ಶುಕ್ರವಾರ, ಅಕ್ಟೋಬರ್ 10, 2025

 ಶಿವಶರಣ ವಚನಕಾರ ಆದಯ್ಯ

             ಡಾ.ಸಿ.ನಾಗಭೂಷಣ

   ಕನ್ನಡ ನಾಡಿನ ಮಧ್ಯಕಾಲೀನ ಯುಗದಲ್ಲಿ ಪುಲಿಗೆರೆಯು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಮಹತ್ವವನ್ನು ಪಡೆದುದಾಗಿದೆ. ಹನ್ನೊಂದನೆಯ ಶತಮಾನದಲ್ಲಿ ನಡೆಯಿತೆನ್ನಲಾದ ಪುಲಿಗೆರೆಯ ಸೋಮನಾಥನ ಪ್ರತಿಷ್ಠಾಪನೆಯು ವೀರಶೈವ ಧಾರ್ಮಿಕ ಚರಿತ್ರೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಘಟನೆಯ ಕೇಂದ್ರ ವ್ಯಕ್ತಿ ಶರಣ ಆದಿಶೆಟ್ಟಿ. ಶರಣ ಅದಿಶೆಟ್ಟಿಯು ವೀರಮಾಹೇಶ್ವರ ನಿಷ್ಠೆಯ ಮೂಲಕ  ಏಕದೇವನಲ್ಲಿ ಉಗ್ರ ನಂಬಿಕೆ ಇರಿಸಿ ಈಗಾಗಲೇ  ಅಸ್ತಿತ್ವದಲ್ಲಿದ್ದ ಅನ್ಯಮತಗಳ ವಿರುದ್ಧ ಹೋರಾಡಿ ಶರಣಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಿದ ಶರಣರುಗಳಲ್ಲಿ ಒಂದಾಗಿದ್ದಾನೆ. ಶರಣ ಆದಿಶೆಟ್ಟಿಯನ್ನು ಕುರಿತು( ಶಾಸನಗಳಲ್ಲಿ ಪೂರಕ ಮಾಹಿತಿಗಳು) ವೀರಶೈವ ಸಾಹಿತ್ಯದಲ್ಲಿ ಸಮಗ್ರವಾಗಿ ಮತ್ತು ಸಂಕ್ಷಿಪ್ತವಾಗಿವಿವರಗಳನ್ನೊಳಗೊಂಡ ಕಾವ್ಯ-ಪುರಾಣಗಳು ಲಭ್ಯವಿವೆ. ಉಪಲಬ್ಧವಿರುವ ಆಧಾರಗಳ ಪ್ರಕಾರ ಹರಿಹರನ ಆದಯ್ಯನ ರಗಳೆಯೇ ಆದಯ್ಯನ ಜೀವನ ವಿವರವುಳ್ಳ ಪ್ರಥಮ ಕಾವ್ಯವಾಗಿದೆ. ಆದಯ್ಯನ ಚರಿತೆ ಮೊದಲು ಕಾವ್ಯವಾಗಿ ರೂಪು ತಾಳಿದ ಹರಿಹರನ ಆದಯ್ಯನ ರಗಳೆ ಮತ್ತು ಪಾಲ್ಕುರಿಕೆ ಸೋಮನಾಥನ ತೆಲುಗು ಬಸವ ಪುರಾಣಮುವಿನ ಪ್ರಭಾವ, ನಂತರದ ಕಾವ್ಯಪುರಾಣಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಗಿರುವುದುಂಟು.

      ಪುಲಿಗೆರೆಯಲ್ಲಿ ಸೋಮೇಶನನ್ನು ಪ್ರತಿಷ್ಠಾಪಿಸಿದ ವ್ಯಕ್ತಿ ಯಾರು? ಆತನು ವೀರಶೈವನೇ? ಅಥವಾ ಅನ್ಯಮತೀಯನೇ? ಸೋಮೇಶ್ವರನನ್ನು ಪ್ರತಿಷ್ಠಾಪಿಸಲು ಪ್ರೇರಿತ ಪ್ರಸಂಗ ಯಾವುದು? ಇತ್ಯಾದಿಗಳ ಬಗೆಗೆ ಕಾವ್ಯಪುರಾಣಗಳಲ್ಲಿ ವಿಭಿನ್ನವಾದ ಹೇಳಿಕೆಗಳು ಉಕ್ತವಾಗಿವೆ.

ಮೊಟ್ಟ ಮೊದಲ ಬಾರಿಗೆ ಆದಯ್ಯನನ್ನು ಕುರಿತು ಕಾವ್ಯ ರಚಿಸಿದ ಹರಿಹರ ಮತ್ತು ಪಾಲ್ಕುರಿಕೆ ಸೋಮನಾಥರು ಆದಯ್ಯನ ಬಗೆಗಿದ್ದ ವಿಭಿನ್ನವಾದ ಜನವದಂತಿಗಳನ್ನು ಅನುಸರಿಸಿದ್ದಾರೆ. ಪಾಲ್ಕುರಿಕೆ ಸೋಮನಾಥನ ಕೃತಿಯಲ್ಲಿ ಬಸವಣ್ಣನವರ ಜೊತೆಗೆ ಪ್ರಾಚೀನ ಮತ್ತು ಸಮಕಾಲೀನ ಶರಣರ ಉಲ್ಲೇಖ ಪೂರಕವಾಗಿ ಬಂದಿದ್ದು ಅದರಲ್ಲಿ ಆದಯ್ಯನ ಚರಿತ್ರೆಯು ಸಂಕ್ಷೇಪವಾಗಿ ನಿರೂಪಿತವಾಗಿದೆ. ಹರಿಹರ ಮತ್ತು ಪಾಲ್ಕುರಿಕೆ ಸೋಮನಾಥರು ವಿಭಿನ್ನವಾದ ಜನವದಂತಿಗಳನ್ನು ಆಲಿಸಿ ಅನುಸರಿಸಿದ್ದೇ ಈ ಗೊಂದಲಕ್ಕೆ ಕಾರಣವಾಗಿದೆ.

    ಆದಯ್ಯನ ವಿವರ ಜನಪದ ಸಾಹಿತ್ಯದ ದುಂದುಮೆ ಪದ ಪ್ರಕಾರದಲ್ಲಿದ್ದು ಉಳಿದುಕೊಂಡು ಬಂದಿದೆ. ಧಾರವಾಡ ಜಿಲ್ಲೆಯ ಕುಂದುಗೋಳ ಗ್ರಾಮದವನಾದ ಕುಂದುಗೋಳದ ಬಸವಲಿಂಗ ಕವಿಯು ಅದಯ್ಯನನ್ನು ಕುರಿತು ದುಂದುಮೆ ಪದಗಳನ್ನು ರಚಿಸಿದ್ದಾನೆ. ಆಶುಕವಿಯಾದ ಈತನು ರಚಿಸಿರುವ  ಆದಿಸೆಟ್ಟಿಯನ್ನು ಕುರಿತ ದುಂದುಮೆ ಪದಗಳನ್ನು ಎಂ.ಎಸ್. ಸುಂಕಾಪುರ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.

ಅದಯ್ಯನ ದುಂದುಮೆ ಪದದಲ್ಲಿ ಆದಯ್ಯನ ಶಿವಭಕ್ತಿ ನಿಷ್ಠೆಯೇ ಪ್ರಮುಖವಾಗಿದೆ. ಅಶುಕವಿ ಬಸವಲಿಂಗನು ಬಹುಶ: ಹರಿಹರ ಮತ್ತು ರಾಘವಾಂಕರು ರಚಿಸಿರುವ ಆದಯ್ಯನನ್ನು ಕುರಿತ ಕಾವ್ಯಗಳನ್ನು ಪುರಾಣಿಕರಿಂದ ಕೇಳಿ ತಿಳಿದಿರಬೇಕು ಎಂದೆನಿಸುತ್ತದೆ. ಆ ವಿವರವೇ ಇದರಲ್ಲಿ ಕಂಡುಬರುತ್ತದೆ. ಈ ದುಂದುಮೆ ಪದದಲ್ಲಿ ಒಟ್ಟು ೭೪ ಪದ್ಯಗಳಲ್ಲಿ ಅದಯ್ಯನ ವಿವರ ನಿರೂಪಿತವಾಗಿದೆ.

ಆದಯ್ಯನ ಜೀವನ : ಬೆಳವಣಿಗೆಯ ಘಟ್ಟಗಳು

ಆದಯ್ಯನ ಜೀವನ ಚರಿತ್ರೆಯನ್ನು ಹಂತಹಂತವಾಗಿ ವಿಭಾಗಿಸಿಕೊಂಡು ಉಪಲಬ್ಧವಿರುವ ಎಲ್ಲಾ ಸಾಮಗ್ರಿಗಳಡಿಯಲ್ಲಿ ಪರಿಶೀಲಿಸಿ ವಿಶ್ಲೇಷಿಸಿ ರೂಪಿಸಲಾಗಿದೆ.

೧. ಜನ್ಮಸ್ಥಳ: ಆದಯ್ಯನ ಜನ್ಮಸ್ಥಳ ಸೌರಾಷ್ಟ್ರ ಎಂಬುದು ರಾಘವಾಂಕನ ಸೋಮನಾಥ ಚಾರಿತ್ರದ

`ನಾನೊಲಿದು ನೆಲಸಿರ್ಪ ಸೌರಾಷ್ಟ್ರವೆಂಬ ಸು

ಸ್ಥಾನ ವುಂಟದರೊಳಗೆ ಜನಿಸು ಹೋಗೆನೆ'     (ಸ್ಥ. ೧, ಪ.ಸಂ. ೫೮)

ಎಂಬ ಹೇಳಿಯಿಂದ ವ್ಯಕ್ತವಾಗುತ್ತದೆ. 

    ಸಿದ್ಧನಂಜೇಶನು ಆದಯ್ಯನ ಜನ್ಮಸ್ಥಳವನ್ನು ಸೊರಟೂರು ಎಂದು ಹೇಳಿದ್ದು, ಸೊರಟ ಎಂಬ ಪದವನ್ನು ಸೌರಾಷ್ಟ್ರದ ತದ್ಭವದಂತೆ ಬಳಸಿದ್ದಾರೆ. ಆದಯ್ಯನು ಸೌರಾಷ್ಟ್ರದಿಂದ ಬಂದಿರುವನಾಗಿರದೆ ಕನ್ನಡ ನಾಡಿನವನೇ ಎಂದೆನಿಸುತ್ತದೆ.ಲಬ್ಧವಿರುವ ಮಿತವಾದ ಆಧಾರಗಳಿಂದ ಸಾಸಲು ಆದಯ್ಯನ ಜನ್ಮಗ್ರಾಮ ಎಂಬುದನ್ನು ತಿಳಿಯಬಹುದಾಗಿದೆ. ಸಾಸಲುವಿನಲ್ಲಿ ಸೋಮನಾಥ ದೇವಾಲಯ ಇದೆ. ಸೋಮನಾಥ ದೇವಾಲಯದ ನವರಂಗದಲ್ಲಿ ಆದಿಸೆಟ್ಟಿಯ ವಿಗ್ರಹ ಇದೆ ಎಂದು ಭೈರವೇಶ್ವರ ಕಾವ್ಯದ ಪ್ರಸ್ತಾವನೆಯಲ್ಲಿ ತಿಳಿಸಲಾಗದೆ. ಜೊತೆಗೆ Mysore Archaelogical Report £À°èAiÀÄÆ  The   someswara   temple  in  the  navaranga  Figures of Adisetti ಎಂಬ ಉಲ್ಲೇಖ ದಾಖಲಾಗಿದೆ. ಈ ಸಾಸಲು ಗ್ರಾಮ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೋಕಿನ ಕಿಕ್ಕೇರಿಗೆ ಸಮೀಪದಲ್ಲಿದೆ. ಸಾಸಲುವಿನಲ್ಲಿ ಸೋಮೇಶ್ವರ ದೇವಾಲಯ ಇದೆ. ದೇವಾಲಯವು ಚೋಳರ ಕಾಲಕ್ಕೆ ಸೇರಿದುದಾಗಿ ಕಂಡುಬರುತ್ತದೆ. ದೇವಾಲಯದ ನವರಂಗದ ಬಲಭಾಗದಲ್ಲಿ ಎರಡು ವಿಗ್ರಹಗಳು ಇದ್ದು ವಿಗ್ರಹಗಳಲ್ಲಿನ ವ್ಯಕ್ತಿಗಳನ್ನು ಆದಿಸೆಟ್ಟಿ ಮತ್ತು ಕೋರಿಸೆಟ್ಟಿ ಎಂದು ಈಗಲೂ ಕರೆಯುತ್ತಾರೆ. ಈ ವಿಗ್ರಹಗಳಲ್ಲಿಯ ವ್ಯಕ್ತಿಗಳ ಬಗೆಗೆ ಪ್ರಸ್ತಾಪಿಸಿದಾಗ ಜನರು ಹರಿಹರನ ಆದಯ್ಯನ ರಗಳೆ ಮತ್ತು ಸೋಮನಾಥ ಚಾರಿತ್ರದ ಆದಯ್ಯನ ಕಥೆಯನ್ನು ಹೋಲುವ ಆದಿಸೆಟ್ಟಿಯ ಕಥೆ ಹೇಳುತ್ತಾರೆ. ಆದಯ್ಯನಿಗೆ ಆದಿಸೆಟ್ಟಿ ಎಂಬುದು ಪರ್ಯಾಯ ಹೆಸರಾಗಿತ್ತು ಎಂಬುದನ್ನು ಈಗಾಗಲೇ ಗಮನಿಸಲಾಗಿದೆ. ಈ ಮೇಲಿನ ಹೇಳಿಕೆಯನ್ನು ಬೆಂಬಲಿಸುವಂತೆ ಆದಯ್ಯನ ವಂಶಜರು ಸಾಸಲುವಿನಲ್ಲಿ ಇದ್ದ ಬಗೆಗೆ, ಭೈರವೇಶ್ವರ ಕಾವ್ಯ ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರದಲ್ಲಿ ಉಲ್ಲೇಖ ಇದೆ. ಆದಯ್ಯನ ಮೇಲಿನ ಅಭಿಮಾನದಿಂದ ಹುಲಿಗೆರೆಯಲ್ಲಿರ್ದ ಆದಯ್ಯನ ಗುರು ಸಂಪ್ರದಾಯಕ್ಕೆ ಮುಖ್ಯವಾದ ಚಿಕ್ಕಣಾರ್ಯ ಮೊದಲಾದ ಭಕ್ತರು ಆದಯ್ಯನ ಜನ್ಮಸ್ಥಳವಾದ ಸಾಸಲಿಗೆ ಅಲ್ಲಿಯ ಸೋಮೇಶ್ವರ ದೇವರ ನೋಡಬೇಕೆಂದು ಶಿವಭಕ್ತರೊಡಗೂಡಿ ಬಂದಾಗ ಆದಯ್ಯನ ವಂಶೋಜನಾದ `ಚಿಕ್ಕೊಡೆಯರು' ಬಂದು ಸ್ವಾಗತಿಸಿದರು ಎಂದಿದೆ. (ಪು. ೬೯) ಆದಯ್ಯನ ವಂಶಜರಿಗೆ ಸೌರಾಷ್ಟ್ರ ಸೋಮೇಶನು ಮನೆದೇವರು ಆಗಿದ್ದ ಎಂಬುದು ಶಿವರಾತ್ರಿಯೊಳು ಪೋಗಿ ಸೌರಾಷ್ಟ್ರಪತಿಯ ಪಾದವ ಕಂಡು ವರುಷಕೊಮ್ಮೊಮ್ಮೆಅವರು ಬರಲು (ಪು. ೭೧) ಎಂಬ ಹೇಳಿಕೆಯಿಂದ ವ್ಯಕ್ತಪಡುತ್ತದೆ. ಆದಯ್ಯನು ಸೌರಾಷ್ಟ್ರದ ಸೋಮೇಶ್ವರನನ್ನು ಸುರಹೊನ್ನೆ ಬಸದಿಯಲ್ಲಿ ಪ್ರತಿಷ್ಠಾಪಿಸಿ ಜಿನಾಲಯವನ್ನು ಶಿವಾಲಯವನ್ನಾಗಿ ಪರಿವರ್ತಿಸಿದ್ದರಿಂದ ಇವರಿಗೆ ಸೌರಾಷ್ಟ್ರ ಸೋಮನಾಥ ಒಂದು ರೀತಿಯಲ್ಲಿ ಮನೆದೇವರು ಎನಿಸಿರಬೇಕು. ವಿಶೇಷ ಸಂಗತಿ ಎಂದರೆ ಪುಲಿಗೆರೆಯ ಸೋಮೇಶ್ವರ ದೇವಾಲಯದ ದಕ್ಷಿಣ ಬಾಗಿಲ ಎಡಬದಿಯಲ್ಲಿ ಶಿಲ್ಪವೊಂದಿದ್ದು ಆ ಶಿಲ್ಪದಲ್ಲಿರುವ ವ್ಯಕ್ತಿಗಳ ಹೆಸರು ಶಿವರಾಮ ಒಡೆಯ, ಪೂಜಾರಿ ಚಿಕ್ಕಣ್ಣ ಎಂಬುದಾಗಿ ಅಲ್ಲಿಯ ಕ್ರಿ.ಶ. ೧೪ನೇ ಶತಮಾನಕ್ಕೆ ಸೇರಿದ ಶಾಸನದಲ್ಲಿ ಇದೆ. ಶಿಲ್ಪದಲ್ಲಿರುವ ಈ ಇಬ್ಬರು ವ್ಯಕ್ತಿಗಳ ಜೊತೆಗೆ ಸೋಮನಾಥದೇವರ ಚಿತ್ರವು ಇದೆ. ಶಿವರಾಮ ಒಡೆಯರು ಮತ್ತು ಚಿಕ್ಕಣ್ಣರು ಬಹುಶ ಆದಯ್ಯನ ವಂಶಜರೇ ಇರಬೇಕೆಂದು ಊಹಿಸಲು ಅವಕಾಶ ಇದೆ. ಈ ಮಿತವಾದ ಆಧಾರಗಳು ಸಾಸಲು ಆದಯ್ಯನ ಜನ್ಮಸ್ಥಳವಾಗಿದ್ದಿರ ಬಹುದು ಎಂದೆನಿಸುತ್ತದೆ.

೨. ಜನ್ಮದಾತರು :  ಆದಿಶೆಟ್ಟಿಯ ತಂದೆ ತಾಯಿಗಳು ಸೋಮನಾಥ ಚಾರಿತ್ರದ ಪ್ರಕಾರ ಪಾರದತ್ತ ಮತ್ತು ಪುಣ್ಯವತಿ ಎಂದಿದ್ದರೆ. ಆದಯ್ಯಗಳ ವಾರ್ಧೀಕ ಎನ್ನುವ   ಅಪ್ರಕಟಿತ ಕೃತಿಯಲ್ಲಿ ಅನ್ನದಾನಿ ಮತ್ತು ಮುಕ್ತಾಂಗನೆ ಎಂಬ ಹೆಸರುಗಳು ಕಂಡುಬರುತ್ತದೆ. ಹರಿಹರನ ರಗಳೆಯಲ್ಲಿ ಆದಯ್ಯನ ಮಾತಾಪಿತೃಗಳು ಶಿವಭಕ್ತರು ಎಂದಿದ್ದು, ಸಿದ್ಧನಂಜೇಶನ ಕೃತಿಯಲ್ಲೂ ಇದೇ ಹೆಸರು ವ್ಯಕ್ತಗೊಂಡಿದೆ ಉಳಿದ ಕಾವ್ಯಪುರಾಣಗಳಲ್ಲಿ ತಂದೆ ತಾಯಿಗಳ ಪ್ರಸ್ತಾಪ ಇಲ್ಲ.

೩. ಜನನ ಹಿನ್ನಲೆ : ಆದಯ್ಯನನ್ನು ಕುರಿತ ಪೂರ್ಣ ಪ್ರಮಾಣದ ಕೃತಿಗಳಲ್ಲಿ ಜನನವು ದೈವಿಕ ಹಿನ್ನೆಲೆಯಿಂದ ನಿರೂಪಿಸಲ್ಪಟ್ಟಿದೆ. ಸೋಮನಾಥ ಚಾರಿತ್ರದಲ್ಲಿ ಆದಯ್ಯನು ಸೌರಾಷ್ಟ್ರದ ಸೋಮೇಶನನ್ನು ಪುಲಿಗೆರೆಯ ಸುರಹೊನ್ನೆಯ ಬಸದಿಯಲ್ಲಿಗೆ ತಂದು ಪ್ರತಿಷ್ಠಾಪಿಸುವ ಕಾರ್ಯಕ್ಕೆ ಪೂರ್ವ ಪೀಠಿಕೆಯೋಪಾದಿಯಲ್ಲಿ ಪೌರಾಣಿಕ ನೆಲೆಯ ವಿವರಗಳೊಂದಿಗೆ ಜನನದ ಹಿನ್ನೆಲೆ ವ್ಯಕ್ತವಾಗಿದೆ.

   ಪುಲಿಗೆರೆಯು ಪ್ರಾಚೀನ ಕಾಲದಿಂದ ಹನ್ನೊಂದನೇ ಶತಮಾನದ ಅಂತ್ಯದವರೆಗೆ ಜೈನಮತದ ನೆಲೆವೀಡಾಗಿದ್ದಿತು ಎಂಬುದಕ್ಕೆ ಉಪಲಬ್ಧವಿರುವ ಶಾಸನಗಳಲ್ಲಿ ಅರ್ಧದಷ್ಟು ಜೈನಮತಕ್ಕೆ ಸಂಬಂಧಪಟ್ಟಿರುವುಗಳೇ ಆಗಿವೆ. ಪುಲಿಗೆರೆ ಮೂರುನೂರು ನಾಡಿನಲ್ಲಿ ಏಳುನೂರು ಬಸದಿಗಳು ಇದ್ದವೆಂದು ತಿಳಿದು ಬರುತ್ತದೆ. ಆದಯ್ಯನ ಜನನದ ವೇಳೆ ಹುಲಿಗೆರೆಯಲ್ಲಿ ಜೈನಮತವು  ಉಚ್ಛ್ರಾಯ ಸ್ಥಿತಿಯಲ್ಲಿದ್ದಿತು ಎಂಬುದಾಗಿ ತಿಳಿದುಬರುತ್ತದೆ.

೪. ಹುಲಿಗೆರೆಗೆ ಪಯಣಿಸಲು ಪ್ರೇರಕ ಪ್ರಸಂಗ:

 ಆದಿಶೆಟ್ಟಿಯ ತಂದೆ ಪಾರದತ್ತನು,

ಪತ್ತು ಸಹಸ್ರ ಪೊಂಗಳ ನಿತ್ತಂ

ಉತ್ತಮ ವಸ್ತುಗಳಂ ಕೊಳ್ಳೆಂದಂ

ಪುಲಿಗೆರೆಯಣ್ಣಿ ಗೆರೆಗಳೊಳಗೊಳಗಂ

ನಲವಿಂ ಪಲವುಂ ಪಟ್ಟಣದೊಳಗಂ

ಪರದಾಡುವುದೆಲೆ ಕಂದ

ಎಂದು ಆತನನ್ನು ವ್ಯಾಪಾರದುದ್ದೇಶ್ಯಕ್ಕಾಗಿ ಹುಲಿಗೆರೆಗೆ ಕಳುಹಿಸುತ್ತಾನೆ ಎಂಬ ವಿವರ ಹರಿಹರನ ರಗಳೆಯಲ್ಲಿ (ಪು. ೩೧೫) ವ್ಯಕ್ತವಾಗಿದೆ.

  ಆದಯ್ಯನ ವಚನಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಆತನು ಚಿನ್ನಬೆಳ್ಳಿಗಳ ವ್ಯವಹಾರಗಳನ್ನು ಮಾಡುತ್ತಿದ್ದನೆಂಬುದು (ವ.ಸಂ. ೨೯೩ರಿಂದ೨೯೬) ತಿಳಿದು ಬರುತ್ತದೆ. ಮೇಲಿನ ವಿವರಗಳು ಆದಯ್ಯನು ವಾಣಿಜ್ಯ ನಿಮಿತ್ತದಿಂದ ಪುಲಿಗೆರೆಗೆ ಬಂದನು ಎಂಬುದನ್ನು ಉಲ್ಲೇಖಸುತ್ತವೆ. ಹರಿಹರನ ಹೇಳಿಕೆಯಲ್ಲಿ ಅಣ್ಣಿಗೇರಿ ಮತ್ತು ಪುಲಿಗೆರೆಗಳು ವಾಣಿಜ್ಯ ಕೇಂದ್ರಗಳಾಗಿದ್ದವು ಎಂಬುದು ತಿಳಿದು ಬರುತ್ತದೆ. ಶಾಸನಗಳು ಇದನ್ನು ಸಮರ್ಥಿಸುತ್ತವೆ.

೫. ಹೋಜೇಶ್ವರ ದೇವಾಲಯ:  ಆದಿಶೆಟ್ಟಿಯು ಜೈನ ಕೇಂದ್ರವಾಗಿದ್ದ ಪುಲಿಗೆರೆಗೆ ಬಂದಾಗ, ಮೊರಡಿಗಳ ನಡುವೆ ಮಂದರ ಬಕಂಗಳ ನಡುವೆಯರ ಹಂಸೆಯಿಪ್ಪಂತೆ  ಬಸದಿ ಹಲವರ ನಡುವೆ, ಇರುವ ಹೋಜೇಶ್ವರ ದೇವಾಲಯದಲ್ಲಿ ಇಳಿದು ಕೊಂಡಿದ್ದ ಎಂಬುದು ಸೋಮನಾಥ ಚಾರಿತ್ರದಲ್ಲಿ ವ್ಯಕ್ತವಾಗಿದೆ. ಹೋಜೇಶ್ವರ ದೇವಾಲಯವು ಶೈವ ಕ್ಷೇತ್ರವಾಗಿದ್ದು ಅತಿ ಪುರಾತನವೆಂದೆನಿಸಿತ್ತು. ಪ್ರಾಚೀನ ಕಾಲದಿಂದಲೂ ಹೋಜೇಶ್ವರ ದೇವಾಲಯ ಇದ್ದಿತು ಎಂಬುದಕ್ಕೆ ಶಾಸನಗಳಲ್ಲಿ ಉಲ್ಲೇಖ ಇದೆ. ಇಂದಿಗೂ ಲಕ್ಷ್ಮೇಶ್ವರದಲ್ಲಿ ಹೋಜೇಶ್ವರ ದೇವಾಲಯ ಇದ್ದು ವಾಜೇಶ್ವರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ.

೬. ಪದ್ಮಾವತಿ ಪ್ರಸಂಗ :   ಪದ್ಮಾವತಿಯ ಜನನದ ಬಗೆಗೆ ಹರಿಹರನು ಪೌರಾಣಿಕ ಹಿನ್ನಲೆಯನ್ನು ಕಲ್ಪಿಸಿ `ಸುರಕನ್ಯೆ' ಎಂದಿದ್ದು, ಜೈನಳಾಗಿದ್ದರೂ ಶೈವಮತದವಳು ಎಂಬ ಭಾವನೆಯಿಟ್ಟು ಚಿತ್ರಿಸಿದ್ದಾನೆ. ಪದ್ಮಾವತಿ ತಂದೆಯು ಪಾರಿಸ ಪಂಡಿತ ಎಂದಿದ್ದು ತಾಯಿಯ ಹೆಸರಿನ ಉಲ್ಲೇಖವಿಲ್ಲ. ಆದಯ್ಯನು ಪಟ್ಟಣಮಂ ನೋಡಲ್ಪೊರ ಮಟ್ಟಂ ಮೆಲ್ಲನೆ ಪುರವೀಧಿಯೊಳಂ ಬರುತಿರೆ ಹಂಗುಳಿಗೆಯ ಮೇಲಿರ್ದ ಪದ್ಮಾವತಿಯಂ ಬೋಂಕನೆ ಕಂಡು ಸ್ನೇಹಂ ಕವಿದಾರ್ತಂ ತಲೆದೋರಿ ಮೋಹಪರವಶನಾಗುತ್ತಾನೆ. ಆದಯ್ಯ ಮತ್ತು ಪದ್ಮಾವತಿಯರ ಪ್ರಥಮ ಭೇಟಿಯ ಬಗೆಗೆ ಇಲ್ಲಿ ಯಾವುದೇ ಹಿನ್ನಲೆ ಕಂಡುಬಂದಿಲ್ಲ. ಪ್ರಥಮ ನೋಟದಲ್ಲಿಯೇ ಪರವಶನಾಗಿ ಸೋಮನಾಥನ ಸ್ಮರಣೆಯಿಂದ ರತಿಸುಖದಲ್ಲಿ ತಲ್ಲೀನರಾಗುತ್ತಾರೆ. ಅವರೀರ್ವರೂ ದಾಂಪತ್ಯ ಸುಖದಲ್ಲಿ ಮನಸಿಲ್ಲದೆ ಕಲಹಂ, ಕೋಪವಿಲ್ಲದೆ ಖಾತೆ, ಭಂಗವಿಲ್ಲದ ಸೋಲಂ, ಭಾರವಿಲ್ಲದ ಬಳಲಿಕೆ, ನಿದ್ರೆಯಿಲ್ಲದ ನಿಡುಸುಯಿ, ತಣಿವಿಲ್ಲದ ತೃಪ್ತಿ, ಅಗಲ್ಕೆಯಿಲ್ಲದ ವಿರಹಾತುವರಿಸಿದಂತಿದ್ದರು (ಪು. ೩೨ಂ). ಹರಿಹರನ ಕೃತಿಯಲ್ಲಿ ಶೈವಮತದ ಆದಯ್ಯ ಮತ್ತು ಸುರಹೊನ್ನೆ ಬಸದಿಯ ಪೂಜಾರಿಯ ಮಗಳು ಪದ್ಮಾವತಿಯರ ವಿವಾಹ ಪ್ರಸಂಗವನ್ನು ತೇಲಿಸಿ ಬಿಟ್ಟಿರುವುದು ಇಬ್ಬರೂ ಪ್ರೇಮಿಗಳಂತೆ ಚಿತ್ರಿಸಲ್ಪಟ್ಟಿದ್ದಾರೆ. ಪ್ರಮುಖ ಜೈನಬಸದಿಯ ಅರ್ಚಕರ ಮಗಳೊಬ್ಬಳು ಶರಣಮತದ ವ್ಯಕ್ತಿಯನ್ನು ಜೈನರೇ ಹೆಚ್ಚಾಗಿರುವ ಆ ಪಟ್ಟಣದಲ್ಲಿ ವಿವಾಹವಾಗುವುದು ಕಲಹಕ್ಕೆ ಎಡೆ ಮಾಡಿಕೊಟ್ಟಿರಬೇಕು ಎಂದೆನಿಸುತ್ತದೆ. ಆದಯ್ಯ ಮತ್ತು ಪದ್ಮಾವತಿರೀರ್ವರಿಗೂ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗುತ್ತದೆ ಕೆಳೆಯರೆಡೆಯಾಡಿ ಮಾತಾಡಿ ಕೂಡಿದರವರನೆಸೆವ ಸೆಜ್ಜೆಯ ಮನೆಯೊಳೆ ಉಭಯರೂ ಇದ್ದು ಗಳಿಗಿಯಿದು ಜಾವವಿದು, ದಿವಸವಿದು, ಪಕ್ಷವಿದು, ಮಾಸವೆಂದಿನಿಪ್ಪುದರಿಯದಮಮ ತಮಗೊದವಿದ  ಮಹಾ ಸುಖದೊಳೆಂದೆರಡು ತಿಂಗಳನುಭವಿಸುತ್ತಿರ್ದು ನಂತರ

ಶಶಿವದನೆ ನೀನಾರು ಮಗಳು ತಾಯ್ತಂದೆಗಳ

ಹೆಸರಾವುದಾವ ಕಾಯಕವಾವ ವರ್ಣವ

ರ್ಚಿಸುವ ದೇವತೆ ಯಾವುದೆನಿಬರೊಡ ಹುಟ್ಟಿದರು ಪೇಳಿ (ಸಂ.- ಪ.೫೬)

ಎಂದು ಕೇಳುತ್ತಾನೆ. ಇಲ್ಲೆಲ್ಲಾ ಆದಯ್ಯನು ಕಾರಣಿಕನಂತೆ ಗೋಚರಿಸದೆ ಸಾಮಾನ್ಯ ಹುಲುಮಾನವನಂತೆ ಗೋಚರಿಸಿರುವುದು ಕಂಡುಬರುತ್ತದೆ. ಆದಯ್ಯನಿಗೆ ವಿವಾಹವಾಗಿತ್ತೆಂದು ಮೊದಲು ತಿಳಿಸಿ ನಂತರ ಪದ್ಮಾವತಿಯನ್ನು ಕಂಡು ಪ್ರೇಮಾತುರದಿಂದ ವರ್ತಿಸಿದಂತೆ ಚಿತ್ರಿಸಿರುವುದು ಆದಯ್ಯನ ಘನತೆಗೆ ಕುಂದು ಎನಿಸುತ್ತದೆ. ಆದಯ್ಯ ಮತ್ತು ಪದ್ಮಾವತಿಯ ಪ್ರಣಯ ಪ್ರಸಂಗದಲ್ಲಿ ಆದಯ್ಯನ ಕಾರಣಿಕತೆಗೆ ಭಂಗ ಬರುವಂತೆ ಚಿತ್ರಿಸಿದರೂ ಇದುವೇ ಮುಂದಿನ ಆತನ ಮಹತ್ತರ ಉದ್ದೇಶ್ಯಕ್ಕೆ ಮೂಲ ಪ್ರಚೋದನೆ ಒದಗಿಸಿದೆ ಎಂಬುದನ್ನು ಮರೆಯಬಾರದು.

ಆದಯ್ಯನ ಪ್ರಶ್ನೆಗೆ ಪದ್ಮಾವತಿಯು....ಎಮ್ಮಯ್ಯ ಪಾರಿಸ ಶೆಟ್ಟಿಯೆಂದು ಪೆಸರೊಬ್ಬಳೇ ಮಗಳು ತಾನೆಸೆವರುಹ ತಮ್ಮೊಡೆಯ ಜೈನಮತ ನಮ್ಮದೆಂದಾಡಿದಳು. ವಿಷಯ ಆಲಿಸಿದ ಆದಯ್ಯನಿಗೆ ನಾಚಿಕೆಯಾಗಿ ನರಕಕ್ಕೆ ನಾಚಿದೀ ದೇಹ, ಮೋಹದಿ ಭವಿಯ ಬೆರೆಸಿದೆನು ಎಂದು ತನಗೆ ತಾನೆ ಹೇಸುತ,

ಪಿರಿದು ದುರ್ವ್ಯಸನವೇ ಪೊತ್ತು ತನಗುಂಟಂದು

ವರ ಪರಮ ಭಕ್ತಿಯಳವಡದವಂ ಗೆಂಬುದಿದು

ಪರವಾಕ್ಯ.....   (ಸಂ.- ಪ.೫೭)

ಎಂದು ವ್ಯಥೆ ಪಡುತ್ತಾನೆ.

ಒಂದೆರಡು ದಿವಸವಾ ನೆವವ ಹಿಂದಿಕ್ಕಿ ಸುಖ

ದಿಂದರು ತೂರ್ಗೆ ಪೋದಪೆನೆಂದಡ   (ಸಂ.- ಪ.೫೮)

ಆಕೆಗೆ ತಿಳಿಸಿದಾಗ ಹವ್ವನೆ ಹಾರಿ, ಕೊಂದು ಹೋಗಲ್ಲದೊಡೆ ಕೊಂಡು ಹೋಗು, ಇರಲಾರೆ ಎಂದು ಗೋಗರೆದಾಗ ಆದಯ್ಯನು ಮೃಡಭಕ್ತೆ ಯಾಗೆಂದು ಸೂಚಿಸಿದಾಗ ಮರು ಮಾತಿಲ್ಲದೆ ಒಪ್ಪುತ್ತಾಳೆ. ಆದಯ್ಯನು ಶಿವಪೌರಾಣ ಪರಿಚಿತ ಗಣಾಧೀಶರಪ್ಪ ಹೋಜೇಶ್ವರದ ಹಿರಿಯ ಮೊದಲಾಚಾರ್ಯರಿಂ ದೀಕ್ಷೆಯಂ ಕೊಡಿಸಿ ಅವಳನ್ನು ಶೈವಳನ್ನಾಗಿಸುತ್ತಾನೆ. ನಿಜಾಂಶ ತಿಳಿದ ನಂತರ ಪದ್ಮಾವತಿಯನ್ನು ಬಿಟ್ಟು ಹೋಗುವ ಮನಸ್ಸು ಮಾಡುತ್ತಾನೆಯೇ ಹೊರತು ಸ್ವೀಕರಿಸುವುದಿಲ್ಲ. ಕೊನೆಗೆ ಪದ್ಮಾವತಿಯು ಕೊಂದು ಹೋಗಲ್ಲದೊಡೆ ಕೊಂಡು ಹೋಗು ಎಂದು ಕಾಡಿದಾಗ ವಿಧಿಯಿಲ್ಲದೆ ಶಿವಭಕ್ತಳನ್ನಾಗಿಸುತ್ತಾನೆ. ಈ ಪ್ರಸಂಗದಲ್ಲಿ ಆಗಿನ ಕಾಲಕ್ಕೆ ಅನ್ಯಮತವ ಸ್ವೀಕರಿಸಲು ಹೊರಟಾಗ ಉಂಟಾಗುವ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ವಿಚಾರಿಸುವ ಅಂಶ ಮಹತ್ವ ಪೂರ್ಣದ್ದು ಎಂದೆನಿಸುತ್ತದೆ.

೭. ಮೃಡಭಕ್ತರ ಭೇಟಿಯ ಪ್ರಸಂಗ : ಹರಿಹರನ ರಗಳೆಯಲ್ಲಿ, ಆದಯ್ಯ ಪದ್ಮಾವತಿಯರು ಪುಲಿಗೆರೆಯ ಹೊರಗಣ ಭಾಗದಲ್ಲಿ ವಿನೋದದಿಂದ ಕಾಲ ಕಳೆಯುತ್ತಿರುವಾಗ `ನೀಳ್ದ ಕೆಂಜೆಡೆಯಿಂ ತಾಳ್ದ ಕುಂಡಲದಿಂ ತೊಟ್ಟು ಪುಲಿದೊಲಿವಂ ತೊಟ್ಟು ರುದ್ರಾಕ್ಷೆಯಿಂದಿಟ್ಟು ಭಸಿತದಿಂ ಹೊಳೆವ ಕಣ್ಗಳಿಂ......' ಸತ್ಯದಂತೆ ಪುಣ್ಯದಂತೆ, ಭಕ್ತಿಯಂತೆ ಬರುತಿಪ್ಪ ತಪೋಧನ ಮೂವರನ್ನು ಕಾಣುತ್ತಾನೆ.

೮. ಸೌರಾಷ್ಟ್ರದಿಂದ ಸೋಮೇಶನನ್ನು ಹುಲಿಗೆರೆಗೆ ಕರೆತಂದು ಪ್ರತಿಷ್ಠಾಪಿಸಲು ಕಾರಣಕರ್ತ ಪ್ರಸಂಗ: ಆದಯ್ಯನು ಸೌರಾಷ್ಟ್ರದಿಂದ ಸೋಮೇಶನನ್ನು ಹುಲಿಗೆರೆಯ ಸುರಹೊನ್ನೆಯ ಬಸದಿಗೆ ಕರೆತಂದು ಪ್ರತಿಷ್ಠಾಪಿಸಿ ಜೈನಬಸದಿಯನ್ನು ಶಿವಾಲಯವನ್ನಾಗಿ ರೂಪಿಸಲು ಪ್ರೇರಕ ಪ್ರಸಂಗ ಕಾವ್ಯ ಪುರಾಣಗಳಲ್ಲಿ ಭಿನ್ನತೆಯಿಂದ ಕೂಡಿದ್ದರೂ ಮೂಲ ಉದ್ದೇಶ ಒಂದೇ ಆಗಿದೆ.

ಸೋಮನಾಥ ಚಾರಿತ್ರದಲ್ಲಿ, ಶೈವರಿಗೆಂದು ಸಿದ್ಧಪಡಿಸಿದ ಬೋನಮಂ ಕೊಂಡದಕ್ಕಕ್ಕಿಯಂ ಕೊಡುವೆವೆಂದು ಬಲಾತ್ಕಾರದಿಂದ ಕೊಂಡೊಯ್ದರು ಎಂದಿದೆ. ಶೈವಗೊರವರಿಗೆ ಆದ ಅನ್ಯಾಯಕ್ಕೆ ನೊಂದು ಫಲಾಹಾರಗಳನ್ನಿತ್ತು ಸತ್ಕರಿಸಿ ಕಳುಹಿಸಿ ನಿತ್ಯನೇಮಮಂ ಮಾಡಿ ಆರೋಗಿಸದೆ ಸೆಜ್ಜೆಯ ಮನೆಯಲ್ಲಿ ಮುಸುಕಿಟ್ಟು ಮಲಗುತ್ತಾನೆ. ಪದ್ಮಾವತಿಯ ಮೇಲಿನ ಮೋಹದಿಂ ಆಕೆಯ ತಂದೆ ತಾಯಿಗಳು ಎಬ್ಬಿಸಿದಾಗ ಆದಯ್ಯನನ್ನು ತನಗಾದ ಅಪಮಾನಕ್ಕೆ,

ಇನ್ನೇತರೂಟವೇತರ ಮೀಹ ವೇತರಿರ

ವಿನ್ನೇಕೆ ಜೀವಿಸುವ ಕಕ್ಕುಲಿತೆಯಾಸೆಗಳು

ಪನ್ನಗಾಭರಣನಣುಗರು ಹಸಿದು ಬಸವಳಿದು ಬೆಂಡಾಗಿ ಹೋದರದಕೆ(ಸಂ.-ಪ.ಸಂ.೭)

 ಎಂದು ಕಾರಣವನ್ನು ತಿಳಿಸುತ್ತಾನೆ. ಅವರೀರ್ವರ ನಡುವೆ ಜೈನಶೈವಮತದ ಬಗೆಗೆ ವಾಗ್ವಾದ ನಡೆಯುತ್ತದೆ ಕೊನೆಗೆ ಪಾರಿಸ ಪಂಡಿತನು ವ್ಯಂಗ್ಯದಿಂದ,

ತನ್ನ ದೇವರನು ತಂದೆಮ್ಮ ಹುಲಿಗೆರೆಯ ಸುರ

ಹೊನ್ನೆಯ ಮಹಾಬಸದಿಯೊಳು ನಿಲಿಸಿ ಬಳಿಕಾನು ಮೊದಲಾದ ಜೈನ ಕುಲವ

ಬನ್ನಮಂ ಬಡಿಸಿ ಹಲಕೆಲಬರೊಕ್ಕಲ ನೊರಸ

ದನ್ನಬರ ಮರೆದುಣ್ಣನತಿ ಮೂರ್ಖನೆಂದು....    (ಸಂ.-ಪ.ಸಂ.೧೧೧)

ಕಟಕಿಯಾಡುತ್ತಾನೆ. ತನ್ನ ಮಾವನಾಡಿದ ವ್ಯಂಗ್ಯೋಕ್ತಿಯೇ ಆದಯ್ಯನಿಗೆ.

೧.    ಹರನಿಲ್ಲಿಗೆ ಬರಿಸುವುದು

೨.    ಹರದೂಷಕರ ನೊರಸುವುದು

೩.    ಹರಮತವನುದ್ಧರಿಸುವುದು ಈ ಮೂರು ಕಾರ್ಯಗಳನ್ನು ಕೈಗೊಳ್ಳಲು ಪ್ರೇರಕವಾಗುತ್ತದೆ.

`ತಿಂಗಳಂದಿಂಗದಾವೂರ ದೇವರೆನೆ ಸೌರಾಷ್ಟ್ರ ಮಂದಿರ ಸುಖಾಸೀನನಂ ತಹೆನು ತಾರದಿರೆ ಬಾರನೆಂದಣಕಿಸುತಿರೆ' ಶಪಥದಿಂದ ಒಂದು ತಿಂಗಳಲ್ಲಿ ತರುವನೆಂದು ಕಾರ್ಯ ತತ್ಪರನಾಗುತ್ತಾನೆ.

ಆದಯ್ಯನಿಗೆ ಸೌರಾಷ್ಟ್ರದ ಸೋಮೇಶನ ತಂದು ಪುಲಿಗೆರೆಯಲ್ಲಿ ಪ್ರತಿಷ್ಠಾಪಿಸಲು ಒದಗಿದ ಪ್ರಚೋದನೆ ಅಷ್ಟು ಮಹತ್ವದ್ದು ಎಂದೆನಿಸುವುದಿಲ್ಲ. ಇಲ್ಲಿ ಮಾವ-ಅಳಿಯರ ವಾಗ್ವಾದ ಲೌಕಿಕ ಜಗತ್ತಿನಲ್ಲಿ ನಡೆಯುವ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. ಆದಯ್ಯನ ಸಮಯಾಭಿಮಾನ ಕೆರಳಿ ಉಗ್ರಭಕ್ತಿಯ ಮಹತ್ವದ ಕಾರ್ಯಕ್ಕೆ ಸಿದ್ಧನಾಗಲು ಈ ಘಟನೆ ಸಾಂಕೇತಿಕ ಕ್ರಿಯೆಯಾಗಿ ಪರಿಣಮಿಸಿದೆ. ಈ ಪ್ರಸಂಗದಲ್ಲಿ ಸಾಮಾನ್ಯನಂತೆ ಕಾಣಬರುತ್ತಿದ್ದ  ಆದಯ್ಯನನ್ನು ಮಾವನ ಕಟೂಕ್ತಿಗಳು ಘಾಸಿಗೊಳಿಸಿ ಸುಪ್ತವಾಗಿದ್ದ ಕಾರಣಿಕತನವನ್ನು ಬಡಿದೆಬ್ಬಿಸಿರುವುದನ್ನು ಕಾಣಬಹುದು.

೯. ಸೌರಾಷ್ಟ್ರದ ಸೋಮೇಶನನ್ನು ಪ್ರತಿಷ್ಠಾಪಿಸಲು ಪಡೆದ ಗಡುವಿನ ವಿವರ: ಆದಯ್ಯನು ಸೌರಾಷ್ಟ್ರದ ಸೋಮೇಶ್ವರನನ್ನು ತಂದು ಸುರಹೊನ್ನೆ ಬಸದಿಯಲ್ಲಿ ಪ್ರತಿಷ್ಠಾಪಿಸಲು ಬೇಕಾದ ಗಡುವು ಇಪ್ಪತ್ತೆಂಟು ದಿವಸವೆಂದು ಹರಿಹರನ ರಗಳೆಯಲ್ಲಿಯೂ, ಒಂದು ತಿಂಗಳೆಂದು ಸೋಮನಾಥ ಚಾರಿತ್ರದಲ್ಲಿಯೂಉಲ್ಲೇಖವಿದೆ.

. ವೃದ್ಧ ಮಾಹೇಶ್ವರ ಅಥವಾ ಪಶುಯತೀಶ್ವರ ಪ್ರಸಂಗ: 

 ಆದಿಶೆಟ್ಟಿಯು ತನ್ನ ಪ್ರತಿಜ್ಞೆಯನ್ನು ನೆರವೇರಿಸಲು ಕಾರ್ಯತತ್ಫರನಾಗಿ ದಟ್ಟಡವಿಯಲ್ಲಿ ಏಕಾಂಗಿಯಾಗಿ ಹೊರಟಾಗ ಪಶುಯತೀಶ್ವರನನ್ನು ಭೇಟಿ ಮಾಡಿದ ಉಲ್ಲೇಖ ಕಂಡುಬರುತ್ತದೆ.

ಕಡುಗಿ ಬರುತಿಪ್ಪಾದಿಮಯ್ಯನತಿ ನಿಷ್ಠೆಯಂ

ತುಡುಕಿ ನೋಡುವೆನೆಂದು ಮನದಂದು ಸೌರಾಷ್ಟ್ರ

ದೊಡೆಯ ಪಶುಪತಿಯತೀಶ್ವರ ನಾಮಮಂ ತಳೆದು (ಸಂ.೩-ಪ.೧೨೦)

ಪರೀಕ್ಷಿಸಲು ಬರುತ್ತಾನೆ.

ಏಕಾಂಗಿಯಾಗಿ ದಟ್ಟಡವಿಯಲ್ಲಿ ಬರುತ್ತಿದ್ದ ಆದಯ್ಯನ ಪೂರ್ವಾಪರಗಳನ್ನು ವಿಚಾರಿಸಿದ ಮುನಿಯು, ಜೊತೆ ಜೊತೆಯಾಗಿ ಊಟಮಾಡಲು ಹೇಳಿದಾಗ `ಸೊಕ್ಕಿರ್ದ ಹುಲಿಗೆರೆಗೆ ಸೊಡ್ಡಳನ ನೊಯಿದಲ್ಲದಿಕ್ಕೆನೊಡಲೊಳಗನ್ನ ರಸವ....' ಎಂದು ತನ್ನ ಪ್ರತಿಜ್ಞೆಯನ್ನು ಅರಹುತ್ತಾನೆ. ಅವರೀರ್ವರ ನಡುವೆ ಆ ವಿಷಯದ ಸಂಭಾಷಣೆ ನಡೆಯುತ್ತದೆ. ಇಲ್ಲಿನ ತಾರ್ಕಿಕವಾದ ಸಂಭಾಷಣೆಯು ಅರ್ಥಪೂರ್ಣವಾಗಿದೆ. ಈ ಸಂಭಾಷಣೆಯಲ್ಲಿಯ ಒಂದು ಅಂಶ ಮುಖ್ಯವಾದುದು.ಅಂಗದ ಮೇಲೆ ಶಿವಲಿಂಗ ಬಾಯಲ್ಲಿ ಶಿವಮಂತ್ರ, ಹಣೆಯಲ್ಲಿ ಭಸಿತ, ಕೊರಳಲ್ಲಿ ರುದ್ರಾಕ್ಷಿ ಇತ್ಯಾದಿಗಳ ಹೇಳಿಕೆ ಬಸವಾದಿ ಪ್ರಮಥರು ಸೂಚಿಸಿರುವ ವೀರಶೈವ ಸಿದ್ಧಾಂತದ ಜಂಗಮ ಲಿಂಗವನ್ನು ಪ್ರತಿನಿಧಿಸುತ್ತದೆ. ಈ ರೀತಿ ಇದ್ದರೂ ಯತಿಯು, ಶಿವಲಿಂಗವನ್ನು ಸ್ಥಾಪಿಸುವ ಹವ್ಯಾಸವು ನಿನಗೇತಕೆ ಎಂದು ಕೇಳಿದುದಕ್ಕೆ ಆದಯ್ಯನು ಎನ್ನ ದೇಹಾಭಿಮಾನ ನಿಮಿತ್ತಮಾಡೆ ಎನ್ನ ಸಮಯಾಭಿಮಾನದ ನಿಮಿತ್ತ ಮಾಡುತ್ತಿದ್ದೇನೆ. ಈ ರೀತಿ ಮಾಡಿದರೆ ದೋಷವಿಲ್ಲ  ಎನ್ನುತ್ತಾನೆ. ಈ ಹೇಳಿಕೆಯಲ್ಲಿ ಆದಯ್ಯನಿಗೆ ಮುಕ್ತಿಗಾಗಿ ಜಂಗಮತ್ವವಿದ್ದು ಶೈವಮತದ ಅಭಿಮಾನಕ್ಕೋಸ್ಕರ ಸ್ಥಾವರ ಲಿಂಗವನ್ನು ಪ್ರತಿಪಾದಿಸಿದ ಉದ್ದೇಶ್ಯ ಇದೆ ಎಂಬ ಅಂಶವು ಗ್ರಹೀತವಾಗಿರುವುದನ್ನು ಕಾಣಬಹುದು. ಈ ಹೇಳಿಕೆಯನ್ನು ತಕ್ಕ ಮಟ್ಟಿಗೆ ವಸ್ತುಸ್ಥಿತಿಯ ನೆಲೆಯಲ್ಲಿ ಭಾವಿಸುವುದಾದರೆ ವಚನಕಾರ ಆದಯ್ಯ ಮತ್ತು ಪುಲಿಗೆರೆಯಲ್ಲಿ ಸೌರಾಷ್ಟ್ರದ ಸೋಮೇಶನನ್ನು ತಂದು ಪ್ರತಿಷ್ಠಾಪಿಸಿದ ಆದಯ್ಯರೀರ್ವರೂ ಒಬ್ಬರೇ ಎಂದೆನಿಸುತ್ತದೆ.

ಆದಯ್ಯನ ಮಾತಿನಿಂದ ಮೆಚ್ಚಿಗೊಂಡ ಶಿವನು,

ಮಾತಿನೊಳು ನೀತಿಯೊಳು ಬುದ್ಧಿಯೊಳು ಸಿದ್ಧಿಯೊಳು

ಚಾತುರ್ಯದೊಳು ನಿಧಾನ ವಿಚಾರದೊಳು ಗುಣ

ಆತುರಿಸಿ ಕಾಡುವೆನ್ನಂಡಲೆಗೆ ಕಂಟಣಿಸ ದೀತನಲ್ಲದೆ ನಿಲುವರಾರೆಂದು......  (ಸಂ.-ಪ.ಸಂ೪೬)

ಹೊಗಳುತ್ತಾನೆ. ಈ ಪದ್ಯದಲ್ಲಿ ಆದಯ್ಯನ ವ್ಯಕ್ತಿತ್ವದ ಎಲ್ಲಾ ಮುಖಗಳ ಪರಿಚಯ ಸ್ಥೂಲವಾಗಿ ವ್ಯಕ್ತವಾಗಿದೆ ಎನ್ನಬಹುದು. ಇದಾದ ನಂತರವು ಆದಯ್ಯನ ನಿಷ್ಠೆಯನ್ನು ಪರೀಕ್ಷಿಸಬೇಕೆಂದು ಕಾಡಿಸುತ್ತ ಭಕ್ತವೇಷದ ಶಿವನು, ಎಲ್ಲಿಯೂ ಭಕ್ತನನ್ನು ಕಾಣದೆ ನಿನ್ನಲ್ಲಿಗೆ ಬಂದೆ, ತೆಗೆದುಕೋ ಮೊಸರೋಗರವ ಎಂದು ಅಡ್ಡಗಟ್ಟಿ ತುಡುಕಿ ಹಿಡಿದಾಗ ಒಲ್ಲೆ ಒಲ್ಲೆನುತ `ಮೃಡ ಸೋಮನಾಥನಂ ತಂದ ಬಳಿಕಲ್ಲದಿನ್ನೆಡೆಯೊಳವಡದೆನೆಗೆ ಎಂದು ಆದಯ್ಯನು ಸಾಗುವನು. ಶಿವನ ಪರೀಕ್ಷೆ ಭಕ್ತನ ಮುಂದೆ ಸೋಲನ್ನಪ್ಪಿ, ನಿಜರೂಪು ತೋರುವನು.

೧೧. ಆದಯ್ಯನ ಆಗಮನ: ಶಿವದರ್ಶನ ಪಡೆದ ಆದಯ್ಯನನ್ನು

...........ನೀ ನೀ ಮಹಾವೃಕ್ಷದ

ಅಡಿಯೊಳೊಯ್ಯನೆ ವಿಶ್ರಮಿಸೆ ನಿನ್ನ ಹುಲಿಗೆರೆಯ

ಬಡಗಣ ತಟಾಕ ದೇರಿಯ ಮೇಲೆ ಬಿಡುವನೆಂದು...    (ಸಂ-ಪ.೪)

ಹುಲಿಗೆರೆಗೆ ಕ್ಷಣಮಾತ್ರದಲ್ಲಿ ಕರೆತರುತ್ತಾನೆ ಎಂಬ ವಿವರ ಸೋಮನಾಥ ಚಾರಿತ್ರದಲ್ಲಿದೆ.

ಎಂದಿದೆ. ಹುಲಿಗೆರೆಗೆ ಬಂದಿಳಿದ ಆದಯ್ಯನನ್ನು ಪದ್ಮಾವತಿಯು ಎದುರುಗೊಂಡು ಮನೆಗೆ ಕರೆದೊಯ್ಯುತ್ತಾಳೆ.

೧೨. ಪುಲಿಗೆರೆ ಸೋಮೇಶನು ಆಗಮಿಸಿದ ದಿನ ಮತ್ತು ಕುರುಹುಗಳು: ಸೋಮನಾಥ ಚಾರಿತ್ರದಲ್ಲಿ ಶಿವನು ಪುಲಿಗೆರೆಯ ಸುರಹೊನ್ನೆಯ ಬಸದಿಯಲ್ಲಿ ಒಡಮೂಡುವುದಕ್ಕೆ ಸಮ್ಮತಿಸಿದಾಗ ಆಗಮಿಸುವ ದಿನ ಮತ್ತು ಕುರುಹುಗಳನ್ನು ಆದಯ್ಯ ಕೇಳಿದಾಗ,

`ತವೆ ಚೈತ್ರ ಶುದ್ಧ ಚಾತುರ್ದಶಿಯ ಸೋಮವಾ

ರವು ನಾಳೆ ಮಧ್ಯ ರಾತ್ರಿಯೊಳು ಬಂದೆಪ್ಪವೆನೆ

..........ಉದಯ ಸಮಯದೊಳು ಬಂದ

ಸವಣರ್ಗೆ ಕದವ ತೆರೆಯದುದೊಂದು ಹಲಕಾಲ

ನವೆವು ತಲ್ಲಿರ್ದ ಹೆಳವಂಗೆ ಕಾಲ್ಕುರುಡಂಗೆ

ನವನಯನ ಬರಲೆರಡು ನಿನ್ನಿಂದ ಕದದೆರೆದಪುದು (ಸಂ.-ಪ.೬)

ಎಂದು ಬರುವ ದಿನ ಮತ್ತು ಮೂರು ಕುರುಹಗಳನ್ನು ಹೇಳುತ್ತಾನೆ.

೧೩. ಸುರಹೊನ್ನೆ ಬಸದಿಯಲ್ಲಿ ಒಡಮೂಡಿದ ಸೋಮೇಶ್ವರ ವಿವರ: ಸೌರಾಷ್ಟ್ರದ ಸೋಮೇಶನು ಪುಲಿಗೆರೆಯ ಸುರಹೊನ್ನೆಯ ಬಸದಿಯಲ್ಲಿ ನೆಲಸಿದ ವಿವರ ಎಲ್ಲಾ ಕಾವ್ಯಪುರಾಣಗಳಲ್ಲಿ ಹಲವಾರು ಮಾರ್ಪಾಡುಗಳೊಡನೆ ಚಿತ್ರಿತವಾಗಿದ್ದರೂ ಮೂಲತಃ ಒಂದೇ ಎಂದೆನಿಸುತ್ತದೆ. ಕಾವ್ಯಗಳಲ್ಲಿ ಬಣ್ಣಿಸಿರುವ ಲಕ್ಷಣಗಳನ್ನು ಒಳಗೊಂಡಿರುವ ಸೋಮೇಶ್ವರನ ವಿಗ್ರಹ ಈಗಲೂ ಲಕ್ಷ್ಮೇಶ್ವರದಲ್ಲಿದೆ. ಆದಯ್ಯ ಅಥವಾ ಸೋಮಯ್ಯನು ಪುಲಿಗೆರೆಯ ಸುರಹೊನ್ನೆ ಬಸದಿಗೆ ಸೌರಾಷ್ಟ್ರದ ಸೋಮೇಶನನ್ನು ತಂದು ಪ್ರತಿಷ್ಠಾಪಿಸಲು ಒದಗಿದ ಪ್ರಚೋದನೆಗೆ ಕಾವ್ಯಗಳಲ್ಲಿ ವಿಭಿನ್ನವಾಗಿದ್ದರೂ ಸುರಹೊನ್ನೆ ಬಸದಿಯಲ್ಲಿ ಮೂಡಿದ ಸೋಮೇಶ್ವರ ವಿವರ ಒಂದೇ ಆಗಿದೆ.

`ಪುಲಿಗೆರೆಯ ಸೋಮೇಶ್ವರ ಮೂರ್ತಿಯಲ್ಲಿ, ನಂದಿಯ ಮೇಲೆ ಮುಂದೆ ಶಿವ ಹಿಂದೆ ಪಾರ್ವತಿ ಕುಳಿತಿದ್ದಾರೆ. ಪಾರ್ವತಿಯು ಆಧಾರವಾಗಿ ಎಡಗೈಯಿಂದ ಶಿವನನ್ನು ಅಪ್ಪಿ ಕುಳಿತಿದ್ದಾಳೆ. ಬಲಗೈಯಲ್ಲಿ ಸೀತಾಫಲವನ್ನು ಹೋಲುವ ಫಲವಿದೆ. ತಲೆ ಮುಕುಟಮಯವಾಗಿದೆ. ಕೊರಳಲ್ಲಿ ಆಭರಣಗಳು ಕೆತ್ತಲ್ಪಟ್ಟಿವೆ. ಕಿವಿಯಲ್ಲಿ ಕುಂಡಲ ಕೆತ್ತಲ್ಪಟ್ಟಿವೆ. ನಾಲ್ಕು ಕೈಗಳಿದ್ದು, ಬಲದ ಮೇಲಿನ ಹಸ್ತದಲ್ಲಿ ತ್ರಿಶೂಲ, ಕೆಳಗಿನ ಹಸ್ತದಲ್ಲಿ ಅಕ್ಷಮಾಲೆ ಇದೆ. ಎಡದ ಮೇಲಿನ ಹಸ್ತದಲ್ಲಿ ಡಮರು, ಕೆಳಗಿನ ಹಸ್ತದಲ್ಲಿ ಫಲ ಇದೆ. ಮೇಲ್ನೋಟಕ್ಕೆ ಇದು ಶಿವನ ಮೂರ್ತಿಯೇ ಎಂಬ ಸಂದೇಹ ನಮಗನ್ನಿಸಿದರೂ, ಶೈವಪುರಾಣಗಳಲ್ಲಿ ಹೇಳಿರುವ ಶಿವನ ಲಕ್ಷಣಗಳಿಗನುಗುಣವಾಗಿ ಪರಿಶೀಲಿಸಿದರೆ ಇದು ಗಿರಿಜಾ ಕಲ್ಯಾಣ ಲೀಲೆಯನ್ನುನುಸರಿಸಿ ಕೆತ್ತಿದ ಶಿವಮೂರ್ತಿ ಎಂದೆನಿಸುತ್ತದೆ.

೧೪. ಹೋರಾಟದ ಪ್ರಸಂಗ: ಹರಿಹರನ ರಗಳೆಯಲ್ಲಿ ಆದಯ್ಯನು ಪುಲಿಗೆರೆಯ ಸವಣರೊಡನೆ ಯುದ್ಧಮಾಡಿ ಸಂಹರಿಸಿದಾಗ ಸವಣರು ಶರಣಾಗಿ ಸೋಮನಾಥನಿಗೆರಗಿದರು ಎಂದಿದೆ.

೧೭. ಆದಯ್ಯನ ಜೀವಿತದ ಕೊನೆಯ ಘಟ್ಟ: ಪುಲಿಗೆರೆಯಲ್ಲಿ ವೀರಶೈವಮತದ ಪ್ರಸರಣದಲ್ಲಿ ಮಹತ್ತರ ಪಾತ್ರ ವಹಿಸಿದ ಆದಯ್ಯನ ಕೊನೆಯ ಕಾಲದ ಜೀವನದ ಬಗೆಗೆ ಸೋಮನಾಥ ಚಾರಿತ್ರದಲ್ಲಿ ಮಾತ್ರ ಉಲ್ಲೇಖವಿದೆ. ಆದಯ್ಯನು ಪುಲಿಗೆರೆಯಲ್ಲಿಯೇ ಕೆಲವು ಕಾಲ ಜೀವಿಸಿದ್ದು ಅಲ್ಲಿಯೇ ಸೋಮನಾಥ ದೇವಾಲಯದ ಬಲದ ಕಂಬದೊಳಗೆ ಐಕ್ಯನಾದನೆಂದು ತಿಳಿದು ಬರುತ್ತದೆ. ಈ ಹೇಳಿಕೆಯನ್ನು ಬೆಂಬಲಿಸುವಂತೆ ಇಂದಿಗೂ ಸೋಮನಾಥ ದೇವಾಲಯದ ಬಲದ ಕಂಬದ ಸಮೀಪದಲ್ಲಿ ಆದಯ್ಯನ ಗದ್ದುಗೆ ಕಂಡುಬರುತ್ತದೆ.

ಸೌರಾಷ್ಟ್ರದಲ್ಲಿ ಜನಿಸಿದ ಆದಯ್ಯನು ವ್ಯಾಪಾರ ನಿಮಿತ್ತವಾಗಿ ಅಣ್ಣಿಗೇರಿ, ಪುಲಿಗೆರೆಗಳಲ್ಲಿ ಪಯಣ ಕೈಗೊಂಡು, ಅನ್ಯಮತೀಯರ ಕಟೂಕ್ತಿಗಳಿಂದ ಘಾಸಿಗೊಂಡು ಸ್ವಸಮಯಾಭಿಮಾನದ ನಿಮಿತ್ತ ಶೈವಮತ ಪ್ರಸಾರದಲ್ಲಿ ಕಾರ್ಯೋನ್ಮುಖನಾಗಿ ಜಿನಮಯವಾಗಿದ್ದ ಪರಿಸರವನ್ನು ಶಿವಮಯವನ್ನಾಗಿ ರೂಪಿಸಿ ಅಲ್ಲಿಯೇ ಐಕ್ಯನಾಗಿದ್ದು ಮಹತ್ವದ ಸಂಗತಿಯಾಗಿದೆ.

 ೧೮.  (ಆದಯ್ಯ) ಸೋಮಣ್ಣನ ಕಥೆ:

ಹರಿಹರ, ರಾಘವಾಂಕರು ಆದಯ್ಯನ ರಗಳೆ, ಆದಿಸೆಟ್ಟಿಪುರಾಣ ಅಥವಾ ಸೋಮನಾಥನ ಚಾರಿತ್ರ ಇತ್ಯಾದಿಯಾಗಿ ಆದಯ್ಯ ಚರಿತ್ರೆಯನ್ನು ಕುರಿತು ಹೆಸರಿಸಿದ್ದಾರೆ. ಪಾಲ್ಕುರಿಕೆ ಸೋಮನಾಥನು ಆದಯ್ಯನ ಹೆಸರಿಗೆ ಬದಲಾಗಿ ಸೋಮಯ್ಯ ಎಂದು ಹೆಸರಿಸಿ ವಿದ್ವಾಂಸರು ಆದಯ್ಯ ಬೇರೆ? ಸೋಮಯ್ಯ ಬೇರೆ? ಎಂದು ಗೊಂದಲಕ್ಕೊಳಗಾಗುವಂತೆ ಮಾಡಿದ್ದಾನೆ.

ಕಥಾಸಾರ: ಹುಳಿಗರಪುರದಲ್ಲಿ ಶೂಲಿಯ ಭಕ್ತನಾದ ಸೋಮಣ್ಣ ನೆಂಬುವನು `ತ್ರಿಕಾಲದಿ ಮಾಡುವ ಲಿಂಗ ಸ್ಪರ್ಶನದ ನೇಮವ ಹೊಂದಿ ಇರುತ್ತಿರಲು ಒಂದು ದಿವಸ ಕಣ್ಬೇನೆಯಿಂದ ಕಡು ಸಂಕಟವ ಪಡುತ ಲಿಂಗವ ಕಾಣದೆ ಊಟ ಮಾಡದೆ ಇರುತ್ತಾನೆ. ಮನೆಯಲ್ಲಿ ಈತನನ್ನು ಬಿಟ್ಟು ಳಿದವರೆಲ್ಲಾ ಜೈನರಾಗಿರುತ್ತಾರೆ. ಕಣ್ಣು ಬೇನೆಯಿಂದ ನರಳುತ್ತಿದ್ದ ಸೋಮಣ್ಣನನ್ನು ಜೈನ ಮಕ್ಕಳು `ಉಣ್ಣದೆಯಿರತೇಕೆ ಗುಡಿಯೆಡೆ ಗಾವು ಕರೆದೊಯ್ಯುವೆವು ನಿನ್ನನೀಗಲೆ ಮುದದಿ' ಎನುತ ಸುರಹೊನ್ನೆ ಬಸದಿಗೆ ಕರೆತಂದು ಮೊಕ್ಕಯ್ಯ ನಿಮ್ಮ ಮುಕಣ್ಣ ನೀತನೆ ಎನಲು ಹಸ್ತದಿಂದ ತಡವಿ ಲಿಂಗವೆಂದು ಭಾವಿಸಿ ಪೂಜಿಸಲು, ಜೈನ ಮಕ್ಕಳು, ಇನ್ನೇಳು ಸಾಕು ಜಿನ ಪ್ರಸನ್ನತೆ ಯೊಂದಿಯೊಲಿದುದ ನೀವ ನಿನ್ನೆಮ್ಮ ಬುದ್ಧಿಯ ಪಡೆದಿನ್ನು ಬದುಕು' ಎಂದು ಹೇಳುತ್ತಾರೆ. ಸೋಮಣ್ಣನು ಕೋಪದಿಂದ ಜಿನನಿಗೆ ಕೈಯನೆತ್ತುವೆನೆ' ಎನಲು ಇದು `ಶಿವನೊ' `ಜಿನನೋ' ನೋಡು ಎಂದೆನಲು ಆಗ ಸೋಮಣ್ಣ ಕಣ್ಣಲ್ಲಿ ಕಣ್ಣಿದ್ದ ಮುಸುಕನು ಬಿಚ್ಚಿ ಕಂಗಳ ತೆರೆಯ ಅಲ್ಲಿದ್ದ ಜಿನಮೂರ್ತಿ  ಛಟ ಛಟ ಎಂದು ಹೋಳಾಗಿ ಹೋಗಲು ಆ ಪ್ರತಿಮೆಯ ಮಧ್ಯಭಾಗದಲ್ಲಿ ಗೋಪತಿ ವಾಹನ ರೂಢನಾಗಿ ಸೋಮಣ್ಣನ ಭಕ್ತಿಗೆ ಮೆಚ್ಚಿ ಒಡಮೂಡಿದನು.

೧೯. ಕನ್ನಡ ಸಂಸ್ಕೃತಿಯಲ್ಲಿ ಆದಯ್ಯನ ಸ್ಮಾರಕ ಮತ್ತು ಕುರುಹುಗಳು:  ಅದಿಸೆಟ್ಟಿಯ ಐತಿಹಾಸಿಕತೆಯನ್ನು ಪ್ರತಿಬಿಂಬಿಸುವ ಸ್ಮಾರಕಗಳು ಮತ್ತು ಶಿಲ್ಪಗಳು ವೀರ ಮಾಹೇಶ್ವರ ನಿಷ್ಠೆಯನ್ನು ಮೆರೆದ ಪುಲಿಗೆರೆ ಮತ್ತು ಸಾಸಲುಗಳಲ್ಲಿ ದೊರೆತಿವೆ. ಆದಯ್ಯನು ಸೌರಾಷ್ಟ್ರದಿಂದ ತಂದು ಪ್ರತಿಷ್ಠಾಪಿಸಿದನೆನ್ನಲಾದ ಸೋಮೇಶ್ವರ ವಿಗ್ರಹ ಈಗಲೂ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯದ ಗರ್ಭಗುಡಿ ಮತ್ತು ಹೊರಗಿನ ದೇವಾಲಯದ ಗೋಡೆಗಳ ಮೇಲೆ ಕಂಡು ಬರುತ್ತದೆ. ಆದಯ್ಯನು ಜೈನರೊಡನೆ  ಹೋರಾಡಲು ಬಳಸಿದ ಖಡ್ಗವನ್ನು ಶಿವಾಲಯದ ಸಮೀಪದಲ್ಲಿ ಇಟ್ಟಿದ್ದನೆಂದು ಅದನ್ನು ಖಡ್ಗತೀರ್ಥವೆಂದು ಈಗಲೂ ಕರೆಯುತ್ತಾರೆ. ಅದು ಇತ್ತೀಚಿಗೆ ಮುಚ್ಚಲ್ಪಟ್ಟಿದೆ. ಆದಯ್ಯನು ವ್ಯಾಪಾರ ನಿಮಿತ್ತ ಪುಲಿಗೆರೆಯ ಬಂದಾಗ ಇಳಿದು ಕೊಂಡಿದ್ದ `ಹೋಜೇಶ್ವರ' ದೇವಾಲಯ ಈಗಲೂ ಲಕ್ಷ್ಮೇಶ್ವರದಲ್ಲಿದ್ದು ವಾಜೇಶ್ವರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ಪುಲಿಗೆರೆಯ ಸೋಮನಾಥ ದೇವಾಲಯದ ಮುಂಬದಿಯಲ್ಲಿರುವ ಸ್ತಂಭವು ಆದಯ್ಯನ ಐಕ್ಯ ಸ್ತಂಭವಾಗಿದೆ. ಸೋಮನಾಥ ದೇವಾಲಯದ ಬಲಭಾಗದಲ್ಲಿರುವ ಚಿಕ್ಕಗುಡಿಯು ಆದಯ್ಯನ ಗದ್ಗುಗೆಯಾಗಿದೆ. ಸಾಸಲುವಿನ ಸೋಮನಾಥ ದೇವಾಲಯದ ನವರಂಗದಲ್ಲಿ ಆದಿಸೆಟ್ಟಿಯ ವಿಗ್ರಹ ಇದೆ.

.ವಚನಗಳ ಸಮೀಕ್ಷೆ

`ಆದಯ್ಯನ ವಚನಗಳು' ಸಂಪಾದಕರ ಪ್ರಕಾರ `ಸೌರಾಷ್ಟ್ರ ಸೋಮೇಶ್ವರ' ಅಂಕಿತದಲ್ಲಿ ಉಪಲಬ್ದವಿರುವ ವಚನಗಳ ಸಂಖ್ಯೆ ಒಟ್ಟು ಮುನ್ನೂರ ತೊಂಬತ್ತೇಳು (ಸಂ: ಉತ್ತಂಗಿ ಚೆನ್ನಪ್ಪ, ಮುರುಘಾಮಠ, ಧಾರವಾಡ)

ವೀರಶೈವ ಮತದ ತತ್ವಗಳು, ಅವುಗಳ ಆಚರಣೆಯನ್ನು ಕುರಿತ ವಿಪುಲವಾದ ಸಾಮಗ್ರಿ ಆದಯ್ಯನು ವಚನಗಳಲ್ಲಿ ನಮಗೆ ದೊರಕುತ್ತದೆ.

ಅಷ್ಟಾವರಣಗಳಲ್ಲಿ ಮೊದಲನೆಯದಾದ ಗುರುವಿನ ಬಗೆಗೆ ಭಯ, ಭಕ್ತಿ, ಅಭಿಮಾನಗಳು ವ್ಯಕ್ತವಾಗಿದೆ. ಗುರುವಿನ ಶ್ರೇಷ್ಠತೆಯನ್ನು ಕುರಿತು ಒಂದು ವಚನದಲ್ಲಿ (ವ.ಸಂ. ೧೮೪) ಹೇಳಿದ್ದಾನೆ.

ಗುರುವಿನಿಂದ ಶಿಷ್ಯನು ದೀಕ್ಷೆ ಪಡೆಯುವ ಮೊದಲು ಭೂತಕಾಯದವ ನಾಗಿರುತ್ತಾನೆ. ಅಂತಹ ಭೂತಕಾಯದ ಭಕ್ತನಿಗೆ ಗುರುವು ವಿಭೂತಿಯ ಪಟ್ಟವ ಕಟ್ಟಿ ಅಂಗದಲ್ಲಿ ಶಿವಲಿಂಗವ ಹಿಂಗದಂತಿರಿಸಿ, ಕರ್ಣದಲ್ಲಿ ಪ್ರಣವ ಪಂಚಾಕ್ಷರನೊರೆದು ಸಂಸಾರದ ಅಜ್ಞಾನ ಜಡವ ಕೆಡಸಿ ಶಿವಜ್ಞಾನಾನುಗ್ರಹವನ್ನು ಮಾಡಿ ಅಂಗತನುವನ್ನಾಗಿ ಮಾಡುತ್ತಾನೆ. ಶಿಷ್ಯನಾಗಿ ಮುಕ್ತಿಯನ್ನು ದಯಪಾಲಿಸುವವನು ಗುರು.

ಇಷ್ಟಲಿಂಗವನ್ನು ಅಂಗದಲ್ಲಿ ದೀಕ್ಷೆಯ ಸಮಯದಲ್ಲಿ ಧರಿಸುವುದರ ಬಗೆಗೆ ಮತ್ತು ಇಷ್ಟಲಿಂಗದ ಶ್ರೇಷ್ಠತೆಯ ಬಗೆಗೂ ಲ್ಲೇಖ ಇದೆ. (ವ. ಸಂ. ೬೩)

`ಕರಸ್ಥಲದಲ್ಲಿ ಲಿಂಗವಿರಲು ಆ ಹಸ್ತವೇ ಕೈಲಾಸ, ಇಷ್ಟಲಿಂಗವೇ ಶಿವನು' ಎಂದಿದ್ದಾನೆ. ಮತ್ತೊಂದೆಡೆ ಲಿಂಗವನ್ನು ಅಂಗದ ಮೇಲೆ ಧರಿಸದವನು ಭವಿ ಎಂದಿದ್ದಾನೆ.

ಲಿಂಗವನ್ನು ಕುರಿತು ಒಂದು ವಚನದಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ ಎಂದು ತ್ರಿವಿಧ ಲಿಂಗಗಳನ್ನು ಹೇಳಿ `ಗುರುವಿನ ಸಂಬಂಧದಿಂದಾದದ್ದು `ಇಷ್ಟಲಿಂಗ' ಲಿಂಗ ಸಂಬಂಧದಿಂದಾದದ್ದು ಪ್ರಾಣಲಿಂಗ, ಜಂಗಮ ಸಂಗಮದಿಂದಾದದ್ದು ತೃಪ್ತಿಲಿಂಗವೆಂದು ಹೇಳಿ ಮತ್ತೊಂದು ವಚನದಲ್ಲಿ (ವ. ಸಂ. ೭೮) ಅವುಗಳ ವ್ಯಾಖ್ಯಾನ ನೀಡಿದ್ದಾನೆ.

ಆದಯ್ಯನ ಪ್ರಕಾರ `ಪ್ರಸಾದ' ವೆಂದರೆ ಹಸಿವನ್ನು ನೀಗಿಸುವ ಅನ್ನವಲ್ಲ. ಅನ್ನವನ್ನೇ  ಪ್ರಸಾದವೆಂದು ಕೊಡುವಾತ ಶರಣರಲ್ಲ. ಕೊಂಬುವಾತ ಭಕ್ತನಲ್ಲ ಎಂದಿದ್ದು ದೈಹಿಕವಾಗಿ ಜೀವಕ್ಕೆ ಆಧಾರವಾಗಿರುವ ಅನ್ನವು `ಪ್ರಸಾದ'ವೆನಿಸಿದ್ದರೂ ಅದನ್ನು ಒಪ್ಪದೆ ಮಾನಸಿಕವಾಗಿ, ಪ್ರಸಾದವನ್ನು ಸ್ವೀಕರಿಸುವುದನ್ನು ಒಂದು ವಚನದಲ್ಲಿ (ವ.ಸಂ. ೬೪) ವಿವರಿಸಿದ್ದಾನೆ. ಸುಮಾರು ಹದಿನಾಲ್ಕು ವಚನಗಳಲ್ಲಿ ಪ್ರಸಾದದ ಬಗೆಗೆ ಲ್ಲೇಖವಿದೆ. ಪ್ರಸಾದವನ್ನು `ಶುದ್ಧ' ಪ್ರಸಾದ, ಸಿದ್ಧಪ್ರಸಾದ, ಪ್ರಸಿದ್ಧ ಪ್ರಸಾದ ಎಂದು ತ್ರಿವಿಧ ಪ್ರಸಾದವನ್ನು ವಿವರಣೆಗಳೊಂದಿಗೆ ಹೇಳಿದ್ದಾನೆ.

ವಿಭೂತಿಯ ಬಗ್ಗೆಯೂ ಆದಯ್ಯನ ವಚನದಲ್ಲಿ ಐಲ್ಲೇಖವಿದೆ. ಶಿವತತ್ವದ ಮೂಲಾಧಾರದ ಜ್ಞಾನಶಕ್ತಿಯೇ ಚಿದ್ವಿಭೂತಿ. (ವ.ಸಂ. ೨೪) ಪಂಚ ಬ್ರಹ್ಮದಿಂದುದಯಿಸಿದ ನಂದೆ, ಭದ್ರೆ, ಸುರಭಿ, ಸುಶೀಲೆ, ಸುಮನೆ ಎಂಬ ಪಂಚಮುಖಂಗಳಿಂದ ವಿಭೂತಿ, ಭಸಿತ, ಭಸ್ಮ, ಕ್ಷರೆ, ರಕ್ಷೆ ಎಂಬ ಪಂಚನಾಮ ವಾಯಿತೆಂದು ಅದರ ವ್ಯುತ್ಪತ್ತಿಯ ಬಗೆಗೆ ಹೇಳುತ್ತಾ ಅದು ಯಾವ ರೀತಿ ಅರಿಷಡ್ವಾದಿ ಲೌಕಿಕ ಕರ್ಮಗಳನ್ನು ನಿರ್ಮೂಲನಗೊಳಿಸಿತು ಎಂದು ಅದರ ಮಹಿಮೆಯ ಬಗೆಗೆ ಹೇಳಿದ್ದಾನೆ. ವಿಭೂತಿ ತಯಾರಿಸುವ ಬಗೆಗೆ ವಿವರಣೆ ಇದೆ.

ತ್ರಿವಿಧ ದಾಸೋಹದ ಬಗೆಗೂ ಆದಯ್ಯನ ವಚನದಲ್ಲಿ (ವ.ಸಂ. ೬೪) ಐಲ್ಲೇಖ ಇದೆ. ತ್ರಿವಿಧ ದಾಸೋಹದಲ್ಲಿ ತನು ಮನ ಧನಗಳನ್ನು ಸವೆಸಬೇಕಾದ ರೀತಿಯನ್ನು ಆದಯ್ಯ ಈ ರೀತಿ ಹೇಳುತ್ತಾನೆ. ಆಚಾರಗಳನ್ನು ಅಳವಡಿಸಿಕೊಂಡು, ಕರಣಂಗಳನ್ನು ಉಡುಗಿ, ಗುರುಸೇವೆಯನ್ನು ನಡೆಸಿ ತನುವನ್ನು ಸವೆಸಬೇಕು. ವ್ರತನೇಮಗಳಿಂದ ಪಲ್ಲಟವಿಲ್ಲದೆ ಮನಸ್ಸನ್ನು ಸವೆಸಬೇಕು. ಆಶೆರೋಷಗಳಿಲ್ಲದೆ ಆದರಣೆಯಿಂದ ಜಂಗಮಕ್ಕೆ ಧನವನ್ನು ನೀಡಿ ಸವೆಸಬೇಕು.

ಷಟ್‌ಸ್ಥಲಗಳ ಬಗೆಗೆ ತನ್ನದೆ ಆದ ದೃಷ್ಟಿ ಕೋನವನ್ನು ಆದಯ್ಯನು ವಿವರಿಸಿದ್ದಾನೆ. ಷಟ್ ಸ್ಥಲಗಳ ವಿವರಣೆಯಲ್ಲಿ ಆದಯ್ಯನ ಅನುಭಾವದ ನಿಚ್ಚಳತೆ ಗುರುತಿಸಬಹುದು. 

`ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಗುರುಲಿಂಗ

ಪ್ರಸಾದಿಗೆಶಿವಲಿಂಗ, ಪ್ರಾಣಲಿಂಗಗೆ ಜಂಗಮಲಿಂಗ

ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ'

ಎಂದು ಆರು ಲಿಂಗಗಳನ್ನು ಹೇಳಿದ್ದಾನೆ.

ಆರು ಮೆಟ್ಟಿಲುಗಳ ಸ್ಥಿತಿಯಲ್ಲಿರುವ ಸಾಧಕನಿಗೆ ಒಂದೊಂದು ಹಂತದಲ್ಲಿಯೂ ಯಾವ ರೀತಿ ಶಿವನ ಸಾನಿಧ್ಯಕ್ಕೆ ಹತ್ತಿರವಾಗಿರುತ್ತಾನೆ ಎಂಬುದನ್ನು ಸೊಗಸಾದ ಉಪಮೆಯೊಡನೆ ಒಂದು ವಚನದಲ್ಲಿ ವಿವರಿಸಿದ್ದಾನೆ.

`ಬೀಜವೃಕ್ಷಯೋಗದಂತೆ ಭಕ್ತಸ್ಥಲ

ಜಲ ಮೌಕ್ತಿಕ ಯೋಗದಂತೆ ಮಾಹೇಶ್ವರ ಸ್ಥಲ

ಅನಲ ಕಾಷ್ಟಯೋಗದಂತೆ ಪ್ರಸಾದಿಸ್ಥಲ

ಕೀಟಭ್ರಮರ ಯೋಗದಂತೆ ಪ್ರಾಣಲಿಂಗಿಸ್ಥಲ

ಕರಕವಾರಿಯೋಗದಂತೆ ಶರಣಸ್ಥಲ'

ಶಿಖಿಕರ್ಪೂರ ಯೋಗದಂತೆ ಐಕ್ಯಸ್ಥಲ   (ವ. ಸಂ. ೩೫೭)

ಷಟ್‌ಸ್ಥಲಗಳ ಬಗೆಗೆ ಇಷ್ಟು ಸೈದ್ಧಾಂತಿಕ ಹಿನ್ನಲೆಯಲ್ಲಿ ನಿರೂಪಿಸಿರುವ ವಚನಕಾರರಲ್ಲಿ ಚನ್ನಬಸವಣ್ಣನವರನ್ನು ಬಿಟ್ಟರೆ ಆದಯ್ಯನೇ  ಎರಡನೆಯವನು ಎಂದೆನಿಸುತ್ತದೆ.

 ಶೈವ ಮತ್ತು ವೀರಶೈವಗಳ ಕುರಿತ ಆದಯ್ಯನ ತಾತ್ವಿಕ ನಿಲುವುಗಳು:

ಆದಯ್ಯನ ನಿಷ್ಟೆಯನ್ನು ಪರೀಕ್ಷಿಸಬೇಕೆಂದು ಕಾಡಿಸುತ್ತ ಭಕ್ತವೇಷದ ಶಿವನು , ಎಲ್ಲಿಯೂ ಭಕ್ತನನ್ನು ಕಾಣದೇ ನಿನ್ನಲ್ಲಿಗೆ ಬಂದೆ, ತಗೆದುಕೋ ಮೊಸರೋಗರವ ಎಂದು ಅಡ್ಡಗಟ್ಟಿ ತುಡಕಿಹಿಡಿದಾಗ

" ಒಲ್ಲೆ ಒಲ್ಲೇನುತ ಮೃಡ ಸೋಮನಾಥನಂ ತಂದ

ಬಳಿಕಲ್ಲದಿನ್ನೆಡೆಯೊಳವಡದೆನೆಗೆ”ಎಂದು ಆದಯ್ಯನು ಸಾಗುವನು.ಆದಯ್ಯನ ಮಾತಿನಿಂದ ಮೆಚ್ಚಿಕೊಂಡ ಶಿವನು ಹೊಗಳುತ್ತಾನೆ. ಶಿವನ ಪರೀಕ್ಷೆ ಭಕ್ತನ ಮುಂದೆ ಸೋಲನ್ನಪ್ಪಿ ನಿಜರೂಪ ತೊರುವನು.ಹೀಗೆ ಕಾವ್ಯಗಳಲ್ಲಿ ವರ್ಣಿಸಿದಂತೆ ಪಶುಯತೀಶ್ವರ ಮತ್ತುಆದಯ್ಯನ ನಡುವಿನ ಸಂಭಾಷಣೆಯ ಪ್ರಸಂಗದಲ್ಲಿನ ಶೈವ-ವೀರಶೈವ ಮತಗಳ ಸ್ವರೂಪದ ಉಲ್ಲೇಖವು ಆದಯ್ಯನವಚನಗಳ ಸಾರರೂಪ ಎಂದೆನಿಸುತ್ತದೆ.

ಶೈವ ಮತ:

ವೀರಶೈವ ಮತಕ್ಕಿಂತ ಹಿಂದಿನ ಶೈವಮತದಲ್ಲಿ ನಾಲ್ಕುಭೇದಗಳು ಇದ್ದವು ಎಂಬುದು ವಚನದಿಂದ ವ್ಯಕ್ತವಾಗುತ್ತದೆ.ಆದಯ್ಯನು ಅವುಗಳ ಹೆಸರು ಮತ್ತು ಸ್ವರೂಪವನ್ನುವಿವರಿಸಿದ್ದಾನೆ. ಶೈವಮತದ ನಾಲ್ಕು ಭೇದಗಳು ಎಂದರೆ

1.ಶುದ್ಧಶೈವ

2.ಮಿಶ್ರ ಶೈವ

3.ಪೂರ್ವ ಶೈವ

4.ಸಂಕೀರ್ಣ ಶೈವ

ಶುದ್ಧಶೈವ ಎಂತೆಂದರೆ ಒಮ್ಮೆ ಧರಿಸಿ,ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದನೆಂದು ಭವಿಯಾಗುತ್ತೊಮ್ಮೆ ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ಆರೀತಿ ಇರುವ ಭಕ್ತನ ಮತ.

ಮಿಶ್ರಶೈವ ಎಂತೆಂದರೆ ಬ್ರಹ್ಮ, ವಿಷ್ಣು, ರುದ್ರ ,ಮಾಹೇಶ್ವರರು ಒಂದೆಂದು ನುಡಿವ ದುಷ್ಕರ್ಮದ ಮತವೇ ಮಿಶ್ರಶೈವ. ಈ ಹೇಳಿಕೆ ಪ್ರಕಾರ ಆದಯ್ಯನಿಗೆ ದೇವನೊಬ್ಬ ನಾಮ ಹಲವುಎಂಬುದು ವಿರೋಧ ಎಂಬಂತೆ ಭಾಸವಾಗಿದೆ.

ಪೂರ್ವಶೈವ ಎಂತೆಂದರೆ ದೂರದಿಂದ ನಮಿಸಿ ಅರ್ಪಿಸಿ ಶೇಷವನುಣ ಕರ್ತನಲ್ಲವೆಂದು ಭಾವಿಸುವ ದೂರಸ್ಥನಹದ ಮತದವರು.

ಸಂಕಿರ್ಣ ಶೈವ ಎಂದರೆ ಹರನೇ ಹಿರಿಯನೆಂದುಹಿರಿಯರೆಲ್ಲರನ್ನು ದೇವರೆಂದು ನುಡಿದು ಕಂಡ ದೇವರಿಗೆ

ಸಾಷ್ಟಾಂಗ ಹಾಕುವ ವೇಶಿಯ ಸುತನಂತೆ ಸಂಕಿರ್ಣಕ್ಕೊಳಗಾದಮತ. ನಾವು ಸಾಮಾನ್ಯವಾಗಿ ಶೈವ ಮತಾಚರಣೆಯ ಸಿದ್ಧಾಂತಗಳೆಂದು ಹೇಳುವುದನ್ನೇ ಆದಯ್ಯನು ಇಲ್ಲಿ ಶೈವಮತ ಪ್ರಭೇದಗಳನ್ನಾಗಿ ವಿಭಾಗಿಸಿ ಹೆಸರುಗಳನ್ನು ಕೊಟ್ಟಿದ್ದಾನೆ ಎಂದೆನಿಸುತ್ತದೆ. ಇಲ್ಲಿ ಶೈವಮತದ ವಿಭಾಗಗಳಲ್ಲಿರುವ ಭಕರಂತೂ ಸ್ಥಾವರ ಲಿಂಗಾರಾಧಕರು. ಈ ಶೈವ ಮಾರ್ಗಗಳನ್ನು ಹೇಳುತ್ತ ಇವೆಲ್ಲವುಗಳಿಗಿಂತ ವೀರಶೈವವು ಶೇಷ್ಠ ವಾದದ್ದು ಎಂದು ಅದರ ಸ್ವರೂಪವನ್ನು ನಿರೂಪಿಸಿದ್ದಾನೆ.

ಶ್ರೀಗುರುವು ಶಿಷ್ಯನ ಮಲಮಾಯಾ ಮಲಿನವನ್ನು ತನ್ನ

ಕೃಪಾವಲೋಕದಿಂದಳಿದು ಲಿಂಗವನ್ನು ಶಿಷ್ಯನಂಗದ ಮೇಲೆ

ಬಿಜಯಂಗೆಯಿಸಿ ,ಕರ್ಣದ್ವಾರದಲ್ಲಿ ಪ್ರಾಣಂಗೆ ಲಿಂಗವ

ಜಪಿಸುವ ಪ್ರಣವ ಪಂಚಾಕ್ಷರಿಯನುಪದೇಶಿಸಿ

ಅಂಗಪೀಠದಲ್ಲಿರಿಸಿ ಅಭಿನ್ನ ಪ್ರಕಾರವಾದ ಪೂಜೆಯ ಮಾಡ

ಹೇಳಲು, ವೀರಶೈವನು ಅಂಗದ ಮೇಲೆ ಲಿಂಗ ಧರಿಸಿ

ಅಭಿನ್ನಭಾವದಿಂದ ಅರ್ಚನೆ ಪೂಜನ ಮಾಡುವುದೇ

ವೀರಶೈವವು. ಇದು ಆದಯ್ಯನು ವೀರಶೈವದ ಬಗ್ಗೆ ಕೊಟ್ಟ

ನಿಷ್ಪತ್ತಿಯಾಗಿದೆ.

ಮೇಲಿನ ವಿವರಣೆಯ ಪ್ರಕಾರ ಆದಯ್ಯನು ಗುರುವುಶಿಷ್ಯನಿಗೆ ಬೋಧಿಸುವ ರೀತಿಯಲ್ಲಿ ಶುದ್ಧ ಶೈವ ಮತ್ತು

ವೀರಶೈವದ ಲಕ್ಷಣಗಳಗಳನ್ನು ನಿರೂಪಿಸಿದ್ದಾನೆ. ಶುದ್ಧಶೈವವು ಸ್ಮಾವರಲಿಂಗದ ಶ್ರೇಷ್ಠತೆಯನ್ನು ಎತ್ತಿ ಹಿಡಿದರೆ, ವೀರಶೈವವು ಇಷ್ಟಲಿಂಗದ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದೆ.

ಶುದ್ಧಶೈವಕ್ಕೆ ಲಿಂಗದ ನೆನಹು ಇಷ್ಟವಾದರೆ ವೀರಶೈವಕ್ಕೆ ಲಿಂಗದ ಸಂಗ ಶ್ರೇಷ್ಠವಾಗುತ್ತದೆ. ಇದನ್ನು ಅತ್ಯುತ್ತಮ ಉಪಮೆಯೊಡನೆ ಆದಯ್ಯನು ನಿರೂಪಿಸಿದ್ದಾನೆ.

"ಅತ್ಯಂತ ಮನೋರಮಣಪ್ಪಂತ ಪುರುಷನ ಒಲುಮೆಯಲ್ಲಿಹ

ಸ್ತ್ರೀಗೆ ನೆನಹಿನ ಸುಖದಿಂದ ಸಂಗಸುಖವು ಅತ್ಯಧಿಕವಪ್ಪಂತೆ"

ಆದಯ್ಯನ ಈ ಹೇಳಿಕೆಯಲ್ಲಿ ತಿಳಿದು ಬರುವ ಸಂಗತಿ ಎಂದರೆ ಶುದ್ಧಶೈವದಲ್ಲಿರುವ ಭಕ್ತನೇ ಮುಂದೆ ವೀರಶೈವ ಮತದ ವ್ಯಕ್ತಿಯಾಗಿ ಮಾರ್ಪಾಡು ಹೊಂದುತ್ತಾನೆ ಎಂಬುದು. ಅಂದರೆ ಮನೋರಮಣನಾದ ಪುರುಷನ ಒಲುಮೆಯಲ್ಲಿರುವ ಸ್ತ್ರೀಗೆ  ನೆನಹಿನ ಸುಖದಿಂದ ಸಂಗಸುಖ ಅತ್ಯಧಿಕವಪ್ಪಂತೆ

ಶುದ್ಧಶೈವದ ಭಕ್ತನ ಲಿಂಗದಲ್ಲಿ ಅನವರತ ನೆನಹಿನಿಂದ

ಕೂಡಿದಾಗ ಮುಂದೆ ಆತನಿಗೆ ಲಿಂಗದ ಸಂಗವನ್ನು ಬಯಸುವ

ಸುಖ ಅತ್ಯಧಿಕವಾಗುತ್ತದೆ.

ಸ್ಥಾವರಲಿಂಗ ಧ್ಯಾನಕ್ಕೂ ಮತ್ತು ಇಷ್ಟಲಿಂಗದ ಸಂಗಕ್ಕೂಇರುವ ಸಾರೂಪ್ಯವನ್ನು ಈ ರೀತಿ ವಿವರಿಸಿದ್ದಾನೆ.

ಕೀಟನು ಭ್ರಮರ ಧ್ಯಾನದಿಂದ ಭ್ರಮರ ರೂಪಾದಂತೆ

ಶೈವನು ಶಿವಧ್ಯಾನದಿಂದ ಸಾರೂಪ್ಯ ಪದವನೈದುತ್ತಾನೆ.

ಅಗ್ನಿಯ ಸಂಗವ ಮಾಡಿದ ಕರ್ಪೂರ ನಾಸ್ತಿಯಾದ ಹಾಗೆ

ವೀರಶೈವನು ಜಂಗಮಾರ್ಚನೆಯ ಮಾಡಿ ಪ್ರಾಣಲಿಂಗ

ಸಂಬಂಧದಿಂದ ಸಾಯಜ್ಯ ಪದವಿಯನ್ನು ಪಡೆಯುತ್ತಾನೆ.

 ಆದಯ್ಯನ ವಚನಗಳಲ್ಲಿ ಉಲ್ಲೇಖಿಸಿರುವ ವೀರಶೈವ ಜೊತೆಗಿನ ಶುದ್ಧಶೈವ ಎಂದು ಹೇಳಿರುವುದು ಆದಯ್ಯನ ಒಂದು ವಚನದಲ್ಲಿ ವ್ಯಕ್ತವಾಗಿರುವ ಹೇಳಿಕೆಯ ಪ್ರಕಾರ ಶುದ್ಧಶೈವರೆಂದರೆ ತಮಿಳುನಾಡಿನ ಅರವತ್ತು ಮೂರು ಮಂದಿ ಪುರಾತನರೇ ಎಂದೆನಿಸುತ್ತದೆ. ಶುದ್ಧಶೈವದ ಆಚರಣೆಯನ್ನು ವಿವರಿಸುತ್ತಾ ಶುದ್ಧಶೈವ ಸಂಪನ್ನರಪ್ಪ ಅರವತ್ತು ಮೂವರು ಅಸಂಖ್ಯಾತರು ಶಿವನಲ್ಲಿ ಚತುರ್ವಿಧ ಪದವಿಯ್ದು ಸುಖಿಯಾದರು ಎಂದಿದ್ದಾನೆ. ವಚನಕಾರರು ಶೈವಮತವನ್ನು ಖಂಡಿಸಿದ್ದರೆ ಆದಯ್ಯನಲ್ಲಿ ಮಾತ್ರ ಎಲ್ಲಿಯೂ ಶೈವಮತದ ಖಂಡನೆ ಉಗ್ರವಾಗಿ ಬಂದಿಲ್ಲ.

  ಆದಯ್ಯನು ಸತ್ಯ ನ್ಯಾಯ ನಿಷ್ಠುರಗಳನ್ನು ಎದುರಿಗಿಟ್ಟುಕೊಂಡು ಸಾಗಿದವನು. ಅಸತ್ಯ ಅನ್ಯಾಯಗಳ ವಿರುದ್ಧ ಹೋರಾಡಿದವನು. ಮುಕ್ತಿಯನ್ನು ಪಡೆಯುವ ವ್ಯಕ್ತಿಯ ಗುಣಗಳು ಯಾವ ರೀತಿ ಇರಬೇಕು ಎಂಬುದನ್ನು

`ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ

ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ

ವಿಷಯಂಗಳಲ್ಲಿ ದಾಸೀನ, ಭಾವದಲ್ಲಿ ದಿಗಂಬರನಾಗಿರಬೇಕು   (ವ. ಸಂ. ೨೯೧)

ಎಂದು ಸೊಗಸಾಗಿ ವಿವರಿಸಿದ್ದಾನೆ.

 ವಚನಗಳು ಸಮಾಜದಲ್ಲಿ ನಡೆಯುತ್ತಿದ್ದ ಕಂದಾಚಾರಗಳ ವಿರುದ್ಧ ಸೆಟೆದು ನಿಂತವುಗಳು ಎಂಬುದನ್ನು ಆದಯ್ಯನ ವಚನಗಳು ಸಮರ್ಥಿಸುತ್ತವೆ. ಈತನ ವಚನಗಳು ಅನುಭಾವವನ್ನೇ ವಿಶೇಷವಾಗಿ ಒಳಗೊಂಡಿದ್ದರೂ ಅಲ್ಪವಾಗಿ ಡಾಂಭೀಕತೆಯ ವಿಡಂಬನೆಯನ್ನು ಚಿತ್ರಿಸಿವೆ.

ಖ್ಯಾತಿಗೆ ಜೋತು ಲಾಭಕ್ಕೆ ಲೋಭಿಸಿ ಪೂಜೆಯ ಮಾಡದೆ

ರಾಜಾದ್ವಾರದಲ್ಲಿ ಸುಳಿದು ಬಳಲುವ ಹಿರಿಯರನ್ನು (ವ. ಸಂ. ೭೪)

ಆದಯ್ಯನು ಟೀಕಿಸಿದ್ದಾನೆ. ತನ್ನಲ್ಲಿಯೇ ಗುರುಲಿಂಗ ಜಂಗಮ ವಿರಲು ಅನ್ಯವಿಟ್ಟರಸುವ ಶರಣರನ್ನು

`ರಸವನುಗುಳಿ ಕಸವನಗಿವವನಂತೆ

ಕೈಯ ಪಿಂಡವ ಬಿಟ್ಟು ಒಣಕೈಯ್ಯ ಸಿಕ್ಕುವವನಂತೆ

ತಾಯೊಮೊಲೆವಾಲನೊಲ್ಲದೆ ಎರವಾಲಿಂಗೆಳಸುವವನಂತೆ  (ವ. ಸಂ. ೧೨)

ಎಂದು ಗೇಲಿ ಮಾಡಿದ್ದಾನೆ.

`ಮಾತು ಕಲಿತು ಮಂಡೆಯ ಬೋಳಿಸಿ ವೇಷಭಾಷೆಗಳಿಂ ದೇಶಕೋಶ

ಭುವನಂಗಳ ತೊಳಲಿ ಬಳಲಿ ನಿಂದರೇನಾಯಿತ್ತೋ?

ಎಂದು ಭಕ್ತದಾರಿಗಳ ಭಂಡಾಟವನ್ನು ಬಿಚ್ಚುಮನಸ್ಸಿನಿಂದ ಅಪಹಾಸ್ಯ ಮಾಡಿದ್ದಾನೆ.

ಮೋಕ್ಷ ಪ್ರಾಪ್ತಿಗೋಸ್ಕರ ತೀರ್ಥಯಾತ್ರೆಗಳನ್ನು ಕೈಗೊಳ್ಳುವ ಜನರನ್ನು `ಕಂಡವರ ಕಂಡು ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಬ ಭಂಡರು' ಎಂದಿದ್ದಾನೆ. ಸಂಸಾರ ಹೇಯವನ್ನು ದೇಹದ ತಿರಸ್ಕಾರವನ್ನು ಕುರಿತು ಎರಡು ವಚನಗಳಲ್ಲಿ ನುಡಿದಿದ್ದಾನೆ. ತೀರ್ಥಯಾತ್ರೆಯ ಮಾಡಿ ಪಾಪವ ಕಳೆಯುವುದು ಆದಯ್ಯನ ಪ್ರಕಾರ ಒಂದು ಯಾತನೆ ಇದ್ದಂತೆ. ಒಬ್ಬ ಶಿವಭಕ್ತನ ದರುಶನ ಮಾಡಿದರೆ ಸಾಕು ಅನಂತ ಕರ್ಮವೆಲ್ಲ ನಾಶವಾಗುತ್ತದೆ ಎಂದಿದ್ದಾನೆ.ಆದಯ್ಯನು ಒಂದು ವಚನದಲ್ಲಿ (ವ.ಸಂ. ೧೫) ಸ್ತ್ರೀಬಾಲಹತ್ಯೆ, ಭ್ರೂಣಹತ್ಯೆ, ಬ್ರಹ್ಮಹತ್ಯೆ ಮಾಡುವ ಕರ್ಮಿಗಳಿಗೆ ಶಿವಜ್ಞಾನ ಸಲ್ಲದು ಎಂದು ಹೇಳುವಲ್ಲಿ ಈ ದುಷ್ಟಪದ್ಧತಿಗಳು ಆಗಿನ ಕಾಲಕ್ಕೆ ಇದ್ದವೆಂಬುದಾಗಿ ತಿಳಿದು ಬರುತ್ತದೆ.

 ಆದಯ್ಯನ ವಚನಗಳು ಧಾರ್ಮಿಕ ತತ್ವಗಳನ್ನು ಹೊರಸೂಸುತ್ತಿದ್ದರೂ ಅವುಗಳಲ್ಲಿ ಕಾವ್ಯಗುಣ ಅಲ್ಲಲ್ಲಿ ಇಣುಕಿ ಹಾಕಿದೆ. ಆದಯ್ಯನು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಉಪಮೆಗಳನ್ನು ಬಳಸಿದ್ದಾನೆ. ಇದು ಆತನ ಸಾಹಿತ್ಯ ಗುಣವನ್ನು ಎತ್ತಿ ತೋರಿಸುತ್ತದೆ.

ದೇಹವನ್ನು ಕುರಿತು `ನೆಣದ ಕೊಣ, ರಕ್ತದ ಹುತ್ತ, ಕೀವಿನ ಬಾವಿ... ಎಂದು ಹೇಳುವಲ್ಲಿ ರೂಪಕ ಸಾಮರ್ಥ್ಯಗಳನ್ನು ಗಮನಿಸಬಹುದು.

   ಆದಯ್ಯನ ವಚನಗಳಲ್ಲಿ ಬಸವಾದಿ ಪ್ರಮುಖರ ವಚನಗಳಲ್ಲಿ ಕಂಡು ಬರುವ ಅಭಿವ್ಯಕ್ತಿಯ ತೀವ್ರತೆ, ಕಾವ್ಯ ಸೌಂದರ್ಯ, ಸಾಧನೆಯ ಹಂತದಲ್ಲಿರುವ ಸಾಧಕನ ತೊಳಲಾಟ ಇತ್ಯಾದಿಗಳನ್ನು ಗುರುತಿಸಲು ಸಾಧ್ಯವಿಲ್ಲ. ಒಟ್ಟಾರೆ ಆದಯ್ಯನ ವಚನಗಳಲ್ಲಿನ ಸಾಮಾಜಿಕ ಕಳಕಳಿ, ಸಾಧಕನ ತೊಳಲಾಟಗಳಿಗಿಂತ ಸಾಂಸ್ಕೃತಿಕ ಅಂಶಗಳು, ಧಾರ್ಮಿಕ ಮತ್ತು ಅನುಭಾವಗಳ ತಾತ್ವಿಕ ನಿಲುವನ್ನು ನಾವು ಕಾಣಬಹುದು.

೨೧.ವಚನಕಾರ ಆದಿಸೆಟ್ಟಿಯ ಇತರೆ ರಚನೆಗಳು:

 ಆದಯ್ಯನು ವಚನಗಳನ್ನು ರಚಿಸಿದ್ದರೂ ಅವುಗಳ ಜೊತೆಗೆ ಸಂಗೀತ ಪ್ರಧಾನವಾದ ಸ್ವರಪದಗಳನ್ನು ರಚಿಸಿದ್ದಾನೆ. ವಚನಗಳನ್ನು ಬಿಟ್ಟು ಉಳಿದ ಆತನ ರಚನೆಗಳನ್ನು ಎಂ.ಎಂ. ಕಲಬುರ್ಗಿಯವರು `ಆದಯ್ಯನ ಲಘು ಕೃತಿಗಳು' ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ ಕನ್ನಡ ಸಂಶೋಧನ ಸಂಸ್ಥೆಯ ೬೬೩ನೆಯ ಸಂಖ್ಯೆ ತಾಳೇಗರಿ ಕಟ್ಟಿನಲ್ಲಿ ಇರುವ ಆದಯ್ಯನಿಗೆ ಸಂಬಂಧಿಸಿದ ಆದಯ್ಯನ ಕಂದ, ಸ್ವರವಚನ, ಉಯ್ಯಲ ಪದ, ಮುಕ್ತಿಕ್ಷೇತ್ರದ ಪದ್ಯಗಳನ್ನು ಆದಯ್ಯನ ಲಘುಕೃತಿಗಳು ಎಂಬ ಹೆಸರಿನಿಂದ ಪ್ರಕಟಿಸಿರುವುದಾಗಿ ಸಂಪಾದಕರು ತಿಳಿಸಿದ್ದಾರೆ.

        ಶರಣ ಅದಿಸೆಟ್ಟಿಯು ವ್ಯಾಪಾರ ನಿಮಿತ್ತವಾಗಿ ಅಣ್ಣಿಗೇರಿ, ಪುಲಿಗೆರಿಗಳಲ್ಲಿ ಪಯನ ಕೈಗೊಂಡು ಅನ್ಯಮತೀಯರುಗಳ ಕಟೂಕ್ತಿಗಳಿಂದ ಘಾಸಿಗೊಂಡು ಸ್ವಸಮಯಾಭಿಮಾನದ ನಿಮಿತ್ತ ವೀರಶೈವ ಮತಪ್ರಸಾರದಲ್ಲಿ ಕಾರ್ಯತತ್ಫರನಾಗಿ ಜಿನಮಯವಾಗಿದ್ದ ಪರಿಸರವನ್ನು ಶಿವಮಯವನ್ನಾಗಿ ರೂಪಿಸಿ  ಅನ್ಯಮತಗಳಿಂದ ಶರಣಧರ್ಮಕ್ಕೆ ಉಂಟಾಗಿದ್ದ ಅಡ್ಡಿ ಅತಂಕಗಳನ್ನು ನಿವಾರಿಸಿ ಶರಣಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿದವನಾಗಿದ್ದಾನೆ.

      ಆದಯ್ಯನನ್ನು ಕುರಿತ ಕಾವ್ಯ, ಪುರಾಣ, ಪೂರಕ ಶಾಸನಗಳು ಮತ್ತು ಕ್ಷೇತ್ರಕಾರ್ಯಗಳಿಂದ ದೊರೆತ ಮಾಹಿತಿಗಳಲ್ಲಿಯ  ಜನ್ಮಸ್ಥಳ, ಜನ್ಮದಾತರ ಹೆಸರು, ಪದ್ಮಾವತಿಯ ಪ್ರಸಂಗ, ವೀರಮಾಹೇಶ್ವರ ನಿಷ್ಠೆಯನ್ನು ಮೆರೆದ ಸ್ಥಳ, ಸ್ಥಾಪಿಸಿದಸೋಮೇಶ್ವರ ವಿಗ್ರಹ ಇತ್ಯಾದಿಗಳ ಸ್ಥಳ ನಾಮಗಳು, ವ್ಯಕ್ತಿನಾಮಗಳು ಐತಿಹಾಸಿಕತೆಯ ಪ್ರತೀಕವಾಗಿದ್ದರೆ, ಜನನದ ಹಿನ್ನಲೆ, ಸೋಮೇಶ್ವರನ ಆಗಮನದ ಕುರುಹು, ಹೋರಾಟದ ಪ್ರಸಂಗ ಇತ್ಯಾದಿಗಳಲ್ಲಿ ಪವಾಡ ಮತ್ತು ದೈವಿಕ ಹಿನ್ನೆಲೆ ಮೇಳೈಸಿದ್ದರೂ ಆದಯ್ಯನು ಕೈಗೊಂಡ ಶಿವಸಮಯ ಪ್ರಸಾರದ ಸಾಂಕೇತಿಕ ಕ್ರಿಯಗಳು ಎಂದು ಗ್ರಹಿಸಬಹುದಾಗಿದೆ. ಬಸವಾದಿ ಪ್ರಮಥರಿಂದ ಪ್ರಭಾವಿತನಾಗಿ ಆದಯ್ಯನು ವಚನಗಳನ್ನುಕುರಿತು ರಚಿಸಿದ್ದರೂ ನಂತರದ ವೀರಶೈವ ಆದಯ್ಯನನ್ನು ಕವಿಗಳು ಕಾವ್ಯ-ಪುರಾಣಗಳನ್ನು ರಚಿಸಲು ಮತ್ತು ಜನತೆಗೆ ಮೆಚ್ಚಿಕೆಯಾಗಲು, ವೀರಶೈವಧರ್ಮದ ಪ್ರಸಾರಕ್ಕಾಗಿ ಕೈಗೊಂಡ ಕ್ರಿಯೆಗಳು ಮತ್ತು ನಿರ್ಮಿಸಿದ ಶಿವಾಲಯಗಳೇ" ಆಗಿವೆ. ಆದಯ್ಯನು ಆ ಕಾಲದ ಯುಗಧರ್ಮಕ್ಕೆ ಸ್ಪಂದಿಸಿದ್ದು, ಪರಮತಗಳಿಂದ ವೀರಶೈವ ಮತಕ್ಕೆ ಒದಗಿದ ಅಡ್ಡಿ ಆತಂಕಗಳನ್ನು, ವೀರ ಮಾಹೇಶ್ವರ ನಿಷ್ಠೆಯ ಮೂಲಕ ಹೋರಾಡುವುದರ ಮೂಲಕ ಶಿವಸಂಸ್ಕೃತಿಯನ್ನು ಶಿವಧರ್ಮವನ್ನು ರಕ್ಷಿಸಿರುವ ಅಪ್ರತಿಮ ಶಿವನಿಷ್ಠೆಯ ಪ್ರತೀಕವಾಗಿ ಈಗಿನ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯವು ಅಚ್ಚಳಿಯದೇ ಉಳಿದಿದೆ.

 ಪರಾಮರ್ಶನ ಗ್ರಂತಗಳು:

.ಆದಯ್ಯನ ವಚನಗಳು( ಸಂ.ಉತ್ತಂಗಿ ಚೆನ್ನಪ್ಪ) ಮುರುಘಾಮಠ

            ಧಾರವಾಡ,೧೯೫೭

. ಮಹಾಕವಿಹಂಪೆಯಹರಿಹರದೇವಕೃತನೂತನಪುರಾತನರಗಳೆಗಳು(ಸಂ.ಎಂ.ಎಸ್.ಸುಂಕಾಪುರ)

   ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,೧೯೭೬

. ಸೋಮನಾಥ ಚಾರಿತ್ರ (ಸಂ. ಆರ್.ಸಿ. ಹಿರೇಮಠ, ಎಂ.ಎಸ್. ಸುಂಕಾಪುರ)

   ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, (ದ್ವಿ.ಮು) ೧೯೬೭.

. ರಾಘವಾಂಕ ಚರಿತೆ (ಸಂ. ಸ.ಸ. ಮಾಳವಾಡ) ಮುರುಘಾಮಠ,

   ಧಾರವಾಡ,೧೯೫೪,

. ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ ಭಾಗ-೨ (ಸಂ. ಆರ್.ಸಿ.

ಹಿರೇಮಠ, ಎಂ.ಎಸ್‌. ಸುಂಕಾಪುರ) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೬೮,

೬. ಸಂಕೀರ್ಣ ವಚನ ಸಂಪುಟ. ೧, (ಸಂ. ಎಂ.ಎಂ. ಕಲಬುರ್ಗಿ) ಕನ್ನಡ ಮತ್ತು

    ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೩,

೭. ಎಂ. ಚಿದಾನಂದಮೂರ್ತಿ: ಸಂಶೋಧನ ತರಂಗ ಭಾಗ-೧.

   ಸರಸ ಪ್ರಕಾಶನ,ಮೈಸೂರು, ೧೯೬೬,

ವಚನ ಸಾಹಿತ್ಯ: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೫. 

.ಸಿ.ನಾಗಭೂಷಣಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು

                ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೨೦೦೦

                ವೀರಶೈವಸಾಹಿತ್ಯ : ಕೆಲವು ಒಳನೋಟಗಳು

                ವಿಜೇತ ಪ್ರಕಾಶನ, ಗದಗ,೨೦೦೮

  ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣೀ ಸೂತ್ರರತ್ನಾಕರದಲ್ಲಿ ಬಸವಣ್ಣನವರ     ಕುರಿತ ಸಂಗತಿಗಳು          ಡಾ.ಸಿ.ನಾಗಭೂಷಣ         ಕವಿಯ ಇತಿವೃತ್ತ : ಭ...