ಗುರುವಾರ, ಅಕ್ಟೋಬರ್ 16, 2025

  

ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ ಮತ್ತು ಅಧ್ಯಯನ ವಿಧಾನದ ಇತಿಹಾಸದ ತಾತ್ವಿಕ ನಿಲುವುಗಳು

                          ಡಾ.ಸಿ.ನಾಗಭೂಷಣ

 

   ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಗೆ ಸಾಮಾನ್ಯವಾದ ಸ್ವರೂಪ ಇರುವುದು ಎಲ್ಲರೂ ತಿಳಿದಿರತಕ್ಕ ಸಂಗತಿಯಾಗಿದೆ. ಕಾಲಾನುಕ್ರಮದಲ್ಲಿ ಪ್ರಾರಂಭ, ಪ್ರವೃತ್ತಿ,ಪ್ರಭಾವ, ವಿಕಾಸ ಇವು ಸಾಹಿತ್ಯ ಚರಿತ್ರೆಯ ಸಾಮಾನ್ಯ ರೂಪವನ್ನು ಸಹಜವಾಗಿ ಸೂಚಿಸುತ್ತವೆ. ಆಯಾ ಭಾಷೆಯ ಕಾಲದೇಶ ಪರಿಸ್ಥಿತಿ,ರಾಜಕೀಯ ಚರಿತ್ರೆ, ಧಾರ್ಮಿಕ ಸಾಮಾಜಿಕ ಜೀವನ, ಸಾಹಿತ್ಯ ಪರಿಸರ ಇವುಗಳಿಂದಾಗಿ ಆಯಾ ಭಾಷೆಯ ಸಾಹಿತ್ಯ ಚರಿತ್ರೆಗಳು ತಮ್ಮದೇ ಆದ ವಿಶಿಷ್ಟ ಸ್ವರೂಪವನ್ನು ಪಡೆಯುತ್ತವೆ. ಭಾರತೀಯ ಭಾಷೆಗಳಲ್ಲಿ ರಚಿತವಾದ ಭಿನ್ನ ಭಿನ್ನ ಸಾಹಿತ್ಯಗಳಲ್ಲಿ ಭಾರತೀಯ ಜೀವನ ಮತ್ತು ಸಂಸ್ಕೃತಿಗಳ ವೈವಿಧ್ಯಮಯವಾದ ಪರಂಪರೆಯ ಪ್ರಭಾವವು ಆಯಾ ಭಾಷೆಗಳಿಗೆ ವಿಶಿಷ್ಟವಾದ ಸೋಪಜ್ಞತೆಯಲ್ಲಿ ಮೂಡಿರುತ್ತವೆ.

     ಕನ್ನಡನಾಡಿನ  ಸಾಹಿತ್ಯ ಚರಿತ್ರೆಗೆ ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಗಿರುವ ಸಾಮಾನ್ಯ ಸ್ವರೂಪವಿದೆ. ಜೊತೆಗೆ ಭಾರತೀಯ ಸಾಹಿತ್ಯದ ಪ್ರಭಾವ ಮುದ್ರೆಯಿದೆ. ತನ್ನದೇ ಆದ ವಿಶಿಷ್ಟ ಸ್ವರೂಪವೂ ಇದೆ. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಸುದೀರ್ಘವಾದ ಪರಂಪರೆಯಿದೆ, ಸಾವಿರಾರು ಕವಿಗಳ ವೈವಿಧ್ಯಪೂರ್ಣವಾದ ಕೊಡುಗೆ ಇದೆ.  ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಸಮಗ್ರ ದರ್ಶನವಾಗಬೇಕಾದರೆ ಈ ಎಲ್ಲ ಮಗ್ಗುಲಿನತ್ತ ಕ್ಷ-ಕಿರಣವನ್ನು ಬೀರಿ ಬಿಡಿಯಾಗಿ ಇಡಿಯಾಗಿ ಮಾತಿನಲ್ಲಿ ಮೂಡಿಸಬೇಕಾಗುತ್ತದೆ.  ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪವು  ಪ್ರಾರಂಭದಿಂದ ಉಪಲಬ್ಧವಾದ ಎಲ್ಲ ಸಾಮಗ್ರಿಯನ್ನು ಬಳಸಿಕೊಂಡು ಚಾರಿತ್ರಿಕವಾಗಿ ಅದರ ಕೂಲಂಕಷವಾದ ವಿವೇಚನೆಮಾಡಿ ವಿಮರ್ಶಾತ್ಮಕ ದೃಷ್ಟಿಯಿಂದ ಅದನ್ನು ತೂಗಿ ಬೆಲೆ ಕಟ್ಟುವುದಾಗಿರುತ್ತದೆ.  ಕನ್ನಡ ಸಾಹಿತ್ಯದ ಪ್ರೇರಣೆ, ಪ್ರಭಾವ-ಪ್ರವೃತ್ತಿಗಳನ್ನು ಗುರುತಿಸುವಾಗ, ಕವಿಗಳ ಕಾವ್ಯಗಳ ನೆಲೆಬೆಲೆಗಳನ್ನು ವಿವರಿಸುವಾಗ ಸಹಜವಾಗಿ ಸಾಹಿತ್ಯ ಚರಿತ್ರೆಯಲ್ಲಿ ವಿಮರ್ಶಾತ್ಮಕ ದೃಷ್ಟಿಕೋನವು ಪ್ರಮುಖ ಎಂದೆನಿಸುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯ ನಿರ್ಮಿತಿಯು  ಯಾವುದೇ ಬಗೆಯ ಅತಿರಿಕ್ತ ಅಭಿಮಾನ-ಅಂಧಾನುಕರಣೆಯ ಬರೆವಣಿಗೆಯಿಂದ ದೂರ ಉಳಿಯುವುದು ಬಹುಮುಖ್ಯ.  ಕಾಲಾನುಕ್ರಮದಲ್ಲಿ ವಿವೇಚನೆಯ ಹಿನ್ನೆಲೆಯಲ್ಲಿ ಕೆಲವು ಕಾಲಾವಧಿಗಳನ್ನು ಮಾಡಿಕೊಂಡು ಸಾಹಿತ್ಯ ಚರಿತ್ರೆಯ ವಿವೇಚನೆಯನ್ನು ಮಾಡಿರುವುದನ್ನು ಕಾಣಬಹುದಾಗಿದೆ.  ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಿಂದಿನಿಂದ ಇಂದಿನವರೆಗೆ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯಗಳ ಸಮಗ್ರ ನಿರೂಪಣೆಯ ವಿಶ್ಲೇಷಣೆಯ ಸಂಕ್ಷಿಪ್ತವಾಗಿ ಮತ್ತು ಕೆಲವಡೆ ಸಾಂಸ್ಥಿಕ ಮಟ್ಟದಲ್ಲಿ ವಿಸ್ತೃತವಾಗಿ ವಿವರಿಸಿರುವುದನ್ನು ಕಾಣಬಹುದು.  ಆಧುನಿಕ ಕಾಲದ ಆರಂಭದಲ್ಲಿ ಕ್ರೆೈಸ್ತಮಿಶನರಿ ವಿದ್ವಾಂಸರು ಅಂದು ಅವರಿಗೆ ದೊರೆತ ಸಾಮಗ್ರಿಯನ್ನು ಉಪಯೋಗಿಸಿ ಕನ್ನಡ ಸಾಹಿತ್ಯದ ಪರಿಚಯವನ್ನು ಇಂಗ್ಲಿಷಿನಲ್ಲಿ ಸಂಕ್ಷಿಪ್ತವಾಗಿ ಮಾಡಿಕೊಟ್ಟರು.  ಅವುಗಳನ್ನು ಚರಿತ್ರೆಯೆಂದಾಗಲಿ ಸಮಿಕ್ಷೆಯೆಂದಾಗಲಿ ಕರೆಯುವುದು ಸೂಕ್ತವಾಗದು.  ಆ ಅವಧಿಯಲ್ಲಿ ಕ್ರೆೈಸ್ತ ಮಿಷನರಿಗಳಿಗೆ ಲಭ್ಯವಿದ್ದ  ಸಾಮಗ್ರಿಯೂ ತೀರ ಸ್ವಲ್ಪವಾಗಿತ್ತು.  ನಂತರದಲ್ಲಿ ಆರ್. ನರಸಿಂಹಾಚಾರ್ ಅವರ ‘ಕರ್ಣಾಟಕ ಕವಿಚರಿತೆ’ ಪ್ರಥಮ ಸಂಪುಟ ೧೯೦೭ರಲ್ಲಿ ಪ್ರಕಟವಾಯಿತು.  ದ್ವಿತೀಯ, ತೃತೀಯ ಸಂಪುಟಗಳು ೧೯೧೯, ೧೯೨೯ರಲ್ಲಿ ಪ್ರಕಟವಾದುವು.  ಬಹು ದೊಡ್ಡ ಪ್ರಮಾಣದ ಮೇಲೆ ‘ಕವಿಚರಿತೆ’ ಎಂಬುದು ಈ ಮೂರು ಸಂಪುಟಗಳಲ್ಲಿ ಸಂಕಲನಗೊಂಡು  ಕನ್ನಡಿಗರಿಗೆ ಉಪಯುಕ್ತತೆಯನ್ನು ಮಾಡಿತು.  ಈ ಗ್ರಂಥಕರ್ತರ ಸಂಶೋಧನೆ - ಪರಿಶ್ರಮಗಳು ಸಾರ್ಥಕವಾದುವು.  ಇದರಲ್ಲಿ ಕಾಲಾನುಕ್ರಮದಲ್ಲಿ ಕನ್ನಡ ಕವಿಗಳ ಬಗ್ಗೆ ಅಂದಿನವರೆಗೆ ತಿಳಿದೆಲ್ಲ ವಿಷಯಗಳು ಅಡಕವಾಗಿವೆ.  ಒಂದೊಂದು ಶತಮಾನದಲ್ಲಿ ಆಗಿಹೋದ ಕವಿಗಳ ಕಾಲ, ಸ್ಥಳ, ಮತ, ಕೃತಿವಿಷಯಸಾರ, ಕೃತಿಗಳಿಂದ ಕೆಲವು ಉದ್ಧೃತಿಗಳು ಈ ಕ್ರಮದಲ್ಲಿ ‘ಕವಿಚರಿತೆ’ ಮೈದಾಳಿದೆ.  ಅಲ್ಲಲ್ಲಿ ಕವಿತಾಯೋಗ್ಯತೆ, ಶೈಲಿ ಇವುಗಳ ಬಗ್ಗೆ ಸಾಮಾನ್ಯ ಪ್ರಶಂಸೆ  ಸಂಕ್ಷಿಪ್ತವಾಗಿ ಬಂದಿದೆ.  ಇಷ್ಟು ವಿಸ್ತಾರವಾಗಿ ಕನ್ನಡ ಸಾಹಿತ್ಯದ ಫಸಲನ್ನು ಒದಗಿಸಿಕೊಟ್ಟುದಕ್ಕಾಗಿ ಕನ್ನಡಿಗರು ಕವಿ ಚರಿತೆಕಾರರಿಗೆ ಚಿರಋಣಿಗಳಾಗಿದ್ದಾರೆ.  ಆದರೆ ಈ ಕವಿಚರಿತೆಯು ಪೂರ್ಣ ಅರ್ಥದಲ್ಲಿ ಸಾಹಿತ್ಯ ಸಮಿಕ್ಷೆಯೂ ಆಗಲಿಲ್ಲ, ಸಾಹಿತ್ಯ ಚರಿತ್ರೆಯ ಉದೇಶವೂ ಆಗಿರಲಿಲ್ಲ. ಆದರೆ ನಂತರದ ವೈಯಕ್ತಿಕ ಹಾಗೂ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ ನಿರ್ಮಾಣಕ್ಕೆ ಸೂಕ್ತವಾದ ವೇದಿಕೆಯನ್ನು ಒದಗಿಸಿತು. ಅದರಲ್ಲಿ ಬಂದಿರುವ ಮತ್ತು ಆಮೇಲೆ ದೊರಕಿದ ಸಾಮಗ್ರಿಯನ್ನು ಉಪಯೋಗಿಸಿ ಸಂಕ್ಷಿಪ್ತ ವಿಸ್ತೃತ, ಜನಪ್ರಿಯ - ಪ್ರೌಢ ಹೀಗೆ ಸಾಹಿತ್ಯ ಚರಿತ್ರೆಗಳು ಕನ್ನಡದಲ್ಲಿ ಇಲ್ಲಿಯವರೆಗೂ ಪ್ರಕಟವಾಗಿವೆ.  ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಕುರಿತು ಕೆಲವು ಲೇಖನಗಳೂ ಪ್ರಕಟವಾಗಿವೆ.  ಇಷ್ಟಾದರೂ ಉಪಲಬ್ಧ ಎಲ್ಲಾ ಸಾಮಗ್ರಿಯನ್ನು ಎತ್ತಿಕೊಂಡು ಅದನ್ನು ಸಾದ್ಯಂತವಾಗಿ ವಿಶ್ಲೇಷಿಸಿ ವಿಮರ್ಶಾತ್ಮಕ ದೃಷ್ಟಿಯಿಂದ ಪರೀಕ್ಷಿಸಿ ಅವಶ್ಯವಿದ್ದ ವಿಸ್ತಾರವನ್ನು ಪಡೆದ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಅಗತ್ಯವು ಇಂದಿಗೂ ಉಳಿದುಕೊಂಡು ಬಂದಿದೆ.  ಈ ಹಿನ್ನೆಲೆಯಲ್ಲಿ ನಂತರದ ಕಾಲದಲ್ಲಿಯೂ ವಿವಿಧ ಕನ್ನಡ ಸಾಹಿತ್ಯ ಚರಿತ್ರೆಗಳು ಅಧ್ಯಯನ ಕಾರರ ಅನುಕೂಲಕ್ಕಾಗಿ ರಚನೆಯಾದವು.

    ಸಾಹಿತ್ಯ ಚರಿತ್ರೆಯ ಸ್ವರೂಪ ಮತ್ತು ಸಮಸ್ಯೆಗಳನ್ನು ಕುರಿತು ಕೆಲಮಟ್ಟಿನ ಚಿಂತನೆ ಈವರೆಗೆ ನಡೆದಿದೆ.  ಈ ಬಗ್ಗೆ ಬರೆದಿರುವ ತಮ್ಮ ಲೇಖನದಲ್ಲಿ ಡಿ.ಎಲ್. ನರಸಿಂಹಾಚಾರ‍್ಯರು ಆಮೂಲಾಗ್ರವಾಗಿ ಒಂದು ಭಾಷೆಯ ಸಾಹಿತ್ಯರಾಶಿಯ ಅಭ್ಯಾಸವನ್ನು ಕೈಕೊಳ್ಳುವವರು ಹಿಡಿಯಬೇಕಾದ ಕ್ರಮವನ್ನು ಹೀಗೆ ವಿವರಿಸಿದ್ದಾರೆ:  ‘ಆ ಸಾಹಿತ್ಯ ಹೇಗೆ ಆರಂಭವಾಗಿ ಕಾಲಕಾಲಕ್ಕೆ ಬೆಳೆದು ಬಂದಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕು.  ಕಾಲಧರ್ಮಕ್ಕನುಗುಣವಾಗಿ ಅದರಲ್ಲಿ ಆಗಿರುವ ವ್ಯತ್ಯಾಸಗಳು, ಅವಕ್ಕೆ ಕಾರಣಗಳು, ಅವುಗಳಿಂದ ಸಾಹಿತ್ಯಕಲೆಗೆ ಆಗಿರುವ ಪ್ರಯೋಜನಗಳು ಮುಂತಾದ ಅನೇಕ ವಿಷಯಗಳು ವಿಚಾರಕ್ಕೆ ಒಳಪಡುತ್ತವೆ.  ಸಾಹಿತ್ಯವನ್ನು ಸೃಷ್ಟಿಸಿರುವ ಕವಿಗಳ ಕಾಲ ಮತ್ತು ಅವರ ಜೀವನಕ್ಕೆ ಸಂಬಂಧಿಸಿದ ಸಂಗತಿಗಳು, ಅವರಿಂದ ನಿರ್ಮಿತವಾಗಿರುವ ಗ್ರಂಥಗಳ ಕಾಲ ಮತ್ತು ಅವು ರಚಿತವಾದ ಸಂದರ್ಭ ಸನ್ನಿವೇಶಗಳು ಇವುಗಳ ಪರಿಜ್ಞಾನ ಸಾಹಿತ್ಯ ಚರಿತ್ರೆಗೆ ಮೂಲಾಧಾರ.  ಇವು ಎಷ್ಟೆಷ್ಟು ಖಚಿತವಾಗಿ ತಿಳಿದು ಬರುತ್ತವೆಯೋ ಅಷ್ಟಷ್ಟು ಸಮರ್ಪಕವಾಗಿ ಸಾಹಿತ್ಯದ ಚರಿತ್ರೆಯನ್ನು ಬರೆಯಲು ಸಾಧ್ಯವಾಗುತ್ತದೆ.’ ಸಾಹಿತ್ಯ ಚರಿತ್ರೆಕಾರರು ಸಾಹಿತ್ಯ ಚರಿತ್ರೆಯಲ್ಲಿ  ಪ್ರಮುಖವಾಗಿ ಆಲೋಚಿಸ ಬೇಕಾದ ವಿಷಯಗಳಾದ, ಕವಿಗಳ ಜೀವನ ಚರಿತ್ರೆ,ಅವರ ಮನಸ್ಸಿನ ಮೇಲೆ ಆಗಿರುವ ನಾನಾ ಪ್ರಭಾವಗಳ ಮಹಿಮೆ, ಅವರ ಕೃತಿಗಳಿಗೆ ಪ್ರೇರಕವಾದ ಸಂದರ್ಭಗಳ ಪರಿಚಯ, ಧಾರ್ಮಿಕ ಒಲವು, ಸಮಕಾಲೀನ ಸಾಮಾಜಿಕ ಪರಿಸ್ಥಿತಿ ಇತ್ಯಾದಿ ಅಂಶಗಳ ಬಗೆಗೆ ಹೆಚ್ಚಿನ ಒಲವನ್ನು ವ್ಯಕ್ತಪಡಿಸಬೇಕು. ಸಾಹಿತ್ಯ ಚರಿತ್ರೆಯನ್ನು ಬರೆಯಲು ತೊಡಗಿದವನಿಗೆ ಕೆಲವು ಸಮಸ್ಯೆಗಳು ಉದ್ಭವಿಸುವುದು ಸಹಜ. ಸಾಹಿತ್ಯ ಚರಿತ್ರೆಕಾರ ಎಷ್ಟೇ ವ್ಯುತ್ಪತ್ತಿ ಜ್ಞಾನವುಳ್ಳವನಾದರೂ ಸಾಹಿತ್ಯ ಚರಿತ್ರೆಯ ನಿರ್ಮಿತಿಯಲ್ಲಿ ತನ್ನ ಕಾಲದಲ್ಲಿ ಲಭ್ಯವಿರುವ ಸಾಮಗ್ರಿಯನ್ನು ಅವಲಂಬಿಸುವುದು ಅನಿವಾರ್ಯ. ಒಂದು ವೇಳೆ ಸಾಮಗ್ರಿಯ ಕೊರತೆ ಉಂಟಾದಷ್ಟೊ ಆತನ ಸಾಹಿತ್ಯ ಚರಿತ್ರೆಗೂ ಕೊರತೆ ಉಂಟಾಗುತ್ತದೆ. ಮೂಲ ಸಾಮಗ್ರಿಯ ಅಭಾವದಿಂದಾಗಿ ಸಾಹಿತ್ಯ ಚರಿತ್ರೆಕಾರ ಕೂಡ ನಿರಾಶನಾಗಿರ ಬೇಕಾದ ಸಂದರ್ಭವಿರುತ್ತದೆ.

     ಕವಿಗಳು ತಮ್ಮ ಸುತ್ತಲಿನವರಿಗೆ ಬೇಕಾದ ವಿಚಾರಗಳನ್ನು ಮಾತ್ರ ಹೇಳದೆ, ತಾವು ಕಂಡ ಬದುಕನ್ನೂ ಹೇಳಿದ ಸಂದರ್ಭದಲ್ಲಿ ಕೃತಿ, ಧರ್ಮ ರಾಜಾಶ್ರಯಗಳ ಮಿತಿಯನ್ನು ದಾಟಿ ಬೆಳೆಯುತ್ತದೆ. ಹೀಗೆ ಬೆಳೆದ ಕೃತಿಗಳ ಆ ಯುಗ ಜೀವನದ ಕನ್ನಡಿಗಳೂ ಆಗಿ ನಮಗೆ ಬೇಕಾದ ಕೃತಿಗಳಾಗುತ್ತವೆ. ಈ ಬೆಳವಣಿಗೆಯನ್ನು ಗುರುತಿಸುವುದು, ಕವಿ ಆರಿಸಿಕೊಂಡ ವಸ್ತು, ವಿಧಾನಗಳೆರಡರ ಹಿಂದೆಯೂ ಸಮಕಾಲೀನ ಸಂದರ್ಭದ ಒತ್ತಡಗಳು ಇರುತ್ತವೆ ಎಂಬುದನ್ನು ಶೋಧಿಸುವುದು ಸಾಹಿತ್ಯ ಚರಿತ್ರೆಯ ಕೆಲಸವಾಗುತ್ತದೆ. ಸಾಹಿತ್ಯ ಕೇವಲ ಕಾಲಕಳೆಯುವ ಸಾಧನವೆಂದೋ, ಧರ್ಮವಾಹಕವೆಂದೋ ತಿಳಿದು ಬದುಕುವ ಮನಸ್ಸುಗಳಿಗೆ ಸಾಹಿತ್ಯವೆಂದರೆ ಬದುಕಿನ ಚಟುವಟಿಕೆಗಳನ್ನು ಕಲಾತ್ಮಕವಾಗಿ ಸೆರೆಹಿಡಿಯುವ ಕೆಲಸ ಕೂಡ ಎಂಬುದನ್ನು ತೋರಿಸುವುದು ಸಾಹಿತ್ಯ ಚರಿತ್ರೆಯ ಗುರಿಯಾಗುತ್ತದೆ. ಕಾವ್ಯ ರಚಿಸುವ ಕವಿಯೂ ಕೂಡ ಸಮಾಜ ಜೀವಿಯಾದ್ದರಿಂದ ಅವನು ಎಲ್ಲಿಯೋ ದಂತಗೋಪುರದಲ್ಲಿ ಕುಳಿತು ತನ್ನ ಅಲೌಕಿಕ ಶಕ್ತಿಯಿಂದ ಕಾವ್ಯ ಬರೆಯುವುದಿಲ್ಲ, ಅವನೂ ಕೂಡ ಎಲ್ಲ ಮನುಷ್ಯರಂತೆ ಅವನು ಬದುಕಿದ ಪರಿಸರ, ಗುಂಪುಗಳ ಗುಣದೋಷಗಳನ್ನು ಹೊತ್ತುಕೊಂಡೇ ಆ ಚೌಕಟ್ಟಿನಲ್ಲೇ ಕಾವ್ಯಕಟ್ಟುವ ಕೆಲಸ ಮಾಡಿದ್ದಾನೆ. ಹಾಗೆ ಮಾಡುವಾಗ ಅವನು ತನ್ನ ಕಾಲದ ಜೀವನದ ಸಂಘರ್ಷವನ್ನು ಕಣ್ಣು ಬಿಟ್ಟು ನೋಡಿದ್ದಾನೆಯೇ, ಇಲ್ಲವೆ ಕೇವಲ ಶಬ್ದಗಳ ನಡುವೆ ಹಳೆಯ ಸಾಮಗ್ರಿಯೊಂದಿಗೆ ಕಸರತ್ತು ಮಾಡಿದ್ದಾನೆಯೇ ಎಂಬುದರ ಪರಿಶೀಲನೆ ಸಾಹಿತ್ಯ ಚರಿತ್ರೆಯ ಮೌಲ್ಯವನ್ನು ಹೆಚ್ಚಿಸುತ್ತದೆನ್ನಬಹುದು. ಸಾಹಿತ್ಯ ಚರಿತ್ರೆಕಾರ ಸಾಹಿತ್ಯದ ಬೆಳವಣಿಗೆಯ ಹಿಂದೆ ಕೆಲಸಮಾಡಿರುವ ಸಮಾಜದ ತುಡಿತಗಳನ್ನೂ ತರತಮಗಳ ಸಂಘರ್ಷವನ್ನೂ ಅರ್ಥಮಾಡಿಕೊಂಡಾಗ ಆಯಾ ಕಾಲದ ಕೃತಿಗಳ ಅಂತರಂಗದ ದರ್ಶನ ಸಾಧ್ಯವಾಗುತ್ತದೆ. ಸಾಹಿತ್ಯ ಕೃತಿಯೂ ಕೂಡ ಮನುಷ್ಯನ ಬೇರೆಲ್ಲ ಸೃಷ್ಟಿಗಳಂತೆಯೇ ಆದ್ದರಿಂದ, ಅದು ಅವನ ಬೆಳವಣಿಗೆಯಲ್ಲಿ ವಹಿಸಿದ ಪಾತ್ರದ ಮೇಲೆಯೇ ಅದರ ಬೆಲೆ ನಿರ್ಧರಿತವಾಗಬೇಕಾಗುತ್ತದೆ. ಚರಿತ್ರಕಾರ ತನಗೆ ದೊರೆತ ಮಾಹಿತಿಗಳಿಂದ ಇತಿಹಾಸವನ್ನು ರಚಿಸುವಂತೆ ಸಾಹಿತ್ಯ ಚರಿತ್ರಕಾರನೂ ಸಾಹಿತ್ಯ ಚರಿತ್ರೆಯ ರಚನೆಗೆ ಕಾವ್ಯದ ಅಂತರಂಗವನ್ನು ಕರೆದು ಅನಾವರಣಗೊಳಿಸುವುದು ಅವಶ್ಯಕ. ಇದಕ್ಕೆ ಯಾವುದೇ ಬಗೆಯ ಮುಜುಗರ ಪಡದೆ ಚರಿತ್ರೆಯ ಕಟು ಸತ್ಯದ ನೆರವೊಂದನ್ನೇ ಕೇಳಬೇಕಾಗುತ್ತದೆ. ( ಸಿ.ವೀರಣ್ಣ, ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ, ಪ್ರವೇಶ, ಪು.೧೪) ಇತ್ತೀಚಿಗೆ  ಕನ್ನಡ ಸಾಹಿತ್ಯ ಚರಿತ್ರೆಯ ಬರವಣಿಗೆಯಲ್ಲಿ ವಸ್ತುನಿಷ್ಠ ಶೋಧನೆಗೆ ತೊಡಗಬೇಕೆನ್ನುವ ಆಶಯದಿಂದಲೇ ಸಾಹಿತ್ಯದ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಆದ ಬದಲಾವಣೆಗಳಿಗೆ ವ್ಯಕ್ತಿಗಳ ಇಷ್ಟಾನಿಷ್ಟಗಳನ್ನು ಮೀರಿದ, ಸಾಮಾಜಿಕ ಪರಿಸರದ ಪ್ರಭಾವವೇ ಕಾರಣವೆಂಬುದನ್ನು ಕೃತಿಗಳು ಮತ್ತು ಇತಿಹಾಸದ ಪರಸ್ಪರ ಸಂಬಂಧದ ಮೂಲಕವೇ ಗುರುತಿಸುವ ನಂಬಿಕೆ ಇತ್ಯಾದಿ ಹೊಸನೆಲೆಗಟ್ಟಿನ ಆಲೋಚನೆಗಳು ವ್ಯಕ್ತ ಗೊಂಡಿರುವುದು ಹೊಸತನದ ಪ್ರತೀಕವಾಗಿವೆ.  ಆರಂಭಕಾಲದಲ್ಲಿ ಸಾಹಿತ್ಯ ಚರಿತ್ರೆಯನ್ನು ಬರೆಯಲು  ಹೊರಟವರಿಗೆ, ಕವಿಕೃತಿಗಳ ಹಸ್ತಪ್ರತಿಗಳು, ಪೋಷಕವಾಗಿ ಶಿಲಾಶಾಸನಗಳು ಮತ್ತು ಅನ್ಯಭಾಷೆಯ ಕೃತಿಗಳು ತೀರ ಸ್ವಲ್ಪವಾಗಿ ಲಭ್ಯವಿದ್ದವು. ಆದಾಗ್ಯೂ ಕನ್ನಡ ಸಾಹಿತ್ಯ ಚರಿತ್ರೆಯನ್ನು ತಿಳಿದುಕೊಳ್ಳ ಬೇಕು, ಬರೆದಿಡಬೇಕು ಎನ್ನುವ ಆಕಾಂಕ್ಷೆಯಿಂದ ಅಲ್ಪವಾಗಿ ದೊರೆತಿದ್ದ ಕವಿಕೃತಿಗಳ ಹಸ್ತಪ್ರತಿಗಳನ್ನು ಅವು ಅಶುದ್ಧವಾಗಿದ್ದರೂ,ಅಪೂರ್ಣವಾಗಿದ್ದರೂ ನಿಷ್ಠೆ ಮತ್ತು ಪರಿಶ್ರಮದಿಂದ ಅವುಗಳನ್ನು ಬಳಸಿಕೊಂಡು ವಿಷಯ ಸಂಗ್ರಹ ಮಾಡಿ  ಜೋಡಿಸಿ ಕೊಡುವ ಪ್ರಯತ್ನ ಮಾಡಿದರು. ಈ ನಿಟ್ಟಿನಲ್ಲಿ ಆರ್. ನರಸಿಂಹಾಚಾರ್ಯರ ಹೆಸರು ಎದ್ದು ಕಾಣುವಂತಹದ್ದು.

    ಒಂದು ಸಾವಿರ ವರ್ಷದ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅಧ್ಯಯನದ ಸೌಕರ್ಯಕ್ಕಾಗಿ   ಹಲವು ವಿಭಾಗಗಳನ್ನಾಗಿ ಮಾಡಿ ಕೊಂಡಿರುವುದುಂಟು. ಆದರೆ ವಿಭಾಗೀಯ ಕ್ರಮದಲ್ಲಿ  ಏಕರೂಪತೆ ಇಲ್ಲದಿರುವುದು ಪ್ರಮುಖವಾದ ಸಂಗತಿ. ವಿಭಾಗಗಳು ಯಾವುವು ಇರಬೇಕು? ವಿಭಾಗ ಮಾಡುವಾಗ ಅನುಸರಿಸ ಬೇಕಾದ ಕ್ರಮಗಳು ಯಾವುವು? ಅವುಗಳಿಗೆ ಯಾವ ಮಾನದಂಡವನ್ನು ಅನುಸರಿಸಬೇಕು ಇತ್ಯಾದಿ  ಅಂಶಗಳಲ್ಲಿ ಏಕರೂಪತೆ ಇಲ್ಲದಿದ್ದರೂ ಸಾಹಿತ್ಯ ಚರಿತ್ರೆಗಳನ್ನು ರಚಿಸಿರುವ ವಿದ್ಯಾಂಸರು ತಮ್ಮದೇ ಆದ ನಿಲುವುಗಳಲ್ಲಿ ವಿಭಾಗೀಯ ಕ್ರಮಗಳನ್ನು ಅನುಸರಿಸಿರುವುದನ್ನು ಕಾಣಬಹುದು.  ಪಾಶ್ಚಾತ್ಯ ಮತ್ತು ದೇಸಿಯ ಸಾಹಿತ್ಯ ಚರಿತ್ರೆಕಾರರು ತಮ್ಮ ಸಾಹಿತ್ಯ ಚರಿತ್ರೆಯಲ್ಲಿ ರೂಪಿಸಿರುವ ವಿಭಾಗೀಯ ಕ್ರಮಗಳು ಈ ಕೆಳ ಕಂಡಂತಿವೆ.

    ಆರ್.ಎಫ್.ಕಿಟ್ಟಲ್:ಆರಂಭಕಾಲ (ಕ್ರಿ.ಶ.ಸು.೮೦೭-೧೩೦೦),ಅನಂತರ ಲಿಂಗಾಯಿತ ಮತ್ತು ಶೈವಕಾಲ (ಕ್ರಿ.ಶ.೧೩೦೦-೧೫೦೦) ವೈಷ್ಣವ, ಲಿಂಗಾಯಿತ ಶೈವಕಾಲ (ಕ್ರಿ.ಶ.ಸು.೧೩೦೦-೧೮೭೪).

ಬಿ.ಎಲ್.ರೈಸ್:ಪೂರ್ವದ ಹಳಗನ್ನಡ (ಆರಂಭದಿಂದ ಕ್ರಿ.ಶ.೭ನೇ ಶತಮಾನ),ಹಳಗನ್ನಡ ( ೮ ರಿಂದ ೧೨ನೇ ಶತಮಾನ),ಆರಂಭಕಾಲದಿಂದ ಕ್ರಿ.ಶ.ಸು ೧೩೦೦ ರವರೆಗೆ ಜೈನರುಕ್ರಿ.ಶ.ಸು.೧೩೦೦ ರಿಂದ ೧೫೦೦ ರವರೆಗೆ ಲಿಂಗಾಯಿತರು ಕ್ರಿ.ಶ.ಸು ೧೫೦೦ ರಿಂದ ಬ್ರಾಹ್ಮಣರು ಮತ್ತು ವೈಷ್ಣವರು, ಹೊಸಗನ್ನಡ (೧೪ನೇ ಶತಮಾನದಿಂದ ಮುಂದೆ).

ಆರ್.ನರಸಿಂಹಾಚಾರ್ಯ: ಜೈನಯುಗ : ಆರಂಭ ಕಾಲದಿಂದ ಕ್ರಿ.ಶ.೧೨ ಶತಮಾನದವರೆಗೆ, ವೀರಶೈವ ಯುಗ : ಕ್ರಿ.ಶ.೧೨ ರಿಂದ ೧೫ ರವರೆಗೆ. ಬ್ರಾಹ್ಮಣಯುಗ : ಕ್ರಿ.ಶ.೧೫ ರಿಂದ ೧೯ ರವರೆಗೆ

ಇ.ಪಿ.ರೈಸ್: ಜೈನ ಆರಂಭದಿಂದ ೧೨ ನೇ ಶತಮಾನ, ಲಿಂಗಾಯತ ಅಥವಾ ವೀರಶೈವ ೧೨ ರಿಂದ ೧೬ನೇ ಶತಮಾನ, ವೈಷ್ಣವ ೧೭ ರಿಂದ ೧೯ ನೇ ಶತಮಾನದವರೆಗೆ, ಆಧುನಿಕ ಕಾಲ - ೨೦ನೇ ಶತಮಾನದಿಂದ ಮುಂದಕ್ಕೆ.

ಬಿ.ಎಂ.ಶ್ರೀಕಂಠಯ್ಯ: ಆರಂಭಕಾಲ - ೧೦ನೇ ಶತಮಾನದವರೆಗೆ, ಮತಪ್ರಾಬಲ್ಯ ಕಾಲ  ೧೦-೧೯ ಶತಮಾನಗಳು. ಜೈನಕವಿಗಳು ೧೦ ನೇ ಶತಮಾನದಿಂದ, ವೀರಶೈವ ಕವಿಗಳು ೧೨ ನೇ ಶತಮಾನದಿಂದ. ಬ್ರಾಹ್ಮಣ ಕವಿಗಳು ೧೫ ನೇ ಶತಮಾನದಿಂದ. ನವೀನ ಕಾಲ - ೧೯ ನೇ ಶತಮಾನದಿಂದ

 ಎಂ.ಎ.ದೊರೆಸ್ವಾಮಯ್ಯಂಗಾರ್: ಮೂಲಗನ್ನಡಕಾಲ - ಕ್ರಿ,ಶ.೭೫೦ ರವರೆಗೆ,ಹಳಗನ್ನಡ ಕಾಲ - ಕ್ರಿ.ಶ.೭೫೦ ರಿಂದ ೧೧೫೦ ರವೆರೆಗೆ, ಮಧ್ಯಕನ್ನಡ ಕಾಲ - ಕ್ರಿ.ಶ.೧೧೫೦ ರಿಂದ ೧೫೦೦ ರವರೆಗೆ,ಹೊಸಗನ್ನಡ ಕಾಲ - ಕ್ರಿ.ಶ.೧೫೦೦ ರಿಂದ ೧೮೫೦ ರವರೆಗೆ. ನವಗನ್ನಡಕಾಲ - ಕ್ರಿಶ.೧೮೫೭ ರ ಮುಂದೆ

ತಿ.ತಾ.ಶರ್ಮ: ಕ್ಷಾತ್ರಯುಗ ಕ್ರಿ.ಶ. ೧೦ ರಿಂದ ೧೨ ರವರೆಗೆ,ಮತ ಪ್ರಚಾರಯುಗ ಕ್ರಿ.ಶ.೧೨ ರಿಂದ ೧೬ ರವರೆಗೆ, ಸಾರ್ವಜನಿಕ ಯುಗ ಕ್ರಿ.ಶ.೧೬ ರಿಂದ ೧೯ರವರೆಗೆ,ಆಧುನಿಕ ಯುಗ ಕ್ರಿ.ಶ.೧೯ ರಿಂದ ಮುಂದಕ್ಕೆ

ಕೆ.ವೆಂಕಟರಾಮಪ್ಪ: ಆರಂಭಕಾಲ - ಕ್ರಿ.ಶ.೯೦೦ ರವರೆಗೆ, ಪಂಪನ ಕಾಲ-ಕ್ರಿ.ಶ.೯೦೦ ರಿಂದ ೧೨೦೦ ಸ್ವತಂತ್ರಯುಗಕ್ರಿ.ಶ.೧೨ರಿಂದ೧೭ನೇ ಶತಮಾನ, ಚಿಕ್ಕದೇವರಾಯರಕಾಲ-ಕ್ರಿ.ಶ.೧೭ನೇ ಶತಮಾನದಿಂದ, ಸಂಧಿಕಾಲ - ಕ್ರಿ.ಶ.೧೭೯೪ ರಿಂದ ೧೮೬೪ ವರೆಗೆ.

ರಂ.ಶ್ರೀ.ಮುಗಳಿ: ಪಂಪಪೂರ್ವಯುಗ, ಪಂಪಯುಗ, ಬಸವಯುಗ, ಕುಮಾರವ್ಯಾಸ ಯುಗ

ಎಂ.ಮರಿಯಪ್ಪಭಟ್ಟ: ಪೂರ್ವದ ಹಳಗನ್ನಡ, ಹಳಗನ್ನಡ ಗದ್ಯ ಸಾಹಿತ್ಯ, ಚಂಪು ಕಾವ್ಯಗಳು, ಶಾಸನ ಸಾಹಿತ್ಯ, ಶತಕ ಸಾಹಿತ್ಯ, ಲಕ್ಷಣ ಸಾಹಿತ್ಯ, ಶಾಸ್ತ್ರೀಯ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಜಾನಪದ ವಾಙ್ಮಯ, ಹೊಸಗನ್ನಡ ಸಾಹಿತ್ಯ.

ತ.ಸು.ಶಾಮರಾಯ: ಪಂಪ ಪೂರ್ವಯುಗ, ಪಂಪ ಯುಗ, ಹರಿಹರ ಯುಗ.

     ಈ ಮೇಲ್ಕಂಡ ವಿಭಾಗೀಯ ಕ್ರಮಗಳಲ್ಲಿ ನಾಲ್ಕು ವಿಭಾಗಗಳಿಂದ ಏಳು ವಿಭಾಗಗಳ ವರೆಗೆ ಸಾಹಿತ್ಯ ಚರಿತ್ರೆಯನ್ನುವಿಂಗಡಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ವೈಯಕ್ತಿಕವಾಗಿ ಸಾಹಿತ್ಯ ಚರಿತ್ರೆಯನ್ನು ರಚಿಸಿದ ವಿದ್ವಾಂಸರುಗಳಲ್ಲಿ ಒಬ್ಬೊಬ್ಬರು ತಮ್ಮ ವೈಯಕ್ತಿಕ ದೃಷ್ಟಿಕೋನದ ನೆಲೆಗಟ್ಟಿನಲ್ಲಿ  ಸಾಹಿತ್ಯದ ಚರಿತ್ರೆಯ ವರ್ಗೀಕರಣದ ವಿಭಾಗದಲ್ಲಿಯ ವೈಶಿಷ್ಟ್ಯವನ್ನು ಗುರುತಿಸಿದ್ದಾರೆ.  ಆದರೇ ಈ ನಿಲುವುಗಳು ಎಲ್ಲರೂ ಮಾನ್ಯ ಮಾಡುವ ರೀತಿಯಲ್ಲಿ ಇಲ್ಲದಿರುವುದು. ಕಿಟೆಲ್ ಅವರು ತಾವು ಸಂಪಾದಿಸಿದ ಛಂದೋಂಬುಧಿಯ ಪ್ರಸ್ತಾವನೆಯಲ್ಲಿ ಕನ್ನಡ ಸಾಹಿತ್ಯವನ್ನು ಮತಪರವಾದ ಚೌಕಟ್ಟಿನಲ್ಲಿ ಆಗಿನ ಕಾಲಕ್ಕೆ ಲಭ್ಯವಿದ್ದ ಸೀಮಿತ ಸಾಮಗ್ರಿಯನ್ನೇ ಆಧಾರವಾಗಿಟ್ಟು ಕೊಂಡು ಸಾಹಿತ್ಯ ಚರಿತ್ರೆಯ  ಸಮೀಕ್ಷೆ ಮಾಡಿದ್ದು, ನಂತರದ ತಮ್ಮ  ನಿಘಂಟುವಿನ ಉಪೋದ್ಘಾತದಲ್ಲಿ ಭಾಷಿಕ ನೆಲೆಗಟ್ಟಿನಲ್ಲಿ ಅಂದರೆ, ಜೈನಯುಗದಲ್ಲಿ ಹಳಗನ್ನಡ, ವೀರಶೈವಯುಗದಲ್ಲಿ ನಡುಗನ್ನಡ, ಬ್ರಾಹ್ಮಣ ಯುಗದಲ್ಲಿ ಹೊಸಗನ್ನಡ ಪ್ರಮುಖವಾಗಿತ್ತೆಂಬ ನಿಲುವನ್ನು ವ್ಯಕ್ತ ಪಡಿಸಿದರು. ಆದರೆ ಈ ವಿಭಾಗೀಯ ಕ್ರಮವು ತೊಡಕಿನದಾಗಿದ್ದು ಪರಿಪೂರ್ಣತೆಯನ್ನು ಪಡೆದಿರುವುದಿಲ್ಲ. ಏಕೆಂದರೆ  ಜೈನ ಕಾಲಘಟ್ಟದಲ್ಲಿ ವೀರಶೈವ ಸಾಹಿತ್ಯವೂ, ವೀರಶೈವ ಸಾಹಿತ್ಯ ಕಾಲಘಟ್ಟದಲ್ಲಿ ಬ್ರಾಹ್ಮಣ ಸಾಹಿತ್ಯವು ಸೃಷ್ಟಿಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮತಾನುಸಾರಿಯಾಗಿ ವಿಭಾಗಿಸಿದ್ದನ್ನು  ತಿ.ತಾ.ಶರ್ಮ ಅವರು, ಈ ವಿಭಾಗ ಕ್ರಮವು  ಶುದ್ಧ ಸಾಹಿತ್ಯ ದೃಷ್ಟಿಯಿಂದ ಸರಿಯಾದುದಲ್ಲವೆಂದು  ವಿರೋಧಿಸಿದ್ದಲ್ಲದೆ  ಕವಿಕರ್ಮಕ್ಕೆ ಮೂಲಕಾರಣವಾದ ಸ್ಫೂರ್ತಿ ವಿಶೇಷವನ್ನು ಲಕ್ಷಿಸಿ ಕನ್ನಡ ವಾಙ್ಮಯದ ಇತಿಹಾಸವನ್ನು   ಕ್ಷಾತ್ರಯುಗ, ಮತಪ್ರಚಾರಕ ಯುಗ, ಸಾರ್ವಜನಿಕ ಯುಗ ಮತ್ತು ಆಧುನಿಕ ಯುಗವೆಂದು ನಾಲ್ಕು ವಿಭಾಗಗಳಲ್ಲಿ ವಿಭಾಗಿಸಿದರು. ಜೊತೆಗೆ, ಒಂದೊಂದು ಯುಗದಲ್ಲಿ ಒಂದೊಂದು ರಸವು ಪ್ರಧಾನವಾಗಿತ್ತೆಂದು ವಿವರಿಸಿದರು.  ಕ್ಷಾತ್ರ ಯುಗದಲ್ಲಿ ವೀರ, ಮತಪ್ರಚಾರಕ ಯುಗದಲ್ಲಿ ಶೃಂಗಾರ, ಸಾರ್ವಜನಿಕ ಯುಗದಲ್ಲಿ ಭಕ್ತಿ ಈ ರಸಗಳಿಗೆ ಪ್ರಾಧಾನ್ಯವಿತ್ತೆಂಬುದು ತೀ.ತಾ.ಶರ್ಮರ ಅಭಿಪ್ರಾಯ.  ಇವರ  ವಿಭಾಗೀಯ ಕ್ರಮವೂ ಪರಿಪೂರ್ಣವಲ್ಲ. ಏಕೆಂದರೆ, ಕ್ಷಾತ್ರಯುಗದಲ್ಲಿ ವೀರ ಎಂಬುದು ಕೆಲ ಮಟ್ಟಿಗೆ   ಒಪ್ಪಿತವಾದರೂ ಇತರ ಯುಗಗಳಲ್ಲಿ ಆಯಾ ರಸಗಳ ಉಲ್ಲೇಖವು ಸರಿಹೊಂದುವುದಿಲ್ಲ. ಮತಪ್ರಚಾರಕ ಯುಗದಲ್ಲಿ ಶೃಂಗಾರರಸದ ಪ್ರಾಧಾನ್ಯ ಎಂಬುದಂತು ವ್ಯತಿರಿಕ್ತ ಎಂದೆನಿಸುತ್ತದೆ.  ಮತಪ್ರಚಾರಕಯುಗ ಎಂಬ ಹೆಸರಿನಲ್ಲಿಯೆ ಶುದ್ಧ ಸಾಹಿತ್ಯ ದೃಷ್ಟಿ ಲೋಪವಾಗಿಬಿಡುತ್ತದೆ.  ಹೀಗಾಗಿ  ಸಾರ್ವಜನಿಕಯುಗ ಎಂಬುದರಲ್ಲಿ ಸೂಚಿತವಾದ ಸರ್ವಜನದೃಷ್ಟಿ ಎರಡನೆಯ ಯುಗದಲ್ಲಿಯೇ ಕಂಡುಬಂದಿತ್ತೆಂಬುದನ್ನೂ ಅದರ ಪ್ರಧಾನರಸವಾದ ಭಕ್ತಿ ಅದರಲ್ಲಿಯೆ ತಲೆದೋರಿತ್ತೆಂಬುದನ್ನೂ ಮನದಂದರೆ ಈ ಶೀರ್ಷಿಕೆ ಅತಿವ್ಯಾಪ್ತಿದೋಷದಿಂದ ಬಾಧಿತವಾಗುತ್ತದೆಂಬ ರಂ.ಶ್ರೀ.ಮುಗುಳಿಯವರ ಅನಿಸಿಕೆ ಯೋಚಿಸತಕ್ಕದ್ದಾಗಿದೆ.  ಆದಾಗ್ಯೂ ಸಾಹಿತ್ಯೇತಿಹಾಸವನ್ನು ವಿಭಾಗಿಸುವಾಗ ಸಾಹಿತ್ಯೇತರ-ಮಾನದಂಡಗಳನ್ನು ತ್ಯಜಿಸಿ ಸಾಹಿತ್ಯ ದೃಷ್ಟಿಯನ್ನು ಅನ್ವಯಗೊಳಿಸುವಲ್ಲಿ ತೀ.ತಾ.ಶರ್ಮರದ್ದು ಈ ನಿಟ್ಟಿನಲ್ಲಿ ಮೊದಲನೆಯ ಪ್ರಯತ್ನ.  ಇದು ಮುಂದಿನ ಕೆಲವು ಪ್ರಯತ್ನಗಳಿಗೆ ಪ್ರೇರಕವಾಯಿತು.  ಈ ನಿಟ್ಟಿನಲ್ಲಿ ಮುಂದುವರೆದ ಕೆ.ವೆಂಕಟರಾಮಪ್ಪನವರು   ಸಾಹಿತ್ಯ ಚರಿತ್ರೆಯನ್ನು, ಆರಂಭಕಾಲ, ಪಂಪನ ಯುಗ, ಸ್ವಾತಂತ್ರ‍್ಯ ಯುಗ, ಚಿಕ್ಕದೇವರಾಯರ ಕಾಲ, ಸಂಧಿ ಕಾಲ ಎಂಬುದಾಗಿ ವರ್ಗೀಕರಿಸಿದರು. (ಕನ್ನಡ ಸಾಹಿತ್ಯ, ಮೈ.ವಿ.ವಿ. ಪು.೧೨) ಈ ವರ್ಗೀಕರಣದಲ್ಲಿ ಆಯಾ ಕಾಲಕ್ಕೆ ಪ್ರಧಾನರಾದ ಕವಿ ಅಥವಾ ಕಾವ್ಯಗಳ ವೈಶಿಷ್ಟ್ಯವು ಪ್ರಮುಖವಾದುದ್ದಾಗಿದೆ. ಈ ವಿಭಾಗ ಕ್ರಮದಲ್ಲಿ ಪಂಪಯುಗ, ಚಿಕ್ಕದೇವರಾಯರ ಕಾಲ ಎಂಬ ಶೀರ್ಷಿಕೆಗಳ ಜೊತೆಗೆ, ಸಂಧಿಕಾಲ ಸ್ವಾತಂತ್ರ‍್ಯ ಯುಗ ಎಂಬ ಶೀರ್ಷಿಕೆಗಳು ಬಂದಿದ್ದುಒಂದಕ್ಕಿಂತ ಹೆಚ್ಚು ಆಧಾರ ತತ್ವಗಳು ಬಂದಿರುವುದು ಏಕರೂಪತೆಯಿಂದ ವಿಮುಖವಾಗಿರುವುದನ್ನು ಸೂಚಿಸುತ್ತದೆ. ಬಿ.ಎಂ. ಶ್ರೀಕಂಠಯ್ಯನವರು ತಮ್ಮ ಸಾಹಿತ್ಯ ಚರಿತ್ರೆಯ ಕೃತಿಯಲ್ಲಿ, ಕನ್ನಡ ಸಾಹಿತ್ಯವನ್ನು ಕಾಲ ಮತ್ತು ಮತವನ್ನು ಅನುಸರಿಸಿ ಎರಡು ಬಗೆಯಾಗಿ ವಿಭಾಗ ಮಾಡಿದ್ದಾರೆ.  ಕಾಲಕ್ರಮದ ಪ್ರಕಾರ ಹೋದರೆ, ಆಯಾ ಕಾಲದ ಭಾಷೆ, ಕಾವ್ಯರೂಪ, ರಾಜವಂಶ, ಪ್ರಧಾನ ಕವಿನಾಮ ಮುಂತಾದುವನ್ನು  ದೃಷ್ಟಿಯಲ್ಲಿರಿಸಿಕೊಂಡು ವಿಭಜಿಸಿದ್ದಾರೆ.  ಆದರೆ ಕನ್ನಡ-ಸಾಹಿತ್ಯ ಪ್ರಾಯಶ: ಸಂಪ್ರದಾಯನಿಷ್ಠವಾಗಿದೆ, ಕಾಲಕಾಲಕ್ಕೆ ಹೆಚ್ಚಿನ ಬದಲಾವಣೆಯಿಲ್ಲದೆ ಒಂದೇ ರೀತಿಯಾಗಿದೆ.  ಆದ್ದರಿಂದ ‘ಕಾಲಕ್ಕನುಸಾರವಾಗಿ ಸಾಹಿತ್ಯ ವಿಭಾಗ ಮಾಡಿರುವುದು ಉಚಿತವಲ್ಲ ಎಂದೆನಿಸುತ್ತದೆ.  ಮತದೃಷ್ಟಿಯಿಂದ ನೋಡಿದರೆ ‘ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಮೂರುನಾಲ್ಕು ಘಟ್ಟಗಳು ಅಥವಾ ಚಳುವಳಿಗಳು ಮೇಲಕ್ಕೆದ್ದು ಕಣ್ಣಿಗೆ ಕಾಣುತ್ತವೆ.  ಹೊಳೆಯ ಹೋಲಿಕೆಯನ್ನು ಎತ್ತಿಕೊಂಡು ಬಿ.ಎಂ.ಶ್ರೀ ಅವರು   ಈ ರೀತಿಯಾಗಿ ವಿವರಿಸಿದ್ದಾರೆ. ‘ಈ ನಾಲ್ಕು ಘಟ್ಟಗಳಲ್ಲಿ ಹರಿದು ಬಂದಿರುವ ನಮ್ಮ ಕನ್ನಡ ಸಾಹಿತ್ಯವನ್ನು, ನಮ್ಮ ಕನ್ನಡ ನಾಡಿನ ಏರುತಗ್ಗಿನ ಘಟ್ಟಗಳಲ್ಲಿ ನುಗ್ಗಿಬರುವ ಕಾವೇರಿ ನದಿಗೆ ಹೋಲಿಸಬಹುದು.  ಅದರಂತೆಯೇ ನಮ್ಮ ಸಾಹಿತ್ಯದ ಮೂಲವೂ ಕಾಡಿನಲ್ಲಿ ಅಡಗಿ ಹೋಗಿದೆ.  ಆ ಬಳಿಕ ಉಪನದಿಗಳು ಒಂದೊಂದಾಗಿ ಸೇರುವಂತೆ, ಜೈನಸಾಹಿತ್ಯ ಪ್ರವಾಹವೂ ವೀರಶೈವ ಸಾಹಿತ್ಯ ಪ್ರವಾಹವೂ ಬ್ರಾಹ್ಮಣ ಸಾಹಿತ್ಯ ಪ್ರವಾಹವೂ ಒಂದಾದ ಮೇಲೊಂದು, ಒಂದರ ಕೂಡ ಮತ್ತೊಂದು, ಬಂದು ಮಿಳಿತವಾಗಿ ಮೂರು ಬಣ್ಣದ ನೀರುಳ್ಳ ದೊಡ್ಡ ಹೊಳೆಯಾಗಿದೆ...... ಈ ತತ್ವವನ್ನು ನೆನಪಿನಲ್ಲಿಟ್ಟು ಸಾಹಿತ್ಯ ಚರಿತ್ರೆಯನ್ನು ಇಲ್ಲಿ ಈ ಪ್ರಕಾರ ವಿಭಾಗ ಮಾಡಿರುತ್ತದೆ : (೧) ಆರಂಭಕಾಲ : ೧೦ನೆಯ ಶತಮಾನದವರೆಗೆ (೨) ಮತಪ್ರಾಬಲ್ಯ ಕಾಲ : ೧೦-೧೯ ಶತಮಾನಗಳು (ಜೈನಕವಿಗಳು : ೧೦ನೆಯ ಶತಮಾನದಿಂದ, ವೀರಶೈವ ಕವಿಗಳು : ೧೨ನೆಯ ಶತಮಾನದಿಂದ, ಬ್ರಾಹ್ಮಣ ಕವಿಗಳು (ಮುಖ್ಯವಾಗಿ) : ೧೫ನೆಯ ಶತಮಾನದಿಂದ ) (೩) ನವೀನ ಕಾಲ : ೧೯ನೆಯ ಶತಮಾನದಿಂದ.’ ಈ ವಿಭಜನೆಯಲ್ಲಿ ಮತಪ್ರಾಬಲ್ಯ ಕಾಲ ಎಂಬ ಒಂಬತ್ತು ಶತಮಾನಗಳ ಹರವಿನಲ್ಲಿ ಮೂರು ಮತಗಳ ಕವಿಗಣಕ್ಕೆ ಮೂರು ಉಪ-ಕಾಲಗಳನ್ನು ಕಲ್ಪಿಸಲಾಗಿದೆ.  ಹಿಂದಿನವರ ದೃಷ್ಟಿಯೇ ಇಲ್ಲಿ ಸ್ವಲ್ಪ ಬದಲಾವಣೆಯೊಡಗೂಡಿ ವಿವರಣೆಯ ಮೂಲಕ ವ್ಯಕ್ತಗೊಂಡಿದೆ.(  ಕನ್ನಡ ಕೈಪಿಡಿ.ಭಾಗ-೨, ಪು.೪೬೭)

     ಸಾಹಿತ್ಯ ಚರಿತ್ರೆಯವಿಭಾಗ ಕ್ರಮದಲ್ಲಿ ಮತಪರತ್ವವು ಆಯಾ ಕಾಲದ ಜನಜೀವನ, ಕವಿಮನೋಧರ್ಮ ಮುಂತಾದ ಗುಣಗಳನ್ನು ಸ್ಥೂಲವಾಗಿ ಗಮನಿಸಿದಾಗ ಸರಿ ಕಾಣುತ್ತದೆ.  ಆದರೆ ಬರಬರುತ್ತ ಮತೀಯ ವಿಭಾಗದ ಸಾಹಿತ್ಯ ಚರಿತ್ರೆಯಲ್ಲಿ ಸಂಕೀರ್ಣತೆ ಹೆಚ್ಚುತ್ತ ಹೋಗುವುದೆಂಬುದನ್ನೂ ಯಾವೊಬ್ಬ ಕವಿಯ ಮತವು ಅವನ ಜೀವನದರ್ಶನವನ್ನು ಪೂರ್ತಿಯಾಗಿ ತಿಳಿಸುವುದಿಲ್ಲವೆಂಬುದನ್ನೂ ನೆನೆದಿರಬೇಕು. ʻ ಶುದ್ಧ ಸಾಹಿತ್ಯ ದೃಷ್ಟಿಯನ್ನು ಹಳೆಗಾಲದ ಬರವಣಿಗೆಯಲ್ಲಿ ನಾವು ಅಪರೂಪವಾಗಿ ಕಾಣುತ್ತಿರುವಾಗ ಅದನ್ನು ಅಂದಿನ ಕವಿಗಳ ಮೇಲೆ ಇಂದು ನಾವು ಆರೋಪಿಸುವುದು ಸರಿಯಾಗದು.  ಆದರೆ ಮತಪರವಾದ ವಿಭಜನೆಗೆ ಪೂರಕವಾಗಿ ಸಾಹಿತ್ಯದೃಷ್ಟಿಯಿಂದ ಸೂಚಿತವಾಗುವ ವಿಭಾಗಗಳನ್ನು ಮಾಡಿಕೊಳ್ಳಬಹುದು.  ಉದಾಹರಣೆಗೆ ಜೈನಯುಗವನ್ನು ಮಾರ್ಗನಿಷ್ಠ ಕಾವ್ಯಯುಗವೆಂದೂ ವೀರಶೈವ ಯುಗವನ್ನು ಕ್ರಾಂತಿಯ ಅಥವಾ ಸಂಕ್ರಮಣದ ಯುಗವೆಂದೂ ಬ್ರಾಹ್ಮಣಯುಗವನ್ನು ದೇಸಿನಿಷ್ಠಯುಗವೆಂದೂ ಕರೆಯಬಹುದು. ಆಯಾ ಕಾಲಗಳಲ್ಲಿ ಹಿರಿಯ ಕವಿಗಳೆಂದು ಹೆಸರಾಗಿ ಕೆಲವರ ಮೇಲೆ ತಮ್ಮ ಪ್ರಭಾವ ಬೀರಿದ ಕವಿಗಳ ಹೆಸರಿನಲ್ಲಿಯೂ ಯುಗಗಳ ನಾಮಕರಣವನ್ನು ಮಾಡಬಹುದು.( ರಂ.ಶ್ರೀ.ಮುಗಳಿ, ಸಮಗ್ರ ಸಾಹಿತ್ಯ ಚರಿತ್ರೆಯ ಪೂರ್ ಪೀಠಿಕೆ, ಪು.೯)  ಯಾವ ರೀತಿಯಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ವಿಭಾಗಗಳನ್ನು ಮಾಡಿದರೂ ಕಟ್ಟುನಿಟ್ಟಾದ ಸರ್ವರೂ ಮಾನ್ಯಮಾಡಬಹುದಾದ  ರೀತಿಗೆ ಅವು ಹೊಂದಿಕೊಳ್ಳಲಾರವು.  ಇದು  ಎಲ್ಲ ಭಾಷೆಗಳ ಸಾಹಿತ್ಯ ಚರಿತ್ರೆಗಳಿಗೆ ಅನ್ವಯಿಸುವ ಮಾತಿದು. ಒಬ್ಬ ಕವಿಯ ನಿರ್ಮಿತಿಯನ್ನು ಕೂಡ ಯಾವುದಾದರೂ ಒಂದೇ ಪ್ರೇರಣೆಯ ದಾವಣಿಯಿಂದ ಕಟ್ಟಲಾಗುವುದಿಲ್ಲ.  ಹೀಗಿರುವಾಗ ಸಾಹಿತ್ಯ ಚರಿತ್ರೆಯಲ್ಲಿಯ ಕಾಲ ವಿಭಾಗ ಕ್ರಮವು ಅಥವಾ ಅದಕ್ಕೆ ಅನುಗುಣವಾದ ಶೀರ್ಷಿಕೆಯು ಸ್ಥೂಲವಾದ ಆಧಾರದ ಮೇಲೆ ಅಧ್ಯಯನದ ಅನುಕೂಲಕ್ಕಾಗಿ ಮಾತ್ರ  ನಾವುಗಳು ಮಾಡಿಕೊಂಡಿದ್ದಾಗಿದೆ.

      ಸಾಹಿತ್ಯ ಚರಿತ್ರೆಯನ್ನು ಕುರಿತ ಅಧ್ಯಯನದ ಇತಿಹಾಸ:

     ಸಾವಿರ ವರ್ಷಗಳ ಇತಿಹಾಸವನ್ನು ಒಳಗೊಂಡಿರುವ ಕನ್ನಡ ಸಾಹಿತ್ಯವನ್ನು ಕುರಿತ ಅಧ್ಯಯನ ಇತ್ತೀಚಿನ ಪ್ರವೃತ್ತಿಯಾಗಿದೆ. ಸಾಹಿತ್ಯಚರಿತ್ರೆಯ ರಚನೆಗೆ ಶ್ರೀಕಾರ ಹಾಕಿದವರು ಪಾಶ್ಚಾತ್ಯ ವಿದ್ವಾಂಸರೇ ಆಗಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತು ಇಲ್ಲಿಯವರೆಗೂ ನಡೆದಿರುವ ಸಂಶೋಧನೆಯನ್ನು ನಾಲ್ಕು ಹಂತಗಳಲ್ಲಿ ಗುರುತಿಸಬಹುದಾಗಿದೆ. 

ಅ)ಪ್ರಥಮ ಹಂತ (ಕ್ರಿ.ಶ.೧೮೪೦-೧೯೦೦): ಪ್ರಥಮ ಹಂತದಲ್ಲಿ ಸಾಹಿತ್ಯ ಚರಿತ್ರೆಯನ್ನು ಕುರಿತ ಹಾಗೆ ಅಧ್ಯಯನ ನಡೆಸಿದವರಲ್ಲಿ ಕಿಟೆಲ್ ಮತ್ತು ರೈಸ್‍ರು ಪ್ರಮುಖರಾಗಿ ಕಂಡುಬರುತ್ತಾರೆ. ಕ್ರಿ.ಶ.೧೮೪೮ರಲ್ಲಿ ವೆಯ್‍ಗ್ಲೆ ಎಂಬ ವಿದ್ವಾಂಸನು ಜರ್ಮನ್ ಪತ್ರಿಕೆ’‘Canares sprache U literatur ಎಂಬ ಜರ್ಮನ್ ಭಾಷೆಯಲ್ಲಿ ರಚಿಸಿದ ೨೮ ಪುಟಗಳ ಲೇಖನವೇ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತ ಮೊದಲ ಲೇಖನವಾಗಿದೆ. ಈ ಲೇಖನದಲ್ಲಿ ಪ್ರಥಮ ಬಾರಿಗೆ ಕನ್ನಡನಾಡು ನುಡಿಗಳ ವಿಚಾರ, ಕನ್ನಡ ಲಿಪಿ, ಕನ್ನಡ ವ್ಯಾಕರಣಗಳ ವಿಚಾರಗಳು ಹಾಗೂ ಕನ್ನಡ ಸಾಹಿತ್ಯದ ಇತಿಹಾಸ ಸಂಕ್ಷಿಪ್ತವಾಗಿ ನಿರೂಪಿತವಾಗಿದೆ. ವ್ಯಾಕರಣ, ಕೋಶ, ಛಂದಸ್ಸು, ಜೈನಸಾಹಿತ್ಯ, ಲಿಂಗಾಯತ ಹಾಗೂ ದಾಸಸಾಹಿತ್ಯ, ಯಕ್ಷಗಾನ ಪ್ರಸಂಗ ಹಾಗೂ ಕನ್ನಡ ಜನಪದ ಸಾಹಿತ್ಯದ ಸಂಕ್ಷಿಪ್ತ ಪರಿಚಯವಿದೆ. ಇವೊತ್ತಿನ ದೃಷ್ಟಿಯಲ್ಲಿ ಮಹತ್ವ ಕಳೆದುಕೊಂಡಿದ್ದರೂ, ಅಪೂರ್ಣ ಎಂದೆನಿಸಿದ್ದರೂ ಈ ಕೃತಿ ೧೫೦ ವರ್ಷಗಳ ಹಿಂದೆಯೇ ಪಾಶ್ಚಾತ್ಯರಿಗೆ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಡಲು ಪ್ರಯತ್ನಿಸಿರುವುದು ಗಮನಾರ್ಹವಾಗಿದೆ.

     ಆರ್.ಎಫ್.ಕಿಟೆಲ್ ಕ್ರಿ.ಶ.೧೮೭೩ರಲ್ಲಿ ಇಂಡಿಯನ್ ಇವಾಂಜಲಿಕಲ್ ರಿವ್ಯೂ ಪತ್ರಿಕೆಯಲ್ಲಿ ಬರೆದ ʻold kanarese literatureʼ ಎಂಬ ಸಂಶೋಧನಾತ್ಮಕ ಲೇಖನ ಹಾಗೂ ತಾವು ಸಂಪಾದಿಸಿ ಪ್ರಕಟಿಸಿದ ನಾಗವರ್ಮನ ಛಂದೋಂಬುಧಿ ಗ್ರಂಥದ ಪ್ರಸ್ತಾವನೆಯಲ್ಲಿಯ ೬೦ಪುಟಗಳ An Essay on canerese literature’ ಲೇಖನಗಳು ನಂತರದ ದೇಶೀಯ ವಿದ್ವಾಂಸರು ಸಾಹಿತ್ಯ ಚರಿತ್ರೆಯನ್ನು ಕುರಿತು ಬರೆಯಲು ಸೂಕ್ತವಾದ ನೆಲೆಗಟ್ಟನ್ನು ಒದಗಿಸಿತು. ೧೦೦ ಕವಿಗಳ ಸಂಕ್ಷಿಪ್ತ ಪರಿಚಯವನ್ನೊಳಗೊಂಡ ಈ ಲೇಖನ ಸಾಹಿತ್ಯ ಚರಿತ್ರೆಯ ಬೆಳವಣಿಗೆಯ ದೃಷ್ಟಿಯಿಂದ ಗಮನಿಸತಕ್ಕುದಾಗಿದೆ. ಬಿ.ಎಲ್.ರೈಸ್‍ರು ತಾವು ಸಂಪಾದಿಸಿದ ಕರ್ಣಾಟಕ ಶಬ್ದಾನುಶಾಸನ ಕೃತಿಯ ಪೀಠಿಕೆಯಲ್ಲಿಯ ೨೮ ಪುಟಗಳ À  Kannada literature ಎಂಬ ಲೇಖನದಲ್ಲಿ ಕವಿಗಳ ಕಾಲ, ದೇಶ, ಕೃತಿ ವಿಚಾರಗಳು, ಕವಿ ಸಂಬಂಧಿ ಐತಿಹ್ಯಗಳ ವಿವರ ವ್ಯಕ್ತವಾಗಿದೆ. ನಂತರ ಈ ಕೃತಿಯ ಪೀಠಿಕೆಯಲ್ಲಿಯ ಲೇಖನಕ್ಕೆ ಹೆಚ್ಚಿನ ವಿವರಗಳನ್ನು ಜೋಡಿಸಿ ʻThe literature of karnataka’ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ತಾವು ಕಂಡು ಕೊಂಡ ಸಂಶೋಧನೆಗಳಲ್ಲಿ ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ವಿವರಗಳು ಹಾಗೂ ಕವಯತ್ರಿ ಸಂಚಿಹೊನ್ನಮ್ಮನ ಕುರಿತ ವಿವರ ವ್ಯಕ್ತವಾಗಿದೆ. ಮೊದಲನೆ ಹಂತದಲ್ಲಿ ಸ್ವತಂತ್ರವಾದ ಪೂರ್ಣ ಪ್ರಮಾಣದ ಸಾಹಿತ್ಯ ಚರಿತ್ರೆಯನ್ನು ಕುರಿತ ಸಂಶೋಧನಾ ಕೃತಿಗಳು ಪ್ರಕಟವಾಗದೆ, ತಾವು ಸಂಪಾದಿಸಿದ ಕೃತಿಗಳ ಪ್ರಸ್ತಾವನೆಯಲ್ಲಿ ಪ್ರಾಸಂಗಿಕವಾಗಿ ಸಾಹಿತ್ಯ ಚರಿತ್ರೆಯನ್ನು ಕುರಿತು ಚರ್ಚಿಸಿದ್ದಾರೆ. ಸಾಹಿತ್ಯ ಚರಿತ್ರೆಯನ್ನು ಕುರಿತ ಲೇಖನಗಳೆಲ್ಲವು ಜರ್ಮನ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ರಚಿತವಾಗಿದೆ.

ಬ)ದ್ವಿತೀಯ ಹಂತ (ಕ್ರಿ.ಶ.೧೯೦೧-೧೯೫೦):

    ಕಿಟೆಲ್ ಹಾಗೂ ರೈಸ್‍ರು ಕನ್ನಡ ಸಾಹಿತ್ಯ ಚರಿತ್ರೆಯ ಸೌಧಕ್ಕೆ ತಳಪಾಯವನ್ನು ಹಾಕಿದರೆ ಗೋಡೆ ಕಟ್ಟಲು ಪ್ರಾರಂಭಿಸಿದವರು ದೇಶೀಯ ವಿದ್ವಾಂಸರು. ಆರ್.ನರಸಿಂಹಾಚಾರ್ಯರಿಂದ ಕನ್ನಡ ಸಾಹಿತ್ಯದ ಮೇರು ಕೃತಿಗಳೆಂದು ಪರಿಗಣಿಸಲ್ಪಟ್ಟ ‘ಕರ್ಣಾಟಕ ಕವಿಚರಿತೆ’ಯ ಮೂರು ಸಂಪುಟಗಳು (ಕ್ರಿ.ಶ.೧೯೦೭, ೧೯೧೯, ೧೯೨೯) ನಿರ್ಮಾಣಗೊಂಡವು. ಈ ಹಂತದ ಸಾಹಿತ್ಯ ಚರಿತ್ರೆಯ ನಿರ್ಮಾಣದಲ್ಲಿ ತೊಡಗಿಕೊಂಡವರು ಕವಿಚರಿತೆಕಾರರ ಜೊತೆಯಲ್ಲಿಯೇ ಎಸ್.ಜಿ.ನರಸಿಂಹಾಚಾರ್ ಹಾಗೂ ಎ.ವೆಂಕಟಸುಬ್ಬಯ್ಯನವರು. ಮೂರು ಸಂಪುಟಗಳಲ್ಲಿ ಕವಿಚರಿತೆಕಾರರು ಕನ್ನಡ ಸಾಹಿತ್ಯದ ಪ್ರಾರಂಭ ಕಾಲದಿಂದ ಹಿಡಿದು ೧೯ನೇ ಶತಮಾನದ ವರೆಗಿನ ಒಂದು ಸಾವಿರಕ್ಕೂ ಹೆಚ್ಚಿನ ಕವಿಗಳನ್ನು ಪರಿಚಯಿಸುವ ಕವಿಸಂಬಂಧಿ ವಿವರಗಳನ್ನೊಳಗೊಂಡಿದ್ದು ವಿಶ್ವಕೋಶ ಸದೃಶವಾದ ಸಂಪುಟಗಳೆನಿಸಿವೆ. ಸುಮಾರು ೪೦ವರ್ಷಗಳ ಸುದೀರ್ಘ ಫಲದ ಶ್ರಮ ಎದ್ದು ಕಾಣುತ್ತದೆ. ಮುಂದಿನ ವೈವಿಧ್ಯಮಯ ರೀತಿಯ ಸಾಹಿತ್ಯ ಚರಿತ್ರೆಗಳ ರಚನೆಗೆ ಆಕರವಾಗಿ ಪರಿಣಮಿಸಿದೆ. ಕನ್ನಡ ವಾಙ್ಮಯದ ಯಾವ ಅಭ್ಯಾಸಕ್ಕೂ ಕೈಪಿಡಿಯಂತಿದೆ. ಕವಿಗಳ ಕಾಲವನ್ನು ನಿರ್ಣಯಿಸುವುದರಲ್ಲಿ ಅವಶ್ಯಕವಾದ ಸಾಮಗ್ರಿಗಳನ್ನು ಸಂಗ್ರಹಿಸಿ ಅವನ್ನು ಅಳವಡಿಸಿಕೊಂಡು ನಿರ್ಧಾರಕ್ಕೆ ಬರುವ ಶಾಸ್ತ್ರೀಯ ಕ್ರಮ ವಿನೂತನವಾದುದು. ತಾಳೆಯೋಲೆಯಲ್ಲಿ ಅಡಗಿದ್ದ ಕವಿಗಳ ಕೃತಿಗಳನ್ನು ಪರೀಕ್ಷಿಸಿ ಅವುಗಳಿಂದ ಸ್ವಾರಸ್ಯಕರವಾದ ಭಾಗವನ್ನು ಸಂಗ್ರಹಿಸಿ ಕೊಟ್ಟಿರುವುದು ಆ ಕಾಲಕ್ಕೆ ಮಹತ್ತರವಾದುದು.

     ಈ ಸಂಪುಟಗಳಲ್ಲಿ ಕವಿಯ ದೇಶ, ವಂಶ, ಮತ, ಗುರು, ಪೋಷಕ ಬಿರುದುಗಳು ಇವೇ ಮೊದಲಾದ ಕವಿಯ ಜೀವನ ವೃತ್ತಾಂತದ ಅಂಶಗಳು, ನಂತರ ಕವಿಯ ಕಾಲ ನಿರ್ಣಯದ ವಿಚಾರ ಪೂರ್ವಕ ಅಂಶಗಳು, ಕವಿಸ್ಮರಿಸುವ ಪೂರ್ವಕವಿಗಳು, ನಂತರ ಕಾವ್ಯದ ಗುಣಮೌಲ್ಯವನ್ನು ಸಾರುವ ಪದ್ಯಗಳು ಉದ್ಧರಿಸಲ್ಪಟ್ಟಿವೆ. ತರುವಾಯ ಕವಿ ಕೃತವಾದ ಗ್ರಂಥಗಳನ್ನು ಒಂದೊಂದಾಗಿ ತೆಗೆದುಕೊಂಡು ಅದರದರ ಸ್ವರೂಪ, ಪ್ರತಿಪಾದಿತವಾದ ವಿಷಯ, ಕಥಾಗರ್ಭ, ಆಶ್ವಾಸ ಸಂಖ್ಯೆ, ಗ್ರಂಥರಚನೆಗೆ ಕಾರಣವಾದ ಸಂದರ್ಭ ಮೊದಲಾದುವನ್ನು ವಿವರಿಸಿದೆ. ಸಾಹಿತ್ಯ ಗುಣ ಎದ್ದು ತೋರುವ ಗ್ರಂಥಾಂತರ್ಗತ ಗದ್ಯ ಪದ್ಯಗಳನ್ನು ಯಥೋಚಿತವಾಗಿ ಉದ್ಧರಿಸಿ ಕವಿಚರಿತ್ರೆಗೆ ಒಂದು ರೀತಿಯ ಸಮಗ್ರತೆ ತಂದು ಕೊಟ್ಟಿದ್ದಾರೆ. ಕವಿಗಳ ಕಾಲ, ದೇಶ, ವೃತ್ತಾಂತಗಳ ವೈಯಕ್ತಿಕ ಪರಿಚಯ, ಗ್ರಂಥಸ್ವರೂಪ, ಕವಿಗಳ ಕಾವ್ಯ ಶಕ್ತಿ, ರಚನೆಯ ಧೋರಣೆ, ಪೂರ್ವಕವಿಗಳ ಅನುಸರಣೆ, ಉತ್ತರಕಾಲೀನ ಕವಿಗಳ ಮೇಲೆ ಪ್ರಭಾವ ಇವೆಲ್ಲಾ ಸ್ಫುಟವಾಗಿ, ಸಂಕ್ಷಿಪ್ತವಾಗಿ ನಿರೂಪಿತವಾಗಿವೆ. ತಾವು ಬಳಸಿದ ಆಕರಗಳನ್ನು ಅಮೂಲಾಗ್ರವಾಗಿಯೇ ಪರಿಶೀಲಿಸಿದ್ದಾರೆ. ಶತಶತಮಾನಗಳಿಂದ ಬೆಳೆದುಬಂದ ಕನ್ನಡ ಸಾಹಿತ್ಯದ ವ್ಯಾಪ್ತಿ, ವಿಸ್ತಾರಗಳು ಪ್ರಥಮ ಬಾರಿಗೆ ಸಮಗ್ರವಾಗಿ ನಿರೂಪಿಸಲ್ಪಟ್ಟಿದೆ. ಆರ್.ನರಸಿಂಹಾಚಾರ್ಯರು ಈ ಮೂರು ಸಂಪುಟಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯ ನೀಲನಕ್ಷೆಯನ್ನು ಬರೆದಿಟ್ಟ ಮೇಲೆ ಈ ಸಂಪುಟಗಳನ್ನು ಅನುಸರಿಸಿ, ಬಳಸಿ ನಂತರದ ಕಾಲದಲ್ಲಿ ವೈವಿಧ್ಯಮಯ ಸಾಹಿತ್ಯ ಚರಿತ್ರೆಗಳು ಸಂಶೋಧಕರಿಂದ ರಚಿಸಿರುವುದನ್ನು ಕಾಣಬಹುದು. ಇತ್ತೀಚೆಗೆ ಸಾಹಿತ್ಯ ಚರಿತ್ರೆಯನ್ನು ಕುರಿತು ನಡೆದ ಸಂಶೋಧನೆಯ ಫಲಿತಾಂಶದಿಂದ ಕವಿಚರಿತೆಯ ಸಂಪುಟಗಳಲ್ಲಿಯ ಎಷ್ಟೋ ಕವಿಗಳ ಕೃತಿಗಳನ್ನು, ಕಾಲವನ್ನು ಪುನರ್ರಚಿಸುವ ಸ್ಥಿತಿ ಒದಗಿದೆ ಎಂದೆನಿಸಿದ್ದರೂ ಈ ಸಂಪುಟಗಳು ಮೌಲಿಕವಾದವುಗಳು ಎಂಬುದನ್ನು ಮರೆಯುವಂತಿಲ್ಲ.

     ಕವಿಚರಿತೆಕಾರರ ಪ್ರಥಮ ಸಂಪುಟ ಹೊರ ಬಂದ ಮೇಲೆ ಇ.ಪಿ.ರೈಸ್ ಅವರು ‘A History of kanarese literature’ ಎಂಬ ಕೃತಿಯನ್ನು ಆಂಗ್ಲ ಭಾಷೆಯಲ್ಲಿ ೧೯೧೫ರಲ್ಲಿ ರಚಿಸಿದ್ದಾರೆ. ಶಾಸ್ತ್ರೀಯ ದೃಷ್ಟಿಯನ್ನೊಳಗೊಂಡ ಮೊತ್ತಮೊದಲ ಸಾಹಿತ್ಯ ಚರಿತ್ರೆ ಅದೆಂದು ವಿದ್ವಾಂಸರು ಮಾನ್ಯಮಾಡಿದ್ದಾರೆ. ಕವಿಚರಿತ್ರೆಯ ಎರಡು ಸಂಪುಟಗಳನ್ನು ಆಧರಿಸಿ ಕ್ರಿ.ಶ.೧೯೨೦ರಲ್ಲಿ ಅವರೆ ತಮ್ಮ ಕಾಲದವರೆಗಿನ ಸಾಮಗ್ರಿಯನ್ನು ಅಧ್ಯಯನ ಮಾಡಿ ಸಾಹಿತ್ಯ ಚರಿತ್ರೆಯನ್ನು ಪರಿಷ್ಕೃತ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರೆ ಸೂಚಿಸಿರುವ ಹಾಗೆ ಈ ಕೃತಿಯು ಪಾಶ್ಚಾತ್ಯ ಓದುಗರನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ರಚಿತವಾಗಿದೆ.

     ಎ.ವೆಂಕಟಸುಬ್ಬಯ್ಯನವರ ಕೆಲವು ಕನ್ನಡ ಕವಿಗಳ ಜೀವನ ಕಾಲವಿಚಾರ (೧೯೨೭) ಕೃತಿಯು ಕವಿಚರಿತೆಕಾರರ ಸಂಪುಟಗಳನ್ನು ವಿಮರ್ಶಿಸುವ ಸಲುವಾಗಿ ಬರೆದಂತೆ ಹಲವು ಕವಿಗಳ ಜೀವನ ಕಾಲ ವಿಚಾರಗಳ ಸಂಕಲನವಾಗಿದೆ. ಅಲ್ಲದೆ ಪ್ರಾಚೀನ ಸಾಹಿತ್ಯವನ್ನು ಅರ್ಥೈಸಲು ಪ್ರಮಾಣ ಗ್ರಂಥವಾಗಿದೆ.ಕವಿಯ ಕಾವ್ಯಶಕ್ತಿಯ ಸತ್ವ ಹಾಗೂ ದೌರ್ಬಲ್ಯಗಳು,ಕೃತಿ ವಸ್ತುವಿನ ಮಹತ್ವ ಪ್ರಯೋಜನಗಳನ್ನು ಅರ್ಥೈಸಬೇಕಾದರೆ ಕವಿಯ ಹಾಗೂ ಕವಿಕೃತಿಯ ಕಾಲದ ಪರಿಜ್ಞಾನ ಅನಿವಾರ್ಯ ಮತ್ತು ಅಗತ್ಯ. ಕವಿಯ ಮನಸ್ಸಿನ ಮೇಲೆ ಆಯಾಕಾಲದ ಸಂದರ್ಭ ಹಾಗೂ ಸನ್ನಿವೇಶಗಳ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಅಂಶಗಳು ತಿಳಿದು ಬಂದ ಹಾಗೆಲ್ಲಾ ಕವಿಕೃತಿಯ ಮೌಲ್ಯಮಾಪನ ಮಾಡಬಹುದಾಗಿದೆ ಎಂಬ ಆಶಯದ ಹಿನ್ನೆಲೆಯಲ್ಲಿ ಸಾಹಿತ್ಯ ಚರಿತ್ರೆಯ ರೂಪುರೇಷೆಗಳನ್ನು ಚಿತ್ರಿಸಲು ಕವಿಕಾಲ ನಿರ್ಣಯವೇ ಅಡಿಪಾಯ ಎನ್ನುವ ನಿಲುವನ್ನು ಎ.ವೆಂಕಟಸುಬ್ಬಯ್ಯನವರು ತಾಳಿದ್ದರು.   ಇವರ ಕೃತಿಯ ಮೂಲಕ ಕವಿಗಳ ಕಾಲ ಕೃತಿಗಳ ಬಗೆಗೆ ಕವಿಚರಿತೆಕಾರರು ತಾಳಿದ ನಿಲುವುಗಳು ಮರು ಪರಿಶೀಲನೆಗೆ ಒಳಪಟ್ಟವು. ಈ ಸಂದರ್ಭದಲ್ಲಿ ಅಯ್ಯನವರು ಪ್ರಮುಖ ಪಾತ್ರ ವಹಿಸಿ ಕವಿಚರಿತೆಯಲ್ಲಿ ಕೆಲವು ಕನ್ನಡ ಕವಿಗಳ ಜೀವನ ಕಾಲದ ವಿಷಯವಾಗಿ ಪ್ರಸ್ತಾಪಿಸಲ್ಪಟ್ಟಿರುವ ಅಭಿಪ್ರಾಯಗಳು ಅಸಮರ್ಪಕವಾಗಿವೆ ಎಂದು ಭಾವಿಸಿ ಆಳವಾದ ಅಧ್ಯಯನ ಹಾಗೂ ಆಕರಗಳ ಹಿನ್ನಲೆಯಲ್ಲಿ ಕವಿಗಳ ಮತ್ತು ಕೃತಿಗಳ ಕಾಲನಿರ್ಣಯದಲ್ಲಿ ಕವಿಚರಿತೆಕಾರರು ತಾಳಿದ ನಿಲುವಿಗಿಂತ ವಿಭಿನ್ನವಾದ ನಿಲುವುಗಳನ್ನು ವ್ಯಕ್ತಪಡಿಸಿದರು. ಅಯ್ಯನವರ ಕೃತಿಯಲ್ಲಿ ಕವಿಕೃತಿಗಳಲ್ಲಿಯ ಸ್ವಕೀಯ ವಿವರಗಳು,ಪೂರ್ವಕವಿಗಳ ಉಲ್ಲೇಖ, ಲಕ್ಷಣ ಗ್ರಂಥ ಮತ್ತು ಸಂಕಲಿತ ಗ್ರಂಥಗಳ ಸಾಕ್ಷ್ಯ, ಕವಿಗಳ ಹೇಳಿಕೆ, ಶಾಸನಾಧಾರಗಳು,ಆಶ್ರಯದಾತನ ಕಾಲ,ಗುರುಪರಂಪರೆ ಇತ್ಯಾದಿಗಳು ಕವಿಗಳ ಕಾಲನಿರ್ಣಯವನ್ನು ಪುನರ್ ಮೌಲ್ಯೀಕರಿಸಲು ಸಹಾಯಕವಾಗಿವೆ. ಕವಿಗಳ ಕಾಲ ನಿರ್ಣಯದಲ್ಲಿ ಅಯ್ಯನವರು ತಾಳಿದ ತಾಳಿರುವ ನಿಲುವುಗಳಲ್ಲಿ ಕೆಲವು ಇಂದಿಗೂ ಮಾನ್ಯವಾಗಿವೆ. ಪಂಪ ಪೂರ್ವಯುಗ ಹಾಗೂ ಪಂಪಯುಗದ ಕವಿಗಳ ಕಾಲನಿರ್ಣಯ ಮತ್ತು ಕೃತಿವಿಚಾರದಲ್ಲಿ ಅಯ್ಯನವರ ಅಭಿಪ್ರಾಯಗಳು ಇಂದಿಗೂ ಸಾರ್ವಕಾಲಿಕವಾಗಿವೆ. 

     ಕವಿಚರಿತೆಕಾರರ ನಂತರ ಕನ್ನಡ ಎಂ.ಎ.ವಿದ್ಯಾರ್ಥಿಗಳಿಗೆ ಸಾಹಿತ್ಯ ಚರಿತ್ರೆಯನ್ನು ಬೋಧಿಸುವ ಸಲುವಾಗಿ ಕೆಲವು ಸಾಹಿತ್ಯ ಚರಿತ್ರೆಗಳು ರೂಪುಗೊಂಡವು. ಎನ್.ಕೆ.ಕುಲಕರ್ಣಿಯವರ ಕನ್ನಡ ಸಾಹಿತ್ಯ ವಾಹಿನಿ (೧೯೩೯), ಕೆ.ವೆಂಕಟರಾಮಪ್ಪರ ಕನ್ನಡ ಸಾಹಿತ್ಯ (೧೯೩೯), ಬಿ.ಎಂ.ಶ್ರೀ ಅವರ ಕನ್ನಡ ಕೈಪಿಡಿ ಭಾಗ-೨ (೧೯೪೭) ಗಳನ್ನು ಉಲ್ಲೇಖಿಸಬಹುದು. ಬಿ.ಎಂ.ಶ್ರೀ.ರವರರು ಸಾಹಿತ್ಯ ಚರಿತ್ರೆಯನ್ನು ಸಮರ್ಥವಾಗಿ ರಚಿಸಬಲ್ಲಂತಹ ಶಕ್ತಿಯನ್ನುಳ್ಳವರಾಗಿದ್ದರು. ಆದಾಗ್ಯೂ ಇವರ ಅಪೂರ್ಣ ಸಾಹಿತ್ಯ ಚರಿತ್ರೆಯು ಪದ್ಯಗಳ ಉದಾಹರಣೆಗಳ ಭಾರದಿಂದ ತುಂಬಿ ಹೋಗಿದ್ದು ಗದ್ಯದಲ್ಲಿ ಕವಿಗಳ ಪ್ರಶಂಸೆ ವ್ಯಕ್ತವಾಗಿದೆ. ಹೀಗಾಗಿ ಇವರ ಸಾಹಿತ್ಯ ಚರಿತ್ರೆ ಜನತೆಯ ಗಮನಕ್ಕೆ ಅಷ್ಟಾಗಿ ಬಾರದೆ ಹೋಯಿತು.

ಕ)ತೃತೀಯ ಹಂತ (ಕ್ರಿ.ಶ.೧೯೫೧-೧೯೭೪):

    ಈ ಅವಧಿಯಲ್ಲಿ ಪರಿಪೂರ್ಣವಾದ ಸಾಹಿತ್ಯ ಚರಿತ್ರೆ ರಚನೆಗೆ ಹಿನ್ನಲೆಯ ರೀತಿಯಲ್ಲಿ ವಿವಿಧ ವಿದ್ವತ್ ಪತ್ರಿಕೆಗಳಲ್ಲಿ ನೂರಾರು ಸಂಶೋಧಕರ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಸಂಶೋಧನಾತ್ಮಕ ಲೇಖನಗಳು ನಾಡಿನಾದ್ಯಂತ ಪ್ರಕಟವಾಗಿದ್ದವು. ಕೆಲವು ಶಾಸನ ಸಂಪುಟಗಳು, ಇತಿಹಾಸ ಕೃತಿಗಳು, ರಚನೆಯಾಗಿದ್ದವು. ಅದಕ್ಕಿಂತ ಮುಖ್ಯವಾಗಿ ವಿದ್ವತ್ಪೂರ್ಣ ಮುನ್ನುಡಿಗಳನ್ನೊಳಗೊಂಡ ಪ್ರಾಚೀನ ಹಾಗೂ ಮಧ್ಯಕಾಲೀನ ಯುಗದ ಕನ್ನಡ ಕೃತಿಗಳು ಸಂಪಾದನೆಗೊಂಡು ಪ್ರಕಟಗೊಂಡಿದ್ದವು. ಕವಿಚರಿತೆಯ ರಚನೆಯ ಕಾಲದಲ್ಲಿ ಇದ್ದಂತಹ ಸಂಧಿಗ್ದ ಸ್ಥಿತಿ ಇರಲಿಲ್ಲ. ವಸ್ತು ಸಂಗ್ರಹಕ್ಕೆ ಓಲೆಗರಿಯಲ್ಲಿಯೇ ಇರುವ ಕೃತಿಗಳನ್ನು ಪರಿಶೀಲಿಸುವ ಸಲುವಾಗಿ ಎಡಕಾಡುವ ಅವಶ್ಯಕತೆ ಇರಲಿಲ್ಲ. ಕವಿಚರಿತೆಯನ್ನು ಸಾಹಿತ್ಯ ಚರಿತ್ರಯನ್ನಾಗಿಸಬೇಕಾಗಿತ್ತು. ಹೀಗಾಗಿ ಕಾಲವಿಂಗಡನೆಗೆ ಮಾನದಂಡಗಳನ್ನು ರೂಪಿಸುವುದು, ಕಾವ್ಯವಿಮರ್ಶೆಗೆ ಚರಿತ್ರೆಯಲ್ಲಿ ಸೂಕ್ತ ಸ್ಥಾನವನ್ನು ಕಲ್ಪಿಸಿಕೊಡುವುದು, ಸಾಹಿತ್ಯ ಚರಿತ್ರೆಗೆ ಶಾಸ್ತ್ರಗೌರವವನ್ನು ಕಲ್ಪಿಸಿಕೊಡುವುದು, ಯುಗದ ವೈಶಿಷ್ಟ್ಯವನ್ನು ಗುರುತಿಸುವುದು ಇತ್ಯಾದಿ ಅಂಶಗಳನ್ನೊಳಗೊಂಡ ಸಾಹಿತ್ಯ ಚರಿತ್ರೆಗಳು ರಚನೆಯಾಗಿವೆ. ಈ ನಿಟ್ಟಿನಲ್ಲಿ ರಂ.ಶ್ರೀ.ಮುಗಳಿ ಅವರ ಕನ್ನಡ ಸಾಹಿತ್ಯ ಚರಿತ್ರೆಯು ಅವರೇ ಹೇಳಿಕೊಂಡಿರುವ ಹಾಗೆ ಕನ್ನಡ ನಾಡಿನ ಸಾಹಿತ್ಯವನ್ನು ಆಧುನಿಕ ದೃಷ್ಟಿಯಿಂದ ವ್ಯಾಸಂಗ ಮಾಡಬೇಕೆನ್ನುವವರಿಗೆ ಅವಶ್ಯಕವೆಂದು ತೋರುವ ಚಾರಿತ್ರಿಕ ಮತ್ತು ವಿಮರ್ಶಾತ್ಮಕ ವಿವೇಚನೆ ಒಂದು ಸಮಗ್ರ ಗ್ರಂಥ ರೂಪದಲ್ಲಿ ಸಿದ್ಧಪಡಿಸಿರುವ ರೀತಿಯದಾಗಿದೆ. ಅದೇ ರೀತಿ ಎಂ.ಮರಿಯಪ್ಪ ಭಟ್ಟರ ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ (೧೯೬೦), ತ.ಸು.ಶಾಮರಾಯ, ಮೇ ರಾಜೇಶ್ವರಯ್ಯರ ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ (೧೯೬೪), ಎನ್.ಅನಂತ ರಂಗಾಚಾರ್ ಅವರ ಸಾಹಿತ್ಯ ಭಾರತಿ (೧೯೭೦), ಸಿ.ಎನ್.ಕೃಷ್ಣಮೂರ್ತಿ ಅವರ ಕನ್ನಡ ಕಾವ್ಯ ಪರಂಪರೆಯ ಪರಿಚಯ(೨೦೧೫)ಗಳು ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸುವ ವಿದ್ಯಾರ್ಥಿಗಳು ಹಾಗೂ ಆಸಕ್ತರನ್ನು ದೃಷ್ಟಿಯಲ್ಲಿಟ್ಟುಕೊಂಡು ವೈಯಕ್ತಿಕವಾಗಿ  ರಚಿತವಾಗಿವೆ.

ಡ)ಚತುರ್ಥ ಹಂತ (ಕ್ರಿ.ಶ.೧೯೭೫ ರಿಂದ, ನಂತರ):

     ಇಲ್ಲಿಯವರೆಗೂ ವೈಯಕ್ತಿಕ ಮಟ್ಟದಲ್ಲಿ ಸಾಹಿತ್ಯ ಚರಿತ್ರೆಯ ನಿರ್ಮಾಣ ನಡೆದರೆ ನಂತರದ ಕಾಲದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಗಳು ಸಾಂಸ್ಥಿಕ ಮಟ್ಟದಲ್ಲಿ ಸಂಶೋಧನಾತ್ಮಕ ಮಟ್ಟದಲ್ಲಿ ಸಂಶೋಧನಾತ್ಮಕ ಮಟ್ಟದ ಸಾಹಿತ್ಯ ಚರಿತ್ರೆಯನ್ನು ಸಿದ್ಧಪಡಿಸುವಂತಹ ಯೋಜನೆಯನ್ನು ಹಾಕಿಕೊಂಡವು. ಏಕೆಂದರೆ ಈ ಅವಧಿಯಲ್ಲಿ ಕವಿಕಾವ್ಯ ವಿಚಾರಗಳನ್ನು ಕುರಿತ ಹಾಗೆ ಸಂಶೋಧನಾ ಗ್ರಂಥಗಳು ಪ್ರಕಟಗೊಂಡಿದ್ದವು. ಕವಿ-ಕೃತಿಗಳಿಗೆ ಸಂಬಂಧಿಸಿದ ಹಾಗೆ ಸಂಶೋಧಕರು ಸಾಕಷ್ಟು ನೂತನ ಅಂಶಗಳನ್ನು ಬೆಳಕಿಗೆ ತಂದಿದ್ದರು. ಸಾಹಿತ್ಯ ಚರಿತ್ರೆಯನ್ನು ವ್ಯವಸ್ಥಿತವಾಗಿ ರಚಿಸಲು ಹಿನ್ನೆಲೆಯಾದ ವಿಪುಲವಾದ ಆಧಾರ ಸಾಮಗ್ರಿ ಎದುರಾಗಿತ್ತು. ಈ ಅಗಾಧ ಸಾಮಗ್ರಿಯನ್ನು ಬಳಸಿಕೊಂಡು ಸಮಗ್ರ ಸಾಹಿತ್ಯ ಚರಿತ್ರೆಯನ್ನು ಸಾಂಸ್ಥಿಕ ಮಟ್ಟದಲ್ಲಿ ರೂಪಿಸಲು ಈ ಎರಡು ಸಂಸ್ಥೆಗಳು ಮುಂದಾದವು. ಬೆಂಗಳೂರು ವಿಶ್ವವಿದ್ಯಾಲಯವು, ವಿದ್ವಾಂಸರಲ್ಲದ ಆದರೆ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗೆಗೆ ತಕ್ಕಮಟ್ಟಿಗೆ ಆಸಕ್ತಿ ಅಭಿರುಚಿಯನ್ನು ತಾಳಿದ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ’ ಎಂಬ ಯೋಜನೆಯನ್ನು ಹಾಕಿಕೊಂಡು ೧೯೭೫ರಲ್ಲಿ ವಿವಿಧ ಕನ್ನಡ ಸಾಹಿತ್ಯ ರೂಪಗಳಿಗನುಗುಣವಾಗಿ ಹತ್ತು ಸಂಪುಟಗಳಲ್ಲಿ ಪ್ರಕಟಿಸಿತು. ಈ ಸಂಪುಟಗಳು ಸಂಪಾದಕರೇ ತಿಳಿಸಿರುವ ಹಾಗೇ ಪ್ರಾತಿನಿಧಿಕವಾದ ಪ್ರಮುಖ ಕವಿಗಳನ್ನು ಕೇಂದ್ರದಲ್ಲಿರಿಸಿಕೊಂಡು ಅವರಿಗೆ ಹಿನ್ನಲೆಯಾದ ಯುಗಧರ್ಮದಲ್ಲಿ ಅಂದಂದಿನ ಸಾಹಿತ್ಯಕ್ಕೆ ಒದಗಿದ ಪ್ರೇರಣೆಗಳು, ಅಂದಂದಿನ ಸಾಹಿತ್ಯಕ ಸಾಧನೆಗಳ ಪರಿಚಯವನ್ನು ಒಳಗೊಂಡಿವೆ. ಬರವಣಿಗೆ ವಿಮರ್ಶನ ಹಾಗೂ ಮೌಲ್ಯಮಾಪನ ದೃಷ್ಟಿಯನ್ನೊಳಗೊಂಡ ಹಾಗೆ ಸರಳವಾಗಿದೆ. ಸಮಗ್ರ ಕನ್ನಡ ಸಾಹಿತ್ಯದ ತಕ್ಕಮಟ್ಟಿನ ಪರಿಚಯ ವಾಗಿರುವುದರ ಜೊತೆಗೆ ಮೂಲ ಕನ್ನಡದ ಕವಿಕೃತಿಗಳನ್ನು ಓದಬೇಕೆನ್ನುವ ಆಸಕ್ತಿಯನ್ನು ಮೂಡಿಸಲು ಪ್ರಯತ್ನಿಸಿವೆ.

     ಬೆಂಗಳೂರು ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯವನ್ನು ಅದರ ಐತಿಹಾಸಿಕ ಸಾಂಸ್ಕೃತಿಕ ಸಂದರ್ಭಗಳ ಹಿನ್ನೆಲೆಯಲ್ಲಿರಿಸಿಕೊಂಡು ಕೂಲಂಕುಶವಾಗಿ ಪರಿಶೀಲಿಸುವ ಮತ್ತು ವಿಮರ್ಶಿಸುವ ವ್ಯಾಪಕ ಪ್ರಯತ್ನವನ್ನು ಸಾಂಸ್ಥಿಕ ಮಟ್ಟದಲ್ಲಿ ಕೈಗೊಂಡಿತು. ಸಂಪಾದಕರೇ ಹೇಳಿರುವ ಹಾಗೆ ಈ ಯೋಜನೆಯು ಕನ್ನಡ ಸಾಹಿತ್ಯದ ಆರಂಭಕಾಲದಿಂದ ಹಿಡಿದು ಆಧುನಿಕ ಕಾಲದವರೆಗೆ ಹಲವು ಕಾಲಮಾನಗಳನ್ನು ಮಾಡಿಕೊಂಡು ಪ್ರತಿಯೊಂದು ಕಾಲಮಾನದ ಸಾಹಿತ್ಯಾಭಿವ್ಯಕ್ತಿಯನ್ನು ಅಂದಂದಿನ ಇತಿಹಾಸ, ಭಾಷಾ ಸ್ವರೂಪ, ಸಂಸ್ಕೃತಿ, ಧರ್ಮ ಇವುಗಳ ಹಿನ್ನಲೆಯಿಂದ ಸಮಗ್ರವಾಗಿ ಪರಿಶೀಲಿಸುವುದಲ್ಲದೆ ಈ ಸಾಹಿತ್ಯ ಚರಿತ್ರೆ ಪ್ರಮಾಣಭೂತವೂ ಪುನರ್ ಮೌಲ್ಯಮಾಪನ ದೃಷ್ಟಿಯುಳ್ಳದ್ದು ಆಗಿರಬೇಕೆಂಬ ಆಶಯವನ್ನು ಹೊಂದಿದೆ.

     ೧೯೭೪-೧೯೯೧ರ ವರೆಗೆ ೧೮ ವರ್ಷಗಳ ದುಡಿತದ ಫಲವಾಗಿ ಆರು ಸಂಪುಟಗಳು ಹೊರಬಂದವು.

ಸಂಪುಟ      ಕಾಲವಧಿ                    ಪ್ರಕಟನ ವರ್ಷ       ಪುಟಗಳು

೧      ಪ್ರಾರಂಭಕಾಲದಿಂದ ಕ್ರಿ.ಶ.೮೫೦ರ ವರೆಗೆ       ೧೯೭೪            ೧೬೮

೨      ಕ್ರಿ.ಶ.೮೫೦ರಿಂದ ಕ್ರಿ.ಶ.೧೧೫೦ರ ವರೆಗೆ          ೧೯೭೫            ೩೬೨

೩      ಕ್ರಿ.ಶ.೧೧೫೦ ರಿಂದ ೧೩೫೦ರ ವರೆಗೆ           ೧೯೭೬            ೭೨೪

೪      ಭಾಗ-೧. ಕ್ರಿ,ಶ.೧೩೫೦ ರಿಂದ ೧೫೦೦ರ ವರೆಗೆ    ೧೯೭೭            ೩೬೬

       ಭಾಗ-೨. ಕ್ರಿ.ಶ.೧೫೦೦ ರಿಂದ ೧೬೦೦ರ ವರೆಗೆ     ೧೯೭೮        ೩೬೬-೯೬೭

೫      ಕ್ರಿ.ಶ.೧೬೦೦ ರಿಂದ ೧೮೫೦ರ ವರೆಗೆ            ೧೯೮೨           ೫೦೪

೬      ಕ್ರಿ.ಶ.೧೮೫೦ ರಿಂದ ೧೯೨೦                  ೧೯೯೧            ೪೭೩

 

ಈ ಸಂಪುಟಗಳಲ್ಲಿಯ ವಿವರಗಳು ಕನ್ನಡ ಸಾಹಿತ್ಯ ಚರಿತ್ರೆಯ ವಿಶ್ವದರ್ಶನವನ್ನು ಮಾಡಿಸುತ್ತವೆ. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಒಂದು ಹಿರಿಯ ಸಾಹಸ ಹಾಗೂ ಸಿದ್ಧಿಯಾಗಿದೆ. ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ರಾಜಕೀಯ ಇತಿಹಾಸ, ಧಾರ್ಮಿಕ ಹಾಗೂ ಸಾಮಾಜಿಕ ಜೀವನ, ಭಾರತೀಯ ಹಾಗೂ ಜಾಗತಿಕ ಸಾಹಿತ್ಯ ಚರಿತ್ರೆ, ಕನ್ನಡ ಭಾಷೆಯ ಇತಿಹಾಸ ಇತ್ಯಾದಿ ವೈವಿಧ್ಯಮಯ ಸಮಾಲೋಚನೆಯನ್ನು ಒಳಗೊಂಡಿದೆ. ಈ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿ ಆಕರಗಳ ಸಂಗ್ರಹಕ್ಕಿಂತ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವೈಯಕ್ತಿಕ ಸಾಹಿತ್ಯ ಚರಿತ್ರೆಗಳಲ್ಲಿ ಈಗಾಗಲೇ ಪ್ರಾತಿನಿಧಿಕವಾಗಿ ಚರ್ಚಿತವಾಗಿರುವ ಕವಿಕೃತಿಗಳನ್ನೇ ವಿಸ್ತಾರವಾಗಿ ವಿಭಿನ್ನ ದೃಷ್ಟಿಕೋನಗಳಿಂದ ವಿಶ್ಲೇಷಣೆಗೆ, ವಿಮರ್ಶೆಗೆ ಒಳಪಡಿಸಲಾಗಿದ್ದು ಸಂಕೀರ್ಣ ಮಾದರಿಯ ಸಾಹಿತ್ಯ ಚರಿತ್ರೆಯಾಗಿದೆ. ಅದಕ್ಕಿಂತ ಹೆಚ್ಚಾಗಿ ಕವಿಗಳ ಕಾಲ, ದೇಶ, ಕೃತಿಗಳ ಸಂಖ್ಯೆ, ರೂಪ ಛಂದಸ್ಸಿನಲ್ಲಿ ನಡೆದಿರುವ ಸಂಶೋಧನೆಯನ್ನೆಲ್ಲಾ ಬಳಸಿಕೊಂಡು ಪರಿಪೂರ್ಣ ರೀತಿಯಲ್ಲಿ ಸಾಹಿತ್ಯ ಚರಿತ್ರೆಯನ್ನು ರೂಪಿಸಲು ಯತ್ನಿಸಲಾಗಿದೆ. ಈ ಸಂಪುಟಗಳಲ್ಲಿ ಹಳಗನ್ನಡ ಸಾಹಿತ್ಯದ ಅಧ್ಯಯನದಲ್ಲಿ ಮೂಲಭೂತ ವಿಧಾನಗಳನ್ನು ಅನುಸರಿಸಿದ್ದರೂ ಸಾಧ್ಯವಿದ್ದಷ್ಟು ಮಟ್ಟಿಗೆ ಹೊಸತನವನ್ನು ಅಳವಡಿಸಿಕೊಂಡಿದೆ. ಜಿ.ಎಸ್.ಶಿವರುದ್ರಪ್ಪನವರು ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಯೋಜನೆಯಡಿಯಲ್ಲಿ ಪ್ರಾಚೀನ ಸಾಹಿತ್ಯದಿಂದ ಆರಂಭಿಸಿ ಆರು ಸಂಪುಟಗಳನ್ನು ಸಾಹಿತ್ಯ ಸಂದರ್ಭದ ವೈಶಿಷ್ಟ್ಯತೆ, ವೈವಿಧ್ಯತೆ, ಮಹತ್ವಗಳನ್ನರಿತು, ಕಾಲಘಟ್ಟಗಳನು ನಿಗಧಿ ಪಡಿಸಿ ಕಾಲದ ಹಿನ್ನೆಲೆಯಲ್ಲಿ ಚಾರಿತ್ರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಧ್ಯಯನ ಮಹತ್ವದ ವಿವರಗಳನ್ನು ಆಯಾ ವಿಷಯ ಪರಿಣಿತರಿಂದ ವಿದ್ವತ್ಪೂರ್ಣವಾಗಿ ಬರೆಸಿ ಸಿದ್ಧಪಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಪ್ರಕಟಿಸಿದ್ದರು. ಕನ್ನಡ ಅಧ್ಯಯನ ಕೇಂದ್ರವು ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿಯಲ್ಲಿ ಹೀಗಾಗಲೇ ಪ್ರಕಟವಾಗಿದ್ದ ಸಮಗ್ರಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳ ಪರಿಷ್ಕರಣೆ, ಪ್ರಕಟನೆಯ ಜೊತೆಗೆ ಆಧುನಿಕ ಸಮಗ್ರ ಸಾಹಿತ್ಯ ಚರಿತ್ರೆಯ ಆರು  ಸಂಪುಟಗಳನ್ನು ವಿವಿಧ ವಿದ್ವಾಂಸರಿಂದ ಸಂಬಂಧಿಸಿದ ಲೇಖನಗಳನ್ನು ಬರೆಸಿ ಸಂಗ್ರಹಿಸಿ ಸಿದ್ಧಪಡಿಸಿ ೨೦೧೪ ರಲ್ಲಿ ಪ್ರಕಟಿಸಿದೆ.  ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸಗನ್ನಡದ ನಾಲ್ಕು ಘಟ್ಟಗಳ ವಿವಿಧ ಸಂವೇದನೆಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆ ಯಾವ ರೀತಿ ನಾವೀನ್ಯತೆಯನ್ನು ಸಾಧಿಸಿದೆ ಎಂಬುದನ್ನು ಈ ಸಂಪುಟಗಳಲ್ಲಿ ಗುರುತಿಸಿರುವುದನ್ನು ಕಾಣಬಹುದು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ:

 ಸುದೀರ್ಘವೂ ಸಂಪದ್ಯುಕ್ತವೂ ಆದ ಕನ್ನಡ ಸಾಹಿತ್ಯ ಚರಿತ್ರೆಯನ್ನು ನಿರೂಪಿಸುವ ಹಲವು ಗ್ರಂಥಗಳು ಈವರೆಗೆ ವೈಯಕ್ತಿಕ ಮಟ್ಟದಲ್ಲಿ ಪ್ರಕಟವಾಗಿದ್ದರೂ, ಅವುಗಳಿಗೆ ಬಗೆಬಗೆಯ ಸೀಮಿತಗಳಿವೆ. ಮುಖ್ಯವಾಗಿ, ಸಾಹಿತ್ಯದ ಪ್ರಾಚೀನತೆ ಹರವುಗಳ ಎದುರಿನಲ್ಲಿ ಈ ಚರಿತ್ರೆಗಳು ಸಂಕ್ಷೇಪವಾದವು: ಸಾಹಿತ್ಯ ಚರಿತ್ರೆಯನ್ನು ಬರೆಯುವವರಿಗೆ ಒದಗುವ ತೊಡಕುಗಳ ಕಾರಣದಿಂದ ಅಪರಿಪೂರ್ಣವಾದವು. ಆದುದರಿಂದ ಸಮಗ್ರವಾದ ಒಂದು ಸಾಹಿತ್ಯ ಚರಿತ್ರೆ ಕನ್ನಡದ ಬಹುದಿನಗಳ ಅಗತ್ಯವಾಗಿತ್ತು. ಕನ್ನಡ ಸಾಹಿತ್ಯದ ವ್ಯಾಪ್ತಿ ಯೋಜನೆ ಕುರಿತು ವೈವಿಧ್ಯಗಳನ್ನು ಗಮನಿಸಿದಾಗಲೆಲ್ಲ ಈ ಮಹಾಸಾಹಿತ್ಯದ ಚರಿತ್ರೆಯ ರಚನೆಗೆ ಅನೇಕ ಕೈಗಳು ಕೂಡಬೇಕಾದುದರ ಅಗತ್ಯ ಸ್ಪಷ್ಟವಾಗುತ್ತಿತ್ತು.  ಇಂಥದೊಂದು ಸಾಹಿತ್ಯ ಚರಿತ್ರೆಯ ನಿರ್ಮಾಣಕ್ಕೆ ಸಾಂಸ್ಥಿಕ ಪ್ರಯತ್ನವೂ ತುಂಬ ಆವಶ್ಯವಿದ್ದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಕಾರ್ಯ ತತ್ಫರವಾಯಿತು. ಈ ನಿಟ್ಟಿನಲ್ಲಿ ಪ್ರೊ. ದೇ. ಜವರೇಗೌಡರು ತಾವು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾದ ಆರಂಭದಲ್ಲಿಯೇ (ಅಕ್ಟೋಬರ್ , ೧೯೬೪) ಕನ್ನಡ ವಿಭಾಗದ ಆಶ್ರಯದಲ್ಲಿ ಸಮಗ್ರವಾದ ಸಾಹಿತ್ಯ ಚರಿತ್ರೆಯ ರಚನೆಗೆ ಒಂದು ಯೋಜನೆ ಹಾಕಿದರು. ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ, ಸಂಶೋಧಕರ ನೆರವಿನಿಂದ ಹಲವು ಸಂಪುಟಗಳಲ್ಲಿ ವಿವರಣಾತ್ಮಕವೂ, ಅಧಿಕೃತವೂ ಆದ ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಿದ್ಧಗೊಳಿಸಿ ಪ್ರಕಟಿಸಬೇಕೆಂದು ತೀರ್ಮಾನಿಸಿ, ರೂಪ ರೇಖೆಗಳನ್ನು ಕೂಲಂಕುಶವಾಗಿ ಚರ್ಚಿಸಿ ಸಿದ್ದಪಡಿಸಿ, ಬರೆಯಬೇಕಾದ ಲೇಖನಗಳ ಸ್ವರೂಪ ವ್ಯಾಪ್ತಿಗಳನ್ನು ಗೊತ್ತುಪಡಿಸಿದರು. ಆದರೆ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ  ಇತರೆ ಸಾಂಸ್ಥಿಕ ಯೋಜನೆಗಳಿಂದಾಗಿ, ಸಾಹಿತ್ಯ ಚರಿತ್ರೆಯ ಯೋಜನೆ ಕುಂಠಿತವಾದರೂ, ಒಂದು ದಶಕದ ಅನಂತರ (ಅಕ್ಟೋಬರ್,೧೯೭೪) “ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ'ಯ ಮೊದಲ ಸಂಪುಟ ಪ್ರಕಟವಾಯಿತು.

ಸಾಹಿತ್ಯ ಸಂಪುಟಗಳ ಸ್ವರೂಪ:   ಮೈಸೂರು ವಿಶ್ವವಿದ್ಯಾನಿಲಯವು ಸಹ ಸಾಂಸ್ಥಿಕ ಮಟ್ಟದಲ್ಲಿ ೧೦ ಸಂಪುಟಗಳಲ್ಲಿ ವಿದ್ವತ್ ವಲಯವನ್ನು ದೃಷ್ಟಿಯಲ್ಲಿರಿಸಿಕೊಂಡು ಸಾಹಿತ್ಯ ಚರಿತ್ರೆಯ ಯೋಜನೆಯನ್ನು ಹಾಕಿಕೊಂಡಿತು. ಸಾಂಸ್ಥಿಕ ಮಟ್ಟದ ಸಾಹಿತ್ಯ ಚರಿತ್ರೆಯ ಯೋಜನೆಯು ಸಂಪಾದಕರ ಮಾತಿನಲ್ಲಿಯೇ ಹೇಳುವುದಾದರೆಪ್ರಥಮ ಸಂಪುಟ,ಹಿನ್ನೆಲೆಯ ಸಂಪುಟದಲ್ಲಿ ಸಾಹಿತ್ಯ ಚರಿತ್ರೆಯ ಸ್ವರೂಪ, ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ, ಸಮೀಕ್ಷೆ, ವಿಸ್ತಾರ ಪರಿಮಿತಿ, ರಚನೆಗೆ ಇರುವ ಸಾಧನಗಳು, ವಿಭಜನಕ್ರಮ ; ಕವಿಕಾಲ ನಿರ್ಣಯದ ಆಧಾರಗಳು , ತೊಡಕುಗಳು ; ಭಾರತೀಯ ಹಿನ್ನೆಲೆ : ಕನ್ನಡ ನಾಡು ನುಡಿ ಜನತೆ ಕರ್ನಾಟಕ ಚರಿತ್ರೆಯ ಅವಲೋಕನ, ಸಾಂಸ್ಕೃತಿಕಧಾರ್ಮಿಕ, ಸಾಮಾಜಿಕ ಜನಜೀವನ ಕನ್ನಡ ಹಾಗೂ ಇತರ ಭಾಷೆಗಳ ಪರಸ್ಪರ ಸಂಬಂಧ, ಪ್ರಭಾವ ಮೊದಲಾದ ಸಾಮಾನ್ಯ ವಿಷಯಗಳನ್ನು ಒಳಗೊಂಡಿವೆ. ಎರಡರಿಂದ ಎಂಟನೆಯ ಸಂಪುಟಗಳವರೆಗೆ ಪ್ರತಿಯೊಂದು ಸಂಪುಟದಲ್ಲಿಯೂ ಆಯಾ ಅವಧಿಯ ಕವಿ ಕೃತಿಗಳ ವಿವರವಾದ ಪರಿಚಯ ಮಾತ್ರವಲ್ಲದೆ, ಭಾರತೀಯ ಹಿನ್ನೆಲೆ, ಜನಜೀವನ ಮತ್ತು ಸಾಹಿತ್ಯ; ದಕ್ಷಿಣ ಭಾರತದ ಇತರ ಭಾಷೆಯ ಸಾಹಿತ್ಯಗಳ ಸ್ಥಿತಿಗತಿಗಳು; ರಾಜಕೀಯ ಚರಿತ್ರೆ, ರಾಜಾಶ್ರಯ ಕನ್ನಡ ನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜನಜೀವನ; ಭಾಷೆಯ ಸ್ವರೂಪ-ಮೊದಲಾದ ವಿಷಯಗಳ ವ್ಯಾಪಕ ಚರ್ಚೆಯನ್ನು ಒಳಗೊಂಡಿದೆ. ಆಯಾ ಸಂದರ್ಭಗಳಲ್ಲಿ ಪ್ರತಿಯೊಂದು ಸಾಹಿತ್ಯ ಪ್ರಕಾರದ ಉಗಮ, ವಿಕಾಸಗಳ ನಿರೂಪಣೆಯ ಜೊತೆಗೆ ಆಯಾ ಕಾಲಘಟ್ಟದ  ಸಾಹಿತ್ಯದ ವೈಶಿಷ್ಟ್ಯ ಸಾಧನೆಗಳನ್ನು ಪ್ರತಿ ಸಂಪುಟದಲ್ಲಿ ಗುರುತಿಸಿರುವುದನ್ನು ಕಾಣಬಹುದಾಗಿದೆ. ಏಳು ಎಂಟನೇ ಸಂಪುಟಗಳು ಆಧುನಿಕ ಸಾಹಿತ್ಯಕ್ಕೆ ಸಂಬಂಧಿಸಿದ್ದು, ಮೊದಲನೆಯದರಲ್ಲಿ ಕಾದಂಬರಿ, ಸಣ್ಣಕಥೆ, ಕಾವ್ಯ ಪ್ರಕಾರಗಳು ಸೇರುತ್ತವೆ. ಮಿಕ್ಕ ಸಾಹಿತ್ಯ ಪ್ರಕಾರಗಳು, ಶಾಸ್ತ್ರಗಳು ಎರಡನೆಯದರಲ್ಲಿ ಸಮಾವೇಶಗೊಳ್ಳುತ್ತವೆ. ಒಂಭತ್ತನೆಯ ಸಂಪುಟದಲ್ಲಿ ಒಟ್ಟು ಸಾಹಿತ್ಯದ ದೃಷ್ಟಿಯಿಂದ ಜನಪದ ಸಾಹಿತ್ಯ, ಶಾಸನಸಾಹಿತ್ಯ, ಗದ್ಯ ಸಾಹಿತ್ಯ ಮತ್ತು ಶಾಸ್ತ್ರ ಸಾಹಿತ್ಯಗಳನ್ನು ಕುರಿತು ವಿಚಾರ ಮಾಡುವುದಲ್ಲದೆ, ಕನ್ನಡ ಸಾಹಿತ್ಯಕ್ಕೆ ದೊರೆತ ರಾಜಾಶ್ರಯ ಜನಾಶ್ರಯ ಸಾಹಿತ್ಯಕ ಸಂಘಸಂಸ್ಥೆಗಳು; ಅವುಗಳ ಸಾಧನೆ ಇತರ ಭಾಷೆಗಳಲ್ಲಿ ಕನ್ನಡ ಕೃತಿಗಳು; ಕನ್ನಡದಲ್ಲಿ ಇತರ ಭಾಷೆಗಳ ಕೃತಿಗಳು ಕನ್ನಡ ಸಾಹಿತ್ಯದ ಮಹತ್ವ ಪರಿಮಿತಿ ಭಾರತೀಯ ಸಾಹಿತ್ಯದಲ್ಲಿ ಕನ್ನಡದ ನೆಲೆ ಬೆಲೆ; ವಿಶ್ವಸಾಹಿತ್ಯಕ್ಕೆ ಕನ್ನಡದ ಕೊಡುಗೆ ಮೊದಲಾದ ವಿಚಾರಗಳನ್ನು ದಾಖಲು ಮಾಡುವ ಉದ್ದೇಶವನ್ನು ಹೊಂದಿವೆಯಾದರೂ ಕೊನೆಯ ಈ ಸಂಪುಟಗಳು ಇನ್ನೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ. 

ಮೈ.ವಿ.ವಿ.ಯ ಕನ್ನಡ ಅಧ್ಯಯನವು ಯೋಜಿಸಿದ್ದ ಸಾಂಸ್ಥಿಕ ಯೋಜನೆಯ ಸ್ಥೂಲ ಸ್ವರೂಪ

ಸಂಪುಟ ೧ : ಹಿನ್ನೆಲೆ

ಸಂಪುಟ ೨ : ಆದಿಕಾಲದಿಂದ ಕ್ರಿ.ಶ.ಸು. ೮೫೦

ಸಂಪುಟ ೩ : ಕ್ರಿ.ಶ. ಸು . ೮೫೦ - ಕ್ರಿ.ಶ. ಸು . ೧೧೫೦

          ಸಂಪುಟ ೪ : ಕ್ರಿ.ಶ. ಸು . ೧೧೫೦ - ಕ್ರಿ.ಶ. ಸು . ೧೩೫೦

          ಸಂಪುಟ ೫ : ಕ್ರಿ.ಶ. ಸು . ೧೩೫೦ - ಕ್ರಿ.ಶ. ಸು . ೧೬೫೦

ಸಂಪುಟ ೬ : ಕ್ರಿ.ಶ. ಸು . ೧೬೫೦ - ಕ್ರಿ.ಶ.ಸು. ೧೮೫೦

ಸಂಪುಟ ೭-೮ : ಕ್ರಿ.ಶ. ಸು . ೧೮೫೦ - ಕ್ರಿ.ಶ.ಸು. ೧೯೭೦

ಸಂಪುಟ ೯ : ಕೆಲವು ವಿಶೇಷ ರೂಪಗಳು , ವಿಷಯಗಳು

ಸಂಪುಟ ೧೦ : ಅನುಬಂಧಗಳು

ಯೋಜನೆಯ ಸ್ವರೂಪ ಹಾಗೂ ಗಾತ್ರವನ್ನು ಹತ್ತು ಸಂಪುಟಗಳ ವರೆಗೆ ಯೋಜಿಸಿದ್ದರೂ ೧೯೭೪-೨೦೧೨ರ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿದ್ದು ಕೇವಲ ಐದು ಸಂಪುಟಗಳು ಅದರ ಉಪಸಂಪುಟ ಭಾಗಗಳು ಮಾತ್ರ.

 

ಸಂಪುಟ    ಕಾಲಾವಧಿ                               ಪ್ರಕಟನ ವರ್ಷ        ಪುಟಗಳು

 ೧       ಹಿನ್ನಲೆ                                    ೧೯೭೪              ೭೬೩

 ೨       ಆದಿಕಾಲದಿಂದ ಸು.೮೫೦ರ ವರೆಗೆ                    ೧೯೭೫              ೮೩೯

 ೩       ಸು.ಕ್ರಿ.ಶ.೮೫೦ರಿಂದ ಸು.೧೧೫೦ರವರೆಗೆ                  ೧೯೭೬              ೯೦೭

 ೪       ಭಾಗ-೧ ಮತ್ತು ೨

         ಕ್ರಿ.ಶ.೧೧೫೦ರಿಂದ ಕ್ರಿ.ಶ.೧೩೫೦ರವರೆಗೆ                  ೧೯೭೭              ೧೮೩೨

 ೫       ಭಾಗ-೧ ಕ್ರಿ.ಶ.೧೩೫೦ರಿಂದ ಕ್ರಿ.ಶ.೧೪೨೪ರವರೆಗೆ            ೧೯೮೧               ೮೪೦

         ಭಾಗ-೨ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು,       ೨೦೦೮

         ಭಾಗ-೩ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು,       ೨೦೦೮

         ಭಾಗ-೪ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು,       ೨೦೧೨

  ಈ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿ ವಿಷಯ ಮಂಡನೆ ಖಂಡನೆಗಳಲ್ಲಿ ವಿದ್ವಾಂಸರಿಂದ ಮಾನ್ಯವಾದ ಸಂಗತಿಗಳನ್ನೆ ಅಳವಡಿಸಿಕೊಳ್ಳಲಾಗಿದೆ. ಸಂಶೋಧಕರ ಪ್ರಬಲವಾದ ವೈಯಕ್ತಿಕ ಅಭಿಪ್ರಾಯಗಳನ್ನು ತಮಗೆ ಕೊಟ್ಟ ವಿಷಯದಲ್ಲಿ ವ್ಯಕ್ತ ಮಾಡಿರುವುದರ ಜೊತೆಗೆ, ಆ ಅಭಿಪ್ರಾಯಗಳ ಜೊತೆಗೆ ಸ್ವೀಕೃತವಾದ ಸಾಮಾನ್ಯ ಅಭಿಪ್ರಾಯಗಳನ್ನು ಒಪ್ಪಿ ಹಾಗೆಯೇ ಉಳಿಸಿಕೊಂಡಿದ್ದಾರೆ. ಈ ಸಂಪುಟಗಳಲ್ಲಿ ಕವಿಗಳ ವಿಚಾರವಾಗಿ ಅನೇಕ ಸಂಶೋಧನಾತ್ಮಕ ಲೇಖನಗಳಲ್ಲಿ ಮೂಡಿ ಬಂದಿರುವ ವಿಚಾರಗಳನ್ನೆಲ್ಲಾ ಸಂಗ್ರಹಿಸಿ ಅಳವಡಿಸಿಕೊಳ್ಳಲಾಗಿದೆ. ಅಂದರೆ ಇಲ್ಲಿಯವರೆಗೂ ಸಾಹಿತ್ಯ ಚರಿತ್ರೆಯ ಬಗೆಗೆ ನಡೆದಿರುವ ಸಂಶೋಧನೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ. ವಿಷಯ ವಿಶ್ಲೇಷಣೆಗಿಂತ ಆಕರ ಸಾಮಗ್ರಿಗಳ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವೈಯಕ್ತಿಕ ಸಾಹಿತ್ಯ ಚರಿತ್ರೆಗಳಲ್ಲಿ ಗಣನೆಗೆ ಬಾರದೆ ಇರುವ ಅಸಂಖ್ಯ ಕವಿಗಳ, ಅವರ ಕೃತಿಗಳ ಬಗ್ಗೆ ಈ ಸಂಪುಟಗಳಲ್ಲಿ ಪ್ರಥಮ ಬಾರಿಗೆ ಅವಕಾಶ ಕಲ್ಪಿತವಾಗಿದೆ. ಶಾಸನೋಕ್ತರಾದ ಕವಿಗಳು, ಕೇವಲ ಹೆಸರಷ್ಟೇ ದೊರಕುವ ಕವಿಕೃತಿಗಳು ಇತ್ಯಾದಿಗಳ ಬಗೆಗೂ ಮಾಹಿತಿ ನೀಡಲಾಗಿದೆ. ಕವಿಗಳ ಕಾಲ ನಿರ್ಧಾರ ನಿಜಕ್ಕೂ ಒಂದು ಸಮಸ್ಯೆಯೇ. ಇಂದಿನವರೆಗೆ ನಡೆದ ಸಂಶೋಧನೆಯ ಬೆಳಕಿನಲ್ಲಿ ಕವಿಗಳ ಕಾಲವನ್ನು ಆದಷ್ಟು ಮಟ್ಟಿಗೆ ನಿರ್ದಿಷ್ಟಗೊಳಿಸಲು ಪ್ರಯತ್ನಿಸಿದ್ದಾರೆ. ಎಲ್ಲಿ ಬೇರೆ ಆಧಾರ ಸಿಕ್ಕಿಲ್ಲವೋ ಅಂತಹ ಕಡೆ ಕವಿಚರಿತೆಕಾರರು ಮತ್ತು ಇತರರು ಉಲ್ಲೇಖಿಸಿದ ಕಾಲವನ್ನೆ ಉಳಿಸಿಕೊಂಡಿದ್ದಾರೆ. ಕವಿ ಕೃತಿಗಳ ವಿಷಯದಲ್ಲಿ ಇದುವರೆಗೆ ನಡೆದಿರುವ ಚರ್ಚೆ ಎಲ್ಲವನ್ನೂ ಇರಬಹುದಾದ ಹೊಸ ಸಂಶೋಧನೆಗಳೊಡನೆ ಸಂಕ್ಷಿಪ್ತವಾಗಿ ನಿರೂಪಿಸುವುದು: ಸಾಧ್ಯವಾದ ಮಟ್ಟಿಗೂ ವಿಮರ್ಶಾತ್ಮಕವಾಗಿ ಕೃತಿಗಳ ಮೌಲ್ಯವನ್ನು ನಿರ್ಧರಿಸುವುದು ಈ ಸಾಹಿತ್ಯ ಚರಿತ್ರೆಯ ಸಂಪುಟಗಳ ಮುಖ್ಯ ಉದ್ದೇಶವಾಗಿರುವುದನ್ನು ನಾವು ನೋಡ ಬಹುದಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಭಾಗಿಯಾದ ಪ್ರತಿಯೊಂದು ಅಂಶವು ದಾಖಲಾಗಬೇಕೆಂಬ ಆಸಕ್ತಿ ಎದ್ದು ಕಾಣುತ್ತದೆ. ಈ ಸಾಹಿತ್ಯ ಚರಿತ್ರೆ ಒಂದು ರೀತಿಯಲ್ಲಿ ವಿಶ್ವಕೋಶದ ಮಾದರಿಯಲ್ಲಿದೆ. ಸಾಮಗ್ರಿಯನ್ನು ಸಂಗ್ರಹಿಸಿ, ಸಂಕಲಿಸಿ, ಸಂಯೋಜಿಸುವಲ್ಲಿ ಸಂಶೋಧನಾತ್ಮಕ ನೆಲೆಗಳು ವ್ಯಕ್ತವಾಗಿವೆ. ಸಾಮಗ್ರಿ ಹಾಗೂ ಪರಿಕರಗಳನ್ನು ವಿಪುಲವಾಗಿ ಒಳಗೊಂಡಿವೆ.

ಸಿ.ವೀರಣ್ಣ ಅವರ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಸಂಪುಟಗಳು: ಸಾಂಸ್ಥಿಕ ಮಟ್ಟದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯಗಳು ಸಮಗ್ರ ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಹೊರತಂದ ಹೊತ್ತಿನಲ್ಲಿಯೇ ಕೆಲವು ವಿದ್ವಾಂಸರು ವೈಯಕ್ತಿಕವಾಗಿ ವಿಭಿನ್ನ ರೀತಿಯ ಒಳನೋಟಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ರೂಪಿಸುವ ಪ್ರಯತ್ನದಲ್ಲಿ ಭಾಗಿಯಾದರು. ಸಾಹಿತ್ಯ ಚರಿತ್ರೆಯ ಮೂಲಕ ಕನ್ನಡ ನಾಡಿನ ಜನ ಜೀವನವನ್ನು ಒಳಹೊಕ್ಕು ನೋಡುವ, ಅದರ ಜೀವನಾಡಿಯ ಮಿಡಿತವನ್ನು ಗುರುತಿಸಬೇಕೆನ್ನುವ ಅಭಿಲಾಷೆಯಿಂದ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಎಂಬ ಯೋಜನೆಯಡಿಯಲ್ಲಿ ಸಿ.ವೀರಣ್ಣನವರು ಐದು ಸಂಪುಟಗಳಲ್ಲಿ ಸಿದ್ಧಪಡಿಸಲು ಸಿದ್ಧರಾದರು. ಸಾಹಿತ್ಯ ಕೃತಿಗಳ ಬಲದಿಂದ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಿರುವುದನ್ನು ಕಾಣಬಹುದು.  ಸಿ.ವೀರಣ್ಣ ಅವರು ಸಮಾಜ ಮತ್ತು ಅದರ ಉತ್ಪನ್ನಗಳಲ್ಲಿ ಒಂದಾದ ಸಾಹಿತ್ಯವನ್ನು, ಸಮಾಜೋ-ವೈಜ್ಞಾನಿಕ ಮನೋಭೂಮಿಕೆಯಲ್ಲೇ ವಿಶ್ಲೇಷಿಸುವಂತಹ ಸಾಹಿತ್ಯ ಚರಿತ್ರೆಯನ್ನು ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಶೀರ್ಷಿಕೆಯಡಿಯಲ್ಲಿ ಐದು ಸಂಪುಟಗಳಲ್ಲಿ ಬರೆಯಲು  ಯೋಜನೆಯನ್ನು ಹಾಕಿಕೊಂಡಿದ್ದರು. ಅವುಗಳಲ್ಲಿ ೧. ಪ್ರಾಚೀನ ಸಾಹಿತ್ಯ ( ರಾಜಸತ್ತೆಯ ವೈಭವದ ಕಾಲ ಕ್ರಿ.ಶ.೮೫೦ ರಿಂದ ೧೧೦೦), ೨. ಮಧ್ಯಕಾಲೀನ ಸಾಹಿತ್ಯ ( ರಾಜಸತ್ತೆಯ ವಿಘಟನೆಯ ಕಾಲ ಕ್ರಿ.ಶ.೧೧೦೦ ರಿಂದ ೧೫೦೦) ಎಂಬ ಎರಡು ಸಂಪುಟಗಳು ಬಹಳ ಹಿಂದೆ ಪ್ರಕಟಗೊಂಡಿದ್ದು, ಪುನರ್ ಮುದ್ರಣಗಳನ್ನು ಕಂಡಿವೆ.  ಉಳಿದ ಸಂಪುಟಗಳಾದ ರಾಜಸತ್ತೆಯ ನಿಸ್ತೇಜದ ಕಾಲ ಕ್ರಿ.ಶ. ೧೫೦೦ ರಿಂದ ೧೮೫೦), ವಸಾಹತು ಶಾಹಿಯ ಕಾಲ (ಕ್ರಿ.ಶ.೧೮೫೦ ರಿಂದ ೧೯೫೦), ಬಂಡವಾಳ ಶಾಹಿಯ ಯುಗ (  ಪ್ರತಿಭಟನೆಯ ದನಿಗಳುಳ್ಳ ಆಧುನಿಕ ಸಾಹಿತ್ಯ, ಕ್ರಿ.ಶ. ೧೯೫೦ ರಿಂದ ಈಚೆಗೆ) ಗಳು ಸಿದ್ಧತೆಯಲ್ಲಿವೆ.  ಸಮಾಜ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಆಯಾ ಕಾಲದ ದಾಖಲೆಯ ಕುರುಹುಗಳಾಗಿ ಇವರ ಸಾಹಿತ್ಯ ಚರಿತ್ರೆಯ ಸಂಪುಟಗಳು ರೂಪುಗೊಂಡಿವೆ.

    ಇವರ ʻಕನ್ನಡ ಸಾಹಿತ್ಯ-ಚಾರಿತ್ರಿಕ ಬೆಳವಣಿಗೆ'ಯ ಮೊದಲ ಸಂಪುಟ ಪ್ರಕಟವಾದ ನಂತರ ಒಂದು ರೀತಿಯಲ್ಲಿ 'ಸಾಹಿತ್ಯ ಚರಿತ್ರೆಯನ್ನು ಅಭ್ಯಾಸ ಮಾಡುವ ಕ್ರಮವೇ ಬದಲಾಯಿತು', 'ಸಾಹಿತ್ಯ ಚರಿತ್ರೆ ಕುರಿತ ತಮ್ಮ ಆಲೋಚನೆಯ ದಿಕ್ಕನ್ನೇ' ಓದುಗರು  ಬದಲಾಯಿಸಿಕೊಂಡರು.  ಸಾಹಿತ್ಯ ಚರಿತ್ರೆ ಪಾಠ ಮಾಡುವ ಅಧ್ಯಾಪಕರುಗಳು  ಪಾಠಕ್ಕೊಂದು ನೋಟ ಒದಗಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇವರ ಸಾಹಿತ್ಯ ಚರಿತ್ರೆಯ ಸಂಪುಟಗಳು 'ರಾಜಕೀಯ ಸಾಮಾಜಿಕ ಚೌಕಟ್ಟಿನಲ್ಲಿ ಸಾಹಿತ್ಯ ಚರಿತ್ರೆಯ ನಿರೂಪಣೆ ಮತ್ತು ವಿಶ್ಲೇಷಣೆ ಮಾಡುವ ನೆಲೆಗಟ್ಟನ್ನು ಹೊಂದಿದ್ದು, ಕನ್ನಡದಲ್ಲಿ ಅಂಥ ಅಧ್ಯಯನ ಕ್ರಮವನ್ನು ಗಟ್ಟಿಗೊಳಿಸಿತು ಎಂದು ಅಧ್ಯಯನ ಕಾರರು ಈಗಾಗಲೇ  ಗುರುತಿಸಿದ್ದಾರೆ. ಡಾ. ಹಾ.ಮಾ. ನಾಯಕ ಅವರು 'ಹೊಸ ಹಾದಿ, ಹೊಸ ಹೊರಡುವಿಕೆʼ ಎಂದೂ, ರಂ.ಶ್ರೀ. ಮುಗಳಿ ಅವರು 'ಇದು ಎಷ್ಟೋ ವಿಚಾರಗಳಲ್ಲಿ ನನಗಿಂತ ಮುಂದಿದೆ' ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು  ಈ ಸಂಪುಟಗಳು ಸಾಹಿತ್ಯ ಚರಿತ್ರೆಯನ್ನು ನೋಡುವ ದೃಷ್ಟಿಕೋನದಲ್ಲಿ  ವಿಭಿನ್ನತೆಯನ್ನು ಹುಟ್ಟಿ ಹಾಕಿತು.  ವೈಯಕ್ತಿಕ ಸಾಹಿತ್ಯ ಚರಿತ್ರೆಗಳಲ್ಲಿ, ʻ ಕಿಟ್ಟೆಲ್ ಅವರದು ಕನ್ನೆ ಪ್ರಯತ್ನ, ಚರಿತ್ರೆಯನ್ನು ಒಂದು ರೂಪಕ್ಕೆ ತರುವುದೇ ಅಲ್ಲಿನ ಕೆಲಸ. ನರಸಿಂಹಾಚಾರ್ಯರದು ಕಣಜ ಪ್ರಯತ್ನ. ಸಾಮಗ್ರಿಯ ಸಂಗ್ರಹಣೆಯೇ ಅವರ ಗುರಿ. ಮುಗಳಿಯವರದು ಕಟ್ಟುವ ಪ್ರಯತ್ನ, ಚಾರಿತ್ರಿಕ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡುತ್ತ ಇತಿಹಾಸವನ್ನು ನಿರೂಪಿಸುವುದು ಅದರ ಸ್ವರೂಪ, ವೀರಣ್ಣನವರದು ಕೆದಕುವ ಪ್ರಯತ್ನ, ಒಂದು ವಿಶಿಷ್ಟ ದೃಷ್ಟಿಕೋನದಿಂದ ಚರಿತ್ರೆಯನ್ನು ವಿಶ್ಲೇಷಿಸುವುದು ಅದರ ಉದ್ದೇಶ. ಈ ನಾಲ್ಕು ಪ್ರಯತ್ನಗಳಿಂದ ಕನ್ನಡ ಸಾಹಿತ್ಯ ಚರಿತ್ರೆಗೆ ಒಂದು ವಿಶಿಷ್ಟವಾದ ರೂಪ ದೊರೆಯುವುದು ಸಾಧ್ಯವಾಗಿದೆ. ಬೇರೆ ಬೇರೆ ದೃಷ್ಟಿಕೋನಗಳಿಂದ ಸಾಹಿತ್ಯವನ್ನು ನೋಡುವುದು ವಿವಿಧ ಉದ್ದೇಶಗಳಿಂದ ಚರಿತ್ರೆಯನ್ನು ನಿರೂಪಿಸುವುದು ಸಹಜವಾದುದು. ವೀರಣ್ಣನವರ ಕೆಲಸ ಈ ದೃಷ್ಟಿಯಿಂದ ಒಂದು ನಾಂದಿ ಎನ್ನಬಹುದು. ( ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ, ಹಾಮಾ ನಾಯಕ, ಬೆನ್ನುಡಿ,೨೦೧೯ ೬ನೆ ಮುದ್ರಣ)  

     ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಇಡಿಯಾದ ಮತ್ತು ಬಿಡಿಯಾದ ಸಂಶೋಧನೆಯಿಂದಾಗಿ ಸಾಹಿತ್ಯ ಚರಿತ್ರೆಯ ಪರಿಧಿ ವಿಸ್ತರಿಸಿತು. ಬೆಳವಣಿಗೆಯ ದೃಷ್ಟಿಯಿಂದ ವಿಕಾಸಹೊಂದಿತು. ಹೆಚ್ಚಿನ ಕವಿಗಳು, ಅವರ ಕೃತಿಗಳು ಬೆಳಕು ಕಂಡವು. ಕೃತಿಗಳ ಪಟ್ಟಿ ಬೆಳೆಯಿತು. ಹಸ್ತಪ್ರತಿಗಳ ರೂಪದಲ್ಲಿದ್ದ ಕೃತಿಗಳು ಸಂಪಾದನೆಗೊಂಡು ಪ್ರಕಟವಾದವು. ಸಾಹಿತ್ಯ ಚರಿತ್ರೆಗೆ ಪೂರಕವಾಗುವ ಕೆಲವು ಶಾಸನಗಳು ಶೋಧಿತವಾದವು. ಈ ಹಿನ್ನಲೆಯಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಬೆಳವಣಿಗೆಗಳಾದುದನ್ನು ಗುರುತಿಸಬಹುದು.

೧.     ಕವಿಗಳ ಜನ್ಮಸ್ಥಳಗಳಿಗೆ ಸಂಬಂಧಿಸಿದ ಹಾಗೆ ನೂತನ ಸಂಗತಿಗಳು ಬೆಳಕಿಗೆ ಬಂದವು.

೨.    ಕವಿಗಳ ತಂದೆ ತಾಯಿಗಳ, ಗುರುಗಳ ಆಶ್ರಯದಾತರ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದವು.

೩.     ಒಂದೇ ಹೆಸರಿನ ಇಬ್ಬರು ಕವಿಗಳನ್ನು ಒಬ್ಬನೇ ಎಂದು ತಿಳಿದುಕೊಂಡಿದ್ದು ದೂರವಾಗಿ ಬೇರೆ ಬೇರೆ ಎಂದು ನಿರ್ಧರಿತವಾಯಿತು.

೪.    ಕವಿಗಳನ್ನು, ಕೃತಿಗಳನ್ನು ಉಲ್ಲೇಖಿಸುವ ಶಾಸನಗಳು ಶೋಧಿಸಲ್ಪಟ್ಟವು.

೫.     ವಚನಕಾರರ ಹಾಗೂ ಹರಿದಾಸರ ಅಂಕಿತಗಳಲ್ಲಿ ಏರ್ಪಟ್ಟಿದ್ದ ಸಂದಿಗ್ಧತೆ ದೂರವಾಯಿತು.

೬.    ಒಬ್ಬನೇ ಬರೆದ ಕೃತಿಗಳನ್ನು ಇನ್ನಾರೋ ಕವಿಯ ಹೆಸರಿನಲ್ಲಿ ಗುರುತಿಸಿದ್ದು ನಿವಾರಣೆಯಾಯಿತು.

೭.     ವಚನಕಾರರು ವಚನಗಳ ರಚನೆಯ ಜೊತೆಯಲ್ಲಿಯೇ ಸ್ವರವಚನಗಳನ್ನು ಬರೆದಿದ್ದಾರೆಂಬ ಅಂಶ ಶೋಧಿತವಾಗಿ ಅಸಂಖ್ಯಾತ ಸ್ವರವಚನಗಳು ಹಾಗೂ ತತ್ವ ಪದಗಳು ಬೆಳಕು ಕಂಡವು.

೮.     ಕರ್ತೃ ಯಾರೆಂದು ತಿಳಿಯದಿದ್ದ ಕೃತಿಯೊಂದರ ಕರ್ತೃವಿನ ಹೆಸರು ಲಭಿಸಿತು. (ಇಮ್ಮಡಿನಾಗವರ್ಮ-ವರ್ಧಮಾನ ಪುರಾಣ).

೯.     ಕವಿಸಂಬಂಧಿ ಪ್ರಾಚೀನ ಸ್ಮಾರಕಗಳು ಬೆಳಕಿಗೆ ಬಂದವು. (ಹಂಪೆಯಲ್ಲಿನ ಹರಿಹರ ಹಾಗೂ ಚಾಮರಸರ ವಾಸಸ್ಥಳ ಶೋಧ).

೧೦.    ಕವಿಚರಿತೆಯ ಮೂರು ಸಂಪುಟಗಳಿಗೆ ಹಲವೆಡೆ ಸೂಕ್ತ ತಿದ್ದುಪಡಿ ಮಾಡಬೇಕೆನ್ನುವ ಅಂಶ ವ್ಯಕ್ತವಾಯಿತು.

೧೧.    ಎಷ್ಟೋ ಅನಾಮಧೇಯ ಕವಿಗಳು ಬೆಳಕಿಗೆ ಬಂದವು.

೧೨.    ಕವಿಚರಿತೆಯಲ್ಲಿ ಉಲ್ಲೇಖವಾಗದೆ ಇರುವ ಅಸಂಖ್ಯಾತ ಕವಿಗಳ ಕೃತಿಗಳು ಸಂಶೋಧನೆಯ ಮೂಲಕ ಬೆಳಕು ಕಂಡವು. ಹಸ್ತಪ್ರತಿ ತಜ್ಞ ಎಸ್. ಶಿವಣ್ಣನವರು ಕೊಡ ಮಾಡಿರುವ ಸಂಶೋಧನಾ ಮಾಹಿತಿಯಿಂದ ಕವಿಚರಿತೆಕಾರರು ಸೂಚಿಸಿದ್ದ ಕವಿಗಳ ಕಾಲದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ವಿಶೇಷವಾಗಿ ನಡುಗನ್ನಡ ಹಾಗೂ ನಂತರದ ಕಾಲದಲ್ಲಿಯ ಕವಿಗಳ ಕಾಲನಿರ್ಣಯದಲ್ಲಿ ಸಾಕಷ್ಟು ತಿದ್ದುಪಡಿಯಾಗಿದೆ. ಎಷ್ಟೋ ಕವಿಗಳ ಕಾಲವು ಸುಮಾರು ಇನ್ನೂರು ವರುಷ ಮುಂದೆ ಹಾಕಲಾಗಿದೆ. ಕೆಲವೆಡೆ ಹಿಂದಕ್ಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್. ಶಿವಣ್ಣನವರು ವಿವಿಧ ಮೂಲಗಳ ಆಕರಗಳ ಹಿನ್ನೆಲೆಯಲ್ಲಿ ನೀಡಿರುವ ಕವಿಗಳ ಕಾಲದ ಬಗೆಗಿನ ತಿದ್ದುಪಡಿ ವಿವರಗಳು ಇಂದು ೧೯ ನೇ ಶತಮಾನದವರೆಗಿನ ಆಧುನಿಕ ಪೂರ್ವದ ಸಾಹಿತ್ಯ ಚರಿತ್ರೆಯನ್ನು ಆಮೂಲಾಗ್ರ ಬದಲಾವಣೆಯನ್ನು ಮಾಡಬೇಕಾದ ಅನಿವಾರ್ಯತೆಯನ್ನು ವಿದ್ವಾಂಸರ ಮುಂದಿಟ್ಟಿದೆ.

    ಇಂದು ಸಂಶೋಧನೆಯಿಂದ ಬೆಳಕಿಗೆ ಬಂದ ನೂತನ ಸಂಗತಿಗಳನ್ನು ಅಳವಡಿಸಿಕೊಂಡು ಪರಿಷ್ಕೃತವಾದ ಸಮಗ್ರಸಾಹಿತ್ಯ ಚರಿತ್ರೆಯನ್ನು ರೂಪಿಸ ಬೇಕಾದ ಅಗತ್ಯತೆ ಇಂದು ವಿದ್ವಾಂಸರ ಮೇಲಿದೆ.ಇಂದಿಗೂ ಎಸ್.ಶಿವಣ್ಣ, ಎಲ್.ಬಸವರಾಜು, ವೀರಣ್ಣರಾಜೂರ, ಚಿದಾನಂದಮೂರ್ತಿ, ಎಂ.ಎಂ.ಕಲಬುರ್ಗಿ, ಹಂಪನಾ, ಕೆ.ಅನಂತರಾಮು, ಬಿ.ಆರ್.ಹಿರೇಮಠ, ಬಿ.ಎಸ್.ಸಣ್ಣಯ್ಯ, ಎನ್.ಎಸ್.ತಾರಾನಾಥ, ಟಿ.ವಿ.ವೆಂಕಟಾಚಲಶಾಸ್ತ್ರಿ, ಬಿ.ನಂಜುಂಡಸ್ವಾಮಿ, ಸಿ.ನಾಗಭೂಷಣ ಮುಂತಾದ ವಿದ್ವಾಂಸರು ಶೋಧಿಸಿಕೊಟ್ಟಿರುವ ಸಂಶೋಧನಾ ವಿವರಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ಅಳವಡಿಸಿಕೊಂಡು  ಕನ್ನಡ ಸಾಹಿತ್ಯ ಚರಿತ್ರೆಯ ಪರಿಪೂರ್ಣ ಹಾಗೂ ವಿಸ್ತೃತವಾದ ಪುನರ್ ಮೌಲ್ಯೀಕರಣದ ಅಧ್ಯಯನವನ್ನು ಕೈಕೊಳ್ಳಬೇಕಾಗಿದೆ.

 ಪರಾಮರ್ಶನ ಗ್ರಂಥಗಳು

೧. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ( ಪ್ರ.ಸಂ.ಜಿ.ಎಸ್.ಶಿವರುದ್ರಪ್ಪ) ಸಂಪುಟ-೧

 ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು೧೯೭೩

೨. ಸಿ.ನಾಗಭೂಷಣ, ಕನ್ನಡ ಸಂಶೋಧನೆ ಸಮೀಕ್ಷೆ

   ಶ್ರೀ. ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ.೨೦೦೬

೩.ಸಿ.ವೀರಣ್ಣ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ, ಪ್ರಾಚೀನ ಸಾಹಿತ್ಯ ಸಂ.೧, ನವಕರ್ನಾಟಕ ಪ್ರಕಾಶನ, ಬೆಂಗಳೂರು, ೬ ನೇ ಮುದ್ರಣ, ೨೦೧೯)

೪. ಕನ್ನಡ ಸಾಹಿತ್ಯ ಚರಿತ್ರೆ,      ಸಂ:ಹಾ.ಮಾ.ನಾಯಕ

    ಸಂಪುಟ-೫ ಕನ್ನಡ ಅಧ್ಯಯನ ಸಂಸ್ಥೆಮೈ.ವಿ.ವಿ.ಮೈಸೂರು. ೧೯೮೧

೫.  ಕನ್ನಡ ಸಾಹಿತ್ಯ ಚರಿತ್ರೆರಂ.ಶ್ರೀ.ಮುಗಳಿ  ಪ್ರ: ಉಷಾ ಸಾಹಿತ್ಯ ಮಾಲೆ, ಮೈಸೂರು. ೧೯೭೧

೬. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ,

    ಸಂ. ರಾಮೇಗೌಡ. ಸಂ.೫. ನಾಲ್ಕನೆಯ ಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೨೦೧೨

೬. ಶ್ರೀಮುಖ(ಟಿ.ವಿ.ವೆಂಕಟಾಚಲಶಾಸ್ತ್ರಿ ಅವರ ಅಭಿನಂದನಾ ಗ್ರಂಥ) ಸಂ: ಪ್ರಧಾನ ಗುರುದತ್ತ ಮತ್ತು ಇತರರು, ಮೈಸೂರು,೧೯೯೭

೭. ಕರ್ನಾಟಕ ಕವಿಚರಿತೆ ಭಾಗ ೨ ಮತ್ತು ೩ ಸಂ. ಆರ್. ನರಸಿಂಹಾಚಾರ್ಯ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೧೯೭೩, ೧೯೭೪.

 

 

 

ಶನಿವಾರ, ಅಕ್ಟೋಬರ್ 11, 2025

 ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣೀ ಸೂತ್ರರತ್ನಾಕರದಲ್ಲಿ ಬಸವಣ್ಣನವರ    ಕುರಿತ ಸಂಗತಿಗಳು         ಡಾ.ಸಿ.ನಾಗಭೂಷಣ

 

      ಕವಿಯ ಇತಿವೃತ್ತ: ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ಕೃತಿಯ ಸಮಾಪ್ತಿ ವಾಕ್ಯದಲ್ಲಿಯ `ಭಕ್ತಿ ಜ್ಞಾನ ವೈರಾಗ್ಯವೇ ರೂಪುವೆತ್ತ ಷಟ್‌ಸ್ಥಲಾಚಾರ್ಯ ವಿರಕ್ತ ನಮಃ ಶಿವಾಯ ದೇವರೆಂಬ ಸದ್ಗುರು ಮೂರ್ತಿಯಲ್ಲಿ ಅವರ ಮಹಾನುಭಾವ ವಾಕ್ಯ ಪ್ರಸನ್ನ ಪ್ರಸಾದಾಮೃತಮಂ ಭೈರವದೇವನ ಕಾವ್ಯದಲ್ಲಿ ಸೂಚನೆಯಾಗಿರ್ದ ಕಥೆಗಳನ್ನು ವಿಶಾಲವಾಗಿ ಬರೆದು ಸಂಗ್ರಹಿಸೆಂದು ನಿರೂಪಿಸೆ' ಎನ್ನುವ ಹೇಳಿಕೆಯಿಂದ ಈ ಕೃತಿಯನ್ನು ರಚಿಸಿದ ಕವಿಯ ಹೆಸರು ಶಾಂತಲಿಂಗದೇಶಿಕ ಎಂಬುದು ವ್ಯಕ್ತವಾಗುತ್ತದೆ. ಈ ಕೃತಿಯಲ್ಲಿಯ ಕವಿಯನ್ನು ಕುರಿತ ಹಾಗೆ ಆಂತರಿಕ ಸಾಕ್ಷ್ಯಗಳಿಂದ ತಿಳಿದುಬರುವ ಸಂಗತಿಗಳೆಂದರೆ - 

೧. ಈ ಕಾವ್ಯದ ಕರ್ತೃ ಶಾಂತಲಿಂಗ ದೇಶಿಕ

೨. ಈತನ ಗುರು ಷಟ್‌ಸ್ಥಲಾಚಾರ್ಯ ವಿರಕ್ತ ನಮಃ ಶಿವಾಯ ದೇವರು

೩. ಕನ್ನಡ, ಸಂಸ್ಕೃತ, ಪ್ರಾಕೃತ, ಮರಾಠಿ, ತೆಲುಗು, ತಮಿಳು ಭಾಷೆಗಳಲ್ಲಿ ಬಲ್ಲಿದನಾಗಿ ವೇದಾಗಮ ಪುರಾಣ, ಇತಿಹಾಸಗಳ ಸಾರವನ್ನು ಹೀರಿ ಈ ಕೃತಿಯನ್ನು ರಚಿಸಿದ್ದಾನೆ.

      ಕೃತಿಯು ರಚನೆಗೊಂಡ ಕಾಲದ ಬಗೆಗೆ ಕವಿಯೇ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ.`ಶಾಲಿವಾಹನ ಶಕ ೧೫೯೪ನೆಯ ಪರಿದಾವಿ ಸಂವತ್ಸರದ ಮಾರ್ಗಶಿರ ಮಾಸ ಶುದ್ಧ ೧೦ ಉತ್ತರ ಭಾದ್ರಪದ ನಕ್ಷತ್ರ ಶನಿವಾರದಲ್ಲಿ ಸಂಗ್ರಹಿಸಿ ಬರೆದು ಸಂಪೂರ್ಣವಾಯಿತು' ಎನ್ನುವ ಉಲ್ಲೇಖದಿಂದ ಈ ಕೃತಿಯು ಕ್ರಿ.ಶ.೧೬೭೨ರಲ್ಲಿ ರಚನೆಯಾಗಿದೆ. ಕವಿಯ ವೈಯಕ್ತಿಕ ವಿವರಗಳ ಬಗೆಗೆ ಈ ಕೃತಿಯಲ್ಲಾಗಲೀ, ನಂತರದ ಕೃತಿಗಳಲ್ಲಾಗಲೀ ತಿಳಿದುಬಂದಿಲ್ಲ. ಕವಿಯು ಷಟ್‌ಸ್ಥಲಾಚಾರ್ಯ ವಿರಕ್ತ ನಮಃ ಶಿವಾಯ ದೇವರ ಶಿಷ್ಯನಾಗಿ ವಿರಕ್ತಾಶ್ರಮವನ್ನು ಸ್ವೀಕರಿಸಿದಂತೆ ತಿಳಿದುಬಂದಿದೆ. `ಶಾಂತಲಿಂಗ ದೇಶಿಕ' ಹೆಸರು ಈ ಅಂಶವನ್ನು ಪುಷ್ಟೀಕರಿಸುತ್ತದೆ. `ದೇಶಿಕ' ಅಂದರೆ ಗುರು, ಮಾರ್ಗದರ್ಶಕ ಎಂದು ಹೇಳುವುದುಂಟು. ದೇಶಿಕರು ನಿರಾಭಾರಿಗಳಾಗಿದ್ದು ಮನೆ, ಮಾರು, ಕುಲ, ಕುಟುಂಬಗಳನ್ನು ತೊರೆದು ದೇಶವನ್ನು ಸಂಚರಿಸುತ್ತ ಶಿವಾನುಭವ ಸಂಪನ್ನರಾಗಿರುವವರು. ವೀರಶೈವ ಸಾಹಿತ್ಯದಲ್ಲಿ ಅಲ್ಲಲ್ಲಿ ಇಂತಹ ದೇಶಿಕರ ಪ್ರಸ್ತಾಪ ಬಂದಿದೆ. ಉದಾ: ೧. ಮುರಿಗೆಯ ದೇಶಿಕ ೨. ಸದಾಶಿವ ದೇಶಿಕ ೩. ಷಡಕ್ಷರ ದೇವರ ಗುರು ಪರಂಪರೆಯ ಚಿಕ್ಕವೀರ ದೇಶಿಕ ಶಿಖಾಮಣಿ ಇತ್ಯಾದಿಯವರನ್ನು ಹೆಸರಿಸಬಹುದು. ಈ ಹಿನ್ನೆಲೆಯಲ್ಲಿ `ದೇಶಿಕ' ಹೆಸರನ್ನು ಅನ್ವರ್ಥವಾಗಿ ಹೊತ್ತಿರುವಂತೆ ಶಾಂತಲಿಂಗ ಕವಿಯು ವಿರಕ್ತಾಶ್ರಮಿಯಾಗಿರಬೇಕು ಎಂಬುದಾಗಿ ತಿಳಿದುಬರುತ್ತದೆ. ವಿರಕ್ತಾಶ್ರಮಿಯಾದ ಶಾಂತಲಿಂಗರು ತನ್ನ ತಂದೆ-ತಾಯಿಗಳ ಹೆಸರು, ಜನ್ಮಸ್ಥಳ, ಪ್ರಾದೇಶಿಕ ವಿಷಯಗಳ ಬಗೆಗೆ ನಿರುತ್ತರರಾಗಿದ್ದಾರೆ. ಪೂರ್ವಾಶ್ರಮ ನಿರಸನ ಮಾಡಿದ ವಿರಕ್ತಾಶ್ರಮವಾಸಿಗಳಿಗೆ ಹಿಂದಿನ ಸಂಬಂಧ ತಪ್ಪಿ ಹೋಗುವುದರಿಂದ ಅವರು ಕೇವಲ ಗುರುವಿನ ಕರಕಮಲ ಸಂಜಾತರಾದ್ದರಿಂದ ಗುರುವಿನ ಹೆಸರನ್ನು ಮಾತ್ರ ಉಲ್ಲೇಖಿಸುವುದುಂಟು. ಶಾಂತಲಿಂಗ ದೇಶಿಕರು ಮಾಡುರುವುದು ಅದನ್ನೇ. ಕವಿಯ ಜನ್ಮಸ್ಥಳದ ಬಗೆಗೆ ಈ ಕೃತಿಯನ್ನು ಸಂಪಾದಿಸಿದ ಸಂಪಾದಕರುಗಳಾದ ಆರ್.ಸಿ.ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ ಅವರು ಉತ್ತರ ದೇಶ ಎಂದು ಹೇಳಿದ್ದಾರೆ. ಅಂದರೆ ಉತ್ತರ ಕರ್ನಾಟಕದವನಾಗಿರಬೇಕು ಎಂದು ಊಹಿಸಿದ್ದಾರೆ. ಅವರು ಊಹಿಸಲು ಕಾರಣ ಇಷ್ಟೇ. ಈ ಕೃತಿಯನ್ನು ಹೋಲುವಂತಹ ಭೈರವೇಶ್ವರ ಕಾವ್ಯದ ಕಥಾಸಾಗರ ಮತ್ತು ಉಚಿತ ಕತೆಗಳು ಸಂಕಲನ ಕೃತಿಯನ್ನು ಸಿದ್ಧಪಡಿಸಿದ ಉತ್ತರ ದೇಶದ ಬಸವಲಿಂಗನು (ಕಾಲ ಕ್ರಿ.ಶ.೧೬೦೦) ಉತ್ತರ ದೇಶದವನಾಗಿದ್ದು, ಅದೇ ಮಾದರಿಯಲ್ಲಿ ಆಕರ ಗ್ರಂಥವನ್ನು ಹೋಲುವ ರೀತಿಯಲ್ಲಿ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರವನ್ನು ಸಂಕಲಿಸಿರುವ ಶಾಂತಲಿಂಗದೇಶಿಕನು ಉತ್ತರ ನಾಡಿನವನಾಗಿದ್ದಾನೆ ಎಂದು ಊಹಿಸಿದ್ದಾರೆ. ಹಸ್ತಪ್ರತಿ ತಜ್ಞರಾದ ಶ್ರೀ ಎಸ್.ಶಿವಣ್ಣನವರು ಇತ್ತೀಚೆಗೆ ಉತ್ತರ ದೇಶದ ಬಸವಲಿಂಗನ ಕಾಲವನ್ನು ಕ್ರಿ.ಶ.೧೬೦೦ಕ್ಕೆ ಬದಲಾಗಿ ಕ್ರಿ.ಶ.೧೬೭೮-೭೯ ಎಂದು ಆಕರಗಳ ಹಿನ್ನೆಲೆಯಲ್ಲಿ ಖಚಿತಪಡಿಸಿದ್ದಾರೆ. ಹೀಗಾಗಿ ಇಲ್ಲಿಯವರೆಗೂ ತಾಳಿದ್ದ ಉತ್ತರ ದೇಶದ ಬಸವಲಿಂಗನ ಸಂಕಲಿತ ಕೃತಿಗಳನ್ನು ಅನುಸರಿಸಿ ಶಾಂತಲಿಂಗ ದೇಶಿಕನು ಈ ಕೃತಿಯನ್ನು ಸಿದ್ಧಪಡಿಸಿದ್ದಾನೆ ಎನ್ನುವ ಅಭಿಪ್ರಾಯವನ್ನು ನಿರಾಕರಿಸಬೇಕಾಗಿದೆ. ಯಾಕೆಂದರೆ ಈ ರೀತಿಯ ಮಹತ್ವಪೂರ್ಣ ಸಂಕಲನ ಕೃತಿಯನ್ನು ಉತ್ತರ ದೇಶದ ಬಸವಲಿಂಗನಿಗಿಂತ ಮೊದಲೇ ಸಿದ್ಧಪಡಿಸಿದ ಕೀರ್ತಿ ಶಾಂತಲಿಂಗ ದೇಶಿಕನಿಗೆ ಸಲ್ಲುತ್ತದೆ. ಹೀಗಾಗಿ ಸಂಪಾದಕರ ಅಭಿಪ್ರಾಯವನ್ನು ಪುಷ್ಟೀಕರಿಸಲು ಸಾಧ್ಯವಿಲ್ಲ. ಕವಿಯು ಬಸವಪೂರ್ವ ಯುಗ, ಬಸವಯುಗ ಮತ್ತು ಬಸವೋತ್ತರ ಯುಗದ ನೂತನ ಶರಣರ ಬಗೆಗೆ ಪ್ರಸ್ತಾಪಿಸುವಾಗ ಕಲ್ಯಾಣ ನಾಡಿನ ಶರಣರ ಜನ್ಮಸ್ಥಳ, ಪ್ರಾದೇಶಿಕ ನೆಲೆ ಇತ್ಯಾದಿ ಅಂಶಗಳ ಬಗೆಗೆ ಖಚಿತ ಸಂಗತಿಗಳನ್ನು ವ್ಯಕ್ತಪಡಿಸಿರುವುದರಿಂದ ಕಲ್ಯಾಣ ನಾಡಿನ ಭೌಗೋಳಿಕ ಪ್ರದೇಶದ ಪರಿಚಯ ವಿಶೇಷವಾಗಿದ್ದಂತೆ ಕಂಡುಬರುತ್ತದೆ. ಹೀಗಾಗಿ ಕಲ್ಯಾಣ ಕರ್ನಾಟಕ ನಾಡಿನವನಾಗಿದ್ದಿರಬೇಕು ಎಂದು ಊಹಿಸಲು ಅವಕಾಶ ಇದೆ.

      ಈ ಸಂಕಲನ ಕೃತಿ ರಚನೆಗೆ ಹಿನ್ನೆಲೆಯಾಗಿರುವ ಭೈರವೇಶ್ವರನ ಚರಿತೆ: ಮೋಪೂರಿನ ದೊರೆ ಸಂಗಮ ರಾಜ ಮತ್ತು ಮಹಾದೇವಿಯರೆಂಬ ಶಿವಭಕ್ತರ ಉದರದಲ್ಲಿ ಜನಿಸಿದ ಭೈರವ ರಾಜನು ಪ್ರಹುಡಾಚಾರ್ಯನೆಂಬ ಪುರಾಣಿಕನಿಂದ ಕೀರ್ತಿಶಾಲಿಗಳಾದ ಅನೇಕ ದಾನವೀರ ದೊರೆಗಳ ಚರಿತ್ರೆಯನ್ನು, ಶೈವ-ವೀರಶೈವದನ್ವಯ ಮುಕ್ತರಾದ ಮಹಾನುಭಾವರ ಚರಿತ್ರೆಗಳನ್ನು ಕೇಳಿ ಅವರಂತೆ ಮೋಕ್ಷಾಪೇಕ್ಷಿಯಾಗುವನು. ಸ್ವಪ್ನದಲ್ಲಿ ಸೋಮನಾಥನು ಬಂದು ಮಲ್ಲಿಪಟ್ಟಣಕ್ಕೆ ಹೋಗಬೇಕೆಂದು ಅಪ್ಪಣೆ ಕೊಡುವನು. ಅರಸೊತ್ತಿಗೆಯನ್ನು ಬಿಟ್ಟು ಪತ್ನಿ ಪುತ್ರ ಸಮೇತನಾಗಿ ಭೈರವರಸನು ಮಲ್ಲಿ ಪಟ್ಟಣಕ್ಕೆ ಬರುವನು. ಭೈರವ ರಾಜನು ಹಾಲ ಸೋಮೇಶ್ವರನ ರೂಪದಿಂದ ಬಂದ ಸೋಸಲೆಯ ಸೋಮನಾಥನಿಂದ ದೀಕ್ಷೆಯನ್ನು ಪಡೆದು ಸೋಸಲೆಗೆ ತೆರಳುವನು. ಅಲ್ಲಿ ಶಿವಭಕ್ತಿಯಲ್ಲಿ ಲೀನನಾಗಿ ಬಸವಣ್ಣನಂತೆ ಅನೇಕ ಪವಾಡಗಳನ್ನೆಸಗುವನು. ಈತನ ಭಕ್ತಿಯ ಖ್ಯಾತಿ ದಶದಿಕ್ಕುಗಳನ್ನು ವ್ಯಾಪಿಸುವುದು. ಸೋಮನಾಥನೇ ನಾನಾ ರೂಪದಿಂದ ಬಂದು ಅದನ್ನು ಪರೀಕ್ಷೆ ಮಾಡುವನು. ಆ ದಿವ್ಯಗಳೆಲ್ಲ ಭೈರವ ದೇವನ ಭಕ್ತಿ ಪುಟವಿಟ್ಟ ಕುಂದಣದಂತೆ ತೊಳಗಿ ಬೆಳಗುವುದು. ಕೊನೆಯಲ್ಲಿ ಸೋಮನಾಥನು ಭೈರವರಸನನ್ನು ಕೈಲಾಸಕ್ಕೆ ಕರೆಯಲು, ಈಗ ಬಾರನೆಂದು ಹೇಳಿ ಗಣಾಧೀಶ್ವರರ ಸನ್ನಿಧಿಯಲ್ಲಿ ತಾವು ಶಿವಸಾಯುಜ್ಯವನ್ನು ಪಡೆಯುವ ದಿನವನ್ನು ವಿವರಿಸುವರು. ಎಲ್ಲರ ಸಮ್ಮುಖದಲ್ಲಿ ಗಣವರರಿಗೆ ಬೇಡಿದುದನ್ನು ಮನದಣಿಯವಿತ್ತು ಅವರ ಆಶೀರ್ವಾದ ಪಡೆದು ಸೋಮನಾಥನು ಧ್ಯಾನಪರನಾಗಿ ಲಿಂಗೈಕ್ಯನಾಗುವನು.

      ಕೃತಿಯ ಮೂಲವ್ಯಕ್ತಿ ಭೈರವೇಶ್ವರನ ಕಥೆ ಕವಿ ಕಲ್ಪಿತವಾದುದಲ್ಲ, ಐತಿಹಾಸಿಕವಾದುದು ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ. ಕಾವ್ಯದಲ್ಲಿ ಉಲ್ಲೇಖಿತವಾಗಿರುವ ಮೋಪೂರು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂಡ್ಲು ತಾಲ್ಲೋಕಿನಲ್ಲಿದೆ. ಅಲ್ಲಿ ಭೈರವ ಹೆಸರಿನ ದೇವಾಲಯ ಇದೆ. ಮೋಪೂರು ಚೋಳರ ಆಧಿಪತ್ಯಕ್ಕೆ ಒಳಪಟ್ಟಿದ್ದು ಮಾಂಡಳೀಕರು ಆಳ್ವಿಕೆ ನಡೆಸುತ್ತಿದ್ದುದರ ಬಗೆಗೆ ಶಾಸನಗಳಿಂದ ತಿಳಿದುಬರುತ್ತದೆ. ಮೋಪೂರಿನಲ್ಲಿ ಮಾಂಡಳಿಕ ಮನೆತನಕ್ಕೆ ಸಂಬಂಧಪಟ್ಟವನಾದ ಭೈರವರಾಜನು ಶಿವಭಕ್ತಿಯ ಉತ್ಕಟತೆಯಿಂದಲೋ ಅಥವಾ ಬೇರಾವ ಕಾರಣದಿಂದಲೋ ರಾಜ್ಯವನ್ನು ತೊರೆದು ಕನ್ನಡ ನಾಡಿಗೆ ಅಂದರೆ ಮಲ್ಲಿಪಟ್ಟಣ, ಸೋಸಲೆಯ ಕಡೆಗೆ ಪಯಣಿಸಿದಂತೆ ಕಂಡುಬರುತ್ತದೆ. ಹೀಗಾಗಿ ಈ ಕೃತಿಯಲ್ಲಿ ಬರುವ ಮೋಪೂರು ಐತಿಹಾಸಿಕ ಸ್ಥಳವಾಗಿದ್ದು; ಅಲ್ಲಿರುವ ಭೈರವ ದೇವಾಲಯದ ಬಗೆಗೆ ಶಾಸನಗಳ ಉಲ್ಲೇಖದ ಜೊತೆಗೆ ಈ ಕಾವ್ಯದ ಆರಂಭದಲ್ಲಿಯೂ ಉಲ್ಲೇಖಿತವಾಗಿದೆ. ಈ ಕೃತಿಯ ಪ್ರಾರಂಭದ ಪದ್ಯಗಳಲ್ಲಿಯ ವಿವರಣೆಯಿಂದ ಮೋಪೂರು ರಾಜಧಾನಿಯಾಗಿದ್ದು ಅಲ್ಲಿಯ ದೊರೆ ಸಂಗಮರಾಜ, ಆತನ ಮಗನೇ ಭೈರವನೆಂದು ತಿಳಿದುಬರುತ್ತದೆ. ಈ ಕೃತಿಯಲ್ಲಿಯ `ಬಸವಾದಿ ಪ್ರಮಥರು ಮರ್ತ್ಯಲೋಕದ ಮಣಿಹವಂ ಪೂರೈಸಿ ಕೈಲಾಸಕ್ಕೆಯ್ದಿ ಘನಸುಖದಿಂದಿರಲು, ಇತ್ತ ಭೂಲೋಕದಲ್ಲಿ ವೀರಶೈವಾಚಾರವೆಲ್ಲವಂ ಮಸುಳಿಸಿ ಪೋಗಲು ಕಾಲಸಂಹರನೆಂಬ ಗಣಾಧೀಶ್ವರನನ್ನು ಶಿವನು ಕರೆದು ಭೂಲೋಕಕ್ಕೆ ಹೋಗಿ ವೀರಶೈವಾಚಾರವನುಂಟು ಮಾಡಿ ಪವಾಡಗಳ ಗೆಲಿದು ವಾದಮಂ ಖಂಡಿಸಿ ಗೆಲಿದು ನೀನಿರುತಿರಲ್ಕೆ ನಾಂ ಬಂದು ಕೈಲಾಸಕ್ಕೆ ಕರೆದುಕೊಂಡು ಬಪ್ಪೆನು, ಪೋಗೆನಲು' ಆ ವ್ಯಕ್ತಿಯೇ ಭೈರವದೇವನಾಗಿ ಭೂಲೋಕದಲ್ಲಿ ಅವತರಿಸುತ್ತಾನೆ ಎಂದಿದೆ. ಈ ಹೇಳಿಕೆಯಲ್ಲಿಯ ಅಂಶಗಳನ್ನು ಸಾಂಕೇತಿಕವಾಗಿ ಐತಿಹಾಸಿಕ ಹಿನ್ನೆಲೆಯಲ್ಲಿ ಪರಿಗಣಿಸುವುದಾದರೆ `ಬಸವಾದಿ ಪ್ರಮಥರ ನಂತರದ ಕಾಲದವನು ಎಂಬುದು ವ್ಯಕ್ತವಾಗುತ್ತದೆ. ಭೈರವದೇವನು ೧೨ನೇ ಶತಮಾನದ ಕೊನೆಯ ಭಾಗದಲ್ಲಿ ಜನಿಸಿದ್ದು ಹಾಲ ಬಸವೇಶ್ವರನೆಂಬ ಗುರುವಿನಿಂದ ಲಿಂಗದೀಕ್ಷೆಯನ್ನು ಪಡೆದಿದ್ದಾನೆ' ಎಂದೆನಿಸುತ್ತದೆ.

      ಭೈರವದೇವನು ನೆಲೆನಿಂತ ಸಾಸಲು ಅಥವಾ ಸೋಸಲೆಯು ಈಗಿನ ಮಂಡ್ಯಜಿಲ್ಲೆಯ ಕೆ.ಆರ್.‌ ಪೇಟೆ ತಾಲ್ಲೋಕಿನಲ್ಲಿ ಕಂಡುಬರುವ ಸಾಸಲು ವೇ ಆಗಿದೆ. ಇಲ್ಲಿ ಭೈರವರಾಜನ ದೀಕ್ಷಾಗುರುವಾದ ಹಾಲ ಸೋಮೇಶನ ದೇವಾಲಯ ಇದೆ. ಸೋಮನಾಥ ದೇವಾಲಯದಲ್ಲಿರುವ ಕೆಲವು ವಿಗ್ರಹಗಳಲ್ಲಿ ಕುದುರೆ ಮೇಲೆ ಕುಳಿತ ಒಬ್ಬ ರಾಜನ ಮೂರ್ತಿ ಇದ್ದು, ಅದು ಭೈರವ ರಾಜನಿಗೆ ಸಂಬಂಧಪಟ್ಟದ್ದಾಗಿರಬೇಕೆಂಬ ಅಭಿಪ್ರಾಯ ಇದೆ. ಸಾಸಲುವಿನಲ್ಲಿ ಈಗಲೂ ಭೈರವದೇವನು ಕೈಲಾಸಕ್ಕೆ ಹೋದ ಸ್ಥಳವನ್ನು, ಆತನ ರಾಣಿ ಮಹಾದೇವಿಗೆ ಪ್ರಸಾದ ದೊರೆಯುತ್ತಿದ್ದ ಸ್ಥಳವನ್ನು ಅಲ್ಲಿಯ ಜನ ತೋರಿಸುತ್ತಾರೆ. ಈ ಅಂಶಗಳಿಂದಾಗಿ ಭೈರವ ದೇವನು ಮಲ್ಲಿಪಟ್ಟಣದಿಂದ ಸಾಸಲುವಿಗೆ ಬಂದು ನೆಲೆಸಿದ್ದು ಅನೇಕ ಪವಾಡಗಳನ್ನು ಎಸಗಿರಬೇಕು ಎಂದೆನಿಸುತ್ತದೆ.

      ಭೈರವದೇವನು ಐತಿಹಾಸಿಕ ವ್ಯಕ್ತಿಯಾಗಿದ್ದು ರಾಜರಲ್ಲಿ ಶರಣ, ಶರಣರಲ್ಲಿ ರಾಜನಾಗಿ ಜನತೆಯಲ್ಲಿ ಭಕ್ತಿಭಾವನೆಯನ್ನು ಬೀರಿ ಲಿಂಗಾಂಗ ಸಾಮರಸ್ಯವನ್ನು ಪಡೆದವನಾದ್ದರಿಂದಲೇ ಏನೋ ಭೈರವೇರ್ಶವರನ ಕಥೆ ನಾಡಿನಾದ್ಯಂತ ಹಬ್ಬಿದ್ದು, ಈತನ ಹೆಸರಿನಲ್ಲಿ ಕಾವ್ಯಗಳು ಹುಟ್ಟಿಕೊಳ್ಳಲು ಕಾರಣವಾಗಿವೆ ಎಂದೆನಿಸುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಭೈರವರಸನನ್ನು ಕುರಿತು ಕಾಲಾನುಕ್ರಮದಲ್ಲಿ ಒಟ್ಟು ಆರು ಕೃತಿಗಳು ರಚನೆಯಾಗಿವೆ.

 

ಕ್ರ.ಸಂ        ಕವಿ                     ಕೃತಿ        ಕಾಲ        ಸ್ವರೂಪ

೧     ಕಿಕ್ಕೇರಿಯ ನಂಜುಂಡಾರಾಧ್ಯ    ಭೈರವೇಶ್ವರ ಕಾವ್ಯ     ಕ್ರಿ.ಶ.೧೫೫೦     ಮಿಶ್ರ ಷಟ್ಪದಿ

೨     ಕುಮಾರ ಚನ್ನಬಸವ   ಸಾಸಲ ಭೈರವೇಂದ್ರ ಚರಿತ್ರೆ     ಕ್ರಿ.ಶ.೧೫೫೦     ---

೩     ಶಾಂತಲಿಂಗ ದೇಶಿಕ    ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಕ್ರಿ.ಶ.೧೬೭೨  ಗದ್ಯ

೪     ಉತ್ತರ ದೇಶದ ಬಸವಲಿಂಗ    ಭೈರವೇಶ್ವರ ಕಾವ್ಯದ ಕಥಾಸಾಗರ ಮತ್ತು ಉಚಿತ ಕಥೆಗಳು ಕ್ರಿ.ಶ.೧೬೭೮-೨೯ ಗದ್ಯ

೫     ಸಿದ್ಧಲಿಂಗ ಶಿವಯೋಗಿ  ಭೈರವೇಶ್ವರ ಪುರಾಣ   ಕ್ರಿ.ಶ.೧೭೩೦     ಚಂಪೂ

೬     ಗುರುಚೆನ್ನಬಸವೇಶ್ವರ ಶಿಷ್ಯಕೃತ   ಭೈರವೇಶ್ವರ ಪವಾಡ    ---  ತಾರಾವಳಿ

        (ಸೋಮೆಕಟ್ಟೆ ಚೆನ್ನವೀರಸ್ವಾಮಿ)

 

      ಈ ಆರುಕೃತಿಗಳಲ್ಲಿ ೩ ಕಾವ್ಯಗಳು, ಒಂದು ತಾರಾವಳಿ ಹಾಗೂ ಎರಡು ಸಂಕಲಿತ ಗದ್ಯ ಕೃತಿಗಳಾಗಿವೆ. ಈ ಗದ್ಯಕೃತಿಗಳು ಭೈರವೇಶ್ವರನ ಕಥೆಯನ್ನು ವಿಸ್ತರಿಸುವ ಕಥಾಮಣಿ ಮತ್ತು ಕಥಾಸಾಗರಗಳಾಗಿವೆ. ಈ ಗದ್ಯಕೃತಿಗಳಲ್ಲಿ ಮೊದಲನೆಯದು ಶಾಂತಲಿಂಗ ದೇಶಿಕನ ಕೃತಿಯಾಗಿದೆ.

ಕೃತಿಯ ಆಕರಗಳು: ಬೇರೆ ಬೇರೆ ಭಾಷೆಗಳಲ್ಲಿಯ ಪ್ರಾಚೀನ ಕಾವ್ಯ ಪುರಾಣಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಐತಿಹಾಸಿಕ ಹಾಗೂ ಪುರಾಣ ಪುರುಷರಿಗೆ ಸಂಬಂಧಿಸಿದ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಿ ಗದ್ಯ ಮತ್ತು ಪದ್ಯ ಕಾವ್ಯಗಳಲ್ಲಿ ವಿವರಿಸುವ ಒಂದು ಪದ್ಧತಿಯು ಕನ್ನಡ ಸಾಹಿತ್ಯದಲ್ಲಿ ಪರಂಪರೆಯಾಗಿ ಬೆಳೆದಿದೆ. ಜೈನಧರ್ಮದ ಸಾಹಿತ್ಯದಲ್ಲಿ ವಡ್ಡಾರಾಧನೆ (ಆರಾಧನಾ ಕರ್ನಾಟ ಟೀಕಾ), ಚಾವುಂಡರಾಯ ಪುರಾಣ, ನೊಂಪಿಯ ಕತೆಗಳು, ದೇವಚಂದ್ರನ ರಾಜಾವಳಿ ಇತ್ಯಾದಿ ಈ ತೆರನಾದ ಕಾವ್ಯಗಳು ಕಂಡುಬಂದರೆ; ವೀರಶೈವ ಸಾಹಿತ್ಯದಲ್ಲಿ ಹರಿಹರನ ರಗಳೆಗಳು, ಭೀಮಕವಿಯ ಬಸವ ಪುರಾಣ, ಗುಬ್ಬಿಯ ಮಲ್ಲಣಾರ್ಯರ ವೀರಶೈವಾಮೃತ ಮಹಾಪುರಾಣ, ಲಕ್ಕಣ್ಣ ದಂಡೇಶನ ಶಿವತತ್ವಚಿಂತಾಮಣಿ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ಶೂನ್ಯಸಂಪಾದನಾ ಕೃತಿಗಳನ್ನು ಉದಾಹರಿಸಬಹುದು. ವೀರಶೈವ ಕಾವ್ಯ-ಪುರಾಣಗಳು ಹಾಗೂ ಇನ್ನಿತರ ವೈದಿಕ ವಾಙ್ಮಯದ ಪುರಾಣಗಳನ್ನು ಆಧರಿಸಿ ಶಾಂತಲಿಂಗದೇಶಿಕನು ಈ ಕೃತಿಯನ್ನು ಸಂಕಲಿಸಿದ್ದಾನೆ. ಕವಿಯ ಈ ಸಂಕಲಿತ ಕೃತಿಯಲ್ಲಿ ಪೂರ್ವದ ಕಾವ್ಯ-ಪುರಾಣಗಳಲ್ಲಿಯ ಕಥೆಗಳನ್ನು ಸಂಗ್ರಹಿಸಿ ಗದ್ಯ ಪ್ರಕಾರದಲ್ಲಿ ಹೇಳ ಹೊರಟಿದ್ದಾನೆಯೇ ಹೊರತು ಕಲ್ಪಿತ ಸಂಗತಿಗಳನ್ನು ಪ್ರಸ್ತಾಪಿಸಿಲ್ಲ.

      ಈ ಕೃತಿಯು ತನ್ನ ಕಥಾಗರ್ಭದಲ್ಲಿ ಅಡಗಿಸಿಕೊಂಡಿರುವ ನೂತನ ಪುರಾತನ ಶಿವಶರಣರಿಗೆ ಸಂಬಂಧಿಸಿದ ಸಂಗತಿಗಳಿಂದಾಗಿ ಇಂದಿಗೂ ವೀರಶೈವ ಸಾಹಿತ್ಯ-ಸಂಸ್ಕೃತಿಯನ್ನು ಅಧ್ಯಯನ ಮಾಡುವ ಆಸಕ್ತರಿಗೆ ಮೆಚ್ಚಿಕೆಯಾಗಿದೆ. ಅಪ್ಪಟ ಶಿವಭಕ್ತ ಭೈರವ ದೇವನ ಚರಿತ್ರೆಯನ್ನು ಹೇಳಹೊರಟ ಕವಿಯು ಅದರ ಜೊತೆಗೆ ಅಸಂಖ್ಯಾತ ಶಿವಭಕ್ತರ ಕಥೆಯನ್ನು ಎಣೆದಿದ್ದಾನೆ. ಕೃತಿಯಲ್ಲಿಯ ಆಂತರಿಕ ಹೇಳಿಕೆಯಿಂದ ಕವಿಯು ಕೃತಿ ರಚಿಸಿರುವಲ್ಲಿ ಕಲೆಹಾಕಿರುವ ಆಕರ ಕೃತಿಗಳ ಬಾಹುಳ್ಯ ವ್ಯಕ್ತವಾಗುತ್ತದೆ.

      ಶಾಂತಲಿಂಗ ದೇಶಿಕನು ``ಸಕಲ ವೀರಮಾಹೇಶ್ವರರುಗಳ ನಿರೂಪದಿಂದ ಭೈರವದೇವನ ಕಾವ್ಯದಲ್ಲಿ ಸೂಚನೆಯಾಗಿರ್ದ ಕಥೆಗಳನುವಿಶಾಲವಾಗಿ ಬರೆದು ಸಂಗ್ರಹಿಸೆಂದು ನಿರೂಪಿಸೆ ಅವರ ಮಾಹಾನುಭಾವ ನಿರೂಪವಿಡಿದು ಮೂಲದರಿಷ್ಟವಾದ ಕಥೆಗಳಿಗೆ ದೃಷ್ಟವಾದ ಉಪಕಥೆಗಳನು ಸಂಗ್ರಹಿಸುವದಕ್ಕೆ ಸಕಲ ವೇದಾಗಮ ಪುರಾಣ ಇತಿಹಾಸಂಗಳಲ್ಲಿ. . . .ಲಕ್ಷಣಶುದ್ಧವಾಗಿ ಪೇಳಲು ಪಟ್ಟ ವೀರಮಾಹೇಶ್ವರರ ಸಿದ್ಧಾಂತ, ವೀರಮಾಹೇಶ್ವರ ತಂತ್ರ, ವೀರಮಾಹೇಶ್ವರರಾಚಾರಸಂಗ್ರಹ, ಸೋಮನಾಥನ ಭಾಷ್ಯೆ, ಪ್ರಾಕೃತ  ಇಂತೀ ಭಾಷೆಗಳಿಂದ ಸಂಗ್ರಹಿಸಿದ ಪ್ರಕರಣಗಳಲ್ಲಿ ಪೇಳುತ್ತಿರ್ದ ಕಥೆಗಳನ್ನು, ಭಾರತ, ಮಹಾಭಾರತ, ಆರಾಧ್ಯ ಚಾರಿತ್ರ, ನನ್ನಯ್ಯನ ಕಾವ್ಯ, ಬಸವಚಾರಿತ್ರ, ಸಿಂಗಿರಾಜನ ಕೃತಿ ಮೊದಲಾದ ಸಮಸ್ತ ಸಾಂಗತ್ಯ ಚಾರಿತ್ರದ ಕಥೆಗಳಿಗೆ ಮಾತೃ ಸ್ಥಾನವಾಗಿಪ್ಪುದು. ಬಸವಾದಿ ಪ್ರಮಥರು ನಿರೂಪಿಸಿದ ಶೂನ್ಯಸಂಪಾದನೆ ಮೊದಲಾದ ವಚನಾಮೃತಸಾಗರದಲ್ಲಿ ಪೇಳುತ್ತಿರ್ದ ಕಂದ, ವೃತ್ತ, ಗ್ರಂಥ, ಸ್ಮೃತಿ-ಶೃತಿ, ಪದ-ಪದ್ಯ, ವಚನ, ರಗಳೆ, ಷಟ್ಪದ, ಪಂಚರತ್ನಸ್ವರೂಪದ ತಾರಾವಳಿಗಳು ಮೊದಲಾದವರಲ್ಲಿ ಹೇಳಲ್ಪಟ್ಟ ಕಥೆಗಳಿಂ ನೋಡಿ ಪುರಾತನ ವಚನದ ಮೇಲೆ ಸಂಧಿ ವಿಡಿದು ಕಾವ್ಯದ ಕಥೆ ಸಂಗ್ರಹಕ್ಕೆ ಬೇಕಾದವಂ ತೆಗೆದುಕೊಂಡು ಸಂಗ್ರಹಿಸಿದೆನು." ಕವಿಯ ಈ ಹೇಳಿಕೆಯ ಹಿನ್ನೆಲೆಯಲ್ಲಿ ಈ ಸಂಕಲನ ಕೃತಿಯಲ್ಲಿ ಬಂದಿರುವ ಕಥೆಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಬಹುದಾಗಿದೆ.

೧. ಕನ್ನಡ ನಾಡಿನಲ್ಲಿ ಬಾಳಿಬೆಳಗಿದ ಶಿವಶರಣರು ಹಾಗೂ ಶಿವಕವಿಗಳಿಗೆ ಸಂಬಂಧಿಸಿದ ಕಥೆಗಳು.

೨. ತಮಿಳುನಾಡು, ಗೂರ್ಜರ ಮೊದಲಾದ ನಾಡಿನ ಪುರಾತನ ಶಿವಭಕ್ತರ ಕಥೆಗಳು

೩. ಶಿವನ ಪಂಚವಿಂಶತಿ ಲೀಲೆಗಳು

೪. ರಾಮಾಯಣ, ಮಹಾಭಾರತ, ಹದಿನೆಂಟು ಪುರಾಣ, ಪಂಚತಂತ್ರ, ಭತ್ತಿಸಪುತ್ಥಳಿ, ಇಪ್ಪತ್ತೆಂಟು ಆಗಮ ಮುಂತಾದ ಭಾರತೀಯ ವಾಙ್ಮಯದಿಂದ ಎತ್ತಿಕೊಂಡ ಕಥೆಗಳು ಈ ಕಥಾಸಾಗರವನ್ನು ನಿರೂಪಿಸುವಲ್ಲಿ ಕವಿಯ ಬಹು ಶೃತತ್ವ, ಶ್ರಮ, ಪಾಂಡಿತ್ಯ, ವ್ಯುತ್ಪತ್ತಿ ಹಾಗೂ ಲೋಕಾನುಭವ ವ್ಯಕ್ತಗೊಂಡಿದೆ.

 ಕೃತಿಯ ಕಥಾವೈಶಿಷ್ಟ್ಯ: ಈ ಕೃತಿಯನ್ನು ಆರ್.ಸಿ.ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ ಅವರು ಹನ್ನೆರಡು ಹಸ್ತಪ್ರತಿಗಳನ್ನುಪಯೋಗಿಸಿಕೊಂಡು ಎರಡು ಸಂಪುಟಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ೧೯೬೪ರಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯ ಪ್ರಾರಂಭದಲ್ಲಿ ಕವಿಯು ಭೈರವ ರಾಜನು ಮಾಡಿದನೆನ್ನಲಾದ ಶಿವಪಾರಮ್ಯವನ್ನು ಸಾರುವ ಹನ್ನೊಂದು ಪವಾಡಗಳನ್ನು ನಿರೂಪಿಸಿದ್ದಾನೆ. ಒಟ್ಟು ೫ ಸಂಧಿಗಳಲ್ಲಿ ಶಿವಶರಣರು ಹಾಗೂ ಶಿವಕವಿಗಳು ಹಾಗೂ ಇತರೆಯವರಿಗೆ ಸಂಬಂಧಿಸಿದ ೫೧೮ ಕಥೆಗಳನ್ನು ಗದ್ಯರೂಪದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ. ಪ್ರತಿಯೊಂದು ಪ್ರಸಂಗವನ್ನು ನಿರೂಪಿಸುವಾಗ ಮೊದಲಿಗೆ ಒಂದು ಅಂಶ ಷಟ್ಪದಿಯಲ್ಲಿ ಪ್ರಸಂಗದ ಸಾರವನ್ನು ನಿರೂಪಿಸಿ ನಂತರ ಗದ್ಯದಲ್ಲಿ ವಿಸ್ತಾರವಾಗಿ ನಿರೂಪಿಸಿದ್ದಾನೆ. ೪ನೇ ಸಂಧಿಯಲ್ಲಿ ಭೈರವಾಂಕನಿಗೆ ಸಂಬಂಧಿಸಿದಂತೆ ೨೨ ಕತೆಗಳನ್ನು ಅದಕ್ಕೆ ಪೂರಕವಾದ ನೂತನ-ಪುರಾತನ ಶರಣರು ಹಾಗೂ ಶಿವಕವಿಗಳಿಗೆ ಸಂಬಂಧಿಸಿದ ನೂರಾರು ಉಪಕತೆಗಳನ್ನು ಹೊಂದಿಸಿ ಏಕರೂಪತೆಗೆ ಭಂಗ ಬರದಂತೆ ನಿರೂಪಿಸಿದ್ದಾನೆ.  ಈ ಸಂಕಲಿತ ಕೃತಿಯ  ಎರಡು ಸಂಪುಟಗಳಲ್ಲಿ ಬಸವಣ್ಣನವರಿಗೆ ಸಂಬಂಧಿಸಿ ಸಂಗತಿಗಳು  ಸುಮಾರು  ೨೫ ಕಡೆ ಪ್ರಸ್ತಾಪಿಸಲ್ಪಟ್ಟಿವೆ

    ಈ ಸಂಕಲನ ಕೃತಿಯಲ್ಲಿ ಬಸವಣ್ಣನವರಿಗೆ ಸಂಬಂಧಿಸಿದ ಕತೆಗಳನ್ನು ನಾಲ್ಕು ರೀತಿಯಾಗಿ ವರ್ಗೀಕರಿಸ ಬಹುದಾಗಿದೆ.

 ೧.ಬಸವಣ್ಣನಬಾಲ್ಯ ಜೀವನಕ್ಕೆ ಹಾಗೂಅಂತ್ಯಜೀವನ ಹಾಗೂ ಇತರೆ ಘಟನೆಗಳಿಗೆ ಸಂಬಂಧಿಸಿದ ಕಥೆಗಳು

 ೨.ಬಸವಣ್ಣನವರ ವಚನಗಳ ಆಶಯದ ಹಿನ್ನೆಲೆಗನುಗುಣವಾಗಿ ಮೂಡಿ ಬಂದಿರುವ ಕತೆಗಳು

 ೩.ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದ ಪವಾಡಗಳಿಗೆ ಪೂರಕವಾಗಿ ಮೂಡಿ ಬಂದಿರುವ ಕತೆಗಳು           ೪.ಇತರೆ  ಸಮಕಾಲೀನ ಶರಣರ ಕಥೆಯೊಂದಿಗೆ ಬೆರೆತ ಬಸವಣ್ಣನವರ ಸಂಗತಿಗಳು

೧.ಬಸವಣ್ಣನ  ಬಾಲ್ಯ ಜೀವನ ಹಾಗೂ ಇತರೆ ಘಟನೆಗಳಿಗೆ  ಸಂಬಂಧಿಸಿದ ಕಥೆಗಳು:

   ಬಸವಣ್ಣನವರ ಬಾಲ್ಯ ಜೀವನ, ಅವರು ಕಲ್ಯಾಣದಲ್ಲಿ ಬಿಜ್ಜಳನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗಿನ ಸಂದರ್ಭ ಹಾಗೂ ಇವರ ಜೀವಿತಾವಧಿಯ ಕೊನೆಯ ಕಾಲದ ವಿವರಗಳನ್ನು ಕವಿಯು ತಾನು ಕಿವಿಯಾರೆ ಕೇಳಿದ ಹಾಗೂ ಪೂರ್ವದ ಕಾವ್ಯ-ಪುರಾಣ ಸಂಕಲನ ಕೃತಿಗಳನ್ನು ಆಧರಿಸಿ ಗದ್ಯರೂಪದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ. ಇಲ್ಲಿಯ ವಿವರಗಳು ಬಸವಣ್ಣನ ಬಗೆಗೆ  ಕವಿಯ ಕಾಲಕ್ಕೆ ಯಾವ ರೀತಿ ಜನಮನದಲ್ಲಿ ಬೇರೂರಿದ್ದವು ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ಸಂಗ್ರಹ ಕತೆಯಲ್ಲಿಯೂ ಕವಿಯು ಬಸವಣ್ಣನ ಬಗೆಗೆ ತಾನು ಎಷ್ಟು ಕೇಳಿ ಓದಿ ತಿಳಿದಿದ್ದನೋ  ಆ ಎಲ್ಲಾ ಸಂಗತಿಗಳನ್ನು ಈ ಸಂಕಲನದಲ್ಲಿ ಗದ್ಯರೂಪದಲ್ಲಿ ಕೊಡಮಾಡಿದ್ದಾನೆ. ಕೆಲವೆಡೆ ಬಸವಣ್ಣನಿಗೆ ಸಂಬಂಧಿಸಿದ ಹಾಗೆ ಪೂರ್ವದ ಕಾವ್ಯ ಪುರಾಣಗಳಲ್ಲಿ ಇಲ್ಲದ ನೂತನ ಸಂಗತಿಗಳು ಕಂಡು ಬಂದಿವೆ. ಬಸವಣ್ಣನ ಬಾಲ್ಯಜೀವನಕ್ಕೆ ಸಂಬಂಧಿಸಿದ  ಹಾಗೂ ಇತರೆ ಸಂಗತಿಗಳನ್ನು ಆರು ಪ್ರಸಂಗಗಳಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ.

೧.ಬಸವಗೆ ದೀಕ್ಷೆಯನಿತ್ತ ಕೂಡಲ ಸಂಗನಂತೆ ಎಂಬುದಕ್ಕೆ ಕಥೆ ಎಂಬ ಪ್ರಸಂಗದಲ್ಲಿ ಬಸವನಿಗೆ ಕಪ್ಪಡಿಯ ಸಂಗಮನಾಥನು ದೀಕ್ಷೆಯನ್ನಿತ್ತ ವಿವರವಿದೆ.

   ಅನಾದಿ ನಂದೀಶ್ವರನೆ ಶಿವನ ನಿರೂಪದಿಂದ ಮಂಡಿಗೆ ಮಾದರಸ ಮಾದಲಾಂಬಿಕೆಯರ ಭಕ್ತಿಗೆ ಪ್ರಸನ್ನವಾದಲ್ಲಿ, ಕೂಡಲ ಸಂಗಮೇಶ್ವರನೆಂಬ ಪರಶಿವ ತಾನೆ ಗುರುಮೂರ್ತಿಯಾಗಿ ಬಂದು ಶಿಶು ಜನಿತವಾದಾಗ ಬಾಲ್ಯೋಪಚಾರವ ಮಾಡುವದಕ್ಕೆ ಮುನ್ನವೇ ಜನರರಿಯದಂತೆ ಅಂಗಕ್ಕೆ ಲಿಂಗೋಪದೇಶವಂ ಮಾಡಿ, ಹಸ್ತವಂ ಮಸ್ತಕದ ಮೇಲಿಟ್ಟು, ಮಂತ್ರೋಪದೇಶವಂ ಮಾಡಿ, ಭಸ್ಮ ರುದ್ರಾಕ್ಷೆಯ ಸಾಂಗವಂ ಮಾಡಿ ಬಸವನೆಂಬ ಪೆಸರಿಟ್ಟು, ಬಳಿಕ ಮಾತಾಪಿತರಿಗೆ ಎಚ್ಚರದೋರಲಾಗ ಲಿಂಗಸಂಬಂಧವಾಗಿಪ್ಪ ಶಿಶುವಂ ಕಂಡು ಮಾದರಸ ಮೊದಲಾದವರಚ್ಚರಿವಡುವಾಗ ಸಂಗಮನಾಥ ಚರರೂಪ ಧರಿಸಿ ಮತ್ತೆ ಬಂದು ಅಕ್ಕನಾಗಮ್ಮ ಮೊದಲಾದವರಿಗೆ ಪೇಳಿದನು: ಕಪ್ಪಡಿಯ ಸಂಗಮನಾಥ ನಾನು ದೀಕ್ಷೆಯನಿತ್ತೆನು, ಬಸವ ನಾಮದ ಶಿಶುವಿಗೆ ಲಿಂಗಪ್ರಸಾದವಲ್ಲದೆ ಅನ್ಯವೆ ಕೊಡಬೇಡಾ ಎಂದಾಣೆಯನ್ನಿಕ್ಕಿ ನಂದೀಶ್ವರನ  ಪೂರ್ವವನವರಿಗೆ  ಪೇಳಿ ಅವರಿಂದ ಪೊಡಮಡಿಸಿಕೊಂಡು ಪೋದ ಸಂಗಮನಾಥನು. ಇತ್ತಕ್ಕನಾಗಮ್ಮನು ಗುರು ಮೂರ್ತಿ ಪೇಳಿದ ಕ್ರೀಯವ ನಡೆಸುತ್ತ ಬಸವನೆಂಬ ನಾಮವನೆ ಕರವುತ್ತಿರ್ದರು.( ಪು.೮೨ ಭಾಗ .೨) ಬಸವಣ್ಣನವರ ಜನನದ ಸಂಗತಿಗಳನ್ನು ಸಂಕ್ಷಿಪ್ತವಾಗಿ ವಿವಿಧ ಮೂಲಗಳಿಂದ ಸಂಗ್ರಹಿಸಿ ಕೊಟ್ಟಿದ್ದಾನೆ.

೨.ಗಂಗೆ ಬಸವಗೆ ತೆರಪು ಕೊಟ್ಟಂತೆ ಎಂಬುದಕ್ಕೆ ಕಥೆ,

  ಅನಾದಿ ನಂದೀಶ್ವರನೆ ಬಾಗವಾಡಿಯಲ್ಲಿ ಮಂಡಗೆಯ ಮಾದರಸ ಮಾದಲಾಂಬಿಕೆಯ ಭಕ್ತಿಗೆ ಪ್ರಸನ್ನವಾಗಿ ಬಸವನೆಂಬ ನಾಮದಿಂದ ಬಾಲಲೀಲೆಯಲ್ಲಿರುವಾಗ ಮಕ್ಕಳೊಡನಾಡುತ್ತ ಭೀಮಪಂಡಿತರ ಕರೆಗೆ ಬರಲಲ್ಲಿ ದಾಮೋದರನೆಂಬ ವಿಪ್ರನ ಮೂರು ವರುಷದ ಮಗಂ ಮೋಸದಿಂ ಮುಳುಗಿ ಸಾಯಲು, ಬಸವಣ್ಣ ನೂಕಿದನೆಂದು ಆಡುವ ಮಕ್ಕಳು ಸಠೆಯಂ ಪೇಳಲಾಗ, ವಿಪ್ರರೆಲ್ಲ ಹಿಡಿ ಬಡಿ ಎಂದು ಬಂದು ಬಸವಣ್ಣನ ಬೆನ್ನಟ್ಟಿ ಬರಲಾಗ, ಬಸವನು ಎನ್ನಲ್ಲಿ ತಪ್ಪಿಲ್ಲ  ಬರಿದೆ ನೀವೆನ್ನೊಡನೆ ವೈರವ ಮಾಡಬೇಡೆನುತ ಶಿಶು ಸತ್ತ ಕೆರೆಯಿಂದ ಊರ ದಾರಿಯನ್ನು ಬಿಟ್ಟು ಸಂಗಮದ ದಾರಿಯ ಮೆಟ್ಟಿ, ವಿಪ್ರರ ಧಿಕ್ಕರಿಸುತ್ತೆ ಬರಲಾಗಲವರು ಬೆನ್ನಟ್ಟಿ ಮತ್ತೆಯು ಬರುತ್ತಿರಲು ಮುಂದೆ ಕೃಷ್ಣವೇಣಿಯೆಂಬ ಪಿರಿಯ ನದಿ ತಟ ಸೂಸಿ ಬಂದಿರಲಾಗ, ಬಸವಣ್ಣ ಬರಲು ನದಿ ದಾರಿಯಂ ಬಿಡಲಾಗ, ಬಸವಣ್ಣನು ಕಪ್ಪಡಿಯ ಸಂಗಮೇಶ್ವರನೆಂಬ ಗುರುಸ್ವಾಮಿಯಿರ್ದಲ್ಲಿಗೆ ಪೋಗಲು ಜಂಗಮ ಮೂರ್ತಿಯಾಗಿ ಬಂದು ಬಸವಣ್ಣನ ಮನ್ನಿಸುವಾಗಳಿತ್ತ, ವಿಪ್ರರು ಹರುಗೋಲನೇರಿ ಸಂಗಮಕೆ ಬಂದವರು ನೆರೆದ ಜನರಲ್ಲಿ ಬಸವಣ್ಣನ ಮೇಲಿಲ್ಲದ ದೂರ್ಜನವ ಪೇಳಲಾಗ ಸಂಗಮನೇ ಬಲ್ಲಂ ನಾನಲ್ಲವೆನಲವರು, ಸಂಗಮನ ನುಡಿಸೆನಲಾಗಳವರ್ಗೆ ಸಂಗಮನಾಥ ಬಸವಂನ ಪಕ್ಷದಿಂ ನುಡಿದನು: ದಾಮೋದರನೆಂಬ ವಿಪ್ರನ ಮಗನ, ಜನಾರ್ಧನನ ಮಗ ಕೃಷ್ಣನು ಕೆರೆಗೆ ನೂಕಿದನೆಂದು ಸಂಗಮೇಶ್ವರನು ಸಾಕ್ಷಿಯ ನುಡಿಯಲಾಗ, ವಿಪ್ರರು ಭಂಗಿತರಾಗಿ ಬಸವಂಗೆ ವಂದಿಸಿ ಪೋಗಲತ್ತ, ಇತ್ತ ಬಸವಣ್ಣನು ಸಂಗಮೇಶ್ವರನಿಂದ ಕಳುಹಿಸಿಕೊಂಡು ಇಂಗಳೇಶ್ವರದಲ್ಲಿರ್ದ ಬಲದೇವ ಮಂತ್ರಿಯ ಮನೆಗೆ ಪೋದರು.  ( ಪು.೧೩೬-೧೩೭, ಭಾಗ.೨) ಬಸವ ಪುರಾಣದಲ್ಲಿ ಇಲ್ಲದ ಈ ವಿವರವನ್ನು ಬೇರೆ ಮೂಲದಿಂದ ಕಲೆಹಾಕಿ ಸಹಜವಾಗಿ ನಡೆದಿರುವ ರೀತಿಯಲ್ಲಿ  ನಿರೂಪಿಸಿದ್ದಾನೆ. ಬಸವಣ್ಣನ ಬಾಲ್ಯಜೀವನದ ಚಿತ್ರಣವು ಅತ್ಯಂತ ಸಹಜವಾಗಿ ಮೂಡಿ ಬಂದಿದೆ.

೩.ಬಲದೇವಗಳಿಗೆ ಶರಣು ಎಂಬುದಕ್ಕೆ ಕಥೆ: ಬಸವನ ಬಾಗವಾಡಿ ಇಂಗಳೇಶ್ವರವೆಂಬಗ್ರಹಾರದಲ್ಲಿ ಬಲದೇವ ಮಂತ್ರಿಯೆಂಬ ಭೂಸುರೋತ್ತಮನಾಗಿರ್ದು ವಿಪ್ರಚಾರವಂ ಬಿಟ್ಟು ವೀರಶೈವ ದೀಕ್ಷೆಯಂ ಪಡೆದಿರುತಂ ಗಂಗಾಂಬಿಕೆಯೆಂಬ ಸುತೆಯಂ ಪೆತ್ತು ಶಿವಾಚಾರ ನಿಷ್ಠೆಯಿಂದಿರಲು, ಇತ್ತಂ ಮಂಡಿಗೆಯ ಮಾದರಸ ಮಾದಲಾಂಬಿಕೆಯು ವೃಷಭನ ನೋಂಪಿಯಿಂದ ನಂದೀಶ್ವರನೇ ತಮ್ಮ ಸುತನಾಗಿರಲೆಂದು ಬೇಡಿ ಪಡೆದಿರಲು, ಆತ ಬಸವನೆಂಬ ನಾಮದಿಂದಿರುವಾಗ ತಂದೆ ಮಾದರಸ ಮುಂಜೆಗಟ್ಟುವೆನೆಂದು ಸಂಭ್ರಮಿಸಲು ಆದ ಆ ಜರದು ಬಸವನು ಮಹಾಮನೆಗೆ ಬರಲು, ಬಲದೇವನು ತನ್ನ ಸುತೆಯಂ ಬಸವಂಗೆ ಮದುವೆಯಂ ಮಾಡಲು, ಬಸವಣ್ಣನು ತನ್ನ ಸತಿ ಗಂಗಾಂಬಿಕೆ ಅಕ್ಕನಾಗಮ್ಮ ಸಹಿತ ಕಪ್ಪಡಿಯ ಸಂಗಮಕ್ಕೆ ಗುರುದರುಶನಕೆ ಬರಲು, ಅತ್ತ ಕೈಲಾಸದಲ್ಲಿ ಪ್ರಮಥರು  ಬಲದೇವನು ತನ್ನ ಸುತೆಯ ಬಸವಂಗೆ ಕೊಟ್ಟನೆಂಬ ಭಕ್ತಿಗೆ ಮೆಚ್ಚಿ ಕೈಲಾಸಕ್ಕೆ ಪೋದನು ಬಲದೇವ ಮಂತ್ರಿ. ಈ ಲಘು ಕತೆಯಲ್ಲಿ ಬಲದೇವನು ತನ್ನ ಮಗಳನ್ನು ಬಸವಣ್ಣನಿಗೆ ಕೊಟ್ಟು ಮದುವೆ ಮಾಡಿದುದಕ್ಕೆ ಕೈಲಾಸಕ್ಕೆ  ಹೋದನು ಎಂಬ ವಿವರ ಗಮನಾರ್ಹವಾದುದಾಗಿದೆ.( ಪು.೩೭೨-೭೩, ಭಾಗ.೨) ಬಸವಣ್ಣನ ಮಾವ ಬಲದೇವನು ಇಂಗಳೇಶ್ವರದಲ್ಲಿದ್ದನೆಂಬ ಸಂಗತಿಯನ್ನು ಇಲ್ಲಿ ಕೊಡ ಮಾಡಿದ್ದಾನೆ.

೪.ಬಸವರಾಜನೆಂಬುದಕ್ಕೆ ಕಥೆ

 ಕಲ್ಯಾಣದಲ್ಲಿ ಬಸವೇಶ್ವರ ದೇವರು ಲಕ್ಷದ ಮೇಲೆ ತೊಂಭತ್ತಾರು ಸಾವಿರ ಚರಮೂರ್ತಿಗಳಿಗೆ ಇಚ್ಛಾಭೋಜನವ ನೀಡಿ ಹನ್ನೆರಡು ಸಾವಿರ ಪಣ್ಯಾಂಗನೆಯರಲ್ಲಿ ಭೋಗಿಪ ವಿಟ ಜಂಗಮಕ್ಕೆ ಅವರಿಚ್ಛಾಭೋಜನಕ್ಕೆ ಸಾಧನವ ನಡೆಸಿ ಷಟ್ಸ್ಥಲ ಜ್ಞಾನ ಕ್ರೀಯಿಂದಿಪ್ಪ ಚನ್ನಬಸವಣ್ಣ ಮೊದಲಾದ ಮುವತ್ತಾರು ಸಾವಿರ  ವೀರಮಾಹೇಶ್ವರರ್ಗೆ ಮನದಿಚ್ಛೆಯ ಪದಾರ್ಥವ ಬಸವಣ್ಣನರಿದು ಅವರು ಬೇಡಿದ ಮುನ್ನ ನೀಡಿ ತತ್ಕಾಲ ಬಿನ್ನಹವ ನಡಸಿ ಶೀಲವ್ರತಾಚರವುಳ್ಳವರ್ಗೆ ಅವರ ಕ್ರಿಯಾಭೋಜನಕ್ಕೆ ಪದಾರ್ಥವ ನಡಸಿ, ಚರಮೂರ್ತಿಗಳಿಗೆ ಮಾಡಿ ನೀಡಿ ಅವರೊಕ್ಕ ಮಿಕ್ಕ ಪ್ರಸಾದವನಾಯ್ದಕೊಂಡು  ಬಸವಣ್ಣನು ತಾವು ಮೊದಲಾದ ಅಂಗಸೋಬಲ ಲಿಂಗಸೋಬಲರು ಅವರಿಗೆ ತುತ್ತ ಮಾಡಿ ಊಡಿಸಿ ತಾನು ಮುವ್ವತ್ತಾರು ಸಾವಿರ ಸಮಯಚಾರದ ಭಕ್ತ ಜಂಗಮ ಸಹವಾಗಿ ಸವಿದು ಪ್ರಭು ದೇವರೆಂಬ ಮಹಾಜ್ಞಾನ ಜಂಗಮಕ್ಕೆ ತುತ್ತ ನೀಡಿ ತೃಪ್ತಿಯಾದಲ್ಲಿ, ಸಚರಾಚರ ತೃಪ್ತಿಯಾದ ಭೇದವನು ಬಿಜ್ಜಳಂಗೆ ಬೇಕನೊಡಲೊಳಗೆ ದ್ರುಷ್ಟಮಂ ತೋರಿ ಕೂಡಲಸಂಗಮೇಶ್ವರನೆಂಬ ತಮ್ಮಿಷ್ಟಲಿಂಗದಲ್ಲಿ ಬಸವಣ್ಣ ನಿರ್ವಯಲಾದರು. ( ಪುಟ.೨೬೧.ಭಾಗ೨)

೫. ಬಸವನರಸಿಯುಟ್ಟ ವಸನವ ಚರ ಬೇಡೆ ಕೊಟ್ಟನೆಂಬುದಕ್ಕೆ ಕಥೆ:ಕಲ್ಯಾಣ ಪಟ್ಟಣದಲ್ಲಿ ಬಸವದಂಡೇಶನ ಭಕ್ತಿಯಲಿ ಹನ್ನೆರಡು ಸಾವಿರ ಮಿಂಡ ಜಂಗಮವು ವೇಶಿಯರ ಮನೆಯಲ್ಲಿ ಭೋಗದೊಳಿರುವಾಗ ಅವರಿಗೆ ಸಕಲ ಪದಾರ್ಥವ ಬಸವಣ್ಣ ಕೊಟ್ಟು ಪೂಜಿಸುವಲ್ಲಿ,ಮಿಂಡ ನಾಗಯ್ಯನೆಂಬ ವಿಟ ಜಂಗಮದೇವರು ಶಿವದೇವಿಯೆಂಬ ವೇಶಸ್ತ್ರೀಯ್ಯ ಸಂಗದಲ್ಲಿರುತಂ ತಮ್ಮ ಮನೆಯ ದಾಸಿಯ ಕರದು ಬಸವೇಶ್ವರನ ಮನೆಗೆ ಪೋಗಿ ನಿಚ್ಚಂ ನಮಗೆ ಕೊಡುವ ಪಡಿ ಹೊನ್ನಂ  ಕೊಂಡು ಬಾರೆಂದು ಕಳುಹಲವಳು ಪೋಗಿ ಗಂಗಾಂಬಿಕೆಯುಟ್ಟಿರ್ದ ವಸನವಂ ಕಂಡವಳು ತಿರುಗಿ ಬಂದು ಒಡತಿಗೆಂದಳು: ಒಂದಕ್ಕಜವ ನಾ ಕಂಡೆನಕ್ಕ| ಬಸವನ ರಾಣಿಯುಟ್ಟ ಸೀರಿಗೆ ಸಮಾನವ ನೋಡಲು ಕಾಣೆ| ಶ್ರೀಗೌರಿಪಟ್ಟು, ಇಂದ್ರರಾಗ, ಉದಿಯರಾಗ, ಸಂಜೆರಾಗ, ಸರದೆ,ರಾಜಶೇಖರ, ತವರಾಜ ಮಾಂದಳಿರು, ಮರಕತ, ಭಾವಜತಿಲಕ, ಭೂತಿಲಕ, ರುದ್ರತಿಲಕ, ಚಂದ್ರಾತಪ, ಮೇಘರಂಜಿ, ಜಯರಂಜಿ, ಕಾಂಭೋಜಿ, ಸಣ್ಣ ವಡಂಜಿ, ಫಳ್ಳಿಯು,ಪಡ್ಢಾವಳಿ, ನೇತ್ರಾವಳಿ, ಚಿತ್ರಾವಳಿ, ಹರಿಣಾವಳಿ, ಪಿಂಜಾವಳಿ, ತುರುಗಾವಳಿ, ನಾಗಾವಳಿ,ಗಜಾವಳಿ, ವೃಷಭಾವಳಿ, ಗಣಾವಳಿ, ಹಂಸಾವಳಿ, ಮನುಜಾವಳಿ, ದನುಜಾವಳಿ, ಲಿಂಗಾವಳಿ ಮೊದಲಾದ ಬಣ್ಣಿಗೆಯ ಸೀರೆಗಳ ಕಂಡು ಬಲ್ಲೆವು, ಇಂತಾ ಸೀರೆಯನೆಲ್ಲಿಯು ಕಾಣೆನೆನಲಾಗ ವೇಶಿಯು ತನ್ನ ವಿಟನ ಮೋರೆಯ ನೋಡಿ ನನಗಾ ಸೀರೆಯಂ ತಂದು ಕೊಡೆನಲಾತ, ಪೋಗಿ, ಬಸವಯ್ಯ ನಿಮ್ಮ ರಾಣಿಯುಟ್ಟ ಸೀರೆಯನೆನಗೆ ಕೊಡೆನಲಾಗ, ಸಭೆಗೆ ತನ್ನ ಸತಿಯಂ ಕರಸಿ ಬಸವನು ಸತಿಯುಟ್ಟ ಸೀರೆಯ ಸುಗಿದು ಜಂಗಮ ದೇವರಿಗೆ ಕೊಡಲು ಬೆಳ್ಳಿಯ ಬೆಟ್ಟದಂತೆ ಬೀಳಲದ ಕಂಡು ಸಾಕೆನುತ ಕೊಂಡು ಪೋಗಿ ತನ್ನ ವೇಶಿಗೆ ಕೊಟ್ಟು ಸುಖದಲ್ಲಿರ್ದನಾ ಮಿಂಡ ಜಂಗಮವು. ಇತ್ತ ಗಂಗಾಂಬಿಕೆಯುಟ್ಟ ಸೀರೆಯುಟ್ಟಂತಿರ್ದುದಂ ಕಂಡು, ಗಣಾವಳಿಯು ಬಸವನ ಭಕ್ತಿಭಾವನೆ ಕುಂದದಿಲ್ಲದ ಕಾರಣ ಅರವಿಂದ ಗಂಧಿಯಭಿಮಾನ ಕುಂದಾಗದಾಯಿತೆಂದು ಕೊಂಡಾಡುತ್ತಿರ್ದರು. ( ಪು.೧೫೫. ಭಾಗ.೨) ಈ ಪ್ರಸಂಗದಲ್ಲಿ  ಕವಿಯು ತನ್ನ ಕಾಲದಲ್ಲಿ ಪ್ರಚಲಿತವಿದ್ದ ವಿವಿಧ ಬಗೆಯ ಸೀರೆಗಳ ಪ್ರಕಾರಗಳನ್ನು ಪ್ರಸ್ತಾಪಿಸಿದ್ದಾನೆ. ಈ ಪವಾಡ ಪ್ರಸಂಗದಲ್ಲಿ ಬಸವಣ್ಣ ಜಂಗಮ ಪಕ್ಷಪಾತಿ ಎಂಬುದನ್ನು ಸೂಚಿಸುತ್ತದೆ. ಬಸವಣ್ಣನು ಬೇಡಿದವರಿಗೆ ಇಲ್ಲವೆನ್ನದೆ ಬೇಡಿದ್ದುದನ್ನು ನೀಡುತ್ತಿದ್ದನು ಎಂಬುದನ್ನು ಸಂಕೇತಿಸುತ್ತದೆ. ಕವಿಯ ಕಾಲಕ್ಕೆ ಈ ಕಥೆ ಯಾವರೀತಿ ಜನಮನದಲ್ಲಿ ರೂಪುಗೊಂಡಿತ್ತೆಂಬುದನ್ನು ಗ್ರಹಿಸ ಬಹುದಾಗಿದೆ.

೬.ನೀಲಾಂಬಿಕೆ ಲಿಂಗದಲ್ಲಿ ಬೆರೆದಳು ಎಂಬುದಕ್ಕೆ ಕಥೆಯಾಗಿ ನೀಲಾಂಬಿಕೆಗೆ ಸಂಬಂಧಿಸಿದ ವಿವರಗಳನ್ನು ಕೊಟ್ಟಿದ್ದಾನೆ. ಆ ವಿವರ ಇಂತಿದೆ.  ಕಲ್ಯಾಣ ಪಟ್ಟಣದಲ್ಲಿ ನೀಲಲೋಚನೆಯಮ್ಮನು ತನ್ನ ಪತಿ ದಂಡನಾಯಕ ಸಹವಾಗಿ ಜಂಗಮ ದಾಸೋಹವ ಮಾಡಿ, ಗುರುಭಕ್ತಿ ಮಣಿಹವು ಪೂರೈಸಲು, ಬಸವಣ್ಣನು ಕಪ್ಪಡಿಯ ಸಂಗಮನಾಥನಲ್ಲಿಗೆಯ್ದಿ ಸದ್ಗುರು ಸಂಗಮನಾಥನೆಂಬ ಜಂಗಮ ಲಿಂಗದಲ್ಲಿ ಐಕ್ಯವನೆಯ್ದುವಾಗ ಹಡಪದಪ್ಪಣ್ಣನ ಕೂಡ `ನೀಲಲೋಚನೆಯ ಲಿಂಗೈಕ್ಯಕ್ಕೆ ಇಲ್ಲಿಗೆ ಬರಹೇಳೆಂದು’ ಅಪ್ಪಣ್ಣನ ಕಲ್ಯಾಣಕ್ಕೆ ಕಳುಹಿ ಕರಸಲು ನೀಲಮ್ಮ ಕೇಳಿ ` ಅಲ್ಲಿಗೆ ನನ್ನ ಬರಹೇಳಿದರೆ ಬಸವಯ್ಯನು? ಇಲ್ಲಿ ತಾನಿಲ್ಲವೆ ಸಂಗಯ್ಯನು? ಅಲ್ಲಿ ಇಲ್ಲಿ ಎಂಬ ಸಂದೇಹ ಬಲ್ಲಸುಜ್ಞಾನಿಗಳಿಗುಂಟೆ’ ಎಂದು ಹಡಪದಪ್ಪಣ್ಣಂಗೆ ಬಿನ್ನಯಿಸಿ, ತಮ್ಮ ಕರಸ್ಥಲದಲ್ಲಿಪ್ಪ ಸಂಗಯ್ಯನೆಂಬ ಇಷ್ಟಲಿಂಗದಲ್ಲಿ ಉರಿ ಕರ್ಪುರವ ಬರೆದಂತೆ ಲಿಂಗೈಕ್ಯವಾಗಲು, ಈ ಸುದ್ದಿಯ ಬಸವಣ್ಣ ಕೇಳಿ ಲಿಂಗೈಕ್ಯವಾದರು. ಎಂಬ ವಿವರವನ್ನು ದಾಖಲಿಸಿದ್ದಾನೆ. ( ಪುಟ.೪೪. ಭಾಗ-೨) ಈ ಪ್ರಸಂಗವನ್ನು ಕವಿಯು ನೀಲಲೋಚನೆಯ ಹೆಸರಿನಲ್ಲಿ ದೊರೆಯುವ ಸ್ವರವಚನವನ್ನು ಆಧರಿಸಿ ನಿರೂಪಿಸಿದ್ದಾನೆ. ಈ ಭಾಗದಲ್ಲಿ ಬಸವಣ್ಣನಿಗೆ ಸಂಬಂಧಿಸಿದ ವಿವರಗಳಲ್ಲಿ ಕೆಲವು ಸಂಗತಿಗಳು ಹೆಚ್ಚಿನದಾಗಿ ಪ್ರಸ್ತಾಪಿಸಲ್ಪಟ್ಟಿವೆ.

೨.ಬಸವಣ್ಣನವರ ವಚನಗಳ ಆಶಯದ ಹಿನ್ನೆಲೆಗನುಗುಣವಾಗಿ ಮೂಡಿ ಬಂದಿರುವ ಕತೆಗಳು:  ಈ ವರ್ಗೀಕರಣಕ್ಕೆ ಅನುಗುಣವಾಗಿ  ಮೂರುಪ್ರಸಂಗಗಳು ಕಂಡು ಬಂದಿದ್ದು ಇವುಗಳಲ್ಲಿ ಬಸವಣ್ಣನವರ ವಚನಗಳ ಛಾಯೆಯನ್ನು ಗುರುತಿಸ ಬಹುದಾಗಿದೆ.

೧.ಬೇಡುವ ಒಡೆಯರುಗಳಿಲ್ಲದೆ ಬಡವಾದೆ ಎಂಬುದಕ್ಕೆ ಕಥೆ:

    ಕಲ್ಯಾಣದಲ್ಲಿ ಬಸವಣ್ಣನು ಗುರುಲಿಂಗ ಜಂಗಮಕ್ಕೆ ದಾಸೋಹವ ಮಾಡುತ್ತ ತನು ಮನ ಧನ ಮೊದಲಾದ ಸಕಲ ಪದಾರ್ಥವ ನಿರ್ವಂಚನೆಯಿಂದ ಕೊಡುವೆನೆಂಬ ಪ್ರೀತಿಯಿಂದ ಬಸವಣ್ಣನು ಒಂದು ಗೀತವ ಹಾಡಿದನು. ಅದೆಂತೆಂದೊಡೆ”

 ಕಂದಿದೆನಯ್ಯ ಎನ್ನ ನೋಡುವರಿಲ್ಲದೆ

 ಕುಂದಿದೆನಯ್ಯ ಎನ್ನ ನುಡಿಸುವರಿಲ್ಲದೆ

 ಬಡವಾದೆನಯ್ಯ ಎನ್ನ ಬೇಡುವರಿಲ್ಲದೆ

 ಕಾಡಿ ಬೇಡುವ ಶರಣರ ತಂದು ಕಾಡಿ ಬೇಡಿಸು

 ಕೂಡಲಸಂಗಮದೇವ

ಎಂದು ವಚನವ ಬಸವಣ್ಣ ಹಾಡಲು, ಮಡಿವಾಳಯ್ಯಗಳು ಭಕ್ತರಿಂದಾ ವಚನವ ಕೇಳಿ ಕರ್ಣವ ಮುಚ್ಚಿಕೊಂಡು ಬಸವಣ್ಣನ ಭಕ್ತಿಗೆ ಹಮ್ಮು ಹುಟ್ಟಿತಲ್ಲ ಅದ ನಷ್ಟವಂ ಮಾಡಬೇಕೆಂದು ಬಸವಣ್ಣನರಮನೆಗೆ ಕೋಪದಿಂದ ಕಾಯಕಕ್ಕೆ ಮಡಿವಾಳಯ್ಯನೆಯ್ತರಲು, ಬಸವಣ್ಣನದನರಿದು ಹೆದರಿ ನಡುನಡುಗುತ್ತ ನಡೆತಂದು ಅಷ್ಟಾಂಗವೆರಗಿ ಕೈಮುಗಿದು ನಿಂದು, ಬಸವಣ್ಣನು ದೈನ್ಯದಿಂದ

 `ನಾನು ಭಕ್ತನಲ್ಲವಯ್ಯ; ನಾನು ವೇಷಧಾರಿಯಯ್ಯ

 ಕಾಟುಗ,ಕೇತುಗ ಪೋಲುಗನೆಂಬುದು ಎನ್ನ ಹೆಸರು

 ಕೂಡಲ ಸಂಗಮದೇವಾ

 ನಿಮ್ಮಶರಣರ ಮನೆಯ ಮಗ ನಾನಯ್ಯ

 ಎಂದು ಭಿನ್ನೆೈಸಿ ನಿಂದಿರಲು, ಮಡಿವಾಳಯ್ಯನು `ನೀನು ಬೇಡುವರಿಲ್ಲದೆ ಹೇಂಗೆ ಬಡವದೈ? ನಮ್ಮ ಮಹಾನುಭಾವಿಗಳ ಬಡತನದಿರವ ನಿನಗೆ ತೋರುವೆನು’ ಎಂದು ಪಾದದಿಂದುಕವ ಚೆಲ್ಲಲು, ನವರತ್ನ ರಾಸಿಯಾಗಿ ಬೆಟ್ಟದಂತೆ ಬಿದ್ದಿರಲು ಚಂದ್ರ ಸೂರ್ಯಾಗ್ನಿ ಪ್ರಕಾಶವ ಗೆಲುವ ನವರತ್ನ ರಾಸಿಯಿರಲು,ಬಿಜ್ಜಳ ಮೊದಲಾದ ಪುರಜನವು ಬಂದು ನೋಡಿ ಕೊಂಡಾಡುತ್ತಿರಲು  `ನಮ್ಮ ಕಲಿದೇವನ ಶರಣರ ಬೀಳುಡಿಗೆಯ ತೊಳೆವ ಲೆಂಕನ ಬಡತನವ ನೋಡು’ ಎಂದು ಬಸವಣ್ಣಗೆ ಪೇಳಲು, ಹಮ್ಮಳಿದು ಬಸವಣ್ಣ ವಂದಿಸಲು, ಆ ರತ್ನರಾಸಿಯ ಜಂಗಮಕ್ಕೆ ಸಮರ್ಪಿಸಿ, ಬಸವಣ್ಣಂಗೆ ನಿರಹಂಭಾವದ ಭಕ್ತಿಯಂ ಬೋಧಿಸುತ ಮಡಿವಾಳಯ್ಯಗಳು ಸುಖದಲ್ಲಿರ್ದರು.( ಪು.೩೪೭-೪೮, ಭಾಗ-೧)   ಈ ಪ್ರಸಂಗವು ಬಸವನಲ್ಲಿ ಭಕ್ತಿಯ  ಅಹಂಕಾರ ತಲೆದೋರಿದಾಗ ಅಹಂಕಾರ ನಿರಸನ ಮಾಡಿಸಿಕೊಂಡ ವಿವರವನ್ನು ಸೂಚಿಸುತ್ತದೆ.

 ೨.ಅನವರತವಾರಾರು ಬೇಡದ ಮುನ್ನೀವ ಬಸವಣ್ಣನು ಎಂಬುದಕ್ಕೆ ಕಥೆ

 ಕಳಿಂದ ದೇಸದ ರುದ್ರಾಪುರದಲ್ಲಿ ಮಹದೇವಸೆಟ್ಟಿಯೆಂಬ ಭಕ್ತರ ಮುಂದೆ ಬಸವಣ್ಣ ಹಾಡಿದ ವಚನಮಂ ಕೊಂಡಾಡಲು       `ತನುವ ಬೇಡಿದಡೀವೆ ಮನವ ಬೆಡಿದಡೀವೆ ಧನವ ಬೇಡಿದಡೀವೆ ಬೇಡು ಬೇಡು ಎಲೆ ತಂದೆ;ಕಣ್ಣ ಬೇಡಿದಡೀವೆ ಕೂಡಲಸಂಗಮದೇವ, ನೀ ಬೇಡಿದುದನಿತ್ತು ಶುದ್ಧನಾಗಿಪ್ಪೆ ನಿಮ್ಮ ಪುರಾತನರ ಮನೆಯಲ್ಲಿ.’ ಎಂಬ ವಚನಮಂ ಮಹಾದೇವ ಸೆಟ್ಟಿ ಕೇಳಿ ನಡುನಡುಗಿ ಮುನ್ನಿನ ಪುರಾತನರಾರು ಇಂತಪ್ಪ ಗೀತವ ಹಾಡಿದವರಿಲ್ಲ. ಈ ವಚನದ ಪರೀಕ್ಷೆಯಂ ನೋಡಬೇಕೆಂದು `ನಾನು ಮುತ್ತು ರತ್ನಗಳ ಬೇಡುವೆನೆಂದು’ ಬರುತ್ತಿರಲಿತ್ತ, ಸಂಗಮೇಶ್ವರನು ಆ ಭಕ್ತರು ಬರುವ ಸೂಚನೆಯಂ ಬಸವಣ್ಣಂಗೆ ಪೇಳಲು ಕೇಳಿ, ` ಇಂದೆನ್ನ ತನುವಂ ನಾಳೆನ್ನ ಮನವ ಬೇಡಿದಡೀವೆನೆಂದು ನುಡಿದಿರಲಷ್ಟಕ್ಕೆ ಮಹದೇವಸೆಟ್ಟಿಯರು ಬಂದರೆಂಬುದ ಕೇಳಿ, ಇದಿರೆದ್ದು ಪೋಗಿ ವಂದಿಸಿ ಕರತಂದು, ಸಕಲ ಸತ್ಕಾರಮಂ ಮಡಿ ದೇವಾನ್ನ ದಿವ್ಯಾನ್ನವಂ ನೀಡಿ ಸಲಿಸುವಾಗ ` ಬಸವಣ್ಣ ನಿಮ್ಮಲ್ಲಿ ನಮಗೆ ಬೇಕಾದ ವಸ್ತುವ ಬೇಡುವದಕ್ಕೆ ಬಂದೆವು’ ಎನೆ `ಬೇಡಿ ಭಕ್ತಯ್ಯಾಯೆನಲು ನುಡಿ ತಡಬಡಿಸಿ ಶಿವಾಜ್ಞೆಯಿಂ ಮುತ್ತು ರತ್ನ ಮಾಣಿಕ ಬೇಕೆಂಬುದ ಮರದು ಜೋಳ ಕಡಲೆ ತೊಗರೆಗಳ ಕೊಡಿ ಎನಲು ಅ ಮಾತಿಗೆ ಬಸವಣ್ಣ ನಗುತಲೆಂದನು: ನೀವೇನ ಬಯಸಿ ಬಂದಿದ್ದರಿ ಅದನೆ ಬೇಡಿ ಎನಲು ಆ ಭಕ್ತನು ` ಮುತ್ತುರತ್ನ ಮಾಣಿಕ ಹೊನ್ನುಗಳು ಮುವತ್ತು ಹೇರಾಗಬೇಕೆನಲು ಕೊಟ್ಟು ಕಳುಹುವದ ಕಲ್ಯಾಣದಲ್ಲಿರ್ದ ಸಕಲ ಪ್ರಮಥರೆಲ್ಲರು ಕಂಡು ಆಶ್ಚರ್ಯಮಂ ಬಟ್ಟು `ಬಯಕೆಗತ್ತ ಮುನ್ನ ಕೊಡುವ ಭಕ್ತಿಭಾವ ಕೂಡಲ ಸಂಗನು ಎಂಬ ವಚನದರ್ಥದ ಬಿರಿದು ಬಸವಣ್ಣಂಗೆ ಸಂದಿತೆಂದು ಸ್ತೋತ್ರವಂ ಮಾಡುತ್ತಿರ್ದರು. ( ಪುಟ.೩೨೧-೨೨, ಭಾಗ-೧) ಈ ಪ್ರಸಂಗದಲ್ಲಿ ಬಸವಣ್ಣ ಅಪ್ರತಿಮ ತ್ಯಾಗ ನಿಷ್ಠೆಯನ್ನು ಬಸವಣ್ಣನ ವಚನದ ಛಾಯೆಯನ್ನು ಅನುಸರಿಸಿ ನಿರೂಪಿಸಿದ್ದಾನೆ. ಈ ಕಥೆಯ ನಿರೂಪಿಸುವಲ್ಲಿ ಕವಿಯು ಹರಿಹರನ ಬಸವರಾಜದೇವರ ರಗಳೆಯಿಂದ ಸ್ಫೂರ್ತನಾಗಿದ್ದಾನೆ.

೩.ಹುತ್ತಿನಿಂ ತೆಗದು ಸರ್ಪನಾ ಸರ್ಪನಾಭರಣವಂ ಮಾಡಿದ ಬಾಲ ಸಂಗಯ್ಯನೆಂಬುದಕ್ಕೆ ಕಥೆ

      ಕಲ್ಯಾಣದಲ್ಲಿ ಬಸವ ದಂಡೇಶನು ಬಿಜ್ಜಳನ ಸಮಸ್ತ ನಿಯೋಗದ ಪಾರು ಪತ್ಯವಂ ನಡಸುತ್ತ ಲಕ್ಷದ ಮೇಲೆ ತೊಂಭತ್ತಾರುಸಾವಿರ ಜಂಗಮಕ್ಕೆ ಯಿಚ್ಛಾ ಭೋಜನವ ನೀಡಿ ಹನ್ನೆರಡು ಸಾವಿರ ವಿಟಜಂಗಮಕ್ಕೆ ಬೇಡಿದ ಪದಾರ್ಥವನಿತ್ತು ಬರುವ ಭಕ್ತ ಜಂಗಮವನಿದಿರುಗೊಂಡು ಕರಕೊಂಡು ಬರುವದ ಕಂಡು ಕೊಂಡೆಯರು ಬಿಜ್ಜಳಗೆಂದರು: ಭಂಡಾರಿ ಬಸವಣ್ಣನು ನಿನ್ನ ಭಂಡಾರದ ದ್ರವ್ಯವನ್ನೆಲ್ಲಾ ಜಂಗಮಕ್ಕೆ ಕೊಟ್ಟು ನಿನ್ನ ಭಂಡಾರವ ಬರಿಗೈದನು. ಮಂತ್ರಿತನವ ತೆಗದರೆ ತನ್ನ ಮಿಂಡ ಜಂಗಮಕ್ಕೇನ ಕೊಟ್ಟುಹನೊ ನೋಡುವೆವೆನಲಾಗಂ ಬಿಜ್ಜಳನು ಬಸವಣ್ಣನ ಕರಿಸಿ ಮುದ್ರೆಯುಂಗರವ ತೆಗೆದುಕೊಂಡು ಭಂಡಾರದ ಲೆಕ್ಕವನೊಪ್ಪಿಸಿಕೊಂಡು ನಿಮ್ಮ ಮಂತ್ರಿತನ ನಮಗೆ ಸಾಕು ಎನಲು ಸಂಗಮೇಶ್ವರನಪ್ಪಣೆ ನಮಗಾಯಿತೆಂದು ಬಸವಣ್ಣ ತಮ್ಮ ಮನೆಯಂ ಪೊಗದೆ ಬಿಜ್ಜಳನೋಲಗದಿಂದ ಪಟ್ಟಣವಂ ಬಿಟ್ಟು ತಾ ಪೋಗಿ ನೀಲಮ್ಮ ಗಂಗಮ್ಮ ಅಕ್ಕನಾಗಮ್ಮ ಬಾಲಸಂಗಯ್ಯ ಮೊದಲಾದ ಗಣಂಗಳ ಕರಸಿಕೊಂಡು ಮೂಗಾವುದ ನಡದು ಸತಿಸುತರ ಪದತಳ ನೊಂದು ಬೆಂಡಾಗಿ ಬಸವಳಿದು ಮತ್ತಿಗಟ್ಟದ ಹಳ್ಳದಲ್ಲಿರಲಾಗಲಿತ್ತಂ ಚರಮೂರ್ತಿಗಳೆಲ್ಲಾ ಬಸವಣ್ಣನಿದ್ದಲ್ಲಿಗೆ ಬಂದು ನಮಗೆ ದಿನಂಪ್ರತಿಯಲ್ಲಿ ಕೊಡುವ ಪಡಿಯ ತಾ  ಬಸವಣ್ಣ ಎಂದು ವಿಟಜಂಗಮ ದೇವರುಗಳು ಬೇಡಲು ಬಸವಣ್ಣ  ಕೊಡುವುದಕ್ಕೆ ಪದಾರ್ಥವಿಲ್ಲದೆ ಇಲ್ಲಾ ಎಂದು ನುಡಿಯಲಾರದೆ  ಶಿವಶಿವಾಯೆಂದು ಚಿಂತಿಸಿ ನುಡಿದ ವಾಕ್ಯವು: ಆವನಾದಡೇನು ಹೇಮವಿಲ್ಲದೆ ಅಂಗಮಿಸಬಹುದೆ ಕೊಡವಿಲ್ಲವೆಂಬುದರಿಂದ ಸಾಯಲುಬಹುದು ಸೈರಿಸಬಾರದು ಬೇಡುವರ ನೋಡಿ ಯೀಯ್ಯಲಿಲ್ಲದ ಜೀವನವೇಕೆ ಕೂಡಲ ಸಂಗಮದೇವಾ ಎಂದು ಬಸವಣ್ಣನು ಗೀತವಂ ಪಾಡಿ ನಿಬ್ಬೆರಗಿನಿಂದಿರುವಾಗ ಇತ್ತ ಕೂಡಲ ಸಂಗಮೇಶ್ವರನು. ಬಸವಣ್ಣನ ಪುತ್ರನಾದ ಬಾಲಸಂಗಯ್ಯನೊಡನೆಂದರು: ಅಕಾಶವಾಕಾಗಿ ಯೀಹುತ್ತದೊಳಗೆ ಶಿವಾಭರಣಕ್ಕೆ ಸಮಾನವಾದ ಲೇವಳವದೆ ತೆಗೆಯನಲು ಆಗ ಬಾಲಸಂಗಯ್ಯನು ಹುತ್ತದೊಳಗೆ ಹಸ್ತವನಿಕ್ಕಿ ಸರ್ಪನ ತೆಗೆಯಲಾಗ ಅದು ನಾಗ ಬಂಧದ ಸುವರ್ಣದ ಲೇವಳವಾಗಿರಲು ಅದನು  ಕಲ್ಯಾಣಕ್ಕೊಯ್ದು ಸಿದ್ದಸೆಟ್ಟಿಯೆಂಬ ಹರದನಲ್ಲಿ ಅಡಪವನಿರಿಸಿ ದ್ರವ್ಯವಂ ತಂದು ವಿಟಚರಮೂರ್ತಿಗಳು ಮೊದಲಾದ ಚರಮೂರ್ತಿಗಳಿಗೆ ದಾಸೋಹವ ಮಾಡುತ್ತಿರಲು ಕೊಂಡೆಯರು ಬಿಜ್ಜಳಗೆಂದರು. ನಿಮ್ಮರಮನೆಯಾಭರಣವ ನೊತ್ತೆಯಿಟ್ಟು ಯಚ್ಚವ ಮಾಡುತಹರೆಂದು ಹೇಳಲಾಗರಸು ಬಸವಣ್ಣನ ಕರಸಿ ನಮ್ಮಾಭರಣವನೊಯ್ಯಬಹುದೆ ಎನಲು ಆಗ ನಿಮ್ಮೊಡವೆಯಾದರೆ ತೆಗೆದುಕೊಳ್ಳಿ ಎಂದು ಬಸವಣ್ಣನು ಹರದರ ಮನೆಯಲ್ಲಿರ್ದ ಲೇವಳದ ಪೆಟ್ಟಿಗೆಯಂ ತರಿಸಿ ಬಿಜ್ಜಳನ ಮುಂದಿಡಲು ಆಗ ಬಿಜ್ಜಳ ಕೈದುಡುಕಿ ತೆಗವಲ್ಲಿ ಘಟಸರ್ಪವಾಗಿ ಭೋರೆಂದು ಹೆಡೆಯೆತ್ತಲು ಆಗ ರಾಯ ಹೆದರಿ ನಮ್ಮದಲ್ಲ ಬಸವಣ್ಣಾ ಸರ್ಪದಿಂದಾದ ಭೀತಿಯಂ ಪರಿಹರಿಸೆಂದು ಕೀರ್ತಿಸಲು ಆಗ ಸರ್ಪನ ಆಭರಣವ ಮಾಡಿ ಸಿದ್ದಸೆಟ್ಟಿಗೆ ಕೊಟ್ಟಿರಲಾಗ ಇತ್ತ ಬಸವಣ್ಣನ ಪ್ರಧಾನಿಕೆಯಂ ರಾಯ ತೆಗೆದನೆಂಬುದ ಕೇಳಿ ಅಯಿವತ್ತಾರು ದೇಶದರಸುಗಳು ಕಪ್ಪವಂ ಕೊಡದೆ ವಾಲಗಕ್ಕೆ ಬಾರದಿರಲು ಬಿಜ್ಜಳನಾಗ ಬಸವಂಣಂಗೆ ಕರವ ಮುಗಿದು ಮುದ್ರೆಯುಂಗರವನಿತ್ತು ಎಂದಿನಂತೆ ಪ್ರಧಾನಿಕೆಯಿಂದ ನನ್ನರಾಜ್ಯವ ಪಾಲಿಸುತ್ತಿರೆಂದು ಬೇಡಿಕೊಳಲಾಗ ಬಸವಣ್ಣನು ಮತ್ತಿಗಟ್ಟದಲ್ಲಿರ್ದ ಬಂಧುಗಳ ಕಲ್ಯಾಣಕ್ಕೆ ಬರೆಸಿಕೊಂಡು ಜಂಗಮಾರ್ಚನೆಯಂ ಮಾಡುತ್ತ ಬಿಜ್ಜಳಗೆ ಭಂಡಾರಿತನವ ನಡಸುವಾಗಲಿತ್ತಂ ಬಸವಣ್ಣನ ಕುಮಾರನಾದ ಬಾಲಸಂಗ್ಯಂಗೆ ಶಿವನ ಬೆಸನದಿಂದ ಮರ್ತ್ಯದ ಮಣಿಹ ಪೂರೈಸಲು ಕಮಠೇಶ್ವರನೆಂಬ ತಮ್ಮಿಷ್ಟಲಿಂಗದಲ್ಲಿ ನಿರವಯವನೆಯ್ದಲಾಗ ಬಸವಣ್ಣ ಮೊದಲಾದ ಸಕಲ ಪ್ರಮಥರು ನುತಿಸುತಿಂತೆಂದರು: ಪುಷ್ಪವಿದ್ದಂತೆ ಮೊಗ್ಗೆಯ ನರ್ಪಿಸಿಕೊಂಡ ಶಿವನು ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ದ ಶಿವನೆಂದು ಬಸವಣ್ಣ ಪ್ರಮಥರಿಗೆ ಬಿನ್ನೆೈಸಿ ಭಕ್ತಿ ಸುಖದಿಂದಲೊಪ್ಪುತ್ತಿರ್ದರು. ( ಪುಟ.೨೯೭-೮, ಭಾಗ.೨)

 ಈ ಪ್ರಸಂಗವು ಬಸವಣ್ಣನನ್ನು ಕುರಿತ  ಇತರೆ ಕಾವ್ಯ-ಪುರಾಣಗಳಲ್ಲಿಗಿಂತ ವಿನೂತನವಾಗಿ ಮೂಡಿದೆ. ಬಸವಣ್ಣನ ವಚನವೊಂದನ್ನು ಸಂಗ್ರಹಕಾರ ಈ ಪ್ರಸಂಗದಲ್ಲಿ ಅಳವಡಿಸಿಕೊಂಡಿರುವುದು ಮಹತ್ತರವಾದುದು. ಬಸವಣ್ಣನ ಪುತ್ರ ಬಾಲಸಂಗಯ್ಯನ ಅಕಾಲಿಕ ಮರಣದ ಸಂಗತಿಯನ್ನು ದಾಖಲಿಸಿದ್ದಾನೆ, ಪುತ್ರನ ಮರಣದನಂತರ ಬಸವಣ್ಣನು ಪುತ್ರ ಶೋಕತಪ್ತನಾಗಿ ನುಡಿದಿದ್ದ  ನುಡಿಗಳನ್ನು ಇಲ್ಲಿ ಕೊಟ್ಟಿರುವುದು ಗಮನಾರ್ಹವಾಗಿದೆ.

೩.ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದರೆನ್ನಲಾದ ಪವಾಡಗಳಿಗೆ ಪೂರಕವಾಗಿ ಮೂಡಿ ಬಂದಿರುವ ಕತೆಗಳು

೧.  ಕಲ್ಯಾಣದಲ್ಲಿ ಬಸವಣ್ಣನು ಜಂಗಮಕ್ಕೆ ಪ್ರಾಣವಿತ್ತುದಕ್ಕೆ ಕಥೆ 

      ಕಲ್ಯಾಣದಲ್ಲಿ ಬಸವೇಶ್ವರ ದೇವರು ಭಕ್ತಿಯಲ್ಲಿ ಪೂಜೆಗೊಂಬಹನ್ನೆರಡು ಸಾವಿರ ವಿಟಜಂಗಮದೊಳು ಮಿಂಡ ಮಲ್ಲಿನಾಥಯ್ಯನೆಂಬ ಜಂಗಮದೇವರು ಬಸವಣ್ಣಾ ನಾವು ಬಿಜ್ಚಳನರಮನೆಯ ನೋಡಬೇಕೆನಲು ಆಗಲೊಬ್ಬ ಪರಿಚಾರಕನ ಕೂಡಿಸಿ ಬಿಜ್ಜಳನರಮನೆಯ ತೋರೆಂದು ಬಸವಣ್ಣ ಕಳುಹಲು ಅವನು ಮನೆಯ ಮೊದಲಾದ ಅರವತ್ತು ಕೋಟಿ ಮಾಳಿಗೆಯಂ ನೋಡಿ ಮುವತ್ತೆರಡುಪ್ಪರಿಗೆ ಭದ್ರಮಂಟಪವಿಪ್ಪತ್ತಾರು ಹನ್ನೆರಡು ಬಣ್ಣದ ಚಾವಡಿ ವಂಭತ್ತು ಗರುಡಿಯ ಮನೆ ಶೃಂಗಾರ ಮಂಟಪ ಹದಿನೇಳು ಶೃಂಗಾರದೋಂಟ ಕಾಸಾರ ತಿಳಿನೀರು ಕೊಳ ಮುವತ್ತಾರು ಮೀಹಣದ ಮನೆ ಮೂವತ್ತು ಯಿಂತಿವಲ್ಲದೆ ಬಿಜ್ಜಳನ ರಾಣಿವಾಸ ನೂರಿಪ್ಪತೈದು ಯಿರುವ ಮನೆಗಳ ಬೇರೆ ಬೇರೆ ನೋಡಿಕೊಂಡು ಬರುವಲ್ಲಿ, ಜಾಳಂದ್ರ ದೇಶದ ಪಾಲಂಧರ ಭೂಪನ ಮಗಳಾದ ರೋಹಿತಾಂಬರೆ ಯಂಬವಳು ಮಿಂಡ ಮಲ್ಲಿನಾಥಯ್ಯನ ಲಾವಣ್ಯವಂ ಕಂಡು ಯಿದಿರುವಂದು ನಮಸ್ಕರಿಸಿ ವಿಭೂತಿ ವಿಳ್ಳೆಯವನಿತ್ತು ತನ್ನ ಮನೆಗೊಡಗೊಂಡು ಪೋಗಿ ಯೇಕಾಂತ ವಾಸದಲ್ಲಿರಲು ರತಿಕೇಳಿಗೆ ಕರೆಯಲು ವಲ್ಲದಿರಲು ಆಗ ಚರಮೂರ್ತಿ ನನ್ನ ಪಿಡಿದನೆಂದು ಬೊಬ್ಬಿಡಲು  ಆ ಅಬ್ಬರವ ಬಿಜ್ಜಳಂ ಕೇಳಿ ಬಂದು ಆಮಿಂಡ ಮಲ್ಲಿನಾಥಯ್ಯನನು ಆ ಸತಿಯನ್ನು ಯಿಬ್ಬರನು ಯಿರಿದೊಂದು ಬಾವಿಯಲ್ಲಿ ಹಾಕಿ ಬಸವಣ್ಣನ ಕರಿಸಿ ಯಿಂತೆಂದನು ವೀರ ಬಿಜ್ಜಳರಾಯ ಹೆಮ್ಮಾರಾಯ ಪೆರ್ಮಡಿರಾಯ ಮೊದಲಾದವರು ವಂಶಕ್ಕೆ ಜಾರತವಿಲ್ಲದವರಿಗೆ ಅಭಿಮಾನವನಪಹರಿಸೆಂದು ಕಳುಹಿಸಿದೆಯಾ ವಿಟಜಂಗಮವ ಬಸವಣ್ಣಾ ಯನಲು ಆಗ ಅವರು ಅರಮನೆಯ  ನೋಡುವುದಕ್ಕೆ ಬಂದ ಜಂಗಮವಲ್ಲದೆ ಆಕೃತ್ಯವ ಮಾಡುವದಕ್ಕೆ ಬಂದವರಲ್ಲ ಸಠೆಯೆನಲು ಆಗವ ದಿಟವೆಂದು ಬಿಜ್ಜಳ ಕರೆದುಕೊಂಡು  ಪೋಗಿ ಬಸವಣಂಗೆ ಭಾವಿಯ ತೋರಲು ಆಗ ಕಂಡು ಅರಮನೆಯ ನೋಡಿದುದು ಸಾಲದೆ ಕೂಪವ ನೋಡುವದೇನು ಬನ್ನಿ ಶರಣಾರ್ಥಿಯಂದು ಬಸವಣ್ಣ ಕರೆಯಲು ಆಗ ಮಿಂಡ ಮಲ್ಲಯ್ಯನೆದ್ದು ಬರಲು ಆಗ ಘಾಯರಕ್ತವಣುಮೂತ್ರವಿಲ್ಲದಿರಲು ಆಗ ಬಸವಣ್ಣ ವಂದಿಸಿ, ಯಲೆ ಸ್ತ್ರೀಯೆ, ನೀನಾರೆಂದು ಬಸವಣ್ಣ ಕರೆಯಲು ಆ ಸತಿಯನಿರಿದ ಘಾಯದಲ್ಲಿ ಸತಿ ಪುಟ್ಟಿದಂತೆ ಮ್ಯಾಲಕ್ಕೆ ಬಂದು  ಬಸವಣಂಗೆ ಆ ಜಂಗಮಕ್ಕೆ ನಮಿಸಿ ನಿಲಲು, ನಿನ್ನ ಹೆಸರೇನೆಂದು ಕೇಳಲು ಆಗ ನಾನು ಮುಕ್ತಾಯಂಗನೆ ಬಸವಣ್ಣ, ನಿನ್ನ ಭಕ್ತಿಯ ನೋಡಿ ಬಿಜ್ಜಳನ ವೀರಲಕ್ಷ್ಮಿ ಜಯಲಕ್ಷ್ಮಿಯ ನೋಡಲೆಂದು ಅರಮನೆಗೆ ಬಂದಲ್ಲಿ ಜಂಗಮದ ದರುಷನದಿಂದ ಮುಕ್ತಿಯಾಯಿತೆಂದು ಆ ಬಸವಣ್ಣಂಗೆ ಜಂಗಮಗೆ ವಂದಿಸಿ ಆಕಾಶಮಾರ್ಗದೊಳು ಕೈಲಾಸಕ್ಕೆ ಪೋಗಲತ್ತ ಯಿತ್ತ ಬಿಜ್ಜಳ ಹೆದರಿ ಬಸವಣ್ಣಂಗೆ ವಂದಿಸಿ ಲೋಹಿತಾಂಬರೆ ಯನ್ನ ಸತಿ ಸತ್ತಳು ಅವಳ ಪ್ರಾಣವ ನೀವು ಕೊಡಬೇಕು ಯಂದು ಬೇಡಲು ಬಸವಣ್ಣನೆಂದನು: ನಿನ್ನ ಸತಿ ನಿನ್ನ ಮನೆಯಲ್ಲಿದ್ದಾಳು ನೋಡೆನಲು ಆಗ ಸತಿ ಮನೆಯಲ್ಲಿರಲು ಕೊಂಡೆಯರು ಮೊದಲಾದವರಿಗೆ ಶಿಕ್ಷೆಯ ಮಾಡುವೆನೆಂದು ಬಿಜ್ಜಳ ನುಡಿದು ಮಿಂಡ ಮಲ್ಲಿನಾಥಂಗೆ ಮುತ್ತು ರತ್ನಾಭರಣವ ಕೊಟ್ಟು ವಂದಿಸಿ ಕಳುಹಲು ಆ ಬಸವಣ್ಣನೊಡನೆ ಮನೆಗೆ ಬಂದು ಮಿಂಡ ಮಲ್ಲಯ್ಯ ಸುಖದೊಳಿರ್ದರು. ( ಪು.೩೨೦-೩೨೧, ಭಾಗ.೨) ಈ ಪ್ರಸಂಗದಲ್ಲಿ ಬಸವಣ್ಣ ತನ್ನ ಜಂಗಮ ಭಕ್ತರಿಗೆ ತೊಂದರೆಯಾದಾಗ ಆಪದ್ಬಾಂಧವನಂತೆ ಯಾವ ರೀತಿ ಕಾಣಿಸಿಕೊಳ್ಳುತ್ತಾನೆಂಬ ವಿವರ ಗಮನಾರ್ಹವಾಗಿದೆ.

೨.ಗುರುಲಿಂಗಜಂಗಮ ಪ್ರಾಣಿ ಬಸವನ ರಾಣಿಯೆಂಬುದಕ್ಕೆ ಕಥೆ:  ಕಲ್ಯಾಣದಲ್ಲಿ ಬಸವಣ್ಣ ಭಕ್ತಿಯಿಂ ಮಾಡುತ್ತಿರ್ದು ಲಿಂಗಾರ್ಚನೆಯ ಮಾಡುವ ಪರವಸದೊಳು ಇರ್ದೊಂದು ದಿನಂ ಶಿವಯೋಗದಲ್ಲಿ ಲೀನವಾಗಿರಲು ಇತ್ತಲೊಬ್ಬ ಚರಮೂರ್ತಿ ಬಸವಣ್ಣನ ನೋಡುವುದಕ್ಕೆ ಬರುತ್ತಿರ್ದು ಬಾಗಿಲದವರಿಂದ ಬಸವಣ್ಣನ ಬೇಧವ ತಿಳಿದು ಮರಳಿ ಪೋಗಲು, ಬಸವಣ್ಣ ಜಂಗಮಪ್ರಾಣಿಯಾಗಿಯವರೊಡನೆ ಪ್ರಾಣವೆಯ್ದುವಾಗ, ಎಲ್ಲರ ಪ್ರಾಣವೊಂದು ಕಂಡಯ್ಯಾ, ಎನ್ನಪ್ರಾಣ ಒಂದು ಕಂಡಯ್ಯಾ, ಎನಗೆ ಜಂಗಮವೆ ಪ್ರಾಣ ಕೂಡಲ ಸಂಗಮದೇವಾ ಎಂದು ಭಾಷೆಯ ನುಡಿದು ಆ ಚರಲಿಂಗದೊಡನೆ ಬಸವಣ್ಣನ ಪ್ರಾಣವೆಯ್ದಲು ಇತ್ತಂ ಚನ್ನಬಸವಣ್ಣ ಮೊದಲಾದ ಪ್ರಮಥರು ನೆರೆದು ಬಸವಣ್ಣನ ಭಾವವಂ ಕಂಡು ಸಮಸ್ತ ನಿಯೋಗದವರಂ ವಿಚಾರಿಸಿ ಬಸವಣ್ಣನ ವಚನ ಭಂಡಾರದ ಸಿವುಡಿಯನೋಳ್ಪಲ್ಲಿ, ಭಾಷೆಯ ವಚನವಂ ಕಂಡು ದ್ವಾರ ಪಾಲಕರಿಂದ ಚರಮೂರ್ತಿ ತಿರಿಗಿ ಪೋದ ಬೇಧವನರಿದು ಅರಸಿ ಮರಳಿ ಕರತರಲು ಬಸವಣ್ಣನ ಪ್ರಾಣ ಬಂದಿತ್ತು. ಕಿನ್ನರಯ್ಯ, ಮೇದಾರ ಕೇತಯ್ಯ, ಗುಪ್ತ ಮಂಚಣ್ಣಗಳ ಪ್ರಾಣದೊಡನೆ ಪೋಗಿ ಅವರೊಡನೆ ಬಂದಿತ್ತಲಾ ಎಂದು ಪ್ರಮಥರು ಕೊಂಡಾಡಿ ನುತಿಸುತ್ತಿರಲಾಗಿ. ( ಪು.೩೭೦-೭೧, ಭಾಗ.೨)

೩. ಬಸವೇಶನರುಹವಾದದಲ್ಲಿ ಚರಣರಕ್ಷೆಯನಂಬರದಲ್ಲಿ ಇಟ್ಟನೆಂಬುದಕ್ಕೆ ಕಥೆ:

   ಕಲ್ಯಾಣದಲ್ಲಿ ಬಸವಣ್ಣನ ಭಕ್ತಿಯ ಮಹತ್ವದ ಪವಾಡವ ಬಿಜ್ಜಳ ನೋಡಿ ಸೈರಿಸಲಾರದೆ, ತನ್ನ ಗುರು ಮೀಮಾಂಸನ ಕರಸಲು ಬಂದು ಬಸವಣ್ಣನೊಡನೆ ವಾದಿಸಬೇಕೆನಲು ಬಸವನೊಂದು ತೃಣವನೆ ಪುರುಷವ ಮಾಡಿ, ಆ ಮೀಮಾಂಸನ ವಾದವ ಗೆದ್ದರು. ಸ್ರವಣರು ಇಂದ್ರಜಾಲ ಮಹೇಂದ್ರಜಾಲವ ತೋರುತ್ತ, ತಮ್ಮ ತಟ್ಟು ಕುಂಚವ ಆಕಾಶಕ್ಕೆ ಇಟ್ಟು ನಿಲಿಸಿ, ಬಿಜ್ಜಳಂಗೆ ತೋರಲು ಭೂಪ ತಲೆದೂಗುವಾಗ ಬಸವಣ್ಣನು ತನ್ನ ಎಡದ ಪಾದರಕ್ಷೆಯ ಆ ತಟ್ಟಿಗಿಂದ ಮೇಲೆ ತಾಳಮರನ ಪ್ರಮಾಣದಲ್ಲಿ ನಿಲ್ಲಿಸಲು ಶಿವಭಕ್ತರು ನೋಡಿ ಕೊಂಡಾಡುತ್ತಿರಲು, ಬಿಜ್ಜಳ ಭೂಪ ತಲೆದೂಗಿ ನಗುವಾಗ  ಆ ಚಮ್ಮಾವುಗೆ ತಟ್ಟು ಕುಂಚವನೊದ್ದು ಭೂಮಿಗೆ ಕೆಡಹಲು ಆಗ ಅದು ಶ್ರವಣರ ಗುದದಲ್ಲಿ ಪೊಕ್ಕು ಕೊಲುವಾಗ ರಾಯ ಬಂದು ಬಸವಣ್ಣನ ಬೇಡಿಕೊಳಲು ಶ್ರವಣರ ಪ್ರಾಣವ ಕಾಯ್ದು ಬಸವನು ಅಯ್ಯಾ ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದೆಂದು ಗೀತವ ಹಾಡಿ ಶ್ರವಣರ ಗೆದ್ದು ಪವಾಡವ ನೆರೆದ ಬಸವಣ್ಣ.

     

೪. ಭಿತ್ತಿಯು ಸಂಯಮಿಗೆ ಮಣ್ಣೆತ್ತಿಗೆ ಪ್ರಾಣವನಿತ್ತ ತೊಗರೆಯ ರತ್ನವ ಮಾಡಿದ ಬಸವಣ್ಣನೆಂಬುದಕ್ಕೆ ಕಥೆ:

    ಬಿಜ್ಜಳರಾಯ ಹೊಸ ಅರಮನೆಯಂ ಕಟ್ಟಿ ಅದರಲ್ಲಿ ಚಿತ್ರದ ಜಂಗಮರೂಪ ಬಂದಿರಲು ಬಸವಣ್ಣನ ಕರಿಸಿ ಮನೆ ಚಂದವಾಯಿತೆಂದು ತೋರುತ್ತ ಬರುವಾಗ ಚಿತ್ರದ ಜಂಗಮವ ಕಂಡು ಭೂಪನೆಂದನು: ಈತನೊಬ್ಬ ಜಂಗಮ ಸತ್ತಂತೆ ಮುನಿದು ಕುಳಿತೈದಾನೆ. ಇದು ಚಿತ್ರಸಮಂ ನೋಡು ಬಸವಣ್ಣಾ ಎನಲು ಆ ಜಂಗಮಕ್ಕೆ ಪ್ರಾಣವನಿತ್ತು ತಮ್ಮೊಡನೆ ಕರತಂದರು. ಕಾರಹುಣ್ಣಿಮೆಯ ದಿನದಲ್ಲಿ ಎತ್ತುಗಳ ಹರಿಸಿ ಎಂದು ರಾಯ ಪೇಳಿದುದ ಕೇಳಲು, ಬಡ ಭಕ್ತನೊಬ್ಬಮಣ್ಣೆತ್ತ ಮಾಡಿ ಮನೆಯ ಮುಂದೆ ನಿಲಿಸಲದನು ಬಿಜ್ಜಳ ಕಂಡು ಶಿವನ ವಾಹನ ಸತ್ತು ಮಣ್ಣಾಯಿತೆನಲು, ಬಸವಣ್ಣನದಕೆ ಪ್ರಾಣವನ್ನಿತ್ತು, ಮಣ್ನೆತ್ತಾದರೇನು ನಮ್ಮೆತ್ತು ಗೆಲುವದೆಂದು ಬಿಜ್ಜಳನ ಆನೆ ಕುದುರೆಗೆ ಮುಂದೆ ಓಡಿಸಿ ಗೆಲಿಸಲಾಗಂ ಅರಸಂ ಚೋದ್ಯಂಬಟ್ಟು ನೋಡುತ್ತಾ ಬರಲು ( ಪುಟ.೩೮೨-೮೩, ಭಾಗ.೨)

೫. ಲಿಂಗದಂಘ್ರಿ ಪೂಜಾಮಹಾಚಿತ್ತನುನ್ನತ ಗುಣಾಂಬುಧಿ ಎಂಬುದಕ್ಕೆ ಕಥೆಗೆ ಪೂರಕವಾಗಿ,

   ಕಲ್ಯಾಣದಲ್ಲಿ ಬಸವಣ್ಣನು ಬಿಜ್ಜಳನು ಚಾರಿಯಂ ಹೋಗಿ ಬರುವಾಗ ಬೇವಿನ ಪುಷ್ಪದ ಪರಿಮಳವಂ ಕಂಡು ಅರಸು ನಿಂದು ಬೇವಿನ ಕುಸುಮದ ಪರಿಮಳವ ಬಸವಣ್ಣಾ ನಿನ್ನ ಲಿಂಗಕ್ಕೆ ಅರ್ಪಿಸು ಎನಲು, ನಾವು ನಮ್ಮ ಭಾವಲಿಂಗಕ್ಕೆ ಸಮರ್ಪಿಸಿದೆವು ಎನೆ, ಇಲ್ಲವೆಂದು ಕೊಂಡೆಯರು ಸಹವಾಗಿ ಹಾಸ್ಯವ ಮಾಡಲು, ಉಂಟೆಂದು ಭಂಡಾರಿ ನುಡಿಯಲು, ದೃಷ್ಟವೇನು ಎನಲು, ಎಲ್ಲಾ ಲಿಂಗದ ಗುಡಿಯಲ್ಲಿ ಬೇವಿನ ಪುಷ್ಪದ ಪೂಜೆಯ ಬಿಜ್ಜಳಂಗೆ ತೋರಿ ಮೆರೆದರು, ಶರಣರ ಚಿತ್ತವು ಲಿಂಗದಲ್ಲಿ ತಲ್ಲೀನವಾಗಿ ಭಕ್ತರು ನೆನೆದಂತೆ ಶಿವನು ಪೂಜೆಗೊಂಬನೆಂದು ಎಂಬ ಆಶಯವನ್ನು ಈ ಪವಾಡ ಕಥೆಯು ಸಂಕೇತಿಸುತ್ತದೆ. ( ಪು.೧೯, ಭಾಗ-೧)

೬. ಭೈರದೇವನಂ ಕೀರ್ತಿಸುವನೆ ಮುಕ್ತಿ ಮೂಲಿಗ ಎಂಬ ಕಥೆಗೆ ಉಪಕಥೆಯಾಗಿ ಬಸವಣ್ಣನಿಗೆ ಸಂಬಂಧಿಸಿದಂತೆ ಬರುವ ಪ್ರಸಂಗದಲ್ಲಿ, ಬಿಜ್ಜಳನು, ಬಸವಣ್ಣನನ್ನು ಕುರಿತು, ಬಸವಣ್ಣಾ ನಿಮ್ಮ ಭಕ್ತರ ಕೀರ್ತಿಸಿದವರು ಸರ್ವಾಂಗ ಸುಖಿಗಳಾಗುವರೆಂಬುದು ಸಟೆಯೋ ದಿಟವೋ ಎನೆ, ಶಿವಗಣಂಗಳ ಹಾಡಿದವರು ನೋಡಿದವರು ಮುಟ್ಟಿದವರು ಮುಕ್ತರೆಂದು ಬಿಜ್ಜಳಂಗೆ ಪೇಳಲು ಮರುದಿನ ಬಿಜ್ಜಳ ಚಿಂತಿಸೆ, ಮಂಚಣ್ಣನು ಅರಸು ನೋಡುವಂತೆ ಆ ಭಟ್ಟನಿಗೆ ಜಂಗಮ ವೇಷವ ಧರಿಸಿ ಬಸವನಿಗೆ ಕೃತಕದಿಂದ ತೋರಲು, ಬಸವಣ್ಣ ವಂದಿಸಲು, ಭೂಪ ನೋಡೆಂದು ಮಂಚಿ ಹಾಸ್ಯವ ಮಾಡಲು, ಬಸವಣ್ಣನಂದವಂಗವಯವಮಂ ಕೊಟ್ಟು ನಿಜಭಕ್ತನಂ ಮಾಡಿ ವೇದಪಾಠವನೋದಿಸುತ್ತಾನೆ.(ಪು.೨೦)

೭. ಸೂಳೆ ನಿಂಬೆಗೆ ಕರುಣಾಳು ದೇವರ ದೇವ ಹೊನ್ನಮಳೆಗೆರೆದನು ಎಂಬ ಕಥೆಗೆ  ಅನುಗುಣವಾಗಿ, ಮಾಳಾದೇವಿಯೆಂಬ ವಾರಾಂಗನೆಯು ಬಿಜ್ಜಳನ ವಾಲಗಕ್ಕೆ ಹೋಗುವಾಗ ತ್ರಿಪುರಾಂತಕನ ಗುಡಿಯಲ್ಲಿ ಶಿವಪುರಾಣವವೋದುವಲ್ಲಿ, ಭವಿಜನ್ಮದಲ್ಲಿ ಹುಟ್ಟುವುದು ಮಹಾಪಾಪವೆಂದು ಹೇಳುತ್ತಿರಲು ಅದಕೇಳಿ ಮನೆಗೆ ಬಂದು ಸರ್ವಾಂಗದಲ್ಲಿ ಭಸಿತ ರುದ್ರಾಕ್ಷಿಯಂ ಧರಿಸಿ ಲಿಂಗವ ಪೂಜಿಸ ಬೇಕೆಂಬ ಮನಸ್ಕಳಾಗಿ, ಲಿಂಗವ ಪೂಜಿಸಲು ಗುರುಕೃಪೆಯು ಅಗತ್ಯವೆಂದು, ಅದು ಜಂಗಮದೇವರಿಂದ ಸಾಧ್ಯವೆಂದು ಭಕ್ತರಿಂದ ತಿಳಿದು, ಆ ಜಂಗಮ ದೇವರು ನನಗೆ ಕೊಟ್ಟುದು ಅದೇ ಲಿಂಗವೆಂದು ಪೂಜಿಪನೆಂದು ಭಾವಿಸುತ್ತ ಇರಲಾಗ, ಮಿಂಡಸಂಗಯ್ಯನೆಂಬ ಪರಮ ಜಂಗಮವು ರಾಯನೋಲಗದಲ್ಲಿಯಾಡುವಾಗ ಕಾಳಾಸಂ ಕೊಡುವ ಸಮಯಕ್ಕೆ ಮಚ್ಚಿ ವಿಲಾಸದಿಂದ ಬಸವಣ್ಣ ನೋಡುವಂತೆ ನಿಂಬಿಯ ಪಣ್ಣಿಂನಿಂದಾಕೆಯನೆದೆಯ ಮೇಲಿಡಲು, ಅಂತರದಲ್ಲಿ ಪಿಡಿದು ಇದೇ ನನಗೆ ಪ್ರಾಣಲಿಂಗವೆಂದು ಮನೆಗೆ ತೆಗೆದುಕೊಂಡು ಹೋಗಿ, ಪೂಜೆಯಂ ಮಾಡಿ, ನೋಡಿ ಧ್ಯಾನಿಸುತ್ತಿರಲಾಗ ಬೆಳಗಾಗಿ ಬಿಜ್ಜಳನ ವಾಲಗಕ್ಕೆ ಬರುವುದು ತಡವಾಗಲು ಅವರು ಬಂದು ಕರೆಯಲು ಮಾತನಾಡದೆ ಇರಲು, ಬಂದ ಪರಿಚಾರಕರು ತಿರಿಗಿ ಪೋಗಿ ` ಎಲೆ ಭೂಪಾಲ ತಲೆಯಲ್ಲಿ ಬೂದಿಯನ್ನು ಪೊಯ್ದುಕೊಂಡು, ಕೊರಳಲ್ಲಿ ಹರಳಕಾಯ ಕಟ್ಟಿಕೊಂಡು ನಾವು ಕರೆದಡೆ ಮಾತನಾಡದಿದ್ದಳು, ಮಿಂಡಸಂಗಯ್ಯನೇನು ಮರುಳಮದ್ದನೂಡಿದನೊ ಕಾಣೆವೆಂದು ಪೇಳಲು, ಕೇಳಿ ಬಿಜ್ಜಳನೆಂದನು`ಬಸವಣ್ಣ ನಿಮ್ಮ ಮಿಂಡಜಂಗಮವು ನಮ್ಮ ನಾಟಕಸಾಲೆಯ ಹೆಣ್ಣುಗಳನಿಂತು ಮರುಳಮಾಡಬಹುದೆ’ ಎನಲು, ಬಸವಣ್ಣನಿಂತೆದನು ` ಗುರುವು ಲಿಂಗವ ಕೊಟ್ಟು ಭಸಿತ ರುದ್ರಾಕ್ಷೆಗಳ ಧರಿಸೆಂದು ಪೇಳ್ದುದು ತಪ್ಪೆ’ ಎನಲು, `ಕೊಳಕ ನಿಂಬೆಯ ಹಣ್ಣ ಕೊಟ್ಟು ಲಿಂಗವೆನ ಬಹುದೆ’ ಎನಲು ಅದಕೆ ಬಸವಣ್ಣನೆಂದನು:  ಅದು ಲಿಂಗವಾದಡೆ ಆತನೆ ಗುರು, ಅಕೆಯೇ ಭಕ್ತೆಯೆಂದು ವಂದಿಸ ಬಹುದೆನಲು, ಆ ಕ್ಷಣದಲ್ಲಿಯೇ ಬಸವಣ್ಣನು ಮಾಳಾದೇವಿಯಂ ಕರಸಲು, ಭಸ್ಮ ರುದ್ರಾಕ್ಷೆ ಕರದಲ್ಲಿ ಪಿಡಿದ ನಿಂಬಿಯ ಹಣ್ಣು ಸಹವಾಗಿ ಬಂದು ನಿಲ್ಲಲು, ಬಿಜ್ಜಳನು `ಆಗಿನ ನಿಂಬಿಯ ಹಣ್ಣಲ್ಲವೇ’ ಎನಲು ಬಸವಣ್ಣ ಅಲ್ಲಾ ಎನಲು, ಲಿಂಗವ ತೋರಿ ಎನಲು, ಬಸವಣ್ಣನಾಗ ನಿಂಬಿಯ ಹಣ್ಣು ತರಸಲು, ಆ ಹಣ್ಣೆ ನಿಂಬಿಯ ಕಾಯ ಮಾಟದ ಕರಡಿಗೆಯಾಯಿತ್ತು. ಒಳಗೆ ಜ್ಯೋತಿರ್ಮಯವಾದ ಲಿಂಗವಿರಲು ಕಂಡು, ಹೆದರಿ, ಬಿಜ್ಜಳ  ಬಸವಣ್ಣಂಗೆ ಮಾಳಾದೇವಿಗೆ ವಂದಿಸಿ ಸಕಲ ವಸ್ತುವನ್ನಿತ್ತು ಕಳುಹಿಸುತ್ತಾನೆ. ಇತ್ತ ಬಳಿಕ ಮಾಳಾದೇವಿಗೆ ನಿಂಬೆಯ ಹಣ್ಣೆ ಲಿಂಗವಾದುದರಿಂದ ಸೂಳೆ ನಿಂಬೆಯಕ್ಕನೆಂಬ ಹೆಸರಿಟ್ಟು ಪರಮಗುರು ಬಸವಣ್ಣನ ಕರದಲ್ಲಿ ಮುಟ್ಟಿದುದೆ ಕ್ರಿಯಾದೀಕ್ಷೆಯಾಗಿ ಶಿವಾಚಾರ ಕ್ರಿಯೆಯನಾಚರಿಸುತ್ತ, ತನ್ನ ದ್ರವ್ಯವ ಜಂಗಮದಾಸೋಹವ ಮಾಡುತ್ತಾ ಬಸವಣ್ಣನಿಂದ ಬೀಳ್ಕೊಂಡು ರಾಜಮಹೀಂದ್ರವೆಂಬ ಪಟ್ಟಣಕ್ಕೆತನ್ನ ಜನ್ಮ ಭೂಮಿಗೆ ಹೋಗಿ ನೆಲೆಸುತ್ತಾಳೆಂಬ ವಿವರ ದಾಖಲಾಗಿದೆ. ( ಪು.೧೪೭-೧೪೮) ಈ ಪ್ರಸಂಗವು ಉಳಿದೆಲ್ಲಾ ಕಾವ್ಯ -ಪುರಾಣಗಳಿಗಿಂತ ವಿಸ್ತೃತವಾಗಿ ಸಹಜವಾಗಿ  ನಿರೂಪಿತವಾಗಿದೆ.  ನಿಂಬೆಯಕ್ಕ ಎಂಬ ಹೆಸರು ಯಾವರೀತಿ ಬಂದಿತೆಂಬುದಕ್ಕೆ ಈ ಸಂಕಲನ ಕೃತಿಯಲ್ಲಿಯ ನಿದರ್ಶನ ಗಮನಾರ್ಹವಾದುದಾಗಿದೆ.

 ಈ ಕೃತಿಯಲ್ಲಿ ಬಸವಣ್ಣನಿಗೆ ಸಂಬಂಧಿಸಿದಂತೆ ನೇರವಾಗಿ ಹಾಗೂ ಪರೋಕ್ಷವಾಗಿ ಸಂಬಂಧಿಸಿದಂತೆ ಕತೆಗಳು  ಸಂಗ್ರಹಿಸಿ ನಿರೂಪಿಸಲ್ಪಟ್ಟಿದೆ. ಈ ಪವಾಡದ  ಪ್ರಸಂಗಗಳು  ಬಸವಣ್ಣನು  ಮುಖ್ಯವಾಗಿ ಭಕ್ತ, ಭಕ್ತ ಪಕ್ಷಪಾತಿ ಹಾಗೂ ಪವಾಡ ಪುರುಷ ಎಂಬುದನ್ನು ಸೂಚಿಸುತ್ತವೆ.  ಈ ಕೃತಿಯ ೫ ಸಂಧಿಗಳಲ್ಲಿ ಬಸವಣ್ಣನವರಿಗೆ ಸಂಬಂಧಿಸಿದಂತೆ ೧೬ ಕಡೆಗಳಲ್ಲಿ ಪವಾಡಗಳನ್ನು ಪ್ರಸ್ತಾಪಿಸಿದ್ದಾನೆ. ಬಸವಣ್ಣನವರು ಮಾಡಿದರೆನ್ನಲಾದ ಪವಾಡಗಳಲ್ಲಿ ಬಹುಪಾಲು ಬಿಜ್ಜಳನ ಸಮ್ಮುಖದಲ್ಲಿ ನಡೆದ ಹಾಗೆ ನಿರೂಪಿಸಿದ್ದು, ಪ್ರತಿಯೊಂದು ಪವಾಡದಲ್ಲಿಯೂ ಶಿವನ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಪ್ರಸಂಗಕ್ಕೆ ಬಿಜ್ಜಳನು ತಲೆಬಾಗಿ ಗೌರವಿಸುವುದು ಈ ರೀತಿಯಲ್ಲಿ ನಿರೂಪಿಸಿದ್ದಾನೆ. ವೀರಶೈವ ಸಿದ್ಧಾಂತದಲ್ಲಿ ಅಂಗದೋಪಾದಿಯಲ್ಲಿರುವ ಅಷ್ಟಾವರಣಗಳು (ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ) ಹಾಗೂ ಪ್ರಾಣೋಪಾದಿಯಲ್ಲಿರುವ ಪಂಚಾಚಾರಗಳ (ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ) ಮಹತ್ವವನ್ನು ಬಿಂಬಿಸುವ  ಅಂಶಗಳನ್ನು ಈ ಮೇಲಿನ ಸಂಗ್ರಹಿತ ಕತೆಗಳು  ಹೊಂದಿದ್ದು ಅಧ್ಯಯನಾಸಕ್ತರಿಗೆ ಭಕ್ತಿ ಭಾವವನ್ನುಂಟುಮಾಡುವಂತಿವೆ.

೪.ಇತರೆ ಸಮಕಾಲೀನ ಶರಣರ  ಕಥೆಯೊಂದಿಗೆ ಬೆರೆತ ಬಸವಣ್ಣನವರ ಸಂಗತಿಗಳು:ಕಲ್ಯಾಣದಲ್ಲಿ              ಬಸವಣ್ಣನವರೊಂದಿಗಿದ್ದ ಇತರೆ ಸಮಕಾಲೀನ ಶರಣರಿಗೆ  ಸಂಬಂಧಿಸಿದ ಹಾಗೆ  ಕಥೆಗಳನ್ನು ಕವಿಯು ವಿವಿಧ ಮೂಲಗಳಿಂದ ಕಲೆಹಾಕಿ ಕಥನ ರೂಪದಲ್ಲಿ ಕಟ್ಟಿಕೊಟ್ಟಿದ್ದಾನೆ. ಈ ವಿವರಗಳು ಬಸವಣ್ಣನ ದಿವ್ಯ ವ್ಯಕ್ತಿತ್ವವನ್ನು ಬಿಂಬಿಸುವುದರ ಜೊತೆಗೆ ಆ ಶರಣರ ಚರಿತ್ರೆಯನ್ನು ವ್ಯಕ್ತಿ ನಿಷ್ಠವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿವೆ. ಈ ಸಂಗ್ರಹಿತ ಕಥೆಗಳಲ್ಲಿಯೂ ಶರಣರ ವಚನಗಳ ಛಾಯೆಯನ್ನು ಕೆಲವೆಡೆ ಗುರುತಿಸ ಬಹುದಾಗಿದೆ.

೧. ಆಯ್ದಕ್ಕಿ ಮಾರಯ್ಯನ ಪ್ರಸಂಗ ಮತ್ತು ಬಸವಣ್ಣ:  ಆಯ್ದಕ್ಕಿ ಮಾರಯ್ಯನು ಕಲ್ಯಾಣ ಪಟ್ಟಣದಲ್ಲಿ ಕಾಯಕದಿಂದ ದಾಸೋಹವ ಮಾಡುತ್ತಿರುವಾಗ, ಬಸವಣ್ಣ ಮೊದಲಾದ ಪ್ರಮಥರು ಆಶ್ಚರ‍್ಯವಟ್ಟು ಕೀರ್ತಿಸುತ್ತಿರಲು, ಮತ್ತೊಂದು ದಿನದಲ್ಲಿ  ಬೀದಿಯಲ್ಲಿ ಬಿದ್ದಕ್ಕಿಯನಾಯ್ವುತ ಬರುವುದ  ಬಸವಣ್ಣ ಕಂಡು, ಶಿವಾ ಶಿವಾ ಎಂದು ತನ್ನ ಮನೆಯ ಮುಂದಳ ಬೀದಿಯಲ್ಲಿ ಮತ್ತಷ್ಟಕ್ಕಿಯ ಚೆಲ್ಲಿಸಲಾಗ, ಮಾರಯ್ಯನು ಅಕ್ಕಿಯನಾಯ್ವುತಲ್ಲಿಗೆ ಬಂದು ಅಕ್ಕಿ ಘನವಾಗಿ ಚೆಲ್ಲಿರಲಾಗ ಮತ್ತಷ್ಟಕ್ಕಿಯನಾಯ್ದು ಒಪ್ಪಿಡಿಯಕ್ಕಿಗೆ ಮಿಗಿಲಾಗಿ ಇಪ್ಪಿಡಿಗೆ ಕಡಮೆಯಾಗಿ ತೆಗೆದುಕೊಂಡು ಬಂದು ಮನೆಗೆ ಪೋಗಲಾಗ, ಸತಿ ಲಕ್ಕಮ್ಮ ಕೋಪಿಸುತ್ತೆಂದಳು, ಆಸೆಯೆಂಬುದು ಅರಸಿಂಗೆ, ರೋಷವೆಂಬುದೆ ಯಮದೂತರಿಗೆ, ಈಶನ ಭಕ್ತರ್ಗೆ ಆಶೆ ರೋಷ ಸಲ್ಲದು, ಈಸಕ್ಕಿಯಾಸೆ ನಿಮಗೇತಕ್ಕೆ? ಮಾರಯ್ಯಪ್ರೀಯ್ಯ ಅಮರೇಶ್ವರ ಲಿಂಗಕ್ಕೆ ಸಲ್ಲದ ನೇಮವೆಂದು ಪುರುಷರಿಗೆ ಪೇಳಿ, ಒಪ್ಪಿಡಿಯಕ್ಕಿಯ ತೆಗೆದುಕೊಂಡು ಮಿಕ್ಕಕ್ಕಿಯನಲ್ಲಿ ಚೆಲ್ಲಿ ಬನ್ನಿ ಎನಲಾಗ,ಮಾರಯ್ಯನು ಅಕ್ಕಿಯನೊಯ್ದು ಚೆಲ್ಲಿ, ಅನುಭಾವಮಂಟಪದಲ್ಲಿಗೆ ಪೋಗಿ, ಚೆನ್ನಬಸವಣ್ಣ ಮೊದಲಾದ ಪುರಾತನರಿಗೆ ತನ್ನ ಸತಿ ಕೋಪಿಸಿದ ಪರಿಯ ಪೇಳಲಾಗ, ಅವರೆಂದರು: ಆಚರಣೆಯ ಗೊತ್ತ ಮುಟ್ಟಿದಳು, ಮುಕ್ತಾಂಗನೆಯೊಡನೆ ನಿಮಗೆ ಕೋಪವೇಕೆ ಮಾರಯ್ಯ ಎಂಬಾಗ, ಸತಿ ಬಂದು ಪುರಾತನರಿಗೆ ಪೇಳಿ ವಂದಿಸಿ ತನ್ನ ಪುರುಷನ ಮನೆಗೆ ಕರೆದೊಯ್ದು ಎಂದಿನಂತೆ ಜಂಗಮಕ್ಕೆ ನೀಡುತ್ತಿರಲಾಗಿ. ( ಪುಟ.೧೫೭. ಭಾಗ.೨) ಈ ಕತೆಯ ಭಾಗವು ಶೂನ್ಯ ಸಂಪಾದನೆಯ ಆಯ್ದಕ್ಕಿ ಮಾರಯ್ಯನ ಪ್ರಸಂಗದ ರೀತಿಯಲ್ಲಿಯೇ ನಿರೂಪಿಸಲ್ಪಟ್ಟಿದೆ. ವಚನದ ಎಳೆಯನ್ನು ಗುರುತಿಸ ಬಹುದಾಗಿದೆ.

೨.ಚಿತ್ರದ ಜಂಗಮವನಿರಿದವರನಿರಿದ ಕೋಲಶಾಂತಯ್ಯನೆಂಬುದಕ್ಕೆ ಕಥೆ:

  ಬಸವಣ್ಣನು ಒಂದು ಭದ್ರಚಾವಡಿಯ ಕಟ್ಟಿಸಿ ಅದಕ್ಕೆ ಶಿವಮಹಿಮೆಯ ಚಿತ್ರವಂ ಬರೆಸಿರಲು ಬಿಜ್ಜಳ ಕಂಡು ತನಗೆ ಬೇಕೆನಲು ಬಸವಣ್ಣ ಕೊಡಲು ಅದರಲ್ಲಿ ಕೆಲಂಬುಕಾಲ ಕುಳ್ಳಿರ್ದು ತನ್ನ ಸಮಯದ ಪುರಾಣ ಕೇಳುತ್ತಲಿರುವಾಗ ಮಂಚಣ್ಣನೆಂದನು, ಚಾವಡಿಯ ಕೆಡಹಿಸಿ ಹರಿಪ್ರತಿಮೆಯಂ ಬರೆದು ನೋಡುವಂತೆ ಹರವಾಗಿ ಕಟ್ಟಿಸ ಬೇಕೆನಲು ಆಗ ಕಂಬ ಕುಸಿದಿರಲು ಬಿಚ್ಚಿ ಕಟ್ಟಿಸೆಂದು ಬಿಜ್ಜಳ ಹರಿದಾಸನೆಂಬ ಉಪ್ಪಾರಗಪ್ಪಣೆಯ ಕೊಡಲು, ಅವನು ಹಾರಿ ಗುದ್ದಲಿ ಸಹಿತ ಮಂದಿಯ ಕೂಡಿಕೊಂಡು ಬಂದು ಮಂಟಪವ ಕೆಡಹುವಾಗ ಚಿತ್ರದಲ್ಲಿ ಜಡೆಯ ಜಂಗಮವಿರಲು ಕಂಡು, ಯಿರಿಯಿವನ ಕಂಗಳಂ ಜೆಡೆ ಮುಡಿಯನೊಡೆ ಕಯಿಕಾಲ್ಗಳ ತಿವಿ ಯಿವ ಕಂಡ ಕಂಡ ಭಕ್ತರಲ್ಲಿ ಉಂಡುವುಂಡು ಡೊಳ್ಳ ಹೊಟ್ಟೆಯ ಬೆಳಸಿಕೊಂಡವನೆ ಜಂಗಮನೆಂದು ಹಾರೆಯಲ್ಲಿರಿಯುವಾಗ ಬಸವಣ್ಣನಲ್ಲಿ ಕಟ್ಟಿಗೆವಿಡಿದು ಮಾಲದಾರ ನಿಯೋಗವನು ನಡೆಸುವ ಕೋಲಶಾಂತಯ್ಯನು ಆ ನುಡಿಯ ಕೇಳಿಬಂದು ನೋಡುವಲ್ಲಿ ಜಂಗಮವನಿರಿ ಚಿತ್ರದ ಜಂಗಮವನಿರಿಯೆನಲು ಜಂಗಮವೆಂದು ಯಿರಿಯಬೇಡಾ ಸುಮ್ಮನೆ ಗೋಡೆಯ ಕೆಡಹಿಯನಲು ಅವರು ಮತ್ತೆಯು ಜಂಗಮವನಿರಿಯೆಂದು ಗೋಡೆಯನೊಡೆಯಲು ಕೋಲಶಾಂತಯ್ಯನು ಕಾಮಾಟದವರ ಸಂಹರಿಸಲು ಬಿಜ್ಜಳ ಕೇಳಿ ಬಸವಣ್ಣಂಗೆಂದನು. ನಿಮ್ಮ ಜಂಗಮ ಕಟ್ಟಿಗೆದಾರ  ಶಾಂತಯ್ಯನು ಉಪ್ಪಾರರ ಕೊಲಬಹುದೆ ಎನಲು, ಆಗ ಅವ ನಮ್ಮ ಜಂಗಮವ ನಿರಿಯಬಹುದೆಯೆನಲು ಚಿತ್ರದ ಜಂಗಮವನಿರಿದಡೆ ನಿಮ್ಮ ಜಂಗಮವನಿರಿದನೆಂಬುದು ಚಿತ್ರ ನಿಮ್ಮ ಜಂಗಮವಾದೆಡೆಬ್ಬಿಸಿ ಕರೆತನ್ನಿಯೆನ್ನಲು ಆಗ ಬಸವಣ್ಣನು ಚಿತ್ರದ ಸಂಗಯ್ಯ ಬನ್ನಿಯೆನಲು ಆಗ ಎಲೆ ಬಸವಣ್ಣ ಹಾರೆತಾಗಿ  ನೊಂದೆವೆಂದು ನುಡಿದು ನಡವಾಗ ಪಾದ ನೊಂದುದೆಂದು ಘಾಯಮಂ ತೋರಲು ಆಗ ಬಸವಣ್ಣನೆಂದನು: ನೀವು ನೊಂದುದಲ್ಲಾಯನ್ನೊಡೆಯಾ ನಾನೊಂದೆನು ಎಂದುಘಾಯ ಮೊದಲಾದ ನೋವು ಪರಿಹರಿಸಿ ಬಸವಣ್ಣ ನಮಿಸಲು ಬಿಜ್ಜಳರಾಯ ಕಂಡು ಬಸವಣ್ಣಂಗೆರಗಿ ನಮ್ಮವರ ರಕ್ಷಿಸೆಂದು ಬೇಡಿಕೊಳಲು ಬಸವಣ್ಣನು ಬಿಜ್ಜಳನು ಬಂದು ಕೋಲಶಾಂತಯ್ಯಂಗೆರಗಿ ಮುನ್ನಿರಿದವರ ಪ್ರಾಣವಂ ಕೊಡಿ ಎಂದು ನಮಿಸಲು ಕೋಲಶಾಂತಯ್ಯನು ನಗುತ ಬಸವಣ್ಣಂಗೆರಗಿ ಕರದಲ್ಲಿ ಪಿಡಿದ ಕಟ್ಟಿಗೆಯಿಂದ ಬಡಿದು ಬಸವಣ್ಣನ ಕೃಪೆಯುಂಟು ಯೇಳೆಲೋ ಹರಿದಾಸ ಯೆನಲು ಆಗ ಮಡಿದ ಉಪ್ಪಾರರೆಲ್ಲ ಯೆದ್ದು ಬಿಜ್ಜಳನೊಡಗೂಡಿ ಬಂದು ಬಸವಣ್ಣಂಗೆ ನಮಿಸಿ ತಮ್ಮ ತಮ್ಮ ಮನೆಗೆ ಪೋದರು. ಇತ್ತ ಕೋಲಶಾಂತಯ್ಯನು ಬಸವಣ್ಣನೋಲಗದ ಚಾವಡಿಯಲ್ಲಿ ಸಭೆಯ ಸದ್ದನಡಗಿಸುತ್ತಂ ಬಂದ ಭೂಪಾಲರಂ ಕೋಲಿಂದ ಬಡಿದು ಸಸಿನಕ್ಕೆ ನಿಲಿಸುತ್ತಂ ನಿಯೋಗದವರ ಕರೆದು ಹುಜುರ ಮಾಡುತ್ತಂ ಭಲರೆ ಭಾಪುರೆ ಬಸವದಂಡೇಶ ಎಂದು ಕೈವಾರಿಸಿ  ಬಸವಣ್ಣನಿಂದ ಕಾಯಕವ ತೆಗೆದುಕೊಂಡು ದಾಸೋಹವ ಮಾಡುತ್ತ ಸುಖದಿಂದಿರ್ದರು. ( ಪುಟ.೩೨೩-೪, ಭಾಗ-೨)  ಈ  ವಿವರವು ಕೋಲಶಾಂತಯ್ಯನ ಬಗೆಗೆ  ಬೇರೆಲ್ಲಿಯೂ ದೊರೆಯದ ವಿವರಗಳನ್ನು ದಾಖಲಿಸಿದೆ. ಜೊತೆಗೆ ಕೋಲಶಾಂತಯ್ಯನ ವಚನಗಳ ಅಂಕಿತವನ್ನು  ಉಲ್ಲೇಖಿಸಿದೆ. ಈ ಪ್ರಸಂಗದಲ್ಲಿ ವೀರಶೈವ ಗಣಾಚಾರ ಹಾಗೂ ಜಂಗಮದ ಶ್ರೇಷ್ಠತೆಯನ್ನು ಕಾಣಬಹುದಾಗಿದೆ.

   ಭೈರವನ ಸತಿ ಮಹಾದೇವಿಯು ಅಕ್ಕಿಯ ಥಳಿಸುವಾಗ ಸೋಮೇಶನು ಜಂಗಮರೂಪಾಗಿ ಬರಲು ಒನಕೆ ಅಂತರದಲ್ಲಿ ನಿಂದುದು ಪ್ರಸಂಗಕ್ಕೆ ಪೂರಕವಾಗಿ ಬಂದಿರುವ ಉಪಕಥೆಗಳಲ್ಲಿ ಬಸವಣ್ಣನವರಿಗೆ ಸಂಬಂಧಿಸಿದ ೩ ಕಥೆಗಳು ಪ್ರಸ್ತಾಪಿಸಲ್ಪಟ್ಟಿವೆ.

೩.. ಬಸವ  ಬಾಚರಸರ ಲೆಕ್ಕ ನಿಮಿತ್ಯವ  ತರಣಿಯ ನಿಲಿಸಿದನು.: ಸೊಡ್ಡಳ ಬಾಚರಸರು ಬಿಜ್ಜಳರಾಯನಲ್ಲಿ  ಕರಣಿಕತ್ವಕ್ಕೆ ಮುಖ್ಯ ನಾಯಕರಾಗಿ ಲೆಕ್ಕವ ಬರವಲ್ಲಿ   ತಾವು ಪಂಚಾಕ್ಷರಿ ಮಂತ್ರಸಿದ್ಧರಾದ ಕಾರಣದಿಂದ ಕೊಟ್ಟುದುದನೆ ತೆಗೆದುಕೊಂಡುದು  ನಮಃ ಶಿವಾಯ ಸಂದದು ನಿಂದದು ನಮಃ ಶಿವಾಯ ಬಂದದು ಬಾರದದು ನಮಃ ಶಿವಾಯ ಎಂದು ಮಂತ್ರವನೆ ಬರೆಯಲು ಆ ಬರದ ಸಿವುಡಿಯ ಕೊಂಡೆಯರು ಬಿಜ್ಜಳಗೆ ತೋರಲು ಬಸವಣ್ಣನ ಭೂಪ ಕರಸಿ ಬಾಚರಸರ ಲೆಕ್ಕವ ಮಧ್ಯಾಹ್ನಕ್ಕೆ ಒಪ್ಪಿಸು ಎಂದು ಉಗ್ರವ ಮಾಡಲುಲೆಕ್ಕವನೋದುವಾಗ ಸೂರಿಯನು ಮಧ್ಯಾಹ್ನದಲ್ಲಿಯೇ ಹನ್ನೊಂದು ದಿನ ನಿಂತಿರಲು ಘಳಿಗೆ ಜಾವಗಟ್ಟಳೆಯಲ್ಲಿ ಹನ್ನೊಂದು ದಿನವಾದುದು. ಸರ್ವರು ಕಂಡು ಬಸವಣ್ಣನ ಕೊಂಡಾಡುತ್ತಿರಲು ಆಗ ೩೬೦ ಕರಣುಕರ ಸಿವುಡಿ ಲೆಕ್ಕಕ್ಕೆ ಪಂಚಾಕ್ಷರಿಯಂಬರ ಸಿವುಡಿಯಲ್ಲಿ ಸಮಾನವಾಗಿ ಬಾಚರಸರು ಓದಲು ಆಶ್ಚಯಂ ಪಟ್ಟು ರಾಯ ಬಸವಣ್ಣಂಗೆ ಬಾಚರಸಯ್ಯಂಗೆ ಮುತ್ತು ರತ್ನ ನೂತ್ನಾಂಬರಮನಿತ್ತು ವಂದಿಸಿ ಕಳಹಲು, ಬಸವಯ್ಯ ತನ್ನರಮನೆಗೆ ಬರಲು ಇತ್ತಂ ಸೂರ್ಯನಸ್ತಮಿಸಿದನು. ಸೊಡ್ಡಳ ಬಾಚರಸರು ಬಿಜ್ಜಳನ ಭಂಡಾರದಲ್ಲಿ ಮುಖ್ಯ ಕರಣಿಕನಾಗಿದ್ದರೆಂಬ ಸಂಗತಿ ಗಮನಾರ್ಹವಾದುದಾಗಿದೆ.

  ೪.ಈಶಭಕ್ತರು ಅಧಿಕವೆಂದು ಬಸವೇಶ ಶಿವನಾಗಮಯ್ಯನ ಕರದಲ್ಲಿ ಅಮೃತವ ಕರೆದರೆಂಬುದಕ್ಕೆ ಕಥೆ:

     ನೈಮಿಷಾರಣ್ಯವಾಸದ ಮುನಿಗಳು ಕುಲದಲ್ಲಿ  ಅಧಿಕರಾರೆಂದು ಕೇಳಲು ಪೇಳುತ್ತಿರ್ದನು. ಸೂತ ಮುನೀಂದ್ರನು ಕ್ರಿಮಿ ಕೀಟ ಪತಂಗ ಮೊದಲಾದ ಸಚರಾಚರ ಚೌರಾಸಿ ಪ್ರಾಣಿಗಳೊಳಗೆ ಗೋವುಗಳಧಿಕ, ಗೋವಿನಿಂದ ಮನುಷ್ಯರಧಿಕ, ಮನುಷ್ಯರಿಂದ  ಅಷ್ಟಭೂತಗಳಧಿಕ,ಅಷ್ಟಭೂತಗಳಿಂದ ಅಷ್ಟವಸುಗಳಧಿಕ, ಅಷ್ಟವಸುಗಳಿಂದ ಅಷ್ಟದಿಕ್ಪಾಲರಧಿಕ, ಅವರಿಂದ ನವಗ್ರಹಂಗಳಧಿಕ, ನವಗ್ರಹಂಗಳಿಂದ ದ್ವಾದಶಾದಿತ್ಯರಧಿಕ, ಆದಿತ್ಯರಿಂ ನವಬ್ರಹ್ಮರಧಿಕ, ಆ ಬ್ರಹ್ಮರಿಂ ಅರವತ್ತೆಂಟು ಕೋಟಿ ತೀರ್ಥವಧಿಕ, ತೀರ್ಥದಿಂ ಯಮುನೆಯೆಂಬ ನದಿಯಧಿಕ, ನದಿಯಿಂ ಜಾಹ್ನವಿಯಧಿಕ, ಜಾಹ್ನವಿಗಿಂತ ಜಹ್ನುಮುನಿಯಧಿಕ, ಮುನಿಗಿಂತ ಸಗರನ ಸುತ ಭಗಿರಥನಧಿಕ, ಅವನಿಗಿಂದ ಹಿಮದ ನಗವಧಿಕ, ನಗದಿಂ ಹಿಮಭೂಮಿಯಧಿಕ, ಅದರಿಂ ಶರಧಿಗಳಧಿಕ, ಶರಧಿಯಿಂ ಮೇಘವಧಿಕ, ಅದರಿಂ ನಕ್ಷತ್ರವಧಿಕ, ಅವರಿಂ ಚಂದ್ರನಧಿಕ, ಅದರಿಂ ಸೂರ್ಯನಧಿಕ, ಸೂರ್ಯನಿಂ ಅಗ್ನಿಯಧಿಕ, ಅದರಿಂ ದೇವರ್ಕಗಳಧಿಕ, ಅವರಿಂ ಯಜ್ಞವಧಿಕ, ಅದರಿಂ ದ್ವಿಜರಧಿಕ, ಅವರಿಂ ವಿಪ್ರರಧಿಕ, ಅದರಿಂ ಕೃತ ಬುದ್ಧಿಗಳಧಿಕ, ಅದರಿಂ ಜೋಗಿ ಕರ್ತಾರಧಿಕ,ಅವರಿಂದ ಯಮನಿಯಮ ಪಂಚಕಯೋಗಿಗಳಧಿಕ, ಅದರಿಂ ಜೋಗಿ ವೆಮಳರಧಿಕ, ಅವರಿಂ ಸನ್ಯಾಸಿಗಳಧಿಕ, ಅವರಿಂ ಪಾಶುಪತಿಗಳಧಿಕ, ಅವರಿಂ  ಆದಿಶೈವ ಶುದ್ದಶೈವ ಮಾರ್ಗಶೈವ ಪ್ರವರಶೈವರಧಿಕ, ಅವರಿಂ ಅದ್ವೆೈತ ಜ್ಞಾನಿಗಳಧಿಕ, ಅವರಿಂ ಶಿವಾರ್ಚಕರಧಿಕ, ಆ ಶಿವಾರ್ಚಕರ್ಗೆ ಹರಿಯಜ ಸುರಪ ಮನು ಮುನಿಗಳು ಸಮಾನವಲ್ಲ. ಅಂತಾ ಶಿವಾರ್ಚಕರು ವೀರಶೈವಸಂಪನ್ನರಾದ ಲಿಂಗಾಂಗ ಸಂಬಂಧಿಗಳಿಗೆ ಆ ಹದಿನಾಲ್ಕು ಭುವನದೊಳಗೆ ಆರು ಸಮಾನವಿಲ್ಲವಾಗಿ, ಹೊಲೆಯನಾದರೂ ಶಿವಪೂಜೆಯಿಂದ ಸತ್ಕುಲಜನಪ್ಪನು. ಅದೆಂತೆಂದೊಡೆ ವೇದವ್ಯಾಸ ಬೋಯಿತಿಯ ಮಗ; ಮತಂಗಿಯ ಮಗ ಮಾತಂಗನು; ಸುನಕನ ಮಗ ಸನಕನು; ಉರ್ವಸಿಯೆಂಬ ವೇಶಿಯ ಮಗ ವಶಿಷ್ಟನು. ಮಂಡೋದರಿ ಕಪ್ಪೆ ಮಗಳು, ಆಕೆಯ ಮಗ ಮಾಂಡವ್ಯನು, ಅಗಸ್ತ್ಯ ಕಬ್ಬಿಲನು, ದೂರ್ವಾಸ ಮುಚ್ಚಿಗನು, ಕಶ್ಯಪ ಕಮ್ಮಾರನು, ಕೌಂಡಲ್ಯನೆಂಬ ಮುನಿಯು ನಾಯಿಂದನು, ಸಾಂಖ್ಯಮುನಿ ಸ್ವಪಚನು; ವಾಲ್ಮೀಕಿ ಮುನಿಯು ವ್ಯಾಧನು; ಪರಾಶರ ಮುನಿಯು ಬೇಡನು; ಶೃಂಗಮುನಿ ಎರಳೆಯ ಮಗನು; ಇವರೆಲ್ಲರು ಶಿವಭಕ್ತಿಯಿಂದ ಸತ್ಕುಲಜರಾದರು. ಶಿವನಾಗಮಯ್ಯನವರೆಂಬ ಹಿರಿಯ ಭಕ್ತರ ಒಂದು ರೋಮಕ್ಕೆ ವಿಪ್ರ ಎಣೆಯಲ್ಲವೆಂದು ಬಸವಣ್ಣನೆನಲು ಬಿಜ್ಜಳ ಕೇಳಿ ನುಡಿದನು.ಭಕ್ತರ ಚಿವುಟಿದರೆ ಮೈಯ್ಯಲ್ಲಿ ಹಾಲು ಒಗುವುದೆ? ಭವಿಗಳ ಚಿವುಟಿದರೆ ಮೈಯಲ್ಲಿ ನೀರು ಒಕ್ಕಾವೆ ಎನಲು, ಬಸವಣ್ಣನು ಶಿವಭಕ್ತರೆ ನಿತ್ಯವಾದ ಸತ್ಕುಲಜರೆಂಬುದ ತೋರುವೆನೆಂದು ಶಿವನಾಗಮಯ್ಯಗಳೆಂಬ ಹಿರಿಯ ಭಕ್ತರ ಕರದಲ್ಲಿ ಅಮೃತದವ ಕರದು ಮೆರದರಂದು. ( ಪುಟ.೪೩೭-೩೮, ಭಾಗ-೨)  ಈ  ಕತೆಯಲ್ಲಿ ಶಿವಭಕ್ತರ ಪಾರಮ್ಯದ ಶ್ರೇಷ್ಠತೆಯನ್ನು ಕಾಣಬಹುದಾಗಿದೆ.    

 ೫. ಶಿವನಿಂದೆಗೆಯ್ದನನಿರಿದ ಜಗದೇವ ಎಂಬುದಕ್ಕೆ ಕಥೆ:

  ಮಂಗಳವಾಡದಲ್ಲಿ ಹಳ್ಳಯ ಮಧುವಯ್ಯಗಳು ಉತ್ಕೃಷ್ಟ ನಿಃಕೃಷ್ಟ ಕುಲವೆಂದು ನೋಡದೆ ಸದ್ಭಕ್ತಿ ಭಾವನೆಯಿಂದ ನಂಟುತನವಂ ಮಾಡಲು ಪಿಸುಣರು ಬಿಜ್ಜಳಗೆಂದರು: ವಿಪ್ರರು ಸ್ವಪಚರಿಗೆಯು ಬೀಗತನವಾಯಿತೆಂದು ಪೇಳಲು ಬಿಜ್ಜಳನವರಂ ಕರ ತರಸಿ ನಯನಕ್ಕಾಜ್ಞೆಯ ಮಾಡಲು ಬಸವಣ್ಣ ಮೊದಲಾದ ಪ್ರಮಥರು ನೆರೆದು ಆ ಕ್ಷಣವವರ ನಯನಗಳ ಪಡದು ಬಿಜ್ಜಳನ ಸಂತಾನ ನಿಃಸಂತಾನವಾಗುವಂತೆ ಪ್ರಮಥರು ಮುನಿದು ಪಟ್ಟಣವಿನ್ನುಳಿಯದೆಂದು ಬಿಜ್ಜಳನಳಿದು ಪೋದಾನು ಪ್ರಮಥರ ಸ್ವತಂತ್ರ ಲಕ್ಷಕ್ಕೆ ಚಿತ್ತೆೈಶಾರುಯಂದು ಪ್ರಮಥಾಳಿ ತಮ್ಮಳಾಳೋಚಿಸಿ ಮಾತನಾಡುವಾಗ ಮುನ್ನ ಜಗದೇವನು ಬಸವಣ್ಣ ಮೊದಲಾದ ಪ್ರಮಥರಿಗೆ ವಿಭೂತಿಯ ಸಂಬಂಧಿಸಿ ಯಿತ್ತ ದ್ವಿಜಕ್ರಿಯ ನಾಚರಿಸಲು ಬಸವಣ್ಣ ಮುನಿದು ಬರಲೊಲ್ಲದೆ ಧಿಕ್ಕರಿಸಿ ನುಡಿಯಲು ಜಗದೇವನುಪಾವಸ್ತೆಯಿಂದ ತನ್ನದಪರಾಧವೆನಲು ಪ್ರಮಥಾವಳಿಯು ಬಸವಣ್ಣನು ಜಗದೇವಂಗೆ ಶರಣ ಮಾರ್ಗವ ಪ್ರತಿಷ್ಠಿಸಿ ಮುಂದೆ ಭಕ್ತದ್ರೋಹಿಯಾದ ಅರಸನ ಕೊಲ್ಲೆಂದು ವೀರದಂಬುಲವನಿತ್ತು ಬೆಸನ ಕೊಡಲಾಗ ಜಗದೇವನ ತಾಯಿ ಸೋಮಕ್ಕನು ತನ್ನ ಜಗದೇವನ ಕೂಡೆಯಂದಳು ಹಳ್ಳಯ್ಯ ಮಧುವಯ್ಯನವರಿಗೆ ಆಗ್ನೆಯಂ ಮಾಡುವದ ನೀ ನೋಡಿಬಂದೆಯಾ ಪ್ರಮಥರು ನಿನಗಿತ್ತ ಮಣಿಹವ ಮರದೆಯಾ ನಿನ್ನ ಭಾಷೆಯ ಗೊತ್ತ ಮುಟ್ಟುವನ್ನಕ್ಕ ಪ್ರಮಥರ ಸೇವೆ ಪೂರೈಸುವನ್ನಕ್ಕ ನೀ ನನಗೆ ಮಗನಲ್ಲ ನೀ ಸುನಿಗಿಂತ ಕಡೆಯೆಂದು ನೆಲದಲ್ಲಿಯೂಟವನಿಕ್ಕಲು ಜಗದೇವನು ಭವಿಸುವ ವಾರ್ತೆಯ ಮಲ್ಲಯ್ಯ ಬೊಮ್ಮಯ್ಯಗಳು ಕೇಳಿ ಸಗರದಿಂದ ಬಂದು ತಾವು ಜಗದೇವನಂತೆ ಮಾತೆಯಿಕ್ಕಿದ ಪೂರ್ಣ ಪ್ರಸಾದವನಾರೋಗಿಸುತ್ತಿರಲು ಆಗ ಬಸವಣ್ಣ  ಕಪ್ಪಡಿಗೆ ಹೋದರೆಂಬ ವಾರ್ತೆಯಂ ಕೇಳಿ ವೀರ ಜಡೆಗಳಂ ಕಟ್ಟಿ ವೀರವತಾರರು ಭಸಿತವನುದ್ಧೂಳಿಸಿ ವೀರಗಾಸೆಯನುಟ್ಟು ವೀರಭದ್ರಾಯನಮೋಯಂದುಘ್ಘಡಿಸುತ್ತಾ ಮೂವರು ಬಿಜ್ಜಳನ ಯಿರುಳಿನೋಲಗಕ್ಕೆಯ್ದಿ  ಪೋಗುವಾಗ ನಂದಿರೂಪಿನ ಗೂಳಿ ಮುಂದೆ ನಡೆಯಲು ಒಳಪೊಕ್ಕು ಪೋಗುವಾಗ ಚತುರಂಗಬಲ ಮೊದಲಾದ ಪಟುಭಟರು ದಾರಿಯಂ ತೊಲಗಿ ಕಡೆಗೆ ಪೋಗಲು ಬಿಜ್ಜಳನ ಸಭೆಯಲ್ಲಿ ಯಿತ್ತರದ ಸತ್ತಿಗೆ ಆಲವಟ್ಟ ಚಾಮರ ಬೀಸಣಿಗೆ ಮೊದಲಾದ ನಿಯೋಗದವರು ವಾಲೈಸುವಾಗ ಐವತ್ತಾರು ದೇಶದ ಭೂಪಾಲಕರು ಬೆಸನ ಹಾರುವಾಗ ಸಿಡಿಲೆರಗಿದಂತೆ ಪೋಗಿ ರತ್ನದ ಗರ್ದ್ದುಗೆಯ ಮೇಲಿರ್ದ ಬಿಜ್ಜಳನನಿರಿದು ಹಲ್ಲಕಿತ್ತು ಹಣೆಯ ಮೇಲಿಟ್ಟು ನಾಲಗೆಯ ಕೊಯ್ದುಯದೆಯಮೇಲಿಟ್ಟು ಕಯ್ಯಕೊಯ್ದು ಕಠಾರಿಯ ಮೋನೆಯ ಮೇಲಾಂತು ವೀರ ಪ್ರಂಥರ ಬಿರಿದಿನ ಮಾಸಾಳುಗಳು ಪರವಾದಿ ಬಿಜ್ಜಳನ ಕೊಂದೆವೆನುತ್ತಾ ಬೊಬ್ಬಿರಿದಾಲುತ್ತ ಬರಲುಯಿತ್ತ ಬಿಜ್ಜಳನ ಸಭೆ ತಮ್ಮಲ್ಲಿ ತಾವು ಕಾದು ಮಡಿಯಲು ಪಟ್ಟಣ ಹಾಳಾಗಲಾಕ್ಷಣದಲ್ಲಿ ಪ್ರಮಥರು ವುಳುವಿಗೆ ಪೋಗಲು ಸೋಮಲದೆವಿಯಕ್ಕನು ತನ್ನ ಸುತ ಜಗದೇವನ ಇದಿರುಗೊಂಡು ಆರತಿಯನೆತ್ತಿ ಜಯಸೇಸೆಯನಿಡಲು ಇತ್ತ ಶಿವನೊಲಿದು ಸೋಮಕ್ಕ ಮೊದಲಾದ ನಾಲ್ವರನು ಪ್ರಮಥಗಣ ಸಹಿತ ಬಂದು ಯಿದಿರ್ಗೊಂಡು ಕರದೊಯ್ದು ಪ್ರಮಥಗಣಾನಂದ ಪದವನಿತ್ತ ಶಿವನು. ( ಪು.೩೧೫-೧೬, ಭಾಗ-೨) ಈ ಪ್ರಸಂಗವು ಭೀಮ ಕವಿಯ ಬಸವ ಪುರಾಣವನ್ನು ಅನುಸರಿಸಿ ನಿರೂಪಿಸಲ್ಪಟ್ಟಿದ್ದರೂ  ಹೆಚ್ಚಿನ ವಿವರ ಹಾಗೂ ಕೆಲವೆಡೆ ಹೊಸ ಸಂಗತಿಗಳನ್ನು ದಾಖಲಿಸಿದೆ.

   ಈ ಸಂಕಲನ ಕೃತಿಗೆ ಭಕ್ತಿಯೇ ಸ್ಥಾಯಿ. ಭೈರವೇಶ್ವರನ ಜೀವನಕ್ಕೆ ಸಂಬಂಧಿಸಿದ ಪವಾಡಗಳು ಹಾಗೂ ಶಿವನಿಷ್ಠೆಯನ್ನು ಹೋಲುವ ಕಥೆಗಳಲ್ಲಿಯ ಭಕ್ತರ ನಿಷ್ಠೆ, ಆಚಾರ ಅಚಲ, ಸುದೃಢ ನಂಬಿಕೆಯೇ ಭಕ್ತಿಯ ಸ್ಥಾಯಿಗೆ ಪೋಷಕವಾಗಿದೆ. ಈ ಕೃತಿಯಲ್ಲಿ ಬಸವಣ್ಣನಿಗೆ ಸಂಬಂಧಿಸಿದ ಭಾಗಗಳಲ್ಲಿ ಶಿವಪಾರಮ್ಯವೇ ಮುಖ್ಯವಾಗಿದ್ದರೂ ಅಲ್ಲಲ್ಲಿ  ಬಸವಣ್ಣನು ಶಿವನ ಪರೀಕ್ಷೆಗೆ ಒಳಗಾಗಿರುವ ಹಾಗೂ ಅನ್ಯಮತೀಯರ ವಿಡಂಬನೆಗೆ ಸಿಲುಕಿ, ಸಿಡಿದೆದ್ದು ಶಿವನಿಷ್ಠೆಯನ್ನು ಮೆರೆವ ನಿಸ್ವಾರ್ಥ ವ್ಯಕ್ತಿತ್ವದವರಾಗಿ ಕಂಡು ಬಂದಿದ್ದಾರೆ. ಶಿವಭಕ್ತನ, ಶಿವಸಾಧಕನ ಜೀವನ ಯಾವ ರೀತಿ ಮುಕ್ತಿ ಪಥದತ್ತ ಸಾಗಿ ಶಿವನ ಒಲುಮೆಯನ್ನು ಗಳಿಸಿಕೊಂಡಿತು ಎಂಬುದನ್ನು ಬಸವಣ್ಣನವರ ಕಥೆಯ ಮೂಲಕ ನಿರೂಪಿಸುವುದೇ ಕವಿಯ ಉದ್ದೇಶ. ಕವಿಯ ಈ ಕೃತಿಯಲ್ಲಿ ಭಕ್ತನು ನಿಜವಾಗಿ ಪೂರ್ಣಾರ್ಥದಲ್ಲಿ ಶಿವದಾಸನಾದರೆ ಶಿವನು ಭಕ್ತನಿಗೆ ದಾಸನಾಗಿ ಬೇಡಿತ್ತ ಕೊಡುವುದಲ್ಲದೆ ಭಕ್ತನ ಯೋಗಕ್ಷೇಮ ಒಳಿತುಕೆಡುಕುಗಳನ್ನು ನೋಡಿಕೊಳ್ಳುತ್ತಾನೆ ಎನ್ನುವ ಶಿವ ಸಂದೇಶವನ್ನು ಸಾರಿದ್ದಾನೆ. ಈ ಕೃತಿಯು `ಪುರಾಣ ಕಥೆಗಳ ಸಾಗರ' ಎಂದು ಒಂದು ರೀತಿಯಲ್ಲಿ ಕಂಡುಬಂದರೂ ಮತ್ತೊಂದು ರೀತಿಯಲ್ಲಿ ಐತಿಹಾಸಿಕ ಕಾವ್ಯವಾಗಿಯೂ ವ್ಯಕ್ತಗೊಂಡಿದೆ. ಈ ಕೃತಿಯು  ಬಸವಣ್ಣ ಹಾಗೂ ಇತರ ನೂತನ-ಪುರಾತನ ಶರಣರನ್ನು  ಅಧ್ಯಯನ ಮಾಡುವ ದೃಷ್ಟಿಯಿಂದ ಹಾಗೂ ಕನ್ನಡ ಕಥಾಸಾಹಿತ್ಯವನ್ನು ಅಭ್ಯಾಸ ಮಾಡುವವರ ದೃಷ್ಟಿಯಿಂದ ಮಹತ್ತರ ಎನಿಸಿದೆ.

      ಹರಿಹರ, ರಾಘವಾಂಕ, ಸಿದ್ಧನಂಜೇಶ, ಲಕ್ಕಣ್ಣ ದಂಡೇಶ, ಕುಮಾರವ್ಯಾಸ ಭಾರತ, ಶೂನ್ಯಸಂಪಾದನಾಕಾರರು, ಸಿಂಗಿರಾಜ, ಗುಬ್ಬಿಯ ಮಲ್ಲಣಾರ್ಯ ಮೊದಲಾದ ಪೂರ್ವದ ಹಿರಿಯ ಕವಿಗಳ ಕಾವ್ಯಗಳಲ್ಲಿಯ ಸಂಗತಿಗಳನ್ನು ಸರಳ ಗದ್ಯಕ್ಕೆ ಅಳವಡಿಸಿ ಜನಸಾಮಾನ್ಯರೂ ತಿಳಿಯುವಂತೆ ಮಾಡಿದ ಯಶಸ್ಸು ಶಾಂತಲಿಂಗ ದೇಶಿಕನಿಗೆ ಸಲ್ಲುತ್ತದೆ. ಆ ಕಾವ್ಯ-ಪುರಾಣಗಳನ್ನೆಲ್ಲಾ ನೋಡಿ ಓದಿ ಅವುಗಳಲ್ಲಿರುವ ಕಥಾ ಸಾರವನ್ನು ಸಂಗ್ರಹಿಸಿದ್ದಾನೆ. ಈ ಸಂಕಲನದಲ್ಲಿಯ ಕತೆಗಳ ಅನೇಕತೆ ಕಾವ್ಯದ ಏಕಮುಖತೆಗೆ ಭಂಗವನ್ನುಂಟುಮಾಡಿಲ್ಲ. ಈ ಕತೆಗಳಲ್ಲಿಯ  ಬಸವಣ್ಣ ಮತ್ತು ಇತರೆ ಶರಣರ ಬಗೆಗೆ ಕವಿಯು ಕಂಡಂತೆ ಕೇಳಿದಂತೆ ಸ್ವಾನುಭವದಿಂದ ಅನುಭವಿಸಿ ಹೇಳಿದ್ದಾನೆ. ಕವಿಯ ಸರಳ ಗದ್ಯ ಸಂಭಾಷಣಾ ಕೌಶಲ ಜನಸಾಮಾನ್ಯರೂ ಅರ್ಥಮಾಡಿಕೊಳ್ಳುವ ಧಾಟಿಯಲ್ಲಿದೆ. ಕಾವ್ಯದುದ್ದಕ್ಕೂ ಜನಜೀವನದಿಂದ ತೆಗೆದುಕೊಂಡ ಅನೇಕ ಸರಳ ಸಾಮಾನ್ಯ ದಿನಬಳಕೆಯ ಪದಗಳ ಪ್ರಯೋಗ ಕಂಡುಬರುತ್ತದೆ.

 ಆಕರ ಕೃತಿಯಾಗಿ: ಕನ್ನಡ ಸಾಹಿತ್ಯದಲ್ಲಿ ಅದರಲ್ಲಿಯೂ ವೀರಶೈವ ಸಾಹಿತ್ಯ ಚರಿತ್ರೆಯಲ್ಲಿ ಪ್ರಸಿದ್ಧರಾದ ಕೆಲವು ವಚನಕಾರರ ವೈಯಕ್ತಿಕ ವಿವರಗಳು ಮತ್ತು ವೀರಶೈವ ಕವಿಗಳ ಬಗೆಗೆ ಉಂಟಾಗಿರುವ ಸಮಸ್ಯೆಗಳತ್ತ ಈ ಕಾವ್ಯ ತನ್ನದೇ ಆದ ವಿವರಣೆಯನ್ನು ನೀಡುತ್ತದೆ.

      ಈ ಸಂಕಲನ ಕೃತಿಯಲ್ಲಿ ಶೂನ್ಯಸಂಪಾದನೆಗಳಂತಹ ಸಂಕಲನ ಕೃತಿಗಳಲ್ಲಿ ಗುರುತಿಸುವಹಾಗೆ ಸಾಹಿತ್ಯಕ ಆಂಶಗಳನ್ನು ಹುಡುಕಲು ಸಾಧ್ಯವಿಲ್ಲ. ಆದಾಗ್ಯೂ ಕವಿಯ ಶಿವಭಕ್ತರ ಮನಸ್ತಿತಿಯನ್ನು ವರ್ಣಿಸುವಾಗ ಅವರ ಶಿವನಿಷ್ಟೆ, ಅವರು ಎದುರಿಸಿದ ಸಂಧಿಗ್ಧ ಪರಿಸ್ಥಿತಿಯನ್ನು ನಿರೂಪಿಸುವಾಗ ಕವಿಯ ಮನಸ್ಸು ಸಿಡಿದೆದ್ದು, ನುಡಿಗಳು ತಾವಾಗಿಯೇ ಚಿಲುಮೆಯಂತೆ ಚಿಮ್ಮಿ ಬಂದಿರುವುದಕ್ಕೆ ನಿದರ್ಶನವಾಗಿ  ಬಸವಣ್ಣನವರ ಈ ಕತೆಗಳೇ ಸಾಕ್ಷಿಯಾಗಿವೆ. ಇಂತಹ ಸಂದರ್ಭಗಳಲ್ಲಿ ಕವಿಯ ಕಾವ್ಯಾತ್ಮಕ ಅಂಶಗಳನ್ನು ಕೆಲಮಟ್ಟಿಗೆ ಗುರುತಿಸಬಹುದಾಗಿದೆ. ಈ ಸಂಕಲಿತ ಕೃತಿ ಕನ್ನಡ ಗದ್ಯಗ್ರಂಥಗಳ ಸಾಲಿನಲ್ಲಿ ಒಂದು ಬಗೆಯಾಗಿದೆ. ಈ ಕೃತಿಯಲ್ಲಿ ಹಳಗನ್ನಡಕ್ಕೆ ಸಹಜವಾದ ಹೊಸಗನ್ನಡಕ್ಕೆ ಹೊಂದಿಕೊಳ್ಳದ ದೀರ್ಘ-ಸುದೀರ್ಘವಾದ ವಾಕ್ಯ ವೃಂದಗಳಿವೆ. ದೀರ್ಘವಾಕ್ಯಗಳಿದ್ದರೂ ಬಳಸಿರುವ ಪದಪುಂಜಗಳಲ್ಲಿ ಬಹುಪಾಲು ದಿನನಿತ್ಯದ ಬಳಕೆಗಳಾಗಿವೆ. ಹಳಗನ್ನಡ ಮತ್ತು ಹೊಸಗನ್ನಡ ಇವುಗಳ ನಡುವಣ ಸಂಧಿಕಾಲದ ಗದ್ಯವನ್ನು ಕಾಣಬಹುದಾಗಿದೆ. ಈಕೃತಿಯಲ್ಲಿ ಕವಿಯ ದ್ರಷ್ಟಿ ಕಾವ್ಯಕ್ಕೆ ಸಹಜವಾದ ಕಲ್ಪನಾ ಸಾಮಾಜ್ಯಕ್ಕಿಂತಲೂ ಮಾತಿಗೆ ಸಹಜವಾದ ನಿತ್ಯಜೀವನದ ಕಡೆಗೆ ಇದೆ.

      ಶಾಂತಲಿಂಗ ದೇಶಿಕನು ಸದಭಿರುಚಿಯ ಸಂಗ್ರಹಕಾರ. ಈತನ ಗದ್ಯದ ಶೈಲಿ ಸರಳವೂ ಸುಲಲಿತವೂ ಆಗಿದೆ. ಶಿವಶರಣರ ಚರಿತ್ರೆಯನ್ನು ಗದ್ಯದಲ್ಲಿ ಬರೆಯುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾನೆ. ವೀರಶೈವ ಸಾಹಿತ್ಯಕ್ಕೆ ಇದ್ದ ವಿಸ್ತಾರವಾದ ಹರವನ್ನುಳ್ಳ ಗದ್ಯಕಾವ್ಯದ ಕೊರತೆಯನ್ನು ಈ ಕೃತಿ ಸ್ವಲ್ಪಮಟ್ಟಿಗೆ ತುಂಬಿಕೊಟ್ಟಿದೆ. ವೈದಿಕ, ಶೈವ ಕಾವ್ಯ ಪುರಾಣಗಳು ಹಾಗೂ ಇತಿಹಾಸ ಕಾವ್ಯಗಳಲ್ಲಿಯ ಕಥೆಗಳು ಜನತೆಯ ಮೇಲೆ ಬೀರುವ ಪ್ರಭಾವವನ್ನು ಮನಗಂಡು ಆ ಎಲ್ಲಾ ವಿವರಗಳನ್ನು ಈ ಕೃತಿಯಲ್ಲಿ ಸಂಕಲಿಸಿ ಕೊಟ್ಟಿದ್ದಾನೆ. ಕವಿಯ ಉದ್ದೇಶ ಪಂಡಿತರನ್ನು ದೃಷ್ಟಿಯಲ್ಲಿರಿಸಿ ಕೊಂಡಿರುವುದಕ್ಕಿಂತ ಮುಖ್ಯವಾಗಿ ಜನಸಾಮಾನ್ಯರನ್ನು ಗಮನದಲ್ಲಿರಿಸಿಕೊಂಡು ರಚಿಸಿದ ಹಾಗೆ ಕಂಡುಬರುತ್ತದೆ. ಶಾಂತಲಿಂಗದೇಶಿಕನ ಈ ಸಂಕಲನ ಕೃತಿಯು ಬಸವಣ್ಣನನ್ನು ಅರ್ಥ ಮಾಡಿಕೊಳ್ಳಲು  ಒಂದು ಒಳ್ಳೆಯ ಆಕರ ಕೃತಿಯಾಗಿದೆ.

      ಒಟ್ಟಾರೆ  ಬಸವಾದಿ ಪ್ರಮಥರ  ಚರಿತ್ರೆ ಮತ್ತು ಶಿವಕವಿಗಳ ಚರಿತ್ರೆಯನ್ನು ರೂಪಿಸುವುದರ ಮೂಲಕ ಕಥೆಗಳ ತವರಾಗಿ ಗದ್ಯದ ನೆಲೆಯಾದ ಈ ಕೃತಿಯು ಕಥಾಕೋಶ, ಕಥಾಸಾಗರ, ಕಥಾಚಿಂತಾಮಣಿ ಎಂದೆನಿಸಿದೆ. ಬಸವಾದಿ ಪ್ರಮಥರು ಇಟ್ಟ ಕ್ರಾಂತಿಕಾರಕ ಹೆಜ್ಜೆಯ ಗುರುತುಗಳು,ಅವರ ಕಾಯಕತತ್ವ, ಜಾತೀಯತೆಯ ಮನೋಭಾವ,ಸ್ತ್ರೀಪುರುಷರ ಸಮಾನತೆ ಮುಂತಾದ ಪ್ರಗತಿಪರ ಧೋರಣೆಗಳನ್ನು ಸಾಂಕೇತಿಕವಾಗಿ  ಹಾಗೂ ಅವರ ಮಹಿಮೆಗಳನ್ನು ಪವಾಡ ಕಥೆಗಳ ಮೂಲಕ ನಿರೂಪಿಸುವತ್ತ  ಕವಿಯು ಆಸಕ್ತಿ ವಹಿಸಿದ್ದಾನೆ. ಈ ಸಂಕಲನ ಕೃತಿಯಲ್ಲಿ ಬಸವಣ್ನನ ಜೀವಿತ ಕಥೆಯ ಪ್ರಮಾಣ ಕಡಿಮೆಯಿದ್ದರೂ ವ್ಯಕ್ತಿತ್ವದ ಪ್ರಭೆ ಮಸಕಾಗಿಲ್ಲ. ಇಂದಿಗೂ ಅಪ್ರಸಿದ್ಧ ವಚನಕಾರರ ವೈಯಕ್ತಿಕ  ವಿವರಗಳನ್ನು  ತಿಳಿಯಲು ವಿದ್ವಾಂಸರು ಈ ಸಂಕಲನ ಕೃತಿಯನ್ನು ಆಶ್ರಯಿಸ ಬೇಕಾಗಿರುವುದು ಅದರ ಮಹತ್ತರತೆಯ ಹೆಗ್ಗುರತಾಗಿದೆ. ಆದಾಗ್ಯೂ ಇಂತಹ ಮಹತ್ತರ ಸಂಕಲಿತ ಕೃತಿಗೆ ಕನ್ನಡ ಸಾಹಿತ್ಯದಲ್ಲಿ ದೊರೆಯಬಹುದಾದ ಸ್ಥಾನ ದೊರೆತಿಲ್ಲ. ಕನ್ನಡ ಸಾಹಿತ್ಯ  ಚರಿತ್ರೆಯ ಪರಂಪರೆಯಲ್ಲಿ ಶಾಂತಲಿಂಗದೇಶಿಕ ಮತ್ತು ಆತನ ಕೃತಿ ಇಂದಿಗೂ ಅಲಕ್ಷಿತವಾಗಿಯೇ ಉಳಿದಿರುವುದು ದುರ್ದೈವದ ಸಂಗತಿಯಾಗಿದೆ.

  ಪರಾಮರ್ಶನ ಗ್ರಂಥಗಳು

) ಶಾಂತಲಿಂಗದೇಶಿಕ ವಿರಚಿತ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ಭಾಗ   ೧ ಮತ್ತು ೨ ಸಂಪಾದಕರು : ಆರ್.ಸಿ. ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ

          ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ೧೯೬೮

)  ನಂಜುಂಡದೇವ ಕವಿಕೃತ ಭೈರವೇಶ್ವರ ಕಾವ್ಯ,   ಸಂ: ಶ್ರೀ.ಶಿವಬಸವ ಸ್ವಾಮಿಗಳು,                  ಮೈಸೂರು, ೧೯೫೪

. ಸಿದ್ಧಲಿಂಗ ಶಿವಯೋಗಿ ಕೃತ ಭೈರವೇಶ್ವರ ಪುರಾಣ

    ಸಂ. ವೈ.ಸಿ.ಭಾನುಮತಿ, ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ,

   ಬೆಂಗಳೂರು  ೨೦೦೭

. ಉತ್ತರ ದೇಶದ ಬಸವಲಿಂಗ ವಿರಚಿತ ಭೈರವೇಶ್ವರ ಕಾವ್ಯದ ಕಥಾಸಾಗರ ಮತ್ತು ಉಚಿತ ಕಥೆಗಳು  ಸಂ.ಎಸ್.ಉಮಾಪತಿ ,ವೀರಶೈವ ಅಧ್ಯಯನ ಸಂಸ್ಥೆ, ಗದಗ ೨೦೦೦

. ಭೈರವೇಶ್ವರನ ಪವಾಡಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳ ಕೃತಿಗಳು

     ಸಂ. ಸಾ.ಶಿ.ಮರುಳಯ್ಯ, ಜಿ.ಎ.ಶಿವಲಿಂಗಯ್ಯ ಮತ್ತು ಬಿ.ನಂಜುಂಡಸ್ವಾಮಿ

    ವೀರಶೈವ ಅಧ್ಯಯನ ಸಂಸ್ಥೆ, ಗದಗ, ೧೯೯೬

.  ಉತ್ತರದೇಶ ಬಸವಲಿಂಗ ವಿರಚಿತ ಬಸವೇಶ್ವರ ಪುರಾಣದ ಕಥಾ ಸಾಗರ

     ಸಂ.ಎಸ್. ಉಮಾಪತಿ

     ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೬

೭. ಎಸ್.ಶಿವಣ್ಣ ಬಿಡುಮುತ್ತು, ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು ೨೦೦೪

೮.ಸಿ. ನಾಗಭೂಷಣ:  ವೀರಶೈವ ಸಾಹಿತ್ಯ ಕೆಲವು ಒಳನೋಟಗಳು

                  ವಿಜೇತ ಪ್ರಕಾಶನ,ಗದಗ,೨೦೦೮               

                   ಶರಣ ಸಾಹಿತ್ಯ ದೀಪಿಕೆ

                    ಶ್ರೀ ಸಿದ್ಧಲಿಂಗೇಸ್ವರ ಪ್ರಕಾಶನ, ಕಲಬುರಗಿ ೨೦೧೭

೯. ಶಿವಶರಣ ಕಥಾರತ್ನ ಕೋಶ           ಸಂ:ತ.ಸು.ಶ್ಯಾಮರಾಯ,

                             ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ-೪,

                                  ಮೈಸೂರು. ೧೯೬೭

                  ಕನ್ನಡದಲ್ಲಿ ಸಾಂಗತ್ಯ   ಛಂದೋ ಸಾಹಿತ್ಯ ಪ್ರಕಾರ : ಹುಟ್ಟು ಬೆಳವಣಿಗೆ ಮತ್ತು ವೈಶಿಷ್ಟ್ಯ                                              ...