ಸೋಮವಾರ, ಮೇ 5, 2025

 ವಚನಕಾರ ಅಂಬಿಗರ ಚೌಡಯ್ಯ  

                                                                      ಡಾ.ಸಿ.ನಾಗಭೂಷಣ                                                                               

  ಹನ್ನೆರಡನೇ ಶತಮಾನದಲ್ಲಿ ನಡೆದ ಸಮಾಜೋ ಧಾರ್ಮಿಕ ಚಳುವಳಿಯ ಸಂದರ್ಭದಲ್ಲಿ ವಚನ ರೂಪ ಕನ್ನಡ ಸಾಹಿತ್ಯದಲ್ಲಿ ಆವಿರ್ಭವಿಸಿತು. ಪ್ರಥಮ ಬಾರಿಗೆ ಸಮಾಜದ ವಿವಿಧ ಸ್ತರಗಳಿಂದ ಬಂದ ಸಾಮಾನ್ಯ ಜನತೆಗೆ ಲಿಂಗಭೇದವಿಲ್ಲದೆ ಸಾಹಿತ್ಯಾಭಿವ್ಯಕ್ತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ವಚನ ಚಳುವಳಿಯ ಪ್ರಮುಖ ಸಾಧನೆ. ಸಾಹಿತಿ ಅಥವಾ ಕವಿಯಾಗಬೇಕಾದರೆ ವಿದ್ವಾಂಸನಾಗಿರಬೇಕಾಗಿಲ್ಲ. ಅರ್ಥವಾಗದ ಆಡಂಬರ ಭಾಷೆಯಲ್ಲಿ ಬರೆಯ ಬೇಕಾಗಿಲ್ಲ. ಅಂತರಂಗದನುಭವಗಳನ್ನು ತುಮುಲಗಳನ್ನು ನೇರವಾಗಿ ಪ್ರಾಮಾಣಿಕವಾಗಿ ತಿಳಿದ ಭಾಷೆಯಲ್ಲಿ ತಿಳಿಯುವಂತೆ ಹೇಳಿದರೂ ಸಾಹಿತ್ಯವಾಗಬಲ್ಲುದು ಎಂಬುದನ್ನು ತೋರಿಸಿ ಕೊಟ್ಟರು. ಜನಸಾಮಾನ್ಯರ ಆಡುಮಾತನ್ನೇ ಅಂತರಂಗದ ಸೂಕ್ಷ್ಮವಾದ,ನವುರಾದ ಗಾಢವಾದ ಭಾವನೆಗಳ ಅಭಿವ್ಯಕ್ತಿಗೆ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಲ್ಲದೆ, ಗಹನವಾದ ಶಾಸ್ತ್ರವಿಚಾರಗಳಿಗೂ ನಿಗೂಢವಾದ ಆಧ್ಯಾತ್ಮಿಕ ಅನುಭವಗಳಿಗೂ ಮಾಧ್ಯಮವಾಗಿಸಿದರು. ಸ್ತ್ರೀ-ಪುರುಷರ ನಡುವಿನ ಅಂತರವನ್ನು ನಿರಾಕರಿಸಿ ವರ್ಣಭೇದ, ವರ್ಗ ಭೇದಗಳನ್ನು ಪ್ರತಿಭಟಿಸಿ ವಿಪ್ರ ಹಾಗೂ ಅಂತ್ಯಜರನ್ನು ಒಂದೇ ಎನ್ನುವ ಸಮಾನತೆಯ ಚೌಕಟ್ಟಿನಲ್ಲಿರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಚನ ಚಳುವಳಿಯು ಒದಗಿಸಿ ಕೊಟ್ಟಿತು. ಕನ್ನಡನಾಡಿನ ಹನ್ನೆರಡನೇ ಶತಮಾನದ ವಚನ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯು ಹೌದು. ಈ ಚಳುವಳಿಯು ತನಗೆ ತಾನೇ ಸ್ವಯಂಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ. ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತು. ಶಿವಶರಣರ ಆಂದೋಲನದ ನಿಮಿತ್ತವಾಗಿ ರೂಪುಗೊಂಡ ವಚನ ಸಾಹಿತ್ಯವು ಭಕ್ತಿಸಾಹಿತ್ಯದ ಪ್ರತೀಕವಾಗಿರುವುದರ ಜೊತೆಗೆ ಸಾಮಾಜಿಕ ಚಿಂತನೆಯ ಪ್ರತಿಪಾದನೆಯೂ ಆಗಿದೆ. ವಚನಕಾರರು ಶಿವಭಕ್ತರೂ ಹೌದು, ಸಮಾಜಚಿಂತಕರೂ ಹೌದು. ಏಕೆಂದರೆ ವಚನಕಾರರ ವೈಯಕ್ತಿಕ ಜೀವನದಲ್ಲಿ ಕಂಡುಬರುವ ಕೆಲವು ಘಟನೆಗಳು ಆ ಕಾಲದ ಸಾಮಾಜಿಕ ದಾಖಲೆಗಳಾಗಿಯೂ ಕಂಡು ಬರುತ್ತವೆ. ಭಕ್ತಿಯ ಜೊತೆಗೆ ಸಾಮಾಜಿಕ ಚಿಂತನೆಯು ಕಾಣಿಸಿಕೊಂಡಿದ್ದು ಭಾರತೀಯ ಭಕ್ತಿಪಂಥದ ಒಂದಂಗವಾದ ವಚನಚಳುವಳಿಯಲ್ಲೇ ಎಂಬುದು ಗಮನಾರ್ಹ ಅಂಶವಾಗಿದೆ. ಕನ್ನಡ ನಾಡಿನ ಭಕ್ತಿಪಂಥವು ಕೇವಲ ಸಿದ್ಧಾಂತವಾಗಿರದೆ ಚಳುವಳಿಯ ರೂಪದಲ್ಲಿ ಪ್ರಕಟಗೊಂಡಿದೆ. ಸಾಮಾನ್ಯ ಜನಸ್ತರವನ್ನು ಧಾರ್ಮಿಕ ಪ್ರಜ್ಞೆಯ ಪರಿಧಿಯೊಳಗೆ ಒಳಪಡಿಸಿಕೊಳ್ಳ ಬೇಕು ಎಂಬುದು ಭಕ್ತಿಪಂಥದ ಆಶಯವಾಗಿದ್ದಿತು. ಭಕ್ತಿ ಚಳುವಳಿಯು ತನ್ನ ಸ್ವರೂಪವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪಿಸಲು ಪ್ರಯತ್ನಿಸಿತು. ವಚನ ಚಳುವಳಿಯು ರಾಜತ್ವಕ್ಕೆ ಹಾಗೂ ಅದಕ್ಕೆ ಅಂಟಿಕೊಂಡಿದ್ದ ಪುರೋಹಿತ ಶಾಹಿಯ ಭೌತಿಕ ಸವಲತ್ತುಗಳಿಗೆ ಜೋತುಬಿದ್ದ ವರ್ಗಪರಂಪರೆಯ ಜೀವನವನ್ನು ಮೀರುವ ಅದಕ್ಕಿಂತ ಮಿಗಿಲಾಗಿ ತಿರಸ್ಕರಿಸುವ ಹಂತವನ್ನು ತಲುಪಿದ್ದನ್ನು ಗುರುತಿಸ ಬಹುದಾಗಿದೆ. ಬದುಕಿನ ಬಗೆಗಿನ ವಚನ ಚಳುವಳಿಯ ಧೋರಣೆಗಳು ಬಾಹ್ಯವಾಗಿರದೆ ಅಲ್ಲಿಯ ವ್ಯಕ್ತಿಗಳ ಬದುಕಿನ ಅಂಗವಾಗಿಯೇ ಹೊರ ಹೊಮ್ಮಿದವುಗಳಾಗಿವೆ. ವಚನ ಚಳುವಳಿಯು ಭಾಷೆಯ ಬಳಕೆಯಲ್ಲಿ ದೇಸಿ ನುಡಿಗೆ ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡಿದೆ. ಇದರ ಮುಖ್ಯ ಲಕ್ಷಣ ಎಂದರೆ ಅದರ ಮುಕ್ತ ವಾತಾವರಣ, ಜಾತಿ ಭೇದವಿಲ್ಲದೆ ಎಲ್ಲರನ್ನೂ ತಟ್ಟಿದ್ದು. ವಚನಕಾರರು ವೈದಿಕ ವ್ಯವಸ್ಥೆಯ ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರವಾಗಿ ಪ್ರಶ್ನಿಸುತ್ತಾ ನಡೆದು ತನ್ನದೇ ಆದ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಯತ್ನಿಸಿದರು. 

    ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಾದಿ ಪ್ರಮಥರ ಮೂಲಕ ನಡೆದಿರುವುದು ಗಮನಾರ್ಹವಾಗಿದೆ. ಮತದ ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಬಹಳಷ್ಟು ವಚನಕಾರರ ವಚನಗಳು ಇಂದು ಸಾಹಿತ್ಯಕ ಮಾನದಂಡದಿಂದ ಅಳೆದರೆ ತೀರ ಸಾಮಾನ್ಯ ಎನಿಸಬಹುದಾದರೂ ಸಮಾಜಶಾಸ್ತ್ರದ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ. ಬಸವಣ್ಣನ ನೇತೃತ್ವದಲ್ಲಿ ಎಲ್ಲಾ ಶರಣರೂ ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತಪಡಿಸಿಕೊಂಡು ತಮ್ಮ ಸಾಮಾನ್ಯ ಚಿಂತನೆಗಳನ್ನು ಅಭಿವ್ಯಕ್ತ ಪಡಿಸುವ ಧೈರ್ಯ ತೋರಿದ್ದು ಮುಖ್ಯ ಎನಿಸುತ್ತದೆ. ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ ಮಾತನಾಡುವ ಮನಸ್ಸು ಮಾಡಿದ್ದು. 

    ಬಸವಾದಿ ಶರಣರ ನೇತೃತ್ವದಲ್ಲಿ ಕನ್ನಡ ನಾಡಿನಲ್ಲಿ ನಡೆದ ಆಂದೋಲನವು, ಕೇವಲ ಧಾರ‍್ಮಿಕ ಸ್ವರೂಪದ್ದಾಗಿರದೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಬದಲಾವಣೆಗಳಿಗೂ ಕಾರಣವಾಯಿತು. ಶಿವಾನುಭವಿಗಳು, ಲೋಕಾನುಭವಿಗಳು ಆಗಿದ್ದ ವಚನಕಾರರ ಸಾಮಾಜಿಕ ಪ್ರಜ್ಞೆ ಅತ್ಯುನ್ನತ ಮಟ್ಟದ್ದಾಗಿತ್ತು. ವಚನಕಾರರ ಸಾಮಾಜಿಕ ಪ್ರಜ್ಞೆಯಲ್ಲಿ ತಮ್ಮ ಸಮಕಾಲೀನ ಹದಗೆಟ್ಟ ಸಮಾಜವನ್ನು ಯೋಗ್ಯರೀತಿಯಲ್ಲಿ ನಡೆಯಿಸುವ ಧರ್ಮದ ಡಾಂಭಿಕತೆಯನ್ನು ಹೊಡೆದೋಡಿಸಿ ಮಾನವತೆಯನ್ನು ಎಚ್ಚರಗೊಳಿಸುವ, ಪರಂಪರಾಗತ ಶುಷ್ಕ, ಅರ್ಥಹೀನ, ಸವಕಳಿ ನಡೆ ನುಡಿಗಳನ್ನು ತಿದ್ದಿ ಸಜೀವಗೊಳಿಸುವ, ಅಂಧಾನುಕರಣೆಯಲ್ಲಿ ಮುಳುಗಿ ಹೋಗಿದ್ದ ಜನತೆಗೆ ತಮ್ಮ ತಮ್ಮ ವ್ಯಕ್ತಿ ವೈಶಿಷ್ಟ್ಯದ ಬಗೆಗೆ ಅರಿವು ಮೂಡಿಸುವ ಹಲವಾರು ಅಂಶಗಳನ್ನು ಗುರುತಿಸಬಹುದಾಗಿದೆ. ವಚನಕಾರರಿಂದ ಪ್ರವರ್ತನಗೊಂಡ ವೀರಶೈವ ಧರ್ಮವು ಕೇವಲ ಧಾರ್ಮಿಕ ಅವಶ್ಯಕತೆಯಿಂದ ರೂಪುಗೊಂಡಿದ್ದಲ್ಲ. ಅದು ಸಮಾಜೋಧಾರ್ಮಿಕ ಚಳುವಳಿಯ ಫಲಿತ. 

     ಶಿವಶರಣರ ಚಳುವಳಿಯು, ಎಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದಗಳು ಇರುವುದಿಲ್ಲವೋ; ಎಲ್ಲಿ ವ್ಯಕ್ತಿಯ ಬದುಕಿನಲ್ಲಿ ಅವನು ಕೈಗೊಳ್ಳುವ ವೃತ್ತಿಯಿಂದ ಪರಿಗಣಿತವಾಗುವ ತರ-ತಮಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ, ಎಲ್ಲಿ ಏಕದೇವತಾರಾಧನೆಯ ನೆಲೆಯಲ್ಲಿ ಎಲ್ಲರನ್ನು ಸಮಾನರೆಂದು ಕಾಣಬಹುದೋ, ವ್ಯಕ್ತಿಯ ಸದಾಚಾರಗಳಿಂದ ಪರಸ್ಪರ ಶ್ರೇಯಸ್ಸು ಸಾಧಿತವಾಗುವುದೋ ಅಂತಹ ಒಂದು ಧಾರ್ಮಿಕ ನೆಲೆಯನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿತು. ಈ ಒಂದು ಮಹತ್ತರವಾದ ಜವಾಬ್ದಾರಿ ಅಂದಿನ ವಚನಕಾರರೆಲ್ಲರ ಚಿಂತನೆಯ ಮೂಸೆಯಲ್ಲಿ ಹೊರಹೊಮ್ಮಿದ ಕಾರಣ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ಪಾಲುದಾರರು. ಅದರ ಮುಖ್ಯ ಉದ್ದೇಶ ಮಾತ್ರ ಬಹುಜನರ ಹಿತವನ್ನು ಸಾಧಿಸುವ ಒಂದು ಸಾಮಾಜಿಕ ಧರ್ಮವನ್ನು ರೂಪಿಸುವುದಾಗಿತ್ತು. 

       ವಚನಕಾರರಿಗೆ ಕಾಯಕದ ಮೂಲಕ ದೊರೆತ ಸ್ವಾಭಿಮಾನ ದೇವರಿಗೂ ಸವಾಲು ಹಾಕುವ ಮಟ್ಟಕ್ಕೆ ಹೋಗಿತ್ತು ಎಂದರೆ ವಚನ ಚಳುವಳಿಯ ಪರಿಣಾಮ ಎಷ್ಟೊಂದು ಅಗಾಧವಾಗಿತ್ತು ಎಂಬುದನ್ನು ಇದು ತಿಳಿಸುತ್ತದೆ. ಒಂದು ದೃಷ್ಠಿಯಲ್ಲಿ ವಚನ ಚಳುವಳಿ ಕಾಯಕಜೀವಿಗಳ ಚಳುವಳಿಯೇ ಆಗಿದೆ ಎನ್ನಬಹುದು. ಬುದ್ಧಿಯೇ ಮುಖ್ಯ ಅಂದುಕೊಂಡ ಸಮಾಜದಲ್ಲಿ ದೇಹಶ್ರಮಕ್ಕೂ ತನ್ನದೇ ಆದ ಸ್ಥಾನವಿದೆ ಎಂದು ತೋರಿಸಿಕೊಟ್ಟ ವಿಶಿಷ್ಠ ಸಂಸ್ಕೃತಿ ವಚನಕಾರರದಾಗಿದೆ ಎಂದು ಹೇಳಬಹುದು.  

    ಈ ಆಂದೋಲನದಲ್ಲಿ ಪಾಲ್ಗೊಂಡ ಶರಣರು ತಮ್ಮ ಅನಿಸಿಕೆ, ಆಲೋಚನೆ, ಚಿಂತನೆ, ಅನುಭವ,ಅನುಭಾವಗಳನ್ನು ಭಾಷೆಯಲ್ಲಿ ದಾಖಲಿಸಿದರು. ವಚನವು ಈ ದಾಖಲೆಯ ಅಭಿವ್ಯಕ್ತಿ ಮಾಧ್ಯಮವಾಯಿತು. ಸಾಮಾಜಿಕವಾದ ಅಸಮಾನತೆಗಳನ್ನು ಕುರಿತು ವಚನಕಾರರು ತೋರಿದ ಪ್ರತಿಕ್ರಿಯೆಯು ಗಮನಾರ್ಹವಾದುದಾಗಿದೆ. ಶಿವಶರಣರು ಹುಟ್ಟುಹಾಕಿದ ವಚನ ಚಳುವಳಿಯ ಮಹಾಂದೋಲನದಲ್ಲಿ ಇದ್ದುಕೊಂಡೇ ಅದರೊಳಗಿನ ಮೂಢನಂಬಿಕೆ, ಅಜ್ಞಾನ,ಆಡಂಬರಗಳನ್ನು ಕಟುವಾಗಿ ಟೀಕಿಸಿದ ವಚನಕಾರರಲ್ಲಿ ಅಂಬಿಗರ ಚೌಡಯ್ಯನು ಮೊದಲಿಗನಾಗಿದ್ದಾನೆ. ತಳಸಮುದಾಯದಿಂದ ಬಂದ ಅಂಬಿಗರ ಚೌಡಯ್ಯನಲ್ಲಿರುವ ವೈಚಾರಿಕತೆ ಅಗಾಧವಾದುದು. ಪ್ರತಿಯೊಂದನ್ನು ತನ್ನ ಚಿಂತನೆಯ ಕುಲುಮೆಯಲ್ಲಿಟ್ಟು ತಿಕ್ಕಿ ತೀಡಿ ಪರೀಕ್ಷಿಸಿದ ನಂತರವೇ ಸ್ವೀಕರಿಸುವ ಮನೋಭಾವದವನು. ಈತನ ಚಿಂತನಶೀಲಗುಣ ಬೆರಗನ್ನುಂಟುಮಾಡುವಷ್ಟು ಪ್ರಖರವಾಗಿದೆ. ಮೇಲು ವರ್ಗದ ಶಿವಶರಣರಂತೆ ತಮ್ಮಿಷ್ಟ ದೇವತೆಯ ಹೆಸರನ್ನು ಅಂಕಿತವನ್ನಾಗಿ ಇಟ್ಟುಕೊಳ್ಳದೇ ತಳವರ್ಗದವರು ತಮ್ಮ ವೃತ್ತಿ ಹಾಗೂ ಹೆಸರುಗಳನ್ನುವಚನಗಳ ಅಂಕಿತವಾಗಿಟ್ಟುಕೊಂಡರು. ಅಂಬಿಗರ ಚೌಡಯ್ಯನೂ ತನ್ನ ಹೆಸರನ್ನು ಅಂಕಿತವಾಗಿಟ್ಟು ಕೊಂಡದ್ದು ಗಮನಾರ್ಹವಾಗಿದೆ. ಪ್ರಗತಿಪರ ದೃಷ್ಠಿಕೋನವನ್ನು ಹೊಂದಿದ್ದ ಈತನು ವಚನ ಪರಂಪರೆಯಲ್ಲಿ ಬಂಡಾಯ ವಚನಕಾರನೆಂದೆ ಗುರುತಿಸಿಕೊಂಡಿದ್ದಾನೆ. ಅಂಬಿಗರ ಚೌಡಯ್ಯನು ಬಸವಾದಿ ಶಿವಶರಣರ ಸಮಕಾಲೀನನಾಗಿದ್ದು, ದೋಣಿ ನಡೆಸುವ ಕಾಯಕವನ್ನು ಕೈಗೊಂಡಿದ್ದರು. ಶ್ರೇಷ್ಠ ಅನುಭಾವಿ; ಸಾಮಾಜಿಕ ಬದಲಾವಣೆಯ ಬಗೆಗೆ ತೀವ್ರ ಕಳಿಕಳಿಯುಳ್ಳ ಧ್ಯೇಯವಾದಿ; ಅಸತ್ಯ, ಅನ್ಯಾಯ, ಮೂಢನಂಬಿಕೆ, ಅಂಧ ಆಚಾರವಿಚಾರಗಳನ್ನು ಖಂಡಿಸುವ ನಿಷ್ಠುರವಾದಿ. ಇವು ಇವನ ವ್ಯಕ್ತಿತ್ವದ ಮೂರು ಮುಖಗಳು. ಕೆಳಸ್ತರದವನಾಗಿರುವದರಿಂದ ಶೋಷಣೆಗೆ ಒಳಗಾದ ತನ್ನವರ ಎಲ್ಲ ನೋವಿನ ದನಿಗಳ ಪರಿಚಯ ಅವನಿಗಿದೆ.

       ಬಸವಾದಿ ಪ್ರಮಥರ ಹಾಗೆ  ವಚನಕಾರ ಅಂಬಿಗರ ಚೌಡಯ್ಯನ ವೈಯಕ್ತಿಕವಾದ ವಿಷಯದ ಬಗೆಗೆ ಖಚಿತವಾದ ದಾಖಲೆಗಳು ಸಿಗುವುದಿಲ್ಲ. ಅವನ ವಚನಗಳಲ್ಲಿಯೂ ಅಂತಹ ಅಂಶಗಳ ಸುಳಿವು ಕಾಣುವುದಿಲ್ಲ. ಈತನನ್ನು ಕುರಿತು ಯಾವುದೇ ಶರಣ ಕಾವ್ಯ ಪುರಾಣಗಳು ಲಭ್ಯವಿರುವುದಿಲ್ಲ. ೧೨ನೇ ಶತಮಾದ ವಚನ ಸಾಹಿತ್ಯ ಪರಂಪರೆಯಲ್ಲಿಯೇ ಅಂಬಿಗರ ಚೌಡಯ್ಯನೊಳಗೊಂಡಂತೆ ಒಟ್ಟು ನಾಲ್ಕು ಜನ “ಚೌಡಯ್ಯ” ಎಂಬ ಹೆಸರಿನ ಶಿವಶರಣರು ದೊರಕುತ್ತಾರೆ. ಸುರಗಿಯ ಚೌಡಯ್ಯ, ಮುಸುಟಿಯ ಚೌಡಯ್ಯ, ಬಹುರೂಪಿ ಚೌಡಯ್ಯರು ಇತರ ಮೂವರು ಶರಣರಾಗಿದ್ದಾರೆ. 

  ಅಂಬಿಗರ ಚೌಡಯ್ಯ ಬಸವಾದಿ ಶಿವಶರಣರ ಸಮಾಜೋಧಾರ್ಮಿಕ ಆಂದೋಲನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವನು. ಅವನು ನಿಸ್ಸಂಶಯವಾಗಿ ಬಸವಣ್ಣನ ಕಿರಿಯ ಸಮಕಾಲೀನ. ಚೌಡಯ್ಯ ಶೋಷಣೆಗೊಳಗಾದ ವ್ಯಕ್ತಿಗಳ ಪ್ರತಿನಿಧಿ; ಶ್ರೇಷ್ಠ ಅನುಭಾವಿ; ಸಾಮಾಜಿಕ ತೀಕ್ಷ್ಣವಿಡಂಬನಕಾರ. ಮಾನವತಾವಾದಿ. ಆದರೂ ಅವನ ಬಗೆಗೆ ನಂತರದ  ಬಹುತೇಕ ವೀರಶೈವಕವಿಗಳು ಮೌನವಹಿಸಿರುವರು. ಹರಿಹರ-ರಾಘವಾಂಕರಾಗಲಿ, ಪಾಲ್ಕುರಿಕೆ ಸೋಮನಾಥ ಭೀಮಕವಿಗಳಾಗಲಿ, ಲಕ್ಕಣ್ಣ ದಂಡೇಶ-ವಿರೂಪಾಕ್ಷ ಪಂಡಿತರಾಗಲಿ ಇವನ ಹೆಸರನ್ನು ಎಲ್ಲಿಯೂ ನೆನೆದಿಲ್ಲ, ಸಿದ್ಧನಂಜೇಶ ತನ್ನ 'ಗುರುರಾಜ ಚಾರಿತ್ರ'ದಲ್ಲಿ ಗಣಸಹಸ್ರನಾಮವನ್ನು ಹೇಳುವಾಗ ಇವನ ಹೆಸರನ್ನು ಹೇಳಿರುವನು. ತೋಂಟದಸಿದ್ದಲಿಂಗಯತಿಗಳ ಶಿಷ್ಯ ಪರಂಪರೆಯಲ್ಲಿ ಬರುವ ಘನಲಿಂಗಿದೇವನು ತನ್ನವಚನವೊಂದರಲ್ಲಿ ......ಡೋಹರ ಕಕ್ಕಯ್ಯ ಮಾದಾರಚನ್ನಯ್ಯ ಅಂಬಿಗರ ಚೌಡಯ್ಯ ಎಂದು ಉಲ್ಲೇಖಿಸಿರುವನು. ಮಹಾಲಿಂಗದೇವ ತನ್ನʻಗುರುಬೋಧಾಮೃತ'ದಲ್ಲಿ ಕುಂಬಾರ ಗುಂಡಯ್ಯ ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲಿಕ್ಕುವ ಸೊಣಗನ ಮಾಡಿ ಎನ್ನನಿರಿಸಯ್ಯ ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸಿರುವನು. ಷಡಕ್ಷರಿ ತನ್ನ ಬಸವರಾಜ ವಿಜಯ'ದಲ್ಲಿ ಇವನ ಉಲ್ಲೇಖಿಸಿರುವನು. ಕಂಬಾಳ ಶಾಂತಮಲ್ಲನು (೧೬೦೦) ತನ್ನ ʻಗಣವಚನ ರತ್ನಾವಳಿ'ಯಲ್ಲಿ ಇವನ ಹೆಸರನ್ನು ಹೇಳಿರುವನು.

   ಚೌಡದಾನಪುರ, ಮೈಲಾರ, ಕೆರೆಮಲ್ಲಾಪುರ ಇತ್ಯಾದಿ ಶಾಸನಗಳು, ಶಿಶುನಾಳ ಶರೀಫನ ಶಿವದೇವ ವಿಜಯ'ಕೃತಿ-ಇವುಗಳ ಆಧಾರದ ಮೇಲೆ ಅಂಬಿಗರ ಚೌಡಯ್ಯ ೧೩ನೇ ಶತಮಾನದಲ್ಲಿದ್ದನೆಂದು ವಾದಿಸಲಾಗಿದೆ. ಅಂಬಿಗರ ಚೌಡಯ್ಯನ ಕಾಲವನ್ನು ೧೩ನೇ ಶತಮಾನವೆಂದು ಹೇಳುತ್ತಿರುವವರ ವಾದದಂತೆ ೧೩ನೇ ಶತಮಾನದ ಚೌಡದಾನಪುರದ ಶಾಸನದ ಪ್ರಕಾರ ಶಿವದೇವ ಒಡೆಯರ ಶಿಷ್ಯರಲ್ಲಿ ಅಂಬಿಗರ ಚೌಡಯ್ಯನೂ ಒಬ್ಬನು. ಚೌಡದಾನಪುರದ ಅಸ್ಪಷ್ಟ ಶಿಲಾಲೇಖದಲ್ಲಿ ಬರುವ ಮಣಂಬೆನಾಯಕನೇ ಅಂಬೆನಾಯಕನೆಂದೂ, ಈತನೇ ಅಂಬಿಗರ ಚೌಡಯ್ಯನೆಂದೂ ಊಹಿಸಲಾಗಿದೆ. ಮೈಲಾರಶಾಸನದಲ್ಲಿ ಶ್ರೀ ಶಿವದೇವರು ಮುಕ್ತಿನಾಥಲಿಂಗದಲ್ಲಿ ಉದ್ಭವಿಸಿ ಕುರುವತ್ತಿ ಶ್ರೀ ನಂದೀಶ್ವರ, ಶ್ರೀ ಮೈಲಾರಲಿಂಗ, ಶ್ರೀ ಹೊನ್ನಮ್ಮದೇವಿ, ಶಿವಲಿಂಗಧಾರಣಾದಿ ಕಾರ್ಯಗಳನ್ನು ಮಾಡಿದವರು. ಹೀಗಾಗಿ ಅಲ್ಲಿ ಬರುವ ಶಿವದೇವನ ಶಿಷ್ಯನೇ ಅಂಬಿಗರ ಚೌಡಯ್ಯನೆಂದು ವಾದಿಸಲಾಗಿದೆ. ಶಿವದೇವ ಒಡೆಯರಿಗೆ ಶರಣ ಚೌಡಯ್ಯನು ದಾನವಾಗಿ ಕೊಟ್ಟ ಪುರವೇ ಚೌಡದಾನಪುರವೆಂದು ಊಹಿಸಲಾಗಿದೆ. ಚೌಡದಾನಪುರದ ಮಣಂಬೆ ನಾಯಕನೇ ಅಂಬಿಗರಚೌಡಯ್ಯನೆಂಬುದಕ್ಕೆ ಆಧಾರ ಸಾಲದು. ಮೈಲಾರ ಹಾಗೂ ಕೆರೆಮಲ್ಲಾಪುರ ಶಾಸನಗಳಲ್ಲಿ ನಾಮಸಾಮ್ಯ ಮಾತ್ರ ಕಾಣುತ್ತದೆ. ಗುರುಗಳಾದ ಶಿವದೇವ ಒಡೆಯರಿಗೆ ಅಂಬಿಗರಚೌಡಯ್ಯನು ದಾನವಾಗಿ ಕೊಟ್ಟ ಊರೇ ಚೌಡದಾನಪುರವೆಂದು ಹೆಸರಾಯಿತು ಎಂಬ ವಾದದಲ್ಲೂ ಸತ್ಯಾಂಶವಿಲ್ಲ. ಚೌಡಯ್ಯನ ಹೆಸರಿನ ಮುಂದಿರುವ ವೃತ್ತಿವಾಚಕವು ಅವನು ದೋಣಿ ನಡೆಸುವ ಕಾಯಕದವನೆಂಬುದನ್ನು ಸೂಚಿಸುತ್ತದೆ. ಇಂತಹ ಓರ್ವಸಾಮಾನ್ಯಾತಿಸಾಮಾನ್ಯ ವ್ಯಕ್ತಿ ಒಂದು ಊರನ್ನು ದಾನವಾಗಿ ಕೊಡುವುದಕ್ಕೆ ಸಾಧ್ಯವೆ?ಅವನಿಗೆ ಒಂದು ಊರನ್ನು ದಾನವಾಗಿ ಕೊಡುವಷ್ಟು ಅಧಿಕಾರವಾದರೂ ಎಲ್ಲಿತ್ತು ?ಅವನೇನು ರಾಜನೆ? ಮಂತ್ರಿಯೇ? ಮಾಂಡಲಿಕನೇ? ಧನಿಕನೆ ? ಊರೊಂದನ್ನುದಾನವಾಗಿಕೊಡಲು. ಶಿವದೇವ ಒಡೆಯರಿಗೆ ದಾನವಾಗಿರೊಂದನ್ನು ದಾನವಾಗಿ ಕೊಟ್ಟವನು ಅಂಬಿಗರ ಚೌಡಯ್ಯನಿಗಿಂತ ಭಿನ್ನವಾದಬೇರೊಬ್ಬ ಚೌಡಯ್ಯನಿರಬಹುದೆಂಬುದನ್ನು,ಸಮಕಾಲೀನನೆಂಬುದನ್ನು ಅವನ ವಚನಗಳ ಆಂತರಿಕ ಆಧಾರದ ಮೇಲೆ ಹೇಳಬಹುದು. ಅಂಬಿಗರ ಚೌಡಯ್ಯನು ೧೨ನೇ ಶತಮಾನದಲ್ಲಿದ್ದ ಬಸವಾದಿ ಶರಣರ ಗುರುತಿಸಬಹುದು. ಪುರಾಣ ಕಥೆಗಳು ಮತ್ತು ಇದನ್ನೇ ಸತ್ಯವಾಗಿಸಲು ಕೆಲವು ಸಂಶೋಧಕರು ಮಾಡಿದ ಪ್ರಯತ್ನಗಳು ಕಾರಣವಾಗಿವೆಯಾದರೂ ಸಾಬೀತು ಪಡಿಸಲು ಅಧಿಕೃತ ಆಕರಗಳ ಕೊರತೆ ಇದೆ.  ಅಂಬಿಗರ ಚೌಡಯ್ಯನು ತೋರಿದ ಹಲವು ಪವಾಡಗಳಲ್ಲಿ ತುಂಬಿದ ಹೊಳೆಯಲ್ಲಿ ಕಲ್ಲಿನದೊಣಿಯನ್ನು ನಡೆಸಿದುದು ಒಂದಾಗಿದೆ. ಈಗಲೂ ಚೌಡದಾನಪುರದ ತುಂಗಭದ್ರ ನದಿತೀರದಲ್ಲಿ ಒಂದು ಕಲ್ಲಿನ ದೋಣಿ ಇದೆ. ಅಲ್ಲಿಯ ಜನ ಅದನ್ನೇ ಅಂಬಿಗರ ಚೌಡಯ್ಯನಡೆಸಿದ ದೋಣಿ ಎಂದು ಹೇಳುತ್ತಾ ಬಂದಿದ್ದಾರೆ. ಈಗಿನ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ಚೌಡದಾನಪುರ ಅಂಬಿಗರಚೌಡಯ್ಯನ ಜನ್ಮಸ್ಥಳವಾಗಿರಬೇಕು. ಚೌಡದಾನಪುರದ ಸುತ್ತಲಿನ ಜನರ ಬಾಯಲ್ಲಿ ಉಳಿದುಬಂದಿರುವ ಕಥೆಗಳು, ಅಂಬಿಗರಚೌಡಯ್ಯ ಚೌಡದಾನಪುರದವನೇ ಎಂದು ನಂಬುವಂತೆ ಮಾಡಿವೆ. ಜನಪದರ ಈ ನಂಬಿಕೆಯನ್ನು ತಳ್ಳಿಹಾಕುವಂತೆಯೂ ಇಲ್ಲ. ಆದುದರಿಂದ ಅಂಬಿಗರ ಚೌಡಯ್ಯನ ಜನ್ಮಸ್ಥಳ ಚೌಡಯ್ಯದಾನಪುರವೆಂದು ಸದ್ಯ ಒಪ್ಪಬೇಕಾಗಿದೆ.  ಅಲ್ಲಿಯ ತುಂಗಭದ್ರ ನದಿಯಲ್ಲಿ ಕೆಲವು ಕಾಲ ಅಂಬಿಗವೃತ್ತಿಯನ್ನು ಮಾಡಿರಬಹುದು. ಗೋದಾವರಿ ನದಿತೀರದಲ್ಲಿ ಕೆಲವು ದಿನ ತಂಗಲಾಗಿ, ಒಂದು ದಿನ ವಿಪರೀತ ಮಳೆಯಾಗಿ ದಾರಿಕೆಟ್ಟು ಜನಸಂಚಾರ ಅಸ್ತವ್ಯಸ್ತವಾಗುತ್ತದೆ. ವಿಪರೀತ ಸುರಿದ ಮಳೆಯಿಂದಾಗಿ ನದಿದಾಟುವುದು ಸಾಧ್ಯವಾಗದೆ ಜನತೆ ವಿಚಲಿತವಾಗುತ್ತಾರೆ. ಇದನ್ನು ತಿಳಿದ ಚೌಡಯ್ಯ ಜನರ ಸಹಾಯದಿಂದ ಒಂದು ಹರಿಗೋಲನನ್ನು ತಂದು ಅದರ ಮುಖೇನ ಆ ಜನರನ್ನು ಹೊಳೆದಾಟಿಸುತ್ತಾನೆ. ಅಲ್ಲಿಯ ಅಂಬಿಗ ಸೇವೆಯ ಕಾರಣದಿಂದಾಗಿ ಹೋಗಿಬರುವ ಜನರ ಪ್ರೀತಿಗೆ ಗೌರವಕ್ಕೆ ಪಾತ್ರನಾಗಿ ಅಂಬಿಗರಚೌಡಯ್ಯನೆಂದೇ ಕರೆಸಿಕೊಂಡನೆಂಬ ಐತಿಹ್ಯ ಇದೆ. ಬಸವಣ್ಣನ ಪ್ರಸಿದ್ಧಿಯನ್ನು ಕೇಳಿ ಇತರ ಶರಣರಂತೆ ಕಲ್ಯಾಣಕ್ಕೆ ಬಂದಿದ್ದರಬೇಕು. 

    ಅಂಬಿಗರ ಚೌಡಯ್ಯನ ವಚನಗಳನ್ನು ಸಂಪಾದಿಸಿದ ಸಂಪಾದಕರು ಮೊದಲಿಗೆ ಲಭ್ಯವಿರುವ ವಚನಗಳ ಸಂಖ್ಯೆ ೨೭೦ ಎಂದು ಹೇಳಿದ್ದರು. “ಬಸವ ಸಮಿತಿಯ ಹಸ್ತಪ್ರತಿ ಸಂಗ್ರಹದದ ಓಲೆಪ್ರತಿ, ಮೈಸೂರಿನ ಜಿ.ಎ.ಶಿವಲಿಂಗಯ್ಯನವರ ಸಂಗ್ರಹದ ಓಲೆಪ್ರತಿ, ಕನ್ನಡ ಸಾಹಿತ್ಯ ಪರಿಷತ್ತಿನ ಹಸ್ತಪ್ರತಿ ಸಂಖ್ಯೆ ಬಿ.421, ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಓಲೆಗರಿ ಸಂಖ್ಯೆ 49 ಹಾಗೂ ಓಲೆಪ್ರತಿ ಸಂಖ್ಯೆ 1378 (ಗರಿ.72-3) ಗಳನ್ನು ಆಧರಿಸಿ ಅಂಬಿಗರ ಚೌಡಯ್ಯನ 8 ಅಪ್ರಕಟಿತ ವಚನಗಳನ್ನು ಶೋಧಿಸಿ ಎಸ್.ಶಿವಣ್ಣನವರು ಪ್ರಕಟಿಸಿದ್ದಾರೆ.” ಅವುಗಳನ್ನು ಸೇರಿಸಿಕೊಂಡು ಎಂ.ಎಂ.ಕಲಬುರ್ಗಿಯವರು ಸಂಪಾದಿಸಿರುವ ಸಂಕೀರ್ಣವಚನ ಸಂಪುಟದಲ್ಲಿ ಅಂಬಿಗರ ಚೌಡಯ್ಯನ ವಚನಗಳ ಸಂಖ್ಯೆ, ೨೭೮ ಆಗಿದೆ.   ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಹಸ್ತಪ್ರತಿ ಭಂಡಾರದ ಕ್ರ.ಸಂ.ಬಿ.೪೨೧ ರ ಹಸ್ತಪ್ರತಿಯಲ್ಲಿ ಅಂಬಿಗರ ಚೌಡಯ್ಯನ ಅಪ್ರಕಟಿತ ೦೪ ವಚನಗಳನ್ನು ಎಸ್.ಶಿವಣ್ಣನವರು ಶೋಧಿಸಿ ಪ್ರಕಟಿಸಿದ್ದಾರೆ. ಇಂದು ಈ ವಚನಗಳ ಶೋಧನೆಯಿಂದಾಗಿ ಲಭ್ಯವಿರುವ ಅಂಬಿಗರ ಚೌಡಯ್ಯನ ವಚನಗಳ ಸಂಖ್ಯೆ 2೮೨ ಕ್ಕೆ ಹೆಚ್ಚಿದೆ. ಇದರಿಂದಾಗಿ ಈತನ ಸ್ಥಾನವನ್ನು ವಚನಕಾರರ ಪರಂಪರೆಯಲ್ಲಿ ಅಧ್ಯಯನ ಮಾಡಲು ಸಹಕಾರಿಯಾಗಿದೆ.

   ಅಂಬಿಗರ ಚೌಡಯ್ಯನು ತನ್ನ ವಚನಗಳಲ್ಲಿ ಸಮಕಾಲೀನ ಅನೇಕ ಶರಣರನ್ನು ಸ್ಮರಿಸಿದ್ದಾನೆ. ಬಸವಣ್ಣ ನೀಲಲೋಚನೆ, ಚೆನ್ನಬಸವಣ್ಣ, ಅಲ್ಲಮ, ಕುಂಬಾರಗುಂಡಯ್ಯ, ಶ್ವಪಚಯ್ಯ, ಸಾಮವೇದಿ, ಕೆಂಬಾವಿ ಬೋಗಣ್ಣ, ಮರುಳಶಂಕರದೇವ, ಹರಳಯ್ಯ, ಪಡಿಹಾರಿಉತ್ತಣ್ಣ, ಬಬ್ಬಿ ಬಾಚಯ್ಯ, ಚೇರಮರು, ನಂಬಿಯಣ್ಣ ಮುಂತಾದವರೆನ್ನೆಲ್ಲ ನೆನಸಿಕೊಂಡಿದ್ದಾನೆ.ಬಸವಣ್ಣನವರನ್ನು ಅತ್ಯಂತ ಮನಃಪೂರ್ವಕವಾಗಿ ನಮಿಸಿದ್ದಾನೆ. ಆ ವಚನ ಇಂತಿದೆ.

ಗುರುಲಿಂಗ ಜಂಗಮಕ್ಕೆ ಆಧಾರ ಬಸವಣ್ಣ

ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ

ಆ ಬಸವಣ್ಣನ ಶ್ರೀ ಪಾದಕ್ಕೆ ನಮೋ ನಮೋ

ಸರ್ವಾಪತ್ತಿಗಾಧಾರ ಬಸವಣ್ಣ

ಎನುತಿರ್ದಾತನಂಬಿಗ ಚೌಡಯ್ಯ

(ಸಂಕೀರ್ಣ ವಚನ ಸಂಪುಟ-೧ (ಎಂ.ಎಂ.ಕಲಬುರ್ಗಿ)ವ.ಸಂ.೧೩೫ ಪುಟ-೪೬)

ನಂಬಿಯಣ್ಣ ಮಾಡುವ ಭಕ್ತಿ ನಾಡೆಲ್ಲ ಮಾಡಬಹುದಯ್ಯ,

ಕುಂಬಾರಗುಂಡಯ್ಯ ಮಾಡುವ ಭಕ್ತಿ ಊರೆಲ್ಲ ಮಾಡಬಹುದಯ್ಯಾ

ಬಸವಣ್ಣ ಮಾಡಬಹುದಾದ ಭಕ್ತಿ ಶಿಶುವೆಲ್ಲ ಮಾಡಬಹುದಯ್ಯ

(ಸಂಕೀರ್ಣ ವಚನ ಸಂಪುಟ-೧ (ಎಂ.ಎಂ.ಕಲಬುರ್ಗಿ)ವ.ಸಂ.೧೩೫ ಪುಟ-೫೫)

ಧನಧಾನ್ಯದಾಸೆಗೆ ಶಿವದೀಕ್ಷೆ ಕೊಡುವ ಗುರು. ಗುರುತ್ವ ಅರಿಯದ ಶಿಷ್ಯ ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮೆಚ್ಚರಯ್ಯ ಎಂದಿರುವನು. ನಮ್ಮ ಪ್ರಮಥರು ಎಂದರೆ ಬಸವಣ್ಣ ಮೊದಲಾದ ಶರಣರೇ ಹೊರತು ಬೇರೆ ಮತ್ತಾರು ಅಲ್ಲ. ಅಂಬಿಗರ ಚೌಡಯ್ಯನು ತಳಸಮುದಾಯದ ವಚನಕಾರರನ್ನು ಹೆಚ್ಚಾಗಿ ನೆನೆದಿದ್ದಾನೆ.

    ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣನ ನೇತೃತ್ವದಲ್ಲಿ ಶರಣರ ಒಂದು ಗುಂಪು ಉಳುವಿಯ ಕಡೆಗೆ ಹೋದುದು, ಅಲ್ಲಿ ಹಲವು ಕಾಲ ಇದ್ದುದರ ಬಗ್ಗೆ ಅಂಬಿಗರ ಚೌಡಯ್ಯನು ಬಲ್ಲವನಾಗಿದ್ದಾನೆ.

“ಎಲ್ಲ ಪ್ರಮಥರು ಇಲ್ಲಿ ಇರಬಾರದೆಂದು ಕಲ್ಯಾಣವ ಬಿಟ್ಟು

ಉಳುವಿಗೆ ಹೋಗುವಾಗ್ಗೆ ಅಳಿಯ ಬಿಜ್ಜಳನು ದಂಡೆತ್ತಿ ಬರಲು

ಅವರದಂಡು ಹಿಮ್ಮೆಟ್ಟಿಸಿ ಎಲ್ಲ ಪ್ರಮಥರು ಉಳುವಿಗೆ ಬಂದ

ಗಣಪರ್ವ ಮಾಡಿ ಕೈಲಾಸಕ್ಕೆ ಹೋದರು”

ಇಂತಹ ಸಂಗತಿಗಳನ್ನು ಮನಗಂಡಾಗ ಅಂಬಿಗರ ಚೌಡಯ್ಯನು ಕಲ್ಯಾಣ ಕ್ರಾಂತಿಯನಂತರದಲ್ಲಿ ಕೆಲವು ಕಾಲವಾದರೂ ಜೀವಿಸಿರುವ ಸಾಧ್ಯತೆಯಿದೆ. ಅಂಬಿಗರ ಚೌಡಯ್ಯನ ಪ್ರಭಾವವು ಮುಂದಿನ ಕೆಲವು ವಚನಕಾರರು ಮತ್ತು ಕವಿಗಳ ಮೇಲಾಗಿದೆ ಎಂಬುದಕ್ಕೆ

ಅವನನ್ನು ಸ್ಮರಿಸುವ ಮಾತುಗಳು ಆಧಾರವಾಗಿ ನಿಲ್ಲುತ್ತವೆ. ನಿದರ್ಶನಕ್ಕೆ,

ಘನಲಿಂಗದೇವರು ಈತನ ಕಾಲ ಕ್ರಿ.ಶ. ೧೬ನೇ ಶತಮಾನ ಆತನ ವಚನವೊಂದರಲ್ಲಿ ಅಂಬಿಗರ

ಚೌಡಯ್ಯನ ಸ್ಮರಣೆ ಮಾಡಿದ್ದಾರೆ.

“ಎನ್ನ ಮನವೊಪ್ಪಿ ಪಂಚೈವರು

ಸಾಕ್ಷಿಯಾಗಿ ನುಡಿಯುತಿಪ್ಪನಯ್ಯ ನಿಮ್ಮಾಣೆ

ಎನಗೊಂದು ಕರುಣಿಸಯ್ಯ ತಂದೆ

ಡೋಹರ ಕಕ್ಕಯ್ಯ, ಮಾದರಚೆನ್ನಯ್ಯ, ಅಂಬಿಗರಚೌಡಯ್ಯ

ಇಂತಹ ಶಿವಶರಣರ ಮನೆಯ ಬಾಗಿಲಕಾವ

ಶುನಕನ ಮಾಡಿ ಎನ್ನ ನೀ ಸಲಹಯ್ಯ”

(ಬಸವೋತ್ತರ ಯುಗದ ವಚನಕಾರರು: ವೀರಣ್ಣ ರಾಜೂರ ಪುಟ- ೬೬)

ಮಹಾಲಿಂಗದೇವ ತನ್ನ ‘ಗುರುಭೋದಾಮೃತ’ ಕೃತಿಯಲ್ಲಿ ಅಂಬಿಗರ ಚೌಡಯ್ಯನನ್ನು

ಹೀಗೆ ಸ್ತುತಿಸಿದ್ದಾನೆ.

“ಕುಂಬಾರ ಗುಂಡಯ್ಯ ಅಂಬಿಗರ ಚೌಡಯ್ಯ

ಕೆಂಬಾವಿಯೊಳಗೆ ಪುರದ ಬೋಗಣ್ಣನಿಗೆ

ಸಂಭ್ರಮದೊಳೆರಗಿ ನಮಿಸುವೆನು”

“ಗುಮ್ಮಳಾಪುರದ ಸಿದ್ಧಲಿಂಗಯತಿಯು”  ತನ್ನ ಶೂನ್ಯ

ಸಂಪಾದನೆಯಲ್ಲಿ ಅಂಬಿಗರ ಚೌಡಯ್ಯನಿಗೆ ತನ್ನ ಅಭಿಪ್ರಾಯ ಹೇಳುವುದಕ್ಕೆ ಅವಕಾಶ ದೊರಕಿಸಿ

ಕೊಟ್ಟಿದ್ದಾನೆ. ಆ ಭಾಗವು ಇಂತಿದೆ;

ಇದಕ್ಕೆ ಅಂಬಿಗರ ಚೌಡಯ್ಯಗಳ ವಚನ ;

“ಪ್ರಾಣವ ಪ್ರಣವವೆಂದೆಂಬರು ;

ಪ್ರಾಣಕ್ಕೂ ಪ್ರಣವಕ್ಕೂ ಏನು ಸಂಬಂಧ ;

ಪ್ರಾಣವು ಪ್ರಳಯಕೊಳಗು

ತಿರಿಗಿ ತಿರಿಗಿಬಪ್ಪದಕ್ಕೆ ಒಡಲಾಯಿತ್ತು ;

ಪ್ರಣವವು ಪ್ರಸನ್ನವಾಗಿಪ್ಪುದೆಂದನಂಬಿಗರ ಚೌಡಯ್ಯ

ತನುವ ಹುಸಿಮಾಡಿ ಇನ್ನೊಂದು ದಿಟವ ಮಾಡುವ

ಅಣ್ಣಂಗೆ ನಂಬುಗೆ ಇನ್ನಾವುದಯ್ಯ ?

ತನ್ನೊಳಗಿದ್ದ ಘನವ ತಾ ತಿಳಿಯಲರಿಯದೆ

ಪರಬ್ರಹ್ಮಕ್ಕೆ ತಲೆಯಿಕ್ಕಿ ತೆಗೆವೆನೆಂಬ ಅಣ್ಣ ಗಾವಿಲನೆಂಬಿಗರ ಚೌಡಯ್ಯ

(ಗುಮ್ಮಳಾಪುರದ ಸಿದ್ಧಲಿಂಗಯತಿಗಳು: ಶೂನ್ಯಸಂಪಾದನೆ ಪುಟ-೧೮೪)

  ಕಲ್ಯಾಣಕ್ಕೆ ಬಂದ ಚೌಡಯ್ಯನನ್ನು ಗಮನಿಸಿದ ಕೆಲ ಕುಹಕಿಗಳು ಬಸವಣ್ಣನವರಿಗೆ ಹೀಗೆನ್ನುತ್ತಾರೆ. ಶರಣರೆ, ಇಷ್ಟಲಿಂಗ ಧರಿಸದ ಚೌಡಯ್ಯ ಒಬ್ಬ “ಭವಿ” ಆತನಿಗೆ ಅನುಭವಮಂಟಪದಲ್ಲಿ ಅವಕಾಶ ನೀಡಬಾರದೆಂದು” ಹೇಳುತ್ತಾರೆ. ಇದನ್ನರಿತ ಚೌಡಯ್ಯ:

ನೇಮಸ್ತನೇನು ಬಲ್ಲನಯ್ಯಾ ಲಿಂಗದ ಕುರುಹ

ಸೂಳೆಯ ಮಗನೇನು ಬಲ್ಲನಯ್ಯಾ ತಂದೆಯ ಕುರುಹ!

ಇಂತಿಪ್ಪ ಅಂಗವೆ ಲಿಂಗ, ಲಿಂಗವೇ ಜಂಗಮ,

ಜಂಗಮವೇ ಲಿಂಗವೆಂದರಿಯದವನು

ಭಕ್ತನೆಂದರೆ, ಅಘೋರ ನರಕವೆಂದಾತ

ನಮ್ಮ ಅಂಬಿಗರಚೌಡಯ್ಯ ನಿಜಶರಣನು. ಚೌಡಯ್ಯನ ಇಂಥ ಕಠೋರ, ನಿಷ್ಟೂರ, ವೈಚಾರಿಕತೆಯನ್ನು ಅಲ್ಲಿನ ಶರಣ ಸಮೂಹ ಕೊಂಡಾಡುತ್ತದೆ. ಆದರೂ ಇಂತಹ ಕುಹಕಿಗಳ ಮಾತಿಗೆ ಬಲಿಯಾಗಬಾರದೆಂದು ತಾವೂ ಇಷ್ಠಲಿಂಗ ಧಾರಣ ಮಾಡುತ್ತಾರೆ. ಅಲ್ಲಿ ಕೆಲವುಕಾಲ ಅನುಭವ ಮಂಟಪದ ಚಿಂತನಾಗೋಷ್ಠಿಯಲ್ಲಿ  ಪಾಲ್ಗೊಳ್ಳುವುದರ ಜೊತೆಗೆ ಜಂಗಮ ದಾಸೋಹಗಳಲ್ಲಿ ಕೆಲಕಾಲ ತನ್ನನ್ನು ತೊಡಗಿಸಿಕೊಂಡಿದ್ದಿರ ಬೇಕು ಎಂದೆನಿಸುತ್ತದೆ. ಮುಂದೆ ಕಾಯಕ ಶ್ರದ್ಧೆಯ ಕಾರಣವಾಗಿ, ಸಮೀಪದ ಕೃಷ್ಣಾನದಿ ತೀರದಲ್ಲಿ ಒಂದು ಕುಟೀರ ನಿರ‍್ಮಿಸಿಕೊಂಡು ಅಲ್ಲಿಯೇ ನೆಲಸಿ ಅಂಬಿಗ ವೃತ್ತಿ ಕೈಗೊಳ್ಳುತ್ತಾರೆ. ಶರಣ ಚಳುವಳಿಯಲ್ಲಿ ಪಾಲ್ಗೊಂಡ ಚೌಡಯ್ಯ ಕಲ್ಯಾಣಕ್ರಾಂತಿಯ ನಂತರ ಚೌಡಯ್ಯದಾನಪುರಕ್ಕೆ ಬಂದು ಅಲ್ಲಿಯೇ ಐಕ್ಯ ಹೊಂದಿದ್ದಾನೆ  ಎಂಬ ಹೇಳಿಕೆ ಇದೆಯಾದರೂ ಸಮರ್ಥಿಸಲು ಬಲಿಷ್ಠ ಆಧಾರಗಳು ಬೇಕಾಗುತ್ತವೆ.

   ಚೌಡಯ್ಯನವರು ಜನಸಾಮಾನ್ಯರ ಬದುಕನ್ನು ನೋಡುತ್ತಾ ನಾ ಹೆಚ್ಚು, ನೀ ಹೆಚ್ಚು ಎಂದುಹೇಳಿಕೊಳ್ಳಬೇಡಿರಿ, ಏಕೆಂದರೆ ನಿಜವಾದ ಶೀಲವು ಬಾಹ್ಯಾಚಾರಗಳಲ್ಲಿಲ್ಲ. ಅದು ನೀತಿಶುದ್ಧ ಆಚರಣೆಯಲ್ಲಿದೆ. ಕುಲ ಎನ್ನುವುದು ಹುಟ್ಟಿನಿಂದ ನಿರ್ಧಾರವಾಗುವಂತಹದ್ದಲ್ಲ; ಅವರವರ ಗುಣಧರ್ಮಗಳಿಂದ ನಿರ್ಧರಿತವಾಗುವಂತಹದು ಎಂದು ಚೌಡಯ್ಯ ಅತ್ಯಂತ ಮಾರ್ಮಿಕವಾಗಿ ಹೇಳಿ ಅಂಥವರನ್ನು ಕುರಿತು ತಿರಸ್ಕಾರ ಪೂರ್ವಕವಾಗಿ ಮಾತನಾಡಿದ್ದಾನೆ.

     ಸಾಮಾಜಿಕ ಶೋಷಣೆಯ ಎಲ್ಲ ನೆಲೆಗಳ ಅರಿವಿರುವ ಅವನು ಸಹಜವಾಗಿಯೇ ಮೇಲ್ವರ್ಗದವರ ನಡಾವಳಿಯಲ್ಲಿನ ವೈರುಧ್ಯಗಳನ್ನು ಕಂಡು ಕೆರಳುವನು. ಈ ವರ್ಗದವರ ವಿರುದ್ಧ ಬಂಡಾಯವೇಳುವನು. ಈ ಮನೋಧರ‍್ಮವೇ ಅವನ ವಚನಗಳಲ್ಲಿ ಎದ್ದು ಕಾಣುವ ಪ್ರಮುಖ ಗುಣವಾಗಿರುವದರಿಂದ ಬೇರಾವ ವಚನಕಾರನಲ್ಲೂ ಕಾಣದಿರುವ ಒರಟುತನವನ್ನು ಈತನಲ್ಲಿ ಕಾಣಬಹುದಾಗಿದೆ.  ವಚನಕ್ರಾಂತಿಯ ಒಡಲೊಳಗಿಂದ ಮೂಡಿಬಂದ ಚೌಡಯ್ಯನು ಸಹಜವಾಗಿಯೇ ವೇದ, ಶಾಸ್ತ್ರ, ಪುರಾಣಗಳನ್ನು ಅಲ್ಲಗಳೆದಿದ್ದಾನೆ.

 ವೇದವನೋದಿದರೆಲ್ಲ ವಿಧಿಗೊಳಗಾದರಲ್ಲದೆ ದೇವರಿಹ ಠಾವನರಿದುದಿಲ್ಲ,

ಶಾಸ್ತ್ರವನೋದಿದವರೆಲ್ಲ ಸಂಶಯಕ್ಕೊಳಗಾದರಲ್ಲದೆ

ಸದ್ಗುರುವನರಿದುದಿಲ್ಲ 

ಈ ವಚನದಲ್ಲಿ ವೇದಾಗಮ ಪುರಾಣಗಳ ಹುಟ್ಟನ್ನೇ ಗುರುತಿಸಿ ಅವುಗಳನ್ನು ಅಣಕಿಸಿರುವುದನ್ನು ನೋಡಬಹುದು.

ನಾದದ ಬಲದಿಂ ವೇದಂಗಳಾದುವಲ್ಲದೆ

ವೇದ ಸ್ವಯಂಭುವಲ್ಲ,

ಮಾತಿನ ಬಲದಿಂದ ಶಾಸ್ತ್ರಂಗಳಾದುದಲ್ಲದೇ

ಶಾಸ್ತ್ರ ಸ್ವಯಂಭುದಲ್ಲ, ನಿಲ್ಲು . . . . . . .

ಇಂತೀ ಮಾತಿನ ಬಣಬೆಯ ಮಂದಿಟ್ಟುಕೊಂಡು

ಆತನ ಕಂಡೆಹೆನೆಂದಡೆ . . . . . .

ಆತನೆಂತು ಸಿಲುಕುವನೆಂದಾತನಂಬಿಗ ಚೌಡಯ್ಯ(ಸಂ.ವ.ಸಂ,೧ ವ.ಸಂ-೧೬೦)

ವೇದ, ಶಾಸ್ತ್ರ ಪುರಾಣಾದಿಗಳು ತಮ್ಮಿಂದ ತಾವೇ ಹುಟ್ಟಿದವುಗಳಲ್ಲ, ಒಂದರಿಂದ ಒಂದುಹುಟ್ಟಿದವು. ಆದ್ದರಿಂದ ಇವು ಹುರುಳಿಲ್ಲದ ಮಾತಿನ ಬಣಬೆಗಳಾಗಿವೆ. ಇಂಥವುಗಳನ್ನೇ ಸತ್ಯವೆಂದೂ ಅವುಗಳ ವರ್ಣನೆಯಿಂದಲೇ ಶಿವನ ನೆಲೆಯನ್ನು ಕಾಣಲು ಸಾಧ್ಯವೆಂದೂ ನಂಬಿದವರಿಗೆ ತಿಳಿಸಿ ಹೇಳಿದ ಪರಿ ವಿನೂತನವಾಗಿದೆ. ಕೇವಲ ವೇದ, ಶಾಸ್ತ್ರಾದಿಗಳನ್ನು ತಿರಸ್ಕರಿಸಿ ಸುಮ್ಮನಾಗದ ಚೌಡಯ್ಯ ವಾಸ್ತವ ಪ್ರಜ್ಞೆಯಲ್ಲಿ

ಅವುಗಳನ್ನು ವ್ಯಾಖ್ಯಾನಿಸಿ ಸಾಮಾನ್ಯ ಜನರ ಬದುಕು ಹಸನುಮಾಡಲು ಯತ್ನಿಸುತ್ತಾನೆ. 

 ಪುರೋಹಿತಶಾಹಿಗಳ ಮತ್ತು ಮೇಲ್ವರ್ಗದವರ ದಬ್ಬಾಳಿಕೆಗೆ ಅಂದಿನ ಕೆಳಸಮುದಾಯದಜನ ನೊಂದುಕೊಂಡಿದ್ದರು, ಬೇಸತ್ತಿದ್ದರು ಎನಿಸುತ್ತದೆ. ಅದಕ್ಕೆ ಸ್ಪಂದಿಸುವ ಚೌಡಯ್ಯ ಹೀಗೆಹೇಳುತ್ತಾನೆ.

ಕಷ್ಟದ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ

ಎತ್ತ ಹೋದವು ನಿಮ್ಮ ಶಾಸ್ತ್ರಂಗಳು ?

ಕೆತ್ತ ಮುಚ್ಚುಳು ಬೇಡಂಗಚ್ಚರಿದೆರೆವಾಗ

ಇಕ್ಕಿದ ಜನ್ನಿವಾರ ಭಿನ್ನವಾದುವು |

ಮುಕ್ಕುಳಿಸಿದುದಕವ ತಂದೆರೆದಡೆ

ಎತ್ತಲಿದ್ದವು ನಿಮ್ಮ ವೇದಂಗಳು

ನಿಮ್ಮ ವೇದದ ದುಃಖ ಬೇಡೆಂದಾತನಂಬಿಗ ಚೌಡಯ್ಯ(ಸಂ.ವ.ಸಂ,೧ ವ.ಸಂ.- ೯೨)

 ಮೇಲಿನ ವಚನದಲ್ಲಿ ಶಿವಭಕ್ತ ಶ್ರೇಷ್ಠರು ಶಿವನೊಲುಮೆ ಪಡೆದ ಎರಡು ನಿದರ್ಶಗಳನ್ನುಉಲ್ಲೇಖ ಮಾಡುವುದರ ಮುಖಾಂತರ ಅಂಬಿಗರಚೌಡಯ್ಯನು ವೈದಿಕತನವನ್ನು ಲೇವಡಿಮಾಡಿದ್ದಾನೆ. ಮೊದಲನೆಯದೆಂದರೆ ಚೋಳ ಅರಸನ ಲಾಯದ ಕೆಲಸ ಮಾಡಿಕೊಂಡಿದ್ದ ಮಾದಾರ ಚೆನ್ನಯ್ಯ ಬಸವಪೂರ್ವಯುಗದ ಮಹಾಶರಣ ಪರಮಶಿವಭಕ್ತ. ಆದರೆ ಅವನ ಜಾತಿ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಕನಿಷ್ಟ ಸ್ತರದಲ್ಲಿದ್ದಿತ್ತು. ಅವನು ಒಂದು ಅರ್ಥದಲ್ಲಿಅಸ್ಪೃಶ್ಯನೇ ಆಗಿದ್ದನೆನ್ನಬೇಕು. ಚೋಳರಾಜನೂ ಶಿವಭಕ್ತನೇ ಆಗಿದ್ದವನು, ದಿನನಿತ್ಯವೂ ಅವನ ಅರಮನೆಗೆ ಬಂದ ಜಂಗಮ ವೇಷದ ಶಿವನು ಪ್ರಸಾದ ಸೇವಿಸಿ ಹೋಗುತ್ತಿದ್ದಂತೆ ಕತೆ ಬರುತ್ತದೆ. ಅರಸನಲ್ಲಿ ಮೃಷ್ಟಾನ್ನ ಭೋಜನವುಂಡ ಬಾಯಿ ಕೆಟ್ಟಂತಾಗಿ ಶಿವನು ಮಾದಾರ ಚೆನ್ನಯ್ಯನ ಗುಡಿಸಲಿನಲ್ಲಿ ರುಚಿ-ರುಚಿಯಾದ ಅಂಬಲಿಯುಂಡು ಸಂತೃಪ್ತಗೊಂಡನಂತೆ. ದೇವನಿಗೆ ಹುಟ್ಟಿದಜಾತಿ ಮುಖ್ಯವಲ್ಲ ಅವರು ಬದುಕಿನಲ್ಲಿ ಸಾಧಿಸಿದ ಭಕ್ತಿಯ ಸಾಧನೆ ಮಹತ್ವದ್ದು. ಇದನ್ನೇಅಂಬಿಗರ ಚೌಡಯ್ಯನು ಕಷ್ಟದ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ ಎತ್ತ ಹೋದವು ನಿಮ್ಮ ಶಾಸ್ತ್ರಂಗಳು? ಎಂಬ ಮಾತಿನಿಂದ ಸೂಚಿಸಿದ್ದಾನೆ. ಹುಟ್ಟಿನ ಜಾತಿಯನ್ನೆ ಮೂಲವಾಗಿಟ್ಟುಕೊಂಡು ಮನುಷ್ಯ ವರ್ಗದಲ್ಲಿ ಭೇದವನ್ನು ನಿರ್ಮಿಸಿದ ಶಾಸ್ತ್ರಗಳನ್ನೇ ಮುಂದು ಮಾಡಿಕೊಂಡು ಮೆರೆಯುತ್ತಿದ್ದ ವೈದಿಕರನ್ನು ಮೇಲಿನ ಘಟನೆಯನ್ನು ವಿವರಿಸಿ ಅವರ ಪೊಳ್ಳುತನವನ್ನು  ವಿಡಂಬಿಸಿದ್ದಾನೆ.

  ಎರಡನೆಯದಾಗಿ ಬೇಡರ ಕಣ್ಣಪ್ಪನ ಘಟನೆಯೊಂದನ್ನು ಈ ವಚನದಲ್ಲಿ ಬಳಸಿಕೊಳ್ಳುತ್ತಾನೆ. ಕಣ್ಣಪ್ಪ ವೃತ್ತಿಯಿಂದ ಬೇಟೆಗಾರ, ಮುಗ್ಧ, ಯಾವುದೇ ವೇದಶಾಸ್ತ್ರಗಳನ್ನು ಓದದಂತಹ ನಿರಕ್ಷರಜೀವಿ ಆದರೆ ಅವನು ಶಿವನನ್ನು ಅನನ್ಯ ಭಕ್ತಿಯಿಂದ ಆರಾಧಿಸುತ್ತಿದ್ದನು. ಮಣ್ಣಿನ ಮುಚ್ಚಳದಲ್ಲಿ ಮಾಂಸವನ್ನೇ ಶಿವನಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದನು. ಶಿವನ ಸನ್ನಿದಿಗೆ ತಂದಾಗ ಅದೆಲ್ಲ ರಸಭರಿತ ಫಲವಾಗುತ್ತಿತ್ತು. ಕೂಪನದಿಯ ನೀರನ್ನು ಬಾಯಿಯಲ್ಲಿ ಹಿಡಿದುಕೊಂಡು ಬಂದು ಶಿವಲಿಂಗಕ್ಕೆ ಮಜ್ಜನವೆಂದು ಲಿಂಗಪೀಠದ ಮೇಲೆ ಭಕ್ತಿಯಿಂದ ಉಗುಳುತ್ತಿದ್ದನು. ಇಂತಹ ಮಹಾ ಮುಗ್ದ ಭಕ್ತರಿಗೆ ಶಿವನು ಪ್ರತ್ಯಕ್ಷನಾಗಿ ಮುಕ್ತಿಯನ್ನು ಕರುಣಿಸಿದನೆಂದು ಪುರಾಣದ ಕಥೆ ಹೇಳುತ್ತದೆ. ಇಂತಹ ಘಟನೆ ನಡೆಯುವಾಗ ನಿಮ್ಮ ಜನಿವಾರಗಳು ಏನಾದವು? ನಿಮ್ಮ ವೇದಗಳು ಎಲ್ಲಿ ಅಡಗಿದ್ದವು? ಎಂದು ಚೌಡಯ್ಯ ಪುರೋಹಿತರನ್ನು  ಪ್ರಶ್ನಿಸಿದ್ದಾನೆ. ಚೌಡಯ್ಯನ ವಿಚಾರಗಳನ್ನು ಇಲ್ಲಿ ಗಮನಿಸಬಹುದು.

ಕುರಿಕೋಳಿಕಿರುಮೀನು ತಿಂಬವರ

ಊರೊಳಗೆ ಇರು ಎಂಬರು

ಅಮೃತಾನ್ನವ ಕರೆವ ಗೋವ ತಿಂಬವರ

ಊರಿಂದ ಹೊರಗೆ ಇರು ಎಂಬರು(ಸಂ.ವ.ಸಂ,೧ ವ.ಸಂ.-೧೦೫)

ಅಂಬಿಗರ ಚೌಡಯ್ಯನ ವೈಚಾರಿಕತೆ ಎಷ್ಟು ತೀಕ್ಷ್ಣ ಎಂಬುದಕ್ಕೆ ಸಾಕ್ಷಿಯಂತಿವೆ ಮೇಲಿನ ಮಾತುಗಳು ಕುರಿಕೋಳಿ, ಮೀನು ಮುಂತಾದ ಪ್ರಾಣಿಗಳೆಲ್ಲ ತಿಂದು, ತಾವು ಪರಿಶುದ್ಧರೆಂದು ಹೇಳಿಕೊಳ್ಳುತ್ತ ಊರೊಳಗಿರುವ ಮೇಲುಜಾತಿಯವರ ದುರಾಚಾರವನ್ನು ವಚನದ ಆರಂಭದಲ್ಲಿಯೇ ವಿಡಂಬಣೆಗೆ ಒಳಗುಮಾಡುತ್ತಾನೆ. ಹಾಗೆಯೇ ಗೋವಿನ ಮಾಂಸವ ತಿನ್ನುವವರನ್ನು ಕೀಳುಜಾತಿಯವರೆಂದು ಕರೆದು ಅವರನ್ನು ಊರಿನಿಂದ ಹೊರಗಡೆ ಇಟ್ಟಿರುವ ವೈದಿಕಧರ್ಮದ ನಿಲುವನ್ನು ಖಂಡಿಸುತ್ತಾನೆ. ಊರ ಒಳಗಡೆ ಇರುವವರು, ಅದರ ಹೊರಗೆ ಇರುವವರು, ಉಭಯರೂ ಮಾಂಸವನ್ನೇ ತಿನ್ನುತ್ತಿರುವಾಗ, ಊರೊಳಗಿರುವವರು ಮೇಲು ಹೇಗಾಗುತ್ತಾರೆ? ಹೊರಗೆ ಇರುವವರು ಕೀಳು ಹೇಗೆ ಆಗುತ್ತಾರೆ? ಎಂದು ಪ್ರಶ್ನೆ ಮಾಡುವ ಚೌಡಯ್ಯನ ದಿಟ್ಟತನ ಎದ್ದು ಕಾಣುತ್ತದೆ.

 ಕುಲವನ್ನಾಚರಿಸುವ ಲೋಕವೆಲ್ಲ ಚೌಡಯ್ಯನಿಗೆ ಬೂಟಾಟಿಕೆಯಾಗಿ ಕಂಡಿದೆ. ಅದಕ್ಕೆ ವ್ಯಗ್ರವಾಗುತ್ತಾನೆ.

ಕೀಳುಕುಲದವನೆಂದು ಹಳಿಯುವ ಕುಲಗೇಡಿಗಳನ್ನು ಕುರಿತು ಅವನು:

ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು

ನಂಬಿದರೆ ಒಂದೆ ಹುಟ್ಟಲಿ

ಕಡೆಯ ಹಾಯಿಸುವನಂಬಿಗರ ಚೌಡಯ್ಯ(ಸಂ.ವ.ಸಂ೧, ವ.ಸಂ.೭)

ಎಂದು ತನ್ನ ಶಕ್ತಿ ಸಾಮರ್ಥ್ಯವನ್ನು ಹೇಳಿಕೊಳ್ಳುವ ಮೂಲಕ ವೃತ್ತಿ ಗೌರವವನ್ನು ಸ್ವಾಭಿಮಾನದಿಂದಲೇ ಪ್ರಸ್ತಾಪಿಸಿದ್ದಾನೆ. ಆದುದರಿಂದಲೇ ಅಂಬಿಗರ ಚೌಡಯ್ಯ ತಾನುಮಾಡುವ ಕಾಯಕದ ವಿವರಗಳನ್ನು ತನ್ನ ಆತ್ಮಸಾಕ್ಷಾತ್ಕಾರದ ಅಭಿವ್ಯಕ್ತಿಗೆ ಸಂಕೇತವಾಗಿ ಬಳಕೆಮಾಡಿಕೊಂಡಿರುವುದನ್ನು ಕಾಣುತ್ತೇವೆ. ಜಾತಿ ಮತ್ತು ವೃತ್ತಿಯಿಂದ ಭೌತಿಕ ಬದುಕಿನಲ್ಲಿ ಅಂಬಿಗನಾಗಿದ್ದಂತೆ ಆಧ್ಯಾತ್ಮಲೋಕದಲ್ಲೂ ‘ಅಂಬಿಗ’ನೇ ಆಗಿರಲು ಹೆಮ್ಮೆಪಡುತ್ತಾನೆ. ಅಂಬಿಗನ ಕಾಯಕವೆಂದರೆ ಜನರನ್ನು ತುಂಬಿದ ಕೆರೆ, ಹೊಳೆಗಳನ್ನು ಹರಗೋಲಿನ ಸಹಾಯದಿಂದ ದಾಟಿಸುವುದು, ಅಂಬಿಗರ ಚೌಡಯ್ಯನು ಕೇವಲ ಭೌತಿಕವಾದ ಅಂಬಿಗ ಕಾಯಕದಲ್ಲಿಯೇ ನಿಂತವ್ಯಕ್ತಿಯಲ್ಲ. ಅವನು ಕಾಯಕ ನಿರ್ವಹಿಸುತ್ತಾ ಗುರುಲಿಂಗಜಂಗಮ ದಾಸೋಹ ಶಿವಾನುಭವಗೋಷ್ಠಿ ನಡೆಸುತ್ತಾ ನಿಜಶರಣತ್ವ ಸಿದ್ಧಿಯನ್ನು ಗಳಿಸಿಕೊಂಡವನು. ಜೊತೆಗೆ ಲೋಕವನ್ನು ಭವದ ಸಮುದ್ರದಿಂದ ದಾಟಿಸುವ ಅಂಬಿಗನೂ ಆದವನು. ಅವನು ನಿಜಜೀವನದಲ್ಲಿ ಮಾಡುವ ಕಾಯಕದ ಪರಿಯನ್ನೇ ವಚನವಾಗಿಸುತ್ತ, ಕಾಯಕದ ಪ್ರಕ್ರಿಯೆಗಳ ಮುಖವನ್ನು ಶಿವನತ್ತ ತಿರುಗಿಸುತ್ತಾನೆ.

  ದೇವಸ್ಥಾನ, ದೇವರು ಮತ್ತು ಢಾಂಬಿಕ ಭಕ್ತಿಯ ಕುರಿತು ಅಂಬಿಗರ ಚೌಡಯ್ಯ ಪ್ರತಿಭಟಿಸುತ್ತಾನೆ.

ಕಟ್ಟಿದ ಲಿಂಗವ ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ

ಹೊಟ್ಟೆಯಡಿಯಾಗಿ ಬೀಳುವ, ಲೊಟ್ಟ ಮೂಳನ ಕಂಡರೆ

ಮೆಟ್ಟಿದ್ದ ಎಡ ಪಾದರಕ್ಷೆಯ ತಕ್ಕೊಂಡು

ಲಟಲಟನೆ ಹೊಡೆ ಎಂದ ಅಂಬಿಗ ಚೌಡಯ್ಯ(ಸಂ.ವ.ಸಂ.೧ ವ.ಸಂ.-೮೨)

ಮೇಲಿನ ಮಾತಿನ ಮೂಲಕ ಚೌಡಯ್ಯ ದೇಗುಲವೆಂಬ ದೇಹದಲ್ಲಿಯೆ ಕಟ್ಟಿಕೊಂಡಿರುವ‘ಲಿಂಗ’ವೆಂಬ ದೇವರನ್ನು ನಿರಾಕರಿಸಿ ದೇವಸ್ಥಾನಕ್ಕೆ ಹೋಗುವ ಡಾಂಬಿಕರಿಗೆ ಪಾದರಕ್ಷೆಯಿಂದ ಆರತಿ ಎತ್ತುತ್ತಾನೆ. ‘ಹತ್ತು ಮತ್ತರದ ಭೂಮಿ, ಭತ್ತದ ಹಯನು, ನಂದಾದೇವಿಗೆಯ ಮಾಡಿದೆವೆಂಬರ ಮುಖವ ನೋಡಲಾಗದು, ಅವರ ನುಡಿಯ ಕೇಳಲಾಗದು’ ಎಂಬ ನುಡಿ ದೇವಸ್ಥಾನಕ್ಕಾಗಿ ದಾನದತ್ತಿಯನ್ನು ಬಿಡುವ ಶ್ರೀಮಂತರನ್ನು ಕುರಿತ ಪ್ರತಿಭಟನೆಯಾಗಿದೆ.“

ಕೊರಳಿಗೆ ಕವಡಿಯ ಕಟ್ಟಿ

ನಾಯಾಗಿ ಬೊಗಳುವ ಅದಾವ ವಿಚಾರವಯ್ಯಾ ?

ಹುರಿಬೆನ್ನ ಶಿಡಿಬಾಯ ಬಿಗಿದಲ್ಲಿ

ಹಿಡಿದು ಹೋಗುವುದಾವ ವಿಚಾರವಯ್ಯ ?

ಬೇವಿನ ಉಡುಗೆಯನ್ನುಟ್ಟು ಹಡಲಿಗೆ ಹೊತ್ತು

ಉದೋ ಉದೋ ಎಂಬುದು ಅದಾವ ವಿಚಾರವಯ್ಯಾ ?

 ಮೈಲಾರನ ಭಕ್ತರು ನಾಯಿಯಂತೆ ಬೊಗಳುವುದನ್ನು, ಅಂಬಾಭವಾನಿಯ ಹಿಂಬಾಲಕರು ಕವಡಿಸರ ಕಟ್ಟಿಕೊಳ್ಳುವುದನ್ನು, ಎಲ್ಲಮ್ಮನ ಭಕ್ತರು ದೇವಿಗೆ ಹರಕೆಹೊತ್ತು ಹುಟುಗಿಯುಟ್ಟು ಬಾಯಲ್ಲಿ ಬೇವುಕಚ್ಚಿ ಹಿಡಿಯುವುದನ್ನು, ಎಲ್ಲಮ್ಮನ ಜೋಗತಿಯರು ಜಗ, ಹಡ್ಡಲಗಿ, ಕೊಡಹೊತ್ತು ಕುಣಿಯುವುದನ್ನು ಮೇಲಿನ ವಚನದಲ್ಲಿ ವಿಡಂಬಿಸಿ, ಹೀಗೆ ಮಾಡುವುದು ಅದಾವ ವಿಚಾರ ಎಂದು ಕಟು ನಿಷ್ಠೂರವಾಗಿಯೇ ಹೇಳಿದ್ದಾನೆ. ಭವಿತನಕ್ಕೆ ಹೇಸಿ ಭಕ್ತನಾದ ಮೇಲೂ ಕೊರಳಿಗೆ ಕವಡೆಯನ್ನು ಕೊಂಡು, ನಾಯಾಗಿ ಬೊಗಳುವ ಮೈಲಾರನ ಭಕ್ತರ ಆಚರಣೆಯನ್ನೂ; ಬೆನ್ನಿಗೆ ಚಾವಟಿ ಏಟು ಹೊಡೆದುಕೊಳ್ಳುವುದು, ಸಿಡಿ ಹೋಗುವುದು, ಬಾಯಿಬೀಗಹಾಕಿಕೊಳ್ಳುವುದು, ಬೇವಿನ ಉಡುಗೆ ಧರಿಸಿ ಹಡಲಿಗೆಯನ್ನು ಹೊತ್ತು ಉಧೋರೋ ಎನ್ನುವುದು-ಈ ಬಗೆಯ ಮಾರಿದೇವತೆಯ ಭಕ್ತರ ಆಚರಣೆಯನ್ನು ಚೌಡಯ್ಯ ಖಂಡಿಸಿ ಇವರನ್ನು ಶಿವದ್ರೋಹಿಗಳು ಎಂದು ಕರೆಯುವನು. ಕ್ಷುದ್ರದೈವತೋಪಾಸನೆಯೂ ಆಗಿನಸಾಮಾಜಿಕ ನೆಲೆಯಲ್ಲಿ ಪ್ರಚಲಿತವಿದ್ದಿತ್ತು. ಮೈಲಾರ, ಬೀರ, ಭೈರವ, ಧೂಳಭಕ್ತರೆನ್ನಿಸಿಕೊಂಡವರನ್ನು ಚೌಡಯ್ಯ ಚಂಡಿನಾಯಿಗಳೆಂದು ಕರೆದಿರುವನು. ಕೇತ-ಇವೇ ಮೊದಲಾದ ಚಿಕ್ಕಪುಟ್ಟ ದೈವಗಳಿಗೆ ನಮಸ್ಕರಿಸಿ ಅವುಗಳ ಸೋಮವಾರ, ಹುಣ್ಣಿಮೆ, ಅಮಾವಾಸ್ಯೆ ಎಂದು ಉಪವಾಸವಿರುವ ಭಕ್ತರು ತಮ್ಮ ಈ ಆಚರಣೆ ಶಿವಾರ್ಪಿತವೆಂದು ನುಡಿಯುವುದನ್ನು ಚೌಡಯ್ಯ ಖಂಡಿಸುವನು. ಮಾತು-ಕೃತಿಗಳಿಗೆ ಹೊಂದಾಣಿಕೆಯಿಲ್ಲದೆ ಬದುಕು ನಡೆಸುವವರನ್ನು ಕಂಡು ಚೌಡಯ್ಯ ಕೆರಳುವನು ; ತನ್ನ ಹಲವು ವಚನಗಳಲ್ಲಿ ಇಂತಹ ಅಬದ್ಧರನ್ನು ತರಾಟೆಗೆ ತೆಗೆದುಕೊಂಡಿರುವನು. ಇಷ್ಟಲಿಂಗವೆ ತನಗೆ ಗತಿ ಮತಿ ಎಂದು ತಿಳಿಯದೆ ಊರ ಹೊರಗಿರುವ ದೈವಗಳುಸ್ವೀಕರಿಸುವ ಶಿವನ ಭಕ್ತರ ವರ್ತನೆಯನ್ನು 'ದೊಡ್ಡಗ್ರಾಮದ ಸೂಕರನು ಗಂಗೆಯಲ್ಲಿ ಅಧಿಕವೆಂದು ಅವನ್ನು ಪೂಜಿಸಿ ಆ ದೇವರಗಳಿಗೆ ಅರ್ಪಿಸಿದ್ದನ್ನು ಪ್ರಸಾದವೆಂದು ಮಿಂದು ಬಂದು ಅಮೇಧ್ಯವ ಭುಂಜಿಸಿದ ತೆರನಾಯಿತು' ಎಂದು ಹೋಲಿಸಿದ್ದಾನೆ.

    ಅಂಬಿಗರಚೌಡಯ್ಯ ಕೂಡ ಪ್ರಥಮವಾಗಿ ಸಮಾಜದ ಅಸ್ವಸ್ತತೆಗೆ ಕಾರಣೀಭೂತವಾದ ಅಂಶಗಳನ್ನು ಪರಿಶೀಲಿಸಿ ಕಟುವಾಗಿ ಖಂಡಿಸುತ್ತಾನೆ. ಆಮೇಲೆ ಅವುಗಳಿಗೆ ತನ್ನದೇಯಾದ ಪರಿಹಾರೋಪಾಯಗಳನ್ನು ಸೂಚಿಸುತ್ತಾನೆ. ಖಾರವಾಗಿ ಖಂಡಿಸುವಾಗ ಚೌಡಯ್ಯ ಕಠೋರವಾಗಿ ಕಂಡುಬಂದರೂ ಆಂತರ‍್ಯದಲ್ಲಿ ಮೃದು ಸ್ವಭಾವದವನು. ಸಮಾಜದ ಒಳಿತಿಗಾಗಿ ಶ್ರಮಿಸಿದ ವ್ಯಕ್ತಿ ಈತ. ಆತನ ಮಾತುಗಳು ಕಟುವೆನಿಸದರೂ ಕೂಡ ಆತನ ಕಾಳಜಿಯನ್ನು ನಿರಾಕರಿಸಲಾಗದು. ಸಮಾಜದ ಮಾರ್ಗದರ್ಶಕರು ಮತ್ತು  ಗುರುಸ್ಥಾನದಲ್ಲಿರುವ ಸ್ವಾಮೀಜಿಗಳನ್ನು ಗೌರವದಿಂದ ಕಾಣುತ್ತಾನೆ. ಆದರೆ ಡೋಂಗಿಗಳನ್ನು ಆಡಂಬರ ಮಾಡುವವರನ್ನು, ಆಷಾಢ ಭೂತಿಗಳನ್ನು ತನ್ನ ಮಾತಿನ ಮೊನೆಯಿಂದ ಚುಚ್ಚುತ್ತಾನೆ. ಕಂತೆ ತೊಟ್ಟವ ಗುರುವಲ್ಲ, ಕಾವಿ ಹೊದ್ದವ ಜಂಗಮನಲ್ಲ ಎನ್ನುತ್ತಾನೆ. ಸ್ವಾಮಿಗಳಿಗೆ ಭಕ್ತರೆಲ್ಲರೂ ಸರಿಸಮಾನರು ತಾರತಮ್ಯ ಮಾಡುವಸ್ವಾಮಿಗಳನ್ನು ಅಂಬಿಗರ ಚೌಡಯ್ಯ ಹೀಗೆ ಟೀಕಿಸುತ್ತಾನೆ.ದೇವರು ಮತ್ತು ಭಕ್ತಿಯ ಹೆಸರಿನಲ್ಲಿ ಪರೋಕ್ಷವಾಗಿ ಮೋಸಮಾಡುವ ಇವರನ್ನು ಕುರಿತು ಕಟುವಾಗಿ ವಿಡಂಬಿಸಿದ್ದಾನೆ.

ಅರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು

ಊರೆಲ್ಲರು ಕಟ್ಟಿಸಿದ ಕೆರೆಯ ನೀರ ತಂದು

ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ

ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ?

ನಾಡೆಲ್ಲಕ್ಕೊ? ಪೂಜಿಸಿದಾತಗೋ ?

ಇದ ನಾನರಿಯೇ, ನೀ ಹೇಳೆಂದನಂಬಿಗ ಚೌಡಯ್ಯ(ಸಂವ.ಸಂ. ವ.ಸಂ. -೪೩)

   ದೇಹವೇ ದೇಗುಲವಾದ ಮೇಲೆ ಈ ದೇವರ ಪೂಜೆಗೆ ಹೂಪತ್ರಿ, ಧೂಪ, ದೀಪ,ಏನೂ ಬೇಡ ನಿರ‍್ಮಲವಾದ ಮನಸ್ಸೊಂದಿದ್ದರೆ ಸಾಕು ಎಂಬುದು ಚೌಡಯ್ಯನ ನಿಲುವು. ಇದ ಬಿಟ್ಟು ಕಲ್ಲುದೇಗುಲ ಕಟ್ಟಿ ಅದರೊಳಗೆ ಕಲ್ಲುದೇವರ ಇಟ್ಟು ಬೇರೆಯವರು ಬಿತ್ತಿದ ಗಿಡದಲ್ಲಿ ಅರಳಿದ ಹೂ ಕೊಯ್ದು ಊರಿನವರ ಪರಿಶ್ರಮದಿಂದಾದ ಕೆರೆಯ ನೀರು ತಂದು ನಾಡೆಲ್ಲವೂ ನೋಡಲಿ ಎಂದು ಪೂಜಿಸಿದ ಪೂಜೆ ತೋರಿಕೆಯ ಪೂಜೆ ಆಗುತ್ತದೆ. ಹಾಗಾದರೆ ಆ ಪೂಜೆಯಫಲ ಹೂವಿಗೋ, ನೀರಿಗೊ ನೋಡಿದ ನಾಡೆಲ್ಲಕೋ ಅಥವಾ ಪೂಜಿಸಿದಾತಗೋ? ಎಂದು ಪ್ರಶ್ನಿಸಿದ್ದಾನೆ.

ಕಲ್ಲನಾಗರ ಕಂಡರೆ ಹಾಲು ಒಯ್ಯಂಬಳು

ಬದುಕಿದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬಳು

ಉಂಬ ದೇವರು ಬಂದರೆ ಇಲ್ಲವೆಂದು ಅಟ್ಟುವಳು

ಉಣ್ಣದ ಕಲ್ಲು ಪ್ರತಿಮೆಗೆ ಮುಂದಿಟ್ಟು ಉಣ್ಣು ಉಣ್ಣು ಎಂಬಳು........

ಜಡವಾದದ್ದನ್ನು ಸತ್ಕರಿಸಿ, ಜೀವವಿರುವವರ ಮೇಲೆ ದಾಳಿ ಮಾಡುವ ಡಂಭಕನ ನಡವಳಿಕೆಗೆ ಎತ್ತಿದ ಟೀಕೆಯಿದು. ಇದೇ ಭಾವ ಬಸವಣ್ಣನವರ “ಕಲ್ಲನಾಗರ ಕಂಡರೆಹಾಲನೆರೆಯೆಂಬರು” ಎಂಬ ವಚನದಲ್ಲಿ ಬಂದಿರುವುದನ್ನು ನೋಡಬಹುದು. ಬಹುಶಃಚೌಡಯ್ಯನವರು ಬಸವಣ್ಣನವರ ಈ ವಚನದಿಂದ ಪ್ರೇರಣೆ ಪಡೆದಿರಬಹುದು.

ಬಡತನಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,

ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,

ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,

ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,

ಇಂತಿ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು

ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ

ನಮ್ಮ ಅಂಬಿಗರ ಚೌಡಯ್ಯ ನಿಜಶರಣನು(ಸಂ.ವ.ಸಂ.-೧, ವ.ಸಂ.-೧೮೫)

    ಇಡೀ ಮಾನವ ಜನಾಂಗಕ್ಕೆ ಬರೆದ ಭಾಷ್ಯೆಯಾಗಿದೆ. ವಿಶ್ವದ ಎಲ್ಲ ಮಾನವರಿಗೂ ಇದು ಅನ್ವಯಿಸುತ್ತದೆ. ಸರ್ವಕಾಲಿಕ ಸತ್ಯವನ್ನು ಚೌಡಯ್ಯ ಈ ವಚನದಲ್ಲಿ ದಾಖಲಿಸಿರುವುದನ್ನು ಗುರುತಿಸಬಹುದಾಗಿದೆ. ಬಡತನದಲ್ಲಿ ಬೆಂದು ಬೇಯುತ್ತಿರುವಾಗ ಮನುಷ್ಯನು ಉಣ್ಣುವುದಕ್ಕೆ ಸಿಕ್ಕರೆ ಸಾಕೆಂದು ಹಂಬಲಿಸುತ್ತ ಊಟದ ಚಿಂತೆಯನ್ನೇ ಮಾಡುತ್ತಾನೆ. ಊಟಸಿಕ್ಕು ಒಂದಿಷ್ಟು ದಿನ ಸರಿಯಾಗಿ ಉಣಲು ತೊಡಗಿದರೆ ಅವನು ಉಡುವ ಚಿಂತೆಗೆ ತೊಡಗುತ್ತಾನೆ. ಉಡುವುದಕ್ಕೆ ಬಟ್ಟೆ-ಬರೆಗಳು ಸಿಕ್ಕವೆಂದಾದರೆ ಮಾನವ ಹಣ ಸಂಪಾದಿಸಬೇಕೆಂಬ ಚಿಂತೆಗೆತೊಡಗುತ್ತಾನೆ. ಉಂಡು ಉಟ್ಟು ಒಂದಿಷ್ಟು ಹಣವು ಸಂಚಯವಾಗುತ್ತ ನಡೆದಲ್ಲಿ ಅವನಿಗೆ ಮದುವೆಯಾಗಬೇಕೆಂಬ ಆಸೆ ಮೂಡಿ ಹೆಂಡತಿಯ ಬಗೆಗೆ ಚಿಂತಿಸಲು ಆರಂಭಿಸುತ್ತಾನೆ.ಮದುವೆಯಾಗಿ ಹೆಂಡತಿಯು ಮನೆಗೆ ಬಂದಳಾದರೆ ಮಕ್ಕಳ ಪಡೆಯುವ ಚಿಂತೆ ಶುರುವಾಗುತ್ತದೆ. ಮಕ್ಕಳಾದ ಮೇಲೆ ಬದುಕನ್ನು ಸರಿಯಾಗಿ ನಿರ್ವಹಿಸುವ ಚಿಂತೆ, ಬದುಕಿನಗಾಡಿಯು ಒಂದಿಷ್ಟು ಮುಂದೆ ಸಾಗಿಸುತ್ತಿರುವಾಗಲೇ ಅದಕ್ಕೆ ಮುಂದೆ ಒದಗಬಹುದಾದ ತೊಂದರೆ, ಆತಂಕಗಳ ಚಿಂತೆ ಕಾಡತೊಡಗುತ್ತದೆ. ಕೇಡುಗಳು ಬಯಲಾಗುವಂತೆ ಕಂಡರೂ ಈ ಮನುಷ್ಯನು ಮುಂಬರುವ ಸಾವಿನ ಬಗೆಗೆ ಚಿಂತಿಸತೊಡಗುತ್ತಾನೆ. ಹೀಗೆ ಜೀವನದುದ್ದಕ್ಕೂ ಚಿಂತೆಗಳ ಕಂತೆಯೇ ದೊಡ್ಡದಾಗುತ್ತ ಹೋಗುತ್ತದೆ. ಇಂತಹ ಲೌಕಿಕ ಚಿಂತೆಗಳ ಗದ್ದಲದಲ್ಲಿ ಮನುಷ್ಯನು ಶಿವಚಿಂತೆಯನ್ನು ಮರೆತು ಬಿಡುತ್ತಾನೆ. ಪ್ರತಿಯೊಬ್ಬನ ಸ್ಥಿತಿಯೂ ಹೀಗೆ ಆದಾಗ ಲೋಕದಲ್ಲಿ ಶಾಂತಿ ಮಾಯವಾಗುತ್ತದೆ ಎಂದು ಎಚ್ಚರಿಸಿದ್ದಾನೆ. 

    ಅಂಬಿಗರ ಚೌಡಯ್ಯ “ಈಶ ಲಾಂಛನವ ತೊಟ್ಟು ಮನ್ಮಥ ವೇಷ ಲಾಂಛನವ ತೊಡಲೇಕೆ? ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ? ಎಂದು ಹೇಳುತ್ತಾ ಮಠಾಧಿಪತಿಗಳು,ಸ್ವಾಮಿಗಳು, ಜಂಗಮರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಚುರುಕು ಮುಟ್ಟಿಸುವ, ಅಂತರಂಗಕ್ಕೆ ಕನ್ನಡಿ ಹಿಡಿಯುವ ಕಠೋರ ಈ ಮನೋಧರ್ಮದ ಹಿಂದೆ ಸಾಮಾಜಿಕ ಚಿಂತನೆಯ ಶರಣರ ಮನಸ್ಸುಗಳು ಕೆಲಸಮಾಡಿವೆ. ಹೊಳೆಯನ್ನು ಹರಿಗೋಲಿನ ನೆರವಿನಿಂದ ದಾಟುವ ಲೌಕಿಕ ಕ್ರಿಯೆಯನ್ನು ಪಾರಮಾರ್ಥದ ಅಲೌಕಿಕ ಕ್ರಿಯೆಯಾಗಿ ಹೊರಳಿಸುವ ಚೌಡಯ್ಯನ ಈ ವಚನವನ್ನು ಪರಿಭಾವಿಸಬಹುದು.

     ಸಾಮಾಜಿಕ ಚಿಂತನೆ ಚೌಡಯ್ಯನ ವಚನಗಳಲ್ಲಿ ಬಂದಿರುವಷ್ಟು ಮತ್ತಾವ ವಚನಕಾರನಲ್ಲೂ ಬಂದಿಲ್ಲ ಎನ್ನಬಹುದು. ಅವನು ಶ್ರೇಷ್ಠ ಸಾಮಾಜಿಕ ವಿಡಂಬನಕಾರನಾಗಿ ತನ್ನಸುತ್ತಣ ಸಮಾಜ ಸರಿಯಾಗಿರಬೇಕೆಂದು ಬಯಸುವವನು. ಸೂಕ್ಷ್ಮ ಸ್ವಭಾವದವನಾದ ಅವನಿಗೆ ಸಮಾಜದ ಲೋಪ-ದೋಷಗಳನ್ನು ಕಂಡಾಗ ಸಿಟ್ಟೇರುತ್ತದೆ. ಸಮಾಜದಲ್ಲಿನ ದೋಷಗಳಿಗೆ ಅದರ ಅವಿಭಾಜ್ಯ ಘಟಕವಾದ ವ್ಯಕ್ತಿಯೂ ಕಾರಣ. ವ್ಯಕ್ತಿ ಮಾನಸಿಕವಾಗಿ ಬದಲಾಗದೆ ಸಮಾಜ ಬದಲಾಗದು ಎಂಬ ಸತ್ಯ ಚೌಡಯ್ಯನಿಗೆ ತಿಳಿದಿದೆ. ಹೀಗಾಗಿ ಚೌಡಯ್ಯ ಸಮಾಜ ವ್ಯವಸ್ಥೆಯ ಬಗೆಗೆ ಟೀಕಿಸುವಾಗಲೆಲ್ಲಾ ವ್ಯಕ್ತಿ ಕೇಂದ್ರಿತನಾಗುತ್ತಾನೆ. ತನ್ನ ಸುತ್ತಣ ಸಮಾಜ, ಬದುಕು ಹಸನಾಗಬೇಕೆಂದು ಚೌಡಯ್ಯನ ಮನದಾಳದ ಆಸೆ. ತನ್ನ ಸುತ್ತಣ ಸಮಾಜದಲ್ಲಿನ ಅಜ್ಞಾನ,ಮೂಢನಂಬಿಕೆ, ಅರ್ಥವಿಹೀನ ಆಚರಣೆ, ವಂಚನೆ, ಮೋಸಗಳನ್ನು ಕಂಡಾಗ ಸಹಜವಾಗಿಯೇ ಅವನು ಸಿಡಿದೇಳುವನು. ಇವೆಲ್ಲವು ಇಲ್ಲವಾಗಬೇಕು. ಅದಕ್ಕೆ ಜನ ಮಾನಸಿಕವಾಗಿ ಸಿದ್ಧವಾಗಬೇಕು. ಬದಲಾವಣೆ ಎನ್ನುವುದು ವೈಯಕ್ತಿಕ ನೆಲೆಯಲ್ಲಾದಾಗ ಅದರ ಪರಿಣಾಮ ಸಮೂಹದ ಮೇಲೂ ಆಗುತ್ತದೆ.

ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು

ನಂಬಿದರೆ ಒಂದೆ ಹುಟ್ಟಲಿ

ಕಡೆಯ ಹಾಯಿಸುವನಂಬಿಗರ ಚೌಡಯ್ಯ,

ಅಂಬಿಗರ ಚೌಡಯ್ಯ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ದೋಣಿ ನಡೆಸುವ ಕಾಯಕದವನು. ಆತ ಜಾತಿಯಲ್ಲಿ ಶೂದ್ರ. ಜಾತಿಯನ್ನು ವೃತ್ತಿಯ ಮೂಲಕ ಗುರುತಿಸುವ, ವೃತ್ತಿಯನ್ನು ಜಾತಿಯಾಗಿ ಪರಿಗಣಿಸುವ ಪ್ರವೃತ್ತಿ ೧೨ನೇ ಶತಮಾಕ್ಕೆ ಹಿಂದಿನಿಂದಲೂ ಇದ್ದಿತು. ಜಾತಿಯಲ್ಲಿ ಶೂದ್ರನೂ ವೃತ್ತಿಯಲ್ಲಿ ಕನಿಷ್ಠನೂ ಆದ ಚೌಡಯ್ಯ ಸಾಮಾಜಿಕ ಅವಹೇಳನಕ್ಕೆ ಗುರಿಯಾಗಿದ್ದ. ಆ ನೋವಿನ ಎಳೆ ಅವನ ಈ ಮೇಲ್ಕಂಡ ವಚನದಲ್ಲಿ ವ್ಯಕ್ತಗೊಂಡಿದೆ. ಅವನಲ್ಲಿ ಬಸವಾದಿ ಶಿವಶರಣರು ಹಚ್ಚಿದ ಪ್ರತ್ಯಯದ ಕಿಚ್ಚು ಅವನನ್ನು ತಲೆಯೆತ್ತಿ ನಡೆಯುವಂತೆ ಮಾಡಿದೆ. 

ಅಂಬಿಗನು ಜಗದೊಳಗೆ ಇಂಬಿಲೋಲಾಡುವನು

ತುಂಬಿದ ಸಾಗರದೊಳಗೆ ನೋಡಯ್ಯಾ!

ನಿಂದ ದೋಣಿಯನೇರಿದಂದಿನ ಹುಟ್ಟ

ಕಂಡವರಂದನವನರಿದಾತ ತೊಳಸುತ್ತಿದ್ದನು.

ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು

ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ.

ಭವಸಾಗರವನ್ನು ದಾಟಿಸುವವನು ಪರಮಾತ್ಮ ಎನ್ನುವ ಭಕ್ತಸಮುದಾಯದ ನಂಬುಗೆ ಈ ವಚನದಲ್ಲಿ ಕೆನೆಗಟ್ಟಿದೆ. ಅಂಬಿಗನಾಗಿ ಪರಮಾತ್ಮನನ್ನು ತನ್ನ ವೃತ್ತಿಯೊಂದಿಗೆ ಸಮೀಕರಿಸುವ ಕಲಾತ್ಮಕ ಅಭಿವ್ಯಕ್ತಿ ಕ್ರಮ ತನ್ನ ವೃತ್ತಿಯನ್ನು ಸಹಜವಾಗಿ ಉದಾತ್ತಗೊಳಿಸುವ ಮೂಲಕ ಅವನ ಸ್ವಾಭಿಮಾನಕ್ಕೆ ಬಿದ್ದ ಏಟಿಗೆ ಪ್ರತಿಯಾಗಿ ಸಮಾಧಾನ ಕಂಡುಕೊಳ್ಳುವ ವಿಧಾನವಾಗಿ ತೋರುತ್ತದೆ.

   ವ್ಯಕ್ತಿಯನ್ನು ವ್ಯಕ್ತಿಯಾಗಿಯೇ ಗುರುತಿಸಬೇಕು; ಜಾತಿಯಿಂದ ಮಾಡುವ ವೃತ್ತಿಯಿಂದ ಗುರುತಿಸಬಾರದು. ದೀಕ್ಷೆಯ ಸಂಸ್ಕಾರವಾದ ಮೇಲೆ ಭಕ್ತನಿಗೆ ಜಾತಿಯೆಂಬುದಿಲ್ಲ; ವೃತ್ತಿಯು 'ಕಾಯಕ'ವಾಗಿ ಪರಿಗಣಿತವಾದ ಮೇಲೆ ಅದರಲ್ಲಿ ಮೇಲು-ಕೀಳು ಇಲ್ಲ. ವ್ಯಕ್ತಿತ್ವವೆನ್ನುವುದು ವ್ಯಕ್ತಿಯು ರೂಢಿಸಿಕೊಂಡ ಸಂಸ್ಕಾರ; ಅದು ಅವನ ಪರಿಪಕ್ವ ಜ್ಞಾನ-ತಿಳುವಳಿಕೆ-ಆಚರಣೆಗಳ ಕ್ರೋಢೀಕರಣ. ಚೌಡಯ್ಯ ಅಂಬಿಗನಾಗಿದ್ದರೂ ಶ್ರೇಷ್ಠ ಅನುಭಾವೀ ಪರಂಪರೆಯ ವಾರಸುದಾರ ಎಂದರೂ ತಪ್ಪಾಗಲಾರದು. 

ಬೇಡರಕಣ್ಣಪ್ಪ, ಜೇಡರ ದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದರಚನ್ನಯ್ಯ-ಇವರಿಗೆಲ್ಲ ರೂಢಿಗೆ (=ಸಂಪ್ರದಾಯಕ್ಕೆ) ಶಿವನು ಒಲಿದ ಪರಿಯ ನೋಡಾ! ಎಂದು ಕಟಕಿಯಾಡುವ ಚೌಡಯ್ಯ ಧರ್ಮ, ಜಾತಿಗಳನ್ನು  ಮನುಷ್ಯರು ಮಾಡಿಕೊಂಡದ್ದೇ ಹೊರತು ದೇವರು ಮಾಡಿದ್ದಲ್ಲ. ಹಾಗೆ ಮಾಡಲಿಕ್ಕೆ ಅವರೇನು ಸ್ವತಂತ್ರರೆ ? ಎಂದು ಪ್ರಶ್ನಿಸುವನು. ಅಷ್ಟೇ ಅಲ್ಲ, ಜಾತಿಯ ಕಟ್ಟುಪಾಡುಗಳನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಾಗಿ ಆಚರಣೆಗೆ ತರ ಹೊರಟರೆ ಇವನೊಡ್ಡಿದ ಠಾವಿನಲಿ ಕಲ್ಲು ಮುಳ್ಳು ಮೂಡುವವು' ಎಂದು ಎಚ್ಚರಿಸುವನು.      

      ವೀರಶೈವಧರ್ಮ ವ್ಯಾಪಕವಾಗಿ ಪ್ರಚುರಗೊಳ್ಳುತ್ತಿದ್ದ ಘಟ್ಟದಲ್ಲಿ ಆ ಧರ್ಮದ ತೆಕ್ಕೆಗೆ ಬಂದವನು ಶೂದ್ರನಾದ ಅಂಬಿಗರ ಚೌಡಯ್ಯ, ಗುರುಗಳೊಬ್ಬರಿಂದಶಾಸ್ರೋಕ್ತವಾಗಿ ದೀಕ್ಷೆಯನ್ನು ಸ್ವೀಕರಿಸಿ ಇಷ್ಟಲಿಂಗದ ಪೂಜೆಗೆ ವಿಶೇಷಸ್ಥಾನವನ್ನು ಕೊಟ್ಟ ಚೌಡಯ್ಯ ಇಷ್ಟಲಿಂಗವನ್ನು ಪಡೆದ ಮೇಲೂ ಸ್ಥಾವರಲಿಂಗದ ಆರಾಧನೆಮಾಡುವವರನ್ನು ಉಗ್ರವಾಗಿ ಟೀಕಿಸಿರುವನು :

ಕಟ್ಟಿದ ಲಿಂಗವ ಬಿಟ್ಟು ಬೆಟ್ಟದಲಿಂಗಕ್ಕೆ ಹೋಗಿ

ಹೊಟ್ಟಡಿಯಾಗಿ ಬೀಳುವ ಲೊಟ್ಟಿ ಮೂಳನ ಕಂಡಡೆ

ಮೆಟ್ಟಿದ್ದ ಎಡದ ಪಾದರಕ್ಷೆಯ ತಕ್ಕೊಂಡು

ಲಟಲಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.

 ವಚನಗಳಲ್ಲಿ ಇಷ್ಟಲಿಂಗಧರಿಸಿಯೂ ಸ್ಥಾವರಲಿಂಗ ಪೂಜೆ ಮಾಡುವವರ ಮೇಲಿನ ಅತ್ಯುಗ್ರವಾದ ರೋಷವನ್ನು ತೀಕ್ಷ್ಣ ಪ್ರತಿಕ್ರಿಯೆಯಲ್ಲಿ ವ್ಯಕ್ತಪಡಿಸಲಾಗಿದೆ. ಸ್ಥಾವರದ ನಿರಾಕರಣೆ ಎಷ್ಟು ತೀಕ್ಷ್ಣವಾಗಿದೆಯೆಂದರೆ ಅದು ಅವನ ಪಾಲಿಗೆ ಅಡಿಮಾಡಿ ನಟ್ಟ ಕಲ್ಲು!' ಇಬ್ಬಗೆಯ ಆಚರಣೆಯಲ್ಲಿ ತೊಡಗಿರುವವರಿಗೆ ಲಿಂಗಧಾರಣೆ ಮಾಡಿದ್ದು ಗೊಡ್ಡೆಮ್ಮೆಗೆ ಲಿಂಗವನ್ನು ಕಟ್ಟಿದಂತೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುವನು. ಇಂಥವರನ್ನು ಶಿವಭಕ್ತರೆಂದು ಕರೆಯುವವರನ್ನು ಭ್ರಷ್ಟರೆಂದು ಕತ್ತೆಯ ಮೇಲೆ ಕೂರಿಸಿ ಕೆರಹಿನಟ್ಟೆಯಲ್ಲಿ ಹೊಡೆಯಬೇಕೆಂದು ಸಂಯಮ ಕಳೆದುಕೊಂಡು ತೀವ್ರವಾಗಿ ಟೀಕಿಸುವನು. ಇದು ಹಳೆಯಲಿಂಗವಂತನಿಗಿಂತ ಹೊಸದಾಗಿ ಲಿಂಗಧರಿಸಿದವನ ಉಗ್ರನಿಷ್ಠೆಯ ಇನ್ನೊಂದು ರೂಪ.

   ದೀಕ್ಷೆಯನ್ನು ಕೈಲಾಸ ಹಾಗೂ ಮರ್ತ್ಯಗಳ ನಡುವೆ ಕಟ್ಟಿದ ಸೀಮೆ (ಗಡಿ)ಕಲು ಎರಡು ಗ್ರಾಮದ ನಡುವೆ ಕಟ್ಟಿದ ಸೀಮೆಯ ಕಲ್ಲು ಎಂದು ಭಾವಿಸುವ ಅಂಬಿಗರ ಚೌಡಯ್ಯ ಭ್ರಷ್ಟ, ಗುರು ಹಾಗೂ ಭ್ರಷ್ಟ ಶಿಷ್ಯ ಇವರನ್ನು'ಅಯನರಿಯದ ಗುರು, ಭೇದಿಸಲರಿಯದ ಶಿಷ್ಯ' ಎಂದು ಕರೆದು ಲಿಂಗವನ್ನು ಕಟ್ಟಿದಾತ ಗುರುವಲ್ಲ, ಕಟ್ಟಿಸಿಕೊಂಡಾತ ಶಿಷ್ಯನಲ್ಲ; ಇವರಿಬ್ಬರೂ ಭ್ರಷ್ಟರು

ಎಂದು ಕಟುವಾಗಿ ನುಡಿದಿರುವನು. 

   ಬಹುದೈವತೋಪಾಸನೆ ೧೨ನೇ ಶತಮಾನದಲ್ಲಿ ವಿಶೇಷವಾಗಿ ಆಚರಣೆಯಲ್ಲಿದ್ದಿತ್ತು. ಕಂಡ ಕಂಡ ದೈವಗಳಿಗೆ ನಮಿಸುವುದಷ್ಟೇ ಅಲ್ಲ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆ ದೈವಗಳಿಗೆ ಮುಡಿ, ಮುಂದಲೆ ಕೊಡುವ ಪದ್ಧತಿಯಿದ್ದುದನ್ನು ಅಂಬಿಗರ ಚೌಡಯ್ಯ ತನ್ನ ಒಂದು ವಚನದಲ್ಲಿ ಉಲ್ಲೇಖಿಸಿರುವನು. ಏಕದೈವೋಪಾಸನೆ ಹಾಗೂ ಪಾತಿವ್ರತ್ಯಗಳನ್ನು ಸಮೀಕರಿಸುವ ಚೌಡಯ್ಯ ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ ಬೋಸರಿ ತೊತ್ತಿಗೆಲ್ಲಿಯದೊ ನಿಜಮುತ್ತೈದೆತನ? ಎಂದು ಪ್ರಶ್ನಿಸುವನು. 

   ಲಿಂಗವಂತನಾದ ಮೇಲೂ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದ ಭಕ್ತರು ೧೨ನೇ ಶತಮಾನದ ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಮಂದಿ ಇದ್ದರು. ಅಂಥವರ ವರ್ತನೆಯನ್ನು ಬಸವಾದಿ ಶಿವಶರಣರು ತೀವ್ರವಾಗಿ ಖಂಡಿಸಿರುವರು. ಸಾತ್ವಿಕಜೀವನ ವಿಧಾನವು ಶಿವಶರಣರು ಸ್ವೀಕರಿಸಿದ ಸಂವಿಧಾನದ ಮುಖ್ಯಭಾಗ, ಚೌಡಯ್ಯ

ಹೊಸದಾಗಿ ಲಿಂಗವಂತನಾದವನು, ಹೊಸ ಜೀವನಸೂತ್ರಗಳಿಗೆ ಹೊಂದಿಕೊಳ್ಳಲಾಗದ ತನ್ನಂತೆಯೇ ಶೂದ್ರಜಗತ್ತಿನಿಂದ ಬಂದವರ ವರ್ತನೆಯನ್ನು ಆತ ತೀವ್ರವಾಗಿ ತನ್ನ ವಚನಗಳಲ್ಲಿ ಖಂಡಿಸಿರುವನು. ಅಂಬಿಗರ ಚೌಡಯ್ಯ ತನ್ನ ಸ್ವಭಾವಸಹಜವಾದ 'ಇದ್ದಂತೆ ಹೇಳುವ ಹರಿತ ನಾಲಿಗೆಯ ಸ್ವಭಾವದಿಂದಾಗಿ ಎಲ್ಲರ ಗಮನ ಸೆಳೆಯುವನು. ಹೀಗಿರುವಾಗ ನಾವು ಅವನನ್ನು ೧೨ನೇ`ಶತಮಾನದ ಶರಣರ ಪಡೆಯಲ್ಲಿ ಓರ್ವನಾಗಿ ಗುರುತಿಸದೆ, ೧೩ನೇ ಶತಮಾನದವನೆಂದು ಗುರುತಿಸಲು ಪ್ರಯತ್ನಿಸಿರುವುದು ದುರಾದೃಷ್ಟಕರ ಸಂಗತಿ.

    ದಯೆ, ಕರುಣೆಗಳು ಮಾನವೀಯತೆಯ ಬಾಹ್ಯರೂಪಗಳು. ಮಾನವೀಯತೆಯು ಇನ್ನೊಬ್ಬರ ಕಷ್ಟಕ್ಕೆ ನಾವು ಹೇಗೆ ಸ್ಪಂದಿಸುತ್ತೇವೆ ಎನ್ನುವುದನ್ನು, ಅಂಬಿಗರ ಚೌಡಯ್ಯ ನಿದರ್ಶನವೊಂದರ ಮೂಲಕ ಅದನ್ನು ಸ್ಪಷ್ಟಪಡಿಸುವನು :

ಕಟ್ಟಿಗೆಯ ಹೊರೆಯ ಹೊತ್ತು

ಬಟ್ಟೆಯಲ್ಲಿ ಬರುವ ಮಹೇಶ್ವರನ ಕಂಡು

ಆ ಹೇರಿಗೆ ತಲೆಯ ಕೊಟ್ಟವಂಗೆ ಪುಣ್ಯವಹುದು.

ಆ ಭಕ್ತನ ಕಷ್ಟ ನಿಷ್ಠುರವರಿಯದೆ

ಉದಾಸೀನಮಾಡುವ ಸಮಯಹೀನನ ಕೊರಳಲಿ

ಶಿವಲಿಂಗವ ಕಟ್ಟಿರ್ದಡೇನಯ್ಯ ?

ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ.

ಆ ಪಾಪ ನೊಸಲತುಂಬ ಮೈತುಂಬ

ವಿಭೂತಿಯನಿಟ್ಟಿರ್ದಡೇನಯ್ಯ?

ಕೊಟ್ಟಿಗೆಯ ಮೇಲಣ ಕುಂಬಳಕಾಯಂತೆ.........

  ಒಬ್ಬ ಶಿವಭಕ್ತ ಕಷ್ಟ ಪಡುತ್ತಿರುವಾಗ ಇನ್ನೊಬ್ಬ ಶಿವಭಕ್ತ ಕಷ್ಟದಲ್ಲಿರುವವನಿಗೆ ನೆರವಾಗಬೇಕು; ಹಾಗೆ ನೆರವಾದಲ್ಲಿ ಅವನಿಗೆ ಪುಣ್ಯ ಬರುತ್ತದೆನ್ನುವ ಚೌಡಯ್ಯ ನೆರವಾಗದ ಶಿವಭಕ್ತ ಇಷ್ಟಲಿಂಗ ಧರಿಸಿದ್ದರೂ ಅದು 'ಪಡುವಲಕಾಯಿಗೆ ಕಲ್ಲುಕಟ್ಟಿದಂತೆ'; ಆತ ಮೈಗೆಲ್ಲ ವಿಭೂತಿ ಧರಿಸಿದ್ದರೂ ಅದು 'ಕೊಟ್ಟಿಗೆಯ ಮೇಲಣ

ನಿಂಬಳಕಾಯಂತೆ' ವ್ಯರ್ಥ. ಇಲ್ಲಿನ ಮೊದಲಿನ ಶಬ್ದ ಚಿತ್ರದಲ್ಲಿ ಪಡವಲಕಾಯಿಗೆ" ಕಟ್ಟುವುದು ಅದು ಉದ್ದವಾಗಿ ಬೆಳೆಯಲಿ ಎಂದಷ್ಟೇ ಹೊರತು ಬೇರೇನೂ ಪ್ರಯೋಜನವಿಲ್ಲ: ಎರಡನೆಯ ಶಬ್ದ ಚಿತ್ರದಲ್ಲಿ ಕೊಟ್ಟಿಗೆಯ ಚಪ್ಪರದ ಮೇಲಿನ ಕುಂಬಕಾಯಿಗೆ ಬೂದಿ ಬಳಿದಿರುವುದು ಅದು ಹೊಳೆಯದಿರಲಿ ಬೇರೆಯವರ ದೃಷ್ಟಿ ತಾಗದಿರಲಿ ಎಂದಷ್ಟೇ ಹೊರತು ಬೇರೇನೂ ಉದ್ದೇಶವಿಲ್ಲ. ಎರಡೂ ಗ್ರಾಮೀಣವಾಗಿ ಪರಿಚಿತವಿರುವ ಸಾರ್ಥಕ ಪ್ರತಿಮೆಗಳೇ. 

 ದೇವಾಲಯದಲ್ಲಿ ದೇವರ ಪ್ರೀತ್ಯರ್ಥ ಪೂಜೆ ಮಾಡುವವರನ್ನು ನೋಡಿ :

ದೇಹಾರವ ಮಾಡುವಣ್ಣಗಳಿರಾ, ಅಣ್ಣಗಳಿರಾ

ಒಂದು ತುತ್ತು ಆಹಾರವನಿಕ್ಕಿರೆ

ದೇಹಾರಕ್ಕೆ ಆಹಾರವೇ ನಿಚ್ಚಣಿಕೆ

ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ

ಆಹಾರನಿಲ್ಲೆಂದಂಬಿಗ ಚೌಡಯ್ಯ ಎಂದು ಹೇಳುವನು. ಹಸಿದವರಿಗೆ ಅನ್ನವನ್ನಿಕ್ಕುವುದರ ಪ್ರತಿಫಲ ಕೈಲಾಸವೆನ್ನುವನು. ಚೌಡಯ್ಯನ ಮಾನವೀಯತೆ 'ದೇಹಾರಕ್ಕೆ ಆಹಾರವ ನಿಚ್ಚಣಿಕೆ ಎನ್ನುವ ಮಾತಿನಲ್ಲಿ ಅಡಗಿದೆ. ರುಬ್ಬುವಮನೆಗೆ ಹಸಿದು ಬಂದ ಅತಿಥಿಗೆ (ಜಂಗಮನಿಗೆ) ಉಣಬಡಿಸಬೇಕು. ಹಾಗೆಮಾಡಲು ಭಕ್ತನ ಬಡತನ ಅಡ್ಡಿ ಬಂದರೆ, ಶಿವಭಕ್ತರ ಮನೆಗೆ ಹೋಗಿ ಕಲ್ಲಿಗೆ ಹಾಕುವ ಒಂದು ಬೊಗಸೆಯಷ್ಟು ಪ್ರಮಾಣದ ಅಕ್ಕಿಯನ್ನು ಬೇಡಿ ತಂದು ಲಿಂಗಕ್ಕೆಂದು ಅಡುಗೆಮಾಡಿ ಅದನ್ನು ಪ್ರಸಾದರೂಪದಲ್ಲಿ ಜಂಗಮನಿಗೆ ನೀಡಿ ಅವನುಸ್ವೀಕರಿಸಿ ಬಿಟ್ಟಿದ್ದನ್ನು ಪ್ರಸಾದವಾಗಿ ತೆಗೆದುಕೊಳ್ಳುವವನಿಗೆ ಕೈಲಾಸಪ್ರಾಪ್ತಿಯಾಗುತ್ತದೆ ಎಂದು ಚೌಡಯ್ಯ ಹೇಳುವಲ್ಲಿ ವೀರಶೈವ ಧರ್ಮದ ಮಾನವೀಯತೆಯು ಅದರ ಪ್ರಸಾದ ತತ್ವದಲ್ಲಿದೆ ಎಂಬುದು ವೇದ್ಯವಾಗುತ್ತದೆ.

     ಶಿವಶರಣರು ತಮ್ಮನ್ನು ಸತಿಯಾಗಿಯೂ ಶಿವನನ್ನು ಪತಿಯಾಗಿಯೂ ಭಾವಿಸಿಕೊಂಡು ಭಕ್ತಿಯ ಅನುಸಂಧಾನವನ್ನು ಮಾಡಿರುವರು. ಉರಿಲಿಂಗದೇವ, ಗಜೇಶ ಮಸಣಯ್ಯ, ಸಿದ್ದರಾಮ, ಘನಲಿಂಗಿದೇವ ಮೊದಲಾದ ವಚನಕಾರರಲ್ಲಿಈ ಭಾವ ವಿಶಿಷ್ಟವಾಗಿ ಅಭಿವ್ಯಕ್ತಿಗೊಂಡಿದೆ. ತನ್ನ ಸಮಕಾಲೀನ ಶಿವಶರಣರ ಈ

ರೀತಿಯ ಭಕ್ತಿಯ ಅನುಸಂಧಾನವನ್ನು ಅಂಬಿಗರ ಚೌಡಯ್ಯ ಒಪ್ಪುವುದಿಲ್ಲ.

ಸಹಜವಾಗಿ ತೋರದೆ ಕೃತಕವಾಗಿ ಅವನಿಗೆ ಕಾಣಿಸಿರಬಹುದು. ಹೆಣ್ಣು ಹೆಣ್ಣಾಗಿ ಸತಿ-ಪತಿ ಭಾವವನ್ನು ಸಹಜವಾಗಿ ವ್ಯಕ್ತಪಡಿಸಬಹುದು. ಅದಕ್ಕೆ ತದ್ವಿರುದ್ಧವಾಗಿ ತನ್ನನ್ನು ಹೆಣ್ಣಾಗಿ ಪರಿಭಾವಿಸುವುದು ಅವನಿಗೆ ಸರಿತೋರಲಿಲ್ಲ, ಹೀಗಾಗಿ ಆತತ್ತ್ವವನ್ನೇ ಆತ ಮೋಸವೆನ್ನುವನು :

'ಶರಣಸತಿ ಲಿಂಗಪತಿ' ಎಂಬರು

ಶರಣ ಹೆಣ್ಣಾದ ಪರಿ ಇನ್ನೆಂತು, ಲಿಂಗ ಗಂಡಾದ ಪರಿ ಇನ್ನೆಂತು ?

ನೀರು ನೀರ ಕೂಡಿ ಬೆರೆದಲ್ಲಿ ಭೇದಿಸಿ ಬೇರೆ ಮಾಡಬಹುದೆ?

ಗಂಡು-ಹೆಣ್ಣು ಯೋಗವಾದಲ್ಲಿ

ಆತುರ ಹಿಂಗೆ ಘಟ ಬೇರಾಯಿತ್ತು. ಇದು ಕಾರಣ

'ಶರಣಸತಿ ಲಿಂಗಪತಿ' ಎಂಬ ಮಾತು

ಮೊದಲಿಗೆ ಮೋಸ ಲಾಭಕ್ಕಧೀನವುಂಟೆ ?

ಎಂದನಂಬಿಗ ಚೌಡಯ್ಯ.( ವ.ಸಂ.೨೪೫)

   ಗಂಡು-ಹೆಣ್ಣಿನ ದೇಹದ ಬೆಸುಗೆ ಕಾಮದ ಆತುರ ಹಿಂಗುವವರೆಗೆ, ದೇವ-ಜೀವರ ಹಾಗೇನು ? ನೀರು ನೀರ ಬೆರತಂತೆ ಬೆರೆದು ಬೇರಿಲ್ಲದಂತೆ. ಆದ್ದರಿಂದ  ಶರಣಸತಿ ಲಿಂಗಪತಿ ಹೋಲಿಕೆ ಸರಿಯಿಲ್ಲ ಎನ್ನುತ್ತಾನೆ ಚೌಡಯ್ಯ, ಸ್ಥಾಪಿತ| ಸಿದ್ಧಾಂತವೊಂದನ್ನು ಪ್ರಶ್ನಿಸಿರುವ ಚೌಡಯ್ಯನ ಧೈರ್ಯವನ್ನು ಮೆಚ್ಚಬೇಕು. ಸಾಮಾಜಿಕ-ಧಾರ್ಮಿಕ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದಲೇ ೧೨ನೇ ಶತಮಾನದ ಶಿವಶರಣರ ಚಳವಳಿ ಹುಟ್ಟಿಕೊಂಡದ್ದು.ಸಮಾಜೋಧಾರ್ಮಿಕ ಬದಲಾವಣೆಗೆ ಶಿವಶರಣರು ಸಾಹಿತ್ಯವನ್ನು ಸಮರ್ಥಮಾಧ್ಯಮವಾಗಿ ಬಳಸಿಕೊಂಡರು. ಅಂಬಿಗರ ಚೌಡಯ್ಯ ಶೂದ್ರನಾದ ಕಾರಣ ಮೇಲಿನವರು ಹಾಗೂ ಕೆಳಸ್ತರದ ವ್ಯಕ್ತಿಗಳ ದೌರ್ಬಲ್ಯಗಳನ್ನು, ಊಸರವಳ್ಳಿತನವನ್ನು ಚೆನ್ನಾಗಿ ಬಲ್ಲವನು, ಹೀಗಾಗಿ ಸಾಮಾಜಿಕ ನೆಲೆಯ ಈ ಎರಡು ಸ್ತರಕ್ಕೆ ಸೇರಿದವರ ವರ್ತನೆಯನ್ನು ಗೇಲಿಮಾಡುವಲ್ಲಿ, ಕಟುವಾಗಿ ಟೀಕಿಸುವಲ್ಲಿ ಅವನು ಬಳಸುವ ಭಾಷೆ ಮೃದುತ್ವವನ್ನು ಕಳೆದುಕೊಂಡು ಕಠಿಣವಾಗಿಬಿಡುತ್ತದೆ. ಬಿಡುಬೀಸಾಗಿ ಟೀಕೆ ಮಾಡುವಾಗ ವಚನ ಭಾಷೆ ತೀರಾ ಒರಟಾಗುತ್ತದೆ, ಹರಿತವಾಗುತ್ತದೆ; ಚುಚ್ಚುವ ಮೊನಚಾದ ಆಯುಧವಾಗಿ ಬಿಡುತ್ತದೆ. ತನ್ನವರು ಪರಂಪರೆಯಿಂದ ಶೋಷಣೆಗೊಳಗಾಗುತ್ತ ಬಂದ ಅವರಲ್ಲಿ ಮಾಸದ ಗಾಯವಾಗಿದೆ. ಅವನು ಹಾಗೂ ಅವನ ಸಮುದಾಯವು ಮಂಪರೆಯಿಂದ ಅನುಭವಿಸಿದ ಅವಮಾನ, ನೋವುಗಳಿಂದಾಗಿ ಮನಸ್ಸು ಮಾಸವಾಗುತ್ತದೆ. ಆಗ ಮಾತು ಬೆಂಕಿಯ ಉಂಡೆಯಾಗುತ್ತದೆ. ಉತ್ತಮ ಸವರ್ಣಿಯರು ಅವರಿಗೆ ಜ್ಞಾನದ ಹಕ್ಕನ್ನು ನಿರಾಕರಿಸಿದರು. ಅಕ್ಷರಲೋಕದಿಂದ ಅವರನ್ನು ವಂಚಿಸಿ ತಮ್ಮ ಹೊಲಗದ್ದೆಗಳಲ್ಲಿ, ಕೊಟ್ಟಿಗೆಗಳಲ್ಲಿ ಪ್ರಾಣಿಗಳಂತೆ ದುಡಿಯುವಂತೆ ಮಾಡಿದ್ದುದು ಲೋಪವಾಗಿ ಕಂಡಿದೆ. ಜ್ಞಾನ ಎಲ್ಲರ ಸೊತ್ತು. ಅದರ ಹಸಿವಿರುವವರಿಗೆ ಮರೆಯಿಲ್ಲದೆ ಅದನ್ನು ಕೊಡಬೇಕು. ಹಾಗೆ ಮಾಡದೆ ಮೇಲುವರ್ಗದವರಿಗೆ ಅನ್ಯಾಯವನ್ನು ಪ್ರಶ್ನಿಸುವನು ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಓದಿದವರನ್ನು ಮಿಟ್ಟಿಯ ಭಂಡರು, ನಿರ್ಬುದ್ದಿ ಮಾನವರು ಎಂದು ಟೀಕಿಸುವನು; ಇವರೆಲ್ಲ ಮಾತಿನ ಹಿರಿಯರು ಎಂದು ಸಂದೇಹಿಸುವ ಚೌಡಯ್ಯ ಮನ ವಚನ ಕಾಯ ಶುದ್ಧವಾಗಿರುವವರ ಹೃದಯದಲ್ಲಿ ಪರಮಾತ್ಮನನ್ನು ಕಂಡೆ ಎನ್ನುವನು. ಅರಳೆಯ ಮರನು, ವಿಷ್ಣುಕಾಂತಿ, ಬನ್ನಿ, ಮುತ್ತಕ, ತೊಳಚಿ-ಈ ಮರಗಿಡಗಳನ್ನು 'ಹರಿ ಹರಿ' ಎಂದು ನಂಬಿ ಭಾವುಕರಾಗಿ ಸುತ್ತುವ, ಪೂಜಿಸುವ, ನಮಸ್ಕರಿಸುವ ಅಜ್ಞಾನಿಗಳನ್ನು 'ಎಲ್ಲಿ ಭೋ! ಎಲ್ಲಿ ಭೋ!! ನಿಮ್ಮಹೊಡೆವಡುವ ದೈವಗಳೆಲ್ಲಾ ಗಿಡಮರವಾಗಿ ಹೋದವಲ್ಲಾ, ನಿಮ್ಮ ನಡೆಯೆಲ್ಲಾ ಅನಾಚಾರ, ನುಡಿಯೆಲ್ಲಾ ಶಿವದ್ರೋಹ ಇವದಿರ ಗಡಣ ಬೇಡ' ಎನ್ನುವನು. ಬ್ರಹ್ಮ,ವಿಷ್ಣು, ತಸಕೋಟಿ ದೇವತೆಗಳನ್ನು ಚೌಡಯ್ಯ ದೇವರೆಂದು ಒಪ್ಪುವುದಿಲ್ಲ. ಇವರು ದೇವತೆಗಳೇ ಅಲ್ಲ, ಇವರು ಹಲವು ಕಾಲ ನಮ್ಮ ಪಕ್ಕದ ಮನೆಯಲ್ಲಿ ಹುಟ್ಟಿದರು ಎಂದು ಹುಟ್ಟನ್ನು ಎತ್ತಿ ಹೇಳುವ ಚೌಡಯ್ಯ ಇವರು ಅಯೋನಿಜರೇನಲ್ಲ, ನಾನು ಇವರನ್ನು ಒಲ್ಲೆ ಎನ್ನುವನು. ನಮ್ಮ ಪರಿಕಲ್ಪನೆಯ ದೇವರುಗಳ ಹಾಗೆ ತಾಯಿಯ ಗರ್ಭದಿಂದ ಹೊರಬಂದ ಮಾನವರು ಎನ್ನುವನು. 

  ಗಂಡಹೆಂಡಿರ ಮನಸ್ಸು ಬೇರಾದರೆ ಹಳ್ಳದೊಳಗೆ ಹಂದಿ ಹೊರಳಾಡಿ ಒಂದರ ಮೇಲೆ ಒಂದು ಬಂದು ಮೂಸಿದಗೆ? ಎಂಬ ವಚನ ಚೌಡಯ್ಯನಲ್ಲಿ ಬಂದಿದೆ. ಅದೇ ರೀತಿ  ಆತನ ಆಲೋಚನೆಗೆ ಹೊಂದಿಕೆಯಾಗದ ತೀರ್ಥಕ್ಷೇತ್ರ ಪರ್ಯಟನದ (ಕಾಶೀ, ಮೈಲಾರ, ಶ್ರೀಶೈಲ,ರಾಚೋಟಿ) ಟೀಕೆ ಬಂದಿದೆ. ವಿಶೇಷವೆಂದರೆ, ಕಾಶಿ, ಶ್ರೀಶೈಲಗಳ ಜೊತೆಗೆ ಕರ್ನಾಟಕದ ಮೈಲಾರ ಮತ್ತು ರಾಚೋಟಿಗಳನ್ನು ತೀರ್ಥಕ್ಷೇತ್ರಗಳೆಂದು ಸಮೀಕರಿಸುವುದು; ೧೨ನೇ ಶತಮಾನಕ್ಕೆ ಇವು ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಪ್ರಸಿದ್ಧಿಯನ್ನು ಪಡೆದಿದ್ದವು. 

       ವಚನ ಸಾಹಿತ್ಯವು ಜನಸಾಮಾನ್ಯರ ನಡುವೆ ಮೂಡಿಬಂದ ದೇಸೀ ಸಾಹಿತ್ಯಜನರಿಂದ ಜನರಿಗಾಗಿ ರಚಿತವಾದ ಸಾಹಿತ್ಯ, ಹೀಗಾಗಿ ಅಲ್ಲಿ ಆಡುಭಾಷೆಯದೇ ಕಾರುಬಾರು. ತನ್ನ ಆಲೋಚನೆಗಳನ್ನು ಸ್ಪಷ್ಟಪಡಿಸಲು  ವಚನಕಾರರು ಸಮರ್ಥವಾಗಿ ಅಂಬಿಗರ ಚೌಡಯ್ಯ ಜಾತಿಯಲ್ಲಿ ಶೂದ್ರ, ವೃತ್ತಿಯಲ್ಲಿ ಅಂಬಿಗ, ಹೀಗಾಗಿ ಅವನು ಬಳಸಿಕೊಂಡದ್ದು ಉಪಮೆ, ರೂಪಕ, ಸುಭಾಷಿತದಂತಹ ನುಡಿಮುತ್ತುಗಳನ್ನು, ಪ್ರಯತ್ನಪೂರ್ವಕವಾಗಿ ಉಚ್ಚವರ್ಣಿಯರ ಭಾಷೆಯನ್ನು ಬಳಸುವುದಿಲ್ಲ. ಅವನಿಗೆ ಭಾಷೆಯೆಂಬುದು ಏತದ ನೀರಿನಂತೆ ಸಹಜವಾಗಿ ಅಭಿವ್ಯಕ್ತಿ ಪಡೆದುಕೊಳ್ಳುತ್ತದೆ.

      ವೈಚಾರಿಕ ಪ್ರವೃತ್ತಿಯ ಸಾಮಾಜಿಕ ಚಿಂತಕನ ಭಾಷೆಯಲ್ಲಿ ಅವನದೇ ಆದ ಒಂದು ಅಭಿವ್ಯಕ್ತಿ ಕ್ರಮವಿರುತ್ತದೆ. ಹೋಲಿಕೆಗಳು ಅರ್ಥಗರ್ಭಿತವಾಗಿ ಮಾತಿನ ರೂಪದಲ್ಲಿ ನಿಗಿನಿಗಿ ಹೊಳೆಯುತ್ತಿರುತ್ತವೆ. ಉದಾಹರಣೆಗೆ ಕೆಲವನ್ನಿಲ್ಲಿ ನೋಡಬಹುದು. 

ಹಾಲುಂಬ ಹಸುಳೆಗೆ ಕೂಳು ಮೈಯಕ್ಕುವುದೆ?”

'ಜ್ಯೋತಿಯ ನೆನೆದರೆ ಕತ್ತಲೆ ಹಿಂಗುವುದೆ?”

ರಂಭೆಯ ನೆನೆದರೆ ಕಾಮದ ಕಳವಳ ಹಿಂಗುವುದೆ?

ಮೃಷ್ಟಾನ್ನವ ನೆನೆದರೆ ಹೊಟ್ಟೆ ತುಂಬುವುದೆ?

'ಆಶೆಯುಳ್ಳಾತ ಒಬ್ಬರ ಅಧೀನದಲ್ಲಿಪ್ಪನು, ಆಶೆಯ ಮನದ

ಕೊನೆಯನರಿದಾತ ಕೈಲಾಸದಾಚೆಯಲ್ಲಿಪ್ಪ

“ಡಾಗಿನ ಪಶುಗಳೆಲ್ಲ ಭೇದವನರಿಯಬಲ್ಲವೆ?”

ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ

ಗುಡಿ-ಇವು ಹಾಳುದೇಗುಲ ಸಮವು'

'ಬೆಲ್ಲಕ್ಕೆ ಚದುರರಸವಲ್ಲದೆ ಸಿಹಿಗೆ ಚದುರರಸವುಂಟೆ ?'

“ಅರುಹು ಕರಿಗೊಂಡಲ್ಲಿ ಕೈಯ ಕುರುಹು ಅಲ್ಲಿಯೆ ಲೋಪ

'ಯೋಗಿಯಾದಲ್ಲಿ ದೇಹಧರ್ಮವ ಮರೆದು,

ಭೋಗಿಯಾದಲ್ಲಿ ಸಂಚಿತವ ಮರೆದು,

ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು'

'ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ ತೂತಯೋಗಿ'

'ಓಡಲಿಂಗೆ ಹೆಣ್ಣು ಹೊನ್ನು ಮಣ್ಣು ಅಡ್ಡಬಿದ್ದು ಕೊಲುವಾಗ

ನಡೆವ ಗಂಡರುಂಟೆ ??

'ಕಳ್ಳ ಹಾದರಿಗೆ ಸೂಳೆಗಾರ ತಳವಾರರಲ್ಲಿ ಮಿಥ್ಯವಿಲ್ಲದಿರಬೇಕು'

'ಸೂಳೆಯ ಮಗನೇನು ಬಲ್ಲನಯ್ಯ ತಂದೆಯ ಕುರುಹ?'

'ವೇಣು ಚಂದನದ ಯೋಗದಲ್ಲಿದ್ದಡೆ ಗಂಧ ತಾನಾಗಬಲ್ಲುದೆ ?

'ಲೋಭವೆಂಬ ಗ್ರಹಣ ಹಿಡಿದವರ ಏತರಿಂದರಲೂ

ನಿಲ್ಲಿಸಲಾಗದು. ಈ ಲೋಭಕ್ಕೆ ದಾರಿದ್ರವೇ ಔಷಧವು ?' ಎಂದ

'ಬ್ರಹ್ಮದ ಮಾತನಾಡಿ ಕನ್ನೆಯರ ಕಾಲದೆಸೆಯಲ್ಲಿ ಕುಳಿತು

ಪರಬೊಮ್ಮದ ಮಾತು ಅಲ್ಲಿಂದ ನಿಂದಿತ್ತು'

'ಚಿತ್ರವೃತ್ತಿಯನರಿದು ಬೇಡುವಂಗೆ ಇನ್ನೆತ್ತಣ ಮುಕ್ತಿ?'

'ದೇಹಾರಕ್ಕೆ ಆಹಾರವೇ ನಿಚ್ಚಣಿಕೆ

'ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ

ನಂದಾದೀವಿಗೆಯ ಮುಡಿಸಿದ ಹಾಗೆ

'ಕಳವು ಪಾರದಾರಕ್ಕೆ ಪರಾಕುಂಟೆ? ಅದು ತನ್ನ ಒಡಲಳಿವ ಇರವು

'ಲಿಂಗತನುವಿಂಗೆ ಆತ್ಮತೇಜದ ಅಹಂಕಾರವುಂಟೆ ? ಸದ್ಯಕ್ಕಂಗೆ

ಹುಸಿ, ಕುಹಕ, ಕ್ಷಣಿಕತ್ವ, ಅಸಘಾತದಸಕವುಂಟೆ?'

ಉದಯದಲಿದ್ದು ಪತ್ರ ಪುಷ್ಪಗಳಿಗೆ ಹೋಗುವ ಅಣ್ಣಗಳು

ನೀವು ಕೇಳಿರೋ, ನೀವು ಗಿಡದ ವೈರಿಗಳೊ? ಗಿಡದ ದಾಯಾದ್ಯರೊ??

'ಕಾಸಿನ ಕಲ್ಪ ಕೈಯಲ್ಲಿ ಕೊಟ್ಟು ಹೇಸದೆ ಕೊಂದ ಗುರುವೆಂಬ

ದ್ರೋಹಿ. ಬಿಟ್ಟಡೆ ಸಮಯವಿರುದ್ಧ ಹಿಡಿದಡೆ ಜ್ಞಾನವಿರುದ್ಧ ಉಪ್ಪಿಲ್ಲದ ಮೇಲೋಗರ ತುಪ್ಪದಲ್ಲಿ ಬೆಂದಡೆ ತುಪ್ಪಲೇಸಂದಡೆ ಸಪ್ಪೆಯಾಗಿ ತೋರಿತ್ತು'

“ಓದಿಸಿ ಬೋಧಿಸಿ ಇದಿರಿಂಗೆ ಹೇಳುವನ್ನಬರ ಚದುರತೆಯಲ್ಲವೆ?'

ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ ??

ಬೆಳಗಾಯಿತ್ತೆಂದು ಏಳುವರಿಂದ ಕಡೆಯೆ?”

'ಕಾಲವೇಳೆಯನರಿದು ಕೂಗಿದ ಕೋಳಿಯ ಕಂಡು ಊರೆಲ್ಲರೂ

'ಮರಕ್ಕೆ ಬೇರು ನಷ್ಟದಿಂದ ಶಾಖೆನಪ್ಪ, ಪ್ರಕೃತಿ ನಷ್ಟದಿಂದ ಇಂದ್ರಿಯನಷ್ಟ

'ಜಾತಿಭ್ರಮ ನೀತಿಭ್ರಮೆ ಎಂಬ ಕರ್ಮಂಗಳ ಘಾಸಿಮಾಡಿ

... ಕಳೆಯಬಲ್ಲಡಾತ ಯೋಗಿ

ಚೌಡಯ್ಯ ಹುಟ್ಟಿನಲ್ಲಿ ಶೂದ್ರನಾದರೂ ತೀರಾ ಸ್ವಾಭಿಮಾನಿ. ಮೇಲುವರ್ಗದವರಊಸರವಳ್ಳಿತನವನ್ನು ಕಂಡಾಗ, ಮೋಸ, ವಂಚನೆಗಳನ್ನು ಕಂಡಾಗ ಅವನ ಮಾತುನಿಗಿ ನಿಗಿ ಕೆಂಡವಾಗುತ್ತದೆ. ಅವನ ಸಾಮಾಜಿಕ ಚಿಂತನೆಯಲ್ಲಿ ಸ್ವಂತಿಕೆಯಿದೆ,ಅಭಿವ್ಯಕ್ತಿಯಲ್ಲಿ ಒರಟುತನವಿದೆ. ಚೌಡಯ್ಯನು ಶೋಷಣೆಗೆ ಒಳಗಾದವರಪ್ರತಿನಿಧಿಯಾಗಿರುವುದರಿಂದ ಮಾತಿನ ವಾಚ್ಯಾರ್ಥವನ್ನು 'ಅನಾಗರಿಕ'ವೆನ್ನುವಷ್ಟುರೊಚ್ಚಿನಿಂದ ಹೇಳುವಷ್ಟು ಹರಿತ ನಾಲಗೆಯವನು. ತಪ್ಪು ಮಾಡಿದವರ ಬಗೆಗೆ ಅವನದೇಆದ ವಿಶಿಷ್ಟ ಪ್ರತಿಕ್ರಿಯೆಯಿದೆ :

 ಚೌಡಯ್ಯನ ನಿಷ್ಣುರವಾದ ಮಾತಿಗೆ ಅವನ ನೇರ ನಡಾವಳಿಯೇ ಕಾರಣ.ಅವನಲ್ಲಿ ಹೊಂದಾಣಿಕೆಯ ನಯಗಾರಿಕೆಯ ಸ್ವಭಾವವಿಲ್ಲ: ಇದ್ದುದನ್ನು ಇದ್ದಂತೆ ಹೇಳುವನೇರ ನುಡಿ, ಅವನ ಟೀಕೆಗೆ ಮನುಷ್ಯರಷ್ಟೇ ಅಲ್ಲ, ದೇವತೆಗಳೂ ಒಳಗಾಗುವರು ಭಕ್ತರುಗಳಷ್ಟೇ ಅಲ್ಲ ಗುರು-ವಿರಕ್ತರೂ ಒಳಗಾಗುವರು. ಒಟ್ಟಿನಲ್ಲಿ  ಅವನದು ಗಳಗೊಡ್ಡಿದ ಕತ್ತಿ, ಕೆಟ್ಟದ್ದನ್ನು ಕಂಡು ಕೆರಳುವ ಅವನು ಒಳಿತನ್ನು ಕಂಡಾಗ ಗೌರವಿಸುವ ಸ್ವಭಾವದವನು. 

   ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ಅಂಬಿಗ, ಸಾಮಾಜಿಕವಾಗಿ ನಿಕೃಷ್ಟ. ಆದರೂನ ಅಲ್ಲಿ ತುಂಬಿ ಹರಿಯುವ ಆತ್ಮವಿಶ್ವಾಸ ಆ ಪರಿಸರದಲ್ಲಿ ತೀರಾ ಅಪರೂಪ. ಅವನು ರೂಢಿಸಿಕೊಂಡ ಜ್ಞಾನ ಹಾಗೂ ದೀಕ್ಷೆಯ ಮುಖಾಂತರ ಅವನಲ್ಲಿ ಕಾಣಿಸಿಕೊಂಡ ಪರಿವರ್ತನೆ ಎರಡೂ ಅಚ್ಚರಿ ಮೂಡಿಸುವಂತಹದು. ಅವನ ಬಿಡುಬೀಸಾದ ವರ್ತನೆ ಹಾಗೂ ಅವನ ಸ್ವಂತದ್ದಾದ ಮಾತುಗಾರಿಕೆ ಅವನ ಸಮಕಾಲೀನ ವಚನಕಾರರಲ್ಲಿ ಕಾಣಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಕ್ಕೆ ಅವನ ವ್ಯಕ್ತಿತ್ವ ಅವನ ಅಭಿವ್ಯಕ್ತಿಯಲ್ಲಿ ಮೈದಾಳಿದೆ. ಶೂದ್ರವರ್ಗದ ಪ್ರತಿನಿಧಿಯಾಗಿ ತನ್ನ ರೂಕ್ಷ ವರ್ತನೆಯಿಂದ, ಅನಾಗರಿಕ ರೀತಿಯಿಂದ ಅಂಬಿಗರ ಚೌಡಯ್ಯ ಸಾಚಾ ಆಗುತ್ತಾನೆ. ಇದು ೧೨ನೆಯ ಶತಮಾನ ಬಸವಚಳವಳಿಯು ದಲಿತನೊಬ್ಬನಿಗೆ ಕೊಟ್ಟ ವಾಕ್‌ಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯ, ವಿಮರ್ಶಾ ಸ್ವಾತಂತ್ರ್ಯ. ಹಳೆಯ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಅಂದಿನ ಸಾಮಾಜಿಕ ಆವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ಎಲ್ಲಿಯೂ ಇಷ್ಟರಮಟ್ಟಿಗೆ ನಮಗೆ ಕಾಣದು. ಅವನ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸಮಾಜಸುಧಾರಕನ ಕಟುಟೀಕೆಯೂ ಕೇಳಿಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥ ಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು ಎಂಬ ವಿದ್ಯಾಶಂಕರ ಅವರ ಮಾತು ನಿಜ. ಒಟ್ಟಾರೆ ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಸಿಡಿಲು ನುಡಿಯ ಸರ್ವಜ್ಞ ಮತ್ತು  ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯರಲ್ಲಿ ಮಾತ್ರ ಎಂದು ತೋರುತ್ತದೆ.


ಪರಾಮರ್ಶನ ಗ್ರಂಥಗಳು

೧. ಅಂಬಿಗರ ಚೌಡಯ್ಯನ ವಚನಗಳು ಸಂ. ಎಸ್.ವಿದ್ಯಾಶಂಕರ

 ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೦೯

೨.ಸಂಕೀರ್ಣ ವಚನ ಸಂಪುಟ ೧(ಸಂ: ಎಂ.ಎಂ.ಕಲಬುರ್ಗಿ)

ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು (ದ್ವಿ.ಮು) 2001

೩.ಎಂ.ಚಿದಾನಂದಮೂರ್ತಿ, ಸ್ಥಾವರ-ಜಂಗಮ

 ಚಿದಾನಂದ ಸಮಗ್ರ ಸಂಪುಟ-4

 ಸ್ವಪ್ನ ಪುಸ್ತಕಾಲಯ, ಬೆಂಗಳೂರು, 2004

೪. ಬಸವರಾಜು.ಸಿ,ಕಲ್ಗುಡಿ, ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ

 ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು,2001 ( ಮೂ.ಮು)

೫. ಎಂ.ಎಂ.ಕಲಬುರ್ಗಿ ಮಾರ್ಗ ಸಂಪುಟ-3

 ಸ್ವಪ್ನ ಪುಸ್ತಕಾಲಯ, ಬೆಂಗಳೂರು, 1997

೬.ಸಿ.ನಾಗಭೂಷಣ, ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು

 ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, 2000

 ವೀರಶೈವ ಸಾಹಿತ್ಯ : ಕೆಲವು ಒಳನೋಟಗಳು

 ವಿಜೇತ ಪ್ರಕಾಶನ, ಗದಗ,2008

 ಶರಣ ಸಾಹಿತ್ಯ ದೀಪಿಕೆ,ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರ್ಗಿ,ಪು.೨೦೧೭

೭.ಬಸವರಾಜ ಸಬರದ, ವಚನಚಳುವಳಿ

 ಪಲ್ಲವಿ ಪ್ರಕಾಶನ, ಗುಲಬರ್ಗಾ,2007

೮. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ.೩ ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ

೯. ಎಂ.ಚಿದಾನಂದ ಮೂರ್ತಿ , ವಚನ ಸಾಹಿತ್ಯ

  ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆ, ಪ್ರಸಾರಂಗ, ಬೆಂಗಳೂರು ವಿಶ್ವವಿದ್ಯಾಲಯ





 ಬ್ಹಿ. ವಿ. ಶಿರೂರ  ಕನ್ನಡ ವಿದ್ವತ್‌ ಪರಂಪರೆಯ ವಿದ್ವತ್ತಿನ ಪ್ರತೀಕ  

                                                       ಡಾ.ಸಿ.ನಾಗಭೂಷಣ

ಡಾ. ಬಿ.ವಿ. ಶಿರೂರ ಅವರು ಆದರ್ಶ ಕನ್ನಡ ಪ್ರಾಧ್ಯಾಪಕರಾಗಿ, ಶ್ರೇಷ್ಠ ಸಂಶೋಧಕರಾಗಿ ಕಳೆದ ಮೂವತ್ತೈದು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅವಿರತವಾಗಿ ದುಡಿದವರು. ಸಂಶೋಧನೆ, ಹಳಗನ್ನಡ, ಹಸ್ತಪ್ರತಿ, ಶಾಸನ ಹಾಗೂ ಸಂಪಾದನ ಕ್ಷೇತ್ರಗಳಲ್ಲಿ ಕೃಷಿ ಮಾಡಿ, ಮೌಲಿಕ ಕೃತಿಗಳನ್ನು ರಚಿಸಿದವರು. ಕನ್ನಡ ವಿದ್ವತ್‌ ವಲಯದ ಕೊನೆಯ ತಲೆಮಾರಿನ ಡಾ. ಶಿರೂರ ಅವರ ಸಂಶೋಧನ ಶಿಸ್ತು, ಪರಿಶ್ರಮ ಪ್ರವೃತ್ತಿ ಅವರನ್ನು ಅಪರೂಪದ ಸಂಶೋಧಕರನ್ನಾಗಿ ಮಾಡಿವೆ.

    ಡಾ. ಬಸವರಾಜ ವೀರಭದ್ರಪ್ಪ ಶಿರೂರ ಅವರು ಕೊಪ್ಪಳ ಜಿಲ್ಲೆ ಯಲಬುರ್ಗಿ ತಾಲೂಕಿನ ಆಡೂರ ಗ್ರಾಮದವರು. ಇವರ ತಂದೆಯವರು ಅಪ್ಪಟ ಗಾಂಧಿವಾದಿಗಳೂ, ನ್ಯಾಯನಿಷ್ಠುರರೂ ಆಗಿದ್ದರು. ಸತ್ಯಾಗ್ರಹ, ಚಳುವಳಿ, ರಾಜಕಾರಣದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದವರು. ಆದರ್ಶ ಸಮಾಜಸೇವಕರಾಗಿದ್ದ ವೀರಭದ್ರಪ್ಪನವರ ಪ್ರೇರಣೆ ಪ್ರಭಾವಗಳು ಡಾ. ಶಿರೂರ ಅವರ ಮೇಲೆ ಗಾಢವಾಗಿ ಆಗಿರುವುದು ಕಂಡುಬರುತ್ತದೆ. ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾದ ಅಂದಾನಮ್ಮನವರು ಶಿರೂರ ಅವರ ತಾಯಿಯವರು. ಇವರ ಪುಣ್ಯಗರ್ಭದಲ್ಲಿ ಮಾರ್ಚ್ ೨, ೧೯೪೧ ರಂದು ಬಸವರಾಜ ಜನಿಸಿದರು. ಬಾಲ್ಯದಲ್ಲಿ ತಾಯಿಯವರನ್ನು ಕಳೆದುಕೊಂಡು, ಬಡತನದ ಬವಣೆಯನ್ನು ಅನುಭವಿಸಿದರು. ತುಂಬಾ ಚುರುಕಾಗಿದ್ದ ಇವರು ಗದಗ ಮತ್ತು ಆಡೂರಗಳಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಕೊಪ್ಪಳ ಮತ್ತು ಕುಕನೂರಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಪಿ.ಯು.ಸಿ. ಶಿಕ್ಷಣವನ್ನು ರಾಯಚೂರಿನಲ್ಲೂ ಪದವಿ ಶಿಕ್ಷಣವನ್ನು ಹುಬ್ಬಳ್ಳಿ-ಧಾರವಾಡಗಳಲ್ಲೂ ಪೂರೈಸಿದರು. ೧೯೬೨ರಲ್ಲಿ ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ ಪಾಸು ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಎಂ.ಎ. ಅಧ್ಯಯನ ಮಾಡಿದರು. ಡಾ. ಆರ್.ಸಿ. ಹಿರೇಮಠ, ಡಾ. ಎಂ.ಎಸ್. ಸುಂಕಾಪುರ ಅವರಂಥ ವಿದ್ವತ್ತಿನ ಪ್ರಾಧ್ಯಾಪಕರ ಪ್ರಭಾವಕ್ಕೆ ಒಳಗಾದರು. ಡಾ. ಆರ್.ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ 'ಶ್ರವಣಬೆಳಗೊಳ - ರಾಜಕೀಯ ಸಾಹಿತ್ಯಕ, ಸಾಂಸ್ಕೃತಿಕ ಮಹತ್ವ' ಎಂಬ ವಿಷಯ ಕುರಿತು ಪಿಎಚ್.ಡಿ ಸಂಶೋಧನ ಕಾರ್ಯ ಕೈಗೊಂಡರು.

ಡಾ. ಬಿ.ವಿ. ಶಿರೂರ ಅವರು ೧೯೬೫ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ವಚನವಾಲ್ಮೀಯ ವಿಭಾಗದಲ್ಲಿ ಸಹಾಯಕ ಸಂಶೋಧಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ೧೯೬೬ ರಲ್ಲಿ ನರೇಗಲ್ಲದ ಶ್ರೀ ಅನ್ನದಾನೀಶ್ವರ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಕೌಟುಂಬಿಕ ಜೀವನದ ತಾಪತ್ರಯಗಳ ಮಧ್ಯದಲ್ಲೂ ತಮ್ಮ ಸಂಶೋಧನ ಕಾವ್ಯವನ್ನು ಮುಂದುವರೆಸಿದರು. ೧೯೭೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಗಳಿಸಿದರು.

ವಿದ್ಯಾರ್ಜನೆ' ಎನ್ನುವುದು ಆಸಕ್ತರಿಗೆ ಅಧ್ಯಯನಶೀಲ ಪ್ರವೃತ್ತಿಯವರಿಗೆ ಬತ್ತದ ಹೊಳೆಯಂತೆ. ಡಾ. ಶಿರೂರ ಅವರು ಜೀವನದುದ್ದಕ್ಕೂ ಈ ಅಧ್ಯಯನಶೀಲ ಪ್ರವೃತ್ತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ನರೇಗಲ್ ಪದವಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಚಾರ್ಯರಾಗಿ, ನ್ಯಾಯಯುತವಾದ ಸೇವೆ ಸಲ್ಲಿಸಿದ್ದಾರೆ. ಆ ಶಿಕ್ಷಣ ಸಂಸ್ಥೆಯಲ್ಲಿ ಡಾ. ಶಿರೂರ ಅವರಂಥ ದಕ್ಷ, ಪ್ರಾಮಾಣಿಕ ಹಾಗೂ ಶಿಸ್ತಿನ ಪ್ರಾಧ್ಯಾಪಕರು ಇರುವುದರಿಂದ ಅದಕ್ಕೆ ಘನತೆ ಗೌರವಗಳು ಪ್ರಾಪ್ತವಾಗಿದ್ದವು. ಇವರು ಪ್ರಾಚಾರ್ಯರಾಗಿ ಸಲ್ಲಿಸಿದ ಸೇವೆ ಅನುಕರಣೀಯವಾದುದು.

     ಡಾ. ಶಿರೂರ ಅವರಲ್ಲಿಯ ಪ್ರತಿಭೆ, ಪಾಂಡಿತ್ಯ, ಶ್ರಮವಹಿಸಿ ದುಡಿಯುವ ಗುಣಗಳಿಂದಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಜೈನಸಾಹಿತ್ಯದ ಪ್ರವಾಚಕರಾಗಿ ೧೯೮೫ ರಲ್ಲಿ ಸೇರ್ಪಡೆಯಾದರು. ತಮ್ಮ ಪಾಂಡಿತ್ಯಪೂರ್ಣ ಪಾಠಬೋಧನೆಯಿಂದ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸಗಳನ್ನು ಗಳಿಸಿದರು, ಸೇವಾ ಮನೋಭಾವದ ದುಡಿಮೆಯಿಂದ ಬೆಳೆಯುತ್ತಲೇ ಹೋದರು. ಈ ಅವಧಿಯಲ್ಲಿಯೇ ಮಹತ್ವಪೂರ್ಣವಾದ ಸಾಹಿತ್ಯಕ ಕೃತಿಗಳ ರಚನೆಯನ್ನು ಮಾಡಿದರು. ನಾಡಿನ ವಿದ್ವತ್ಪತ್ರಿಕೆಗಳಲ್ಲಿ ಮೌಲಿಕವಾದ ನೂರಾರು ಲೇಖನಗಳನ್ನು ಪ್ರಕಟಿಸಿದರು. ಅವರ ಸಂಶೋಧನ ಕೃತಿ, ಲೇಖನ ಹಾಗೂ ಸಂಪಾದನ ಕೃತಿಗಳನ್ನು ಕೆಳಗಿನಂತೆ ಸಮೀಕ್ಷಿಸಬಹುದು.

     ಡಾ. ಬಿ.ವಿ. ಶಿರೂರ ಅವರ ಆಸಕ್ತಿಯ ಕ್ಷೇತ್ರ ಸಂಶೋಧನೆ. ಶ್ರಮ, ಶ್ರದ್ಧೆ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಂತಹ ಗುಣಗಳಿಂದಾಗಿ ಅವರೊಬ್ಬ ಸಮರ್ಥ ಸಂಶೋಧಕರೆನಿಸಿದ್ದಾರೆ. ಸಂಶೋಧನೆ ಅವರ ಬದುಕಿನ ಒಂದು ಅಂಗವಾಗಿದೆ. ಅವರು ಡಾ. ಆರ್.ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಶ್ರವಣಬೆಳಗೊಳ-ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ, ಮಹತ್ವ' ಎಂಬ ಮಹಾಪ್ರಬಂಧಕ್ಕೆ ೧೯೭೩ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. “ಕನ್ನಡ ನಾಡಿನ ಇತಿಹಾಸವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕೆಲವೇ ಸ್ಥಳಗಳಲ್ಲಿ ಶ್ರವಣಬೆಳಗೊಳ ಸುಪ್ರಸಿದ್ಧವಾದುದು. ಇಂಥ ಸಾಂಸ್ಕೃತಿಕ ಕೇಂದ್ರವೊಂದನ್ನು ಸಮಗ್ರ ಸಂಶೋಧನಾಧ್ಯಯನಕ್ಕೆ ಒಳಪಡಿಸಿರುವ ಶಿರೂರ ಅವರ ಈ ಮಹಾಪ್ರಬಂಧ ಕನ್ನಡ ಸಂಶೋಧನ ಕ್ಷೇತ್ರಕ್ಕೆ ಸಂದ ಮೌಲಿಕ ಕೊಡುಗೆ ಎನಿಸಿದೆ. ಕ್ರಿ.ಪೂ. ೩ನೆಯ ಶತಮಾನದಷ್ಟು ಹಿಂದೆಯೇ ಉತ್ತರ ಭಾರತದ ಭದ್ರಬಾಹು, ಚಂದ್ರಗುಪ್ತರನ್ನು ಶ್ರವಣಬೆಳಗೊಳ, ಕರ್ನಾಟಕದಲ್ಲಿ ಜೈನಧರ್ಮದ ಜಾಗೃತ ಕೇಂದ್ರವಾಗಿದೆ. ಶಾಸನ, ಸಾಹಿತ್ಯ ಹಾಗೂ ವಾಸ್ತು ಶಿಲ್ಪಗಳ ಆಧಾರದಿಂದ ಶ್ರವಣಬೆಳಗೊಳದ ಚಾರಿತ್ರಿಕ ಮಹತ್ವವನ್ನು ಡಾ. ಶಿರೂರ ಅವರು ಕಟ್ಟಿಕೊಟ್ಟಿದ್ದಾರೆ. ಕುಂದಕುಂದ, ಸಮಂತಭದ್ರ ಮೊದಲಾದ ಮುನಿವರ್ಯರು, ಚಾವುಂಡರಾಯ, ಗಂಗರಾಜ ಶಾಂತಲೆಯಂಥ ಶ್ರಾವಕರು, ಅವರು ರೂಪಿಸಿದ ಕೃತಿಗಳು, ಸ್ಥಾಪಿಸಿದ ಜಿನಮಂದಿರ ಹಾಗೂ ಮಂಟಪಗಳ ಅಧಾರದಿಂದ ಅಧ್ಯಯನ ಮಾಡಿದ್ದಾರೆ.

ಮಾನಸ್ತಂಬ, ಗೊಮ್ಮಟಮೂರ್ತಿ ಮೊದಲಾದವುಗಳನ್ನು ಶಾಸನ, ಸಾಹಿತ್ಯ ಕೃತಿಗಳು ಮತ್ತು ವಾಸ್ತುಶಿಲ್ಪಗಳಆಕರ್ಷಿಸಿದ ಶ್ರವಣಬೆಳೊಳವನ್ನು ರಾಜಕೀಯ ನೆಲೆಯಾಗಿಟ್ಟುಕೊಂಡು ವಿವಿಧ ಅರಸುಮನೆತನಗಳು ಮಾಡಿದ ಸಾಧನೆಗಳನ್ನು ದಾಖಲಿಸಿದ್ದಾರೆ. ಕ್ರಿ.ಪೂ. ೩ನೆಯ ಶತಮಾನದಿಂದಲೇ ಭದ್ರಬಾಹು, ಚಂದ್ರಗುಪ್ತರನ್ನು ಆಕರ್ಷಿಸಿದ ಶ್ರವಣಬೆಳೊಳ ಉತ್ತರ ಮತ್ತು ದಕ್ಷಿಣ ಭಾರತದ ಜೈನರ ಪ್ರಮುಖ ಕೇಂದ್ರವಾಗಿಪರಿಣಮಿಸಿರುವುದನ್ನು ನಿಖರವಾಗಿ ಗುರುತಿಸಿದ್ದಾರೆ. ಗಂಗ ಅರಸರ ಕಾಲವನ್ನು ಶ್ರವಣಬೆಳಗೊಳದ ಸುವರ್ಣಯುಗವೆಂದು ಕರೆಯಲಾಗುತ್ತಿದೆ. ಗಂಗರ ರಾಚಮಲ್ಲನ ಮಂತ್ರಿ ಚಾವುಂಡರಾಯ ಕೆತ್ತಿಸಿದ ಗೊಮ್ಮಟ ವಿಗ್ರಹದಿಂದಾಗಿ ಪ್ರಾಪ್ತವಾದ ಇದರ ಖ್ಯಾತಿಯನ್ನು ಬಣ್ಣಿಸಿದ್ದಾರೆ. ರಾಷ್ಟ್ರಕೂಟ ಮತ್ತು ಚಾಲುಕ್ಯ ದೊರೆಗಳು ಶ್ರವಣಬೆಳಗೊಳದೊಂದಿಗೆ ಇಟ್ಟುಕೊಂಡ ಸಂಪರ್ಕವನ್ನು ಆಧಾರಯುಕ್ತವಾಗಿ ವಿವರಿಸಿದ್ದಾರೆ. ಹೊಯ್ಸಳರ ಕಾಲದಲ್ಲಿ ಪುನಃ ಪ್ರವರ್ಧಮಾನಕ್ಕೆ ಬಂದ ಶ್ರವಣಬೆಳಗೊಳದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ವಿಷ್ಣುವರ್ಧನ ಮತ್ತು ಶಾಂತಲೆಯರ ಸಾಧನೆ-ಸಿದ್ಧಿಗಳನ್ನು ಗುರುತಿಸಿದ್ದಾರೆ. ಶ್ರವಣಬೆಳಗೊಳದ ಸಾಹಿತ್ಯಕ ವಿವರಗಳನ್ನು ಶ್ರವಣಬೆಳಗೊಳದ ಕವಿ ಸಾಹಿತ್ಯ, ಸ್ಥಳದಿಂದ ಪ್ರಭಾವಿತರಾದ ಕವಿ ಸಾಹಿತ್ಯ, ಶಾಸನ ಸಾಹಿತ್ಯ ಮತ್ತು ಶಾಸನೋಕ್ತ ಕವಿ ಸಾಹಿತ್ಯವೆಂಬ ಉಪಶೀರ್ಷಿಕೆಯಲ್ಲಿ ಮೊದಲ ಬಾರಿಗೆ ಅನೇಕ ಜನ ಕವಿಗಳನ್ನು ಅವರ ಕೃತಿಗಳಲ್ಲಿ ಅಂತರ್ಗತವಾದ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಉದಾಹರಣೆಗೆ ಚಿದಾನಂದಕವಿಯ ಮುನಿವಂಶಾಭ್ಯುದಯ ಮತ್ತು ಅನಂತಕವಿಯ ಗೊಮ್ಮಟೇಶ್ವರ ಚರಿತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅವು ಬೆಳಕು ಕಾಣುವಂತೆ ಮಾಡಿದ್ದಾರೆ. ಇಲ್ಲಿಯ ಸುಮಾರು ೫೭೩ ಶಾಸನಗಳಲ್ಲಿ ಹುದುಗಿರುವ ಭದ್ರಬಾಹು, ಕುಂದಕುಂದ, ಉಮಾಸ್ವಾತಿ, ಶಿವಕೋಟಿಸೂರಿ, ಸಮಂತಭದ್ರ ಮೊದಲಾದ ಕವಿ ಕೃತಿಗಳನ್ನು ವಿಶ್ಲೇಷಿಸಿದ್ದಾರೆ.

ಪ್ರಾಚೀನ ಕಾಲದಿಂದಲೂ ಶ್ರವಣಬೆಳೊಳ ಒಂದು ಪ್ರಮುಖ ಜೈನ ಕೇಂದ್ರವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವುದನ್ನು ಆಧಾರ ಸಹಿತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸ್ಥಳದ ಮಹತ್ವದೊಂದಿಗೆ ಕನ್ನಡಿಗರ ಜನಜೀವನ, ಧರ್ಮಸಮನ್ವಯತೆ ಮೊದಲಾದವುಗಳ ವಿವರಗಳೊಂದಿಗೆ ಅವರ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿತೋರಿದ್ದಾರೆ. ಡಾ. ಬಿ. ಶಿರೂರ ಅವರ ಈ ಸಂಶೋಧನ ಮಹಾಪ್ರಬಂಧ ಒಂದು ಸಾಂಸ್ಕೃತಿಕ ಕೇಂದ್ರವನ್ನು ಮೂಲ ವಸ್ತುವನ್ನಾಗಿಟ್ಟುಕೊಂಡು ಆಗಿರುವ ಕೆಲಸಗಳಲ್ಲಿ ಇದೇ ಮೊದಲನೆಯದು. ಇತರ ಸಾಂಸ್ಕೃತಿಕ ಕೇಂದ್ರಗಳನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಆಕರಗ್ರಂಥವಾಗಿದೆ. ಕನ್ನಡದ ವಿದ್ವತ್ಪೂರ್ಣವಾದ ಮಹಾಪ್ರಬಂಧಗಳಿಗೆ ಇದು ಮಾದರಿಯಾಗಿದೆ. ಕನ್ನಡ ಸಂಶೋಧನ ಕ್ಷೇತ್ರಕ್ಕೆ ಸಂದ ಈ ಅಪರೂಪದ ಕೊಡುಗೆಗೆ ಶ್ರವಣಬೆಳೊಳದ ಬಾಹುಬಲಿ ಪ್ರತಿಷ್ಠಾನವು ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಯಲಬುರ್ಗಿಯ ಸಿಂದರು ಡಾ. ಬಿ. ವೈ. ಶಿರೂರ ಅವರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ನೀಡಿದ ಉಪನ್ಯಾಸದ ಕಿರುಕೃತಿ. ಯಲಬುರ್ಗಿ ಸಿಂದರ ಚರಿತ್ರೆಯನ್ನು ಮೊದಲ ಬಾರಿಗೆ ಕಟ್ಟಿಕೊಡುವ ಮಹತ್ವದ ಗ್ರಂಥ. ಇದು ಆಕೃತಿಯಲ್ಲಿ ಕಿರಿದಾದರೂ ವಸ್ತು ಸಂಗ್ರಹಣೆ ದೃಷ್ಟಿಯಿಂದ ಹಿರಿದಾಗಿದೆ. ಈ ಕೃತಿಗೆ ಮೂವತ್ತೆಂಟು ಶಾಸನಗಳನ್ನು ಬಳಸಿಕೊಂಡಿರುವುದರಿಂದ ಚಾರಿತ್ರಿಕವಾಗಿ ಇದು ಮೌಲಿಕವೆನಿಸಿದೆ. ಇತಿಹಾಸ ನಿರೂಪಕನಿಗಿರಬೇಕಾದ ನಿಷ್ಪಕ್ಷಪಾತ ಗುಣ, ಪ್ರಾಮಾಣಿಕತೆ, ಡಾ. ಶಿರೂರ ಅವರಲ್ಲಿ ಮೇಳೆಸಿರುವುದರಿಂದ ಲಭ್ಯವಿರುವ ಎಲ್ಲ ಆಧಾರಗಳನ್ನು ಬಳಸಿಕೊಂಡು ವಿಷಯವನ್ನು ಚರ್ಚಿಸಿರುವ ರೀತಿ ಅನನ್ಯವಾಗಿದೆ. ಈ ಚಿಕ್ಕ ಗ್ರಂಥ ಕುರುಗೋಡ ಸಿಂದರು' ಎಂಬಂಥ ಮಹಾಪ್ರಬಂಧ ರಚನೆಗೆ ಪ್ರೇರಕವಾಗಿದೆ. ಸಿಂದವಂಶದ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಇದು ಆಕಗ್ರಂಥವಾಗಿದೆ. ಕರ್ನಾಟಕದಲ್ಲಿ ಸಂಶೋಧನಶಾಸ್ತ್ರ ಇನ್ನೂ ಬೆಳವಣಿಗೆ ಹಂತದಲ್ಲಿದೆ. ಕನ್ನಡ ಸ್ನಾತಕೋತ್ತರ ಪದವಿಯ ಅಧ್ಯಯನ ಮಾಡಿ ಸಂಶೋಧಕರಾಗಿ ಹೊರಹೊಮ್ಮಲು ಬಯಸುವವರಿಗೆ ಸಂಶೋಧನಶಾಸ್ತ್ರ'ದ ತಿಳುವಳಿಕೆ ಮಾಡಿಕೊಡಲು ಡಾ. ಎಂ. ಚಿದಾನಂದಮೂರ್ತಿಯವರ 'ಸಂಶೋಧನೆ' ಎಂಬ ಚಿಕ್ಕಪುಸ್ತಕ ಮಾತ್ರವಿತ್ತು, ಈ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ಸಂಶೋಧನೆಯ ಎಲ್ಲ ಮಗ್ಗಲುಗಳನ್ನು ಪರಿಚಯಿಸುವ 'ಸಂಶೋಧನ ವ್ಯಾಸಂಗ'ವೆಂಬ ಕೃತಿಯನ್ನು ಶಿರೂರ ಅವರು ೧೯೯೦ ರಲ್ಲಿ ಪ್ರಕಟಿಸಿದರು. ಈ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ. ಸ್ಮಾರಕ ಬಹುಮಾನ ಬಂದಿರುವುದು ಇದರ ಹೆಗ್ಗಳಿಕೆಯಾಗಿದೆ. ಒಂದೇ ವರ್ಷದಲ್ಲಿ ಇದರ ಎಲ್ಲಾ ಪ್ರತಿಗಳು ತೀರಲು ಈ ಗ್ರಂಥಕ್ಕೆ ಇನ್ನು ಕೆಲವು ಮಹತ್ವದ ವಿಷಯಗಳನ್ನು ಸೇರಿಸಿ, ಪರಿಷ್ಕರಿಸಿ 'ಸಂಶೋಧನ ಸ್ವರೂಪ' ಎಂಬ ಹೆಸರಿನಲ್ಲಿ ೨೦೦೨ ರಲ್ಲಿ ಪ್ರಕಟಿಸಿದರು. ಇದು ಸಂಶೋಧನೆಯ ವಿಧಿವಿಧಾನಗಳನ್ನು ತಿಳಿಸುವ ಮಹತ್ವದ ಗ್ರಂಥವಾಯಿತು. ಸಾಹಿತ್ಯದಲ್ಲಿ ಸಂಶೋಧನೆ, ಸಂಶೋಧನೆಯ ವಿವಿಧ ರೂಪಗಳು, ಸಂಶೋಧಕನ ಅರ್ಹತೆಗಳು ಮತ್ತು ಗುಣಲಕ್ಷಣಗಳು, ವಿಷಯದ ಆಯ್ಕೆ, ಸಂಶೋಧನ ರೂಪರೇಷೆ, ವಿಷಯ ಸಂಗ್ರಹಣೆ ಮೊದಲಾದ ಸಂಗತಿಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ನಿರೂಪಿಸಿದ್ದಾರೆ. 'ಮಹಾಪ್ರಬಂಧದ ವಿನ್ಯಾಸ, ಮನೋವೈಜ್ಞಾನಿಕ ಸಂಶೋಧನೆ, ಕೇಸ್‌ಸ್ಟಡಿ, ಮಾರ್ಕ್ಸಸಿದ್ಧಾಂತ, ಬಹುಶಿಸ್ತೀಯ ಸಂಶೋಧನೆ, ಕವಿಯ ಕಾಲ, ಚರಿತ್ರೆ, ಕೃತಿಸಂಖ್ಯೆ, ರಚನಾಕ್ರಮ, ಸ್ವರೂಪಗಳ ನಿರ್ಣಯ, ಸಾರಲೇಖ, ಸಂಶೋಧನ ಪ್ರಬಂಧದ ಮೌಲ್ಯಮಾಪನ, ಅದರ ವರದಿ' ಮುಂತಾದವುಗಳನ್ನು ವಿಕೃತವಾಗಿ ಮತ್ತು ಉದಾಹರಣೆ ಸಮೇತವಾಗಿ ವಿಶ್ಲೇಷಿಸಿದ್ದಾರೆ. ಈ ಗ್ರಂಥದ ಕೊನೆಯಲ್ಲಿ ಈವರೆಗೆ ಕನ್ನಡದಲ್ಲಿ ಆದ ಸಂಶೋಧನ ಮಹಾಪ್ರಬಂಧಗಳ ಸುದೀರ್ಘ ಯಾದಿ ಕೊಟ್ಟಿರುವುದು ಸಂಶೋಧನ ಕ್ಷೇತ್ರದಲ್ಲಿ ಹೊಸದಾಗಿ ಪ್ರವೇಶ ಮಾಡುವವರಿಗೆ ಇದೊಂದು ಮಾದರಿಯ ದಿಕ್ಕೂಚಿಯಾಗಿದೆ. ಈ ಕೃತಿಯಲ್ಲಿಯ 'ಕರ್ನಾಟಕದಲ್ಲಿ ಸಂಶೋಧನೆ' ಎಂಬ ಅಧ್ಯಾಯವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹೊರ ತಂದಿರುವ 'ಶತಮಾನದ ಸಂಶೋಧನೆ' ಎಂಬ ಮಹಾಸಂಪುಟಕ್ಕೆ ಆಯ್ಕೆ ಮಾಡಿಕೊಂಡಿರುವುದು ಮತ್ತು ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ 'ಸಂಶೋಧನ ಪಥ' ಗ್ರಂಥಕ್ಕೆ, ಇದರಲ್ಲಿಯ ಸಂಶೋಧನ ಪ್ರಕಾರಗಳು' ಎಂಬ ಅಧ್ಯಾಯವನ್ನು ಆರಿಸಿಕೊಂಡಿರುವುದು ಅದರ ಗುಣಾತ್ಮಕತೆಗೆ ನಿದರ್ಶನವೆನಿಸಿದೆ. ಡಾ.ಎಂ.ಎಂ. ಕಲಬುರ್ಗಿಯವರ 'ಕನ್ನಡ ಸಂಶೋಧನಾಶಾಸ್ತ್ರ' ಮತ್ತು ಡಾ. ಸಂಗಮೇಶ ಸವದತ್ತಿಮಠ ಅವರ 'ಸಂಶೋಧನಾ ಮಾರ್ಗ' ಇತ್ಯಾದಿ ಗ್ರಂಥಗಳಿದ್ದರೂ ಇದು ಸಂಶೋಧನಾಸಕ್ತರ ಮೆಚ್ಚುಗೆಗೆ ಪಾತ್ರವಾಗಿರುವುದು ವಿಶೇಷವಾದುದಾಗಿದೆ. ಡಾ. ಶಿರೂರ ಅವರು “ಸಂಶೋಧನ ಸ್ವರೂಪ' ಕೃತಿಯನ್ನು ರಚಿಸಿದ ಮೇಲೂ ಸಂಶೋಧನಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು  ರಚಿಸಿದ್ದಾರೆ. 

    ಡಾ. ಬಿ. ವಿ. ಶಿರೂರ ಅವರು ನಾಡಿನ ವಿದ್ವತ್ ಪತ್ರಿಕೆ, ಅಭಿನಂದನ ಗ್ರಂಥಗಳಿಗೆ ನೂರಾ ಐವತ್ತಕ್ಕೂ ಅಧಿಕ ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಒಂದು ನೂರು ಸಂಶೋಧನ ಲೇಖನಗಳನ್ನು ಒಳಗೊಂಡ 'ಸಂಶೋಧನ ಚತುರ್ಮುಖ'ವೆಂಬ ಬೃಹತ್ ಗ್ರಂಥವನ್ನು ಪ್ರಕಟಿಸಿದ್ದಾರೆ. ಜೈನ, ವೀರಶೈವ, ಸಂಶೋಧನ/ಗ್ರಂಥ ಸಂಪಾದನೆ/ಶಾಸನ/ಚರಿತ್ರೆ ಹಾಗೂ ಇತರ ಎಂಬ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಈ ಲೇಖನಗಳು ಹರಡಿಕೊಂಡಿವೆ. ಶ್ರವಣಬೆಳಗೊಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಾಪ್ರಬಂಧದಲ್ಲಿ ಪ್ರಸ್ತಾಪಿಸಲ್ಪಟ್ಟ ವಿಷಯಗಳನ್ನು ಇಲ್ಲಿಯ ಲೇಖನಗಳಲ್ಲಿ ಆಳವಾಗಿ ಮತ್ತು ವಿಕೃತವಾಗಿ ಪುನರ್ ರಚಿಸಿದ್ದಾರೆ. ಶ್ರವಣಬೆಳೊಳದ ಸಾಂಸ್ಕೃತಿಕ ಅಧ್ಯಯನ, ಶ್ರವಣಬೆಳೊಳ ಮತ್ತು ಗಂಗರು ಮೊದಲಾದವುಗಳನ್ನು ಹೆಸರಿಸಬಹುದು. ಶ್ರವಣಬೆಳೊಳದ ಕವಿಪರಂಪರೆ, ಶ್ರವಣಬೆಳೊಳದ ಶ್ರೀಮಠ ಮೊದಲಾದವುಗಳನ್ನೊಳಗೊಂಡ ಹದಿನಾರು ಪ್ರಬಂಧಗಳು ಅಲ್ಲದೆ ಜೈನಸಾಹಿತ್ಯಕ್ಕೆ ಸಂಬಂಧಿಸಿದ ವಿದ್ವತ್ತೂರ್ಣ ಸಂಶೋಧನ ಬರವಣಿಗೆಗಳು ಇಲ್ಲಿವೆ. ಆಕರ ಸಾಹಿತ್ಯದ ಭಾಷೆ ಮತ್ತು ಅಭಿವ್ಯಕ್ತಿಯ ಮಾಧ್ಯಮಗಳೆರಡರ ಅಡಚಣೆಯಲ್ಲಿ ತೊಳಲಾಡುತ್ತಿದ್ದ ಇತಿಹಾಸ ಅಧ್ಯಾಪಕರಿಗಿಂತಲೂ ಹೆಚ್ಚಿನ ಕೊಡು ಈ ಭಾಷಾ ಅಧ್ಯಾಪಕರಿಂದ ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿರುವುದನ್ನು ಈ ಹಿನ್ನೆಲೆಯಲ್ಲಿ ನಾವು ಎತ್ತಿ ಹೇಳಬೇಕಾಗಿದೆ. ಈ ದೃಷ್ಟಿಯಿಂದ ಡಾ. ಶಿರೂರ ಅವರ ಈ ಕೃತಿ ಕನ್ನಡ ಸಂಶೋಧನ ಕ್ಷೇತ್ರಕ್ಕೆ ಒಂದು ಅಮೂಲ್ಯ ಆಕರಗ್ರಂಥವಾಗಿದೆ.

     ಡಾ. ಬಿ. ವಿ, ಶಿರೂರ ಅವರ ಇನ್ನೊಂದು ಆಸಕ್ತಿಯ ಕ್ಷೇತ್ರವೆಂದರೆ ವೀರಶೈವ ವಲಯವೆಂದು ಹೇಳಬಹುದು. ಸಂಶೋಧನ ಚತುರ್ಮುಖದಲ್ಲಿ ವಚನ ಸಾಹಿತ್ಯ, ಕವಿ ಕೃತಿ, ವೀರಶೈವ ಧರ್ಮ, ವ್ಯಕ್ತಿಮಠ ಇವೇ ಮೊದಲಾದ ವಿಷಯಗಳನ್ನು ಕುರಿತು ನಲ್ವತ್ತೆರಡು ಸಂಶೋಧನ ಲೇಖನಗಳಿವೆ. ಈವರೆಗೆ ಬಸವಯುಗದ ಸಾಹಿತ್ಯಕ ಚರ್ಚೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದು ಸರ್ವವಿದಿತವಾಗಿದೆ. ಆದರೆ ಬಸವೋತ್ತರ ಯುಗವನ್ನು ಉಪೇಕ್ಷಿಸಲಾಗಿದೆ. ಡಾ. ಶಿರೂರ ಅವರು ಈ ಉಪೇಕ್ಷಿತ ಕ್ಷೇತ್ರವನ್ನು ಕೇಂದ್ರವನ್ನಾಗಿಟ್ಟುಕೊಂಡು, ವೈವಿಧ್ಯಮಯವಾದ ಲೇಖನಗಳನ್ನು ರಚಿಸಿರುವುದು ಸ್ತುತ್ಯಕಾರವಾಗಿದೆ.

     ಬಸವೋತ್ತರ ಯುಗದ ಪ್ರಮುಖರಾದ ಗಣದಾಸಿ ವೀರಣ್ಣ ಕೆಸ್ತೂರದೇವ, ಬಸವಲಿಂಗದೇವರು, ಮಹಾಲಿಂಗದೇವ, ಹೇಮಗಲ್ಲ ಹಂಪ, ಹಲಗೆಯಾರ್ಯ, ಜಕ್ಕಣಾರ್ಯ, ಧೂಪದ ರಾಜೇಶ, ಗುರುಲಿಂಗವಿಭು, ಮುಪ್ಪಿನ ಷಡಕ್ಷರಿ ಮತ್ತು ದ್ಯಾಂಪುರ ಚೆನ್ನಕವಿ ಮೊದಲಾದ ಅನುಭಾವಿಗಳನ್ನು ಕುರಿತುಹೊಸ ವಿವರಗಳನ್ನು ಬೆಳಕಿಗೆ ತಂದಿದ್ದಾರೆ. ಶಿರೂರ ಅವರು ಬರೆದ 'ಬಿಜ್ಜಳನನ್ನು ಕೊಂದ ಮೊಲೆಬೊಮ್ಮಯ್ಯ ಸಂಶೋಧನ ಲೇಖನವೊಂದಕ್ಕೆ ವಿಪುಲ ಆಕರಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ವೀರಶೈವ ಮಠಗಳನ್ನು ಕುರಿತು ಕ್ಷೇತ್ರಕಾರ್ಯದ ಮೂಲಕ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ ಶಿರಹಟ್ಟಿ, ಗಂಗಾವತಿ, ಹಾಲಕೆರೆ, ಯಲಬುರ್ಗಾ ಮಠಗಳ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ಡಾ. ಶಿರೂರ ಅವರು ಭಾವಾವೇಶಕ್ಕೆ ಒಳಗಾಗದೆ, ಅನ್ಯರಿಂದಾಗಿರಬಹುದಾದ ಅಲ್ಪ ತಪ್ಪುಗಳನ್ನು ಹಿಗ್ಗಿಸಿ ಬೆಳೆಸದೆ ತಮಗನಿಸಿದ್ದನ್ನು ಸಂಯಮಪೂರ್ಣ ಭಾಷೆಯಿಂದ ಅಭಿವ್ಯಕ್ತಿಗೊಳಿಸಿರುವುದು ಮೌಲ್ಯವನ್ನು ಎತ್ತಿ ತೋರಿದೆ. ಕನ್ನಡ ಸಂಶೋಧನ ಶಾಸ್ತ್ರದ ವಿವಿಧ ಆಯಾಮಗಳನ್ನು ಈ ಲೇಖನಗಳ ಮೂಲಕ ಪರಿಚಯಿಸಿದ್ದಾರೆ. ಕನ್ನಡಕ್ಕೆ ಹೊಸದೆನಿಸುವ ಸಂಶೋಧನ ಶಾಸ್ತ್ರ, ಗ್ರಂಥಸಂಪಾದನ ಶಾಸ್ತ್ರ, ಹಸ್ತಪ್ರತಿಶಾಸ್ತ್ರ, ಶಾಸನ ಶಾಸ್ತ್ರಗಳನ್ನು ತಮ್ಮ ಅನುಭವದ ನಿದರ್ಶನಗಳ ಹಿನ್ನೆಲೆಯಲ್ಲಿ ರಚಿಸಿದ ರೀತಿ ವಿನೂತನವಾಗಿದೆ. ಅಲ್ಲದೆ ಈ ಕ್ಷೇತ್ರಗಳಲ್ಲಿ ದುಡಿದ ಕೆಲವು ಮಹನೀಯರ ಕೊಡುಗೆಗಳನ್ನು ದಾಖಲಿಸಿದ್ದಾರೆ. ಡಾ. ಆರ್. ನರಸಿಂಹಾಚಾರ್ಯ ಅವರನ್ನು ಕುರಿತ ಲೇಖನ ಸಂಶೋಧಕರೊಬ್ಬರ ಸಮಗ್ರ ವಿವರಗಳನ್ನು ಕೊಡುವ ಮಹತ್ವದ ಸಂಪ್ರಬಂಧವಾಗಿದೆ. ಈ ಲೇಖನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ 'ಸಾಲುದೀಪಗಳು ನಾಲ್ಕನೆಯ ಭಾಗದಲ್ಲಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಲೇಖನಗಳಿವೆ. ಇದರಲ್ಲಿ 'ಹೂಗಾರರು' ಎಂಬ ಸಂಶೋಧನ ಲೇಖನವೊಂದು ಡಾ. ಶಿರೂರ ಅವರು ಕೃತಿಯಲ್ಲಿ ಸೇರ್ಪಡೆಯಾಗಿದೆ. ಕಲೆಹಾಕಿದ ವಿಷಯ ಸಂಗ್ರಹ ಅಚ್ಚರಿಯನ್ನುಂಟುಮಾಡುತ್ತದೆ, ಈ ಲೇಖನ ಮಹಾಪ್ರಬಂಧದ ರಚನೆಗೆ ಆಕರವಾಗಬಲ್ಲ ವಸ್ತು ಸಾಮಗ್ರಿಯನ್ನು ಒಳಗೊಂಡಿದೆ. 

       ಡಾ. ಬಿ.ವಿ. ಶಿರೂರ ಅವರು ಗ್ರಂಥಸಂಪಾದನ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಅವರ ಸಂಪಾದನ ಕಾರ್ಯವನ್ನು ಈ ಕೆಳಗಿನಂತೆ ವರ್ಗೀಕರಿಸಿ, ಅವುಗಳಲ್ಲಿ ಪ್ರಕಟಗೊಂಡ ಸಂಶೋಧನಾತ್ಮಕ ವಿಷಯಗಳನ್ನು ಹೀಗೆ ವಿವರಿಸಬಹುದು.

೧. ಪ್ರಾಚೀನ ಕೃತಿಗಳು :

ಕನ್ನಡ ಸಂಶೋಧನೆಯ ಬಹಳ ಪ್ರಮುಖವಾದ ಒಂದು ಅಂಗವೆಂದರೆ ಗ್ರಂಥಸಂಪಾದನೆ. ಹಳಗನ್ನಡ ಸಾಹಿತ್ಯದಲ್ಲಿ ಅಪಾರವಾದ ಪರಿಶ್ರಮ ಇರುವವರಿಗೆ ಮಾತ್ರ ಈ ಕ್ಷೇತ್ರದಲ್ಲಿ ಪ್ರವೇಶಿಸಲು ಸಾಧ್ಯ, ಹಳಗನ್ನಡ ಸಾಹಿತ್ಯ, ಸಂಸ್ಕೃತಿ, ಛಂದಸ್ಸು, ವ್ಯಾಕರಣ, ಅಲಂಕಾರ ಮೊದಲಾದ ವಿಷಯಗಳಲ್ಲಿ ಪರಿಣತಿ ಹೊಂದಿದ ಡಾ. ಶಿರೂರ ಅವರು ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ಉದಾಹರಣೆಗೆ ಅನಂತಕವಿಯ ಗೊಮ್ಮಟೇಶ್ವರ ಚರಿತ್ರೆ, ಮೊಲೈಬೊಮ್ಮಯ್ಯಗಳ ಕಾವ್ಯ, ರತ್ನಕರಂಡಕದ ಕಥೆಗಳು, ಭಿಕ್ಷಾಟನೆಚರಿತೆ, ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಪುರಾಣ ಮೊದಲಾದವು. ಡಾ. ಶಿರೂರ ಅವರು ಮೊದಲಬಾರಿಗೆ ಪ್ರಕಟಿಸಿರುವ ಸಂಪಾದನ ಕೃತಿಯೆಂದರೆ ಕವಿಯ 'ಗೊಮ್ಮಟೇಶ್ವರ ಚರಿತೆ'. ಇದು ಕನ್ನಡಸಾಹಿತ್ಯ ಪರಿಷತ್ತಿನ ಬೆಳ್ಳಿ ಬಿಟ್ಟ ಬಳ್ಳಿ ಮಾಲೆ'ಯಲ್ಲಿ ಪ್ರಕಟವಾಗಿದೆ. ಇದರ ಎರಡು ಅಸಮಗ್ರ ಹಸ್ತಪ್ರತಿಗಳನ್ನು ಇಟ್ಟುಕೊಂಡು 'ಗೊಮ್ಮಟೇಶ್ವರ ಚರಿತೆ'ಯ ಕಾವ್ಯವೊಂದನ್ನು ಪ್ರಕಟಪಡಿಸಿದ ಶ್ರೇಯಸ್ಸು ಶಿರೂರ ಅವರಿಗೆ ಸಲ್ಲುತ್ತದೆ. ಅವರು ಈ ಕಾವ್ಯದ ಪಾಠ ನಿರ್ಣಯಕ್ಕೆ ಮೂರು ಕ್ರಮಬದ್ಧವಾದ ಮಾರ್ಗಗಳನ್ನು ಅನುಸರಿಸಿದ್ದಾರೆ. ''ಸಂಪಾದಕತ್ವದ ಪಾಠಗಳನ್ನು ನೀಡುವುದು, ಜೀರ್ಣವಾದೆಡೆಗಳಲ್ಲಿ ಖಾಲಿಸ್ಥಳ ಬಿಡುವುದು ಮತ್ತು ಅರ್ಥವಾಗದ ಕಡೆ ಪ್ರಶ್ನೆ ಚಿಹ್ನೆಯನ್ನು ಹಾಕಿ ಮುನ್ನಡೆಯುವುದು.'' ಈ ಕೃತಿ ಪ್ರಕಟವಾದ ನಂತರ ಶ್ರೀ ಮಹೇಂದ್ರ ಎಂಬವರಿಗೆ ಒಂದು ಸಮಗ್ರ ಓಲೆಗರಿ ಪ್ರತಿ ಸಿಕ್ಕು ಅದರ ಸಹಾಯದಿಂದ ಈ ಕಾವ್ಯದ ಸಂಪಾದನೆಯನ್ನು ಒರೆಗೆ ಹಚ್ಚಿ ಡಾ. ಶಿರೂರ ಅವರು ಇಲ್ಲಿ ಮಾಡಿದ ಊಹೆಗಳೆಲ್ಲ ಸರಿ ಇವೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇದರಿಂದ ಶಿರೂರ ಅವರ ನಿಲುವುಗಳಿಗೆ ಖಚಿತತೆಯನ್ನು ಒದಗಿಸಿದಂತಾಗಿದೆ. ಕವಿಚರಿತೆಕಾರರು ಅನಂತಕವಿ ಶ್ರವಣಬೆಳೊಳದವನು ಎಂದು ಹೇಳಿರುವುದನ್ನು ತಳ್ಳಿಹಾಕಿ, ಈತ ಹಾಸನದವನು ಎಂದು ಶಿರೂರ ಅವರು ಹೇಳಿರುವುದು, ಮೊದಲ ಬಾರಿಗೆ ಆತನ ಸಮಗ್ರ ವಂಶಾವಳಿಯನ್ನು ಕೊಟ್ಟಿರುವುದು ಗಮನಾರ್ಹವಾಗಿದೆ.ಪ್ರಸ್ತಾವನೆಯಲ್ಲಿ ಈ ಕಾವ್ಯದ ಗುಣದೋಷ, ಕಾವ್ಯದ ವಿಶೇಷತೆಗಳನ್ನು ಎತ್ತಿ ಹೇಳಿರುವುದು. ಶಬ್ದಾರ್ಥಕೋಶ, ಅನುಬಂಧದಲ್ಲಿ ವಿಷಯಾನುಕ್ರಮಣಿಕೆ ಕೊಟ್ಟಿರುವುದು, ಡಾ. ಶಿರೂರ ಅವರು ಒಬ್ಬ ಸಮರ್ಥ ಸಂಪಾದಕರೆಂಬುದು ಸ್ಪಷ್ಟವಾಗುತ್ತದೆ.

     ಡಾ. ಶಿರೂರ ಅವರು ಯಲಬುರ್ಗಿಯ ಹಿರೇಮಠದಲ್ಲಿ ತಮಗೆ ದೊರೆತ ಕಾಗದ ಪ್ರತಿಗಳ ಸಹಾಯದಿಂದ ಧೂಪದ ರಾಚೇಶನ ಮೊಟ್ಟೆ ಬೊಮ್ಮಯ್ಯಗಳ ಕಾವ್ಯವನ್ನು ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಇತಿಹಾಸ, ಪುರಾಣ, ಐತಿಹ್ಯಗಳ ಆಗರವಾದ ಈ ಕಾವ್ಯದ ಆಕರಗಳನ್ನೆಲ್ಲ ಸಮಗ್ರವಾಗಿ ಶೋಧಿಸಿದ್ದಾರೆ. ಈ ಕಾವ್ಯದಲ್ಲಿ ಅಂತರ್ಗತವಾದ ಆಧಾರಗಳ ಮೂಲಕ ಬಿಜ್ಜಳನನ್ನು ಕೊಂದ ಇಬ್ಬರುವ್ಯಕ್ತಿಗಳಲ್ಲಿ ಮೊಲ್ಲೆ ಬೊಮ್ಮಯ್ಯನೂ ಒಬ್ಬ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಕಾವ್ಯದ ಕರ್ತೃ ಧೂಪದರಾಚೇಶ, ಈತನ ಊರು ಯಲಬುರ್ಗಿ ತಾಲೂಕಿನ ಕಲ್ಲೂರು, ಈತನು ಸಿದ್ದೇಶನ ಶಿಷ್ಯ ಮತ್ತು ಈತನ ಕಾಲಸು. ೧೬೫೦ ಎಂದು ಸಾದರಪೂರ್ವಕವಾಗಿ ನಿರ್ಧರಿಸಿದ್ದಾರೆ. ಈ ಕಾವ್ಯಕ್ಕೆ ಬರೆದ ಇಪ್ಪತ್ತೂರು ಪುಟದ ಪ್ರಸ್ತಾವನೆ ವಿದ್ವತೂರ್ಣವಾಗಿದೆ. ಈ ಕಾವ್ಯವನ್ನು ಸಂಪಾದಿಸುವ ಮೂಲಕ ಬಿಜ್ಜಳನನ್ನು ಕೊಂದವರುಜಗದೇವ ಮತ್ತು ಮೊಲ್ಲೆಬೊಮ್ಮಯ್ಯ, ಈ ಮೊಲ್ಲೆಬೊಮ್ಮಯ್ಯನ ಊರು ಯಲಬುರ್ಗಿ ತಾಲೂಕಿನ ರಾವಣಕಿ, ಈತ ಕಲ್ಲೂರಿನ ಕಲ್ಲಿನಾಥನ ಭಕ್ತನಾಗಿದ್ದು, ಕಲ್ಯಾಣಕ್ಕೆ ಹೋಗಿ ಜಗದೇವನನ್ನು ಕೂಡಿಕೊಂಡು ಬಿಜ್ಜಳನನ್ನು ಕೊಂದದ್ದು - ಇವೇ ಮೊದಲಾದ ಸಂಗತಿಗಳನ್ನು ಮೊದಲ ಬಾರಿಗೆ ಬೆಳಕಿಗೆ ತರಲಾಗಿದೆ. ಸಂಪಾದನ ಕ್ಷೇತ್ರದ ಸಾಧನೆಯ ಕೀರ್ತಿಯನ್ನು ತಂದುಕೊಟ್ಟ ಕೃತಿ ಎಂದರೆ 'ರತ್ನಕರಂಡಕದ ಕಥೆಗಳು', ಡಾ. ಬಿ.ವಿ, ಶಿರೂರ ಅವರು ಸಂಪಾದಿಸಿರುವ ಈ ಕೃತಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿದೆ. ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (೧೯೯೩) ಮತ್ತು ಶ್ರೇಷ್ಠ ಸಂಪಾದನ ಕೃತಿಗೆ ಕೊಡಲ್ಪಡುವ ದೇವೇಂದ್ರ ಕೀರ್ತಿ ಭಟ್ಟಾರಕ ಪ್ರಶಸ್ತಿ ಪ್ರಾಪ್ತವಾಗಿವೆ.

ಡಾ. ಬಿ. ವಿ, ಶಿರೂರ ಅವರು ಅನಾಮಧೇಯ ಜೈನ ಕತೆಗಾರನೊಬ್ಬನಿಂದ ರಚನೆಯಾದ ಈ ಕೃತಿಯನ್ನು

ಸಂಪಾದಿಸಲು ಮೂರು ಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಅ, ಬ ಮತ್ತು ಕ ಪ್ರತಿಗಳಲ್ಲಿ 'ಅ' ಪ್ರತಿಯನ್ನು ಮೂಲವಾಗಿಟ್ಟುಕೊಂಡು ಇದನ್ನು ಸಂಪಾದಿಸಿದ್ದಾರೆ. ಆಯಾ ಪ್ರತಿಗಳಲ್ಲಿ ಇಲ್ಲದ ಭಾಗವನ್ನು ... ಚಿಹ್ನೆಯಿಂದಲೂ ತ್ರುಟಿತವಾಗಿರುವ ಭಾಗವನ್ನು XXX ಚಿಹ್ನೆಯಿಂದಲೂ ಹೆಚ್ಚಿನ ಭಾಗವನ್ನು ಚಿಹ್ನೆಯಿಂದಲೂ ಗುರುತಿಸಲಾಗಿದೆ' ಎಂದು ಹೇಳಿದ್ದಾರೆ. ವಿದ್ವತ್‌ವಲಯದ ಗಮನಕ್ಕೆ ಬಾರದ ಈ ಕೃತಿಯ ಶೋಧ ಚಾರಿತ್ರಿಕವಾಗಿ ತುಂಬ ಮಹತ್ವದ್ದೆನಿಸಿದೆ. ವಡ್ಡಾರಾಧನೆ ಕೃತಿಯ ನಂತರ ಜೈನ ಕಥಾಪರಂಪರೆಯಲ್ಲಿ ಈ ಕೃತಿಗೆ ವಿಶೇಷ ಸ್ಥಾನವಿದೆ. ಇದು ವಡ್ಡಾರಾಧನೆಯ ಕಾಲದ ಸುಮಾರಿನಲ್ಲಿಯೇ ರಚನೆಗೊಂಡಿರಬಹುದು ಎಂದು ಡಾ. ಶಿರೂರ ಅವರು ಊಹೆಯನ್ನು ಮಾಡಿರುವುದು ಬಹುಮಹತ್ವದ್ದೆನಿಸಿದೆ. ಈ ಕೃತಿಯಲ್ಲಿಯ ಕಥೆಗಳ ಸಾರವನ್ನು ಹೊಸಗನ್ನಡದಲ್ಲಿ ಕೊಟ್ಟಿದ್ದಾರೆ. ಕೊನೆಯಲ್ಲಿರುವ ಜೈನ ಪಾರಿಭಾಷಿಕ ಪದಕೋಶ ಈ ಕೃತಿಯ ಸಾಂಸ್ಕೃತಿಕ ಪರಿಸರ ಅಧ್ಯಯನಕ್ಕೆ ತುಂಬ ಉಪಯುಕ್ತವಾಗಿದೆ. ಡಾ. ಶಿರೂರ ಅವರು ಇಂಥ ಮಹತ್ವದ ಕೃತಿಯೊಂದನ್ನು ಶೋಧಿಸಿ ಪರಿಷ್ಕರಿಸಿ ಮೊದಲ ಬಾರಿಗೆ ಕನ್ನಡ ಸಾರಸ್ವತ ಪ್ರಪಂಚಕ್ಕೆ ಕೊಟ್ಟಿದ್ದಾರೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮುತ್ತಿನಹಾರ ಮಾಲಿಕೆಗಾಗಿ ಡಾ. ಶಿರೂರ ಅವರು ರಾಜಶೇಖರವಿಳಾಸ, ಶಬರಶಂಕರ ವಿಳಾಸ ಹಾಗೂ ಬಸವರಾಜ ವಿಳಾಸ ಈ ಮೂರು ಕೃತಿಗಳನ್ನು ಸಂಕ್ಷೇಪಿಸಿ ಷಡಕ್ಷರದೇವ ಎಂಬ ಹೆಸರಿನಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹಿಸಿದ ಕಾವ್ಯಗಳ ಕಥಾವಸ್ತುವಿಗೆ ಬಾಧೆ ಬರದಂತೆ ಕಥೆಯಿಂದ ಕಥೆಗೆ ಸಹಸಂಬಂಧ ತಪ್ಪದಂತೆ ಪದ್ಯಗಳನ್ನು ಆಯ್ದುಕೊಂಡಿರುವ ಕ್ರಮ ಸಂಪಾದಕರ ಪಾಂಡಿತ್ಯಕ್ಕೆ ಷಡಕ್ಷರದೇವನ ಕೃತಿಗಳ ಮೇಲಿನ ಪ್ರಭುತ್ವಕ್ಕೆ ನಿದರ್ಶನವಾಗಿದೆ. ಈ ಕೃತಿಗೆ ಬರೆದ ಪ್ರಾಸ್ತಾವಿಕ ಮಾತುಗಳು, ಅನುಬಂಧದಲ್ಲಿ ಕೊಟ್ಟಪದ್ಯಗಳು, ಕಠಿಣಪದಗಳಿಗೆ ಅರ್ಥಕೋಶವನ್ನು ಒದಗಿಸಿರುವುದು ಓದುಗರಿಗೆ ಉಪಯುಕ್ತವಾಗಿವೆ. ಡಾ. ಬಿ.ವಿ. ಶಿರೂರ ಅವರು 'ಭಿಕ್ಷಾಟನ ಚರಿತೆ' ಯಂಥ ಚಮತ್ಕಾರಯುಕ್ತವಾದ ಹಳಗನ್ನಡ ಕೃತಿಯನ್ನು ಹೊಸಗನ್ನಡ ಗದ್ಯಾನುವಾದ ಮಾಲಿಕೆಯಲ್ಲಿ ಸರಳವಾದ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇದು ಪ್ರಕಟವಾಗಿದೆ. ಹದಿನೈದು ಪುಟಗಳ ಅಭ್ಯಾಸಪೂರ್ಣವಾದ ಪ್ರಸ್ತಾವನೆ ಇದೆ. 

ಕವಿ, ಕಾವ್ಯ, ಕಥಾಸಾರ, ಪಾತ್ರ ಚಿತ್ರಣ, ಕೃತಿ ವಿಮರ್ಶೆ ಮೊದಲಾದವುಗಳನ್ನು ಶಾಸ್ತ್ರದನ್ವಯವಾಗಿ ಮಾಡಿಕೊಟ್ಟಿದ್ದಾರೆ. ಸಂಪಾದನೆಯ ಸಣ್ಣಬರಹದ ಗುರುಬಸವರಾಜದೇವರು ಸೇರಿಸಿದ 'ಶರಣಚಾರಿತ್ರದ ವಚನಗಳು' ಎಂಬ ಕೃತಿಯನ್ನು ಡಾ. ಶಿರೂರ ಅವರು ಸಂಪಾದಿಸಿದ್ದಾರೆ. ಇದು ಗದುಗಿನ ಶ್ರೀ ತೋಂಟದಾರ್ಯ ಸಂಸ್ಥಾನಮಠದ ವೀರಶೈವ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಗಿದೆ. ಈ ಕೃತಿಯಲ್ಲಿ ಶರಣನಲ್ಲಿರಬೇಕಾದ ಗುಣವಿಶೇಷಗಳನ್ನು ವಿವರಿಸುವ ಉದ್ದೇಶ ಒಂದಾದರೆ, ಆ ಶರಣರ ವಚನಗಳ ಮೂಲಕ ಅವರವರ ವ್ಯಕ್ತಿತ್ವಗಳನ್ನು ಗುರುತಿಸುವುದು ಮತ್ತೊಂದು' ಎಂದು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಇಲ್ಲಿ ಒಟ್ಟು ೨೭೯ ವಚನಗಳಿವೆ. ಅವುಗಳಲ್ಲಿ ೧೭೦ ಹೊಸ ವಚನಗಳು ಈವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ. ಹಲವಾರು ಹೊಸ ಅಂಕಿತಗಳು ಇಲ್ಲಿ ದೊರೆತಿವೆ. ಇವುಗಳಿಂದ ಈ ಕೃತಿಯ ವಿಶೇಷತೆ ಹೆಚ್ಚಿದೆ ಎಂಬ ಸಂಪಾದಕರ ಮಾತುಗಳು ಗಮನಾರ್ಹವಾಗಿವೆ. ಅದೇ ರೀತಿ ನಿರಾಳ ಮಂತ್ರಗೋಪ್ಯ, ಶರಣಮುಖ ಮಂಡನೆ, ಸರ್ವಾಚಾರ ಸಾರಾಮೃತಸುಧೆ ಮೊದಲಾದ ವಚನ ಕೃತಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿರುವ ೧೫ ಸಮಗ್ರ ವಚನ ಸಂಪುಟಗಳಲ್ಲಿ ಡಾ. ಶಿರೂರ ಅವರು ಸಂಪಾದಿಸಿದ ಕೃತಿಗಳು ಎರಡು ಸಂಪುಟಗಳಿಗೆ ಆಕರವಾಗಿರುವುದನ್ನು ಇಲ್ಲಿ ಎತ್ತಿ ತೋರಬಹುದಾಗಿದೆ.

“ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಪುರಾಣ'ವನ್ನು ಡಾ. ಶಿರೂರ ಅವರು ಸಂಪಾದಿಸಿದ್ದಾರೆ. ಇದು ಪಂಡಿತ ವೈ.ನಾಗೇಶಶಾಸ್ತ್ರಿಗಳ ಕೃತಿ. ಇದನ್ನು ಆಮೂಲಾಗ್ರವಾಗಿ ಅವಲೋಕನ ಮಾಡಿ ಇದು ನಾಗೇಶಶಾಸ್ತ್ರಿಗಳೇ ಬರೆದ ಕೃತಿಯೆಂಬುದನ್ನು ನಿರ್ದಿಷ್ಟಪಡಿಸಿ ಮೊದಲ ಬಾರಿಗೆ ಪ್ರಕಟಿಸಿದ್ದು ಶಿರೂರ ಅವರ ಹೆಗ್ಗಳಿಕೆಯಾಗಿದೆ. ಇದರಲ್ಲಿ ಸಂಧಿಗಳಿಗೆ ಅನುಸಾರವಾಗಿ ಕಥಾಸಾರವನ್ನು ಕೊಟ್ಟಿದ್ದಾರೆ. ಅದರಲ್ಲಿ ನಿರೂಪಿತವಾಗಿರುವ ವೀರಶೈವ ಧರ್ಮಾಚರಣೆಗೆ ಸಂಬಂಧಿಸಿದ ಪಂಚಾಚಾರ, ಅಷ್ಟಾವರಣ, ಷಟಸ್ಥಲ ಇವುಗಳ ಪರಿಚಯ ಹಾಗೂ ಮಹತ್ವ ಅದರೊಂದಿಗೆ ಶ್ರೀ ಮಠದ ಸರ್ವಧರ್ಮ ಸಮನ್ವಯದೃಷ್ಟಿಕೋನವನ್ನು ಎತ್ತಿತೋರಿಸಿದ್ದಾರೆ.”

    ಕರ್ನಾಟಕ ಸಾಹಿತ್ಯ ಅಕಾಡೆಮಿಯ ಎರಡನೆಯ ಪ್ರಶಸ್ತಿ ಪಡೆದ 'ಭಕ್ತಿರಸಸೋನೆ' ಡಾ. ಶಿರೂರ ಅವರು ಸಂಪಾದಿಸಿದ ಮತ್ತೊಂದು ಮಹತ್ವದ ಕೃತಿಯಾಗಿದೆ. ಕರ್ನಾಟಕದ ಶರಣ ಸಮುದಾಯದಲ್ಲಿ ಅಗ್ರಸ್ಥಾನ ಪಡೆದ ಬಸವಣ್ಣನವರ ಚರಿತ್ರೆಯನ್ನು ಕುರಿತು ಬರೆದ ಪಂಚಯ್ಯನ 'ಭಕ್ತಿರಸಸೋನೆ' ಒಂದು ಸಾಂಗತ್ಯ ಕೃತಿಯಾಗಿದೆ. ಬಸವಣ್ಣನವರ ಚರಿತ್ರೆಯನ್ನೊಳಗೊಂಡ ಕೆಲವು ಸಾಂಗತ್ಯ ಕೃತಿಗಳ ಮಧ್ಯದಲ್ಲಿ ಡಾ. ಶಿರೂರ ಅವರು ಪ್ರಥಮ ಬಾರಿಗೆ ಈ ಕೃತಿ ಬೆಳಕು ಕಾಣುವಂತೆ ಮಾಡಿ ಇದರ ವಿಶೇಷತೆಯನ್ನು ಗುರುತಿಸಿದ್ದಾರೆ. ಇದರ ಪ್ರಸ್ತಾವನೆಯಲ್ಲಿ ಕವಿಯ ಹೆಸರು, ಕಾಲ, ಕೃತಿ ಕುರಿತ ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ''ಈ ಕೃತಿ ಅನೇಕ ಪೌರಾಣಿಕ ಚಾರಿತ್ರಿಕ ವ್ಯಕ್ತಿಗಳನ್ನೊಳಗೊಂಡಿದೆ. ಈ ಎಲ್ಲಾ ಕಥೆಗಳು ಕಥಾನಾಯಕನಾದ ಬಸವಣ್ಣನ ಚರಿತ್ರೆಗೆ ಪೂರಕವಾಗಿ ಬಂದಿರುವುದು ವಿಶೇಷವಾಗಿದೆ.'' ಸಂಪಾದಕರು ಇದರ ಕಥಾವಸ್ತುವನ್ನು ಸಂಧಿಗಳಿಗೆ ಅನುಸಾರವಾಗಿ ಕೊಟ್ಟಿದ್ದು ಅದು ಎರಡು ಪ್ರಮುಖ ಪ್ರಕಾರಗಳಲ್ಲಿ ಬಸವಣ್ಣನವರ ಚರಿತ್ರೆ ಹರಿದು ಬಂದಿರುವುದರ ವಿವರಗಳನ್ನೊಳಗೊಂಡಿದೆ. ಈ ಕಥೆಗಳ ಆಕರ, ರೂಪಾಂತರ ಮತ್ತು ಅವುಗಳ ಔಚಿತ್ಯ ಕುರಿತ ದೀರ್ಘವಾದ ಪ್ರಸ್ತಾವನೆ, ಡಾ. ಶಿರೂರ ಅವರ ವ್ಯಾಪಕ ಅಧ್ಯಯನಕ್ಕೆ ಸಂಶೋಧನ ದೃಷ್ಟಿಕೋನಕ್ಕೆ ಹಾಗೂ ಚರಿತ್ರೆಗೆ ಒದಗಿಸಿದ ನ್ಯಾಯಕ್ಕೆ ನಿದರ್ಶನವಾಗಿದೆ. 

೨. ಅಭಿನಂದನ ಗ್ರಂಥಗಳು :- ಇತ್ತೀಚೆಗೆ ಅಭಿನಂದನ ಗ್ರಂಥಗಳು ಕನ್ನಡ ಸಾಹಿತ್ಯದ ಶಾಶ್ವತ ಆಸ್ತಿಯಾಗಿ ಪರಿಣಮಿಸುತ್ತಿವೆ. ಡಾ.ಶಿರೂರ ಅವರು ಕನ್ನಡದ ಕೆಲವು ಮಹತ್ವದ ಅಭಿನಂದನ ಗ್ರಂಥಗಳ ಸಂಪಾದಕರಾಗಿ ಕಾರ ಮಾಡಿದ್ದಾರೆ. ಕನ್ನಡದ ಘನವಿದ್ವಾಂಸರಾದ ಪ್ರೊ. ಭೂಸನೂರಮಠ ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥ 'ಗೌರವ', ಇದು ಗದುಗಿನ ವೀರಶೈವ ಅಧ್ಯಯನ ಸಂಸ್ಥೆಯಿಂದ ೧೯೮೯ರಲ್ಲಿ ಪ್ರಕಟವಾಗಿದೆ. ಇದು ವ್ಯಕ್ತಿ ಸಾಹಿತ್ಯ ಮತ್ತು ವೀರಶೈವ ಲಘುಸಾಹಿತ್ಯ ಎಂಬ ಮೂರು ಸ್ಥಳಗಳಲ್ಲಿ ೬೦೭ ಪುಟಗಳ ವ್ಯಾಪ್ತಿಯನ್ನು ಹೊಂದಿದೆ ಬೃಹತ್ ಗ್ರಂಥವಾಗಿದೆ. ಪ್ರೊ. ಭೂಸನೂರಮಠ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತ ಮೌಲಿಕವಾದ ಲೇಖನಗಳನ್ನು ಮೊದಲೆರಡು ಭಾಗಗಳಲ್ಲಿ ಸಂಕಲಿಸಿದ್ದಾರೆ. ಮೂರನೆಯ ಭಾಗದಲ್ಲಿ ವೀರಶೈವ ಲಘುಸಾಹಿತ್ಯ ಪ್ರಕಾರಗಳನ್ನು ಕುರಿತ ಸಂಶೋಧನಾತ್ಮಕ ಲೇಖನಗಳಿವೆ. ಈ ಲೇಖನಗಳಿಂದ ಪ್ರೇರಣೆ ಹೊಂದಿ ಹೊಸ ಹೊಸ ಸಂಶೋಧಕರು ತಮ್ಮ ಪಿಎಚ್.ಡಿ. ಮಹಾಪ್ರಬಂಧಗಳಿಗೆ ವಿಷಯಗಳನ್ನು ಆಯ್ದುಕೊಳ್ಳುತ್ತಿರುವುದನ್ನು ನೋಡಿದರೆ ಈ ಕೃತಿಯ ಮಹತ್ವದ ಅರಿವಾಗುತ್ತದೆ. ಡಾ. ಶಿರೂರ ಅವರಂತಹ ವಿಶಿಷ್ಟ, ಸಂಶೋಧಕರು ಮಾತ್ರ ಇಂಥ ಅಲಕ್ಷಿತ ಸಾಹಿತ್ಯದೆಡೆಗೆ ಸಂಶೋಧನಾಸಕ್ತರ ಗಮನ ಸೆಳೆಯಲುಸಾಧ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಗೌರವ ಗ್ರಂಥಕ್ಕೆ ಡಾ. ಶಿರೂರ ಅವರೇ ಬರೆದ 'ಕರಣಹಸುಗೆ ಸಾಹಿತ್ಯ'ದ ಸಮಗ್ರ ವಿಶ್ಲೇಷಣೆ ಅವರ ವಿದ್ವತ್ತಿಗೆ ನಿದರ್ಶನವಾಗಿದೆ. ಈ ಲೇಖನ ಸುತ್ತೂರು

'ವೀರಶೈವ ಸಾಹಿತ್ಯ ಸಮೀಕ್ಷೆ' ಗ್ರಂಥದಲ್ಲಿ ಎಡೆಪಡೆದಿರುವುದು ಇದರ ಮಹತ್ವವನ್ನು ಹೇಳುತ್ತಿದೆ. “ಸಿದ್ದರಾಮ ಸಂಪದ' ಎಂಬ ಕೃತಿ ಯಲಬುರ್ಗಿಯ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳ ಗೌರವ ಗ್ರಂಥವು 'ವೀರಶೈವ ಅರಸರಪಟ್ಟಾಧಿಕಾರದ ಸಂದರ್ಭದಲ್ಲಿ ಡಾ. ಶಿರೂರ ಅವರ ಸಮರ್ಥ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಈ ವೀರಶೈವ ಗುರುಗಳು ಎಂಬ ಮಹತ್ವದ ವಿಷಯಗಳನ್ನೊಳಗೊಂಡಿದೆ. ಕರ್ನಾಟಕವನ್ನಾಳಿದ ಸುಮಾರು ನಲ್ವತ್ತಕ್ಕೂ ಹೆಚ್ಚು ವೀರಶೈವ ಅರಸುಮನೆತನಗಳು ಮತ್ತು ಅವುಗಳ ರಾಜಗುರುಗಳ ಚರಿತ್ರೆಯಲ್ಲಿ ೨೨ ಜನ ರಾಜಗುರುಗಳ ಇತಿಹಾಸವನ್ನು ಈ ಗ್ರಂಥದ ಮೂಲಕ ಡಾ. ಶಿರೂರ ಅವರು ಮೊದಲ ಬಾರಿಗೆ ಬೆಳಕಿಗೆ ತಂದಿದ್ದಾರೆ. ಇಲ್ಲಿ ಎಲ್ಲ ಗುರುಗಳ ಇತಿಹಾಸವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಕುರಿತು ಇನ್ನೂ ಒಂದು ಸಂಪುಟವಾಗುತ್ತದೆ. ಇದಲ್ಲದೆ ವೀರಶೈವ ಅರಸರಿಗೆ ವೀರಶೈವೇತರ ರಾಜಗುರುಗಳೂ ಇದ್ದ ಉಲ್ಲೇಖಗಳು ಇವೆ. ಇದನ್ನು ಕುರಿತು ಮತ್ತೊಂದು ಸಂಪುಟವಾಗಬಹುದು'' ಎಂಬ ಸಂಪಾದಕರ ಪ್ರಸ್ತಾವನೆಯ ಮಾತುಗಳು ಉಳಿದ ಎಲ್ಲರಾಜ ಗುರುಗಳ ಚರಿತ್ರೆಯನ್ನು ಶೋಧಿಸುವ ಸಂಶೋಧಕರಿಗೆ ದಿಕೂಚಿಯಾಗಿವೆ. ಕನ್ನಡ ಸಂಶೋಧನಕ್ಷೇತ್ರಕ್ಕೆ ಈ ಮೂಲಕ ಕೆಲ ಹೊಸ ಸಂಗತಿಗಳನ್ನು ಡಾ. ಶಿರೂರ ಅವರು ಸೇರಿಸಿದಂತಾಗಿದೆ.

 ''ಸಿದ್ದ'' ಕೃತಿಯು ಡಾ. ಶಿರೂರ ಅವರು ಸಂಪಾದಿಸಿದ ಯಲಬುರ್ಗಿ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಮತ್ತೊಂದು ವಿಶಿಷ್ಟವಾದ ಕೃತಿಯಾಗಿದೆ. 'ಸಿದ್ದ'ಕೃತಿಯು ಯಲಬುರ್ಗಿ ತಾಲೂಕಿನ ದರ್ಶನವನ್ನು ನೀಡುವುದರಿಂದ ಸರಕಾರಿ ಗೆಜೆಟಿಯರ್‌ದಂತೆ ಗಮನಾರ್ಹ ಕಾವ್ಯವನ್ನು ಮಾಡಿದೆ. ಈ ದಿಸೆಯಲ್ಲಿ ಪ್ರಸ್ತುತ ಗ್ರಂಥ ಮುಂಬರುವ ಗೌರವ ಗ್ರಂಥಗಳಿಗೆ ಒಂದು ಉತ್ತಮ ಮಾದರಿ. ಶ್ರೀ ಮಠದ ದರ್ಶನ ಮತ್ತು ಯಲಬುರ್ಗಿ ತಾಲೂಕು ದರ್ಶನ ಎಂಬ ಎರಡು ಭಾಗಗಳಿವೆ. ಮೊದಲ ಭಾಗಶ್ರೀ ಮಠದ ಮತ್ತು ಪ್ರಮುಖ ಮಹಾಸ್ವಾಮಿಗಳ ಚರಿತ್ರೆಯನ್ನು ಒಳಗೊಂಡಿದೆ. ಎರಡನೆಯ ಭಾಗದ ಪಿಎಚ್.ಡಿ. ಒಂಬತ್ತು ಲೇಖನಗಳು ಈ ತಾಲೂಕಿನ ಇತಿಹಾಸ, ವೀರಶೈವ ಮಠಗಳು, ದೇವಾಲಯಗಳು, ಸಾಹಿಗಳು, ಕಲಾವಿದರು, ಶಾಸಕರು, ನ್ಯಾಯಾಧೀಶರು, ಶಿಕ್ಷಣ ಸಂಸ್ಥೆಗಳು ಮತ್ತು ಈ ತಾಲೂಕಿನ ಪ್ರಗತಿಯ ಪಕ್ಷಿನೋಟ ವಿವರಗಳನ್ನು ಒಳಗೊಂಡಿವೆ. ಇದರಲ್ಲಿಯ ಕೆಲವು ಲೇಖನಗಳು ಮಹಾಪ್ರಬಂಧಕ್ಕೆ ಆಕರಗಳಾಗಿವೆ. ಉದಾಹರಣೆಗೆ ಡಾ. ಮಲ್ಲಿಕಾರ್ಜುನ ಕುಂಬಾರ ಅವರ ಯಲಬುರ್ಗಿ ತಾಲೂಕಿನ ಕಲಾವಿದರ ಲೇಖನ 'ಯಲಬುರ್ಗಿ ತಾಲೂಕಿನ ವೃತ್ತಿ ರಂಗಭೂಮಿ' ಎಂಬ ಪಿಎಚ್.ಡಿ. ಮಹಾಪ್ರಬಂಧ ರಚನೆಗೆ ಕಾರಣವಾಗಿರುವುದು. ಡಾ. ಶಿರೂರ ಅವರ ಮಾರ್ಗದರ್ಶನದಲ್ಲಿಯೇ ಡಾ. ಕುಂಬಾರ ಅವರು ಇದನ್ನು ಸಿದ್ಧಪಡಿಸಿರುವುದನ್ನು ಸ್ಮರಿಸಬಹುದು. 'ಶಿವಸಂಗಮ' ಯಲಬುರ್ಗಿ ತಾಲೂಕಿನ ಬೆದವಟ್ಟಿಯ ಶ್ರೀ. ಷ.ಬ್ರ.ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಂಸ್ಕರಣ ಗ್ರಂಥವಾಗಿದೆ. ಈ ಗ್ರಂಥದ ಮೊದಲ ಭಾಗದಲ್ಲಿ ವಿವಿಧ ವಿದ್ವಾಂಸರು ಶ್ರೀಗಳ ವ್ಯಕ್ತಿತ್ವದರ್ಶನ ಮಾಡಿಸುವ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಅಲಕ್ಷಿತ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟ ಕನ್ನಡ ಟೀಕಾಸಾಹಿತ್ಯ' ಕುರಿತು ಇಪ್ಪತ್ತೆರಡು ಸಂಶೋಧನಾತ್ಮಕ ಲೇಖನಗಳಿವೆ. ಕನ್ನಡ ಸಾಹಿತ್ಯದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಜನ ಬೇರೆ ಬೇರೆ ಕೃತಿಗಳಿಗೆ ಬರೆದ ಟೀಕಾಕಾರರ ಪ್ರಸ್ತಾಪವಿದೆ. ಅದರಲ್ಲಿ ಈಗ ಕೇವಲ ಇಪ್ಪತ್ತೆರಡು ಜನ ಟೀಕಾಕಾರರನ್ನು ಕುರಿತು ಲೇಖನಗಳನ್ನು ಬರೆಯಿಸಲು ಸಾಧ್ಯವಾಗಿದೆ. ಮುಂದೆ ಅವಕಾಶ ಸಿಕ್ಕರೆ ಇನ್ನುಳಿದ ಟೀಕಾಕಾರರ ಬಗೆಗೂ ಬರೆಯಿಸುವ ಸಂಕಲ್ಪ' ಮಾಡಿರುವ ಸಂಪಾದಕರ ಶ್ರಮ ಮತ್ತು ಅಲಕ್ಷಿತ ಟೀಕಾಸಾಹಿತ್ಯವನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಇರುವ ಅವರ ಸಂಶೋಧನ ದೂರದೃಷ್ಟಿಯನ್ನು ಕಾಣಬಹುದಾಗಿದೆ.

ಪಠ್ಯಗಳು :

ಡಾ. ಶಿರೂರ ಅವರು ಸಂಪಾದಿಸಿದ 'ಬಸವಣ್ಣನವರ ವಚನವಾಹಿನಿ' ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಬಿ.ಎ. ಭಾಗ-೩ರ ಉಪ ಪ್ರಧಾನ ಪಠ್ಯವಾಗಿದ್ದಿತ್ತು. ಇದರಲ್ಲಿರುವ ೨೭೮ ಬಸವಣ್ಣನವರ ವಚನಗಳನ್ನು ಭಕ್ತಿ, ಆಚಾರ, ನಡೆ ನುಡಿ, ಡಾಂಭಿಕತೆ, ವಿಡಂಬನೆ, ಅಸ್ಪೃಶ್ಯತೆ, ಕಾಯಕ, ಅಂತರಂಗ ನಿರೀಕ್ಷೆ, ಅಹಂಕಾರ ನಿರಸನ ಹಾಗೂ ಶರಣರ ಸಂಗ ಎಂಬ ಉಪಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿ ವಚನಗಳನ್ನು ಜೋಡಿಸಿರುವುದು ವಿದ್ಯಾರ್ಥಿಗಳ ಅಭ್ಯಾಸದ ದೃಷ್ಟಿಯಿಂದ ಅನುಕೂಲಕರವಾಗಿದೆ. ಈ ಶೀರ್ಷಿಕೆಗಳ ಹಿನ್ನೆಲೆಯಲ್ಲಿ ಬರೆದ ಪ್ರಸ್ತಾವನೆ ಬಸವಣ್ಣನವರ ವಚನಗಳ ಅಂತರಂಗವನ್ನು ಅರಿಯಲು ನೆರವಾಗುತ್ತದೆ. ಬಸವಣ್ಣನವರ ಇತಿವೃತ್ತವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ, ಅವರಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕೈಕೊಂಡ ಶಿರೂರ ಅವರ ಕಾರ ಸ್ತುತ್ಯವಾಗಿದೆ. ಕೊನೆಯಲ್ಲಿ ಒಪ್ಪೋಲೆ, ಕಠಿಣ ಪದಕೋಶ, ಸಂದರ್ಭ ವಿವರಣೆ ವಚನಗಳ ಅಕಾರಾದಿ ಹೀಗೆ ಒಂದು ಒಳ್ಳೆಯ ಪಠ್ಯ ಒಳಗೊಳ್ಳಬೇಕಾದ ಎಲ್ಲ ವಿಷಯಗಳನ್ನು 'ಬಸವಣ್ಣನವರ ವಚನವಾಹಿನಿ' ಒಳಗೊಂಡಿರುವುದು ಅದರ ವೈಶಿಷ್ಟ್ಯವೆನಿಸಿದೆ. 

    ಡಾ. ಶಿರೂರ ಅವರು ಸಂಪಾದಿಸಿದ ಇನ್ನೊಂದು ಪಠ್ಯ 'ನಳಚರಿತ್ರೆ ಸಂಗ್ರಹ' ಇದು ಬಿ.ಎ. ಭಾಗ-೧ ಕನ್ನಡ ಪ್ರಧಾನ ವಿಷಯದ ಪಠ್ಯವಾಗಿದ್ದಿತು. ನಳದಮಯಂತಿಯರ ಸ್ವಾರಸ್ಯವಾದ ಕಥಾಭಾಗವನ್ನು ಎಲ್ಲೂ ಕಥಾ ಸಂದರ್ಭ ತಪ್ಪದಂತೆ ಪದ್ಯಗಳ ಜೋಡಣೆ ಮಾಡಿದ್ದು, ಸಂಪಾದಕರ ಜಾಣೆಗೆ ಸಾಕ್ಷಿಯಾಗಿದೆ. ಒಂದು ಪಠ್ಯ ಬಹಳ ಸಣ್ಣದೂ ಇರಬಾರದು, ದೊಡ್ಡದೂ ಇರಬಾರದು. ವರ್ಷದ ಅವಧಿಯೊಳಗೆ ಓದಿ ಮುಗಿಸಬಹುದಾದ ಗಾತ್ರದ್ದು ಇರಬೇಕೆಂಬ ದೃಷ್ಟಿಯಿಂದ ರಚಿತವಾದ ಈ ಪಠ್ಯವನ್ನು ನಾನು ಬಿ.ಎ. ತರಗತಿಯಲ್ಲಿ ಓದಿರುವುದರಿಂದ ಮತ್ತು ಈ ಪಠ್ಯ ಕುರಿತು ಈಗ ಬರೆಯುವ ಸಂದರ್ಭ ಬಂದಿರುವುದರಿಂದ ಪುನಃ ಅದನ್ನು ಓದಿದಾಗ ಅದೊಂದು ಮಾದರಿ ಪಠ್ಯವಾಗಿ ನನಗೆ ತೋರುತ್ತಿದೆ. ಪ್ರಸ್ತಾವನೆಯಲ್ಲಿ ಬರೆದ ಸೊಗಸಾದ ವಿವರಣೆ, ಪಾತ್ರಗಳ ವೈಶಿಷ್ಟ್ಯ, ಇಂಥ ಕಾವ್ಯಗಳ ಓದಿನೆಡೆಗೆ ಆಸಕ್ತಿಯನ್ನುಂಟು ಮಾಡುವ ರೀತಿಯಲ್ಲಿರುವುದು ಗಮನಾರ್ಹವಾಗಿದೆ.

'ಪಂಚವಟಿ' ಬಿಎಸ್.ಸಿ. ಭಾಗ-೧ ಕ್ಕೆ ಶಿರೂರ ಅವರು ಪಠ್ಯವನ್ನಾಗಿ ರೂಪಿಸಿಕೊಟ್ಟ ಕೃತಿ. ಪಂಡಿತರ ಅಲಕ್ಷಕ್ಕೆ ಗುರಿಯಾಗಿರುವ ಕುಮಾರ ವಾಲ್ಮೀಕಿಯ ತೊರವೆ ರಾಮಾಯಣದ ಪದ್ಯಗಳನ್ನು ಸಂಗ್ರಹಿಸಿ ಇಲ್ಲಿಕೊಡಲಾಗಿದೆ. 'ಪಂಚವಟಿ' ಸೀತಾಪಹರಣ ನಡೆದ ಪ್ರದೇಶವಾಗಿದ್ದು, ಅಲ್ಲಿಂದ ಇಡೀ ರಾಮಾಯಣದ

ಕತೆಗೆ ಮಹತ್ವದ ತಿರುವು ದೊರೆತಿರುವುದರಿಂದ ಈ ಹೆಸರಿನ ಔಚಿತ್ಯ ಎದ್ದು ಕಾಣುವಂತಾಗಿದೆ. ಇಲ್ಲೂ ಕೂಡಾ ಸಂದರ್ಭ ತಪ್ಪದ ಹಾಗೆ ಪದ್ಯಗಳನ್ನು ಜೋಡಿಸಿರುವ ರೀತಿ ಮೆಚ್ಚುವಂತಿದೆ. ಇದಕ್ಕೂ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನುಂಟುಮಾಡುವ ಹಾಗೆ ಬರೆದಿರುವ ಪ್ರಸ್ತಾವನೆ ಸೊಗಸಾಗಿದೆ.

ಡಾ. ಶಿರೂರ ಅವರು ಕನ್ನಡದ ಒಬ್ಬ ಸಮರ್ಥ ಸಂಶೋಧನ ಮಾರ್ಗದರ್ಶಕ (Research Guide) ರೆಂದು ಹೆಸರು ಪಡೆದವರು. ಅವರ ಬಳಿ ಪಿಎಚ್.ಡಿ. ಸಂಶೋಧನ ಅಧ್ಯಯನ ಮಾಡುವುದೇ ಒಂದು ಪ್ರತಿಷ್ಠೆಯ ವಿಷಯ. ಅವರು ಸ್ವತಃ ತಾವೂ ದುಡಿದು ವಿದ್ಯಾರ್ಥಿಗಳನ್ನೂ ದುಡಿಸಿ ಮೌಲಿಕವಾದ ಸಂಶೋಧನ ಮಹಾಪ್ರಬಂಧಗಳು ಹೊರಬರಲು ಕಾರಣಕರ್ತರಾಗಿದ್ದಾರೆ. ಆ ಮೂಲಕವೂ ಸಂಶೋಧನ ಕ್ಷೇತ್ರಕ್ಕೆ ಇವರ ಸೇವೆ ಗಮನಾರ್ಹವಾಗಿದೆ. ಇವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಕಾರ್ಯಕೈಕೊಂಡ ಹದಿನೆಂಟು ಜನ ವಿದ್ಯಾರ್ಥಿಗಳು ಡಾಕ್ಟರೇಟ ಪದವಿ ಪಡೆದುಕೊಂಡಿದ್ದಾರೆ. ಡಾ. ಬಿ. ಎಂ. ಹೊಸಮನಿ ಅವರ “ಕರ್ನಾಟಕದ ವೇಷಗಾರರು~ ಒಂದು ಸಾಂಸ್ಕೃತಿಕ ಅಧ್ಯಯನ', ಡಾ. ಚೆನ್ನಬಸಯ್ಯ ಹಿರೇಮಠರ' ಕುರುಗೋಡು ಸಿಂದರು - ಒಂದು ಅಧ್ಯಯನ', ಡಾ. ರಾಜಶೇಖರ ಇಚ್ಚಂಗಿ ಅವರ 'ಪಾರ್ಶ್ವನಾಥಪುರಾಣ ~ ಒಂದು ತೌಲನಿಕ ಅಧ್ಯಯನ' ಡಾ. ಧನವಂತ ಹಾಜವಗೋಳ ಅವರ “ಮುಳಗುಂದ ನಾಡು ಒಂದು ಅಧ್ಯಯನ', ಡಾ. ಸರಸ್ವತಿದೇವಿ ಭಗವತಿ ಅವರ 'ಹಂಪೆ ಶಾಸನಗಳು- ಒಂದು ಅಧ್ಯಯನ' ಇವೇ ಮೊದಲಾದ ಮಹತ್ವದ ಪಿಎಚ್.ಡಿ. ಮಹಾಪ್ರಬಂಧಗಳನ್ನು ಹೆಸರಿಸಬಹುದಾಗಿದೆ. ಹನ್ನೊಂದು ಜನವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಸಂಪ್ರಬಂಧಗಳನ್ನು ರಚಿಸಿ ಎಂ. ಫಿಲ್. ಪದವಿಗಳನ್ನು ಪಡೆದಿದ್ದಾರೆ. ಹೀಗೆ ಕನ್ನಡ ಸಂಶೋಧನ ಕ್ಷೇತ್ರದ ಬೆಳವಣಿಗೆಗೆ ಅವರು ಸಲ್ಲಿಸಿದ ಸೇವೆ ಅಮೂಲ್ಯವಾದುದು. ಡಾ. ಬಿ.ವಿ. ಶಿರೂರ ಅವರದು ಮೃದು ಹೃದಯದ ಸರಳ ಸಜ್ಜನಿಕೆಯ ನಿರಾಡಂಬರ ವ್ಯಕ್ತಿತ್ವ. ಸ್ನೇಹ ಜೀವಿಗಳಾದ ಅವರು ಅಜಾತಶತ್ರುಗಳು, ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಆಕರ್ಷಿಸುವ ಆಜಾನುಬಾಹು ಅಪರೂಪದ ವ್ಯಕ್ತಿ. ಗಂಭೀರ ಓದು, ಸಂಶೋಧನ ನಿಷ್ಠೆ, ಪ್ರಾಮಾಣಿಕತೆಯ ಸ್ಪರ್ಶ, ಕರ್ತವ್ಯಪ್ರಜ್ಞೆ, ಸೇವಾ ಮನೋಭಾವ ಇವೇ ಮೊದಲಾದ ವಿಶೇಷ ಗುಣಗಳಿಂದಾಗಿ ಅವರೊಬ್ಬ ವಿಶಿಷ್ಟ ಮಾದರಿ ಸಂಶೋಧಕರೆನಿಸಿದ್ದಾರೆ. ಅವರು ಕೈಕೊಂಡ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಹಲವು ಪ್ರಶಸ್ತಿ ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ. ಶ್ರವಣಬೆಳಗೊಳದ ಬಾಹುಬಲಿ ಪ್ರತಿಷ್ಠಾನದ ಬಹುಮಾನ, ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ. ಪ್ರತಿಷ್ಠಾನದ ಸಂಶೋಧನ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಭಾರತ ರತ್ನವಿಶ್ವೇಶ್ವರಯ್ಯ ಪ್ರಶಸ್ತಿ, ಜಚನಿ ಪ್ರಶಸ್ತಿ, ಮುಂತಾದವು ಅವರು ಪಡೆದ ಪ್ರಮುಖ ಪ್ರಶಸ್ತಿಗಳಾಗಿವೆ. ಡಾ. ಬಿ.ವಿ. ಶಿರೂರ ಅವರ ವಿದ್ಯಾರ್ಥಿಗಳು, ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು

ಹಾಗೂ ಅಭಿಮಾನಿಗಳು “ಸಿರಿಸಂಪದ' ವೆಂಬ ಎಂಟನೂರಾ ಐವತ್ತು ಪುಟಗಳ ಅಭಿನಂದನ ಗ್ರಂಥ ಸಮರ್ಪಿಸಿ ಗೌರವಿಸಿದ್ದಾರೆ. ಅವರ ವ್ಯಕ್ತಿತ್ವ ಸಾಹಿತ್ಯ ಹಾಗೂ ಗ್ರಂಥಸಂಪಾದನ ಕ್ಷೇತ್ರದಲ್ಲಿ ದುಡಿದ ಅರವತ್ನಾಲ್ಕು ಜನ ಸಂಪಾದಕರ ಸಾಧನೆ, ಸಂಪಾದನ ಕೃತಿಗಳ ಮೌಲಿಕತೆಯನ್ನೊಳಗೊಂಡ ಬೃಹತ್ಗ್ರಂಥ ಇದಾಗಿದೆ. ಕನ್ನಡದ ಕೆಲವೇ ಕೆಲವು ಮಹತ್ವದ ಆಕರ ಗ್ರಂಥಗಳಲ್ಲಿ ಇದೂ ಒಂದಾಗಿದೆ. ಕರ್ನಾಟಕದ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಕಾಲದ ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಇತಿಹಾಸದ ಮೇಲೆ ಹೊಸ ಬೆಳಕು ಬೀರುತ್ತ ಬಂದ ಇತಿಹಾಸ ಅಕಾಡೆಮಿಯ ೯ನೆಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಿ ಸಪ್ಟೆಂಬರ ೧೧, ೧೨ ಹಾಗೂ ೧೩, ೨೦೦೫ ರಂದು ಗುಲ್ಬರ್ಗಾ ಜಿಲ್ಲೆ ಸೇಡಂನಲ್ಲಿ ನಡೆದ ಇತಿಹಾಸ ಸಮ್ಮೇಳನದಲ್ಲಿ ಇವರನ್ನು ಗೌರವಿಸಿರುವುದು ಅಭಿಮಾನದ ಸಂಗತಿಯಾಗಿದೆ.

      ಡಾ. ಬಿ. ವಿ. ಶಿರೂರ ಅವರು ವೃತ್ತಿಯಿಂದ ನಿವೃತ್ತಿ ಹೊಂದಿದರೂ ಪ್ರವೃತ್ತಿಯಿಂದ ಸಂಶೋಧಕರಾದ ಇವರು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ದ ಮೇಜರ್ ಪ್ರಾಜೆಕ್ಟ್ ಅಡಿಯಲ್ಲಿ ಪ್ರಾಚೀನ ಕರ್ನಾಟಕದ ಶೈವ ಶಾಖೆಗಳು' ಎಂಬ ಯೋಜನೆಯನ್ನು ಪೂರೈಸಿದ್ದಾರೆ.


              ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯದ ವೈಶಿಷ್ಟ್ಯಗಳು                                                          ಡಾ. ಸಿ.ನಾಗಭೂಷಣ    ...