ಭಾನುವಾರ, ಏಪ್ರಿಲ್ 21, 2019

ಕಲ್ಯಾಣ ಕರ್ನಾಟಕ ಪರಿಸರದ ಜೈನ ಸಾಂಸ್ಕೃತಿಕ ನೆಲೆಗಳು : ಸಮೀಕ್ಷೆ (ಜೈನ ಶಾಸನಗಳು-ಸಾಹಿತ್ಯ-ಶಾಸ್ತ್ರ ಕೃತಿಗಳು - ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ) ಡಾ.ಸಿ.ನಾಗಭೂಷಣ


        ಕಲ್ಯಾಣ ಕರ್ನಾಟಕ ಪರಿಸರದ ಜೈನ ಸಾಂಸ್ಕೃತಿಕ ನೆಲೆಗಳು : ಸಮೀಕ್ಷೆ
        (ಜೈನ ಶಾಸನಗಳು-ಸಾಹಿತ್ಯ-ಶಾಸ್ತ್ರ ಕೃತಿಗಳು - ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ)
                                               ಡಾ.ಸಿ.ನಾಗಭೂಷಣ
    ಯಾವುದೇ ನಾಡಿನ ಭಾಷೆ ಧರ್ಮ, ಜನಾಂಗಗಳು ತಮ್ಮದೇ ಆದ ಜೀವನ ವಿಧಾನ, ನಡೆವಳಿಕೆ, ಚಿಂತನಾ ಕ್ರಮಗಳನ್ನು ಸಂಸ್ಕೃತಿ ಎಂಬ ಹೆಸರಿನಲ್ಲಿ  ಅಳವಡಿಸಿಕೊಂಡಿವೆ. ಸ್ಥಳವೊಂದು  ಸಾಂಸ್ಕೃತಿಕ ಕೇಂದ್ರವೆಂದು  ಕರೆಸಿಕೊಳ್ಳುವಲ್ಲಿ  ಅದಕ್ಕೆ ನಮ್ಮ ಮನಸ್ಸಿನಲ್ಲಿ ನಿದಿರ್ಷ್ಟ ಭಾವನೆಯಿರುತ್ತದೆ. ದೂರದ ಬೇರೆ ಬೇರೆ ಸಂಸ್ಕೃತಿಗಳ, ವಿದ್ಯೆಗಳ ಸಂಗಮಸ್ಥಾನವಾಗಿ ಅವೆಲ್ಲವನ್ನೂ ತನ್ನ ಮೂಲ ದ್ರವ್ಯದೊಡನೆ ಅರಗಿಸಿಕೊಂಡು ತನ್ನದೇ ಸಂಸ್ಕೃತಿಯನ್ನು ತನ್ನ ಸುತ್ತ ಮುತ್ತಣ ಪ್ರದೇಶಗಳಿಗೆ ಪಸರಿಸುವ ಕರ‍್ಯವನ್ನು ಒಂದು  ಸಾಂಸ್ಕೃತಿಕ ಕೇಂದ್ರ ಮಾಡುತ್ತದೆ.
     ಭಾರತದಲ್ಲಿ ಜೈನ ಪರಂಪರೆಯೂ ಅತಿ ಪ್ರಾಚೀನವಾದುದು.  ಕನ್ನಡ ನಾಡು ಪ್ರಾಚೀನ ಕಾಲದಿಂದ ಜೈನದರ್ಶನದ ವಾಸಸ್ಥಾನ ಮತ್ತು ಅಭಿವೃದ್ಧಿ ಹೊಂದಿದ ಸ್ಥಾನ. ಕರ್ನಾಟಕದಲ್ಲಿ ಜೈನಧರ್ಮವು ಯಾವ ಕಾಲದಿಂದ ಇತ್ತೆಂದು ಆಧಾರ ಸಹಿತ ಹೇಳುವುದು ಕಷ್ಟ. ‘ವೈದಿಕ ಧರ್ಮದಿಂದ ಪ್ರತ್ಯೇಕವಾಗಿ ಸ್ವತಂತ್ರ ತಳಹದಿಯ ಮೇಲೆ ಭಾರತದಲ್ಲಿ ತಲೆಯೆತ್ತಿದ ಮೊದಲ ಧರ್ಮವೆಂದರೆ ಜೈನ ಧರ್ಮ. ಇದು ಉತ್ತರ ಭಾರತದಲ್ಲಿ  ತಲೆಯೆತ್ತಿದರೂ ದಕ್ಷಿಣ ಭಾರತಕ್ಕೆ ಬಂದು ಕರ್ನಾಟಕದಲ್ಲಿ ಭದ್ರವಾಗಿ ನೆಲೆಯೂರಿತು. ಕ್ರಿ.ಶ.ಪ್ರಾರಂಭದಿಂದ ಹತ್ತು ಹನ್ನೆರಡನೇ ಶತಮಾನಗಳವರೆಗೆ ಕನ್ನಡ ನಾಡಿನ ಸಾಮಾಜಿಕ, ಆರ್ಥಿಕ, ಸಾಹಿತ್ಯಕ ಮತ್ತು ರಾಜಕೀಯ ಜೀವನದ ಮೇಲೆ ಜೈನಧರ್ಮ ಅಚ್ಚಳಿಯದ ಪ್ರಭಾವ ಬೀರಿದೆ. ಕರ್ನಾಟಕದ ಪ್ರಾಚೀನ ಮತ್ತು ಮಹತ್ವಪೂರ್ಣವಾದ ಧರ್ಮ ಜೈನಧರ್ಮ. ಇದರ ಪರಂಪರೆಯು ಉನ್ನತವಾಗಿದ್ದು ರಾಜಕೀಯ, ಧಾರ್ಮಿಕ, ನೈತಿಕ, ಸಾಹಿತ್ಯಕ ಮತ್ತು ಕಲಾ ಕ್ಷೇತ್ರಗಳಲ್ಲಿ ಸದಾ ಸ್ಮರಣೀಯ ಪರಿಣಾಮವನ್ನು ಬೀರಿದೆ. ಕರ್ನಾಟಕದ ಜೈನಧರ್ಮದ ಇತಿಹಾಸದಲ್ಲಿ ಗಂಗರ ಕಾಲವು ಸ್ಮರಣೀಯವಾದುದು. ನಂತರ ಮಾನ್ಯಖೇಟದ ರಾಷ್ಟ್ರಕೂಟರೂ ಜೈನ ಧರ್ಮಕ್ಕೆ ಉದಾರ ರಾಜಾಶ್ರಯ ನೀಡಿದರು. ಭಾಂಡಾರಕರ್ ಅವರ ಅಭಿಪ್ರಾಯದಂತೆ ಬಾದಾಮಿ ಚಾಲುಕ್ಯರ ಕಾಲದಲ್ಲಿಯೂ ಜೈನ ಧರ್ಮವು ಪ್ರಬಲವಾಗಿತ್ತೆಂದು ತಿಳಿದು ಬರುತ್ತದೆ. ಕಲ್ಯಾಣದ ಚಾಳುಕ್ಯರ ಹಾಗೂ ಹಳೇಬೀಡಿನ ಹೊಯ್ಸಳರು ಜೈನ ಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಸ್ಫೂರ್ತಿಯಿಂದಲೇ ಜಿನ ಧರ್ಮದ ಪ್ರಸಾರ ಮಾಡಿದರು. ಮುಂದೆ ೧೪ನೇ ಶತಮಾನದಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯದ ಅರಸರು ಪರಮತ ಸಹಿಷ್ಣುತೆಯನ್ನು ತೋರಿ ಜೈನ ಧರ್ಮಕ್ಕೆ ಆಶ್ರಯ ನೀಡಿದರು.
    ಪ್ರಾಚೀನ ಕಾಲದಿಂದಲೂ ಕಲ್ಯಾಣ ಕರ್ನಾಟಕ ಪರಿಸರದಲ್ಲಿ ಅಸ್ತಿತ್ವದಲ್ಲಿದ್ದ ಜೈನ, ಮತದ ಬಗ್ಗೆ ಶಾಸನಗಳು ಬೆಳಕು ಚೆಲುತ್ತವೆ. ಪೂರ್ವ ಕಾಲದಿಂದಲೂ ಜೈನಧರ್ಮವು ಈ ಪ್ರದೇಶದಲ್ಲಿ ನೆಲೆಗೊಂಡಿದ್ದುದ್ದಕ್ಕೆ ಆಧಾರಗಳಿವೆ. ಕಲ್ಯಾಣ ಪರಿಸರದ ಮಾರ್ಕಲ್, ಮೊರಖಂಡಿ, ಗೋರ್ಟಾ, ಹುಲಸೂರು, ಗುಡೂರು, ಕಮಠಾಣ ಭಾಲ್ಕಿ ಮುಂತಾದ ಗ್ರಾಮಗಳು ಜೈನ ಕೇಂದ್ರಗಳಾಗಿದ್ದವು ಎಂಬುದು ಅಲ್ಲಿ ದೊರೆತ ಶಾಸನಗಳು ಮತ್ತು ಶಿಲ್ಪಗಳಿಂದ ತಿಳಿದುಬರುತ್ತವೆ. ಬಸದಿಗಳ ನಿರ್ಮಾಣ, ಯಕ್ಷ-ಯಕ್ಷಿಣಿಯರ ಆರಾಧನೆ ಈ ಭಾಗದಲ್ಲಿತ್ತು ಎಂಬುದಾಗಿ ತಿಳಿದುಬರುತ್ತದೆ. ಜೈನಧರ್ಮಕ್ಕೆ ಸಂಬಂಧಪಟ್ಟಂತೆ ಇಲ್ಲಿ ದೊರೆಯುವ ಶಾಸನಗಳು ಹಾಗೂ ಶಿಲ್ಪಗಳು ಕ್ರಿ.ಶ. ೧೦ನೇ ಶತಮಾನದಿಂದ ೧೨ನೇ ಶತಮಾನಕ್ಕೆ ಸೀಮಿತವಾಗಿವೆ. ಗೋರ್ಟಾವು ಹನ್ನೊಂದನೆಯ ಶತಮಾನಕ್ಕಿಂತ ಪೂರ್ವದಲ್ಲಿ ಜೈನ ಕೇಂದ್ರವಾಗಿತ್ತು ಎಂಬುದನ್ನು ಅಲ್ಲಿಯ ಶಾಸನಗಳು ಸ್ಥಿರಪಡಿಸುತ್ತವೆ. ಕ್ರಿ.ಶ.೧೧೩೦ರ ಶಾಸನವು ಅಭಿನವ ಗಣಧರರೆಂದು ಖ್ಯಾತಿ ಪಡೆದ ತ್ರಿಭುವನ ಸೇನರೆಂಬ ಜೈನಮುನಿ ನಿರ್ವಾಣ ಪಡೆದ ವಿಷಯವನ್ನು ಕೀರ್ತಿಸಿದೆ. ಗೋರ್ಟಾದಲ್ಲಿರುವ ಈಗಿನ ಮಹಾದೇವ ದೇವಾಲಯವು ಹಿಂದೆ ಜೈನ ಬಸದಿಯಾಗಿತ್ತು ಎಂಬುದಕ್ಕೆ ಆ ದೇಗುಲದ ಗರ್ಭಗೃಹದ ಇಕ್ಕೆಲಗಳ ಮಾಡಿನ ಮೇಲೆ ಖಂಡರಿಸಿದ ೩ ಸಾಲುಗಳ ಜೈನಶಾಸನಗಳೇ ಸಾಕ್ಷಿಯಾಗಿವೆ. ಹನ್ನೆರಡನೇ ಶತಮಾನದ ತರುವಾಯ ಜಿನಬಸದಿ ಶೈವಾಲಯವಾಗಿ ಪರಿವರ್ತಿತವಾಗಿರಬೇಕು.  ಕಮಠಾಣವು  ಜೈನ ಮುನಿಗಳ ನಿಸದಿ ಕೇಂದ್ರವಾಗಿದ್ದಿತು ಎಂಬುದನ್ನು ಮತ್ತು ಜೈನಮುನಿಗಳು ಮತ್ತು ಶ್ರಾವಕರು ಸಲ್ಲೇಖನ ವ್ರತಧರಿಸಿ ಇಲ್ಲಿ  ಸಮಾಧಿ ಮರಣ ಹೊಂದಿದ್ದರ ಬಗೆಗೆ  ಈ ಗ್ರಾಮದ ಪರಿಸರದಲ್ಲಿರುವ ಪ್ರಾಚೀನ ಪಾದಚಿನ್ಹೆಗಳ ನಿಸಿದಿ ಕುರುಹುಗಳ ಮೂಲಕ ತಿಳಿಯ ಬಹುದಾಗಿದೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕಾಲಾವಧಿಯಲ್ಲಿ ಇಲ್ಲಿ ಜಿನಾಲಯವು ನಿರ್ಮಿತವಾಗಿದ್ದು ಕಮಠ ಪಾರ್ಶ್ವನಾಥ ಜಿನಾಲಯ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬುದರ ಬಗೆಗೆ ಶಾಸನಗಳಲ್ಲಿ ಉಲ್ಲೇಖ ಇದೆ. ಈಗಲೂ ಇಲ್ಲಿಯ ಜಿನಾಲಯದ ಗರ್ಭಗೃಹದಲ್ಲಿ  ಪ್ರತಿಷ್ಠಾಪಿತವಾಗಿರುವ ಪಾರ್ಶ್ವನಾಥ ತೀರ್ಥಂಕರನ ವಿಗ್ರಹವು ಇಂದಿಗೂ ಮೂಲಸ್ವರೂಪದಲ್ಲಿಯೇ ಇದೆ. ಈ ಶಿಲ್ಪದ ಪಾದಪೀಠದ ಮೇಲಿನ ಶಾಸನದ ಬರೆಹದಿಂದ, ಈ ಶಿಲ್ಪವನ್ನು ಶ್ರೀ ಮೂಲಸಂಘ ಪರಂಪರೆಯ ರೇಚಿಶೆಟ್ಟಿ ಎಂಬಾತನು ಪ್ರತಿಷ್ಠಾಪಿಸಿದ ಎಂಬುದಾಗಿ ತಿಳಿದು ಬರುತ್ತದೆ.  ಸೇಡಂನಲ್ಲಿ ದೊರೆತ ಶಾಸನದಿಂದ ಜೈನ ಯಾಪನೀಯ ಸಂಘದ ಗುಣಭದ್ರಾಚಾರ್ಯರು ಸಲ್ಲೇಖನ ವ್ರತ ಕೈಗೊಂಡರು ಎಂಬುದಾಗಿ ತಿಳಿದುಬರುತ್ತದೆ. ಕಲಬುರ್ಗಿ ಜಿಲ್ಲೆಯ ಬಂಕೂರು, ಹುಣಿಸಿ, ಹಡಗಿಲೆಗಳು ಪ್ರಮುಖ ಜೈನ ಕೇಂದ್ರಗಳಾಗಿದ್ದವು ಎಂಬುದನ್ನು ಅಲ್ಲಿ ದೊರೆತ ಶಾಸನಗಳಿಂದ ತಿಳಿಯಬಹುದಾಗಿದೆ. ಕೆಂಬಾವಿಯ ಕ್ರಿ.ಶ. ೧೩೪೦ರ ಶಾಸನವೊಂದು ಶ್ರೀಮೂಲ ಸಂಘ ಸರಸ್ವತೀ ಗಚ್ಫ ಬಲಾತ್ಕಾರಗಣ ಕೊಂಡಕುಂದಾನ್ವಯ ರಾಜಗುರು ಮಂಡಲಾಚಾರ್ಯ ಅಮರಕೀರ್ತಿ ಭಟ್ಟಾರಕ ದೇವರನ್ನು ಅವರ ಶಿಷ್ಯ ಸಕಲ ವಿದ್ವಜ್ಜನ ಚಕ್ರವರ್ತಿ ಎನಿಸಿದ ಮಾಘಣನಂದಿಯ ಶಿಷ್ಯ ಚಂದ್ರದೇವನು ನಿಷಧಿಕಾ ಸ್ತಂಭ ನಿಲ್ಲಿಸಿದ ವಿಷಯವನ್ನು ತಿಳಿಸುತ್ತದೆ. ಆರನೆಯ ವಿಕ್ರಮಾದಿತ್ಯನ ರಾಣಿಯರಾದ ಧಾರಲದೇವಿ ಮತ್ತು ಜಕ್ಕಲದೇವಿಯರು ಜೈನಮತೀಯರಾಗಿದ್ದು ಜೈನಬಸದಿಯ ನರ‍್ಮಾಣ ಮತ್ತು ಜಿನಾಲಯಕ್ಕೆ ಬಿಟ್ಟ ದತ್ತಿಯ ವಿವರದ ಬಗೆಗೆ ಕ್ರಿ.ಶ. ೧೧೦೬ರ ಬೊಮ್ಮನಹಳ್ಳಿ ಶಾಸನ ಮತ್ತು ಕ್ರಿ.ಶ. ೧೦೯೪ರ ಇಂಗಳಿಗೆ ಶಾಸನಗಳು ತಿಳಿಸುತ್ತವೆ. ಶಾಸನಗಳಲ್ಲಿಯ ಉಲ್ಲೇಖದ ಪ್ರಕಾರ ಈ ಭಾಗದಲ್ಲಿ ಯಾಪನೀಯ ಪಂಥವು ಅಸ್ತಿತ್ವದಲ್ಲಿತ್ತು ಎಂಬುದಾಗಿ ತಿಳಿದುಬರುತ್ತದೆ.
   ನಾಗಾವಿ: ನಾಗಾವಿಯನ್ನು ವ್ಯವಸ್ಥಿತವಾದ ಘಟಿಕಾಲಯದ ಕೇಂದ್ರವಾಗಿದ್ದುದು ಎಲ್ಲರೂ ತಿಳಿದಿರತಕ್ಕದ್ದೇ. ಆದರೆ ನಾಗಾವಿಗೆ ಕೈಗೊಂಡ ಕ್ಷೇತ್ರಕಾರ್ಯದ ಅವಧಿಯಲ್ಲಿ ದೊರೆತ ಜೈನಧರ್ಮಕ್ಕೆ ಸಂಬಂಧಿಸಿದ ಕೆಲವೊಂದು ಅವಶೇಷಗಳಿಂದ ಅಗ್ರಹಾರ, ಘಟಿಕಾಲಯವಾಗುವುದಕ್ಕಿಂತ ಮೊದಲು ಜೈನಮತದ ತಾಣವೂ ಆಗಿತ್ತು ಎಂಬುದಾಗಿ ತಿಳಿದುಬಂದಿದೆ. ನಾಗಾವಿಯ ಈಗಿನ ಮಧುಸೂದನ ದೇವಾಲಯದ ಹಿಂಬದಿಯ ಅರ್ಧ ಕಿ.ಮೀ. ಅಂತರದಲ್ಲಿ ಪಾಳು ಬಿದ್ದ ಕಟ್ಟಡಗಳ ಅವಶೇಷಗಳು ಎಲ್ಲಾ ಕಡೆ ಹರಡಿದ್ದು, ಅವಶೇಷಗಳನ್ನು ಕೆದಕಿ ಪರಿಶೀಲಿಸಿದಾಗ ಜೈನತೀರ್ಥಂಕರ ವಿಗ್ರಹ ಹಾಗೂ ಇನ್ನಿತರ ಕುರುಹುಗಳು ಕಂಡುಬಂದಿವೆ. ಈ ಪಾಳುಬಿದ್ದ ಜಿನಾಲಯದಲ್ಲಿ  ತೀರ್ಥಂಕರ ಶಿಲ್ಪಗಳ ಕಿರುಗಾತ್ರದ ಕಂಬವಿದೆ.  ಈ ಜೈನ ದೇಗುಲದಲ್ಲಿ ಐದು ಹೆಡೆಗಳುಳ್ಳ ನಾಗದೇವತೆಯ ಶಿಲ್ಪವಿದೆ. ಈ ಜಿನಾಲಯವನ್ನು  ಬಂಗಾರದ ಗುಡಿಯೆಂದೂ ಕರೆಯುತ್ತಾರೆ. ಈ ಅವಶೇಷಗಳಿರುವ ಸ್ಥಳವನ್ನು ಉತ್ಖನನ ಮಾಡಿದರೆ ಜೈನಧರ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಅವಶೇಷಗಳು ದೊರೆಯುವ ಸಾಧ್ಯತೆ ಇದೆ. ಹೀಗಾಗಿ ನಾಗಾವಿಯು, ಅಗ್ರಹಾರ ಘಟಿಕಾಲಯವಾಗುವುದಕ್ಕಿಂತ ಮೊದಲು ಜೈನಕೇಂದ್ರವೂ ಆಗಿದ್ದಿತು ಎಂಬಲ್ಲಿ ಸಂದೇಹವೇ ಇಲ್ಲ. ೮,,೧೦ನೇ ಶತಮಾನದ ಅವಧಿಯಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಷ್ಟ್ರಕೂಟರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಜೈನಧರ್ಮವು ಪ್ರಮುಖಸ್ಥಾನ ಗಳಿಸಿಕೊಂಡಿದ್ದನ್ನು ಆ ಕಾಲದ ಶಾಸನಗಳು ಸಮರ್ಥಿಸಿವೆ. ಮಾನ್ಯಖೇಟದ ಪರಿಸರದಲ್ಲಿಯೇ ನಾಗಾವಿಯು ಇದ್ದುದರಿಂದ ಜೈನಕೇಂದ್ರವೂ ಆಗಿದ್ದಿತು ಎಂದು ಹೇಳಬಹುದು. ದೊರೆತಿರುವ ಹಾಗೂ ಉತ್ಖನನ ಮಾಡಿದರೆ ದೊರೆಯುವ ಅವಶೇಷಗಳನ್ನು ಪರಿಶೀಲಿಸಿದರೆ ಜೈನಧರ್ಮದ ಯಾವ ಶಾಖೆ ಇಲ್ಲಿ ಅಸ್ತಿತ್ವದಲ್ಲಿ ಇದ್ದಿತು ಎಂಬುದು ತಿಳಿದುಬರುತ್ತದೆ. ಸುತ್ತಮುತ್ತಲ ಪರಿಸರದಲ್ಲಿ ಯಾಪನೀಯ ಪಂಥ ಇದ್ದುದರ ಬಗೆಗೆ ಉಲ್ಲೇಖ ಇರುವುದರಿಂದ ಇಲ್ಲಿಯೂ ಯಾಪನೀಯ ಪಂಥ ಇದ್ದಿರಬಹುದೆಂದು ಊಹಿಸಲು ಅವಕಾಶ ಇದೆ.
ಮಳಖೇಡ:
ಕರ್ನಾಟಕ ರಾಜ್ಯದ ಗುಲಬರ್ಗಾ ಜಿಲ್ಲೆಯ ಸೇಡಮ್ ತಾಲ್ಲೂಕಿನಲ್ಲಿ ಕಾಗಿಣಾ ನದಿ ದಡದಲ್ಲಿರುವ ಒಂದು ಪ್ರಸಿದ್ಧ  ಜೈನ ಐತಿಹಾಸಿಕ ಸ್ಥಳ. ಮಾನ್ಯಖೇಟ ಎಂಬುದು ಐತಿಹಾಸಿಕ ಹೆಸರು. ಮೊದಲಿಗೆ ರಾಷ್ಟ್ರಕೂಟ ಸಾಮ್ರಾಜ್ಯದ, ಅನಂತರ ಕೆಲಕಾಲ ಕಲ್ಯಾಣದ ಚಾಳುಕ್ಯರ ರಾಜಧಾನಿಯಾಗಿತ್ತು. ಮಳಖೇಡದ ಮೊದಲ ಉಲ್ಲೇಖ ಮಳಕೇಟಕ ಎಂದು ಪೂಗವರ್ಮನ ಮೂಧೋಳ ತಾಮ್ರಶಾಸನದಲ್ಲಿ ಬಂದಿದೆ.
  ಅರ್ವಾಚೀನ ಕೃತಿ ಹರಿಭದ್ರಸೂರಿಯ ಸಮ್ಯಕ್ತ್ವ ಸ್ತಪತಿ ಕೃತಿಯು  ಮಳಖೇಡ ಕ್ರಿ.ಶ.ಸು. ೧ನೆಯ ಶತಮಾನದಿಂದಲೇ ಜೈನಧರ್ಮದ ಕೇಂದ್ರವಾಗಿತ್ತೆಂದು ತಿಳಿಸುತ್ತದೆ.  ಈ ಕೃತಿಯ ಉಲ್ಲೇಖದ ಪ್ರಕಾರ ಉತ್ತರ ಭಾರತದಿಂದ ಪ್ರಸಿದ್ಧ ಜೈನಗುರು ಪಾದಲಿಪ್ತಾಚಾರ್ಯರು ಕ್ರಿ.ಶ. ೧ ನೇಶತಮಾನದಲ್ಲಿ ದಕ್ಷಿಣಕ್ಕೆ ಬಂದಾಗ ಮಾನ್ಯಖೇಟದಲ್ಲಿ ಜೈನಾಚಾರ್ಯರಿದ್ದುದ್ದನ್ನು ದಾಖಲಿಸಿದ್ದಾನೆ.  ಕಥಾಕೋಶ ಹಾಗೂ ಚರಿತಗ್ರಂಥಗಳು ಅಕಲಂಕ ಜೈನಮುನಿ ಈ ಸ್ಥಳದವನೆಂದು ಉಲ್ಲೇಖಿಸಿವೆ. ಕನ್ನಡದ ಮೊದಲ ಕವಿಚಕ್ರವರ್ತಿ ಪೊನ್ನ ಕವಿಯು ೩ನೆಯ ಕೃಷ್ಣನ ಅಸ್ಥಾನದಲ್ಲಿದ್ದವನು. ಜ್ವಾಲಾಮಾಲಿನಿ ಕಲ್ಪ, ಶ್ರುತಾವತಾರ ಮೊದಲಾದವನ್ನು ರಚಿಸಿದ ಇಂದ್ರನಂದಿ ಮತ್ತು ಪ್ರಾಕೃತದ (ಅಪಭ್ರಂಶ) ಪ್ರಸಿದ್ಧ ಮಹಾಕವಿ  ಪುಷ್ಪದಂತ ರಾಷ್ಟ್ರಕೂಟ ಚಕ್ರವರ್ತಿಯ ಅಸ್ಥಾನದಲ್ಲಿದ್ದರು.
    ರಾಷ್ಟ್ರಕೂಟ ದೊರೆ ಮುಮ್ಮಡಿ ಗೋವಿಂದ ( ಕ್ರಿ.ಶ.೭೯೩-೮೧೪)ನ ಆಳ್ವಿಕೆಯ ಕಾಲದಲ್ಲಿ ತನ್ನ ಸಾಮ್ರಾಜ್ಯವನ್ನು  ದಕ್ಷಿಣದಲ್ಲಿ ವಿಸ್ತರಿಸಿದ ಹಿನ್ನೆಲೆಯಲ್ಲಿ ಆಡಳಿತದ ಅನುಕೂಲಕ್ಕಾಗಿ ಗುಲಬರ್ಗಾ ಜಿಲ್ಲೆಯ ಸೇಡಂ ತಾಲೋಕಿನ ಮಾನ್ಯಖೇಟ ಅಂದರೆ ಈಗಿನ ಮಳಖೇಡದಲ್ಲಿ ರಾಜಧಾನಿಯನ್ನು ಸ್ಥಾಪಿಸಲು ಆರಿಸಿ ಕೊಂಡನು. ಈತನ ಉತ್ತರಾಧಿಕಾರಿಯಾಗಿದ್ದ  ಅಮೋಘವರ್ಷನು ಕ್ರಿ.ಶ.೮೧೪ ರಲ್ಲಿ ಮಾನ್ಯಖೇಟವನ್ನು ರಾಜಧಾನಿ ನಗರವನ್ನಾಗಿ ಮಾರ್ಪಡಿಸಿ ಕೊಂಡನು. ಈ ಮಳಖೇಡವು ರಾಷ್ಟ್ರಕೂಟರ ರಾಜಧಾನಿ ಆಗಿರಲಿಲ್ಲವೆಂಬ ಅನಿಸಿಕೆಯನ್ನು  ಕೆಲವು ವಿದ್ವಾಂಸರು  ವ್ಯಕ್ತಪಡಿಸಿದ್ದರೂ ಲಭ್ಯವಿರುವ ಐತಿಹಾಸಿಕ, ವಾಸ್ತುಶಿಲ್ಪ ಹಾಗೂ ಸಾಹಿತ್ಯಕ ಆಕರಗಳು ರಾಷ್ಟ್ರಕೂಟರ ರಾಜಧಾನಿ ಎಂಬುದನ್ನು ಪುಷ್ಠೀಕರಿಸಿವೆ. ಮಳಖೇಡದ ಕೋಟೆಯ ರಾಜದ್ವಾರದ ಲಲಾಟದಲ್ಲಿ ಪರ್ಯಾಂಕಸದಲ್ಲಿ ಕುಳಿತಿರುವ ಪಾರ್ಶ್ವನಾಥರ ವಿಗ್ರಹ ಇರುವುದನ್ನು ಕಾಣಬಹುದಾಗಿದೆ.ರಾಜದ್ವಾರದ ದ್ವಾರಶಾಖೆಗಳು ಕಲಾತ್ಮಕತೆಯಿಂದ ಕೂಡಿವೆ. ಅಮೋಘವರ್ಷನ ಆಳ್ವಿಕೆಯ ಕಾಲದಲ್ಲಿ ಮಳಖೇಡವು ಪ್ರಮುಖ ಜೈನ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮಿದ್ದಿತು. ಮಳಖೇಡವು ನೃಪತುಂಗನ ಕಾಲಾವಧಿಯಲ್ಲಿ  ಜೈನ ಕಲೆ ಮತ್ತು ಸಾಹಿತ್ಯಗಳ ನೆಲೆವೀಡಾಗಿದ್ದಿತು. ಉತ್ಕೃಷ್ಟ ಕಾವ್ಯಗಳನ್ನು ರಚಿಸಿದ್ದ ಕವಿ ಪಡೆಯು ಅಲ್ಲಿದ್ದಿತು. ಜಿಲ್ಲೆಯ ಮಳಖೇಡದ ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ಅವರ ಆಶ್ರಯದಲ್ಲಿದ್ದ ಜೈನಾಚಾರ್ಯರಿಂದ ಸಂಸ್ಕೃತದಲ್ಲಿ ಸ್ವತಂತ್ರ ಕೃತಿಗಳ ರಚನೆಯ ಜೊತೆಗೆ ಟೀಕಾ-ವ್ಯಾಖ್ಯಾನ ಸಾಹಿತ್ಯ ಸೃಷ್ಟಿಯಾಗಿದೆ. ದಂತಿದುರ್ಗನ ಕಾಲದಲ್ಲಿದ್ದ ಅಕಲಂಕರು ತತ್ವಾರ್ಥ ರಾಜವಾರ್ತಿಕೆ ಎಂಬ ಟೀಕಾಗ್ರಂಥವನ್ನು, ಅಷ್ಟಶತೀ, ನ್ಯಾಯ ವಿನಿಶ್ಚಯ ಪ್ರಮಾಣ ಸಂಗ್ರಹ. ಸಿದ್ಧಿ ವಿನಿಶ್ಚಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳಲ್ಲಿ ಜೈನಸಿದ್ಧಾಂತದ ಸಾರ ವ್ಯಕ್ತವಾಗಿದೆ. ವೀರಸೇನಾಚಾರ್ಯರು (ಕ್ರಿ.ಶ.೮೧೪) ೭೨೦೦೦ ಶ್ಲೋಕಗಳುಳ್ಳ ಧವಲ ಎಂಬ ಪ್ರಸಿದ್ಧ ಕೃತಿಯನ್ನು ಪ್ರಾಕೃತದಲ್ಲಿ ರಚಿಸಿದ್ದಾರೆ.  ಅಮೋಘವರ್ಷನ ಕಾಲದಲ್ಲಿದ್ದ ಜಿನಸೇನಾಚಾರ್ಯರು(ಕ್ರಿ.ಶ.೮೩೭) ಸಂಸ್ಕೃತದ ಆದಿಪುರಾಣ (ಮಹಾ ಪುರಾಣದ ಪೂರ್ವಾರ್ಧ). ಜಿನೇಂದ್ರ ಗುಣ ಸಂಸ್ತುತಿ ವರ್ಧಮಾನ ಪುರಾಣ, ಜಯಧವಲಾ ಟೀಕೆ, ಪಾರ್ಶ್ವಾಭ್ಯುದಯ ಮುಂತಾದ ಕಾವ್ಯಗಳನ್ನು ರಚಿಸಿದ್ದಾರೆ. ಮಹಾವೀರಾಚಾರ್ಯ ನೆಂಬ(ಕ್ರಿ.ಶ.೮೭೦) ಗಣಿತ ಶಾಸ್ತ್ರಜ್ಞನು ಗಣಿತಸಾರ ಸಂಗ್ರಹ ಎಂಬ ಶಾಸ್ತ್ರ ಕೃತಿಯನ್ನು ರಚಿಸಿದ್ದಾನೆ. ಈ ಸಂಸ್ಕೃತ ಗ್ರಂಥದಲ್ಲಿ ೧೧೦೦ ಸಂಸ್ಕೃತ ಶ್ಲೋಕಗಳಿವೆ. ಈ ಕೃತಿಯು ಆಗಿನ ಕಾಲದ ಅನೇಕ ವಿದ್ಯಾ ಕೇಂದ್ರಗಳಲ್ಲಿ ಪಠ್ಯವಾಗಿದ್ದುದಾಗಿ ತಿಳಿದು ಬರುತ್ತದೆ.  ಈ ಕೃತಿಯ ಜೊತೆಗೆ ಷಟ್ ತ್ರಿಂಶಿಕ, ಕ್ಷೇತ್ರಗಣಿತ, ಚತ್ತೀಸಪೂರ್ವ, ಉತ್ತರ ಪತಿಸಹ ಎಂಬ ಶಾಸ್ತ್ರಗ್ರಂಥಗಳನ್ನು ಬರೆದಿರುವುದಾಗಿ ತಿಳಿದು ಬರುತ್ತದೆ. ಮೂರನೆಯ ಅಮೋಘವರ್ಷ ಮತ್ತು ಮೂರನೆಯ ಕೃಷ್ಣನ ಕಾಲದಲ್ಲಿದ್ದ ಇಂದ್ರನಂದಿಯು (ಕ್ರಿ.ಶ.೯೩೦) ಮಳಖೇಡದಲ್ಲಿದ್ದು, ಸಮಯಭೂಷಣ, ಶ್ರುತಾವತಾರ,ನೀತಿಸಾರ,ಶ್ರುತಪಂಚಮಿ ಹಾಗೂ ಜ್ವಾಲಮಾಲಿನಿಕಲ್ಪ ಕೃತಿಗಳನ್ನು ರಚಿಸಿದ್ದಾರೆ. ಈತ ತಾನು ಬರೆದ ಸಂಸ್ಕೃತ ಕೃತಿಗೆ ತಾನೇ ಕನ್ನಡದಲ್ಲಿ  ಟೀಕೆಯನ್ನು ಬರೆದಿರುವ ಬಗೆಗೆ ವಿದ್ವಾಂಸರು ಅಭಿಪ್ರಾಯವನ್ನು ತಾಳಿದ್ದಾರೆ. ಇಂದ್ರನಂದಿ ಪಂಪಪೂರ್ವಯುಗದ ಕನ್ನಡದ ಟೀಕಾಕಾರ ಎಂಬ ಅಭಿಪ್ರಾಯವನ್ನು ಎಂ.ಎಂ.ಕಲಬುರ್ಗಿಯವರು ತಾಳಿದ್ದಾರೆ. ಕ್ರಿ.ಶ.೯೭೫ರಲ್ಲಿ ಸಾಧುಸೇನಪಂಡಿತನು ಕೆಲವು ಕಾಲ ಕುಪಣದಲ್ಲಿದ್ದು, ರಾಜಪೂಜಿತನಾಗಿ ತನ್ನ ಅವಸಾನ ಕಾಲದಲ್ಲಿ ಮಾನ್ಯಖೇಟದ ಏಕಚಟ್ಟುಗದ ಬಸದಿಯಲ್ಲಿ ಸನ್ಯಾಸ ಸ್ವೀಕರಿಸಿ ಮೋಕ್ಷ ಹೊಂದ್ದಿದ್ದರ ಬಗೆಗೆ ಕೊಪ್ಪಳದ ಶಾಸನದಿಂದ ತಿಳಿದು ಬರುತ್ತದೆ.   ಉಗ್ರಾದಿತ್ಯನು ಕಲ್ಯಾಣಕಾರಕ ಎಂಬ ವೈದ್ಯಗ್ರಂಥವನ್ನು ಬರೆದಿರುವುದಾಗಿ ತಿಳಿದು ಬರುತ್ತದೆ. ನೃಪತುಂಗನ ಆಸ್ಥಾನ ಕವಿಯಾಗಿದ್ದ ಪಾಲ್ಯಕೀರ್ತಿ ಅಥವಾ ಶಾಕಟಾಯನನು ಶಬ್ದಾನುಶಾಸನ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದ್ದಾನೆ. ಇವನ ವ್ಯಾಕರಣ ಜ್ಞಾನವನ್ನು ಮನಗಂಡ ಜನತೆ ಇವನನ್ನು ಪುರಾತನ ಶಾಕಟಾಯನ ಹೆಸರಿನಿಂದ ಗುರುತಿಸುತ್ತಾ ಬಂದಿದ್ದಾರೆ. ಮಾನ್ಯಖೇಟದ ನೃಪತುಂಗನ ಆಸ್ಥಾನದಲ್ಲಿದ್ದ  ಶ್ರೀವಿಜಯನು ಕವಿರಾಜಮಾರ್ಗ ಎಂಬ ಅಲಂಕಾರ ಕೃತಿಯನ್ನು ರಚಿಸಿದ್ದಾನೆ. ಜೈನ ಕವಿಯಾದ ಈತನೇ ಕನ್ನಡದಲ್ಲಿ ಸಾಹಿತ್ಯ ಕೃತಿ ರಚನೆ ಶ್ರೀಕಾರ ಹಾಕಿದವನು.
      ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೋಕಿನ ಕೇಶವಾರ ಗ್ರಾಮವು ಪ್ರಾಚೀನ ಕಾಲದಿಂದಲೂ ಅದರಲ್ಲಿಯೂ ಬದಾಮಿ ಚಾಲುಕ್ಯರ ಕಾಲದಲ್ಲಿಯೇ ಜೈನಧರ್ಮದ ಕೇಂದ್ರವಾಗಿ ಬೆಳೆದಿದ್ದನ್ನು ಹಂಪನಾ ರವರು ತಮ್ಮ ಸಂಶೋಧನೆಯ ಮೂಲಕ ಗುರುತಿಸಿದ್ದಾರೆ. ಇಲ್ಲಿ ಎರಡು ಜಿನಾಲಗಳು ಇದ್ದು ವಿಶಾಲವಾದ ಪ್ರಾಕಾರದಿಂದ ಕೂಡಿದ್ದಿತು.ಇನ್ನೊಂದು ಹಿರಿಯ ಬಸದಿಯು ಈ ಬಸದಿಯ ಸಮೀಪದಲ್ಲಿಯೇ ಕಂಡುಬರುತ್ತಿದ್ದು ಅದು ಹಾಳಾಗಿರುವುದಾಗಿ ಇವರು ಉಲ್ಲೇಖಿಸಿದ್ದಾರೆ. ಈಗಲೂ ಈ ಭಾಗದಲ್ಲಿ ಜೈನ ವಾಸ್ತು ಶಿಲ್ಪದ ಕುರುಹುಗಳ ಅವಶೇಷಗಳು ಕಂಡು ಬರುತ್ತವೆ. ಕೇಶವಾರದಲ್ಲಿ ದೊರೆತಿರುವ ಅಪೂರ್ವವಾದ ಜೈನಯಕ್ಷ ಶಿಲ್ಪವು  ಬದಾಮಿ ಚಾಲುಕ್ಯರ ಕಾಲದ್ದು ಎಂಬುದಾಗಿ ಹಂಪನಾ ಅವರು ಗುರುತಿಸಿದ್ದಾರೆ.
    ಕರ್ನಾಟಕಕ್ಕೆ ಬಹಳ ಪ್ರಾಚೀನ ಕಾಲದಲ್ಲಿಯೇ ಪ್ರವೇಶಿಸಿದ ಜೈನಧರ್ಮ ರಾಯಚೂರು ಜಿಲ್ಲೆಯಲ್ಲಿಯೂ  ಅಸ್ತಿತ್ವದಲ್ಲಿದ್ದು ಸಾಂಸ್ಕೃತಿಕ ಸ್ಥಳಗಳು ರೂಪುಗೊಳ್ಳಲು ಕಾರಣೀ ಭೂತವಾಗಿದೆ. ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ (ಕ್ರಿ.ಶ.೧೧೦೯) ಜಿನಬಸದಿಯನ್ನು ಕಟ್ಟಿಸಿದ ಮತ್ತು ಜಿನ ಪ್ರತಿಮೆಯನ್ನು ಮಾಡಿಸಿದ ಉಲ್ಲೇಖಗಳು ಸಿಗುವುದರಿಂದ ಆ ಜನರ ಜಿನಭಕ್ತಿ, ನಿಷ್ಠೆ, ಶ್ರದ್ಧೆ ತಿಳಿಯುತ್ತದೆ. ಈ ಗ್ರಾಮದಲ್ಲಿಯ ಬ್ರಹ್ಮ ಜಿನಾಲಯಕ್ಕೆ ಕಮ್ಮಟದ ಅಧಿಕಾರಿಗಳು, ಕಮ್ಮಟಕಾರರು ತಾವು ಮಾರಿದ ವಸ್ತುಗಳ ಮೇಲಿನ ತೆರಿಗೆಯನ್ನು ಬಿಡುತ್ತಾರೆ. ಇವು ಅಂದಿನ ಜೈನ ಸಮಾಜವನ್ನು ಅರಿಯಲು ಸಹಾಯಕವಾಗಿವೆ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಲಿಂಗಸೂಗೂರಿನ ಮಸ್ಕಿ ಗ್ರಾಮದಲ್ಲಿ ಕೆಲವರು ಜೈನ ಬಸದಿಗಳಿಗೆ ದಾನ ನೀಡಿರುವುದು ಶಾಸನಗಳಿಂದ ತಿಳಿದು ಬರುತ್ತದೆ. ಕಲ್ಯಾಣ ಅರಸ ಜಗದೇಕಮಲ್ಲನು (ಕ್ರಿ.ಶ.೧೦೩೨) ಜಿನಾಲಯದ ಭೋಗಕ್ಕಾಗಿ ನೂರು ಮತ್ತರು ಕರಿಯ ನೆಲ, ಎರಡು ಮತ್ತರು ಗದ್ದೆ, ಹೂವಿನ ತೋಟ, ದೀಪಕ್ಕಾಗಿ ಒಂದು ಗಾಣವನ್ನು ದತ್ತಿ ಬಿಡುತ್ತಾನೆ. ಲಿಂಗಸೂಗೂರಿನ ಮತ್ತೊಂದು ಶಾಸನವಾದ ಮಸ್ಕಿ ಗ್ರಾಮದಲ್ಲಿ ಜಿನಬಸದಿಯ ಉಲ್ಲೇಖ ದೊರೆಯುತ್ತದೆ. ಕಲ್ಯಾಣ ಚಾಳುಕ್ಯ ಅರಸ ಜಗದೇಕಮಲ್ಲನ ಕಾಲದಲ್ಲಿ ಬೆಸವೊಜ ಎಂಬುವವನು ಜಿನ ಬಸದಿಯನ್ನು ಕಟ್ಟಿಸಿದ್ದು ತಿಳಿದುಬರುತ್ತದೆ. ಈ ಬಸದಿಗೆ ಚಾಳುಕ್ಯ ಅರಸ ಜಗದೇಕಮಲ್ಲನ ರಾಣಿ ಸೋಮಲದೇವಿಯು ಪುಲಿಪೊದರ ನೆಲೆವೀಡಿನಲ್ಲಿದ್ದಾಗ ಈ ಬಸದಿಯ  ಭೋಗಕ್ಕೆಂದು ೫೦ ಮತ್ತರು ಭೂಮಿ ಅಕಡಿ ಮತ್ತರು ೫೦ನ್ನು ಕೊಡಿಸಿದ್ದನ್ನು ಉಲ್ಲೇಖಿಸುತ್ತದೆ. ಇದರೊಂದಿಗೆ ದೀಪಕ್ಕಾಗಿ ಒಂದು ಗಾಣ, ಹೂವಿನ ತೋಟವೊಂದನ್ನು ದಾನ ಬಿಡಲಾಗಿದೆ. ಈ ಬಸದಿಯನ್ನು ಸೋದೊರೆ ವಡಿಯರ ರೇವಣಯ್ಯನ ಆಜ್ಞೆಯ ಮೇರೆಗೆ ಕಟ್ಟಿಸಿದ್ದಂತೆ ಈ ಶಾಸನವು ಮಾಹಿತಿಯನ್ನು ಒದಗಿಸಿದೆ. ಮಾನ್ವಿ ತಾಲೂಕಿನ ಬಲ್ಲಟಗಿಯ ಶಾಸನವು ಬಸದಿಗೆ ದಾನ ನೀಡಿದ ಕುರಿತು ಈ ರೀತಿ ಉಲ್ಲೇಖಿಸುತ್ತದೆ. ಜಗದೇಕಮಲ್ಲನ ರಾಣಿ ಸೋಮಲದೇವಿಯು ಭತ್ತಗ್ರಾಮವಾದ ಬಳ್ಳನಿಟ್ಟಗೆಯ ಬಸದಿಗೆ ಪಿರಿಯ ಕೋಲಲ್ಲಿ ೩೪ ಮತ್ತರು ಕರಿಯ ನೆಲ, ಒಂದು ಮತ್ತರು ತೋಟ, ಐದು ಮನೆ, ಒಂದು ಗಾಣವನ್ನು ದಾನವಾಗಿ ಕೊಟ್ಟಿದ್ದು ತಿಳಿದು ಬರುತ್ತದೆ. ಮಾನ್ವಿಯ ಮತ್ತೊಂದು ಶಾಸನ ದದ್ದಲವು ಮಾಕಿಸೆಟ್ಟಿ ಎಂಬುವವನು ಪೊನ್ನಪಾಳಿನಲ್ಲಿ  ಗಿರಿಗೋಟೆಮಲ್ಲ ಎಂಬ ಹೆಸರಿನ ಜಿನಾಲಯವನ್ನು ಕಟ್ಟಿಸಿದ್ದನ್ನು ವಿವರಿಸುತ್ತದೆ. ದೇವದುರ್ಗದ ಗಬ್ಬೂರು ಶಾಸನವು ಧರ್ಮ ಕಾರ್ಯದ ಉದ್ದೇಶದಿಂದ ಜಿನದೇವರ ಅರ್ಚನೆಗಾಗಿ ಗೊಬ್ಬೂರು ಮೂಲಿಗರೂ ಹಾಗೂ ಮಹಾಜನರು ಮುದುಗುಂದೂರಿನ ಮೂಲಿಗದೆರೆ ಮತ್ತು ಬೆಳೆದೆರೆಯನ್ನು ದಾನ ಬಿಟ್ಟಂತೆ ತಿಳಿಸುತ್ತದೆ.
ಚಂದನಕೆರೆಯ ಸರಕಾರಿ ಶಾಲಾ ಕಟ್ಟಡದ ಎದುರುಗಡೆ ಸಿಕ್ಕ ಜೈನ ಭಗ್ನ ಶಿಲ್ಪಗಳು ಇಲ್ಲಿ ಪ್ರಾಚೀನ ಕಾಲದಲ್ಲಿ ಜೈನಧರ್ಮ ಪ್ರಚಾರದಲ್ಲಿತ್ತೆಂದು ಹೇಳಲಿಕ್ಕೆ ಸಾಕ್ಷಿಯಂತಿದೆ. ‘ಸುಮಾರು ೫ ಅಡಿಯಷ್ಟು ವ್ಯಾಸವುಳ್ಳ ಒಂದು ವರ್ತುಳವನ್ನು ಕೆತ್ತಲಾಗಿದೆ. ಈ ವರ್ತುಳವನ್ನು ಒಂದು ಚೌಕದ ಮಧ್ಯ ಕೆತ್ತಲಾಗಿದೆ. ಸುಮಾರು ೬ ಇಂಚು ದಪ್ಪ ಇರುವ ಹಾಸು ಬಂಡೆಯ ಅಂಚಿನಲ್ಲಿ ಪದ್ಮಗಳನ್ನು ಕೆತ್ತಲಾಗಿರುವುದನ್ನು ಸೂಕ್ಷ್ಮವಾಗಿ ನೋಡಿದರೆ ಕಾಣಬಹುದು. ಮೇಲ್ನೋಟಕ್ಕೆ ಚಾಳುಕ್ಯ ಶೈಲಿಯ ರಂಗಮಂಟಪದ ಹಾಸುಗಲ್ಲು ಎಂದು ಕಾಣುವ ಈ ಹಾಸುಬಂಡೆಯು ಪಾರ್ಶ್ವನಾಥ ಶಿಲ್ಪದ ಪೀಠದ ಮೇಲೆ ವಿವರಿಸಲಾದ ಕಂಬಗಳು, ಜಿನಶಿಲ್ಪ, ಶಾರ್ದೂಲಸ್ತಂಭ ಮತ್ತು ಈ ಪೀಠ ಇವುಗಳೆಲ್ಲವೂ ಚಂದನಕೆರೆಯಲ್ಲಿ ಕ್ರಿ.ಶ.೧೦-೧೨ನೇ ಶತಮಾನದ ಅವಧಿಯಲ್ಲಿ ಒಂದು ಜೈನ ಬಸ್ತಿ ಇತ್ತು ಎಂಬುದನ್ನು ಸೂಚಿಸುತ್ತದೆ.’
     ಕ್ರಿ.ಶ.೧೨೦೯ರ ನವಿಲೆಯ ಹಾಲ್ಕಾವಟ್ಗಿಯಲ್ಲಿ ದೊರೆತ ತಾಮ್ರ ಶಾಸನವು ಜೈನ ಧರ್ಮದ ಕುರಿತು ಮಾಹಿತಿ ನೀಡಿದೆ. ಪ್ರಾರಂಭದಲ್ಲಿ ಜಿನನನ್ನು ಹೊಗಳುವ ಪದ್ಯವಿದೆ. ಹರುಹೆನಾಡು ಪ್ರದೇಶದ ಹೊಸಊರ ಪಟ್ಟಣದಲ್ಲಿದ್ದ ಪಾರ್ಶ್ವನಾಥ ದೇವರ ಪೂಜೆಗಾಗಿ ಕೆರೆಯಕಲ್ಲ ತೂಬಿನ ಬಳಿ ನೀರಾವರಿ ಸ್ಥಳವನ್ನು ಹಳೆಯ ಹೊಸೂರಿನ ಕೋಟೆಯ ಸಮೀಪ ಕೋಣನ ಬಾವಿಯ ಸಮೀಪದ ಭೂಮಿ ಮೂವತ್ತು ಹೊನ್ನು ಬೆಲೆಬಾಳುವ ಗದ್ದೆಯನ್ನು ಸೂರ್ಯ ಚಂದ್ರರಿರುವವರೆಗೂ ಅನುಭವಿಸಲಿ ಎಂದು ನಯಕೀರ್ತಿ ಸೈದ್ಧಾಂತಿಕರ ಶಿಷ್ಯ ನಾಗಚಂದ್ರ ದೇವರ ಶಿಷ್ಯ, ಬಾಳಚಂದ್ರ ದೇವರ ಶಿಷ್ಯರಾದ ಹಾಗೂ ಆ ಬಸದಿಯ ಆಚಾರ್ಯ ಚಂದ್ರಕೀರ್ತಿ ದೇವರಿಗೆ ತಾಮ್ರ ಶಾಸನ ಸಹಿತ ಹೊಯ್ಸಳ ಅರಸ ಬಲ್ಲಾಳ ಮತ್ತು ಆತನ ಪತ್ನಿ ಪದುಮಲದೇವಿಯು ದಾನವಾಗಿ ಬಿಟ್ಟಂತೆ ತಿಳಿದು ಬರುತ್ತದೆ. ಈ ಹರುಹೆನಾಡು ಇಂದಿನ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಪರಗಿಯಾಗಿದೆ ಎಂಬುದನ್ನು ಡಿ.ವಿ.ಪರಮಶಿವಮೂರ್ತಿ ಅವರು ಪತ್ತೆ ಹಚ್ಚಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ದೊರೆತ ಈ ಶಾಸನವು ಜೈನಧರ್ಮದ ಬಗೆಗೆ ನೀಡಿರುವ ಮಾಹಿತಿಯು ಜಿಲ್ಲೆಗೆ ಸಂಬಂಧಿಸಿರದೆ ದೂರದ ಆಂಧ್ರಪ್ರದೇಶದ ಹರುಹೆ ನಾಡಿಗೆ ಸಂಬಂಧಪಟ್ಟುದ್ದಾಗಿದೆ.
       ಯಲಬುರ್ಗಾ ತಾಲೂಕಿನಲ್ಲಿ ದೊರೆತ ಶಾಸನವು ಮೂಲ ಸಂಘದ ಮಾದಣದಂಡನಾಯಕ ಕಟ್ಟಿಸಿದ ಬಸದಿಗೆ ರಾಯರಾಜಗುರು ಮಂಡಳಾಚಾರ್ಯ ಶ್ರೀಮತ್ ಮಾಘನಂದಿಸಿದ್ಧಾನ್ತ ಚಕ್ರವರ್ತಿಯ ಪ್ರಿಯಶಿಷ್ಯ ಕೊಪಣತೀರ್ಥರ ಎಮ್ಮೆಯರ ಪ್ರಿಥಿಗೌಡ ಮತ್ತು ಅವನ ಹೆಂಡತಿ ಮಾತಾವೆಯ ಮಗ ಬೋಪಣ್ಣನು ತಮ್ಮ ನೋಂಪಿ ನಿಮಿತ್ತ ಚೌವೀಸ ತೀರ್ಥಂಕರ ಬಿಂಬಮೂಡಿಸಿದ ಉಲ್ಲೇಖವನ್ನು ನೀಡಿದೆ. ಯಲಬುರ್ಗಾದಲ್ಲಿ ದೊರೆತ ಶಾಸನದಲ್ಲಿ ಮೂಲಸಂಘ ದೇಸೀಯಗಣದ ಪುಸ್ತಕಗಚ್ಛದ ಯಿಂಗಳೇಶ್ವರ ಬಳಿಯ ಮಾಧವಚಂದ್ರ ಭಟ್ಟಾರಕನ ಶಿಷ್ಯ ರಾಜಧಾನಿ ಎರಂಬರಗೆಯ ಕುಳಾಗ್ರಿ ಸೇವಭೋವ ಆಚಣ್ಣನ ಮಗ ದೇವಣನು ಸಿದ್ಧಚಕ್ರದ ನೋಂಪಿ ಕ್ರುತಪಂಚಮಿ ನೋಂಪಿಗಾಗಿ ಪಂಚಪರಮೇಷ್ಟಿಗಳ ಪ್ರತಿಮೆ ಮಾಡಿಸಿದಂತೆ ತಿಳಿದುಬರುತ್ತದೆ. ಕ್ರಿ.ಶ.೧೩ನೆಯ ಶತಮಾನದಲ್ಲಿ ದೊರೆತ ಶಾಸನವೊಂದರಲ್ಲಿ ಮೂಲಸಂಗದ ದೇಸೀಯಗಣದ ಪುಸ್ತಕಗಚ್ಛದ ಕುಂದಕುಂದಾನ್ವಯದ ರೋಣಸಂಬಂಧದ ಎರಂಬರಿಗೆಯ ನಗರ ಜಿನಾಲಯಕ್ಕೆ ಮೀಡಗುದಲಿಯ ಕೀರ್ತಿಸೆಟ್ಟಿಯ ಮಗ ಮಲ್ಲಿಸೆಟ್ಟಿಯು ಪಾಶ್ವನಾಥದೇವರ ವಿಗ್ರಹವನ್ನು ಮಾಡಿಸಿದಂತೆ ಮಾಹಿತಿ ನೀಡಿದೆ.  ಇದರಿಂದಾಗಿ ಯಲಬುರ್ಗಾವು ಪರಿಸರವು ಜೈನ ನೆಲೆಯಾಗಿದ್ದಿತು ಎಂಬುದಾಗಿ ತಿಳಿದು ಬರುತ್ತದೆ.ಅಲ್ಲಲ್ಲಿ ದೊರೆಯುವ ಶಾಸನಗಳ ವಿವರದಿಂದ (ಕ್ರಿ.ಶ. ೧)೫೪ರ ನಂದಿಬೇವೂರ, ಕ್ರಿ.ಶ. ೧೨೯೭ರ ಮನ್ನೆರ ಮಸಲವಾಡ, ಕ್ರಿ.ಶ. ೧೫೪೫ರ ಕುರುಗೋಡು ಶಾಸನ) ಈ ಭಾಗದಲ್ಲಿ ಜೈನಧರ್ಮದ ಇರುವಿಕೆಯನ್ನು ಗುರುತಿಸಬಹುದಾಗಿದೆ. 
ಕೊಪ್ಪಳ:
      ಕೊಪ್ಪಳ ಹೆಸರಿನ ವಿವಿಧ ಪರ್ಯಾಯ ನಾಮಗಳು ಶಾಸನಗಳು,ಸಾಹಿತ್ಯ ಕೃತಿಗಳಲ್ಲಿ ಕಂಡು ಬಂದಿರುವುದನ್ನು ಈಗಾಗಲೇ ವಿದ್ವಾಂಸರು ಗುರುತಿಸಿದ್ದಾರೆ. ಕನ್ನಡದ ಮೊದಲ ಉಪಲಬ್ದ ಗ್ರಂಥವಾದ ಕವಿರಾಜಮಾರ್ಗದಲ್ಲಿ ಕೊಪ್ಪಳದ ಉಲ್ಲೇಖವಿದೆ. ಈ ಪ್ರದೇಶವನ್ನು ‘ತಿರುಳ್ಗನ್ನಡನಾಡು’ ಎಂದು ಕವಿರಾಜಮಾರ್ಗಕಾರ ಕರೆದಿದ್ದಾನೆ. ಇಲ್ಲಿ ಕೊಪ್ಪಳವನ್ನು ‘ವಿದಿತಮಹಾಕೊಪಣ’ ಎಂದಿರುವುದನ್ನು ನೋಡಿದರೆ ಆ ಕಾಲಕ್ಕಾಗಲೇ ಕೊಪ್ಪಳವು ಪ್ರಸಿದ್ಧಿಯನ್ನು ಪಡೆದಿತ್ತೆಂದು ಹೇಳಬಹುದಾಗಿದೆ. ಈ ತಿರುಳ್ಗನ್ನಡ ಪ್ರದೇಶವನ್ನು ಕನ್ನಡದ ಆದಿಕವಿ ಪಂಪ ತನ್ನ ‘ವಿಕ್ರಮಾರ್ಜುನ ವಿಜಯ’ದಲ್ಲಿ ‘ಸಾಜದ ಪುಲಿಗೆರೆಯ ತಿರುಳ್ಗನ್ನಡದೊಳ್’ ಎಂದು, ರನ್ನನು ತನ್ನ ಸಾಹಸಭೀಮ ವಿಜಯದಲ್ಲಿ ‘ಕನ್ನಡ ಮೆರಡರುನೂರರ ಕನ್ನಡವೂ ತಿರುಳ್ಗನ್ನಡಂ’ ಎಂದು ಉಲ್ಲೇಖಿಸಿದ್ದಾನೆ. ಚಾವುಂಡರಾಯ ತನ್ನ ಚಾವುಂಡರಾಯ ಪುರಾಣದಲ್ಲಿ ಕೊಪ್ಪಳವನ್ನು ‘ಕೊಪಣಾದ್ರಿ’ ಎಂದು ಹೆಸರಿಸಿದ್ದಾನೆ. ರನ್ನ ತನ್ನ ಅಜಿತನಾಥ ಪುರಾಣದಲ್ಲಿ ‘ನೆಗಳ್ದ ಕೊಪಣಾಚಳದಂತೆ ಪವಿತ್ರಮತ್ತಿಮಬ್ಬೆಯ ಚರಿತಂ’ ಎಂದು ಕೊಪ್ಪಳವನ್ನು ಉಲ್ಲೇಖಿಸಿದ್ದಾನೆ. ಹಳಗನ್ನಡ ಕವಿಗಳು ಕೊಪ್ಪಳವನ್ನು ಉಲ್ಲೇಖಿಸಿರುವುದನ್ನು ನೋಡಿದರೆ ಕೊಪ್ಪಳವು ಆ ಕಾಲಕ್ಕಾಗಲೇ ಪ್ರಸಿದ್ಧ ನಗರವಾಗಿರುವುದರ ಜೊತೆಗೆ ಜೈನಧರ್ಮದ ನೆಲೆಗೆ ಭದ್ರವಾದ ಸ್ಥಳವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಕೊಪ್ಪಳಕ್ಕೆ ಹಿಂದಿನಿಂದಲೂ ಬೇರೆ ಬೇರೆ ಹೆಸರಿನಿಂದ ಕರೆಯಲಾಗಿದೆ.
     ಶಾಸನಗಳಲ್ಲಿ ಕುಪಣ, ಕೊಪಣ, ತೀರ್ಥಕೊಪಣಪುರ, ಕೊಪಣಪುರವರ, ಆದಿತೀರ್ಥ, ಕೊಪ್ಪಳ, ಕೊಪಣತೀರ್ಥ,ಕೊಪಣಾಧಿ ತೀರ್ತ್ಥ, ಕೊಪಣಮಹಾತೀರ್ಥ, ಕೊಪಬಾಲ, ಮತ್ತು ಕುಪ್ಪಲ್ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಪ್ರಪ್ರಥಮವಾಗಿ ಚಿತ್ರದುರ್ಗದ ಚಂದ್ರವಳ್ಳಿಯ ಶಾಸನದಲ್ಲಿ ‘ಕುಪಣಚ[ಮೊ]’ ಎಂದು ಉಲ್ಲೇಖಿಸಲ್ಪಟ್ಟಿದೆ. ಆ ‘ಕುಪಣ’ ವೇ ಈಗಿನ ಕೊಪ್ಪಳವಾಗಿದೆ. ಕೊಪಣ ಮಹಾತೀರ್ಥವೆಂದು  ಶಾಸನಗಳಲ್ಲಿ ಕರೆಸಿ ಕೊಂಡಿರುವ ಕೊಪ್ಪಳವು ಚಾರಿತ್ರಿಕ ಮಹತ್ವವನ್ನು ಪಡೆದಿದೆ.
    ಕರ್ನಾಟಕದ ಪ್ರಾಚೀನ ಮತ್ತು ಮಹತ್ವ ಪೂರ್ಣವಾದ ಧರ್ಮವಾದ ಜೈನಧರ್ಮ ಧಾರ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಾಹಿತ್ಯಿಕ, ರಾಜಕೀಯ, ನೈತಿಕ ಮತ್ತು ಕಲಾಕ್ಷೇತ್ರಗಳಲ್ಲಿ ಸದಾ ಸ್ಮರಣೀಯ ಪರಿಣಾಮವನ್ನು ಬೀರಿದೆ. ಕರ್ನಾಟಕದಲ್ಲಿ ಜೈನಧರ್ಮದ ನೆಲೆವೀಡಾಗಿ ಶ್ರವಣಬೆಳಗೊಳವು  ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೋ ಅಷ್ಟೇ ಪ್ರಸಿದ್ಧಿಯನ್ನು ಪಡೆದ ಮತ್ತೊಂದು ಕೇಂದ್ರವೆಂದರೆ ಕೊಪ್ಪಳವೆಂದು ಹೇಳಬಹುದು. ಜೈನ ಧರ್ಮವು ಕೊಪ್ಪಳದಲ್ಲಿ ಪಡೆದಿದ್ದ ಭದ್ರವಾದ ಸ್ಥಾನವನ್ನು ಇಲ್ಲಿಯ ಶಾಸನಗಳ ಮೂಲಕ ತಿಳಿಯಬಹುದಾಗಿದೆ. ಅತ್ಯಂತ ಪ್ರಾಚೀನ ಕಾಲದಿಂದಲೇ ಜೈದಧರ್ಮದ ಬೀಡಾಗಿದ್ದ ಕೊಪ್ಪಳವು ವಿವಿಧ ಅರಸು ಮನೆತನಗಳ ಪ್ರಭಾವಕ್ಕೊಳಪಟ್ಟಿತ್ತು. ಪ್ರಮುಖ ಅರಸುಮನೆತನಗಳ ಪ್ರೋತ್ಸಾಹದಿಂದ ಇಲ್ಲಿ ಜೈನಧರ್ಮ ಬಹು ಕಾಲದವರೆಗೆ ಪ್ರಚಲಿತದಲ್ಲಿತ್ತೆಂದು ಹೇಳಬಹುದಾಗಿದೆ.
    ಕೊಪ್ಪಳ ಜಿಲ್ಲೆಯಲ್ಲಿ ಜೈನಧರ್ಮದ ಕುರಿತು ಅಸಂಖ್ಯಾತ ಶಾಸನಗಳು ದೊರೆತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ಶಾಸನಗಳು ಜೈನಧರ್ಮದ ಕುರಿತು ವಿಶೇಷವಾದ ಮಾಹಿತಿಯನ್ನು ಒದಗಿಸಿವೆ.    ಕೊಪ್ಪಳ ಪರಿಸರದಲ್ಲಿ ಕಂಡು ಬರುವ ಶಾಸನಗಳು ಜೈನಧರ್ಮದ ಬಗೆಗೆ  ಅನೇಕ ಮಾಹಿತಿಗಳನ್ನು ನೀಡಿವೆ. ಈ ಪರಿಸರದಲ್ಲಿ ಜೈನಧರ್ಮವನ್ನು ಉಳಿಸಿ ಬೆಳಸಿದ ಪರಿಯನ್ನು, ಜಿನಾಲಯ, ಜಿನ ಶಿಲ್ಪಗಳನ್ನು ನಿರ್ಮಿಸಿದವರ ಬಗೆಗೆ,  ನಂತರದ ಕಾಲದಲ್ಲಿ ಅವುಗಳನ್ನು ದಾನ ದತ್ತಿ ನೀಡುವುದರ ಮೂಲಕ ಜೀರ್ಣೋದ್ಧಾರ ಮಾಡಿದವರ ಬಗೆಗೆ  ಜೈನ ಬಸದಿಯ ನಿರ್ಮಾಣ ಹಾಗೂ ನೆಟ್ಟ ನಿಷಧಿಗಲ್ಲುಗಳು, ಪುರುಷರು ಹಾಗೂ ಸ್ತ್ರೀಯರು ಸ್ವೀಕರಿಸಿದ ಸಲ್ಲೇಖನ ವ್ರತಗಳ ಕುರಿತು ಹಾಗೂ ಬಸದಿ ನಿರ್ಮಾಣ ಕಾರ್ಯದಲ್ಲಿ ಸ್ತ್ರೀಯರು ಪಾಲ್ಗೊಂಡ ರೀತಿ, ಮತ್ತು ಆ ಕಾಲಘಟ್ಟದ ಜೈನರ ಸಮಾಜ ಜೀವನದ ಚಿತ್ರಣದ ಬಗೆಗೆ ವಿಶೇಷವಾದ ಮಾಹಿತಿಯನ್ನು ಇಲ್ಲಿನ ಶಾಸನಗಳಿಂದ ತಿಳಿಯಬಹುದಾಗಿದೆ. ಕೊಪ್ಪಳವು ಬಹು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಜೈನ ತಾಣವಾಗಿದೆ. ‘ಕೊಪ್ಪಳವು ತೀರ್ಥಕ್ಷೇತ್ರ, ಆದಿತೀರ್ಥ, ಮಹಾತೀರ್ಥ ಎಂದೆನಿಸಿದಂತೆಯೇ ಬಸದಿಗಳ ಬೀಡು ಎಂದೂ ಹೆಸರುವಾಸಿಯಾಗಿದೆ. ಸ್ಥಳೀಯ ಐತಿಹ್ಯಗಳೂ ಲಭ್ಯಪೂರಕ ಐತಿಹಾಸಿಕ ಆಕರಗಳೂ ಈ ಸಂಗತಿಯ ಸತ್ಯಕ್ಕೆ ಕನ್ನಡಿ ಹಿಡಿದಿವೆ. ಕೊಪ್ಪಳ ಜಿಲ್ಲೆಯಲ್ಲಿ ಜೈನಧರ್ಮದ ಉಲ್ಲೇಖ ದೊರೆಯುವುದು ಒಂದನೆಯ  ಶತಮಾನದಿಂದಲೇ. ಮೊದಲನೆಯದಾಗಿ ಕವಿರಾಜಮಾರ್ಗದಲ್ಲಿ ಕೊಪ್ಪಳದ ಉಲ್ಲೇಖ ಬಂದರೆ ಎರಡನೆಯದಾಗಿ ಅಜಿತಪುರಾಣವು ಅತ್ತಿಮಬ್ಬೆಯ ಧವಲಕೀರ್ತಿ ಕೊಪ್ಪಳದ ಬೆಟ್ಟದಂತೆ ಬೆಳ್ಳಗೆ ಎಂದು ಹೋಲಿಸುವಲ್ಲಿ ಕಂಡು ಬರುತ್ತದೆ. ನಂತರ ರನ್ನ ಕವಿಯ ಸಮಕಾಲೀನನಾದ ಚಾವುಂಡರಾಯನು ತನ್ನ ‘ಚಾವುಂಡರಾಯ ಪುರಾಣ’ ಗ್ರಂಥದಲ್ಲಿ ಕೊಪ್ಪಳದ ಬೆಟ್ಟದ ಕುರಿತಂತೆ ಉಲ್ಲೇಖ ನೀಡಿದ್ದಾನೆ. ಕೊಪ್ಪಳ ಜಿಲ್ಲೆಯ ಶಾಸನಗಳನ್ನು ಗಮನಿಸಿದಾಗ ಅಲ್ಲಿ ಕಂಡು ಬರುವ ವಿಶೇಷತೆಯೇನೆಂದರೆ ಈ ಪ್ರದೇಶ ಕ್ರಿ.ಶ.೧೪ನೇ ಶತಮಾನದವರೆಗೆ ರಾಜಕೀಯ ಕೇಂದ್ರವಾಗಲಿ, ವ್ಯಾಪಾರಿಕೇಂದ್ರವಾಗಲಿ ಆಗಿರದೆ ಅದೊಂದು ಶುದ್ಧವಾದ ತೀರ್ಥಸ್ಥಾನವಾಗಿ ಮಾತ್ರ ಪ್ರಸಿದ್ಧಿಯನ್ನು ಪಡೆದುಕೊಂಡಿತು. ಕೊಪ್ಪಳದ ಜೈನಧರ್ಮದ ಬಗ್ಗೆ ಹೇಳುವುದಾದರೆ ಇದು ಜೈನಧರ್ಮದ ಕೇಂದ್ರಸ್ಥಾನವೆಂಬಂತೆ ಶಾಸನಗಳಲ್ಲಿ, ಕಾವ್ಯಗಳಲ್ಲಿ ಚಿತ್ರಿತವಾಗಿದೆ. ಕ್ರಿ.ಶ.೧೦ನೇ ಶತಮಾನದ ಉತ್ತರಾರ್ಧದಿಂದ ೧೧ನೇ ಶತಮಾನದ ಪೂರ್ವಾರ್ಧದವರೆಗಿನ ಶಾಸನಗಳಲ್ಲಿ ಇಲ್ಲಿ ಮುಡಿಪಿ ಪ್ರಾಣವನ್ನು ತೊರೆದ ಸ್ತ್ರೀಯರ ಹಾಗೂ ಮುನಿಗಳ ಕುರಿತು ಮಾಹಿತಿ ದೊರೆಯುತ್ತದೆ. ಹೀಗೆ ಸಾಮಾನ್ಯ ಸ್ತ್ರೀಯರೊಂದಿಗೆ ರಾಜಶ್ರೀ ಪರಿವಾರ, ರಾಜಪೂಜಿತ ಗುರುಗಳು ಸಲ್ಲೇಖನವನ್ನು ಸ್ವೀಕರಿಸಿದುದರಿಂದ ಈ ಸ್ಥಳದ ಹೆಗ್ಗಳಿಕೆ ಹೆಚ್ಚಾಯಿತು.
   ಕೊಪ್ಪಳದಲ್ಲಿ ಅನೇಕ ಜಿನಮುನಿಗಳು ಇದ್ದು ನಂತರದ ಕಾಲದಲ್ಲಿ ಜೈನಧರ್ಮದ ಸೂತ್ರದಂತೆ ಸಮಾಜದ ವಿವಿಧ ಚಟುವಟಕೆಗಳಲ್ಲಿ ಭಾಗಿಯಾಗುವುದರದ ಮೂಲಕ ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿ ಜೈನಧರ್ಮದ ತತ್ವಗಳನ್ನು ಬೋದಿಸುತ್ತಿದ್ದ ಬಗೆಗೆ ಇಲ್ಲಿಯ ಶಾಸನಗಳಲ್ಲಿ ಉಲ್ಲೇಖ ಇದೆ.  ಇಲ್ಲಿಯ ಶಾಸನಗಳಲ್ಲಿ ಅನೇಕ ಜೈನಮುನಿಗಳ ಹೆಸರುಗಳು ಬಳಕೆಯಾಗಿವೆ. ಈ ಜೈನ ಮುನಿಗಳಲ್ಲಿ ಗಣ, ಗಚ್ಛ, ಸಂಘ, ಅನ್ವಯಗಳೆಂಬ ಶಾಖೆಗಳು ಕಂಡುಬರುತ್ತವೆ. ಶಾಸನಗಳಲ್ಲಿ ಎಲ್ಲಾ ಶಾಖೆಗಳ ಮುನಿಗಳ ಕುರಿತು ಮಾಹಿತಿ ದೊರೆತರೂ ಕೊಂಡಕುಂದಾನ್ವಯಕ್ಕೆ ಸೇರಿದ ಮುನಿಗಳ ಕುರಿತು ಹೆಚ್ಚಿನ ಶಾಸನಗಳಲ್ಲಿ ಉಲ್ಲೇಖ ಬಂದಿದೆ.
    ಕ್ರಿ.ಶ.೮೮೧ರಲ್ಲಿ ದೊರೆತ ಶಾಸನವು ಕುಣ್ದಕುನ್ದಾನ್ವಯಕ್ಕೆ ಸೇರಿದ್ದ ಏಕಚಟ್ಟುಗದ ಭಟಾರರ ಶಿಷ್ಯ ಸರ್ವನಂದಿ ಭಟಾರನು ಇಲ್ಲಿದ್ದು ಊರಿನ ತೀರ್ಥಕ್ಕೂ ಉಪಕಾರಿಯಾಗಿ, ಕೆಲವು ಕಾಲ ತಪಸ್ಸನ್ನು ಮಾಡಿ ವ್ರತವನ್ನು ಸ್ವೀಕರಿಸಿ ಮುಡಿಪಿದ. ಈತನು ತನ್ನ ಜೀವಿತದ ಅವಧಿಯಲ್ಲಿ ಸನ್ನಡತೆಯಿಂದ ಬಾಳಿ, ಯಾವಾಗಲೂ ಶಾಸ್ತ್ರದಾನವನ್ನು ಮಾಡುತ್ತಾ ಭೂಮಿಯ ಪಾಪಗಳ ತೊಳೆದ ಆ ಸರ್ವನಂದಿಮುನಿಗೆ ಮಂಗಳ ವಾಗಲಿ ಎಂದು ಉಲ್ಲೇಖಿಸಿದೆ. ಕ್ರಿ.ಶ.೯೧೦ರಲ್ಲಿ ಕೊಣ್ದಕುನ್ದಾನ್ವಯದ ಪದ್ಮನಂದಿಸಿದ್ಧಾಂತ ಭಟಾರರ ಶಿಷ್ಯ ನಯನಂದಿಪಂಡಿತ ಭಟಾರನ ನಿಷಧಿಯನ್ನು ಮಾಡಿದಂತೆ ಕಂಡು ಬಂದಿದೆ. ಕ್ರಿ.ಶ.೯೯೭ರಲ್ಲಿ ಕೊಣ್ದಕುನ್ದಾನ್ವಯದ ಪುಸ್ತಕಸನ್ತಲೆಯ ಕೀರ್ತಿಸೂರಿಯ ಶಿಷ್ಯ ಅವರಸ್ತಿವಾಸಿ ಗೊಲ್ಲಾಚಾರ್ಯ. ಈ ಗೊಲ್ಲಾಚಾರ್ಯನ ಶಿಷ್ಯ ತ್ರಿಕಾಲಯೋಗಿಯು ತನ್ನ ಅಂತ್ಯಕಾಲದ ಸಮಯದಲ್ಲಿ ಕೊಪಣದ ಜಿನಪಾದಗಳ ಬಳಿ ಕುಳಿತು ತಪಸ್ಸು ಮಾಡಿ ಮುಕ್ತಿಯನ್ನು ಸಾಧಿಸುತ್ತಾನೆ. ಜೈನಧರ್ಮದ ಬಗೆಗಿನ ಭಕ್ತಿಯ ಕುರಿತು ಈತನು ಸಾಧಿಸಿದ ಮಾಹಿತಿಶಾಸನವೊಂದು ಕೆಳಕಂಡ ರೀತಿಯಲ್ಲಿ ವರ್ಣಿಸಿದೆ. ಈತನಿಗೆ ಗಣಧರರು, ಶ್ರೇಷ್ಠಉಪಾಸಕರಾದ ಮುನಿಗಳ ಗುಂಪು ಸಮನಾಗಬಹುದೇ ಹೊರತು ಬೇರೆಯವರನ್ನು ಹೋಲಿಸಲು ಬರುವುದಿಲ್ಲ. ಇವನು ಆತಪನ, ತರುಮೂಲ ಮತ್ತು ಶಿಖರವಾಸ ಎಂಬ ಮೂರು ಬಗೆಯ ಯೋಗದಲ್ಲಿ ಸಿದ್ಧಿಪಡೆದಿದ್ದ. ಇವನ ತಪಸ್ಸಿನ ಸ್ಥಿರತೆಯನ್ನು ಕದಲಿಸಲು ಮೋಡಗಳು ಆರ್ಭಟಿಸಿದವು, ಮಿಂಚು ಸಿಡಿಲುಗಳು ಹೆದರಿಸಿದವು. ಒಂದೇ ಸಮನೆ ಮಳೆ ಸುರಿಯಿತು, ಆದರೂ ಈ ಮುನಿ ಮರದ ಬುಡವನ್ನು ಬಿಟ್ಟು ಕದಲಲಿಲ್ಲ. ಹೀಗೆ ಮೋಕ್ಷವನ್ನು ಸಾಧಿಸಿದ ಗೊಲ್ಲಾಚಾರ್ಯನ ಶಿಷ್ಯ ತ್ರಿಕಾಲಯೋಗಿಯೂ ವರ್ಣಿತನಾಗಿದ್ದಾನೆ. ಕೊಪ್ಪಳದಲ್ಲಿ ದೊರೆತ ಕ್ರಿ.ಶ.೧೦೦೦ದ ಅವಧಿಯ ಶಾಸನ ತ್ರಿಭುವನಚಂದ್ರ ಮುನೀಂದ್ರನು ಮುಕ್ತಿಯನ್ನು ಸಾಧಿಸಿದಂತೆ ತಿಳಿಸುತ್ತದೆ. ಇದರ ಜೊತೆಗೆ ಕೊಂಡಕುನ್ದಾನ್ವಯದ ರವಿಚಂದ್ರ, ಶ್ರುತಸಾಗರ ಮತ್ತು ಗಂಡವಿಮುಕ್ತದೇವನನ್ನು ಹೆಸರಿಸುತ್ತದೆ. ಕ್ರಿ.ಶ.೧೦೩೧ರಲ್ಲಿ ಕೊಂಡಕುನ್ದಾನ್ವಯಕ್ಕೆ ಸೇರಿದ ಮೇಘಚಂದ್ರಮುನಿಯು ರತ್ನತ್ರಯವನ್ನು ಸಾಧಿಸಿ ಮುಡಿಪಿದಂತೆ ತಿಳಿದುಬರುತ್ತದೆ. ಜೈನ ಮುನಿಗಳ ಅನ್ವಯ ಶಾಖೆಯಲ್ಲಿ ಬರುವ ಕೊಂಡಕುನ್ದಾನ್ವಯದ ಕುರಿತು ಬಹಳಷ್ಟು ಶಾಸನಗಳು ಮಾಹಿತಿ ನೀಡಿದಂತೆ ಗಣ ಶಾಖೆಯಲ್ಲಿ ಬರುವ ಮುನಿಗಳ ಕುರಿತು ಕೆಲವೊಂದು ಶಾಸನಗಳು ಉಲ್ಲೇಖ ನೀಡಿವೆ.
     ಕ್ರಿ.ಶ.೧೦೨೨ರಲ್ಲಿ ದೊರೆತ ಶಾಸನದಲ್ಲಿ ಸೇನಗಣಕ್ಕೆ ಸೇರಿದ ಅಜಿತಸೇನಾಚಾರ್ಯನನ್ನು ಈ ರೀತಿ ವರ್ಣಿಸಿದೆ. ಇವನಿಂದ ಭೂಮಿಯ ಮೇಲೆ ಪೆರ್ಮಳೆಗಳು ಸುರಿದವಂತೆ, ಹಸಿವು, ನೀರಡಿಕೆಗಳಿಲ್ಲವಾದುವೆಂದೂ ತನಗೆ ಗೌರವ ನೀಡಿದವರನ್ನು, ನಿಂದಿಸಿದವರನ್ನು ಸಮಾನವಾಗಿ ಕಾಣುತ್ತಿದ್ದನೆಂದು ಶಾಸನ ವರ್ಣಿಸಿದೆ. ಕ್ರಿ.ಶ.೧೦೧೯ರ ಶಾಸನವು ದೇಸಿಗಣದ ರವಿಚಂದ್ರಸೂರಿ ಇವನ ಶಿಷ್ಯ ತ್ರಿಭುವನಚಂದ್ರಮುನೀಂದ್ರ. ಈತನ ಶಿಷ್ಯ ಮೋನಿಭಟಾರಕನು ನಿಷದಿಗೆಯನ್ನು ನಿಲ್ಲಿಸಿದಂತೆ ತಿಳಿಸುತ್ತದೆ. ಕ್ರಿ.ಶ.೯೭೭ರಲ್ಲಿ ದೇಸಿಗಣದ ದಿವಾಕರಣನ್ದಿಪಂಡಿತರ ಶಿಷ್ಯೆ ಅಣುಗಬ್ಬೆಯು ಸನ್ಯಾಸನವನ್ನು ಸ್ವೀಕರಿಸಿ ಮುಡಿಪಿದಂತೆ ತಿಳಿದುಬರುತ್ತದೆ.
   ಇದೇ ದೇಸಿಗಣದ ಶ್ರೀಧರವಿಮುಕ್ತಭಟಾರರ ಶಿಷ್ಯರಾದ ಮಲ್ಲಧಾರಿ ಮುನಿಯು ಜಿನಪದವನ್ನು ನೆನೆಯುತ್ತಾ ಮುಡಿಪನ್ನು ಹೊಂದುತ್ತಾನೆ. ಈತನನ್ನು ಪಾಪವೆಂಬ ಕಂಬವನ್ನು ಮುರಿದು, ಇಂದ್ರಿಯಗಳನ್ನು ಗೆದ್ದು, ಹಗಲು ಇರುಳು ತಪಸ್ಸು ಮಾಡಿ ಸುಚಿತ್ತದಿಂದ ಸುಗತಿಯನ್ನು ಪಡೆದನೆಂದಿದೆ. ಈತನ ತಪಸ್ಸಿನಿಂದ ಮನ್ಮಥ ದೂರವುಳಿದ. ಬಾಯಾರಿಕೆ ಇಂಗಿಹೋಯಿತು. ಕರ್ಮ ನಾಶವಾಯಿತು. ಘೋರ ತಪಸ್ಸನ್ನಾಚರಿಸಿ ಜ್ಞಾನವನ್ನು ಪಡೆದು ಪ್ರಾಣವನ್ನು ದೇಹದಿಂದ ಬೇರೆ ಮಾಡಿ ಸುಗತಿಯನ್ನು ಸಾಧಿಸಿದಂತೆ ಶಾಸನವು ತಿಳಿಸುತ್ತದೆ. ಕ್ರಿ.ಶ.೧೦೩೨ರಲ್ಲಿ ದೇಸಿಗಣದ ನಯನಂದಿಭಟ್ಟಾರಕರ ಶಿಷ್ಯನಾದ ಗುಣದಬೆಡಂಗನೆಂಬುವವನು ತನ್ನ ಗುರುವಿನ ಸನ್ನಿಧಿಯಲ್ಲಿ ಸನ್ಯಸನವಿಧಿಯಿಂದ ಮುಡಿಪನ್ನು ಹೊಂದುತ್ತಾನೆ. ದೇಸಿಗಣದ ಮಲಧಾರಿ ಭಟ್ಟಾರಕನ ಶಿಷ್ಯನಾಗಿ ನಯನಂದಿ ದೇವನಿರುತ್ತಾನೆ. ಕುಪಣತೀರ್ಥದಲ್ಲಿ ಈತನು ಶರೀರವನ್ನು ತೊರೆಯುತ್ತಾನೆ. ಕೀರ್ತಿವಂತ, ಭುವನಶಾಂತಿಕರ, ಕುಸುಮಾಸ್ತಭೀಕರನೆಂದು, ಕಾಷಾಯರಹಿತನೆಂದು ಈತನನ್ನು ಶಾಸನದಲ್ಲಿ ವರ್ಣಿಸಿದೆ.
        ಮುಂದೆ ಗಚ್ಛಶಾಖೆಯ ಮುನಿಗಳ ಕುರಿತು ಶಾಸನಗಳಲ್ಲಿ ಉಲ್ಲೇಖ ದೊರೆತಿದೆ. ಕೊಪ್ಪಳದಲ್ಲಿ ದೊರೆತ ಶಾಸನವೊಂದರಲ್ಲಿ ಪುಸ್ತಕಗಚ್ಛದ ದೇವೇಂದ್ರಮುನೀಂದ್ರನನ್ನು ಹೆಸರಿಸಿದ್ದು ಇನ್ನೊಂದು ಭಾಗದಲ್ಲಿ ದಾಮನಂದಿ, ತ್ರಿಕಾಳಯೋಗಿ, ಅರ್ಹದ್ದೇವ, ಶ್ರೀಧರದೇವ, ಚನ್ದ್ರನಂದಿ ಮೊದಲಾದವರ ಹೆಸರನ್ನು ಉಲ್ಲೇಖಿಸಿದೆ. ಕ್ರಿ.ಶ.೧೦೦೨ರಲ್ಲಿ ದೊರೆತ ಕೊಪ್ಪಳದ ಶಾಸನವು ಪುಸ್ತಕಗಚ್ಛದ ರವಿಚನ್ದ್ರ ಇವನ ಶಿಷ್ಯ ದಾಮನಂದಿ, ಇವನ ಶಿಷ್ಯ ಶ್ರೀಧರದೇವನನ್ನು ಹೊಗಳಿದಂತೆ ತಿಳಿಸುತ್ತದೆ. ಕೊಪ್ಪಳದಲ್ಲಿ ದೊರೆತ ಶಾಸನಗಳಲ್ಲಿ ಅನೇಕ ಜೈನ ಮುನಿಗಳ ವಿವರ ಬಂದಿದ್ದು ಇವರೆಲ್ಲ ಬೇರೆ ಬೇರೆ ಗಣ, ಗಚ್ಛಸಂಘ ಅನ್ವಯಗಳಿಗೆ ಸೇರಿದವರಾದರೂ ಕೊಂಡಕುಂದ ಅನ್ವಯಕ್ಕೆ ಸೇರಿದವರ ಕುರಿತು ಹೆಚ್ಚಿನ ಮಾಹಿತಿ ದೊರೆತಿರುತ್ತದೆ.
     ಜೈನಧರ್ಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಾ ಬಂದವರು ಗಂಗರು. ಸುಮಾರು ೧೦ನೆಯ ಶತಮಾನದ ಅವಧಿಯಿಂದಲೇ ಗಂಗರಲ್ಲಿ ಅನೇಕರು ಜೈನ ಧರ್ಮದ ಅನುಯಾಯಿಗಳಾಗುತ್ತಾ  ಬಂದಿದ್ದಾರೆ. ಗಂಗರಾಜ ಬೂತುಗನಿಗೆ ಅನೇಕ ರಾಣಿಯರಿದ್ದರು. ರೇವಕನಿಮ್ಮಡಿ, ಪದ್ಮಬ್ಬರಸಿ, ಬಿಜ್ಜರಸಿ ಹೀಗೆ ಇತ್ಯಾದಿ. ಹೀಗೆ ಗಂಗರಿಗೆ ಕೊಪ್ಪಳವು ರಾಜಕೀಯವಾಗಿ ಸಂಬಂಧಿಸಿದಂತೆ ಧಾರ್ಮಿಕವಾಗಿಯೂ ನಿಕಟವಾಗಿ ಸಂಬಂಧಿಸಿದ್ದಿತು. ರಾಷ್ಟ್ರಕೂಟರ ಮಾಂಡಳಿಕರಾಗಿ ಆಡಳಿತ ನಡೆಸುತ್ತಿದ್ದ ಗಂಗರು ಬೂತುಗನ ಮರಣದ ನಂತರ ಪ್ರಾಬಲ್ಯಕ್ಕೆ ಒಳಪಟ್ಟಿತು. ಬೂತುಗನ ಅವಸಾನದಿಂದ ಗಂಗರ ರಾಣಿವಾಸದ ಸ್ತ್ರೀಯರು ತಮ್ಮ ಅಂತ್ಯಕಾಲವನ್ನು ತಲಕಾಡಿನಲ್ಲಿ ಕಳೆಯುವ ಬದಲು ತೀರ್ಥಕ್ಷೇತ್ರವಾದ ಕೊಪ್ಪಳದಲ್ಲಿ ಬಂದು ಕಳೆಯುತ್ತಾರೆ. ಕ್ರಿ.ಶ.೯೭೩ರಲ್ಲಿ ದೊರೆತ ಕೊಪ್ಪಳ ಶಾಸನವು ಬೂತುಗನ ಪತ್ನಿ ಪದ್ಮಬ್ಬೆಯು ಎಲ್ಲವನ್ನು ತ್ಯಜಿಸಿ ಕುಪಣಕ್ಕೆ ಬಂದು ದೀಕ್ಷೆಯನ್ನು ಪಡೆದಿದ್ದನ್ನು ತಿಳಿಸುತ್ತದೆ. ಕ್ರಿ.ಶ.೯೭೬ರಲ್ಲಿ ಪೊತಿಯಬ್ಬೆಯ ಮಗಳು ಎರೆಯಬ್ಬೆಯು ಸಮಾಧಿಯೋಗದಿಂದ ಸುರಲೋಕಕ್ಕೆ ಸಂದಿರುತ್ತಾಳೆ. ಮಾಂಡಳಿಕ ಮಕುಟ ಚೂಡಾಮಣಿಯ ತಂಗಿಯಾದ ಚಂದಿಬ್ಬರಸಿಯು (ಕ್ರಿ.ಶ.೯೭೫ರಲ್ಲಿ) ಮುಡಿಪನ್ನು ಹೊಂದುತ್ತಾಳೆ. ಕ್ರಿ.ಶ.೧೦೨೩ರಲ್ಲಿ ದೊರೆತ ಶಾಸನವೊಂದು ಗಂಗಮಂಡಳದ ರಾಜಮಲ್ಲನ ಪತ್ನಿಯಾದ ಕಂಚಿಯಬ್ಬರಸಿ ತನ್ನ ಪತಿಯ ಮರಣದ ನಂತರ ಅಜಿತಸೇನಾಚಾರ್ಯರ ಬಳಿ ದೀಕ್ಷೆ ಪಡೆದು ಕುಪಣತೀರ್ಥದಲ್ಲಿ ಸಮಾಧಿವಿಧಿಯಿಂದ ಮುಡಿಪನ್ನು ಹೊಂದಿದಂತೆ ತಿಳಿಸುತ್ತದೆ. ಕ್ರಿ.ಶ.೯೮೭ರ ಅವಧಿಯಲ್ಲಿ ಕುಂದಣಸಾಯಿ ಹಾಗೂ ಚಂಗಲದೇವಿಯರಿಬ್ಬರೂ ಮುಡಿಪನ್ನು ಹೊಂದುತ್ತಾರೆ. ಗೊನಂಜಿಕಂತಿಯು ಕ್ರಿ.ಶ.೯೯೨ರಲ್ಲಿ ಮುಡಿಪುತ್ತಾಳೆ. ಈತನ ತಂದೆ ಗಂಗವಂಶದ ಎರೆಯಂಗ, ಕ್ರಿ.ಶ.೯೯೮ರ ಶಾಸನವು ಬೂತುಗನ ಮಗಳಾದ ಮಾರಸಿಂಗನ ತಂಗಿಯಾದ ಹರಿಗನ ಪತ್ನಿಯಾದ ಜೆಜ್ಜಾಂಬಿಕೆ ಅಥವಾ ಜೆಜ್ಬಬ್ಬರಸಿಯು ಮುಡಿಪನ್ನು ಹೊಂದಿದಂತೆ ತಿಳಿಸುತ್ತದೆ. ಬೂತುಗನ ಪತ್ನಿ ರೇವಕನಿಮ್ಮಡಿ ಸನ್ಯಸನವಿಧಾನದಿಂದ ರತ್ನತ್ರಯಗಳನ್ನು ಸಾಧಿಸಿದ್ದಂತೆ ಕ್ರಿ.ಶ.೧೦ನೇ ಶತಮಾನದ  ಶಾಸನದಿಂದ ತಿಳಿದು ಬರುತ್ತದೆ. ಗಂಗ ವಂಶದ ರಾಣಿಯರು ಕೊಪ್ಪಳದಲ್ಲಿ ಬಂದು ಧಾರ್ಮಿಕ ಮರಣವನ್ನು ಹೊಂದಿದರು.   ಕ್ರಿ.ಶ.೧೩೪೬ರಲ್ಲಿ ದೊರೆತ ಶಾಸನವು ಅನಂತಕೀರ್ತಿಯ ಪ್ರಿಯ ಶಿಷ್ಯನಾದ ಸಿಂಹನಂದ್ಯಾಚಾರ್ಯನ ನಿಸದಿಯನ್ನು ಹರಿಹರ ಮಹಾರಾಜ ಮತ್ತು ಅಲ್ಲಿಯ ಜನರು ಮಾಡಿಸಿದಂತೆ ಮಾಹಿತಿಯನ್ನು ನೀಡಿದೆ. ಕ್ರಿ.ಶ.೮೮೩ರಲ್ಲಿ ರಾಷ್ಟ್ರಕೂಟ ರಾಜ ಇಂದ್ರನು ಆಳುತ್ತಿದ್ದಾಗ ಅವನ ದಂಡನಾಯಕನಾದ ಮಾಮರಸನು ಸಿದ್ಧಕುಪಣಕ್ಕೆ ತೀರ್ಥವಂದನಾರ್ಥವಾಗಿ ಬಂದಿದ್ದ ಸಮಯದಲ್ಲಿ ಕದಂಬರ ಪೆರ್ಮದೇವ ಮತ್ತು ದಡಿಯರಸರು ಬಸದಿಯನ್ನು ಕಟ್ಟಿಸುತ್ತಾರೆ.
        ಇತ್ತೀಚಿನ ಶಾಸನಗಳ ಅಧ್ಯಯನದಿಂದ ಜೈನಧರ್ಮಕ್ಕೆ ಸಂಬಂಧಿಸಿದ ನೂತನ ಅಂಶಗಳು ಬೆಳಕಿಗೆ ಬಂದಿವೆ. ಕ್ರಿ.ಶ.೧೨೦೪ರ ಕೊಪ್ಪಳ ಶಾಸನವು ಕವಡೆಬೊಪ್ಪನ ಬಗೆಗೆ ಪ್ರಸ್ತಾಪಿಸುತ್ತದೆ. ಈತನು ಕೊಪ್ಪಳದಲ್ಲಿ ಹುಟ್ಟಿ ಜಿನಧರ್ಮ ಪ್ರಸಾರಕನಾಗಿ ಕುಪ್ಪಣ, ಲೊಕ್ಕಿಗುಂಡಿ, ಕುಪಣ ಬಂಕಾಪುರ, ಹೂಲಿ, ಮುಳುಗುಂದ, ನವಿಲ್ಗುಂದ, ಬೆಳಗುಳ, ಮುಂತಾದ ಸ್ಥಳಗಳಲ್ಲಿಯ ಚೈತ್ಯಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದ್ದನ್ನು, ಹೊಯ್ಸಳ ದೊರೆ ಬಲ್ಲಾಳ ರಾಯನಿಗೆ ನಿಷ್ಠೆಯನ್ನು ವ್ಯಕ್ತಪಡಿಸಿ ಅವನ ಪರವಾಗಿ ಅನೇಕ ಯುದ್ಧಗಳನ್ನು ಮಾಡಿದ್ದು,ಕೊನೆಗೆ ಕೊಪ್ಪಳದಲ್ಲಿಯೇ ನಿಸದಿ ಹೊಂದಿದ್ದು ಇತ್ಯಾದಿ ವಿಷಯಗಳನ್ನು ತಿಳಿಸುತ್ತದೆ.
     ಕೊಪ್ಪಳದಲ್ಲಿ ೧೨ ಬಸದಿಗಳು ಇದ್ದ ಬಗೆಗೆ ಶಾಸನಗಳಲ್ಲಿ ಉಲ್ಲೇಖವಿದೆ. ಅವುಗಳಲ್ಲಿ ತೀರ್ಥ ಬಸದಿ, ಬಸ್ತಿಕಟ್ಟೆ, ಈಶ್ವರ ಗುಡಿ, ಅಮೃತೇಶ್ವರ ಬಸದಿಗಳು ಮತ್ತು ಸಮೀಪದ ಮಾದಿನೂರಲ್ಲಿರುವ  ಚಂದ್ರನಾಥ ತೀರ್ಥಂಕರ ಬಸದಿ ಪ್ರಮುಖವಾಗಿವೆ.  ಜೈನಧರ್ಮದ ಪ್ರಮುಖ ಶಾಖೆಯಾದ ದಿಗಂಬರ ಜೈನ ಶಾಖೆಯ ಮುಖ್ಯ ಕೇಂದ್ರವಾಗಿ ಕೊಪ್ಪಳ (ಕೊಪಣ) ಇದ್ದಿತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ಕ್ರಿ.ಶ. ೧೦೦೮ರ ಕೊಪ್ಪಳ ಶಾಸನದಲ್ಲಿ ಸಿಂಹನಂದಿಯತಿಯು `ಇಂಗಿಣಿ' ಮರಣವನ್ನಪ್ಪಿದ ವಿವರ ಇದೆ.   ಕೊಪ್ಪಳದಲ್ಲಿ ದೊರೆತ ಇತ್ತೀಚಿನ ಹೆಚ್ಚಿನ  ೬೦ ಜಿನ ನಿಸದಿ ಶಾಸನಗಳು  ಕೊಪ್ಪಣವು ಪ್ರಸಿದ್ಧ ಜೈನ ಸಾಂಸ್ಕೃತಿಕ ಕೇಂದ್ರವಾಗಿತ್ತೆಂಬುದನ್ನು  ಸೂಚಿಸಿವೆ. ಕೊಪ್ಪಳವು ಹೇಗೆ ಪ್ರಮುಖ ಜೈನ ಕೇಂದ್ರ ವಾಗಿತ್ತೆಂಬುದನ್ನು ಸಾಬೀತು ಪಡಿಸಿದ್ದಲ್ಲದೆ ಕೊಪ್ಪಳಕ್ಕೂ ತಲಕಾಡಿನ ಗಂಗ ಅರಸುಮನೆತನದವರಿಗೂ ಇದ್ದ ಸಂಬಂಧದ ಬಗೆಗೆ ಬೆಳಕು ಚೆಲ್ಲಿವೆ. ಸುಮಾರು ಇಲ್ಲಿಯ ೭ ನಿಸದಿ ಶಾಸನಗಳು ಗಂಗರ ಸಂಬಂಧದ ಬಗೆಗೆ ಹೆಚ್ಚಿನ ಮಾಹಿತಿ ಒದಗಿಸಿವೆ. ಕೊಪ್ಪಳದಲ್ಲಿ ಆಗಿಹೋದ ಜೈನಮುನಿಗಳು, ಜೈನಾಚಾರ್ಯರು, ಅವರಗಣ,ಗಚ್ಛಗಳು, ಸಂಘಗಳ ಬಗೆಗೆ ಇನ್ನೂ ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ.  ಪ್ರಾಚೀನ ಕಾಲದಿಂದಲೂ ಜೈನಧರ್ಮದ ನೆಲೆ ವೀಡಾಗಿದ್ದ ಕೊಪ್ಪಳವು ವಿವಿಧ ಅರಸರ ಮನೆತನಗಳ ಪ್ರೋತ್ಸಾಹದಿಂದ  ಬಹುಕಾಲದ ವರೆವಿಗೂ ಪ್ರಚಲಿತದಲ್ಲಿತ್ತೆಂದು ಹೇಳ ಬಹುದು.  ಕೊಪ್ಪಳ ಹಾಗೂ ಸುತ್ತಮುತ್ತಲ ಪರಿಸರದಲ್ಲಿ  ಕ್ರಿ.ಶ. ೯ ನೇ ಶತಮಾನದಿಂದ ೧೪ ನೇ ಶತಮಾನದ ವರೆವಿಗೆ ವಿವಿಧ ಜೈನ ಗಣ-ಗಚ್ಛಗಳಿಗೆ ಸೇರಿದ  ೮೩ ಜನ  ಜೈನ ಮುನಿಗಳು, ಆಚಾರ್ಯರು ಇದ್ದುದ್ದನ್ನು ಶಾಸನಗಳು ಪ್ರಸ್ತಾಪಿಸಿವೆ. ಜೈನಧರ್ಮದ ವಿವಿಧ ಪಂಗಡಗಳ ಚರಿತ್ರೆಗೆ ವಿಪುಲವಾದ ಆಕರಗಳನ್ನು ಒದಗಿಸಿದೆ. ಕೊಪ್ಪಣವು ಪ್ರಾರಂಭ ಕಾಲದಿಂದಲೂ ಯಾಪನೀಯ ಸಂಘದ ಪ್ರಭಾವವುಳ್ಳ ಕೇಂದ್ರವಾಗಿದ್ದನ್ನು ಹಂಪನಾ ರವರು ಗುರುತಿಸಿದ್ದಾರೆ. ಶ್ರವಣಬೆಳಗೊಳದ ಹಾಗೆ ಕೊಪ್ಪಳವು ಜೈನರಿಗೆ ಧಾರ್ಮಿಕ ಮುಖ್ಯ ಸ್ಥಳವಾಗಿತ್ತೆಂಬ ಸಂಗತಿಗಳನ್ನು ಇಲ್ಲಿಯ  ಶಾಸನಗಳು ಖಚಿತ ಪಡಿಸಿವೆ.
   ಕೋಗಳಿ: ಜೈನಧರ್ಮದ ಅಸ್ತಿತ್ವವು ಸು.೬ನೆಯ ಶತಮಾನದಿಂದಲೇ ಇದ್ದಿತು ಎಂಬುದು ಕೋಗಳಿಯ ಕ್ರಿ.ಶ. ೧೦೫೫ರ ಶಾಸನದಲ್ಲಿಯ ಗಂಗರಸ ದುರ್ವಿನೀತನು ಕೋಗಳಿಯಲ್ಲಿ ಜಿನಬಸದಿಯನ್ನು ನಿರ್ಮಿಸಿದನು ಎಂಬ ಉಲ್ಲೇಖದಿಂದ ತಿಳಿದುಬರುತ್ತದೆ. ಕೋಗಳಿಯು ಪ್ರಸಿದ್ಧ ಜೈನ ಕೇಂದ್ರವಾಗಿತ್ತು. ಕೋಗಳಿಯು ನೊಳಂಬವಾಡಿ ೩೨೦೦೦ ನಾಡಿನ ಉಪವಿಭಾಗವಾಗಿದ್ದು ೫೦೦ ನಾಡಿನ ಪ್ರಮುಖ ಕೇಂದ್ರ ಭಾಗವಾಗಿತ್ತು. ಪ್ರಸಿದ್ಧ ಜೈನ ಕೇಂದ್ರವಾಗಿತ್ತು ಎಂಬುದನ್ನು ಈಗಲೂ ಇಲ್ಲಿ ಲಭ್ಯವಿರುವ ಜೈನಮೂರ್ತಿಗಳು ಹಾಗೂ ಬಸದಿಯ ಅವಶೇಷಗಳು ಸ್ಪಷ್ಟಪಡಿಸುತ್ತವೆ. ಇಲ್ಲಿ ದೊರೆತಿರುವ ಅನೇಕ ಜೈನ ಅವಶೇಷಗಳಲ್ಲಿ ಪಾರ್ಶ್ವನಾಥನ ಭವ್ಯಮೂರ್ತಿ ಉಲ್ಲೇಖನೀಯವಾಗಿದೆ. ಅನೇಕ ಶಾಸನಗಳಲ್ಲಿ ಕೋಗಳಿನಾಡಿನ ಪಟ್ಟಣಗಳ ಸುಂದರವಾದ ವರ್ಣನೆ ಒಡಮೂಡಿದೆ. ಇಲ್ಲಿಯ ಶಾಸನಗಳಲ್ಲಿ ತ್ರಿಪದಿ ಛಂದಸ್ಸಿನಲ್ಲಿ ರಚಿತವಾದ ಪದ್ಯಗಳು ದೊರೆತಿವೆ. ಹಾಗೆಯೇ ಛಂದಸ್ಸಿಗೆ ಸಂಬಂಧಿಸಿದ ಹಾಗೆ ಮಹತ್ತರವಾದ ವಿಷಯವನ್ನು ಶಾಸನವೊಂದು ನಿರೂಪಿಸಿದೆ. ಆ ಶಾಸನದಿಂದ ತೋಮರ ರಗಳೆ ಎಂಬ ರಗಳೆಯ ಪ್ರಭೇದ ತಿಳಿದುಬರುತ್ತದೆ.
    ಒಟ್ಟಾರೆ ಕಲ್ಯಾಣ ಭಾಗದ ಜೈನ ಸಾಂಸ್ಕೃತಿಕ ಕೇಂದ್ರಗಳು  ಜೈನಧರ್ಮದ,ಸಮಾಜದ ಸಂಘಟನೆ, ಸಾಂಘಿಕ-ಸಾಂಸ್ಥಿಕ ಸ್ವರೂಪವನ್ನು ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪ್ರಸಿದ್ಧ ಧಾರ್ಮಿಕ ಆಚಾರ್ಯರು, ಮುನಿಗಳ ನೆಲೆದಾಣಗಳಾಗಿದ್ದು ಚಟುವಟಿಕೆಯಿಂದ ಕೂಡಿದವುಗಳಾಗಿರುತ್ತಿದ್ದವು. ರಾಜರುಗಳು, ಮಾಂಡಳಿಕರು, ವರ್ತಕರು ಇತ್ಯಾದಿ ಧರ್ಮಾನುಸಕ್ತರಿಂದ ಪ್ರಾಮುಖ್ಯತೆ ಪಡೆದಿದ್ದ ಇವುಗಳಲ್ಲಿ ಕೆಲವು ಆಶ್ರಯ ಇಲ್ಲದಾಗ ಸೊರಗಿ  ಪಾಳುಹೊಂದಿ ಅವಶೇಷಗಳ ಪಳೆಯುಳಿಕೆಗಳಾಗಿವೆ. ಈ ಅವಶೇಷಗಳನ್ನು ರಕ್ಷಿಸಿ ಕಾಪಾಡುವ ಹೊಣೆ ಕನ್ನಡಿಗರೆಲ್ಲದ್ದಾಗಿದೆ.
       ಪರಾಮರ್ಶನ ಗ್ರಂಥಗಳು
೧.ಎಂ.ಚಿದಾನಂದಮೂರ್ತಿ: ಹೊಸತು ಹೊಸತು, ಪ್ರಸಾರಾಂಗ, 
  ಕನ್ನಡ ವಿಶ್ವವಿದ್ಯಾಲಯ, ಹಂಪಿ.೧೯೯೩
೨.ಸಿ.ನಾಗಭೂಷಣ: ಕಲ್ಯಾಣ ಕರ್ನಾಟಕ ಸಾಹಿತ್ಯ ಸಂಸ್ಕೃತಿ
  ಅವಿರತ ಪ್ರಕಾಶನ, ಬೆಂಗಳೂರು ೨೦೦೦
  ಶಾಸನಗಳು ಮತ್ತು ಕನ್ನಡ ಸಾಹಿತ್ಯ,ಪ್ರಸಾರಾಂಗ
ಗುಲಬರ್ಗಾ ವಿಶ್ವವಿದ್ಯಾಲಯ,ಗುಲಬರ್ಗಾ ೨೦೦೫
೩.ಧವಳ ( ಡಿ.ಎನ್.ಅಕ್ಕಿಯವರ ಅಭಿನಂದನಾ ಗ್ರಂಥ)
   ಸಂ.ಅರುಣಿ ಎಸ್.ಕೆ,  ಶಹಪೂರ, ೨೦೧೧
೪. ಎಸ್.ಕೆ.ಮೇಲಕಾರ: ಕೊಪ್ಪಳ ಜಿಲ್ಲೆಯ ಶಾಸನಗಳ ಸಾಂಸ್ಕೃತಿಕ ಚರಿತ್ರೆ ಮತ್ತು ಶಿಲಾಯುಗದ ಸಂಸ್ಕೃತಿ, ಭಾರತ ಸಿಂಧುರಶ್ಮಿ ಪ್ರಕಾಶ, ಧಾರವಾಡ ೨೦೧೧
೫.ಚೆನ್ನಬಸವ ಹಿರೇಮಠ: ಎಡೆದೊರೆ ನಾಡು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೦
೬.ಜೆ.ಎಂ.ನಾಗಯ್ಯ: ಆರನೆಯ ವಿಕ್ರಮಾದಿತ್ಯನ ಶಾಸನಗಳು: ಒಂದು ಅಧ್ಯಯನ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ ೧೯೯೨
೭. ಗವಿದೀಪ್ತಿ ಸಂ: ಎಸ್.ಎಂ.ವೃಷಭೇಂದ್ರ ಸ್ವಾಮಿ, ಗವಿಮಠ, ಕೊಪ್ಪಳ, ೧೯೮೭
೮.  ಬೀದರ ಜಿಲ್ಲಾ ದರ್ಶನ ಸಂ: ಸೋಮನಾಥ ಯಾಳವಾರ ಮತ್ತು ಪ್ರೇಮಾ ಸಿರ್ಶೆ
   ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ೨೦೦೫
 
             



ಗುಬ್ಬಿಮಲ್ಲಣಾರ್ಯವಿರಚಿತ ‘ವೀರಶೈವಾಮೃತ ಪುರಾಣದಲ್ಲಿ’ ಪುರಾತನ ಶರಣರು ಮತ್ತು ನೂತನ ಶರಣರು: ಕೆಲವು ಟಿಪ್ಪಣಿಗಳು ಡಾ.ಸಿ.ನಾಗಭೂಷಣ


ಗುಬ್ಬಿಮಲ್ಲಣಾರ್ಯವಿರಚಿತ ‘ವೀರಶೈವಾಮೃತ ಪುರಾಣದಲ್ಲಿಪುರಾತನ ಶರಣರು ಮತ್ತು ನೂತನ ಶರಣರು: ಕೆಲವು ಟಿಪ್ಪಣಿಗಳು
                                     ಡಾ.ಸಿ.ನಾಗಭೂಷಣ
    ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಸ್ಥಾನ ಪಡೆದಿರುವ ಕವಿಗಳಲ್ಲಿ ಗುಬ್ಬಿ ಮಲ್ಲಣಾರ್ಯನು ಒಬ್ಬನು. ಬಸವ ಪುರಾಣದಲ್ಲಿ ನಿಷ್ಣಾತನಾಗಿದ್ದರಿಂದ `ಬಸವ ಪುರಾಣದ ಮಲ್ಲಣಾರ್ಯ' ಎಂಬ ಹೆಸರಿನಿಂದಲೇ ಕರೆಯಲ್ಪಟ್ಟಿದ್ದಾನೆ. ಈತನ ಕಾಲ ಕ್ರಿ.ಶ. 1531. ಪ್ರಕಾಂಡ ಪಂಡಿತನೂ, ಬಹುಭಾಷಾ ಸಂಪನ್ನನೂ ಆಗಿದ್ದನು. ಈತನು 1. ಭಾವಚಿಂತಾರತ್ನ, 2.ವೀರಶೈವಾಮೃತಮಹಾಪುರಾಣ,3. ಪುರಾತನರರಗಳೆ ಕೃತಿಗಳನ್ನು ರಚಿಸಿದುದಾಗಿ ತಿಳಿದುಬರುತ್ತದೆ.
   ಕವಿಯು ತನ್ನ ವಂಶಪಾರಂಪರ್ಯವನ್ನು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಅಮರಗುಂಡದ ಮಲ್ಲೇಶ್ವರಾಚಾರ್ಯ, ಅವರ ಶಿಷ್ಯ ಶೂಲವೇರಿದ ಮಹತ್ವವುಳ್ಳ ಗುರುಭಕ್ತ, ಅವರ ಮಗ ದೇಶಿಕ ಪಟ್ಟವರ್ಧನ ಸೌಂದರ್ಯ ಮಲ್ಲಿಕಾರ್ಜುನ ಪಂಡಿತ, ಅವರ ಮಗ ನಾಗನಾಥಾರ್ಯ,ಅವರ ಮಗ ಅಹಿಯಂ ಲಿಂಗಕೆ ಛತ್ರವಂ ಮಾಡಿದ ಅಮರಗುಂಡಾರ್ಯ, ಇವರ ವಂಶದಲ್ಲಿ ಗುಬ್ಬಿಯ ಮಲ್ಲಣ ಜನಿಸಿ ಅನುಭವ ಯೋಗಷಟ್ಥ್ಸಲ ಖ್ಯಾತಮಂ ಕೃತಿಯನ್ನು ಗಣಭಾಷ್ಯ ರತ್ನಮಾಲೆಯಂ ಮಾಡಿ ವಾತೂಲಕ್ಕೆ ಟಿಪ್ಪಣಿಯನ್ನು ಎಸಗಿದನು. ಗುಬ್ಬಿಯ ಮಲ್ಲಣ್ಣನ ಮಗ ಗುರುಭಕ್ತ, ಈತನಹೆಂಡತಿ ಸಪ್ಪೆಯಮ್ಮ, ಇವರ ಮಗ ಗುಬ್ಬಿಯ ಮಲ್ಲಣಾರ್ಯ ಎಂದು ವಿದ್ವತ್ ಪರಂಪರೆಯ ವಂಶಾವಳಿಯನ್ನು ಹೇಳಿಕೊಂಡಿದ್ದಾನೆ. ಈತನು ತನ್ನ ಗುರು ಪರಂಪರೆಯನ್ನು ಪ್ರಸ್ತಾಪಿಸಿದ್ದಾನೆ.ಸಿದ್ಧಮಲ್ಲೇಶ ಕವಿಯ ದೀಕ್ಷಾ ಗುರುವಾದರೆ, ಗುಮ್ಮಳಾಪುರದ ಶಾಂತೇಶ ವಿದ್ಯಾಗುರು, ಜೊತೆಗೆ ನಾಗವಲ್ಲಿಯ ಶಿವಪೂಜೆಯಾರ್ಯ, ಸಪ್ಪೆಯ ಲಿಂಗಣಾಚಾರ್ಯ,ಶಿವಾನುಭವಿ ಹಲಗೆಯಾರ್ಯ ಮೊದಲಾದವರು ಈತನ ಕಾವ್ಯ ರಚನೆಗಳಿಗೆ ಗುರು ಸ್ಥಾನದಲ್ಲಿದ್ದುಕೊಂಡು ಮಾರ್ಗದರ್ಶನ ಮಾಡಿದ್ದಾರೆ.
 ವೀರಶೈವ ಸಿದ್ಧಾಂತ ನಿರೂಪಣೆಯನ್ನು ಗುರು ಶೀಲವಂತದೇವರು ಹಲಗೆದೇವರ ಪ್ರಾರ್ಥನೆಯ ಮೇರೆಗೆ ಅವರಿಗೆ ಬೋಧಿಸಿದ್ದರು. ಅದನ್ನು ಹಲಗೆ ದೇವರು ಕೆಂಚವೀರಣ್ಣೊಡೆಯರಿಗೆ ಜ್ಯೋತಿಯಮ್ಮನಾಲಯದಲ್ಲಿ, ಮಹಾವೀರ ಶೀಲಸಂಪನ್ನ ಕಲ್ಲೇಶ್ವರ, ಸೈಂಧವದ ಶಾಂತದೇವರು, ಕಲ್ಯಾಣ ಮಲ್ಲೇಶ್ವರರು ನಂಜಯ್ಯ, ಸಪ್ಪೆಯ ಮಲ್ಲಿಕಾರ್ಜುನ, ಸಮಾಧಿ ಸಿದ್ಧಮ್ಮ, ಸಪ್ಪೆಯಮ್ಮ ಮುಂತಾದವರ ಸಮ್ಮುಖದಲ್ಲಿ ವಿವರಿಸಿದರು. ವೀರಶೈವಧರ್ಮ ತತ್ವಸಿದ್ಧಾಂತಗಳನ್ನು ಒಳಗೊಂಡ ಕೃತಿಯನ್ನು ರಚಿಸುವ ಮಹಾನುಭಾವರು ಯಾರು ಎಂದು ಅಂದಿನ ಧಾರ್ಮಿಕ ಮುಖಂಡರೂ ಗುರುವರ್ಗದವರೂ ಸಮಾಲೋಚಿಸಿ ಹಲಗೆಯಾರ್ಯರು ತಮ್ಮ ಶಿಷ್ಯನಾದ ಮಲ್ಲಣಾರ್ಯನೇ ಸಮರ್ಥ ಎಂದು ನಿಶ್ಚಯಿಸಿ ಆ ಮಹತ್ ಕಾರ್ಯವನ್ನು ಮಲ್ಲಣಾರ್ಯನಿಗೆ ವಹಿಸಿದ ವಿವರವು ಕಾವ್ಯದ ಪದ್ಯದಿಂದಲೇ (ಕಾಂ.1-ಸಂ.1-ಪ.48) ತಿಳಿದು ಬರುತ್ತದೆ.
ಈ ವೀರಾಶೈವಾಮೃತಾಖ್ಯ ಸಂಗ್ರಹವನೀ
ಭೂವಳಯದಲ್ಲಿ ಕೃತಿಯಂಮಾಳ್ಪ ಶಿವಕವಿಯ
ದಾವನೆಂದರಿದು ಹಲಗೆಯ ದೇಶಿಕಂ ಮಲ್ಲಣಾರ್ಯನಂ ಕರೆದು ನುಡಿದಂ
ನಾವು ಪೇಳ್ವೀಬೋಧೆಯಂ ಪದನ ಮಾಡುವೊಡೆ
ಪಾವನ ಚರಿತ್ರ ಕೇಳ್ ನೀನೆ ಯೋಗ್ಯಕಣ  ( ಕಾ.1.ಸಂ.1 ಪ.48)ಎಂದು ವಿರಕ್ತಾಧೀಶ್ವರ ಹಲಗೆದೇವರು ವೀರಶೈವಾಮೃತ ಪುರಾಣ ರಚಿಸಲು ಮಲ್ಲಣಾರ್ಯರಿಗೆ ಪ್ರೇರಣೆ ಯಿತ್ತರು. ಗುಬ್ಬಿಯ ಮಲ್ಲಣಾರ್ಯರು ಇದಕ್ಕೆ ಪದನಂ ಮಾಡಿರುವರು. ಅಂದರೆ ಪದ್ಯದಲ್ಲಿ ಕೃತಿ ವಿರಚನೆ ಮಾಡಿರುವರು. ಈ ಪುರಾಣ ಕಾವ್ಯದಲ್ಲಿ ಹಲಗೆದೇವರು ಕೆಂಚವೀರಣ್ಣೊಡೆಯರಿಗೆ ಹೇಳಿದಂತೆ ಹಲವೆಡೆ ಉಲ್ಲೇಖವಿದೆ. ಹಲಗೆದೇವರು ವೀರಶೈವ ಸಿದ್ಧಾಂತವನ್ನು ಅದರ ಹಿನ್ನೆಲೆ ಮುನ್ನೆಲೆಗಳನ್ನು ವಿವರಿಸಿದ್ದು ಅದನ್ನು ಕರಗತ ಮಾಡಿಕೊಂಡು ಸ್ವಾನುಭವದಿಂದ ಮಲ್ಲಣಾರ್ಯನು ಈ ಬೃಹತ್ ಕಾವ್ಯವನ್ನು ರಚಿಸಿದ್ದಾನೆ. ಮಲ್ಲಣಾರ್ಯನು ತನ್ನ ದೀಕ್ಷಾಗುರು, ಶಿಕ್ಷಾಗುರು, ರಕ್ಷಾಗುರುಗಳ ಅಣತಿಯಂತೆ ಈ ಕೃತಿಯನ್ನು ರಚಿಸಿರುವುದಾಗಿ ಈ ಕೆಳಕಂಡ ಪದ್ಯದಲ್ಲಿ ಹೇಳಿಕೊಂಡಿದ್ದಾನೆ.
ಭೂಲೋಕಪಾವನ ಕಕುದ್ಗಿರಿ ಸುದಾಕ್ಷಿಣ್ಯ
ಕೈಲಾಸವದರ ಮೇಗಣಗವಿಯ ಸಿಂಹಾಸ
ನಾಲಂಕೃತದ ಶಾಂತನಂಜೇಶ್ವರಾಂಘ್ರಿ ಪಂಕಜಭೃಂಗ ಮಲ್ಲಣಾರ್ಯಂ
ಶೀಲ ಷಟ್ಸ್ಥಲ ಹಲಗೆಯಾಚಾರ್ಯನ ಶಿಷ್ಯ
ಮೌಲಿಮಣಿ ಕೆಂಚವೀರಾಹ್ವಯಂಗೊರೆದ ಸುವಿ
ಶಾಲ ವರ ವೀರಶೈವಾಮೃತ ಪುರಾಣಮಂ ಕೂರ್ತು ಪದನಂ ಮಾಡಿದಂ ( ಕಾಂ.1.ಸಂ.1.ಪ.65) ಈ ಪದ್ಯವು ವೀರಶೈವಾಮೃತ ಮಹಾಪುರಾಣದ ಪ್ರತಿ ಸಂಧಿಯ ಕಡೆಯಲ್ಲಿಯೂ ಬರುತ್ತದೆ.
   ಶೀಲಸಂಪನ್ನೆ ಮಹಾಶಿವಶರಣೆ ಶಿವಗಂಗೆಯ ಜ್ಯೋತಿಯಮ್ಮಳು ಮಲ್ಲಣಾರ್ಯನಿಗೆ ಗುರುಗಳ ಕೃಪಾಶೀರ್ವಾದ ಪ್ರಾಪ್ತವಾದಂತೆ  ಕಾವ್ಯಗಳನ್ನು ರಚಿಸಲು ನೆರವಿತ್ತವಳು, ಅನುವಿತ್ತವಳು. ಜ್ಯೋತಿಯಮ್ಮನ ಮನೆಯಲ್ಲಿ ಹಲಗೆದೇವರು ಈ ಪ್ರಬಂಧವನ್ನು ಮುಗಿಸಿದರು ಎಂದು ಕವಿಯು ಹೇಳಿದ್ದಾನೆ. ಮಲ್ಲಣಾರ್ಯನು ತಾನು ದಕ್ಷಿಣ ಕೈಲಾಶವೆನಿಸಿದ ಕಕುದ್ಗಿರಿ(ಶಿವಗಂಗೆ)ಯ ಮೇಗಣ ಗವಿಯ ಸಿಂಹಾಸನಾಲಂಕೃತ ಶಾಂತನಂಜೇಶ್ವರನ ಅಂಘ್ರಿ ಪಂಕಜನೆಂದು ಹೇಳಿಕೊಂಡಿದ್ದಾನೆ. ಈ ಶಾಂತನಂಜೇಶನ ಗುರು ಪರಂಪರೆ ಭವ್ಯವಾಗಿದೆ. ಮತೀಯಶಾಂತೇಶ, ಶಂಭುಗುರುವಲ್ಲಭ, ಮತೀಯ ವೀರೇಶ, ಸಿದ್ಧರಾಮೇಶ, ಶಾಂತನಂಜೇಶ, ಚಿಕ್ಕಶಾಂತೇಶ್ವರ, ಶಾಂತನಂಜೇಶ್ವರ ಮುಂತಾದವರು ಮೇಗಣ ಗವಿಯ ಸಿಂಹಾಸನಾಧಿಪತಿಗಳಾಗಿದ್ದರು. ಈ ಶಾಂತನಂಜೇಶ್ವರರ ಪಾದ ಪಂಕಜ ಭೃಂಗಿಯಾಗಿದ್ದವನು ಮಲ್ಲಣಾರ್ಯ.
  ಈ ಕಾವ್ಯದಲ್ಲಿ ಬಂದಿರುವ  ಕಾವ್ಯಮಯ ವರ್ಣನೆಗಳು ಮತ್ತು ಕವಿ ಕಲ್ಪನೆಗಳು ಗುಬ್ಬಿಯ ಮಲ್ಲಣಾರ್ಯನು ಪ್ರತಿಭಾನ್ವಿತ ಕವಿ ಎಂಬುದನ್ನು ಸಾಬೀತು ಪಡಿಸುತ್ತವೆ. ವೇದಾಂತ, ಸಿದ್ಧಾಂತ,ಧರ್ಮ,ತತ್ವ,ಧಾರ್ಮಿಕ ಆಚರಣೆಯ ವಿಧಿವಿಧಾನ, ಶಾಸ್ತ್ರ,ಮಂತ್ರ,ತಂತ್ರ ಮುಂತಾದವುಗಳಲ್ಲಿ  ಪರಿಣಿತಿಯನ್ನು ಪಡೆದಿದ್ದ ಮಲ್ಲಣಾರ್ಯ ತನ್ನ ಸ್ವಾನುಭವ ಮತ್ತು ಸ್ವವಿವೇಚನೆಯಿಂ ಈ ಕೃತಿಯನ್ನು ರಚಿಸಿದ್ದಾನೆ.
ಕವಿಯು ಕೃತಿಯನ್ನು ಪೂರ್ಣಗೊಳಿಸಿದ ಕಾಲದ ಬಗೆಗೆ ಸ್ಪಷ್ಟವಾಗಿ ತಿಳಿಸಿದ್ದಾನೆ.
  ಏನೆನಲು ಶಾಲಿವಾಹನ ಶಕಂ ಸಾವಿರದ
  ನಾನೂರ ಐವತ್ತು ಎರಡು ವರುಷವದಾದ
  ನೂನತೆಯ ವಿಕೃತಿ ವತ್ಸರದೊಳಾಶ್ವಯುಜಮಾಸದ ಶುದ್ಧಪಂಚಮಿಯೊಳು
  ಶ್ರೀನಿಶಾಕರವಾರ ಜ್ಯೇಷ್ಠಾಸು ನಕ್ಷತ್ರ
  ವೈನಿಹಿತ ಸೌಭಾಗ್ಯಯೋಗವಣಿಜಾ ಕರಣ
  ವೀ ನಿರುದ್ಧಕೆ ವೀರಶೈವಾಮೃತಂ ಪೂರ್ಣಾಮಾಯ್ತು ಶಿವಮಸ್ತು ಸತತಂ ( ಕಾ.8-ಸಂ.22-ಪ.55)  ಈ ಪದ್ಯದ ಪ್ರಕಾರ ವೀರಶೈವಾಮೃತಮಹಾಪುರಾಣವು ಕ್ರಿ.ಶ.1530ರಲ್ಲಿ ಪೂರ್ಣಗೊಡಿದೆ.
   ಗುಬ್ಬಿಯ ಮಲ್ಲಣಾರ್ಯನ ಮೇರುಕೃತಿಯಾದ ವೀರಶೈವಾಮೃತಮಹಾಪುರಾಣವು ವಾರ್ಧಕ ಷಟ್ಪದಿಯಲ್ಲಿ ರಚನೆಗೊಂಡಿದ್ದು, ಎಂಟು ಕಾಂಡಗಳು, ಒಂದುನೂರಾ ಮೂವತ್ತಾರು ಸಂಧಿಗಳು, ಏಳು ಸಾವಿರದ ತೊಂಭತ್ತೊಂಬತ್ತು ಪದ್ಯಗಳು ಎಂಟುನೂರಾ ಹದಿನೇಳು ಸಂಸ್ಕೃತ ಶ್ಲೋಕಗಳನ್ನು ಒಳಗೊಂಡ ಸುದೀರ್ಘ ಕಾವ್ಯವಾಗಿದೆ. ಈ ಬೃಹತ್ ಗ್ರಂಥವನ್ನು ಎನ್.ಶಿವಪ್ಪ ಶಾಸ್ತ್ರಿಗಳು ಮೊದಲಿಗೆ 1907 ರಲ್ಲಿ ಸಂಪಾದಿಸಿ ಪ್ರಕಟಿಸಿದರು. ಈ ಬೃಹತ್ ಸ್ವರೂಪವನ್ನು ಕಂಡು ಇದರ ಸಂಪಾದಕರುಗಳಾದ ಬೆಂಗಳೂರು ಶಿವಪ್ಪಶಾಸ್ತ್ರಿಗಳು ಮತ್ತು ಎಸ್. ವೀರಪ್ಪ ಶಾಸ್ತ್ರಿಗಳು ಇದನ್ನು ‘ವೀರಶೈವಾಮೃತ ಮಹಾಪುರಾಣ’ ಎಂದೇ ಹೆಸರಿಸಿದ್ದಾರೆ. ಆದರೆ ಕವಿಯು ಮಾತ್ರ ಉದ್ದಕ್ಕೂ ತನ್ನ ಗ್ರಂಥವನ್ನು ‘ವೀರಶೈವಾಮೃತ ಪುರಾಣ’ ಎಂದೇ ಕರೆದಿದ್ದಾನೆ. (ಕಾ.08-ಸಂ22-ಪ.86) ಈ ಕೃತಿಯ ಎರಡನೆಯ ಮುದ್ರಣವು ಆರ್.ಸಿ.ಹಿರೇಮಠ ಅವರ ಸಂಪಾದಕತ್ವದಲ್ಲಿ  1999 ರಲ್ಲಿ ಬೆಂಗಳೂರಿನ ಎನ್.ಎಸ್.ಎಸ್. ಕೇಂದ್ರದಿಂದ ಪ್ರಕಟಗೊಂಡಿದೆ. ಈ ಎರಡು ಮುದ್ರಣಗಳಲ್ಲಿ ಕೆಲವು ದೋಷಗಳು, ಸ್ಖಾಲಿತ್ಯಗಳು ಉಳಿದು ಕೊಂಡಿದ್ದನ್ನು ಮನಗಂಡ ಎನ್.ಬಸವಾರಾಧ್ಯರು ಸುದೀರ್ಘಕಾಲ ಶ್ರಮವಹಿಸಿ ಹಲವಾರು ಹಸ್ತಪ್ರತಿಗಳನ್ನು ಬಳಸಿಕೊಂಡು ಪಾಠಾಂತರಗಳನ್ನು ಗುರುತು ಹಾಕಿಕೊಂಡು ಪರಿಷ್ಕಾರಗೊಳಿಸಿ ಪ್ರಕಟನೆಗೆ ಸಿದ್ಧಪಡಿಸಿದ್ದರು. ಈ ಕೃತಿಯನ್ನು ಶಾಸ್ತ್ರೀಯವಾಗಿ ಪ್ರಕಟಿಸ ಬೇಕೆಂಬ ಅವರ ಆಸೆ ಕೈಗೂಡಲಿಲ್ಲ. ಇತ್ತೀಚಿಗೆ ಅವರ ಶಿವೈಕ್ಯರಾದರು.  ಆಸಕ್ತ ವಿದ್ವಾಂಸರು ಅವರ ಆಸೆಯನ್ನು  ನೆರವೇರಿಸ ಬೇಕಾಗಿದೆ.
  ಹದಿನೈದು,ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, ಗುಬ್ಬಿಯ ಮಲ್ಲಣಾರ್ಯನ  ವೀರಶೈವಾಮೃತ ಮಹಾಪುರಾಣ,  ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ,  ಉತ್ತರ ದೇಶದ ಬಸವಲಿಂಗನ ಬಸವೇಶ್ವರ ಪುರಾಣದ ಕಥಾಸಾಗರ ಮುಂತಾದ ಕಥಾ ಸಂಕಲನಗಳು ನಿರ್ಮಿತವಾಗಿವೆ. ಇಂತಹ ಸಂಕಲನ ಗ್ರಂಥಗಳಲ್ಲಿ  ವೀರಶೈವಾಮೃತ ಮಹಾಪುರಾಣವು ಗಮನಾರ್ಹ ವಾದುದಾಗಿದೆ. ಆವೇಳೆಗಾಗಲೇ ಪುರಾಣ, ಕಾವ್ಯದ ರೂಪದಲ್ಲಿ ಅಸ್ತಿತ್ವದಲ್ಲಿದ್ದ , ಜನರ ಬಾಯಲ್ಲಿನಲಿದಾಡುತ್ತಿರುವಂತಹ ಕತೆಗಳನ್ನೆಲ್ಲ ತನ್ನದೇ ಆದಭಾಷೆಯಲ್ಲಿ ನಿರೂಪಿಸುತ್ತ ಒಂದೆಡೆ ಕಲೆ ಹಾಕಿರುವುದೇ ಕವಿಯಸಾಧನೆಯಾಗಿದೆ. ಆತ ಓದಿರುವ ಸಂಸ್ಕೃತ-ಕನ್ನಡವಲ್ಲದೆ ಅನ್ಯಭಾಷಾ ಪ್ರಾಚೀನ ಕೃತಿಗಳನ್ನೆಲ್ಲ ಮನದಂದು, ಆದಿಶೈವ, ಶೈವ ಮತ್ತು  ವೀರಶೈವಕ್ಕೆ ಪೂರಕವಾದ ಕತೆಗಳನ್ನೆಲ್ಲ ಪಟ್ಟಿಮಾಡಿಕೊಂಡು ಶರಣರ ಕಥೆಗಳನ್ನು ಅಲ್ಲಲ್ಲಿಯೇ ಹೇಳುತ್ತಾ ಸಾಗುತ್ತಾನೆ.  
    ಈ ಪುರಾಣ ಕಾವ್ಯವು ಏಕವ್ಯಕ್ತಿ ಪ್ರಧಾನವಾದ ಅಥವಾ ಬಹುವ್ಯಕ್ತಿ ಪ್ರಧಾನವಾದ ಪುರಾಣವಾಗಿರದೆ ವೀರಶೈವಧರ್ಮ ಪ್ರಧಾನವಾದ ಕೃತಿಯಾಗಿದೆ. 1. ವೀರಮಾಹೇಶ್ವರ ಸಿದ್ಧಾಂತ 2. ವೀರಮಾಹೇಶ್ವರ ತಂತ್ರ 3. ವೀರಮಹೇಶ್ವರ ಅಚಾರ ಸಂಗ್ರಹ4. ಸೋಮನಾಥ ಭಾಷ್ಯ 5  ವೀರಶೈವ ಸುಧಾರ್ಣವ 6. ಗಣಭಾಷ್ಯರತ್ನಮಾಲೆ 7. ಬಸವೇಶ್ವರ ಪುರಾಣ8. ಗಿರಿಜಾ ಕಲ್ಯಾಣ 9. ಆರಾಧ್ಯಚಾರಿತ್ರ್ಯ10. ನನ್ನಯ್ಯನ ಕಾವ್ಯ 11. ಬಸವ ಚಾರಿತ್ರ್ಯ12. ಸಿಂಗಿರಾಜ ಪುರಾಣ ಇತ್ಯಾದಿಪೂರ್ವದ ಕಾವ್ಯ ಪುರಾಣಗಳಿಂದ ಸಂಗ್ರಹಿಸಿದ್ದಾನೆ.
     ಈ ಕಥಾ ಸಂಗ್ರಹಕ್ಕಾಗಿ ಮಲ್ಲಣಾರ್ಯನು ಸಂಸ್ಕೃತ, ಕನ್ನಡ , ಅರೆಭಾಷೆ, ಆಂಧ್ರಭಾಷೆ, ದ್ರಾವಿಡಭಾಷೆ ಮತ್ತು ಪ್ರಾಕೃತಭಾಷಾ ಸಾಹಿತ್ಯವನ್ನು ಅವಲೋಕಿಸಿದ್ದಾನೆ. ಒಟ್ಟಿನಲ್ಲಿ ನಾಲ್ಕಾರು ಭಾಷೆಯ ನೂರಾರು ಮುಖ್ಯಾತಿಮುಖ್ಯ ಮತ್ತು ಸಾಧಾರಣ ಗ್ರಂಥಗಳೆಲ್ಲವನ್ನು ಆಳವಾದ ಅಧ್ಯಯನದಿಂದ ನೋಡಿ ಶಿವಭಕ್ತಿ-ಶಿವಪವಾಡ-ಶರಣಪವಾಡದ ಕಥೆಗಳನ್ನು ಸಂಗ್ರಹಿಸಿ, ವೀರಶೈವಾಚಾರದ ಪ್ರಭಾವ ಬೀರುವ ಯತ್ನ ಇಲ್ಲಿದೆ.  ಸ್ಥೂಲವಾದ ಮಾತುಗಳಲ್ಲಿ ಸಂಕ್ಷಿಪ್ತಗೊಳಿಸಿ ಹೇಳುವುದಾದರೆ ಈ ಕೃತಿಯ ವಸ್ತು ವ್ಯಾಪಕ ಗ್ರಂಥಗಳಿಂದ ಶೋಧಿಸಲ್ಪಟ್ಟದ್ದೂ ಸಂಗ್ರಹಿಸಲ್ಪಟ್ಟದ್ದೂ ಅಗಿರುತ್ತದೆ. ವಿವಿಧ ಭಾಷಾ ಸಾಹಿತ್ಯವನ್ನೆಲ್ಲ ಆಳವಾಗಿ ಅಧ್ಯಯನ ಮಾಡಿ ಆಲ್ಲಿ ಉತ್ತಮವಾಗಿರುವ ಶಿವಮಹಿಮೆ, ಶಿವಶರಣರ, ಭಕ್ತರ, ಶಿವಭಕ್ತಿ, ಶಿವನು ಮಾಡಿದಲೀಲೆಗಳು, ಶರಣರು ಮಾಡಿದ ಪವಾಡಗಳು ಹೀಗೆ ಸಮೃದ್ಧ ಆಕರಗಳಿಂದ ಪಡೆದ ವಸ್ತುವಾಗಿದೆ.
 ವೀರಶೈವಾಮೃತ ಪುರಾಣವು ಒಂದು ವಿಶಿಷ್ಟ ತೆರನಾದ ಪುರಾಣ. ಬಸವ ಪುರಾಣ, ಚೆನ್ನಬಸವ ಪುರಾಣ, ಸಿಂಗಿರಾಜ ಪುರಾಣಗಳಂತೆ ಅಲ್ಲಿ ಒಬ್ಬ ಮಹಿಮಾನ್ವಿತ ಶರಣನ ಚರಿತ್ರೆ ಕಥಾವಸ್ತುವಾಗಿಲ್ಲ. ಶಿವತತ್ವ ಚಿಂತಾಮಣಿಯಂತೆ ಧರ್ಮ ತತ್ವಶಾಸ್ತ್ರ ನಿರೂಪಣೆಯೆ ವೀರಶೈವಾಮೃತ ಪುರಾಣದ ಮುಖ್ಯ ವಿಷಯ. ತತ್ವ ಪ್ರಧಾನವಾಗಿರುವ ವೀರಶೈವಾಮೃತ ಪುರಾಣದಲ್ಲಿ
1. ಪ್ರವೃತ್ತಿ ತತ್ವ ವಿವರಣೆ
2. ಶಿವನ ಪಂಚವಿಂಶತಿ ಲೇಲೆಗಳು
3. ನಿವೃತ್ತಿ ತತ್ವ ನಿರೂಪಣೆ
4. ಬಸವಾದಿ ಶರಣರ ಚರಿತ್ರ ನಿರೂಪಣೆ
5. ಷಟಸ್ಥಲ ನಿರೂಪಣೆ
ಹೀಗೆ ಅದರಲ್ಲಿರುವ ವಿಷಯವನ್ನು ಶಾಸ್ತ್ರೀಯವಾಗಿ ವ್ಯವಸ್ಥಿತವಾಗಿ ವಿವೇಚಿಸಿದ್ದಾರೆ.
   ಧರ್ಮ,ತತ್ವಶಾಸ್ತ್ರ ನಿರೂಪಣೆಯೆ ಈ ಪುರಾಣಕಾವ್ಯದ ಮುಖ್ಯ ವಿಷಯವಾಗಿದೆ. ವೀರಶೈವಾಮೃತ ಮಹಾಪುರಾಣವು ವೀರಶೈವ ತತ್ವಪ್ರಧಾನವಾದ ಕೃತಿಯಾಗಿದೆ. ಮಲ್ಲಣಾರ್ಯನು ತನಗೆ ಬೇಕಾದ ವಸ್ತುವನ್ನು ಸಂಸ್ಕೃತದ ವಿಭಿನ್ನ ಮೂಲಗಳಿಂದ ಆಯ್ಕೆ ಮಾಡಿಕೊಂಡಿದ್ದಾನೆ. ಸ್ಕ್ಕಾಂದಪುರಾಣ, ‘ಕೂರ್ಮಪುರಾಣ’ ‘ಆದಿತ್ಯಪುರಾಣ’ ‘ಬ್ರಹ್ಮಾಂಡ ಪುರಾಣ, ‘ಲಿಂಗ ಪುರಾಣ, ವರಾಹ ಪುರಾಣ’ ಮುಂತಾದ ಗ್ರಂಥಗಳಿಂದ ಶಿವನ  ವಿಭಿನ್ನ ಲೀಲಾಪ್ರಸಂಗಗಳನ್ನು ಸಂಗ್ರಹಿಸಿಕೊಂಡಿದ್ದಾನೆ. ವೇದಾಂತ, ಯೋಗ ಷಟ್ ಸ್ಥಲ ಸಿದ್ಧಾಂತ ಮುಂತಾದ ವಿಚಾರಗಳನ್ನು ಮೇಲಿನ ಪುರಾಣಗಳಿಂದಲ್ಲದೆ. ‘ಸ್ವಚ್ಛಂದ ಲಲಿತ ಭೈರವಿ’  ಕ್ರಿಯಾಸಾರ’, ವೀರತಂತ್ರ, ವಾತೂಲತಂತ್ರ.’ ‘ವಾತೂಲಾಗಮ.’ ಉತ್ತಮ ವಾತೂಲ’. ತತ್ವ ದೀಪಿಕೆ’, ವೀರಾಗಮ’, ಜಾಬಲೋಪನಿಷತ್ತು.; ಮಾನವೀಯ ಸಂಹಿತೆ’, ಶಿವಾಗಮ, ಶಿವರಹಸ್ಯ, ಕ್ರಿಯಾಸಾರ, ಮಾರ್ಕಂಡೇಯ ಸ್ತೋತ್ರ, ಶತರತ್ನ ಯೋಗಶಾಸ್ತ್ರ, ಸ್ವಾತ್ಮಯೋಗ ಪ್ರದೀಪಿಕೆ, ಲೈಂಗ್ಯ ಪುರಾಣ  ಇವೇ ಮೊದಲಾದ  ಅನೇಕ ಗ್ರಂಥಗಳಿಂದ ವಿಷಯಗಳನ್ನು ಸಂಗ್ರಹಿಸಿ ವೀರಶೈವ ಸಿದ್ಧಾಂತವನ್ನು ಸಮರ್ಥವಾಗಿ ನಿರೂಪಿಸಲಾಗಿದೆ. ನಡುನಡುವೆ ವಿಷಯ ಪುಷ್ಠಿಗಾಗಿ ಮೂಲಗ್ರಂಥದ ಶ್ಲೋಕಗಳನ್ನು ಅಲ್ಲಲ್ಲಿ ಉದ್ಧರಿಸಿದ್ದಾನೆ. ಒಂದೇ ಕಥೆಗೆ ಅಥವಾ ಒಂದೇ ಸಂಗತಿಗೆ ಸಂಬಂಧಿಸಿದಂತೆ, ಅಂತರಗಳು ಇದ್ದಾಗ ಕೆಲವೊಮ್ಮೆ ವಿಭಿನ್ನ ಮೂಲಗಳನ್ನು ಬಳಸಿಕೊಂಡು ಅವನ್ನೆಲ್ಲಾ ಸಂಗ್ರಹಿಸಿಕೊಟ್ಟಿರುವುದು ಇಲ್ಲಿಯ ವಿಶೇಷ. ಆದರೆ ಇದು  ಕೆಲವೆಡೆ ನಿರೂಪಣೆಯ ಏಕಮುಖತೆಗೆ ಭಂಗವನ್ನೊಡ್ಡಿದೆ. ಒಟ್ಟಿನಲ್ಲಿ ಮಲ್ಲಣಾರ್ಯನು ಅವಲೋಕಿಸಿರುವ ಗ್ರಂಥ ಸಮುದಾಯ ತುಂಬಾ ದೊಡ್ಡದು. ಇದರಿಂದಾಗಿ ಈತನ ಗ್ರಂಥಕ್ಕೆ ವೀರಶೈವ ವಿಶ್ವಕೋಶದ ಸ್ವರೂಪ ಬಂದಿದೆ. ಇದು ಮಹಾಪುರಾಣವಾಗಿದೆ.
ಏಳನೆಯ ಕಾಂಡದಲ್ಲಿ  ಉಚಿತವರಿತು ಸಂಸ್ಕೃತ ಶ್ಲೋಕಗಳನ್ನು ಬಳಸಲಾಗಿದೆ. ಇವುಗಳ ಜೊತೆಗೆ ಪಾಲ್ಕುರಿಕೆ ಸೋಮನಾಥ, ರಾಘವಾಂಕರು, ಮಾಯಿದೇವ, ಅಜಗಣ್ಣ ಸಮಾಧಿ ಹೊಂದಿದ ರೀತಿಯನ್ನು ತಿಳಿಸಿದ್ದು ಕೊನೆಯಲ್ಲಿ ಅಂತ್ಯ ಕ್ರಿಯೆಯ ಆಚರಣೆಯ ವಿಷಯವು ವಿವರವಾಗಿ ಬಂದಿದೆ.
 ಎಂಟನೆಯ ಕಾಂಡದಲ್ಲಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣವನ್ನು, ಪಂಡಿತಾರಾಧ್ಯ ಚರಿತೆಯನ್ನು ಅನುಸರಿಸಿ ಬಸವಣ್ಣನ ಚರಿತ್ರೆ, ಆತನ ಪವಾಡಗಳು, ಇನ್ನಿತರ ಶರಣರ ಚರಿತೆಯನ್ನು ಹೇಳುವನು.ಅನಂತರ ಬಸವ ಪವಾಡ ಕಥೆಗಳು, 63 ಶೈವ ಪುರಾತನರ ಕಥೆಗಳನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ.ಈ ವಿವರಗಳನ್ನು ಸಂಕ್ಷಿಪ್ತವಾಗಿ ಮಲ್ಲಣಾರ್ಯನು,
` ಬಸವೇಶನ ಪುರಾಣ ಪ್ರಸಂಗವತ್ಯುತ್ತಮದ ಬಸವ ಚಾರಿತ್ರದ ಪವಾಡವರುವತ್ತು ಮೂವರು ಸಂಖ್ಯಾತರ ಕಥಾವಳಿಗಳು, ಆರಾಧ್ಯ ಚಾರಿತ್ರದಾ ತತ್ತತ್ಪ್ರಕರಣ , ಪಂಚಕದ ಮಹಿಮಾಧಿಕ ನೃಪೋತ್ತಮರ, ಲಕ್ಕಣ್ಣ ದಣ್ಣಾಯಕಂ ಪೇಳ್ದ  ಚಿತ್ತ ಶುದ್ಧದ ನೂತನರ ಬಳಿಕ್ಕೀ ವರ್ತಮಾನ ಗಣಕಥೆಯನ್ನು ಹೇಳಿರುವುದಾಗಿ 8 ನೇ ಕಾಂಡದ 22ನೇ ಸಂಧಿಯ 35 ನೇ ಪದ್ಯದಲ್ಲಿ ತಿಳಿಸಿದ್ದಾನೆ.                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                               ಪಂಡಿತಾರಾಧ್ಯ ಚರಿತೆಯಲ್ಲಿ,  ಪಂಡಿತಾರಾಧ್ಯರು ಬಸವಣ್ಣನ ದರುಶನಕ್ಕಾಗಿ ಕೂಡಲಸಂಗಮಕ್ಕೆ ಹೊರಟಾಗ ಬಸವಣ್ಣನು ಸಂಗಮನಾಥನಲ್ಲಿ ಐಕ್ಯನಾದ ವಿಷಯ ತಿಳಿದು ಪರಿಪರಿಯಾಗಿ ತಪಿಸುವುದು, ಬಸವಣ್ಣನ ನಾಮ ಸ್ಮರಣೆಯಿಂದ ಪಂಡಿತಾರಾಧ್ಯರಿಗೆ ಕನ್ನಡ ಭಾಷೆ ಪ್ರಾಪ್ತವಾಗುವುದು ಇತ್ಯಾದಿ ವಿವರಗಳನ್ನು ಕೊಡಮಾಡಿದ್ದಾನೆ.ಈ ವಿವರಗಳು ಬಸವಣ್ಣನವರ ಬದುಕಿನ ಜೀವಿತದ ಪರಮಾವಧಿಯ ಕಾಲವನ್ನು ತಿಳಿಯಲು ಸಾಧ್ಯವಾಗಿದೆ.  ಈ ಕಾಂಡದಲ್ಲಿ ನೂತನ ಮತ್ತು ಪುರಾತನ ಶರಣರ ಸಂಕ್ಷಿಪ್ತ ವಿವರಗಳನ್ನು  ನೀಡಿದ್ದಾನೆ. ವೀರಶೈವ ಪುರಾಣಗಳಲ್ಲಿ ವಾದಪ್ರಕರಣ ಒಂದು ವಿಶಿಷ್ಟ ಲಕ್ಷಣವಾಗಿ ಪರಿಣಮಿಸಿದೆ. ಈ ಕೃತಿಯಲ್ಲಿ ವಾದ ಪ್ರಕರಣ, ಮಹಿಮಾ ಪ್ರಕರಣಗಳು ವಿವರವಾಗಿ ಬಂದಿವೆ. ಜೊತೆಗೆ ತಂತಮ್ಮ ಸಮಕಾಲೀನ ಭಕ್ತರ ಚರಿತ್ರೆಯನ್ನು ಸಂಗ್ರಹಿಸಿ ಒಮ್ಮೊಮ್ಮೆ ಹೆಸರಿಸಿ, ಮತ್ತೊಮ್ಮೆ ಹಲವರ ವೈಶಿಷ್ಟ್ಯಗಳನ್ನು ಒದಗಿಸಿ ಸಾವಿರಾರು ಶರಣರ ಚರಿತ್ರೆಗಳನ್ನು ಕೊಡ ಮಾಡಿದ್ದಾನೆ. ವೀರಶೈವ ಶರಣರ ಚರಿತ್ರೆಯ ದೃಷ್ಟಿಯಿಂದ ಈ ಭಾಗ ಮಹತ್ತರವಾಗಿದೆ. ಈ ಕಾಂಡವು ಪೌರಾಣಿಕ, ಧಾರ್ಮಿಕ ಹಾಗೂ ಚಾರಿತ್ರಿಕ ದೃಷ್ಟಿಯಿಂದ ಮಹತ್ತರತೆಯನ್ನು ಪಡೆದು ಕೊಂಡಿದೆ. ಎಂಟನೆಯ ಕಾಂಡದಲ್ಲಿಯ ಬಸವಣ್ಣನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ನಿರೂಪಿಸುವಲ್ಲಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣವನ್ನು ಅನುಸರಿಸಿದ್ದಾನೆ. ಕೊನೆಯ ಕಾಂಡದಲ್ಲಿ ಮಲ್ಲಣಾರ್ಯನು ‘ಬಸವ ಪುರಾಣ ಮತ್ತು ಆರಾಧ್ಯ ಚಾರಿತ್ರ ‘ಎಂಬ ಗ್ರಂಥಗಳ ಸಾರವನ್ನು ಮೊದಲು ಏಳು ಸಂಧಿಗಳಲ್ಲಿ ಸಂಗ್ರಹಿಸಿ ಹೇಳಿದ್ದಾನೆ. ಬಸವ ಪುರಾಣದಲ್ಲಿ ಉಲ್ಲೇಖಿಸದ ಹಲವರ ಪುರಾತನರ ವಿವರಗಳು ಇಲ್ಲಿ ಕಂಡು ಬರುತ್ತವೆ. ಈ ಮೂಲಕ ಈ ಗ್ರಂಥಕ್ಕೆ ಬಸವಣ್ಣ ಮತ್ತು ಪಂಡಿತಾರಾಧ್ಯರ ಜೀವನ ಚರಿತ್ರೆಯೂ ಕೂಡಿಕೊಂಡಂತಾಗಿದೆ. ಇದಾದ ನಂತರ ಎರಡು ಸಂಧಿಗಳಲ್ಲಿ ಲಕ್ಕಣ ದಂಡೇಶನ ‘ಶಿವತತ್ವ ಚಿಂತಾಮಣಿ’ಯನ್ನು ಅನುಸರಿಸಿ ನೂತನ ಶರಣರ ಕಥೆಗಳನ್ನೂ ತನ್ನ ಕಾಲದ ಇನ್ನಿತರ ಶರಣರ ಸಂಗತಿಗಳನ್ನೂ ಬಹು ಸಂಕ್ಷಿಪ್ತವಾಗಿ ತಿಳಿಸಿದ್ದಾನೆ. ಒಂಬತ್ತನೆಯ ಸಂಧಿಯಿಂದ ಮುಂದಕ್ಕೆ ಒಟ್ಟು ಹನ್ನೆರಡು ಸಂಧಿಗಳನ್ನು ಷಟ್‍ಸ್ಥಲ ಸಿದ್ಧಾಂತವನ್ನು ಬಹು ವಿಸ್ತಾರವಾಗಿ ವಿವೇಚಿಸಿದ್ದಾನೆ. ಇಪ್ಪತ್ತೊಂದನೆಯ ಸಂಧಿಯಲ್ಲಿ ಹದಿನೆಂಟು ಯುಗಗಳಲ್ಲಿ ಗಣಗಳಲ್ಲಿ ಮೇರುವೇರಿದ ಕಥೆಯಿದೆ. ಗ್ರಂಥದ  ಎಂಟನೆಯ ಕಾಂಡದ 136 ನೆಯ ಕೊನೆಯ ಸಂಧಿಯ 56 ಪದ್ಯಗಳಲ್ಲಿ   ಒಟ್ಟು ಗ್ರಂಥದಲ್ಲಿ ಏನೇನು ನಿರೂಪಿತವಾಗಿದೆಯೆಂಬುದನ್ನೂ  ಸಾರಾಂಶ  ರೂಪದಲ್ಲಿ ಕ್ರೋಢೀಕರಿಸಿರುವುದು ತುಂಬಾ ಉಪಯುಕ್ತವಾಗಿದೆ.
ಕೂಡಿಕೊಂಡಲ್ಲಿ ಪೂರ್ವಾಚಾರಿ ಬಸವಣ್ಣ
ನಾಡಂಬರ ಪ್ರಮಥ ಗುರುನಾಮಮಂ ತಾಳಿ
ನಾಡೆ ಸುಖವಿರುತ ತಾನೇ ಪೀಠ ಪರಶಿವಂ ಲಿಂಗವಾಗುತ್ತಲವರ
ಕೂಡೆ ನಿರವಿಸಲಾ ಗಣಂಗಳೀಶ್ವರ ಪೂಜೆ
ಮಾಡುತೋಲೈಸಲಾನಂದದಿಂದಿರ್ಪನೈ
ಕೋಡಿಯಿಲ್ಲದೆ ಬಸವ ಪರಶಿವಾದ್ವಯದೇಕಗಣ ಮಹಿಮೆಯಂ ಕೇಳಿದ (ಕಾ.8-ಸಂ.17-ಪ.61)
ಈ ಷಟ್ಸ್ಥಲ ಬ್ರಹ್ಮಿಗಳ ಮಾಡಿಯವರ ಸಂ
ತೋಷದರ್ಚನೆಯ ಕೈಗೊಂಡು ಗುರುವಾಗಿ ಮ
ತ್ತಾ  ಷಡುಸ್ಥಲ ಜ್ಞಾನಿಗಳು ಮುಖ್ಯ ಶರಣರ್ಗೆ ಬಸವನೇ ಭೃತ್ಯನಾಗಿ
 ಪೋಷಿಸುತ್ತವರ್ಗಳಂ ಸದ್ಬಕ್ತಿಯಿಂ ನುಡಿದ
 ಭಾಷೆಯಂ ಪರಿವರ್ತಿಸುತ್ತೀಗಳಖಿಳರ್ಗೆ
 ಯಾ ಷಟ್ಸ್ಥಲದ ನಿರ್ಣಯವನಿಟ್ಟವಂ ಬಸವನಲ್ಲದಿನ್ನಾರು ಮಗನೇ  (ಕಾ.8-ಸಂ18- 4) ಎಂಬುದಾಗಿ  ಷಟ್ಸ್ಥಲ ಜ್ಞಾನಿಗಳಾದ ಶರಣರಿಗೆ ಬಸವಣ್ಣನೇ ಭಕ್ತನಾಗಿ ಅವರನ್ನು ಪೋಷಿಸಿದನು. ನುಡಿದಂತೆ ನಡೆದನು. ಷಟ್ಸ್ಥಲ ನಿರ್ಣಯವನ್ನು ಮಾಡಿದವರು ಬಸವಣ್ಣನಲ್ಲದೆ ಮತ್ತಾರು ಅಲ್ಲ ಎಂದು ಹೇಳುತ್ತಾನೆ.
ಬಸವಣ್ಣನಿಗೆ ಸಂಬಂಧಿಸಿದ ಪವಾಡ ಕಥೆಗಳು, ಅರವತ್ತ ಮೂರು ಮಂದಿ ಶೈವ ಪುರಾತನರ ಕಥೆಗಳನ್ನು ನಿರೂಪಿಸಲಾಗಿದೆ. ಆರಾಧ್ಯ ಚರಿತ್ರೆಯ ಐದು ಪ್ರಕರಣಗಳೂ,ನೂತನ ಶರಣರ ಹಾಗೂ ವರ್ತಮಾನಕಾಲದ ಗಣರ ಕಥೆಗಳನ್ನು ಹೇಳಲಾಗಿದೆ. ಇದರ ಜೊತೆಗೆ ಅಂಗಸ್ಥಲ-ಲಿಂಗಸ್ಥಲ ವಿವರಗಳು, ವಿಷ್ಣು ಬ್ರಹ್ಮರ ಉತ್ಪತ್ತಿ, ಹದಿನೆಂಟು ಯುಗಗಳಲ್ಲಿ ಶಿವಗಣಂಗಳು ಮೇರುವೇರಿದ ಕಥೆಗಳು ನಿರೂಪಿತಗೊಂಡಿದ್ದು ಕೊನೆಯಲ್ಲಿ ಫಲಶ್ರುತಿಯಿಂ ಪುರಾಣವು ಸಮಾಪ್ತಗೊಳ್ಳುತ್ತದೆ.
     ಶಿವಭಕ್ತಿಯ ಪಾರಮ್ಯವನ್ನು ಪ್ರಕಟಿಸುವುದು, ಶಿವನ ಭಕ್ತವತ್ಸಲತೆಯನ್ನು ತೀರಿಸಿಕೊಡುವುದು ಇಲ್ಲಿ ಕವಿಯ  ಉದ್ದೇಶ. ಇದು ಒಟ್ಟು ಗ್ರಂಥದ ಉದ್ದೇಶವೂ ಹೌದು. ಅದರಲ್ಲಿ ಕವಿಯು ಸಫಲನಾಗಿದ್ದಾನೆ. ಅದಕ್ಕೆಂದೇ ಅವನು ಸುಕುಮಾರನ ಪಾಪಕೃತ್ಯಗಳನ್ನು ದೊಡ್ಡದು ಮಾಡಿ ವರ್ಣಿಸಿದ್ದಾನೆ. ಅಂತಹ ಪಾಪಿಷ್ಟನಿಗೂ ಗಣಪದವಿಯೇ ಎಂದು ನಾವು ಅಚ್ಚರಿಗೊಂಡರೆ, ಅದಕ್ಕೆ ಉತ್ತರ ಶಿವಭಕ್ತಿಯ ಹಿರಿಮೆಯಲ್ಲಿ ಅಡಗಿದೆ.
  ಮಲ್ಲಣಾರ್ಯನು ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳೆರಡರಲ್ಲಿಯೂ ಪಾಂಡಿತ್ಯವನ್ನು ಪಡೆದಿದ್ದನೆಂಬ ಅಂಶ ಈ ಕೃತಿಯಿಂದ ತಿಳಿದು ಬರುತ್ತದೆ.  ವೀರಶೈವಾಮೃತ ಮಹಾಪುರಾಣದಲ್ಲಿ ಹೇಳಿರುವ ವಿಷಯ,ಅವುಗಳಿಗೆ ನೀಡುವ ಆಧಾರ ಶಾಸ್ತ್ರಗ್ರಂಥಗಳು ಇತ್ಯಾದಿಗಳಿಂದ ಪ್ರಕಾಂಡ ಪಂಡಿತನಾಗಿದ್ದನು ಎಂಬುದು ಸಾಬೀತಾಗುತ್ತದೆ. ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯನ್ನು ಅನುಸರಿಸಿ ಈ ಕೃತಿಯನ್ನು ರಚಿಸಿದ್ದಾನೆ. ಲಕ್ಕಣ್ಣ ದಂಡೇಶನನ್ನು ಕೃತಿಯಲ್ಲಿ ಹಲವೆಡೆ ಸ್ಮರಿಸಿದ್ದಾನೆ. ಲಕ್ಕಣ್ಣ ದಂಡೇಶನು ಹೇಳದ ಕೆಲವು ನೂತನ ಶರಣರ ವಿಷಯ ಮತ್ತು ಹದಿನೆಂಟು ಯುಗಗಳ ರಾಜರ ಚರಿತ್ರೆಯನ್ನು ಹೇಳಿದ್ದಾನೆ. ವೀರಶೈವಾಮೃತ ಪುರಾಣವು ವೀರಶೈವದ ವಿಶ್ವಕೋಶವಲ್ಲದೇ ವೇದಾಂತ,ಶೈವ ಸಿದ್ಧಾಂತಗಳ ಕೋಶವೂ ಆಗಿದೆ. ಶೈವ-ವೀರಶೈವಕ್ಕೆ ಸಂಬಂಧಪಟ್ಟ ಸಹಸ್ರಾರು ಕಥೆಗಳೂ ಅನೇಕ ಚರಿತ್ರೆಗಳು ಇದರಲ್ಲಿ ವ್ಯಕ್ತವಾಗಿವೆ.
ಒಟ್ಟಿನಲ್ಲಿ  ಇಲ್ಲಿ ಬಂದಿರುವ ಕಥೆಗಳನ್ನು
1. ಕನ್ನಡ ಪುರಾಣ.ಚಾರಿತ್ರ್ಯ ಮೂಲಕ ಕಥೆಗಳು
2. ಕನ್ನಡ ಶಿವ ಕವಿಗಳ ಕಥೆಗಳು
3. ಬಸವ ಪೂರ್ವಯುಗದ ಶರಣರ ಕಥೆಗಳು
4. ಬಸವಯುಗದ ಶರಣರ ಕಥೆಗಳು
5. ಬಸವಯುಗದ ತರುವಾಯದ ಶರಣರ ಕಥೆಗಳು
      ಎಂಬುದಾಗಿ ವರ್ಗೀಕರಿಸಬಹುದು. ಇಲ್ಲಿ ಬಂದಿರುವ ಕತೆಗಳು ಯಾವು ಯಾವ ಮೂಲಕದಿಂದ ಪಡೆದುಕೊಂಡಿದ್ದಾನೆ. ಎಂಬುದನ್ನು ಮಾತ್ರ ಕಂಡುಕೊಳ್ಳ ಬಹುದಾಗಿದೆ. ಈ ಎಲ್ಲಾ ಕಥೆಗಳ ಕಥೆಗಳನ್ನು ಕವಿಯು ತಾನೇ ಹೇಳಿಕೊಂಡಿರುವಂತೆ ಪೂರ್ವದ ವೀರಶೈವ ಕವಿಗಳ ಕೃತಿಗಳಿಂದ ಆಯ್ದಕೊಂಡಿದ್ದಾನೆ. ವಿಶೇಷವಾಗಿ ಹರಿಹರ ರಾಘವಾಂಕ, ಸಿದ್ದನಂಜೇಶ, ಲಕ್ಕಣ ದಂಡೇಶ, ಶೂನ್ಯ ಸಂಪಾದನಾಕಾರರು, ಸಿಂಗಿರಾಜ, ಮೊದಲಾದ ಪೂರ್ವದ ಹಿರಿಯಕವಿಗಳ ಕಾವ್ಯಗಳಲ್ಲಿಯ ಸಂಗತಿಗಳನ್ನು  ವಾರ್ಧಕ ಷಟ್ಪದಿಗೆ ಅಳವಡಿಸಿ ಆಸಕ್ತ ಜನತೆಗೆ ಮಹದುಪಕಾರ ಮಾಡಿದ್ದಾನೆ. ಶಿವಶರಣರ ಚರಿತ್ರೆಯನ್ನು ಷಟ್ಪದಿಯಲ್ಲಿ ಬರೆಯುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾನೆ. ಹೀಗಾಗಿ ಉಳಿದ ಕನ್ನಡದ ವೀರಶೈವ ಪ್ರಾಚೀನ ಸಂಕಲನ ಕೃತಿಗಳೊಂದಿಗೆ  ಹೋಲಿಸಿ ಅದರ ವೈಶಿಷ್ಯ್ಟವನ್ನು ಗುರುತಿಸಬಹುದಾಗಿದೆ. ಗುಬ್ಬಿಯ ಮಲ್ಲಣಾರ್ಯನು  ಈ ಕೃತಿಯಲ್ಲಿ  ಪುರಾತನ ಮತ್ತು ನೂತನ ಶರಣರಿಗೆ ಸಂಬಂಧಿಸಿದ ಶರಣರ ಕಥೆಗಳು ಶಿವನ ಮಹಿಮೆ, ಶಿವನಭಕ್ತರ ಅಗ್ಗಳಿಕೆ ಅವರು ಪಡೆದುಕೊಂಡ ಮುಕ್ತಿ, ಪಡೆದ ಶಕ್ತಿಗಳ ಪ್ರದರ್ಶನ ಪ್ರತೀಕವಾಗಿವೆ.
  ಕ್ರಿ.ಶ. 5ನೇ ಶತಮಾನದಿಂದ 9ನೇ ಶತಮಾಣದವರೆಗೆ ತಮಿಳುನಾಡಿನಲ್ಲಿ ಬಾಳಿ ಒಮ್ಮುಖವಾದ ತಮ್ಮ ನಡೆನುಡಿಗಳಿಂದ ಬಿಳಿಯಾದ ಚಾರಿತ್ರ್ಯದಿಂದ ಜನಮನವನ್ನು ಪುರಾತನ ಶರಣರು ಆಕರ್ಷಿಸಿದರು. ಇವರಲ್ಲಿ ನಾನಾ ಮತ ಕುಲಗೋತ್ರದವರಿದ್ದರುಎಂಬುದಾಗಿ ತಿಳಿದು ಬರುತ್ತದೆ. ಅರವತ್ತು ಮೂವರು ಪುರಾತನರಲ್ಲಿ ಶೈವರು -4, ಬ್ರಾಹ್ಮಣರು 13, ದೊರೆಗಳು 6, ಮಾಂಡಲೀಕರು 5, ಬಣಜಿಗರು 5, ಒಕ್ಕಲಿಗರು-13, ಕುರುಬರು-2, ಕುಂಬಾರರು-1, ಮಂತ್ರಿ-1, ಮೀನುಗಾರ 1, ಬೇಡ-1, ನಾಡರ್ -1, ಜೇಡರ್ -1, ಗಾಣಿಗ-1, ಅಗಸ-1, ಪುಲಯ-1, ಜಾತಿಗೊತ್ತಿಲ್ಲದೆ ಉಳಿದವರು 6 ಮಂದಿ ಎಂಬುದಾಗಿ  ತಿಳಿದು ಬರುತ್ತದೆ.  ಈ ಅರವತ್ತು ಮೂವರ ಹೆಸರು ಮತ್ತು ವಾಸಸ್ಥಳ ಇತ್ಯಾದಿ ವಿವರಗಳಲ್ಲಿ ಪೆರಿಯ ಪುರಾಣ ಮತ್ತು ಇತರ ಕೃತಿಗಳಲ್ಲಿ  ಕೆಲವೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಶಿರಿಯಾಳನು 63 ಪುರಾತನರಲ್ಲಿ ಒಬ್ಬನಾಗಿದ್ದಾನೆ. ಶರಣೆ ನಿಂಬೆಕ್ಕ ಅವನ ಸಮಕಾಲೀನಳಾಗಿದ್ದಾಳೆ. ಬಸವಣ್ಣನು ತನ್ನ ವಚನಗಳಲ್ಲಿ ನೆನೆಯುವ ನಂಬಿಯೂ 63 ಪುರಾತನರಲ್ಲಿ ಒಬ್ಬನಾಗಿದ್ದಾನೆ. ಶಿವನಿಂದ ಸೇವೆ ಮಾಡಿಸಿಕೊಂಡಿದ್ದ ಈ ನಂಬಿಯಣ್ಣ ಶಿವಭಕ್ತರಿಗೆ ವಂದಿಸದ ಕೆರಹುಗಾಲಿನಲ್ಲಿಯೇ ತಿರವಾಲೂರು ಮಂದಿರವನ್ನು ಪ್ರವೇಶಿಸಿದಾಗ, ಮೆರೆಮಿಂಡ ದೇವನು ಅವನನ್ನು ಅವನ ಬಲವನ್ನೂ ಎದುರಿಸುತ್ತಾನೆ. ಈ ಮೆರೆಮಿಂಡದೇವನು ಕಲ್ಯಾಣದ ಶರಣರಲ್ಲಿ ಒಬ್ಬನಾಗಿದ್ದಾನೆ.      ಈ ರೀತಿಯ ಚಾರಿತ್ರ್ಯಕ ವಿವೇಚನೆಗಳಿಗೆ ಅಹಾರ ವೊದಗಿಸುವ ನಿದರ್ಶನಗಳನ್ನು  ಇಲ್ಲಿ ಶರಣರ ಚರಿತ್ರೆಯ ಭಾಗದ ಕಥೆಗಳಲ್ಲಿ ಕಾಣಬಹುದಾಗಿದೆ.    ಈ ಕಥೆಗಳು ಬಸವಪೂರ್ವಯುಗ ಶಿವಶರಣರಿಗೆ ಸಂಬಂಧಿಸಿದವುಗಳಾಗಿದ್ದು ಕೆಲವೊಂದು ಬಸವಾದಿ ಪ್ರಮಥರ ಸಂಪರ್ಕದಲ್ಲಿದ್ದ ಹಿರಿಯ ಶರಣರಾಗಿದ್ದರೆಂಬುದನ್ನು ಕಥೆಗಳು ಸೂಚಿಸುತ್ತವೆ.
  ಸೌಂದರನಂಬಿಯಣ್ಣ ಚೇರಮರಾಯ ಇಬ್ಬರೂ ಪರಮ  ಸ್ನೇಹಿತರು ಒಂದು ದಿನ ಇದ್ದಕ್ಕಿದ್ದಂತೆ ಸೌಂದರನಂಬಿ  ಕೈಲಾಸಕ್ಕೆ ಹೋದನು. ತಮಗೆ ಹೇಳದೆ   ಕೈಲಾಸಕ್ಕೆ ಹೋದನೆಂದು ಚೇರಮರಾಯನು ಎಂಬತ್ತು ಸಹಸ್ರ ಭಸಿತಮಯ ದೇಹದ ರಾವುತರೊಡನೆ ಆಕಾಶ ಮಾರ್ಗದಿಂದ ಬಂದು ಕೈಲಾಸ ಪಟ್ಟಣವನ್ನು ತುಂಬಿದರು.
 ಇಳೆಹಾಳ ಬೊಮ್ಮಯ್ಯನೆಂಬ ಶರಣನು ಹೊಲಕ್ಕೆ ಬೀಜ ಬಿತ್ತಲು ಹೊರಟಿದ್ದನು. ಆಗ ಮಹೇಶ್ವರರು ಬಂದು ಬೇಡಲು ಬೀಜವನ್ನು ಕೊಟ್ಟುಬಿಟ್ಟನು. ಭೂಮಿಯ ಮಳಲನ್ನು ಸಕ್ಕರೆಯನ್ನಾಗಿ ಮಾಡಿ ಅವರಿಗೆ ಉಣಬಡಿಸಿದರು. ಕೊನೆಗೆ ಬೀಜ ಬಿತ್ತದೆ,  ಬೀಜ ಬಿತ್ತಿ ಬೆಳೆವವರಂತೆ ಅಧಿಕ ಬೆಳೆಯನ್ನು ಬೆಳೆದರು.  ದೇವರಾಯನೆಂಬ ರಾಜನಿಗೆ ಶಿವನು  ಹದಿನಾರು ವರ್ಷ ಅಯುಃ ಪ್ರಮಾಣವುಳ್ಳ ಮಗನನ್ನು ಕರುಣಿಸಿದ್ದನು. ಆತನೇ ಮಳೆಯರಾಜ ಮಳೆಯ ರಾಜನು ಭಕ್ತಿಯಿಂದ  ಶಿವನನ್ನು ಭಜಿಸಿ ಶತಾಯುಷಿಯಾದರು. ಆತನು ಆನೆ ಕುದುರೆ ಕಾಲಾಳು ಸಮೇತ ಒಂಬತ್ತು ಲಕ್ಷ ದೇಶ ಜನದೊಡನೆ  ಕೈಲಾಸಕ್ಕೆ ಹೋದನು. ಅದೇರೀತಿ  ಚೊಕ್ಕ ನಾಯನಾರರು,ಮಾನಕಂಜರ, ರುದ್ರಪಶುಪತಿ,,ನಕ್ಕನಾಯ್ನಾರ,ಕರಿಕಾಲ ಚೋಳ, ಮೆರೆಮಿಂಡಯ್ಯ ಕುಂಬಾರ ಗುಂಡಯ್ಯ, ಕಲಿಯಾರು,ನಾಟ್ಯ ನಮಿತ್ತಂಡಿ,ಸಿರಿಯಾಳ, ನಂಬಿಯಣ್ಣ, ಇತ್ಯಾದಿ ಸುಮಾರು 51 ಮಂದಿಗೆ ಸಂಬಂಧಿಸಿದ ತಮಿಳು ಪುರಾತನರು ಕಥೆಗಳು  ವೀರಶೈವಾಮೃತ ಮಹಾಪುರಾಣದಲ್ಲಿವೆ. ಇವುಗಳಲ್ಲಿ ನಂಬಿಯಣ್ಣ ಶಿರಿಯಾಳ, ವಾಗೀಶಯ್ಯ ಇವರಿಗೆ ಸಂಬಂಧಪಟ್ಟ ಕಥೆಗಳು ಪುನರಾವರ್ತನೆಯಾಗಿವೆ. ಒಂದೇ ಪ್ರಸಂಗವು ಪುನರಾವರ್ತನೆಯಾಗಿರುವುದುಂಟು.
      ಈ ಎಲ್ಲಾ ಪುರಾತನರ ಕಥೆಗಳನ್ನು ಗುಬ್ಬಿಮಲ್ಲಣಾರ್ಯನು ಮೂಲ ಪೆರಿಯ ಪುರಾಣದಿಂದಲೂ, ಹರಿಹರನ ರಗಳೆಗಳಿಂದಲೂ ಇತರೆ ವೀರಶೈವ ಪುರಾಣ ಕೃತಿಗಳಿಂದಲೂ ತಿಳಿದುಕೊಂಡು ಅತ್ಯಂತ ಸುಲಲಿತ, ಅಂದಿಗೆ ಪ್ರಚಲಿತ ಆಗಿರುವಂಥ ಷಟ್ಪದಿ ಪ್ರಕಾರದಲ್ಲಿ ಕಥೆಗಳನ್ನಾಗಿ ನಿರೂಪಿಸಿದ್ದಾನೆ.
  ಈ ಕಾವ್ಯಪುರಾಣದಲ್ಲಿ ಬಸವ ಪೂರ್ವಯುಗದ ಶರಣರನ್ನು ಕುರಿತ ಕಥೆಗಳ ಬಗೆಗೂ ಪ್ರಸ್ತಾಪಿಸ ಬೇಕಾಗುತ್ತದೆ.      ಹನ್ನೆರಡನೇ ಶತಮಾನದ ಪೂರ್ವದಲ್ಲಿಯೇ ಶೈವ - ವೀರಶೈವ ಶರಣರ ಪೂಜೆ, ಕಾಯಕ, ದಾಸೋಹ, ಮತ್ತು ಶಿವಭಕ್ತಿಯಡಿಯಲ್ಲಿ ಎಲ್ಲರೂ ಒಂದೆ ಎಂಬ ಸಮತಾ ತತ್ವಕ್ಕೆ ಬದ್ಧರಾಗಿ ಬದುಕುತ್ತಿದ್ದರೆಂದು ತಿಳಿದು ಬರುತ್ತದೆ. ಶಿವಭಕ್ತರು - ಅವರ ಕುಲ-ಛಲ ನೋಡದೆ ಒಬ್ಬರ ಮನೆಗೊಬ್ಬರು ಹೋಗಿ  ಪೂಜೆ  ಮಾಡಿಕೊಳ್ಳುವುದು, ಪ್ರಸಾದಕೊಳ್ಳುವುದು ಮತ್ತು ಅನುಭಾವ ಅರ್ಪಣಗಳನ್ನು ಮಾಡುತ್ತಿದ್ದರೆಂಬುದನ್ನು-ಕೆಂಬಾವಿ ಭೋಗಣ್ಣ, , ದೇವರದಾಸಯ್ಯ, ತೆಲುಗು ಜೊಮ್ಮಯ್ಯರಂಥ ಬಸವಪೂರ್ವ ಶಿವಶರಣರ ಇತಿವೃತ್ತಗಳಿಂದ ತಿಳಿದುಬರುತ್ತದೆ. ಶರಣರೊಂದೆಡೆ ಸೇರುವಲ್ಲಿಯೇ ಅನುಭವ ಮಂಟಪ ಏರ್ಪಡುತ್ತಿದ್ದಂತೆ ಭಾವಿಸಬಹುದಾಗಿದೆ. ಆದರೆ ಇಂಥ ಅನುಭಾವ, ಅರ್ಪಣ , ಕಾಯಕ, ದಾಸೋಹ ಮೌಲ್ಯಗಳು ಸಾಂಘಿಕ ಸಾಮೂಹಿಕವಾಗದೆ ವೈಯಕ್ತಿಕ ನೆಲೆಯಲ್ಲಿಯೇ ಆಚರಿಸಲ್ಪಡುತ್ತಿದ್ದಂತೆ ತೋರುತ್ತದೆ. ದೇವರದಾಸಿಮಾರ್ಯರ ಸಮಕಾಲೀನರಾಗಿದ್ದ ಶಿವಶರಣರಲ್ಲಿ ಶಂಕರದಾಸಿಮಯ್ಯಾ, ಕೊಂಡುಗುಳಿ ಕೇಶಿರಾಜ, ವೀರಶಂಕರದೇವ, ಶಿವದಾಸಿಮಯ್ಯ, ಕೆಂಬಾವಿ ಭೋಗಣ್ಣ, ಸಿರಿಯಾಳ, ಸಿಂಧು ಬಲ್ಲಾರ, ಡೋಹರ ಕಕ್ಕಯ ಮಾರಯ್ಯ, ಮಾದಾರ ಚನ್ನಯ್ಯ , ಮಲ್ಲರಸ ಮುಂತಾದವರು ಮುಖ್ಯರು.  ಕೇಶಿರಾಜ ದಣ್ಣಾಯಕರು ಪೆರ್ಮಾಡಿ ರಾಯನ ಐಶ್ವರ್ಯವನ್ನು ಧಿಕ್ಕರಿಸಿ ಶಿವರಣ ಪ್ರಸಂಗದೊಡನೆ ಸುಖದಿಂದಿದ್ದರು. ಒಂದು ದಿನ ನದಿಯಲ್ಲಿ ದಣ್ಣಾಯಕರ ಲಿಂಗವು ಕಳಚಿ ಬೀಳಲು ಎಂಟು ಸ್ತೋತ್ರವನ್ನು ಹೇಳಿ ಲಿಂಗವನ್ನು ಕರೆಸ್ಥಲಕ್ಕೆ ಬರಿಸಿಕೊಂಡರು ಕೇಶಿರಾಜ ದಣ್ಣಾಯಕರು ಇಂತಹ ಮಹಿಮಾಶಾಲಿಗಳು ಎಂದು ಇವರ ಬಗೆಗೆ ಪ್ರಸ್ತಾಪಿಸಿದ್ದಾನೆ.      ಇವರೆಲ್ಲ ಬಸವ ಪೂರ್ವಯುಗದ ಶರಣರು, ಬಸವಣ್ಣನವರ ಹಿರಿಯ ಸಮಕಾಲೀನರಾಗಿರಬಹುದಾದ ಢಕ್ಕೆಯಮಾರಯ್ಯ, ಡೋಹರಕಕ್ಕಯ್ಯ, ಮಾದಾರ ಚೆನ್ನಯ್ಯರಂಥ ಶಿವಶರಣರು ಈ ಗುಂಪಿನಲ್ಲಿರುವುದನ್ನು ಕಾಣಬಹುದಾಗಿದೆ.
       ಕೆಲವು ವ್ಯಕ್ತಿಗಳು ತಮಗೆ ಗೊತ್ತಿಲ್ಲದೆಯೇ ಶಿವನನ್ನು ಆರಾಧಿಸಿ ಕೈಲಾಸ ಸೇರಿದ  ವಿವರಗಳು ಈ ಕೃತಿಯಲ್ಲಿ ಕಂಡು ಬರುತ್ತವೆ. ನಿದರ್ಶನಕ್ಕೆ, ಶಿವರಾತ್ರಿಯ ದಿವಸದಂದು  ಸಂಕಣ್ಣನೆಂಬವನನ್ನು  ಹುಲಿಯು ಬೆನ್ನಟ್ಟಿ ಬಂದಿತು. ಆತನು ತನ್ನ ಪ್ರಾಣ ಉಳಿಸಿಕೊಳ್ಳಲು ಬಿಲ್ವ ವೃಕ್ಷವನ್ನೇರಿದನು. ವೃಕ್ಷದಡಿಯಲ್ಲಿ ಶಿವಲಿಂಗ ವಿದ್ದಿತು. ದಿನ ಶಿವರಾತ್ರಿಯ ಮಹಾದಿನವಾಗಿದ್ದಿತು. ಆತನ ತಿದಿಯೊಳಗಿನ ನೀರು ಆಕಸ್ಮಾತ್ತಾಗಿ ಲಿಂಗದ ಮೇಲೆ ಬಿದ್ದಿತು. ಅದು ಅಭಿಷೇಕವಾಯಿತು. ತನ್ನ ನೋಟಕ್ಕೆ ಅಡೆತಡೆಯನ್ನುಂಟುಮಾಡಿದ ಬಿಲ್ವದ ಟೊಂಗಿಯನ್ನು ಮುರಿಯಲು ಅದು ಕೆಳಗೆ ಲಿಂಗದ ಮೇಲೆ ಬಿದ್ದಿತು. ಭಯದಿಂದ ನಿದರೆ ಬಾರದೆ ಹಾಗೇ ಕುಳಿತಿರಲು ಅದು ಜಾಗರಣೆಯಾಯಿತು. ಹೀಗೆ ಮಾಡಿದ ಕ್ರಿಯೆಗಳಲ್ಲಿ ಶಿವರಾತ್ರಿ ವ್ರತವೆಂದು ಭಾವಿಸಿ ಶಿವನು ಸಂಕಣ್ಣ ನನ್ನು  ಕೈಲಾಸಕ್ಕೆ ಕರೆದೊಯ್ದನು. ಕಲಿಕಂಬನೆಂಬ ಶರಣನು ಶಿವಭಕ್ತರನ್ನು ನಗಿಸುವ ಕಾರ್ಯಕದಲ್ಲಿದ್ದನು. ಪರಮೇಶ್ವರನು ಆತನ ಪರೀಕ್ಷೆಗೆಂದು ಪಾರ್ವತಿಯೊಡನೆ ವೃದ್ಧ ವೇಷದಿಂದ ಬಂದನು. ಕಲಿಕಂಬನು ಎಷ್ಟು ಪ್ರಯತ್ನ ಮಾಡಿದರೂ ವೃದ್ಧನು ನಗಲಿಲ್ಲ. ಆಗ ಕಲಿಕಂಬರು ನೀವು ಎತ್ತನ್ನು ಏರಿರಿ, ನಾವು ಈಯಮ್ಮೆಯನ್ನೇರುವೆವೆಂದು ನುಡಿಯಲು ಶಿವನು ಗಹಗಹಿಸಿ ನಕ್ಕನು.
  ಬಿಜ್ಜಳನು ಕಂಬಿಕಾರ ಹೊನ್ನಯ್ಯನನ್ನು ಕೊಂಡೆಯರ ಮಾತುಕೇಳಿ  ತೊನ್ನು ರೋಗಿಯೆಂದು ಕರೆದನು. ಕೂಡಲೇ ಆತನ ಮೈಯಲ್ಲ ತೊನ್ನಾಯಿತು. ತೊನ್ನು ರೋಗವನ್ನು ಕಳೆದವರಿಗೆ ಪಟ್ಟ ಕಟ್ಟುವವೆಂದು ಸಾರಲು ಹೊನ್ನಯ್ಯನು ಮೇಲೆ ಕುಳಿತನು. ಬಿಜ್ಜಳನನ್ನು ಕೆಲಗೆ ಕುಳ್ಳಿರಿಸಿದನು ಹೊನ್ನಯ್ಯ ಮೇಲಿನ ಗಾಳಿ ಬಿಜ್ಜಳನ ಮೃ ಸೋಕಲು ರಾಜನು ಶುದ್ದ ದೇಹಿಯಾದನು.
  ಶಿವಭದ್ರಯ್ಯನೆಂಬವನು ಅಲಗಿನಿಂದ ಶಿವ ಪೂಜೆಯನ್ನು ಕೈಕೊಂಡಿದ್ದನು. ಶಿವನು ಅದನ್ನು ಮೆಚ್ಚೆ ಕೊಂಡಿದ್ದನು. ಮತ್ತೊಬ್ಬ ಬ್ರಾಹ್ಮಣನು ಭಕ್ತಿಯಿಂದ ಪೂಜಿಸುತ್ತಿದ್ದರು. ಶಿವನು ಅವನಿಗೊಲಿದಿರಲಿಲ್ಲ ಹೀಗೇಕೆ ಎಂದು ಗಿರಿಜೆ ಕೇಳಿದರು.  ಮರುದಿನ ದೇವಾಲಯ ಬೀಳುವಂತಾಗಲು ವಿಪ್ರನು ಓಡಿ ಹೋದನು. ಶಿವಭದ್ರಯ್ಯನು ತನ್ನ ಅಲಗನ್ನು ಮಸ್ತಕ ಪ್ರದೇಶದಲ್ಲಿಟ್ಟು ಬೀಳುವ ಕಲ್ಲಿಗೆ ಒತ್ತಿ ಹಿಡಿದನು. ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇವಾಲಯವನ್ನುಳಿಸಿದ ಶಿವಭದ್ರಯ್ಯನನ್ನು ಗಿರಿಜೆ ಕೊಂಡಾಡಿದಳು. ಈ ತೆರೆನಾದ ಅನಾಮಿಕ ಗುಪ್ತಭಕ್ತರ  ಬಗೆಗೂ ಮಾಹಿತಿಯನ್ನು ಕೊಡ ಮಾಡಿದ್ದಾನೆ.
    ಇವರ ಇಡಿಯಾದ ಬಿಡಿಯಾದ ಚರಿತೆ ಸಂಗತಿಗಳು ವೀರಶೈವ ಕೃತಿಗಳಲ್ಲಿ, ಸಾಹಿತ್ಯದಲ್ಲಿ ಸಿಗುತ್ತವೆ. ಇವರು ತತ್ವನಿಷ್ಠುರಾಗಿದ್ದು, ಅನ್ಯಮತದ ಪ್ರಭಾವದ ಮಧ್ಯ ಕುಸಿದು ಹೋಗಲಿದ್ದ ವೀರಶೈವ ತತ್ವಗಳನ್ನು ಎಂತಹದೇ ಪರಿಸ್ಥಿತಿಯಲ್ಲಿ ಪಾಲಿಸುತ್ತ ಅದರ ಜೀವಂತಿಕೆಯನ್ನು ರಕ್ಷಿಸಿದರೆಂದು ತಿಳಿದು ಬರುತ್ತದೆ. ಇಲ್ಲಿ ಸೂಚಿತವಾಗಿರುವ ಬಸವ ಪೂರ್ವಯುಗೀನ ಶರಣನೇಕರ ಜೀವನದ ಪ್ರಮುಖ-ಘಟನೆ-ಪ್ರಸಂಗಗಳು  ಅವರನ್ನು ಕುರಿತ ಅಧ್ಯಯನಕ್ಕೆ ಆಕರಗಳಾಗಿವೆ.
      ಇನ್ನು ಬಸವಾದಿ ಶರಣ ಕತೆಗಳು ಈ ಕೃತಿಯಲ್ಲಿ ಹೇರಳವಾಗಿ ಬಂದಿವೆ. ಬಸವಣ್ಣನವರಿಗೆ ಸಂಬಂಧಿಸಿದಂತೆ ಪವಾಡ ಕಥೆಗಳು ಈ ಕೃತಿಯಲ್ಲಿವೆ. ಇಲ್ಲಿಯೂ ಒಬ್ಬ ವ್ಯಕ್ತಿಗೆಸಂಬಂಧಿಸಿದ ಒಂದೇ ಪ್ರಸಂಗ/ಕಥೆ ಪುನರುಕ್ತಿಯಾದ ಉದಾಹರಣೆಗಳಿವೆ. ಕೆಲವು ಸಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಬೇರೆ ಬೇರೆ ಕಥೆಗಳೂ ಈ ಕೃತಿಯಲ್ಲಿ ಬಂದಿವೆ. ಈ ಕಥೆಗಳಲ್ಲಿ ಸಾಮಾನ್ಯ ಕಥನ ದೃಷ್ಟಿ ಇರುವುದಾದರೂ ಕೆಲವು ಚಾರಿತ್ರಿಕ ಸಂಗತಿಗಳೂ ಬಸವಾದಿ ಶರಣರ ಕುರಿತು ಸಿಗುತ್ತವೆ. ಶರಣರ ಊರು, ಕಾಲದೇಶ, ಸಂಬಂಧಿಸಿದ /ಸಂಪರ್ಕಕ್ಕೆ ಬಂದ ವ್ಯಕ್ತಿ ಇತ್ಯಾದಿ ವಿವರಗಳು ಸಿಗುತ್ತವೆ. ಇಲ್ಲಿ ದೊರೆಯ ಬಹುದಾದ ಚಾರಿತ್ರ್ಯಕ ಸಂಗತಿಗಳನ್ನು ಹಾಗೂ ಇತರ ವೀರಶೈವ ಕೃತಿಗಳಲ್ಲಿ ದೊರೆಯುವ ಸಂಗತಿಗಳನ್ನೆಲ್ಲ ಒಟ್ಟಾಗಿ ಕಲೆ ಹಾಕಿಕೊಂಡು ಸಂಶೋಧಿಸುವ ಅಧ್ಯಯನವೊಂದರ ಅಗತ್ಯ ಇಂದಿಗೂ ಇದೆ. ಅದೂ ಕೂಡ ಒಬ್ಬ ವ್ಯಕ್ತಿಯ ಪರಿಶ್ರಮಕ್ಕೆ, ಮೀರಿ ನಿಲ್ಲುವ, ಒಂದು ಪ್ರಬಂಧದದ ವ್ಯಾಪ್ತಿಗೆ ನಿಲುಕದ ವಿಷಯವಾದ್ದರಿಂದ ಇದರಲ್ಲಿ ಬಂದಿರುವ ಬಸವಾದಿ ಶರಣರ ಕಥೆಗಳು ಯಾವವು ಎಂಬುದನ್ನು ಮಾತ್ರ  ಇಲ್ಲಿ ಗಮನಿಸಲಾಗಿದೆ.
1. ಬಸವಣ್ಣ
2. ಬಹುರೂಪಿ ಚೌಡಯ್ಯ
3. ಹರಳಯ್ಯ + ಮಧುವಯ್ಯ
4. ಬಿಬ್ಬಿ ಬಾಚಯ್ಯ
5. ಮರಳು ಶಂಕರದೇವ,
6. ಗಾಣದ ಕನ್ನಪ್ಪಯ್ಯ
7. ವೀರಶಂಕರದಾಸ
8. ಢಕ್ಕೆಯ ಮಾರಯ್ಯ
9. ಧವಳೇಶ ನಾಮಯ್ಯ
10. ಕರುಳಕೇತಯ್ಯ
11. ಕಕ್ಕಯ್ಯ -(ಕಂಕರಿ)
12. ಸಗರದ ಬೊಮ್ಮಯ್ಯ
13. ಸಿದ್ಧರಾಮೇಶ್ವರ
14. ಬಳ್ಳೇಶ ಮಲ್ಲಯ
15. ಗೊಲ್ಲಾಳಯ್ಯ
16. ಘಟ್ಟಿವಾಳಯ್ಯ
17. ಪುರಾಣದ ಮಾಯಿ ಭಟ್ಟ
18. ಬಂಕಿದೇವ
19. ಕನ್ನದಬ್ರಹ್ಮಯ್ಯ
20.ರೇವಣ ಸಿದ್ದೇಶ್ವರ
21. ಸಂನ್ಯಾಸಿ ಮಾಚಯ್ಯ
22. ಮಿಂಡ ಸಂಗಯ್ಯ
23. ಪಡಿಹಾರಿ ಬಸವ
24. ಶೂಲಾಯಧಯ್ಯ
25. ಬಡಿಗೇರಿ ಬ್ರಹ್ಮಯ್ಯ
26. ನಾಗಾಯಿ
27. ಮಹಾದೇವಿ
28. ಮುಕ್ತಾಯಕ್ಕ
29. ದುಗ್ಗಳೆ
30. ಅಜಗಣ್ಣ
31. ಧೂಳೇಶ್ವರ
32. ಸತ್ಯಕ್ಕ
33. ನೀಲಾಂಬಿಕೆ
34. ಸೋಮವ್ವೆ
35. ಏಕಾಂತರಾಮಯ್ಯ
36. ಅಮುಗಿದೇವಯ್ಯ
37. ಆದಯ್ಯ
38. ನುಲಿಯಚಂದಯ್ಯ
39. ಸೊಡ್ಡಳ ಬಾಚರಸ
40. ಮಡಿವಾಳ ಮಾಚಯ್ಯ
41. ಶಂಕರ ದಾಸಯ್ಯ
42. ಮೇದರ ಕೇತಯ್ಯ
43.ಮುಸುಡೆ ಚೌಡಯ್ಯ
44. ಅಯ್ದಕ್ಕಿ ಮಾರಯ್ಯ
45. ಒಕ್ಕಲಿಗ ಮುದ್ದಯ್ಯ
46. ವೀರಸಂಗವ್ವೆ
47. ಏಲೇಶ್ವರದ ಕೇಶಯ್ಯ
48. ಇಳಿಗಾಲ ಬೊಮ್ಮಯ್ಯ
49. ಹೆಂಡದ ಮಾರಯ್ಯ
50. ಶಿವಲೆಂಕ ಮಂಚಣ್ಣ
51. ಅಗ್ಗಣಿಯ ಹೊನ್ನಯ್ಯ
52. ಚಾಮಲದೇವಿ
53. ಗುಪ್ತ ಮಂಚಣ್ಣ
54. ಗೊಗ್ಗವ್ವೆ
55. ಸುರಗಿ ಚೌಡಯ್ಯ
56. ಹಡಪದ ಅಪ್ಪಣ್ಣ
57. ಹಡಪದ ರಾಚಯ್ಯ
58. ಅಲ್ಲಮ ಸಿಂಧನಕೇರಿ
59. ಸಕಳೇಶ ಮಾದರಸ
60. ನಿಜಲಿಂಗ ಚಿಕ್ಕಯ್ಯ
61. ಕಿನ್ನರಯ್ಯ
62. ಹಾವಿನಾಳ ಕಲ್ಲಯ್ಯ
63. ಕದಿರೆ ರೆಮಯ್ಯ
64. ಬಾಲ ಸಂಗಯ್ಯ
65. ಜಗದೇವ
66. ಕೋಲ ಶಾಂತಯ್ಯ
67.ಹೇರೂರ ನಾಗಯ್ಯ
68. ಮೊರಟದ ಬಂಕಯ್ಯ
69. ಉರಗ ರಾಯಣ್ಣ
70. ಬಡಿಹಾರಿ ಬೊಮ್ಮಯ್ಯ
71. ಬೊಂತಾದೇವಿ
72. ಮೈದುನ ರಾಮಯ್ಯ
73. ಗೋಣಿ ಮಾರಯ್ಯ
74. ಕಮಲವ್ವೆ
75. ಅಮಾತ್ಯ ಮಲ್ಲಯ್ಯ
76. ಉರಿಲಿಂಗ ಪೆದ್ದಿ
77. ಸೊಡ್ಡಳ ಬಾಚರಸ
78. ಶಿವನಾಗಮಯ್ಯ
79. ಶ್ವಪಚಯ್ಯ
80. ಮೂರುಜಾವುದ ದೇವರು
81. ತಂಗಟೂರ ಮಾರಯ್ಯ
ಈ ಕಥೆ ಪ್ರಸಂಗಗಳಲ್ಲಿ ಒಬ್ಬ ಶರಣನ ಕಥೆಯಲ್ಲಿ ಇನ್ನೊಬ್ಬ ಶರಣನನ್ನು ಕುರಿತ ಸಂಬಂಧ ಮತ್ತು ಪಾತ್ರವೇನೆಂಬುದರ ಬಗ್ಗೆ ಕೆಲವು ಸಂಗತಿಗಳ ಸುಳುಹುಗಳು ಇಣುಕಿ ಹಾಕುತ್ತವೆ.   ಅನಾಮಿಕ ಶರಣರಾದ ಮೊಲೆಯಲ್ಲಿ ಲಿಂಗವನ್ನು ಕಂಡು ಲಿಂಗಸ್ವರೂಪಿಯಾದ ನಂಬೆಣ್ಣ, ಮಳಲಲಿಂಗವ ಪೂಜಿಸಿ ತಂದೆ-ತಾಯಿ ಮತ್ತು ತಾನು ಕಾಯುವ ಗೋವುಗಳು ಸಹಿತ ಕೈಲಾಸಕ್ಕೆ ಹೋದ ಚಂಡೇಶನೆಂಬ ಭಕ್ತನ ಕಥೆ, ಲಿಂಗವೆಂದು  ಭಾವಿಸಿ ಪೂಜಿಸಿದ ಬಳ್ಳವನ್ನೇ ಲಿಂಗವಾಗಿಸಿ ಪರವಾದಿಗಳನ್ನು ಗೆದ್ದ ಬಳ್ಳೇಶ ಮಲ್ಲಯ್ಯ, ಆಡಿನ ಹಿಕ್ಕಿಯನ್ನೇ ಪೂಜಿಸಿ ಅದರಲ್ಲಿ ಲಿಂಗವನ್ನು ಪರಶಿವನನ್ನು ಕಂಡ ಕುರುಬ ಗೊಲ್ಲಾಳಯ್ಯ, ಜಿನ ಬಿಂಬವನ್ನು ಬೇನೆ ಬಂದ ಕಣ್ಣಿನ ದೃಷ್ಟಿ ಮಾತ್ರದಿಂದ ಸೀಳಿ ಅದರಲ್ಲಿ ಶಿವನನ್ನು ಕಂಡ ಪುಲಿಗೇರಿಯ ಸೋಮ, ಹೆಂಡತಿಯ ಜಾರತನ ಕಂಡು ವೈರಾಗ್ಯ ತಾಳಿ ಶಿವಜ್ಞಾನ ಸಂಪನ್ನನಾಗಿ ಪರ್ವತದ ಗುಂಡುಗಲ್ಲನ್ನೇ ಲಿಂಗವನ್ನಾಗಿ ಮಾಡಿಕೊಂಡು ಬಸವಾದಿ ಶರಣರಿಗೆ ನಮಿಸಿ ಲಿಂಗೈಕ್ಯನಾಗುವ ಶರಣ  ಇತ್ಯಾದಿ ವಿವರಗಳನ್ನು ಪ್ರಸ್ತಾಪಿಸಿದ್ದಾನೆ.
    ಒಟ್ಟಿನಲ್ಲಿ ಬಸವ ಯುಗದ ಸುಮಾರು 80 ಶರಣರ ಕುರಿತು ವಿವರಗಳು ಬಂದಿವೆ. ಅವುಗಳು ಚಾರಿತ್ರ್ಯಕವಾಗಿರುವಂಥ ಹಲವಾರು ಮಹತ್ವದ ಸಂಗತಿಗಳನ್ನು ಒಡಲಲ್ಲಿ ಹುದುಗಿಸಿಕೊಂಡಿವೆ. ಈ ಶರಣರ ಕಥೆಗಳು ಯಾವ ಯಾವ ಕನ್ನಡ ಪುರಾಣ, ಕೃತಿಗಳಲ್ಲಿ ಬಂದಿವೆ ಎಂಬುದರ ಬಗೆಗೆ ವ್ಯಾಪಕವಾದ ಅಧ್ಯಯನವನ್ನು ಮಾಡ ಬಹುದಾಗಿದೆ.  ಮಲ್ಲಣಾರ್ಯನು ಬಸವ ಯುಗದ ನಂತರದ ಅನೇಕ ಕನ್ನಡ ತೆಲುಗು ಶಿವಕವಿಗಳಾದ ಹರಿಹರ, ಪಾಲ್ಕುರಿಕೆ ಸೋಮನಾಥ, ರಾಘವಾಂಕ, ಚಾಮರಸ, ಭೀಮಕವಿ ಈ ಮುಂತಾದ ಕವಿಗಳನ್ನು ಶರಣ ಸಮರ್ಥರೆಂದೇ ಭಾವಿಸಿ. ಅವರ ಸುತ್ತಲೂ ಬೆಳೆದು ಬಂದಿರುವ ಪವಾಡದ ಕಥೆಗಳು, ಅಥವಾ ಅವರು ಕಾವ್ಯ ಸಾಹಿತ್ಯದ ಮುಖಾಂತರ ಪ್ರತಿಪಾದಿಸಿದ ಶಿವನಿಷ್ಠೆಯ ಕುರಿತು ಕಥೆಗಳ ಬಗೆಗೂ ಪ್ರಸ್ತಾಪಿಸಿದ್ದಾನೆ. ಬಸವಾದಿ ಶರಣರನ್ನು ಬಿಟ್ಟು ಇನ್ನುಳಿದ ಇತರ ಶರಣರ ಕಥೆಗಳು ಸಂಗತಿಗಳು, ಸಂಕ್ಷಿಪ್ತ ವಿವರಗಳು ಈ ಕೃತಿಯಲ್ಲಿವೆ. ಇಲ್ಲಿ ಬರುವ ಶರಣರ ಕಥೆಗಳು ಕಥಾ ಪ್ರಸಂಗಗಳು ವೈವಿಧ್ಯತೆಯಿಂದ ಕೂಡಿವೆ. ಅಲ್ಲಿ ಕಾಣುವ  ಭಕ್ತಿಯ ಆಚರಣೆ, ರೀತಿಗಳಲ್ಲಿ ಒಂದನ್ನೊಂದು ಹೋಲುವಂತೆ ಕಂಡರೂ ಕೆಲವೆಡೆ ಅನೇಕ ವ್ಯತ್ಯಾಸಗಳನ್ನು ಒಳಗೊಂಡು ವೈಚಿತ್ರವನ್ನುಂಟು ಮಾಡುವಂತಿವೆ. ಶಿವತತ್ವವನ್ನು ಜೀವಿಸಿ, ಸಾಕ್ಷತ್ ಶಿವ ಸ್ವರೂಪರಾದ ಮಹಾನು ಭಾವರು. ಶಿವಭಕ್ತಿ ಪಾರಾಯಣರು ಶಿವಸಮಯ ಪ್ರತಿಷ್ಠಾಪಕರು, ಶಿವತತ್ವ ಸಾಧಕರು, ಬೋಧಕರು, ತದೀಯ ಶರಣ ವ್ರಜದಲ್ಲಿಯೇ ಬರುತ್ತಾರೆ. ನಿಚ್ಚಳ ವೀರಶೈವ ಪರಿಭಾಷೆಯಲ್ಲಿ ಹೇಳುವುದಾದರೆ ಷಟಸ್ಥಲ, ಅಷ್ಟಾವರಣ, ಪಂಚಾಚಾರಗಳನ್ನೇ ಪರಿಪಾಲಿಸಿದವರು ಶಿವಶರಣರು, ಅವರನ್ನು ಪುರಾತನರು, ಬಸವಾದಿ ಪ್ರಥಮರು, ರೇಣುಕಾಧ್ಯಾಚಾರ್ಯರು, ಪಂಡಿತ್ರಯರು, ವಿರಕ್ತರು - ನೂರೊಂದು ವಿರಕ್ತರು ಏಳುನೂರೊಂದು ವಿರಕ್ತರು - ಎಂದು ಮುಂತಾಗಿ ವಿಭಜಿಸಬಹುದು.  ಆರ್.ಸಿ. ಹಿರೇಮಠರು ಸೂಚಿಸುವಂತೆ ಹರಿಹರಾದಿಯಾಗಿ ವೀರಶೈವಾಮೃತ ಮಹಾಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರದವರೆಗಿನ ಕೃತಿಗಳಲ್ಲಿ ಇರುವ ವಸ್ತು ವೆಂದರೆ       ಶೈವಸಿದ್ಧಾಂತ, ಶಿವಪಾರಮ್ಯದ ಕಥೆಗಳು ಇದನ್ನು ಬಿಟ್ಟರೆ ಪುರಾತನರ, ಶರಣರ, ವಿರಕ್ತರ ಮಹಿಮಾ ಸಂಗತಿಗಳೇ ಆಗಿವೆ ಎಂಬುದು ಗಮನಾರ್ಹವಾದ ಸಂಗತಿಯಾಗಿದೆ.
  ಲಕ್ಕಣ್ಣ ದಂಡೇಶನು ಶಿವತತ್ವ ಚಿಂತಾಮಣಿಯಲ್ಲಿ ಹೇಳಿದ ನೂತನ ಶರಣರ  ಬಗೆಗೆಗಿನ ವಿವರಗಳನ್ನು  ಸಂಧಿ ಎಂಟರಲ್ಲಿ ( ಪದ್ಯ ಸಂಖ್ಯೆ:1 ರಿಂದ 25) ಮಲ್ಲಣಾರ್ಯರು ಸಂಕ್ಷಿಪ್ತವಾಗಿ  ಪ್ರಸ್ತಾಪಿಸಿದ್ದಾರೆ. ಜೊತೆಗೆ ಶಿವತತ್ವ ಚಿಂತಾಮಣಿಯಲ್ಲಿರದ ಇತ್ತೀಚಿನ ಶರಣರ ಉಲ್ಲೇಖಗಳನ್ನು ಪದ್ಯ ಸಂಖ್ಯೆ: 26-49 ರಲ್ಲಿ ಕಾಣಬಹುದಾಗಿದೆ. ಮುಕ್ತಿ ಭಿಕ್ಷಾವೃತ್ತಿರಾಯರು, ಸದಾಚಾರದ ವರಧಾನ್ಯದೊಡೆಯರು, ಬ್ರಹ್ಮಚಾರಿದೇವರು, ಗುಂಡಿ ಪ್ರಭೆಯ ವಾರಣಾಸಿ ದೇವರು, ಶಂಕರೊಡೆಯರು ಪೋಲಂಕಯ ದೇವರು, ಶಿವರಾತ್ರಿಮಯ್ಯ, ನಿತ್ಯಶಿವರಾತ್ರೆ ವೀರಯ್ಯ ಧೂಪದ ಗಂಟೆ ವೀರಭದ್ರ ದೇವರು  ಮೊದಲಾದವರ ಕಥೆಯನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾನೆ.
   ಹೊನ್ನ ಕಾಯಕದ ತಿಮ್ಮಯ್ಯ, ಕನ್ನಡ ಕಾಯಕದ ತಿಮ್ಮಣ್ಣ, ಜೇಡರ ಚೌಡಯ್ಯ, ಪಾನುಗಲ್ಲ ಗಣಪರ ಪುಣಾಂಗೊಂಡೇಳ ಯರುವಯ್ಯ ಭಕ್ತ, ಕೂಕಟಪಳ್ಳಿ ರಾಜಾಯಿಯರು, ಕಬ್ಬುನ ಕಾಯಕದ ಪೋತಯ್ಯ ,ಭಕ್ತಿ ಗಣ ಪುರದ ಪೋತಿಸೆಟ್ಟಿ, ದೇವರಕೊಂಡೆಯ ವೀರಾ ಭಕ್ತ ಪೆಂಡಿಲ ಅಣ್ಣಿ ಶೆಟ್ಟಿ, ಬೀಚಲಪುರದ ರಾಮಾಭಕ್ತ ರಾಜಗೊಂಡೆಯ, ಅಣ್ಣಾ ಭಕ್ತ ಮುಂತಾದವರ ಕಥೆಗಳಿವೆ. ಈ ರಾಜಗೊಂಡೆಯ ಅಣ್ಣಾಭಕ್ತ ಉಪ್ಪಲಿಗ ದಾಸನಾಗಿದ್ದ ಈತನು ಹೆಗಲ ಮೇಳಿನ ಮುದ್ರೆ ಮಾಯವಾಗಿದ್ದಿತು. ಶಿವನು ಕನಸಿನಲ್ಲಿ ಹೇಳಿದಂತೆ-ಬೇಸಿಗೆಯಲ್ಲಿ ಮಳೆ ತರಿಸಿದ ಪವಾಡವನ್ನು ಪ್ರಸ್ತಾಪಿಸಿದ್ದಾನೆ. ಪಂಚಾಕ್ಷರೀ ಮಂತ್ರದ ಶ್ರೀ ಭಕ್ತನೆಂಬವನು ಪಾದತೀರ್ಥದ ಬಟ್ಟಲನ್ನು ತಲೆಯಲ್ಲಿಟ್ಟು ತೂಗಿ ಪಾರ್ವರನ್ನು ಲಘುಮಾಡಿದನು. ಪಟ್ಟೇಶ್ವರದ ರಾಮ ಬಸವಣ್ಣನು  ತನ್ನ ಇಬ್ಬರು ಮಕ್ಕಳ ತಲೆಯನ್ನು ವಿಶ್ವೇಶ್ವರನ ಮುಂದೆ ಕಡಿದು ಬೇರೆ ಬೇರೆ ಮಾಡಿ ಪುನಃ ಅವನ್ನು ಹತ್ತಿಸಿ ಪವಾಡವನ್ನು ಮರೆದ ಬಗೆಗೂ ಪ್ರಸ್ತಾಪಿಸಿದ್ದಾನೆ. ಅದೇ ರೀತಿ ಬಟಡ್ಡಿ ದೇಶದ ಮಧುಕೇಶ್ವರನ ಹಕ್ಕಿಲಿನ ಕಾಯಕದ ಕುರಗಾರಮ್ಮ, ಕಸವಿಕೋಟೆಯ ಬಸವಯ್ಯ, ಪೊಟನೂರು  ಪಡುಭಕ್ತ ಕಾಶಿಯ ಕಲ್ಲು ಕೆಲಸದ ಯರ್ರಭಕ್ತ  ರಾಜಮಹೇಂದ್ರಾವರದ ಪೋಲಯ್ಯ ,ವರಧಾನ್ಯದ ಸದಾಶಿವ ಭಕ್ತ, ಬ್ರಾಹ್ಮಣರ ಸೋಮಣ್ಣ ಮುಂತಾದವರ ಹೆಸರನ್ನು ಪ್ರಸ್ತಾಪಿಸಿದ್ದಾನೆ.  ಈ ಸೋಮಣ್ಣನನ್ನು ನಿಂದಿಸಿದ ಬ್ರಾಹ್ಮಣರ ಮನೆಗಳೆಲ್ಲ ಸುಟ್ಟು ಭಸ್ಮವಾದರೂ ಅವುಗಳ ನಡುವಿದ್ದ ಇವನ ಮನೆ ಸುಡದೆ ಹಾಗೆಯೇ ಉಳಿದಿದ್ದಿತು. ಬೆಜವಾಡದ ವರಧಾನ್ಯದ ಬಸವಣ್ಣಯ್ಯ, ಪಿಂಡಕೂರ ಬಡಗಿ ಚೆನ್ನಯ್ಯ, ಕೊಂಡಲದ ಹೊಂಗಾಯಿ ,ಕಂದಳದ ಬೈಯಣ್ಣ ಮುಂತಾದ ಶರಣರ ಬಗೆಗೆ ಉಲ್ಲೇಖವಿದೆ.  ವಿನಕೊಂಡದ ಕಬ್ಬುನಕಾಯಕದ ವೀರಣ್ಣ, ಮಾರಕಾಪುರದ ಕೇತಯ್ಯ ,ಮದ್ದಿ ಪೆಂಟಿಸಿಯೆಂಬ ಊರಿನ ಲಿಂಗಯ್ಯ, ನಲ್ಲೂರ ವೇದಾಂತಿ ಗಾವೂರು ಪೀರಯ್ಯ,ಪುಡಿಯಲ ಹಾಲು ಮೊಸರು ವ್ಯಾಪಾರದ ಓಬಳಕ್ಕ, ಕಾಯಪುರದ  ಮುಮ್ಮಡಿ ಭಕ್ತ ಇತ್ಯಾದಿಯವರ ಹೆಸರನ್ನು ಪ್ರಸ್ತಾಪಿಸಿದ್ದಾನೆ.
  ಉದಯ ಗಿರಿಯಲ್ಲಿ ವರದಾನಿ ರಾಮಯ್ಯ ಓದಿದ ಬಸವಪುರಾಣವನ್ನು ಇತರರು ಎತ್ತಿನ ಪುರಾಣವೆಂದು ಹೀಗಳೆಯಲು ಆ ಪುರಾಣದ ಮಹತಿಗಾಗಿ ಒಂದು ಪ್ರತ್ಯಕ್ಷ ಮಾಡಿ ತೋರಿಸಲಾಯಿತು. ಅಗ್ನಿಯಲ್ಲಿ ಒಂದು ಕಟ್ಟಿಗೆಯನ್ನಿಟ್ಟರು  ಆದರೆ ಅದು ಸುಡಲಿಲ್ಲ ಎಲ್ಲರೂ ಶರಣಾಗತರಾದರು .
   ವರ್ತಮಾನ ಕಾಲದ ನೂತನ ಶರಣರು ಎಂದು ತನ್ನ ಸಮಕಾಲೀನ ಸಂದರ್ಭದಲ್ಲಿ ಕಂಡು ಕೇಳಿದ ನೂತನ ಶರಣರ ಹೆಸರನ್ನು ಪಟ್ಟಿ ಮಾಡಿ ಕೊಟ್ಟಿದ್ದಾನೆ. ಹರತಿಯ ತೀರ್ಥದ ಲಿಂಗೇಶ, ಹುಲುವಳ್ಳಿ ಶಿವರಾತ್ರಿ ದೇವರು, ಸೋಲೂರು ಶೀಲವಂತ ಕೆಂಪಯ್ಯ, ಹಾಲುಕುರಿಕೆ ಉಜ್ಜಪ್ಪಯ್ಯ,ಹುಲುಕೂರು ಪರ್ವತಯ್ಯ, ಹೆಜ್ಜಾಜಿಯ ಗಣನಾಥದೇವರು, ಕೂಲಿಯ ಬಡ ಭಕ್ತಯ್ಯ, ಹುಲವಾಡಿ ವೀರೇಶ, ಕಬ್ಬುಗಲ್ಲ ಸಿದ್ಧವೀರೇಶ್ವರ, ದುರ್ಗದ ಬೊಮ್ಮಿಯಪ್ಪ, ( ಈತ ಯುದ್ದ ಮಾಡುವಾಗ ಕಣ್ಣಲ್ಲಿ ಬಾಣ ನೆಟ್ಟರೂ ತೆಗೆಯದೇ ಇದ್ದವನು) ಪೊತ್ತಪ್ಪೆಯ ಸೇನಾರಕ್ಷಕ  ಚೊಕ್ಕರ ಭಕ್ತ, ಸಂತೆಯ ನಾವಲೂರು ಪೀಚಾ ಪೋಲಯ್ಯ , ಕಂಬಿಕೂರ ಸಿರಿಗಿರಿ ರಡ್ಡಿ, ಪೂಗಿನಾದಿಡುಗುಡಿಲ ಪಾಗನಾಗಾಯಮ್ಮ, ಕೊತ್ತಹಳ್ಳಿಯ ಹೊನ್ನ ಕಾಯಕದ ಚಾಗಿ, ಬಂದ ಶರಣರಿಗೆ  ನೈವೇದ್ಯವೊದಗಿದಿದ್ದರೆ ತಲೆಯನ್ನು ಕತ್ತಿರಿಸಿಕೊಳುವ ವ್ರತಹಿಡಿದ ನೂತಪುರದ ನೂಲಕಾಯಕದ ವೀರಯ್ಯ, ಪೆನುಗೊಂಡೆ ಮುತ್ತಿಲಕಾಯಕದ  ರತ್ನಮ್ಮ, ಬುಕ್ಕರಾಯ ಸಮುದ್ರದ ಕೊಂಡ ಮಲ್ಲಯ್ಯ, ಇರುಬುದೊಲೆಯ ನಾಗಪ್ಪಯ್ಯ , ಜಗತಾಪಿ ಗುತ್ತಿಯ ಚೆನ್ನಬಸವಣ್ಣ ಪಾಮಡಿಯೋಗಿ ಸೆಟ್ಟವೀರಣ್ಣ ಅದಿಶೆಟ್ಟಿ ಏಳಪ್ಪಯ್ಯ ತಿಪಗಪಣ್ಣಯ್ಯ ಹರಿಸಮುದ್ರದ ವಿರುಪಣ್ಣ ನಿಡುಗಲ್ಲು ಉದ್ಯಪ್ಪ, ಗಟ್ಟೆಯ ಗ್ರಾಮದ ಹಾಳಪ್ಪಯ್ಯ ಶಿವನೊಲುಮೆಯ ಹಿಮಗಿರಿದೇವರು, ಸಮಾಧಿಯ ಸೋಮನಾಥ, ಮುದಿಗೆರೆಯ ಚಿಕ್ಕೊರತೆಯ ರಾಮಣ್ಣ ಶೆಟ್ಟಿ, ತಾಳಶಾಸನದ ಲಿಂಗಯ್ಯ, ಸುಗ್ಗನಳ್ಳಿ ಅಜ್ಜಯ ಬಸವಶೆಟ್ಟಿ, ಎಗ್ಗುಂದದ ಕಲ್ಲಿನಾಥ, ಹೆಗ್ಗವೆಯ ದೇವಾಂಗಮ್ಮ,ಹೆಗ್ಗವೆಯ ಕರಸ್ಥಲದ ದೇವರು, ಬಿಳುವರದ ದಂಡಪ್ಪ ರಾಜ ,ಕಂಠ ಪಾವಡ ಶೀಲದ  ಸಪ್ಪೆಯ ದೇವರು, ಸಿದ್ದ ಬಸವಯ್ಯ ,ಶಿವರಾತ್ರಾತಿಥಿಸ್ವಾಮಿ, ಬಳ್ಳೂರೆಲೆಯ ಲಿಂಗಪ್ಪ ಶರಣ, ಬೆಳರ್ವಾಡಿಯ ದೇವರಾಯ, ಮುಳ್ಳು ಸೋಗೆಯ ಭೃಂಗೀಶ, ಗುಡ್ಡವಳಿಲೆಯ ಭಿಕ್ಷದಾರ್ಯ,ಲಕ್ಕೂರಿನ ಶೀಲವಂತ ಮಲ್ಲಯ್ಯ, ನಕ್ಕನಹಳ್ಳಿ ಫಲಹಾರ ದೇವರು, ಬಳ್ಳಗೆರೆಯ ಗಂಗೇಶ, ಚೋಳಯ್ಯರಾವುತ  ,  ಕಪ್ಪಯ್ಯ ಉದಾಸಿಯ ಚನ್ನವೀರೇಶ, ಸೆಜ್ಜಯ ನಾಗಪ್ಪಯ್ಯ ಎಳವಂದೂರು ಅಂಕಪ್ಪ, ಕಾಣಕಾರ ಹಳ್ಳಿಯ  ಶೀಲವಂತೆ ಆವಣಗೆರೆಯ ನಾಗಮ್ಮ, ತೆರಕಣಾಂಭೆಯ  ನಂಜಮ್ಮ , ಗುರುಹಳ್ಳಿಯ ಮುರುಳಮ್ಮ, ಭಿಕ್ಷದ ಪರ್ವತೇಶ, ಕೇತಪ್ಪೊಡೆಯರು ಗುಮ್ಮಳಾಪುರ ಶಿವನ್ನಪ್ಪಯ್ಯ, ಲಿಂಗತೀರ್ಥದ ಸಿದ್ದ ದೇವನಂಜೇಶ, ಶಿವಗಂಗೆಯ ಫಲಹಾರದೇವರು ಮುಗ್ಧರಪುರದ ಸಣ್ಣ ವೀರಣ್ಣ ಗುಮ್ಮಳಾಪುರದ ನಂಜುಂಡ ದೇವರು ಚಿಂದರಹಳ್ಳಿಯ ಮಾಣಿಕ  ಶೆಟ್ಟಿ, ಕುಂದೂರು ಸಿದ್ಧೇಶ, ಹೊನ್ನವಳ್ಲಿಯ ಲಿಂಗಯ್ಯ ನಂದಿಯ ಸಿದ್ದೇಶ ಶಿವ ಸಮುದ್ರದ ಮೋಳಿಗೆ ದೇವರು ಹುಣಿಗೆರೆಯ ಲಿಂಗಪ್ಪ ನವಚಿಂತಯ್ಯ ಕಬ್ಬು ಕಲ್ಲು ಸಿದ್ದಮ್ಮ ಅತಿಥಿ ದೇವರು ಇತ್ಯಾದಿಯಾಗಿ ಉಲ್ಲೇಖಿಸಿರುವ ಶರಣ ಹೆಸರುಗಳು ಬೇರೆಡೆ ಎಲ್ಲಿಯೂ ದಾಖಲಾಗದಿರುವುದು ಗಮನಿಸ ಬೇಕಾದ ಸಂಗತಿಯಾಗಿದೆ.
      ವಿಷಯದ ದೃಷ್ಟಿಯಿಂದ ಪರಿಶೀಲಿಸಿದಾಗ ಅವರ ವ್ಯಾಪಕ ಮಾಹಿತಿಗಾಗಿ ಬೇರೆ ಆಕರಗಳೂ ಶೋಧನೆಗೆ ತೊಡಗಬೇಕಾಗುತ್ತದೆ. ಅಂದರೆ ಕೆಲವು ಶರಣ ಪವಾಡ ಕಥೆಗಳು ಈ ಕೃತಿಯಲ್ಲಿದ್ದು ಅವುಗಳಲ್ಲಿ ಆಂತರಿಕವಾದ  ಮಾಹಿತಿಗಳು ಅರೆಕೊರೆಯಿಂದ ಕೂಡಿವೆ. ಹೀಗಾಗಿ ಪ್ರಚಲಿತ 63 ಪುರಾತನರು , ಬಸವ ಪೂರ್ವ ಯುಗದ ಶಿವಶರಣರು, ಬಸವಾದಿ ಶರಣರು ಹಾಗೂ ನಂತರದ ನೂತನರು, ಈ ಎರಡೂ ಕಾಲದ ತುದಿ-ಮೊದಲಲ್ಲಿ ಕೊಂಡೆಯಾಗಿರುವಂಥ ಸಂಕ್ರಮಣ ಕಾಲದ ಶರಣರು. ಪ್ರಸಿದ್ದ ಶೈವ ಕವಿಗಳು, ವಿವಿಧ ದೇಶದ ಶಿವರಾಜರುಗಳ ಕುರಿತಾದ ಕಥೆಗಳು ಕೊಂಚ ವಿಸ್ತೃತವಾಗಿ ವರ್ಣಿಸಲ್ಪಟ್ಟಿವೆ. ಆದರೆ ಅನೇಕ ಅವ್ಯಕ್ತ ಶರಣರ ಕುರಿತಾಗಿ ಸಿಗುವ ಕೃತಿಯಾಂತರ್ಗತ ಮಾಹಿತಿ, ವಿವರಗಳು ಅಷ್ಟಕ್ಕಷ್ಟೇ. ಎಷ್ಟೋ ಶರಣರ ಊರು-ಕೇರಿಗಳು-ಅವುಗಳ ಸ್ಥಳನಾಮ-ಸದ್ಯಕ್ಕೆ ಈಗಿನ ಯಾವ ಊರು ಜಿಲ್ಲೆ ತಾಲೋಕು ಮತ್ತು ಊರು ಗಳು ಎಂಬುದನ್ನು? ಅಲ್ಲಿ ಏನಾದರೂ ಕೃತಿಕಾರರು ಆಗಿದ್ದರೆ ಅವರು ಬರೆದಿರುವ ಕೃತಿಗಳ ಹಸ್ತಪ್ರತಿ ಲಭ್ಯವಿದೆಯೋ ? ಅಥವಾ ಈ ಕೃತಿಯಂತೆ ಮತ್ತೆ ಯಾವ ಯಾವ ಪ್ರಕಟಿತ ಕೃತಿಗಳಲ್ಲಿ, ಪ್ರಕಟಿತವಲ್ಲದ ಅವ್ಯಕ್ತ ಬರಹಗಳಲ್ಲಿ ಇವರ ಕುರಿತಾಗಿ ಮಾಹಿತಿ ಸಿಗುತ್ತವೆಯೋ ಎಂದು ವಿಚಾರ ಮಾಡಬೇಕಾದ ನೂರಾರು ನೂತನ ಶರಣರ ಕಥೆಗಳು ಇಲ್ಲಿ ಬರುತ್ತವೆ. ಒಂದು ಮಾತಂತೂ ನಿಜ. ಅವರು ತಮ್ಮ ತಮ್ಮ ಪ್ರಭಾವಲಯದಲ್ಲಿ ಶಿವಮತದ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದೆನಿಸುತ್ತದೆ. ಕಾಯಕ, ದಾಸೋಹ ಮತ್ತು ತತ್ವ ನಿಷ್ಠೆಗಾಗಿ ಜೀವಿಸಿದ ಪುಣ್ಯಪುರುಷರು ಅವರ ಕುರಿತ ಜನತೆ ಹೊಂದಿರುವ ಭಕ್ತಿ ಅಭಿಮಾನಗಳು ಅವರ ಸುತ್ತಲೂ ಚರಿತ್ರೆಯನ್ನು ಮೀರಿ ಬೆಳೆದು ನಿಂತಿರುವ ಪವಾಡ ಪ್ರಸಂಗ-ಕಟ್ಟು ಕತೆಗಳಲ್ಲಿ ಪಠ್ಯವಸನವಾಗಿವೆ. ಕನ್ನಡ ನಾಡಿನ ಶೈವ ಪರಂಪರೆಯನ್ನು ಪರಮತದ ಬಿರುಗಾಳಿಯಿಂದ ಹಾರಿ ಹೋಗದಂತೆ ಜೀವ ಪಣಕ್ಕಿಟ್ಟು ಪ್ರಯತ್ನಿಸಿದವರ ಚರಿತ್ರೆಗಳು ಇಲ್ಲಿವೆ. ಇಂದಿನ ಯುಗಕ್ಕೆ ಸಂಗತವಾಗಿ, ಶೈವ-ವೀರಶೈವ ಸಂಸ್ಕೃತಿ ದಟ್ಟವಾಗಿರುವ ಪ್ರತಿ ಊರಿನಲ್ಲೂ ಶಿವಶರಣರು ಇದ್ದಿರಬೇಕು ಎಂಬ ಭಾವನೆಯನ್ನು ಈ ಕೃತಿ ಉಂಟುಮಾಡದೇ ಇರದು. ಇಂತಹ ಶರಣರ, ಪುರಾತನರ ಕಥೆಗಳ ನಿರೂಪಣೆಗೆ ಶಿವಕವಿಗಳ ಕಥಾ ಪ್ರಸಂಗಗಳನ್ನು  ಗುಬ್ಬಿಯ ಮಲ್ಲಣಾರ್ಯನು ತನಗಿಂತಲೂ ಮುಂಚಿನ ಕನ್ನಡ ಕವಿಗಳ ಕಾವ್ಯ-ಪುರಾಣಗಳಲ್ಲಿಯ ಪಂಚವಿಂಶತಿ ಲೀಲೆಗಳು,ಶಿವ ಮತ್ತು ಆತನ ಪರಿವಾರಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಆಯ್ದುಕೊಂಡಿದ್ದಾನೆ.ಜೊತೆಗೆತಾನು ಕೇಳಿದ್ದ ಸಮಕಾಲೀನ ಶಿವಶರಣರ ವಿವರಗಳನ್ನು ದಾಖಲಿಸಿದ್ದಾನೆ. ತಾನು ಈ ಕೃತಿಯ ರಚನೆಗಾಗಿ ಯಾವ್ಯಾವ ಕೃತಿಗಳನ್ನು ಪರಿಶೋಧಿಸಿದ್ದೇನೆ ಎನ್ನುವುದರ ಬಗ್ಗೆ ಸ್ವತಃ ಮಲ್ಲಣಾರ್ಯನೇ ಹೇಳಿಕೊಂಡಿರುವುದನ್ನು ಈಗಾಗಲೇ ಉಲ್ಲೇಖಿಸಲಾಗಿದೆ.
  ಆ ಕಾವ್ಯ-ಪುರಾಣಗಳನ್ನೆಲ್ಲಾ ನೋಡಿ ಓದಿ ಅವುಗಳಲ್ಲಿರುವ ಕಥಾ ಸಾರವನ್ನು ಸಂಗ್ರಹಿಸಿದ್ದಾನೆ. ಈ ಸಂಕಲನದಲ್ಲಿಯ ಕತೆಗಳ ಅನೇಕತೆ ಕಾವ್ಯದ ಏಕಮುಖತೆಗೆ ಭಂಗವನ್ನುಂಟುಮಾಡಿಲ್ಲ. ಈ ಕತೆಗಳಲ್ಲಿಯ  ಬಸವಣ್ಣ ಮತ್ತು ಇತರೆ ಶರಣರ ಬಗೆಗೆ ಕವಿಯು ಕಂಡಂತೆ ಕೇಳಿದಂತೆ ಸ್ವಾನುಭವದಿಂದ ಅನುಭವಿಸಿ ಹೇಳಿದ್ದಾನೆ. ಕವಿಯ ಸರಳ ಕೌಶಲತೆ ಜನಸಾಮಾನ್ಯರೂ ಅರ್ಥಮಾಡಿಕೊಳ್ಳುವ ಧಾಟಿಯಲ್ಲಿದೆ. ಒಟ್ಟಾರೆ  ಬಸವಾದಿ ಪ್ರಮಥರ  ಚರಿತ್ರೆ ಮತ್ತು ಶಿವಕವಿಗಳ ಚರಿತ್ರೆಯನ್ನು ರೂಪಿಸುವುದರ ಮೂಲಕ ಕಥೆಗಳ ತವರಾಗಿ ಪದ್ಯದ ನೆಲೆಯಾದ ಈ ಕೃತಿಯು ಕಥಾಕೋಶ, ಕಥಾಸಾಗರ, ಕಥಾಚಿಂತಾಮಣಿ ಎಂದೆನಿಸಿದೆ. ಬಸವಾದಿ ಪ್ರಮಥರು ಇಟ್ಟ ಕ್ರಾಂತಿಕಾರಕ ಹೆಜ್ಜೆಯ ಗುರುತುಗಳು,ಅವರ ಕಾಯಕತತ್ವ, ಜಾತೀಯತೆಯ ಮನೋಭಾವ,ಸ್ತ್ರೀಪುರುಷರ ಸಮಾನತೆ ಮುಂತಾದ ಪ್ರಗತಿಪರ ಧೋರಣೆಗಳನ್ನು ಸಾಂಕೇತಿಕವಾಗಿ  ಹಾಗೂ ಅವರ ಮಹಿಮೆಗಳನ್ನು ಪವಾಡ ಕಥೆಗಳ ಮೂಲಕ ನಿರೂಪಿಸುವತ್ತ  ಕವಿಯು ಆಸಕ್ತಿ ವಹಿಸಿದ್ದಾನೆ. ಈ ಸಂಕಲನ ಕೃತಿಯಲ್ಲಿ ಬಸವಣ್ಣನ ಜೀವಿತ ಕಥೆಯ ಪ್ರಮಾಣ ಕಡಿಮೆಯಿದ್ದರೂ ವ್ಯಕ್ತಿತ್ವದ ಪ್ರಭೆ ಮಸಕಾಗಿಲ್ಲ. ಇಂದಿಗೂ ಅಪ್ರಸಿದ್ಧ ವಚನಕಾರರ ವೈಯಕ್ತಿಕ  ವಿವರಗಳನ್ನು  ತಿಳಿಯಲು ವಿದ್ವಾಂಸರು ಈ ಸಂಕಲನ ಕೃತಿಯನ್ನು ಆಶ್ರಯಿಸ ಬೇಕಾಗಿರುವುದು ಅದರ ಮಹತ್ತರತೆಯ ಹೆಗ್ಗುರತಾಗಿದೆ.
      ಅನೇಕ ಕಾಯಕಗಳ ಪ್ರಸ್ತಾಪವೂ  ಈ ಕೃತಿಯಲ್ಲಿದೆ.ಮಲ್ಲಣಾರ್ಯನು ಹೇಳುವ    ಹೇಳುವ  63 ತಮಿಳು ಪುರಾತನರ ಕಾಯಕಗಳು,  ಬಸವಕಾಲೀನ  ನೂತನಶರಣರ  ಹಾಗೂ ನಂತರದ ಶರಣರ ಕಾಯಕಗಳು ಮತ್ತು  ಅವುಗಳ  ರೀತಿಯನ್ನು  ಕುರಿತು  ಸಂಗತಿಗಳು  ಈ ಕೃತಿಯಲ್ಲಿ  ವ್ಯಕ್ತವಾಗಿವೆ.
ತಳವಾರಿಕೆ
ಬೇಟೆ ಕಾಯಕ
ಮೀನುಗಾರಿಕೆ ಕಾಯಕ
ಚೋರಕಲವೃತ್ತಿ
ಒಕ್ಕಲಿಗಕಾಯಕ
ಕನ್ನ ಕಾಯಕ,
ಮೆದೆ ಒಟ್ಟುವ ಕಾಯಕ,
ವಾರಾಂಗನ ಕಾಯಕ,
ಪುಷ್ಪದಿಂಡೆ ಕಾಯಕ,
ಕನ್ನಡ ಕಾಯಕ
ವೀಳ್ಯದ ಕಾಯಕ,
ರತ್ನ ಪರೀಕ್ಷಣದ ಕಾಯಕ,
ಮೋಳಿಗೆ ಕಾಯಕ,
ಮೊರನ ಕಾಯಕ,
ಬಿದಿರ ಕಾಯಕ,
ಕರುಣಿಕ ಕಾಯಕ,
ಗೋಣೀ ಕಾಯಕ,
ಕೀರ್ತಿಸು ಕಾಯಕ,
ಸ್ತೋತ್ರಕಾಯಕ,
ಭಸಿರವಿಡುವ ಕಾಯಕ,
ಮಜ್ಜಿಗೆ ಕಾಯಕ,
ಮಡಿವಾಳಕಾಯಕ,
ಸೂಜಿಕಾಯಕ,
ದೋಸೆಕಾಯಕ,
ನಗೆಸುವ ಕಾಯಕ,
ಚಮ್ಮಾರಿಕೆ ಕಾಯಕ,
ಢಕ್ಕೆಯ ಕಾಯಕ,
ಪಡಿಹಾರ ಕಾಯಕ,
ಕುರುಳಮಾರುವ ಕಾಯಕ.
ಹಕ್ಕಿಲಿನ ಕಾಯಕದ ಕುರಗಾರಮ್ಮ
      ಹೀಗೆ ಹಲವಾರು ಶರಣರು ಕೈಗೊಂಡು ಮಾಡುತ್ತಿದ್ದ  ಕಾಯಕಗಳ ಪ್ರಸ್ತಾಪ  ಈ ಕೃತಿಯಾಗಿದೆ. ಅಷ್ಟೇ ಅಲ್ಲ. ಅವುಗಳ ರೀತಿ, ಹಿಂದಿರುವ ತಾತ್ವಿಕನೆಲೆಗಳೂ ಅಲ್ಲಲ್ಲಿ ವ್ಯಕ್ತವಾಗಿರುವುದನ್ನು ಕಾಣಬಹುದಾಗಿದೆ.
ಅಚ್ಚರಿ ಹುಟ್ಟಿಸುವ ಸಂಗತಿ ಎಂದರೆ  ವಾರಾಂಗನಾ ವೃತ್ತಿ, ಕನ್ನಗಳ್ಳತನ, ನಗಿಸುವುದು ಇವೂ ಕೂಡ ಕಾಯಕಗಳು  ಎಂದು ಹೇಳಿರುವುದು. ಇವನ್ನೂ  ಸತ್ಯಶುದ್ಧತೆಯಿಂದ ಮಾಡಿ ಮುಕುತಿ ಪಡೆದವರ ಕಥೆಗಳು ಹೇಳಲ್ಪಟ್ಟಿವೆ.
      ತಳವಾರಿಕೆ, ಬೇಟೆಗಾರಿಕೆ, ಮೀನುಗಾರಿಕೆ, ಒಕ್ಕಲಿಗಕಾಯಕ, ಪುಷ್ಪದಿಂಡೆ ಕಾಯಕ, ಮೋಳಿಗೆ ಕಾಯಕ, ಚಮ್ಮಾವುಗೆ ಕಾಯಕ, ಮಡಿವಾಳ ಕಾಯಕ, ಬಿದರಿರಕಾಯಕ, ಸೂಜಿ ಕಾಯಕ, ಮಡಿವಾಳ ಕಾಯಕ, ತುರಗಾಡ ಕಾರ್ಯ ಪಡಿಹಾರ ಕಾಯಕ, ಇವೇ ಮುಂತಾದವುಗಳು ಸೇವಾವೃತ್ತಿಯ ಕಾಯಕಗಳಾಗಿದ್ದೆವೆಂದು ತೋರುತ್ತದೆ. ಇಂಥ ಅನೇಕ  ಕಾಯಕಗಳನ್ನು ಕೈಗೊಂಡು, ಬಂದ ಆದಾಯವನ್ನು ಜಂಗಮದಾಸೋಹಕ್ಕೆ  ಸವೆಸಿದ ಸಾಕಷ್ಟು ಶರಣರು ಕಲ್ಯಾಣದಲ್ಲಿದ್ದರು. ಇವರಲ್ಲಿ ಕೆಲವರು  ವಚನಕಾರರೂ  ಆಗಿರುವರು ಎಂಬುದನ್ನು ಮರೆಯುವಂತಿಲ್ಲ.
      ಕೀರ್ತಿಸುವ, ಭಸಿತವಿಡುವ, ಸ್ತೋತ್ರ ಕಾಯಕಗಳು, ಧಾರ್ಮಿಕ ವಿಧಿವಿಧಾನಕ್ಕೆ ಸಂಬಂಧಿಸಿದ  ಕಾಯಕಗಳಾಗಿವೆ.ಮಜ್ಜಿಗೆ ಕಾಯಕ, ದೋಸೆಕಾಯಕ, ಇವುಗಳು  ಇಂದಿನ  ಹೊಟೇಲ್ ಸಂಸ್ಕೃತಿಯ  ಮೂಲರೂಪ ಗಳಾಗಿರಬಹುದಲ್ಲವೆ? ಚೋಳದೇಶದ ಅತಿಭಕ್ತ ಒಬ್ಬ ಮೀನುಗಾರ ಶಿವಭಕ್ತನಾಗಿದ್ದನಂತೆ  ಒಕ್ಕಲಿಗ ಮುದ್ದಯ್ಯ (ಮುಗ್ಧಯ್ಯ)ವ್ಯವಸಾಯ ಮಾಡಿ ಲೌಕಕ ಮಾರ್ಗದೊಳಿದ್ದು ಜಂಗಮಾರ್ಚನೆ ಮಾಡುತ್ತಿದ್ದನಂತೆ.ಆಮುಗಿ ದೇವ ಮತ್ತು ಆತನ ಸತಿ ವರದಾನಿಯಮ್ಮ ಸೊನ್ನಲಾಪುರದಲ್ಲಿ  ನೇಯ್ಗೆ ಕಾಯಕವ ಮಾಡುತ್ತಿದ್ದರಂತೆ.ನುಲಿಯ ಚಂದಯ್ಯ `ಮೆದೆಯ ಹುಲ್ಲನ್ನು ತಂದು ನುಲಿಯಂ ಹೊಸೆದು ಮಾರಿ ಜಂಗಮಾರ್ಚನೆಯ'  ಮಾಡುತ್ತಿದ್ದನಂತೆ. ಬಳ್ಳದಲ್ಲಿಯೇ ಲಿಂಗವನ್ನು ಕಂಡು ಬಳ್ಳೇಶ ಮಲ್ಲಯ್ಯನೂ ಒಬ್ಬ ವ್ಯಾಪಾರಿ.      ಗೊಲ್ಹಾಳಯ್ಯ ಕುರಿಯ ಹಿಕ್ಕೆಯಲ್ಲಿ ಲಿಂಗವನ್ನು ಕಂಡುಕೊಂಡ ಅಪ್ರತಿಮ ಮುಗ್ಧ ಶಿವಭಕ್ತ. ಈತ  ಒಬ್ಬ ಕುರಿಗಾಹಿ.  ಕುರಿ ಕಾಯುವುದೇ ಈತನ ಕಾಯಕವಂತೆ. ಚಂಡೇಶನು ಒಬ್ಬ ದನಗಾಹಿ ಕಾಯಕದ  ಶರಣ.  ಆಂಧ್ರದೇಶದ ಪುಲೀಂದ್ರ ಪುರದ ಕಲ್ಯಾಣಶೆಟ್ಟಿ ವ್ಯಾಪಾರಿ ಕಾಯಕದಿಂದ  ಜಂಗಮಭಕ್ತಿ ಮಾಡುತ್ತಿದ್ದನಂತೆ. ಹಿಪ್ಪರಿಗೆ ಪುರದ ಮಡಿವಾಳ ಮಾಚಯ್ಯ ರಜಕ ಕಾಯಕದಿಂದ ಜಂಗಮ ದಾಸೋಹ ಮಾಡುತ್ತಿದ್ದ ಶರಣ ನಾಗಿದ್ದಾನೆ. ಬಸವಾದಿ ಶರಣರ ಪೈಕಿವೀರ ಗಣಾಚಾರದ ಮಡಿವಾಳ ಕಾಯಕಯೋಗಿ ಶರಣನೀತ. ಹೊನ್ನ ಕಾಯಕದ ತಿಮ್ಮಯ್ಯ, ಕನ್ನಡ ಕಾಯಕದ ತಿಮ್ಮಣ್ಣ, ಇತ್ಯಾದಿ ಕಾಯಕ ವಿಶೇಷಣಗಳನ್ನು ಪ್ರಸ್ತಾಪಿಸಿದ್ದಾನೆ.
ಮುತ್ತುರತ್ನ ಪರೀಕ್ಷಿಸಿ ಬೆಲೆಗಟ್ಟುವಕಾಯಕವನ್ನು ಚಂದ್ರಯ್ಯನೂ ಚಂದನವಂ ಮಾರಿ ಜಂಗಮದಾಸೋಹ ಮಾಡುತ್ತಿದ್ದನಂತೆ. ಭಕ್ತರ ಕೀರ್ತಿಸುವ ಕಾಯಕದ ಬಲದೇವ ಸೊಡ್ಡಳ ಬಾಚರಸರ ಕರಣಿಕತ್ವ ಕಾಯಕ  ಗುಡುಚಿ ಕಾಳವ್ವೆಯೆಂಬವಳ ಮಜ್ಜಿಗೆ ಕಾಯಕ,      ಹೀಗೆ  ಬೇರೆ ಬೇರೆ ಕಾಯಕಗಳನ್ನು ಮಾಡುವ  ಶರಣರ ಕಥೆಗಳು ಈ ಕೃತಿಯಲ್ಲಿ  ಸಾಲು ಸಾಲಾಗಿ ಬಂದಿವೆ. 63ಜನ ತಮಿಳು ಪುರಾತನರಾಗಲಿ, ನೂತನ ಬಸವಾದಿ ಕಲ್ಯಾಣದ ಶರಣರಾಗಲಿ, ಇಲ್ಲವೇ  ಆನಂತರದ ಕೆಲ ವೀರಶೈವ ಶರಣರು ಒಂದಿಲ್ಲೊಂದು ಕಾಯಕದೊಂದಿಗೆ  ಭಕ್ತಿಯಿಂದ ಜಂಗಮ ದಾಸೋಹದಾಚರಣೆಯನ್ನು ಒಂದು ವ್ರತದಂತೆ ಮಾಡಿದ್ದಾರೆ. `ಕಾಯಕವೇ ಕೈಲಾಸ'ವೆಂಬ ಬಸವಣ್ಣನ ಮಾತಿಗೆ  ಮುನ್ನವೇ ಕೃತಿರೂಪದ ಸಂದೇಶವನ್ನು ನೀಡಿದ್ದಾರೆಂಬುದನ್ನು  ಗಮನಿಸಬೇಕಾಗಿದೆ. ಶಿವ ಸಾಕ್ಷಿಯಾಗಿ ದಾಸೋಹ ನಿಮಿತ್ಯವೇ ಕಾಯಕವನ್ನು ಮಾಡುವ ಶಿವಶರಣರ ಉಗ್ರಭಕ್ತಿಯನ್ನು ಕಾಣಬಹುದಾಗಿದೆ. ದೇವ ಸಾಕ್ಷಿಯಾಗಿ ದುಡಿಯುವ ಧರ್ಮಕ್ಕಾಗಿ ದೇಹ-ಪ್ರಾಣ ಮುಡಿಪಾಗಿಡುವ ಕಾಯಕ ನಿಷ್ಠೆ ಸಂಸ್ಕೃತಿಯನ್ನು ಅನೇಕ ಕಥೆಗಳು ಬಿಂಬಿಸಿವೆ.    ಈ ಕೃತಿಯ ಕನ್ನಡ ಸಾಹಿತ್ಯದಲ್ಲಿ ಅನೇಕ ದೃಷ್ಟಿಕೋನಗಳಿಂದ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ ಅದನ್ನು ನಾವು ಈ ಕೆಳಕಂಡ ಅಂಶಗಳ ದೃಷ್ಟಿಯೊಂದಿಗೆ ಕಂಡುಕೊಳ್ಳಬಹುದಾಗಿದೆ.
* ಕೃತಿಯ ದೀರ್ಘತೆ, ವ್ಯಾಪಕತೆ ದೃಷ್ಟಿಯಿಂದ ಇದೊಂದು ಬಹುಸಂಸ್ಕೃತಿ, ಕಾವ್ಯ -ಕಥೆಗಳ ಸಂಗಮದ
  ಮಹಾಕೃತಿ
* ಅದ್ಭುತವಾದ ವಿಶಿಷ್ಟ ಕಥಾಕೋಶವೆಂಬುದರಿಂದಲೂ ಈ ಕೃತಿಯ ಸ್ಥಾನಮಾನವೂ ವಿಶಿಷ್ಟವಾಗಿದೆ.
  ನೂರಾರು ಕತೆಗಳು ವಿಶಿಷ್ಟ ಶೈಲಿಯಲ್ಲಿ ಅನಾವರಣಗೊಂಡಿವೆ.
* ಈ ಕಥೆಗಳು-ಶರಣರು ಶೈವರಾಜರು, ಶಿವಕವಿಗಳ ಚರಿತ್ರ ಸಂಗತಿಗಳನ್ನು ಒಳಗೊಂಡು ಮಹತ್ವದ ಆಗರ
  ಗ್ರಂಥವೆನಿಸುವುದರಿಂದಲೂ ಇರು ಮಹತ್ವದ ಸ್ಥಾನ ಪಡೆದಿರುವ ಕೃತಿಯಾಗಿದೆ.
* ಕೃತಿಯ ಸ್ವರೂಪದಂತೆ -ಕೃತಿಯ ಆಶಯ ಜನಮಾನಸದಲ್ಲಿ ಶಿವಭಕ್ತಿಯ ಬೀಜಗಳನ್ನು ಬಿತ್ತಿ ಬೆಳೆವುದಾಗಿದೆ.
         ಮಲ್ಲಣಾರ್ಯನು ಸರಳವಾದ ಭಾಷೆಯನ್ನೇ ಬಳಸಿದ್ದಾನೆ. ಕಥೆಗಳನ್ನಲ್ಲದೆ. ತತ್ವಬೋಧೆಯಲ್ಲಿ ಭಾಷೆ ಸಹಜವಾಗಿಯೇ ಸಂಸ್ಕೃತ ಗರ್ಭಿತವಾಗಿ ಬಿಟ್ಟಿದೆ. ಈ ಕೃತಿಯು ಪೌರಾಣಿಕ, ಚಾರಿತ್ರಿಕ,ಸಾಂಸ್ಕೃತಿಕ ಸಾಹಿತ್ಯಕ ಸಂಗತಿಗಳನ್ನು ದಾಖಲಿಸಿರುವ ಅಪೂರ್ವ ಕೃತಿಯಾಗಿದೆ. ನೂತನ-ಪುರಾತನ ಶರಣರ ಬಗೆಗೆ ಮಾಹಿತಿಯನ್ನು ಒಳಗೊಂಡಿರುವುದರ ಮೂಲಕ ಆಕರ ಕೃತಿಯಾಗಿದೆ. ಶಿವತತ್ವ ಚಿಂತಾಮಣಿ.’ ವೀರಶೈವಾಮೃತಪುರಾಣ ಮತ್ತು ಚೆನ್ನ ಬಸವಪುರಾಣ’ ಈ ಮೂರು ಗ್ರಂಥಗಳು ವಸ್ತುವಿನ್ಯಾಸದ ದೃಷ್ಟಿಯಿಂದ ಒಂದೇ ವರ್ಗಕ್ಕೆ ಸೇರುತ್ತವೆ. ರಚನಾ ಕಾಲದ ದೃಷ್ಟಿಯಿಂದಲೂ ಇವು ಒಂದಾದ ಮೇಲೊಂದು ಬರುತ್ತದೆ. ಈ ಮೂರು ಪುರಾಣಗಳಲ್ಲಿಯೂ  ಯಾವುದೂ ನಾಯಕ ಪ್ರಧಾನವಾದುವಲ್ಲ. ಶಿ.ಶಿ.ಚಿಂ ಮತ್ತು ವೀ.ಶೈ.ಪು.ಗಳಲ್ಲಿ ಕೊನೆಯಲ್ಲಿ ಬಸವಣ್ಣನ ಕಥೆ ನಿರೂಪಿತವಾಗಿದೆ. ಒಟ್ಟಿನಲ್ಲಿ ಈ ಮೂರು ಗ್ರಂಥಗಳಲ್ಲಿ ಶಿವ ಲೀಲೆಗಳಿಗೆ ಮತ್ತು ಶರಣರ ಚರಿತ್ರೆಯ ಬಗೆಗೆ ವಿವರಣೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.ಆದ್ದರಿಂದ ಇದೊಂದು ಭಕ್ತ ಜನತೆಗೆ ಮೆಚ್ಚುಗೆ ಆಗುವ ಕೃತಿಯಾಗಿ ಮಹತ್ವದ ಸ್ಥಾನ ಗಿಟ್ಟಿಸಿಕೊಳ್ಳುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೆ ವೀರಶೈವ ಧರ್ಮತತ್ವ ಸಿದ್ಧಾಂತಗಳನ್ನು ನಿರೂಪಿಸಿರುವ ಏಕೈಕ ಕೃತಿಯಾಗಿದ್ದು ವಿಶ್ವಕೋಶವೆನಿಸಿದೆ. ಈ ಕೃತಿಯು,  ಬಸವೇಶ್ವರಾದಿಗಳ ಚರಿತ್ರೆ,  ಹದಿನೆಂಟು ಯುಗಗಳ ರಾಜರು ಮೇರುವೇರಿದ ಕಥೆ ಇತ್ಯಾದಿಗಳ ಸಂಕಲನವಾಗಿದೆ. ಹಿಂದಿನ ಮತ್ತು ಅಂದಿನ ಶಿವಶರಣರ ಸಮಗ್ರ ಮಾಹಿತಿಯನ್ನು ನೀಡಿರುವ ಆಕರಗಳ ಗ್ರಂಥ. ಸಾಹಿತ್ಯ ಚರಿತ್ರೆ, ಪುರಾಣ ಸಿದ್ಧಾಂತ, ವೇದಾಂತ ಮುಂತಾದ ಶಾಸ್ತ್ರ ವಿಚಾರಗಳನ್ನು ಕಾವ್ಯಮಯವಾಗಿ ವಿವರಿಸಿದ್ದಾನೆ.  ಈ ಕೃತಿಯು ಗಾತ್ರ ಮತ್ತು ಸತ್ವ ದೃಷ್ಟಿಯಿಂದಲೂ ಮಹತ್ತರತೆಯನ್ನು ಪಡೆದಿದೆ. ಬದುಕಿಗೆ ಅವಶ್ಯಕವಾದ ಅನೇಕ ವಿಷಯಗಳನ್ನು ಒಳಗೊಂಡಿದೆ. ಈ ಕೃತಿಯು ಮೂಲತಹ ಧರ್ಮಕಾವ್ಯವಾದರೂ ಕಾವ್ಯಧರ್ಮದಿಂದ ವಂಚಿತವಾಗಿಲ್ಲ. ಧರ್ಮಾನುರಾಗದೊಂದಿಗೆ ಕಾವ್ಯದೃಷ್ಟಿಯೂ ಸೇರಿಕೊಂಡಿದೆ. ಕವಿಯ ಪ್ರತಿಭೆ,ಪಾಂಡಿತ್ಯ,ಭಾಷಾಶಕ್ತಿ-ಶಬ್ದಸಂಪತ್ತು, ತಾತ್ವಿಕ ದೃಷ್ಟಿ, ಧಾರ್ಮಿಕ ವಿವೇಚನೆ,  ಪುರಾತನ ನೂತನಗಳನ್ನು ಸಮನ್ವಯ ಮಾಡುವ ಜಾಣ್ಮೆ ಇವು ಪ್ರಶಂಸನೀಯವಾಗಿವೆ. ಒಟ್ಟಾರೆ `ಬಸವಾದಿ ಶರಣರು ಆಚರಿಸಿ ತೋರಿದ ಮಾರ್ಗವೇ ಈ ಪುರಾಣದ ವೀರಶೈವಾಮೃತವು. ಈ ವೀರಶೈವಾಮೃತವನ್ನು ವಿವರಿಸುವುದೇ ವೀರಶೈವಾಮೃತ ಪುರಾಣ’ ಎಂಬ ಈ ಬೃಹತ್ ಕೃತಿಯ ಸಂಪಾದಕರಾದ ಆರ್.ಸಿ. ಹಿರೇಮಠ ಅವರ ಮಾತುಗಳು ಸ್ವೀಕಾರಾರ್ಹವಾಗಿವೆ.ಭೈರವೇಶ್ವರ ಕಾವ್ಯದಲ್ಲಿ ನಂಜುಂಡಾರಾಧ್ಯರು ಈ ಕಥಾ ಪ್ರಸಂಗಗಳನ್ನು ಸೂಚಿಸುವುದಕ್ಕೂ, ಕಥಾಮಣಿ ಸೂತ್ರರತ್ನಕರದಲ್ಲಿ ಈ ಕಥೆಗಳನ್ನು ಶಾಂತಲಿಂಗದೇಶಿಕರು ವಿಸ್ತರಿಸುವುದಕ್ಕೂ ಮುಖ್ಯ ಆಕರ ವೀರಶೈವಾಮೃತ  ಮಹಾಪುರಾಣವಾಗಿದೆ ಎಂಬುದು ಈ ಕೃತಿಯ ಮಹತ್ತರತೆಯ ಪ್ರತೀಕವಾಗಿದೆ. ಆದಾಗ್ಯೂ ಇಂತಹ ಮಹತ್ತರ ಸಂಕಲಿತ ಕೃತಿಗೆ ಕನ್ನಡ ಸಾಹಿತ್ಯದಲ್ಲಿ ದೊರೆಯಬಹುದಾದ ಸ್ಥಾನ ದೊರೆತಿಲ್ಲ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗುಬ್ಬಿಯ ಮಲ್ಲಣಾರ್ಯ ಮತ್ತು ಆತನ ಕೃತಿ ಇಂದಿಗೂ ಅಲಕ್ಷಿತವಾಗಿಯೇ ಉಳಿದಿರುವುದು ದುರ್ದೈವದ ಸಂಗತಿಯಾಗಿದೆ.

        ಆಧಾರ ಗ್ರಂಥಗಳು
1.ಗುಬ್ಬಿ ಮಲ್ಲಣಾರ್ಯ ವಿರಚಿತ ವೀರಶೈವಾಮೃತ ಪುರಾಣ
ಭಾಗ 1 ಮತ್ತು 2
ಸಂಪಾದಕರು: ಆರ್.ಸಿ,ಹಿರೇಮಠ.
ಪ್ರಕಾಶಕರು: ಎನ್.ಎಸ್.ಎಸ್. ಕಲ್ಯಾಣ ಕೇಂದ್ರ
ಜಯನಗರ, ಬೆಂಗಳೂರು 1990
 2. ಆರಾಧ್ಯ ಸಂಪದ
        ( ಪ್ರೊ. ಎನ್.ಬಸವಾರಾಧ್ಯ-80. ಸಮಗ್ರ ಸಾಹಿತ್ಯ ಸಂಪುಟ)
          ಸಂ:ಎಸ್.ವಿದ್ಯಾಶಂಕರ
           ಬೆಂಗಳೂರು. 2005
  3.ಸಮಗ್ರ ಕನ್ನಡ ಸಾಹಿತ್ಯ  ಸಂಪುಟ.4, ಭಾಗ-2
           ಪ್ರಧಾನ ಸಂಪಾದಕರು: ಜಿ.ಎಸ್.ಶಿವರುದ್ರಪ್ಪ.
          ಪ್ರಸಾರಾಂಗ. ಬೆಂಗಳೂರು ವಿಶ್ವವಿದ್ಯಾಲಯ,1978
  4. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ
         ಸಂ.5. ಭಾಗ.2
        ಸಂ. ರಾಮೇಗೌಡ, ಪ್ರಸಾರಾಂಗ,  ಮೈಸೂರು ವಿಶ್ವವಿದ್ಯಾಲಯ
         ಮೈಸೂರು 2005,
 5. ಎಸ್.ವಿದ್ಯಾಶಂಕರ: ವೀರಶೈವ ಸಾಹಿತ್ಯ ಚರಿತ್ರೆ, ಸಂ.3, ಭಾಗ 1,
  ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. 2015
                                     


  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...