ಸೋಮವಾರ, ಮೇ 5, 2025

      ಎಡೆಯೂರು ತೋಂಟದ ಸಿದ್ಧಲಿಂಗಯತಿಗಳ ಗುರು-ಶಿಷ್ಯ ಪರಂಪರೆ

                                                                ಡಾ.ಸಿ.ನಾಗಭೂಷಣ

                                   

     ತೋಂಟದ ಸಿದ್ಧಲಿಂಗ ಯತಿಗಳು ಹದಿನಾರನೇ ಶತಮಾನದಲ್ಲಿ ಜೀವಿಸಿದ್ದ ಯೋಗಿಗಳು. ವಚನಕಾರರು, ಪ್ರಬುದ್ಧ ಷಟ್‍ಸ್ಥಲಜ್ಞಾನಿಗಳು, ಶಾಸ್ತ್ರಕಾರರು, ವೀರಶೈವ ಗುರು ಪ್ರಮುಖರು. ಇವರ ಶಿಷ್ಯ-ಪ್ರಶಿಷ್ಯರ ಬಳಗ ದೊಡ್ಡದು. ವಚನಕಾರರಾಗಿ ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು. ಮಠವೊಂದರ ಪೀಠಾಧಿಪತಿಯಾಗಿ ಮಠ ಪರಂಪರೆಯನ್ನೇ ಸೃಷ್ಟಿಸಿದವರು. ಅನುಭವಿಗಳಾಗಿ ಷಟ್‍ಸ್ಥಲ ಶಾಸ್ತ್ರವನ್ನು ಸಾರೋದ್ಧಾರಗೊಳಿಸಿದವರು. ತಿಳಿಯದ ತತ್ವ ವಿವೇಕವನ್ನು ತಿಳಿಯಾದ ಮಾತುಗಳಲ್ಲಿ ತಿಳಿಸಿ ಹೇಳಿದವರು. ಭಕ್ತ ಕುಲ ಕೋಟಿಗೆ ಸಾಕ್ಷಾತ್ ಪರಶಿವಮೂರ್ತಿಯಾಗಿ ಪರಿಣಮಿಸಿದವರು. ವ್ಯಕ್ತಿಯಾಗಿ ಜನಿಸಿ ಕಾಲ ದೇಶ ಪರಿಸರದ ಮೇಲೆ ಮೀರಿ ಬೆಳೆದವರು ತಪಸ್ಸುದಾಯಕದ ಮೂಲಕ ಸಿದ್ಧಿಪಡೆದ ಅಲ್ಲಮನ ಅವತಾರಿಗಳು ಇಂತಹವರ ಸಾಂಸ್ಕೃತಿಕ  ಕೊಡುಗೆ ಅದ್ಭುತವಾಗಿದೆ. 

ಷಟ್‍ಸ್ಥಲ ಜ್ಞಾನಸಾರಾಮೃತ ಕೃತಿಯನ್ನು ಮುಂದಿಟ್ಟುಕೊಂಡು ಆಳವಾಗಿ ಅಧ್ಯಯನ ಮಾಡಿದಾಗ ಅದರಲ್ಲಿ ಸಿದ್ಧಲಿಂಗರ ವಚನಮಯ ವ್ಯಕ್ತಿತ್ವ ಮಹತ್ತರವಾಗಿ ಗೋಚರವಾಗುತ್ತದೆ. ಕಲ್ಯಾಣ ಕ್ರಾಂತಿಯ ನಂತರದ ದಿನಮಾನಗಳಲ್ಲಿ ನೇಪಥ್ಯಕ್ಕೆ ತರುವಲ್ಲಿ ಮತ್ತು ಅದನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ತರ ಪಾತ್ರ ಶಿವಯೋಗಿಗಳದು.  ಬಸವೋತ್ತರ ಯುಗದ ವಚನ ಸಾಹಿತ್ಯದ ಆದ್ಯ ಪ್ರವರ್ತಕ ಸಿದ್ಧಲಿಂಗ ಯತಿ ಎಂಬುದು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದೆ ತೋಂಟದ ಸಿದ್ಧಲಿಂಗ ಯತಿಗಳು ಏಕೋತ್ತರ ಶತಸ್ಥಲದ ಪರಂಪರೆಯ ನಿರ್ಮಾಪಕರು ಹೌದು. ಇವರ ನೇತೃತ್ವದಲ್ಲಿ ವಚನಗಳ ಸಂಗ್ರಹ, ಸಂಪಾದನೆ, ಅಧ್ಯಯನ ತತ್ವ ತಳಹದಿಯ ಮೇಲಿನ ವೈವಿಧ್ಯಮಯ ಸಂಕಲನಗಳ ಮಹತ್ತರ ಕಾರ್ಯ ನಡೆಯಿತು. ವೀರಶೈವರು ಆಚರಿಸಬೇಕಾದ ಷಟಸ್ಥಲ ಸಿದ್ಧಾಂತ ಹಾಗೂ ಅಷ್ಟಾವರಣ ವಿಧಿ ವಿಧಾನಗಳು ನಿಯಮಗಳನ್ನು ಕುರಿತು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಮಹಾ ತಾತ್ವಿಕ ಪ್ರತಿಭಾವಂತರು. ಇವರ ಅನೇಕ ಜನ ಕರಕಮಲ ಸಂಜಾತ ಶಿಷ್ಯರು-ಪ್ರಶಿಷ್ಯರುಗಳು ಸ್ವತಃ  ವಚನಕಾರರಾಗಿದ್ದಾರೆ. ಶೂನ್ಯಸಂಪಾದನಾಕಾರರಾಗಿದ್ದಾರೆ. ಷಟ್‍ಸ್ಥಲ ತತ್ವಕ್ಕನುಗುಣವಾಗಿ ವಚನಗಳನ್ನು ಸಂಕಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಶಾಸ್ತ್ರಕ್ಕೆ ಟೀಕೆ, ವ್ಯಾಖ್ಯಾನ, ಟಿಪ್ಪಣಿ ಬರೆದಿದ್ದಾರೆ ಅಷ್ಟೇ ಅಲ್ಲ ವೀರಶೈವ ಪುರಾಣ ಕರ್ತೃಗಳು ಆಗಿದ್ದಾರೆ. ಹೀಗೆ ಇದನ್ನೆಲ್ಲ ಮನನ ಮಾಡುತ್ತಾ ಹೋದಾಗ ಸಿದ್ಧಲಿಂಗ ಯತಿಯ ಹಿಂದೆ ಒಂದು ಸಾಹಿತ್ಯ ಪರಂಪರೆ ಮತ್ತೊಂದು ಶಾಸ್ತ್ರ ಪರಂಪರೆ, ಒಂದು ಗುರು ಪರಂಪರೆ, ಒಂದು ಆಧ್ಯಾತ್ಮ ಪರಂಪರೆ, ಒಂದು ವೀರಶೈವ ಧರ್ಮ ಪರಂಪರೆ ಅದಕ್ಕೆ ಆಗರವಾದ ಮಠ ಪರಂಪರೆ ಹೀಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮುಖಗಳ ವಿಕಾಸಕ್ಕೆ ಕಾರಣವಾದ ಹಿನ್ನೆಲೆ ಇರುವುದು ಕಂಡು ಬರುತ್ತದೆ.  

    ಅವರು ಅವತಾರ ಪುರುಷರಾಗಿ ಅನೇಕ ಪವಾಡ ಮಹಿಮಾ ವಿಶೇಷಣಗಳನ್ನು ಮಾಡಿ ಎರಡನೆಯ ಪ್ರಭುದೇವರೆಂಬ ಪ್ರಶಂಸೆ ಪಡೆದುದ್ದನ್ನು ಅರಿತು ಅವರಲ್ಲಿ ಅಪಾರವಾದ ಪ್ರೀತಿ ಉಂಟಾಗಿ ಅವರ ಮೇಲೆ ಹೆಚ್ಚಿನ ಕಾವ್ಯ ಪುರಾಣ ಬರೆಯುವ ಪರಿಪಾಠವನ್ನು ಕವಿಗಳು ಮಾಡಿದರು. ಆಯಾ ಕವಿಗಳಲ್ಲಿ ಪ್ರಮುಖರಾದವರೆಂದರೆ ಶಾಂತೇಶ, ವಿರಕ್ತತೋಂಟದಾರ್ಯ,ವಿರೂಪಾಕ್ಷ ಪಂಡಿತ, ಸಿದ್ಧನಂಜೇಶ, ಚೆನ್ನವೀರಜಂಗಮ, ಮೊದಲಾದವರು. ಅದರಲ್ಲಿಯೂ ತೋಂಟದ ಸಿದ್ಧಲಿಂಗ ಯತಿಗಳನ್ನು ಕೇಂದ್ರೀಕರಿಸಿ ರಚನೆಯಾದ ಸುವ್ವಿಮಲ್ಲಿಗೆ ವಡೇರನ ‘ತೋಂಟದ ಸಿದ್ಧೇಶ್ವರನ ಸಾಂಗತ್ಯ,’ ಯತಿ ಬಸವಲಿಂಗೇಶನ ‘ತೋಂಟದ ಸಿದ್ಧಲಿಂಗೇಶ್ವರ ಸಾಂಗತ್ಯ’ ಮತ್ತು ಹೇರಂಬ ಕವಿಯ ‘ಸಿದ್ಧಲಿಂಗೇಶ್ವರ ಸಾಂಗತ್ಯ’ ಕೃತಿಗಳು ಸಿದ್ಧಲಿಂಗರ ವ್ಯಕ್ತಿತ್ವವನ್ನು ತಿಳಿಸುತ್ತವೆ. ಈ ಕೃತಿಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚಿತವಾಗಿದ್ದು, ತೋಂಟದ ಸಿದ್ಧಲಿಂಗರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ತಿಳಿಸುತ್ತವೆ. ಅದೇ ರೀತಿ, ಸಿದ್ಧಲಿಂಗರನ್ನು ವಸ್ತುವಾಗಿಟ್ಟುಕೊಂಡು ಕನ್ನಡದಲ್ಲಿ ರಚಿತವಾದ ದೀರ್ಘಕೃತಿಗಳಿರುವಂತೆ ಕೆಲವು ಲಘು ಕೃತಿಗಳಿವೆ. ಇವು ಸಾಂದರ್ಭಿಕವಾಗಿ ತೋಂಟದ ಸಿದ್ಧಲಿಂಗ ಯತಿಗಳನ್ನು ಕುರಿತ ಚರಿತ್ರೆಯನ್ನು ನಿರೂಪಿಸಿದರೂ, ಕವಿಕಲ್ಪನೆ ಮತ್ತು ಜನಮಾನಸದಲ್ಲಿ ನಡೆದದ್ದಕ್ಕಿಂತ ನಡೆಯಬೇಕಾದುದನ್ನೇ ಹೆಚ್ಚಿಗೆ ಕಾಣುವಂತೆ ಅವರನ್ನು ಸ್ತುತಿಸುವ, ವೀರಶೈವ ತತ್ವವನ್ನು ಪ್ರಚುರ ಪಡಿಸುವ ಗ್ರಂಥಗಳೇ ಅಧಿಕವಾಗಿವೆ. ಇಲ್ಲಿ ಷಟ್ಪದಿ, ತ್ರಿಪದಿ, ರಗಳೆ, ಅಷ್ಟಕ, ಶತಕ, ತಾರಾವಳಿ, ಸ್ವರವಚನ ಮೊದಲಾದ ಪ್ರಕಾರಗಳ ಲಘುಕೃತಿಗಳಿವೆ. ಇಲ್ಲಿನ ಕೃತಿಗಳು  ‘ಗಾತ್ರದಲ್ಲಿ ಕಿರಿದು ಪಾತ್ರದಲ್ಲಿ ಹಿರಿದು’ ಎಂಬಂತಿವೆ. ಹಿರಿದಾದ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡಿರುವುದರಿಂದ ಅವು ಮೌಲಿಕವೆನಿಸಿವೆ. ಅವುಗಳಲ್ಲಿ ತೋಂಟದ ಸಿದ್ಧೇಶ್ವರ ಭಾವರತ್ನಾಭರಣ ಸ್ತೋತ್ರ, ತೋಂಟದ ಸಿದ್ಧೇಶ್ವರ ಅಷ್ಟಕ, ತೋಂಟದ ಸಿದ್ಧೇಶ್ವರ ವಾರ್ಧಿಕ, ಸಿದ್ಧಲಿಂಗಾಷ್ಠಕ, ಸಿದ್ಧಲಿಂಗ ಶತಕ, ನಿರಂಜನ ಶತಕ, ಮಲ್ಲಿಕಾರ್ಜುನ ವಿರಚಿತ ಜಯಸಿದ್ಧಲಿಂಗರಗಳೆ, ಸಿದ್ಧೇಶ್ವರ ಪವಾಡ ರಗಳೆ, ಚೆನ್ನಕವಿ ವಿರಚಿತ ತೋಂಟದ ಸಿದ್ಧಲಿಂಗ ಯತಿಸುವ್ವಿ, ದಶವಿಧಪಾದೋಧಕ ನಿರ್ಣಯ, ಗರಣಿ ಬಸವಲಿಂಗ ವಿರಚಿತ ಸಿದ್ಧೇಶ್ವರ ಮಹಿಮಾ ತಾರಾವಳಿ, ಸುವ್ವಿಮಲ್ಲ ವಿರಚಿತ ತೋಂಟದ ಸಿದ್ಧಲಿಂಗೇಶ್ವರ ಮಹಿಮಾ ತಾರಾವಳಿ, ಸಿದ್ಧೇಶ್ವರ ತ್ರಿವಿಧಿ ಮೊದಲಾದ ಕೃತಿಗಳನ್ನು ಹೆಸರಿಸ ಬಹುದು.  

     ತೋಂಟದ ಸಿದ್ಧಲಿಂಗರು ಅನುಭಾವಿ ಸಂಕಲನಕಾರರಾಗಿ, ವ್ಯಾಖ್ಯಾನಕಾರರಾಗಿದ್ದು, ವೀರಶೈವ ಸಾಹಿತ್ಯ ಸಮೃದ್ಧಿಯಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವೀರಶೈವ ಧರ್ಮದ ಪುನರುದ್ಧಾರಕರಾದ ತೋಂಟದ ಸಿದ್ಧಲಿಂಗರು ವೀರಶೈವ ತತ್ವ ಶಾಸ್ತ್ರ ವಾಙ್ಮಯ ಪ್ರಪಂಚಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಬಿಜ್ಜಾವರ ದೊರೆ ತೋಂಟದ ಸಿದ್ಧಲಿಂಗ ಭೂಪಾಲಕನು ಪಾದ ಪೂಜೆ ಮಾಡಿದ ಘಟನೆ ಇವರ ದಿವ್ಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತೋಂಟದ ಸಿದ್ಧಲಿಂಗರು ಸಾಧಕರಾಗಿ 701 ಜನ ಶಿಷ್ಯರೊಂದಿಗೆ ಇಡೀ ಭಾರತದ ತುಂಬ ಯಾತ್ರೆ ಕೈಗೊಂಡು ತಮ್ಮ ಅದ್ಭುತ ದೈವಿ ಶಕ್ತಿ, ಪವಾಡ ಮತ್ತು ವಚನವಾಣಿಯ ಮೂಲಕ ಜನರಲ್ಲಿ ಧರ್ಮ ಜಾಗೃತಿ ಉಂಟುಮಾಡಿದರು. ಆ ಮೂಲಕ ಮಾನವೀಯ ಮೌಲ್ಯಗಳನ್ನು ಭಿತ್ತಿ ಬೆಳೆಸಿದವರು. 

ಗುರು ಪರಂಪರೆ : 

ಷಟಸ್ಥಲ ಜ್ಞಾನಾಮೃತದ ಎಂಟನೆ ವಚನವು ಸ್ವಯಂ ತೋಂಟದ ಸಿದ್ಧಲಿಂಗ ಯತಿಗಳ ರಚನೆಯಾದುದರಿಂದ ಅತ್ಯಂತ ಹಳೆಯ ಅಧಿಕೃತ ಆಕರವಾಗಿದೆ. ಈ ವಚನದಲ್ಲಿ ಗುರು ಪರಂಪರೆಗೂ ವಂಶಾವಳಿಯಾಗಿ ಉಲ್ಲೇಖಿತವಾಗಿದೆ. ಇದರಂತೆ ೧. ಅನಾದಿ ಗಣೇಶ್ವರ ೨. ಆದಿ ಗಣೇಶ್ವರ ೩. ನಿರ್ಮಾಯ ಗಣೇಶ್ವರ ೪. ನಿರಂಜನ ಗಣೇಶ್ವರ ೫. ಜ್ಞಾನನಂದ ಗಣೇಶ್ವರ ೬. ಆತ್ಮ ಗಣೇಶ್ವರ ೭. ಆಧ್ಯಾತ್ಮ ಗಣೇಶ್ವರ ೮. ರುದ್ರ ಗಣೇಶ್ವರ ಅಂತು ಎಂಟು ಗಣೇಶ್ವರರು ತರುವಾಯದಲ್ಲಿ ೧. ಬಸವಪ್ರಭುದೇವರು ೨. ಆದಿಲಿಂಗದೇವರು ೩. ಚೆನ್ನವೀರೇಶ್ವರ ದೇವರು ೪. ಹರದನಹಳ್ಳಿ ಗೋಸಲ ದೇವರು ೫. ಶಂಕರ ದೇವರು ೬. ದಿವ್ಯಲಿಂಗ ದೇವರು ೭. ಚೆನ್ನಬಸವೇಶ್ವರ ದೇವರು ಅಂತು ಏಳು ದೇವರುಗಳು ಅನುಸೂತ್ಯವಾಗಿ ಗುರು ಪರಂಪರೆಯಲ್ಲಿ ಉಲ್ಲೇಖಿತರಾಗಿದ್ದಾರೆ. ೭ನೆಯ ಚೆನ್ನಬಸವೇಶ್ವರ ದೇವರ ಕರಕಮಲ ಸಂಜಾತರು ತಾವೆಂದು ತೋಂಟದ ಸಿದ್ಧಲಿಂಗ ಯತಿಗಳೆ ನೇರವಾಗಿ ಹೇಳಿದ್ದಾರೆ.

    ಈ ಹೇಳಿಕೆಯನ್ನು ಪರಿಶೀಲಿಸಿ ನೋಡಿದಾಗ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಮೊದಲು ಉಕ್ತರಾದ ಎಂಟು ಗಣೇಶ್ವರರು ನೈಜ ವ್ಯಕ್ತಿಗಳಾಗಿರದ ಸಿದ್ಧಾಂತ ಪರಿಭಾಷೆಯವರು ಆಗಿದ್ದಾರೆ. ಹರದನಹಳ್ಳಿಯಲ್ಲಿಯ ದಿವ್ಯಲಿಂಗೇಶ್ವರ ಸ್ಥಾವರ ಲಿಂಗವು ಸ್ಥಾಪಿತವಾದದ್ದು ಕ್ರಿ.ಶ.೧೩೧೭ರಲ್ಲಿ ಎಂಬುದು ಶಾಸನೋಕ್ತ ಐತಿಹಾಸಿಕ ಸತ್ಯ. ಇದೇ ಅನ್ವಯದಲ್ಲಿ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಮೊದಲು ಉಕ್ತರಾದ ಎಂಟು ಗಣೇಶ್ವರರು ನೈಜ ವ್ಯಕ್ತಿಗಳಾಗಿರದೆ ಸಿದ್ಧಾಂತ ಪರಿಭಾಷೆಯಾಗಿದ್ದಾರೆ ಮತ್ತು ಏಳು ದೇವರುಗಳೇ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯ ನೈಜವ್ಯಕ್ತಿಗಳಾಗಿದ್ದಾರೆ.ಆದುದರಿಂದ ವಾಸ್ತವಿಕವಾಗಿ ತೋಂಟದ ಸಿದ್ಧಲಿಂಗ ಯತಿಗಳ ಷಟ್ಸ್ಥಲಜ್ಞಾನ ಸಾರಾಮೃತದ ಎಂಟನೆಯ ವಚನದಲ್ಲಿ ಉಕ್ತರಾದ ಏಳು ದೇವರುಗಳ ಪೈಕಿ ಮೊದಲನೆಯವರಾದ ಬಸವ ಪ್ರಭುದೇವರೇ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯ ಆದಿ ಗುರುವಾಗಿದ್ದಾರೆ. ಆ ಲೆಕ್ಕದಂತೆ ಏಳು ದೇವರುಗಳ ತರುವಾಯ ಸ್ವಯಂ ಉಲ್ಲೇಖಸಿಕೊಂಡ ತೋಂಟದ ಸಿದ್ಧಲಿಂಗ ಯತಿಗಳು ಆ ವಂಶಾವಳಿಯಲ್ಲಿ ಎಂಟನೆಯ ಗುರುವೆನಿಸಿಕೊಂಡಿದ್ದಾರೆ. 

    ಹೀಗೆ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಬಸವ ಪ್ರಭು ದೇವರಿಂದ ಹಿಡಿದು ಗೋಸಲ ಚೆನ್ನಬಸವೇಶ್ವರ ವರೆಗಿನ ಏಳು ವ್ಯಕ್ತಿಗಳು ಸಂದಿದ್ದಾರೆ ಎಂದು ನಿರ್ಧರಿಸಬಹುದು. ಈ ಏಳು ವ್ಯಕ್ತಿಗಳ ಮೇಲೆ ಸಾಕಷ್ಟು ಪೌರಾಣಿಕ ಕಥೆಗಳಿದ್ದರೂ ಅವೆಲ್ಲವನ್ನೂ ಇತಿಹಾಸವೆನ್ನಲಾಗುವುದಿಲ್ಲ. ಒಟ್ಟಿನಲ್ಲಿ ಏಳು ಮಹನೀಯರು ಬಸವಾದಿ ಪ್ರಮಥರ ಗುರು ಪರಂಪರೆಯವರು ಎಂಬುದಕ್ಕೆ ಆದಿ ಗುರುವಿನ ಬಸವ ಪ್ರಭುದೇವರೇ ಎಂಬ ಹೆಸರೆ ಸಾಕ್ಷಿಯಾಗಿದೆ.

     ತದನಂತರ ಗೋಸಲ ಚೆನ್ನಬಸವೇಶ್ವರ ಶಿವಯೋಗಿಗಳಿಂದ ದೀಕ್ಷೆ ಪಡೆದು ಭಕ್ತಿಭಾವದಿಂದ ಸೇವೆ ಮಾಡುತ್ತಿದ್ದ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅಸಾಧಾರಣವಾದ ಭಕ್ತಿಭಾವವನ್ನು ಕಂಡು ಗುರುಗಳು ಆತನಿಗೆ ತನ್ನ ಪಟ್ಟಾಧಿಕಾರವನ್ನು ವಹಿಸಿ ಕೊಡುವರು. ನಂತರ ದೇಶ ಸಂಚಾರಕ್ಕಾಗಿ ತೋಂಟದ ಸಿದ್ಧಲಿಂಗ ಯತಿಗಳು ಅನೇಕ ಚರಮೂರ್ತಿಗಳನ್ನೊಳಗೊಂಡು ಹೊರಡುವರು. ಶ್ರೀಶೈಲ, ಸೌರಾಷ್ಟ್ರ, ಕೊಲ್ಲಿಪಾಕಿ, ಕೇದಾರ, ದ್ರಾಕ್ಷಾರಾಮ, ಹಂಪಿ, ಗೋಕರ್ಣ, ಪೊನ್ನಾಂಬಲ, ಶಿವಗಂಗೆ, ರಾಮೇಶ್ವರ, ಚಿದಂಬರ, ಕಂಚಿ, ಕಾಳಹಸ್ತಿ ಮುಂತಾದ ಕ್ಷೇತ್ರಗಳನ್ನು ಸಂದರ್ಶನ ಮಾಡಿ ಅರುಣಾಚಲಕ್ಕೆ ಬರುವರು. ಅಲ್ಲಿಯೂ ಶಿವಭಕ್ತರಿಂದ ಅನೇಕ ಕಪ್ಪಕಾಣಿಕೆ ಮತ್ತು ಮುತ್ತಿನ ಹಾರಗಳನ್ನು ಸ್ವೀಕರಿಸುವರು.  ಹೀಗೆ ಸಂಚಾರವನ್ನು ಮಾಡುತ್ತಾ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅನೇಕ ಪವಾಡಗಳನ್ನು ಮಾಡಿ; ಮೈಸೂರು ಭಾಗದ ತುಮಕೂರು ಜಿಲ್ಲೆಯ ಸಿದ್ಧಗಂಗಾ ಕ್ಷೇತ್ರಕ್ಕೆ ಆಗಮಿಸುವರು. ಮುಂದೆ ಕಗ್ಗೆರೆ ಹೊರವಲಯದಲ್ಲಿರುವ ತೋಪಿನ ಹೂದೋಂಟದಲ್ಲಿ ಮಾವಿನ ಮರದಡಿಯಲ್ಲಿ ತೋಂಟದ ಶಿವಯೋಗಿಗಳು ಹುತ್ತಿನಲ್ಲಿ ಆರುತಿಂಗಳು ಶಿವಧ್ಯಾನ ಮಗ್ನರಾಗಿ, ಹುತ್ತದ ಪ್ರಸಂಗದ ಹಿನ್ನೆಲೆಯಲ್ಲಿ ತೋಂಟದ ವಿಶೇಷಣವನ್ನು ಪಡೆದು. ನಂತರ ಕಗ್ಗೆರೆ ಸಮೀಪದ ಎಡೆಯೂರಲ್ಲಿ ಸಿದ್ಧಲಿಂಗ ಶಿವಯೋಗಿಗಳು ಬಂದು ಕೆಲವು ಕಾಲ ಧರ್ಮ ಪ್ರಸರಣ ಕಾರ್ಯದಲ್ಲಿ ನಿಂತು, ಬಳಿಕ  ಬೋಳಬಸವೇಶ್ವರರಿಗೆ ತಮ್ಮ ನಿರಂಜನ ಪಟ್ಟಕಟ್ಟಿ ಸಪ್ಪೆದೇವರು, ಉಪ್ಪಿನಳ್ಳಿಯ ಸ್ವಾಮಿ, ಗುಮ್ಮಳಾಪುರದ ಸಿದ್ಧಲಿಂಗ ದೇವರು, ಶೀಲವಂತ ದೇವರು ಮುಂತಾದವರಿಗೆ ದೀಕ್ಷೆಯನ್ನು ಕೊಟ್ಟು ಎಡೆಯೂರು ಕಲ್ಲುಮಠದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಹೊಂದುವರು.

   ವಿಜಯನಗರ ಸಾಮ್ರಾಜ್ಯವು ಸ್ಥಾಪಿತವಾದ ಮೇಲೆ ವೀರಶೈವರ ಪುನರುಜ್ಜೀವನಕ್ಕೆ ಎರಡು ಕೇಂದ್ರಗಳು ದಕ್ಷಿಣ ಕರ್ನಾಟಕದಲ್ಲಿ ಸ್ಥಾಪಿತವಾದುವು. ಜಕ್ಕಣಾರ್ಯ, ಲಕ್ಕಣದಂಡೇಶ ಮೊದಲಾದ ನಾಯಕರ ನೇತೃತ್ವದಲ್ಲಿ ಹಂಪೆಯ ಒಂದು ಕೇಂದ್ರವೂ, ತೋಂಟದ ಸಿದ್ಧಲಿಂಗ ಯತಿಯ ಮುಂದಾಳುತನದಲ್ಲಿ ನಾಗಿಣೀ ನದಿಯ ತೀರದಲ್ಲಿರುವ ಎಡೆಯೂರಿನಲ್ಲಿ ಇನ್ನೊಂದು ಕೇಂದ್ರವೂ ಸ್ಥಾಪಿತವಾದುವು. ಮೊದಲಿನ ಚಳುವಳಿಯಷ್ಟು ಕ್ರಾಂತಿಕಾರಕವಲ್ಲದಿದ್ದರೂ ಈ ಎರಡನೆಯ ಚಳುವಳಿಯು  ವೀರಶೈವ ಧರ್ಮದ ಪುನರುಜ್ಜೀವನಕ್ಕೆ ಪ್ರಯತ್ನ ಪಟ್ಟಿತೆಂಬ ಅಂಶ ನಿಜ. ಹಿಂದಿನ ವಚನ ಸಾಹಿತ್ಯವನ್ನು ಒಟ್ಟು ಕಲೆಹಾಕುವುದು; ಅದನ್ನು ಪಾಲಿಸಿಕೊಂಡು ರುವುದು; ಅವ್ಯವಸ್ಥಿತವಾಗಿದ್ದ ಪುರಾತನ ವಚನಗಳನ್ನು ಷಟಸ್ಥಲ ಕ್ರಮದಲ್ಲಿ ಜೋಡಿಸುವುದು; ಕಷ್ಟವಾದ ವಚನಗಳಿಗೆ ತಕ್ಕ ವ್ಯಾಖ್ಯಾನ ಟೀಕುಗಳನ್ನು ಬರೆಯುವುದು-ಈ ಕೆಲಸಗಳು ಬಹಳ ರಭಸದಿಂದ ನಡೆದವು. 

      ಕಲ್ಯಾಣ ಕ್ರಾಂತಿಯ ನಂತರ ಚದುರಿಹೋದ  ಅಪಾರವಾದ ವಚನ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸುವ ಮಹಾಕಾರ್ಯ ನಡೆದದ್ದು ತೋಂಟದ ಸಿದ್ಧಲಿಂಗರ ಕಾಲದಲ್ಲಿ. ಅದು ಅವರ ಶಿಷ್ಯ-ಪ್ರಶಿಷ್ಯರ ಸಮೂಹದಿಂದ ನೆರವೇರಿತು. ವಚನ ಸಾಹಿತ್ಯ ಸೃಷ್ಟಿಸಿದ ವಚನಕಾರರಿಗೆ ಸಲ್ಲುವಷ್ಟು ಕೀರ್ತಿ ಈ ವಚನ ಸಂಗ್ರಹಕಾರರಿಗೂ ಸಲ್ಲುತ್ತದೆ. ಬಸವೇಶ್ವರನ ಕಾಲದಲ್ಲಿ ವಚನಗಳು ಶರಾವತಿಯ ಪ್ರವಾಹದಂತೆ ತುಂಬಿಕೊಂಡು ಬಂದವು.  ಆದರೆ ಒಮ್ಮಿಂದೊಮ್ಮಲೇ ರೂಪುಗೊಳ್ಳುತ್ತಿದ್ದ ಸಂಘಟನೆ ಒಡೆಯಿತು. ತೇಜೋಗರ್ಭಿತವಾದ ಈ (ವಚನ) ಜಲವನ್ನು ಸಂಗ್ರಹಿಸಿ ತೇಜಸ್ಸನ್ನು ಹೊರಗೆಡಹುವ ಕಾರ್ಯ ತೋಂಟದ ಸಿದ್ಧಲಿಂಗ ಯತಿಗಳು ಹಾಗೂ ಅವರ ಶಿಷ್ಯರ ಮೂಲಕ ನೆರವೇರಿತು ಎಂಬ ರಂ.ಶ್ರೀ. ಮುಗಳಿಯವರ ಮಾತು ಸತ್ಯ.

ನೂರೊಂದು ವಿರಕ್ತರು ಷಡುಸ್ಥಲವನ್ನು ಉದ್ಧರಿಸಿದ ಅವಧಿಯಲ್ಲಿಯೆ ಮತ್ತೆ ವೀರಶೈವದಲ್ಲಿ ಸ್ವಲ್ಪ ಶೈಥಿಲ್ಯವುಂಟಾದ್ದರಿಂದ ಏಳುನೂರ ಒಂದು ಜನ ವಿರಕ್ತರು ಉದಯವಾಗಿ ಷಟಸ್ಥಲವನ್ನು ಉದ್ಧರಿಸಿದರೆಂದು ಚೆನ್ನಬಸವ ಪುರಾಣದಲ್ಲಿ ಹೇಳಿದೆ (ಸಂ.೬೩:೪೩-೪೪). ಈ ಏಳುನೂರಾ ಒಂದು ಜನ ವಿರಕ್ತರಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳೇ ಅಗ್ರಗಣ್ಯರೆಂದೂ, ಮಿಕ್ಕ ಏಳುನೂರು ಜನರೆಲ್ಲ ಅವರ ಶಿಷ್ಯರಾಗಿ ಅವರು ಕೈಕೊಂಡ ಕಾರ್ಯವನ್ನು ನೆರವೇರಿಸಲು ಹೆಣಗಿದರೆಂದೂ ಷಟಸ್ಥಲ ಜ್ಞಾನಾಸಾರಾಮೃತದ ಸಂಪಾದಕರು ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಸರಿಯಾಗಿದೆ. ಎಡೆಯೂರಿನಲ್ಲಿ ವೀರಶೈವ ಪುನರುಜ್ಜೀವನವು ಸಿದ್ಧಲಿಂಗ ಶಿವಯೋಗಿಗಳ ಪ್ರಭಾವದಿಂದ ನಡೆಯಿತು. ಈ ಪರಿಸರದಲ್ಲಿಯೇ ‘ಶೂನ್ಯ ಸಂಪಾದನೆ’ಯೆಂಬ ಅಪೂರ್ವವಾದ ಆಧ್ಯಾತ್ಮಿಕ ಸಂಪಾದನ ರೂಪಕವು ಮೈದಾಳಿತು.”ತೋಂಟದ ಸಿದ್ಧಲಿಂಗ ಯತಿಗಳಲ್ಲಿ ಒಂದು ಶಾಸ್ತ್ರೀಯ ಕ್ರಮಬದ್ಧತೆ ಇರುವಂತೆ ಅನುಭವದ ಎತ್ತರ ಬಿತ್ತರಗಳನ್ನು ಕಾಣುತ್ತೇವೆ.  ಸಮಗ್ರವಾದ ದೃಷ್ಟಿಯಿಲ್ಲದೆ ವ್ಯವಸ್ಥಿತವಾದ ಶಾಸ್ತ್ರೀಯವಾಗಿ ವಚನಗಳನ್ನು ಸಂಕಲಿಸುವುದು ಅಸಾಧ್ಯ. 

ಸಿದ್ಧಲಿಂಗ ಯತಿಗಳು ತಮ್ಮ ಅಸಾಮಾನ್ಯ ವ್ಯಕ್ತಿತ್ವದಿಂದ ಅನೇಕ ಶಿಷ್ಯ-ಪ್ರಶಿಷ್ಯ ಸಮೂಹವನ್ನು ಪಡೆದಿದ್ದರು. ಹೀಗಾಗಿ ಅಪೂರ್ವ ರೀತಿಯಲ್ಲಿ ವೀರಶೈವ ಧರ್ಮದ ವ್ಯಾಪಕ ಪ್ರಸಾರವನ್ನು ಮಾಡಲು ಸಾಧ್ಯವಾಯಿತು. ಬಸವಾದಿ ವಚನಕಾರರಿಗೆ ಇದ್ದ ಧಾರ್ಮಿಕ, ಸಾಮಾಜಿಕ ಒತ್ತಡ ಸಿದ್ಧಲಿಂಗರ ಕಾಲದಲ್ಲಿ ಇರಲಿಲ್ಲ ಒಂದು ರೀತಿಯ ಸಿದ್ಧ ಚೌಕಟ್ಟಿಗೆ ಸತ್ವ ತುಂಬುವ ಅಳವಡಿಸುವ, ವ್ಯಾಖ್ಯಾನಿಸುವ, ಆಕರ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು. ಪೂರ್ವ ಪರಂಪರೆಯ ಉತ್ತರಾಧಿಕಾರಿಗಳೆಂದು ತಮ್ಮನ್ನು ಅದರೊಂದಿಗೆ ಗುರುತಿಸಿಕೊಂಡು ಶ್ರದ್ಧೆ, ಗೌರವಗಳಿಂದ ಆ ಮಾರ್ಗದಲ್ಲಿ ನಡೆದು ತಮ್ಮತ್ತ ಗಮನಾರ್ಹ ಸಂಖ್ಯೆಯಲ್ಲಿ ಜನರನ್ನು ಸೆಳೆದಿದ್ದಾರೆ.  ಇದು ಬಹು ದೊಡ್ಡ ಸಾಧನೆಯೇ ಆಗಿದೆ.”     

   ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ.     ವಚನ ರಚನೆ ಹಾಗೂ ವಚನ ರಕ್ಷಣೆ, ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. 

        ಶೂನ್ಯಸಂಪಾದನೆಯ ಮೂರು ಪರಿಷ್ಕರಣಗಳು ನಡೆಯುವ ಸಂದರ್ಭದಲ್ಲಿ ಮತ್ತು ಆ ಕಾಲದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಮತ್ತು ಪ್ರಭಾವವನ್ನು ಪಡೆದಿದ್ದ ಎಡೆಯೂರು ಸಿದ್ಧಲಿಂಗೇಶ್ವರರು ಮತ್ತು ಬೋಳಬಸವೇಶ್ವರರು ಕನ್ನಡನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜೀವನದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರಿದವರಾಗಿ ಕಂಡು ಬರುತ್ತಾರೆ. ಮೂರನೇ ಮತ್ತು ನಾಲ್ಕನೇ ಶೂನ್ಯಸಂಪಾದನಕಾರರಾದ ಗುಮ್ಮಳಾಪುರದ ಸಿದ್ಧಲಿಂಗಯತಿ ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರು ನೇರವಾಗಿ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯ ಮತ್ತು ಪ್ರಶಿಷ್ಯರಾಗಿದ್ದಾರೆ. 

    ತೋಂಟದ ಸಿದ್ಧಲಿಂಗರು ಧಾರ್ಮಿಕವಾಗಿ ಷಟ್ಸ್ಥಲ ಸಿದ್ಧಾಂತದ ಮಹಾನುಭವಿಗಳು ಅದನ್ನು ‘ಷಟಸ್ಥಲಜ್ಞಾನಾಮೃತಸಾರಾಯ’ದ ವಚನಗಳ ರೂಪದಲ್ಲಿ ಜನತೆಗೆ ಧಾರೆಯೆರೆದವರಾಗಿದ್ದಾರೆ.  ಅವರ ಪ್ರಭಾವ ವಲಯಕ್ಕೆ ಬಂದ ಅನೇಕ ಜನ ವಿರಕ್ತರು ಮಹಾಂತರು, ದೇಶಿಕರು, ವಚನ ಸಾಹಿತ್ಯದ ಸಂಕಲನ, ಸಂಗ್ರಹ, ಸಂಪಾದನೆ, ಟೀಕೆ, ವ್ಯಾಖ್ಯಾನ ಮುಂತಾದ ವಚನ ಸಾಹಿತ್ಯದ ಪುನರುಜ್ಜೀವನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರಲ್ಲದೆ, ಸ್ವತಃ ವಚನಕಾರರು ಆಗಿದ್ದಾರೆ.  ಘನಲಿಂಗಿದೇವ, ವಿರಕ್ತ ತೋಂಟದಾರ್ಯ, ಸ್ವತಂತ್ರ ಸಿದ್ಧಲಿಂಗೇಶ್ವರ, ಮಗ್ಗಿಯ ಮಾಯಿದೇವ ಹೀಗೆ ಮುಂತಾದ ಅನೇಕರು ವಚನಗಳನ್ನು ರಚಿಸಿದ ವಚನಕಾರರಾಗಿದ್ದಾರೆ. ಇನ್ನು ಮೂರು-ನಾಲ್ಕನೇ ಶೂನ್ಯಸಂಪಾದನೆ ಪರಿಷ್ಕರಣಕಾರರಾದ ಗುಮ್ಮಳಾಪುರದ ಸಿದ್ಧಲಿಂಗ ದೇವರು, ಗೂಳೂರು ಸಿದ್ಧವೀರಣ್ಣೊಡೆಯರು. ತೋಂಟದ ಸಿದ್ಧಲಿಂಗರ ಶಿಷ್ಯರೇ ಆಗಿದ್ದಾರೆ.  ಗುಮ್ಮಳಾಪುರದ ಸಿದ್ಧಲಿಂಗದೇವ ನೇರವಾಗಿ ತೋಂಟದ ಸಿದ್ಧಲಿಂಗ ಶಿವಯೋಗಿಗಳಿಗೆ ಶಿಷ್ಯನಾಗಿದ್ದರೆ ನಂತರದ ಶೂನ್ಯ ಸಂಪಾದನಾ ಪರಿಷ್ಕರಣಕಾರ ಸಿದ್ಧವೀರಣ್ಣೊಡೆಯ ಈತ ಗುಮ್ಮಳಾಪುರ ಸಿದ್ಧಲಿಂಗನ ಶಿಷ್ಯನಾದ ಬೋಳಬಸವಾರ್ಯನ ಶಿಷ್ಯ. ಒಟ್ಟಿನಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನ ಸಾಹಿತ್ಯದ ಪ್ರಭಾವಕ್ಕೆ ಮತ್ತು ಆಧ್ಯಾತ್ಮದ ಧಾರ್ಮಿಕ ಪರಂಪರೆಗೆ ಒಳಪಟ್ಟ ಶಿಷ್ಯ-ಪ್ರಶಿಷ್ಯರಿಬ್ಬರು ಶೂನ್ಯ ಸಂಪಾದನೆಯ ಪರಿಷ್ಕರಣಕಾರರು ಆಗಿದ್ದಾರೆಂಬುದು ಗಮನಿಸಬೇಕಾದ ಸಂಗತಿ.

ಒಟ್ಟಿನಲ್ಲಿ ತೋಂಟದ ಸಿದ್ಧಲಿಂಗರ ಪ್ರಭಾವ ಮತ್ತು ಪರಂಪರೆಯ ಶಿಷ್ಯಂದಿರು ಶೂನ್ಯ ಸಂಪಾದನೆಗಳಿಗೆ ಹೊಸ ಜೀವ ತುಂಬಿದುದಲ್ಲದೆ ಅವುಗಳ ಮಹತ್ವವನ್ನು ಹೆಚ್ಚಿಸಿದ್ದಾರೆ.  ಅಂದರೆ ಶೂನ್ಯ ಸಂಪಾದನೆಯ ಬೆಳವಣಿಗೆಯಲ್ಲಿ ತೋಂಟದ ಸಿದ್ಧಲಿಂಗರ ಪ್ರಭಾವವು ಕೆಲಸ ಮಾಡಿದೆ ಎಂಬುದನ್ನು ಒಪ್ಪಲೇಬೇಕು.ಏಕೋತ್ತರ ಶತಸ್ಥಲದ  ವಚನಗಳನ್ನು ಸಂಗ್ರಹಿಸಿದ ತೋಂಟದ ಸಿದ್ಧಲಿಂಗರು ಆ ಪರಂಪರೆಯ ಹರಿಕಾರರು ಹೌದು. ಇದನ್ನು ಅನುಸರಿಸಿಯೇ ಈ ನೂರೊಂದು ಸ್ಥಲದ ಪರಂಪರೆಯಲ್ಲಿ ಅನೇಕ ಕವಿಗಳು, ವಿರಕ್ತರು ಆಗಿಹೋಗಿದ್ದು ಅವರೆಲ್ಲರೂ ತಮ್ಮ ಏಕೋತ್ತರ ಶತಸ್ಥಲದ ಕೃತಿಗಳಲ್ಲೂ ಸಿದ್ಧಲಿಂಗರನ್ನು ಸ್ಮರಣೆಗೈದಿದ್ದಾರೆ.  ಅವರನ್ನು ಪಟ್ಟಿ ಮಾಡಬಹುದಾದರೆ ಅವರಲ್ಲಿ ಘನಲಿಂಗಿದೇವ, ಗುಬ್ಬಿಯ ಮಲ್ಲಣ್ಣ (೧೪೭೫), ಸ್ವತಂತ್ರ ಸಿದ್ಧಲಿಂಗೇಶ್ವರ (೧೬೦೦), ಗುಮ್ಮಾಳಾಪುರದ ಸಿದ್ಧಲಿಂಗೇಶ್ವರ (೧೫೮೦), ಗೂಳೂರು ಸಿದ್ಧವೀರಣ್ಣಾರ್ಯ(೧೬೧೬), ಸಾನಂದ ಶಿವಯೋಗಿ (೧೭೯೦), ಮಲ್ಲಿಕಾರ್ಜುನಕವಿ (ಸು. ೧೬೦೦), ಆನಂದ ಬಸವಲಿಂಗ ಶಿವಯೋಗಿ (೧೬೦೦), ಗುರುನಂಜ (೧೫೦೦), ಗುಬ್ಬಿಯ ಮಲ್ಲಣ್ಣಾರ್ಯ (೧೪೫೦), ಪ್ರಭುಲಿಂಗ (೧೫೨೦), ಓದುವ ಗಿರಿಯ (೧೫೨೫), ಚೇರಮಾಂಕ (೧೫೨೬), ಮುರಿಗೆಯ ಶಾಂತವೀರ (೧೭೦೩), ಸಂಪಾದನೆಯ ಚೆನ್ನಂಜದೇವ (೧೫೮೦), ಇಮ್ಮಡಿ ತೋಂಟದಯ್ಯ (೧೫೮೦), ಯೆಮ್ಮೆಯ ಬಸವ (೧೬೪೦), ಚೆನ್ನಬಸವಾಂಕ (೧೫೧೫), ಕುಮಾರಚೆನ್ನಬಸವ (೧೫೫ಂ), ಸಿರಿನಾಮದೇಯ (೧೫೫ಂ), ವಿರಕ್ತ ತೋಂಟದಾರ್ಯ (೧೬೧೬), ಮುರಿಗೆ ದೇಶಿಕೇಂದ್ರ (೧೫೬ಂ), ಮಹಾಂತಸ್ವಾಮಿ (೧೫೬೦), ಶಾಂತೇಶ (೧೫೬ಂ), ಎಳಮಲೆಯ ಗುರುಶಾಂತದೇವ (೧೫೮೦), ವಿರೂಪಾಕ್ಷಪಂಡಿತ (೧೫೮೪), ಇಮ್ಮಡಿ ಮುರಿಗೆಸ್ವಾಮಿ (೧೭ಂ೩), ಉತ್ತರದೇಶದ ಬಸವಲಿಂಗ (೧೭೭೯-೮೦), ಸಿದ್ಧಲಿಂಗಶಿವಯೋಗಿ (೧೭೩೦), ಸಂಪಾದನೆಯ ವೀರಣ್ಣಾರ್ಯ (೧೬೦೦), ಹರೀಶ್ವರ (೧೬೦೬), ಬಸವಲಿಂಗ(೧೬೧೧), ಶಾಂತವೀರದೇಶಿಕ (೧೬೫೦), ಸಿದ್ಧನಂಜೇಶ (೧೬ಂಂ), ಶಾಂತಮಲ್ಲ (೧೭೪೦), ಪರ್ವತಶಿವಯೋಗಿ (೧೭೦೦), ಷಡಕ್ಷರದೇವ (೧೬೫೪), ಬಸವಲಿಂಗ (೧೬೭೯), ಸಂಪಾದನೆಯ ಪರ್ವತೇಶ (೧೬೯೮), ಸೋಮಶೇಖರ ಶಿವಯೋಗಿ (೧೭೫೦), ಸೋಮ (೧೭೦೦), ನೂರೊಂದ (೧೭೪೦), ನಂದಿನಾಥ (೧೭೪೫), ಮಹಾದೇವ, ಮೋದಿಯ ರುದ್ರ ಮುಂತಾದವರನ್ನು ಹೆಸರಿಸ ಬಹುದು. 

     ತೋಂಟದ ಸಿದ್ಧಲಿಂಗರ ಶಿಷ್ಯ ಪ್ರಶಿಷ್ಯ ಪರಂಪರೆ ಅನಂತ ಶಾಖೋಪಶಾಖೆಗಳಲ್ಲಿ ಹಬ್ಬಿ ಮಹಾವೃಕ್ಷವಾಗಿ ಬೆಳೆದು ನಿಂತಿದೆ. ಇವರ ಶಿಷ್ಯರಲ್ಲಿ ಬೋಳಬಸವೇಶ್ವರನಿಗೆ ಅಗ್ರ ಪ್ರಾಶಸ್ತ್ಯ. ಸಿದ್ಧಲಿಂಗರ ಪ್ರಥಮ ಶಿಷ್ಯನಾಗಿ ಅವರ ನಂತರದಲ್ಲಿ ನಿರಂಜನ ಪೀಠವನ್ನು ಮುಂದುವರಿಸಿಕೊಂಡು ಸಾಗಿದ ಈತನಿಂದ ಅನುಗ್ರಹಿತರಾಗಿ ಶಿಷ್ಯತ್ವವಹಿಸಿ ಸಾಹಿತ್ಯ ಸಿದ್ಧಾಂತ-ಆಧ್ಯಾತ್ಮ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಸಂಖ್ಯೆ ಅಪಾರ. ಅವರಲ್ಲಿ ಕೇವಲ ಅಧ್ಯಾತ್ಮವಾದಿಗಳಾಗಿ ಷಟ್‌ಸ್ಥಲ ಲೋಪದೋಷ ಲೋಕಕಲ್ಯಾಣ ಕಾರ್ಯದಲ್ಲಿ ತೊಡಗಿದವರಾದರೆ, ಮತ್ತೆ ಕೆಲವರು ಸಾಹಿತ್ಯ ಸೃಷ್ಟಿ ಮಾಡಿ ಆಧ್ಯಾತ್ಮ ತತ್ವಗಳನ್ನು ಸಾಹಿತ್ಯ ಕೃತಿಗಳ ಮೂಲಕ ಜನತೆಗೆ ಬೋಧಿಸಿದರು. ಇನ್ನೂ ಕೆಲವರು ಬಸವಾದಿ ಪ್ರಮಥರು ಉಸುರಿದ ವಚನ ಸಾಹಿತ್ಯವನ್ನು ಶೋಧಿಸುವ, ಸ್ಥಲಾನುಗುಣವಾಗಿ ಜೋಡಿಸುವ ವ್ಯಾಖ್ಯಾನ, ಟೀಕೆ, ಟಿಪ್ಪಣೆ ಬರೆಯುವ ಕಾರ್ಯದಲ್ಲಿ ತೊಡಗಿದವರು. ವಿವಿಧ ಮೂಲಗಳಲ್ಲಿ ದೊರೆಯುವ ಆತನ ಶಿಷ್ಯ ಪ್ರಶಿಷ್ಯ ಪರಂಪರೆಯನ್ನು ಅದರಲ್ಲಿ ಉಂಟಾದ ಕವಲುಗಳನ್ನು ಈ ಕೆಳಗಿನಂತೆ ಗುರುತಿಸಬಹುದು. ಹೀಗೆ ಈ ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಯು ಹರದನಹಳ್ಳಿಯಲ್ಲಿ ಗುರು ಗೋಸಲ ಚೆನ್ನಬಸವೇಶ್ವರರ ಶಿಷ್ಯನಾಗಿ ಕಗ್ಗೆರೆಯಲ್ಲಿ ತಪಸ್ಸುಮಾಡಿ ಎಡೆಯೂರನ್ನು ಕೇಂದ್ರವನ್ನಾಗಿ ಮಾಡಿಕೊಂಡು ಕರ್ನಾಟಕದ ಒಳಹೊರಗು ದೇಶ ಸಂಚಾರ ಮಾಡಿವಿರಕ್ತ ಪರಂಪರೆಯನ್ನೇ ಕಟ್ಟಿ ಆ ಗುಂಪಿನ ನಾಯಕ ವ್ಯಕ್ತಿಯಾಗಿ ಮೆರೆದವರು ತೋಂಟದ ಸಿದ್ಧಲಿಂಗರು. ಏಳುನೂರೊಂದು ವಿರಕ್ತರ ಹೆಸರು ಅವರು ಕಾರ್ಯಗೈದ ವಿವರ ಕುರಿತಾಗಿ ಇಂದಿಗೂ ಲಭ್ಯವಿಲ್ಲ. ಒಂದೆರಡು ಕೃತಿಗಳೂ ಮಾತ್ರ ಕೆಲವು ವಿರಕ್ತರ ಹೆಸರು ಮತ್ತು ಕಾರ್ಯಗಳನ್ನು ತಿಳಿಸುತ್ತವೆ. ಅವರಲ್ಲಿ ನೇರವಾಗಿ ಗುರುಪೀಠವನ್ನೇರಿದವರು ಬೋಳಬಸವೇಶ್ವರರು. ಆಮೇಲೆ ಶಿಷ್ಯ ಪರಂಪರೆ ಅವ್ಯಹತವಾಗಿ ಮುಂದುವರೆದಿದೆ.ಲಭ್ಯವಿರುವ ಆಕರಗಳ ಹಿನ್ನೆಲೆಯಲ್ಲಿ ಇವರ ಶಿಷ್ಯ ಪರಂಪರೆಯನ್ನು ಈ ರೀತಿಯಾಗಿ ಗುರುತಿಸ ಬಹುದು.

                                                       ತೋಂಟದ ಸಿದ್ಧಲಿಂಗ            

                             

                                                         ಬೋಳಬಸವೇಶ

                                                          ಬೋಳ ಬಸವೇಶ್ವರರು




      ಗೂಳೂರು ಸಿದ್ಧಲಿಂಗ    ಗೂಳೂರು ಸಿದ್ಧವೀರ      ಹರತಾಳ ಚೆನ್ನಂಜೇದೇವ            ಅನಂದ 


                                        

                                        


   ಬಸವಲಿಂಗಶಿವಯೋಗಿ



ಗುಮ್ಮಳಾಪುರ ಸಿದ್ಧಲಿಂಗ                     ಎಳಂದೂರ ಹರೀಶ್ವರ          ಎಳಮಲೆಯ ಗುರು ಶಾಂತದೇವ

 



 ಗಗನದಾರ‍್ಯ(ಉದ್ದನಾರ‍್ಯ)                   

                   

                            ಪರ್ವತೇಂದ್ರ                      ಸಂಪಾದನೆಯ ಸಿದ್ಧವೀರಣ್ಣಾರ‍್ಯ



      ಕಟ್ಟಿಗಹಳ್ಳಿ ಸಿದ್ಧಲಿಂಗ                                         ವಿರಕ್ತತೋಂಟದಾರ್ಯ


                                       

ಮುರಿಗೆ ಶಾಂತವೀರೇಶ್ವರ               ಚೆನ್ನಮಲ್ಲಿಕಾರ್ಜುನದೇವ  ಸಂಪಾದನೆಯ ಬೋಳಬಸವ


ಮುರಿಗೆ ಗುರುಸಿದ್ಧೇಶ್ವರ                         ಸಂಪಾದನೆಯ ಪರ್ವತೇಶ         ಸಂಪಾದನೆಯ ಗುರುಲಿಂಗದ


                       ಸೋಮಶೇಖರ ಶಿವಯೋಗಿ


                                              ತೋಂಟದ ಸಿದ್ಧಲಿಂಗ                                                


                                           ಬೋಳಬಸವೇಶ್ವರ



                     ಗುಮ್ಮಳಾಪುರದ ಸಿದ್ಧಲಿಂಗಯತಿ



                   ಗೂಳೂರು ಸಿದ್ಧವೀರಣ್ಣೊಡೆಯ

 


                       ಗಗನದಾರ್ಯ




ಚೀಲಾಳಪ್ಪ ಸ್ವಾಮಿ(ಚೀಲಾಳ ಸ್ವಾಮಿ)                      ಕಟ್ಟಿಗೆಹಳ್ಳಿ ಸಿದ್ಧಲಿಂಗ ಸ್ವಾಮಿ


éಹರಿಹರ ಸ್ವಾಮಿ                                                

                                ಮುರಿಗೆ ಶಾಂತವೀರ   ನೋಡ ಸಿದ್ಧಲಿಂಗ

ಭಿಕ್ಷುದ ಬಸವಲಿಂಗಾರ್ಯ             (ಮುರಿಗಾ ಸಮಯ)      (ಕುಮಾರ ಸಮಯ)


ಕಟ್ಟಿಗೆಹಳ್ಳಿ ರಾಚೋಟಿಸ್ವಾಮಿ                                     


                                                   ಕುಮಾರದೇಶೀಕೇಂದ್ರ                 

ಅಣ್ಣಿಗೇರಿ ಮಹಾಂತ ಸ್ವಾಮಿ                      ಇಮ್ಮಡಿ ಗುರುಸಿದ್ಧಸ್ವಾಮಿ

                                                ಸಿದ್ಧಬಸವಸ್ವಾಮಿ

ಅರ್ಧನಾರೀಶ್ವರ ಸ್ವಾಮಿ  

                            ಕಪ್ಪಿನಂಜೇಸ್ವಾಮಿ  ಸ್ವಾದಿವೀರಚೆನ್ನಬಸವಾರ‍್ಯ  ಮಹಾಂತಸ್ವಾಮಿ


  ಈಸೂರುನಂದೀಶ್ವರಸ್ವಾಮಿ    

                                   ಹುಬ್ಬಳ್ಳಿ ಸಂಗನ                          ಬಸವ ದೇಶಿಕ                                                                                                                    


      ಸದಾಶಿವಸ್ವಾಮಿ                        ಶಿರಹಟ್ಟಿ ಸಿದ್ಧಲಿಂಗಸ್ವಾಮಿ                    ಶಾಂತವೀರದೇಶಿಕ



ಮಹಾಂತಸ್ವಾಮಿ                                    ಗುರುಪಾದಸ್ವಾಮಿ                             ಕುಮಾರದೇಶಿಕ                                   


 


 ವೃದ್ಧತೋಂಟಾದಾರ್ಯ                ಮೂರುಸಾವಿರದ ಗುರುಪಾದಸ್ವಾಮಿ   ಶಿವಪೂಜಾ ಬಸವಲಿಂಗದೇಶಿಕ




              ಮೃತ್ಯುಂಜಯ ಸ್ವಾಮಿ                 ಮೂರುಸಾವಿರದ ಸಿದ್ಧಲಿಂಗಸ್ವಾಮಿ       

      


                                                  ಗುರುಮಲ್ಲಸ್ವಾಮಿ ಇಮ್ಮಡಿಬಸವಲಿಂಗದೇಶಿಕ



                                                          

  ಸಿದ್ಧೇಶ್ವರಸ್ವಾಮಿ                       ಒಪ್ಪೊತ್ತಿನ ಚೆನ್ನವೀರಸ್ವಾಮಿ 

 


ಗುರುಬಸವಸ್ವಾಮಿ                                 ವ್ಯಾಕರಣದ ಸಿದ್ಧಲಿಂಗಸ್ವಾಮಿ      ಸಿದ್ಧಬಸವಲಿಂಗದೇಶಿಕ                        


ಶಿವಕುಮಾರಸ್ವಾಮಿ                            ನಿಘಂಟಿನಸಿದ್ಧಬಸವಸ್ವಾಮಿ          ಬಸವಲಿಂಗದೇಶಿಕ 

 


                                                ಸಣ್ಣಬರಹದ ರಾಚೋಟಿಸ್ವಾಮಿ


                           ತೋಂಟದ ಸಿದ್ಧಲಿಂಗಸ್ವಾಮಿ (ಗದುಗಿನಲ್ಲಿದ್ದವರು)  


                                                 

                                                                           ಮಹಾಲಿಂಗಸ್ವಾಮಿ

                          

                     

                                             ಹೆಬ್ಬಾಳದ ರುದ್ರಸ್ವಾಮಿ



                                      ಮುಪ್ಪಿನ ರುದ್ರಸ್ವಾಮಿ



                                              ಮುಪ್ಪಿನಸ್ವಾಮಿ


                                                                       ಜಯದೇವಸ್ವಾಮಿ



                                      ಜಯವಿಭವಸ್ವಾಮಿ


                                                            ಮಲ್ಲಿಕಾರ್ಜುನಸ್ವಾಮಿ

( ಆಕರ:ವೀರಣ್ಣ ರಾಜೂರ, ವಚನ ಸಂಶೋಧನ,ಪು.೭೮-೮೦,  ಎಸ್. ಶಿವಣ್ಣ, ಬಿಡು ಮುತ್ತು)

                                 

         ತೋಂಟದ ಸಿದ್ಧಲಿಂಗಯತಿಗಳು  ಕೇವಲ ವ್ಯಕ್ತಿಯಲ್ಲ ಅವರೊಬ್ಬ ಕಲಾತೀತ ಶಕ್ತಿ ಎಂದು ಹೇಳಬಹುದು. ಈ ಮಾತಿಗೆ ಅವರಿಂದ ಆರಂಭವಾಗಿ ಅವರ ಶಿಷ್ಯ ಪ್ರಶಿಷ್ಯರಿಂದ ಮುಂದುವರಿದು ನಾಡಿನ ತುಂಬ ಬೆಳೆದು ನಿಂತಿರುವ ಮಠಗಳ ಪರಂಪರೆ ನಿದರ್ಶನವಾಗಿವೆ. ತೋಂಟದ ಸಿದ್ಧಲಿಂಗರ ಸಮಯಕ್ಕೆ ಸೇರಿದ ೩೨ ಮಠಗಳು ನಾಡಿನಾದ್ಯಂತ ಕಂಡು ಬರುತ್ತವೆ. ವಿರಕ್ತ ಸಂಪ್ರದಾಯದ ಮಠ ಜಗತ್ತಿನ ಜಗದ್ಗುರು ಪೀಠ ಪರಂಪರೆ ಆರಂಭವಾಗಿರುವುದು ತೋಂಟದ ಸಿದ್ಧಲಿಂಗರಿಂದ. ಅದರಲ್ಲೂ ವಿಶೇಷವಾಗಿ ಚೀಲಾಳ, ಮುರಘಾಸಮಯ, ಕೆಂಪಿನಸಮಯ ಮತ್ತು ಕುಮಾರ ಸಮಯದ ಮಠಗಳು ತೋಂಟದಾರ್ಯರ ಶಿಷ್ಯರಿಂದ ಆರಂಭವಾಗುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ವೀರಶೈವ ಗುರುವರ್ಗದಲ್ಲಿ ಐದು ಪೀಠ ಪರಂಪರೆಗಳಿರುವಂತೆ ವಿರಕ್ತ ವರ್ಗದಲ್ಲಿಯೂ ಐದು ಸಮಯ ಪರಂಪರೆಗಳಿವೆ. ಇವುಗಳಲ್ಲಿ ಕೆಂಪಿನ ಸಮಯ ಸಂಪಾದನ ಸಮಯಗಳಿಗಿಂತ ಜಗದ್ಗುರು ಪ್ರತಿಷ್ಠೆಯ ಮುರುಘಾ ಸಮಯ, ಕುಮಾರ ಸಮಯ, ಚೀಲಾಳ ಸಮಯಗಳು ತುಂಬ ಪ್ರಸಿದ್ಧವಾಗಿವೆ. ಅಂದರೆ ಕ್ರಮವಾಗಿ ಈ ಮೂರು ಸಂಪ್ರದಾಯಕ್ಕೆ ಸೇರಿದ ೩೧, ೧೦೩ ಮತ್ತು ೪೨ ಹೀಗೆ ಒಟ್ಟು ೧೭೬ ಮಠಗಳು ಸಿದ್ಧಲಿಂಗರ ಶಿಷ್ಯ ಪರಂಪರೆಯ ಮಠಗಳು ಎಂದಂತಾಯಿತು.  ಇದಲ್ಲದೆ, ವಿರಕ್ತ ಸಂಪ್ರದಾಯದ ೭೨ ಮಠಗಳಲ್ಲಿ ೧೨ನೇ ಶತಮಾನಕ್ಕೆ ಸೇರಿದ ಕೆಲವು ಮಠಗಳು ಇರಬಹುದು. ಮತ್ತು ತೋಂಟದ ಸಿದ್ಧಲಿಂಗರ ಪರಂಪರೆಗೆ ಸೇರಿದ ಮಠಗಳು ಕೆಲವು ಇರಬಹುದು.

ಅಂದರೆ ವಿರಕ್ತ ಸಂಪ್ರದಾಯದಿಂದ ಇರುವ ೭೨ ಮಠಗಳಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಮಠಗಳು ಸಿದ್ಧಲಿಂಗರ ಪ್ರಭಾವದಿಂದ ಅವರ ಪ್ರಭಾವಳಿಯಲ್ಲಿ ಬೆಳೆದ ಮಠಗಳಾಗಿರಬಹುದು. ೧೨ನೇ ಶತಮಾನದ ವಿರಕ್ತ ಮಠಗಳೆಂದು ದಾಖಲಾಗಿರುವ ಮಠಗಳ ಕಾಲದ ಸತ್ಯಾಸತ್ಯತೆಯನ್ನು ಕಂಡುಹಿಡಿದರೆ ೧೨ನೇ ಶತಮಾನಕ್ಕೆ ಸೇರಬಹುದಾದ ಮಠಗಳನ್ನು ಬಿಟ್ಟು ಉಳಿದುವೆಲ್ಲಾ ಸಿದ್ಧಲಿಂಗರ ಸಂಪ್ರದಾಯಕ್ಕೆ ಸೇರಬಹುದೇನೋ, ವಚನ ಸಂಪಾದನೆಗಾಗಿ ಹುಟ್ಟಿಕೊಂಡ ಮಠಗಳೆ ಬಹುಶಃ ಸಂಪಾದನ ಸಮಯದ ಮಠಗಳೆನ್ನಿಸಿರಬಹುದು. ಈ ಸಮಯಕ್ಕೆ ಸೇರಿದ ೪ ಮಠಗಳಲ್ಲಿಯೂ ಸಿದ್ಧಲಿಂಗರ ಸಂಪ್ರದಾಯಕ್ಕೆ ಸೇರಿದ ಮಠಗಳು ಇರಲೂಬಹುದು. ಕೆಂಪಿನ ಸಮಯದ ೩ ಮಠಗಳು ಅವುಗಳ ಮೂಲವನ್ನು ಕುರಿತು ಐತಿಹಾಸಿಕ ಅಧ್ಯಯನವಾಗಬೇಕು. ಇಷ್ಟೆಲ್ಲ ಅಲ್ಲದೆ ನೇರವಾಗಿ ೩೨ ಮಠಗಳು ತೋಂಟದ ಸಿದ್ಧಲಿಂಗರ ಸಮಯದ ಮಠಗಳೆಂದು ಕರ್ನಾಟಕ ವೀರಶೈವ ಮಠಗಳ ಕುರಿತು  ಸಂಪಾದನೆ ಮಾಡಿರುವ ಚಂದ್ರಶೇಖರ ನಾರಾಯಣಾಪುರ ಅವರ ಗ್ರಂಥದಲ್ಲಿ ಉಲ್ಲೇಖಗೊಂಡಿವೆ.

   ಅಂತೂ ಕರ್ನಾಟಕದ ವೀರಶೈವ ಅದರಲ್ಲೂ ವಿರಕ್ತ ಸಂಪ್ರದಾಯದ ವ್ಯಾಪಕ ಮಠಗಳ ಹುಟ್ಟು ಬೆಳವಣಿಗೆಗೆ ಸಿದ್ಧಲಿಂಗ ಶಿವಯೋಗಿಗಳ ಕತೃತ್ವಶಕ್ತಿಯೇ  ಪ್ರಮುಖವಾಗಿದೆ.  ನಾಡಿನ ಅನೇಕ ಮಠಗಳು ಸಿದ್ಧಲಿಂಗರಿಂದ ಆರಂಭವಾದ ಅಥವಾ ಸಿದ್ಧಲಿಂಗರ ಶಿಷ್ಯರಿಂದ ಆರಂಭವಾದ ಚೀಲಾಳ ಮುರುಘಾ ಅಥವಾ ಕುಮಾರ ಸಮಯಕ್ಕೆ ಸೇರಿದ ಮಠಗಳಾಗಿವೆಂಬುದು ಗಮನಿಸಬೇಕಾದ ಸಂಗತಿ. ಇದರಿಂದ ನಾಡಿನ ಮಠ ಪರಂಪರೆಗೆ ಸಿದ್ಧಲಿಂಗ ಶಿವಯೋಗಿಗಳಿಂದ ಬಹುದೊಡ್ಡ ಕೊಡುಗೆ ಸಂದಿದೆ ಎಂಬುದು ವಿದಿತವಾಗುತ್ತದೆ.  

ಸಿದ್ಧಲಿಂಗ ಯತಿಗಳಿಂದ ಆರಂಭವಾದ ವಚನ ಪುನರುಜ್ಜೀವನ ಕಾರ್ಯ ಅವರ ಬಳಿಕವು ನಿಲ್ಲದೆ ಮುಂದುವರೆಯಿತು. ಅವರ ಶಿಷ್ಯರಾದ ಸ್ವತಂತ್ರ ಸಿದ್ಧಲಿಂಗೇಶ್ವರರು ಮತ್ತು ಗುಮ್ಮಳಾಪುರದ ಸಿದ್ಧಲಿಂಗೇಶ್ವರರು ಅನೇಕ ವಚನಗಳನ್ನು ಬರೆದಿದ್ದಾರೆ. ಈ ಸಾಲಿನಲ್ಲಿಯೇ ಸಿದ್ಧಲಿಂಗೇಶ್ವರನು ಸಿದ್ಧಲಿಂಗ ಯತಿಗಳಂತೆ ಬಸವಾದಿಗಳ ವಚನಗಳಿಗೆ ಸಂಪೂರ್ಣ ಮಾರು ಹೋಗಿದ್ದ ವ್ಯಕ್ತಿ. ಏಕೆಂದರೆ ಆತನ ಮೇಲೆ ಬಸವ ಮೊದಲಾದವರ ಪ್ರಭಾವ ಆಗಿರುವುದನು ಗುರುತಿಸ ಬಹುದಾಗಿದೆ. ಸಿದ್ಧಲಿಂಗ ಯತಿಗಳ ಇನ್ನೊಬ್ಬ ಶಿಷ್ಯರಾದ ಘನಲಿಂಗಿ ದೇವರು ಸಾಹಿತ್ಯ ದೃಷ್ಟಿಯಿಂದ ಹೆಚ್ಚು ಗಮನಾರ್ಹವಾದ ವಚನಗಳನ್ನು ಸೃಷ್ಟಿಸಿದ್ದಾರೆ. 

ಹೀಗೆ ವಚನ ಸಂಕಲನ ವ್ಯಾಖ್ಯಾನಗಳಿಗೆ ಮಹಾಲಿಂಗ ಜಕ್ಕಣ್ಣ ಮುಂತಾದವರ ಬಳಿಕ ಎರಡನೆ ಕೇಂದ್ರ ವ್ಯಕ್ತಿಯಾಗಿ ಪರಿಣಮಿಸಿ ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಆ ಕೆಲಸಗಳನ್ನು ನಡೆಸಿದರು. ವಚನ ಸೃಷ್ಟಿಯ ಕಾರ್ಯ ಕನ್ನಡದಲ್ಲಿ ಎರಡನೆ ಬಾರಿ ನಡೆದದ್ದಕ್ಕೆ ತಾವೇ ಸ್ವತಃ ಆದ್ಯರಾದರು. ಹೀಗೆ ವಚನ ಪರಂಪರೆಯಲ್ಲಿ ಮಹತ್ವಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

   ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಯು ಹರದನಹಳ್ಳಿಯಲ್ಲಿ ಗುರು ಗೋಸಲ ಚೆನ್ನಬಸವೇಶ್ವರರ ಶಿಷ್ಯನಾಗಿ ಕಗ್ಗೆರೆಯಲ್ಲಿ ತಪಸ್ಸುಮಾಡಿ ಎಡೆಯೂರನ್ನು ಕೇಂದ್ರವನ್ನಾಗಿ ಮಾಡಿಕೊಂಡು ಕರ್ನಾಟಕದ ಒಳಹೊರಗು ದೇಶ ಸಂಚಾರ ಮಾಡಿವಿರಕ್ತ ಪರಂಪರೆಯನ್ನೇ ಕಟ್ಟಿ ಆ ಗುಂಪಿನ ನಾಯಕ ವ್ಯಕ್ತಿಯಾಗಿ ಮೆರೆದವರು ತೋಂಟದ ಸಿದ್ಧಲಿಂಗರು. ಏಳುನೂರೊಂದು ವಿರಕ್ತರ ಹೆಸರು ಅವರು ಕಾರ್ಯಗೈದ ವಿವರ ಕುರಿತಾಗಿ ಇಂದಿಗೂ ಲಭ್ಯವಿಲ್ಲ. ಒಂದೆರಡು ಕೃತಿಗಳೂ ಮಾತ್ರ ಕೆಲವು ವಿರಕ್ತರ ಹೆಸರು ಮತ್ತು ಕಾರ್ಯಗಳನ್ನು ತಿಳಿಸುತ್ತವೆ. ಅವರಲ್ಲಿ ನೇರವಾಗಿ ಗುರುಪೀಠವನ್ನೇರಿದವರು ಬೋಳಬಸವೇಶ್ವೃರು. ಆಮೇಲೆ ಶಿಷ್ಯ ಪರಂಪರೆ ಅವ್ಯಹತವಾಗಿ ಮುಂದುವರೆದಿದೆ. ಸದ್ಯಕ್ಕೆ ಈ ಪರಂಪರೆಯಲ್ಲಿ ತೋಂಟದಾರ್ಯರು ೧೮ನೇ ಜಗದ್ಗುರುಗಳಾದರೆ ತದನಂತರದವರು ಹೀಗಿದ್ದಾರೆ.   

ವಚನ ಸಾಹಿತ್ಯ ರಚನೆ,ಸಂಪಾದನೆ, ಸಂಕಲನ ಕಾರ್ಯವನ್ನು ಮುಂದುವರೆಸಿಕೊಂಡು ಬಂದ ಶಿಷ್ಯ ಪರಂಪರೆ:

೧.ಸಪ್ಪೆಯಾರ್ಯ : ಎಡೆಯೂರು ಶಿಲಾಶಾಸನದಲ್ಲಿ ಉಕ್ತವಾಗಿರುವ ಶ್ರೀ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯರ ಹೆಸರುಗಳಲ್ಲಿ ಈತನ ಹೆಸರೇ ಮೊಟ್ಟಮೊದಲನೆಯದು. ಈತನನ್ನು ಸಪ್ಪೆಯಾರ್ಯ, ಸಪ್ಪೆಯತೀಶನೆಂದು ಕರೆದಿದ್ದಾರೆ. ಯತೀಶ್ವರನಾಗಿ ಸದ್ಭಕ್ತರನ್ನು ಪಾವನಗೊಳಿಸುತ್ತಾ ದೇಶವನ್ನೆಲ್ಲ ಸುತ್ತಾಡಿ ಕೀರ್ತಿಯನ್ನು ಸಂಪಾದಿಸಿದ ಈತ ಕನ್ನಡದಲ್ಲಿ ಯಾವ ಕೃತಿ ರಚನೆ ಮಾಡಿದನು ತಿಳಿಯದು. ಆದರೆ ‘ಅಮೃತೇಶ್ವರ ಭಾಷ್ಯ’ ಎಂಬ ಸಂಸ್ಕೃತ ಗ್ರಂಥವನ್ನು ರಚಿಸಿರುವನೆಂದು ತಿಳಿದು ಬರುತ್ತದೆ.  

೨.ಬೋಳಬಸವಾರ್ಯ (ನಾಗವಲ್ಲಿಯ ಶಿವಪೂಜೆಯಾರ್ಯ): ಇವರು ಮೂಲತಹ ಚಾಮರಾಜನಗರ ತಾಲೋಕಿನ ನಾಗವಲ್ಲಿಯವರು. ಎಡೆಯೂರು ಶಾಸನದಲ್ಲಿಯೂ ಉಕ್ತರಾಗಿದ್ದಾರೆ. ಇವರು ತೋಂಟದ ಸಿದ್ಧಲಿಂಗ ಸ್ವಾಮಿಗಳ ತರುವಾಯ ಷಟ್‌ಸ್ಥಲ ಪಟ್ಟದ ಮುಂದಾಳತ್ವವನ್ನು ವಹಿಸಿದರು. ಇವರ ಶಿಷ್ಯರಾದ ಸಪ್ಪೆ ದೇಶಿಕರು ಪಟ್ಟಣ ದೇವರು ಚಿಟ್ಟಿಗೆ ದೇವ ಮುಂತಾದವರು ಬೋಳಬಸವರಿಂದ ಚರಪಟ್ಟ ಪಡೆದು ಭಕ್ತಿಜ್ಞಾನ ವೈರಾಗ್ಯ ಸಂಪನ್ನರಾಗಿ ಧರೆಯನ್ನೆಲ್ಲ ಸಂಚರಿಸಿದರು. ಇದರಿಂದಾಗಿ ಬೋಳಬಸವರಿಂದ ಇಡೀ ಷಟ್‌ಸ್ಥಲದ ಕೀರ್ತಿ ವ್ಯಾಪಿಸಿತು. ಶರಣ ಜನಬಾಂಧವ, ಶರಣಜಲಹೃತ್ಕಮಲ ಕರ್ಣಿಕಾವಾಸ ಅನಾದಿ ಪರಶಿವನೆನಿಸುವ ಸಿದ್ಧಲಿಂಗೇಶ್ವರನ ಕೃಪಾಕಟಾಕ್ಷ ಪಾತ್ರರಾದ ಬೋಳಬಸವೇಶ್ವರನ ಮಹಾಜ್ಞಾನಾನುಭಾವ ಪ್ರಸನ್ನತಿಕೆಯಿಂದ ಗೂಳೂರು ಸಿದ್ಧವೀರಣ್ಣೊಡೆಯರು ಈ ಶೂನ್ಯಸಂಪಾದನೆಯಂ ನಿರ್ಮಾಣ ಮಾಡಲು ಕಾರಣೀಭೂತರಾಗಿದ್ದಾರೆ. ತೋಂಟದ ಸಿದ್ಧಲಿಂಗನ ಶಿಷ್ಯನಾದ ಬೋಳಬಸವೇಶಾರ್ಯನ ಕರುಣೆಯಿಂದ ಈ ಕೃತಿಯನ್ನು ರಚಿಸಿದ್ದಾಗಿ ಹೇಳಿದ್ದಾರೆ. 

ಶೂನ್ಯ ಸಿಂಹಾಸನದ ಎರಡನೆಯ ಉಪಾಧ್ಯಕ್ಷರಾದ ಜಂಗಮ ಮೂರ್ತಿ ಸಿದ್ಧಲಿಂಗ ಶಿವಯೋಗಿಗಳು ಎಡೆಯೂರಿನಲ್ಲಿ ಪಟ್ಟದ ಚಟ್ಟನದೇವರು ನಿರ್ಮಿಸಿದ ಕಲ್ಲುಮಠದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿ ನಿಲ್ಲುವುದಕ್ಕೆ ಮುಂಚೆ ಕಡು ವಿರಕ್ತನೂ ವಿಷಯ ನಿರ್ಲಿಪ್ತನೂ ಅಖಿಲ ಸಂಸರ್ಗ ಸಂಬಂಧ ರಹಿತನೂ ದೃಢವಿಮೋಹಾಂಭೋದ ಮಾರುತನೂ ಸದ್ಭಕ್ತ ಜಡವಿಕಸಿತ ಸೂರ್ಯನಾರ್ಯ ಜನಮಂಡನನೂ ಮೃಡಮೂರ್ತಿಯೂ ಎನಿಸಿದ ತನ್ನ ಪಟ್ಟ ಶಿಷ್ಯ ಬೋಳ ಬಸವೇಶನಿಗೆ ಶೂನ್ಯಸಿಂಹಾಸನದ ಪಟ್ಟವನ್ನು ಕಟ್ಟಿ ಬಯಲಾಗುತ್ತಾರೆ.

ಬಾಲ್ಯದಲ್ಲಿ ಸ್ಫುರಿತಾಕ್ಷರವು ತಿಳಿಯದಿದ್ದುದರಿಂದ `ನಿರಕ್ಷರ’ದ ಹೆಸರು ಸಾರ್ಥಕವಾಯಿತು. ಮುಗ್ಧತರರ ಸ್ವಭಾವದಿಂದಾಗಿ ಬೋಳನೆಂದಾಯ್ತು; ಸದ್ಭಕ್ತಿ ಸ್ವಭಾವದಿಂದ ಭಕ್ತಿ ಭಂಡಾರಿಯಾಗಿ ಬಸವ ನೆಂದಾಯ್ತು. ಈ ಮೂರರ ಮುಪ್ಪುರಿಯಿಂದ `ನಿರಕ್ಷರದ ಬೋಳ ಬಸವ’ ನೆಂಬ ಅಭಿದಾನದಿಂದ ಪಟ್ಟಾಧ್ಯಕ್ಷರಾದರು.೫

ತನ್ನ ಗುರುವರ್ಯರು ಹಮ್ಮಿಕೊಂಡಿದ್ದ ಕಾರ್ಯವನ್ನು ವ್ಯಾಪಕಗೊಳಿಸಿ ಪ್ರಚಾರ ಮಾಡಿದನು. ಇದಕ್ಕಾಗಿ ಸಪ್ತಶತ ಚರಮೂರ್ತಿಗಳು ಮತ್ತು ತ್ರಿಸಹಸ್ರ ವಿರಕ್ತರಿಗೆ ಶಾಸ್ತ್ರಬೋಧೆಯನ್ನು ಮಾಡಿ ಅವರ ಮೂಲಕ ಷಟ್ಸ್ಥಲ ಪ್ರಚಾರ ಕಾರ್ಯ ಇನ್ನೂ ವ್ಯಾಪಕವಾಗಿ ಪ್ರಸಾರವಾಗುವಂತೆ ಮಾಡಿದನು. ಅಷ್ಟಕ್ಕೇ ನಿಲ್ಲದೆ ನಾಡಿನ ನಾನಾ ಭಾಗಗಳಲ್ಲಿ ತಾನೂ ಅವರೊಂದಿಗೆ ಸಂಚರಿಸಿ ಷಟ್ಸ್ಥಲ ಬೋಧೆಯನ್ನು ಮಾಡಿ ಶೈವಸಂಪನ್ನರನ್ನು ಅಲ್ಲಲ್ಲಿ ನಿಲ್ಲಿಸಿ ವಿರತ-ಚರಮೂರ್ತಿಗಳೊಂದಿಗೆ ಮಧುಗಿರಿಗೆ ಬಂದು ಬಿಡಾರ ಮಾಡಿದ್ದಾಗ ಅಲ್ಲಿಯೇ ಅವಿರಳಾನಚಿದದಿಂದ ನಿಜೈಕ್ಯವನ್ನು ಪಡೆದನು.೬

ತನ್ನ ಗುರುಗಳಿಗಿದ್ದಂತೆ ಈತನಿಗೂ ಅನೇಕ ವಿದ್ವಾಂಸರು ಈತನ ಶಿಷ್ಯರಾಗಿದ್ದರು. ಅವರಲ್ಲಿ ಭಾವಚಿಂತಾರತ್ನ ಮತ್ತು ವೀರಶೈವಾಮೃತ ಮಹಾಪುರಾಣವನ್ನು ಬರೆದ ಎರಡನೆಯ ಮಲ್ಲಣಾರ್ಯ ಮತ್ತು ತೋಂಟದ ಸಿದ್ಧಲಿಂಗ ಶಿವಯೋಗಿಯ ಇನ್ನೊಬ್ಬ ಶಿಷ್ಯನಾದ ಚಂದ್ರಶೇಖರನಿಂದ ಪ್ರೇರಿತನಾಗಿ ಅವನ ಅಪ್ಪಣೆಯಂತೆ ಸಿದ್ದೇಶ್ವರ ಪುರಾಣವನ್ನು ಬರೆದ ಈ ಮಲ್ಲಣಾರ್ಯನ ಪುತ್ರ ಶಾಂತೇಶ ಮುಖ್ಯರಾದರು. ೧೬೫೦ರ ಸುಮಾರಿನಲ್ಲಿದ್ದ ಸಿದ್ಧನಂಜೇಶನು ತನ್ನ ಗುರುರಾಜ ಚಾರಿತ್ರದಲ್ಲಿ ಈ ಬೋಳಬಸವನನ್ನು ಸ್ತುತಿಸಿದ್ದಾನೆ.

೩. ೫. ಸಂಪಾದನೆಯ ಬೋಳಬಸವೇಶ್ವರರು(ಮದ್ದಗಿರಿ): 

   ತೋಂಟದ ಸಿದ್ಧಲಿಂಗ ಸ್ವಾಮಿಗಳ ಶಿಷ್ಯರಾದ ಇವರು ಮದ್ದಗಿರಿಯ ಇಮ್ಮಡಿ ಚಿಕ್ಕಭೂಪಾಲನ ಗುರುಗಳಾಗಿದ್ದರು ಎಂಬುದು ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯನ್ನುಗಮನಿಸಿದಾಗ ತಿಳಿದು ಬರುತ್ತದೆ. ತೋಂಟದ ಸಿದ್ದಲಿಂಗರ ಶಿಷ್ಯ ಪರಂಪರೆಯನ್ನು ಸ್ತುತಿಸುವಾಗತೋಂಟದ ಸಿದ್ದಲಿಂಗರ ಮೊದಲಿಗ ಹಾಗೂ ನೆಚ್ಚಿನವನಾದ ಬೋಳಬಸವೇಶನನ್ನು ಹೆಸರಿಸಿದ್ದಾನೆ. ಮುಂದಿನ ಪದ್ಯಗಳಲ್ಲಿ ತೋಂಟದ ಸಿದ್ಧವೀರೇಶ, ಚೆನ್ನಮಲ್ಲಿಕಾರ್ಜುನ ಮುಂತಾದವರನ್ನು ಹೆಸರಿಸುವ ಪದ್ಯದಲ್ಲಿ ಸಿದ್ದಾಪುರ ಬೋಳಬಸವರನ್ನು ಜೊತೆಯಾಗಿ ಉಲ್ಲೇಖಿಸಿದ್ದಾನೆ.

ಭಾಳಾಕ್ಷನಪರಾವತಾರ ಮಹಿಮಾಂಬು ನಿಧಿ

ಬೋಳಬಸವೇಶ್ವರರು ಸಿದ್ಧಪುರದೊಳಗಿರ್ಪ

ವೇಳಿಯೋಳ್ ಶ್ರೀ ಚೆನ್ನಮಲ್ಲಿಕಾರ್ಜುನ ದೇವರವರ ದರ್ಶನಕ್ಕೆ ಹೋಗ

ಆಲೋಕಿಸುತ ತಾವು ಪೊದ್ದಿರ್ದ ಕಂಬಳಿಯ

ಮೇಳದಿಂ ಗದ್ದುಗೆಯ ಮಾಡಿ ಮೂರ್ತಗೊಳಿಸಿ

ಸ್ಥಲ ಸಂಪಾದನೆಯ ಸ್ವಾಮಿಗಳ್ ನೀವೆನಲ್ ಮೆರೆದ ಗುರುರಾಯ ಶರಣು.೨೨ 

ಸಂಪಾದನೆಯ ಪರ್ವತೇಶನ ಗುರುವಾದ ಚೆನ್ನಮಲ್ಲಿಕಾರ್ಜುನರ ಸಮಕಾಲೀನರಾದ ಮತ್ತೊಬ್ಬ ಸಿದ್ಧಪುರದ ಬೋಳ ಬಸವೇಶರನ್ನು ಮೇಲ್ಕಂಡ ಪದ್ಯದಲ್ಲಿ ಉಲ್ಲೇಖಿಸಿರುವುದರ ಜೊತೆಗೆ ಈ ಗ್ರಂಥದ ಸಮಾಪ್ತಿಯ ಭಾಗದ ಒಂದು ಪದ್ಯದಲ್ಲಿ ಕೃತಿರಚನೆಯ ವೇಳೆಗೆ ಕವಿಯ ಗುರು ಹಾಗೂ ಸಿದ್ಧಪುರದ ಬೋಳಬಸವೇಶರು ಲಿಂಗೈಕ್ಯರಾಗಿದ್ದರು' ಎಂಬ ಉಲ್ಲೇಖ ಇದೆ. ಸುವ್ವಿಮಲ್ಲನೆಂಬ ಕವಿಯು ಸಿದ್ದೇಶ್ವರರಸಾಂಗತ್ಯ ಎಂಬ ಕೃತಿಯನ್ನು ರಚಿಸಿದ್ದಾನೆ. ಈ ಕೃತಿಯ ೫ ನೇ ಸಂಧಿ ಭಾಗದಲ್ಲಿ ತೋಂಟದ ಸಿದ್ದೇಶ್ವರರ ಚಂದ್ರಮಂಡಲ ಉತ್ಸವ, ರಥೋತ್ಸವ, ಮತ್ತು ಪರಿಷೆಯ ವಿವರಗಳಿವೆ.ತೋಂಟದ ಸಿದ್ದಲಿಂಗರ ಪರಿಷೆಗೆ ಆಗಮಿಸಿದ್ದ ವೀರಶೈವ ಮಹನೀಯರನ್ನು ಹೆಸರಿಸುವಾಗ ಬಿಜ್ಜಾವರದ ಬೋಳಬಸವೇಶರನ್ನು ಕುರಿತು ಒಂದು ಸಾಂಗತ್ಯ ಪದ್ಯದಲ್ಲಿ ಉಲ್ಲೇಖಿಸಿದ್ದಾನೆ.

'ಭಾಳದಿ ಧರಿಸಿದ ಭಸಿತ ರುದ್ರಾಕ್ಷಿಯಿಂ

ತೋಳಿನಾಧಾರ ಭಸ್ಮಾಂಗ

ಕಾಳುಗನ ಗೆದ್ದು ಕರುಣಿ ಬಿಜ್ವಾರದ

ಬೋಳಬಸವ ರಾಜರಿವರು-೨೩ 

ಸಿದ್ಧನಂಜೇಶನು ಗುರುರಾಜ ಚಾರಿತ್ರದಲ್ಲಿ ಬೋಳಬಸವೇಶ್ವರರನ್ನು ಅವರು ಮಾಡಿದ

ಎರಡು ಪವಾಡಗಳನ್ನು ಉಲ್ಲೇಖಿಸಿದ್ದಾನೆ.

ಪರಮಶಾಂತಿಯೇ ಮೂರ್ತಿವೆತ್ತಂತಿದ್ದು ಮಹಾಮಹಿಮನಾದ ಬೋಳಬಸವೇಶ್ವರನು ವಿಜ್ಞಾವರದಲ್ಲಿದ್ದು ಅಧಿಕ ಮಹಿಮೆಯನ್ನು ಮೆರೆದು ಲಿಂಗಾಭಿಷೇಕ ಉದಕವ ಮಸ್ತಕದಿರಣಾಗತರಿಗೆ ವಾಂಛಿತವಿತ್ತು ಇರಲು ಒಂದು ದಿವಸ ಒಣಗಿದತ್ತಿಯ ಮರವನ್ನು ಕರುಣದಿಂದ ನೋಡಿ ಅಕ್ಷಣವೆ ಚಿಗುರಿಸಿ ಫಲವ ತೋರಿದನು. ಕೈಲಾಸದ ಬಾಗಿಲಲ್ಲಿ ಕೈಲಾಸಕ್ಕೆ ಕರೆದೊಯ್ಯವೆಂದು ಎಲ್ಲರಿಗೂ ಹೇಳಿ ಶಿವಸಮಾಧಿಯಲ್ಲಿದ್ದ ಗೌಡನನ್ನುದ ಇಮ್ಮಡಿ ತೋಂಟದ ರಾಯನನ್ನು ಕಡೆದಿರಲು ಅಲ್ಲಿಗೆ ಹೋಗಿ ಆತನನ್ನು ಶಿವಸನ್ನಿಧಿಗೆ ಒಯ್ದು ಮೋಕ್ಷವನಿತ್ತನು.೨೪  ಎಂದು ಬೋಳಬಸವೇಶ್ವರರನ್ನು ಕುರಿತ ವಿವರ ಸಿದ್ಧನಂಜೇಶನು ಈ ಕೃತಿಯ ೧೬ನೇ ಸಂಧಿಯಲ್ಲಿ ಉಲ್ಲೇಖಿಸಿರುವ ವಿದ್ವಾಂಸರು ಅರ್ಥೈಸಿದ್ದಾರೆ, ಆದರೆ ತೋಂಟದ ಸಿದ್ದಲಿಂಗರನ್ನು ಕುರಿತ ಇತರೆ ಬೋಳಬಸವೇಶ್ವರನನ್ನು ತೋಂಟದ ಸಿದ್ದಲಿಂಗರ ಶಿಷ್ಯರಾದ ಬೋಳಬಸವೇಶರೆ ಎಂದು ಸ್ಮರಿಸುವಾಗ ಹಿಂದೆ ಅಥವಾ ಮುಂದಾಗಲಿ ತೋಂಟದ ಸಿದ್ಧಲಿಂಗರ ಹೆಸರನ್ನಾಗಲೀಹಾಗೆ ಕವಿಯು ಈ ಕೃತಿಯ ಹದಿನಾರನೆಯ ಸಂಧಿಯಲ್ಲಿ ಬೋಳಬಸವೇಶರ ಬಗೆಗೆ ಅಥವಾ ಶಿಷ್ಯ ಪರಂಪರೆಯ ಹೆಸರನ್ನಾಗಲೀ ಉಲ್ಲೇಖಿಸಿಲ್ಲ. ಇಲ್ಲಿ ಉಕ್ತವಾಗಿರುವ ಬೋಳಬಸವೇಶರು ತೋಂಟದ ಸಿದ್ಧಲಿಂಗರ ಶಿಷ್ಯರಾಗಿರದ ಬಿಜ್ಜಾವರ ಮಹಾನಾಡಪ್ರಭುಗಳ ರಾಜಗುರು ಬೋಳ ಬಸವೇಶರು ಎಂದೆನಿಸುತ್ತದೆ.೨೫ ಇಮ್ಮಡಿ ಚಿಕ್ಕಭೂಪಾಲನಅದನ್ನು ಗುರುಶಿಷ್ಯರ ಸಂಬಂಧ ಎಂಬಂತೆ 'ಗುರುರಾಜ ಚಾರಿತ್ರ'ದ ಹೇಳಿಕೆಯು ಸಾಂಗತ್ಯದಲ್ಲಿ ಬೋಳಬಸವೇಶ ಮತ್ತು ಇಮ್ಮಡಿ ಚಿಕ್ಕ ಭೂಪಾಲನ ವಿಷಯ ಇದ್ದು ಬೆಂಬಲಿಸಿದೆ. 'ಬೋಳ ಬಸವೇಶರು ಸಿದ್ಧಪುರದೊಳಗೆ ಮೂರ್ತಗೊಂಡು ಲಿಂಗವಾದರು'೨೬ ಎಂಬ ಹೇಳಿಕೆ ಮಹತ್ತರವಾದುದು ಏಕೆಂದರೆ `ನಿರಂಜನ ವಂಶರತ್ನಾಕರ' ಮತ್ತು 'ಮಹಾಲಿಂಗೇಂದ್ರವಿಜಯಗಳು' ಬೋಳಬಸವೇಶ್ವರರ ಗದ್ದುಗೆ ಮಧುಗಿರಿಯಲ್ಲಿದೆ. ಎಂದು ಹೇಳಿವೆ. ಈಗಿನ ಮಧುಗಿರಿಯಲ್ಲಿ ಬೋಳಬಸವೇಶ್ವರರ ಗದ್ದುಗೆ ಎಲ್ಲಿಯೂ ಕಂಡುಬರುವುದಿಲ್ಲ. ಈ ಎರಡು ಕೃತಿಗಳ ಹೇಳಿಕೆಯನ್ನು ಸಮರ್ಥಿಸಲು ಬಿ. ಶಿವಮೂರ್ತಿಶಾಸ್ತ್ರಿಗಳು ಸಿದ್ದಾಪುರವು ಹಿಂದಿನ ಕಾಲದಲ್ಲಿ ಮಧುಗಿರಿಯ ವಿಸ್ತರಣ ಗ್ರಾಮವಾಗಿತ್ತು. ಅಂದು ಕೊಂಡರೆ ನಿರಂಜನವಂಶರತ್ನಾಕರದ ಪ್ರಮಾಣ ಶುದ್ಧವಾಗುತ್ತದೆ. ಎಂದು ಲೇಖನವೊಂದರಲ್ಲಿ ಹೇಳಿದ್ದಾರೆ. ಈ ಹೇಳಿಕೆಯನ್ನು ಬೆಂಬಲಿಸುವಂತೆ ಈಗಲೂ ಮದ್ದಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಬೋಳಬಸವೇಶ್ವರ ಗದ್ದುಗೆ ಮತ್ತು ಬೋಳಬಸವೇಶ್ವರ ಮಠಗಳು ಇರುವುದನ್ನು ಕ್ಷೇತ್ರಕಾರ್ಯದ ನಿಮಿತ್ತ ಸಂದರ್ಶಿಸಿದಾಗ ತಿಳಿದುಬರುತ್ತದೆ.

೪.ಗುಮ್ಮಳಾಪುರದ ಸಿದ್ಧಲಿಂಗಯತಿ: ಗುಮ್ಮಳಾಪುರದ ಸಿದ್ಧಲಿಂಗಯತಿಯು ಶೂನ್ಯಸಂಪಾದನೆಯಲ್ಲಿ ತನ್ನ ಬಗೆಗೆ ` ಅನಾದಿ ಪರಶಿವ ತಾನೆ ಲೀಲಾ ಕ್ರೀಡೆಗೋಸ್ಕರ ಮರ್ತ್ಯಕ್ಕೆ ಬಿಜಯಂಗೈದ ಕರಚರಣ ಅವಯವಮಂ ಧರಿಸಿದ ತೋಂಟದ ಸಿದ್ಧೇಶ್ವರನ  ವರಪುತ್ರನಾಗಿ ಜಗಹಿತಾರ್ಥವಾಗಿ ಗುಮ್ಮಳಾಪುರದ ಸಿದ್ಧಲಿಂಗದೇವರೆಂಬ ನಾಮವಿಡಿದು ಮತ್ತು ಶ್ರೀಮದ್ದೇಶಿಕ ಚಕ್ರವರ್ತಿಯೆನಿಪಾ ಸತ್ನೀರ್ತಿಕಾಂತಂ ಬುಧಸ್ತೋಮಾಂಬೋನಿಧಿ ಪೂರ್ಣಚಂದ್ರನನಿಶಂ ಶ್ರೀ ತೋಂಟದಾರ್ಯಂಗೆ ಸತ್ಕೃತೀಯಂ ಬೆತ್ತಗದೂರ ಬೋಳಬಸವೇಶಾಚಾರ್ಯ ಕಾರುಣ್ಯದಿಂ ಭೌಮಂ ಸಿದ್ಧಲಿಂಗ ಪೇಳ್ದನೊಲವಿಂದೀ ಶೂನ್ಯಸಂಪಾದನೆಯಂ’ ಎಂದು ಹಾಗೂ ಕೃತಿಯ ಕೊನೆಯಲ್ಲಿ  ಅನಾದಿ ಪರಶಿವ ತಾನೆ ತೋಂಟದ ಸಿದ್ಧೇಶ್ವರದೇವರ ದಿವ್ಯಶ್ರೀಪಾದಕ್ಕೆ ಸಮರ್ಪಿಸಿದ ಶೂನ್ಯ ಸಂಪಾದನೆ ಎಂದು  ಹೇಳಿಕೊಂಡಿದ್ದಾನೆ.   ಜೊತೆಗೆ ಸಮಾಪ್ತಿ ಕಂದ ಪದ್ಯ 4 ರಲ್ಲಿ, ತೋಂಟದ ಸಿದ್ಧೇಶ್ವರನ ಪಾದಮೂಲದ ಬಳಿ ಕುಳಿತ ಗುಮ್ಮಳಾಪುರಾಧೀಶನಾದ ತಾನು ಮೀಟೆನಿಸುವ ವಚನಾಮೃತದೂಟವ(ಶೂನ್ಯ ಸಂಪಾದನೆಯನ್ನು) ಶರಣಜನರ ಕರ್ಣಕ್ಕಿತ್ತುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಕ್ರಿ.ಶ. 1580 ರ ಎಡೆಯೂರು ಶಿಲಾಶಾಸನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳ  ಜೊತೆಗೆ ಇದ್ದ ಇತರ ವಿರತರುಗಳ ಜೊತೆ ಗುಮ್ಮಳಾಪುರದ ಸಿದ್ಧಲಿಂಗರೂ ಇದ್ದರು ಎಂಬ ವಿವರ ಹಾಗೂ ಸಿದ್ಧನಂಜೇಶನ ರಾಘವಾಂಕ ಚರಿತದಲ್ಲಿಯ,  ತುಮಕೂರಿನಲ್ಲಿ ನಡೆದ  ತೋಂಟದ ಸಿದ್ಧಲಿಂಗರ ಮೆರವಣಿಗೆಯಲ್ಲಿ ಗುಮ್ಮಳಾಪುರದ ಸಿದ್ಧಲಿಂಗನೂ ಭಾಗವಹಿಸಿದ್ದನೆಂಬ ಹೇಳಿಕೆಯು ತೋಂಟದ ಸಿದ್ಧಲಿಂಗ ಯತಿಗಳ ಪರಂಪರೆಯವನು ಎಂಬುದನ್ನು ಸ್ಥಿರೀಕರಿಸುತ್ತದೆ.  ಜೊತೆಗೆ  ತುಮಕೂರು ಜಿಲ್ಲೆಯಲ್ಲಿ ದೊರೆತ ಜಕ್ಕಣಾರ್ಯ ಸಂಕಲಿತ ಏಕೋತ್ತರ ಶತಸ್ಥಲ ಹಸ್ತಪ್ರತಿಗೆ ಸಂಬಂಧಿಸಿದ ಪುಷ್ಪಿಕೆಯ ಆದಿಯಲ್ಲಿ   

 ಶ್ರೀ ಗುಮಳಾಪುರ ಸಿದ್ಧಲಿಂಗಾಯ ನಮಃ| ಯೆಕೋತ್ತರ ಸ್ವರವಚನ| 

 ಪಿಂಡಸ್ಥಲ ರಾಗಮಧುಮಾಧವಿ ಬಿಂದು-ವಿನ್ನಾಣದೊಳಗಂದವಿಟ್ಟಿಹ..........ಎಂದು 

ಅಂತ್ಯದಲ್ಲಿ......ಹೆಬ್ಬೂರ ದೇವರು ಬರದ್ದು ಗುರುಲಿಂಗವೇ ಗತಿ, ಮತಿ, ಶುಭಮಸ್ತು, ನಿರ್ವಿಘ್ನಮಸ್ತು ಗುಮ್ಮಳಾಪುರದ ಸಿದ್ಧಲಿಂಗದೇವರ ಪಾದವೆ ಗತಿ ಮತಿ ಅಯ್ಯ.......ಗುಂಮಳಾಪುರಾಧಿಪ ಸಿದ್ಧಲಿಂಗಾಯ ನಮಃ  ಎಂದಿದೆ. ಹಾಗೆಯೇ ಅದೇ ಕಟ್ಟಿನಲ್ಲಿಯ ಕೊನೆಯ ನಾಲ್ಕುಗರಿಗಳಲ್ಲಿ ವಾರ್ತೆ ಸೋಮಣ್ಣನ `ಪಂಚೀಕರಣ ಪದಗಳು' ಪರಿವರ್ಧಿನಿಷಟ್ಪದಿಯ ಕೃತಿಯ ಆದಿಯಲ್ಲಿ ಶ್ರೀಗುರುಗುಮ್ಮಳಾಪುರ ಸಿದ್ಧಲಿಂಗಾಯ ನಮಃ ಎಂದಿದೆ.  ತುಮಕೂರು ಜಿಲ್ಲೆಯ ಈ ಹಸ್ತಪ್ರತಿ ಪುಷ್ಟಿಕೆಗಳಲ್ಲಿಯ ಉಲ್ಲೇಖಗಳು ಶೂನ್ಯ ಸಂಪಾದನಾಕಾರ ಗುಮ್ಮಳಾಪುರ ಸಿದ್ಧಲಿಂಗಯತಿಗೂ ತೋಂಟದಸಿದ್ಧಲಿಂಗಯತಿಗಳ ಶಿಷ್ಯ ಪರಂಪರೆಯವನು ಎಂಬುವುದಕ್ಕೆ ಪುರಾವೆಯನ್ನು ಒದಗಿಸುತ್ತದೆ.

೫.ಗೂಳೂರು ಸಿದ್ಧವೀರಣ್ಣೊಡೆಯರು :  ಗೂಳೂರು ಸಿದ್ಧವೀರೇಶ್ವರದೇವರು ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾದ ನಾಗವಲ್ಲಿಯ ಬೋಳಬಸವರ ಶಿಷ್ಯರಾಗಿದ್ದು, ಐದನೆಯ ಶೂನ್ಯಸಂಪಾದನೆಯ ಸಂಕಲನಕಾರರಾಗಿದ್ದಾರೆ.  ಗುಮ್ಮಳಾಪುರದ ಸಿದ್ಧಲಿಂಗರ ಪ್ರಭಾವ ತನ್ನ ಮೇಲೆ ಆಗಿರುವ ಬಗೆಗೆ ಸ್ವತಹ ಗೂಳೂರುಸಿದ್ಧವೀರಣ್ಣೊಡೆಯನೇ ಕೃತಿಯ  ಕೊನೆಯಲ್ಲಿ ಉಲ್ಲೇಖಿಸಿದ್ದಾನೆ.  ಗೂಳೂರುಸಿದ್ಧವೀರಣ್ಣೊಡೆಯನು ತನ್ನ ಕೃತಿಯ ಸಮಾಪ್ತಿ ವಾಕ್ಯದಲ್ಲಿ ಬರುವ ಗದ್ಯಭಾಗ ಮತ್ತು  ಅನಂತರ ಬರುವ ಮೂರು ವೃತ್ತ ಮತ್ತು ಕಂದಪದ್ಯಗಳಲ್ಲಿ ತನ್ನ ಕೃತಿ ಬಗ್ಗೆ ಮತ್ತು ಗುರುಪರಂಪರೆಯ ಬಗೆಗೆ ವಿಸ್ತಾರವಾಗಿ ಹೇಳಿಕೊಂಡಿದ್ದಾನೆ.  ಇವರು ಬೋಳಬಸವೇಶ್ವರರಾದ ಮೇಲೆ ಅನುಕ್ರಮವಾಗಿ ಶೂನ್ಯಪೀಠದ ಗಾದಿಗೇರಿದವರು. ಇವರು ಶೂನ್ಯಸಂಪಾದನೆಯ ಪರಿಷ್ಕರಣವನ್ನು ಕೈಗೆತ್ತಿಕೊಂಡಿದ್ದು ಗಮನಾರ್ಹವಾದುದಾಗಿದೆ. ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯನ್ನು ಆಧಾರವಾಗಿಟ್ಟು ಕೊಂಡು `ಇಲ್ಲಿ ವಚನಕ್ರಮ ತಪ್ಪಿದಡೆ ನಿಮ್ಮ ಪರಿಜ್ಞಾನದಿಂದ ತಿದ್ದಿಕೊಂಬುದೆಂದು ಎನಲಾಗಿ ಆ ವಾಕ್ಯವಿಡಿದು ಗುಮ್ಮಳಾಪುರದ ಸಿದ್ಧಲಿಂಗದೇವರು, ಅಲ್ಲಿ ಸಿದ್ಧರಾಮಯ್ಯದೇವರಿಗೆ ದೀಕ್ಷಾಕ್ರಮವಿಲ್ಲದಿರಲು, ಬಸವಾದಿ ಪ್ರಮಥರ ವಚನ ಪ್ರಸಿದ್ಧವಾಗಿ ಸೇರಿಸಿದರು. ಆ ಪರಿಯಲೆ ಅನಿರ್ವಾಚ್ಯ ಪರಂಜ್ಯೋತಿಸ್ವರೂಪ ಷಟ್‍ಸ್ಥಲ ಸಂಪನ್ನ ಷಡುಲಿಂಗಾಂಗಭರಿತ,ಶರಣ ಜನಬಾಂಧವ, ಶರಣಜಲಹೃತ್ಕಮಲ ಕರ್ಣಿಕಾವಾಸ ಅನಾದಿ ಪರಶಿವನೆನಿಸುವ ಸಿದ್ಧಲಿಂಗೇಶ್ವರನ ಕೃಪಾಕಟಾಕ್ಷ ಪಾತ್ರರಾದ ಬೋಳಬಸವೇಶ್ವರನು, ಆ ಬೋಳಬಸವೇಶ್ವರನ ಮಹಾಜ್ಞಾನಾನುಭಾವ ಪ್ರಸನ್ನತಿಕೆಯಿಂದ ಗೂಳೂರು ಸಿದ್ಧವೀರಣ್ಣೊಡೆಯರು ಈ ಶೂನ್ಯಸಂಪಾದನೆಯಂ ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ತೋಂಟದ ಸಿದ್ಧಲಿಂಗನ ಶಿಷ್ಯನಾದ ಬೋಳಬಸವೇಶಾರ್ಯನ ಕರುಣೆಯಿಂದ ಈ ಕೃತಿಯನ್ನು ರಚಿಸಿದ್ದಾಗಿ ಹೇಳಿದರೂ ಕೊನೆಯ ಕಂದ ಪದ್ಯದಲ್ಲಿ ಈತ ತನ್ನನ್ನು ` ಗುರುತೋಂಟದ ಸಿದ್ಧೇಶನ ಚರಣಾಂಬೋಜಾತಮಂ ಸ್ಥಿರೀಕೃತ ಚಿತ್ತೋತ್ಕರ ಸಿದ್ಧವೀರಯೋಗೀಶ್ವರ ಎಂದು ಕರೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಿದ್ಧವೀರಣಾರ್ಯನು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯಪರಂಪರೆಯಲ್ಲಿಯೇ ಬಂದು ಅವರ ಪ್ರಶಿಷ್ಯರಾಗಿ ಗುಮ್ಮಳಾಪುರ ಸಿದ್ಧಲಿಂಗಯತಿಗಳ ತರುವಾಯ ಶೂನ್ಯಪೀಠದ ಅಧ್ಯಕ್ಷರಾಗಿದ್ದಾರೆ. ಈತನು ತನ್ನ ಗುರುವಿನ ಹೆಸರನ್ನು ಹೇಳುವಾಗ ತೋಟದ ಸಿದ್ಧಲಿಂಗರನ್ನು ಮತ್ತು ಬೋಳಬಸವರಿಬ್ಬರನ್ನು ಪ್ರಸ್ತಾಪ ಮಾಡುತ್ತಾನೆ. ಹೀಗಾಗಿ ತೋಂಟದ ಸಿದ್ಧಲಿಂಗ ಯತಿಗಳೂ ಗುರುಗಳು ಮತ್ತು ಬೋಳಬಸವೇಶರೂ ಗುರುಗಳಾಗಿದ್ದಾರೆ.  ತೋಂಟದ ಸಿದ್ಧಲಿಂಗಯತಿಗಳು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿದವರು. ಇವರು ವಚನರಚನೆ ಮತ್ತು ವಚನಸಾಹಿತ್ಯ ಸಂರಕ್ಷಣೆಯ ಜೊತೆಗೆ ಶೂನ್ಯಸಂಪಾದನೆಯ ಪರಿಷ್ಕರಣ ಹೊಸದಿಕ್ಕನ್ನು ಹಿಡಿಯಲು ಕಾರಣಕರ್ತರಾದವರು. 

ಕ್ರಿ.ಶ.1603ರಲ್ಲಿ `ಪಂಚಪ್ರಕಾರ ಗದ್ಯವನ್ನು ಶ್ರೀಮದ್ವೀರಶೈವಾಚಾರ ವಿಸ್ತಾರ ವೀರಮಾಹೇಶ್ವರಾಗ್ರಣಿ ವಿರಕ್ತ ಶಿಖಾಮಣಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದಪದ್ಮಕ್ಕೆ ಬಿಜ್ಜಾವರಪುರವರ ಗುರುಲಿಂಗ ಜಂಗಮಾಚಾರಾದಿವಾಚರಣ ಚಿಕ್ಕಭೂಪಾಲ ಭಕ್ತಿಯಿಂದೆ ಬರೆಯಿಸಿ ಸಮರ್ಪಿಸಿದರು' ಎಂಬ ಹಸ್ತಪ್ರತಿ ಪುಷ್ಪಿಕೆಯಿಂದ ಪಂಚಪ್ರಕಾರ ಗದ್ಯಗಳನ್ನು ಇಮ್ಮಡಿ ಚಿಕ್ಕಭೂಪಾಲ ಭಕ್ತಿಯಿಂದ ಬರೆಯಿಸಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದ ಪದ್ಮಕ್ಕೆ ಅರ್ಪಿಸಿರುವುದು ತಿಳಿದುಬರುತ್ತದೆ. ಈ ಪ್ರತಿಯ ಕಾಲೋಲ್ಲೇಖದ ಪ್ರಕಾರ ಕ್ರಿ.ಶ. 1603ರಲ್ಲಿ ಗೂಳೂರು ಸಿದ್ಧವೀರೇಶ್ವರ ದೇವರು ಜೀವಿಸಿದ್ದರು ಎಂಬುದು ತಿಳಿದುಬರುತ್ತವೆ.  ಇವರ ಶೂನ್ಯಸಂಪಾದನೆಯನ್ನು ವಿರಕ್ತ ತೊಂಟದಾರ್ಯ ಕ್ರಿ.ಶ,1616ರಲ್ಲಿ ಪ್ರತಿಮಾಡಿದ್ದಾರೆ. ಈ ಹಸ್ತಪ್ರತಿಯ ಪುಷ್ಟಿಕೆಯ ಕಾಲದ ಉಲ್ಲೇಖವು ತೋಂಟದ ಸಿದ್ಧಲಿಂಗಯತಿಗಳ ಕಾಲ ನಿರ್ಣಯಕ್ಕೆ ಆಕರವಾಗಿದೆ. ಇವರು ಸಂಕಲಿಸಿದ್ದ ಕೃತಿ ಶೂನ್ಯಸಂಪಾದನೆ ಇದು ಕೊನೆಯ ಮತ್ತು ಶ್ರೇಷ್ಠವಾದ ಸಂಪಾದನೆ. ಹೆಸರಿನ ಸೊಗಸು, ಅನುಭವದ ಆಳ, ತಂತ್ರ ಜೋಡಣೆಯಿಂದಾಗಿ ಇದು ಪಸರಿಪ ಕನ್ನಡಕ್ಕೆ ಆದಿ ಅಂತ್ಯ ಗದ್ಯ ವಚನಗಳ ಮಿಶ್ರಣವಾದ ಇದು ಒಂದು ಬಗೆಯ ಚಂಪು ಕೃತಿಯಾಗಿದೆ. ಜಾಗತಿಕ ಸಾಹಿತ್ಯದ ಮಟ್ಟದಲ್ಲಿ ನಿಲ್ಲುವ ತೋಂಟದಾರ್ಯ ಪರಂಪರೆಯ ವಿಶಿಷ್ಟ ಕಾಣಿಕೆಯಾಗಿದೆ. ಗುಮ್ಮಳಾಪುರದ  ಸಿದ್ಧಲಿಂಗ ಯತಿ ಮತ್ತು ಗೂಳೂರು ಸಿದ್ಧವೀರಣ್ಣೊಡೆಯರ ಆಲೋಚನೆ ರೂಪುಗೊಳ್ಳಲು ಸಿದ್ಧಲಿಂಗಯತಿಗಳು ಕಾರಣರಾಗಿದ್ದಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ಆಧಾರ. ವಾಸ್ತವವಾಗಿ ಅವರಿಬ್ಬರು ಇವರ ಶಿಷ್ಯರೆ. ಗುಮ್ಮಳಾಪುರ ಸಿದ್ಧಲಿಂಗಯತಿ ಅವರ ನೇರ ಶಿಷ್ಯ; ಸಿದ್ಧವೀರಣ್ಣೊಡೆಯ ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶಿಷ್ಯ ಇಬ್ಬರೂ ತೋಂಟದ ಸಿದ್ಧಲಿಂಗ ಯತಿಗಳನ್ನು ಭಕ್ತಿಯಿಂದ ಸ್ಮರಿಸಿದ್ದಾರೆ. 

೬.ಸ್ವತಂತ್ರ ಸಿದ್ಧಲಿಂಗೇಶ್ವರ : ತೋಂಟದ ಸಿದ್ಧಲಿಂಗ ಯತಿಗಳಿಗೆ ಸಿದ್ಧಲಿಂಗೇಶ್ವರ, ದೊಡ್ಡ ಸಿದ್ಧಲಿಂಗೇಶ್ವರ ಎಂಬ ಇಬ್ಬರು ಶಿಷ್ಯರು ಇದ್ದಂತೆ ತಿಳಿದು ಬರುತ್ತದೆ. ಸ್ವತಂತ್ರ ಸಿದ್ಧಲಿಂಗೇಶ್ವರರು ಇವರಲ್ಲಿ ಒಬ್ಬರಾಗಿರ ಬಹುದೆಂದು ತೋರುತ್ತದೆ.

ವಿರೂಪಾಕ್ಷ ಪಂಡಿತಾರಾಧ್ಯನು ತನ್ನ ಚೆನ್ನಬಸವ ಪುರಾಣದಲ್ಲಿ “ತೋಂಟದ ಸಿದ್ಧಲಿಂಗೇಶ್ವರ”ನ ಜೊತೆ ಸಂಚಾರ ಮಾಡಿದ ಚರ ಜಂಗಮಮೂರ್ತಿಗಳ ಒಂದು ಪಟ್ಟಿಯನ್ನು  ಕೊಟ್ಟಿದ್ದಾನೆ. ಸಿದ್ಧಲಿಂಗೇಶ್ವರ, ಕಂಬಾಳದೇವ, ಸಿದ್ಧನಂಜೇಶ್ವರ, ಚೆನ್ನದೇವ, ದೊಡ್ಡಸಿದ್ಧಲಿಂಗೇಶ್ವರ, ಕಂಕಣದೇವ, ಲಂಬಕರ್ಣದ ದೇವರು, ಸಿದ್ಧಮಲ್ಲೇಶ್ವರ, ಗುಮ್ಮಳಾಪುರದ ಶ್ರೇಷ್ಠ ಸಿದ್ಧಲಿಂಗೇಶ್ವರ, ಯಡತೊರೆ ಪುರದಗುರು, ಸಿದ್ಧವೀರಣ್ಣೊಡೆಯ, ಘನಲಿಂಗದೇವರು, ಚಿಕ್ಕಮಲ್ಲೇಶನು ತೋಂಟದ ಸಿದ್ಧಲಿಂಗೇಶ್ವರನ ಜೊತೆ ಸಂಚಾರ ಮಾಡುತ್ತಾ

ಇಂತಿವರ್ ಮೊದಲಾದ ನಿರತರೇಳ್ನೊರ್ವರುಂ

ಸಂತತಂಗೂಡಿ ಷಟ್ಥ್ಸಲಮಾರ್ಗಮಂ ಧರೆಯೊ

ಳಂತರಿಸದಂತೆ ನೆಲೆಗೊಳಿಸುತ್ತೆ ಪೂಜೆಗೊಳುತಿರದೆ ನಿಜಮುಕ್ತರಾದರು 

ಈ ರೀತಿಯಲ್ಲಿ ಇವರೇ ಮೊದಲಾದ ಏಳನೂರು ಮಂದಿ ವಿರಕ್ತರು ಸದಾಕಾಲ ಜೊತೆಯಲ್ಲಿದ್ದು ಷಟ್ಸ್ಥಲಮಾರ್ಗ ಭೂಮಿಯಲ್ಲಿ ಅಳಿಸಿಹೋಗದಂತೆ ನೆಲೆಗೊಳಿಸುತ್ತಾ ಪೂಜೆ ಮಾಡಿಕೊಳ್ಳುತ್ತ ಮುಕ್ತರಾಗುತ್ತಾರೆ.

ಪ್ರೊ.ಸಿ. ಮಹಾದೇವಪ್ಪನವರು ಚೆನ್ನಬಸವಪುರಾಣದ ಮೇಲೆ ಉಲ್ಲೇಖಿಸಿದ ಪದ್ಯದಲ್ಲಿ ಉಲ್ಲೇಖಗೊಂಡಿರುವ ಸಿದ್ಧಲಿಂಗೇಶ್ವರನೆ “ಸ್ವತಂತ್ರ ಸಿದ್ಧಲಿಂಗೇಶ್ವರ ಎಂದು ನಿರ್ಧರಿಸಿದ್ದಾರೆ. ಅವರು ಆ ರೀತಿ ನಿರ್ಧರಿಸಲು ಕಾರಣ ಮುಕ್ತ್ಯಾಂಗನ ಕಂಠಮಾಲೆ ಮತ್ತು ಜಂಗಮ ರಗಳೆಯ ಉಲ್ಲೇಖಗಳು “ಮುಕ್ತ್ಯಾಂಗನ ಕಂಠಮಾಲೆ” ಕೃತಿಯ ಪ್ರಾರಂಭದಲ್ಲಿದೆ.

ಶ್ರೀಗುರುಬಸವಲಿಂಗಾಯ ನಮಃ|ಶ್ರೀ ಗುರುವಿರೂಪಾಕ್ಷಲಿಂಗಾಯ ನಮಃ

ಸ್ವತಂತ್ರ ಸಿದ್ಧಲಿಂಗೇಶ್ವರಸ್ವಾಮಿಯವರು ನಿರೂಪಿಸಿದ ಮುಕ್ತ್ಯಾಂಗನಾಕಂಠಮಾಲೆ

ಶ್ರೀ ಗುರುಸ್ವತಂತ್ರ ಸಿದ್ಧಲಿಂಗೇಶ್ವರರಾಯ ನಮಃ೩೧

ಎಂದು ಬರೆದಿದ್ದು ತದನಂತರ ೨೧ ಸ್ವತಂತ್ರ ಸಿದ್ಧಲಿಂಗೇಶ್ವರರ ವಚನಗಳಿಗೆ ವಿಸ್ತೃತವಾದ ಟೀಕೆ ಇದೆ. 

ಡಾ. ಎಚ್.ಪಿ. ಮಲ್ಲೇದೇವರು ಅವರು ವಿರಕ್ತ ತೋಂಟದಾರ್ಯನ ಸಿದ್ಧೇಶ್ವರ ಪುರಾಣದ ಸಂಧಿ ೧೫ ಪದ್ಯ ೪೨ರಲ್ಲಿ ಉಲ್ಲೇಖಗೊಂಡ ದೊಡ್ಡಸಿದ್ದೇಶನೇ ಸ್ವತಂತ್ರ ಸಿದ್ಧಲಿಂಗೇಶ್ವರ ಇರಬೇಕು ಎಂದು ಊಹಿಸಿದ್ದರು. ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ “ಸ್ವತಂತ್ರ ಸಿದ್ಧಲಿಂಗೇಶ್ವರನ ಕೃತಿಗಳು” ಸಂಪಾದಿಸಿರುವ ಡಾ. ಎಚ್.ಪಿ. ಮಲ್ಲೇದೇವರು ಪ್ರಸ್ತಾವನೆಯಲ್ಲಿ ಸ್ವತಂತ್ರ ಸಿದ್ಧಲಿಂಗೇಶ್ವರರ ಜೀವನ ಸಾಧನೆ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಅವರ ಒಟ್ಟು ಅಭಿಪ್ರಾಯ ದೊಡ್ಡ ಸಿದ್ಧಲಿಂಗೇಶ್ವರನೆ ಸ್ವತಂತ್ರ ಸಿದ್ಧಲಿಂಗೇಶ್ವರ ಎಂದಿದ್ದಾರೆ.

ಕಾಪನಹಳ್ಳಿ ಗವಿಮಠದ ಗದ್ದುಗೆ ಪೂಜೆ ಮಾಡುವವರು ಈಗಲೂ ಸಿದ್ಧಲಿಂಗೇಶ್ವರ ಗದ್ದುಗೆ ಎಂದೇ ಕರೆಯುತ್ತಾರೆ. “ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ” ಅಂಕಿತದಲ್ಲಿ ಒಟ್ಟು ೪೩೫( ಐದು ಹೆಚ್ಚಿನ ವಚನಗಳು)  ವಚನಗಳನ್ನು ಬರೆದಿರುವುದರ ಜೊತೆಗೆ, `ಜಂಗಮರಗಳೆ’ ಹಾಗೂ ವಚನ ಸಂಕಲನರೂಪದ ೨೧ ವಚನಗಳ “ಮುಕ್ತ್ಯಾಂಗನಾ ಕಂಠಮಾಲೆ”ಗಳನ್ನು ರಚಿಸಿದ್ದಾರೆಂದು ತಿಳಿದುಬರುತ್ತದೆ. ವೀರಶೈವ ಸಿದ್ಧಾಂತವನ್ನು ಬೋಧಿಸುತ್ತದೆ. ಸ್ವತಂತ್ರ ಸಿದ್ಧಲಿಂಗರ ಸ್ಥಳದ ಬಗೆಗೆ ಲಿಂ.ಡಾ.ಎಚ್.ಪಿ. ಮಲ್ಲೇದೇವರು ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಾಪನಹಳ್ಳಿಯಲ್ಲಿದ್ದು ಅಲ್ಲಿಗೆ ಸಮೀಪದಲ್ಲಿನ ಗಜರಾಜಗಿರಿಯಲ್ಲಿ ಈತನ ಸಮಾಧಿಯಿದೆಯೆಂದೂ ಅಲ್ಲಿ ಪ್ರತಿವರ್ಷ ಮಾಘ ಶುದ್ಧ ಪೂರ್ಣಿಮಾ ದಿನ ಜಾತ್ರೆ ನಡೆಯುತ್ತಿರುವುದಾಗಿಯೂ ತಿಳಿದುಬರುತ್ತದೆ. 

ಕಾಪನಹಳ್ಳಿ ಗಜರಾಜಗಿರಿಯಲ್ಲಿ ಇರುವ ಸ್ವತಂತ್ರ ಸಿದ್ಧಲಿಂಗೇಶ್ವರರ ವಿಗ್ರಹ ಇಷ್ಟಲಿಂಗಾನುಷ್ಠಾನ ಭಂಗಿಯದು. ಈ ಉತ್ಸವಮೂರ್ತಿಯನ್ನು `ಜಂಗಮೋದ್ಧರಣಿ’ ಪ್ರಕಾರ ಮಾಡಲಾಗಿದೆ. ಇಂತಹ ಉತ್ಸವಮೂರ್ತಿಗಳು ಗುಬ್ಬಿ, ಎಡೆಯೂರು, ಕಗ್ಗೆರೆ, ಸಿದ್ಧಗಂಗೆ, ಹುಲಿಕಲ್ಲು ಮುಂತಾದ ಮಠ, ದೇವಾಲಯಗಳಲ್ಲಿ ಇದೆ. 

೭.ಘನಲಿಂಗ ದೇವ : ಮೋಹದ ಚನ್ನಮಲ್ಲಿಕಾರ್ಜುನ ಅಂಕಿತದ ವಚನಗಳ ಘನಲಿಂಗಿ ದೇವ ಅವರ ೬೩+೩ ವಚನಗಳು ಉಪಲಬ್ದವಿದೆ. ಈತ ಮೈಸೂರು ಜಿಲ್ಲೆಯಲ್ಲಿನ ಕಪಿಲಾ ನದಿತೀರದಲ್ಲಿರುವ ಶ್ರೀ ಸುತ್ತೂರು ವೀರ ಸಿಂಹಾಸನದ ಪೀಠಾಧಿಪತಿಯಾಗಿದ್ದರು. ವಚನವೊಂದರಲ್ಲಿ ಸುತ್ತೂರು ಸಿಂಹಾಸನದ ಪರ್ವತ ದೇವರ ಶಿಷ್ಯರು ಬಂಡಾರಿ ಬಸವೊಪ್ಪೊಡೆಯ ದೇವರು ಇತ್ಯಾದಿ ತನ್ನ ಹಿಂದಿನ ಗುರು ಪರಂಪರೆಯನ್ನು ಸ್ಮರಿಸಿದ್ದಾನೆ. ಇವರ ಶಿಷ್ಯರು ಕೂಗಲೂರ ನಂಜಯ್ಯ ದೇವರು. ಅಲ್ಲದೆ ಪರಮಾರಾಧ್ಯ ತೋಂಟದಾರ‍್ಯರು ಘನಲಿಂಗಿ ಎಂಬ ನಾಮಕರಣವನ್ನು ತನಗೆ ಮಾಡಿದಿದ್ದುದಾಗಿ ತಿಳಿಸಿದ್ದಾರೆ.೭ ವಿರೂಪಾಕ್ಷ ಪಂಡಿತರು ೧೯೮೪ರ ಚನ್ನಬಸವ ಪುರಾಣ (೬೩-೪೭)ರಲ್ಲಿ ವಿರಕ್ತ ತೋಂಟದಾರ‍್ಯ (೧೬೧೬) ಮತ್ತು ಸಿದ್ಧೇಶ್ವರ ಪುರಾಣ (೧೫೪೬)ದಲ್ಲೂ ನಿರಂಜನ ವಂಶರತ್ನಾಕರಗಳಲ್ಲಿ ಘನಲಿಂಗಿ ದೇವನೆಂದು, ತೋಂಟದಾರ‍್ಯರ ಶಿಷ್ಯ ಪರಂಪರೆಯವನೆಂದು ಉಲ್ಲೇಖಗೊಂಡಿದೆ. ತುಮಕೂರಿನಲ್ಲಿ ಸಿದ್ದಲಿಂಗ ಸ್ವಾಮಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ ಸರಳ ಜೀವಿ ಶರಣ ಮತ್ತು ವಿದ್ವಾಂಸ ಎಲ್ಲರೊಡನೆ ಸಹನೆಯಿಂದ ವರ್ತಿಸುವ ಈ ಘನಲಿಂಗಿಯವರು ಸಮುದಾಯದಲ್ಲಿ ಒಬ್ಬರು. ಅವರ ಆಗಿನ ವ್ಯಕ್ತಿತ್ವ ಚಿತ್ರಣವನ್ನು ಎಳೆ ಎಳೆಯಾಗಿ ಎಲ್ಲರಿಗೂ ಮನದಟ್ಟು ಆಗುವ ಹಾಗೆ ಆತನ ತ್ರಿಭಾವದ ತ್ರಿಕರಣವನ್ನು ಸ್ಥೂಲ ಸೂಕ್ಷ್ಮ ಕಾರಣವಾದ ಶರೀರವನ್ನು ಆತನ ವಿದ್ವತ್ ಶಕ್ತಿಯನ್ನು ವಿರಕ್ತ, ತೋಂಟದಾರ‍್ಯ ಈ ರೀತಿ ಚಿತ್ರಿಸಿದ್ದಾರೆ. `ಉರೆ ಕೃಷ್ಣಕಂಬಳದ ಪುಡೆದುತ್ತ ಮಾಂಗವಂ

ನೆರೆ ಮುಂಡಿತಂಗೆಯ್ದು ಕರತಲದ ಲಿಂಗದೊಳ್ 

ಬೆರಗುವಡೆದಿತರೇತರವನರಿಯದಿರ್ಪ ನಿಚ್ಚಳ ವಿರತʼ೮

ಘನಲಿಂಗಿ ದೇವ ತೋಂಟದ ಸಿದ್ಧಲಿಂಗ ದೇವರ ಕಿರಿಯ ಸಮಕಾಲೀನ. ಸಿದ್ಧಲಿಂಗರು ಕ್ರಿ.ಶ.೧೫೬೧ರಲ್ಲಿ ಜೀವಂತರಾಗಿದ್ದರು ಎನ್ನುವ ಅಂಶ ಶಾಂತೇಶನ ಸಿದ್ದೇಶ್ವರ ಪುರಾಣದಲ್ಲಿ ತಿಳಿದು ಬರುತ್ತದೆ. ೧೫೧೪ರಲ್ಲಿ ನಂಜನಗೂಡಿನ ೩ ಶಿಲಾಶಾಸನಗಳಲ್ಲಿ೯ ಈತನ ಪ್ರಸ್ತಾಪವಿದೆ. ಘನಲಿಂಗಿ ದೇವ ೧೬ನೇ ಶತಮಾನದ ಪೂರ್ವೋತ್ತರ ಕಾಲಮಾನದಲ್ಲಿ ಬದುಕಿ ಬಾಳಿದ್ದಾನೆ. ಈತನ ಸಮಾಧಿಯು ತೋಂಟದ ಸಿದ್ಧಲಿಂಗರು ತಪೋನುಷ್ಠಾನಗೊಂಡಿದ್ದ ಕಗ್ಗರೆಯಲ್ಲಿ ಇದೆ. ಇವರ ಅಂಕಿತ “ಘನಲಿಂಗಿ ಮೋಹದ ಚೆನ್ನ ಮಲ್ಲಿಕಾರ್ಜುನ” ಇವರ ಸಮಾಧಿಯು ಕಗ್ಗೆರೆಯಲ್ಲಿದೆ. ಸದ್ಯಕ್ಕೆ ಇವರ ೬೬ ವಚನಗಳು ಲಭ್ಯವಿವೆ.

ಗುರುನಂಜ : ಈತನು ಭಟ್ಟಭಾಸ್ಕರ ಕೃತ ಯಜುರ್ವೇದ ಭಾಷ್ಯಕ್ಕೆ ಕನ್ನಡ ಟೀಕೆಯನ್ನು ಬರೆದಿದ್ದಾನೆ. ಇವನ ಟೀಕೆ ಪ್ರೌಢವಾಗಿದೆ. ಇದಕ್ಕೆ “ರುದ್ರಭಾಷ್ಯ” ಎಂಬ ಹೆಸರಿರುವಂತೆ ತೋರಿಬರುತ್ತದೆ. “ಉಮಾಸ್ತೋತ್ರ ಷಟ್ಪದಿ”, “ಅಷ್ಟಾವರಣ ಸ್ತೋತ್ರ ಷಟ್ಪದಿ” ಎಂಬ ಎರಡು ಗ್ರಂಥಗಳು ದೊರೆಯುತ್ತವೆ. ಬಹುಶಃ ಇವು ಈ ಕವಿಯಿಂದಲೇ ಸಂಕಲಿತವಾಗಿರಬಹುದು. 

೮. ಗುಬ್ಬಿ ಮಲ್ಲಣಾರ್ಯ :

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಸ್ಥಾನ ಪಡೆದಿರುವ ತುಮಕೂರು ಜಿಲ್ಲೆಯ ಪ್ರಮುಖ ಕವಿಗಳಲ್ಲಿ ಒಬ್ಬನು. ಇವನು ಗುಬ್ಬಿಯ ಮಲ್ಲಣ್ಣನ ಮೊಮ್ಮಗ, ಈತನ ತಂದೆ ಗುರು ಭಕ್ತ, ತಾಯಿ ಸಪ್ಪೆಯಮ್ಮ, ಈತನ ಗುರು ಶಾಂತನಂಜೇಶ. “ಈತನ ಕಾಲ ಕ್ರಿ.ಶ. 1531. ಪ್ರಕಾಂಡ ಪಂಡಿತನೂ, ಬಹುಭಾಷಾ ಸಂಪನ್ನನೂ ಆಗಿದ್ದನು”.೪೪

ಬಸವ ಪುರಾಣದಲ್ಲಿ ನಿಷ್ಣಾತನಾಗಿದ್ದರಿಂದ ಬಸವ ಪುರಾಣದ ಮಲ್ಲಣಾರ್ಯ ಎಂಬ ಹೆಸರಿನಿಂದಲೇ ಕರೆಯಲ್ಪಟ್ಟ ಪ್ರಕಾಂಡ ಪಂಡಿತನೂ ಬಹುಭಾಷಾ ಸಂಪನ್ನನೂ ಆಗಿದ್ದನು. ಈತನು ೧.  ಭಾವಚಿಂತಾರತ್ನ, 2.ವೀರಶೈವಾಮೃತಮಹಾಪುರಾಣ, 3. ಪುರಾತನರ ರಗಳೆ ಕೃತಿಗಳನ್ನು ರಚಿಸಿದುದಾಗಿ ತಿಳಿದುಬಂದಿದೆ.

ತನ್ನ ಗುರು ಪರಂಪರೆಯನ್ನು ಪ್ರಸ್ತಾಪಿಸಿದ್ದಾನೆ. ಸಿದ್ಧಮಲ್ಲೇಶ ಕವಿಯು ಈತನ ದೀಕ್ಷಾ ಗುರುವಾದರೆ, ಗುಮ್ಮಳಾಪುರದ ಶಾಂತೇಶ ವಿದ್ಯಾಗುರು, ಜೊತೆಗೆ ನಾಗವಲ್ಲಿಯ ಶಿವಪೂಜೆಯಾರ್ಯ, ಸಪ್ಪೆಯ ಲಿಂಗಣಾಚಾರ್ಯ, ಶಿವಾನುಭವಿ ಹಲಗೆಯಾರ್ಯ ಮೊದಲಾದವರು ಈತನ ಕಾವ್ಯ ರಚನೆಗಳಿಗೆ ಗುರು ಸ್ಥಾನದಲ್ಲಿದ್ದುಕೊಂಡು ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಮಲ್ಲಣಾರ್ಯನು ತನ್ನ ಕಾವ್ಯಗಳಲ್ಲಿ ತನ್ನ ಪೂರ್ವಿಕರ ಹೆಸರುಗಳನ್ನು ಹಾಗೂ ಅವರ ಹಿರಿಮೆಯನ್ನು ಸ್ತುತಿಸಿದ್ದಾನೆ. ಅಮರಗುಂಡದ ಮಲ್ಲಿಕಾರ್ಜುನಾರ್ಯನ ನಿರೂಪದ ಮೇರೆಗೆ ಶೂಲವನ್ನೇರಿದ ಮಹಾಮಹೀಮನೊಬ್ಬನ ವಂಶದಲ್ಲಿ ಗುಬ್ಬಿಯ ಮಲ್ಲಣಾಚಾರ್ಯನೆಂಬುವನು ಜನಿಸುತ್ತಾನೆ. 

“ಮಲ್ಲಣಾರ್ಯನು ಭಾವಚಿಂತಾರತ್ನದ ಪ್ರಾರಂಭದಲ್ಲಿ ತನಗೆ ಪೂಜ್ಯರೆಂದು ಹೇಳಿ ಸಿದ್ಧಮಲ್ಲಿಕಾರ್ಜುನ (ಸಿದ್ಧಮಲ್ಲೇಶ), ಗೂಳುರು ಶಾಂತಿದೇವ, ಗುಮ್ಮಳಾಪುರದ ಶಾಂತೇಶ, ನಾಗವಲ್ಲಿಯ ಶಿವಪೂಜೆಯಾರ್ಯಾ, ಚಿಕ್ಕಬಸವಾಂಕ ಈ ಮೊದಲಾದ ಮಹನಿಯರನ್ನು ಸ್ತುತಿಸಿದ್ದಾನೆ”.

೧೧. ಶಾಂತೇಶ: ಸಂಸ್ಕೃತ ಭಾಷೆಯ ಪ್ರಕಾಂಡ ಪಂಡಿತರಾಗಿದ್ದರು. ತೋಂಟದ ಸಿದ್ಧಲಿಂಗ ಯತಿಗಳ ಬಗೆಗೆ ಗೌರವ ಭಾವನೆಯನ್ನು ಇಟ್ಟುಕೊಂಡು ಪರಂಪರೆಯನು ಮುಂದುವರೆಸಿಕೊಂಡು ಬಂದವನು. ಅದೇ ಮಾರ್ಗದಲ್ಲಿ ಈತನೂ ಕನ್ನಡ ಸಾಹಿತ್ಯಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾನೆ. ಈತನ ತಂದೆ ವೀರಶೈವಾಮೃತ ಪುರಾಣದಂತ ಧರ್ಮ ಗ್ರಂಥವನ್ನು ರಚಿಸಿದ್ದರೆ ಮತ್ತು ಸತ್ಯೇಂದ್ರಚೋಳನ ಕಥನ ಕಾವ್ಯ ರಚಿಸಿದ್ದ, ಮುತ್ತಾತ ವಚನ ಸಂಕಲನದ ಮೂಲಕ ಗಣಭಾಷಿತ ರತ್ನಮಾಲೆ ಕೃತಿ ರಚನೆಗಳ ಮೂಲಕ ಪ್ರಸಿದ್ಧಿಯಾಗಿದ್ದರು. ಹೀಗೆ ವೀರಶೈವವನ್ನೇ ಹಾಸಿ ಹೊದ್ದುಕೊಂಡಿದ್ದಂತಹ ಕುಟುಂಬದಲ್ಲಿ ಜನಿಸಿದ ಈತ ದಕ್ಷಿಣ ಕರ್ನಾಟಕದಲ್ಲಿ ಬಸವಾದಿ ಪ್ರಮಥರು ಸಿದ್ಧಪಡಿಸಿದ ವೀರಶೈವ ಲಿಂಗಾಯತ ಧರ್ಮವನ್ನು ಪುನರುಜ್ಜೀವನಗೊಳಿಸಲು ಹಗಲಿರುಳೂ ಶ್ರಮಿಸಿದ ತೋಂಟದ ಸಿದ್ಧಲಿಂಗಯತಿಗಳನ್ನು ಕುರಿತ ಚರಿತ್ರೆಯನ್ನು ಪುರಾಣ ಕಾವ್ಯದ ಮೂಲಕ ಹೇಳಿದ್ದಾನೆ. ಕವಿ ಶಾಂತೇಶನು ಸಿದ್ಧೇಶ್ವರ ಪುರಾಣವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾನೆ. ಇದು ಒಂದು ಸಾವಿರ ಪದ್ಯಗಳನ್ನು ಒಳಗೊಂಡಿದೆ. 

೧೨.ಕೆಸ್ತೂರ ದೇವ : ಕಾಲ ಹದಿನಾರನೆಯ ಶತಮಾನ. ಈತನು `ಗುರುಸಿದ್ಧಲಿಂಗ' ಎಂಬ ಅಂಕಿತವನ್ನು ಬಳಸಿ 

೧೦೦ ಸ್ವರ ವಚನಗಳನ್ನು ರಚಿಸಿದ್ದಾನೆ. ಈತನು ತೋಂಟದ ಸಿದ್ಧಲಿಂಗರ ಪರಂಪರೆಯವನಾಗಿದ್ದಾನೆ. ಈತನ ಸ್ಥಳ ತುಮಕೂರು ಜಿಲ್ಲೆಯ ಕೆಸ್ತೂರು ಆಗಿದೆ. ಈತನ ಸ್ವರವಚನಗಳನ್ನು ಎಂ.ಎಸ್. ಸುಂಕಾಪುರ ಸಂಪಾದಿಸಿ ೧೯೮೨ರಲ್ಲಿ ಪ್ರಕಟಿಸಿದ್ದಾರೆ.

೧೩. ವಿರಕ್ತ ತೋಂಟದಾರ್ಯ : ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದವನು. ಎಸ್. ಶಿವಣ್ಣನವರ 

ಪ್ರಕಾರ ಈತನ ಕಾಲ ಕ್ರಿ.ಶ. ೧೬೧೬. ಈತನ ಸಾಹಿತ್ಯ ದೃಷ್ಟಿ ವಿಪುಲ ಹಾಗೂ ವೈವಿದ್ಯಮಯವಾಗಿದೆ.ಸತ್ವ ಹಾಗೂ ಸಂಖ್ಯೆಯ ದೃಷ್ಟಿಯಿಂದಲೂ ಗಮನಾರ್ಹ ಎನಿಸಿವೆ. ವಿವಿಧ ವಸ್ತು ಹಾಗೂ ಛಂದೋಬಂಧಗಳಲ್ಲಿ ೨೪ ಕೃತಿಗಳನ್ನು ರಚಿಸಿದ್ದು ಪುರಾಣ, ಶತಕ, ರಗಳೆ, ನಿಘಂಟು, ನಾಮಾವಳಿ, ಟೀಕೆ, ಗದ್ಯ, ಚಂಪೂ, ಸ್ವರವಚನ, ಹಸ್ತಪ್ರತಿ ನಕಲು ಎಂದು ವಿಭಾಗಿಸಬಹುದು. ಈತನ ಸಮಾಧಿಯು ಮಧುಗಿರಿ ತಾಲ್ಲೋಕಿನ ಬೇಡತ್ತೂರಿನಲ್ಲಿರುವುದನ್ನು ಡಾ. ಬಿ. ನಂಜುಂಡ ಸ್ವಾಮಿಯವರು ಪತ್ತೆಹಚ್ಚಿದ್ದಾರೆ. 

೧. ಪುರಾಣಗಳು : ಶ್ರೀ ಸಿದ್ಧೇಶ್ವರ ಪುರಾಣ (ವಾರ್ಧಕ ಷಟ್ಪದಿ) ಪಾಲ್ಕುರಿಕೆ ಸೋಮೇಶ್ವರ ಪುರಾಣ (ವಾ.ಷ.)

೨. ಶತಕ : ನಿರಂಜನಲಿಂಗ ಶತಕ, ನಿರಂಜನ ಶತಕ, ಸಿದ್ಧಲಿಂಗೇಶ್ವರ ಶತಕ, ಸರ್ವಮಂಗಳೆ ಶತಕ 

(ಅಪ್ರಕಟಿತ). 

೩. ರಗಳೆ : ತೋಂಟದಾರ್ಯ ರಗಳೆ, ನೂತನ ಪುರಾತನರ ರಗಳೆ. 

೪. ನಿಘಂಟು : ಕರ್ನಾಟಕ ಶಬ್ದಮಂಜರಿ (ವಾರ್ಧಕ ಷಟ್ಪದಿ)

೫. ನಾಮಾವಳಿ : ಸ್ವರವಚನ : ೧. ಬಸವೇಶ್ವರನ ನೂರೆಂಟು ನಾಮ (ಕನ್ನಡ ಹಾಡು ಅಪ್ರಕಟಿತ), ೨. 

ಬಸವೇಶ್ವರನ ಸಹಸ್ರನಾಮ (ಸಂಸಪಿತ), ೩. ಶಿವ ಸಹಸ್ರನಾಮ (ಅಪ್ರಕಟಿತ), ೪. ದೇವಿ 

ಸಹಸ್ರನಾಮ, ೫. ಶರಣೆಯರ ನೂರೆಂಟು ನಾಮ, 

೬. ಪಿಂಡೋತ್ಪತ್ತಿ ಪದ (ಅಪ್ರಕಟಿತ). 

೬. ಟೀಕೆ : ಮನೋವಿಜಯ ತಾತ್ಪರ್ಯ ಚಂದ್ರಿಕೆ, ಶತಕತ್ರಯ ಟೀಕೆ, ಕೈವಲ್ಯಸಾರದ ಟೀಕೆ, 

ಪಂಚಗದ್ಯದ ಟೀಕೆ, ಶೈವ ಸಂಜೀವಿನಿ. 

೭. ಗದ್ಯ : ಅನಾದಿ ವೀರಶೈವ ಸಂಗ್ರಹ. 

೮. ಚಂಪು : ಚಿದಾನಂದ ಸಿಂಧು, ಷಟ್‌ಸ್ಥಲಜ್ಞಾನ ಚಿಂತಾಮಣಿ. 

೯. ಹಸ್ತಪ್ರತಿ ನಕಲು : ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯನ್ನು ಪ್ರತಿ ಮಾಡಿದ್ದಾನೆ.

ವಿರಕ್ತ ತೋಂಟದಾರ್ಯನು ವೀರಶೈವ ಸಿದ್ಧಾಂತ ಕ್ಷೇತ್ರಕ್ಕೆ, ಕಾವ್ಯ-ಛಂದಸ್ಸು ನಿಘಂಟು ಕ್ಷೇತ್ರಕ್ಕೆ, ಟೀಕೆ, ಕೋಶ ಕ್ಷೇತ್ರಕ್ಕೆ ಅದ್ವಿತೀಯವಾದ ಕೊಡುಗೆಯನ್ನು ಸಲ್ಲಿಸಿದ್ದಾನೆ. ದುರಾದೃಷ್ಟವಶಾತ್ ಈ ಕೃತಿಗಳ ಬಗೆಗೆ ಸರಿಯಾದ ಅಧ್ಯಯನ ನಡೆಯದ ಕಾರಣ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಈತನಿಗೆ ಸರಿಯಾದ ಸ್ಥಾನ ದೊರಕದೇ ಹೋಗಿದೆ. ಹೀಗೆ ತೋಂಟದಾರ್ಯರ ಶಿಷ್ಯರಿಂದ ಶಿಷ್ಯ ಪರಂಪರೆಯವರಿಂದ ಸ್ವತಂತ್ರ ವಚನಗಳು ಹುಟ್ಟಿ ವಚನ ಪರಂಪರೆಯ ಪುನರುಜ್ಜೀವನಗೊಳ್ಳಲು ಅನುವಾಯಿತು. 

೧೪.ಸೋಮಶೇಖರ ಶಿವಯೋಗಿ (ಕ್ರಿ.ಶ.೧೮೪೩)

ಉನ್ನತ ಮಟ್ಟದ ಟೀಕಾಕಾರನೂ, ಬೆಡಗಿನ ವಚನಗಳಿಗೆ ಟೀಕೆ ಬರೆಯುವುದರಲ್ಲಿ ವಿಶಿಷ್ಟಪರಿಣತಿ ಪಾಂಡಿತ್ಯವನ್ನು ಪಡೆದವನೂ ಆದ ಸೋಮಶೇಖರ ಶಿವಯೋಗಿ ಮುರಿಗಾ ಗುರುಸಿದ್ಧನ ನೇರ ಶಿಷ್ಯನಾಗಿದ್ದಾನೆ. ಈತನ ಕಾಲವನ್ನು ಕವಿ ಚರಿತ್ರೆಕಾರರು ಸುಮಾರು ೧೭೦೦ ಎಂದು ನಿರ್ಧರಿಸಿದ್ದರು. ಆದರೆ ತೋಂಟದ ಸಿದ್ಧಲಿಂಗರ ಕಾಲ ಈ ಬದಲಾಗಿರುವುದರಿಂದ ಅವರ ಶಿಷ್ಯಪರಂಪರೆಗೆ ಸೇರಿದ ಈತ, ತೋಂಟದ ಸಿದ್ಧಲಿಂಗರಿಂದ ಎಂಟನೆಯ ತಲೆಮಾರಿನವನಾಗುತ್ತಾನೆ. ಸದ್ಯಕ್ಕೆ ತೋಂಟದ ಸಿದ್ದಲಿಂಗರ ಕಾಲ ಕ್ರಿ.ಶ. ೧೫೮೦ ಎಂದಿಟ್ಟುಕೊಂಡಿದ್ದು, ಸೋಮಶೇಖರ ಶಿವಯೋಗಿಯ ಕಾಲ ಕ್ರಿ.ಶ.೧೮೦೦ ಆಗುತ್ತದೆ. ಈ ಮಾತಿಗೆ ಪೂರಕವಾಗಿ ಕೊಡಗುಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪರ ಮಠದಲ್ಲಿರುವ ಶಾಸನದ ವಿಷಯವನ್ನು ನೋಡಬಹುದು.ಈತನು ಸ್ವತಃ ತನ್ನ ಗುರುಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ.

“ಶ್ರೀ ಮನ್ನಿರಾಳ ನಿರಾಮಯ ನಿರಂಜನ ನಿಶೂನ್ಯ ನಿಕಲ ಪರಬ್ರಹ್ಮವು ತಿಳಿದುಪ್ಪವೆ ಹೆತ್ತುಪ್ಪವಾದಹಾಂಗೆ, ಸಚ್ಚಿದಾನಂದ ನಿತ್ಯಪರಿಪೂರ್ಣವೆಂಬ ಪಂಚಲಕ್ಷಣವನ್ನು ಗರ್ಭಿಕರಿಸಿಕೊಂಡು, ಘನೀಭೂತವಾಗಿ, ಅಖಂಡಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗದ ಲೀಲಾವಿಗ್ರಹಮೂರ್ತಿಗಳಾದ ತೋಂಟದ ಸಿದ್ಧಲಿಂಗೇಶ್ವರನೆಂಬ ದೇಶಿಕ ಶಿರೋಮಣಿ ಕರುಣಪ್ರಸಾದ ಪಾತ್ರರಾದ ಬೋಳಬಸವೇಶ್ವರನು, ಅವರ ಕರುಣಾ ಪ್ರಸಾದ ಪಾತ್ರರಾದ ಗೂಳೂರಸಿದ್ಧಲಿಂಗಯ್ಯನವರು, ಅವರ ಕರುಣಾ ಪ್ರಸಾಧ ಪಾತ್ರರಾದ ಗುಮ್ಮಳಾಪುರದ ಸಿದ್ಧವೀರಯ್ಯನವರು, ಅವರ ಕರುಣಾ ಪ್ರಸಾದ ಪಾತ್ರರಾದ ಗಗನದಯ್ಯನವರು, ಅವರ ದಯಾನುಗ್ರಹಕ್ಕೆ ಯೋಗ್ಯರಾದ ಕಟ್ಟಿಗೆಹಳ್ಳಿ ಸಿದ್ಧಲಿಂಗೇಶ್ವರರು, ಅವರನುಗ್ರಹಪಾತ್ರರಾದ ಮುರಿಗಾ ಶಾಂತವೀರೇಶ್ವರನು, ಅವರಿಂದನುಗ್ರಹವ ಪಡೆದ ಮುರಿಗಾ ಗುರುಸಿದ್ಧೇಶ್ವರನು ಹೀಂಗೆ ಗುರುಸಂಪ್ರದಾಯವಿಡಿದುಬಂದ ಬಸವಾದಿ ಪ್ರಮಥಗಣಂಗಳ ವಚನಾನುಭವವನು ಬೆಸಗೊಂಡ ಸೋಮಶೇಖರ ಶಿವಯೋಗಿ81 ಎಂದು ಹೇಳಿಕೊಂಡಿದ್ದಾನೆ. 

ಇದರಿಂದ ಈತ ಶ್ರೀಮಂತ ಗುರುಪರಂಪರೆಯಲ್ಲಿ ಬಂದ ಮಹಾ ಅನುಭಾವಿ, ಜ್ಞಾನಿಯಾಗಿದ್ದನೆಂಬುದು ಸ್ಪಷ್ಟವಾಗುತ್ತದೆ. ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಈತ ಇಮ್ಮಡಿ ಮುರಿಗಾ ಗುರುಸಿದ್ಧರ ನೇರ ಶಿಷ್ಯ ಎಂದು ಖಚಿತವಾಗಿ  ಹೇಳಬಹುದು.

    ಮುಂದೆ ಸಂಪಾದನೆಯ ಗುರುಲಿಂಗದೇವ, ಕಾವ್ಯ, ವಚನ, ಶಾಸ್ತ್ರಗಳಿಗೆ ವಾಖ್ಯಾನ, ಟೀಕೆ, ಟಿಪ್ಪಣಿ ಬರೆದುವೀರಶೈವ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ‘ಸಂಪಾದನ ಸಮಯ’ ಎಂಬುದೊಂದು ಈ ಪರಂಪರೆಯಲ್ಲಿ ಹುಟ್ಟಿಕೊಂಡು ನೂರೊಂದು ವಿರಕ್ತರ ನಂತರ ಬಸವಾದಿ ಪ್ರಮಥರ ವಚನ ಸಾಹಿತ್ಯವನ್ನು ರಕ್ಷಿಸುವ ಉಳಿಸುವ ಬೆಳೆಸುವ ಅದರ ಉದಾತ್ತತೆಯನ್ನು ಎತ್ತಿ ತೋರುವ ಕಾರ್ಯವನ್ನು ಸಾಂಘಿಕವಾಗಿ ತುಂಬ ಯಶಸ್ವಿಯಾಗಿ ನೆರವೇರಲು ಕಾರಣವಾಯಿತು. 

   ಇನ್ನು ಆಧ್ಯಾತ್ಮ ಕ್ಷೇತ್ರದತ್ತ ದೃಷ್ಟಿ ಹರಿಸಿದಾಗ ಅಲ್ಲಿಯೂ ಬೋಳಬಸವನ ಶಿಷ್ಯ ಪರಂಪರೆ ಅದ್ವೀತಿಯವಾದ ಕೆಲಸ ಮಾಡಿದುದು ಗಮನಕ್ಕೆ ಬರುತ್ತದೆ. ಗಗನಾರ್ಯನಿಂದ  ಮುಂದುವರೆದ ಈ ಪರಂಪರೆಯಲ್ಲಿ ಮುಂದೆ ಚಿಲಾಳ ಸಮಯ-ಮುರಿಗಾ ಸಮಯ-ಕುಮಾರ ಸಮಯ ಎಂಬ ಮೂರು ಶಾಖೆಗಳು ಹುಟ್ಟಿಕೊಂಡು ಒಂದೊಂದು ಶಾಖೆಗಳು ಸ್ವತಂತ್ರ ಪೀಠಗಳಾಗಿ ಬೆಳೆದು ಧಾರ್ಮಿಕ ಜಾಗೃತಿ, ವೀರಶೈವ ಧರ್ಮ ತತ್ವ-ಸಾಹಿತ್ಯ-ಸಿದ್ಧಾಂತಗಳ ಪ್ರಚಾರ, ತನ್ಮೂಲಕ ಮಾನವ ಕಲ್ಯಾಣವನ್ನು ನಿರಂತರವಾಗಿ ಮಾಡುತ್ತಾ ಸಾಗಿದವು. 

ತೋಂಟದ ಸಿದ್ಧಲಿಂಗ ಯತಿಗಳ ಪ್ರಶಿಷ್ಯ ಪರಂಪರೆಯ ಇತರೆ ಕವಿಗಳ ವಿವರಗಳು:

  ೧.ಗುರುಸಿದ್ಧದೇವ :

ಗುರುಸಿದ್ಧದೇವನ ವಚನಗಳ ಅಂಕಿತ, ಶ್ರೀಶೈಲ ಪರ್ವತದ ನೈರುತ್ಯ ದಿಕ್ಕಿನ ಕುಮಾರ ಪರ್ವತದ ಉತ್ತರ ದಿಕ್ಕಿನ ನಾಗರಗವಿಯೆ ಸಿಂಹಾಸನದ ಅಧಿಪತಿಯಾದ ಗುರುಸಿದ್ಧದೇವನದು ಬಹುಮುಖ ಪ್ರತಿಭೆ ಇವರು ವಚನಕಾರರಾಗಿ, ಸಂಕಲನಕಾರರಾಗಿರುವ ಇವರ ಪಾಂಡಿತ್ಯ ಅತ್ಯದ್ಭುತವಾದ ತತ್ವಜ್ಞಾನಿ. ವೀರಶೈವ ಧರ್ಮದ ಅಧ್ಯಯನ, ಆಳವಾದ ಅರಿವು ಶಬ್ದ ಮತ್ತು ಅರ್ಥಗಳಿಂದ ಕೂಡಿದ ಪ್ರತಿಭೆ, ನಿರೂಪಣೆಯನ್ನೊಳಗೊಂಡ ಅನುಭವದಿಂದ ಕೂಡಿದ್ದರು. ಇವರು ೧೬೦೦-೧೭೦೦ ಕಾಲದವರೆಂದು ಗುರುತಿಸಲಾಗಿದೆ. ಇವರು ತನ್ನ ಗುರುಪರಂಪರೆಯನ್ನು ಹೀಗೆ ಹೇಳಿ ಕೊಂಡಿರುವವರು. ಆದಿಗಣೇಶ್ವರ, ರುದ್ರಗಣೇಶ್ವರ, ಬಸವಪ್ರಭುದೇವರು, ಆದಿಲಿಂಗದೇವರು, ಚನ್ನಬಸವೇಶ್ವರ ದೇವರು, ತೋಂಟದ ಸಿದ್ಧೇಶ್ವರಸ್ವಾಮಿಗಳು, ಮರುಳಸಿದ್ಧೇಶ್ವರ, ನಿರಂಜನೇಶ್ವರ ಎಂಬುದಾಗಿ ಹೇಳಿಕೊಂಡಿವುದನ್ನು ನೋಡಿದರೆ ಇವರು ತೋಂಟದ ಸಿದ್ಧಲಿಂಗರ ಪ್ರಶಿಷ್ಯಪರಂಪರೆಗೆ ಸೇರಿದವರೆಂಬುದು ಸ್ಪಷ್ಟವಾಗುತ್ತದೆ.

ಈತನ ವಚನಗಳಲ್ಲಿ ಬರುವ ಪ್ರಮಥಗಣಂಗಳ ಸ್ವಾನುಭವ ಸೂತ್ರವೆಂದರೆ ಬಸವಾದಿ ಶರಣರ ವಚನಗಳು ಈ ೧೦೧ ವಚನಗಳು ಗುರುಸಿದ್ಧದೇವನ ವಚನಗಳೆಂದು ತಿಳಿಸಲಾಗಿದೆ. ಇಲ್ಲಿ `ಸಂಗನ ಬಸವೇಶ್ವರ’ ಎಂಬುದು ಗುರುಸಿದ್ಧದೇವನ ವಚನಗಳ ಅಂಕಿತ, `ಸಂಗನಬಸವೇಶ್ವರ’ ಎಂಬುದು ಗುರುಸಿದ್ಧದೇವನ ಶಿಷ್ಯನ ಹೆಸರು. ಅವನ ಹೆಸರನ್ನು ಸಂಭೋಧಿಸಿಯೇ ಎಲ್ಲ ವಚನಗಳನ್ನು ಹೇಳಲಾಗಿದೆ. ಅಂದು ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಸವಾದಿ ಶರಣರು ಅನುಭವ ಮಂಟಪದಲ್ಲಿ ನಡೆಸಿರುವ ಧಾರ್ಮಿಕ ಚರ್ಚೆಗಳ ಕುರಿತು ಪ್ರಸ್ತಾಪಿಸಿದ್ದಾನೆ. 

ಈತನು ತೋಂಟದ ಸಿದ್ದೇಶ್ವರ ನೂರೊಂದು ವಿರಕ್ತರು ಮುಂತಾದ ಮರ್ತ್ಯಲೋಕದ ಮಹಾಗಣಗಳನ್ನು ಹೇಳಿಸುವನು. ಹೀಗೆ ಗುರುಸಿದ್ಧೇವರು ವಚನಕಾರರು ಹಾಗೂ ೧೨ನೇ ಶತಮಾನದದಲ್ಲಿ ಎಲ್ಲಾ ವಿಚಾರಧಾರೆಗಳನ್ನು ಚರ್ಚಿಸಿರುವುದರಿಂದ ೧೨ ನೇಶತಮಾನದ ವಚನಕಾರರ ಪ್ರಭಾವಕ್ಕೆ ಒಳಗಾಗಿದ್ದಾರೆ. 

೨. ಘನಲಿಂಗದಯ್ಯ 

ಮಹಾಗುರುವಾದ `ಸಿದ್ದೇಶ್ವರ’ ಅಂಕಿತದಲ್ಲಿ ಘನಲಿಂಗಯ್ಯನ ಗದ್ಯಾತ್ಮಕವಾದ ದೀರ್ಘ ವಚನ ದೊರೆತಿರುವುದು. ಘನಲಿಂಗದಯ್ಯ ಎಂಬ ಹೆಸರು ಈ ವಚನಕಾರನ ಹೆಸರೇ ಅಲ್ಲವೇ ಎಂಬುದು ಅವನ ವಚನಗಳ ಕೊನೆಯಲ್ಲಿ ತಿಳಿದುಬರುತ್ತದೆ. “ ಕರ್ಪೂರದ ಗೊಂಬೆ ಬಂದು ಉರಿಯುವ ಗೊಂಬೆಯನ್ನ ಅಪ್ಪಿದಂತೆ, ಶರಣ ಬಂದು ಘನಲಿಂಗಮಂ ಅಪ್ಪದಂತೆ ಮಹಾಗುರು ಸಿದ್ದೇಶ್ವರನ ಚರಣವನ್ನು ಕರಸ್ಥಲದಲ್ಲಿ ಪಿಡಿದು ಪೂಜೆಯ ಮಾಡಲೊಡನೆ ಎನ್ನ ತನುವೆ ಪಂಚಬ್ರಹ್ಮ ಪ್ರಾಣ ಪರಬ್ರಹ್ಮವಾಯಿತು ಎಂದಿರುವುದನ್ನು ತಿಳಿದಾಗ ಈ ವಚನದ ಕರ್ತೃ ಘನಲಿಂಗದಯ್ಯ ಎಂದು ಊಹೆ ಮಾಡಲಾಗಿದೆ. ಈ ವಚನಕಾರನ ಬಗೆಗೆ ಹೆಚ್ಚು ವಿಚಾರ ತಿಳಿದು ಬಂದಿಲ್ಲವಾದರೂ, ಶರಣೂ ಬಾ ಮುಕ್ತಿಯ ಪುರಕ್ಕೆ (ಕೈಲಾಸಕ್ಕೆ) ಹೋಗುವಂತಹ ಒಂದು ಕಾಲ್ಪನಿಕ ಚಿತ್ರ ಒಟ್ಟಾರೆ ವಚನವನ್ನು ಆವರಿಸಿಕೊಂಡಿದೆ ಎಂದು ಭಾಸವಾಗಿದೆ.  

೩. ಶಂಕರ ದೇವ 

ಶಂಕರದೇವರವರು ಶರಣ ಸಂಬಂಧದ ಹಾಗೂ ವಿರಕ್ತಾಚರಣೆಯ ಭವನಗಳ ಸಂಕಲನಕಾರರು. ತೋಂಟದ ಸಿದ್ಧಲಿಂಗರವರ ವಚನಗಳ ಇವರ ವಚನಗಳಲ್ಲಿ ಕಾಣಿಸಿಕೊಂಡಿರುವುದರಿಂದ ಇವರ ಕಾಲವನ್ನು ೧೬ನೇ ಶತಮಾನ ಎಂದು ತಿಳಿಯಬಹುದು. ವಿರಕ್ತಾಚರಣೆಯ ವಚನಗಳನ್ನು ಪ್ರಥಮವಾಗಿ ಸಂಪಾದಿಸಿದವರು. ಮೈಸೂರಿನ ಪಿ.ಎಂ ಗಿರಿರಾಜು ಅವರು. ಇವರ ವಚನಗಳು ಗುರುಮಹಾತ್ಮೆ ಸ್ಥಲದಿಂದ ನಿಸ್ಸಂಗೈಕ್ಯ ಸ್ಥಲಾಂತ್ಯವಾಗಿ ೨೭ ಸ್ಥಳಗಳಿವೆ ಎಂದು ಗುರುತಿಸಿದ್ದಾರೆ. ೩೨ ಶಿವಶರಣೆಯರ ವಚನಗಳು  ಸೇರಿ ೧೭೫ ವಚನಗಳನ್ನು ಇಲ್ಲಿ ಕಾಣಬಹುದಾಗಿದೆ.

೫. ಸಂಪಾದನೆಯ ಬೋಳಬಸವ

ಇವನು ತೋಂಟದ ಸಿದ್ಧಲಿಂಗರ ಪರಂಪರೆಯಲ್ಲಿ ಬರುವ ಸಂಕಲನಕಾರ ಇವರು ಸಿದ್ಧವೀರನ ಶಿಷ್ಯರಾಗಿದ್ದವರು. ಸಂಪಾದನೆಯ ಪರ್ವತೇಶನ (೧೬೯೮) ಚಾತುರಾಚಾರ್ಯ ಚಾರಿತ್ರದಲ್ಲಿ ಸಂಪಾದನೆಯ ಚೆನ್ನಮಲ್ಲಿಕಾರ್ಜುನ, ಸಿದ್ಧಪುರದ ಬೋಳಬಸವ ಇಬ್ಬರೂ ಸಮಕಾಲೀನರು. ಇವರಿಬ್ಬರೂ ಒಬ್ಬರೇ ಗುರುವಿನಿಂದ ವಿದ್ಯೆಯನ್ನು ಕಲಿತವರೆಂದು ಉಲ್ಲೇಖಿಸಲಾಗಿದೆ. ಇವರು ಮುಂದೆ ಮಧುಗಿರಿಯ ಬಿಜ್ಜಾವರದ ಪಾಳೇಪಟ್ಟಿನ ರಾಜಗುರುವಾದನೆಂದೂ ತಿಳಿಸಲಾಗಿದೆ. ಸ್ವತಂತ್ರ ಸಿದ್ಧಲಿಂಗೇಶ್ವರರ ವಚನದ ಓಲೆಪ್ರತಿಯ ಆರಂಭದಲ್ಲಿ 'ಶ್ರೀಮದ್ಗುರು ಸಂಪಾದನೆಯ ಬೋಳಬಸವೇಶ್ವರಾಯನಮಃ' ಎಂದಿದೆ. 'ಪುರಾತನರ ವಚನಗಳು' ಕೃತಿಯ ಕೊನೆಯಲ್ಲಿ “ಶ್ರೀ ಷಟ್ಸ್ಥಲಚಕ್ರವರ್ತಿ ಸಾರ್ವಭೌಮರಪ್ಪ ಭಕ್ತಿಜ್ಞಾನ ವೈರಾಗ್ಯ ಪರಮಾನಂದೈಶ್ವರ್ಯಸಂಪನ್ನರುಮಪ್ಪ” ಸಂಪಾದನೆಯ ಬೋಳಬಸವೇಶ್ವರದೇವರು ಎನ್ನುವ ಉಲ್ಲೇಖವಿದೆ.

ಇವರು ರಚಿಸಿರುವ 'ಬಸವಸ್ತೋತ್ರದ ವಚನ' ಎನ್ನುವ ಸಂಕಲನಕೃತಿಯಲ್ಲಿ ೧೭ಮಂದಿ ಶರಣ|ಶರಣೆಯರ ೧೨೪ ವಚನಗಳಿವೆ. ಇವನ ಇನ್ನೊಂದು 'ಬಸವಸ್ತೋತ್ರದ ವಚನ ಎನ್ನುವ ಸಂಕಲನ ಕೃತಿಯಲ್ಲಿ ನಾಲ್ಕು ಮಂದಿ ಶರಣ/ಶರಣೆಯರ ೪೬ ವಚನಗಳಿವೆ. ಇವನ ಮತ್ತೊಂದು ಸಂಕಲನ ಕೃತಿಯಾದ 'ಷಟ್‌ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆ ವಚನಗಳು'ವಿನಲ್ಲಿ ೬೧ ಶರಣ/ಶರಣೆಯರ ೨೩೧ ವಚನಗಳಿವೆ. ಡಾ.ಬಿ. ನಂಜುಂಡಸ್ವಾಮಿಯವರು ಸಂಪಾದನೆಯ ಚೆನ್ನಮಲ್ಲಿಕಾರ್ಜುನನ ಸಮಕಾಲೀನ ಸಂಪಾದನೆಯ ಬೋಳಬಸವನೆಂದೂ ಇಬ್ಬರೂ ಒಬ್ಬರೇ ಗುರುವಿನಿಂದ ವಿದ್ಯೆ ಕಲಿತವರೆಂದೂ, ಸಂಪಾದನೆಯ ಬೋಳಬಸವನೇ ಮುಂದೆ ಮಧುಗಿರಿಯ ಬಿಜ್ಜಾವರದ ಪಾಳೇಪಟ್ಟಿನ ರಾಜಗುರುವಾದನೆಂದೂ, ಸಂಪಾದನೆಯ ಪರ್ವತೇಶ ಸಿದ್ಧಾಪುರದ ಬೋಳಬಸವನ ವಿಷಯವನ್ನು ಬರೆಯುವಾಗ 'ಸಂಪಾದನೆಯ' ಎಂಬ ವಿಶೇಷಣ ಸೂಚಿಸಿದ್ದಿದ್ದರೆ ಗೊಂದಲವೇ ಇರುತ್ತಿಲಿಲ್ಲವೆಂದೂ ಅಭಿಪ್ರಾಯಪಟ್ಟಿದ್ದಾರೆ.

೬. ಎಳಮಲೆಯ ಗುರುಶಾಂತದೇವ 

ಇವರ ಕಾಲ ಆರ್. ನರಸಿಂಹಾಚಾರ್ಯರ ಕರ್ನಾಟಕ ಕವಿಚರಿತೆಯಲ್ಲಿ  ೧೬೨೫ ಎಂದು ನಿರ್ಧರಿಸಿದವರು. ಆದರೆ ಇತ್ತೀಚಿನ ಹೊಸ ಶೋಧದ ಪ್ರಕಾರ ತೋಂಟದ ಸಿದ್ದಲಿಂಗನ ಕಾಲ ಕ್ರಿ.ಶ.೧೫೬೧ ಕ್ಕೆ  ಬಂದು ನಿಂತಿದೆ. ತೋಂಟದ ಸಿದ್ಧಲಿಂಗೇಶ್ವರನಿಂದ ಮೂರನೆಯ ತಲೆಮಾರಿನವನಾದ ಗುರುಶಾಂತದೇವನ ಕಾಲವನ್ನು ಈಗ ಸು. ೧೬೨೫ ಎಂದು ಹೇಳಬಹುದಾಗಿದೆ. ಅಂತರಿಕ ಆಧಾರಗಳ ಮೇಲೆ ಹೇಳುವುದಾದರೆ, ಶಾಂತೇಶನ (೧೫೩೧) ಸಿದ್ಧೇಶ್ವರಪುರಾಣದ ನಾಂದ್ಯ ಪದ್ಯಗಳನ್ನು ಸಂಕಲಿಸಿರುವ ಕಾರಣ ಇವನು ಗುಬ್ಬಿಯ ಶಾಂತೇಶನ ನಂತರದವನು. ಇವನು ಶಂಕರದೇವನ (ಸು.೧೫೮೦) ೧೦೧ ಕಂದಗಳ ಸಂಕಲಿಸಿರುವ ಕಾರಣ ಇವನು ಶಂಕರದೇವನ ನಂತರದವನು, ಗುರುಶಾಂತದೇವನು ಶೀಲವಂತಯ್ಯನ ತ್ರಿವಿದಿಗೆ ವ್ಯಾಖ್ಯಾನವನ್ನು ಬರೆದಿದ್ದು ಅವರಲ್ಲಿ ತನ್ನ ಗುರುಪರಂಪರೆಯನ್ನು ಹೀಗೆ ಹೇಳಿ ಕೊಂಡಿರುವನು.

ನಿರಂಜನ ಪರಂಜ್ಯೋತಿ ಸ್ವರೂಪಿ ತೋಂಟದ ಸಿದ್ಧಲಿಂಗಪ್ರಭು |

                  |

ಬೋಳ ಬಸವೇಶ್ವರ

                 |

ಹರತಾಳ ಚೆನ್ನಂಜೆದೇವರು

                 |

ಎಳೆಮಲೆಯ ಗುರುಶಾಂತ

ಚತುರಾಚಾರ್ಯ ಚಾರಿತ್ಯದ ಕರ್ತೃ ಸಂಪಾದನೆಯ ಪರ್ವತೇಶ್ವರನು ೧೬೭೮ ತನ್ನ ಗುರುಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ.

ತೋಂಟದ ಸಿದ್ಧಲಿಂಗ

ಬೋಳ ಬಸವೇಶ್ವರ

ಚನ್ನಾಚಾರ್ಯ(ಹರತಾಳ ಚನ್ನಂಜೆದೇವ)

ಏಳುಮಲೆಯ ಗುರುಶಾಂತದೇವ

             ಸಂಪಾದನೆಯ ಗುರುಲಿಂಗೇವ 

ತಮ್ಮ ಗುರು ಪಂಪರೆಯನ್ನು ಹೇಳುವಾಗ ಎಳೆಮಲೆಯ ಗುರುಶಾಂತ ದೇವನನ್ನು ಹೆಸರಿಸಿರುವನು. ಇವರನ್ನೇ ಎಳೆಮಲೆಯ ಗುರುಶಾಂತದೇವ, ಎಳೆಮಲೆಯ ಗುರುಶಾಂತಾಚಾರ್ಯ, ಎಳೆಮಲೆಯ ಗುರು ಶಾಂತಪಾಚಾರ್ಯ ಮುಂತಾಗಿ ಕರೆಯಲಾಗುತ್ತದೆ. ಈ ಹೆಸರುಗಳ ಪೂರ್ವಾದಲ್ಲಿ ಬರುವ ಎರಡು ವಿಶೇಷಣಗಳಲ್ಲಿ ಎಳೆಮಲೆಯ (ಇದು ಬಿಜಾಪುರದ ಜಿಲ್ಲೆಯದ್ದು) ಇಂದು ಅಲಮೇಲ ಗ್ರಾಮ ಎಂದು ಕರೆಸಿಕೊಂಡಿದೆ. `ಸಂಪಾದನೆಯ’ ಎಂಬುದು ಅವನ ಕಾಯಕವನ್ನು ತಿಳಿಸುತ್ತದೆ. ಎಳೆಮಲೆಯ ಗುರುಶಾಂತದೇವ ಕೇವಲ ಸಂಕಲನಕಾರನಾಗಿ ಕಂಡುಬರುವನು. ಅವನು ಸಂಕಲಿಸಿದ ಕೃತಿಗಳು ಈ ಕೆಳಕಂಡತಿವೆ.

೧. ಷಟ್ ಸ್ಥಲ ಸ್ತೂತ್ರದ ವಚನಗಳು (೧೨೦) 

೨. ಅಷ್ಟಾವರಣದ ವಚನಗಳು (೧೬೦)

೩. ಶರಣಸ್ತೋತ್ರದ ವಚನಗಳು (೧೧೦)

೪. ಮಿಶ್ರ ಸ್ತೋತ್ರದ ವಚನಗಳು (೧೦೮)

೫. ಕೊಂಡಗುಳಿ ಕೇಶಿರಾಜ ಮಂತ್ರ ಮಹತ್ವದ ಕಂದ (೧೧೦)

೬. ಲಿಂಗವಿಕಾಳಾವಸ್ಥೆಯ ವಚನಗಳು (೧೧೦)

೭. ಶಾಂತೇಶನ ಸಿದ್ದೇಶ್ವರ ಪುರಾಣದ ನಾಂದ್ಯ (ಭಾಮಿನಿ ಷಟ್ಪದಿಯ ೩೫ ಷಟ್ಪದಿಗಳು)

ಎಳೆಮಲೆಯ ಗುರುಶಾಂತದೇವನ ಆಸಕ್ತಿ ಸ್ತೋತ್ರ, ವಚನಗಳು ಷಟ್‌ಸ್ಥಲ ಸ್ತೋತ್ರ, ಶರಣ ಸ್ತೋತ್ರ ಮತ್ತು ಮಿಶ್ರಾಸ್ತೋತ್ರ, ಸಂಗ್ರಹದಲ್ಲಿ ಕಾಣಿಸಿಕೊಂಡಿವೆ. ಈತನು ಕೇಶಿರಾಜನ ೧೧೦ ಕಂದಪದ್ಯಗಳನ್ನು ಸಂಕಲಿಸಿರುವನು. ಇವನ ಬಗ್ಗೆ ಅನಾಮಿಕನೊಬ್ಬ ಬರೆದ ತಾರಾವಳಿಯೊಂದು ಪ್ರಕಟವಾಗಿದೆ. ಈತನ ತೋಂಟದ ಸಿದ್ಧಲಿಂಗ ಪರಂಪರೆಯವನು, ಈತನು ರಚಿಸಿರುವ ಕೃತಿಗಳು ಇಂತಿವೆ.

೧. ‘ಅಷ್ಟಾವರಣ ಸ್ತೋತ್ರದ ವಚನ’ ಒಂದು ಸಂಕಲನ- ೩೦. ಶರಣ ಶರಣೆಯರ ೧೬೧ ವಚನಗಳಿವೆ.

೨. ಮಿಶ್ರಾವರಣ ಸ್ತೋತ್ರ ವಚನ ೫೬. ಶರಣ ಶರಣೆಯರ ೧೧೮ ವಚನಗಳಿವೆ.

೨. ಲಿಂಗವಿಕಳಾವಸ್ಥೆ ವಚನ ೧೦. ಶರಣ ಶರಣೆಯರ ೧೧೦ ವಚನಗಳಿವೆ.

೩. ಶರಣಸ್ತೋತ್ರದ ವಚನಗಳು ೨೪. ಶರಣ ಶರಣೆಯರ ೧೧೦ ವಚನಗಳಿವೆ.

ಇತರ ಗ್ರಂಥಗಳು

೧. ಷಡುಸ್ಥಲ ಸ್ತೋತ್ರದ ವಚನ-೨೪, ಶರಣ ಶರಣೆಯರ ೧೨೯\೧೩೦ ವಚನಗಳಿವೆ.

೨. ಮಂತ್ರ ಮಹತ್ವದ ಕಂದ ೧೧೦. ಕೇಶಿರಾಜನ ಕಂದ ಸಂಕಲನ

೩. ಸಿದ್ದೇಶ್ವರ ಪುರಾಣದ ನಾಂದ್ಯ - ಶಾಂತೇಶ ೩೫ ಭಾಮಿನಿ ಷಟ್ಪದಿಗಳಿವೆ.

೪. ಮರುಳದೇವರ ಕಂದ ಮರಳ ದೇವನ ಸಂಕಲನ

೫. ಶಂಕರದೇವರ ಕಂದ ೧೧೧. ಕಂದಗಳ ಸಂಕಲನ

೬.    ವೀರಸಂಗಯ್ಯ

ಇವರ ಕಾಲ ಸುಮಾರು ೧೬೨೫ನೇ ಇಸವಿ ಮತ್ತು ಇವರು ಶಿವ ಮಹಿಮಾ ಸ್ತೋತ್ರ, ವಚನಗಳ ಸಂಕಲನೆಯನ್ನು ಮಾಡಿದ್ದಾರೆ. ಈ ಕೃತಿಯಲ್ಲಿ ೨೦ ವಿಭಾಗಗಳಿದ್ದು, ೨೨ ಶರಣ ಶರಣೆಯರ ೧೧೧ ವಚನಗಳಿವೆ.

೭. ಕಟ್ಟಿಗೆಹಳ್ಳಿ ಸಿದ್ಧಲಿಂಗ

ಇವರ ಕಾಲ ೧೬೨೫ನೇ ಇಸವಿ. ತೋಂಟದ ಸಿದ್ಧಲಿಂಗೇಶ್ವರನ ಪರಂಪರೆಯರಾದ ಇವರು ಶೂನ್ಯಸಿಂಹಾಸನಾಧೀಶ್ವರರಾಗಿದ್ದರು. ಇವರ ಊರು ಕಟ್ಟಿಗೆಹಳ್ಳಿ, ತಿಪಟೂರು ತಾಲ್ಲೂಕಿವ ಕಿಬ್ಬನಹಳ್ಳಿಯ ಅಡ್ಡರಸ್ತೆ ಬಳಿ ಇದೆ. ಇವರು ವ್ಯಯ ಸಂವತ್ಸರ ಆಶ್ವೇಜ ಸುದ್ಧ ಇರಲ್ಲು ಕಟ್ಟಿಗೆಹಳ್ಳಿ ದೇವರಿಗೆ ಬೈಚಣ್ಣೊಡೆಯರು ಮಹಾಲಿಂಗದೇವನ ಏಕೋತ್ತರ ಶತಸ್ಥಲ ಬರೆದು ಅರ್ಪಿಸಿದ್ದಾರೆ ಮತ್ತು ಸಾಧಾರಣ ಸಂವತ್ಸರ ಮಾರ್ಗಶಿರ ಶುದ್ಧ ಹುಣ್ಣಿಮೆ ಬಿದಿಗೆ ಶುಕ್ರವಾರ ಬಸವೇಶ್ವರ ವಚನ ಮತ್ತು ತೋಂಟದ ಸಿದ್ಧಲಿಂಗರ ಕೃತಿಗಳನ್ನು ಕಟ್ಟಿಗೆಹಳ್ಳಿ ಸ್ವಾಮಿ ಸಿದ್ಧಲಿಂಗಯ್ಯನವರಿಗೆ ಅರ್ಪಿಸಿದ್ದಾರೆ. ಇವರ ಸಮಾಧಿ ತಿಳವಳಿಯಲ್ಲಿದೆ.

'ಏಕೋತ್ತರಸಾರ'ವು ಏಕೋತ್ತರ ಶತಸ್ಥಲ ಪರಂಪರೆಯ ಒಂದು ಸಂಕಲನಗ್ರಂಥ. ಕಟ್ಟಿಗೆಹಳ್ಳಿ ಸಿದ್ಧಲಿಂಗನು ತೋಂಟದ ಸಿದ್ಧಲಿಂಗೇಶ್ವರರ (೧೫೬೧) ಶಿಷ್ಯ ಪರಂಪರೆಗೆ ಸೇರಿದವನು. ಚಿತ್ರದುರ್ಗ ಬೃಹನ್ಮಠದ ಮೂಲಕರ್ತೃಗಳಾದ ಮುರಿಗೆ ಶಾಂತವೀರಸ್ವಾಮಿಗಳು ಕಟ್ಟಿಗೆಹಳ್ಳಿ ಸಿದ್ಧಲಿಂಗರ (ಕಟ್ಟಿಗೆ ಸಂಗಮೇಶ್ವರರ) ಕರಕಮಲಸಂಜಾತರು.'ಕಟ್ಟಿಗೆ ತಾರಾವಳಿ'ಯ ಅಂತ್ಯ ಭಾಗದಲ್ಲಿ ಇಯಂ ಕಟ್ಟಿಗೆ ತಾರಾಳಿಃ ಮುರಿಗೇರಾಯ

ನಿರ್ಮಿತಾ ಸಂಗಮೇಶಾವತಾರಸ್ಯ ಸಿದ್ಧಲಿಂಗ ಜಗದ್ಗುರೋಃ |........” ಎಂದುಹೇಳಲಾಗಿದೆ (ಮುರಿಗೆ ಶಾಂತವೀರಸ್ವಾಮಿಗಳ ಕೃತಿಗಳು, ಸಂ. ಎಸ್.ಶಿವಣ್ಣ,ಪು.೨೮೨, ಶ್ರೀ ಬೃಹನ್ಮಠ ಸಂಸ್ಥಾನ, ಚಿತ್ರದುರ್ಗ, ೧೯೮೯).ಇವರ ಹೆಸರಿನಲ್ಲಿ ೪ ಕೃತಿಗಳು ಬಂದಿವೆ

೧. ಏಕೋತ್ತರ ಸಾರ

೨. ಮಡಿವಾಳಯ್ಯನವರ ಚರಿತ್ರೆ 

೩. ಸಂಪಾದನೆಯ ವಚನ

೪. ಸ್ವರ ವಚನಗಳು

ಏಕೋತ್ತರಸಾರದಲ್ಲಿ ಬಸವೋತ್ತರ ಯುಗದ ವಚನಕಾರರ ಸೇರ್ಪಡೆಯಾಗಿಲ್ಲ.

೧೩. ಕವಿಪವಾಡ: 

ಈತ ಬಿಜ್ಜಾವರದವನು ಇದು ಮಧುಗಿರಿ ಮಹಾನಾಡ ಪ್ರಭುಗಳ ರಾಜಧಾನಿಯಾಗಿತ್ತು. ಶರಣ ಸಾಹಿತ್ಯದ ನೆಲೆವೀಡು ಈತನ ಕಾಲವನ್ನು ಕ್ರಿ.ಶ. ಸು. 160೧ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈತ ತೋಂಟದ ಸಿದ್ಧಲಿಂಗನ ತಾರಾವಳಿಯನ್ನು ರಚಿಸಿದ್ದಾನೆ. ತಾರಾವಳಿಯ ಕೊನೆಯಲ್ಲಿ ಈತ ತನ್ನ ಹೆಸರನ್ನು ಹೇಳಿಕೊಂಡಿದ್ದಾನೆ. ಇದರಲ್ಲಿ ಪಲ್ಲವಿ ಮತ್ತು ಹನ್ನೊಂದು ನುಡಿಗಳಿವೆ. ತೆಲುಗು ಕಾಂಬೋಧಿ ರಾಗ ಎಂದು ಕವಿ ಸಷ್ಟಪಡಿಸಿದ್ದಾನೆ.

ಶಿವಕವೀಶ್ವರರ ಚರಣಾಂಘಿ ಸರಸಿಜಶೃಂಗ

ಕವಿಪವಾಡನಿಗಿಪ್ಪ ಫಲ ವರ

ಕವಿ ಪವಾಡನಿಗಿಪ್ಪ ಫಲವ

ಸುವಿಲಾಸದಿಂದೀನ ಎಡೆಯೂರ ಸ್ಥಿರ ಸದಾಶಿವ |

ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯದಲ್ಲಿ ಇಮ್ಮಡಿ ಚಿಕ್ಕೇಂದ್ರನನ್ನು ಪವಾಡದದೇವ ಹಸ್ತಾಂಭುಜದಾತ ಎಂದು ಕರೆಯಲಾಗಿದೆ. ಆದ್ದರಿಂದ ಈತನ ಕಾಲವನ್ನು ೧6ನೇ ಶತಮಾನದ ಉತ್ತರಾರ್ಧಭಾಗ ಎನ್ನಬಹುದು. ಅಂಕಿತ ಎಡೆಯೂರ ಸದಾಶಿವ. ಈ ತಾರಾವಳಿಯು “ವೀರಶೈವ ತಾರಾವಳಿ ಸಂಪುಟ'ದಲ್ಲಿ ಪ್ರಕಟವಾಗಿದೆ.

ಈ ತಾರಾವಳಿಯಲ್ಲಿ ಕವಿ ಪವಾಡನು ತನ್ನನ್ನು ಶಿವಗಂಗೆಯ ಅರಸ ಅನುಭಾವ ಸಿದ್ಧವಲ್ಲಭ ಎಂದು ಕರೆದುಕೊಂಡಿದ್ದು ತನ್ನ ಶಿವತತ್ವ ವಚನಾಮೃತವನ್ನು ಹಲವು ರೀತಿಯಲ್ಲಿ ಓದಿದರೆ ಕೇಳಿದರೆ ಪಠಿಸಿದರೆ ಭವದ ಬಂಧನ ನೀಗಿಕೊಳ್ಳುವದು ಎಂದಿರುವನು, ಅಷ್ಟೇ ಅಲ್ಲದೆ ತನ್ನನ್ನು ತಾನು ಶಿವಕವೀಶ್ವರ ಚರಣಾಂಘಿಸರಸಿಜಶೃಂಗ ಎಂದು ಕರೆದುಕೊಂಡಿದ್ದಾನೆ. ಕವಿಯು ತನ್ನ ತಾರಾವಳಿಯ ಪಲ್ಲವಿಯಲ್ಲಿ ತನ್ನ ಗುರುವಾದ ತೋಂಟದ ಸಿದ್ಧಲಿಂಗನನ್ನು ಹೀಗೆ ಸ್ತುತಿಸಿದ್ದಾನೆ. 

ಪರಮ ಪಾವನ ಪುಣ್ಯಚರಿತ ಭಕ್ತಾನಂದ

ಭರಿತ ಭಾವಪಾಶರಹಿತಶರಣ ಜನ ಪಾಲಸದ್ಗುಣಶೀಲ ಜಯಲೋಲ

ಗುರುವೇ ತೋಂಟದ ಸಿದ್ಧಲಿಂಗ ಜಗದ

ದ್ಗುರುವೆ ತೋಂಟದ ಸಿದ್ಧಲಿಂಗ # ಪಲ್ಲವಿ |

ಈ ಮೇಲಿನ ಪಲ್ಲವಿಯಲ್ಲಿ ಕವಿ ತೋಂಟದ ಸಿದ್ಧಲಿಂಗನನ್ನು ಗುರು, ಜಗದ್ಗುರು ಎಂದು ಕರೆದಿದ್ದಾನೆ. ಇದನ್ನು ನೋಡಿದರೆ ಪ್ರಾಯಶಃ ಕವಿ ಪವಾಡನು ಸಿದ್ಧಲಿಂಗ ಯತಿಗಳ ಶಿಷ್ಯನಾಗಿರಬಹುದು. ‘ಸಿದ್ಧೇಶ್ವರ ಪವಾಡರಗಳೆ’ಯಲ್ಲಿ ಪವಾಡಕ್ಕೆ ಮಹತ್ವ ನೀಡಿ ಒಂದೊಂದು ನುಡಿಯಲ್ಲಿ ಸಿದ್ಧಲಿಂಗನ ಒಂದೊಂದು ಪವಾಡವನ್ನು ಹೇಳಲಾಗಿದೆ. ‘ಇಂತು ಎಪ್ಪತ್ತೈದು ಮುಖ್ಯವಾದಂತ ಮಹಿಮೆದೋರಿ ಚಿಂತಿತಾರ್ಥವಿತ್ತು ಜಗವ ಸಲಹಿ ಮೆರೆದ ಸಿದ್ಧಲಿಂಗ’”  ಎಂದು ಹೇಳಿ ಕೃತಿ ಕಿರಿದಾದರೂ ಕವಿ ಎಪ್ಪತ್ತೈದು ಪವಾಡಗಳನ್ನು ತುಂಬಿಸಿದ್ದಾನೆ.

ತನ್ನ ಈ ತಾರಾವಳಿಯಲ್ಲಿ ಸಿದ್ಧಲಿಂಗನ ಪವಾಡಗಳನ್ನು ಕುರಿತು ಹೇಳಿದ್ದಾನೆ.

1) ಹೊಳಲುಗುಂದದ ಕಲ್ಲೇಶ್ವರ ದೇವಾಲಯದ ಕವಾಟವನು ಮಳೆ

ಬಂದ ವೇಳೆಯಲ್ಲಿ ತೆಗೆಸಿದ್ದು,

2) ಕಣ್ಣಿಲ್ಲದವಂಗೆ ಕಣ್ಣು ಕೊಟ್ಟಿದ್ದು, 3) ಹೂವಿಗಾಗಿ ಬೇಡಿದವರಿಗೆ

ಹೂವಿನ ಮಳೆ ಸುರಿಸಿದ್ದು, ಇವುಗಳ ಪ್ರಸ್ತಾಪವಾದ ಬಳಿಕ ಫಣಿರಾಜನ ಭೀಕರತೆಯನ್ನು ಕಂಡು ಜನರು ಕಂದಿದರು, ಕುಂದಿದರು ಬೆಚ್ಚಿದರು, ಬೆದರಿದರು ಉರುಗನ ಆರ್ಯಸಿಂಧುರ ಹುಲಿ, ಕರಡಿ ಸಂದಣಿಯು ಚೆಲ್ಲಿ ಓಡಿದವು. ಆಗ ಸಿದ್ಧಲಿಂಗ ಸುಶಂಕಪಾಲ ನಾಗೇಂದ್ರನನ್ನು ಮಣಿಯುವಂತೆ ಮಾಡಿ ಅರಣ್ಯಕ್ಕೆ ಕಳುಹಿಸಿ ಅವರಿಗೆ ಅಭಯ ನೀಡಿದ ವಿಚಾರವು ವಿವರವಾಗಿ ಮೂಡಿಬಂದಿದೆ. ಹೀಗೆ ಸಿದ್ದಲಿಂಗ ಯತಿಯು ಜನಪರ ಕಾರ್ಯವನ್ನು ಪವಾಡಗಳ ಮೂಲಕ ಆತ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾನೆ.

೮. ಗುರುಶಂಕರಸ್ವಾಮಿ

ಇವರ ಕಾಲ ಸು. ೧೬೨೫ನೇ ಇಸವಿ. ಇವರು ‘ಜ್ಞಾನಷಟ್ ಸ್ಥಲ ಸಾರ’ದ ಸಂಕಲನ ಮಾಡಿದ್ದಾರೆ. ಇವರ ಸಂಕಲನದಿಂದ ಶ್ರೀ ಮುಕ್ತಿರಾಮೇಶ್ವರ ಮತ್ತು ಮನಃಪ್ರಿಯ ಚೆನ್ನಬಂಕೇಶ್ವರ ಅಂಕಿತಗಳು ಬೆಳಕಿಗೆ ಬಂದಿವೆ.ಈ ಕೃತಿಯ ಪ್ರಾರಂಭದಲ್ಲಿ ತೋಂಟದಸಿದ್ಧಲಿಂಗರ ಸ್ತುತಿ ಇದೆ.

೯. ಚನ್ನವೀರಣ್ಣೊಡೆಯ

ಇವರ ಕಾಲ ಸು. ೧೬೫೦ನೇ ಇಸವಿ. ಇವನು ವೀರಶೈವ ಕವಿ. ೨೫೦ ವಚನಗಳ ಇರುವ ಗ್ರಂಥವನ್ನು ಜಿ.ಎ. ಶಿವಲಿಂಗಯ್ಯನವರು ಸಂಪಾದಿಸಿದ್ದಾರೆ. ಇವರ ಅಜ್ಞಾತ ಕೃತಿ ‘ಚನ್ನಬಸವೇಶ್ವರ ದೇವರ ಮಿಶ್ರಷಟ್ ಸ್ಥಲದ ವಚನ’ ಸಂಕಲನವು ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯ ಸರಸ್ವತಿ ಭಂಡಾರದಲ್ಲಿ ದೊರೆಯಿತು. ಇದರಲ್ಲಿ ಷಟ್‌ಸ್ಥಲಗಳಲ್ಲಿ ಒಂದೊಂದರಲ್ಲೂ ಆರರಂತೆ ಒಟ್ಟು ೩೬ ಸ್ಥಲಗಳ ವಿಭಜನೆ ಕಂಡುಬರುತ್ತವೆ. ಆದ್ದರಿಂದ ಇದನ್ನು ‘ಮಿಶ್ರ ಷಟ್ ಸ್ಥಲ’ ಎಂದು ಕರೆಯಲಾಗುತ್ತಿದೆ.

೧೦. ಚೆನ್ನವೀರಾಚಾರ್ಯ

ಇವರ ಕಾಲ ಕ್ರಿ.ಶ. ೧೬೫೦. ಇವರು ತೋಂಟದ ಸಿದ್ಧಲಿಂಗ ಪರಂಪರೆಗೆ ಸೇರಿದವರು. ಇವರು ‘ವಿಶೇಷಾನುಭವ ಷಟ್ಸ್ಥಲ’ ಮತ್ತು ‘ಶಿವಯೋಗ ಪ್ರದೀಪಿಕೆಗಳ’ ಸಂಕಲನ ಮಾಡಿದ್ದಾರೆ. ಈ ಎರಡು ಕೃತಿಗಳು ಶಿವಲಿಂಗದೇವ ಎಂಬ ಶಿಷ್ಯನಿಗೆ ಹೇಳಿದಂತೆ ವರ್ಣಿತವಾಗಿದೆ. ಇವರ ಸಂಕಲನದಿಂದ ಆನಂದ ಸಿಂಧುರಾಮೇಶ್ವರ, ಹಾಟಕೇಶ್ವರ ಲಿಂಗ ಮತ್ತು ಕಲ್ಲಯ್ಯದೇವರು ಎಂಬ ವಚನಾಂಕಿತಗಳು ಪ್ರಸಿದ್ಧಿಗೆ ಬಂದವು.

೧೧. ಜಟಾಶಂಕರ ದೇವ

ಇವರ ಕಾಲ ೧೬೫೦ನೇ ಇಸವಿಯಾಗಿದ್ದು, ಇವರು `ಚಿದ್ಭಸ್ಮ ಮಣಿ ಮಂತ್ರ ಮಹಾತ್ಮೆಯ ಸ್ಥಲದ ವಚನಗಳ ಕೃತಿಯನ್ನು ಸಂಕಲನ ಮಾಡಿದ್ದಾರೆ. ಇದರಲ್ಲಿ ತೋಂಟದ ಸಿದ್ಧಲಿಂಗರು ಹಾಗೂ ಇತರೆ ಶರಣರ ೪೪ ವಚನಗಳಿವೆ.

೧೨. ಮಹದೇವ ಯೋಗಿ

ಇವರ ಕಾಲ ೧೬೫೦ನೇ ಇಸವಿಯಾಗಿದ್ದು, ಇವರು `ತ್ರೈಲೋಕ್ಯ ಚಿಂತಾಮಣಿ’ ಕೃತಿಯ ಸಂಕಲನಕಾರ. ಈ ಕೃತಿಯು ‘ವೀರಶೈವ ಚಿಂತಾಮಣಿ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಇದರಲ್ಲಿ ತೋಂಟದ ಸಿದ್ಧಲಿಂಗರ ವಚನಗಳಿವೆ. ಅಷ್ಟಾವರಣಗಳ ಮಹತ್ವವನ್ನು ವೇದ, ಆಗಮ ಮುಂತಾದ ಸಂಸ್ಕೃತ ಕೃತಿ ಮತ್ತು ವಚನಗಳಿಂದ ಸ್ಥಾಪಿಸಲು ಹೊರಬಂತೆ ಕಾಣುತ್ತದೆ. ಈ ಕೃತಿಯು ಶಿವ-ಪಾರ್ವತಿ ಸಂವಾದದಂತಿದೆ. ೧೯ ಶಿವಶರಣ/ಶರಣೆಯರ ೨೪೩ ವಚನ ಹಾಗೂ ೮ ಸ್ಥಲಗಳಿವೆ.

೧೩. ರೇವಣ್ಣಸಿದ್ಧಸ್ವಾಮಿ

ಇವರ ಕಾಲ ಸು. ೧೭೦೦. ಇವರು ಮುರಿಗಾ ಶಾಂತವೀರಸ್ವಾಮಿಗಳ ಶಿಷ್ಯರು. ಇವರು ಬಸವಣ್ಣ ವಚನಗಳ ಟೀಕೆಯನ್ನು ಮಾಡಿದ್ದಾರೆ

೧೪. ಗುರುಸಿದ್ಧಸ್ವಾಮಿ

ಇವರ ಕಾಲ ಸು. ೧೭೦೦. ಇವರು ಸಂಕಲನ ಮಾಡಿದ ಕೃತಿ ‘ಶ್ರೀಮದ್ವೀರಶೈವ ನಿಜಾಚರಣೆ’ ಅಥವಾ ‘ಚಿದೈಶ್ವರ್ಯ ಚಿದಾಭರಣ’. ಇಲ್ಲಿ ೩೧ ವಚನಕಾರರ ೩೯೩ ವಚನ, ೯ ಹಾಡು ಮತ್ತು ೧ ವೃತ್ತ ಹಾಗೂ ೧೮೪ ಗ್ರಂಥಗಳಿವೆ. ಇಲ್ಲಿ ನೀಡಿರುವ ಗುರುಪೀಳಿಗೆ ಮಾಹಿತಿ ವಿದ್ಯಾರ್ಥಿಗಳಿಗೆ, ಜಿಜ್ಞಾಸುಗಳಿಗೆ ಉಪಕಾರಿಯಾಗಿವೆ.

೧೫. ಶಾಂತ ಬಸವೇಶ

ಇವರ ಕಾಲವೂ ಸು. ೧೭೦೦ ವರ್ಷ. ಇವರು ‘ಲಿಂಗಚಿದಮೃತ ಬೋಧೆ’ ಕೃತಿಯ ಸಂಕಲನ ಮಾಡಿದ್ದಾರೆ. ತೋಂಟದ ಸಿದ್ಧಲಿಂಗರ ವಚನಗಳನ್ನು ಉಲ್ಲೇಖಿಸಿದ್ದಾನೆ. ಈ ಕೃತಿಯಲ್ಲಿ ೩೧ ಸ್ಥಲಗಳಿದ್ದು, ೭೯ ಶಿವ ಶರಣ ಶರಣೆಯರ ೮೩೧ ವಚನಗಳಿವೆ. ಗ್ರಂಥದ ಮೊದಲಿಗೆ ಯೋಗಿನಾಥಾಂಕಿತದ ೮೯ ವಿಧಿಗಳು ಹಾಗೂ ಮಾಯಿದೇವನ ‘ಶಿವಾಧವ ಶತಕ’ದ ವೃತ್ತಗಳೂ ಉಲ್ಲೇಖಿತವಾಗಿದೆ.

೧೬. ಗುರುಶಂಕರ ಸ್ವಾಮಿ

ಇವರ ಕಾಲ ಸು. ೧೬೨೦ ನೇ ಇಸವಿ. ಇವರು ಅಂಕಲಿಸಿದ ಕೃತಿ ‘ಜ್ಞಾನಷಟ್ ಸ್ಥಲ ಸಾರ’. ಆರಂಭದಲ್ಲಿ ತೋಂಟದ ಸಿದ್ಧಲಿಂಗ ಬಗ್ಗೆ ಸ್ತುತಿ ಇರುವುದರಿಂದ ಅವರ ಪ್ರಶಿಷ್ಯರು ಎಂಬುದರಲ್ಲಿ ಸಂದೇಹವಿಲ್ಲ. ಇವರು ಆರಂಭದಲ್ಲಿ ಮತ್ತು ಸ್ಥಲಾಂತ್ಯದಲ್ಲಿ ಸ್ವವಿವರ ನೀಡಿದ್ದಾರೆ. ಇವರು ಸಿದ್ಧಲಿಂಗರ ಅಥವಾ ಅವರ ಶಿಷ್ಯ ಸಮುದಾಯದ ಯಾರೊಬ್ಬರ ವಚನಗಳನ್ನು ಉಲ್ಲೇಖಿಸದೆ. ಕೇವಲ ಬಸವ ಕಾಲದ ಶರಣರ ವಚನಗಳನ್ನಷ್ಟೇ ಆಯ್ದುಕೊಂಡಿರುವುದು ಆಶ್ಚರ್ಯವೆನಿಸುತ್ತದೆ. ಸಂಸ್ಕೃತ ಶ್ಲೋಕದ ಮೂಲಕ ಸ್ಥಲ ವಿವರಣೆ ನೀಡಲಾಗಿದೆ.

ಇವರು ವಿರಕ್ತ ಪರಂಪರೆಗೆ ಸೇರಿದ್ದರೂ ಆಚಾರ್ಯ ಪರಂಪರೆಯ ರೇಣುಕರನ್ನು ಸ್ತುತಿಸಿದ್ದಾರೆ. ಇದು ಆ ಕಾಲದ ಗುರು – ವಿರಕ್ತರ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ. ‘ಗುರುಮಹಾತ್ಮೆಯ ಸ್ಥಲ’ದಲ್ಲಿ ಇವರು ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಮಡಿವಾಳ ಮಾಚಿದೇವರ ಜನನವು ಭೂಲೋಕದಲ್ಲಿ ಜೈನ, ಬೌದ್ಧ, ಚಾರ್ವಾಕ ಮುಂತಾದ ಷಡ್ದರ್ಶನಿಗಳ ಹೆಚ್ಚಳದಿಂದ ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ ಮೊದಲಾದ ಅಷ್ಟಾವರಣಗಳ ಜ್ಞಾನ ಭಕ್ತರಲ್ಲಿ ಕಡಿಮೆಯಾಗಿ ಅವರು ನರಕಕ್ಕೆ ಹೋಗಬಾರದೆಂಬ ಕಾರಣಕ್ಕೆ ಆಯಿತು ಎಂದು ಹೇಳಿದ್ದಾರೆ. ಎರಡನೆಯದಾಗಿ ಚೆನ್ನಬಸವಣ್ಣ ಸುಬ್ರಹ್ಮಣ್ಯನ ಅವತಾರ ಎಂಬುದನ್ನು ಖಂಡಿಸಿ ಷಟ್ ಸ್ಥಲ ಸ್ಥಾಪನೆಗೆ ಜನಿಸಿದರು ಎಂದಿದ್ದಾರೆ. ಮೂರನೆಯದಾಗಿ ಅಲ್ಲಮಪ್ರಭುವು ನಿರಂಜನ ಎಂಬ ಗಣೇಶ್ವರನು ಎಂಬುದನ್ನು ನಿರಾಕರಿಸಿ ಪ್ರಭುದೇವರು ಸುಜ್ಞಾನಿ-ನಿರಹಂಕಾರದ ಭಕ್ತಿಯ ಕಾರಣದಿಂದ ಜನಿಸಿದರು ಎಂದು ಉಲ್ಲೇಖಿಸಿದ್ದಾರೆ. ಮಡಿವಾಳ ಮಾಚಿದೇವರು ಕೂಡ ಶಾಪಗ್ರಸ್ಥ ರುದ್ರಾದೇವರು ಎಂಬ ಪುರಾಣ ಕತೆಯನ್ನು ನಿರಾಕರಿಸುತ್ತಾ ಪರವಾದಿಗಳ ಪರಾಜಯಕ್ಕಾಗಿ ಬಂದರು ಎಂದು ಹೇಳಿದ್ದಾರೆ.

ಇನ್ನೂ ಈ ಸಂಕಲನದ ವಚನಗಳ ಪ್ರಾಮಾಣಿಕತೆಯೂ ಕೂಡ ಸಂಶಯಾಸ್ಪದವಾಗಿದೆ ಎಂದು ವಿದ್ಯಾಶಂಕರ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಉಲ್ಲೇಖಗೊಂಡಿರುವ ಹಲವು ವಚನಗಳ ಕರ್ತೃವಿನ ಸತ್ಯಾಸತ್ಯತೆಯ ಬಗ್ಗೆ ಸಂಶಯವಿದೆ.

೧೭. ಗುರುಸಿದ್ಧದೇವ

ಇವರ ಕಾಲ ಸು. ೧೭೦೦. ಇವರ  ಸಂಕಲನ ಗ್ರಂಥ ‘ಚಿದೈಶ್ಯಚಿದಾಭರಣ’. ಇದರ ೩೯೨ನೇ ವಚನದಲ್ಲಿ ತಮ್ಮ ಗುರು ಪರಂಪರೆಯನ್ನು ವರ್ಣಿಸಿದ್ದಾರೆ. ಇವರು ಶ್ರೀ ಶೈಲ ಪರ್ವತಕ್ಕೆ ನೈರುತ್ಯ ಭಾಗದಲ್ಲಿನ ಕುಮಾರ ಪರ್ವತದ ಉತ್ತರ ದಿಕ್ಕಿನಲ್ಲಿರುವ ನಾಗರ ಗವಿಯ ಸಿಂಹಾಸನಾಧೀಶ್ವರರಾಗಿದ್ದರು. ತೋಂಟದ ಸಿದ್ಧಲಿಂಗೇಶ್ವರರ ನಂತರದ ಹನ್ನೊಂದನೆಯ ತಲೆಯ ಶಿಷ್ಯನು ಇವನಾಗಿರುವುದರಿಂದ ಇವನ ಕಾಲ ಸು. ೧೭೦೦ ಎಂದು ಹೇಳಬಹುದು. ಇದನ್ನು ಸಂಪಾದಿಸಿರುವ ಪಿ.ಎಂ. ಗಿರಿರಾಜುರವರು "ಮಿಕ್ಕಿನ ಆಚರಣೆ ಸಂಬಂಧ ವಚನಾಗಮಗಳಿಗೂ ಈ ಆಗಮಕ್ಕೂ ನಿಚ್ಚಳವಾದ ಮೆಚ್ಚಬಹುದಾದ ದೊಡ್ಡ ವ್ಯತ್ಯಾಸವೆಂದರೆ, ಗುರುಸಿದ್ಧದೇವರು ತಮ್ಮಿಂದಲೇ ರಚಿತವಾದ ಗರ್ಭಿತವಾದ ಅತ್ಯುತ್ತಮವರ್ಗದ ೧೦೧, ವಚನಗಳನ್ನು ಈ ವಚನಾಗಮಕ್ಕೆ 'ವಜ್ರಬಂಧ ವಾಗಿ ಬಳಸಿದ್ದಾರೆ ! ಈ ಎಲ್ಲ ವಚನಗಳೂ'ಸಂಗನಬಸವೇಶ್ವರ' ಎಂಬ ಶಿಷ್ಯ ಸಂಬೋಧನ ಮುದ್ರಿಕೆಯಲ್ಲಿವೆ.........ಲಿಂ.ಫ.ಗು.ಹಳಕಟ್ಟಿಯವರು ಸಂಗನ ಬಸವೇಶ್ವರರ ವಚನಗಳು' ಗ್ರಂಥವನ್ನು ಸಂಪಾದಿಸಿದ್ದಾರೆ (ಪೀಠಿಕೆ, ಪು., ೧೯೮೫). ಚಿದೈಶ್ವರ ಚಿದಾಭರಣ' ಸಂಕಲನದಲ್ಲಿ ತೋಂಟದ

ಸಿದ್ಧಲಿಂಗರ ವಚನಗಳನ್ನು ಉದಾಹರಿಸಿದ್ದಾನೆ. ಈ ಸಂಕಲನದಲ್ಲಿ ೩೧ ವಚನಕಾರಕಾರ್ತಿಯರ ೩೯೩ ವಚನ, ಹಾಡು ಭಾಮಿನಿ ಷಟ್ಟದಿ ೧೧, ೧ವೃತ್ತ ಹಾಗೂ ೧೮೪ ಗ್ರಂಥಗಳಿವೆ. ಹತ್ತು ಸ್ಥಲಗಳಲ್ಲಿ ಕೃತಿ ವಿಂಗಡಣೆಗೊಂಡಿದೆ. 'ಶ್ರೀಗುರುಲಿಂಗ ಜಂಗಮವೆಹರಹರ ಶಿವಶಿವ ಜಯಜಯ ಕರುಣಾಕರ ಮತ್ರಾಣನಾಥ ಮಹಾಶ್ರೀಗಳುಸಿದ್ಧಲಿಂಗೇಶ್ವರಾ' ಅಂಕಿತದ ೩೬ ವಚನಗಳಿವೆ ಈ ಕೃತಿಯಲ್ಲಿ ಗುರುಸಿದ್ದೇವರು ಶ್ರೀ ಗುರು ಚನ್ನಬಸವೇಶ್ವರ ದೇವರು ಸಿದ್ಧರಾಮೇಶ್ವರ ದೇವರಿಗೆ ಹೇಳಿದ ‘ಪದಮಂತ್ರಗೋಪ್ಯ’ವನ್ನು ಆಮೂಲಾಗ್ರವಾಗಿ ತಿಳಿಸಿದ್ದಾರೆ.

೧೮. ಕವಿ ಚೆನ್ನ

ಇವರ ಕಾಲದ ಬಗ್ಗೆ ನಿಖರ ಮಾಹಿತಿ ಇಲ್ಲ. ಇವರ ಕೃತಿಗಳು ‘ಮಲ್ಲೇಶನ ತಾರಾವಳಿ’ ಮತ್ತು ‘ತೋಂಟದ ಸಿದ್ಧಲಿಂಗಯತಿಯ ಸುವ್ವಿ’. ಇದೊಂದು ಒನಕೆವಾಡು ಎಂಬುದನ್ನು ಇದರ ಧಾಟಿ ಹೇಳುತ್ತದೆ. ಇವರ ಕಲ್ಪನೆಯಂತೆ ಬ್ರಹ್ಮ-ವಿಷ್ಣು-ಮಹೇಶ್ವರರ ಒಡೆಯ ತೋಂಟದ ಸಿದ್ಧಲಿಂಗ ಸಿದ್ಧಲಿಂಗೇಶನನ್ನು ಕವಿ ತನಗೆ ಕರ್ತೃ ಎಂದು ಹೇಳಿಕೊಂಡಿರುವನು.

೧೯. ಅಜ್ಞಾತ ಕವಿ

ಗುರುಶಾಂತ ದೇವರ ತಾರಾವಳಿಯನ್ನು ಅಜ್ಞಾತ ಕವಿಯೊಬ್ಬ ಬರೆದಿದ್ದು. ಇಲ್ಲಿ ಆ ಕವಿಯು ಬೇರೊಬ್ಬ ಹೆಣ್ಣುಮಗಳಿಗೆ ಎಳಮಲೆಯ ಗುರುಶಾಂತದೇವನ ಮಹಿಮೆಯನ್ನು ನಿರೂಪಿಸುತ್ತಿರುವಂತಿದೆ. ಈ ಅಜ್ಞಾತ ಕವಿಯ ಅಭಿಪ್ರಾಯದಂತೆ ಗುರುಶಾಂತದೇವನು ನರನಲ್ಲ. ಪಶುಪತಿಯೇ ಮರ್ತ್ಯದ ಲೋಪಗಳ ಸರಿಪಡಿಸಲು ಅವತರಿಸಿದನು ಎಂದು ಹೇಳಲಾಗುತ್ತಿದೆ. ಇವನ ಕಾಲ ಸಿ. ೧೭೦೦.

೨೦. ಸುವ್ವಿ ಬಸವ

ಇವರ ಕಾಲ ಸು. ೧೭೦೦. ಇವರ ಕೃತಿ ‘ನಿರುವಾಣಿ ಸ್ವಾಮಿಯವರ ತಾರಾವಳಿ’. ಇದರಲ್ಲಿ ಹದಿಮೂರು ನುಡಿಗಳಿವೆ. ಈ ತಾರಾವಳಿಯ ಆದಿಯಲ್ಲಿ ನಿರ್ವಾಣಿ ಸಿದ್ಧಲಿಂಗೇಶನ ಮಹಿಮೆ ಸ್ತುತಿ ಇದೆ. ಈ ಕೃತಿಯಲ್ಲಿ ಶಿವನಿಗೆ ಅಭೇದವಾಗಿ ನಿರ್ವಾಣಿ ಸ್ವಾಮಿಯನ್ನು ಕವಿ ವರ್ಣಿಸಿದ್ದಾನೆ. ಇವರು ‘ನಿರ್ವಾಣಿ ಸ್ವಾಮಿಯ ಶೃಂಗಾರ ತಾರಾವಳಿ’ ಗ್ರಂಥವನು ರಚಿಸಿದ್ದಾರೆಂಬ ಐತಿಹ್ಯವಿದೆ.


೨೧. ಮರುಸಿದ್ಧಲಿಂಗದೇಶಿಕ

ಇವರ ಕಾಲ-೧೭೦೦. ಇವರ ಕೃತಿ ;ಮಹಂತಿನ ತಾರಾವಳಿ’. ಇದರಲ್ಲಿ ಕವಿಯ ಬಗ್ಗೆ ಯಾವ ವಿವರಗಳಿಲ್ಲದಿದ್ದರೂ ಕೊನೆಯ ಕಂದ ಪದ್ಯದಿಂದ ಇವರೇ ಕರ್ತೃ ಎನ್ನವುದು ತಿಳಿಯುತ್ತದೆ. ಇವರು ತೋಂಟದ ಸಿದ್ಧಲಿಂಗನ ಪ್ರಶಿಷ್ಯ ಪರಂಪರೆಗೆ ಸೇರಿದವರು. ಇವರ ಕೃತಿಯಲ್ಲಿ ಓರ್ವ ಜಂಗಮನು ಶಿವನ ರೂಪದಲ್ಲಿ ಓಡಾಡುವ ಒಂದು ಅದ್ಭುತ ವರ್ಣನೆಯನ್ನು ಕಾಣಬಹುದಾಗಿದೆ.

೨೨.ಅಜ್ಞಾತ ಕವಿ

ಒಬ್ಬ ಅಜ್ಞಾತ ಕವಿಯಾದ್ದರಿಂದ ಕಾಲದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ‘ತೋಂಟದ ಸಿದ್ದೇಶ್ವರನ ಜಾತ್ರೆಯ ತಾರಾವಳಿ’ ಎಂಬ ಗ್ರಂಥ ಸಿಕ್ಕಿದೆ. ಇದರಲ್ಲಿ ಭಕ್ತರ ಹರಕೆ, ಕಾಣಿಕೆ ಮುಂತಾದವುಗಳ ವಿವರಣೆ ಇದೆ.

೨೩. ಕಂಪಿನಂಜಯ್ಯ

ಕಾಲ ಸು. ೧೬೫೦. ‘ಮುರಿಗೆಯ ಶಾಂತವೀರನ ಸ್ತುತಿರೂಪವಾದ ‘ನಾಂದ್ಯ’ವನ್ನು ಬರೆದಿರುವರು. ಇದು ವಾರ್ಧಕ ಷಟ್ಪದಿಯಲ್ಲಿ ಪ್ರಕಟವಾಗಿದೆ. ಕೆಲವರು ‘ಚೈತನ್ಯೇಶ್ವರ ವಿಜಯ’ ಕೃತಿಯೂ ಇವರದ್ದೆ ಎನ್ನುವರು. ಇವರ ನಾಂದ್ಯ ಕೃತಿಗೆ ‘ಮುರಿಗಾ’ ಮುರಿಗೆಯ ಸ್ವಾಮಿಗಳ ಸ್ತೋತ್ರದ ನಾಂದ್ಯ, ಶಾಂತವೀರೇಶ್ವರನ ಸ್ತೋತ್ರದ ನಾಂದ್ಯ ಎಂಬ ಹೆಸರುಗಳಿವೆ. ಇದರಲ್ಲಿ ೬೫ ಷಟ್ಪದಿಗಳಿವೆ. ಇವರು ‘ಮಂಗಳಜ್ಯೋತಿ’ ಅಷ್ಟಕದ ಕರ್ತೃವೂ ಹೌದು.        

೨೪. ಸಿದ್ಧಲಿಂಗ ಶಿವಾಚಾರ್ಯ

ಕಾಲ ಸು. ೧೭೦೦. ಪುರಾಣದ ದೇಶಿಕ ಮತ್ತು ಪುರಾಣದ ಸಿದ್ಧಲಿಂಗಾಚಾರ್ಯ ಎಂದೇ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಇವರ ಕೃತಿ ‘ಷಟ್ಸ್ಥಲ ಶಿವಾಯಣ’. ಎಂ.ಎಂ.ಕಲಬುರ್ಗಿಯವರು “ತೋಂಟದ ಸಿದ್ಧಲಿಂಗೇಶ್ವರರ ನೇರ ವಾರಸುದಾರಿಕೆಯನ್ನು ಮುರುಗಾ ಸಮಯದವರಿಗೆ ಹೇಳುವ ಸು. ೧೮೭೦ರ ನಿರಂಜನವಂಶ ರತ್ನಾಕರ ಮತ್ತು ಮಹಾಲಿಂಗೇಂದ್ರವಿಜಯ ಕೃತಿಗಳಿಗಿಂತ ೧೭೦ ವರ್ಷ ಪೂರ್ವದ ಅಂದರೆ ೧೭೦೦ರ ಷಟ್ಟಲ ಶಿವಾಯಣ ಹೆಚ್ಚು ವಿಶ್ವಾಸಾರ್ಹವೆಂದೇ ಹೇಳಬೇಕು”ಎಂದಿರುವರು. (ಪೀಠಿಕೆ, ಷಟ್‌ಸ್ಥಲ ಶಿವಾಯಣ, ಪು xi. ಪೂರ್ವೋಕ್ತ). ಇದನ್ನು ಮೊದಲು ಶಿವನು ಪಾರ್ವತಿಗೆ ಹೇಳಿದನು. ಅದನ್ನು ನಂದೀಶನು ಪ್ರಮಥರಿಗೆ ಉಪದೇಶಿಸಿದನು. ಅದನ್ನು ಅಲ್ಲಮಪ್ರಭು ಬಸವಣ್ಣನಿಗೆ ನಿರೂಪಿಸಿದನು. ಅದನ್ನು ಹರಪುರದ ಷಟ್ ಸ್ಥಲಯೋಗಿ  ಬಸವ ಪ್ರಭು ತನ್ನ ಶಿಷ್ಯನಿಗೆ ಬೋಧಿಸಿದನು ಮುಂತಾಗಿ  ಈ ಕೃತಿಯಲ್ಲಿ ವಿವರಿಸಲಾಗಿದೆ.

 ತೋಂಟದ ಸಿದ್ಧಲಿಂಗರ ಪ್ರಶಿಷ್ಯರುಗಳಲ್ಲಿ ಕೆಲವರು ಸಿದ್ಧಲಿಂಗರನ್ನು ಕುರಿತು ಸ್ತುತಿಸಿರುವ ಕಾವ್ಯಗಳು ೧. 

೧. ಧನಗೂರು ಷಡಕ್ಷರ ದೇವ: ಯಳಂದೂರು ಹಾಗೂ ಧನಗೂರು ಎಂಬ ಎರಡು ಮಠಾಧೀಶರಾಗಿದ್ದರು. ಕನ್ನಡ ಮತ್ತು ಸಂಸ್ಕೃತದಲ್ಲಿ ಪ್ರೌಢಿಮೆಯನ್ನು ಹೊಂದಿದ್ದ ಇವರಿಗೆ ‘ಉಭಯ ಭಾಷಾ ವಿಶಾರದ’ ಎಂಬ ಬಿರುದಿದೆ. ಇವರ ಅಂಕಿತ ‘ಶಿವಲಿಂಗ’. ಇವರು ‘ರಾಜಶೇಖರ ವಿಳಾಸ’ ‘ಶಬರ ಶಂಕರ ವಿಳಾಸ’ ಮತ್ತು ‘ಬಸವರಾಜ ವಿಜಯ’ ಗಳೆನ್ನುವ ಮೂರು ಚಂಪೂ ಕೃತಿಗಳನ್ನು ಬೆರದಿದ್ದಾರೆ. ‘ಕವಿಕರ್ಣ ರಸಾಯನ’ ಎಂಬ ಸಂಸ್ಕೃತ ಮಹಾಕಾವ್ಯದ ಕರ್ತೃವೂ ಆಗಿದ್ದಾರೆ. “ಮಹಾಕವಿ ಷಡಕ್ಷರದೇವ ಸಿದ್ಧಲಿಂಗ ಶಿವಯೋಗಿಗಳನ್ನು ಕಾವ್ಯಾರಂಭದಲ್ಲಿ ಸ್ತುತಿಸಿರುವನ್ನಲ್ಲದೆ ಸಂಸ್ಕೃತದಲ್ಲಿ ಸಿದ್ಧಲಿಂಗಸ್ತವನವೆಂಬ ಅಷ್ಟಕವನ್ನು ರಚಿಸಿರುವನು. ಅವನ್ನಿಲ್ಲಿ ಉದಾಹರಿಸಬಹುದು. 

ದುರಿತತಮಃ ಪತಂಗನಮಳಾರ್ಥವಿವೇಚನೆ ಸತ್ಪ್ರಸಂಗನೀ

ಶ್ವರಲಸದಂತರಂಗನಭವಾಗಮವಾರಿಜದಿವ್ಯ ಭೃಂಗನ

ಕ್ಷರಪರಲಿಂಗಸಂಗನತಿಶಾಂತನಿರಸ್ತಜಡಾನು ಷಂಗನೊ

ಲ್ದುರುತರ ಸಿದ್ಧಲಿಂಗಯತಿತುಂಗನೊಡರ್ಚುಗೆ ಸಜ್ಜನೇಷ್ಟಮಂ

-ರಾಜಶೇಖರವಿಳಾಸಂ(೧-೧೪)

ಶ್ರೀಕರವೀರಸಾಧು ಸಹಕಾರನುದಂಚಿತಮುಕ್ತಕಂ ಸುಪ

ದ್ಮಾಕರನುದ್ಗಮಪುರುಚಿ ಮಂಜುಲತಾನ್ವಿತನೂರ್ಜಿತಾಗಮಾ

ನೀಕನುತಂ ಮಹಾವಿರತಿ ಸಂಯುತನಾದುದಳೆಂದೆ ಸಾರ್ಥನಾ

ಮಾರಕರನಾದ ತೋಂಟದ ಗುರೂತ್ತಮನೋರ್ವನೆ ಸತ್ಫಲಪ್ರದಂ

-ವೃಷಭೇಂದ್ರ ವಿಜಯ(೧-೧೨)

ಜಗಜ್ವಾಲಪಾಲಂ ಜನಸ್ತುತ್ಯಶೀಲಂ |

ಭವಾರಣ್ಯದಾವಂ ಭೃತಸ್ವಾನುಬಾವಂ |

ಶಿವಾನಂದಕೋಶಂ ದಿನೇಶಪ್ರಕಾಶಂ |

ಮಹಾಲಿಂಗಸಂಗಂ ಭುಜೇ ಸಿದ್ಧಲಿಂಗಂ  ||೧||

ಕಲಾಸತ್ಕಾಲಾಪಂ ಕಪರ್ದಿಸ್ವರೂಪಂ |    

ಮನೋವೃತ್ತಿಶೂನ್ಯಂ ಮುನಿವಾತಮಾನ್ಯಂ |

ಸಮುಂಚದ್ಗುಣಾಂಕ ಸದಾ ನಿಷ್ಕಳಂಕಂ |

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ   ||೨||

ಪವಿತ್ರಸ್ವಗಾತ್ರಂ ಬುಧಸ್ತೋತ್ರಪಾತ್ರಂ |

ನಿವೃತ್ತಾವರೋಧಂ ನಿಸರ್ಗಾವಬೋಧಂ |

ಚಿದಾಮೋದಭಾಜಂ ಚರಾರ‍್ಯರಾಜಂ |

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ    ||೩||

ಜಿತರಾತಿವರ್ಗಂ ಗೃಹೀತಾದ್ಯಮಾರ್ಗಂ |

ತತಾಮ್ನಾಯಸಾರಂ ತಮಸ್ತೊಮದೂರಂ |

ಪರಮ್ ಷಟ್‌ಸ್ಥಲಾಂಕಂ ನಿರಾತಂಕಶಂಕಂ |

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ    ||೪||

ಶಿವಾಚಾರಪಕ್ಷಂ ಕೃಪಾಭ್ಯತ್ಕಟಾಕ್ಷಂ |

ಷಡಧ್ವಾದಿಬೀಜಂ ನತಾಮರ್ತ್ಯಭೂಜಂ |

ಪರಿತ್ಯಕ್ತರಾಗಂ ಪರಬ್ರಹ್ಮಯೋಗಂ | 

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ    ||೫||

ಪರಿವ್ರಾಡ್ವರೇಣ್ಯಂ ಗಣೇಶಾಗ್ರಗಣ್ಯಂ |

ಸದಾಸತ್ಯಭಾಪಂ ಶಿವಜ್ಞಾನಭಾಸಂ |

ಸರುದ್ರಾಕ್ಷಮಾಲಂ ಲಸದ್ಭಸ್ಮಫಾಲಂ |

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೬||

ಶರಣಜನಪರಿಭವಲತಾಳಿಯಂ ಕೀಳ್ದುದು 

ಷ್ಕರಕುಜನ ಕುಜವಿತಾನಂಗಳಂ ತರಿದು ದು 

ಸ್ತರದುರಾಶಾವಾರಿಭರಿತಕಾಸಾರಮಂ ಕೆಡಿಸಿಯನೃತ ಫಲಂಗಳಂ 

ಕರಮೆ ನಾಶಂಗೆಯ್ದು ವಿಷಯಕುಸುಮಂಗಳಂ 

ಕುರಿಸದಂತೆಸಗಿ ತೋಂಟದ ರಾಯನೆನಿಸಿದ 

ಚ್ಚರಿಯ ಚರಿತಂ ಸಿದ್ಧಲಿಂಗೇಶನೆಮಗೀಗೆ ಸುರುಚಿರೇಷ್ಟಾರ್ಥಫಲಮಂ”

೨. ಕೊಟ್ಟೂರು ಬಸವೇಶ್ವರ ಚಾರಿತ್ರ  ಸಿದ್ಧಲಿಂಗರ ಬಗೆಗಿನ ಸಂಗತಿಗಳು.

ಅರೆಗಲ್ಲ ಬಸವನಿಗೆ ಅನ್ನವನುಣಿಸಿದನೆ

ಗುರುಮಠವನು ಬಿಟ್ಟು ಚರಮೂರ್ತಿಯಾದನೆ

ಗಜಚರ್ಮಾಂಬರಧರ ಗಂಗಾಧರನೆ

ಅಜ ಸುರಮುನಿ ವಂದ್ಯ ಆಧಿ ಸಿದ್ಧೇಶನೆ

ಕಾಯೊ ನಮ್ಮಯ್ಯ ಕಾಮಿತಫಲವೀಯೋ ದಮ್ಮಯ್ಯ

ಕಾ[ಮನ] ಮದಭಂಗ ಕರುಣಿ ತೋಂಟದ ಲಿಂಗ

ಜಡದೇಹಿ ನಾನು ಷಡುಸ್ಥಲ ದೃಢಮೂರ್ತಿ ನೀನು

ಬಿಡದಿರೆನ್ನಯ ಕೈಯ್ಯ ನಡಸು ಮಾರ್ಗದಿ ಜೀಯ್ಯ

ಬಡುಮನುದವನೆನ್ನ ಪ[ಲ]ಗುಣ ರನ್ನ

ಭಸಿತವುಭೂಷ ಭಾಳಾಂಬಕವೆಸೆವ ವಿಲಾಸ

ಬಸವಾದಿ ಗಣ ಮುಕ್ತ ಭಜಕಜನಾಸಕ್ತಿ

ಯೆನಿಪ ಪಾಳಿಪ ಸ್ವಾಮಿ ಸಿದ್ಧೇಶಸ್ವಾಮಿ

ನಮದಿಷ್ಟಯುಕ್ತ ರಕ್ಷಿಪುದಯ್ಯ ಎನಗೆ ನೀ ಕರ್ತೃ

ಘನ ಪರತರಸಂಗ ಮತಿಯ ಚನ್ನಂಗೆ ಲಿಂಗ

ಯೆನಿಪ ಪಾಲಿಪ ಸ್ವಾಮಿ ಸಿದ್ಧೇಶಸ್ವಾಮಿ 

ಈ ಕಾವ್ಯ ಪ್ರವಾಹದಲ್ಲಿ ಸಿದ್ಧಲಿಂಗೇಶ್ವರನ ವ್ಯಕ್ತಿತ್ವ ಸ್ಫುಟವಾಗಿ ಪಡೆಮೂಡಿದೆ.  ಅವರ ಹೆಸರನ್ನೆತ್ತಿದರೆ ಸಾಕು; ನಮ್ಮ ಕವಿಗಳು ಭಕ್ತಿಯ ನಿರ್ಭರ ಭಾವದಿಂದ ಕುಣಿದಾಡುವರು. ಷಡಕ್ಷರದೇವನಂತಹ ಮಹಾಕವಿಯ ಸ್ತುತಿಗೆ ಪಾತ್ರರಾದ ಸಿದ್ಧಲಿಂಗ ಶಿವಯೋಗಿಗಳ ವ್ಯಕ್ತಿತ್ವ ಹಾಗೂ ಅವರ ಪ್ರಭಾವ ಮುದ್ರೆಗಳನ್ನು ವರ್ಣಿಸುವ ಶಕ್ತಿ ಶಬ್ದಕ್ಕಿಲ್ಲವೆಂದು ಹೇಳಬಹುದು.


   ತೋಂಟದ ಸಿದ್ಧಲಿಂಗರ ಶಿಷ್ಯ-ಪ್ರಶಿಷ್ಯರ ಸಾಹಿತ್ಯ ಕೊಡುಗೆಯೂ ಅನುಪಮವಾಗಿದೆ. ಸಿದ್ಧಲಿಂಗರ ಪ್ರಶಿಷ್ಯರಲ್ಲಿ ಮುಖ್ಯವಾಗಿ ಮುರಿಗಾ ಶಾಂತವೀರರು, ಇಮ್ಮಡಿ ಮುರಿಗಾ ಗುರುಸಿದ್ಧರು, ಸೋಮಶೇಖರಶಿವಯೋಗಿ, ಹಾಗಲವಾಡಿ ಮುದ್ವೀರಸ್ವಾಮಿ, ಜ್ವಲಕಂಠ ಮಹಾಂತಸ್ವಾಮಿ, ಕಂಪಿನಂಜಯ್ಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಕೈಗೊಂಡವರಾಗಿದ್ದಾರೆ. ಮುರಿಗಾ ಶಾಂತವೀರರು  ಶೂನ್ಯ ಪರಂಪರೆಯ ಚಿತ್ರದುರ್ಗ ಬೃಹನ್ಮಠದ ಪ್ರಥಮ ಪೀಠಾಧ್ಯಕ್ಷರು, ವೀರಶೈವ ಧರ್ಮನಿಷ್ಠರು, ಕನ್ನಡ-ಸಂಸ್ಕೃತ ಉಭಯಭಾಷಾಪಂಡಿತರು, ತತ್ವಸಾಹಿತ್ಯ ಸಿದ್ಧಾಂತ ನಿಷ್ಣಾತರು, ಅನುಭಾವಿಗಳು, ಸೃಜನಶೀಲ ಕವಿಗಳು ಆಗಿದ್ದು, ಒಟ್ಟು ೧೭ ಕೃತಿಗಳನ್ನು ರಚಿಸಿದ್ದಾರೆ. ಇಮ್ಮಡಿ ಮುರಿಗಾ ಗುರುಸಿದ್ಧರು ೨೬ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನ್ನಡ ೨೩, ಸಂಸ್ಕೃತ ೩. “ಹಾಲಾಸ್ಯ ಪುರಾಣವನ್ನು ಚಂಪೂ ರೂಪದಲ್ಲಿ ರಚಿಸಿರುವ ಇವರು ಕನ್ನಡ ಸಾಹಿತ್ಯದಲ್ಲಿ ಷಡಕ್ಷರದೇವನ ತರುವಾಯದ ವೀರಶೈವ ಚಂಪೂಕವಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಚಂಪೂ, ವಚನ, ಷಟ್ಟದಿ, ಚೌಪದಿ, ವೃತ್ತ, ಸ್ತೋತ್ರ, ನಾಂದ್ಯ, ತಾರಾವಳಿ, ಯಕ್ಷಗಾನ, ಕೊರವಂಜಿ ಸಾಹಿತ್ಯ, ನಿಘಂಟು ಸಾಹಿತ್ಯ, ಹೋಳಿಪದ, ಮಿಶ್ರಾರ್ಪಣ, ಪಂಚಾಶಿಕೆ, ಮಂತ್ರಗೋಪ್ಯ,  ಕರಣಹಸಿಗೆ ಹೀಗೆ ವಿವಿಧ ರೂಪಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. 

     ಇದೇ ಪರಂಪರೆಯ ಸೋಮಶೇಖರ ಶಿವಯೋಗಿ, ಈತ ಮುರುಘಾಪರಂಪರೆಯ ಪ್ರಮುಖ ಟೀಕಾಕಾರನೆನಿಸಿದ್ದಾನೆ. ಬೆಡಗಿನ ವಚನಗಳಿಗೆ ಟೀಕೆ ಬರೆಯುವುದರಲ್ಲಿ ನಿಷ್ಣಾತನಾದ ಈತ ಬಸವಣ್ಣನವರ ೩೪೭ ವಚನಗಳಿಗೆ ಹಾಗೂ ತೋಂಟದ ಸಿದ್ಧಲಿಂಗರ ೧೫೨ವಚನಗಳಿಗೆ ಟೀಕೆ ಬರೆದಿರುವನು. ಅಪಾರವಾದ ಶಾಸ್ತ್ರ ಪಾಂಡಿತ್ಯ ಪಡೆದು ವೇದ, ಉಪನಿಷತ್ತು, ಆಗಮ, ಪುರಾಣ, ತರ್ಕ, ಯೋಗ ಇತ್ಯಾದಿ ಗ್ರಂಥಗಳ ಅಧ್ಯಯನದಿಂದ ಜ್ಞಾನ ಸಂಪಾದಿಸಿದಈತ ಶಿಷ್ಟಭಾಷೆಯಲ್ಲಿ ವಚನಗಳಿಗೆ ತಾತ್ವಿಕಾರ್ಥದ ಟೀಕೆಯನ್ನು ರಚಿಸಿ ಉನ್ನತ ಮಟ್ಟದ ಟೀಕಾಕಾರನೆನಿಸಿದ್ದಾನೆ. ಹಾಗಲವಾಡಿ ಮುದ್ವೀರಸ್ವಾಮಿ, ಈತ ರಾಜಗುರು, ಅನುಭಾವಿ, ಶಿವಯೋಗಿ ಹಾಗೂ ತತ್ವಪ್ರಧಾನ ಸಾಹಿತ್ಯ ಸೃಷ್ಟಿ ಮಾಡಿದ ಉತ್ತಮ ಕವಿ ಎಂದು ಗುರುತಿಸಲ್ಪಡುತ್ತಾನೆ. ವಚನ, ಸ್ವರವಚನಗಳನ್ನು ಬರೆದಿರುವ ಈತ “ಶಿವತತ್ವ ಸುಜ್ಞಾನಪ್ರದೀಪಿಕೆ” ಎಂಬ ಪಟ್ಟದಿಕಾವ್ಯವನ್ನೂ ರಚಿಸಿದ್ದಾನೆ. ೧೩೦ಕ್ಕೂ ಹೆಚ್ಚು ಸ್ವರವಚನಗಳನ್ನು ರಚಿಸಿದ್ದಾನೆ.   ಸಿದ್ಧಲಿಂಗರ ಶಿಷ್ಯ-ಪ್ರಶಿಷ್ಯರುಗಳು ರಚಿಸಿರುವ ಸಾಹಿತ್ಯದಲ್ಲಿ, ಧಾರ್ಮಿಕ, ಐತಿಹಾಸಿಕ, ಪೌರಾಣಿಕ ಹಾಗೂ ಚಾರಿತ್ರಿಕ, ತಾತ್ವಿಕ, ಸ್ತೋತ್ರಪ್ರಧಾನವಸ್ತು ಪ್ರಮುಖವಾಗಿದ್ದು ಈ ಮೂಲಕ ವಚನಕಾರರ ಹಾಗೂ ವೀರಶೈವ ಕವಿಗಳ ದೃಷ್ಟಿ-ಧೋರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸಮಕಾಲೀನ ಅರಸರ ಹಾಗೂ ಸಾಮಾಜಿಕಸಂಗತಿಗಳ ಉಲ್ಲೇಖಗಳು ಅನೇಕ ಕೃತಿಗಳಲ್ಲಿ ಅಳವಟ್ಟಿವೆ. ಸಾಹಿತ್ಯ ರಚನೆಯ ಅಭಿವ್ಯಕ್ತಿಗೆ ಮಾಧ್ಯಮವಾದ ರೂಪದ ದೃಷ್ಟಿಯಿಂದಲೂ ಮುರುಘಾ ಪರಂಪರೆಯ ಕವಿಗಳು ಸಾಕಷ್ಟು ವೈವಿಧ್ಯತೆಯನ್ನು ಮೆರೆದಿದ್ದಾರೆ. ಪಾಂಡಿತ್ಯ ಮೆರೆಯಲು ಚಂಪೂ ಹಾಗೂ ಷಟ್ಪದ ರೂಪಗಳಲ್ಲಿ ಪ್ರೌಢಕಾವ್ಯಗಳನ್ನು ರಚಿಸಿದರೆ, ಜನಮನವನ್ನು ತಟ್ಟಲು ಯಕ್ಷಗಾನ, ಜಾನಪದ ಧಾಟಿಯಲ್ಲಿ ಲಘು ಕೃತಿಗಳನ್ನು ರಚಿಸಿದ್ದಾರೆ. ವೀರಶೈವ ಧರ್ಮದ ತಾತ್ವಿಕಾಂಶಗಳನ್ನು ಪ್ರತಿಪಾದಿಸುವುದಕ್ಕಾಗಿ, ಶಿವನ ಲೀಲಾವಿಲಾಸ, ಶಿವಯೋಗದ ಸ್ವರೂಪ, ಮಹತ್ವ, ಶಿವಪಾರಮ್ಯ ಈ ಮೊದಲಾದ ಅಂಶಗಳನ್ನು ಎತ್ತಿ ಹೇಳಲು ವಚನ, ಸ್ವರವಚನ, ಕಂದ, ಷಟ್ಟದಿ, ನಾಂದ್ಯ, ಸ್ತೋತ್ರದಂತಹ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡಿದ್ದಾರೆ. ತಾರಾವಳಿ ಷಟ್ಟದಿ ರೂಪಗಳಲ್ಲಿ ಚಾರಿತ್ರಿಕ ಅಂಶಗಳನ್ನು ಅಳವಡಿಸುವ ಮೂಲಕ ತಮ್ಮ ಕೃತಿಗಳನ್ನು ಇತಿಹಾಸ ರಚನೆಗೆ ಆಕರಗಳಾಗುವಂತೆ ಮಾಡಿದ್ದಾರೆ.

 ಸಿದ್ಧಲಿಂಗರ ಶಿಷ್ಯರು ಮತ್ತು ಪ್ರಶಿಷ್ಯರು  ಧರ್ಮಯಾತ್ರೆಯ ಸಂದರ್ಭದಲ್ಲಿ ನಡೆದಾಡಿದ ಸ್ಥಳಗಳಲ್ಲಿ ಗದ್ದುಗೆಗಳು, ಮಠಗಳು ಅರಂಭವಾಗಲು ತೋಂಟದ ಸಿದ್ಧಲಿಂಗಯತಿಗಳು ಕಾರಣರಾಗಿದ್ದಾರೆಂದು ಅವರನ್ನು ಕುರಿತ, ಕಾವ್ಯ-ಪುರಾಣಗಳು ತಿಳಿಸುತ್ತವೆ. ಅವರ ಶಿಷ್ಯರುಗಳಲ್ಲಿ ಬಹಳಷ್ಟು ಮಂದಿ ವೈಚಾರಿಕ ತೀವ್ರತೆಗಿಂತ ಧಾರ್ಮಿಕ ತತ್ವಗಳ ಘನತೆಯನ್ನು ಎತ್ತಿಹಿಡಿದವರಾಗಿದ್ದು, ಅವರು ವಚನಕಾರರಾಗುವುದಕ್ಕಿಂತ ‘ಶಿವಯೋಗಿ’ಗಳಾಗಿ ಪ್ರಸಿದ್ಧರಾಗಿದ್ದಾರೆ. ಬದುಕಿದ್ದಾಗಲೇ ಪವಾಡಗಳನ್ನು ನಡೆಸಿ, ಐತಿಹ್ಯವಾಗಿ ದೈವತ್ವಕ್ಕೇರಿದವರಾಗಿದ್ದಾರೆ ಎಂಬುದು  ಅವರ ಬಗೆಗಿನ ಮಾಹಿತಿಗಳಿಂದ ತಿಳಿದು ಬರುತ್ತವೆ. ಶಿಷ್ಯ ಪರಂಪರೆಯಲ್ಲಿ ಬರುವ ಕವಿಗಳು ಉಭಯಭಾಷಾವಿಶಾರದರಾಗಿದ್ದು, ಕನ್ನಡ ಸಂಸ್ಕೃತ ಎರಡೂ ಭಾಷೆಗಳಲ್ಲಿ ಉತ್ತಮ ಸಾಹಿತ್ಯ ರಚಿಸಿದ್ದಾರೆ. ಮಾರ್ಗ-ದೇಶಿ ಭಾಷೆಗಳೆರಡನ್ನೂ ಸಮನಾಗಿ ಬಳಸಿಕೊಂಡಿದ್ದಾರೆ.

೩. ಪ್ರಶಿಷ್ಯ ಪರಂಪರೆಯ ಕವಿಗಳ ಸಾಹಿತ್ಯದ ವಸ್ತು ಹೆಚ್ಚಾಗಿ ಧಾರ್ಮಿಕ, ತಾತ್ವಿಕ, ಸ್ತೋತ್ರಪ್ರಧಾನವಾಗಿದೆ ಜೊತೆಗೆ ಪೌರಾಣಿಕ, ಚಾರಿತ್ರಿಕ ವಸ್ತುವಿಗೂ ಎಡೆಕೊಡುವ ಮೂಲಕ ವಚನಕಾರರ ಹಾಗೂ ವೀರಶೈವ ಕವಿಗಳ ದೃಷ್ಟಿ-ಧೋರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

೪. ಶಿಷ್ಯ ಪ್ರಶಿಷ್ಯ ಪರಂಪರೆಯ ಸಾಹಿತ್ಯದಲ್ಲಿ ದೀರ್ಘ ಕಾವ್ಯಗಳಿಗಿಂತ ಅಧಿಕವಾಗಿ ಲಘು ಕೃತಿಗಳಿವೆ.

೫. ಈ ಪರಂಪರೆಯ ಸಾಹಿತ್ಯದಲ್ಲಿ ಬಳಕೆಯಾದ ಸಾಹಿತ್ಯ ರೂಪಗಳನ್ನು ಚಂಪೂ, ವಚನ, ಸ್ವರವಚನ, ಷಟ್ಟದಿ, ಚೌಪದಿ, ದಂಡಕ, ಕಂದ, ನಿಘಂಟು, ತಾರಾವಳಿ, ಟೀಕೆ, ಉದ್ಧರಣೆ, ನಾಂದ್ಯ, ಯಕ್ಷಗಾನ, ಕೊರವಂಜಿ ಸಾಹಿತ್ಯ ಹಾಗೂ ಹೋಳಿಪದ ಎಂದು ವಿಂಗಡಿಸಬಹುದು, ಸಿದ್ಧಲಿಂಗ ಯತಿಗಳ ಪರಂಪರೆಯಲ್ಲಿ ಬರುವ ಶಿಷ್ಯ-ಪ್ರಶಿಷ್ಯರುಗಳ ಸಾಹಿತ್ಯ ಕೇವಲ ಕೃತಿರಚನೆಗೆ ಮಾತ್ರ ಮೀಸಲಾಗದೆ, ಇಲ್ಲಿ ಬರುವ ಮಠಗಳು ಮತ್ತು ಮಠಾಧ್ಯಕ್ಷರು ಪ್ರಾಚೀನ ವೀರಶೈವ ಸಾಹಿತ್ಯ ಕೃತಿಗಳ ಹಸ್ತಪ್ರತಿಸಂಗ್ರಹ, ಹಸ್ತಪ್ರತಿ ನಕಲು, ಪ್ರತಿನಕಲು ಕಾವ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವರು. ಅಲ್ಲದೆ ಗ್ರಂಥಗಳ ಪರಿಷ್ಕರಣೆ, ಪ್ರಕಟಣೆ ಕಾವ್ಯವನ್ನು ಕೈಗೊಳ್ಳುವ ಮೂಲಕ ಅಪಾರ ವೀರಶೈವ ಸಾಹಿತ್ಯ ಬೆಳಕಿಗೆ ಬರುವಂತೆ ಮಾಡಿದ್ದಾರೆ.

    ಒಟ್ಟಾರೆ ಸಿದ್ಧಲಿಂಗ ಯತಿಗಳು ಯಾವುದೇ ಗುಡ್ಡಗವಿಯಲ್ಲಿ ಕುಳಿತು ತಪಸ್ಸನ್ನಾಚರಿಸದೆ, ಮಠಕ್ಕೆ ಮಾತ್ರ ಸೀಮಿತವಾಗಿರದೆ, ಕರ್ನಾಟಕವನ್ನಷ್ಟೆ ಯಾತ್ರೆ ಮಾಡದೆ ಹೊರರಾಜ್ಯಗಳಲ್ಲಿಯೂ ಹೋಗಿ ಧರ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿದರು. ಒಂದು ವೇಳೆ ಹಾಗೆ ಮಾಡದಿದ್ದರೆ ಸಾಹಿತ್ಯ ಸಂಸ್ಕೃತಿ ಪುನರುಜ್ಜೀವನ ಗೊಳ್ಳುತ್ತಿರಲಿಲ್ಲ. ತೋಂಟದ ಸಿದ್ಧಲಿಂಗ ಶಿವಯೋಗಿಗಳಲ್ಲಿ ವೀರಶೈವ ಧರ್ಮ ಪುನಃ ಚೇತನಗೊಳಿಸಿದ ಗುಣಗಳು ಕಂಡುಬರುತ್ತವೆ. ಎಡೆಯೂರಿನ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಪ್ರತಿಯೊಬ್ಬ ಜನಸಾಮಾನ್ಯನ ಮನೆಯ ಮನದ ಪೀಠದಲ್ಲಿ ಎಡೆ ಪಡೆದವರು. ಅನೇಕ ಶಾಖಾ ಮಠಗಳನ್ನು ಸ್ಥಾಪಿಸಿ ಶಿಷ್ಯ ಕೋಟಿಯನ್ನು ನೇಮಿಸಿದವರು. ಕೊನೆಗೆ ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿ ಹೊಂದಿ ಅದನ್ನು ಜಾಗೃತ ಧರ್ಮ ಕ್ಷೇತ್ರವನ್ನಾಗಿ ಮಾಡಿದರು. ಮುಸ್ಲಿಂ ಅರಸುಗಳ ಆಡಳಿತ ಮತ್ತು ಧರ್ಮ ಭಾಷೆಗಳ ಪ್ರಭಾವ ದಟ್ಟವಾಗಿರುವಾಗಲೇ ವಚನ ಸಾಹಿತ್ಯದ ಮೂಲಕ ಕನ್ನಡ ನಾಡು ನುಡಿ ಮತ್ತು ವೀರಶೈವ ಧರ್ಮ ಇವುಗಳಿಗೆ ಶಕ್ತಿ ತುಂಬಿದವರು. ನಮ್ಮತನದ ಜ್ಯೋತಿಯನ್ನು ಬೆಳಗಿಸಿದವರು. ಗೋಸಲ ಪೀಠದ ಸ್ವಾಮಿಗಳಾಗಿಲ್ಲದೆ ಆ ಪೀಠ ಪರಂಪರೆಯನ್ನು ಉನ್ನತಿಗೇರಿಸಿದರು. ಗದಗ, ಡಂಬಳ, ಎಡೆಯೂರು ಮುಂತಾದ ಕಡೆ  ಶೂನ್ಯಪೀಠಗಳನ್ನು ಸ್ಥಾಪಿಸಿದವರು. ಪರವಾದಿಗಳನ್ನು ಗೆದ್ದು ಧರ್ಮ ಸ್ಥಾಪನೆ ಮಾಡಿದರು. ಮಹಾನಾಡ ಪ್ರಭುಗಳಿಗೆ ರಾಜಗುರುಗಳಾದರು. ತಮಿಳುನಾಡಿನ ಮತ್ತು ಕೇರಳದ ಪ್ರಭುಗಳ ಮೇಲೆ ಜನತೆಯ ಮೇಲೂ ದಟ್ಟ ಪ್ರಭಾವ ಹೊಂದಿದವರು ಆಗಿದ್ದಾರೆ. ಹಿಂದಿನ ಸಂಸ್ಕೃತಿಯ ಆಚಾರ-ವಿಚಾರದ ಜ್ಞಾನಕ್ಷಿತಿಜವನ್ನು ಅಂದಿನ ಜನಾಂಗಕ್ಕೆ ಸೀಮಿತಗೊಳಿಸದೇ ಮುಂದಿನ ಜನಾಂಗದವರಿಗೂ ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ನೀಡಿ ಹೋದವರು. 

ಗ್ರಂಥ ಋಣ

೧. ಷಟಸ್ಥಲ ಜ್ಞಾನಸಾರಾಮೃತ ಆರ್.ಸಿ.ಹಿರೇಮಠ,

   (ತೋಂಟದ ಸಿದ್ಧಲಿಂಗ ಶಿವಯೊಗಿವಿರಚಿತ) ವೀರಶೈವ ಅಧ್ಯಯನ ಸಂಸ್ಥೆ 

                  ಶ್ರೀಜಗದ್ಗುರುತೋಂಟದಾರ್ಯಸಂಸ್ಥಾನ ಮಠ, ಗದಗ. ೧೯೯೯ 

೨.. ವಿರಕ್ತ ತೋಂಟದಾರ್ಯವಿರಚಿತ ಸಿದ್ಧೇಶ್ವರ ಪುರಾಣ      ಸಂ:ಮೈಲಹಳ್ಳಿ  ರೇವಣ್ಣ, 

    ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಮೈಸೂರು ವಿ.ವಿ.ಮೈಸೂರು. ೨೦೦೧

೩. ಕನ್ನಡ ಸಾಹಿತ್ಯ ಚರಿತ್ರೆ ರಂ.ಶ್ರೀ.ಮುಗುಳಿ

ಪ್ರ: ಉಷಾ ಸಾಹಿತ್ಯ ಮಾಲೆ ಮೈಸೂರು. ೧೯೭೧

೪. ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ  ಸಿ.ನಾಗಭೂಷಣ, 

                 ಅಮೃತ ವರ್ಷಿಣಿ ಪ್ರಕಾಶನ, ನಂದಿಹಳ್ಳಿ. ೧೯೯೯

೫. ಶೂನ್ಯಸಂಪಾದನೆಯನ್ನು ಕುರಿತು    ಚಿದಾನಂದ ಮೂರ್ತಿ, 

  ಸ್ನೇಹ ಪ್ರಕಾಶನ, ಬೆಂಗಳೂರು. ೧೯೯೦

೬. ಶೂನ್ಯಸಂಪಾದನೆ ಒಂದು ಅವಲೋಕನ ಜಿ.ಎಸ್.ಸಿದ್ಧಲಿಂಗಯ್ಯ,

  ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ೧೯೯೬

೭.. ಷಟ್‌ಸ್ಥಲ ಪ್ರಭೆ      ಆರ್.ಸಿ.ಹಿರೇಮಠ,    ಪ್ರ:ಕ.ವಿ.ವಿ., ಧಾರವಾಡ. ೧೯೬೬

೮. ಸಾಹಿತ್ಯ ಪರಿಶೋಧನೆ ಬಿ.ಆರ್.ಹಿರೇಮಠ,

   ಕನ್ನಡ ಸಾಹಿತ್ಯ ಪರಿಷತ್ತು,ಬೆಂಗಳೂರು. ೧೯೯೮

೯. ಸಿ.ನಾಗಭೂಷಣ ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು  ,

   ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 2000

೧೦. ಕರ್ನಾಟಕ ವೀರಶೈವ ಮಠಗಳು :  ಚಂದ್ರಶೇಖರ ನಾರಾಯಣಾಪುರ, 

    ಗೆಳೆಯ ಪ್ರಕಾಶನ,     ಚಿಕ್ಕಮಂಗಳೂರು, ೨೦೦೨

೧೧.ವೀರಣ್ಣ ರಾಜೂರ, ವಚನ ಸಂಶೋಧನ, ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು,೨೦೦೪

೧೨. ನಿರಂಜನವಂಶ ರತ್ನಾಕರ ಸಂ: ಫ.ಗು. ಹಳಕಟ್ಟಿ

ಶಿವಾನುಭವ ಗ್ರಂಥಮಾಲೆ,ಬಿಜಾಪುರ. ೧೯೩೨


              ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯದ ವೈಶಿಷ್ಟ್ಯಗಳು                                                          ಡಾ. ಸಿ.ನಾಗಭೂಷಣ    ...