉಳಿಯುವುದಿಲ್ಲ. ಧರ್ಮಾಮೃತ ಕಾವ್ಯವು, ಹದಿನಾಲ್ಕು ಆಶ್ವಾಸಗಳಿಂದ ಕೂಡಿದ ಕಥಾಗುಚ್ಛ. ಪ್ರತಿಯೊಂದೂ ಆಶ್ವಾಸಗಳಲ್ಲಿ ಒಂದು ಪ್ರಮುಖ ಕಥೆ ಮತ್ತು ಉಪಕಥೆಗಳನ್ನೊಳಗೊಂಡಂತೆ ಕವಿ ನಯಸೇನ ಇಲ್ಲಿ ಹೇಳ ಹೊರಟದ್ದು ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು. ಇದು ಕಾವ್ಯದ ಕಥಾ ವಸ್ತುವಾಗಿದ್ದರೂ ಹಾಗೆ ಹೇಳಹೊರಟ ಕವಿ ತನ್ನ ಕಾವ್ಯದುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಬಳಸಿಕೊಂಡ್ಡದ್ದು ಜಾನಪದ ಕತೆಗಳನ್ನು. ಸಾಂದರ್ಭಿಕವಾಗಿ ಬಳಸಿಕೊಂಡ ಜಾನಪದ ಕಥೆ ಮತ್ತು ದೇಸೀ ಕಥನತಂತ್ರಗಳಿಂದ ಇಡೀ ಕಾವ್ಯ ದೇಸೀ ಮಗ್ಗುಲನ್ನು ಪಡೆದು ಹೊಸ ಬಗೆಯ ವಿನ್ಯಾಸವನ್ನು ತಳದಿದೆ. ದೇಸೀಯತೆ ಎಂಬುದು ಒಂದು ಗ್ರಹಿಕೆ. ಒಂದು ಆಲೋಚನಾ ಕ್ರಮ. ಸ್ಥಳೀಯವಾದ ಅಥವಾ ಒಂದು ಪ್ರದೇಶದ ಪರಂಪರಾಗತವಾದ, ಅಕೃತ್ರಿಮವಾದ ಸಾಂಸ್ಕೃತಿಕ ಬದುಕಿನ ಅನುಭವದ ನೆಲೆಗಳನ್ನು ಮೂಲ ಸ್ವರೂಪದಲ್ಲಿಯೇಕಟ್ಟಿಕೊಡುವ ಒಂದುಬಗೆಯ ತಿಳುವಳಿಕೆಯೇ ದೇಸೀಯತೆ. ಕವಿ ನಯಸೇನ ತನ್ನ ಕಾಲದ ಅಂಥ ಜನಜೀವನದ ಬದುಕಿನ ಅನುಭವದ ಮೂಲ ಗ್ರಹಿಕೆಗಳನ್ನು ಧರ್ಮಾಮೃತದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾನೆ. ಹೀಗೆ ಚಂಪೂ ಸಂಪ್ರದಾಯದಲ್ಲಿಯೇ ನಯಸೇನ ಜೈನಧರ್ಮದ ತತ್ವಾದರ್ಶಗಳನ್ನು ಬಿತ್ತರಿಸಿ, ಜಿನ ಧರ್ಮದ ಪ್ರಸಾರದೊಂದಿಗೆ ಜಿನನನ್ನೇ ತನ್ನ ಕಥೆಗೆ ವಸ್ತುವನ್ನಾಗಿ ಮಾಡಿಕೊಂಡವನು. ಆದರೂ ಜಿನನ ಕಥೆಯೊಂದಿಗೆ ತಳುಕು ಹಾಕಿಕೊಂಡ ಜಾನಪದ ಕಥೆಗಳಿಂದ ಇಡೀ ಕಾವ್ಯ ದೇಸೀಯತೆಯ ಸ್ಪರ್ಷ್ಯ ಪಡೆದುಕೊಂಡು ದೇಸೀ ಕಾವ್ಯವಾಗಿ ಪರಿಣಮಿಸಿದೆ. ಮಾರ್ಗಪರಂಪರೆಗೆ ಭಿನ್ನವಾದ ದೇಸೀ ಬದುಕೊಂದು ನಯಸೇನನ ಧರ್ಮಾಮೃತದಲ್ಲಿ ಅರಳಿನಿಂತಿದೆ. ನಯಸೇನ ತನ್ನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಹಾಗೂ ತನಗೆ ಪರಿಚಯವಿದ್ದ ಜಾನಪದ ಕಥೆಗಳನ್ನು ಯಾವುದೆ ಹಿಂಜರಿಕೆಯಿಲ್ಲದೆ ಯಥೋಚಿತವಾಗಿ ಬಳಸಿಕೊಂಡು, ತನ್ನ ಕಾವ್ಯದ ಕಥಾ ವಸ್ತುವನ್ನು ವಿನೂತನವಾಗಿ ವಿನ್ಯಾಸಗೊಳಿಸಿದ್ದಾನೆ. ತಾನು ಬಳಸಿಕೊಂಡ ಜಾನಪದ ಕಥೆಗಳೊಂದಿಗೆ ಸಾರ್ವಕಾಲಿಕ ಮೌಲ್ಯಗಳನ್ನು ಜನರಿಗೆ ಬಿತ್ತರಿಸಿ, ಅಲ್ಲಿಯ ಕಥಾನಕಗಳು ಓದುಗರ ಕಣ್ಮುಂದೆ ಅಚ್ಚೊತ್ತಿ ನಿಲ್ಲುವಂತೆ ಮಾಡಿದ್ದಾನೆ. ಸಹಜವಾಗಿ ಕವಿ ನಯಸೇನನ ಧರ್ಮಾಮೃತದಲ್ಲಿ ಬಳಕೆಯಲ್ಲಿರುವ ಆಡುಮಾತಿನ ವಿಶಿಷ್ಟ ಪ್ರಯೋಗ, ನಾಣ್ಣುಡಿ ಮತ್ತು ನುಡಿಗಟ್ಟುಗಳು. ಸಂದರ್ಭಾನುಸಾರವಾದ ಇವುಗಳ ಬಳಕೆ ಕಾವ್ಯಕ್ಕೆ ದೇಸೀಯತೆಯನ್ನು ತಂದುಕೊಟ್ಟಿದೆ. ಅಂತಹ ಗ್ರಾಮ್ಯ ಬದುಕನ್ನು ಹೊತ್ತ ಮಾತುಗಳ ವಿಶಿಷ್ಟ ಪದಪ್ರಯೋಗವನ್ನು ಧರ್ಮಾಮೃತದಲ್ಲಿ ಹೆಚ್ಚಾಗಿ ಕಾಣಬಹುದು. ಹೀಗೆ ಸಂದರ್ಭಾನುಸಾರ ಕವಿ ನಯಸೇನ ನಾಣ್ಣುಡಿಗಳನ್ನು ಕಾವ್ಯದಲ್ಲಿ ಬಳಸುತ್ತ ದೇಸೀಯ ಬೆಡಗನ್ನು ಹೆಚ್ಚಿಸಿದ್ದಾನೆ. ಈತ ಬಳಸಿದ ಉಪಮೆಗಳ ಸಂಖ್ಯೆ ಕಡಿಮೆಯಿದ್ದರೂ, ನಾಣ್ಣುಡಿಗಳಿಗೆ ಕೊರತೆ ಎಂಬುದಿಲ್ಲ. ವಿಶೇಷವಾಗಿ ಕನ್ನಡದ ಯಾವ ಕವಿಯೂ ಇವನಷ್ಟು ನಾಣ್ಣುಡಿಗಳನ್ನು ಬಳಸಿಲ್ಲವೆಂದೇ ಹೇಳಬಹುದು.  ನಯಸೇನ ಕವಿಯು ಆಡುಮಾತಿನ ಅಕ್ಷಯ ಭಂಡಾರಕ್ಕೆ ಲಗ್ಗೆಯಿಟ್ಟು ಅಲ್ಲಿಯ ನಾಣ್ಣುಡಿಗಳನ್ನು ಸೂರೆಗೊಂಡಿದ್ದಾನೆ. ಒಂದು ಅಂದಾಜಿನ ಪ್ರಕಾರ ಸ್ವತಃ ಅವನೇ ಬಾಯಿಬಿಟ್ಟು ನಾಣ್ಣುಡಿಯಂದು ಹೇಳಿರುವ ಮಾತುಗಳು ಮೂವತೈದು ಮಾತ್ರ. ಉಳಿದ ಅನೇಕ ನಾಣ್ಣುಡಿಗಳಂತಹ ಮಾತುಗಳನ್ನು ನಯಸೇನ ಜನವಾಣಿಯಿಂದ ಆಯ್ದುಕೊಂಡಿದ್ದಾನೆ. ಸಂದರ್ಭಾನುಸಾರವಾಗಿ ಇಂಥ ಗಾದೆಮಾತುಗಳು ಧರ್ಮಾಮೃತದಲ್ಲಿ ಅಧಿಕಪ್ರಮಾಣದಲ್ಲಿ ಬಂದು ಓದುಗರ ಗಮನ ಸೆಳೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕವಿ ಬಳಸಿದ ನಾಣ್ನುಡಿಗಳ ಅರ್ಥವತ್ತತೆ, ಲೋಕವ್ಯವಹಾರಜ್ಞಾನ ಮತ್ತು ಹಾಸ್ಯಮಯತೆ ಮಿಗಿಲಾಗಿ ಕನ್ನಡ ನುಡಿಯ ಬಲ್ಮೆಯನ್ನು ಪ್ರಕಾಶಪಡಿಸಿ ಮತ್ತು ಪಸರಿಸುವಂತೆ ಮಾಡುವ ಇಂತಹ ಮಾತುಗಳನ್ನು ತನ್ನ ಕೃತಿಯಲ್ಲಿ ಹೆಜ್ಜೆ ಹೆಜ್ಜೆಗೂ ತುಂಬಿ ಅದರ ದೇಸೀ ಪೊಸತೆನಿಸುವಂತೆ ಮಾಡಿದ ನಯಸೇನನ ಕೌಸಲ್ಯ ಮೆಚ್ಚುವಂತಹದು. ಹೀಗೆ ನೂರಾರು ನಾಣ್ಣುಡಿಗಳೊಂದಿಗೆ ಆಡುಮಾತಿನ ಶೈಲಿಯನ್ನು ಕಾವ್ಯದಲ್ಲಿ ತಂದು ಅದು ದೇಸಿವೆತ್ತ ಪೊಸನುಡಿ ಮತ್ತು ಮಾರ್ಗಗಳ ಕುಸುರಿಕೆಲಸವಾಗುವಂತೆ ಮಾಡುವಲ್ಲಿ ನಯಸೇನನ ವೈಶಿಷ್ಟ್ಯ ಗರಿಬಿಚ್ಚಿನಿಂತಿದೆ. ಕನ್ನಡದ ಆಡುಮಾತಿನ ಸೊಗಡು - ಬೆಡಗುಗಳನ್ನು ಸೂಕ್ತಿಯಂತಹ ನುಡಿಮುತ್ತುಗಳಿಂದ ಕೂಡಿದ ಇದೊಂದು ಅಪ್ಪಟ ದೇಸೀಕಾವ್ಯವಾಗಿದೆ. ಹೀಗೆ ಹದಿನಾಲ್ಕು ಆಶ್ವಾಸಗಳಿಂದ ಕೂಡಿದ ಧರ್ಮಾಮೃತ ಕಥೆ ಮತ್ತು ಉಪಕಥೆಗಳಿಂದ ಕೂಡಿ ಅಂದಂದಿನ ಜನಜೀವನದ ಚಿತ್ರವನ್ನು ಕವಿ ಇಲ್ಲಿ ಬಿಡಿಸಿಟ್ಟಿದ್ದಾನೆ. ಕವಿ ನಯಸೇನನಲ್ಲಿರುವ ಸಾಮಾಜಿಕ ಪ್ರಜ್ಞೆ ಬೆರಗುಗೊಳಿಸುವಂತಹದ್ದು. ಸಮಕಾಲೀನ ಜನಜೀವನದೊಡನೆ ಬೆರೆತ ಈತ ಅದರ ಸಂಪರ್ಕವನ್ನು ಗಟ್ಟಿಗೊಳಿಸಿಕೊಂಡುಬಂದ ಕನ್ನಡಕವಿಗಳಲ್ಲಿ ನಯಸೇನನ ಸ್ಥಾನ ಹಿರಿದಾದುದಾಗಿದೆ. ನಯಸೇನನು ಕೊಡ ಮಾಡಿರುವ ಹೋಲಿಕೆಗಳೆಲ್ಲವೂ ಹಳೆಯವಾದರೂ ಅವನು ಸ್ವೀಕರಿಸಿದುದು ಅವುಗಳ ಹಂದರ ಮಾತ್ರ. ಅದಕ್ಕೆ ರಕ್ತ ಮಾಂಸವನ್ನು ತುಂಬಿ, ಜೀವಕಳೆಯನ್ನಿತ್ತು ತನ್ನ ಬೆಡಗು ಬಿನ್ನಾಣಗಳಿಂದ ಲೋಕಾನುಭವವನ್ನು ಚಲ್ಲವರಿದು, ಅವು ಸಹೃದಯರಿಗೆ ಚೇತೋಪಹಾರಿಯಾಗುವಂತೆ ಮಾಡಿದ ನಯಸೇನನ ಕವಿತ್ವಶಕ್ತಿ ವಿಶಿಷ್ಟವಾದುದು. ಕೃತಿ ಜನಜೀವನದ ಚಿಕ್ಕ ಕಥಾಕೋಶವೆಂಬಂತೆ ತೋರುತ್ತದೆ. ಕಾವ್ಯ ವಸ್ತುವಿನುದ್ದಕ್ಕೂ ಪೂರಕವಾಗಿ ಬರುವ ಅಸಂಖ್ಯಾತ ನಾಣ್ಣುಡಿ, ಉಪಮೆ,ಪಡೆನುಡಿ, ಸಂದರ್ಭ ಸನ್ನಿವೇಶಗಳು ದೇಸೀಯ ವಿನ್ಯಾಸವನ್ನು ಪಡೆದಿವೆ. ನಯಸೇನ ಒಂದು ರೀತಿಯಲ್ಲಿ ಹಟಕ್ಕೆ ಬಿದ್ದವನಂತೆ ಕಾವ್ಯದ ತುಂಬಾ ಕನ್ನಡ ನುಡಿಗಟ್ಟುಗಳನ್ನು, ಉಪಮೆಗಳನ್ನು, ನಾಣ್ಣುಡಿಗಳನ್ನು ಸೂರೆಮಾಡಿ ಅನೇಕ ಹೊಸ ನಾಣ್ಣುಡಿ, ಜಾಣ್ಣುಡಿಗಳಂತಹ ಸೂಕ್ತಿಗಳನ್ನು ರಚಿಸಿ ಚಂಪೂರೂಪದಲ್ಲಿಯೇ ಹೊಸ ಶೈಲಿಯೊಂದನ್ನು ಕನ್ನಡಕ್ಕಿತ್ತು ಕೀರ್ತಿಕಾಯನಾದ. ಅರ್ಥದಲ್ಲಿಯೇ ನಯಸೇನಪೊಸಗನ್ನಡಎಂಬ ಪದವನ್ನು ಬಳಸಿದುದು. ಕನ್ನಡ ಆಡುಮಾತಿನ ಶ್ರೀಮಂತಿಕೆಯನ್ನು ಅದರ ವಿಶಿಷ್ಟ ಪದಪದ್ಧತಿಯ ಬೆಡಗು ಬಿನ್ನಾಣಗಳನ್ನು ಗೂಢ ತತ್ವಗಳ ವಿವೇಚನೆಗೆ ಅದು ಉತ್ತಮ ಮಾಧ್ಯಮವಾಗಬಲ್ಲುದೆಂಬುದನ್ನು ಅರಿತವನು. ಒಟ್ಟಿನಲ್ಲಿ ಕನ್ನಡದ ಸತ್ವಸಾಮರ್ಥ್ಯಗಳನ್ನು ಮನವರಿಕೆ ಮಾಡಿಕೊಡಬಲ್ಲ ವಿಶಿಷ್ಟ ಶೈಲಿಯಲ್ಲಿ ರಚನೆಗೊಂಡ ಅವನ ಧರ್ಮಾಮೃತ ನಿಜವಾದ ಅರ್ಥದಲ್ಲಿ ಅಂದಿನ ಕಾಲಕ್ಕೆಪೊಸಗನ್ನಡಕೃತಿಯೇ. ಅದರ ಪ್ರಭಾವ ಅವನ ನಂತರದಲ್ಲಿ ಬಂದ ಜೈನ ಕವಿಗಳಾದ ಜನ್ನ, ನೇಮಿಚಂದ್ರ, ಮತ್ತು ಆಂಡಯ್ಯನ ಕಾವ್ಯಗಳ ಮೇಲಾಗಿದ್ದು, ದೇಸಿ ಹಿನ್ನೆಲೆಯಲ್ಲಿ ಅವರ ಕಾವ್ಯಗಳ ಭಾಷೆ, ಶೈಲಿಯನ್ನು  ಗಮನಿಸಬಹುದಾಗಿದೆ. ಕಾವ್ಯಭಾಷೆಯು ತನ್ನ ಕಾಲದ ಆಡುಮಾತಿನಿಂದ ಬಹುವಾಗಿ ಬೇರೆಯಾಗಿರಬೇಕೆಂಬ ಆಸೆಯಾಗಲಿ, ಅವನಿಗೆ ಇದ್ದಂತೆ ತೋರದು. ಆದರೆ ಅವನ ಕಾವ್ಯ ಭಾಷೆಯು ಚಂಪೂ ಪ್ರಪಂಚದಲ್ಲಿ ಜಾನಪದ ಭಾಷೆಯು ಪಡೆದ ವಿಜಯದ ಸಂಕೇತವಾಗಿದೆ ಎಂಬ ಹಾಗೂ ಎಂ.ಚಿದಾನಂದಮೂರ್ತಿಯವರನಯಸೇನ ಕನ್ನಡದ ಒಬ್ಬ ಜಾನಪದ ಚಂಪೂ ಕವಿ  ಎಂಬ ಮಾತುಗಳು ನಯಸೇನನಿಗೆ ಸಂಪೂರ್ಣವಾಗಿ ಅನ್ವಯಿಸುತ್ತವೆ. ಅವನು ತನ್ನ ಹಿಂದಿನ ಸಂಪ್ರದಾಯವನ್ನು ಸಂಪೂರ್ಣವಾಗಿ ಬಿಟ್ಟುಬಿಡುವ ಧೈರ್ಯಶಾಲಿಯಾಗಿರಲಿಲ್ಲವೇನೋ. ಇಲ್ಲದಿದ್ದರೆ ತನ್ನ ಉದ್ದೇಶಕ್ಕೆ ಅನುಗುಣವಾಗಿ ಜನರನ್ನು ತಲುಪಲು ಇನ್ನೂ ಸರಳವಾದ ಕಾವ್ಯ ಮಾರ್ಗವನ್ನು ಅನುಸರಿಸುತ್ತಿದ್ದ. ಒಟ್ಟಾರೆಯಾಗಿ ಕವಿ ನಯಸೇನನ ಸಂಸ್ಕಾರವನ್ನು, ಮನೋಭಾವವನ್ನು, ಅನುಭವ ವೈವಿಧ್ಯವನ್ನು, ಗಮನಿಸಿದಾಗ ಅವನು ತನ್ನ ಕಾಲಕ್ಕಿಂತ ಐವತ್ತು ಅಥವಾ ನೂರು ವರ್ಷ ಈಚಿನವನಾಗಿದ್ದು ಕಾವ್ಯ ರಚನೆ ಮಾಡಿದ್ದರೆ ಪ್ರಾಯಶಃ ಅವನು ಚಂಪೂಕಾವ್ಯವನ್ನು ಬರೆಯುತ್ತಿದ್ದಿಲ್ಲ. ಏನೇ ಇದ್ದರೂ ನಯಸೇನ ದೇಸೀಯನ್ನು ಬಳಸಿಕೊಂಡ, ಚಂಪೂ ಕಾವ್ಯಕ್ಕೆ ಒಂದು ಹೊಸ ಸ್ವರೂಪವನ್ನೇ ಕೊಟ್ಟನೆಂಬುದು ಗಮನಾರ್ಹ ಸಂಗತಿ. ಕಾವ್ಯವಸ್ತುವಾಗಿ ಪುರಾಣ ಕತೆಯನ್ನೋ, ದೀರ್ಘಕಥಾನಕವನ್ನೋ ಆರಿಸಿಕೊಳ್ಳದೇ ಸಣ್ಣ ಕಥೆಗಳನ್ನು ರಚಿಸಿರುವುದರಲ್ಲಿ, ಪದ್ಯಕ್ಕಿಂತ ಹೆಚ್ಚಾಗಿ ಗದ್ಯವನ್ನೇ ಬರೆಯುವುದರಲ್ಲಿ ಆಡುನುಡಿಯನ್ನೇ ತನ್ನ ಚಂಪೂ ಚೌಕಟ್ಟಿಗೆ ಅಳವಡಿಸಿಕೊಳ್ಳುವುದರಲ್ಲಿ ಹೊಸತನವನ್ನು ಕಾಣಬಹುದಾಗಿದೆ. ‘ಸಾಹಿತ್ಯ ಜನತೆಗಾಗಿ ಎಂಬ ಹೊಸಗನ್ನಡದ ಮೊದಲ ಕೋಳಿ ಕೂಗು ಅವನ(ನಯಸೇನನ) ಕೃತಿಯಲ್ಲಿದೆಎಂಬುದು ಅವನ ಸಾಧನೆಯನ್ನು ಸೂತ್ರೀಕರಿಸುವ ಮಾತಾಗಿದೆ. ‘ಕತೆಗಳ ಮೂಲಕವೇ ದೊಡ್ಡ ಕಾವ್ಯವನ್ನು ನಿರ್ಮಿಸುವ ಕುಶಲತೆಯ ಎರಡನೆಯ ಸ್ಥಾಪಕನಾದದ್ದು ನಯಸೇನನ ಹಿರಿಮೆಯೂ ಹೌದು? ದೇಸಿಯತೆಯ ಹಿರಿಮೆಯು ಹೌದು.

     ನಾಯಕ ಯಾರೆಂದು ನಿರ್ದಿಷ್ಟವಾಗಿ ಗುರುತಿಸಲು ಅಸಾಧ್ಯವಾದ ವ್ಯಾಸಭಾರತದ ಕಥಾವಸ್ತುವನ್ನು `ಕೃಷ್ಣಕೇಂದ್ರಿತ’ ಚೌಕಟ್ಟಿಗೆ ತಂದದ್ದು ಕುಮಾರವ್ಯಾಸನ ವಿಶಿಷ್ಟತೆಯಾಗಿದೆ. ಮಹಾಭಾರತವು  ಕುಮಾರವ್ಯಾಸನಿಗೆ ಪ್ರಧಾನತಃ ಕೃಷ್ಣ ಚರಿತಾಮೃತವೆನಿಸಿದ್ದರೂ ಕೇವಲ ಪಾರಮಾರ್ಥಿಕ ದೃಷ್ಟಿಯಿಂದಷ್ಟೇ ಕಾವ್ಯ ಬರೆಯಲಿಲ್ಲ. ಲೌಕಿಕ ದೃಷ್ಟಿಯನ್ನು ಅದರಲ್ಲಿ ಅಳವಡಿಸಿದ್ದಾನೆ. ತನ್ನ ಕಾವ್ಯವನ್ನು ಓದುವ ಸಹೃದಯರು ಅದರಿಂದ ಏನೇನೂ ಬಯಸುತ್ತಾರೋ ಅದು ಅದರಲ್ಲಿರ ಬೇಕೆಂಬುದು ಅವನ ಆಶಯ. ಆದುದರಿಂದ `ಅರಸುಗಳಿಗಿದು ವೀರ,ದ್ವಿಜರಿಗೆ ಪರಮ ವೇದದ ಸಾರ, ಯೋಗೀಶ್ವರರ ತತ್ವ ವಿಚಾರ, ಮಂತ್ರೀಜನಕೆ ಬುದ್ದಿಗುಣ,ವಿರಹಿಗಳ ಶೃಂಗಾರ, ವಿದ್ಯಾಪರಿಣಿತರಲಂಕಾರ’ ಹೀಗೆ ಬೇರೆ ಬೇರೆ ಅಭಿರುಚಿಯುಳ್ಳ ಜನರಿಗೆ ಆಯಾ ವಿಷಯಗಳನ್ನೊದಗಿಸಬೇಕೆಂಬುದು ಆತನ ಪೂರ್ವ ಯೋಜನೆಯಾಗಿದೆ. ಕುಮಾರವ್ಯಾಸ ಕವಿ ಭಾರತದ ಕಥೆಯನ್ನು ಹೇಳ ಹೊರಟಿದ್ದರಲ್ಲಿಯೇ ಜನತೆಯ ಪ್ರತಿನಿಧಿಯೆನಿಸಿದ್ದಾನೆ.

    ನಂಜುಂಡ ಕವಿಯ ಕುಮಾರ ರಾಮನಸಾಂಗತ್ಯ ಕಾವ್ಯದಲ್ಲಿ ಬರುವ ಕುಮಾರರಾಮನ ಪರದಾರ ಸಹೋದರತ್ವ ಮತ್ತು ಯುದ್ದರಂಗದಲ್ಲಿ ಆತ ತೋರಿದ ಸಾಹಸಗಳ ವರ್ಣನೆಗಳಿಂದಾಗಿ ಕಥೆಗೆ ವಿಶೇಷ ಆಕರ್ಷಣೆ ಒದಗಿದೆ. ಯುದ್ಧ ಚಿತ್ರಣವಂತೂ ಬಹುನೈಜವಾಗಿ ಮೂಡಿನಿಂತಿದೆ. ಕವಿಯು ಕನ್ನಡ ನಾಡನ್ನು ಹರ್ಷಾಭಿಮಾನದಿಂದ ವರ್ಣಿಸಿದ್ದಾನೆ. ಕರ್ಣಾಟ ಮಹೀಮಂಡಲವನ್ನು  ವರ್ಣಿಸುತ್ತಾ, ಕವಿರಾಜ ಮಾರ್ಗದ  ರೀತಿಯಲ್ಲಿಯೇ ಕನ್ನಡ ನಾಡನ್ನು, ಕನ್ನಡಿಗರನ್ನು ` ಕಾವೇರಿಯಿಂದ ಗೋದಾವರಿವರೆಗಮಿರ್ದಾ ವಸುಧಾತಳವಳಯ ಭಾವಿಸೆ ಕರ್ನಾಟಕ ಜನಪದವೆಂದು ಹೇಳಿರುವನು.  

     ಲಕ್ಷ್ಮೀಶನ ಜೈಮಿನಿಭಾರತ ಪ್ರಧಾನವಾಗಿ ವೀರರಸ ಪ್ರತಿಪಾದಕ ಕಾವ್ಯವಾದರೂ ಇತಿಮಿತಿಯಿಂದ ಕೂಡಿದ ಶೃಂಗಾರ ವರ್ಣನೆಗಳನ್ನೂ ಒಳಗೊಂಡಿದೆ, ಉತ್ತಮ ನೀತಿ ಗ್ರಂಥವೂ ಆಗಿದೆ. ಯುದ್ಧವರ್ಣನೆಗಳು ವೀರರಸಯುಕ್ತ ವಾಗಿವೆ. ಪ್ರಕೃತಿವರ್ಣನೆಗಳು ಪರಿಚಿತ ರೂಪಕ ಉಪಮೆಗಳಿಂದ ಕಣ್ಣಿಗೆ ಕಟ್ಟುವಂತಿವೆ. ವಿಸ್ತಾರವಾಗಿರುವ ಮೂಲಕಥೆಯನ್ನು ಸಂಗ್ರಹಿಸುವಲ್ಲಿ ಕವಿಯ ಸ್ವೋಪಜ್ಞತೆ ಕಂಡುಬರುತ್ತದೆ.

  ಮೊದಲಿಗೆ ಪಂಪಕವಿ ಆದಿ ಪುರಾಣದಲ್ಲಿ ಭರತ ಬಾಹುಬಲಿಗಳ ಯುದ್ಧ ಸಂದರ್ಭವನ್ನು ಲೋಕ ಪ್ರಸಿದ್ಧವಾದ ರೀತಿಯಲ್ಲಿ ಚಿತ್ರಿಸಿ ಕೃತಾರ್ಥನಾದನಷ್ಟೆ. ಭರತೇಶ ವೈಭವದಲ್ಲಿ ರತ್ನಾಕರವರ್ಣಿ ಅದೇ ಸಂದರ್ಭವನ್ನೆತ್ತಿಕೊಂಡು ಚಮತ್ಕಾರವಾಗಿ ಅದಕ್ಕೊಂದು ತಿರುವು ಕೊಟ್ಟು ಯುದ್ಧವೇ ನಡೆಯದಂತೆ ಮಾಡಿದ್ದಾನೆ.

ಹದಿಬದೆಯ ಧರ್ಮದಲ್ಲಿ  ನೀತಿ, ಧರ್ಮಗಳ ಪ್ರತಿಪಾದನೆಯಿದೆ. ವಿವಾಹ, ಸಂಸಾರ ನಿರ್ವಹಳೆ ಇವುಗಳೇ ಮುಖ್ಯವಾಗಿದ್ದ ಅಂದಿನ ಸ್ತ್ರೀ ಸಮಾಜಕ್ಕೆ ಅಗತ್ಯವಾದ ನೀತಿ ಧರ್ಮಗಳನ್ನು ಹೊನ್ನಮ್ಮ ಉಪದೇಶಿಸಿದ್ದಾಳೆ. ಇಂದು ಸಾಮಾಜಿಕ ಪರಿಸ್ಥಿತಿ ಬದಲಾಗಿದೆ. ಆಧುನಿಕತೆಗೆ ಅನುಗುಣವಾಗಿ ಧ್ಯೇಯ ಧೋರಣೆಗಳು ಬದಲಾಗಿವೆ. ಆದರೆ ಹದಿಬದೆಯ ಸನ್ನಡತೆ ಸದಾಚಾರಗಳಲ್ಲಿ ಬೇಧವಿಲ್ಲ. ಸಚ್ಚಾರಿತ್ರ್ಯ ಹೊಂದಾಣಿಕೆ, ಕುಟುಂಬದ ಏಳಿಗೆ ಇವುಗಳಲ್ಲಿ ಬೇಧವಿಲ್ಲ. ಸತಿಯರ ಮನೋಭಾವ ವಿಕಾಸಗೊಳ್ಳಲು ಕೆಲವು ಉನ್ನತ ಆದರ್ಶಗಳ, ಮೌಲ್ಯಗಳ ಅಗತ್ಯವಿದೆ. ಹೊನ್ನಮ್ಮ ಅವುಗಳನ್ನು ಹೆಣ್ಣು ಮಕ್ಕಳಿಗೆ ಸರಳವಾಗಿ ಬೇಸರ ಬಾರದಂತೆ ಹೇಳಿದ್ದಾರೆ.

ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ವಿಭಿನ್ನ ಸಂಸ್ಕೃತಿಗಳಿಗೆ ಸೇರಿದ ಕವಿಗಳು ವಿಭಿನ್ನ ಧ್ವನಿಯಿಂದ ಕಾವ್ಯಗಳನ್ನು ರಚಿಸಿದರು. ಕುಮಾರವ್ಯಾಸನದು ಷಟ್ಪದಿಯ ಕಾವ್ಯವಾದರೆ ಕನಕದಾಸರದ್ದು ಕೀರ್ತನೆ, ರತ್ನಾಕರವರ್ಣಿಯ ಭರತೇಶ ವೈಭವದ ಸಾಂಗತ್ಯ, ಮಧ್ಯಕಾಲೀನ ಮುಖ್ಯ ಕವಿಗಳು ಓದಬಹುದಾದ ಕಾವ್ಯಕ್ಕಿಂತ ಹಾಡಲು ಅನುಕೂಲವಾಗಬಹುದಾದ ಕಾವ್ಯವನ್ನು ರಚಿಸಿದರು. ಇವು ಶ್ರಾವಕ ಕಾವ್ಯಗಳು ಅಂಶಗಳು ಕಾವ್ಯದ ಜನ ಸಮ್ಮುಖತೆಯನ್ನು ಸೂಚಿಸುತ್ತದೆ.

ಆದಾಗ್ಯೂ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಅಭಿವ್ಯಕ್ತಿಯ ಕ್ರಮದಲ್ಲಿ ದೇಸಿ ಇದ್ದರೂ ದೇಸಿ ಸಂಸ್ಕೃತಿಯ ಒಳಸ್ವರೂಪ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ರೂಪುಗೊಂಡಿರುವುದು ಅಷ್ಟಕ್ಕಷ್ಟೆ. ಮಧ್ಯಕಾಲೀನ ಬಹುತೇಕ ಕವಿಗಳಿಗೆ ದೇಸಿಯ ಕ್ರಮವೆಂದರೆ ಒಂದು ರೀತಿಯಲ್ಲಿ ಶೈಲಿಯ ಕ್ರಮವೇ ಆಗಿದೆ.  ದೇಸಿವಾದದಲ್ಲಿ ಪ್ರಾದೇಶಿಕ ವಿಶಿಷ್ಟತೆಯ ಜೊತೆಗೆ ಭಾಷಾ ಸಮುದಾಯವೊಂದರ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ವಿಶಿಷ್ಟತೆಗಳ ಹಿರಿಮೆಯನ್ನು ಕಾಣಬಹುದಾಗಿದೆ. ಭಾಷಾ ಸಮುದಾಯವೊಂದರೆ ಮೇಲೆ ಪ್ರಭಾವ ಬೀರಿರುವ ಅನ್ಯ ಅಥವಾ ಹೊರಗಣ ಸಂಸ್ಕೃತಿಯ ಅಂಶಗಳಿಗೆ ವಿರುದ್ಧವಾದ ಅಥವಾ ಭಿನ್ನವಾದ ದೇಶಿಯ ಸಂಸ್ಕೃತಿಯ ಅಂಶಗಳ ವಿಶಿಷ್ಟತೆಯನ್ನು ದೇಶಿವಾದವು ಎತ್ತಿಹಿಡಿಯುತ್ತದೆ.

    ಕನ್ನಡದಲ್ಲಿ ಬರೆಯುವ ಕಾವ್ಯಕ್ಕೆ ಕನ್ನಡತನವಿಲ್ಲದೆಹೋದರೆ ಭಾಷೆಯಲ್ಲಿ ಕಾವ್ಯ ಬರೆದೇನು ಪ್ರಯೋಜನ? ಸಂಸ್ಕೃತದ ವ್ಯಾಮೋಹವಿದ್ದರೆ ಭಾಷೆಯಲ್ಲೇ ಇಡೀ ಕಾವ್ಯ ಬರೆಯಬಹುದಲ್ಲ? ‘ಸಕ್ಕದಮಂಪೇಳ್ವೊಡೆ ನೆರೆಸಕ್ಕದಮಂ ಪೇಳ್ಗೆ ಶುದ್ಧಗನ್ನಡದೋಳ್ ತಂದಿಕ್ಕುವುದೆ ಸಕ್ಕದಂಗಳ, ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂಎಂಬ ನಯಸೇನನ ಮಾತು ಹುಟ್ಟಿಕೊಂಡದ್ದು ಹಿನ್ನೆಲೆಯಲ್ಲಿಯೇ ಎಂಬುದು ಗಮನಾರ್ಹ.

     ಕವಿ ಹರಿಹರ ಕಾವ್ಯವಸ್ತುವಿನ ದೃಷ್ಟಿಯಿಂದ ಮಾರ್ಗಸಾಹಿತ್ಯ ಅನುಸರಿಸುತ್ತ ಬಂದ ದಾರಿಯನ್ನು ಧಿಕ್ಕರಿಸಿ, ವ್ಯಕ್ತಿಸ್ವಾತಂತ್ರತೆಯಿಂದ ದೇಸೀಯತೆಯನ್ನು ಎತ್ತಿ ಹಿಡಿದ. ಅವನ ಶಿಷ್ಯನೂ, ಸೋದರಳಿಯನೂ ಆದ ರಾಘವಾಂಕನು ಕೂಡ ವಸ್ತುಕವನ್ನು ಬಿಟ್ಟುವರ್ಣಕ ಹೊಸ ಸಾಹಿತ್ಯ ಪ್ರಕಾರವನ್ನು ಹುಟ್ಟುಹಾಕಿ ಯುಗಪ್ರವರ್ತಕನೆನಿಸಿಕೊಂಡ. ಹೀಗೆ ಒಬ್ಬರಿಗಿಂತ ಒಬ್ಬರು ಪರಿವರ್ತನಶೀಲ ಗುಣಾಗ್ರಣಿಗಳಾಗಿ, ದೇಸೀಯ ಅಭಿವ್ಯಕ್ತಿ ಕ್ರಮವೊಂದನ್ನು ರೂಪಿಸಿದುದು, ಅವರಲ್ಲಿ ಆಳವಾಗಿ ಬೇರುಬಿಟ್ಟ ತನ್ನತನದ ಅಥವಾ ದೇಸೀಯತೆಯ ಪ್ರಭಾವದಿಂದಲೇ ಎಂಬ ಅಂಶ ಗಮನಾರ್ಹವಾದುದು. ಕವಿ ಹರಿಹರನ ಮಾರ್ಗಮಾನ್ಯವಾದ ಗಿರಿಜಾಕಲ್ಯಾಣವನ್ನು ಹೊರತುಪಡಿಸಿದರೆ ನೂರಾರು ರಗಳೆಗಳು, ಶತಕಗಳು, ರಾಘವಾಂಕನ ಹರಿಶ್ಚಂದ್ರಕಾವ್ಯ, ಸಿದ್ಧರಾಮ ಚಾರಿತ್ರ್ಯ, ಸೋಮನಾಥಚಾರಿತ್ರ್ಯ, ವೀರೇಶಚರಿತೆ ಕಾವ್ಯಗಳಲ್ಲಿ ದೇಸೀ ಸಂವೇದನೆಯ ಭಾಷೆ, ನಿರೂಪಣೆ, ಸಾಂಸ್ಕೃತಿಕ ಬದುಕಿನ ದೃಷ್ಟಿಯಿಂದಲೂ ದೇಸೀಪ್ರಜ್ಞೆ ಹರಳುಗಟ್ಟಿದೆ. ಹಿನ್ನೆಲೆಯಲ್ಲಿ ಮಾರ್ಗಸಾಹಿತ್ಯಪ್ರಕಾರದ ವಿರುದ್ಧ ಬಂಡೆದ್ದ ಹರಿಹರ ಮತ್ತು ರಾಘವಾಂಕರ ಕಾವ್ಯಗಳಲ್ಲಿ ದೇಸೀಯತೆಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಗಮನಿಸಬಹುದಾಗಿದೆ. ಕನ್ನಡ ಕಾವ್ಯಪರಂಪರೆ ವಿಶೇಷವಾಗಿ ಜೈನ, ವೀರಶೈವ, ಹಾಗೂ ವೈದಿಕ ಧರ್ಮಗಳ ಸಾಹಿತ್ಯ ಹಾಗೂ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬೆಳೆದುಬಂದಿದೆ. ಪರಂಪರೆಗೆ ಸೇರಿದ ಕಾವ್ಯಗಳು ಕುಮಾರವ್ಯಾಸನಕರ್ನಾಟಭಾರತ ಕಥಾಮಂಜರಿಮತ್ತು ಲಕ್ಷ್ಮೀಶನಜೈಮಿನಿಭಾರತ’. ಹಳಗನ್ನಡ ಸಾಹಿತ್ಯಕ್ಕಿಂತ ನಡುಗನ್ನಡ ಸಾಹಿತ್ಯವು ಹೆಚ್ಚು ಜನಪರವಾಗಿದೆ,ಎಂಬುದನ್ನು ನಿರೂಪಿಸಿ, ಸಾಹಿತ್ಯ ಕೇವಲ ಪಂಡಿತರಿಗಾಗಿ ಮಾತ್ರವಾಗಿರದೇ, ಜನಸಾಮಾನ್ಯರಿಗಾಗಿ ಯೆಂಬುದನ್ನು ಕಾವ್ಯಗಳು ಸಾಬೀತುಪಡಿಸಿದವು. ದೇಸೀ ಛಂದಸ್ಸಾದ ಭಾಮಿನಿ ಮತ್ತು ವಾರ್ಧಕ ಷಟ್ಪದಿಗಳನ್ನು ಕವಿಗಳು ಕಾವ್ಯ ಮಾಧ್ಯಮವನ್ನಾಗಿಸಿಕೊಂಡಿದ್ದರಿಂದ, ಗಮಕಿಗಳು ಕಾವ್ಯಗಳನ್ನು ಗಮಕ ಶೈಲಿಯಲ್ಲಿ ಹಾಡುತ್ತ ಜನಸಾಮಾನ್ಯರಿಗೆ ಕಾವ್ಯಸಂವಹನ ಮಾಡುತ್ತಿದ್ದರು. ಸಮಾಜ ಅವಲಂಬಿಯಾದ ಸಾಹಿತ್ಯ, ಆಯಾ ಕಾಲದ ಯುಗಧರ್ಮವನ್ನು ತನ್ನ ಒಡಲಲ್ಲಿರಿಸಿಕೊಂಡು ಜನಸಾಮಾನ್ಯರ ಧ್ವನಿಯಾಗಿ ಅಭಿವ್ಯಕ್ತಗೊಂಡವು. ಮಹಾಭಾರತದ ಕಥಾವಸ್ತುವನ್ನೊಳಗೊಂಡ ಕಾವ್ಯಗಳಲ್ಲಿ ಕೃಷ್ಣಕಥೆಯೇ ಮುಖ್ಯವಾಗಿದೆ. ಇಲ್ಲಿ ಈರ್ವರೂ ಭಕ್ತಕವಿಗಳು. ಕಾವ್ಯದುದ್ದಕ್ಕೂ ಕೃಷ್ಣ ಮಹಿಮೆಯ ಲೀಲೆ ನೆಲೆಯಲ್ಲಿಯೇ ವ್ಯಕ್ತವಾಗುತ್ತದೆ. ಕಾವ್ಯದಲ್ಲಿ ಕವಿ ಹೇಳುತ್ತಿರುವುದು ಕೃಷ್ಣನ ಲೀಲೆಗಳನ್ನು, ಆದರೆ ಅದರೊಂದಿಗೆ ಆಯಾಕಾಲದ ಜನಸಾಮಾನ್ಯರ ನಂಬಿಕೆ, ಪವಾಡ, ಮಾಟ-ಮಂತ್ರ ವೇಷಭೂಷಣ, ಉಡುಗೆ-ತೊಡುಗೆ, ಆಟಗಳು, ನಾಟಕ, ಬಯಲಾಟ, ಕೃಷಿ, ಸ್ತ್ರೀ-ಸ್ವಾತಂತ್ರ, ದೇಸಿಗರ ಕಥನತಂತ್ರ, ಪಡೆನುಡಿ, ಗಾದೆ, ಒಗಟು, ಮುಂತಾದ ಅಂಶಗಳೊಂದಿಗೆ ಕಾವ್ಯ ಬೆಸೆದುಕೊಂಡು, ದೇಸೀಯತೆಯೇ ಕಾವ್ಯಗಳ ಪ್ರಧಾನ ಭಿತ್ತಿಯಾಗಿದೆ.  

     ದೇಸೀ ಅಥವಾ ದೇಸೀಯತೆ ಕುರಿತಂತೆ ಕನ್ನಡ ಕಾವ್ಯಗಳ ಹಿನ್ನೆಲೆಯಲ್ಲಿ ಕವಿಗಳ ವ್ಯಾಖ್ಯಾನಗಳನ್ನು ಒಟ್ಟಾರೆಯಾಗಿ ಗಮನಿಸಿದಾಗ, ಕವಿರಾಜಮಾರ್ಗಕಾರ, ಪರಭಾಷೆಯ ಅನುಕರಣವಿಲ್ಲದೇ ಅಚ್ಚಗನ್ನಡದ ಶಬ್ದಗಳನ್ನು ಮನೋಹರವಾಗಿ ಬಳಸುವ ಶುದ್ಧಗನ್ನಡದ ಶೈಲಿ, ಒಂದು ಪ್ರದೇಶದಲ್ಲಿ ಮಾತನಾಡುವ ಭಾಷೆ ದೇಶ್ಯಭಾಷೆ. ವಿಶಾಲವಾದ ಕನ್ನಡ ಜಗತ್ತಿನಲ್ಲಿ ಅನೇಕ ಉಪಭಾಷೆಗಳು ಅಂತರ್ಗತವಾಗಿವೆ. ಅವುಗಳಲ್ಲಿ ಅನೇಕ ವೈಲಕ್ಷಣ್ಯಗಳು ಇರುವುದಾಗಿ ಲಕ್ಷಿಸಿ ಅವುಕನ್ನಡಂಗಳ್ಎಂದು ನಿರ್ವಚಿಸಿಕೊಂಡಿದ್ದಾನೆ. ಕವಿಪಂಪದೇಸೀಎನ್ನುವುದು ಒಂದು ಸೊಗಸು, ಸುಭಗತೆ, ಸಹಜತೆ,ಚಲುವು ಎಂದು ನಿರೂಪಿಸುತ್ತಾನೆ. ಮಾರ್ಗ-ದೇಸೀ ಎಂಬ ಕಾವ್ಯಪ್ರಕಾರಗಳೇ ಇರುವುದಾಗಿ ಹೇಳುತ್ತಾನೆ. ಮತ್ತು ನಾಟ್ಯ ಸಂಗೀತ ಲಲಿತಕಲೆಗಳಲ್ಲಿ ಬಗೆಯ ಭಿನ್ನತೆಯಿದ್ದು, ಅದೊಂದು ಬಗೆಯ ನಾಟ್ಯ ದೇಸೀನೃತ್ಯ ಎಂಬುದಾಗಿಯೂ ಅಭಿಪ್ರಾಯ ಪಟ್ಟಿದ್ದಾನೆ.. 12ನೇ ಶತಮಾನದ ಶಿವಶರಣರ ಸಂವೇದನೆ ಬೇರೆಯಾಗಿ, ಅದನ್ನು ಹೊರತರಲು ಬೇರೆ ದಾರಿಯೊಂದನ್ನು ಹುಡುಕಿದ್ದೊಂದು ಈಗ ಇತಿಹಾಸ. ಅದಕ್ಕಿರುವ ಮುಖ್ಯ ಕಾರಣಗಳೆಂದರೆ ಕಾವ್ಯ ತನ್ನ ಕಾಲದ ಜೀವನ ಮತ್ತು ಪರಿಸರಕ್ಕೆ ಪ್ರತಿಸ್ಪಂದಿಸುತ್ತಿದ್ದುದು. ಅದು ತನ್ನ ಹಿಂದಿದ್ದ ಕಾವ್ಯಕ್ಕೆ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಶರಣರು ಹೇಳುವ ಹಾಗೆಆನುಒಲಿದಂತೆ ಹಾಡುವೆ’ ‘ನಾಲಿಗೆಯನ್ನು ಶಿವನಿಗೆ ಮಾರಿಕೊಂಡಿದ್ದೇನೆ’. ಇವೆಲ್ಲ ಶರಣರ ಬದಲಾದ ದೇಸೀ ಮನೋಧರ್ಮದ ಭಿತ್ತಿಗಳು. ಇಂತಹ ಚಿತ್ರ ಭಿತ್ತಿಯ ಶರಣರು ಜನಸಾಮಾನ್ಯರ ಮನೆ ಬಾಗಿಲನ್ನು ತಟ್ಟಿ ಒಳಹೊಕ್ಕರು. ಹಾಗೆಯೇ ಸಂಸ್ಕೃತದ ಜಾಗಕ್ಕೆ ಕನ್ನಡದ ಮೂಲಕ ಲಗ್ಗೆ ಇಟ್ಟಿದ್ದು ಐತಿಹಾಸಿಕ ದಾಖಲೆ. ದೇಸೀಯತೆ ನಿರಂಕುಶಮತಿಯಾದುದು ದೇಸೀಯತೆಗೆ ಪ್ರಭುತ್ವ ಪ್ರಜ್ಞೆ ಇರುವುದಿಲ್ಲ. ತನ್ನ ಸಮುದಾಯ ತನಗೆ ಬೇಕಾದದ್ದನ್ನು ಎಲ್ಲಿ, ಯಾರಿಂದಲಾದರೂ ಸ್ವೀಕರಿಸಿದರೆ ಅದಕ್ಕೆ ಯಾವ ತಡೆಯನ್ನೂ ಅದು ಒಡ್ಡುವುದಿಲ್ಲ. ನಮ್ಮ ದೇಸೀಯ ಸಂಸ್ಕೃತಿ ನಿರಂಕುಶಮತಿಯಾಗಿಯೇ ವರ್ತಿಸುತ್ತದೆ. ಅನ್ಯ ಸಂಸ್ಕೃತಿಯಿಂದ ಸ್ವೀಕರಿಸಿದ್ದನ್ನು ತನ್ನ ರೂಪಕ್ಕೆ ತಕ್ಕಂತೆ ಯಾರು ಬೇಕಾದರೂ ಅಳವಡಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಜೊತೆಗೆ ತನ್ನ ಪರಂಪರೆಯ ಯಾವುದೇ ಅಂಶವನ್ನು ಬೇರೊಂದು ಸಂಸ್ಕೃತಿ ಆಯ್ಕೆ ಮಾಡಿಕೊಂಡಾಗಲೂ ಜನಪದ ಸಂಸ್ಕೃತಿ ಅಥವಾ ದೇಸೀಯ ಸಂಸ್ಕೃತಿ ತಕರಾರು ತೆಗೆಯುವುದಿಲ್ಲ. ಆದ್ದರಿಂದಲೇ ನಮ್ಮ ಪುರಾಣ, ಪುಣ್ಯಕಥೆ, ಕಾವ್ಯಗಳಲ್ಲೆಲ್ಲ ಬೇರೆ ಬೇರೆ ಸಂಸ್ಕೃತಿಯ ಅಂಶಗಳು ಅಡಕವಾಗಿರುವುದು. ಕಂಡು ಬರುತ್ತದೆ . ಮುಂದೆ ಶಾಸ್ತ್ರ ಗ್ರಂಥಗಳನ್ನು ರಚಿಸಿದ ಕವಿ ನಾಗವರ್ಮ, ಕೇಶರಾಜ, ಭಟ್ಟಾಕಳಂಕರು ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಸ್ಕೃತದ ಚೌಕಟ್ಟನ್ನು ಬಳಸಿದರೂ ಕನ್ನಡದ ನಿಜಸ್ವರೂಪವೇನೆಂದು ವಿವರಿಸಲು ಹೊರಟಿದುದು ಕನ್ನಡಕ್ಕಿರುವ ವೈಶಿಷ್ಟ್ಯವನ್ನು ಎತ್ತಿ ತೋರಿಸುತ್ತದೆ. ‘ದೋಷಮೆನೆ ಗುಣದ ವೋಲುದ್ಭಾವಿಸಿ ಖಂಡ ಪ್ರಾಸಮನಿರಿಸಿ ಪೂರ್ವಾಚಾರ್ಯರು ಯತಿಯನ್ನು ಮಿಕ್ಕರುಎಂಬುದಾಗಿ ಪ್ರಾಚೀನ ಕಾಲದಿಂದಲೇ ಕನ್ನಡಿಗರು ಸ್ವತಂತ್ರ ದೃಷ್ಟಿಯನ್ನು ತೋರಿದ್ದಾರೆ. ಹಳಗನ್ನಡದ , ಕುಳ ಕ್ಷಳಗಳು ಶೃತಿಸಹ್ಯಸಂಧಿ, ವಮಹಪಬೇಧ, ಗಮಕಸಮಾಸ, ಪದೋತ್ತಮ, ಶಿಥಿಲದ್ವಿತ್ವ ಮುಂತಾದ ಕನ್ನಡದ ವಿಶಿಷ್ಟಲಕ್ಷಣಗಳನ್ನು ಗಮನಿಸಿಯೇಅರಿದಲ್ತೆ ಕನ್ನಡಂಎಂದು ಕೇಶಿರಾಜ ಅಭಿಮಾನದಿಂದ ಬೀಗುವುದು ಕನ್ನಡದ ದೇಸೀಯ ನೆಲೆಯಿಂದಲೇ ಎಂಬುದು ಗಮನಾರ್ಹವಾಗಿದೆ. ಕವಿರಾಜಮಾರ್ಗವನ್ನು ಮೊದಲುಮಾಡಿಕೊಂಡು, ದೇಸೀ- ಮಾರ್ಗ ಸಮನ್ವಯಕಾರನಾಗಿ ಗಾಂಭಿರ್ಯದಿಂದ ಕಾವ್ಯ ನಿರ್ವಹಿಸಿದ ಕವಿ ಪಂಪನನ್ನೊಳಗೊಂಡಂತೆ, ಕಾಲಗರ್ಭದ ಹಲವು ಜನ ಕವಿ-ಕಾವ್ಯಗಳ ಹಿನ್ನೆಲೆಯಲ್ಲಿ ದೇಸೀ-ಮಾರ್ಗ ಕುರಿತಂತಹ ವ್ಯಾಖ್ಯಾನಗಳನ್ನೂ, ಮತ್ತು ಆಧುನಿಕ ಸಂದರ್ಭದಲ್ಲಿ ವ್ಯಾಖ್ಯಾತೃ ಮೂಲದಿಂದ ದೇಸೀ-ಮಾರ್ಗ ಕುರಿತಂತೆ ಬಂದಿರುವ ವ್ಯಾಖ್ಯಾನಗಳನ್ನು ನೋಡಬಹುದಾಗಿದೆ. ಕನ್ನಡ ಕಾವ್ಯ ಪರಂಪರೆ ಪ್ರಾಚೀನ ಕಾಲದಿಂದಲೂ ನಮ್ಮ ನಾಡಿನ ಜನಸಮುದಾಯದ ನೈಜ ಬದುಕಿನ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಅನಾವರಣಗೊಳಿಸುತ್ತಾ ಬಂದಿದೆ. ಅಂತಹ ಕಾವ್ಯ ಕಟ್ಟಿಕೊಡುವ ನಮ್ಮ ಬದುಕಿನ ಮೂಲ ಚಹರೆಗಳನ್ನೇ ದೇಸೀಯತೆ ಎನ್ನಲಾಗುತ್ತದೆ. ಹಿನ್ನೆಲೆಯಲ್ಲಿ ದೇಸೀಯತೆ ಎನ್ನುವದು ಒಂದು ಪ್ರದೇಶಕ್ಕೆ ಸಂಬಂಧಪಟ್ಟ, ಆಯಾ ಪ್ರದೇಶದ ಭಾಷೆ, ಜನಸಮುದಾಯದ ಚಿಂತನೆ, ಭಾವನೆ, ಸಂಸ್ಕೃತಿ, ಆಚರಣೆಗಳು. ಇತರರಿಗಿಂತ ಭಿನ್ನವಾದುದು, ವೈದೃಶ್ಯವಾದುದು, ಅಂತಹುದು ಯಾವುದಿದ್ದರೂ ಅದು ದೇಸೀಯತೆ ಎನಿಸಿಕೊಳ್ಳುವುದರ ಜೊತೆಗೆ ಜನಸಮುದಾಯದ ತಮ್ಮತನದ ಪ್ರತೀಕವಾಗಿದೆ.     

 ಗ್ರಂಥ ಋಣ

೧. ಕಲಬುರ್ಗಿ ಎಂ.ಎಂ, ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಪ್ರಕಾಶನ, ಪೂರ್ಣಿಪ್ರಿಂರ‍್ಸ, ಬೆಂಗಳೂರು, 2004.

೨.ಪ್ರಸನ್ನ ದೇಸೀ ಜೀವನ ಪದ್ಧತಿ, ಒಂಟಿದನಿ ಪ್ರಕಾಶನ ಹೆಗ್ಗೋಡು, 2005.

೩.ಜೈನ ಕಾವ್ಯಗಳಲ್ಲಿ ದೇಸೀಯತೆ ಹೊಸ ಓದು (ಸಂ)ಬಾಳಾಸಾಹೇಬ ಲೋಕಾಪುರ , ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2011.

೪.ಮುಗಳಿ ರಂ. ಶ್ರೀ. ತವನಿಧಿ, ಉಷಾ ಸಾಹಿತ್ಯಮಾಲೆ, ಮೈಸೂರು, 1957,

ಮೊಗಳ್ಳಿ ಗಣೇಶ, ‘ದೇಶಿ’ ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗ, ಹಂಪಿ, 1997,

೬. ರಾಜೇಂದ್ರ ಚನ್ನಿ (ಸಂ), ‘ದೇಸೀವಾದ’, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, 1999.

೭. ಕನ್ನಡ ಕಾವ್ಯಪರಂಪರೆಯಲ್ಲಿ  ಜಾನಪದ ಪ್ರಜ್ಞೆ, ಸಂ: ಶೇಖರ ಎಂ.ಎಸ್., ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2008.

೮. ಕನ್ನಡ ಸಾಹಿತ್ಯದಲ್ಲಿ ದೇಸೀಯತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು. 1994.

೯. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ:ಜಿ.ಎಸ್.ಶಿವರುದ್ರಪ್ಪ, ಸಂ.೧. ಪ್ರಸಾರಾಂಗ, ಬೆಂ.ವಿ.ವಿ.೧೯೭೭

 

 

 

 

 

 

 

 

 

 

           

 

 

 

       

  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...