ಒಟ್ಟು ಪುಟವೀಕ್ಷಣೆಗಳು

ಶುಕ್ರವಾರ, ಅಕ್ಟೋಬರ್ 18, 2024

 

ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು

                                        ಡಾ.ಸಿ.ನಾಗಭೂಷಣ

                                      

   ಪ್ರಾಚೀನಸಾಹಿತ್ಯವನ್ನು ಅಭ್ಯಾಸ ಮಾಡುವವರ ಸಂಖ್ಯೆ ಕ್ಷೀಣಿಸುತ್ತ ಬಂದಿತ್ತು. ಪರಿಸ್ಥಿತಿಯನ್ನು ಅರಿತ ಕನ್ನಡಸಾಹಿತ್ಯವನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಪ್ರಾಚೀನ ಕನ್ನಡ ಕಾವ್ಯಗಳ ಸಂಗ್ರಹ ಆವೃತ್ತಿಗಳನ್ನು ಹೊರತರುವ ಅಂಶವನ್ನು ಸೇರಿಸಿದರು. ಹಳಗನ್ನಡ ಸಾಹಿತ್ಯ ಕೃತಿಗಳಲ್ಲಿ ಉತ್ತಮವಾದಂತಹ ಕಾವ್ಯವನ್ನು ಆರಿಸಿ ಅದರ ರಸಕಟ್ಟಿಯಾದ ಭಾಗವನ್ನು ಸಹೃದಯರಿಗೆ ಒದಗಿಸುವ, ವಿದ್ಯಾರ್ಥಿಗಳಿಗೆ ಪಠ್ಯವಾಗಿ ನೀಡುವ ಒಂದು ಕ್ರಮ ಇಪ್ಪತ್ತನೇ ಶತಮಾನದ 3ನೇ ದಶಕದಲ್ಲಿ  ಮೈಸೂರು ವಿಶ್ವವಿದ್ಯಾಲಯದ ಮೂಲಕ ರೂಢಿಗೆ ಬಂದಿತು. ಸಂಗ್ರಹ ಆವೃತ್ತಿಗಳು ಪಠ್ಯಕೇಂದ್ರಿತ ಸಂಪಾದನೆಯ ಪ್ರಕ್ರಿಯೆಗಳಾಗಿದ್ದು ಶುದ್ಧಪಠ್ಯ ಎನ್ನುವ ಪರಿಕಲ್ಪನೆಯಲ್ಲಿ ಸಾಗಿ ಬಂದಿವೆ. ಕಾವ್ಯಗಳಲ್ಲಿಯ ಸಾಹಿತ್ಯಾತ್ಮಕ ಅಂಶಗಳನ್ನಷ್ಟೇ ಆಸಕ್ತರಿಗೆ ನೀಡುವ ಉದ್ದೇಶ್ಯದಿಂದಾಗಿ ಸಂಗ್ರಹ ಆವೃತ್ತಿಗಳು ರೂಪುಗೊಳ್ಳಲಿಕ್ಕೆ ಕಾರಣವಾಗಿವೆ.

       ಸಂಗ್ರಹ ಕಾರ್ಯದಲ್ಲಿ ಮೂಲ ಮುಖ್ಯ ಕಥೆಗೆ ಯಾವ ಊನವೂ ಉಂಟಾಗದಂತೆ ಆಯ್ದುಕೊಂಡ ಭಾಗಗಳಲ್ಲಿ ಬರುವ ವಿವಿಧ ಪಾಠಾಂತರಗಳಲ್ಲಿ ಉತ್ತಮ ಪಾಠವನ್ನು ಸ್ವೀಕರಿಸುವುದು ಮುಖ್ಯವಾಗಿದೆ. ಸಂಗ್ರಹ ಆವೃತ್ತಿಗಳಲ್ಲಿ ಗ್ರಂಥಪಾಠ ಪರಿಷ್ಕರಣದ ಜೊತೆಗೆ ಕವಿಯ ಕಾಲ, ದೇಶ, ಇತ್ಯಾದಿ ವೈಯಕ್ತಿಕ ವಿಚಾರಗಳು,ಕೃತಿಯ ಆಕರಗಳು, ಕೃತಿ ಹಾಗೂ ಕೃತಿಕಾರನ ಚಾರಿತ್ರಿಕ ಹಿನ್ನೆಲೆ, ಕೃತಿಕಾರನ ಮೇಲೆ ಬಿದ್ದಿರುವ ಪ್ರಭಾವಗಳು ಮುಂದಿನ ಕೃತಿಕಾರರ ಮೇಲೆ ಬಿದ್ದಿರುವ ಪ್ರಭಾವ, ಕೃತಿಯ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಅಧ್ಯಯನ, ಇತ್ಯಾದಿ ಉನ್ನತ ವಿಮರ್ಶೆಯ ಸಂಗತಿಗಳು ಸಂಗ್ರಹ ಆವೃತ್ತಿಗಳ ಮಹತ್ವವನ್ನು ಹೆಚ್ಚಿಸಲು ಮತು ಅವು  ಉತ್ಕೃಷ್ಟಮಾದರಿಗಳು ಎನಿಸಿಕೊಳ್ಳಲು ಕಾರಣವಾಗಿವೆ.

     ತೀ.ನಂ.ಶ್ರೀಕಂಠಯ್ಯನವರು ವಾಸ್ತವವಾಗಿ ಬರೆದದ್ದು ಕಡಿಮೆಯೇ ಎನ್ನುವ ಅನಿಸಿಕೆ ಕೆಲವು ವಿದ್ವಾಂಸರಿಂದ ವ್ಯಕ್ತವಾಗಿದೆ. ತೀ.ನಂ.ಶ್ರೀ. ಅವರು  ಗ್ರಂಥಸಂಪಾದನೆ ಕಾರ್ಯವನ್ನು ಪ್ರಾರಂಭಿಸುವ  ಹೊತ್ತಿಗೆ  ಗ್ರಂಥಸಂಪಾದನೆಯು ಪಾಶ್ಚಾತ್ಯರಲ್ಲಿ ಒಂದು ನಿಶ್ಚಿತ ರೂಪವನ್ನು ತಾಳಿದ್ದಿತು.     ತೀ.ನಂ.ಶ್ರೀ.ಯವರಲ್ಲಿ  ಗ್ರಂಥ ಸಂಪಾದನೆಯ ವಿಧಿವಿಧಾನಗಳಿಗೆ ಸಂಬಂಧಿಸಿದ  ಎಲ್ಲ ಅರ್ಹತೆಗಳೂ ಅಗತ್ಯಕ್ಕೆ ತಕ್ಕಷ್ಟು ಇದ್ದುವು. ಟಿ.ಎಸ್‌. ವೆಂಕಣ್ಣಯ್ಯನವರ ಸಂಪಾದನಾ ಕಾರ್ಯಗಳಲ್ಲಿ ಸಹಕರಿಸುತ್ತಿದ್ದಾಗ ಸಾಗಿದ ಅವರ "ಅಭ್ಯಾಸಪ್ರಯತ್ನ' ಇನ್ನೊಂದು ರೂಪದಲ್ಲಿ ನಡೆಯುತ್ತಿತ್ತು. ಹೀಗಾಗಿ ಇವರು ಆ ಕಾಲಘಟ್ಟದಲ್ಲಿಯೇ  ಗ್ರಂಥಸಂಪಾದನೆಯ ತಾತ್ವಿಕ ಮತ್ತು ಅನ್ವಯಿಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಎಲ್ಲಾ ಸಾಧ್ಯತೆಗಳನ್ನು ಸಾಧ್ಯವಾಗಿಸಿಕೊಂಡು ನಂಬಿಯಣ್ಣನ ರಗಳೆ ಮತ್ತು ಗದಾಯುದ್ಧ ಸಂಗ್ರಹ ಗಳನ್ನು ಪರಿಷ್ಕರಿಸುವುದರ ಮೂಲಕ ಆಧುನಿಕ ಪೂರ್ವ ಸಾಹಿತ್ಯ ಸಂವರ್ಧನೆಗೆ ಕಾರಣೀಭೂತರಾಗಿದ್ದಾರೆ. ಅವರು ಸಂಪಾದಿಸಿರುವ  ಹರಿಹರನ ನಂಬಿಯಣ್ಣನ ರಗಳೆಯು ಕ್ರಿ.ಶ. ೧೯೪೬ ರಲ್ಲಿ ಮತ್ತು ರನ್ನನ ಗದಾಯುದ್ಧ ಸಂಗ್ರಹ ಕೃತಿಯು ೧೯೪೯ರಲ್ಲಿ ಪ್ರಕಟಗೊಂಡಿವೆ. ನಂಬಿಯಣ್ಣನ ರಗಳೆಯ ಪ್ರಕಟಣೆಯ ಕಾಲಕ್ಕೂ (೧೯೪೬) ಗದಾಯುದ್ಧ ಸಂಗ್ರಹದ ಪ್ರಕಟಣೆಯ ಕಾಲಕ್ಕೂ (೧೯೪೯) ಕೇವಲ ಮೂರು ವರ್ಷಗಳ ಅಂತರವಿದೆ. ಈ ಮೊದಲೆ ಸೂಚಿಸಿರುವಂತೆ ನಂಬಿಯಣ್ಣನ ರಗಳೆಯ ಸಂಪಾದನ ಕಾರ್ಯಾರಂಭ ೧೯೩೯ರಲ್ಲಿ, ಎಂದ ಮೇಲೆ, ಗದಾಯುದ್ಧ ಸಂಗ್ರಹದ ಸಂಪಾದನ ಕಾರ್ಯಕ್ಕೆ ಹಿಡಿದ ಕಾಲದ ಇಮ್ಮಡಿಗೂ ಮಿಕ್ಕ ಕಾಲ ನಂಬಿಯಣ್ಣನ ರಗಳೆಯ ಸಂಪಾದನಕಾರ್ಯ ತೆಗೆದುಕೊಂಡಿರುವುದನ್ನು ಕಾಣಬಹುದಾಗಿದೆ. ನಂಬಿಯಣ್ಣನ ರಗಳೆ ಮೊದಲ ಬಾರಿಗೆ ಪ್ರಕಟವಾಗಬೇಕಾಗಿದ್ದುದರಿಂದ ಹಸ್ತಪ್ರತಿಗಳ ಸಂಗ್ರಹದಿಂದಲೇ ಕಾರ್ಯಾರಂಭ ಮಾಡಬೇಕಾಗಿತ್ತು. ಗದಾಯುದ್ಧಕ್ಕೆ ಪರಿಷ್ಕೃತ ಮುದ್ರಣಗಳ ನೆರವೂ ಇದ್ದು, ಹಿನ್ನೆಲೆಯಾಗಿ ಗ್ರಂಥಸಂಪಾದನ ಕಾರ್ಯದ ಪಕ್ವವಾದ ಅನುಭವೂ ಇದ್ದುದ್ದರಿಂದ ಅದರ ಸಂಪಾದನಾ ಕಾರ್ಯಕ್ಕೆ ಅಷ್ಟು ದೀರ್ಘಾವಧಿಯ ಕಾಲ ಬೇಕಾಗಲಿಲ್ಲ. ತೀ.ನಂ.ಶ್ರೀ ಯವರು ಸಿದ್ಧಪಡಿಸಿದ್ದ ನಂಬಿಯಣ್ಣನ ರಗಳೆಯ ಅಚ್ಚಿಗಾಗಿ ಸಿದ್ಧಪಡಿಸಿದ ಪ್ರತಿ ಹಾಗೂ ಓಲೆಯಪ್ರತಿಗಳಿಂದ ಪಾಠಾಂತರಗಳನ್ನು ಸಂಕಲನ ಮಾಡಿದ್ದ ಆಧಾರ ಹಸ್ತಪ್ರತಿ, ಇವೆರಡರಿಂದ ಈ ಕೆಲಸಕ್ಕೆ ಪಟ್ಟ ಶ್ರದ್ಧೆ ಮತ್ತು ಪರಿಶ್ರಮದ ಒಂದು ಸ್ಥೂಲಚಿತ್ರಣವನ್ನು ನಾವು ಅವರ ಈ ಸಂಪಾದಿತ ಕೃತಿಯಲ್ಲಿ ಗುರುತಿಸಬಹುದಾಗಿದೆ.

    ತೀನಂಶ್ರೀ ಅವರು ನಂಬಿಯಣ್ಣನ ರಗಳೆಯನ್ನು ಸಂಪಾದಿಸಲು ಅಸಕ್ತಿಯನ್ನು ತಾಳಿದ ಬಗೆಗೆ ಈ ರೀತಿಯಾಗಿ ಅವರೇ ಹೇಳಿಕೊಂಡಿದ್ದಾರೆ. ʻನಂಬಿಯಣ್ಣನ ರಗಳೆʼಯ ಹತ್ತಿರದ ಪರಿಚಯವನ್ನು ನಾನು ಮಾಡಿಕೊಂಡದ್ದು ಸುಮಾರು ಏಳು ವರ್ಷಗಳ ಕೆಳಗೆ. ಮೈಸೂರಿನ ಓರಿಯೆಂಟಲ್‌ ಲೈಬ್ರರಿಯ ಕೈಬರಹದ ಪ್ರತಿಯೊಂದರಲ್ಲಿ ಅದನ್ನು ಓದತೊಡಗಿ, ಮುಂದುವರಿದ ಹಾಗೆಲ್ಲ ಅದರ ಸೌಂದರ್ಯಕ್ಕೆ ಮನಸೋತೆನು. ಹರಿಹರ ಕವಿಯ ಅತ್ಯುತ್ಕೃಷ್ಟ ಕೃತಿಗಳಲ್ಲಿ ಇದು ಒಂದೆಂಬುದು ನನಗೆ ಚೆನ್ನಾಗಿ ಮನವರಿಕೆಯಾಯಿತು. ಕೈಬರೆಹದ ಪ್ರತಿಗಳಲ್ಲೇ ಅಡಗಿರಲು ಇನ್ನು ಬಿಡದೆ, ಇದನ್ನು ಪರಿಷ್ಕರಿಸಿ ಅಚ್ಚುಮಾಡಿಸಬೇಕೆಂಬ ಆಸೆಯೂ ತಲೆದೋರಿ ಆ ವ್ಯವಸಾಯಕ್ಕೆ ತೊಡಗಿದೆನು. ಅದರ ಫಲವೇ ಈ ಪುಸ್ತಕ.ʼ ಎಂಬುದಾಗಿ ಅವರೇ ಹೇಳಿಕೊಂಡಿದ್ದಾರೆ. (ನಂಬಿಯಣ್ಣನ ರಗಳೆ, ಅರಿಕೆ)  

   ಈ ಗ್ರಂಥವನ್ನು  ಶೋಧಿಸಿ ಸಂಪಾದಿಸಲು ಕ, ಖ, ಗ, ಚ, ಜ ಐದು ಮಾತೃಕೆಗಳನ್ನು ಆಧಾರವಾಗಿ ಉಪಯೋಗಿಸಿಕೊಂಡಿದ್ದಾರೆ. ಅವರೇ ಹೇಳಿರುವ ಹಾಗೆ ಅವುಗಳ ವಿವರಗಳು ಈ ಕೆಳಕಂಡ ರೀತಿಯಲ್ಲಿವೆ.

ಕ- ಮೈಸೂರು ಗೌರ್ನಮೆಂಟ್ ಓರಿಯಂಟಲ್‌ ಲೈಬ್ರರಿಯು K 358 ಸಂಖ್ಯೆಯ ʻಶರಣರಗಳೆʼ ಎಂಬ ಹೆಸರುಳ್ಳ ಓಲೆಯಗರಿಯ ಪುಸ್ತಕದಲ್ಲಿ ದೊರೆಯುವ ಪಾಠ ಈ ಪುಸ್ತಕದಲ್ಲಿ ಹರಿಹರನ ರಚಿತವಾದ ರಗಳೆಗಳು ನೂರಕ್ಕೆ ಹೆಚ್ಚಾಗಿ ಉಂಟು. ಎಂಬುದಾಗಿ ತಿಳಿಸಿದ್ದಾರೆ.

ಖ-ಮೈಸೂರು ಗೌ.ಓ, ಲೈಬ್ರರಿಯ K.A 62 ಸಂಖ್ಯೆಯ ಫೂಲ್ಸ್ ಕ್ಯಾಪ್‌ ಆಕಾರದ ಕಾಗದದ ಪುಸ್ತಕದಲ್ಲಿ ದೊರೆಯುವ ಪಾಠ. ಈ ಗ್ರಂಥವೂ ರಗಳೆಗಳ ಒಂದು ಸಂಕಲನ: ಇದಕ್ಕೆ ʼಅರವತ್ತು ಮೂರು ಪುರಾತನ ಶರಣರ ಚರಿತ್ರೆ ಶೈವಪುರಾಣʼ ಎಂದು ಮುಖ ಪಾತ್ರದಲ್ಲಿ ಹೆಸರು ಕೊಟ್ಟಿದ್ದಾರೆ.

ಚ-ಮದರಾಸಿನ ಗೌರ್ನಮೆಂಟ್‌ ಓರಿಯೆಂಟಲ್‌ ಮ್ಯಾನ್ಯುಸ್ಕ್ರಿಫ್ಟ್ಸ್‌ ಲೈಬ್ರರಿಯಲ್ಲಿ 18-5-20 ಎಂಬ ಸಂಖ್ಯೆ ಕೊಟ್ಟಿರುವ ಓಲೆಯಗರಿಯ ಪುಸ್ತಕದಲ್ಲಿ ದೊರೆಯುವ ಪಾಠ. ಈ ಪುಸ್ತಕದಲ್ಲಿ ಸೌಂದರಪುರಾಣವೂ ಏಳು ರಗಳೆಗಳೂ ಉಂಟು. ಇದರಲ್ಲಿ ಹಲವು ಓಲೆಗಳು ಒಡೆದಿವೆ, ಮುಕ್ಕಾಗಿವೆ: ಹುಳು ತಿನ್ನದ ಓಲೆಯೇ ಇಲ್ಲವೆನ್ನಬಹುದು ಎಂಬುದಾಗಿ ತಿಳಿಸಿದ್ದಾರೆ.

ಜ-ಮೈಸೂರಿನ ಓರಿಯೆಂಟಲ್‌ ಲೈಬ್ರರಿಯಲ್ಲಿ (ಆಗ) ಇದ್ದ ಶ್ರೀಮಾನ್‌ ಎಂ.ಡಿ.ಬಸಪ್ಪನವರು ವಿಶ್ವಾಸಪೂರ್ವಕವಾಗಿ ನನಗೆ ಕೊಟ್ಟ ಓಲೆಯ ಗರಿಯ ಪುಸ್ತಕದಲ್ಲಿ ದೊರೆಯುವ ಪಾಠ. ಇದರಲ್ಲಿ ನಂಬಿಯಣ್ಣನ ರಗಳೆ ಮಾತ್ರವಲ್ಲದೆ, ಶೂನ್ಯ ಸಂಪಾದನೆ, ಚೆನ್ನಬಸವೇಶ್ವರ ವಚನ ಮೊದಲಾದವೂ ಇವೆ. ನಂಬಿಯಣ್ಣನ ರಗಳೆಯ ಕೊನೆಯಲ್ಲಿ “ವಿಳಂಬಿ ಸಂವತ್ಸರದ ಆಷಾಡ ಬಹುಳ ಪಂಚಮೆಯಲ್ಲು ನಂಬಿಯಣ್ಣನ ರಗಳೆ ಸಮಾಮ್ತಂ ಸಂತೆಯ ಸೋವನ ಹಳಿಯ ಸಿದ್ಧಮಲ್ಲಿಕಾರ್ಜುನ ದೇವರು ಬರದ ನಂಬ್ಯಣನ ರಗಳೆಗೆ ಶರಣಾರ್ತ್ತಿ ಶರಣಾರ್ತ್ತಿ ಶರಣಾರ್ತ್ತಿ” ಎಂದಿದೆ, ಎಂಬುದಾಗಿ ಸೂಚಿಸಿದ್ದಾರೆ.

ಮೇಲಿನ ಮಾತೃಕೆಗಳಲ್ಲಿ “ಕ, ಚ, ಜ” ಈ ಮೂರರಲ್ಲೂ ಕಾರವು ಸಾಮಾನ್ಯವಾಗಿ ತಪ್ಪಿಲ್ಲದೆ ಪ್ರಯೋಗವಾಗಿದೆ. “ಖ” ದಲ್ಲಿ ಕಾರವುಂಟು. ಇದು ಕೆಲವು ವೇಳೆ ತಪ್ಪಾಗಿರುವುದೂ ಉಂಟು. “ಗ”ದಲ್ಲಿ ಕಾರವೂ ಬಳಸಿಲ್ಲ. ಎಂಬುದಾಗಿ ಮಾತೃಕೆಗಳಲ್ಲಿಯ ಶುದ್ಧತೆಯ ಬಗೆಗೆ ತಿಳಿಸಿದ್ದಾರೆ. ಇವುಗಳಲ್ಲಿ “ಕ, ಜ” ಗಳ ಪಾಠಸಂಪ್ರದಾಯವೂ “ಖ, ಗ, ಚ”ಗಳ ಪಾಠ ಸಂಪ್ರದಾಯವೂ ಕೆಲಮಟ್ಟಿಗೆ ಭಿನ್ನವಾಗಿದೆ. “ಕ, ಜ”ಗಳ ಸಂಪ್ರದಾಯವೇ ಮೂಲಕ್ಕೆ ಹೆಚ್ಚು ಹತ್ತಿರವೆಂದು ಪರಿಶೀಲನೆಯಿಂದ ವ್ಯಕ್ತವಾಗುತ್ತದೆ. “ಖ, ಗ, ಚ” ಗುಂಪಿನಲ್ಲಿ “ಖ, ಗ”ಗಳು ಒಂದಕ್ಕೊಂದು ಬಲುಮಟ್ಟಿಗೆ ಹೊಂದಿಕೊಳ್ಳುತ್ತವೆ; “ಚ” ವೇ ಬೇರೆ ನಿಲ್ಲುತ್ತದೆ. “ಖ, ಗ”ಗಳಲ್ಲಿ ಅನೇಕ ಪ್ರಕ್ಷಿಪ್ತ ಭಾಗಗಳುಂಟು; ತಿದ್ದುಪಾಡುಗಳೂ ಉಂಟು. “ಚ” ದಲ್ಲಂತೂ ಇವು ಮಿತಿಮೀರಿಹೋಗಿವೆ. ಎಂಬುದಾಗಿ ತಿಳಿಸಿದ್ದಾರೆ. ಈ ಐದು ಮಾತೃಕೆಗಳಲ್ಲಿ ಯಾವುದೂ ಒಂದು ಇನ್ನೊಂದರ ನಕಲಾಗಿಲ್ಲದಿರುವುದನ್ನು ತೀನಂಶ್ರೀ ಅವರು ಗುರುತಿಸಿದ್ದಾರೆ. 

 ಪಾಶ್ಚಾತ್ಯ ವಿದ್ವಾಂಸರು ಗ್ರಂಥಸಂಪಾದನೆಯಲ್ಲಿ ಬಳಸುತ್ತಿದ್ದ ಪಾಠಾಂತರ ಸ್ವರೂಪ ನಿರ್ದೇಶಕ ಚಿಹ್ನೆಗಳ ಪರಿಚಯವನ್ನು ಡಿ.ಎಲ್‌. ನರಸಿಂಹಾಚಾರ್ಯರು ತಮ್ಮ "ಗ್ರಂಥಸಂಪಾದನೆ'ಯಲ್ಲಿ  ಮಾಡಿಕೊಟ್ಟಿದ್ಹಾರೆ. ಕನ್ನಡದಲ್ಲಿ ರೈಸ್‌, ಕಿಟ್ಟೆಲ್‌, ಆರ್‌. ನರಸಿಂಹಾಚಾರ್‌, ಮುಂತಾದ.ಪೂರ್ವವಿದ್ವಾಂಸರೂ ಕೆಲವು ಚಿಹ್ನೆಗಳನ್ನು ಬಳಕೆಗೆ ತಂದಿದ್ದರು. ಅವರು ಅನುಸರಿಸುತ್ತಿದ್ದ ವಿಧಾನಕ್ಕೆ ಆ ಚಿಹ್ನೆಗಳು ಸಾಕಾಗಿದ್ದುವು. ಶಾಸ್ತ್ರೀಯಮಟ್ಟದಲ್ಲಿ ನಡೆವ ಗ್ರಂಥಸಂಪಾದನೆಗೆ ನಿರ್ದಿಷ್ಟವಾದ ಚಿಹ್ನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತವೆ. ಪಾಶ್ಚಾತ್ಯ ವಿದ್ವಾಂಸರು, ಡಾ|| ಸುಕ್ತಂಕರ್‌, ಎಸ್.ಎಂ.ಕತ್ರೆ ಇವರುಗಳು ಸೂಚಿಸಿದ್ದ ಚಿಹ್ನೆಗಳನ್ನು ಪರಿಶೀಲಿಸಿ, ಅವುಗಳ ಆಧಾರದ ಮೇಲೆ ಕನ್ನಡ ಗ್ರಂಥಸಂಪಾದನೆಗೆ ಹೊಂದಿಬರುವ ಚಿಹ್ನೆಗಳನ್ನು ಬಹುಶಃ ಮೊತ್ತಮೊದಲಿಗೆ ಸಂಯೋಜಿಸಿ, ನಂಬಿಯಣ್ಣನ ರಗಳೆಯಲ್ಲಿಯೂ ಗದಾಯುದ್ಧ ಸಂಗ್ರಹದಲ್ಲಿಯೂ ತೀ.ನಂ.ಶ್ರೀ. ಯವರು ಬಳಸಿದರು. ಗ್ರಂಥಸಂಪಾದಕನು ಪಾಠನಿರ್ಣಯ ಮಾಡುವುದಕ್ಕೆ ಸಂಬಂಧಪಟ್ಟಂತೆ ಬಹುಮುಖವಾದ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಬಸವರಾಜ ದೇವರ ರಗಳೆಯನ್ನು ಸಂಪಾದಿಸುವ ಕಾರ್ಯದಲ್ಲಿ ಸಹಕರಿಸಿದ್ದ ತೀ.ನಂ.ಶ್ರೀ ಯವರಿಗೆ ಹರಿಹರನ ಭಾಷೆ ಶೈಲಿಗಳ ಸ್ವರೂಪ ತಕ್ಕಮಟ್ಟಿಗೆ ಪರಿಚಯವಾಗಿತ್ತು. ನಂಬಿಯಣ್ಣನ ರಗಳೆಯನ್ನು ಹಸ್ತಪ್ರತಿಯಲ್ಲಿ ಓದಿ ಅದಕ್ಕೆ ಮಾರುಹೋದ ಅವರು ಅದನ್ನು ಸಂಪಾದನೆ ಮಾಡುವ ಸಂಕಲ್ಪವನ್ನು ಕೈಕೊಂಡು, ಬಹಳ ಸಮಯ ಕಾಯ ಬೇಕಾಯಿತು. ಇದಕ್ಕಾಗಿ ಅವರು ಪಟ್ಟ ಶ್ರಮದ ಒಂದು ಇಣುಕುನೋಟ ಅವರ ಟಿಪ್ಪಣಿ ಹಾಳೆಗಳಲ್ಲಿ ದೊರಕುತ್ತದೆ. ʻಹರಿಹರನ ಮತದ ನಿರ್ಣಯಕ್ಕೆ ಸಂಬಂಧಪಟ್ಟಂತೆ ಕೆಲವು ಗ್ರಂಥಗಳನ್ನು ಓದಿದ್ದಾರೆ; ಹರಿಹರನ ಕೆಲವು ಅಪೂರ್ವಪದ ಪ್ರಯೋಗಗಳಿಗೆ ಸಂವಾದಿ ಪ್ರಯೋಗಗಳ ಸಮರ್ಥನೆಗಾಗಿ ಅನ್ವೇಷಣೆ ನಡೆಸಿದ್ದಾರೆ; ಕವಿ ಕಾವ್ಯವಿಮರ್ಶೆಗೆ ಸಂಬಂಧಪಟ್ಟಂತೆ ಒಂದು ಸ್ಥೂಲವಾದ ಟಿಪ್ಪಣಿಯನ್ನು ಸಿದ್ಧಮಾಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಫಲ ನಂಬಿಯಣ್ಣನ ರಗಳೆಯ ಈಗಿನ ಪರಿಷ್ಕೃತ ರೂಪ.ʼ( ಎಂ.ವಿ. ಸೀತಾರಾಮಯ್ಯ: ತೀ.ನಂ.ಶ್ರೀಕಂಠಯ್ಯ ಸಿರಿಸಂಪದ,ಸಂ: ಎಫ್.ಟಿ.ಹಳ್ಳಿಕೇರಿ, ಪು.೨೪೫)

      ಗ್ರಂಥಸಂಪಾದನ ಕಾರ್ಯವು ಈಗ ಒಂದು ಖಚಿತವಾದ ಶಾಸ್ತ್ರವಾಗಿ ಪರಿಣಮಿಸಿದೆ. ಅದರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಲ್ಲಿ, ಮೂಲಪಾಠವನ್ನು ಬಲುಮಟ್ಟಿಗೆ ಶುದ್ಧವಾಗಿ ನಿರ್ಣಯಿಸುವುದು ಸಾಧ್ಯ. ʼನಂಬಿಯಣ್ಣನ ರಗಳೆʼಯಂತೂ ಈ ಶಾಸ್ತ್ರಪದ್ಧತಿಯ ಅನೇಕ ಸೂಕ್ಷ್ಮಾಂಶಗಳಿಗೆ ಒಳ್ಳೆಯ ನಿದರ್ಶನಗಳನ್ನು ಒದಗಿಸಿಕೊಡುತ್ತದೆ. ಈ ಕಾರ್ಯದಲ್ಲಿ ಅಜ್ಞಾನದಿಂದಲೂ ಅನವಧಾನದಿಂದಲೂ ಪ್ರಮಾದಗಳು ಉಂಟಾಗುವುದು ಸುಲಭವಾಗಿದ್ದು ನನ್ನ ಸಂಪಾದನೆಯಲ್ಲಿ ಇಂಥ ಕೆಲವು ಸಂಘಟಿಸಿವೆಯೆಂದು ಈಗ ನನಗೇ ಅರಿವಾಗಿದೆ. ಆದರೂ ತಿಳಿದಮಟ್ಟಿಗೆ ನೇರವಾದ ದಾರಿಯಲ್ಲಿ ನಡೆದು ಹರಿಹರನ ಮೂಲಪಾಠಕ್ಕೆ ಆದಷ್ಟು ಹತ್ತಿರ ಸೇರಲು ಇಲ್ಲಿ ಪ್ರಯತ್ನಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ವಿಷಯ, ಭಾಷೆ ಮೊದಲಾದವುಗಳ ದೃಷ್ಟಿಯಿಂದ ಗಮನಾರ್ಹವಾದ ಪಾಠಾಂತರಗಳನ್ನು ಆದಷ್ಟು ಸಮಗ್ರವಾಗಿ ಕೊಟ್ಟಿದ್ದಾರೆ. ಇದರಿಂದ ಪುಸ್ತಕಕ್ಕೆ ಹೊರೆಯಾದರೂ ಚಿಂತೆಯಿಲ್ಲ; ಗ್ರಂಥ ವ್ಯಾಸಂಗಮಾಡುವವರಿಗೆ ಪ್ರಯೋಜನ ಹೆಚ್ಚಾಗಲಿದೆ ಎಂದು ಅವರು ಹೇಳಿರುವುದರಲ್ಲಿ ಗ್ರಂಥಸಂಪಾದನೆಯ ವೈಜ್ಞಾನಿಕ ನಿಲುವು ಎಂತಹದ್ದೆಂಬುದನ್ನು ಗುರುತಿಸಬಹುದಾಗಿದೆ.

    ನಂಬಿಯಣ್ಣನ ರಗಳೆ ಕೃತಿಯನ್ನು ಸಂಪಾದಿಸುವಲ್ಲಿ ಉಪಯೋಗಿಸಿಕೊಂಡಿರುವ ಮಾತೃಕೆಗಳ ಹೆಚ್ಚಿನ ಪರಿಚಯ, ಪಾಠನಿರ್ಣಯದಲ್ಲಿ ಅನುಸರಿಸಿರುವ ನಿಯಮಗಳು, ಅಲ್ಲಿಯ ಸಮಸ್ಯೆಗಳು, ಕಾವ್ಯ ವಿಮರ್ಶೆ, ತಮಿಳು ತೆಲುಗು ಸಂಸ್ಕೃತ ಗ್ರಂಥಗಳಲ್ಲಿ ದೊರೆಯುವ ಸುಂದರಮೂರ್ತಿಯ ವೃತ್ತಾಂತಗಳಿಗೂ ಹರಿಹರನ ನಿರೂಪಣೆಗೂ ಇರುವ ಸಾಮ್ಯ ವೈಷಮ್ಯಗಳು, ಕನ್ನಡದಲ್ಲಿ ಸೌಂದರಪುರಾಣಗಳನ್ನು ರಚಿಸಿರುವ ಕವಿಗಳ ಮೇಲೆ ಹರಿಹರನ ಪ್ರಭಾವ ನಂಬಿಯಣ್ಣನ ರಗಳೆಯ ಮೂಲ, ಕವಿಯ ಕಾಲ, ದೇಶ, ಕೃತಿಯ ಸೊಗಸು, ಕಥೆಯ ವ್ಯಾಪ್ತಿ ಈ ಮೊದಲಾದ ವಿಷಯಗಳನ್ನೊಳಗೊಂಡ ಸವಿಸ್ತರವಾದ ಪೀಠಿಕೆಯನ್ನೂ ಟಿಪ್ಪಣಿ ಶಬ್ದ ಕೋಶಗಳನ್ನೂ ಮೂಲ ಪಾಠದೊಡನೆ ಒಂದೇ ಸಂಪುಟದಲ್ಲಿ ಕೊಡಬೇಕೆಂಬ ಉದ್ದೇಶ ಮೊದಲಿಗೆ ಅವರಿಗೆ ಇದ್ದಿತಂತೆ. ಮೂಲ ಪಾಠವುʼಪ್ರಬುದ್ಧ ಕರ್ಣಾಟಕʼದ 24ನೆಯ ಸಂಪುಟದಲ್ಲಿ ಪ್ರಕಟವಾಗಿದ್ದರೂ, ಅದನ್ನು ಪುಸ್ತಕರೂಪದಲ್ಲಿ ಹೊರಡಿಸದೆ ತಡೆದಿದ್ದು ಈ ಕಾರಣದಿಂದಲೇ, ಆದಷ್ಟು ಬೇಗ ಎರಡನೆಯ ಸಂಪುಟವನ್ನೂ ಹೊರಕ್ಕೆ ತರುವ ಉದ್ದೇಶವಿದೆ.' ಎಂದು ಹೇಳಿದ್ದರು. ಪೀಠಿಕೆಗಾಗಿ ಕಾಯುತ್ತ ಮೂಲ ಗ್ರಂಥವೇ ಮೂಲೆಯಲ್ಲಿ ಎಷ್ಟು ದಿನವಾದರೂ ಅಡಗಿರುವುದು ಉಚಿತವಲ್ಲವೆಂದು ಮನಗಂಡು, ಈಗ ಗ್ರಂಥದ ಮೊದಲನೆಯ ಸಂಪುಟವನ್ನು ಪ್ರಕಟಿಸಲಾಗಿದೆ ಎಂಬುದಾಗಿ ಅರಿಕೆಯಲ್ಲಿ ಅವರು ಹೇಳಿಕೊಂಡಿದ್ದಾರೆ. 'ನಂಬಿಯಣ್ಣನ ರಗಳೆ'ಗೆ ವಿಸ್ತಾರ ವಿಮರ್ಶೆ ಇದ್ದಿದ್ದರೆ ಹರಿಹರನ ಬಗೆಗಿನ ತೀನಂಶ್ರೀ ಯವರ ಒಳನೋಟ ನಮಗೆ ಪರಿಚಯವಾಗುತ್ತಿತ್ತು. ಆದಾಗ್ಯೂ ಟಿಪ್ಪಣಿಗಳಲ್ಲಿನ ವಿವರ, ಅವು ತಮಗೆ ತಾವೇ ವಿಮರ್ಶೆಯೂ ಗಿವೆ.  ಇವರ ಸಂಪಾದನೆಯಲ್ಲಿಯ ಆಯಾ ಪದ್ಯಗಳು ಪಡೆಯುವ ಅರ್ಥವ್ಯಾಪ್ತಿ, ಹಲವು ಆಯಾಮ ಗಳು ಇಣುಕುವ ಹೊಸನೋಟಗಳು ಓದುಗರನ್ನು ಬೆರಗುಗೊಳಿಸುತ್ತವೆ.  ಈ ಉದ್ದೇಶ ನೆರವೇರಿದ್ದರೆ, ಗ್ರಂಥಸಂಪಾದನಾಕಾರ್ಯಕ್ಕೆ ಸಂಬಂಧಪಟ್ಟಂತೆ ಈಗಿಗಿಂತ ಉತ್ತಮವಾದ ಮಾದರಿ ನಮ್ಮ ಮುಂದೆ ಇರುತ್ತಿದ್ದಿತು.  ಹಾಗೆ ಆಗದಿದ್ದುದು ಈ ಕ್ಷೇತ್ರಕ್ಕೆ ಒದಗಿದ ದೊಡ್ಡ ನಷ್ಟ. ಒಂದಲ್ಲ ಒಂದು ಕಾರಣದಿಂದ ಅವರ ಉದ್ದೇಶ ಕೈಗೊಡಲಿಲ್ಲ. ಪ್ರತ್ಯೇಕವಾಗಿ ಬರೆಯ ಬೇಕೆಂಬ ಆಸೆಯನ್ನು ತೀನಂಶ್ರೀಯವರು ಹೊತ್ತಿದ್ದರು. ಆದರೆ ಅದು ಈಡೇರದೇ ಹೋದುದು ಅತ್ಯಂತ ವ್ಯಸನದ ಸಂಗತಿ ಎಂದು ಎಂ.ಚಿದಾನಂದ ಮೂರ್ತಿಯವರು ತಮ್ಮ ಲೇಖನದಲ್ಲಿ ಈ ವಿಷಯದ ಬಗೆಗೆ ದಾಖಲಿಸಿದ್ದಾರೆ.

ತೀ.ನಂ.ಶ್ರೀ.' ಅವರು ಹರಿಹರನ “ನಂಬಿಯಣ್ಣನ. ರಗಳೆ”ಯನ್ನು ಸಂಪಾದನೆ ಮಾಡುವವರೆಗೂ ಪ್ರಕಟವಾಗಿರಲೇ ಇಲ್ಲ. ಅದರ ಸಂಪಾದನೆಗೆ ಅವರು ಒಟ್ಟು ಐದು ಹಸ್ತಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಮತ್ತು ಅವುಗಳ ಪರಸ್ಪರ ಸಂಬಂಧದ  ಪೀಳಿಗೆಯನ್ನು ರಚನೆಯನ್ನುಮಾಡಿದ್ದಾರೆ. “ಕ ಜ ಗಳ ಪಾಠ ಸಂಪ ಪ್ರದಾಯವೂ ಖ..ಗ, ಚ ಗಳ ಸಂಪ್ರದಾಯವೂ ಕೆಲಮಟ್ಟಿಗೆ ಭಿನ್ನವಾಗಿರುವುದನ್ನು ತೋರಿಸಿ ಕೊಟ್ಟಿದ್ದಾರೆ.  , ಜ ಗಳ ಸಂಪ್ರದಾಯದ ಹಸ್ತಪ್ರತಿಗಳು ಮೂಲಕ್ಕೆ  ಹೆಚ್ಚು ಹತ್ತಿರವಾಗಿರುವುದನ್ನು ಗಮನಿಸಿದ್ದಾರೆ. ಕೃತಿಯಲ್ಲಿ ಪ್ರಸ್ತಾಪಿಸಿರುವ ತೀನಂಶ್ರೀ ಅವರ ಮಾತುಗಳು-ಸಂಪಾದನೆಯ ಸಂದರ್ಭದಲ್ಲಿ `ಹಸ್ತಪ್ರತಿಗಳನ್ನು ಅವರು ಯಾವ ರೀತಿ ಎಚ್ಚರಿಕೆಯಿಂದ ಪರಿಶೀಲಿಸಿದ್ದಾರೆ ಎಂಬುದನ್ನು ಸೂಚಿಸುತ್ತವೆ.  ಈ ಹಸ್ತಪ್ರತಿಗಳಲ್ಲಿ ಪ್ರತಿಕಾರರು ಮರೆವು ಅಲಸ್ಯ, ಕಣ್‌ ತಪ್ಪು, ಕೈತಪ್ಪಿನಿಂದ ಮಾಡಿರುವ ಸ್ಖಾಲಿತ್ಯ ದೋಷಗಳನ್ನು  ಹೊರತು ಪಡಿಸಿ ಉಳಿದ ಪಾಠಗಳನ್ನು`` ಊಹಾತ್ಮಕವಾಗಿ ಗುರುತು ಹಾಕಿದ್ದಾರೆ. ಇವರ ಈ ಊಹಾತ್ಮಕ ಪಾಠಾಂತರಗಳು  ಮೂಲಪಾಠದ ಸನಿಹಕ್ಕೆ ಇರುವುದನ್ನು ನಾವು ಮನಗಾಣಬಹುದಾಗಿದೆ. ಪಾಠಾಂತರಗಳನ್ನು ಕೊಡುವಲ್ಲಿ ಮೊದಲ ಬಾರಿಗೆ ನಿರುಕಾಗಿ ಅಡಕವಾಗಿ ನಿರ್ದೇಶಿಸಲು ಬಗೆ ಬಗೆಯ ಚಿನ್ಹೆಗಳನ್ನೂ ಮೇಲ್ಪಂಕ್ತಿಗಳನ್ನು ಅಧಿಕವಾಗಿ ಬಳಸಿದ್ದಾರೆ.  ಮೇಲ್ನೋಟಕ್ಕೆ ಈ ಪದ್ದತಿಯಿಂದ ಗ್ರಂಥದ ತುಂಬಾ ಪಾಠದ ಜೊತೆಗೆ ಅಂಕಿ ಅಂಶಗಳು ಮತ್ತು ಚಿನ್ಹೆಗಳೇ ತುಂಬಿದ್ದರೂ ಕನ್ನಡ ಗ್ರಂಥ ಸಂಪಾದನೆಯಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ಪಾಠಾಂತರ ಚಿನ್ಹೆಗಳನ್ನು ಬಳಸುವ ಪದ್ಧತಿಗೆ ತೀನಂಶ್ರೀ ಯವರೇ ಮೊದಲಿಗರು ಎಂಬುದನ್ನು ಎಂ.ವಿ.ಸೀತಾರಾಮಯ್ಯನವರು ಹೇಳಿರುವುದು ಗಮನೀಯವಾಗಿದೆ.

   ಗ್ರಂಥ ಬರೆಯುವಾಗಲೋ ಲೇಖನ ರಚನಾವಸರದಲ್ಲೋ ತಾವು ವಿವರಿಸುತ್ತಿರುವ ಸಂದರ್ಭಕ್ಕೆ ಕೊಡುವ ಉದಾಹರಣ ಪದ್ಯದಲ್ಲಿ ಪಾಠದೋಷವಿದ್ದು ಕಂಡುಬಂದಲ್ಲಿ, ಅಗತ್ಯವಿರಲಿ  ಇಲ್ಲದಿರಲಿ, ಅದಕ್ಕೆ ತಮ್ಮ ತಿದ್ದು ಪಾಟನ್ನು ಸೂಚಿಸುವುದು ತೀ.ನಂ.ಶ್ರೀ.ಯವರ ಪದ್ಧತಿಯಾಗಿದ್ದಿತು. ಅವರ ಪಾಠಪರಿಷ್ಕರಣ ಪ್ರಜ್ಞೆ ಹೇಗೆ ಸದಾ ಜಾಗೃತವಾಗಿತ್ತು ಎಂಬುದಕ್ಕೆ ಇದು ಸಾಕ್ಷಿ. ಅಗತ್ಯವಾದ ಕಡೆ ಮಾತ್ರ ಅವರ ಪರಿಷ್ಕರಣದ ಬಗೆಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

    ಈ ಮೊದಲೆ ಸೂಚಿಸಿರುವಂತೆ ನಂಬಿಯಣ್ಣನ ರಗಳೆಯ ಸಂಪಾದನಾಕಾರ್ಯಾರಂಭ 1939ರಲ್ಲಿ. ಎಂದಮೇಲೆ, ಗದಾಯುದ್ಧದ ಸಂಗ್ರಹದ ಸಂಪಾದನಾ ಕಾರ್ಯಕ್ಕೆ ಹಿಡಿದ ಕಾಲದ ಇಮ್ಮಡಿಗೂ ಮಿಕ್ಕ ಕಾಲ, ನಂಬಿಯಣ್ಣನ ರಗಳೆಯ ಸಂಪಾದನಾ ಕಾರ್ಯ ತೆಗೆದುಕೊಂಡಿದೆ. ಇದು ಸ್ವಾಭಾವಿಕವಾಗಿಯೇ ಇದೆ. ನಂಬಿಯಣ್ಣನ ರಗಳೆ ಮೊದಲ ಸಾರಿಗೆ ಪ್ರಕಟವಾಗ ಬೇಕಾಗಿದ್ದುದರಿಂದ ಹಸ್ತಪ್ರತಿಗಳ ಸಂಗ್ರಹದಿಂದಲೇ ಕಾರ್ಯಾರಂಭ ಮಾಡಬೇಕಾಗಿತ್ತು. ಗದಾಯುದ್ಧಕ್ಕೆ ಪರಿಷ್ಕೃತ ಮುದ್ರಣಗಳ ನೆರವೂ ಇದ್ದು, ಹಿನ್ನೆಲೆಯಾಗಿ ಗ್ರಂಥ ಸಂಪಾದನಾಕಾರ್ಯದ ಪಕ್ವವಾದ  ಅನುಭವವೂ ಇದ್ದದ್ದರಿಂದ ಆದರ ಕಾರ್ಯಕ್ಕೆ ಅಷ್ಟು ದೀರ್ಘಾವಧಿಯ ಕಾಲಬೇಕಾಗಲಿಲ್ಲ.

  ಗ್ರಂಥವನ್ನು ವ್ಯಾಸಂಗಮಾಡುವವರಿಗೂ, ಅದನ್ನು ಮುಂದೆ ಮತ್ತೆ ಬೇರೆಯವರು ಸಂಸ್ಕರಣ ಮಾಡಬೇಕೆಂದು ಬಯಸಿದಾಗ ಅವರಿಗೂ ಹಿಂದಿನ ಸಂಪಾದಕನು ಉಪಯೋಗಿಸಿಕೊಂಡ ಮಾತೃಕೆಗಳ ಸ್ವರೂಪಕ್ಕೆ ಪಾಠಾಂತರಗಳು ಕನ್ನಡಿಯಾಗಿರಬೇಕು. ಮುಂಬರುವ ಸಂಪಾದಕರು ಅನುಮಾನ ಬಂದಾಗ "ಮಾತ್ರ ಹಸ್ತಪ್ರತಿಯನ್ನು ನೋಡುವ ಅಗತ್ಯವಿರಬೇಕೇ ಹೊರತು ಹೆಜ್ಜೆಹೆಜ್ಜೆಗೂ ಹಸ್ತಪ್ರತಿಯನ್ನು ಪರಿಶೀಲಿಸುತ್ತ ಹೋಗುವುದೆಂದರೆ, ವ್ಯರ್ಥ ಪ್ರಯಾಸವೆನಿಸುವುದು. ಮುದ್ರಿತ ಗ್ರಂಥಕ್ಕೇ ಮುಂದೆ ಒಂದು ಹಸ್ತಪ್ರತಿಯ (ಎಂದರೆ ಮಾತೃಕೆಯ) ಬೆಲೆ ಬರುವುದರಿಂದ, ಮುದ್ರಣ ದೋಷಗಳು ಇಲ್ಲದಂತೆ ಸಂಪಾದಕ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ತೀ.ನಂ.ಶ್ರೀ. ಯವರ ಪಾಠ ಪರಿಷ್ಕರಣ ಕಾರ್ಯ, ನಂಬಿಯಣ್ಣನ ರಗಳೆಯಲ್ಲಿಯೇ ಆಗಲಿ. ಗದಾಯುದ್ಧ ಸಂಗ್ರಹದಲ್ಲಿಯೇ ಆಗಲೀ, ಸಮರ್ಪಕವಾಗಿದ್ದು ಅತ್ಯಂತ ವೈಜ್ಞಾನಿಕತೆಯಿಂದ ಕೂಡಿದೆ ಎಂದು ಹೇಳಲು ಸ್ವಲ್ಪವೂ ಹಿಂಜರಿಯಬೇಕಾಗಿಲ್ಲ. ಸಂಪಾದಕನ ಪಾಠನಿರ್ಣಯವನ್ನು ಸಂದೇಹಿಸಿ ಭಿನ್ನಪಾಠವನ್ನು  ಸ್ವೀಕರಿಸಬಹುದೆನ್ನುವ ಸಂದರ್ಭದಲ್ಲಿ, ಪಾಠಾಂತರಗಳಿಂದ ಹೇಗೆ ಸಹಾಯವಾಗುತ್ತದೆ ಎಂಬುದಕ್ಕೆ ನಂಬಿಯಣ್ಣನ ರಗಳೆಯಲ್ಲಿ ಕೂಡ ಅವರು ನೀಡಿರುವ  ಊಹಾತ್ಮಕ ಪಾಠಗಳು ನಿದರ್ಶನವಾಗಿವೆ. ಪಾಠನಿರ್ಣಯ ಮಾಡುವುದಕ್ಕೆ ಸಂಬಂಧಪಟ್ಟಂತೆ ಬಹುಮುಖೀಯ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಬಸವರಾಜ ದೇವರ ರಗಳೆಯನ್ನು ಸಂಪಾದಿಸುವ ಕಾರ್ಯದಲ್ಲಿ ಸಹಕರಿಸಿದ್ದ ತೀ.ನಂ.ಶ್ರೀ. ಯವರಿಗೆ ಹರಿಹರನ ಭಾಷೆ ಶೈಲಿಗಳ ಸ್ವರೂಪ ತಕ್ಕಮಟ್ಟಿಗೆ ಪರಿಯವಾಗಿತ್ತು. ನಂಬಿಯಣ್ಣನ ರಗಳೆಯನ್ನು ಹಸ್ತಪ್ರತಿಯಲ್ಲಿ ಓದಿ ಅದಕ್ಕೆ ಮಾರುಹೋದ ಅವರು ಅದನ್ನು ಸಂಪಾದನೆ ಮಾಡುವ ಸಂಕಲ್ಪವನ್ನು ಕೈಕೊಂಡು, ಒಂದು ದೀರ್ಘ ತಪಶ್ಚರ್ಯೆಯನ್ನು ಮಾಡಬೇಕಾಯಿತು. ಇದಕ್ಕಾಗಿ ಅವರು ಪಟ್ಟಶ್ರಮದ ಒಂದು ಇಣುಕುನೋಟ ಆವರ ಟಿಪ್ಪಣಿ ಹಾಳೆಗಳಲ್ಲಿ ದೊರಕುತ್ತದೆ. ಕವಿಹೃದಯದ ಪರಿಚಯ ಪಡೆಯಲು ತಮಗೆ ದೊರೆತ ಎಲ್ಲ ಹರಿಹರನ ರಗಳೆಗಳನ್ನೂ ವ್ಯಾಸಂಗ ಮಾಡಿದ್ದಾರೆ; ಪೆರಿಯಪುರಾಣದ ಭಾಗಗಳನ್ನು ವ್ಯಾಸಂಗಮಾಡಿದ್ದಾರೆ; ಸುಂದರಮೂರ್ತಿಯ ಸಂಬಂಧವಾಗಿ ಸಂಸ್ಕೃತ, ತಮಿಳು, ತೆಲುಗುಭಾಷೆಗಳ ಗ್ರಂಥಗಳನ್ನು ಓದಿಕೊಂಡಿದ್ದಾರೆ; ಹರಿಹರನ : ಮತದ ನಿರ್ಣಯಕ್ಕೆ, ಸಂಬಂಧಪಟ್ಟಂತೆ ಕೆಲವು ಗ್ರಂಥಗಳನ್ನು 'ಓದಿದ್ದಾರೆ; ಹರಿಹರನ ಕೆಲವು ಅಪೂರ್ವಪದ: ಪ್ರಯೋಗಗಳಿಗೆ: ಸಂವಾದಿ ಪ್ರಯೋಗಗಳ ಸಮರ್ಥನೆಗಾಗಿ ಆನ್ವೇಷಣೆ ನಡೆಸಿದ್ದಾರೆ; ಕವಿಕಾವ್ಯ ವಿಮರ್ಶೆಗೆ ಸಂಬಂಧಪಟ್ಟಂತೆ ಒಂದುಟಿಪ್ಪಣಿಯನ್ನು ಸಿದ್ದಮಾಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಫಲ ನಂಬಿಯಣ್ಣನ ರಗಳೆಯ ಈಗಿನ ಪರಿಷ್ಕೃತರೂಪ, ಪಾಠನಿರ್ಣಯದಲ್ಲಿ ತೀ.ನಂ.ಶ್ರೀ. ಯವರ ಪ್ರತಿಭೆ ಯಾವ ರೀತಿ ಕಾರ್ಯಪ್ರವೃತ್ತವಾಗಿದ್ದಿತು ಎನ್ನುವುದನ್ನು ಅವರ ಟಿಪ್ಪಣಿ ಹಾಳೆಗಳಲ್ಲಿ ನಮೂದಾಗಿರುವ ಒಂದು ಅರ್ಥಪೂರ್ಣ ವಿವರಗಳೇ ನಿದರ್ಶನವಾಗಿವೆ.

    ನಂಬಿಯಣ್ಣನ ರಗಳೆ ಸಂಸ್ಕರಣಕ್ಕಾಗಿ ಉಪಯೋಗಿಸಿಕೊಂಡಿರುವ ಮಾತೃಕೆಗಳ ಹೆಚ್ಚಿನ ಪರಿಚಯ, ಪಾಠನಿರ್ಣಯದಲ್ಲಿ ಅನುಸರಿಸುವ ನಿಯಮಗಳು, ಅಲ್ಲಿನ ಸಮಸ್ಯೆಗಳು, ಕಾವ್ಯವಿಮರ್ಶೆ, ತಮಿಳು ತೆಲುಗು ಸಂಸ್ಕೃತ ಗ್ರಂಥಗಳಲ್ಲಿ ದೊರೆಯುವ ಸುಂದರಮೂರ್ತಿ ವೃತ್ತಾಂತಗಳಿಗೂ ಹರಿಹರನ ನಿರೂಪಣೆಗೂ ಇರುವ ಸಾಮ್ಯ ವೈಷಮ್ಯಗಳು, ಕನ್ನಡದಲ್ಲಿ ಸೌಂದರಪುರಾಣಗಳನ್ನು ರಚಿಸಿರುವ ಕವಿಗಳ ಮೇಲೆ ಹರಿಹರನ ಪ್ರಭಾವ- ಈ ಮೊದಲಾದ ವಿಷಯಗಳನ್ನೊಳಗೊಂಡ ಸವಿಸ್ತಾರವಾದ ಪೀಠಿಕೆಯನ್ನೂ  ಕೊಡಬೇಕೆಂಬ ಇವರ ಆಸೆ ನಂತರದ ವಿದ್ವಾಂಸರಾದ ಎಸ್.ವಿದ್ಯಾಶಂಕರರವರ ನಂಬಿಯಣ್ಣ ಒಂದು ಅಧ್ಯಯನ ಕೃತಿಯಲ್ಲಿ ಸ್ವಲ್ಪ ಮಟ್ಟಿಗೆ ಈಡೇರಿದೆ. 

    ತೀ.ನಂ.ಶ್ರೀ ಅವರ 'ಗದಾಯುದ್ಧ ಸಂಗ್ರಹಂ' ಸಂಪಾದಿತ ಕೃತಿಯು  ಒಂದು ಮೂಲಕೃತಿಯನ್ನು ಅತ್ಯಂತ ವೈಜ್ಞಾನಿಕವಾಗಿ ಸಂಪಾದಿಸಲು ಯಾವ ಮಾನದಂಡಗಳನ್ನು ಅನುಸರಿಸುತ್ತಿದ್ದರೋ ಅದೇ ಮಾನದಂಡಗಳನ್ನು ಅನುಸರಿಸಿ ಸಂಪಾದಿಸಿದ ಕೃತಿಯಾಗಿದೆ. ರನ್ನ ಕವಿಯ ಸಹಸ್ರಮಾನೋತ್ಸವದ  ಸಂದರ್ಭದಲ್ಲಿ ರನ್ನನ ಗದಾಯುದ್ಧ  ಸಂಗ್ರಹಂ ಕೃತಿಯನ್ನು  ಸಂಪಾದಿಸಿ, ತಮ್ಮ ಗುರುವರ್ಯ ಬಿ.ಎಂ.ಶ್ರೀ ಅವರಿಗೆ ʻ ಕವಿರನ್ನನು ಜನ್ಮವೆತ್ತಿ ಒಂದು ಸಾವಿರ ವರ್ಷಗಳು ಸಂದ ಸಮಯದಲ್ಲಿ ಕನ್ನಡದ ರಕ್ಷಾಮಣಿ ಆಚಾರ್ಯ ಬಿಎಂಶ್ರೀ ಕಂಠಯ್ಯನವರ ನೆನಪಿಗೆ ಶಿಷ್ಯನೊಬ್ಬನ ಭಕ್ತಿಯ ನಿವೇದನʼ ಎಂದು ಸಮರ್ಪಿಸಿದ್ದಾರೆ. ( ಮೈಸೂರಿನ ಕಾವ್ಯಾಲಯ ಪ್ರಕಾಶನ ೨೦೧೫ ೧೭ನೇ ಆವೃತ್ತಿ)   ತೀ.ನಂ.ಶ್ರೀಕಂಠಯ್ಯನವರು "ಗದಾಯುದ್ಧ ಸಂಗ್ರಹ ' ಎಂಬ ಶೀರ್ಷಿಕೆಯ ಅಡಿಯಲ್ಲಿ ರನ್ನನ ಗದಾಯುದ್ಧ ಕಾವ್ಯವನ್ನು ಹಸ್ತಪ್ರತಿಗಳು ಹಾಗೂ ಅಚ್ಚಾದ ಪ್ರತಿಗಳ ಪಾಠಗಳನ್ನು ಆಧಾರವಾಗಿಟ್ಟುಕೊಂಡು ಅರ್ಥಕ್ಕನುಸಾರವಾಗಿ ಸಾಧ್ಯವಾದೆಡೆಗಳಲ್ಲಿ  ಊಹಾತ್ಮಕ ಪಾಠಗಳನ್ನು ನೀಡಿರುವುದು ಅವರ ವ್ಯುತ್ಪತ್ತಿ ಜ್ಞಾನಕ್ಕೆ ನಿದರ್ಶನವಾಗಿದೆ. ಸಂಗ್ರಹ ಆವೃತ್ತಿಗಳಲ್ಲಿ ಪಾಠಾಂತರಗಳನ್ನು ಕೈಬಿಡುವುದು ಸಾಮಾನ್ಯ. ಆದರೆ ತೀನಂಶ್ರೀ ಅವರು ಪ್ರಾಚೀನ ಕನ್ನಡ ಗ್ರಂಥ ಸಂಪಾದನಾ ಸಂಪಾದಕರಂತೆ ಮಾಡದೆ ಪಾಠಾಂತರಗಳನ್ನು ಕೃತಿಯ  ಅಡಿಟಿಪ್ಪಣಿಯಲ್ಲಿ ನಮೂದಿಸಿದ್ದಾರೆ;  ಆದರೆ ಹಸ್ತಪ್ರತಿಗಳ ವಿವರವನ್ನೂ ನೀಡಿದ್ದರೆ ಚೆನ್ನಾಗಿರುತ್ತಿತ್ತು.   ಇವರ ಗದಾಯುದ್ಧದ ಪರಿಷ್ಕರಣ ಕಾರ್ಯ ಇಡೀ ಕಾವ್ಯಕ್ಕೆ ಬದಲಾಗಿ ಸಂಗ್ರಹಕ್ಕೆ ಸೀಮಿತವಾಗಿದೆ. ಮೊದಲ ಮುದ್ರಣ  ಕಾವ್ಯದ ಮೊದಲಲ್ಲಿಯೇ ಕಾವ್ಯವಿಮರ್ಶೆ ಇವೇ ಮೊದಲಾದವುಗಳನ್ನು  ಒಳಗೊಂಡ ವಿವರಗಳು  ಎರಡನೇ ಆವೃತ್ತಿಯಲ್ಲಿ ಕ್ಷಿಪ್ರದಲ್ಲಿಯೇ ಪ್ರಕಟವಾಗುತ್ತದೆ'' ಎಂದಿದ್ದರು. ೧೯೬೩ರ ಆವೃತ್ತಿಯಲ್ಲಿ ಶಬ್ದಗಳ ಅರ್ಥ ಮತ್ತು ಟಿಪ್ಪಣಿಗಳ ಅನುಬಂಧದೊಡನೆ ತಮ್ಮ ಆಸೆಯನ್ನು ಸ್ವಲ್ಪಮಟ್ಟಿಗೆ ನೆರವೇರಿಸಿಕೊಂಡಿದ್ದಾರೆ. ಇವರು ಅಂಗೀಕರಿಸಿರುವ ಹಾಗೂ ಊಹಿತ ಪಾಠಗಳು ಸಮರ್ಥನೀಯವಾಗಿವೆ. ಪ್ರತಿ ಪದ ಪದ್ಯಕ್ಕೂ ಮಾಡಿರುವ ಟೀಕೆ ಟಿಪ್ಪಣಿಗಳು ಮನನೀಯವಾಗಿವೆ.    

   ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳ ಅಗತ್ಯ ಹಾಗೂ ಬೇಡಿಕೆಯೂ ಕೃತಿಯನ್ನು ಜನಪ್ರಿಯಗೊಳಿಸಿದ ಕಾರಣ ಇಲ್ಲಿಯವರೆಗೂ ೧೭ ಮರು ಮುದ್ರಣಗಳನ್ನು ಕಂಡಿದೆ.  ರನ್ನ ಕವಿಯ ಗದಾಯುದ್ಧದ ಮೂಲದ ೫೭೫ ಪದ್ಯಗಳಲ್ಲಿ  ಕಥಾ ಸ್ವಾರಸ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ೩೩೬ ರಷ್ಟು-ಹೆಚ್ಚು ಕಡಿಮೆ ಅರ್ಧದಷ್ಟು ಸಂಗ್ರಹಿಸಿ ಕೊಟ್ಟಿರುವುದು ಅವರ ನೈಪುಣ್ಯತೆಗೆ ನಿದರ್ಶನವಾಗಿದೆ.  ಈ ಸಂಗ್ರಹ ಸಂಪಾದಿತ ಕೃತಿಯಲ್ಲಿ ರಸವತ್ತಾದ ಭಾಗ ಯಾವುದನ್ನೂ ಬಿಡದೆ, ಕಥೆಯ ಓಟಕ್ಕೆ ಭಂಗಬಾರದಂತೆ ಕೃತಿಯನ್ನು ನಡೆಸಿಕೊಂಡು ಹೋಗಿರುವುದರಿಂದ ಸಹೃದಯ ಓದುಗರಿಗೆ ಯಾವುದೇ ರೀತಿಯ ಸಂದೇಹ, ಅತೃಪ್ತಿ  ಉದ್ಭವಿಸಿರುವುದಿಲ್ಲ. ಟಿಪ್ಪಣಿಗಳ ಉಪಯುಕ್ತತೆ ಅಲ್ಲಿ ಕಾಣುವ ಸೂಕ್ಷ್ಮಗ್ರಹಿಕೆಗಳು ಮಹತ್ವವನ್ನು ಪಡೆದು ಕೊಂಡಿದೆ.  ಇದು ತೀನಂಶ್ರೀಯವರ ವಿದ್ವತ್‌ ಪರಿಶ್ರಮ ಎಂತಹದ್ದು ಎಂಬುದರ ಬಗೆಗೆ ಆ ಕ್ಷೇತ್ರದ ಆಸಕ್ತ ಜನರಿಗೆ ಗೊತ್ತಾಗುತ್ತದೆ.  ಪ್ರಸ್ತಾವನೆಯ ಆರಂಭದಲ್ಲಿ ಕೊಡಮಾಡಿರುವ ಕೆಲವು ಸಂಕೇತಗಳು ಎಂಬ ಪುಟಗಳಲ್ಲಿ ತೀ.ನಂ.ಶ್ರೀ ಈ ಕೃತಿಯ ಸಂಪಾದನೆಗೆ ಬಳಸಿಕೊಂಡಿರುವ ಆಕರ ಸಾಮಗ್ರಿಗಳು ಅಚ್ಚರಿ ಹುಟ್ಟಿಸುತ್ತವೆ.  ಅವರು ಬಳಸಿರುವ ಪ್ರತಿಗಳು  ಎಂ.ಎ.ರಾಮಾನುಜ ಅಯ್ಯಂಗಾರ್‌  ಮತ್ತು ಎಸ್.ಜಿ.ನರಸಿಂಹಾಚಾರ್‌ ಅವರಿಂದ ಸಂಪಾದನೆಗೊಂಡ ಗದಾಯುದ್ಧ ಕಾವ್ಯದ ಪ್ರಥಮ ಮುದ್ರಣದ ಮುದ್ರಿತ ಪ್ರತಿ,  ಮೈಸೂರಿನ ಓರಿಯೆಂಟಲ್‌  ರಿಸರ್ಚ್‌  ಇನ್‌ಸ್ಟಿಟ್ಯೂಟ್‌ ನಲ್ಲಿರುವ  ಗದಾಯುದ್ಧ ಕಾವ್ಯದ ಕೈ ಬರೆಹದ ಕಾಗದದ ಪ್ರತಿ ( ಸಂಖ್ಯೆ ಕೆಎ -೫೦)  ಚೆನ್ನೈನಲ್ಲಿರುವ  ಓರಿಯೆಂಟಲ್‌ ಮ್ಯಾನುಸ್ಕ್ರಿಪ್ಟ್‌  ಲೈಬ್ರರಿಯಲ್ಲಿರುವ ಗದಾಯುದ್ಧದ  ಅತಿ ತ್ರುಟಿತವಾದ ಓಲೆಗರಿಯ ಪ್ರತಿಯ ನಕಲು ಪ್ರತಿ ಎಲ್ಲವೂ ಪರಿಶೀಲನೆಗೆ ಒಳಗಾಗಿವೆ.  ಗದಾಯುದ್ಧ ಸಂಗ್ರಹ ಕೃತಿಯ  ಸಂಪಾದನೆಯಲ್ಲಿ ಶುದ್ಧಪ್ರತಿಯ ಸಂಪಾದನೆಯಲ್ಲಿ ತೀನಂಶ್ರೀ ಅವರ ವಿದ್ವತ್‌ ಮತ್ತು ವ್ಯತ್ಪತ್ತಿ ಜ್ಞಾನ ಎರಡೂ ಸ್ಫುಟವಾಗಿ ವ್ಯಕ್ತಗೊಂಡಿವೆ. ತೀನಂ.ಶ್ರೀ ಅವರು ಬಳಸಿರುವ ಸಂಕೇತಗಳಲ್ಲಿ  ʻಮೂಲ ಹೀಗಿರ ಬಹುದೆಂದು ಈ ಸಂಪಾದಕನು ಯಥಾಮತಿಯಾಗಿ ಊಹಿಸಿದ ಪಾಠವನ್ನು ಕೊಟ್ಟಿರುವುದು, ಕಾವ್ಯ ಸಂಗ್ರಹ ಮಾಡುವಾಗ ವಾಕ್ಯಗಳನ್ನು ಹೊಂದಿಸಿಕೊಳ್ಳಲು ಅವಶ್ಯಕವಾದ ಮಾರ್ಪಾಡುಗಳನ್ನು ಸೂಚಿಸಿರುವುದು  ಇತ್ಯಾದಿ ಗ್ರಂಥಸಂಪಾದನೆಯ ವೈಜ್ಞಾನಿಕ ವಿಧಾನದ ಪದ್ಧತಿಯನ್ನು ಕಾಣಬಹುದಾಗಿದೆ. ಜೊತೆಗೆ ಪ್ರಶ್ನಾರ್ಥಕ ಸಂಕೇತದಲ್ಲಿ ʻಮೂಲಪಾಠವನ್ನು ತಿದ್ದುವುದು ಸಾಹಸವೆಂದು ತೋರಿದಾಗ ಸಂಪಾದಕೀಯ ಸೂಚನೆಯನ್ನು ಅಡಿಟಿಪ್ಪಣಿಯಲ್ಲಿ ತೋರಿಸುವಲ್ಲಿ, ಅರ್ಥ ಮುಂತಾದವುಗಳಲ್ಲಿ ಸಂದೇಹವುಂಟೆಂದು ತೋರಿದಾಗ ಕೊಟ್ಟಿರುವ ಟಿಪ್ಪಣಿಗಳನ್ನು ಕಾಣಬಹುದಾಗಿದೆ.( ಗದಾಯುದ್ಧ ಸಂಗ್ರಹ, ಪು.XII) ಪಾಠಾಂತರಗಳನ್ನು ಅಡಿ ಟಿಪ್ಪಣಿಯಲ್ಲಿಯೇ ನೀಡಿರುವುದು.  ಈ ಕೃತಿಗೆ ಪೂರಕವಾಗಿ  ಇದೇ ಕಥಾವಸ್ತುವುಳ್ಳ ಅನ್ಯ ಕೃತಿಗಳಾದ ಪುಣೆಯ ಭಂಡಾರ್‌ಕರ್‌ ಸಂಸ್ಥೆಯ ಪರಿಷ್ಕರಣದ  ಸಂಸ್ಕೃತ ಮಹಾ ಭಾರತ, ಭಟ್ಟ ನಾರಾಯಣನ ವೇಣಿ ಸಂಹಾರ, ಪಂಪನ ವಿಕ್ರಮಾರ್ಜುನ ವಿಜಯ, ಅಜಿತ ತೀರ್ಥಂಕರ ಪುರಾಣ,  ನಾಗವರ್ಮನ ಕಾವ್ಯಾವಲೋಕನ, ಕೇಶಿರಾಜನ ಶಬ್ದಮಣಿದರ್ಪಣ, ಭಟ್ಟಾಕಳಂಕನ ಶಬ್ದಾನುಶಾಸನ ಇತ್ಯಾದಿ ಕೃತಿಗಳನ್ನು ವಿಷಯ ವಿಮರ್ಶೆಗೆ ಪರಿಶೀಲಿಸಿದ್ದಾರೆ. ಇವೆಲ್ಲವನ್ನೂ  ನಾವು ಮನಗಂಡರೆ ತೀನಂಶ್ರೀಯವರು ಯಾವ ರೀತಿ ಈ ಕೃತಿಯನ್ನು ಬಹುಮಟ್ಟಿಗೆ ಪಠ್ಯ ಕೇಂದ್ರಿತ ನೆಲೆಯಲ್ಲಿಯೇ ಸಂಪಾದಿಸಿದ್ದಾರೆಂಬುದು ಮನದಟ್ಟಾಗುತ್ತದೆ. ಇತ್ತೀಚೆಗೆ ೧೭ ನೇ ಮುದ್ರಣ ಪ್ರತಿಯನ್ನು ಅನುಲಕ್ಷಿಸಿ ಹೇಳುವುದಾದರೆ ಇವರ ಗದಾಯುದ್ಧ ಸಂಗ್ರಹದ  ಅವತರಣಿಕೆ ಅಧ್ಯಾಯದಿಂದ ಹಿಡಿದು ಕೊನೆಯ ಭೀಮಸೇನಾ ಪಟ್ಟಬಂಧಂ ವರೆಗಿನ  ಅಧ್ಯಾಯಗಳಲ್ಲಿ ಅವರು ಸಂಗ್ರಹಿಸಿರುವ ೩೩೬ ಪದ್ಯಗಳನ್ನೊಳಗೊಂಡ ಪುಟಗಳ ಸಂಖ್ಯೆ ಕೇವಲ ೭೩ ಮಾತ್ರ. ಆದರೆ ಆ ಪದ್ಯಗಳಿಗೆ ಟಿಪ್ಪಣಿ ರೂಪದಲ್ಲಿ ನೀಡಿರುವ ಅವರ ವಿದ್ವತ್‌ ವಿವರಣೆಗಳ ಪುಟಗಳು ೮೮. ಟಿಪ್ಪಣಿಗಳಲ್ಲಿ ಅವರು ವ್ಯಕ್ತಪಡಿಸಿರುವ ಸಂಗತಿಗಳು ಅವರ ವಿದ್ವತ್ ಹಿರಿಮೆಯ ಪ್ರತೀಕವಾಗಿವೆ. ನಿದರ್ಶನಕ್ಕೆ  ಭೀಷ್ಮ ವಚನದ ೧೨ ನೇ ಕಂದ ಪದ್ಯಕ್ಕೆ ಅವರು ಕೊಡ ಮಾಡಿರುವ ಟಿಪ್ಪಣಿ:

ಪುಟ್ಟಿದ ನೂರ್ವರುಮೆನ್ನೊಡ

ಪುಟ್ಟಿದ ನೂರ್ವರುಮಿದಿರ್ಚೆ ಸತ್ತೊಡೆ ಕೋಪಂ

ಪುಟ್ಟಿ ಪೊದಳ್ದುದು ಸತ್ತರ್‌

ಪುಟ್ಟರೆ ಪಾಂಡವರೊಳಿಱಿದು ಛಲಮನೆ ಮೆಱೆವೆಂ (೬-೧೨) ತೀನಂಶ್ರೀ ಅವರ ಟಿಪ್ಪಣಿ: ಪುಟ್ಟಿದ ನೂರ್ವರುಂ-(ನನಗೆ) ಜನಿಸಿದ ನೂರು ಮಂದಿಯೂ, ಇದಿರ್ಚಿ-(ಶತ್ರುಗಳನ್ನು) ಎದುರಿಸಿ, ಪೊದಳ್ದುದು-ಸಮೃದ್ಧಿ ಹೊಂದಿತು, ಸತ್ತರ್‌ ಪುಟ್ಟರೆ- ಸತ್ತವರು ಹುಟ್ಟುವುದಿಲ್ಲವೆ, ಮನುಷ್ಯನಿಗೆ ಇರುವುದು ಒಂದೇ ಜನ್ಮವೇ? ಜೀವದ ಮೇಲಿನ ಆಸೆಯಿಂದ ನಾನು ಹೇಡಿಯಾಗಲಾರೆ. ಸತ್ತರ್‌ ಪುಟ್ಟರೆ ಎಂಬುದಕ್ಕೆ ಸತ್ತವರು ಹುಟ್ಟುವುದೇ ಇಲ್ಲ,( ಪುಟ್ಟರ್‌ +ಅವಧಾರಣಾರ್ಥದ ಎಕಾರ), ಎಂದರೆ ತೀರಿ ಹೋದ ನನ್ನ ಮಕ್ಕಳೂ ತಮ್ಮಂದಿರೂ ಮತ್ತೆ ಹುಟ್ಟುವುದಿಲ್ಲ ಎಂಬ ಅರ್ಥವೂ ಇಲ್ಲಿ ಸಾಧ್ಯ. ಆ ಪಕ್ಷದಲ್ಲಿ,  ಅವರನ್ನು ಕಳೆದುಕೊಂಡ ಮೇಲೆ ನನಗೆ ಸಂಧಿ ಏಕೆ: ಯುದ್ಧವನ್ನೇ ಪಟ್ಟು ಹಿಡಿಯುತ್ತೇನೆ ಎಂದು ಆಶಯ. ಈ ತೆರನಾಗಿ  ಕೊಡ ಮಾಡಿರುವ ಇವರ ಟಿಪ್ಪಣಿಗಳಲ್ಲಿಯ ವಿವರಗಳು  ಗದಾಯುದ್ಧ ಕಾವ್ಯವನ್ನು  ಪಠ್ಯ ಕೇಂದ್ರಿತ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ದೀಪಿಕೆಯ ರೂಪದಲ್ಲಿ ಇವೆ ಎಂದರೆ ತಪ್ಪಾಗಲಾರದು. ಗದಾಯುದ್ಧದಂತಹ ಸಂಪಾದಿತ ಸಂಗ್ರಹ ಆವೃತ್ತಿಯಲ್ಲಿಯೇ ತೀನಂಶ್ರೀ ಅವರು ನೀಡಿರುವ ಟಿಪ್ಪಣಿಗಳು ವಿವರವಾಗಿ  ಪರಿಪೂರ್ಣತೆಯನ್ನು ಹೊಂದಿರುವುದನ್ನು ನೋಡಿದರೆ,   ಒಂದು ವೇಳೆ  ಈ ಕೃತಿಯ ಆರಂಭದಲ್ಲಿ ವಿಸ್ತೃತವಾದ ಪ್ರಸ್ತಾವನೆಯನ್ನು ಬರೆದಿದ್ದರೆ ಎಷ್ಟರಮಟ್ಟಿಗಿದ್ದಿರುತ್ತಿತ್ತು ಎಂದೆನಿಸದೇ ಇರದು. ಮುದ್ರಿತ ಗ್ರಂಥದ ಪ್ರತಿಯಲ್ಲಿ ಹಸ್ತಪ್ರತಿಗಳ ಪರಸ್ಪರ ಸಂಬಂಧವನ್ನು ಸೂಚಿಸುವ ಪೀಳಿಗೆಯನ್ನು ಕೊಟ್ಟಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಮಾತೃಕೆಗಳು ದೊರೆತಾಗ ಈ ಪೀಳಿಗೆಯ ರಚನೆಯಿಂದ ಪಾಠನಿರ್ಣಯಕ್ಕೆ ವಿಶೇಷ ಸಹಾಯವುಂಟು. ಪ್ರಕೃತ ಸಂಪಾದಕರ ಪಾಠನಿರ್ಣಯದಲ್ಲಿ ಸಂಘಟಿಸಿರಬಹುದಾದ ಸರಿ ತಪ್ಪುಗಳನ್ನು ಮುಂದೆ ಬರುವ ಸಂಪಾದಕರುಗಳು ಕಂಡುಹಿಡಿಯುವುದಕ್ಕೂ ಇದರಿಂದ ಸಹಾಯವಾಗುತ್ತದೆ.   ಪಾಠಾಂತರಗಳನ್ನು ಸಂಕಲನ ಮಾಡುವಾಗ ಒಂದನ್ನೂ ಬಿಡದ ಹಾಗೆ ಎಲ್ಲವನ್ನು ಗುರುತು ಹಾಕಿಕೊಳ್ಳಬೇಕಾದ ಅಗತ್ಯವಿಲ್ಲವೆಂಬುದು ತೀ.ನಂ.ಶ್ರೀ.ಯವರ ಟಿಪ್ಪಣಿಗಳಿಂದ ಗೊತ್ತಾಗುತ್ತದೆ. ಇದು ಎಲ್ಲ ಸಂಪಾದಕರ ಅನುಭವದ ವಿಷಯವೂ ಆಗಿದೆ. ಒಂದು ಗ್ರಂಥವನ್ನು ಮೊತ್ತಮೊದಲಿಗೆ ಸಂಪಾದನೆ ಮಾಡುವ ಸಂಪಾದಕನು ತನ್ನ ಮೂಲಪಾಠನಿರ್ಣಯಕ್ಕೆ ಬಾಧಕವಾಗದಂತಹ  ಲಿಪಿಕಾರರ ಸ್ಖಾಲಿತ್ಯಗಳನ್ನು ಕೈಬಿಡಬಹುದಾದರೂ, ಉಳಿದೆಲ್ಲ ಪಾಠಭೇದಗಳನ್ನೂ ಉಚಿತ ಪಾಠಸ್ವರೂಪ ಸೂಚಕ ಚಿಹ್ನೆಗಳೊಂದಿಗೆ ಅಡಿಟಿಪ್ಪಣಿಗಳಲ್ಲಿ ಸಮಗ್ರವಾಗಿ ಕಾಣಿಸಬೇಕಾದದ್ದು ಶಾಸ್ತ್ರೀಯವಾದ ಗ್ರಂಥಸಂಪಾದನೆಯ ಅಗತ್ಯಗಳಲ್ಲಿ ಒಂದು. ಮುದ್ರಿತಗ್ರಂಥಕ್ಕೆ ಮುಂದೆ ಒಂದು ಹಸ್ತಪ್ರತಿಯ (ಎಂದರೆ ಮಾತೃಕೆಯ) ಬೆಲೆ ಬರುವುದರಿಂದ, ಮುದ್ರಣದೋಷಗಳು ಇಲ್ಲದಂತೆ ಸಂಪಾದಕ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದನ್ನು ತೀನಂ.ಶ್ರೀ ಅವರು ಗದಾಯುದ್ಧ ಸಂಗ್ರಹದ ಸಂಪಾದನೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಮತ್ತು ವೈಜ್ಞಾನಿಕವಾಗಿ  ನಿರ್ವಹಿಸಿದ್ದಾರೆ.

  ಜನಪದ ಗೀತೆಗಳು ಅನಕ್ಷರಸ್ಥ ಅನಾಮಧೇಯ ಜನಪದಕವಿಗಳ ಅಮೃತಕಾವ್ಯಗಳು. ತೀ.ನಂ.ಶ್ರೀ. ಯವರು ಮೈಸೂರಿನ ಸಾಕ್ಷರ ಪ್ರಚಾರ ಸಮಿತಿಯ "ವಯಸ್ಕರ ಶಿಕ್ಷಣದ ಪುಸ್ತಕ್ತಮಾಲೆ'ಗೆ ʻಹೆಣ್ಣು ಮಕ್ಕಳ ಪದಗಳು' ಎಂಬ ಚಿಕ್ಕ ಪುಸ್ತಕವನ್ನು, ಸಿದ್ಧಪಡಿಸಿಕೊಡಿ ಎಂದು ಕೇಳಿದ್ದದ್ದರ ಹಿನ್ನೆಲೆಯಲ್ಲಿ ಅವರು ಆಗತಾನೆ ಅಕ್ಷರ ಕಲಿತ ವಯಸ್ಕರ ಓದಿಗೆ ಸಂಪಾದಿಸಿ  ಸಿದ್ಧಪಡಿಸಿದ ಹೆಣ್ಣುಮಕ್ಕಳ ಪದಗಳು ಕೃತಿಯ ಹಾಡುಗಳೆಲ್ಲವೂ ತ್ರಿಪದಿಗಳಾಗಿವೆ. ಈ ಕೃತಿಯ ಸಂಪಾದನೆಯಲ್ಲಿ, ತಮ್ಮ ಕಾಲಕ್ಕಾಗಲೇ ಆಗುತ್ತಿರುವ ಸಾಮಾಜಿಕ ಬದಲಾವಣೆ ಹಾಗೂ  ಅದರ ಪರಿಣಾಮದಿಂದ  ಜನಪದ ಸಾಹಿತ್ಯ ಜನತೆಯಿಂದ ದೂರವಾಗುತ್ತಿರುವುದರ ಬಗೆಗೆ ವಿಷಾದವನ್ನು ವ್ಯಕ್ತಪಡಿಸುವುದರ ಬಗೆಗೆ ಮತ್ತು ಅವುಗಳನ್ನು ಬಳಸಿ ಬೆಳೆಸಿ ಉಳಿಸಿ ಕೊಳ್ಳಬೇಕಾದ ಜಾಗೃತಿಯ ಬಗೆಗೆ ಹೇಳಿರುವುದನ್ನು ಮನಗಂಡರೆ, ಜನಪದ ಸಾಹಿತ್ಯದ ಬಗೆಗೆ ಅವರಿಗಿದ್ದ ದೃಷ್ಟಿಕೋನ  ಎದ್ದು ಕಾಣುತ್ತದೆ. ಇವರ ಈ ಸಂಪಾದಿತ ಕೃತಿಯು ಈಗಾಗಲೇ ಹಲಸಂಗಿ ಗೆಳೆಯರಿಂದ ಸಂಪಾದನೆಗೊಂಡಿದ್ದ ಗರತಿಯ ಹಾಡು ಮತ್ತು ಹಳ್ಳಿಯ ಹಾಡುಗಳು ಸಂಗ್ರಹಗಳನ್ನು ಅವಲಂಬಿಸಿದ್ದರೂ ಅದುವರೆವಿಗೂ  ಮುದ್ರಿತಗೊಂಡಿರದ ಕೆಲವು ನೂತನ ತ್ರಿಪದಿ ಪದಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಪುಸ್ತಕದ "ಮೊದಲಮಾತಿ'ನಲ್ಲಿ, ಹಳ್ಳಿಯ ಹಾಡುಗಳ ಸ್ವರೂಪ, ವೈವಿಧ್ಯ ಅವುಗಳ ಪ್ರಚಾರಕ್ಕೆ ಇರುವ ಅಗತ್ಯ, ಅವುಗಳ ಕಾವ್ಯ ಗುಣ ಈ ಅಂಶಗಳ ಕುರಿತು ಸಾಮಾನ್ಯ ಜನಕ್ಕೆ ಅರ್ಥವಾಗುವಂತೆ ಸರಳವಾದ ಭಾಷೆಯಲ್ಲಿ ಪರಿಚಯ ಮಾಡಿಕೊಟ್ಟಿದ್ದಾರೆ. ಕೊನೆಯಲ್ಲಿ, ಯಾವ ಗ್ರಂಥಗಳಿಂದ ಪದ್ಯಗಳನ್ನು ಆರಿಸಿಕೊಂಡಿದೆ ಎಂಬುದನ್ನು ಸೂಚಿಸಿದ್ದಾರೆ. ಈ ಕೃತಿಯಲ್ಲಿಯ ಈ ಸಂಕಲಿತ ಕೃತಿಯಲ್ಲಿ ಒಟ್ಟು ೮೮ ತ್ರಿಪದಿಗಳಿದ್ದು ಸ್ತೋತ್ರ, ತೊಟ್ಟಿಲಮಗು, ಅಳುವ ಮಗು, ಮಗುವಿನ ಸೊಗಸು, ಮಮತೆ, ಹೆಣ್ಣು ಮಕ್ಕಳು,, ಬಂಜೆ, ತೌರು ಬಿಟ್ಟು ಪಯಣ, ಹೆತ್ತ ಕರುಳು, ತೌರಿನ ಹಂಬಲ, ತಮ್ಮ, ತಮ್ಮನ ಹೋರಿ, ತಾಯಿ ಇಲ್ಲದ ಊರು, ತಂಗಿಯ ದೂರು, ಬಿನ್ನಾಣಗಿತ್ತಿ, ಅತ್ತೆ-ಸೊಸೆ, ಗಂಡ-ಹೆಂಡತಿ, ಹೊಂದಿಕೆಯಿಲ್ಲದ ಮದುವೆ, ಸಂಗಾತಿ, ಹೆಣ್ಣು-ಗಂಡು,ಬಗೆ ಬಗೆಯ ವಿಷಯ, ಬೀಸುವ ಕಲ್ಲು , ಹಾರೈಕೆ ಎಂಬ ೨೩ ಶೀರ್ಷಿಕೆಗಳಲ್ಲಿ ಆಶಯಕ್ಕನುಗುಣವಾಗಿ ವರ್ಗೀಕರಿಸಿ ಕೊಟ್ಟಿದ್ದಾರೆ. ಈ ಕೃತಿಯ ಮೂಲಕ ತಾವೊಬ್ಬರು ಜಾನಪದ ವಿದ್ವಾಂಸರು ಎಂಬುದನ್ನು ತೀನಂಶ್ರೀ ಅವರು ತೋರಿಸಿ ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ ಹಲವಾರು ಸುಮಧುರ ಶಬ್ದ ಚಿತ್ರಗಳನ್ನು ಕಟ್ಟಿಕೊಡುವ ಸುಂದರ ತ್ರಿಪದಿಗಳು ಈ ಸಂಕಲನದಲ್ಲಿವೆ. ಸಾಮಾನ್ಯ ಜನಕ್ಕೆ ತ್ರಿಪದಿ ರೂಪದ ಛಂದಸ್ಸನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲದಿದ್ದರೂ ಅದನ್ನು ಓದುವ ಬಗೆ ಹೇಗೆ ಎಂಬುದನ್ನು ತೋರಿಸಿ ಕೊಡುವುದರ ಮೂಲಕ ತ್ರಿಪದಿ ಛಂದಸ್ಸಿನ ಸ್ವರೂಪವನ್ನು ಅದರ ಧಾಟಿಯನ್ನು ಪರಿಚಯ ಮಾಡಿ ಕೊಟ್ಟಿದ್ದಾರೆ. ಇಲ್ಲಿಯ  ಹಾಡುಗಳ ಪಾಠವು ಕವಿ ಲಿಖಿತ ಪಾಠವಾಗಿಲ್ಲದಿರುವುದರಿಂದ ದೊರೆತ ಪಾಠವನ್ನು ತಿದ್ದುಪಡಿ ಮಾಡದೆ ಯಥಾವತ್ತಾಗಿ ಉಳಿಸಿಕೊಳ್ಳುವ ನಿಲುವನ್ನು ಅವರು ತಾಳಿದ್ದಾರೆ.

   ತೀ.ನಂ.ಶ್ರೀ. ಯವರು ಎಂ.ಎ. ತರಗತಿಗಳಿಗೆ ಪಾಠ ಮಾಡುತ್ತಿದ್ದಾಗ ಮುದ್ರಿತ ಗ್ರಂಥಗಳಲ್ಲಿ ಪರಿಷ್ಕೃತವಾಗದೆ ಉಳಿದಿದ್ದ ಪಾಠದೋಷಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ತಂದು ಅವುಗಳನ್ನು ತಿದ್ದುಪಡಿಮಾಡಿ, ಬೋಧಿಸುತ್ತಿದ್ದರು. ಇದರ ಬಗೆಗೆ ಎಂ.ವಿ.ಸೀ.ಯವರು ಲೇಖನವೊಂದರಲ್ಲಿ ದಾಖಲು ಮಾಡಿದ್ದಾರೆ.

  ಎಂ.ವಿ.ಸೀತಾರಾಮಯ್ಯನವರು ತೀ.ನಂ.ಶ್ರೀ ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ತರಗತಿಯಲ್ಲಿ ಅವರು  ಜನ್ನನ "ಅನಂತನಾಥಪುರಾಣ' ಮತ್ತು ಸಾಳ್ವನ "ರಸರತ್ನಾಕರ' ಕೃತಿಗಳ ಪಾಠ ಮಾಡುವ ಸಂದರ್ಭದಲ್ಲಿ ಮುದ್ರಿತ ಕೃತಿಗಳಲ್ಲಿಯ ಸ್ಖಾಲಿತ್ಯಗಳು ಮತ್ತು ಪಾಠಾಂತರಗಳ ಬಗೆಗೆ ಪ್ರಸ್ತಾಪಿಸಿದ್ದನ್ನು ಗುರುತು ಹಾಕಿ ಕೊಂಡು ಅವುಗಳನ್ನು ಲೇಖನವೊಂದರಲ್ಲಿ ಚರ್ಚಿಸಿದ್ದಾರೆ. ಇದರಲ್ಲಿ ತೀ.ನಂಶ್ರೀ ಅವರ ಗ್ರಂಥಸಂಪಾದನೆಯ ಬಗೆಗಿನ ವೈಜ್ಞಾನಿಕ ನಿಲುವುಗಳನ್ನು ಕಾಣಬಹುದಾಗಿದೆ

ʻಅನಂತನಾಥಪುರಾಣ 1930ರಲ್ಲಿ ಪ್ರಕಟವಾಯಿತು. ಪ್ರಕಟವಾದ ಕೂಡಲೆ ನಾನು ಕೊಡಬೇಕಾಗಿದ್ದ 1933ರ ಎಂ. ಎ. ಪರೀಕ್ಷೆಗೆ ಪಠ್ಯ ಗ್ರಂಥಗಳಲ್ಲಿ ಒಂದಾಗಿ ನಿಯಮಿತವಾಯಿತು. ಅದರಲ್ಲಿ ಅಧ್ಯಯನ ಮಾಡಬೇಕಾಗಿದ್ದುದು 11-14 ಆಶ್ವಾಸಗಳಲ್ಲಿ ನಿರೂಪಿತವಾದ ಚಂಡಶಾಸನನ ಕಥಾಭಾಗ. ತೀ:ನಂ.ಶ್ರೀ. ಯವರು 11ನೆಯ ಆಶ್ವಾಸದ ವರೆಗಿನ ಪುರಾಣ ವಿಷಯವನ್ನು ಸಂಕ್ಷೇಪವಾಗಿ ತಿಳಿಸಿ, ಅಲ್ಲಲ್ಲಿ ಸ್ವಾರಸ್ಯವಾದ ಕೆಲಕೆಲವು ಪದ್ಯಗಳನ್ನು ಓದಿ ಹೇಳಿ, ಠ್ಯ ಭಾಗವನ್ನು ವಿವರಪೂರ್ಣವಾಗಿ ಪಾಠಮಾಡತೊಡಗಿದರು. ಅವರು ಎಷ್ಟು ಶ್ರದ್ಧೆಯಿಂದ ಗ್ರಂಥವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ತರಗತಿಯಲ್ಲಿದ್ದ ನಾವು ಮೂವರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು ಎನ್ನುವುದಕ್ಕೆ, ಪಾಠದೋಷಗಳನ್ನುತಿದ್ದುತ್ತಾ ಪದ್ಯಗಳ ಅರ್ಥವಿವರಣೆ ಮಾಡುತ್ತಿದ್ದುದು `ಸ್ಪಷ್ಟ ನಿದರ್ಶನ. “ಈ ಗ್ರಂಥದಲ್ಲಿ ಅಚ್ಚಿನ ತಪ್ಪುಗಳೂ ಪಾಠದೋಷಗಳೂ ಹೇರಳವಾಗಿವೆ. ಪಾಠಕ್ಷೇಶ ಇದ್ದಂತೆ ಮುದ್ರಿಸಿರುತ್ತೇವೆ? ಎಂದು ವಿಜ್ಞಾಪಿಸಿಕೊಂಡಿದ್ದಾರೆ. ಮಾತೃಕೆಯಲ್ಲಿರುವಂತೆ ಮುದ್ರಿಸುವುದಷ್ಟೇ ಗ್ರಂಥಸಂಪಾದಕನ ಕೆಲಸವಾದರೆ, ಆ ಕೆಲಸವನ್ನು ಮುದ್ರಣಾಲಯದವರೇ ನಿರ್ವಹಿಸಬಹುದಲ್ಲವೇ? ನಾಲ್ಕು ಹಸ್ತ ಪ್ರತಿಗಳು ಕಣ್ಣಮುಂದಿದ್ದು, ಪಾಠಭೇದಗಳಿರುವಾಗ, ಯಾವುದೊಂದೂ ಕವಿಯ ಸ್ವಹಸ್ತಾಕ್ಷರ ಪ್ರತಿಯಲ್ಲದಿರುವಾಗ, ಕವಿಪಾಠಕ್ಕೆ ಸಮೀಪವಾದ ಮೂಲ ಮಾತೃಕೆಯನ್ನು ಪಾಠಾಂತರಗಳ ಸಹಾಯದಿಂದ ಪುನರ್ನಿರ್ಮಾಣ ಮಾಡಬಹುದು; ಪಾಠಾಂತರಗಳೇ ಇಲ್ಲದೆ, ಪಾಠದೋವಿದೆಯೆಂದು ಮನವರಿಕೆಯಾದಾಗ ಆ ದೋಷ ಲಿಪಿಕಾರರ ಕೈತಪ್ಪುಗಳಿಂದ ವ್ಯಾಕರಣ, ಛಂದಸ್ಸು, ಮುಂತಾದ ಶಾಸ್ತ್ರಗಳ ಜ್ಞಾನದ ಸಹಾಯದಿಂದ ಸರಿಯಾಗಿರಬಹುದಾದ ಪಾಠವನ್ನು ಊಹೆಯಿಂದ ಕಂಡುಹಿಡಿಯುವುದು ಗ್ರಂಥಸಂಪಾದಕನ ಧರ್ಮವೇ ಎಂಬುದನ್ನು ಆಧುನಿಕ ಗ್ರಂಥ ಸಂಪಾದನಾಶಾಸ್ತ್ರವು ಒಪ್ಪುತ್ತದೆ. 1931ರ ವೇಳೆಗೆ, ಇಂಗ್ಲಿಷಿನಲ್ಲಿಯೇ ಆಗಲಿ ಭಾರತೀಯ ಭಾಷೆಗಳಲ್ಲಿಯೇ ಆಗಲಿ ಭಾರತೀಯ ಭಾಷಾಸಾಹಿತ್ಯಗಳಿಗೆ ಅನ್ವಯಿಸುವಂತೆ ಪಾಠವಿಮರ್ಶಾಶಾಸ್ತ್ರವು ರೂಪಗೊಂಡು ಪ್ರಕಟವಾಗಿರಲಿಲ್ಲ ಎಂಬುದಾಗಿ ದಾಖಲಿಸುವುದರ ಮೂಲಕ  ಅನಂತನಾಥಪುರಾಣದ ಸಂಪಾದಕರು ಮಾಡಲಾಗದೆ ಬಿಟ್ಟಿದ್ದ ಗ್ರಂಥ ಸಂಪಾದನಾ ಕೆಲಸವನ್ನು ಪಾಠ ಮಾಡುವ ಸಂದರ್ಭದಲ್ಲಿ  ತೀ. ನಂ. ಶ್ರೀ. ಯವರು ನಿರ್ವಹಿಸಿರುವುದನ್ನು ಎಂ.ವಿ.ಸೀತಾರಾಮಯ್ಯನವರು ಲೇಖನವೊಂದರಲ್ಲಿ  ಮೇಲ್ಕಂಡ ರೀತಿಯಲ್ಲಿ ವಿವರಿಸಿದ್ದಾರೆ.( ಸಿರಿಸಂಪದ ಪು.೨೨೧)

  ಅದೇ ರೀತಿ ಕವಿ ಸಾಳ್ವನ "ರಸರತ್ನಾಕರ'ವನ್ನೂ ಎಂ.ಎ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಂದರ್ಭದಲ್ಲಿ ತಮ್ಮ ಅರಿವಿಗೆ ನಿಲುಕಿದ ಕಡೆಗಳಲ್ಲಿ ಎಲ್ಲಾ ಅದು ಮುದ್ರಣದೋಷವಾಗಿರಲಿ, ಪಾಠ' ದೋಷವಾಗಿರಲಿ - ತಿದ್ದುಪಾಟು ಸೂಚಿಸದೆ ಅವರು ಮುಂದಕ್ಕೆ ಹೋಗುತ್ತಲೇ ಇರಲಿಲ್ಲ. ಉನ್ನತ ಮಟ್ಟದ ತರಗತಿಗೆ ಪಾಠಹೇಳಬೇಕಾದ ಅಧ್ಯಾಪಕ ಕರ್ತವ್ಯನಿಷ್ಠೆಯಿಂದ ಎಷ್ಟು ವಿಧಗಳಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗೆಗೆ ಮತ್ತು ಪಾಠಪರಿಷ್ಕರಣದ ಸಂದರ್ಭಗಳು ಇಂದಿನ ತರುಅಧ್ಯಾಪಕರ ಪೀಳಿಗೆಗೆ ಮಾರ್ಗದರ್ಶಕವಾಗಬಲ್ಲುವು ಎಂಬ ಅವರ ಮಾತುಗಳಲ್ಲಿ ಪಾಠ ಬೋಧನೆಯ ಸಂದರ್ಭದಲ್ಲಿಯೂ ಅವರ ಗ್ರಂಥಸಂಪಾದನೆಯ ವಿದ್ವತ್‌ ಹಿರಿಮೆ ಎದ್ದು ಕಾಣುತ್ತದೆ. ( ಸಿರಿಸಂಪದ ಪು.೨೨೬)                      

     ಶಾಸನ ಪದ್ಯದ ಪಾಠನಿರ್ಣಯದ ಜೊತೆಗೆ, ಪ್ರಾಸಂಗಿಕವಾಗಿಯೇ ಆದರೂ, ನಾಗವರ್ಮನು ಷಟ್ಟದಿಗೆ ಕೊಟ್ಟಿರುವ ಲಕ್ಷ ಲಕ್ಷಣ ಪದ್ಯದ ಅಂಶಗಣ ಘಟಿತ ಸ್ವರೂಪವನ್ನು ನಿಷ್ಕರ್ಷಿಸಿರುವುದು ಅವರ  ಪಾಠಪರಿಷ್ಕರಣದ ನಿಲುವಿನ ಪ್ರತೀಕವಾಗಿದೆ. 1952ರಲ್ಲಿ ಬರೆದು ಅಚ್ಚಾದ “ಅಪೂರ್ವ ಷಟ್ಪದಿಯ ಲಕ್ಷಣ” ಎಂಬ ಅವರ ಲೇಖನದಲ್ಲಿ ಅವರ ಪಾಠಪರಿಷ್ಕರಣ ಶಾಸ್ತ್ರಜ್ಞಾನಪ್ರಕಾಶದ ಮೊದಲ ಕಿರಣಗಳು ಗೋಚರಿಸುತ್ತವೆ. ಈ ಲೇಖನದಲ್ಲಿ ಅವರು ಅಮ್ಮಿನಭಾವಿಯ ಶಾಸನದ (ಕ್ರಿ.ಶ.ಸು. ೧೦೭೧) ʻಷಟ್ಪದʼ ಪದ್ಯದ ಪಾಠವನ್ನು ಕುರಿತು ಚರ್ಚಿಸಿ, ಕನ್ನಡ ಛಂದಸ್ಸಿನ ದೃಷ್ಟಿಯಿಂದ ಅದರ ವಿಶ್ಲೇಷಣೆ ಮಾಡಿ, ಅದರ ಛಂದಸ್ಸನ್ನೂ ಪಾಠವನ್ನೂ ಅತ್ಯಂತ ತೃಪ್ತಿಕರವಾಗಿ ನಿಷ್ಕರ್ಷೆಮಾಡಿದ್ದಾರೆ. ಈ ಪಾಠ ನಿಷ್ಕರ್ಷೆಗೆ ಪೂರಕವಾಗಿ ನಾಗವರ್ಮನ ಛಂದೋಂಬುಧಿಯಲ್ಲಿ ಹೇಳಿರುವ ಷಟ್ಪದಿಯ ಲಕ್ಷಣವನ್ನೂ, ಅದರ ಪಾಠವನ್ನೂ ಪ್ರಾಸಂಗಿಕವಾಗಿ ಚರ್ಚಿಸಿದ್ದಾರೆ. ಬಿ.ಎಂ.ಶ್ರೀ.ಯವರು ʻಕನ್ನಡಕೈಪಿಡಿʼಯಲ್ಲಿ ನಾಗವರ್ಮನ ಪದ್ಯ ಮಾತ್ರಾ ಗಣಘಟಿವಾದುದಲ್ಲವೆಂದೂ, ಅಂಶಗಣಘಟಿತವೆಂದೂ ಸೂಚಿಸಿದ್ದರು; ನಾಗವರ್ಮನ ಕಾಲದಲ್ಲಿ ಇದ್ದದ್ದು ಒಂದೇ ಷಟ್ಪದಿ, ಇದಕ್ಕೆ ಶರಷಟ್ಪದಿ ಎಂಬ ಹೆಸರನ್ನು ಆಮೇಲೆ ಕೊಟ್ಟರೆಂದು ಕಾಣುತ್ತದೆ ಎಂಬ ಸಕಾರಣವಾದ ಊಹೆಯನ್ನು ಮುಂದಿಟ್ಟಿದ್ದರು. ಅರ್ಥ ಸಾಮಂಜಸ್ಯವನ್ನು ಆಧಾರವಾಗಿಟ್ಟುಕೊಂಡು ಪದ್ಯದ ನಾಲ್ಕನೆಯ ಪಾದವನ್ನು ತೀ.ನಂ.ಶ್ರೀ ಹೇಗೆ ಪರಿಷ್ಕರಿಸಿದ್ದಾರೆ ಎಂಬುದನ್ನು ಪರಿಶೀಲಿಸಬಹುದು.

ಮಂದರ। ಧರಗಣಂ

ಬಂದಿರ್ಕಾ। ಱಂತ್ಯದೊಳ್‌!

ಕುಂದದೆ| ನೆಲಸುಗೆ | ಮದನಹರಂ॥

ಇಂದುನಿ। ಭಾನನೆ।

ಮುಂದಣ!। ತೆನುಮೀ।

ಯಂದಮಾ| ದಂದು ಷ। ಟ್ಪ [ದ], ಲಕ್ಷಣಂ॥ 

ಇಲ್ಲಿ ತೀ.ನಂ.ಶ್ರೀ.ಯವರು ಪಾಠವಿಮರ್ಶಾಶಾಸ್ತ್ರದ ಒಂದು ನಿಯಮವನ್ನು ರೂಪಿಸಬೇಕೆಂಬ ಉದ್ದೇಶವನ್ನು ಹೊಂದಿರದಿದ್ದರೂ, ಕೆಲವು ಸಂದರ್ಭಗಳಲ್ಲಿ- ಪಾಠಭೇದಗಳ ಒಂದು ʻಸಂತೆʼಯನ್ನು ಎದುರಿಸಬೇಕಾದಂಥ ಸಂದರ್ಭದಲ್ಲಿ- ಅನಿವಾರ್ಯವಾಗಿ, ಅರ್ಥ ಸಮಂಜಸವನ್ನೇ ಮುಖ್ಯಾಧಾರವಾಗಿ ಇಟ್ಟುಕೊಂಡು ಮೂಲಪಾಠವನ್ನು ನಿರ್ಣಯಿಸಬೇಕಾಗುತ್ತದೆ ಎಂಬ ನಿಯಮವನ್ನು ರೂಪಿಸಿಕೊಂಡಿದ್ದರು ಎಂದು ಹೇಳಬಹುದು. ಇಲ್ಲಿ ತೀ.ನಂ.ಶ್ರೀ. ಅವರು  ಅಂಶ ಷಟ್ಪದಿಯ ನಿಷ್ಕರ್ಷೆಗೆ  ಸಂಬಂಧಿಸಿದ ಅಂಶಲಯ ಸ್ವರೂಪದ ಚರ್ಚೆಯನ್ನು ಮಾಡಿರುವುದು ಗಮನಿಸತಕ್ಕ ಸಂಗತಿಯಾಗಿದೆ. ಆರನೆಯ ಪಾದವು ಯಂದಮೇ ಯಾಗಲ್ಕೆ  ಷಟ್ಪದಿ ಕೇಳ್‌ ಎಂಬಂತೆ ಇದ್ದಿರುವುದು ಅಸಂಭವವಲ್ಲವೇ,  ಆದರೆ ಇವರು  ಪದ್ಯದ ಪಾಠವನ್ನು ನಿರ್ಣಯಿಸುವಾಗ ಮೈಸೂರು ಓರಿಯೆಂಟಲ್‌ ರೀಸರ್ಚ್ ಇನ್ಸ್ಟಿಟ್ಯೂಟ್‌ ನಲ್ಲಿರುವ  ಛಂದೋಂಬುಧಿಯ ಎರಡು ಕೈ ಬರೆಹದ  ಮಾತೃಕೆಗಳ ನೆರವಿನಿಂದ, ( KA 283, KA 287) ಮೇಲ್ಕಂಡ  ಯಂದಮಾ| ದಂದು ಷ। ಟ್ಪ [ದ], ಲಕ್ಷಣಂ॥   ಪಾಠವನ್ನು ಸ್ವೀಕರಿಸಿ ಕೊಟ್ಟಿದ್ದಾರೆ. ಮೇಲೆ ನಿರ್ದೇಶಿಸಿರುವಂತೆ ಪಾಠವು `ತುಸಮಟ್ಟಿಗೆ ಸಂಧಿಗ್ಧವಾಗಿರುವುದು  ನಮ್ಮ ದುರ್ದೈವ. ಕನ್ನಡ ಛಂದಸ್ಸಿನ ಚರಿತ್ರೆಯ ದೃಷ್ಟಿಯಿಂದ ಈ ಷಟ್ಟದಿ ಮುಖ್ಯವಾಗಿದೆ. ಶಾಸನದಲ್ಲಿ ಈ ಪದ್ಯ ಜಾತಿಯನ್ನು “ಷಟ್ಟದ” ಎಂದು ಕರೆದಿದೆ.`ಸುಕುಮಾರಚರಿತ'ದಲ್ಲಿ “ಷಟ್ಟದ” ಎಂಬ ರೂಪವೇ ಉಂಟು. ತೆಲುಗಿನ ಮೂರು ಛಂದೋಗ್ರಂಥಗಳಲ್ಲೂ ಅದೇ “ಷಟ್ಟದ” ಎಂಬುದೇ ಕಾಣಬರುತ್ತದೆ. ಜಯಕೀರ್ತಿಯ "ಛಂದೋನುಶಾಸನ'ದಲ್ಲಿ “ಷಟ್ಟದಿಕಾ” ಎಂದು ಬಂದಿದೆ. "ಮದನತಿಲಕ' "ಸಂಗೀತರತ್ನಾಕರ' ಗಳಲ್ಲಿ “ಷಟ್ಪದಿ” ಎಂಬ ರೂಪ ಗೋಚರವಾಗುತ್ತದೆ. ನಾಗವರ್ಮನ“ಛಂದೋಂಬುಧಿ'ಯ ಪ್ರಚಲಿತ ಪಾಠದಲ್ಲಿ “ಷಟ್ಟದಿ” ಎದು ದೊರೆಯುತ್ತದೆ; ಆದರೆ ಮೊದಲಿಗೆ “ಷಟ್ಟದ” ಎಂದು ಇದ್ದಿರುವುದು ಅಸಂಭವವಲ್ಲ. ಹಾಗಾದರೆ ಈ ಶಬ್ದದ ಮೂಲರೂಪ ಯಾವುದು? -ಸದ್ಯಕ್ಕೇನೋ, “ಷಟದ” ಎಂಬ ಅಕಾರಾಂತದ ಕಡೆಗೇ ಸಂಭಾವ್ಯತೆ ಓಲುತ್ತದೆ. ಅಂಶಗಣದ `ನಡೆಯುಳ್ಳ ಪ್ರಾಚೀನ ಪದ್ಯರೂಪಕ್ಕೆ “ಷಟ್ಟದ”ಎಂಬ ಹೆಸರನ್ನು ಮೀಸಲಾಗಿರಿಸಿ, ಶರ, ಕುಸುಮ ಮೊದಲಾದ ಮಾತ್ರಾಗಣಬದ್ಧವಾದ ಬಗೆಗಳನ್ನು, ರೂಢಿಗೆ ಅನುಸಾರವಾಗಿ, “ಷಟ್ಪದಿ” ಎಂದು ಕರೆಯುವ ವ್ಯವಸ್ಥೆಮಾಡುವುದು ಯುಕ್ತವಲ್ಲವೆ? ಎಂದು ಇವರು ತಾಳಿರುವ ನಿಲುವು ಪ್ರಮುಖವಾಗಿದ್ದು  ಎಲ್ಲರೂ ಸ್ವೀಕರಿಸುವಂತಹದ್ದಾಗಿದೆ.( ತೀ.ನಂ.ಶ್ರೀ.ಅವರ ಸಮಗ್ರ ಗದ್ಯ, ಪು.೫೮೧) ಶಾಸನ ಪದ್ಯದ ಜೊತೆಗೆ ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ಕೊಟ್ಟಿರುವ ಷಟ್ಪದಿಯ ಲಕ್ಷ್ಯ- ಲಕ್ಷಣ ಪದ್ಯದ ಅಂಶಗಣಘಟಿತ ಸ್ವರೂಪದ ಹಿನ್ನೆಲೆಯಲ್ಲಿ ಪರಿಷ್ಕೃತ ಪಾಠವಾಗಿ ನೀಡಿದ್ದು ಈಗ ನಾವು ಬಹು ಮಟ್ಟಿಗೆ ಅಂಶ ಷಟ್ಪದಿಯ ಲಕ್ಷಣವನ್ನು ಹೇಳುವ ಸಂದರ್ಭದಲ್ಲಿ ತೀ.ನಂ.ಶ್ರೀ.ಅವರ ಪಾಠವನ್ನೇ ಉಲ್ಲೇಖಿಸುತ್ತೇವೆ, 

      ಒಟ್ಟಾರೆ ಇವರ ಗ್ರಂಥಸಂಪಾದನೆಯ ಒಲವು ಆದಷ್ಟು ಮಟ್ಟಿಗೆ ಕವಿಯ ಮೂಲಪಾಠದ ಪುನರ್‌ ರಚನೆಯತ್ತ ಇದ್ದಿತ್ತು. ಪಾಠಪರಿಷ್ಕರಣದಲ್ಲಿ ಇವರ ವ್ಯುತ್ಪತ್ತಿ ಜ್ಞಾನ ಅಪಾರವಾಗಿದ್ದು ಮಹತ್ವದ ಪಾತ್ರ ವಹಿಸಿದೆ. ಇವರ ಸಂಪಾದನಾ ಆಶಯವು ಕವಿ ಮತ್ತು ಸಹೃದಯರ ನಡುವಿನ ಕೊಂಡಿಯಾಗಿ ಕೃತಿಯ ಸ್ವರೂಪದ ಸ್ಪಷ್ಟತೆಯನ್ನು ರೂಪಿಸುವಂತಹದ್ದಾಗಿದ್ದಿತು. ಪಾಠ ನಿರ್ಣಯದಲ್ಲಿ ಕವಿಯನ್ನು ಅರ್ಥಮಾಡಿಕೊಳ್ಳಬೇಕಾದ ಆರ್ದ್ರತೆಯನ್ನು ಇವರ ಸಂಪಾದನೆಯಲ್ಲಿ ಕಾಣಬಹುದಾಗಿದೆ. ಒಂದು ಪ್ರಾಚೀನ ಕೃತಿ ಅಧಿಕೃತ ಮತ್ತು ನಿರ್ದಿಷ್ಟವೆನಿಸಬೇಕಾದರೆ ಮೂಲ ಮಾತೃಕೆಯ ಶೋಧನೆ ಅತ್ಯಂತ ಮಹತ್ವವೆಂದು ತೀ.ನಂ.ಶ್ರೀರವರು ಭಾವಿಸಿದ್ದರು. ಗ್ರಂಥ ಸಂಪಾದನೆಯ ಕ್ಷೇತ್ರದಲ್ಲಿ  ಕೆಲಸ ಮಾಡುವವರಿಗೆ ಅದರಲ್ಲಿಯೂ ಸಂಗ್ರಹ ಆವೃತ್ತಿಗಳನ್ನು ಸಂಪಾದಿಸುವಲ್ಲಿ  ತೀ.ನಂ.ಶ್ರೀ ಅವರ ಗ್ರಂಥಸಂಪಾದನೆಯಲ್ಲಿ ಅನುಸರಿಸಿರುವ  ವಿಧಾನಗಳು ಮೇಲ್ಪಂಕ್ತಿಯಾಗಿವೆ.

ಪರಾಮರ್ಶನ ಗ್ರಂಥಗಳು

೧. ಹರಿಹರ ಕವಿಯ ನಂಬಿಯಣ್ಣನರಗಳೆ ಸಂ: ಪ್ರೊ.ತೀ.ನಂ.ಶ್ರೀಕಂಠಯ್ಯ

 ಕಾವ್ಯಾಲಯ, ಜೆ.ಪಿ.ನಗರ, ಬೆಂಗಳೂರು, (ಪರಿಷ್ಕೃತ ಮುದ್ರಣ) ೨೦೧೫

೨. ರನ್ನಕವಿ ಗದಾಯುದ್ಧ ಸಂಗ್ರಹಂ ಸಂ: ಪ್ರೊ.ತೀ.ನಂ.ಶ್ರೀಕಂಠಯ್ಯ

  ವಸಂತ ಪ್ರಕಾಶನ, ಬೆಂಗಳೂರು ( ಪರಿಷ್ಕೃತ ೧೭ ನೇ ಮುದ್ರಣ) ೨೦೧೭

೩. ಹೆಣ್ಣುಮಕ್ಕಳ ಪದಗಳು ಸಂ: ತೀ.ನಂ.ಶ್ರೀ.ಕಂಠಯ್ಯ

  ಮೈಸೂರು ಸಂಸ್ಥಾನದ ವಯಸ್ಕರ ಶಿಕ್ಷಣ ಸಮಿತಿ, ಮೈಸೂರು ೧೯೪೧

೪.ಸಿರಿಸಂಪದ ಸಂ: ಎಫ್.ಟಿ.ಹಳ್ಳಿಕೇರಿ ಮತ್ತು ಕೆ ರವೀಂದ್ರನಾಥ

  ಬ್ಹಿ.ವಿ.ಶಿರೂರ ಅಭಿನಂದನಾ ಗ್ರಂಥ, ಯಲಬುರ್ಗಾ ೨೦೦೨

೫. ಮಣಿಹ ಸಂ: ಎಂ.ವಿ.ಸೀತಾರಾಮಯ್ಯ

   ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು. 1970

೬. ಸಿ.ನಾಗಭೂಷಣ. ಸಾಹಿತ್ಯ-ಸಂಸ್ಕೃತಿ ಅನ್ವೇಷಣೆ  

    ಸಿ.ವಿ.ಜಿ.ಪಬ್ಲಿಕೇಷನ್, ಬೆಂಗಳೂರು, 2007

೭. ಬಿ.ಎಸ್.ಸಣ್ಣಯ್ಯ: ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ

  ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೨

೮. ಶ್ರೀಕಂಠದರ್ಶನ- ತೀ.ನಂ.ಶ್ರೀ ಜನ್ಮಶತಮಾನೋತ್ಸವ ಸಂಸ್ಮರಣ ಗ್ರಂಥ

   ಸಂ:ಕೆ.ಭೈರವಮೂರ್ತಿ, ತ.ವೆಂ.ಸ್ಮಾರಕ ಗ್ರಂಥಮಾಲೆ, ಮೈಸೂರು, ೨೦೦೬

೯. ತೀ.ನಂ.ಶ್ರೀ. ಸಮಗ್ರ ಗದ್ಯ

  ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ

  ಬೆಂಗಳೂರು, ೨೦೦೬                

 

 

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಹಸ್ತಪ್ರತಿ ಆಕರ ಸಂಪತ್ತು                                                                             ಡಾ.ಸಿ.ನಾಗಭೂಷಣ

  ಹಸ್ತಪ್ರತಿಗಳು ನಾಡಿನ ಸಂಸ್ಕೃತಿಯ ಭಂಡಾರಗಳಾಗಿದ್ದು  ಅವುಗಳ ಅಧ್ಯಯನದ ಮೂಲಕ ಪ್ರಾಚೀನ ಕನ್ನಡಿಗರ ಬದುಕಿನ ಒಲವುಗಳನ್ನು, ವಿದ್ಯಾಭಿಮಾನ ಮತ್ತು ಧರ್ಮಾಭಿಮಾನಗಳನ್ನು ಅರಿತು ಕೊಳ್ಳಬಹುದು. ಕನ್ನಡ ಹಸ್ತಪ್ರತಿಗಳನ್ನು ಕನ್ನಡ ನಾಡಿನ ಸಮಾಜ ಹಾಗೂ ಸಂಸ್ಕೃತಿಗಳ ಕ್ರಿಯಾಶೀಲ ನಡೆವಳಿಕೆಗಳು ಎಂದು ಅರಿವಿನ ವಿಸ್ತಾರಗಳ ಪರಿಧಿಯಲ್ಲಿ ಗುರುತಿಸ ಬೇಕಾಗಿದೆ. ಹಸ್ತಪ್ರತಿಗಳಲ್ಲಿ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವೈವಿಧ್ಯಪೂರ್ಣ ವಿವರಗಳು ಕಂಡು ಬರುತ್ತವೆ. ಹಸ್ತಪ್ರತಿಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ, ಆರ್ಥಿಕ, ವಿಜ್ಞಾನ, ತಂತ್ರಜ್ಞಾನ, ವಾಸ್ತುಶಿಲ್ಪ, ವೈದ್ಯ, ಸಂಗೀತ ಚಿತ್ರಕಲೆ, ನಾಟ್ಯಶಾಸ್ತ್ರ, ಶಿಕ್ಷಣ, ಧಾರ್ಮಿಕ, ಜ್ಯೋತಿಷ್ಯ, ಖಗೋಳ, ಗಣಿತ ಎಲ್ಲಾ ಜ್ಞಾನಶಾಖೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡಿರುವುದನ್ನು ಕಾಣಬಹುದಾಗಿದೆ.

   ಕರ್ನಾಟಕ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಾದ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ  ವಿಶ್ವವಿದ್ಯಾಲಯಗಳು ತಮ್ಮದೇ ಆದ ಹಸ್ತಪ್ರತಿ ವಿಭಾಗಗಳನ್ನು ಸ್ಥಾಪಿಸಿಕೊಂಡು ಬಂದಿವೆ. ಹೈದರಾಬಾದ್‍ನ ಉಸ್ಮಾನಿಯ ವಿಶ್ವವಿದ್ಯಾಲಯ ಮತ್ತು ಮದ್ರಾಸ್  ವಿಶ್ವವಿದ್ಯಾಲಯಗಳಲ್ಲಿಯೂ ಕನ್ನಡ ಹಸ್ತಪ್ರತಿ ವಿಭಾಗಗಳಿವೆ. ಈ ಎಲ್ಲ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಬೆಂಗಳೂರು ವಿಶ್ವವಿದ್ಯಾಲಯ ಕಾಲಮಾನದಲ್ಲಿ ಕಿರಿಯದು.  ಬೆಂಗಳೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದದ್ದೆ 1964ರಲ್ಲಿ.  ಮೊದಲಿನಿಂದಲ್ಲೂ ಇದ್ದ ಕನ್ನಡ ವಿಭಾಗವು, 1971 ರಲ್ಲಿ ಕನ್ನಡ ಅಧ್ಯಯನ ಕೇಂದ್ರವಾಗಿ ಪರಿವರ್ತಿತವಾಯಿತು. ಪ್ರಾಚೀನ ಹಸ್ತಪ್ರತಿಗಳ ವಿಭಾಗವೂ ಕೂಡ ಅದೇ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿತು. ದಿವಂಗತ. ಪಂಡಿತರತ್ನ ಆಸ್ಥಾನವಿದ್ವಾನ್ ಡಾ.ಬಿ. ಶಿವಮೂರ್ತಿ ಶಾಸ್ತ್ರಿಯವರು, 1971 ಸೆಪ್ಟಂಬರ್ ರಂದು ತಮ್ಮಲ್ಲಿದ್ದ 1.ಜೈಮಿನಿ ಭಾರತ, 2. ಚೆನ್ನಬಸವಣ್ಣನವರ  ಅನುಭಾವದ ವಚನಗಳು,3. ಬಸವ ಪುರಾಣ, 4.ದೀಪದ ಕಲಿಯರ ಕಾವ್ಯ (ಸಾಂಗತ್ಯ),5. ಷಟ್ಥ್ಸಲಜ್ಞಾನ ಸಾರಾಮೃತ 6. ಶಿವಯೋಗ ಪ್ರದೀಪಿಕೆ ( ಸಂಸ್ಕೃತ), 7. ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ 8. ವೈದ್ಯ ವಗೈರೆ 9. ಶಿವಾನಂದ ಲಹರಿ ( ಕರ್ನಾಟಕ ಟೀಕಾ ಸಮೇತ) 1ಂ. ಸಿದ್ಧಾಂತ ಶಿಖಾಮಣಿ (ಕರ್ನಾಟಕ ಟೀಕಾಯುಕ್ತ) ಇತ್ಯಾದಿ ಹಲವು ಹಸ್ತಪ್ರತಿಗಳನ್ನು ಅಧ್ಯಯನ ಕೇಂದ್ರಕ್ಕೆ ಉದಾರವಾದ ಕೊಡುಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಹಸ್ತಪ್ರತಿ ವಿಭಾಗವು ಕನ್ನಡ ಅಧ್ಯಯನ ಕೇಂದ್ರದಲ್ಲಿ  ರೂಪುಗೊಳ್ಳಲು ಮೊದಲ ಕಾರಣವಾಯಿತು. ಅಂದಿನಿಂದ ಇದುವರೆಗೆ, ಸುಮಾರು  ವರ್ಷಗಳ ಅವಧಿಯಲ್ಲಿ,  ಇಲ್ಲಿಯ ಹಸ್ತಪ್ರತಿ ವಿಭಾಗ, ಸುಮಾರು ಐದು ಸಾವಿರ  ಕವಿಕೃತಿಗಳನ್ನು ಒಳಗೊಂಡಿರುವ, ಒಂದು ಸಾವಿರದ ಐದುನೂರು ಹಸ್ತಪ್ರತಿಕಟ್ಟುಗಳನ್ನು ಕೂಡಿಸಿಕೊಂಡಿದೆ.  ಇಲ್ಲಿರುವ ಹಸ್ತಪ್ರತಿ ವಿಭಾಗದ ಬೆಳವಣಿಗೆಗೆ ಕಳೆದ ಮೂರುದಶಕದಲ್ಲಿ,  ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರೂ, ವಿಧ್ಯಾರ್ಥಿಗಳೂ ಮತ್ತಿತರ ಹಲವಾರು ಮಹನೀಯರೂ ಕಾರಣಕರ್ತರಾಗಿದ್ದಾರೆ. ಈ ಹಸ್ತಪ್ರತಿ ವಿಭಾಗದ ತ್ವರಿತ ಬೆಳವಣಿಗೆ ಹಾಗೂ ಅಭ್ಯುದಯಕ್ಕೆ ಹಸ್ತಪ್ರತಿ ತಜ್ಞರಾದ  ಶ್ರೀ.ಎಸ್. ಶಿವಣ್ಣನವರು ಕಾರಣ ಕರ್ತರು ಎಂಬುದರಲ್ಲಿ ಎರಡು ಮಾತಿಲ್ಲ.ಮುದ್ದಣ್ಣನ ರಾಮಾಶ್ವಮೇಧ, ಬಸವಪ್ಪ ಶಾಸ್ತ್ರೀಗಳ ಶಂಕರ ಶತಕಗಳಂತಹ ಅಪರೂಪದ ಕವಿಗಳ ಸ್ವಹಸ್ತಾಕ್ಷರ ಹಸ್ತಪ್ರತಿಗಳಿದ್ದರೂ, ಮೌಲಿಕವಾದ ಪ್ರಾಚೀನ ಹಸ್ತಪ್ರತಿಗಳು ಏಕೈಕ ಮತ್ತು ಅಪ್ರಕಟಿತ ಹಸ್ತಪ್ರತಿಗಳು ಅನೇಕವಿದ್ದರೂ ಈ ವಿಭಾಗ  ಸಂಪಾದನೆ ಮತ್ತು ಪ್ರಕಟನೆಯನ್ನು ಕರ್ನಾಟಕದ ಉಳಿದ ವಿಶ್ವವಿದ್ಯಾಲಯಗಳ ಹಸ್ತಪ್ರತಿ ವಿಭಾಗಗಳ ಹಾಗೆ ತನ್ನ ಕಕ್ಷೆಗೆ ಸೇರಿಸಿಕೊಳ್ಳದೆ ಹೋದುದು ಒಂದು ಕೊರತೆಯೆನಿಸಿದೆ, ಆದಾಗ್ಯೂ ಕನ್ನಡ ಅಧ್ಯಯನ  ಕೇಂದ್ರದ ಹಸ್ತಪ್ರತಿ ವಿಭಾಗದ ಮಹತ್ವಕ್ಕೆ ಧಕ್ಕೆಯಾಗಿಲ್ಲದಿರುವುದು ವಿಶೇಷ ಸಂಗತಿ. ಈ ಹಸ್ತಪ್ರತಿ ವಿಭಾಗವು ಈಗಲೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ.

    ಮೂರು ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗಗಳು 9೦ರ ದಶಕದವರೆಗೆ ನಡೆಸಿದ ಸಾಹಿತ್ಯಕ ಚಟುವಟಿಕೆಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮುಖ್ಯವಾಗಿ ಪರಿಗಣಿತವಾದವುಗಳು. ಒಂದೊಂದೂ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಮೈಸೂರು ಮತ್ತು ಧಾರವಾಡ ವಿಶ್ವವಿದ್ಯಾನಿಲಯಗಳು ಪ್ರಾಚೀನ ಹಾಗೂ ಆಕರ ಸಾಹಿತ್ಯ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಬೆಂಗಳೂರು ವಿಶ್ವವಿದ್ಯಾನಿಲಯವು ಸಾಹಿತ್ಯದ ವಿಭಿನ್ನ ವಾಗ್ವಾದಗಳು ಬೆಳೆಯಲು ಉತ್ತಮ ಸಾಹಿತ್ಯ ನಿರ್ಮಾಣವಾಗಲು ಪಣತೊಟ್ಟುದರ ಫಲವಾಗಿ ಪ್ರಾಚೀನ ಸಾಹಿತ್ಯ ಸಂಪಾದನೆಗೆ  ಅಷ್ಟಾಗಿ ತೊಡಗಿಕೊಳ್ಳಲಿಲ್ಲ ಎನ್ನಬಹುದು.

   ಶ್ರೀಎಸ್.ಶಿವಣ್ಣನವರು ಬೆಂಗಳೂರು ವಿಶ್ವವಿದ್ಯಾನಿಲಯದ ಸಂಪಾದನ ವಿಭಾಗಕ್ಕೆ ಸ್ವತಃ ಒಂದು ಆಸ್ತಿಯಾಗಿದ್ದ ತಜ್ಞರು. ಹಸ್ತಪ್ರತಿ ವಿಚಾರದಲ್ಲಿ ಅವರನ್ನು ನಡೆದಾಡುವ ನಿಘಂಟು ಎಂದರೂ ತಪ್ಪಲ್ಲ. ಇವರು ಬೆಂಗಳೂರು ವಿಶ್ವವಿದ್ಯಾಲಯದ ಹಸ್ತಪ್ರತಿವಿಭಾಗದಲ್ಲಿ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಸಂಗ್ರಹಿಸಿದ ಹಸ್ತ ಪ್ರತಿ ಕಟ್ಟುಗಳ ಸಂಖ್ಯೆ 1753 ನ್ನು ದಾಟಿದೆ. ಈ ಕಟ್ಟುಗಳಲ್ಲಿ ಅಡಕವಾಗಿರುವ ವಿಷಯಾಧಾರಿತ ಕೃತಿಗಳ ಸಂಖ್ಯೆ 5864 ಆಗುತ್ತದೆ. ಇವರ ಕಾಲದಲ್ಲಿ ಸಂಗ್ರಹಿಸಲ್ಪಟ್ಟ ಹಸ್ತಪ್ರತಿಗಳಲ್ಲಿ ಅಮೂಲ್ಯವಾದ ಹಸ್ತಪ್ರತಿಗಳು ಸೇರಿವೆ. ಮುದ್ದಣ್ಣನ ಕೈ ಬರೆಹದ ರಾಮಾಶ್ವಮೇಧ, ಬಸವಪ್ಪ ಶಾಸ್ತ್ರಿಗಳ ಕೈ ಬರೆಹದ ಶಂಕರ ಶತಕಗಳಂತಹ ಅಮೂಲ್ಯವಾದ ಸ್ವಹಸ್ತ ಪ್ರತಿಗಳು ಇವರ ಕಾಲದಲ್ಲಿ ಸಂಗ್ರಹಿಸಲ್ಪಟ್ಟಿರುವುದು ವಿಶೇಷ. ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿ ಅನುಭವ ಮುಕುರ ( ಕೆ.153/9) ಅಮರಕೋಶ ಸಟೀಕು (ಕೆ.136), ಕುಮಾರವ್ಯಾಸನ ಅರಣ್ಯ ಪರ್ವ (ಕೆ.11/3) ನಿಜಗುಣ ಶಿವಯೋಗಿಯ ಅರವತ್ತು ಮೂವರ ತ್ರಿವಿಧಿ ( ಕೆ.129/1) ಉದಯಾದಿತ್ಯಾಲಂಕಾರ  (ಕೆ.217/4) ಸಿಂಗಳ ಸಿದ್ದ ಬಸವನ ಎಲ್ಲಾ ಪುರಾತರ ಬೆಡಗಿನ ವಚನ ( ಕೆ.226/3), ಮಹಾಲಿಂಗದೇವನ ಏಕೋತ್ತರ ಶತಸ್ಥಲ (ಕೆ.213/2), ಜಕ್ಕಣಾರ್ಯನ ಏಕೋತ್ತರ ಶತಸ್ಥಲ (ಕೆ.49), ಇಮ್ಮಡಿ ನಾಗವರ್ಮನ ಕರ್ಣಾಟಕ ಭಾಷಾಭೂಷಣ(ಸಟೀಕು) (ಕೆ.51), ಕರ್ನಾಟಕ ಶಬ್ದಮಂಜರಿ (ಕೆ. 8/2), ಈಶ್ವರ ಕವಿಯ ಕವಿ ಜಿಹ್ವಾಬಂಧನ(ಕೆ.8/1ಂ), ಕುಮುದೇಂದು ರಾಮಾಯಣ (ಕೆ.144),  ಕೈವಲ್ಯ ಪದ್ಧತಿ (ಕೆ.38), ಗುಬ್ಬಿಯ ಮಲ್ಲಣಾರ್ಯನ ಗಣಭಾಷ್ಯ ರತ್ನಮಾಲೆ ( ಕೆ.30),ಗಣಸಹಸ್ರನಾಮ (ಕೆ.2ಂ1/23), ಹರಿಹರನ ಗಿರಿಜಾ ಕಲ್ಯಾಣ ( ಕೆ.113/2) ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ (ಕೆ.8ಂ), ನಾಗವರ್ಮನ ಛಂದೋಂಬುಧಿ (ಕೆ.117), ನೇಮಿಜಿನೇಶ ಸಂಗತಿ (ಕೆ.93), ಶಂಕರ ಕವಿಯ ಪಂಚತಂತ್ರ ( ಕೆ.221), ಅದೃಶ್ಯ ಕವಿಯ ಪ್ರೌಢದೇವರಾಯನಕಾವ್ಯ (ಕೆ.12), ಭಿಮಕವಿಯ ಬಸವ ಪುರಾಣ (ಕೆ.22), ಭಕ್ತಿರಸದ ಸೋನೆ ( ಕೆ.2೦4), ಭರತೇಶ ವೈಭವ (ಕೆ.103), ಭಾವ ಚಿಂತಾರತ್ನ (ಕೆ.152/2), ಶಬರಶಂಕರ ವಿಳಾಸ (ಕೆ.2೦5/1), ಶಬ್ದಮಣಿ ದರ್ಪಣ (ಕೆ.208/2), ಶರಣ ಲೀಲಾಮೃತ ( ಕೆ.124), ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯ ಸಂಪಾದನೆ (ಕೆ.213/1), ಶಿವಗಣಪ್ರಸಾದಿ ಮಹದೇವಯ್ಯನ ಶೂನ್ಯ ಸಂಪಾದನೆ (ಕೆ.7/1), ತೋಂಟದ ಸಿದ್ಧೇಶ್ವರರ ಷಟ್ಸ್ಥಲಜ್ಞಾನ ಸಾರಾಮೃತ (ಕೆ.191/2), ಸರ್ವಜ್ಞನ ತ್ರಿವಿಧಿ (ಕೆ.28) ರಾಘವಾಂಕನ ಸಿದ್ಧರಾಮ ಪುರಾಣ (ಕೆ.2೦7), ಸೊಗಿನ ಸೋನೆ (ಕೆ.95/2), ರಾಘವಾಂಕನ ಹರಿಶ್ಚಂದ್ರ ಕಾವ್ಯ (ಕೆ61/1) ಇತ್ಯಾದಿ ಸುಮಾರು ಐದುಶತಮಾನಗಳ ಅವಧಿಯಲ್ಲಿ ಸಂಗ್ರಹಗೊಂಡ ಹಸ್ತಪ್ರತಿಗಳಿವೆ.  ಇನ್ನು ಕೆಲವು ವಿಶಿಷ್ಟವಾದ ಹಸ್ತಪ್ರತಿಗಳು ಇಲ್ಲಿಯ ಸಂಗ್ರಹದಲ್ಲಿವೆ. ಚಂದ್ರಮ ಕವಿಯ ಗಣಿತ ಸಾರ ಕೃತಿಯ ಹಸ್ತಪ್ರತಿಯನ್ನು ಹೆಸರಿಸ ಬಹುದು. ಕನ್ನಡ ಸಾಹಿತ್ಯದಲ್ಲಿ ಕಾಲದಿಂದ ಕಾಲಕ್ಕೆ  ಬದಲಾವಣೆಗೊಂಡ  ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ, ಶತಕ, ಅಷ್ಟಕ ಇತ್ಯಾದಿ ಸಾಹಿತ್ಯರೂಪಗಳಿಗನುಗುಣವಾಗಿ ರಚನೆಗೊಂಡ ಕೃತಿಗಳ ಹಸ್ತಪ್ರತಿಗಳು ದೊರೆಯುತ್ತವೆ. ಶಾಸ್ತ್ರ ವಿಷಯಗಳಿಗೆ ಸೇರಿದ ಅಲಂಕಾರಶಾಸ್ತ್ರ, ನಿಘಂಟು ಶಾಸ್ತ್ರ, ಛಂದಃಶಾಸ್ತ್ರ,  ವ್ಯಾಕರಣ ಶಾಸ್ತ್ರಗಳಿಗೆ ಸಂಬಂಧಿಸಿದ ಹಸ್ತಪ್ರತಿಗಳು ಇಲ್ಲಿ ಲಭ್ಯವಿವೆ. ಇಲ್ಲಿಯ ವಿಭಾಗದಲ್ಲಿ ಓಲೆಗರಿ ಮತ್ತು ಬಟ್ಟೆಯಲ್ಲಿರುವ ಉದ್ಧರಣ ಪಟ್ಟಿಕೆಗಳು, 1563ರ  ಬಿಜ್ಜಾವರ ಮಠದಲ್ಲಿದ್ದ ಸಂರಕ್ಷಿತ ಏಕೈಕ ಹಸ್ತಪ್ರತಿಯಾದ ‘ಮಲ್ಲಿಕಾರ್ಜುನ ರಾಮಾಯಣಸಾರ ಟೀಕೆ’ಯಂತಹ ಅಪರೂಪದ ಹಸ್ತಪ್ರತಿಗಳು ಇಲ್ಲಿವೆ. 28 ಇಂಚು ಉದ್ದದ ತೆಲಗು ಹಸ್ತಪ್ರತಿ ಓತನ ಭಾಗವತ (ಕೆ.1424) ಈ ಸಂಸ್ಥೆಯಲ್ಲಿರುವ ಅತಿದೊಡ್ಡ ಹಸ್ತಪ್ರತಿಯಾದರೆ ಎಂ.ವಿ.ಸೀತಾರಾಮಯ್ಯನವರಿಂದ ದಾನವಾಗಿ ಬಂದಿರುವ 3 ಇಂಚು ಉದ್ದದ ರಾಮಚಂದ್ರ ಪ್ರಶ್ನಿ ಎಂಬ ಪ್ರಶ್ನಶಾಸ್ತ್ರ (ಕೆ.2ಂ8) ಹಸ್ತಪ್ರತಿಯು ಅತಿ ಚಿಕ್ಕದಾದುದಾಗಿದೆ. ಚಿಕ್ಕ ಬರೆಹದ ನಿಜಲಿಂಗಯ್ಯ ಬರೆದಂತಾ ಕೈವಲ್ಯ ಪದ್ಧತಿ ಅತಿ ಸಣ್ಣ ಬರೆಹದ ಪ್ರತಿಯಾಗಿದೆ.

    ಇಲ್ಲಿಯ ಹಸ್ತಪ್ರತಿಗಳನ್ನು ವಿವಿಧ ಸಂಸ್ಕೃತಿಯ, ಧರ್ಮದ ಅಕ್ಷರಸ್ಥರು ಪ್ರತಿ ಮಾಡಿದ್ದಾರೆ. ಹಸ್ತಪ್ರತಿಗಳ ಸೃಷ್ಟಿಯಲ್ಲಿ ಹವ್ಯಾಸಿ, ವೃತ್ತಿನಿರತ ಲಿಪಿಕಾರರು ಹಾಗೂ ನಿಯುಕ್ತ ಲಿಪಿಕಾರರು  ಪ್ರಮುಖರಾಗಿದ್ದಾರೆ. ಲಿಪಿಕಾರರಲ್ಲಿ ಸುಂದರ ಲೇಖನ, ಸಣ್ಣಲಿಪಿ ಲೇಖನ, ಅಲಂಕಾರ ಲೇಖನ, ಶೀಘ್ರ ಲೇಖನ, ಬಹುಲಿಪಿ ಲೇಖನ ಇತ್ಯಾದಿ ಬಹು ಅಭಿರುಚಿಯುಳ್ಳ ಲಿಪಿಕಾರರಿದ್ದುದು ಕಂಡು ಬರುತ್ತದೆ. ಬರೆಹದ ವಿಶೇಷಣ ಹೊಂದಿದ ಲಿಪಿಕಾರರ ಉಲ್ಲೇಖ ಇಲ್ಲಿ ಹಸ್ತಪ್ರತಿಯ ಪುಷ್ಪಿಕೆಯ ಉಲ್ಲೇಖದಲ್ಲಿಯ `ಬರೆಹದ ಗುರು ನಂಜೇದೇವರು ಸೇರಿಸಿದ ಶತಕತ್ರಯ ' ( ಕೆ.237/1.2.3) ವಿವರದಿಂದ ತಿಳಿದು ಬರುತ್ತದೆ. ಲಿಪಿಕಾರರಿಗೆ ಧಾರ್ಮಿಕಮನೋಭಾವದ ಜನತೆಯೆ ಜೀವನಾಧಾರವಾಗಿದ್ದರು. ಲಿಪಿಕಾರರು ಸ್ವ ಪ್ರಯೋಜನ, ಪರ ಪ್ರಯೋಜನಗಳಿಗಾಗಿ ಲಿಪೀಕರಣ ಕಾರ್ಯ ಮಾಡಿದ್ದಾರೆ. ಲಿಪಿಕಾರರು ಸಮಯ ನಿಷ್ಠೆಗೆ, ತಮಗೆ ಪೂಜ್ಯರಾದವರ ಬಗೆಗಿನ ಗೌರವಕ್ಕೆ, ತಮ್ಮ ವಾತ್ಸಲ್ಯ- ಸಂಪ್ರೀತಿಗೆ ಭಾಜನರಾದ ಭಕ್ತ, ಶಿಷ್ಯಕೋಟಿಗೆ, ಇಷ್ಟರಾದವರ ಸ್ನೇಹ, ಪ್ರೀತಿ ದ್ಯೋತಕವಾಗಿ, ಸ್ವಂತದ ಜ್ಞಾನಾಭಿವೃದ್ಧಿ ವಿಕಾಸಗಳಿಗಾಗಿ ಪ್ರತೀಕರಣ ಕಾರ್ಯ ಮಾಡಿದ್ದಾರೆ. ನಿದರ್ಶನಕ್ಕೆ ಇಲ್ಲಿಯ ಹಸ್ತಪ್ರತಿ ಪುಷ್ಪಿಕೆಗಳಲ್ಲಿಯ ``ಭಕ್ತಗಣಂಗಳಿಗೆ ಕೃಪೆಯಾಗಿ ಲೀಲಾವಿನೋದದಿಂದ ಬಂದಂತಾ ದೇವಾಪೃತ್ವಿ ಮಹಾಮಹತ್ತಿನೊಳಗಾದ ಷಟ್ಸ್ಥಲ ಲಿಂಗಾಂಗಭರಿತರಾದ ಮಳೆಯ ಮಹಾಸ್ವಾಮಿಯ ಕರಸರೋಜದಲ್ಲಿ ಜನಿಸಿದಂತಾ ಸುತ್ತೂರ ಕೊಟ್ಟಪ್ಪ ದೇವರು ಅವರ ಸುಗರ್ಭದುದ್ಭವರಾದ ಗುರುದೇವರು ನಮ್ಮ ಕಾರುಣ್ಯದ ಭಕ್ತರಾದ ಱಟ್ಟೆಹಳ್ಳಿಯ ಆನೆಯ ಬಸಟ್ಟಿಯರಿಗೆ ಆಯುರಾರೋಗ್ಯ ಅಯಿಶ್ವರ್ಯಾಭಿವೃದ್ದಿ ಪುತ್ರೋತ್ಸವವಾಗಬೇಕೆಂದು ತ್ರಿಸಂದ್ಯ ಕಾಲದಲ್ಲು ಹರಸುವ ಅನೇಕ ಆಶಿರ್ವಾವುದಿಂದಲ್ಲು ಶೂಂನ್ಯ ಸಂಪಾದನೆಯ ಪುಸ್ತಕವ ಬರೆದು ಕೊಟ್ಟಂತಾ ಪ್ರತಿಗೆ ಶುಭಮಸ್ತು ಶೋಭನಮಸ್ತು..''(ಬೆ.ವಿ.ವಿ.ಹ.ವ.ಸೂ.ಸಂ.1 ಸಂ.371,ಕೆ.22೦) ಚಂನಬಸೈನವರು ಗಂದಿಗೆ ನಂಜುಂಡಪ್ಪನವರ ಕೊಮಾರ ನಂಜಪ್ಪನಿಗೆ ಧನಕನಕ ವಸ್ತು ವಾಹನಾಂದೋಳಿಕಾಭೀಷ್ಟ ಪುತ್ರ ಪೌತ್ರಾಭಿವೃದ್ಧಿಯಾಗಲೆಂದು ಹರಸಿ ಬರಕೊಟ್ಟ ಶರಣಲೀಲಾಮೃತ ಪುಸ್ತಕದ ಬರವಣಿಗ್ಗೆ ಸಂಪೂರ್ನ ಮಂಗಳಮಹಾ (ಬೆ.ವಿ.ವಿ.ಹ.ವ.ಸೂ.ಸಂ.1. ಸಂ.342,ಕೆ.129/3) ಎಂಬ ಉಲ್ಲೇಖಗಳನ್ನು ಗಮನಿಸ ಬಹುದಾಗಿದೆ.

  ಲಿಪಿಕಾರರು ತಮ್ಮ ನಕಲು ಕಾರ್ಯದಲ್ಲಿ ಹಲವು ಕಾರಣಗಳಿಂದಾಗಿ ತಮ್ಮಿಂದಾಗಿರ ಬಹುದಾದ ತಪ್ಪು ತಡೆಗಳನ್ನು, ವಿಕಲ್ಪಗಳನ್ನು ತಿದ್ದಿಕೊಂಡು ಓದ ಬೇಕೆಂದು, ಹಲವೆಡೆ ಮನ್ನಿಸ ಬೇಕೆಂದು ಮನವಿ ಮಾಡಿಕೊಂಡಿರುವುದನ್ನು ಇಲ್ಲಿಯ ಹಸ್ತಪ್ರತಿಗಳ ಪುಷ್ಪಿಕೆಗಳಿಂದ ತಿಳಿಯ ಬಹುದು. ನಿದರ್ಶನಕ್ಕೆ ಇಲ್ಲಿಯ ಹಸ್ತಪ್ರತಿಗಳಲ್ಲಿಯ ` ಮೂಲ  ಪ್ರತಿಯಲ್ಲಿದ್ದ ಮೇಲೆ ಬರದು ಯಿದೇನೆ ವೋದು ಪುಂಣ್ಯಾತ್ಮರು ಕೈತಪ್ಪು

ದರೆ ತಿದ್ದಿಟ್ಟು ಕೊಂಬುದು ( ಕೆ.13೦),  ಅರಿತು ತಪ್ಪುವನಲ್ಲ ಮಿಕ್ಕಿನ ಗುರು ಹಿರಿಯರಾದವರು ತಿದ್ದುಉದರಿವಿಡಿದು ನಡೆಸುಉದು ಮರದನು ತರಳನಿವನೆನುತಾ ( ಕೆ.4೦5) ಎಂಬ ಉಲ್ಲೇಖಗಳನ್ನು

ನೋಡಬಹುದಾಗಿದೆ. ಕೆಲವು ಲಿಪಿಕಾರರು ಜನತೆಯಲ್ಲಿದ್ದ ನಂಬಿಕೆ ಶ್ರದ್ಧೆಗಳ ಹಿನ್ನೆಲೆಯಲ್ಲಿ ತಮ್ಮ ಮೇಲೆ ಬರಬಹುದಾದ ದೋಷದ ಆರೋಪಗಳನ್ನು ನಿವಾರಿಸಿಕೊಳ್ಳಲು ಯತ್ನಿಸಿರುವುದು ಕಂಡು ಬರುತ್ತದೆ.ಇಲ್ಲಿಯ ಹಸ್ತಪ್ರತಿ ಸಂಗ್ರಹಾಲಯದಲ್ಲಿರುವ ಹಸ್ತಪ್ರತಿಗಳು ಮುದ್ದಾದ ಅಕ್ಷರಗಳ, ಸೂಕ್ಷ್ಮಾತಿಸೂಕ್ಷ್ಮ ಅಕ್ಷರಗಳ ಹಸ್ತಪ್ರತಿಗಳಲ್ಲದೆ, ಕಾವ್ಯದಲ್ಲಿ ನಿರೂಪಿತವಾದ ಘಟನೆಗಳನ್ನು ಚಾಕ್ಷುಷಗೊಳಿಸುವ ಬಣ್ಣ ಬಣ್ಣದ ಚಿತ್ರವನ್ನೊಳಗೊಂಡ ಹಸ್ತಪ್ರತಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ. ಹಸ್ತಪ್ರತಿಗಳ ರಕ್ಷಾಫಲಕ, ಒಳಗಿನ ಪುಟ ಮತ್ತು ಮುಖಪುಟಗಳ ಮೇಲೆ ಬರೆದ ಚಿತ್ರಗಳು, ಉದ್ಧರಣೆಯ ಬರವಣಿಗೆಗಳ ಪಟಲಗಳು  ಇಲ್ಲಿಯ ಹಸ್ತಪ್ರತಿ ಭಂಡಾರದ ಆಕರ್ಷಣೆಯನ್ನು ಹೆಚ್ಚಿಸಿವೆ. ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಯೊಂದರ ಎರಡು ಗರಿಗಳಲ್ಲಿ ಕೊರೆದಿರುವ ಗಣೇಶನ ಮೂರ್ತಿಯು ಅಪರೂಪವಾಗಿದೆ. ವೃತ್ತಾಕಾರದಲ್ಲಿ ಬಿಡಿಸಿರುವ ಚಿತ್ತಾರಗಳು ಅಪೂರ್ವವಾಗಿವೆ. ವೀರಶೈವ ಧರ್ಮಕ್ಕೆ ಸಂಬಂಧಿಸಿದ ಉದ್ಧರಣ ಪಟಲವೊಂದಿದ್ದು ಅದು ಸುಮಾರು ಒಂದು ಅಡಿ ಅಗಲ ಮತ್ತು ಮೂವತ್ತು ಅಡಿ ಉದ್ದವಿದೆ. ಸಕ ಶಾಲಿವಾಹನ 1789 ನೇ ಪ್ರವರ್ಧಮಾನ ನಕ್ಷತ್ರದಲ್ಲು ಬರದ್ದು ಎಂಬ ಕಾಲದ ಉಲ್ಲೇಖವೂ ಈ ಪಟಲದ ಮೇಲೆ ಇದೆ. ಇವುಗಳ ಜೊತೆಗೆ ಚಿತ್ರಕಾವಕ್ಕೆ ಸಂಬಂಧಪಟ್ಟಂತೆ ಒಂದು ಚಿತ್ರ ಪಟಲವಿದೆ. ಹಸ್ತಪ್ರತಿಯ ಕೆಲವು ಗರಿಗಳಲ್ಲಿ ದೇವಾಲಯದ ಚಿತ್ರವನ್ನು ಬಿಡಿಸಲಾಗಿದೆ. ಗರಿಗಳಲ್ಲಿ ಗರ್ಭಗುಡಿ ವಿನ್ಯಾಸ, ಗರುಡಗಂಬ ಮೊದಲಾದವುಗಳನ್ನು ಅಂಗುಲದ ಲೆಕ್ಕಾಚಾರದಲ್ಲಿ ಬಿಡಿಸಿರುವುದನ್ನು ಕಾಣಬಹುದಾಗಿದೆ. ಜೊತೆಗೆ  ಪದಬಂಧ, ಕಲ್ಲಚ್ಚಿನ ಹಾಗೂ ಕಾಗದದ ಪ್ರತಿಗಳಿವೆ. ಇಲ್ಲಿಯ ಹಸ್ತಪ್ರತಿ ಭಂಡಾರವೂ ವಿಶ್ವವಿದ್ಯಾಲಯಕ್ಕೆ ಆಗಮಿಸುವ ಸಂದರ್ಶಕರಿಗೆ ಪ್ರಮುಖ ಆಕರ್ಷಕ ಕೇಂದ್ರವೆನಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಕೆ.ಸಿದ್ದಪ್ಪನವರು ಇಲ್ಲಿಯ ಹಸ್ತಪ್ರತಿ ಸಂಗ್ರಹಾಲಯದ ಆಧುನೀಕರಣದ ಬಗೆಗೆ ಆಸಕ್ತಿ ವಹಿಸಿ ಸುಸಜ್ಜಿತವಾದ ಸಂಗ್ರಹಾಲಯವನ್ನಾಗಿಸಿದರು. ಇಲ್ಲಿಯ ಹಸ್ತಪ್ರತಿ ವಿಭಾಗವು ತಕ್ಕ ಮಟ್ಟಿಗೆ ಸುಸಜ್ಜಿತವಾಗಿದೆ. ಇಲ್ಲಿಯ ಹಸ್ತಪ್ರತಿಗಳನ್ನು ವಿಶೇಷ ತಂತ್ರಜ್ಞಾನದಿಂದ ತಯಾರಿಸಲಾದ ಸುಸಜ್ಜಿತವಾದ ಪಾರದರ್ಶಕವಾದ ಗಾಜು ಮತ್ತು ಮರದ ಕಪಾಟಿನಲ್ಲಿ  ಸಂಗ್ರಹಿಸಲಾಗಿದೆ.ಹಸ್ತಪ್ರತಿಗಳಿಗೆ ರಾಸಾಯನಿಕ ಚಿಕಿತ್ಸೆ ನೀಡುವ ವೈಜ್ಞಾನಿಕ ಸಾಧನವಾದ ಫ್ಯೂಮಿಗೇಷನ್ ಛೇಂಬರ್ (ಪ್ರದೂಮನ ಕಪಾಟು) ಇದೆ. ಜೊತೆಗೆ ಹಸ್ತಪ್ರತಿಗಳನ್ನು ಸಂರಕ್ಷಿಸಲು ಪಾರಂಪರಿಕ ಸಲಕರಣೆಗಳಾದ ಮಸಿ,ದಾರ, ಕೆಂಪು ಬಟ್ಟೆ, ಅರಿಸಿ ಕೊಂಬು ಇವುಗಳ ಜೊತೆಗೆ  ಆಧುನಿಕವಾದ ಸಿಟ್ರೆನೆಲ್ ಆಯಿಲ್, ಥೈಮೋಲ್, ಸಿಲಿಕಾನ್ ಜೆಲ್ ಗಳನ್ನು ಉಪಯೋಗಿಸಲಾಗಿದೆ.

  ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿ ವೈವಿಧ್ಯಮಯ  ಬರವಣಿಗೆಯ ಸಾಧನಗಳಾದ ಕಂಠಗಳು, ಮುಳ್ಳುಹಂದಿಯ  ಮುಳ್ಳುಗಳಿವೆ. ಕನ್ನಡ ಭಾಷೆಯಲ್ಲದೆ ಗ್ರಂಥ, ಅರವ, ತಿಗಳಾರಿ, ಮೋಡಿ, ನಾಗರಿ, ತಮಿಳು, ತೆಲುಗು ಇತ್ಯಾದಿ ಲಿಪಿಗಳ ಹಸ್ತಪ್ರತಿಗಳಿವೆ.  ಇತಿಹಾಸದ ಪುನರ್ರಚನೆಯ ಅಗತ್ಯ ಆಕರಗಳಾದ ದಾಖಲು ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳ ಸಂಗ್ರಹವನ್ನೂ ಕಾಣಬಹುದು. ಕವಲೇ ದುರ್ಗದ ವೀರಶೈವ ಮಠವು ತನ್ನಲ್ಲಿದ್ದ ಸುಮಾರು 7೦ ತಾಮ್ರ ಪಟಗಳು ಇಲ್ಲಿಯ ವಿಭಾಗಕ್ಕೆ ಕೊಡುಗೆಯಾಗಿ ನೀಡಿದ್ದು ಅವುಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ತಾಮ್ರ ಪಟದ ಗೊಂಚಲುಗಳು ಕೆಳದಿ ಅರಸರ ಕಾಲಕ್ಕೆ ಸೇರಿದುದಾಗಿವೆ.ಲೇಖನ ಸಾಮಗ್ರಿಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೋಕಿನ ಸಂತೆಕಲ್ಲಹಳ್ಳಿಯಲ್ಲಿ ದೊರೆತ ಸುಟ್ಟ ಮಣ್ಣಿನ ಮಡಕೆಯ ಚೂರುಗಳ ಮೇಲಿನಕ್ರಿ.ಶ. 8ನೇ ಶತಮಾನಕ್ಕೆ ಸೇರಿದ ಬರೆಹದ  ವಸ್ತುವೂ ಇದೆ. ವಿಜಯ ನಗರ ಅರಸರ ಕಾಲದ ಎರಡು ರಾಜಮುದ್ರೆಗಳು, ಮೈಸೂರು ಒಡೆಯರ  ಹಾಗೂ ಬ್ರಿಟೀಷರ ಮತ್ತು ಪೋರ್ಚ್‍ಗೀಸರ ಕಾಲದ ನಾಣ್ಯಗಳ ಸಂಗ್ರಹವೂ ಇದೆ. ಬೆಳಗುತ್ತಿ ಸಂಸ್ಥಾನದ ಮೂರು ಶ್ರೀಮುಖ ಪತ್ರಗಳನ್ನು ಹಾಗೂ ಹೊಸಹಳ್ಳಿ ಹೊಸಕೆರೆಯ ದುರಸ್ತಿಯ ಬಗೆಗೆ ಹೊರಡಿಸಿದ ಸನ್ನದು ಇದೆ. ಆನೆಗೊಂದಿ ಸಂಸ್ಥಾನಕ್ಕೆ ಸಂಬಂಧಿಸಿದ ಮೋಡಿಯಕ್ಷರಗಳ ಎರಡುಪತ್ರಗಳಿವೆ. ಕ್ರಿ.ಶ.1849ರ ಆಂಗ್ಲ ಪತ್ರಗಳಿವೆ. ಕೃಷ್ಣರಾಜ ಒಡೆಯರ ಕಾಲದ ನಿರೂಪವಿದೆ. ಜೊತೆಗೆ  ಕಡತಗಳು,  ನಾಮೆಗಳು ಹಾಗೂ ಕೈಫಿಯತ್ತುಗಳು ಇತ್ಯಾದಿ ದಾಖಲೆ ಸಾಹಿತ್ಯಕ್ಕೆ ಸಂಬಂಧಿಸಿದವುಗಳನ್ನು ಕಾಣಬಹುದು. ಇಲ್ಲಿಯ ಹಸ್ತಪ್ರತಿಗಳ  ಸಮಗ್ರ ವಿವರಗಳನ್ನೊಳಗೊಂಡ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂಪುಟ 1 ಅನ್ನು ಎಸ್.ಶಿವಣ್ಣನವರು ಸಂಪಾದಿಸಿದ್ದು ಸೂಚಿ ಸಾಹಿತ್ಯದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಿದ್ಧಪಡಿಸಿದ ಸಂಪುಟವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗವು ಒಳಗೊಂಡಿರುವ ಹಸ್ತಪ್ರತಿಗಳ ವರ್ಣನಾತ್ಮಕ  ಸೂಚಿಯ ಮೊದಲ ಸಂಪುಟ ಇದು. ಇದರಲ್ಲಿ ಒಟ್ಟು 449 ಕೃತಿಗಳನ್ನು ಕುರಿತ ವಿವರವಾದ ಮಾಹಿತಿ ಇದೆ. ಈ ಸೂಚಿಯು ಕೃತಿಯ ಬಗೆಗೆ, ಹಸ್ತಪ್ರತಿಯ ಬಗೆಗೆ ಎಲ್ಲಾ ವಿವರಗಳನ್ನು ತಿಳಿಸಿಕೊಡುತ್ತದೆ. ಸೂಚಿಗಿಂತ ವಿವರಣಾತ್ಮಕ ಸೂಚಿ ಹೆಚ್ಚು ಪ್ರಯೋಜನಕಾರಿ. ವರ್ಣನಾತ್ಮಕ ಸೂಚಿಯು ಕರ್ತೃ, ಕೃತಿ, ಕಾಲ ಭಾಷೆ, ಲಿಪಿ, ಪತ್ರಸಂಖ್ಯೆ, ಪತ್ರದ ಒಂದು ಮಗ್ಗುಲಲ್ಲಿ ಇರುವ ಪಂಕ್ತಿಗಳು, ಪ್ರತಿ ಪಂಕ್ತಿಯಲ್ಲಿರುವ ಸರಾಸರಿ ಅಕ್ಷರಗಳು. ಸಮಗ್ರ ಅಥವಾ ಅಸಮಗ್ರ, ಪ್ರತಿಯ ಕಾಲ, ಲುಪ್ತ ಅಥವಾ ಹರಿದ ಹಾಳೆಗಳ ವಿವರ. ಹಸ್ತಪ್ರತಿಯ ವಸ್ತುವಿಷಯ, ಶುದ್ಧಾ ಶುದ್ಧ, ಪ್ರತಿಮಾಡಿದವರ ಹೆಸರು, ಹಸ್ತ ಪ್ರತಿ ದೊರೆತ ಸ್ಥಳ, ಕೃತಿಯ ಆದಿ ಅಂತ್ಯ ಭಾಗಗಳಲ್ಲಿಯ ಕವಿಯ ಹೆಸರು ಕಾಲ, ಪ್ರತಿಕಾರರ ಹೆಸರು ಬರುವ ಭಾಗಗಳು ಹಾಗೂ ಕೃತಿಯ ವಿಶೇಷ ಇತ್ಯಾದಿ ಹಸ್ತಪ್ರತಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಒಳಗೊಂಡಿದೆ. ಬೆ.ವಿ.ವಿ. ಪ್ರಸಾರಾಂಗದ ಮೂಲಕ  ಪ್ರಕಟಗೊಂಡಿರುವ ಈ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಯೊಂದು ಇದುವರೆಗೂ ಈ ಕ್ಷೇತ್ರದಲ್ಲಿ ಪ್ರಕಟವಾಗಿರುವ ವರ್ಣನಾತ್ಮಕ ಸೂಚಿಗಳ ಶಾಸ್ತ್ರೀಯ ಕ್ರಮವನ್ನು ಅನುಸರಿಸಿದೆ. ಇದರ ಪ್ರಕಟಣೆಯಿಂದ,  ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿರುವ ಕೃತಿಗಳ ಸ್ವರೂಪ ಹಾಗೂ ವಿವರಗಳು, ಈ ಬಗೆಯ ಸಂಪಾದನಾ ಕಾರ್ಯವನ್ನು ಕೈಗೊಳ್ಳವವರ ಪಾಲಿಗೆ ಉಪಯುಕ್ತವಾದ ಮಾಹಿತಿಗಳನ್ನು ಒದಗಿಸಿದಂತಾಗುತ್ತದೆ. ಹಾಗೆಯೇ ಹಸ್ತಪ್ರತಿಗಳನ್ನು ಸರಾಗವಾಗಿ ಓದಿ ಸೂಚಿಮಾಡುವಲ್ಲಿ ಕವಿಕಾಲ ಕೃತಿ ವಿಚಾರವಾಗಿ ಹಸ್ತಪ್ರತಿಗಳಲ್ಲಿರುವ ನಿಖರಮಾಹಿತಿ ಒದಗಿಸುವಲ್ಲಿ ಪರಿಣತಿಯನ್ನು ಪಡೆದಿದ್ದ ಎಸ್.ಶಿವಣ್ಣನವರೇ ಬೆಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಗಳ ವಿವರಗಳನ್ನೊಳಗೊಂಡ ಎರಡನೇ ವರ್ಣನಾತ್ಮಕ ಸೂಚಿ ಸಂಪುಟವನ್ನು  ಸಂಪಾದಿಸಿದ್ದರೂ  ಬೆಂ.ವಿ.ವಿ. ಪ್ರಸಾರಾಂಗದ ಅಜಾಗರೂಕತೆಯಿಂದಾಗಿ  ಕಳೆದು ಹೋಗಿದ್ದು ಪ್ರಕಟಗೊಳ್ಳದಂತಾಯಿತು.  ಈ ಎರಡನೆಯ ವರ್ಣನಾತ್ಮಕ ಸೂಚಿ ಸಂಪುಟವು ಪ್ರಕಟಗೊಂಡಿದ್ದರೇ ಇಲ್ಲಿಯ ಹಸ್ತಪ್ರತಿಗಳ ವೈವಿಧ್ಯತೆಯ ಪೂರ್ಣ ಮಾಹಿತಿಯು  ಆಸಕ್ತ ವಿದ್ವಾಂಸರಿಗೆ ಲಭ್ಯವಾಗುತ್ತಿತ್ತು.

ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿಕೊಂಡು ಸಂಪಾದನೆಗೊಂಡ ಕೃತಿಗಳು:

   ಪ್ರಾಚೀನ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಸಂಪಾದನೆ ಮತ್ತು ಪ್ರಕಟಣೆ ಇವುಗಳು ವಿಶ್ವವಿದ್ಯಾಲಯದಂಥ ಸಂಸ್ಥೆಗಳ ಬಹುಮುಖ್ಯವಾದ ಸಾಂಸ್ಕೃತಿಕ ಜವಾಬ್ದಾರಿಗಳಲ್ಲಿ ಒಂದು. ಈಗಾಗಲೇ ಇಂಥ ಹಸ್ತಪ್ರತಿಗಳ ನೆರೆವಿನಿಂದ ಎಷ್ಟೋ ಕೃತಿಗಳು ಪ್ರಕಟವಾಗಿದ್ದರೂ,  ಅಪ್ರಕಟಿತವಾಗಿರುವ ಕೃತಿಗಳು ಇನ್ನೂ ಎಷ್ಟೋ ಇರಬಹುದು. ಮತ್ತು ಈಗಾಗಲೇ ಪ್ರಕಟವಾಗಿರುವ ಕೃತಿಗಳು ಮರು ಸಂಪಾದನೆಯ ಕಾರ‍್ಯವೂ ಹೀಗೆ ದೊರೆಯಬಹುದಾದ ಹಸ್ತಪ್ರತಿಗಳನ್ನು ಅವಲಂಬಿಸಿದೆ. ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರಿಂದಲೇ ನಡೆದ ಸಂಪಾದನಾ ಕಾರ್ಯದ ಪರಿಣಾಮವಾಗಿ ಪ್ರಕಟವಾಗಿರುವ ಕೃತಿಗಳ ಸಂಖ್ಯೆ  ಸುಮಾರು ಹತ್ತನ್ನು ದಾಟುತ್ತದೆ.  ಎಸ್.ಶಿವಣ್ಣನವರೇ ಇಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿಕೊಂಡು ಹೆಚ್ಚಿನ ಕೃತಿಗಳನ್ನು ಸಂಪಾದಿಸಿದ್ದಾರೆ.

    ಬೆ.ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಕ್ರಮಾಂಕ 1308ನೇ ಓಲೆ ಪ್ರತಿಯನ್ನು ಆಧರಿಸಿ ಚನ್ನ ಬಸವಣ್ಣನವರ ವಚನಗಳು ಕೃತಿಯು ಸಂಪಾದಿಸಲ್ಪಟ್ಟಿದೆ. ಚನ್ನಬಸವಣ್ಣನವರ ಹೊಸದಾಗಿ ದೊರೆತ 46 ವಚನಗಳನ್ನು ಒಳಗೊಂಡಿರುವುದು ಈ ಸಂಪಾದನ ಕೃತಿಯ ವಿಶೇಷವಾಗಿದೆ.  ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಕ್ರಮಾಂಕ ಕೆ. 1032/3 ಹಾಗೂ ವಿವಿಧ ಆಕರಗಳನ್ನು ಬಳಸಿ ಶಂಕರದೇವರ ಸ್ವರವಚನಗಳು ಕೃತಿಯನ್ನು  ಪರಿಷ್ಕರಿಸಿ ಸಂಪಾದಿಸಲಾಗಿದೆ. 124 ಸ್ವರವಚನಗಳಿವೆ. ಶಂಕರದೇವರು ನಿರೂಪಿಸಿದ ಕಂದ ಈ ಅಪ್ರಕಟಿತ ಕೃತಿಯನ್ನು ಮೊದಲಬಾರಿಗೆ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಕ್ರಮಾಂಕ ಕೆ 1388 ಹಸ್ತಪ್ರತಿಯನ್ನು ಆಧರಿಸಿ ಸಂಪಾದಿಸಲಾಗಿದೆ.122 ಕಂದಪದ್ಯಗಳು ಹಾಗೂ ಅದರ ಟೀಕೆಯನ್ನು ಒಳಗೊಂಡಿದೆ. ಇಲ್ಲಿಯ ಹಸ್ತಪ್ರತಿ ಸಂಗ್ರಹಾಲಯದಲ್ಲಿಯ ‘ಪ್ರಭುದೇಶಿಕ ಸಂಕಲಿತ ಮೋಕ್ಷದರ್ಶನ ಮಹಾ ಸಂಗ್ರಹ’ ಹಸ್ತಪ್ರತಿಯಲ್ಲಿಯ ಅಕ್ಕನ ಎರಡು ನೂತನ ವಚನಗಳನ್ನು ಗುರುತಿಸಿ ಒಟ್ಟು ಒಂಬತ್ತು ವಚನಗಳನ್ನು ಸೆಪ್ಟೆಂಬರ್ 15, 2002ರ ಉದಯವಾಣಿ ಪತ್ರಿಕೆಯಲ್ಲಿ ಎಸ್.ಶಿವಣ್ಣನವರು ಪ್ರಕಟಿಸಿದ್ದಾರೆ. ಇದರಿಂದಾಗಿ ಈಗ ಲಭ್ಯವಿರುವ ಅಕ್ಕಮಹಾದೇವಿಯ ಒಟ್ಟು ವಚನಗಳ ಸಂಖೆ 443 ಕ್ಕೆ ಏರಿದೆ. ಅದೇ ರೀತಿ ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿ ಸಂಖ್ಯೆ ಕೆ.1022ರಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಪತ್ನಿ ನೀಲಮ್ಮಳ ಹೊಸ ವಚನವನ್ನು ಶೋಧಗೊಂಡು ಪ್ರಕಟನೆಗೊಂಡಿದೆ. ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಓಲೆಗರಿ ಸಂಖ್ಯೆ 49 ಹಾಗೂ ಓಲೆಪ್ರತಿ ಸಂಖ್ಯೆ 1378 (ಗರಿ.72-3) ಗಳನ್ನು ಆಧರಿಸಿ ಅಂಬಿಗರ ಚೌಡಯ್ಯನ 8 ಅಪ್ರಕಟಿತ ವಚನಗಳು ಶಿವಣ್ನನವರಿಂದ  ಶೋಧಗೊಂಡು  ಬೆಳಕಿಗೆ ಬಂದಿವೆ. ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿ ಸಂಖ್ಯೆ ಕೆ.227 ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ವಚನ ವಾಜ್ಞಯ ಭಂಡಾರದ ಹಸ್ತಪ್ರತಿ ಸಂಖ್ಯೆ: 11511ನೇ ಗರಿ ಹಾಗೂ ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿಯಲ್ಲಿಯ ಶಾಂತದೇವರ ಷಟ್ಪ್ರಕಾರ ಸಂಗ್ರಹ ಬಿ.1458 ಹಸ್ತಪ್ರತಿಯಲ್ಲಿಯ ಇಲ್ಲಿಯವರೆಗೂ ಬೆಳಕು ಕಾಣದ ಜೇಡರ ದಾಸಿಮಯ್ಯನ ಒಟ್ಟು 1೩ ಅಪ್ರಕಟಿತ ವಚನಗಳು ಶಿವಣ್ಣನವರ ಮೂಲಕ  ಪತ್ತೆಗೊಂಡು ಪ್ರಕಟವಾಗಿವೆ. ಈ ಮಹತ್ತರ ಶೋಧನೆಯಿಂದಾಗಿ ಆದ್ಯವಚನಕಾರ ಜೇಡರ ದಾಸಿಮಯ್ಯನ ಒಟ್ಟು ವಚನಗಳ ಸಂಖ್ಯೆ ಇಂದು 23೫ ಕ್ಕೆ ತಲುಪಿದೆ.

   ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಪ್ರಕಟವಾಗಿರುವ ಸಮಗ್ರ ವಚನ ಸಂಪುಟ 10 (ಸಂಕೀರ್ಣ ವಚನ ಸಂಪುಟ 6) ಕೃತಿಯನ್ನು ದಿವಂಗತ ಎಸ್.ಶಿವಣ್ಣನವರು  ಸಂಪಾದಿಸಿದ್ದು ಈ ಸಂಪುಟದಲ್ಲಿ ಬಸವೋತ್ತರ ಯುಗದ ಐದು ಜನರ ವಚನಗಳನ್ನು ಈಗಾಗಲೇ ಮೊದಲು ಪ್ರಕಟವಾಗಿದ್ದರೂ ಹೊಸ ಓಲೆ ಪ್ರತಿಗಳನ್ನು ಆಧರಿಸಿ ಪರಿಶೀಲಿಸಿ ಪರಿಷ್ಕರಿಸಿರುವುದು ಗಮನೀಯವಾದುದು.  ಇಲ್ಲಿಯ ಹಸ್ತಪ್ರತಿ ವಿಭಾಗದ 3 ಓಲೆಯ ಪ್ರತಿಗಳನ್ನುಪಯೋಗಿಸಿಕೊಂಡು ತೋಂಟದ ಸಿದ್ಧಲಿಂಗಯತಿಗಳ 701 ವಚನಗಳನ್ನು, ಮೂರು ಓಲೆ ಮತ್ತು ಕಾಗದದ ಪ್ರತಿಗಳನ್ನು ಉಪಯೋಗಿಸಿಕೊಂಡು ಘನಲಿಂಗಿ ದೇವರ 66 ವಚನಗಳನ್ನು ಸಂಪಾದಿಸಿದ್ದಾರೆ. ಘನಲಿಂಗಿ ದೇವರ 19 ವಚನಗಳ ಪಾಠವನ್ನು ಪರಿಷ್ಕರಿಸಿ  ಕೊಡಲಾಗಿದೆ. ಮೂರು ಓಲೆ ಪ್ರತಿಗಳನ್ನುಪಯೋಗಿಸಿ ಸ್ವತಂತ್ರ ಸಿದ್ಧಲಿಂಗರ 43೦ ವಚನಗಳನ್ನು ಪರಿಷ್ಕರಿಸಿದ್ದಾರೆ. ಇಮ್ಮಡಿ ಗುರುಸಿದ್ದ ಸ್ವಾಮಿಗಳ 2೦9 ವಚನಗಳನ್ನು ಇಲ್ಲಿಯ ಓಲೆಪ್ರತಿಯನ್ನುಪಯೋಗಿಸಿ ಪರಿಷ್ಕರಿಸಲಾಗಿದೆ. ಒಟ್ಟು 1424 ವಚನಗಳನ್ನು ಹಿಂದೆ ಪ್ರಕಟವಾಗಿದ್ದರೂ ಮತ್ತೊಮ್ಮೆ ಇಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿ ಹಲವೆಡೆ ವಚನಗಳ ಪಾಠವನ್ನು ಪರಿಷ್ಕರಿಸಿ ಪುನರ್ರಚಿಸಿರುವುದು ಗಮನಿಸ ಬೇಕಾದ ಸಂಗತಿಯಾಗಿದೆ. ವಚನ ಸಾಹಿತ್ಯವನ್ನು ಅಧ್ಯಯನ ಮಾಡುವವರು ಅವಶ್ಯಕವಾಗಿ ಗುರುತಿಸಬೇಕಾದ ಪುಸ್ತಕವಾಗಿದೆ.

   ಕರ್ನಾಟಕ ಕವಿ ಚರಿತೆಯಲ್ಲಿ ಉಕ್ತವಾಗದೆ ಇರುವ ಐದುಸಂಧಿಗಳ ಕೆಂಬಾವಿ ಭೋಗಣ್ಣನ ಸಾಂಗತ್ಯ ಕೃತಿಯು ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಕ್ರಮಾಂಕ ಕೆ.222 ಗರಿ-1-24 ಏಕೈಕ ತಾಳೆಯೋಲೆಯನ್ನು  ಉಪಯೋಗಿಸಿಕೊಂಡು ಎಸ್. ಶಿವಣ್ಣ ಮತ್ತು ಎಸ್. ವಿದ್ಯಾಶಂಕರವರು ಸಂಪಾದಿಸಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ  ಪ್ರಕಟಗೊಂಡಿದೆ. ವಿದ್ವತ್ಪೂರ್ಣ ಮುನ್ನುಡಿ ಹಾಗೂ ಉಪಯುಕ್ತವಾದ ಅನುಬಂಧ ಈ ಸಂಪಾದನಾ ಕೃತಿಯಲ್ಲಿದೆ.

    ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿ ಚಂದ್ರಸಾಗರ ವರ್ಣಿಯ ಅಪ್ರಕಟಿತ ಹದಿನೆಂಟು ಕೃತಿಗಳನ್ನು  ಎಸ್.ಶಿವಣ್ಣ ಮತ್ತು ಹಂಪನಾ ಅವರು ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಹಸ್ತ ಪ್ರತಿವಿಭಾಗದ ಕೆ 1344-1 ಹಸ್ತಪ್ರತಿಯನ್ನುಪಯೋಗಿಸಿ ಕಾಮನ ಪದ್ಯ ಕೃತಿ, ಬಿ. 1೦85-2 ಹಸ್ತಪ್ರತಿಯನ್ನುಪಯೋಗಿಸಿ ಚಾವುಂಡರಾಯನ ಯಾಗಕೃತಿ, ಕೆ. 1271-1 ಹಸ್ತಪ್ರತಿಯನ್ನುಪಯೋಗಿಸಿ ಜೀವದಯಾಷ್ಟಮಿ ನೋಂಪಿಕೃತಿ, ಬಿ.548-2 ಹಸ್ತಪ್ರತಿಯನ್ನುಪಯೋಗಿಸಿ ಕೃಷ್ಣನಪ್ರತಿಷ್ಠೆಚರಿತೆವರ್ಣನೆಕೃತಿ, ಕೆ. 121೯-1 ಹಸ್ತಪ್ರತಿಯನ್ನುಪಯೋಗಿಸಿ ಬೆಳಗುಳದ ಮಸ್ತಾಭಿಷೇಕ ಕೃತಿ,ಬಿ. 1೦853 ಹಸ್ತ ಪ್ರತಿಯನ್ನುಪಯೋಗಿಸಿ ಕರ್ತರು ಪೂಜೆ ಮಾಡಿಸಿದ್ದು ಕೃತಿ, ಬಿ. 1೦85-4 ಹಸ್ತಪ್ರತಿಯನ್ನುಪಯೋಗಿಸಿ ಜಿನ ಸೇನಾಚಾರ್ಯರು ಪೂಜೆ ಮಾಡಿಸಿದ್ದು ಕೃತಿ, ಬಿ. 1೦85-5 ಹಸ್ತ ಪ್ರತಿಯನ್ನುಪಯೋಗಿಸಿ ಡಿಳಿಸುರಿ ತಾಳನ ಗೆದ್ದದ್ದು ಕೃತಿ, ಕೆ. 12ಂಂ-4 ಹಸ್ತಪ್ರತಿಯನ್ನುಪಯೋಗಿಸಿ ಬೆಟ್ಟವರ್ಧನರಾಯ ಚರಿತೆ, ಬಿ. 1ಂ85-6 ಹಸ್ತಪ್ರತಿಯನ್ನುಪಯೋಗಿಸಿ ವಸಂತತಿಲಕ ಚರಿತೆ ಕೃತಿ, ಕೆ. 12ಂಂ-4 ಹಸ್ತಪ್ರತಿಯನ್ನು ಉಪಯೋಗಿಸಿ ಹಿಮಶೀತಳರಾಯನ ಕಥೆ ಕೃತಿ, ಬಿ.548-4 ಹಸ್ತ ಪ್ರತಿಯನ್ನುಪಯೋಗಿಸಿ ಶಾಲಿವಾಹನ ಶ್ರವಣಪೈಕ ಚರಿತೆ ವರ್ಣನೆ ಕೃತಿ, ಬಿ. 548-3 ಹಸ್ತ ಪ್ರತಿಯನ್ನುಪಯೋಗಿಸಿ ವಸಿಷ್ಠ ಬ್ರಾಹ್ಮಣರಿಗೆ ಪಂಚಾಂಗ ಉಪದೇಶ ಮಾಡಿದ್ದು ಕೃತಿ, ಬಿ. 548-7 ಹಸ್ತಪ್ರತಿಯನ್ನುಪಯೋಗಿಸಿ ಆಗಮ ದೋಗಟೆ ಪದ್ಯ ಕೃತಿ, ಕೆ. 121ಂ-4 ಹಸ್ತ ಪ್ರತಿಯನ್ನುಪಯೋಗಿಸಿ ತ್ರಿಪನ್ನ ಕ್ರಿಯೆ ಕರ್ಮಕೃತಿ, ಬಿ. 492-13 ಹಸ್ತಪ್ರತಿಯನ್ನುಪಯೋಗಿಸಿ ಪಾರ್ಶ್ವನಾಥನ ಪಂಚ ಕಲ್ಯಾಣ ಕೃತಿ. ಕೆ. 1373 ಹಸ್ತಪ್ರತಿಯನ್ನುಪಯೋಗಿಸಿ ಸಂಸಾರದ ಸುಖ ಕಷ್ಟ, ಕೆ. 1375.5 ಹಸ್ತಪ್ರತಿಯನ್ನುಪಯೋಗಿಸಿ ಚಂದ್ರಸಾಗರರ ಸ್ವಪ್ನ ಇತ್ಯಾದಿಕೃತಿಗಳನ್ನು ಏಕೈಕ ಹಸ್ತಪ್ರತಿಗಳನ್ನುಪಯೋಗಿಸಿ ಸಂಪಾದಿಸಿದ್ದಾರೆ. ಸುದೀರ್ಘ ಪ್ರಸ್ತಾವನೆ ಈ ಕೃತಿಯ ವೈಶಿಷ್ಟ್ಯವಾಗಿದೆ.

ಎಸ್.ಶಿವಣ್ಣನವರು ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಬಿ.1479 ಸಂಖ್ಯೆಯ ಪತ್ರ,ಕೆ.1253 ನೇ ಸಂಖ್ಯೆಯ ಹಾಗೂ ಓ 1714/19 ನೇ ಸಂಖ್ಯೆಯ ಪತ್ರಗಳನ್ನುಪಯೋಗಿಸಿಕೊಂಡು ಮೂರು ಅಪ್ರಕಟಿತ ಸ್ವರ ವಚನಗಳನ್ನು ಸಂಪಾದಿಸಿ ಕರ್ನಾಟಕ ಲೋಚನ ಪತ್ರಿಕೆಯಲ್ಲಿ( ಸಂ.3, ಸಂ.2) ಪ್ರಕಟಿಸಿದ್ದಾರೆ.ಇಲ್ಲಿಯ ಕ್ರಮಾಂಕ ಬಿ.1167 ( ಹಾಳೆ 45-52)ರ ಕಾಗದ ಪ್ರತಿಯನ್ನು ಆಧರಿಸಿ ತ್ರಿಭುವನ ತಾತನ ಪಗಲ್ಚೋಳ ರಗಳೆಯನ್ನು ಎಸ್.ಶಿವಣ್ಣನವರೇ ಸಂಪಾದಿಸಿ ಪ್ರಕಟಿಸಿದ್ದಾರೆ.

 3೦ ಕಂದಗಳಲ್ಲಿನ ಶಬ್ದ ರತ್ನಾಕರ ಈ ಲಘು ಕೃತಿಯ ವಸ್ತು ಪದಗಳಿಗಿರುವ ನಾನಾರ್ಥಗಳನ್ನು ತಿಳಿಸುವುದೇ ಆಗಿದೆ. ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿಯನ್ನುಪಯೋಗಿಸಿ ಸಂಪಾದಿಸಲಾಗಿದೆ. ಶೃಂಗಾರಮ್ಮ ವಿರಚಿತ ಸಾಂಗತ್ಯ ರೂಪದಲ್ಲಿರುವ ಪದ್ಮಿನಿ ಪರಿಣಯ ಅಪ್ರಕಟಿತ ಕೃತಿಯನ್ನು ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಬ.ಪ್ರತಿ ಕ್ರಮಾಂಕ ಕೆ. 16೦3/2/ಗರಿ-1-7೦ ಓಲೆ ಪ್ರತಿಯನ್ನು ಆಧರಿಸಿ ಸಂಪಾದಿಸಲಾಗಿದೆ. ಈ ಕೃತಿಯ ವಸ್ತು ವೆಂಕಟೇಶ್ವರ ಪದ್ಮಿನಿಯರ ವಿವಾಹ ವರ್ಣನೆಯಾಗಿದೆ.

  ಸರ್ಪಭೂಷಣ ಶಿವಯೋಗಿಗಳ ಕೈವಲ್ಯ ಕಲ್ಪವಲ್ಲರಿ ಕೃತಿಯನ್ನು ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಕ್ರಮಾಂಕ ಬಿ. 147೦/1 ರ ಕಾಗದದ ಪ್ರತಿಯನ್ನು ಆಧರಿಸಿ ಸಂಪಾದಿಸಿದ್ದಾರೆ. ಈ ಕಾಗದದ ಪ್ರತಿಯ ಅಂತ್ಯದಲ್ಲಿಯ ಪುಷ್ಟಿಕೆಯಲ್ಲಿ ಈ ಕೃತಿ ಲಿಖಿತವಾದ ಕಾಲದ ಉಲ್ಲೇಖ ಇರುವುದು ಗಮನೀಯ. 76 ಹಾಡುಗಳನ್ನು ಒಳಗೊಂಡಿದೆ.

ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಏಕೈಕ ಹಸ್ತಪ್ರತಿಯನ್ನು ಆಧರಿಸಿ ಹಂಪನಾ ಅವರು ಸುಮಾರು 15೦೦ ರಲ್ಲಿದ್ದ ಕವಿ ಸಾಳ್ವನಿಂದ ರಚಿತವಾದ 16 ಪರ್ವಗಳನ್ನುಳ್ಳ  ಸಾಳ್ವಭಾರತ ಕೃತಿಯನ್ನು  ಸಂಪಾದಿಸಿದ್ದು ಬೆ.ವಿ.ವಿ.ಯ ಪ್ರಸಾರಾಂಗದಿಂದ 1976 ರಲ್ಲಿ ಪ್ರಕಟಗೊಂಡಿದೆ.

 ಅದೇರೀತಿ ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಏಕೈಕ ಹಸ್ತಪ್ರತಿಯನ್ನು ಆಧರಿಸಿ ಹಂಪನಾ ಅವರು ಸುಮಾರು 18೦೦ ರಲ್ಲಿದ್ದ ಕವಿ ಬೊಮ್ಮಣ್ಣನಿಂದ ರಚಿತವಾದ  ನಾಗಕುಮಾರ ಷಟ್ಪದಿಯ ಕೃತಿಯನ್ನು ಸಂಪಾದಿಸಿದ್ದು ಬೆ.ವಿ.ವಿ.ಯ ಪ್ರಸಾರಾಂಗದಿಂದ 1977 ರಲ್ಲಿ ಪ್ರಕಟಗೊಂಡಿದೆ.

  ಸುವರ್ಣಕರ್ನಾಟಕ ಅಂಗವಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಸರ್ಕಾರ ಒದಗಿಸಿರುವ ಅನುದಾನದಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ತನ್ನ ಹಸ್ತಪ್ರತಿ ವಿಭಾಗದಲ್ಲಿಯ  ಉಪೇಕ್ಷಿತ ಹಾಗೂ ಅಪ್ರಕಟಿತ  ಹಸ್ತಪ್ರತಿಗಳನ್ನು ಗುರುತಿಸಿ, ಅವುಗಳನ್ನು ಸಂಪಾದಿಸಿ ಪ್ರಕಟಿಸುವ ಮಹತ್ತರವಾದ ಕಾರ್ಯವನ್ನು ಪ್ರಾರಂಭಿಸಿರುವುದು ಆಶಾದಾಯಕ ಸಂಗತಿಯಾಗಿದೆ.  ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿರುವ ಅಲಕ್ಷಿತ ಅಪ್ರಕಟಿತ ಕೃತಿಗಳ ಹಸ್ತಪ್ರತಿಗಳನ್ನು ಪ್ರತಿಮಾಡಿಸಿ ಪ್ರಕಟಿಸುವ ಸುವರ್ಣ ಅವಕಾಶವೊಂದನ್ನು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಕನ್ನಡ ಭಾಷಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಕರ್ನಾಟಕ ಸರ್ಕಾರವು ಉದಾರವಾಗಿ ಹಣ ನೀಡಿ ಅವಕಾಶ ಕಲ್ಪಿಸಿಕೊಟ್ಟಿದ್ದಿತು. ಅದರ ಫಲವಾಗಿ ೨೦೧೩-೧೪ ರಲ್ಲಿ  ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೂ ಈ ಯೋಜನೆಯ ಪ್ರಧಾನ ಸಂಪಾದಕರೂ ಆದ ಸಿ.ಬಿ.ಹೊನ್ನುಸಿದ್ಧಾರ್ಥ ಅವರ ಪ್ರಧಾನ ಸಂಪಾದಕತ್ವದಲ್ಲಿ ಕನ್ನಡ ಅಧ್ಯಯನ ಕೇಂದ್ರದ  ಅಧ್ಯಾಪಕರುಗಳು ಹಸ್ತಪ್ರತಿ ವಿಭಾಗದಲ್ಲಿರುವ ಅಲಕ್ಷಿತ ಅಪ್ರಕಟಿತ ಕೃತಿಗಳ ಸಂಪಾದಿಸಿದ್ದು  ಆ ಕೃತಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಪ್ರಸಾರಾಂಗದ ಮೂಲಕ ೨೦೧೪ ರಲ್ಲಿ ಪ್ರಕಟಿಸಲಾಗಿದೆ. ಅವುಗಳೆಂದರೆ  ಕ್ರಿಸ್ತಶಕ 1500 ರಲ್ಲಿದ್ದ ಗುರು ಶಾಂತರಾಮನ ರಾಮನಾಥ ಶತಕ ಮತ್ತು ಇತರ ಪುಸ್ತಕಗಳು, ಉರಿಲಿಂಗ ಪೆದ್ದಯ್ಯನವರ ಕಥೆ, ಬೊಮ್ಮ ಕವಿಯ ವೈದ್ಯಸಾರ ಸಂಗ್ರಹ ಬಸವಶತಕ, ಶಿವಯೋಗಿ ಸೋಮೇಶ ಕವಿಯ ಅರವತ್ತು ಮೂವರ ಸಾಂಗತ್ಯ, 1600 ರ ಅಣ್ಣಾಜಿ ಕವಿಯ ಸೌಂದರ ವಿಳಾಸ, ತಿಳಕೂರ ಪುರದ ಸೋಮದೇವನ ಚತುರಾಚಾರ್ಯ ಪ್ರಬಂಧ, ಬಸವ ಕವಿಯ ಸಿದ್ದಲಿಂಗ ಕಾವ್ಯ (ಕಾಲ 1887), ಪದ್ಮರಾಜ ಕವಿಯ ಪೂಜ್ಯಪಾದ ಚರಿತೆ (ಕಾಲ 1769), ತಿಮ್ಮರಸ ಕವಿಯ ಕ್ಷೇತ್ರ ಗಣಿತ (ಕಾಲ 1700), ಅನಾಮಿಕ ಕವಿಯ ನಿಷ್ಕಲ ಲಿಂಗ ಚಿದಾನಂದ ಲೀಲೆ, ಅನಾಮಿಕ ಕವಿಯ ಸುಜ್ಞಾನ ಬೋಧೆ, ಅನಾಮಧೇಯ ಕವಿಯ ಷಟ್ಥಲವಲ್ಲಭ, ನನ್ನಯ್ಯ ಚಾರಿತ್ರ, ರಾಮೇಂದ್ರ ಕವಿಯ ಸೌಂದರ್ಯ ಕಥಾ ರತ್ನ, ಗಂಗೋತ್ಸವ ರಗಳೆ, ತತ್ವಾಭಿನಯ ನಿಘಂಟು, ತ್ರಿಭುವನ ಮೋಹಿನಿ ಕಾವ್ಯ, ಪ್ರಹ್ಲಾದ ಚರಿತೆ, ಉದ್ದರಣೆ ಪಟಲ, ನೀಲಕ್ರೀವ ಸ್ಮರಣೆಯ ಶೃಂಗಾರ ನಾಂದ್ಯ, ಆಚರಣೆ ಸಬಂಧ ಷಟ್ಪದಿ, ವಿಕ್ರಮ ವಿಳಾಸ ಸೊಬಗಿನ ಸೋನೆ, ಸುಕುಮಾರ ಚರಿತೆ, ಮೋಕ್ಷ ಚಿಂತಾರತ್ನ ಇತ್ಯಾದಿ ಅಲಕ್ಷಿತ ಕೃತಿಗಳು.

      ಗ್ರಂಥ ಸಂಪಾದನೆಗೆ ಸಂಬಂಧಿಸಿದ  ಈ ವಿಭಾಗದ ಮತ್ತೊಂದು ಮಹತ್ತರವಾದ ಕೊಡುಗೆ ಎಂದರೆ ಗ್ರಂಥ ಸಂಪಾದನ ಕಾರ್ಯ ಕೈಗೊಳ್ಳುವ ಇತರರಿಗೆ ಹಸ್ತಪ್ರತಿಗಳನ್ನು ಒದಗಿಸಿರುವುದು.  ಬೇರೆಡೆಯ ಸಂಪಾದಕರು ಇಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿರುವ ಕೃತಿಗಳ ಪ್ರಸ್ತಾವನೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಇಲ್ಲಿಂದ ಹಸ್ತಪ್ರತಿಗಳನ್ನು  ಪಡೆದುಕೊಂಡ ಬಗೆಗೆ ಕೃತಜ್ಞತಾಪೂರ್ವಕವಾಗಿ ಸ್ಮರಿಸಿರುವುದನ್ನು ಬಹುಮಟ್ಟಿಗೆ ಕಾಣಬಹುದಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಹಸ್ತಪ್ರತಿ ಭಂಡಾರದ ನೆರೆವಿನಿಂದ, ಗ್ರಂಥ ಸಂಪಾದನೆಯ ಹಾಗೂ ಕೃತಿ ಪ್ರಕಟಣೆಯ ಕಾರ‍್ಯ ನಡೆದಿದೆ. ಇಲ್ಲಿಂದ ಹಸ್ತಪ್ರತಿಗಳನ್ನು ಎರವಲಾಗಿ ಪಡೆದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಇದುವರೆಗೆ  ಸುಮಾರು ಮೂವತ್ತಕ್ಕೂ ಮೇಲ್ಪಟ್ಟು ಕೃತಿಗಳನ್ನು  ಪ್ರಕಟಿಸಿದೆ.  ಆದರೆ   ಮೈ.ವಿ.ವಿ.ಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ವಿಭಾಗಗಳಲ್ಲಿದ್ದ ಹಾಗೆ ಹಸ್ತಪ್ರತಿ  ತಜ್ಞರ ಪರಂಪರೆ ಬೆ.ವಿ.ವಿ.ಯ ಹಸ್ತಪ್ರತಿ ವಿಭಾಗದಲ್ಲಿ ದೊರೆಯದಿದ್ದದ್ದು ಬೆಳವಣಿಗೆಯ ದೃಷ್ಟಿಯಿಂದ ಒಂದು ಕೊರತೆಯೆಂದೇ ಹೇಳ ಬಹುದು. ಇಲ್ಲಿಯ ಹಸ್ತಪ್ರತಿ ವಿಭಾಗವು ಎಸ್. ಶಿವಣ್ಣನವರ  ನಿವೃತ್ತಿಯ ನಂತರ ಹಸ್ತಪ್ರತಿ ವಿಷಯದಲ್ಲಿ ಬಲ್ಲಿದರಾದ ತಜ್ಞರ ಕೊರತೆಯಿಂದಾಗಿ ನಿರೀಕ್ಷಿತ ಬೆಳವಣಿಗೆಯನ್ನು ಸಾಧಿಸಿಲ್ಲ. ಕೆಲವು ವರ್ಷಗಳವರೆಗೆ ಎಸ್.ವಿ.ಸೋಮಶೇಖರ್ ಅವರು ಇಲ್ಲಿಯ ಹಸ್ತಪ್ರತಿ ವಿಭಾಗವನ್ನು ನೋಡಿ ಕೊಳ್ಳುತ್ತಿದ್ದರು. ಸದ್ಯಕ್ಕೆ ಇಲ್ಲಿಯ ಹಸ್ತಪ್ರತಿ ವಿಭಾಗವು ಕಾರ್ಯನಿರ್ವಹಿಸುತ್ತಿದೆಯೆಲ್ಲಾ  ಎಂದು ಆಸಕ್ತರು ಸಮಾಧಾನ ಪಟ್ಟುಕೊಳ್ಳ ಬಹುದಾಗಿದ್ದರೂ ಇತ್ತೀಚೆಗೆ ಅವರು ಬಿಟ್ಟು ಹೋಗಿದ್ದು ಸದ್ಯಕ್ಕೆ ಹಸ್ತಪ್ರತಿ ವಿಭಾಗವನ್ನು ನೋಡಿಕೊಳ್ಳುವವರು ಯಾರೂ ಇಲ್ಲದಿರುವದು ಬೇಸರದ ಸಂಗತಿಯಾಗಿದೆ. ಕನ್ನಡ ಶಾಸ್ತ್ರೀಯ ಸ್ಥಾನಮಾನದ ಹಿನ್ನೆಲೆಯಲ್ಲಿ ನಮ್ಮ ಪರಂಪರೆಯ ಪ್ರತೀಕವಾದ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಗೆ ಇನ್ನಿಲ್ಲದ ಹೆಚ್ಚಿನ ಆದ್ಯತೆ ಸಿಗುತ್ತಿರುವಾಗ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗವು  ಮೇಲ್ವಿಚಾರಣೆ, ಸಂರಕ್ಷಣೆ ಮತ್ತು ಪ್ರಕಟಣೆಯ ಕೊರತೆಯಿಂದ  ಅವಸಾನದತ್ತ ಸಾಗುತ್ತಿರುವುದು ಆತಂಕಕಾರಿಯಾಗಿದೆ.

     ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಗಳ ಬಗೆಗಿನ ಸಾಂಸ್ಕೃತಿಕ ತಿಳಿವಳಿಕೆಗಳನ್ನು ಜಾಗೃತಗೊಳಿಸಿ ನಮ್ಮ ಸಂದರ್ಭಕ್ಕೆ ಅಳವಡಿಸಿಕೊಳ್ಳುವ ಕಾರ್ಯ ಆಗಬೇಕಾದರೆ ಇಂದು ಪಾರಂಪರಿಕ ಸಂರಕ್ಷಣಾ ಕ್ರಮಗಳಿಗಿಂತಲೂ ಮಾಹಿತಿತಂತ್ರಜ್ಞಾನದ ಮೂಲಕ ಸಮರ್ಪಕವಾಗಿ ಹಾಗೂ ಬಹುಕಾಲದ ಪ್ರಯೋಜನಕ್ಕಾಗಿ ಡಿಜಿಟಲ್ ರೂಪದಲ್ಲಿ ಹಸ್ತಪ್ರತಿಗಳನ್ನು ಸಂಗ್ರಹಿಸುವ ಕಾರ್ಯ ಕೈಗೊಳ್ಳಬೇಕಾಗಿದೆ. ಇಂದು ಎಲ್ಲಾ ಶೈಕ್ಷಣಿಕ ಶಿಸ್ತುಗಳು ವೈಜ್ಞಾನಿಕ ಸ್ವರೂಪ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಹಸ್ತಪ್ರತಿಗಳಿಗೂ ಆಧುನಿಕ ಕಾಯಕಲ್ಪವನ್ನು ಕೊಡಬೇಕಾಗಿದೆ. ಹಸ್ತಪ್ರತಿಗಳ ಪರಂಪರಾಗತ ತಿಳಿವಳಿಕೆ ಮತ್ತು ಅಧ್ಯಯನಗಳ ಮುಂದುವರಿಕೆಯಾಗಿ ಆಧುನಿಕ ವಿಧಿವಿಧಾನಗಳನ್ನು ಅನ್ವಯಿಸಿಕೊಳ್ಳುವುದರ ಮೂಲಕ ಹೊಸ ದೃಷ್ಟಿಕೋನವನ್ನು ಕಂಡು ಕೊಳ್ಳಬೇಕಾಗಿದೆ.ಇಲ್ಲಿಯ ಹಸ್ತಪ್ರತಿ ವಿಭಾಗವು ಆಸಕ್ತ ವಿದ್ವಾಂಸರ ಮೂಲಕ ಕಾರ್ಯೋನ್ಮುಖಗೊಳ್ಳ ಬೇಕಾಗಿದೆ. ಕನ್ನಡ ನಾಡಿನ ಸರ್ಕಾರಿ ಹಸ್ತಪ್ರತಿ ಭಂಡಾರಗಳ ಸಾಲಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿರುವ ಇಲ್ಲಿಯ ಹಸ್ತಪ್ರತಿ ವಿಭಾಗವು ಆಸಕ್ತ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಅಧ್ಯಯನಕಾರರಿಗೆ, ಸಂಶೋಧಕರಿಗೆ ಇಂದಿಗೂ ತವನಿಧಿಯಾಗಿದೆ.

 

              ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯದ ವೈಶಿಷ್ಟ್ಯಗಳು                                                          ಡಾ. ಸಿ.ನಾಗಭೂಷಣ    ...