ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಆಗಸ್ಟ್ 17, 2025

                                  ಹಂಪೆಯ ವಿರೂಪಾಕ್ಷ : ಕಾಲಾನುಕ್ರಮಣಿಕೆಯ ಬೆಳವಣಿಗೆ

(ಕನ್ನಡ ಸಾಹಿತ್ಯ ಹಾಗೂ ಶಾಸನಗಳನ್ನು ಅನುಲಕ್ಷಿಸಿ)

                                       ಡಾ.ಸಿ.ನಾಗಭೂಷಣ 

   ಹಂಪೆಯನ್ನೊಳಗೊಂಡಂತೆ ಕನ್ನಡ ನಾಡಿನಲ್ಲಿ ವಿರೂಪಾಕ್ಷನನ್ನು ಆರಾಧಿಸುವ ಪದ್ಧತಿ ಯಾವಾಗ ಪ್ರಾರಂಭವಾಯಿತು ಎಂಬುದು ನಿಖರವಾಗಿ ತಿಳಿಯದಿದ್ದರೂ ಪೂರ್ವದಿಂದಲೂ ವಿರೂಪಾಕ್ಷನ ಆರಾಧನೆ ಕಂಡುಬರುತ್ತದೆ. ಹತ್ತನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಶಿವನನ್ನು ವಿರೂಪಾಕ್ಷನೆಂದು ಕರೆದು ಆರಾಧಿಸುವ ಪದ್ಧತಿ ಕನ್ನಡ ನಾಡಿನಲ್ಲಿ ಇತ್ತು ಎಂಬುದು ಸಾಹಿತ್ಯ ಹಾಗೂ ಶಾಸನಗಳಲ್ಲಿಯ ಉಲ್ಲೇಖದಿಂದತಿಳಿದುಬರುತ್ತದೆ. ವಿರೂಪಾಕ್ಷ ಎಂಬುದು ಸ್ಥಳದೈವ ಶಿವನ ಹೆಸರು. ವರ್ತುಲ ಸ್ತಂಭಾಕೃತಿಯ ಲಿಂಗರೂಪದಲ್ಲಿ ನೆಲೆನಿಂತಿದೆ. ಈ ಲಿಂಗವು ಮಾನವ ನಿರ್ಮಿಸಿದುದಲ್ಲ. ಸ್ವಯಂಭುಲಿಂಗ ಎಂಬುದು ಪರಂಪರಾಗತ ನಂಬಿಕೆ. ದೇವತೆಗಳು ಹಾಗೂ ವಿಗ್ರಹಗಳು ಉದ್ಭವವಾದವು ಎಂಬ ಕಲ್ಪನೆ ಅಥವಾ ನಂಬಿಕೆ ಇದ್ದಾಗ ಅವಿಗ್ರಹಗಳು ಸ್ವಯಂಭು ಎನ್ನಿಸಿಕೊಳ್ಳುತ್ತವೆ. ಶಿವಸ್ವರೂಪಿಯಾದ ಲಿಂಗವು ಸ್ವಯಂಭು ಆಗುವ ಅವಕಾಶ ಹೆಚ್ಚಾಗಿರುವುದರಿಂದ ಅಂತಹ ಲಿಂಗಗಳು ಪ್ರತಿಷ್ಠಿತವಾಗಿರುವ ದೇವಾಲಯಗಳು ಸ್ವಯಂಭು ಸ್ಥಾನಗಳೆಂದು ಪರಿಗಣಿತವಾಗಿವೆ. ವಿರೂಪಾಕ್ಷ : ವಿರೂಪ + ಅಕ್ಷಿ ಅಂದರೆ ವಿಕಾರವಾದ ಕಣ್ಣುಳ್ಳವನು ಎಂದೂ, ಈಶ್ವರ, ಮುಕ್ಕಣ್ಣ, ತ್ರಿಯಂಬಕ ಇತ್ಯಾದಿ ಸಮಾನಾರ್ಥಕ ಪದಗಳು ಅನ್ವಯಿತವಾಗಿವೆ. ಸಾಮಾನ್ಯ ಅರ್ಥದಲ್ಲಿ ತ್ರಿನೇತ್ರವುಳ್ಳವನೂ ಎಂಬ ಅರ್ಥವನ್ನು ಪಡೆದಿದೆ. ಹರನ ರೂಪಾಂತರಗಳಲ್ಲಿ `ವಿರೂಪಾಕ್ಷ' ಎನ್ನುವುದು ಒಂದು ಎಂಬುದು ಜಗನ್ನಾಥ ದಾಸರ ಕೀರ್ತನೆಯಿಂದ ತಿಳಿದುಬರುತ್ತದೆ. ವಿರೂಪಾಕ್ಷನೆಂದರೆ ತ್ರಿಪುರಾರಿ, ತ್ರಿನೇತ್ರವುಳ್ಳವನು. ಹಂಪೆಯ ವಿರೂಪಾಕ್ಷನ ರೂಪಗಳ ಬಗೆಗೆ ಕನ್ನಡ ಸಾಹಿತ್ಯ ಕೃತಿಗಳಲ್ಲಿ ವರ್ಣನೆ ಇದೆ. ಬಸವಣ್ಣನವರು ತಮ್ಮ ವಚನದಲ್ಲಿ ನಾಲ್ಕು ಯುಗಗಳಲ್ಲಿ ಶಿವನು ಒಂದೊಂದೆಡೆಯಿದ್ದ ಬಗೆಗೆ ಹೇಳುತ್ತ `ಕೃತಯುಗದಲ್ಲಿ ಕೇದಾರ ಎಂಬ ಮೂಲ ಸ್ಥಾನ',1 ತ್ರೇತಾಯುಗದಲ್ಲಿ ವಾರಣಾಸಿ ಮೂಲಸ್ಥಾನ, ದ್ವಾಪರದಲ್ಲಿ ವಿರೂಪಾಕ್ಷನೆಂಬ ಮೂಲಸ್ಥಾನ, ಕಲಿಯುಗದಲ್ಲಿ ಪರ್ವತ ಸ್ಥಾನ ಎಂದಿದ್ದು ನಾಲ್ಕು ಕಾಲಗಳಲ್ಲಿ ಶಿವನು ಒಂದೊಂದು ಪೀಠ ಸ್ಥಾನದಲ್ಲಿದ್ದ ಅಂದರೆ ಕೇದಾರ, ಕಾಶಿ, ಹಂಪೆ, ಶ್ರೀಶೈಲ ಪೀಠದಲ್ಲಿದ್ದ ಎಂಬುದಾಗಿ ತಿಳಿದುಬರುತ್ತದೆ. ದ್ವಾಪರಯುಗದಲ್ಲಿಯೇ ವಿರೂಪಾಕ್ಷ ಸ್ಥಾನ ಇತ್ತು ಎಂದು ವಿರೂಪಾಕ್ಷನ ಕಲ್ಪನೆಯನ್ನು ಬಹಳ ಹಿಂದಕ್ಕೆ ಕೊಂಡೊಯ್ದಿರುವುದನ್ನು ಈ ವಚನ ತಿಳಿಸುತ್ತದೆ. ಹರಿಹರನು ತನ್ನ ಕೃತಿಗಳಲ್ಲಿ ವಿರೂಪಾಕ್ಷನ ಕಲ್ಪನೆಯನ್ನು ಕುರಿತು ಸುದೀರ್ಘವಾಗಿ ವರ್ಣಿಸಿದ್ದಾನೆ.

ಹಂಪೆಯರಸನ ರಗಳೆಯಲ್ಲಿ ವಿರೂಪಾಕ್ಷನನ್ನು ಕುರಿತು 

ನಿತ್ಯ ಶ್ರೀಕಂಠ ಕಂಠಾಭರಣ ಕಿರಣ ಸಂಘಾತ ಸಂಬೂತ ನೂತ್ನಾ

ದಿತ್ಯ ವ್ರಾತಾಂಗ ಗಂಗಾಧರ ಪುರಹರ ಭಾಳಾಕ್ಷ ಚಂಚದ್ಭವಾನೀ

ಪ್ರತ್ಯಕ್ಷ ಸ್ವಾಮಿ ಕಾಮಾಂತಕ ನಿಖಿಳ ಮಖಾಧಾರ ವಿಸ್ತೀರ್ಣ ಭಕ್ತ

ರ್ಗತ್ಯಂತ ಪ್ರೇಮಿ ಪಂಪಾಪುರದರಸ ವಿರೂಪಾಕ್ಷ

ಆಪುರದೊಳೊಪ್ಪುವ ಶಶಿಧರಂ ವಿಷಧರಂ

ಕಾಪಾಲಿ ದಕ್ಷನ ಧ್ವರಹರಂ ಪುರಹರಂ

ದುರಿತ ತಿಮಿರ ವ್ರಜ ದಿವಾಕರ ಭೀಕರಂ

ಸಕಳ ಚೈತನ್ಯ ವಿಸ್ತಾರಕಂ ಪ್ರೇರಕಂ

ಶರಣ ನಿಕರ ಸ್ತೋತ್ರ ಪೂಜಿತಂ ಯೋಜಿತಂ

ನಿಖಿಳ ಶಾಶ್ವತ ಶಿವ ಮಹೋನ್ನತಂ ಸನ್ನುತಂ

ನೆಲಸಿಪ್ಪನಖಿಲಗುರು ಪಂಪಾ ವಿರೂಪಾಕ್ಷ2

ವಿರೂಪಾಕ್ಷಾಷ್ಟಕದಲ್ಲಿ ವಿರೂಪಾಕ್ಷನನ್ನು ಕುರಿತು,

ಅವನ ನಯನದೊಳು ಹವಿ

ತ್ರಿಶೂಲದ ಪೆಣ

ಮತ್ತವನ ಶಿರದೊಳ್ಸುರನದ ಇದೇವ ವಿರೂಪಾಕ್ಷ...

ಎಂದು ವರ್ಣನೆ ಇದೆ.

ಗಿರಿಜಾಕಲ್ಯಾಣದಲ್ಲಿ ಹರಿಹರನು ತನ್ನ ಆರಾಧ್ಯ ದೈವ ಪಂಪಾಪುರದರಸ ವಿರೂಪಾಕ್ಷನನ್ನು ಅಷ್ಟತನುಮೂರ್ತಿ ಸ್ವರೂಪದವನೆಂದು ಕೊಂಡಾಡಿದ್ದಾನೆ.

ಶ್ರೀಮಚ್ಛೈಲೇಂದ್ರಪುತ್ರೀಗುರುತರಹೃ ದಯ ಕ್ಷೀರವಾರಾಶಿ ಚಂದ್ರಂ    

ವೋಮಾರ್ಕೇಂದು ಕ್ಷಮಾತ್ಮಾನಲಜಲ ತಪಮಾನಾಷ್ಟ ಮೂರ್ತಿ ಪ್ರಸಿದ್ಧಂ3

ಹೈಮಾವತಿಯ ಪ್ರೇಮಲ ಹೃದಯವೆಂಬ ಪಾಲ್ಗಡಲಿಗೆ ಚಂದ್ರನೂ, ನೆಲ, ನೀರು, ಬೆಂಕಿ, ಗಾಳಿ, ಬಯಲು,

ರವಿ, ಶಶಿ ಮತ್ತು ಒಡೆಯರೆಂಬ ಎಂಟು ತನು ಮೂರ್ತಿಗಳಿಂದ ಪ್ರಸಿದ್ಧ ಸ್ವರೂಪವುಳ್ಳವನು ಆದ ಪಂಪಾ

ವಿರೂಪಾಕ್ಷ. ಹರಿಹರನು ವರ್ಣಿಸಿರುವ ಅಷ್ಟತನ ತತ್ವವನ್ನೊಳಗೊಂಡ ಶಿವನ ಶಿಲ್ಪವನ್ನು ಹಂಪೆಯಲ್ಲಿ ಮೊದಲ ಬಾರಿಗೆ ಸಂಶೋಧಕರು ಗುರುತಿಸಿದ್ದಾರೆ. ಶಿಲ್ಪಶೈಲಿಯ ದೃಷ್ಟಿಯಿಂದ ಈ ಶಿಲ್ಪವು 1415ನೇ ಶತಮಾನದಲ್ಲಿ ರೂಪುತಳೆದಿರಬೇಕೆಂದು ಭಾವಿಸಿದ್ದಾರೆ.4 ಈ ಶಿಲ್ಪವು ಪಂಪಾ ವಿರೂಪಾಕ್ಷನನ್ನು ಸಾಕಾರ ರೂಪದಲ್ಲಿ ಪ್ರತಿನಿಧಿಸುವಂತಹದ್ದಾಗಿದೆ. 

ರಾಘವಾಂಕನು ಸೋಮನಾಥ ಚಾರಿತ್ರ ಕೃತಿಯಲ್ಲಿ ವಿರೂಪಾಕ್ಷನನ್ನು ಕುರಿತು,

ಶ್ರೀಮಾಯಾವರನಿಂದುಧರನುಗ್ರನಭಯಂಕರ

ಮಾಯೂರಿಭಕ್ತ ಭಯಹಾರಿ ಗಂಗಾವಾರಿ

ಮಾಯುಭೂಗ್ಭುಷನುತ್ತಮವೇಶನಘತಿಮಿರ ಪೂಷನ ತಿವಿಗತ ದೋಷ

ಸ್ವಾಯುತಾಖಿಳ ಲೋಕದಾನತ ವಜ್ರಪುಮ್ಯ ದಾಯಕಂ ಹರಿವಿರಂಚ್ಯಾದಿ

ಪ್ರಮುಖ ದೇವರಾಯ ಪಂಪಾ ವಿರೂಪಾಕ್ಷ5 ಎಂದು ವರ್ಣಿಸಿದ್ದಾನೆ.

ಈ ಸಾಹಿತ್ಯ ಕೃತಿಗಳಲ್ಲಿಯ ಉಲ್ಲೇಖಗಳಲ್ಲಿ ವಿರೂಪಾಕ್ಷನ ರೂಪವು ತ್ರಿನೇತ್ರ, ತ್ರಿಪುರಾರಿ ಗಂಗಾಧರ, ಕಾಪಾಲಿ,

ದಕ್ಷನ ಧ್ವರ ಹರಂ, ನಡುಗಣ್ಣಿನವ, ಕಾಮಾಂತಕ, ಪುರಹರ, ಭಾಳಾಕ್ಷ, ಅಷ್ಟತನುಮೂರ್ತಿ ಇತ್ಯಾದಿ ರೀತಿಯಲ್ಲಿ ವ್ಯಕ್ತವಾಗಿದೆ. ಸಾಹಿತ್ಯ ಕೃತಿಗಳಲ್ಲಿ ವರ್ಣಿತವಾಗಿರುವ ವಿರೂಪಾಕ್ಷನ ರೂಪಗಳು ಹಂಪೆಯ ವಿರೂಪಾಕ್ಷನಿಗೆ ಸಂಬಂಧಪಟ್ಟವುಗಳಾಗಿವೆ.

   ವಿರೂಪಾಕ್ಷ ದೇವಾಲಯವು ಹಂಪೆಯಲ್ಲಿ ಯಾವಾಗ ಸ್ಥಾಪಿತವಾಯಿತೆಂದು ಹೇಳುವುದು ಕಷ್ಟವಾದರೂ,ಹನ್ನೆರಡನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಶಕ್ತಿ ಕೇಂದ್ರವಾಗಿದ್ದ ಹಂಪೆಯು ಶೈವ ಕ್ಷೇತ್ರವಾಗಿ ಪರಿಣಮಿಸಿದ್ದು, ಆ ಅವಧಿಯಲ್ಲಿ ಸ್ಥಾಪಿತವಾಗಿರಬೇಕು ಎಂದೆನಿಸುತ್ತದೆ. ಹಂಪೆಯು ಪ್ರಾಚೀನ ಕಾಲದಿಂದಲೂ ವಿರೂಪಾಕ್ಷ ದೇವಾಲಯದ ಮೂಲಕ ಪ್ರಸಿದ್ಧ ಧಾರ್ಮಿಕ ನೆಲೆವೀಡಾಗಿದ್ದಿತು ಎಂಬುದು ಪುರಾತತ್ತ್ವ ಅವಶೇಷಗಳು ಹಾಗೂ ಸಾಹಿತ್ಯದಲ್ಲಿಯ ಪುರಾವೆಗಳಿಂದ ವಿದಿತವಾಗುತ್ತದೆ. ಹಂಪೆಯಲ್ಲಿ ವಿರೂಪಾಕ್ಷನು ನೆಲೆ ಊರಿದ್ದಾಗಿಲಿನಿಂದ ಜನತೆಯ ಜೀವನ ಶ್ರದ್ಧೆ ಹಾಗೂ ನಿಷ್ಠೆಗಳ ಪ್ರತೀಕವಾಗಿದ್ದಾನೆ. ಹಂಪೆಯ ವಿರೂಪಾಕ್ಷ ದೇವಾಲಯವು ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರದರಸರು, ಸ್ಥಳೀಯ ಅರಸರು ಹಾಗೂ ಇಲ್ಲಿಯವರೆವಿಗೂ ತನ್ನದೇ ಆದ ರೀತಿಯಲ್ಲಿ ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಈಗಿನ ವಿರೂಪಾಕ್ಷ ದೇವಾಲಯದ ಸಂಕೀರ್ಣದ ವಿವಿಧ ಭಾಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ದೇವಾಲಯದ ವಿವಿಧ ಭಾಗಗಳು ವಿವಿಧ ಅರಸು ಮನೆತನಗಳ ಕಾಲದಲ್ಲಿ ಕ್ರಿ.ಶ. 7ನೇ ಶತಮಾನದಿಂದೀಚೆಗೆ ವಿಭಿನ್ನ ಕಾಲಗಳಲ್ಲಿ ನಿರ್ಮಾಣವಾಗಿರುವುದು ಹಾಗೂ ಕೆಲಭಾಗಗಳು ಜೀರ್ಣೋದ್ಧಾರ ಗೊಂಡಿರುವುದು ಕಂಡುಬರುತ್ತದೆ.

   ಹಂಪೆಯು ಪೂರ್ಣಕಾಲದಿಂದಲೂ ಪಂಪಾಕ್ಷೇತ್ರ, ಪಂಪಾಪುರ, ಪಂಪಾಪಟ್ಟಣ, ಪಂಪಾತೀರ್ಥ ಎಂದುಶಾಸನ, ಕಾವ್ಯಗಳಲ್ಲಿ ಕರೆಯಲ್ಪಟ್ಟಿದೆ. ಪಂಪಾಕ್ಷೇತ್ರ ಎಂದರೆ ಈಗಿನ ವಿರೂಪಾಕ್ಷ ದೇವಾಲಯದ ಸುತ್ತಲಪ್ರದೇಶಗಳೇ ಆಗಿವೆ. ಕ್ರಿ.ಶ. 1199ರ ಶಾಸನದಲ್ಲಿಯ ವಿವರದ ಪ್ರಕಾರ `ಪಂಪಾತೀರ್ಥ ಪ್ರದೇಶವನ್ನು ವಿರೂಪಾಕ್ಷ ಸೀಮೆ' ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. ಈಗಿನ ಚಕ್ರತೀರ್ಥವೆಂದು ಕರೆಯುವ ಭಾಗವು ಕಾವ್ಯಶಾಸನಗಳಲ್ಲಿ ಉಲ್ಲೇಖವಾಗಿರುವ ಪಂಪಾತೀರ್ಥವಾಗಿದೆ. ಈಗಲೂ ಚಕ್ರತೀರ್ಥ ಪ್ರದೇಶದ ಬಳಿ ಇರುವಪ್ರದೇಶವೇ ವಿರೂಪಾಕ್ಷ ದೇವರಿಗೆ ಪವಿತ್ರವಾದ ಸ್ಥಳವಾಗಿ ಕಂಡುಬರುತ್ತದೆ. ಚಕ್ರತೀರ್ಥದ ಬಳಿಯೇ ವಿರೂಪಾಕ್ಷನ ಫಲಪೂಜೆಯು ನಡೆಯುತ್ತಿದ್ದು ಇದು ಹಿಂದಿನಿಂದಲೂ ಹಂಪಿಯಲ್ಲಿ ವಿರೂಪಾಕ್ಷನ ಪೂಜೆಯಲ್ಲಿಯ ಬಹುಮುಖ್ಯವಾದ ಆಚರಣೆಯಾಗಿದೆ. ಈ ಪ್ರದೇಶವೇ ವಿಜಯನಗರ ಪೂರ್ವದಲ್ಲಿಯ ಪಂಪಾಕ್ಷೇತ್ರವಾಗಿದ್ದಿತು. ಈ ಪಂಪಾಕ್ಷೇತ್ರದ ಅರಸ, ಒಡೆಯನಾಗಿ ವಿರೂಪಾಕ್ಷ ಪ್ರಸಿದ್ಧಿಯನ್ನು ಪಡೆದಿದ್ದು, ವಿಜಯನಗರ ಪೂರ್ವದಲ್ಲಿಯೇ ವಿರೂಪಾಕ್ಷನು ಜನತೆಯ ಆರಾಧ್ಯ ದೈವವಾಗಿದ್ದನು. ವಿರೂಪಾಕ್ಷನ ಮಹಿಮೆಯಿಂದಲೇ ಹಂಪೆಯೂ ಪ್ರಸಿದ್ಧಿಯನ್ನು ಪಡೆಯಿತೆಂದು ಹೇಳಬಹುದು. ಹರಿಹರನ ಏಕಾಂತರಾಮಿತಂದೆ ರಗಳೆಯಲ್ಲಿ ಜೈನರ ವಿರುದ್ಧ ಪಣವೊಡ್ಡಿ ಶಿರವನ್ನರಿದುಕೊಂಡ ಏಕಾಂತರಾಮಯ್ಯನ ರುಂಡವನ್ನು ಅಗ್ಗಣಿಯ ಹೊನ್ನಿತಂದೆಗಳು, ಅಗ್ಗಳೆಯ ದೇವರಸರು ಮತ್ತು ಇತರೆ ಶರಣರ ಜೊತೆ ಹೊನ್ನ ಹರಿವಾಣದಲ್ಲಿಟ್ಟುಕೊಂಡು ಪುಲಿಗೆರೆಯ ಸೋಮನಾಥ, ಅಣ್ಣಿಗೆರೆಯ ಅಮೃತನಾಥ, ಕೆಂಭಾವಿಯ ಭೋಗನಾಥ, ಕಪ್ಪಡಿಯ ಸಂಗಮೇಶ, ಆವುಂದದ ನಾಗನಾಥ, ಹಂಪೆಯ ವಿರೂಪಾಕ್ಷ ಮೊದಲಾದ ಶೈವಕ್ಷೇತ್ರಗಳಲ್ಲಿ ಮೆರೆಸಿ ಅಬ್ಬಲೂರಿನ ಬ್ರಹ್ಮೇಶ್ವರ ದೇವಾಲಯಕ್ಕೆ ತರುತ್ತಾರೆಂಬ ಉಲ್ಲೇಖ ಇದೆ.6 ಈ ಕ್ಷೇತ್ರಗಳು ಆಗಿನ ಕಾಲಕ್ಕೆ ಪ್ರಸಿದ್ಧ ಶೈವಕ್ಷೇತ್ರಗಳಾಗಿದ್ದಂತೆ ಕಂಡುಬರುತ್ತವೆ. ಹನ್ನೆರಡನೇ ಶತಮಾನದ ವೇಳೆಗಾಗಲೇ ಹಂಪೆಯ ವಿರೂಪಾಕ್ಷ ದೇವಾಲಯವು ಪ್ರಸಿದ್ಧ ವಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿತ್ತು ಎಂಬುದು ವ್ಯಕ್ತವಾಗುತ್ತದೆ.

   ಹಂಪೆಯಲ್ಲಿ ವಿರೂಪಾಕ್ಷ ಹೆಸರಿನ ದೇವಾಲಯದ ಪ್ರಸ್ತಾಪ ಶಾಸನಗಳಲ್ಲಿ ಕಂಡುಬರುವುದರ ಜೊತೆಯಲ್ಲಿಯೇ ರಾಣಿಬೆನ್ನೂರು ತಾಲ್ಲೂಕಿನ ಇಟಗಿ, ಹರಪನಹಳ್ಳಿ ತಾಲ್ಲೂಕಿನ ಬೆಣ್ಣೆಹಳ್ಳಿ, ಬಳ್ಳಾರಿ ತಾಲ್ಲೂಕಿನ ಓರ್ವಾಯಿಗಳಲ್ಲಿಯೂ ವಿರೂಪಾಕ್ಷ ಹೆಸರಿನ ದೇವಾಲಯಗಳು ಸ್ಥಾಪಿತವಾಗಿದ್ದವು ಎಂಬುದುಶಾಸನೋಕ್ತ ಸಂಗತಿಗಳಿಂದ ವ್ಯಕ್ತವಾಗುತ್ತದೆ. ತುಂಗಭದ್ರಾ ಪರಿಸರದಲ್ಲಿಯೇ ಈ ದೇವಾಲಯಗಳು ಸ್ಥಾಪಿತವಾಗಿರುವುದು ಗಮನಿಸತಕ್ಕ ಸಂಗತಿಯಾಗಿದೆ. ಕ್ರಿ.ಶ. 169ರ ಶಾಸನದ ಪ್ರಕಾರ ನೂಱುಂಬಾಡದಮನೆಯತನವನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬ ಇಟ್ಟಿಗೆಯ ವಿರೂಪಾಕ್ಷ ದೇವರಿಗೆ ಸ್ಥಾನ ನಿವೇದಕ್ಕೆ ಭೂದಾನನೀಡಿದ್ದು ತಿಳಿದುಬರುತ್ತದೆ.7 ಕ್ರಿ.ಶ. 1149 ಓರ್ವಾಯಿ ಶಾಸನದಲ್ಲಿಯ ಉಲ್ಲೇಖದ ಪ್ರಕಾರ ಕಲ್ಯಾಣ ಚಾಲುಕ್ಯದೊರೆ ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ದೊರೆವದಿ ನಾಡಿನ ಕಾಚರಸ, ಗಂಗರಸರಲ್ಲದೆ ಇಮ್ಮಡಿ ರಾಚಮಲ್ಲನ ಮಹಾ ಪ್ರಧಾನನಾದ ಕಪ್ಪೆಯರಾಹಾರದಾನ ವಿನೋದಿಯಾದ ಲಖ್ಖೆಯ ನಾಯಕನು ಮತ್ತವನತಮ್ಮಂದಿರಾದ ಮಾದೆಯ ನಾಯಕ, ವಿರುಪೆಯ ನಾಯಕ, ಆಚೆಯ ನಾಯಕರು ದೊರೆವದಿನಾಡಿನ ಎಪ್ಪತ್ತರ

ಪ್ರಭು ಗಾವುಂಡುಗಳು, ಮೂಲಿಗರು, ಎಂಟು ಹಿಟ್ಟುಗಳು ಸೇರಿ ಕುತ್ತುಕನೂರಿನಲ್ಲಿ ವಿರೂಪಾಕ್ಷ ದೇವಾಲಯಗಳನ್ನು ಕಟ್ಟಿಸಿ ಓರುವಾಯಿಯ ಚಳೇಶ್ವರ ಪಂಡಿತನ ಮಗ ಭೀಮರಾಶಿ ಪಂಡಿತನ ಕಾಲು ತೊಳೆದು ದಾನ ನೀಡಿದ ಸಂಗತಿ ವ್ಯಕ್ತವಾಗಿದೆ.8 ಬೆಣ್ಣೆಹಳ್ಳಿ ಶಾಸನವು ಕ್ರಿ.ಶ. 1148ರ ಕಾಲಕ್ಕೆ ಪಂಪಾಪತಿ ಅಥವಾ ವಿರೂಪಾಕ್ಷ ದೇವಾಲಯವು ಕಲ್ಯಾಣ ಚಾಲುಕ್ಯ ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ನಿರ್ಮಾಣಗೊಂಡಿದ್ದನ್ನು ದಾಖಲಿಸಿದೆ.9 ಶಾಸನದಲ್ಲಿ ಈ ದೇವಾಲಯವನ್ನು ಸ್ವಯಂಭು ವಿರೂಪಾಕ್ಷನೆಂದೇ ಕರೆದಿದೆ. ಇತ್ತೀಚಿನ ಆಧಾರಗಳ ಪ್ರಕಾರ ಮೇಲ್ಕಂಡ ಸ್ಥಳಗಳಲ್ಲಿಯ ವಿರೂಪಾಕ್ಷ ದೇವಾಲಯಕ್ಕಿಂತ ಹಂಪೆಯ ವಿರೂಪಾಕ್ಷ ದೇವಾಲಯವೇ ಅತೀ ಪ್ರಾಚೀನ ಎಂಬುದು ವ್ಯಕ್ತವಾಗಿದೆ.

     ಪಂಪಾಕ್ಷೇತ್ರವು ಪ್ರಾಚೀನ ಪುಣ್ಯಕ್ಷೇತ್ರವಾಗಿದ್ದುದರಿಂದ ಪೂರ್ವದಿಂದಲೂ ದೇವಾಲಯಗಳು ಸ್ಥಾಪಿತಗೊಂಡಿದ್ದವು ಎಂದೇಳಬಹುದು. ಈಗಿನ ಹಂಪೆಯ ಅವಶೇಷಗಳಲ್ಲಿ ಸಂಶೋಧಕರು ಅಭಿಜ್ಞಿಸಿರುವಪ್ರಕಾರ ದೇವಾಲಯ ಪ್ರದೇಶದ ಪರಿಸರದಲ್ಲಿ ಅಂದು ತುಂಗಭದ್ರಾ ನದಿಯ ಬಲತಡಿಯಲ್ಲಿ ದೇವಾಲಯಗಳ ರಚನೆ ಸ್ಪರ್ಧಾತ್ಮಕ ರೀತಿಯಲ್ಲಿ ನಡೆದಿರುವುದು ದೇವಾಲಯಗಳ ಅವಶೇಷಗಳಿಂದ ವಿದಿತವಾಗುತ್ತದೆ. ಅದರಲ್ಲಿಯೂ ಪ್ರಾಚೀನ ದೇವಾಲಯಗಳು ಹೇಮಕೂಟ ಪ್ರದೇಶದಲ್ಲಿ ರಚಿತವಾಗಿವೆ. ಹೇಮಕೂಟದಲ್ಲಿಯ ಕೆಲವು ದೇವಾಲಯಗಳ ಕಟ್ಟಡಗಳು ಕಾಲದಿಂದ ಕಾಲಕ್ಕೆ ಬದಲಾವಣೆಗೊಳಗಾಗಿವೆ. ಬಾದಾಮಿ ಚಾಲುಕ್ಯದೊರೆ ವಿನಯಾದಿತ್ಯನ ಕಾಲದ ಕ್ರಿ.ಶ. 689ರ ತಾಮ್ರ ಶಾಸನವು ಹಂಪೆಯನ್ನು ಪಂಪಾತೀರ್ಥ ಎಂದು ಕರೆದಿದ್ದು ಈ ಶಾಸನದ ಕಾಲಕ್ಕೆ ಹಂಪೆಗೆ ಪಂಪಾತೀರ್ಥವೆಂಬ ಪರ್ಯಾಯ ಹೆಸರು ಇತ್ತು ಎಂಬುದು ವ್ಯಕ್ತವಾಗಿದೆ. ಕೆಂಪು ಉಸುಗು ಮರಳಗಲ್ಲಿನ ಕೆಲವು ದೇವಾಲಯಗಳು ಹೇಮಕೂಟ ಪರಿಸರದಲ್ಲಿ ಕ್ರಿ.ಶ. 7ನೇ ಶತಮಾನದ ವೇಳೆಗೆ ರಚಿತವಾಗಿದ್ದವು ಎಂಬುದಾಗಿ ವಾಸ್ತುಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಶ. 118ರ ಬಾಗಳಿ ಶಾಸನದಲ್ಲಿಯ `ಉದಯಾದಿತ್ಯ ದೇವರ್ಪಂಪಾಪುರದ ತೀರ್ಥಕ್ಕೆ ಬಿಜಯಂಗೆಯ್ದು' ಎಂಬ ಉಲ್ಲೇಖದಿಂದ1ನೊಳಂಬ ದೊರೆ ಪಂಪಾತೀರ್ಥಕ್ಕೆ ಭೇಟಿ ನೀಡಿದ್ದ ಎಂಬುದು ತಿಳಿದುಬರುತ್ತದೆ. ಈ ವೇಳೆಗಾಗಲೇ ಪಂಪಾತೀರ್ಥದಲ್ಲಿ ದೇವಾಲಯಗಳು ಸ್ಥಾಪಿತವಾಗಿದ್ದವೆಂದು ಹೇಳಬಹುದು. ವಿರೂಪಾಕ್ಷ ದೇವಾಲಯದ ಸಂಕೀರ್ಣದಲ್ಲಿಯ ದುರ್ಗಾದೇವಾಲಯದಲ್ಲಿನ ಕ್ರಿ.ಶ. 1199ರ ಶಾಸನವು ವಿರೂಪಾಕ್ಷನ ಉಲ್ಲೇಖ ಮಾಡಿದ್ದು ಶಾಸನದಲ್ಲಿಯ11 ವಿವರದ ಪ್ರಕಾರ 2ನೇ ರಾಚಮಲ್ಲನ ಅಮಾತ್ಯನಾದ ವೀರ ಕಲಿದೇವರಸ ಕುರುಗೋಡಿನಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ವಿರೂಪಾಕ್ಷ ತೀತ್ರ್ಥ ರಕ್ಷಣಾತ್ರ್ಥ ಸಾಮನ್ತ ಮಾದೆಯ ನಾಯಕಂ ಮತಂಗ ಪರ್ವತಮಂ ಪ್ರತಿಪಾಳಿಸುತ್ತ ಮಿರೆ ಇವನ ಮೈದುನ ಚೌಡಯ್ಯನು ವಿರೂಪಾಕ್ಷ ದೇವಾಲಯಕ್ಕೆ ಸೇರಿದಂತೆ ಪಂಪಾದೇವಿಗೆ ಚಿನ್ನದ ಕಲಶ ಹಾಗೂ ಪೂಜಾ ಪರಿಕರಗಳನ್ನು ಮಾಡಿಸಿಕೊಡುತ್ತಾನೆ. ಅಲ್ಲದೆ ಈ ಶಾಸನದಲ್ಲಿ ಹೇಮಕೂಟದಲ್ಲಿ ನೆಲೆಸಿರುವ ವಿರೂಪಾಕ್ಷನನ್ನು 

`ಶ್ರೀ ಮದ್ಗೌರೀ ಸಮೇತಂ ನೆಲಸಿರಲಿದು ತಾಂ ತಕ್ಕುದೀ ಪುಣ್ಯ ತೀತ್ರ್ಥ

ಶ್ರೀ ಮೆಯ್ವೆತ್ತೊಪ್ಪುವೀ ಹೇಮಶಿಲೆಯಿದೆನುತಂ ತಚ್ಚಿಲೇಂದ್ರಾಗ್ತ ಮೆಂದುಂ

ಧಾಮನ್ತಾನಾಗೆ ಸನ್ತಂ ನೆಲಸಿ ಸೊಗಯಿಪಾ ಶ್ರೀ ವಿರೂಪಾಕ್ಷದೇವಂ'

ಎಂದು ವರ್ಣಿಸಿದೆ. ಈ ಶಾಸನದಲ್ಲಿಯ ಮಾಹಿತಿಯಿಂದ ಕ್ರಿ.ಶ. 1199ಕ್ಕಿಂತ ಪೂರ್ವದಲ್ಲಿಯೇ ಹಂಪೆಯಲ್ಲಿವಿರೂಪಾಕ್ಷ ದೇವಾಲಯ ಸ್ಥಾಪಿತವಾಗಿತ್ತು ಎಂಬುದು ತಿಳಿದು ಬರುತ್ತದೆ. ಎಷ್ಟು ಮೊದಲು ಎಂಬುದಕ್ಕೆ ಕುಷ್ಟಗಿ ತಾ|| ಪುರದ ಶಾಸನ ಆಧಾರ ಒದಗಿಸಿದೆ. ಕ್ರಿ.ಶ. 118ರ ಪುರದ ಶಾಸನದಲ್ಲಿಯ12 ಪ್ರಕಾರ ಚಾಳುಕ್ಯಜಗದೇಕಮಲ್ಲನ ದಂಡನಾಯಕನು ಕೆಳವಡಿ3ಂಂನ್ನು ಆಳುತ್ತಿದ್ದಾಗ ಅಗ್ರಹಾರ ಬೈಳೆನೆಗೆಯೂರಿನ ಒಡೆಯಕೊಣ್ಡಯವಾರಿ ಅಯ್ಯಣಯ್ಯಂಗೆ `ಪಂಪಾಸ್ಥಾನ ವಿರೂಪಾಕ್ಷ ದೇವರ ಸನ್ನಿಧಾನದೊಳ್' 5 ಮತ್ತರು ಗದ್ದೆಯನ್ನು ದಾನವಾಗಿ ನೀಡಿದ ವಿಷಯ ವ್ಯಕ್ತವಾಗಿದೆ. ಕ್ರಿ.ಶ. 118ರ ಪುರದ ಶಾಸನವೇ ಹಂಪೆಯ ವಿರೂಪಾಕ್ಷನನ್ನು ಉಲ್ಲೇಖಿಸುವ ಪ್ರಥಮ ಶಾಸನವಾಗಿದೆ. ಹೀಗಾಗಿ ಕ್ರಿ.ಶ. 118ರ ವೇಳೆಗಾಗಲೇ ಹಂಪೆಯಲ್ಲಿ ವಿರೂಪಾಕ್ಷ ದೇವಾಲಯವು ಸ್ಥಾಪಿತವಾಗಿದ್ದು, ಧಾರ್ಮಿಕ ವ್ಯಕ್ತಿಗಳಿಗೆ ತನ್ನ ಸನ್ನಿಧಾನದಲ್ಲಿ ದತ್ತಿಯನ್ನು ಅರಸರುಗಳು ಬಿಡುವಷ್ಟರಮಟ್ಟಿಗೆ ಪ್ರಸಿದ್ಧಿಯನ್ನು ಪಡೆದಿತ್ತು. ಕ್ರಿ.ಶ. 1163ರ ಕುಕನೂರ ಶಾಸನದಲ್ಲಿ13 (ಬಿಜ್ಜಳನ ಕಾಲ) ಮಹಾಪ್ರದಾನ ದಂಡನಾಯಕ ಬಲದೇವಯ್ಯ ಮತ್ತವನ ಕರಣಗಳು ಬಿಜ್ಜಳದೇವನಲ್ಲಿ ಬಿನ್ನಹವನ್ನು ಮಾಡಿಕೊಂಡು ಕುಕ್ಕನೂರ3ರ ಶ್ರೀಮಂತ ಗ್ರಾಮವಾದ ಎಡೆಹಳ್ಳಿಯಲ್ಲಿ ಸರ್ವಬಾಧಾ ಪರಿಹಾರವಾಗಿ ಹಂಪೆಯ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಪುನರ್ದತ್ತಿಯಾಗಿ ಪಡೆದು ಮಲ್ಲಿಕಾರ್ಜುನ ದೇವರಿಗೆ ಹಾಗೂ ಬ್ರಾಹ್ಮಣರಿಗೆ ದಾನ ನೀಡಿದ ವಿವರ ವ್ಯಕ್ತವಾಗಿದೆ. ಕ್ರಿ.ಶ. 1163ರ ವೇಳೆಗಾಗಲೇ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ಪುನರ್ದತ್ತಿಯಾಗಿ ನೀಡುವಷ್ಟರ ಮಟ್ಟಿಗೆ ಖ್ಯಾತಿ ಪಡೆದಿತ್ತು ಎಂಬುದು ವ್ಯಕ್ತವಾಗುತ್ತದೆ. ಈಗಿನ ವಿರೂಪಾಕ್ಷ ದೇವಾಲಯದ ಸುತ್ತಲು ಮೂಲ ಪ್ರಾಚೀನ ದೇವಾಲಯಗಳು ಹಾಗೂ ಮನ್ಮುಖ ತೀರ್ಥ ಇರುವುದರಿಂದ ಅದುವೇ ವಿರೂಪಾಕ್ಷ ದೇವಾಲಯ ಆಗಿದ್ದು ಉಳಿದವು ನಂತರದ ಬೆಳವಣಿಗೆಗಳಾಗಿವೆ.

   ಕ್ರಿ.ಶ. 1199ರ ಶಾಸನದ ಪ್ರಕಾರ ಕುರುಗೋಡಿನ ದೊರೆಗಳು ಹಂಪೆಯಲ್ಲಿ ತಮ್ಮ ಸೈನ್ಯವನ್ನು ವಿರೂಪಾಕ್ಷ ತೀರ್ಥ ರಕ್ಷಣಾರ್ಥವಾಗಿ ಇಟ್ಟಿದ್ದನ್ನು, ಸೈನ್ಯದ ಮುಖಂಡರು ಮತಂಗ ಪರ್ವತದಲ್ಲಿ ನೆಲೆಸಿದ್ದನ್ನು ಹೇಳುತ್ತದೆ. ಈ ಸಂಗತಿಗಳು ಹಂಪೆಯನ್ನು ರಕ್ಷಿಸುವ ಹೊಣೆಯು ಕುರುಗೋಡಿನ ದೊರೆಗಳದಾಗಿತ್ತು ಎಂಬುದಾಗಿ ತಿಳಿದುಬರುತ್ತದೆ. ಹಂಪೆಯನ್ನು ವಿರೂಪಾಕ್ಷ ತೀರ್ಥ ಎಂದು ಕರೆಯುವುದು ಆ ವೇಳೆಗಾಗಲೇವಿರೂಪಾಕ್ಷ ಅಲ್ಲಿಯ ಜನಮನದ ಆರಾಧ್ಯ ದೈವವಾಗಿದ್ದನ್ನು ಸೂಚಿಸುತ್ತದೆ. ಹಂಪೆಯನ್ನು ರಕ್ಷಿಸುವ ಕಾರ್ಯದಲ್ಲಿ ಬಾಗಿಯಾಗಿರಲು ಕಾರಣ ಬಹುಶಃ ಹಂಪೆಯ ನಿಜವಾದ ಒಡೆಯ ವಿರೂಪಾಕ್ಷನೇ ಎಂದು ಆ ಪ್ರದೇಶದ ಜನತೆ ಮಾನ್ಯ ಮಾಡಿದ್ದುದು. ಹಂಪೆಯ ಪರಿಸರದ ಗದ್ದೆ ತೋಟಗಳು ಆಡಳಿತ ಇತ್ಯಾದಿಗಳ

ಉಸ್ತುವಾರಿಯನ್ನು ಕುರುಗೋಡು ದೊರೆಗಳ ಆಯಾ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರೂ ಇಡೀ ಪಂಪಾಪುರ ಪ್ರದೇಶದ ನಿಜವಾದ ರಾಜ ವಿರೂಪಾಕ್ಷ ಸ್ವಾಮಿಯೇ ಎಂಬಂತೆ ಭಾವಿಸಲಾಗಿತ್ತು. ವಿರೂಪಾಕ್ಷನೇ ಹಂಪೆಯ ಸಾಮ್ರಾಟನೆಂಬ ಪರಿಕಲ್ಪನೆ ತಾತ್ವಿಕ ಮಟ್ಟದಲ್ಲಿ ನಂಬಿಕೆಯ ಮಟ್ಟದಲ್ಲಿ ಎಂಬುದುದರಿಂದ ಮಥಿತವಾಗುತ್ತದೆ.14 ವಿರೂಪಾಕ್ಷ ದೇವಾಲಯವು ವಿಜಯನಗರ ಅರಸರುಗಳಿಗಿಂತ ಪೂರ್ವದಲ್ಲಿಯೇ ಜನತೆಯ ಆರಾಧ್ಯ ದೈವವಾಗಿತ್ತು. ವಿರೂಪಾಕ್ಷ ದೇವಾಲಯದಲ್ಲಿ ಇಂದು ಪ್ರಾಚೀನ ವಾಸ್ತುಶಿಲ್ಪದ ಕುರುಹುಗಳು ಕಾಣದಿರುವುದಕ್ಕೆ ನಂತರ ಕಾಲದಲ್ಲಿ ಅದರಲ್ಲಿಯೂ ವಿಜಯನಗರದ ಅರಸರ ಕಾಲದಲ್ಲಿ ಹಲವಾರು ಮಾರ್ಪಾಡುಗಳಿಗೆ ಒಳಗಾದುದು ಹಾಗೂ ಹಲವಾರು ಹೊಸ ಭಾಗಗಳು ಸೇರ್ಪಡೆಗೊಂಡು ವಿಸ್ತಾರಗೊಳ್ಳುತ್ತ ಸಂಕೀರ್ಣ ದೇವಾಲಯವಾಗಿ ಪರಿಣಮಿಸಿರುವುದು ವಿಜಯನಗರ ಸಾಮ್ರಾಜ್ಯ ಉದಯಗೊಳ್ಳುವ ಪೂರ್ವದಲ್ಲಿಯೇ ವಿರೂಪಾಕ್ಷನ ಸಾನ್ನಿಧ್ಯದಿಂದ ಹಂಪೆಯು ಶೈವಕ್ಷೇತ್ರ ಹಾಗೂ ವಿದ್ಯಾಕೇಂದ್ರವಾಗಿದ್ದು ಸಾಂಸ್ಕೃತಿಕ ಕೇಂದ್ರ ಎನಿಸಿ `ವಿಜಯ ವಿರೂಪಾಕ್ಷಪುರ' ಹೆಸರಿನಿಂದ ಗುರುತಿಸಲ್ಪಟ್ಟಿತು.

12ನೇ ಶತಮಾನದ ಕೊನೆಯ ಭಾಗಕ್ಕಾಗಲೇ ಹಂಪೆಯ ವಿರೂಪಾಕ್ಷ ದೇವರ ಪೂಜೆಗೋಸ್ಕರ ಮೀಸಲಾಗಿ ಹೂದೋಟ (ದೇವತೋಟ) ಇದ್ದುದಾಗಿ ತಿಳಿದುಬರುತ್ತದೆ. ವಿರೂಪಾಕ್ಷನ ಪೂಜೆಗೋಸ್ಕರ ಈ ಹೂದೋಟವನ್ನು ನಿರ್ಮಾಣ ಮಾಡಿದವರು ವಿರೂಪಾಕ್ಷ ತೀರ್ಥದ ಸಂರಕ್ಷಣೆಗಾಗಿಯೇ ಕುರುಗೋಡುದೊರೆಗಳು ನೇಮಿಸಿದ್ದ ನಾಯಕ ಪಾಳೆಗಾರ ಮನೆತನದವರು. ಹಂಪೆಯ ಸಂರಕ್ಷಣೆಗಾಗಿಯೇ ನೇಮಕವಾಗಿದ್ದು ನಾಯಕರ ಹೆಸರಿನ ದೇವತೋಟವು ಹಂಪೆಯ ವಿರೂಪಾಕ್ಷ ಸ್ವಾಮಿಯದ್ದೇ ಆಗಿತ್ತೆಂಬುದು ಸ್ಪಷ್ಟವಾಗುತ್ತದೆ.15 ಶಾಸನದಲ್ಲಿ ಉಲ್ಲೇಖಿತವಾಗಿರುವ ವಿರೂಪಾಕ್ಷ ಸ್ವಾಮಿಗೆ ಹೂವನ್ನು ಒದಗಿಸುತ್ತಿದ್ದ ನಾಯಕರ ದೇವತೋಟವು ಹರಿಹರನ ಪುಷ್ಪರಗಳೆಯಲ್ಲಿ ಸೂಚಿತವಾಗಿರುವ ಹೂದೋಟವು ಆಗಿದ್ದಿರಬಹುದು ಎಂದೆನಿಸುತ್ತದೆ. ಕ್ರಿ.ಶ. 1199 ರ ಶಾಸನದಲ್ಲಿ ಬರುವ ಹೂದೋಟ ಹಾಗೂ ಅಡಕೆ ತೋಟದ ಪ್ರದೇಶವು ಆ ಕಾಲದಲ್ಲಿ ವಿರೂಪಾಕ್ಷ ಸ್ವಾಮಿಗೆ ಸೇರಿತ್ತು ಎಂಬುದಾಗಿ ಊಹಿಸಬಹುದಾಗಿದೆ.

ಹನ್ನೆರಡು ಹಾಗೂ ಹದಿಮೂರನೇ ಶತಮಾನಗಳಲ್ಲಿ ವಿರೂಪಾಕ್ಷನ ಆವಾಸ ಸ್ಥಾನವಾದ ಹಂಪೆಯು ಧಾರ್ಮಿಕ ಗ್ರಂಥ ರಚನಾತ್ಮಕ ಕಾರ್ಯ ನಿರ್ವಹಣೆಯ ಪ್ರಮುಖ ಸ್ಥಾನವಾಗಿದ್ದಿತು. ವೀರಶೈವ ಧರ್ಮದಅನುಯಾಯಿಗಳಾಗಿದ್ದ ಕುರುಗೋಡಿನ ಅರಸರ ಪ್ರೋತ್ಸಾಹದಿಂದಾಗಿ ಶರಣರನ್ನು ಆಕರ್ಷಿಸಿತು. ಈ ನಿಟ್ಟಿನಲ್ಲಿ ಹರಿಹರ ಮೊದಲಿಗನಾಗಿ ಕಂಡುಬರುತ್ತಾನೆ. ಹರಿಹರನು ತನ್ನ ಗುರು ಪರಂಪರೆಯನ್ನು ಹೇಳಿಕೊಂಡಿರುವುದನ್ನು ನೋಡಿಕೊಂಡರೆ ಹರಿಹರನಿಗಿಂತ ಪೂರ್ವದಲ್ಲಿಯೇ ವೀರಶೈವ ಮಠಗಳು, ಗುರುಕುಲಾಶ್ರಮಗಳು ಇದ್ದವು ಎಂಬುದು ವ್ಯಕ್ತವಾಗುತ್ತದೆ.

  ಹೊಯ್ಸಳ ದೊರೆ ನರಸಿಂಹನ ಆಸ್ಥಾನದಲ್ಲಿ ಕರಣಿಕನಾಗಿದ್ದ ಹರಿಹರನು ರಾಜ ಸೇವೆಯನ್ನು ತ್ಯಜಿಸಿ ಜಿಗುಪ್ಸೆಗೊಂಡು ಹಂಪೆಗೆ ಹಿಂದಿರುಗಿದನೆಂದು ಪ್ರತೀತಿ ಇದೆ. ತನ್ನ ಆರಾಧ್ಯದೈವ ಹಂಪೆಯ ವಿರೂಪಾಕ್ಷನಸೇವೆಯಲ್ಲಿ ತನ್ನನ್ನು ಅರ್ಪಿಸಿಕೊಂಡು ಗ್ರಂಥರಚನೆಯಲ್ಲಿ ತೊಡಗಿದ್ದುದು ತಿಳಿದುಬರುತ್ತದೆ. ವೀರಶೈವ ಧರ್ಮವು ಪ್ರತಿಪಾದಿಸಿದ ತತ್ವಗಳಿಗೆ ಅನುಗುಣವಾಗಿ ಜೀವನ ಸಾಗಿಸುತ್ತ ವಿರೂಪಾಕ್ಷ ಸ್ವಾಮಿಗೆ ಸೇವೆ ಸಲ್ಲಿಸುತ್ತ ಬದುಕಿದ್ದುದರ ಬಗೆಗೆ ಸಿದ್ಧನಂಜೇಶನ ರಾಘವಾಂಕ ಚರಿತದಿಂದ ವ್ಯಕ್ತವಾಗುತ್ತದೆ. ರಾಘವಾಂಕ ಚರಿತೆಯ ಪ್ರಕಾರ ಹರಿಹರದೇವನು ವಿರೂಪಾಕ್ಷ ಸ್ವಾಮಿಯ ದೇವಸ್ಥಾನಕ್ಕೆ ಹತ್ತಿರದಲ್ಲೇ ಇದ್ದ ನಾಗನಾಥ ದೇವಾಲಯದಲ್ಲಿ ವಾಸವಾಗಿದ್ದ ಎಂಬುದು ವ್ಯಕ್ತವಾಗುತ್ತದೆ. ಹರಿಹರನ ಕಾಲಕ್ಕೆ ವಿರೂಪಾಕ್ಷ ದೇವಾಲಯವುಸಂಕೀರ್ಣ ದೇವಾಲಯವಾಗಿರದೆ ಕೇವಲ ಗರ್ಭಗುಡಿ, ನಂದಿಮಂಟಪಗಳಿಂದ ಕೂಡಿದ ದೇವಾಲಯವಾಗಿದ್ದಿತು. ಹರಿಹರನ ಸಮಗ್ರ ಕೃತಿಗಳಲ್ಲಿ ಹಂಪೆಯ ವಿರೂಪಾಕ್ಷನನ್ನು ಪಂಪಾ ಪುರದರಸ ಎಂದೇ ಸಂಬೋಧಿಸಿದ್ದಾನೆ. ವಿರೂಪಾಕ್ಷನನ್ನು ತನ್ನ ಕೃತಿಗಳುದ್ದಕ್ಕೂ ಹಂಪೆಯ ಆಳ್ವ, ಅರಸ, ಒಡೆಯ, ಅಧೀಶ್ವರ ಎಂದು ಸ್ತುತಿಸಿದ್ದಾನೆ.

ವಿಜಯನಗರ ಪೂರ್ವದಲ್ಲಿ ಹಂಪೆಯು ವಿರೂಪಾಕ್ಷ ದೇವರ ಅಧೀನಕ್ಕೆ ಒಳಪಟ್ಟಿತ್ತು ಎಂಬುದನ್ನು ಹರಿಹರನಕೃತಿಗಳಲ್ಲಿಯ `ಪಂಪಾಪುರದರಸ' ಎಂಬ ಹೇಳಿಕೆ ಪುಷ್ಠೀಕರಿಸುತ್ತದೆ. ವಿರೂಪಾಕ್ಷನೆ ಅಧಿದೈವ, ಒಡೆಯನಾದಪಂಪಾಪುರದ ಗಡಿಗಳ ಬಗೆಗೆ ಹರಿಹರನ ಪಂಪಾಕ್ಷೇತ್ರದ ರಗಳೆಯಲ್ಲಿ ಉಲ್ಲೇಖ ಸಿಗುತ್ತದೆ.

ಆ ಪುರದೊಳುಂ ನಾಲ್ಕು ಬಾಗಿಲುಗಳುಂ ನೋಡೆ

ಅಲ್ಲಿ ಮೂಡಣ ಬಾಗಿಲೊಳಗಿರ್ಪ ನುನ್ನತಂ

ಸಲ್ಲರಿತ ಗುಣ ಕಿನ್ನರೇಶ್ವರಂ ಶಾಶ್ವತಂ

ಅಲ್ಲಿ ತೆಂಕಣ ಬಾಗಿಲೊಳಗಿರ್ಪನ ಚಳಿತಂ

ಬಲ್ಲ ಶರಣರ ಜಂಬುಕೇಶ್ವರಂ ಶಾಶ್ವತಂ

ಪಶ್ಚಿಮ ದ್ವಾರದೊಳು ನೆಲಸಿರ್ಪ ನೊಪ್ಪದಿಂ

ನಿಶ್ಚಯಂ ದಿಟಂ ಸೋಮನಾಥಯ್ಸನತಿ ಪ್ರೇಮದಿಂ

ಉತ್ತರ ದ್ವಾರದೊಳು ನೆಲಸಿರ್ಪನೀಶ್ವರಂ

ಉತ್ತಮ ಗುಣಸ್ಥಾಣು ವಾಣಿಭದ್ರೇಶ್ವರಂ16

ಈ ವಿವರಣೆಯಿಂದ ಹರಿಹರನ ಕಾಲದ ಹಂಪೆಯ ನಾಲ್ಕು ಗಡಿಗಳು ಹಾಗೂ ಆಗಿನ ಕಾಲದ ಹಂಪೆಯ ವ್ಯಾಪ್ತಿಯನ್ನು ತಿಳಿಯಬಹುದಾಗಿದೆ. ಹದಿಮೂರನೇ ಶತಮಾನದ ಹಂಪೆಯ ವಿಸ್ತೀರ್ಣವು ವಿರೂಪಾಕ್ಷ ದೇವಾಲಯವನ್ನು ಕೇಂದ್ರದಲ್ಲಿಟ್ಟು ನೋಡಿದರೆ ಅದರ ನಾಲ್ಕು ದಿಕ್ಕುಗಳಿಗೆ ಸರಿಯಾಗಿ ಅಲ್ಲಿಗೆ ಸುಮಾರು ಹತ್ತು ಹದಿನೈದು ಕಿ.ಮೀ. ದೂರದಲ್ಲಿ ಆ ನಾಲ್ಕು ದೇವಾಲಯಗಳಿವೆ. ಕಿನ್ನರೇಶ್ವರನನ್ನು ಬಿಟ್ಟರೆ ಉಳಿದ ಮೂರು ದೇವಾಲಯಗಳು ಬೆಟ್ಟದ ಮೇಲಿವೆ. ಶಿವರಾತ್ರಿಯ ದಿವಸ ವಿರೂಪಾಕ್ಷನ ಶಾಸ್ತ್ರೋಕ್ತ ದರ್ಶನವಾಗಬೇಕಾದರೆ ನಾಲ್ಕು ದೇವಾಲಯಗಳನ್ನು ದರ್ಶಿಸಿ ವಿರೂಪಾಕ್ಷ ದೇವಾಲಯದಲ್ಲಿ ಅಂತಿಮ ಪೂಜೆ ಸಲ್ಲಿಸುವ ಪದ್ಧತಿ ಈಚಿನವರೆಗೂ ಇತ್ತು.17 ಇದರಿಂದಾಗಿ ವಿಜಯನಗರ ಪೂರ್ವದಲ್ಲಿ ವಿರೂಪಾಕ್ಷನ ಅಧೀನತ್ವದ ಹಂಪೆಯ ವಿಸ್ತಾರದ ಹರವು ವ್ಯಕ್ತವಾಗುತ್ತದೆ.

 ಹರಿಹರನ ಕಾಲಕ್ಕಾಗಲೇ ಹಂಪೆಯು ಯಾರ ಒಡೆತನಕ್ಕೂ ಒಳಗಾಗದ ದೇವರ ಸಾಮ್ರಾಜ್ಯವಾಗಿದ್ದಿತು. ಆದೇವರ ಸಾಮ್ರಾಜ್ಯದ ಪರ್ಯಾಯ ನಾಮ ವಿರೂಪಾಕ್ಷನೇ ಆಗಿತ್ತು. ವಿರೂಪಾಕ್ಷನಲ್ಲಿ ಅಚಲನಿಷ್ಠೆಯನ್ನುಳ್ಳ ಹರಿಹರ ತನ್ನ ಹೆಸರನ್ನು ಬಿಟ್ಟು ವಿರೂಪಾಕ್ಷನ ಹೆಸರಿನಲ್ಲಿ ಕಾವ್ಯ ಬರೆದ. ಹರಿಹರನಿಗೆ ವಿರೂಪಾಕ್ಷನೇ ಕವಿ ಲಿಪಿಕಾರ ನಾನು ಎನ್ನುವಷ್ಟರಮಟ್ಟಿಗೆ ಭಾವುಕನಾದವನು ದ್ವಾರಸಮುದ್ರದಲ್ಲಿ ಕರಣಿಕ ಕಾಯಕ ತೊಡಗಿಕೊಂಡಿದ್ದ ದರ್ಭದಲ್ಲಿ ದೂರದ ಹಂಪೆಯ ವಿರೂಪಾಕ್ಷನ ತೆರೆಗೆ ಆವರಿಸಿದ್ದ ಉರಿಯನ್ನು ಆರಿಸುವಷ್ಟರ ಮಟ್ಟಿಗೆ ಮಹಿಮಾಶಾಲಿಯಾಗಿದ್ದ. ಹರಿಹರನು ಚಂಪೂ, ರಗಳೆ, ಶತಕ ಸಾಹಿತ್ಯ ಪ್ರಕಾರಗಳ ಕೃತಿಗಳಲ್ಲಿ ವಿರೂಪಾಕ್ಷನಲ್ಲಿ ತನಗಿರುವ ಉತ್ಕಟಭಕ್ತಿಯನ್ನು ವಿಧವಿಧವಾಗಿ ವ್ಯಕ್ತಪಡಿಸಿದ್ದಾನೆ. ಹರಿಹರನ ಗಿರಿಜಾಕಲ್ಯಾಣ ಕೃತಿಯ ಪ್ರಕಾರ ಶಿವಗಿರಿಜೆಯರ ವಿವಾಹ ಕಾರ್ಯ ನಡೆಯುವುದು ದೂರದ ಹಿಮಾಲಯದಲ್ಲಿ ಅಲ್ಲ. ಹಂಪೆಯ ಪರಿಸರದಲ್ಲಿಯೇ ನಡೆಯುವುದು. ಗಿರಿಜೆಯು (ಪಂಪಾಂಬಿಕೆ) ಶಿವನ (ವಿರೂಪಾಕ್ಷ) ಕೈಹಿಡಿಯುವ ಪ್ರಸಂಗವೇ ಗಿರಿಜಾ ಕಲ್ಯಾಣದ ವಸ್ತು. ಈಗಲೂ ಗಿರಿಜಾ ಕಲ್ಯಾಣೋತ್ಸವ ವಿಧಿಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಾಚರಣೆಗಳನ್ನು ಇಲ್ಲಿಯ ವಿರೂಪಾಕ್ಷ ಹಾಗೂ ಪಂಪಾಂಬಿಕೆಯರ ದೇವಾಲಯದಲ್ಲಿ ಪ್ರತೀವರ್ಷವೂ ನಿಗದಿಪಡಿಸಿದ ದಿನಾಂಕದಂದು ಆಚರಿಸುತ್ತಾರೆ. ಹರಿಹರನ ಅಸಂಖ್ಯಾತ ರಗಳೆಗಳಲ್ಲಿ ಆದಿ ಮತ್ತು ಅಂತ್ಯಗಳಲ್ಲಿ ತಪ್ಪದೆ ಅಧಿದೈವ ವಿರೂಪಾಕ್ಷ ಮುದ್ರಿಕೆಯ ಕಂದ ಬಳಕೆಯಾಗಿದೆ. ರಕ್ಷಾಶತಕ ಕಾವ್ಯ 11 ಪದ್ಯಗಳಿಂದ ಡಿದ್ದು ಪ್ರತಿಯೊಂದು ಪದ್ಯವೂ ಪಂಪಾಪುರದರಸ ವಿರೂಪಾಕ್ಷ ರಕ್ಷಿಪುದೆನ್ನಂ ಎಂದು ಕೊನೆಗೊಳ್ಳುತ್ತದೆ. ತನ್ನನ್ನು ಪಂಪಾಪುರದರಸನ ಸಾಕ್ಷಾತ್ ಸುಪುತ್ರನೆಂದು ಕರೆದುಕೊಂಡಿದ್ದಾನೆ. ವಿರೂಪಾಕ್ಷಾಷ್ಟಕ ಹಾಗೂ ಹಂಪೆಯರಾಯ ಶತಕ ಲಘುಕೃತಿಗಳಲ್ಲಿಯೂ ವಿರೂಪಾಕ್ಷನನ್ನು ಮನದುಂಬಿ ಸ್ತುತಿಸಿದ್ದಾನೆ. ಹರಿಹರನು, ಹಂಪೆಯಾಳ್ದ ವಿರೂಪಾಕ್ಷನೊಬ್ಬನನ್ನು ಮಾತ್ರ ಹೊಗಳಬೇಕೆಂದು ಮತ್ತೆ ಮತ್ತೆ ಘೋಷಿಸಿಕೊಂಡಿದ್ದಾನೆ. ದೊರೆಗಳಾದರೂ ಅವರ ಮೇಲೆ ಕಾವ್ಯಗಳನ್ನು ಬರೆಯಬಾರದೆಂಬ ಸಂಕಲ್ಪವನ್ನು ಮಾಡುವ ಧೈರ್ಯ ಹರಿಹರನಿಗೆ ಬರಲು ಕಾರಣ, ಅವನ ಹುಟ್ಟೂರಾದ ಹಂಪೆಯ ಬಹುಶಃ ಯಾವುದೇ ರಾಜರ ಅಧೀನದಲ್ಲೂ ಇರದೆ ಒಂದು ರೀತಿಯಲ್ಲಿ ಸ್ವತಂತ್ರವಾಗಿದ್ದುದೇ ಆಗಿದೆ. `ಅವನು ಇದ್ದ ವಾತಾವರಣದಲ್ಲಿ ದೈವಕ್ಕೆ ಬಾಗುವುದಿತ್ತೇ ಹೊರತು ರಾಜನಿಗಲ್ಲ. ಆ ದೈವ ಬೇರಾರು ಆಗಿರದೆ ಹಂಪೆಯ ವಿರೂಪಾಕ್ಷನೇ ಆಗಿದ್ದ.'18 ಹರಿಹರನ ಸೋದರಳಿಯನಾದ ರಾಘವಾಂಕನು ಹಂಪೆಯ ವಿರೂಪಾಕ್ಷನ ರೂಪವನ್ನು ಕುರಿತು ಸೋಮನಾಥಚರಿತ್ರೆ, ಹರಿಶ್ಚಂದ್ರ ಕಾವ್ಯ ಹಾಗೂ ವೀರೇಶ ಚರಿತೆಗಳಲ್ಲಿ ವರ್ಣಿಸಿದ್ದಾನೆ. ಹರಿಶ್ಚಂದ್ರ ಕಾವ್ಯದಲ್ಲಿ ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ಹೇಳುತ್ತಾ ತಾನು ಇಡೀ ಭೂಮಂಡಲದ ಒಡೆಯನಾಗಿದ್ದರೂ ತನ್ನ ಆಳ್ವಿಕೆಗೆ `ಹೇಮಕೂಟಂ ವಾರಣಾಸಿಗಳು' ಹೊರಗು, ಆ ಎರಡು ಪ್ರದೇಶಗಳಿಗೆ ನೀನು ಒಡೆಯನಲ್ಲ. ಅವಕೆ ವಿಶ್ವೇಶ್ವರ ವಿರೂಪಾಕ್ಷರೇ ಒಡೆಯರು, ಅವನಿಯೊಳಗಲ್ಲಿ ನಿನ್ನಾಜ್ಞೆಗಳು ಸಲ್ಲ'19 ಎಂದು ಹರಿಶ್ಚಂದ್ರ ವಾದಿಸುತ್ತಾನೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹಂಪೆ, ವಾರಣಾಸಿಗಳಿಗೆ ವಿರೂಪಾಕ್ಷ, ವಿಶ್ವೇಶ್ವರರೇ ಅಧಿಪತಿಗಳು. ಭೂರಾಜರುಗಳ ಆಜ್ಞೆ, ಅಧಿಕಾರಗಳು ನಡೆಯುವುದಿಲ್ಲ ಎಂಬುದು ಹದಿಮೂರನೇ ಶತಮಾನದ ವೇಳೆಗಾಗಲೇ ಜನಮನದಲ್ಲಿ ಪಂಪಾಪುರದ ಪ್ರದೇಶದ ನಿಜವಾದ ರಾಜ ವಿರೂಪಾಕ್ಷ ಸ್ವಾಮಿಯೇ ಎಂಬ ಕಲ್ಪನೆ ಬೆಳೆದಿತ್ತು. ಕ್ರಿ.ಶ. 122 ರಲ್ಲಿದ್ದ ಸೋಮರಾಜ ಕವಿಯು ತನ್ನ ಉದ್ಭಟ ಕಾವ್ಯದಲ್ಲಿ ಹಂಪೆಯ ಅಧಿದೇವತೆ ವಿರೂಪಾಕ್ಷನ ಪ್ರಾರ್ಥನೆ ಇರುವುದರ ಜೊತೆಗೆ ಕೃತಿಯ ಒಳಗಡೆ ಹಂಪೆಯ ಪರಿಸರ, ವಿರೂಪಾಕ್ಷ ಸ್ವಾಮಿಯ ಬಗೆಗೆ ಸವಿವರವಾದ ವರ್ಣನೆ ಇದೆ. ಹರಿಹರನ ಪ್ರಯತ್ನದಿಂದಾಗಿ ಹಂಪೆಯ ಪರಿಸರದಲ್ಲಿ ವಿರೂಪಾಕ್ಷನ ಬಗೆಗಿನ ಭಕ್ತಿ ನಿಷ್ಠೆ, ಧರ್ಮಜಾಗೃತಿ ಜನತೆಯಲ್ಲಿ ಇಮ್ಮಡಿಸಿತು. ಭಕ್ತರ ಸಂಖ್ಯೆಯು ಹೆಚ್ಚಿತು. ವಿಜಯನಗರ ಸಾಮ್ರಾಜ್ಯ ಪೂರ್ವದಲ್ಲಿಯೇ ವಿರೂಪಾಕ್ಷನ ಕೀರ್ತಿ ಎಲ್ಲೆಡೆ ಪಸರಿಸಿತ್ತು ಹಾಗೂ ಹಂಪೆಯ ವಿರೂಪಾಕ್ಷ ಸ್ವಾಮಿಯ ದೇವಾಲಯವನ್ನು ಕೇಂದ್ರವಾಗಿರಿಸಿಕೊಂಡು ಬಹು ಪ್ರಮುಖವಾದ ಒಂದು ಹಿಂದೂ ಧರ್ಮದ ಕ್ಷೇತ್ರವಾಗಿ ಅಭಿವೃದ್ಧಿಯತ್ತ ಮುನ್ನಡೆಯುತ್ತಿತ್ತು ಎಂಬದು ವಿದಿತವಾಗುತ್ತದೆ.2ಹೊಯ್ಸಳರ ಅರಸರ ಕಾಲಾವಧಿಯಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯವು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು ಎಂಬುದಾಗಿ ತಿಳಿದುಬರುತ್ತದೆ. ಹೊಯ್ಸಳ ಅರಸ ಸೋಮೇಶ್ವರ ದೇವನ ಒಂದು ಶಾಸನವು ಅರಸನು ಹಂಪೆಯ ವಿರೂಪಾಕ್ಷ ದೇವರಿಗೆ ಆ ರಾಜಧಾನಿಯ ಪರಿಸರದಲ್ಲಿ ತನ್ನ ಕಾರ್ಯಸಿದ್ಧಿಗಾಗಿ ಚಿಕ್ಕಗರಜೆ ಗ್ರಾಮವನ್ನು ದಾನ ನೀಡಿದ್ದು ಆ ಗ್ರಾಮದ ಆದಾಯವು ದೇವರ ಪೂಜೆಗೆ ಸಲ್ಲಬೇಕೆಂದು ನಿರೂಪಿಸಿದೆ.21 ಜೊತೆಗೆ ವಿರೂಪಾಕ್ಷನನ್ನು ಕುರಿತು ವಿಶೇಷಣಗಳಿಂದ ಕುರಿತು ಸ್ತುತಿಸಲಾಗಿದೆ.

ದೆಹಲಿಯ ಸುಲ್ತಾನರ ದಾಳಿಗೆ ತುತ್ತಾದ ಹೊಯ್ಸಳ ಸಾಮ್ರಾಜ್ಯ ಬಲ್ಲಾಳನ ಕಾಲದಲ್ಲಿ ಕಷ್ಟಗಳಿಗೆ ಗುರಿಯಾಯಿತು. ಈ ಹಂತದಲ್ಲಿ ಮೂರನೆಯ ಬಲ್ಲಾಳನು ವಿರೂಪಾಕ್ಷ ಸ್ವಾಮಿಯಲ್ಲಿ ಮೊರೆ ಹೊಕ್ಕು ಸಮಕಾಲೀನ ಜನತೆಯ ಸಹಾಯ, ಸಹಕಾರ, ಪ್ರೋತ್ಸಾಹಗಳನ್ನು ನಿರೀಕ್ಷಿಸಿದನು. ಆ ವೇಳೆಗೆ ವಿರೂಪಾಕ್ಷನುಜನರ ಮನಸ್ಸಿನ ಅಧಿದೈವನಾಗಿ ಖ್ಯಾತಿಗೊಂಡಿದ್ದರಿಂದ ಜನತೆಯಿಂದ ಸಹಾಯ ಸಹಕಾರ ನಿರೀಕ್ಷಿಸಲು ತನ್ನನ್ನು ವೀರ ವಿರೂಪಾಕ್ಷ ಬಲ್ಲಾಳ ಎಂದು ಕರೆದುಕೊಂಡಿದ್ದಲ್ಲದೆ, ಹಂಪೆಯ ಒಡೆಯನೆಂದು ಹೇಳಿಕೊಂಡನು. ಆತನು ತನ್ನ ರಾಜಧಾನಿಯನ್ನು ತಾತ್ಕಾಲಿಕವಾಗಿ ಹಂಪೆಗೆ ಬದಲಾಯಿಸಿ ಅದನ್ನು ಶ್ರೀ ವೀರವಿಜಯ ವಿರೂಪಾಕ್ಷಪುರ, ಹೊಸ ಹಂಪೆಯ ಪಟ್ಟಣ ಎಂದು ಕರೆದನು. ಹಂಪೆಯನ್ನು ಉಪರಾಜಧಾನಿಯನ್ನಾಗಿ ಮಾಡಿಕೊಳ್ಳಲು ಕಾರಣ ಬಹುಶಃ ಪಂಪಾವಿರೂಪಾಕ್ಷನ ಸಾನ್ನಿಧ್ಯದಲ್ಲಿರುವ ಹಾಗೂ ತುಂಗಭದ್ರೆ ಮತ್ತು ಉದ್ದಕ್ಕೂ ಚಾಚಿರುವ ಕಾಡುಗಲ್ಲಿನ ಪರ್ವತ ಶ್ರೇಣಿಗಳು ಉತ್ತರ ಧಾಳಿಯನ್ನು ತಡೆಗಟ್ಟಲು ಅನುಕೂಲವಾಗಿದ್ದಿತು. ಮುಮ್ಮಡಿ ಬಲ್ಲಾಳ ನಿರ್ಮಿತ ಆ ಪಟ್ಟಣವು ಆ ಕಾಲದ ಶಾಸನಗಳಲ್ಲಿ ಹೊಸ ಹಂಪೆಯ ಪಟ್ಟಣ, ವಿರೂಪಾಕ್ಷ ಹೊಸ ಪಟ್ಟಣವಿರೂಪಾಕ್ಷ ಪಾದ ಇತ್ಯಾದಿ ಹೆಸರುಗಳಿಂದ ಉಲ್ಲೇಖಿತವಾಗಿದೆ. ಕ್ರಿ.ಶ. 1139ರ ಶಾಸನದಲ್ಲಿ ಮೂರನೇ ಬಲ್ಲಾಳನು `ಶ್ರೀ ವೀರವಿಜಯ ವಿರೂಪಾಕ್ಷಪುರ' ನೆಲೆವೀಡಿನಿಂದ ಆಳುತ್ತಿದ್ದಂತೆ ಉಲ್ಲೇಖಿಸಿದೆ.22 ಬಲ್ಲಾಳನು ಈ ರೀತಿ ಕಾರ್ಯ ಪ್ರವೃತ್ತನಾಗಲು ಮತ್ತೊಂದು ಕಾರಣ ಎಂದರೆ `ವಿರೂಪಾಕ್ಷ ದೈವದ ಘನತೆಯಿಂದಾಗಿ ಪ್ರಭಾವಿತವಾಗಿದ್ದ ಶೈವ / ವೀರಶೈವ ಸಮಾಜ. ಆ ಸಮಾಜದ ಜಾಗ್ರತಾ ಶಕ್ತಿ.'23 ಈ ಶಕ್ತಿಯನ್ನು ತನ್ನ ಅನುಕೂಲಕ್ಕೆ ಉಪಯೋಗಿಸಿಕೊಂಡನು. ವಿಪತ್ತಿನ ಸಮಯದಲ್ಲಿ ತನ್ನ ಉದ್ದೇಶ ಸಾಧನೆಗಾಗಿ ಅಲ್ಲಿಯ ಬಹುಸಂಖ್ಯಾತ ಪ್ರಜೆಗಳ ಬಲವನ್ನು ಗಳಿಸಿಕೊಳ್ಳುವ ಸಲುವಾಗಿ ತನ್ನ ಸುತನಿಗೆ ಹಂಪೆಯ ವಿರೂಪಾಕ್ಷನ ಹೆಸರನ್ನೇ ಇಟ್ಟನು. ಪ್ರಭಾವೀ ದೈವವಾಗಿದ್ದ ಹಂಪೆಯ ಹೆಸರನ್ನು ಮುಂದುವರೆಸಿಕೊಂಡು ಹಂಪೆಯ ಪರಿಸರದ ಜನತೆಯ ಸಹಕಾರಗಳನ್ನು ನಿರೀಕ್ಷಿಸಿದನು. ಹದಿನಾಲ್ಕನೇ ಶತಮಾನದ ವೇಳೆಗಾಗಲೇ ವಿರೂಪಾಕ್ಷ ದೇವಾಲಯ ಸುಪ್ರಸಿದ್ಧ ದೇವಾಲಯವಾಗಿದ್ದು ಹೊಯ್ಸಳ ರಾಜ್ಯದ ಉತ್ತರ ಮೇರೆಯಲ್ಲಿಯ ರಾಜಕೀಯ ಜೀವನದಲ್ಲಿ ಸಕ್ರಿಯವಾಗಿ ಪಾತ್ರವಹಿಸಿತ್ತು. ಕ್ರಿ.ಶ. 134ಂರಲ್ಲಿ ಮೂರನೆಯ ಬಲ್ಲಾಳನು ತನ್ನ ಪುತ್ರ ವಿರೂಪಾಕ್ಷ ನಾಲ್ಕನೇ ಬಲ್ಲಾಳನ ಯುವರಾಜ ಪಟ್ಟ ಮಹೋತ್ಸವವನ್ನು ವಿರೂಪಾಕ್ಷ ದೇವಾಲಯದಲ್ಲಿಯೇ ನೆರವೇರಿಸಿದ. ಹೀಗಾಗಿಹೊಯ್ಸಳ ಅರಸರ ಕೊನೆಯ ಆಳ್ವಿಕೆಯ ದಿವಸಗಳಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯವು ಮಹತ್ತರ ಪಾತ್ರ ವಹಿಸಿತ್ತು. ಹದಿಮೂರು ಹಾಗೂ ಹದಿನಾಲ್ಕನೇ ಶತಮಾನಗಳಲ್ಲಿ ವಿರೂಪಾಕ್ಷ ದೇವಾಲಯವು, ಕುರುಗೋಡು ದೊರೆಗಳ, ಹೊಯ್ಸಳ ಕೊನೆಯ ಅರಸರುಗಳ, ಕವಿಗಳ ಆರಾಧ್ಯ ದೈವವಾಗಿದ್ದು ಹಂಪೆಯ ಸಮಸ್ತ ಜನತೆಯ ಚಟುವಟಿಕೆಗಳನ್ನು ನಿಯಂತ್ರಿಸುವ ಸಾಂಸ್ಕೃತಿಕ ಕೇಂದ್ರವಾಗಿದ್ದು ಜನತೆಯ ಜೀವನಾಡಿಯಾಗಿ ಪರಿಣಮಿಸಿತ್ತು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಮೇಲೆ ಆರಂಭಕಾಲದ ಸಂಗಮ ವಂಶದ ಅರಸರುಗಳ ಕಾಲದಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯವು ಎಲ್ಲಾ ರೀತಿಯಿಂದಲೂ ವ್ಯಾಪಕ ಮಹತ್ವವನ್ನು ಪಡೆಯಿತು. ಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಲು ಹಕ್ಕಬುಕ್ಕರು ಹಂಪೆಯ ಪ್ರದೇಶವನ್ನು ಆರಿಸಿಕೊಳ್ಳಲು ಸಹಜ ಪ್ರಾಕೃತಿಕ ರಕ್ಷಣೆಯೊಡಗೂಡಿದ ದುರ್ಗಮ ಪ್ರದೇಶದ ಜೊತೆಗೆ `ಬಹುಶಃ ತಾತ್ವಿಕವಾಗಿಯಾದರೂ ಹಂಪೆಯ ಪ್ರದೇಶವು ಯಾವುದೇ ರಾಜನ ಪ್ರಭುತ್ವದಿಂದ ಮುಕ್ತವಾಗಿದ್ದ (ವಿರೂಪಾಕ್ಷನ ಆಡಳಿತವಿದ್ದ) ಪ್ರದೇಶವೂ ಆಗಿತ್ತು'25 ಎಂಬುದು ಕಾರಣವಾದಂತಿದೆ. ಸಂಗಮ ವಂಶದ ಅರಸರುಗಳ ಮೇಲೆ ಈ ದೈವ ಬಹಳವಾಗಿ ಪ್ರಭಾವ ಬೀರಿದೆ. ಸಂಗಮ ವಂಶದ ಅರಸರುಗಳು ತಾವು ಹೊಸದಾಗಿ ಸ್ಥಾಪಿಸಿದ್ದ ರಾಜ್ಯವನ್ನು ರಕ್ಷಿಸುವ ಹಾಗೂ ಭದ್ರಪಡಿಸಿಕೊಳ್ಳುವ ಉತ್ಕಟ ಆಕಾಂಕ್ಷೆಯಿಂದ ಹಂಪೆಯ ಅಧಿದೈವವಾದ ವಿರೂಪಾಕ್ಷ ಸ್ವಾಮಿಯನ್ನು ತಮ್ಮ ಕುಲದ ದೈವವೆಂದು ಪ್ರಾರಂಭದಿಂದಲೇ ಸಾರಿದರು. ಸಂಗಮರ ಕಾಲದ ಆರಂಭದ ಶಾಸನದಲ್ಲಿಯೇಪಂಪಾ ವಿರೂಪಾಕ್ಷ : ಸಾಕ್ಷಾತ್ ಕುಲ ಪರಮದೈವ26 ಎಂಬ ಉಲ್ಲೇಖ ಇದೆ. ಪ್ರೌಢ ದೇವರಾಯನ ಕಾಲದಶಾಸನವು ವಿಜಯನಗರ ಸಾಮ್ರಾಜ್ಯವನ್ನು `ಶ್ರೀಮದ್ಭಾಸ್ಕರ ಕ್ಷೇತ್ರದ ಶ್ರೀ ವಿರೂಪಾಕ್ಷ ದೇವರ ಪಂಚಕೋಶದೊಳಗೆ'27 ಎಂದು ಕೀರ್ತಿಸಿದೆ. ಇಮ್ಮಡಿ ಹರಿಹರನ ಕಾಲದ ಕ್ರಿ.ಶ. 1379ರ ಶಾಸನದ ಪ್ರಕಾರ,ಶ್ರೀ ವಿರೂಪಾಕ್ಷನು ಹೇಮಕೂಟ ಪರಿಸರದ ಪ್ರಾಕಾರದಿಂದ ಕೂಡಿರುವ ತುಂಗಭದ್ರೆಯಿಂದ ಪವಿತ್ರವಾದಭೂಮಿಗೆ ಅಭಯವನ್ನು ನೀಡುವ ರಕ್ಷಕನಾಗಿದ್ದಾನೆ. ಸಂಗಮರ ಕಾಲದಲ್ಲಿ ವಿರೂಪಾಕ್ಷ ದೇವಾಲಯವುಬಹಳಷ್ಟು ವಿಸ್ತೀರ್ಣಗೊಂಡಿತು. ಗರ್ಭಗೃಹ, ಸುಖನಾಸಿ, ನವರಂಗ ಪ್ರಕಾರ ಹಾಗೂ ಮುಖ್ಯ ಗೋಪುರಗಳನ್ನು ಒಳಗೊಂಡಿತ್ತು. ಇವರ ಕಾಲದಲ್ಲಿ ಹಂಪೆಯ ವಿರೂಪಾಕ್ಷನ ಹೆಸರಿನಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದತ್ತಿದಾನಗಳನ್ನು ನೀಡಿರುವ ಶಾಸನಗಳ ಉಲ್ಲೇಖ ಅಧಿಕವಾಗಿವೆ. ಸಂಗಮ ವಂಶದ ಆರಂಭದ ದೊರೆಗಳಾದ ಬುಕ್ಕರಾಯ ಹಾಗೂ ಇಮ್ಮಡಿ ಹರಿಹರನ ಕಾಲದಲ್ಲಿಯೇ ವಿರೂಪಾಕ್ಷ ದೇವಾಲಯವು ದಾನವನ್ನು ಪಡೆದುಕೊಂಡಿದೆ. ಕ್ರಿ.ಶ. 1379ರ ಶಾಸನವು ಅರಸನ ಆಜ್ಞೆಯ ಮೇರೆಗೆ ಮುದ್ದ ದಂಡೇಶನು ವಿರೂಪಾಕ್ಷ ದೇವರ ಪೂಜೆಗೆ ಹೆಬ್ಬಾಳು ಮತ್ತು ದಂಡನಾಥ ಪುರಗಳನ್ನು ದಾನ ನೀಡಿದ್ದನ್ನು ದಾಖಲಿಸಿದೆ. ಹಾಗೆಯೇ ಸಂಗಮರ ಕಾಲದ ಆರು ಶಾಸನಗಳು ವಿರೂಪಾಕ್ಷ ದೇವರಿಗೆ ದಾನದತ್ತಿಗಳನ್ನು ನೀಡಿದ್ದನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಉಲ್ಲೇಖಿಸಿವೆ.

     ಸಂಗಮರ ಕಾಲದಲ್ಲಿ ಹಂಪೆಯ ವಿರೂಪಾಕ್ಷ ದೇವರಿಗೆ ಹೆಚ್ಚಿನ ಮಾನ್ಯತೆ ದೊರೆತು ಅಪಾರ ದಾನ ದತ್ತಿಗಳ ಮೂಲಕ ಸಂಪತ್ತು ಸಂಗ್ರಹಿಸಲ್ಪಟ್ಟು ಸ್ಥಳೀಯ ಜನತೆಯ ಆರಾಧ್ಯ ದೈವವಾಗಿ ಸಕಲ ಸಾಂಸ್ಕೃತಿಕ ಚಟುವಟಿಕೆಗಳ ನೆಲೆಯಾಯಿತು. ಸಂಗಮ ವಂಶದ ರಾಜರುಗಳು ತಾವು ಹೊರಡಿಸಿದ ತಾಮ್ರ ಶಾಸನಗಳಕೊನೆಯಲ್ಲಿ ತಮ್ಮ ಹೆಸರಿನ ಅಂಕಿತ ಅಥವಾ ಒಪ್ಪದ ಬದಲಿಗೆ `ಶ್ರೀ ವಿರೂಪಾಕ್ಷ' ಎಂಬ ತಮ್ಮ ಕುಲದೈವದಹೆಸರನ್ನೇ ಹೊರಡಿಸಿರುವುದು ವ್ಯಕ್ತವಾಗುತ್ತದೆ. ಇಮ್ಮಡಿ ಹರಿಹರನಿಂದ ಹಿಡಿದು ಎರಡನೇ ಪ್ರೌಢದೇವರಾಯನವರೆಗೂ ವಿರೂಪಾಕ್ಷನ ಹೆಸರಿನಲ್ಲಿ ಒಪ್ಪವನ್ನು ಹಾಕಿಸಿರುವುದು ಶಾಸನಗಳಿಂದ ತಿಳಿದುಬರುತ್ತದೆ. ಈ ದೊರೆಗಳು ತಮ್ಮ ರಾಜ ಶಾಸನಗಳನ್ನು ತಮ್ಮ ಹೆಸರಿನಲ್ಲಿ ಹೊರಡಿಸದೆ ಪಂಪಾ ವಿರೂಪಾಕ್ಷನ ಹೆಸರಿನಲ್ಲಿ ಹೊರಡಿಸಿರುವುದನ್ನು ಮನಗಂಡರೆ ಹಂಪೆಯ ಪ್ರದೇಶದಲ್ಲಿ ತಾವು ರಾಜತ್ವ ನಡೆಸುತ್ತಿದ್ದರೂ ನಿಜವಾದ ದೊರೆ ವಿರೂಪಾಕ್ಷ, ಆತನ ಪ್ರತಿನಿಧಿಗಳು ನಾವು ಎಂದು ಪರಿಭಾವಿಸಿರುವಂತೆ ಕಂಡುಬರುತ್ತದೆ. ಈ ಅರಸರುಗಳು ಚಿನ್ನದ ನಾಣ್ಯಗಳನ್ನು ಠಂಕಿಸಿ ಅವುಗಳ ಮುಂದಿನ ಮುಖದ ಮೇಲೆ ಶಿವಪಾರ್ವತಿಯರ ರೂಪುಗಳನ್ನು ಮುದ್ರಿಸಿದರು. ಈ ರೂಪುಗಳು ಹಂಪೆಯ ವಿರೂಪಾಕ್ಷ ಹಾಗೂಪಂಪಾಂಬಿಕೆಯರ ಪ್ರತೀಕವಾಗಿದೆ. ವಿಜಯನಗರದ ಆರಂಭದ ದೊರೆಗಳು ಹಂಪೆಯ ವಿರೂಪಾಕ್ಷ ಹಾಗೂ ಪಂಪಾಂಬಿಕೆಯರ ರೂಪಗಳನ್ನು ಚಿನ್ನದ ನಾಣ್ಯಗಳ ಮೇಲೆ ಕಾಣಬರುವಂತೆ ಅಳವಡಿಸಿಕೊಂಡಿರುವುದು ವಿರೂಪಾಕ್ಷ ದೈವದ ಪ್ರಭಾವ ಸೂಚಿಸುತ್ತದೆ. ಜನತೆಯ ಆರಾಧ್ಯ ದೈವವಾಗಿದ್ದ ವಿರೂಪಾಕ್ಷನಲ್ಲಿ ಸಂಗಮ ವಂಶದ ದೊರೆಗಳು ಹೆಚ್ಚಿನ ನಿಷ್ಠೆ ತೋರಲು `ಬಹುಶಃ ಎಲ್ಲಾ ರೀತಿಯ ಬೆಂಬಲಗಳನ್ನೊದಗಿಸುತ್ತಿದ್ದ ಶೈವ /ವೀರಶೈವ ಅನುಯಾಯಿಗಳನ್ನು ಸಂತೃಪ್ತಿಪಡಿಸಲೋಸುಗ ಕೈಗೊಂಡಿದ್ದ ಕ್ರಮಗಳಲ್ಲೊಂದಾಗಿತ್ತು ಎಂದು ಹೇಳಬಹುದು.'28

   ಸಾಹಿತ್ಯ ಕೃತಿಗಳು ಹಾಗೂ ಶಾಸನಗಳ ಉಲ್ಲೇಖದ ಪ್ರಕಾರ ವಿರೂಪಾಕ್ಷ ದೇವಾಲಯವು ಒಂದನೇ ದೇವರಾಯ ಹಾಗೂ ಪ್ರೌಢದೇವರಾಯನ ಕಾಲದಲ್ಲಿ ಹೊಸ ಭಾಗಗಳ ಸೇರ್ಪಡೆಯೊಂದಿಗೆ ವಿಸ್ತಾರಗೊಂಡಿತು. ವಿರೂಪಾಕ್ಷ ದೇವಾಲಯದ ಮುಖ್ಯ ಗೋಪುರವನ್ನು ಇಮ್ಮಡಿ ಪ್ರೌಢದೇವರಾಯನ ದಂಡನಾಯಕ ಪ್ರೋಲಗಂಟಿ ತಿಪ್ಪನು ಕಟ್ಟಿಸಿದನೆಂದು ಶಾಸನ ಹಾಗೂ ಹರಿಭದ್ರನ ಉತ್ತರ ನಾರಸಿಂಹ ಪುರಾಣಮ್ ಕೃತಿಯಿಂದ ತಿಳಿದುಬರುತ್ತದೆ. ಹದಿನೈದನೆಯ ಶತಮಾನದ ಪ್ರಾರಂಭದ ಕಾಲದಲ್ಲಿಯೂ ವಿರೂಪಾಕ್ಷನು ಕವಿಗಳ ಅಧಿದೈವನಾಗಿ ರೂಪುಗೊಂಡಿದ್ದನು. ಒಂದನೇ ದೇವರಾಯನ ಕಾಲದಲ್ಲಿ ಇದ್ದನೆಂದು ಹೇಳಲಾದ ಅನಾಮಧೇಯ ಕವಿಯು `ವಿರೂಪಾಕ್ಷ ಶತಕ' ಎಂಬ ಶತಕ ಪ್ರಕಾರದಲ್ಲಿ ರಚಿಸಿರುವ ಕೃತಿಯಲ್ಲಿ ಅಧಿದೈವ ವಿರೂಪಾಕ್ಷನನ್ನು ಕುರಿತ ವಿವಿಧ ರೀತಿಯ ವರ್ಣನೆ ಇದೆ. ವಿರೂಪಾಕ್ಷನನ್ನು ಕುರಿತು `ಪಂಪಾಧೀಶ ಜಯಜಯ ಶ್ರೀ ವಿರೂಪಾಕ್ಷ, ಹರ ಹರಾ ಹಂಪೆಯ ನಿವಾಸನೇ, ಹರಹರ ಹಂಪೆಯ ವಿಲಾಸನೆ, ಹಂಪೆಯ ಮಹಾವೈಭವದ ಸಂಭ್ರಮನೆ' ಇತ್ಯಾದಿ ರೀತಿಯಲ್ಲಿ ವರ್ಣಿಸಿದ್ದಾನೆ. ಈ ಕೃತಿಯ ಪದ್ಯಗಳೆಲ್ಲವೂ ಶ್ರೀ ವಿರೂಪಾಕ್ಷನ ಅಂಕಿತದಿಂದ ಕೊನೆಗೊಳ್ಳುತ್ತವೆ. ಪ್ರೌಢದೇವರಾಯನು ತಾನು ದೊರೆಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ವಿರೂಪಾಕ್ಷ ದೇವಾಲಯಕ್ಕೆ ಸಲ್ಲಿಸಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಯ ಬಗೆಗೆ ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿಯ ಮೂರು ಪದ್ಯಗಳಲ್ಲಿ ಮಹತ್ತರವಾದ ಸಂಗತಿ ವ್ಯಕ್ತವಾಗಿದೆ.

`ದೇವಲೋಕದ ಸಕಲ ವೈಭವಂಗಳು ಸಹತಿ

ಭೂವಿನುತ ವಿಜಯ ಕಲ್ಯಾಣ ಪುರಕೆಯ್ತಂದು

ಭಾವಜವಿದಾರಿ ಪಂಪಾ ವಿರೂಪಾಕ್ಷ ಭವನದ ನಾಲ್ಕು ದೆಸೆಗಳಲ್ಲಿ

ತೀವಿ ಕಿಕ್ಕಿರಿದ ಮಣಿಗಳಸ ಕೋಟೆಗಳ

ಲಾವಣ್ಯತರ ಗೋಪುರಂಗಳ ರಚಿಸಿದಂ'

`ತ್ರಿಪುರ ವಿಜಯಿತ ವಿರೂಪಾಕ್ಷನ ಮನೋರಥಕೆ

ಸುಪಥವಾದುದು ದೇವ ರಾಜೇಂದ್ರನುದಯದಿಂ

ವಿಪುಳೆಯೊಳು ದೃಷ್ಟವಿದೆಯೆಂದೆಂಬ ಮಾಳ್ಕೆಯಿಂ ಪಂಪಾಪುರದೊಳನುದಿನಂ

ಅಪರಿಮಿತ ಗೋಪುರಂಗಳ ಮಧ್ಯವೀಧಿಯಿಂ

ರಿಪು ಕಂಟಕಂಗಳಂ ಸವಱುವಂದದಿ ಸವಱಿ

ಸುಪವಿತ್ರವೆನಿಸಿದಂ ರಥಪಥವನ್......'

ಆ ಮಹಾರಥ ಪಥದೊಳವಿರತಂ ಸಂಚರಿಪ

ಕಾಮಿತಾರ್ಥಗಳ ಕಲ್ಪಿಸಿದ ಸುಫಲಂಗಳಂ

ಪ್ರೇಮದಿಂದೀವ ಭರದಿಂ ಸುರದ್ರುಮಕುಲಂ ಗೋಪುರದೊಳಿಕ್ಕೆಲದೊಳು

ಪಂಪಾಪತಿಯ ಮನೋರಥ ರೂಪ ತಾನಾದ

ಪೆಂಪಂ ಜಗಕ್ಕೆಱುಪಿ ತೋಱಿದನೊ ಎಂಬಂತೆ

ಸೊಂಪೇಱಿ ಮೆರೆಸುವ ವಿರೂಪಾಕ್ಷ ನತುಳ ರಥ ಪಂಪಾಂಬಿಕಾ ರಥವನು

ಂಪಳಿಪ ನಾನಾರಸದ ಗಣಾಧಿಪ ರಥವ

ಗುಂಪಱಿವರಳವಲ್ಲವೆನೆ ರೂಢಿವಡಿಸಿದನ

ದೇಂ ಪ್ರತಾಪನೊ ದೇವರಾಜೇಂದ್ರನ....'29

ಲಕ್ಕಣ್ಣ ದಂಡೇಶನ ಈ ಮೇಲ್ಕಂಡ ಪದ್ಯಗಳ ಪ್ರಕಾರ ಪ್ರೌಢದೇವರಾಯನು ವಿರೂಪಾಕ್ಷ ದೇವಾಲಯದ

ನಾಲ್ಕು ದಿಕ್ಕುಗಳಲ್ಲಿ ಮಣಿಗಳಸಗಳನ್ನು ಕೋಟೆಗಳ ಲಾವಣ್ಯತರ ಗೋಪುರಗಳನ್ನು ಕಟ್ಟಿಸಿದನಂತೆ. ಅಲ್ಲದೆ ಈ ಗೋಪುರಗಳ ಮಧ್ಯದ ಬೀದಿಯಲ್ಲಿ ರಥವು ಸುಗಮವಾಗಿ ಸಾಗಲು ಅಡಚಣೆಯಾಗಿದ್ದ ಗಿಡಗಂಟೆಗಳನ್ನು ಕೀಳಿಸಿ ಅನುಕೂಲವಾಗುವಂತೆ ಮಾಡಿಸಿದನಂತೆ. ಬೀದಿಯ ಇಕ್ಕೆಡೆಗಳಲ್ಲಿ ನಾನಾ ಫಲಂಗಳ ಮರಗಳನ್ನು ನಡೆಸಿದನಂತೆ.

ಇದಕ್ಕಿಂತ ದೊರೆಯ ಮಹತ್ವದ ಕೊಡುಗೆ ಎಂದರೆ ವಿರೂಪಾಕ್ಷನ ರಥ, ಪಂಪಾಂಬಿಕ ರಥ, ಗಣೇಶ ರಥಗಳನ್ನು ಮಾಡಿಸಿ ರಥೋತ್ಸವವನ್ನು ರೂಢಿಗೆ ತಂದದ್ದು3 ತಿಳಿದುಬರುತ್ತದೆ. ಪ್ರೌಢದೇವರಾಯನು ವಿರೂಪಾಕ್ಷ ದೇವರಿಗೆ ಮಾಡಿದ ಸಾಂಸ್ಕೃತಿಕ ಸೇವೆಯ ವಿವರ ಮತ್ತೆಲ್ಲಿಯೂ ದೊರೆತಿಲ್ಲ. ಸಂಗಮ ಅರಸರುಗಳ ಕಾಲದಲ್ಲಿ ವಿರೂಪಾಕ್ಷನ ರಥೋತ್ಸವ ಆಚರಣೆಗೆ ಬಂದಿದ್ದು, ರಥೋತ್ಸವದ ಸಂದರ್ಭದಲ್ಲಿ ನಾಡಿನಾದ್ಯಂತ ಸ್ಥಳೀಯ ಅರಸರು ಮಠಾಧೀಶರು ಭಾಗವಹಿಸುತ್ತಿದ್ದ ವಿವರ ಅಹೋಬಲ ಕವಿಯ `ವಿರೂಪಾಕ್ಷ ವಸಂತೋತ್ಸವ ಚಂಪು' ಸಂಸ್ಕೃತ ಕಾವ್ಯದಿಂದ ತಿಳಿದುಬರುತ್ತದೆ. ಹದಿನಾಲ್ಕನೆಯ ಶತಮಾನದ ಕೊನೆಯಲ್ಲಿದ್ದ ಅಹೋಬಲನು ವಿರೂಪಾಕ್ಷನ ರಥೋತ್ಸವದ ವರ್ಣನೆಯ ಬಗೆಗೆ ವಿವರಿಸಿದ್ದಾನೆ. ಸಂಗಮರ ಆಳ್ವಿಕೆಯ ಕಾಲದಲ್ಲಿ ವಿರೂಪಾಕ್ಷನ ವಸಂತೋತ್ಸವವು ಒಂಬತ್ತು ದಿವಸಗಳ ಅವಧಿಯದಾಗಿತ್ತು. ಚೈತ್ರಶುದ್ಧನವಮಿಯಂದು ಧ್ವಜಾರೋಹಣದೊಂದಿಗೆ ಆರಂಭಗೊಳ್ಳುವ ಈ ಉತ್ಸವ ಚೈತ್ರ ಬಹುಳ ದ್ವಿತೀಯಯೆಂದು ಅವಭೃತ ಸ್ನಾನದೊಂದಿಗೆ ಪೂರ್ಣಗೊಳ್ಳುತ್ತಿತ್ತು. ಸ್ವತಃ ಕವಿಯು ತಾನೇ ಕಣ್ಣಾರೆ ಕಂಡ ವಿರೂಪಾಕ್ಷನ ವಸಂತೋತ್ಸವ ವಿವರವನ್ನು ವರ್ಣಿಸಿದ್ದಾನೆ. `ಈ ರಥೋತ್ಸವದಲ್ಲಿ ಪಾಲ್ಗೊಂಡವರಲ್ಲಿ ವಿಜಯನಗರದ ಅರಸ, ಶಿರಶಿಯ ಲಿಂಗಾಯತ ಸಾಮಂತ, ಕರ್ನೂಲ್ ಜಿಲ್ಲೆಯ ಮೋಕ್ಷಗುಂಡ ಅಧಿಪತಿ, ಸಿದ್ಧರಾಮೇಶ್ವರ ಆರಾಧಕರಾದ ಬಳ್ಳಾರಿಯ ಅಧಿಪತಿ, ಹರಿಹರ ನಗರದ ಅಧಿಪತಿ, ವಿಜಯನಗರದ ಅರಸನ ಸೇನಾಪತಿಗಳಲ್ಲೊಬ್ಬನಾದ ರಾಮದುರ್ಗದ ಅಧಿಪತಿ, ಹರಿಹರ ನಗರದ ಅಧಿಪತಿ, ಭುಜಂಗ ನಗರದ ಅಧಿಪತಿ ಹಾಗೂ ಲಕ್ಷ್ಮೇಶ್ವರದ ಅಧಿಪತಿ ಮೊದಲಾದವರು ಇದ್ದಾರೆ. ರಥೋತ್ಸವ ಮುಗಿದ ಮೇಲೆ ಯಾತ್ರಿಕರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು.'31 ಸಹ್ಯಾದ್ರಿಯ ಕಡೆಗಿದ್ದ ಬತ್ತಲೇಶ್ವರ ವಿರಕ್ತನು ಸಂಸಾರಿಯಾದ ಮೇಲೆ ಪದ್ಮಾವತಿಯೊಡನೆ ರಥೋತ್ಸವ ನೋಡಲೆಂದು ಹಂಪೆಗೆ ಬಂದನೆಂದು ನೂರೊಂದು ವಿರತರ ಕಾವ್ಯದಲ್ಲಿ ಹೇಳಲಾಗಿದೆ.32 ಅಹೋಬಲನು ತನ್ನ ಕೃತಿಯಲ್ಲಿ ವರ್ಣಿಸಿರುವ ವಿರೂಪಾಕ್ಷನ ರಥೋತ್ಸವದ ವಿವರವನ್ನು ವಿಜಯನಗರ ಕಾಲದ ಶಾಸನಗಳು ಸಮರ್ಥಿಸುತ್ತವೆ. ಕ್ರಿ.ಶ. 152ಂರ ಗಿಣಿಗೇರಾ ತಾಮ್ರ ಶಾಸನವು ಶ್ರೀ ವಿರೂಪಾಕ್ಷ ದೇವರ ರಥೋತ್ಸವಕ್ಕೆ ಅಂತರವಳ್ಳಿ ನಿರಂಜನಯ್ಯ ಮೂರುಜಾವದಯ್ಯಯೆಂಬುವರು ವುಭಯತ್ರರು ಬಂದು,33 ಎಂಬ ವಿವರವನ್ನು ದಾಖಲಿಸಿದ್ದು, ವಿರೂಪಾಕ್ಷನ ರಥೋತ್ಸವಕ್ಕೆ ಸುತ್ತಮುತ್ತಲಿನ ಪ್ರತಿಷ್ಠಿತ ಸ್ಥಳೀಯ ಅರಸರುಗಳು ಪಾಲ್ಗೊಳ್ಳುತ್ತಿದ್ದರು ಎಂಬುದನ್ನು ಸಮರ್ಥಿಸುತ್ತದೆ. ವಿಜಯನಗರದ ಉಚ್ಛ್ರಾಯ ಸ್ಥಿತಿಯ ಕಾಲದಲ್ಲಿ ವಿರೂಪಾಕ್ಷ ದೇವಾಲಯದ ಮುಂದೆ ಪ್ರಸಿದ್ಧ ಬಜಾರು ಇದ್ದು ಅದಕ್ಕೆ ವಿರೂಪಾಕ್ಷ ಬಜಾರು ಎಂಬ ಹೆಸರು ಲಭಿಸಿತ್ತು. ಚಂದ್ರಶೇಖರ ಕವಿಯು `ಪಂಪಾ ವಿರೂಪಾಕ್ಷ ಸ್ಥಾನ ವರ್ಣನಂ'ಎಂಬ ಚಂಪೂಕೃತಿಯನ್ನು ರಚಿಸಿದ್ದು ಅದರಲ್ಲಿ `ಹಂಪಿಯಾಳ್ದನೆಸೆವೋಲಗಂ' ಎಂದು ವಿರೂಪಾಕ್ಷನ ಓಲಗವನ್ನುವರ್ಣಿಸಿದ್ದಾನೆ. ಹಂಪೆಯ ಭೌಗೋಳಿಕ ಪರಿಸರದ ಹಿನ್ನೆಲೆಯಲ್ಲಿಯ ವಿರೂಪಾಕ್ಷನ ಆಸ್ಥಾನದ ವರ್ಣನೆಯನ್ನು ಮಾಡಿದ್ದಾನೆ. ಕವಿಯ ಆಶಯ ಎಂದರೆ ವಿರೂಪಾಕ್ಷನನ್ನು ಒಬ್ಬ ದೊರೆ ಎಂದು ಭಾವಿಸಿ ಅವನ ಆಸ್ಥಾನವನ್ನು, ಆಸ್ಥಾನದಲ್ಲಿ ನಡೆಯುತ್ತಿದ್ದ ನರ್ತನ ಗಾಯನಾದಿಗಳನ್ನು ವರ್ಣಿಸಿದ್ದಾನೆ. ಹಂಪೆಯ ವಿರೂಪಾಕ್ಷನ ದೇವಾಲಯವೇ ಅರಮನೆ, ಆ ದೇವಾಲಯದ ನವರಂಗವೇ ಆ ವಿರೂಪಾಕ್ಷಸ್ವಾಮಿ ಎಂಬ ರಾಜನ ಆಸ್ಥಾನ. ಇದು ಹರಿಹರನ ಕಾಲದ ಪರಿಕಲ್ಪನೆಯ ಮುಂದುವರಿಕೆಯೇ ಆಗಿದೆ.34 ಪಂಪಾವಿರೂಪಾಕ್ಷನ ನೆಲೆವೀಡಾಗಿದ್ದಹಂಪೆಯು ಸಂಗಮರ ಕಾಲದಲ್ಲಿ ವೀರಶೈವ ಸಾಹಿತ್ಯಸಂಸ್ಕೃತಿಯ ಪುನರುಜ್ಜೀವನದ ಮುಖ್ಯ ಕೇಂದ್ರವಾಗಿದ್ದಿತು. ಕಲ್ಯಾಣ ಕ್ರಾಂತಿಯ ವಿಪ್ಲವ ಹಾಗೂ ಮುಸ್ಲಿಂ ಆಕ್ರಮಣದಿಂದಾಗಿ ಚದುರಿಹೋಗಿದ್ದ ಹಾಗೂ ಅಳಿದುಳಿದ ವಚನ ರಾಶಿಯನ್ನು ಸಂಕಲಿಸುವ, ಸಂಸ್ಕರಣ ವ್ಯಾಖ್ಯಾನ ಸ್ಥಲಕಟ್ಟು ನಿಯೋಜನೆಗೊಳಿಸುವ ಮಹತ್ವಪೂರ್ಣ ಕಾರ್ಯಕ್ಕೆ ನೆಲೆಯೊದಗಿಸಿತು.ಪ್ರೌಢದೇವರಾಯನ ದಂಡನಾಯಕನಾದ ಲಕ್ಕಣ್ಣ ದಂಡೇಶನು ಹಂಪೆಯ ವಿರೂಪಾಕ್ಷನ ನಿಷ್ಠಾವಂತ ಭಕ್ತನಾಗಿದ್ದ ಎಂಬುದಕ್ಕೆ ಅವನ ಕೃತಿ ಶಿವತತ್ತ್ವ ಚಿಂತಾಮಣಿಯೇ ನಿದರ್ಶನ. ಮುಳಬಾಗಲ ಪ್ರಾಂತಕ್ಕೆ ಅಧಿಕಾರಿಯಾಗಿದ್ದ ಲಕ್ಕಣ್ಣನು ತಾನು ನಿರ್ಮಿಸಿದ ಹೊಸ ಪಟ್ಟಣಕ್ಕೆ ವಿರೂಪಾಕ್ಷಪುರ ಎಂಬ ಹೆಸರಿಟ್ಟು ಅಲ್ಲಿ

ಪ್ರಸನ್ನ ವಿರೂಪಾಕ್ಷ ದೇವಸ್ಥಾನವನ್ನು ಕಟ್ಟಿಸಿ ಸುವರ್ಣ ಕಲಶದಿಂದ ಪರಿಶೋಭಿಸುವ ಗೋಪುರ, ಮನ್ಮಥಕುಂಡ, ಕೆರೆ, ಉದ್ಯಾನ ಮುಂತಾದವುಗಳನ್ನು ನಿರ್ಮಿಸಿದ್ದನೆಂದು ಶಾಸನದಿಂದ ತಿಳಿದುಬರುತ್ತದೆ.35 ಮನ್ಮಥಕುಂಡ ಪುಷ್ಕರಿಣಿಯು ಹಂಪೆಯ ವಿರೂಪಾಕ್ಷ ದೇವಾಲಯದ ಮನ್ಮುಖ ಪುಷ್ಕರಣಿಯನ್ನು ನೆನಪಿಸುತ್ತದೆ.ಲಕ್ಕಣ್ಣನು ಹಂಪೆಯ ವಿರೂಪಾಕ್ಷನ ಮೇಲಿನ ಅಭಿಮಾನದಿಂದ ಅದೇ ಮಾದರಿಯ ದೇವಾಲಯವನ್ನು ತನ್ನಪ್ರಾಂತ್ಯದಲ್ಲಿ ನಿರ್ಮಿಸಿರುವುದು ಹಂಪೆಯ ವಿರೂಪಾಕ್ಷನು ಅಮಾತ್ಯರಲ್ಲಿ ಬೀರಿದ್ದ ಪ್ರಭಾವದ ಪ್ರತೀಕವಾಗಿದೆ.ಸಂಗಮರ ಆಳ್ವಿಕೆಯಲ್ಲಿ ಅಮಾತ್ಯರು, ದಂಡನಾಯಕರು ವಿರೂಪಾಕ್ಷನಿಗೆ ದಾನದತ್ತಿಗಳನ್ನು ನೀಡಿರುವ ಉಲ್ಲೇಖ ಶಾಸನಗಳಿಂದ ತಿಳಿದುಬರುತ್ತದೆ. ಮಾಧವಾಮಾತ್ಯನ ಮಗ ಶಶಿಧರನು ವಿರೂಪಾಕ್ಷ ದೇವರಿಗೆ ದೀಪದ ಕಂಬವನ್ನು ಮಾಡಿಸಿದ ವಿವರ ಕ್ರಿ.ಶ. 1429ರ ಶಾಸನ ತಿಳಿಸುತ್ತದೆ. ಕ್ರಿ.ಶ. 1467ರ ಶಾಸನವು36 ವಿಜಯನಗರದ ದೊರೆ ವಿರೂಪಾಕ್ಷನು ಸೋಮಲಾಪುರವನ್ನು ಅಗ್ರಹಾರವನ್ನಾಗಿ ಪರಿವರ್ತಿಸಿ ಅದಕ್ಕೆ ವಿರೂಪಾಕ್ಷಪುರವೆಂದು ಹೆಸರಿಟ್ಟ ವಿವರವನ್ನು ತಿಳಿಸುತ್ತದೆ. ಸಂಗಮರ ಕಾಲದಲ್ಲಿ ಸಾಮಂತರು, ದಂಡನಾಯಕರು, ಇತರರು ರಾಜದಾನಿಯ ಹೊರಗಡೆ ದತ್ತಿದಾನಗಳನ್ನು ಬಿಡುವಾಗ ಕೆಲವೆಡೆ `ತುಂಗಭದ್ರಾನದೀ ತೀರದ ಪಂಪಾಕ್ಷೇತ್ರದ ವಿರೂಪಾಕ್ಷ ದೇವರ' ಹೆಸರಿನಲ್ಲಿ ದತ್ತಿಯನ್ನು ನೀಡುವಷ್ಟರ ಮಟ್ಟಿಗೆ ಪ್ರಸಿದ್ಧಿಯನ್ನು ಪಡೆದಿತ್ತು. ಸಂಗಮರ ಆಳ್ವಿಕೆಯ ನಂತರದ ರಾಜವಂಶಗಳ ಕಾಲದಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯಕ್ಕೆ ದತ್ತಿದಾನಗಳು, ದೇವಾಲಯದ ವಿಸ್ತರಣೆ, ಜೀರ್ಣೋದ್ಧಾರ ಇತ್ಯಾದಿ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಮುಂದುವರಿದಂತೆ ಅಲ್ಲೊಂದು ಇಲ್ಲೊಂದು ಶಾಸನಗಳಿಂದ ಮೇಲ್ನೋಟಕ್ಕೆ ಕಂಡುಬರುತ್ತದೆಯಾದರೂ ಹಜಾರರಾಮ ಮತ್ತು ವಿಜಯ ವಿಠಲ ದೇವಾಲಯಗಳೇ ಅಧಿಕ ಸಂಖ್ಯೆಯಲ್ಲಿ ರಾಜರುಗಳಿಂದ, ಮಾಂಡಳಿಕರಿಂದಪ್ರತಿಷ್ಠಿತರಿಂದ ಪಡೆದಿರುವುದು ಶಾಸನಗಳಿಂದ ವ್ಯಕ್ತವಾಗುತ್ತದೆ. ಈ ಅರಸರ ಧಾರ್ಮಿಕ ಆಸಕ್ತಿಯ ಬದಲಾವಣೆಯ ಕಾರಣವಾಗಿ ವಿರೂಪಾಕ್ಷ ತನ್ನ ಹೆಚ್ಚುಗಾರಿಕೆಯಲ್ಲಿ ಸ್ವಲ್ಪಮಟ್ಟಿಗೆ ಕಳೆದುಕೊಂಡಂತಾಯಿತು. ಸಂಗಮರ ಆಳ್ವಿಕೆಯವರೆಗೂ ನಿರಂತರವಾಗಿ ಸಾಗಿಬಂದಿದ್ದ ವಿರೂಪಾಕ್ಷ ಪರಂಪರೆಯು ನಂತರದ ರಾಜವಂಶಗಳಲ್ಲಿ ಹಂತಹಂತವಾಗಿ ಇಳಿಮುಖವಾದಂತೆ ಕಂಡುಬರುತ್ತದೆ. ಸಾಳುವರ ಆಳ್ವಿಕೆಯಲ್ಲಿಯೇ, ಇಲ್ಲಿಯವರೆಗೂ ರಾಜಮುದ್ರೆಯಲ್ಲಿ ಉಪಯೋಗಿಸುತ್ತಿದ್ದ`ಶ್ರೀ ವಿರೂಪಾಕ್ಷ' ಎಂಬ ಅಂಕಿತದ ಸ್ಥಾನದಲ್ಲಿ `ಶ್ರೀರಾಮಾ' ಎಂಬ ಅಂಕಿತವನ್ನು ಪಯೋಗಿಸುತ್ತಿದ್ದರುಎಂಬುದು ರಾಜನಾಥ ಡಿಂಡಿಮನ `ಸಾಳುವಾಭ್ಯುದಯ' ಕೃತಿಯಿಂದ ತಿಳಿದುಬರುತ್ತದೆ.ತುಳುವ ವಂಶದ ಕೃಷ್ಣದೇವರಾಯನು ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ವಿರೂಪಾಕ್ಷ ದೇವಾಲಯದ ಮುಖಮಂಟಪವನ್ನು ನಿರ್ಮಿಸಿದ್ದಲ್ಲದೆ ಸಂಗಮ ಅರಸರ ಕಾಲದಲ್ಲಿ ಕಟ್ಟಲ್ಪಟ್ಟ ಮುಖ್ಯ ಗೋಪುರವನ್ನುಜೀರ್ಣೋದ್ಧಾರ ಮಾಡಿಸಿದನು. ಜೊತೆಗೆ ವಿಶಾಲ ಪ್ರಾಕಾರದೊಳಗಿದ್ದ ರಂಗಮಂಟಪದ ಮುಂಭಾಗದಲ್ಲಿ ಚಿಕ್ಕ ಗೋಪುರವನ್ನು ಕಟ್ಟಿಸಿದ್ದಲ್ಲದೆ, ಸಿಂಗೆನಾಯಕನ ಹಳ್ಳಿಯನ್ನು ವಿರೂಪಾಕ್ಷ ದೇವಸ್ಥಾನಕ್ಕೆ ದತ್ತಿಯಾಗಿ ನೀಡಿದ ವಿವರ ಶಾಸನದಿಂದ37 ತಿಳಿದುಬರುತ್ತದೆ. ಕ್ರಿ.ಶ. 1513 ರ ಶಾಸನದ ಪ್ರಕಾರ ಹಂಪೆಯ ವಿರೂಪಾಕ್ಷನಿಗೆ ವರ್ಷಪೂರ್ತಿ ಅಮೃತಪಡಿ ನೈವೇದ್ಯ, ನಿತ್ಯ ನೈಮಿತ್ತಿಕ, ಚಯಿತ್ರ ಮಾಸದ ರಥೋತ್ಸವ, ಮಕರ ಸಂಕ್ರಾಂತಿ ರಥೋತ್ಸವ, ಮಾಸೋತ್ಸವ, ಪಕ್ಷೋತ್ಸವ, ಸಂವತ್ಸರೋತ್ಸವದ ದೀಪರಾಧನೆ, ಪಂಚಪರ್ವ ಇತ್ಯಾದಿ ಪೂಜಾ ಕಾರ್ಯಗಳು ನಡೆಯುತ್ತಿದ್ದವು ಎಂಬುದಾಗಿಯೂ, ಆ ಚಟುವಟಿಕೆಗಳು ನಿರಾತಂಕವಾಗಿ ನಡೆಯಲು ದತ್ತಿದಾನಗಳು ಸಲ್ಲುತ್ತಿದ್ದವು ಎಂಬುದಾಗಿ ತಿಳಿದುಬರುತ್ತದೆ.38 ಕೃಷ್ಣದೇವರಾಯನ ಕಾಲದಲ್ಲಿ ದಂಡನಾಯಕರು ಪ್ರಜಾವರ್ಗದವರು ವಿರೂಪಾಕ್ಷನಿಗೆ, ವಿರೂಪಾಕ್ಷನ ಹೆಸರಿನಲ್ಲಿ ದತ್ತಿ ದಾನಗಳನ್ನು ನೀಡಿದ ವಿವರ ಶಾಸನಗಳಿಂದ ತಿಳಿದುಬರುತ್ತದೆ. 1516ನೇ ಶತಮಾನದ ಶಾಸನದಲ್ಲಿ ವಿರೂಪಾಕ್ಷ ದೇವರ ಸ್ತಾನಿಕ ಲಿಂಗಣಾರಾಧ್ಯನಿಗೆ ವೀರಣ್ಣ ನಾಯಕನು ತನ್ನ ತಂದೆ ಸಂಗಮೇಶ ನಾಯಕನಿಗೆ ಪುಣ್ಯವಾಗಲೆಂದು ವಿರೂಪಾಕ್ಷ ದೇವರಿಗೆ ಎರಡು ಹರಿವಾಣ ನೈವೇದ್ಯಕ್ಕಾಗಿ ಭೂದಾನ ನೀಡುತ್ತಾನೆ.39 ಕ್ರಿ.ಶ. 151ಂರ ಶಾಸನದಲ್ಲಿ ನರಸನಾಯಕನ ತಾಯಿ ಬುಕ್ಕಾಜಿ ಅಂಮನು ಹಂಪೆಯ ತಿರುಮಲ ಭಟ್ಟನ ಮಗ ಸಾಇ ಭಟ್ಟನಿಗೆ ವಿರೂಪಾಕ್ಷದೇವರ ನೈವೇದ್ಯಕ್ಕಾಗಿ ಭೂದಾನ ಮಾಡಿದ ವಿವರ4೦ ವ್ಯಕ್ತವಾಗಿದೆ.ತುಳುವ ಅರಸರ ಕಾಲದಲ್ಲಿ ಮಾಂಡಳಿಕರು, ಸಾಮಂತರು ಊರೊಡೆಯರು ವಿರೂಪಾಕ್ಷನಿಗೆ ದಾನವಾಗಿನೀಡುವಾಗ ವಿರೂಪಾಕ್ಷನ ಹೆಸರಿನಲ್ಲಿ ವ್ಯಕ್ತಿಗಳಿಗೆ ದಾನ ನೀಡಿದ ವಿವರ ಶಾಸನಗಳಲ್ಲಿ ವ್ಯಕ್ತವಾಗಿದೆ. ದಾನಗಳನ್ನು ಪಡೆದವರು ಅದನ್ನು ಸಮರ್ಥವಾಗಿ ವಿರೂಪಾಕ್ಷ ದೇವರಿಗೆ ಸದ್ವಿನಿಯೋಗಿಸಿದರು ಎಂಬುದರಬಗೆಗೆ ಶಾಸನಗಳಲ್ಲಿ ಮಾಹಿತಿ ಲಭ್ಯವಿಲ್ಲ. ತುಳುವ ಹಾಗೂ ಅರವೀಡು ಅರಸರ ಕಾಲದಲ್ಲಿ ವಿರೂಪಾಕ್ಷ ದೇವರಿಗೆ ದತ್ತಿದಾನಗಳು ಮುಂದುವರಿದರೂ, ಉಳಿದ ದೇವಾಲಯಗಳು ಪಾಲನ್ನು ಕೇಳಲಾರಂಭಿಸಿದ್ದು ಅದರಲ್ಲಿಯೂ ವಿಠಲ ದೇವಾಲಯವು ಸಿಂಹಪಾಲನ್ನು ಪಡೆಯಲು ಆರಂಭಿಸಿತ್ತು. ತುಳುವ ಅರಸರ ಕಾಲದಲ್ಲಿ ವೈಷ್ಣವ ಪಂಥದ ವಿಠಲ ಪರಂಪರೆಯು ಪ್ರಮುಖ ಸ್ಥಾನವನ್ನು ಪಡೆದುಕೊಂಡಿತೆನ್ನಬಹುದು. ವಿಜಯನಗರದಲ್ಲಿ ವಿಠಲ ಭಕ್ತಿಗೆ ಹೆಚ್ಚಿನ ಆದ್ಯತೆ ದೊರೆತಿದ್ದು ಕೃಷ್ಣದೇವರಾಯನಿಂದಲೇ ಅಲ್ಲ. ಕೃಷ್ಣದೇವರಾಯನ ತಂದೆಯ ಲಕ್ಕೆ ಶ್ರೀವಿಠಲನ ಶ್ರೀ ವಿರೂಪಾಕ್ಷ ದೇವರೊಡನೆ ರಾಜ ಮರ್ಯಾದೆಗಳನ್ನು ಸ್ವೀಕರಿಸುತ್ತಿದ್ದನೆಂದು, ವಿಜಯನಗರವೂ ಪಂಡರಿಯಂತೆ ಒಂದು ವಿಠಲ ಕ್ಷೇತ್ರವಾಗಲಾರಂಭಿಸಲು ಪ್ರಾರಂಭಿಸಿತ್ತು41 ಎಂದು ಶಂ.ಬಾ.ಜೋಶಿಯವರು ಅಭಿಪ್ರಾಯ ಪಟ್ಟಿದ್ದಾರೆ. ತುಳುವ ಅರಸರ ದೃಷ್ಟಿಯಲ್ಲಿ ಹಂಪೆಯ ವಿರೂಪಾಕ್ಷ ಮರೆಯಾಗಲು ಪ್ರಾರಂಭಿಸಿದ್ದ ಎಂದೆನಿಸುತ್ತದೆ. ತುಳುವ ಮತ್ತು ಅರವೀಡು ಮನೆತನಗಳ ಕಾಲದ ಕೆಲವು ಶಾಸನಗಳಲ್ಲಿ ಶ್ರೀ ವಿರೂಪಾಕ್ಷ ಹಾಗೂ ವಿಠಲ ಇಬ್ಬರ ಹೆಸರನ್ನು ಒಟ್ಟಿಗೆ ಸೇರಿಸಿ ಅವರ ಹೆಸರಿನಲ್ಲಿ ದಾನವನ್ನು ಬಿಟ್ಟಿರುವುದು ಕಂಡುಬರುತ್ತದೆ. ಸದಾಶಿವರಾಯನ ಕಾಲದ ಕ್ರಿ.ಶ. 1565ರ ಶಾಸನದಲ್ಲಿ42 ಬೆಳುಗಲ್ಲ ಸಿದ್ಧೇಶ್ವರ ದೇವರ ಅಮøತ ಪಡಿಗೆ, ಅರ್ಚನ ವಿಧಿಗೆ ಶ್ರೀ ತುಂಗಭದ್ರಾ ತೀರದಲು ಶ್ರೀ ವಿರೂಪಾಕ್ಷ ವಿಠಲರ ಸನ್ನಿಧಿಯಲ್ಲಿ ಭೂದಾನವನ್ನು ರಘುನಾಥ ರಾಜಯ್ಯ ಅರಸು ನೀಡಿದ್ದ ವಿವರ ನಿದರ್ಶನವಾಗಿದೆ. ಸಂಗಮರ ನಂತರದ ಅರಸರುಗಳ ಧಾರ್ಮಿಕ ಆಸಕ್ತಿಯ ಫಲವಾಗಿ ಹಂಪೆಯ ವಿರೂಪಾಕ್ಷ ದೇವಾಲಯವು ಹಂತ ಹಂತವಾಗಿ ಹೆಚ್ಚುಗಾರಿಕೆಯನ್ನು ಕಳೆದುಕೊಂಡಿತು. ಇಲ್ಲಿಯವರೆಗೂ ವಿರೂಪಾಕ್ಷ ದೇವಾಲಯದಲ್ಲಿ ಕೇಂದ್ರೀಕೃತಗೊಳ್ಳುತ್ತಿದ್ದ ಸಂಪತ್ತು ಹಜಾರರಾಮ, ವಿಠಲ ಇತ್ಯಾದಿ ದೇವಾಲಯಗಳತ್ತ ವಿಕೇಂದ್ರಿಕರಣಗೊಳ್ಳತೊಡಗಿತು. ವಿರೂಪಾಕ್ಷನಷ್ಟೇ ಪ್ರಭಾವವನ್ನು ವಿಠಲ ದೇವಾಲಯವು ಪಡೆದಿತ್ತು. ಕೃಷ್ಣದೇವರಾಯ ಮೊದಲುಗೊಂಡು ಅರಸಿಯರು, ಸಾಮಂತರು ಮಾಂಡಳಿಕರು, ಸಾಮಾನ್ಯ ಜನತೆ ವಿವಿಧ ರೀತಿಯಲ್ಲಿ ದತ್ತಿ ದಾನಗಳನ್ನು ವಿಠಲದೇವರಿಗೆ ನೀಡಿರುವುದನ್ನು ಸು. 34 ಹಂಪೆಯ ಪರಿಸರದ ಶಾಸನಗಳು ದೃಢಪಡಿಸಿವೆ.43 ಕ್ರಿ.ಶ. 1524ರ ವೇಳೆಗಾಗಲೇ ವಿರೂಪಾಕ್ಷ ದೇವಾಲಯಕ್ಕೆ ನೀಡಿದ ದತ್ತಿಯಲ್ಲಿಯ ಕೆಲ ಭಾಗವನ್ನು ಅನ್ಯ ದೇವರಿಗೆ ನೀಡಲು ರಾಜರು ಆಜ್ಞೆ ಮಾಡಿದ್ದನ್ನು ಶಾಸನ ತಿಳಿಸುತ್ತದೆ. ತೆರಕಣಾಂಬಿಯ ವಿರೂಪಾಕ್ಷ ಭಟ್ಟನ ಮಗ ಗೋಪಿನಾಥ ದೀಕ್ಷಿತನು ಹಿರಿಯ ಕಾಲುವೆಯಲ್ಲಿ ತಾನು ಪ್ರತಿಷ್ಠಾಪಿಸಿದ ರಘುನಾಥ ದೇವರಿಗೆ ಪಂಪಾ ವಿರೂಪಾಕ್ಷದೇವರ ದೇವಾಲಯದಿಂದ ದಿನವೊಂದಕ್ಕೆ ಉದು ಪಡಿ ಅಕ್ಕಿ, ಕಾಲುಪಡಿ ಎಣ್ಣೆಯನ್ನು ಕೊಡುವ ಕಟ್ಟಳೆಯನ್ನು ಅರಸ ಕೃಷ್ಣದೇವರಾಯ ಮಾಡಿದ ವಿವರ ಕಂಡುಬರುತ್ತದೆ.44 ಕ್ರಿ.ಶ. 1529ರ ಶಾಸನವು ಕನ್ನಿಸೆಟ್ಟಿ ಪಿಚಾರಿಸೆಟ್ಟಿ ಮತ್ತು ಇತರರು ವೊಳಕೋಟೆಯ ರೆಂಮುಜೆಡಿಯ ಬಳಿಯ ಮಡುವಿನ ಒಂದು ಖಂಡುಗ ಹೊಲಗದ್ದೆಯನ್ನು ತೆಗೆದುಕೊಂಡು ಅದರಲ್ಲಿ ರಾಮಚಂದ್ರ ದೇವಸ್ಥಾನದ ಭಾಗವನ್ನು ಕಳೆದು ಉಳಿದ ಭಾಗವನ್ನು ವಿರೂಪಾಕ್ಷ ದೇವರಿಗೆ ದಾನವಾಗಿ ಕೊಟ್ಟರು ಎಂಬ ವಿಷಯವನ್ನು ದಾಖಲಿಸಿದೆ.45 ಕ್ರಿ.ಶ. 1535ರ ಶಾಸನವು ವಿರೂಪಾಕ್ಷ ಸನ್ನಿಧಿಯ ಪದ್ಮ ವಿನಾಯಕನಿಗೆ ತಿರುಮಲದೇವಿ ಪಟ್ಟಣದ ಬಳಿ ತೋಟವನ್ನು ಸಮರ್ಪಿಸಿದ ವಿಷಯ ತಿಳಿಸುತ್ತದೆ. ಶಾಸನಗಳನ್ನು ಉಲ್ಲೇಖಿಸಿ ಹೇಳುವುದಾದರೆ ತುಳುವ ಅರಸರ ಕಾಲಕ್ಕಾಗಲೇ ವಿರೂಪಾಕ್ಷನ ಸಾಮ್ರಾಜ್ಯದೊಳಗೆ ವಿಜಯವಿಠಲ ದೇವನು ಪಾಲನ್ನು ಕೇಳಲು ಪ್ರಾರಂಭಿಸಿ, ವಿರೂಪಾಕ್ಷನಷ್ಟೇ ಸ್ಥಾನವನ್ನೇವಿಠಲನು ಪಡೆದುಕೊಂಡಿದ್ದ ಎಂದು ಹೇಳಬಹುದು. ಹಂಪೆಯಲ್ಲಿ ಅತ್ಯಂತ ಪ್ರಭಾವಶಾಲಿ, ಏಕಮೇವಾದ್ವಿತೀಯನಾಗಿದ್ದ ವಿರೂಪಾಕ್ಷನಿಗೆ ವಿಠಲ ಸ್ವಾಮಿಯು ಪ್ರಬಲ ಸ್ಪರ್ಧಿಯಾಗಿ ಕ್ರಿ.ಶ. 152೦ರ ನಂತರಕಾಣತೊಡಗಿದ್ದು ಶಾಸನಗಳಿಂದ ವ್ಯಕ್ತವಾಗುತ್ತದೆ. ಕೆಲವು ಕಾಲ ವಿರೂಪಾಕ್ಷನಿಗಿಂತ ವಿಠಲನ ವೈಭವವೇಹೆಚ್ಚಾದಂತೆ ಕಂಡುಬರುತ್ತದೆ. ರಾಜಧಾನಿಯ ಹೊರಗಡೆ ದತ್ತಿದಾನಗಳನ್ನು ನೀಡುವ ವ್ಯಕ್ತಿಗಳು `ತುಂಗಭದ್ರಾ ತೀರದಲು ಭಾಸ್ಕರ ಕ್ಷೇತ್ರದಲು ಪಂಪಾ ಸರಸ್ಸುವಿನ ಸಮೀಪವಾದ ಶ್ರೀ ವಿಜಯವಿಠಲ ದೇವರ ಸನ್ನಿಧಿಯಲ್ಲಿ'ಎಂದು ಉಲ್ಲೇಖಿಸಿ ದಾನಗಳನ್ನು ನೀಡುವಷ್ಟರ ಮಟ್ಟಿಗೆ ಖ್ಯಾತಿಯನ್ನು ಪಡೆದಿದ್ದ ಎಂಬುದು ವ್ಯಕ್ತವಾಗುತ್ತದೆ. ಕ್ರಿ.ಶ. 1542ರ ಶಾಸನದಲ್ಲಿಯ ವಿವರ ಪ್ರಕಾರ ಹಿಂದೆ ವಿರೂಪಾಕ್ಷ ದೇವರ ಪಡಿಗೆ ಕುರುಗೋಡು ಸೀಮೆಗೆ ಸಲುವ ಗುಂಡಿಗೆ ನೂರ ಗ್ರಾಮವನ್ನು ಪ್ರತಾಪ ದೇವರಾಯನು ಲಕ್ಷ್ಮೀಕಾಂತ ದೀಕ್ಷಿತರಿಗೆ ನೀಡಿದ್ದನ್ನು ಲಕ್ಕಣ ದಣಾಯಕನು ಅರಮನೆಗೆ ಮುಟ್ಟುಗೋಲು ಹಾಕಿಕೊಂಡಿದ್ದನೆಂದೂ ಇದನ್ನು ಲಕ್ಷ್ಮೀಕಾಂತ ದೀಕ್ಷಿತರ ವಂಶಸ್ಥರ ಬಳಿ ಇದ್ದ ದಾಖಲೆಗಳನ್ನು ಪರಿಶೀಲಿಸಿ ಸದಾಶಿವರಾಯರು ಆ ವಂಶದವರಿಗೆ ಮತ್ತೆ ನೀಡಿದ ವಿವರ ಉಕ್ತವಾಗಿದೆ.47 ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರತಾಪರಾಯನು ಲಕ್ಷ್ಮೀಕಾಂತ ದೀಕ್ಷಿತರಿಗೆ ನೀಡಿದ್ದ ವಿರೂಪಾಕ್ಷ ದೇವರ ಪಡಿಗೆ ಕುರುಗೋಡು ಸೀಮೆಗೆ ಸಲುವ ಗುಂಡಿಗೆನೂರ ಗ್ರಾಮವನ್ನು ಲಕ್ಕಣ್ಣ ದಂಡನಾಯಕ ಮುಟ್ಟುಗೋಲು ಹಾಕಿಕೊಂಡಿದ್ದ ಎಂಬುದು. ಬಹುಶಃ ಇದಕ್ಕೆ ಕಾರಣ ವಿರೂಪಾಕ್ಷನ ಹೆಸರಿನಲ್ಲಿ ನೀಡಿದ ದಾನ ಸದ್ವಿನಿಯೋಗವಾಗದೇ ಇದ್ದುದನ್ನು ಕಂಡು ವಿರೂಪಾಕ್ಷನಲ್ಲಿ ನಿಷ್ಠೆಯನ್ನುಳ್ಳ ದಂಡನಾಯಕನು ಅದನ್ನು ಅರಮನೆಗೆ ಮುಟ್ಟುಗೋಲು ಹಾಕಿಕೊಂಡಿದ್ದಿರಬಹುದು ಎಂದು ಊಹೆ ಮಾಡಲು ಅವಕಾಶ ಇದೆ. ಈ ರೀತಿಯ ಉಲ್ಲೇಖಗಳು ವಿರೂಪಾಕ್ಷನ ಹೆಸರಿನಲ್ಲಿ ನೀಡಿದ ದಾನಗಳ ಬಳಕೆಯ ಸಾರ್ಥಕತೆಯ ಬಗೆಗೆ ಬೆಳಕು ಚೆಲ್ಲುತ್ತದೆ. ಹಂಪೆಯ ವಿರೂಪಾಕ್ಷ ದೇವರಿಗೆ ಸಂಗಮರ ಅರಸರುಗಳ ಹಾಗೆ ನಂತರದ ಅರಸರುಗಳಿಂದ ಪ್ರೋತ್ಸಾಹ ದೊರೆಯದಿದ್ದರೂ ಪೂರ್ವದಿಂದ ಜನತೆಯ ಆರಾಧ್ಯ ದೈವನಾಗಿದ್ದ ವಿರೂಪಾಕ್ಷನು ಭಕ್ತ ಜನತೆಯ ನೆರವಿನಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದನೆಂದು ಹೇಳಬಹುದು. ವಿರೂಪಾಕ್ಷನು ಮಹಿಮಾಶಾಲಿಯಾಗಿ 1516ನೇ ಶತಮಾನದಲ್ಲಿಯೂ ಮುಂದುವರಿದಿದ್ದ ಎಂಬುದಕ್ಕೆ ಶಾಸನಗಳಲ್ಲಿ ಮಾಹಿತಿ ಇದೆ. ಕೆಲವು ದಂಡನಾಯಕರು, ಜನತೆ ವಿರೂಪಾಕ್ಷ ದೇವರನ್ನು, ದೇವಾಲಯದ ಶಿಖರವನ್ನು, ಕಳಸವನ್ನು ದರ್ಶನ ಮಾಡಿದರೆ ಕೃತಾರ್ಥರಾದೆವು ಎನ್ನುವ ಭಾವನೆಯನ್ನು ತಾಳಿದವರಾಗಿದ್ದರು. ರಾಮಯ್ಯನ ಮಗ ಪಿರಿಯ ಗಣನು ವಿರೂಪಾಕ್ಷ ದೇವರ (ದೇವಸ್ಥಾನದ) ಶಿಖರಕ್ಕೆ ನಮಸ್ಕಾರ ಮಾಡಿ ಕೃತಾರ್ಥನಾದನೆಂದು ಶಾಸನವೊಂದು ತಿಳಿಸುತ್ತದೆ.48 ಮತ್ತರಸನ ಮಗಳು ರಾಮಾಯಿಯು ವಿರೂಪಾಕ್ಷ ದೇವರ ಕಳಸವನ್ನು ನೋಡಿ ನಮಸ್ಕಾರ ಮಾಡಿ ಕೃತಾರ್ಥಳಾದಳೆಂದು ಶಾಸನ ತಿಳಿಸುತ್ತದೆ.49 ಕೇತಪ್ಪನ ಮಗ ಮಾದಣ್ಣನು ಮತಂಗ ಪರ್ವತಕ್ಕೆ ಬಂದು ವಿರೂಪಾಕ್ಷ ದೇವರನ್ನು ಕಂಡು ಕೃತಾರ್ಥನಾದನೆಂದು ಶಾಸನದಿಂದ ತಿಳಿದುಬರುತ್ತದೆ.5೦ ಹದಿನೈದನೇ ಶತಮಾನದ ಶಾಸನದಲ್ಲಿ ಬೊಮ್ಮೋಜ ತನ್ನನ್ನು ವಿರೂಪಾಕ್ಷ ದೇವರ ಸೇವಕ ಎಂದು ಕರೆದುಕೊಂಡಿದ್ದಾನೆ.ಕ್ರಿ.ಶ. 1516ನೇ ಶತಮಾನದ ಶಾಸನದಲ್ಲಿ `ವಿರೂಪಾಕ್ಷ ದೇವರ ಪಾದಗಳ ಉಲ್ಲೇಖ ಇದ್ದು ಈ ಸ್ಥಳಕ್ಕೆ ಬಂದು ಪಾದಗಳನ್ನು ಪೂಜೆ ಮಾಡದವರಿಗೆ ಶಾಪ ವಿಧಿಸಿದ ವಿಷಯ ವ್ಯಕ್ತವಾಗಿದೆ.51 ಈ ವಿವರ ಪರೋಕ್ಷವಾಗಿ ಹಂಪೆ ವಿರೂಪಾಕ್ಷನ ಪ್ರಭಾವದಲ್ಲಿ ಸ್ವಲ್ಪಮಟ್ಟಿಗೆ ಇಳಿಮುಖವಾದುದ್ದನ್ನು ಸೂಚಿಸುತ್ತದೆ. ತುಳುವ ಹಾಗೂ ನಂತರದ ಅರಸರ ಕಾಲದಲ್ಲಿಯ ವಿರೂಪಾಕ್ಷ ದೇವಾಲಯಕ್ಕೆ ನೀಡಿದ ದತ್ತಿದಾನಗಳು ವಿಜಯವಿಠಲ ದೇವಾಲಯಕ್ಕೆ ಬಿಟ್ಟ ದತ್ತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳುವುದಾದರೆ ಅಂತಹ ಗಣನೀಯವಾದವುಗಳಲ್ಲ ಎಂದೆನಿಸುತ್ತದೆ. ಬಹುಮಟ್ಟಿಗೆ ಸಾಮಾನ್ಯ ಭಕ್ತ ಜನತೆ ನೀಡಿದ ಕೊಡುಗೆಗಳಾಗಿವೆ.

ಶ್ರೀ ವಿರೂಪಾಕ್ಷ ದೇವರಿಗೆ ಮಂಲಣರಸ ಮಾಡಿಸಿದುದು, ಹತ್ತಿ ಬೆಳಗಲ್ಲಿನ ನಾಗಣ ಗವುಡ ಮತ್ತು ಮುದೆಯಂಮ್ಮನ ಕೊಮರ ಸೋಮಣ ಗವುಡನು ವಿರೂಪಾಕ್ಷ ದೇವರಿಗೆ ಸಮರ್ಪಿಸಿದ ಘಂಟೆ52 ಇತ್ಯಾದಿಅಂಶಗಳು ಮೇಲಿನ ಹೇಳಿಕೆಯನ್ನು ಸಾಕ್ಷೀಕರಿಸುತ್ತವೆ. ಭಕ್ತ ಜನತೆಯ ಮೂಲಕ ಯಥಾರೀತಿಯಲ್ಲಿ ವಿರೂಪಾಕ್ಷ ದೇವಾಲಯದ ಪೂಜಾ ಕಾರ್ಯಗಳು ನಡೆಯುತ್ತಿದ್ದವು ಎನ್ನಬಹುದು. ವಿಜಯನಗರ ಪೂರ್ವಹಾಗೂ ವಿಜಯನಗರದ ಸಂಗಮ ಅರಸರುಗಳ ಕಾಲದಲ್ಲಿ ಧಾರ್ಮಿಕ ಚಕ್ರಾಧಿಪತ್ಯವನ್ನು ಪಡೆದುಕೊಂಡು,ಸಾಹಿತ್ಯಕ, ಆರ್ಥಿಕ, ಸಾಂಸ್ಕೃತಿಕ ಕೇಂದ್ರವಾಗಿದ್ದ ಹಂಪೆಯ ವಿರೂಪಾಕ್ಷ ದೇವಾಲಯವು ನಂತರ ಅರಸರುಗಳ ಕಾಲದಲ್ಲಿ ಧಾರ್ಮಿಕ ಶ್ರದ್ಧೆಯ ಬದಲಾವಣೆಯ ಕಾರಣ ಅರಸರ ನಿರ್ಲಕ್ಷೆಗೆ ಒಳಗಾಯಿತು. ಆದಾಗ್ಯೂ ಕ್ರಿ.ಶ. 1565ರ ರಕ್ಕಸತಂಗಡಗಿ ಯುದ್ಧದಲ್ಲಿಯ ವಿಜಯನಗರದ ಪತನದ ನಂತರ ಉಳಿದೆಲ್ಲಾ ದೇವಾಲಯಗಳು ಅಸ್ತಿತ್ವ ಕಳೆದುಕೊಂಡರೂ ಹಂಪೆಯ ವಿರೂಪಾಕ್ಷ ದೇವಾಲಯವು ಭಕ್ತ ಜನತೆಯ ಪ್ರೋತ್ಸಾಹದಿಂದ ಮುಂಚಿನಷ್ಟು ಅಲ್ಲದಿದ್ದರೂ ಬಹುಮಟ್ಟಿಗೆ ಅಸ್ತಿತ್ವವನ್ನು ಉಳಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಮುಂದುವರಿದುಕೊಂಡು ಬಂದಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಪೆಯ ವಿರೂಪಾಕ್ಷನಲ್ಲಿ ಕವಿಗಳು, ಜನತೆಯೂ, ಸ್ಥಳೀಯ ಅರಸರು ಎಂದಿನಂತೆ ನಿಷ್ಠೆಯನ್ನು ವ್ಯಕ್ತಪಡಿಸಿರುವುದು ಕಂಡುಬರುತ್ತದೆ. ಕ್ರಿ.ಶ. 1584 ರಲ್ಲಿದ್ದ ವಿರೂಪಾಕ್ಷ ಪಂಡಿತನು ತನ್ನ ಚನ್ನಬಸವ ಪುರಾಣದಲ್ಲಿ ಪ್ರತಿಸಂಧಿಯ ಮೊದಲ ಪದ್ಯದಲ್ಲಿ ಪ್ರಾರ್ಥನಾ ರೂಪವಾಗಿ ಹಂಪೆಯ ವಿರೂಪಾಕ್ಷನ ಸ್ತುತಿಯನ್ನು ಮಾಡಿದ್ದಾನೆ. ಹಸ್ತಪ್ರತಿಗಳಲ್ಲಿ ವಿರೂಪಾಕ್ಷನ ಸ್ತುತಿ ಇರುವ ಪದ್ಯಗಳೇ ಪ್ರತ್ಯೇಕವಾಗಿ ಸಿಗುತ್ತಿದ್ದು ಚೆನ್ನಬಸವ ಪುರಾಣದ ನಾಂದ್ಯ ಪದ್ಯಗಳಾಗಿವೆ. ಕ್ರಿ.ಶ. 175 ರಲ್ಲಿದ್ದ ಯೋಗಾನಂದ ಕವಿಯು ಹಂಪೆಯ ವಿರೂಪಾಕ್ಷನನ್ನು ಕುರಿತು ಶತಕ ರಚಿಸಿದ್ದಾನೆ. ಈ ಕೃತಿಯಲ್ಲಿಯ 13 ಕಂದ ಪದ್ಯಗಳಲ್ಲಿ ವಿರೂಪಾಕ್ಷನ ಮಹಿಮೆಯನ್ನು ಕುರಿತ ವಿವಿಧ ರೀತಿಯಲ್ಲಿಯ ಸ್ತುತಿ ಇದೆ. ಹದಿನೇಳು ಹಾಗೂ ಹದಿನೆಂಟನೇ ಶತಮಾನಗಳಲ್ಲಿ ಹಸ್ತಪ್ರತಿಗಳನ್ನು ನಕಲು ಮಾಡಿರುವ ಹಸ್ತಪ್ರತಿಕಾರರು ತಮ್ಮ ಪುಷ್ಪಿಕೆಗಳಲ್ಲಿ ಹಂಪೆ ವಿರೂಪಾಕ್ಷನನ್ನು ಕುರಿತು `ಹಂಪೆ ವಿರೂಪಾಕ್ಷದೇವ, ಶ್ರೀಗುರು ಹಂಪೆ ವಿರೂಪಾಕ್ಷ ಲಿಂಗಾಯ ನಮಃ, ಹಂಪೆ ವಿರೂಪಾಕ್ಷ ಲಿಂಗ ಸ್ವಾಮಿಯವರ ಪಾದವೇ ಗತಿ. ಶ್ರೀ ಹಂಪೆ ವಿರೂಪಾಕ್ಷ ಲಿಂಗಯೇ ನಮಹಾ, ಶ್ರೀಗುರು ಹಂಪೆಯ ವಿರೂಪಾಕ್ಷಾಯಿ ನಮಃ'53 ಎಂದು ಮುಕ್ತ ಕಂಠದಿಂದ ಸ್ತುತಿಸಿರುವುದನ್ನು ನೋಡಿದರೆ ಕವಿಗಳ, ಲಿಪಿಕಾರರ, ಜನತೆಯ ಆರಾಧ್ಯ ದೈವವಾಗಿ ಹಂಪೆಯ ವಿರೂಪಾಕ್ಷ ಮುಂದುವರೆದುಕೊಂಡು ಬಂದಿದ್ದ ಎಂಬುದು ವ್ಯಕ್ತವಾಗುತ್ತದೆ.

     ಒಟ್ಟಾರೆ ಹಂಪೆಯ ವಿರೂಪಾಕ್ಷ ದೇವಾಲಯವು ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೂ ಹಲವಾರು ಏರಿಳಿತಗಳ ನಡುವೆಯೂ ಅರಸರುಗಳ, ಸಾಮಂತರ, ಅಮಾತ್ಯರ, ಸ್ಥಳೀಯ ಅರಸರ, ಸಾಮಾನ್ಯ ಜನತೆಯ ಆಶಯದ ಪ್ರತೀಕವಾಗಿದ್ದು ಸಾಂಸ್ಕೃತಿಕ ಜೀವನ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದೆ.

 

ಅಡಿಟಿಪ್ಪಣಿಗಳು

 

1. ಬಸವಣ್ಣನವರ ಷಟ್ಸ್ಥಲ ವಚನಗಳು (ಸಂ. ಶಿ.ಶಿ. ಬಸವನಾಳ), ವ.ಸಂ. 393.

2. ಹರಿಹರನ ರಗಳೆಗಳು (ಸಂ. ಎಂ.ಎಂ. ಕಲಬುರ್ಗಿ), ಪು. 497, 51.

3. ಗಿರಿಜಾ ಕಲ್ಯಾಣ ಮಹಾಪ್ರಬಂಧಂ (ಸಂ. ಎಂ.ಜಿ. ನಂಜುಂಡಾರಾಧ್ಯ), 1, ಪ.ಸಂ. 1.

4. ಹಂಪೆಯಲ್ಲಿ ವೀರಶೈವ ಪ್ರಾಚೀನ ಕುರುಹುಗಳು. ಎನಗಿಂತ ಕಿರಿಯರಿಲ್ಲ

(ಸಂ. ಬಸವರಾಜು ಮಲಶೆಟ್ಟಿ), ಪು. 319.

5. ಸೋಮನಾಥ ಚಾರಿತ್ರ (ಸಂ. ಆರ್.ಸಿ. ಹಿರೇಮಠ, ಎಂ.ಎಸ್. ಸುಂಕಾಪುರ), ಸ್ಥ. 1, ಪು.ಸಂ. 6.

6. ಹರಿಹರದೇವ ಕೃತ ನೂತನ ಪುರಾತನ ರಗಳೆಗಳು, (ಸಂ. ಎಂ.ಎಸ್. ಸುಂಕಾಪುರ), ಪು. 351.

7. ಇತಿಹಾಸ ದರ್ಶನ (ಸಂ. ಎಂ.ಜಿ. ನಾಗರಾಜು, ಪಿ.ವಿ. ಕೃಷ್ಣಮೂರ್ತಿ), ಸಂ.13, ಪು. 1೦೦.

8. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ1, ಬಳ್ಳಾರಿ ಶಾ.ಸಂ. 4, ಪು. 54.

9. ಅದೇ ಹರಪನಹಳ್ಳಿ ಶಾ.ಸಂ. 199, ಪು. 643, 644.     

1. ಅದೇ ಹರಪನಹಳ್ಳಿ ಶಾ.ಸಂ. 136, ಪು. 64.

11. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ3, ಹಂಪೆಯ ಶಾಸನಗಳು, ಸಂ. 55, ಪು. 46.

12. ಅದೇ ಸಂ.ಪು. 2, ಕುಷ್ಟಗಿ ಶಾ.ಸಂ. 18, ಪು. 297.

13. ಅದೇ ಶಾಸನ ಸಂ. 2, ಯಲಬುರ್ಗಾ ಶಾ.ಸಂ. 4, ಪು. 28.

14. ಎಂ. ಚಿದಾನಂದಮೂರ್ತಿ, ಹೊಸತು ಹೊಸತು, ಪು. 473.

15. ಅದೇ, ಪು. 31.

16. ಹರಿಹರನ ರಗಳೆಗಳು, (ಸಂ. ಎಂ.ಎಂ. ಕಲಬುರ್ಗಿ), ಪು. 59.

17. ಎಂ. ಚಿದಾನಂದಮೂರ್ತಿ, ಹೊಸತು ಹೊಸತು, ಪು. 478.

18. ಅದೇ, ಪು. 474.     

19. ಹರಿಶ್ಚಂದ್ರ ಕಾವ್ಯ ಸಂಗ್ರಹ (ಸಂ. ಎ.ಆರ್. ಕೃಷ್ಣಶಾಸ್ತ್ರಿ), ಸಂ. 5, ಪ.ಸಂ.32,34.  

2. ಎನಗಿಂತ ಕಿರಿಯರಿಲ್ಲ (ಸಂ. ಬಸವರಾಜ ಮಲಶೆಟ್ಟಿ), ಪು. 231.

21. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ3, ಹಂಪೆಯ ಶಾಸನಗಳು ಸಂ. 54, ಪು. 4243.

22. ಎಸ್. ರಾಜಶೇಖರ, ಹೊಯ್ಸಳಸಂಗಮರ ಸಂಬಂಧ, ಕರ್ನಾಟಕ ಭಾರತಿ, ಸಂ.6, ಸಂ. 3, ಪು. 31.

23. ಎನಗಿಂತ ಕಿರಿಯರಿಲ್ಲ (ಸಂ. ಬಸವರಾಜ ಮಲಶೆಟ್ಟಿ), ಪು. 261.

24. ಎಂ. ಚಿದಾನಂದಮೂರ್ತಿ, ಹೊಸತು ಹೊಸತು, ಪು. 474.

25. ಎಸ್.ಉ.ಉ. ಸಂ. 9, ನಂ. 259, ಪು. 54.

26. ಕನ್ನಡ ವಿಶ್ವವಿದ್ಯಾಲಯ ಶಾಸನ, ಸಂ. 1, ಹೊಸಪೇಟೆ ಶಾ.ಸಂ. 32, ಪು.17.

27. ಎನಗಿಂತ ಕಿರಿಯರಿಲ್ಲ (ಸಂ. ಬಸವರಾಜ ಮಲಶೆಟ್ಟಿ), ಪು. 26.

28. ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿ (ಸಂ. ಎಸ್. ಬಸಪ್ಪ), ಸಂ. 38, ಪ.ಸಂ. 251254.

29. ನಾಗಭೂಷಣ, ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ, ಪು. 144.

3. ವಿಜಯ ಕಲ್ಯಾಣ (ಸಂ. ಸಂ.ಶಿ. ಭೂಸನೂರ ಮಠ), ಪು. 199.

31. ವ್ಹಿ. ಶಿವಾನಂದ : ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ, ಪು. 6೦

32. ಕನ್ನಡ ವಿಶ್ವವಿದ್ಯಾಲಯದ ಶಾಸನ ಸಂಪುಟ2, ಕೊಪ್ಪಳ ಶಾಸನ, ಸಂ. 139, ಪು. 138.

33. ಎಂ. ಚಿದಾನಂದಮೂರ್ತಿ, ಹೊಸತು ಹೊಸತು, ಪು. 475.

34. ಎಪಿಗ್ರಫಿಯಾ ಕರ್ನಾಟಿಕಾ ಸಂ. 1, ಮುಳಬಾಗಿಲ ಶಾ.ಸಂ. 69.

35. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ1, ಬಳ್ಳಾರಿ ಶಾ.ಸಂ. 71, ಪು.89.

36. ಅದೇ, ಶಾಸನ ಸಂಪುಟ3, ಹಂಪೆಯ ಶಾಸನ ಸಂಖ್ಯೆ34, ಪು. 22.

37. ಅದೇ, ಶಾಸನ ಸಂಪುಟ, ಹಂಪೆಯ ಶಾಸನ ಸಂಖ್ಯೆ33, ಪು. 17.

38. ಅದೇ, ಹಂಪೆಯ ಶಾಸನ ಸಂಖ್ಯೆ 29, ಪು. 14.

39. ಅದೇ, ಹಂಪೆಯ ಶಾಸನ ಸಂಖ್ಯೆ 32, ಪು. 16.

4. ದ್ಧೃತ : ಸತ್ಯಶುದ್ಧಕಾಯಕ (ಸಂ. ಬಿ. ರಾಜಶೇಖರಪ್ಪ), ಸಂ. 5, ಸಂ.34, ಪು. 96.

41. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ.1, ಬಳ್ಳಾರಿ ಶಾ.ಸಂ. 69, ಪು. 86.

42. ಹೆಚ್ಚಿನ ವಿವರಗಳಿಗೆ ನೋಡಿ, ಕನ್ನಡ ವಿಶ್ವವಿದ್ಯಾಲಯದ ಶಾಸನ ಸಂಪುಟ3, ಹಂಪೆಯ ಶಾಸನಗಳು, ಪು.13೦,176.

43. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ3, ಹಂಪೆಯ ಶಾಸನಗಳು ಸಂ. 229, ಪು. 179. ಶಾ.ಸಂ. 27, ಪು.13.

44. ಅದೇ, ಶಾ.ಸಂ. 27, ಪು. 13.

45. ಅದೇ, ಶಾಸನ ಸಂಪುಟ1, ಹೊಸಪೇಟೆ ಸಂ. 3, ಪು. 14.

46. ಅದೇ, ಶಾಸನ ಸಂಪುಟ1, ಸಿರುಗುಪ್ಪ ಸಂ. 43, ಪು. 121.

47. ಅದೇ, ಶಾಸನ ಸಂಪುಟ3, ಶಾ.ಸಂಖ್ಯೆ 115, ಪು. 97.

48. ಅದೇ, ಶಾಸನ ಸಂಖ್ಯೆ 116, ಪು. 98.

೪೯.ಅದೇ, ಶಾಸನ ಸಂಖ್ಯೆ 117, ಪು. 99.

5. ಅದೇ, ಶಾಸನ ಸಂಖ್ಯೆ 23, ಪು. 11.

51. ಅದೇ, ಶಾಸನ ಸಂಖ್ಯೆ 48, ಪು. 27.  

52. ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು, (ಸಂ. ಎಸ್. ಶಿವಣ್ಣ), ಪು. 24,26,112.

 

 

ಶುಕ್ರವಾರ, ಮೇ 9, 2025

 ತೋಂಟದ ಸಿದ್ಧಲಿಂಗ ಯತಿಗಳನ್ನು ಕುರಿತ ಶಾಸನಗಳು ಮತ್ತು ಶಿಲ್ಪಗಳು

                                                          ಡಾ.ಸಿ.ನಾಗಭೂಷಣ

   ಶರಣರು ಐತಿಹಾಸಿಕ ವ್ಯಕ್ತಿಗಳು; ನಮ್ಮಂತೆಯೇ ಹುಟ್ಟಿ, ಸಾಮಾನ್ಯ ಜನತೆಯ ಏಳ್ಗೆಗಾಗಿ ದುಡಿದವರು. ತಮ್ಮ ಬದುಕನ್ನು ಜನತೆಯ ಏಳ್ಗೆಗಾಗಿ ಮೀಸಲಾಗಿಟ್ಟವರು.  ಇಂತಹ ಶರಣರು ಶಿವಪಾರಮ್ಯಗೈದ, ಸಾಧನೆಗೈದ,ಐಕ್ಯರಾದ ಕಾರ್ಯಕ್ಷೇತ್ರಗಳ ಪರಿಚಯ ಇಂದು ಆಸಕ್ತ ಜನತೆಗೆ ಆಗ ಬೇಕಾಗಿದೆ. ಆದ್ದರಿಂದ ಇಂಥವರ ಕ್ಷೇತ್ರಗಳನ್ನು ಕುರಿತು ಸಂಶೋಧನೆ ಮತ್ತು ಸಂರಕ್ಷಣೆಯು ಇತಿಹಾಸ ರಚನೆಯ ದೃಷ್ಟಿಯಿಂದ ಹಾಗೂ ನಾಡಿನ ಸಂಸ್ಕೃತಿಯ ದೃಷ್ಟಿಯಿಂದ ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಆದ್ದರಿಂದ ನಮ್ಮ ಉಜ್ವಲ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ಸರಿಯಾದ ಜ್ಞಾನ ಮತ್ತು ಅದರ ಬಗ್ಗೆ ಅರಿವನ್ನು ಮೂಡಿಸ ಬೇಕಾಗಿದೆ. ಯಾವ ಜನಾಂಗಕ್ಕೆ ತನ್ನ ಐತಿಹಾಸಿಕ ಪ್ರಜ್ಞೆ ಇರುವುದಿಲ್ಲವೋ ಆ ಜನಾಂಗ ಇತಿಹಾಸವನ್ನು ನಿರ್ಮಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಶರಣ ಧರ್ಮ- ಸಂಸ್ಕೃತಿಯ ದೃಷ್ಟಿಯಿಂದ ಶರಣರ ಕ್ಷೇತ್ರಗಳ ಬಗ್ಗೆ ಸಂಶೋಧನೆ ಮತ್ತು ಸಂರಕ್ಷಣೆ ಅತ್ಯವಶ್ಯಕವಾಗಿದೆ. ಶರಣರ ಚರಿತ್ರೆಯ ಬಗ್ಗೆ ಮತ್ತು ಕಾರ್ಯ ಕ್ಷೇತ್ರಗಳ  ವೀರಶೈವ ಕಥಾ ಸಂಕಲನಕಾರರಾದ ಶಾಂತಲಿಂಗ ದೇಶಿಕ, ಕಿಕ್ಕೇರಿಯ ನಂಜುಂಡಾರಾಧ್ಯ, ಉತ್ತರ ದೇಶದ ಬಸವಲಿಂಗರು ತಮ್ಮ ಭೈರವೇಶ್ವರ ಕಾವ್ಯ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಬಸವೇಶ್ವರ ಪುರಾಣ ಕಥಾ ಸಾಗರ ಕಥಾ ಸಂಕಲನಗಳಲ್ಲಿ ದಾಖಲುಗೊಳಿಸಿದ್ದರು. ಆ ಕೃತಿಗಳ ಮಾಹಿತಿಯನ್ನು ಹಾಗೂ ಕ್ಷೇತ್ರಕಾರ್ಯವನ್ನಾಧರಿಸಿ ಶಿವಶರಣರ ಕಾರ್ಯ ಕ್ಷೇತ್ರಗಳ ಬಗೆಗೆ ಮಾಹಿತಿಯನ್ನು ದಾಖಲಿಸುವಲ್ಲಿ, ಅಧ್ಯಯನ ಮಾಡುವಲ್ಲಿ ಲಿಂ.ಫ.ಗು.ಹಳಕಟ್ಟಿಯವರೇ ಬಹುಶಃ ಮೊದಲಿಗರಾಗಿ ಕಂಡು ಬರುತ್ತಾರೆ. ಈ ಅಧ್ಯಯನ, ಅವರಿಗೆ ಪ್ರಾಥಮಿಕ ಅಧ್ಯಯನದ ವಸ್ತುವಾಗಿರಲಿಲ್ಲ. ವಚನ ಸಾಹಿತ್ಯದ ಸಂಪಾದನೆ ಮತ್ತು ಪ್ರಕಟನೆಯ ಮಹತ್ತರವಾದ ಕಾರ್ಯದಲ್ಲಿ ಶರಣಕ್ಷೇತ್ರಗಳ ಅಧ್ಯಯನವೂ ಜೊತೆಯಾಗಿಯೇ ನಡೆಯಿತು. ಅವರ ಶಿವಶರಣರ ಚರಿತ್ರೆಗಳ ಮೂರು ಸಂಪುಟಗಳು ಅನುಪಮ ಮತ್ತು ಇಂದಿಗೂ ಮೂಲ ಆಕರ ಗ್ರಂಥಗಳಾಗಿವೆ. ನಂತರ ಪ್ರಕಟವಾದ ಸಿದ್ಧಯ್ಯ ಪುರಾಣಿಕರ ``ಶರಣ ಚರಿತಾಮೃತ'' ಮತ್ತು ತ.ಸು.ಶಾಮರಾಯರ ``ಶಿವಶರಣರ ಕಥಾ ರತ್ನಕೋಶ'', ಕೃತಿಗಳು ಶರಣರ ಜನ್ಮಸ್ಥಳ, ಶಿವಪಾರಮ್ಯಗೈದ ಸ್ಥಳ,ಐಕ್ಯರಾದ ಸ್ಥಳಗಳ ಬಗೆಗೆ ಮಾಹಿತಿಯನ್ನು ಒದಗಿಸುವ ಕೃತಿಗಳಾಗಿವೆ. ಎಂ.ಎಂ.ಕಲಬುರ್ಗಿಯವರ ಶಾಸನಗಳಲ್ಲಿ ಶಿವಶರಣರು ಜೆ.ಎಂ.ನಾಗಯ್ಯನವರ ಶಿಲ್ಪಗಳಲ್ಲಿ ಶರಣರು,ಇವು ಶರಣರಿಗೆ ಸಂಬಂಧಿಸಿದ ಶಾಸನಗಳು ಹಾಗೂ ಶಿಲ್ಪಗಳ ಬಗೆಗೆ ಮಾಹಿತಿಯನ್ನು ಒದಗಿಸುವ ಪ್ರಮುಖ ಆಕರಗಳಾಗಿವೆ. 

 ತೋಂಟದ ಸಿದ್ಧಲಿಂಗ ಯತಿಗಳು ಹದಿನಾರನೇ ಶತಮಾನದಲ್ಲಿ ಜೀವಿಸಿದ್ದ ಯೋಗಿಗಳು. ವಚನಕಾರರು, ಪ್ರಬುದ್ಧ ಷಟ್‍ಸ್ಥಲಜ್ಞಾನಿಗಳು, ಶಾಸ್ತ್ರಕಾರರು, ವೀರಶೈವ ಗುರು ಪ್ರಮುಖರು. ಇವರ ಶಿಷ್ಯ-ಪ್ರಶಿಷ್ಯರ ಬಳಗ ದೊಡ್ಡದು. ವಚನಕಾರರಾಗಿ ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು. ಮಠವೊಂದರ ಪೀಠಾಧಿಪತಿಯಾಗಿ ಮಠ ಪರಂಪರೆಯನ್ನೇ ಸೃಷ್ಟಿಸಿದವರು. ಅನುಭವಿಗಳಾಗಿ ಷಟ್‍ಸ್ಥಲ ಶಾಸ್ತ್ರವನ್ನು ಸಾರೋದ್ಧಾರಗೊಳಿಸಿದವರು. ತಿಳಿಯದ ತತ್ವ ವಿವೇಕವನ್ನು ತಿಳಿಯಾದ ಮಾತುಗಳಲ್ಲಿ ತಿಳಿಸಿ ಹೇಳಿದವರು. ಭಕ್ತ ಕುಲ ಕೋಟಿಗೆ ಸಾಕ್ಷಾತ್ ಪರಶಿವಮೂರ್ತಿಯಾಗಿ ಪರಿಣಮಿಸಿದವರು. ವ್ಯಕ್ತಿಯಾಗಿ ಜನಿಸಿ ಕಾಲ ದೇಶ ಪರಿಸರದ ಮೇಲೆ ಮೀರಿ ಬೆಳೆದವರು ತಪಸ್ಸುದಾಯಕದ ಮೂಲಕ ಸಿದ್ಧಿಪಡೆದ ಅಲ್ಲಮನ ಅವತಾರಿಗಳು ಇಂತಹವರ ಸಾಂಸ್ಕೃತಿಕ  ಕೊಡುಗೆ ಅದ್ಭುತವಾಗಿದೆ. 

ಷಟ್‍ಸ್ಥಲ ಜ್ಞಾನಸಾರಾಮೃತ ಕೃತಿಯನ್ನು ಮುಂದಿಟ್ಟುಕೊಂಡು ಆಳವಾಗಿ ಅಧ್ಯಯನ ಮಾಡಿದಾಗ ಅದರಲ್ಲಿ ಸಿದ್ಧಲಿಂಗರ ವಚನಮಯ ವ್ಯಕ್ತಿತ್ವ ಮಹತ್ತರವಾಗಿ ಗೋಚರವಾಗುತ್ತದೆ. ಕಲ್ಯಾಣ ಕ್ರಾಂತಿಯ ನಂತರದ ದಿನಮಾನಗಳಲ್ಲಿ ನೇಪಥ್ಯಕ್ಕೆ ತರುವಲ್ಲಿ ಮತ್ತು ಅದನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ತರ ಪಾತ್ರ ಶಿವಯೋಗಿಗಳದು.  ಬಸವೋತ್ತರ ಯುಗದ ವಚನ ಸಾಹಿತ್ಯದ ಆದ್ಯ ಪ್ರವರ್ತಕ ಸಿದ್ಧಲಿಂಗ ಯತಿ ಎಂಬುದು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದೆ. ತೋಂಟದ ಸಿದ್ಧಲಿಂಗರ  ಅವತಾರದಿಂದ ಕರ್ನಾಟಕ ಮಾತ್ರವಲ್ಲ ಭಾರತವೆ ಪುನೀತವಾಗಿದೆ.  ತೋಂಟದ ಸಿದ್ಧಲಿಂಗ ಯತಿಗಳು ಏಕೋತ್ತರ ಶತಸ್ಥಲದ ಪರಂಪರೆಯ ನಿರ್ಮಾಪಕರು ಹೌದು. ಇವರ ನೇತೃತ್ವದಲ್ಲಿ ವಚನಗಳ ಸಂಗ್ರಹ, ಸಂಪಾದನೆ, ಅಧ್ಯಯನ ತತ್ವ ತಳಹದಿಯ ಮೇಲಿನ ವೈವಿಧ್ಯಮಯ ಸಂಕಲನಗಳ ಮಹತ್ತರ ಕಾರ್ಯ ನಡೆಯಿತು. ಇವರ ಅನೇಕ ಜನ ಕರಕಮಲ ಸಂಜಾತ ಶಿಷ್ಯರು-ಪ್ರಶಿಷ್ಯರುಗಳು ಸ್ವತಃ  ವಚನಕಾರರಾಗಿದ್ದಾರೆ. ಶೂನ್ಯಸಂಪಾದನಾಕಾರರಾಗಿದ್ದಾರೆ. ಷಟ್‍ಸ್ಥಲ ತತ್ವಕ್ಕನುಗುಣವಾಗಿ ವಚನಗಳನ್ನು ಸಂಕಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಶಾಸ್ತ್ರಕ್ಕೆ ಟೀಕೆ, ವ್ಯಾಖ್ಯಾನ, ಟಿಪ್ಪಣಿ ಬರೆದಿದ್ದಾರೆ ಅಷ್ಟೇ ಅಲ್ಲ ವೀರಶೈವ ಪುರಾಣ ಕರ್ತೃಗಳು ಆಗಿದ್ದಾರೆ. ಹೀಗೆ ಇದನ್ನೆಲ್ಲ ಮನನ ಮಾಡುತ್ತಾ ಹೋದಾಗ ಸಿದ್ಧಲಿಂಗ ಯತಿಯ ಹಿಂದೆ ಒಂದು ಸಾಹಿತ್ಯ ಪರಂಪರೆ ಮತ್ತೊಂದು ಶಾಸ್ತ್ರ ಪರಂಪರೆ, ಒಂದು ಗುರು ಪರಂಪರೆ, ಒಂದು ಆಧ್ಯಾತ್ಮ ಪರಂಪರೆ, ಒಂದು ವೀರಶೈವ ಧರ್ಮ ಪರಂಪರೆ ಅದಕ್ಕೆ ಆಗರವಾದ ಮಠ ಪರಂಪರೆ ಹೀಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮುಖಗಳ ವಿಕಾಸಕ್ಕೆ ಕಾರಣವಾದ ಹಿನ್ನೆಲೆ ಇರುವುದು ಕಂಡು ಬರುತ್ತದೆ.  ಆ ಮಹಿಮಾಶಾಲಿ ವ್ಯಕ್ತಿತ್ವದ ಪ್ರಭಾವಗಳು ಹಿಂದಿಗೂ ಅಚ್ಚಳಿಯದೇ ಉಳಿದಿದೆ. ಸಿದ್ಧಲಿಂಗ ಯತಿಗಳ ಕುರಿತಾಗಿ ಪಂಡಿತರಿಂದ ಹಿಡಿದು ಪಾಮರರ ವರೆಗೆ ಎಲ್ಲ ವರ್ಗದ ಜನರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 

   ಸಿದ್ಧಲಿಂಗರ ವಚನ ಸಾಹಿತ್ಯ, ಶಾಸ್ತ್ರಗಳ ಕುರಿತಾಗಿ ಪ್ರಕಟವಾದ ಪುಸ್ತಕ, ಲೇಖನಗಳಿಗೆ ಕೊರತೆಯಿಲ್ಲ. ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ. ಬಸವಣ್ಣನವರನ್ನು ಹೊರತು ಪಡಿಸಿದರೆ ಅಧಿಕ ಸಂಖ್ಯೆಯಲ್ಲಿ ಕಾವ್ಯ-ಪುರಾಣಗಳಲ್ಲಿ ಉಲ್ಲೇಖಿತರಾದವರು ಇವರೇ ಆಗಿದ್ದಾರೆ. ಅವರು ಅವತಾರ ಪುರುಷರಾಗಿ ಅನೇಕ ಪವಾಡ ಮಹಿಮಾ ವಿಶೇಷಣಗಳನ್ನು ಮಾಡಿ ಎರಡನೆಯ ಪ್ರಭುದೇವರೆಂಬ ಪ್ರಶಂಸೆ ಪಡೆದುದ್ದನ್ನು ಅರಿತು ಅವರಲ್ಲಿ ಅಪಾರವಾದ ಪ್ರೀತಿ ಉಂಟಾಗಿ ಅವರ ಮೇಲೆ ಹೆಚ್ಚಿನ ಕಾವ್ಯ ಪುರಾಣ ಬರೆಯುವ ಪರಿಪಾಠವನ್ನು ಕವಿಗಳು ಮಾಡಿದರು. 

     ತೋಂಟದ ಸಿದ್ಧಲಿಂಗರೊಬ್ಬ ಅನುಭಾವಿ ಸಂಕಲನಕಾರರಾಗಿ, ವ್ಯಾಖ್ಯಾನಕಾರರಾಗಿದ್ದು, ವೀರಶೈವ ಸಾಹಿತ್ಯ ಸಮೃದ್ಧಿಯಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು, ವೀರಶೈವರು ಆಚರಿಸಬೇಕಾದ ಷಟಸ್ಥಲ ಸಿದ್ಧಾಂತ ಹಾಗೂ ಅಷ್ಟಾವರಣ ವಿಧಿ ವಿಧಾನಗಳು ನಿಯಮಗಳನ್ನು ಕುರಿತು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಮಹಾ ತಾತ್ವಿಕ ಪ್ರತಿಭಾವಂತರು. ವೀರಶೈವ ಧರ್ಮದ ಪುನರುದ್ಧಾರಕರಾದ ತೋಂಟದ ಸಿದ್ಧಲಿಂಗರು ವೀರಶೈವ ತತ್ವ ಶಾಸ್ತ್ರ ವಾಙ್ಮಯ ಪ್ರಪಂಚಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ವೀರಶೈವ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವುದಕ್ಕಾಗಿ ಅನೇಕ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡ ಸಾಹಿತ್ಯ ಪ್ರೇಮಿ.  

  ತೋಂಟದ ಸಿದ್ಧಲಿಂಗ ಯತಿಗಳ ಜೀವಿತದ ರೂಪರೇಷಗಳನ್ನು ಪುನರ್ ರಚಿಸಲು ಆಕರ ಸಾಮಗ್ರಿಗಳೆಂದರೆ, ತೋಂಟದ ಸಿದ್ಧಲಿಂಗಯತಿಗಳ ಸ್ವಂತ ಕೃತಿಗಳು, ಸಮಕಾಲೀನ ಹಾಗೂ ನಂತರದ ಶಾಸನಗಳು, ವಚನಕಾರರ ವಚನಗಳು,ಕವಿಗಳ ಕಾವ್ಯ ಪುರಾಣಗಳು ಮತ್ತು ಇತರೆ ಮೂಲಗಳಿಂದ ದೊರೆತ ಮಾಹಿತಿಗಳನ್ನು ಸಂಗ್ರಹಿಸಿ ಸತ್ಯಾಸತ್ಯತೆಯನ್ನು ಓರೆಹಚ್ಚ ಬೇಕಾಗಿದೆ. ಸಿದ್ಧಲಿಂಗಯತಿಗಳ    ಜೀವಿತದ ಕಾಲಾನಂತರ ಬಂದ ಕೃತಿಗಳೆಷ್ಟು? ಅವುಗಳೊಂದಿಗೆ ಕಾಲಕಳೆದಂತೆಲ್ಲಾ ಹಲವಾರು ಮಾರ್ಪಾಡುಗಳೊಡನೆ ಸೇರುತ್ತಾ ಬಂದ ವೃತ್ತಾಂತಗಳಾವುವು ? ಸೇರಲಿಕ್ಕೆ ಕಾರಣಗಳೇನು? ವಸ್ತು ದೃಷ್ಟಿಯಿಂದ ಎಷ್ಟು ವಿಭಾಗ ಮಾಡಬಹುದು? ಸೇರ್ಪಡೆಯಾದ ಪುರಾಣ ಸಂಗತಿಗಳಲ್ಲಿ ಐತಿಹಾಸಿಕತೆಯ ಗ್ರಹಿಕೆ, ತೋಂಟದ ಸಿದ್ಧಲಿಂಗ ಯತಿಯ ಚರಿತ್ರೆಯ ಬೆಳವಣಿಗೆಯ ರೀತಿ ಇತ್ಯಾದಿಗಳನ್ನು ಕುರಿತ ಅಧ್ಯಯನ ಸ್ವಲ್ಪ ಮಟ್ಟಿಗೆ ನಡೆದಿದೆ. 

    15ನೇ ಶತಮಾನದಿಂದ ಹಿಡಿದು 18ನೇ ಶತಮಾನದ ವರೆಗಿನ ಶಾಸನ ಹಾಗೂ ವೀರಶೈವ ಸಾಹಿತ್ಯದಲ್ಲಿ ತೋಂಟದ ಸಿದ್ಧಲಿಂಗರ ದಂತ ಕಥೆ ಹಲವಾರು ಮಾರ್ಪಾಡುಗಳೊಡನೆ ಮೈದಾಳಿದೆ. ತೋಂಟದ ಸಿದ್ಧಲಿಂಗರ ಕಾವ್ಯ-ಪುರಾಣಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಆಗಿರುವುದುಂಟು. ಸಿದ್ಧಲಿಂಗನನ್ನು ಕುರಿತ ಶಾಸನ ಕಾವ್ಯ ಪುರಾಣಗಳಲ್ಲಿ ಮತ್ತು ಹಲವು ಪರೋಕ್ಷವಾಗಿ ಉಲ್ಲೇಖಿಸಲ್ಪಟ್ಟವುಗಳಾಗಿವೆ. 

   ತೋಂಟದ ಸಿದ್ಧಲಿಂಗ ಯತಿಗಳ  ಜೀವನ ವಿವರಗಳನ್ನು ನೇರವಾಗಿ  ಪ್ರಸ್ತಾಪಿಸುವ   ಶಾಸನಗಳು ಸದ್ಯಕ್ಕೆ ಲಭ್ಯವಿಲ್ಲ. ಆದರೆ ಪರೋಕ್ಷವಾಗಿ ಪ್ರಸ್ತಾಪವಿರುವ  ಶಾಸನಗಳು ಲಭ್ಯವಿವೆ. ಹೆಸರನ್ನು ಬಹುತೇಕ ಶಾಸನಗಳು ಪ್ರಸ್ತಾಪಿಸಿವೆ. ಅವು ಈ ಕೆಳಕಂಡಂತಿವೆ. 

         ೧. ಎಡೆಯೂರು ಶಾಸನ ಮತ್ತು ಇತರೆ ಲಘು ಬರೆಹಗಳ ಶಾಸನಗಳು

       ೨. ಕಗ್ಗೆರೆ ಶಾಸನಗಳು  ಮತ್ತು ಇತರೆ ಲಘು ಬರೆಹಗಳ ಶಾಸನಗಳು

       ೩. ಕಾಮಿಡಿಹಳ್ಳಿ ಶಾಸನ

       ೪. ತೋಂಟದ ಸಿದ್ಧಲಿಂಗರ ವಚನ ಉತ್ಕೀರ್ಣವಾಗಿರುವ  ಚಿತ್ರದುರ್ಗದ ಶಾಸನ

       

೧. ತೋಂಟದ ಸಿದ್ಧಲಿಂಗ ಯತಿಗಳ ಉಲ್ಲೇಖವಿರುವ ಎಡೆಯೂರು ಮಠದ ಶಾಸನ

    ಕಾಲದ ಬಗೆಗೆ ಖಚಿತತೆ ಇಲ್ಲದ ಎಡೆಯೂರು ಶಾಸನದಲ್ಲಿ ಸಿದ್ಧಲಿಂಗರ ಆರಂಭ ಕಾಲದ ಬದುಕಿನ ವಿವರಗಳಿಗಿಂತ ಅಂತಿಮ ಕಾಲದ ವಿವರಗಳ ಬಗೆಗೆ ಮಾಹಿತಿಗಳು ಲಭ್ಯವಿವೆ. ಎಡೆಯೂರು ಶಾಸನದಲ್ಲಿಯ ವಿವರದ ಪ್ರಕಾರ   ದೊಡ್ಡ ಸಿದ್ಧೇಶ್ವರರು ಸಿದ್ಧಲಿಂಗರ ಸಮಕಾಲೀನ ಐತಿಹಾಸಿಕ ವ್ಯಕ್ತಿಯಾಗಿದ್ದರೆಂಬುದಾಗಿ ತಿಳಿದು ಬರುತ್ತದೆ. ಈ ನಿರ್ವಿಕಲ್ಪ ಸಮಾಧಿಯ ಸುತ್ತ ಬೃಹತ್ತಾದ ಆವರಣವನ್ನು ನಿರ್ಮಿಸಿ, ಆ ಸ್ಥಳದಲ್ಲಿ ದೇವಾಲಯದಂತಹ ಗದ್ದುಗೆಯನ್ನು ನಿರ್ಮಿಸಿದವರು ತೋಂಟದ ಸಿದ್ಧಲಿಂಗಯತಿಗಳ ಪರಮ ಭಕ್ತರಾಗಿದ್ದ ದಾನಿವಾಸ ಅರಸರು. ಅವರು ಆ ನಿರ್ವಿಕಲ್ಪ ಸಮಾಧಿಗೆ ಭದ್ರತೆಯನ್ನೊದಗಿಸಿ ನಿತ್ಯ ಪೂಜಾಕಾರ್ಯ ಮತ್ತು ದಾಸೋಹ ನಡೆಸುವಂತೆ ದತ್ತಿಯನ್ನು ನೀಡಿದರು. ಅದರ ವಿವರ ಇಂದಿಗೂ ಸಿದ್ಧಲಿಂಗೇಶ್ವರ ದೇವಾಲಯದಲ್ಲಿರುವ ಆವರಣದಲ್ಲಿರುವ ಶಾಸನದಲ್ಲಿ ಉಲ್ಲೇಖವಾಗಿದೆ. ಎಡೆಯೂರಲ್ಲಿ ತೋಂಟದ ಸಿದ್ಧಲಿಂಗರ ಮಠದ ಗರ್ಭಗುಡಿಯಲ್ಲಿ ಲಿಂಗೈಕ್ಯರಾಗಿದ್ದು ಅವರ ಸ್ಮಾರಕವಾಗಿ ಲಿಂಗವೊಂದನ್ನು ಇಲ್ಲಿ ಸ್ಥಾಪಿಸಿದ್ದಾರೆ. ಈ ಮಠದಲ್ಲಿಯ ಶಾಸನದ ಕಾಲ ಕ್ರಿ.ಶ.1600 ಎಂದು ಅಂದಾಜಿಸಿದ್ದರೂ ಈ ಶಾಸನ ಕಾಲದ ಖಚಿತತೆ ಇಲ್ಲ. ಈ ಶಾಸನವು ಸಿದ್ಧಲಿಂಗರ ಜೀವಿತಾವಧಿಯಲ್ಲಿ ರಚಿತವಾಗಿಲ್ಲ ಎನ್ನಬಹುದು. ಈ ಶಾಸನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳಿಗೆ ಅವರ ಶಿಷ್ಯ ಚಿಟ್ಟಿಗದೇವನು ದಾನಿವಾಸಿ ದಂಪತಿಗಳ ಕೋರಿಕೆಯ ಮೇರೆಗೆ ಕಲ್ಲು ಮಠವನ್ನು ಮತ್ತು ನಿತ್ಯದಾಸೋಹದ ಕಾಯಕಕ್ಕೆ ಅಡಿಗೆ ಮನೆ ಮತ್ತು ಉಗ್ರಾಣದ ಮನೆಯನ್ನು ಕಟ್ಟಿಕೊಟ್ಟ ವಿವರವಿದೆ. ಈ ಶಾಸನದಲ್ಲಿ ಸಿದ್ಧಲಿಂಗರ ಬಗೆಗೆ ಅತಿಶಯವಾಗಿ ಹೊಗಳಿರುವುದಲ್ಲದೇ ಅವರ ಶಿಷ್ಯ ಬಳಗದ ಕೆಲವರನ್ನು ಉಲ್ಲೇಖಿಸಿದೆ. ಆದರೆ ಈ ಶಾಸನದಲ್ಲಿ ಗ್ರಾಂಥಿಕ ಪದಗಳಿಗಿಂತ ಆಡುಭಾಷೆಯ ಪದಗಳೇ ಅಧಿಕವಾಗಿ ಕಂಡು ಬರುತ್ತವೆ. 

ಆ ಶಾಸನದ ಪಠ್ಯ ಹಾಗೂ ಸಂಬಂಧಿಸಿದ ವಿವರ ಇಂತಿದೆ.  

೧. ಕೊಡಗಿಹಳಿಯ ದೇವರು ತಾಉ ಪಡದ ಭೂಮಿಯಲಿ ತೋಂಟದಸ್ವಾಮಿ

೨. ಗೆ ತಂಮ ಭಕ್ತಿಯಿಂದಾ ಕಟ್ಟಿಸಿ ಕೊಟ್ಟ ಮಠ ಯಿ ಮಹಶಿದ್ದೇಶ್ವರನ ಅತಿಸಯವೆಂತೆಂದ

೩. ಡೆ [||*] ಶ್ರೀಮತು ಸಚಿದಾನಂದನಿತ್ಯಪರಿಪೂರ್ಣವನುಳ್ಳ ಅನಾದಿಭಕ್ತ ಆ ಭಕ್ತನ ಹ್ರುದೆಯದಲ್ಲಿ ಜಂ

೪. ಗಮ ಜಂಗಮದ ಮಕುಟದಲ್ಲಿ ಶೂನ್ಯಲಿಂಗ ಆ ಲಿಂಗದಲ್ಲಿ ಚಿದಂಬರಶಿವಶಕ್ತಿ ಪಂಚ

೫. ಶಕ್ತಿ ಪಂಚನಾದ ಪಂಚಬ್ರಂಹ ಯೀಶ್ವರಾಷ್ಟಕ ಮಹೇಶ್ವರ ಪಂಚವಿಂಸತಿರುದ್ರರೇಕಾ

೬. ದಶತ್ರಯವಯ . . ರಂಣ್ಯಗರ್ಭ ವಿರಾಟಮೂರ್ತಿ ಯಿಂತೀ ಯೆಂಭತೊಂದು ಮೂರ್ತಿ

೭. ಯೆ ಅಂಗವಾಗಿರ್ಪಾತನೆ ಅನಾದಿಭಕ್ತನು ಆ ಭಕ್ತನ ಪ್ರಾಣಕಳಾಚೈತ(ಂ)ನ್ಯಸ್ವ

೮. ರೂಪೇ ತೋಂಟದ ಸಿದ್ದಲಿಂಗೇಶ್ವರನು ಆ ಸಿದ್ಧಲಿಂಗೇಶ್ವರನ ಮೂರ್ತಿಕ್ರಮವೆಂತೆಂದ

೯. ಡೆ [||*] ಪ್ರಣಮವೆ ಶಿರಸು ನಮಸಾರವೇ ಭುಜ ಶಿಕೂರವೇ ದೇಹ ವಷಟ್ಕಾರವೇ ಪಾದ ಅನಂ

೧೦. ತಕೋಟಿಬ್ರಹ್ಮಾಂಡಗಳೇ ಮಕುಟ ಸಮಸ್ತಲೋಕಾದಿಲೋಕಂಗಳೇ ದೇಹದ ಒಳವ

೧೧. ಳೆಯ ಆಕಾಶವೇ ಮುಖ ದಶದಿಕ್ಕುಗಳೇ ತೋಳು ಚಂದ್ರಸೂರ್ಯಾದಿಗಳೇ ನಯನ ಪಾತಾಳ

೧೨. ವೇ ಹೆದೆ ಮೇಘಂಗಳೇ ಜಟಾಬಂಧ ಆ ಜಟಾಬಂಧದಲ್ಲಿ ಶೂನ್ಯಲಿಂಗ ವೇದಪುರಾಣಂಗಳೇ ತ್ರಿನ

೧೩. ಕ್ಷತ್ರಂಗಳೇ ಪುಷ್ಪ ಚಂದ್ರಪ್ರಕಾಶವೇ ವಿಭೂತಿ ಅಷ್ಟಕುಲಪರ್ವತಂಗಳೇ ರುದ್ರಾಕ್ಷಿ ಸಪ್ತ ಸಮುದ್ರಂಗ

೧೪. ಳೇ ಕಮಂಡಲ ಭುವನಶ್ರುಷ್ಟಿಎ ಕಂತೆ ದಿವಾರಾತ್ರೆಗಳೇ ಮಠ ಷಡುರುತುಗಳೇ ಪಡುಸ್ಥಲ ಮಹಾಸೇ

೧೫. ಷನೇ ಕಟಿಸೂತ್ರ ಪರಿಪೂರ್ನ್ನಗ್ಞಾನವೇ ಪಂಚಮುದ್ರೆ ತ್ರಿಕಾಲಜ್ಞಾನವೇ ಮಹದೈಶ್ವರ್ಯ್ಯ ಮಹಾ

೧೬. ಮೇರುವೆ ದಂಡ ಸದ್ಗುಣವೆ ಕರ್ಪರ ಕುಲವೆ ಶಿವಕುಲ ಯಿಂತಪ್ಪ ಅನಾದಿಜಂಗಮವೆ

೧೭. ಜಗದ್ಧಿತಾರ್ತ್ಥವಾಗಿ ಚರಿಸಿದ ಕ್ರಮವೆಂತೆಂದರೆ ಜ್ಞಾನಕ್ರಿಯಾಸ್ವರೂಪನು ಸರ್ವ್ವಾಗಲಿಂ

೧೮. ಗಿ ಷಟ್ಸ್ಥಲ ಜ್ಞಾನಿ ಸರ್ವ್ವಾಚಾರಸಂಪಂನ್ನ ಪಾದೋದಕಪ್ರಸಾದಪ್ರತಿಷ್ಟಾಚಾರ್ಯರು

೧೯. ಅಷ್ಟಾವರಣಾಲಂಕರಣ ದ್ವೆೈತಾದ್ವೆೈತತಿಮಿರಮಾರ್ತಾಂಡನುಂ ಯಿಂತಪ್ಪ ದಿವ್ಯ ಶಿವಯೋಗಿ ಸಿದ್ದಲಿ

೨೦. ಂಗೇಶ್ವರಂಗೆ ಸಂಮ್ಯಗ್ಞಾನೋದಯವಾಗಿ ಸಂಸಾರಹೇಯ . . ವಂ ಮಾಡಿ ಶರಣುಹೊಕ್ಕ ಸಿಷ್ಯಜನಂ

೨೧. ಗಳ ನಾಮಪರಿಕ್ರಮಗಳೆಂತಂದಡೆ [||*] ಸಪ್ಪೆದೇವರು ಉಪ್ಪಿನಹಳ್ಳಿಯ ಸಾಮಿ ಸಿದ್ದೇದೇವರು ನಂಜೇದೇ

೨೨. ವರು ಬೋಳಬಸವರಾಜದೇವರು ಗುಂಮಳಾಪುರದ ಸಿದ್ದಲಿಂಗದೇವರು ಪಟಣದೇವರು ರೇವ 

೨೩. ಣಸಿದ್ದೇದೇವರು ಸೀಲವಂತದೇವರು ಚಿಟ್ಟಿಗದೇವರು ಯಿಂತೆ ಯಿವರು ಮುಕ್ಯವಾದ ಭಕ್ತ ಮಾ

೨೪. ಹೇಸ್ಸರರ್ಗ್ಗೆ ಷಡುಸ್ತಲಜ್ಞಾನಲಿಂಗಾಂಗಸಂಮಂಧ ಸಮರಸಏಕಾರ್ತ್ತಮಂ ಬೋಧಿಸಿ ಮುಕ್ತರಂ

೨೫. ಮಾಡಿ ಷಡುಸ್ತಲಯೇಕಾರ್ತವಾಗಿ ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಯೆಡೆಯೂರಲ್ಲಿ ತಮಗೆ ಕಟ್ಟಿ

೨೬. ಸಿದ ಮಟದಲ್ಲಿ ಸಿವಯೋಗಸಮಾಧಿಸಂನದ್ಧರಾದರು [||*] ತೋಂಟದಸ್ವಾಮಿಯ ಪಾದಪದ್ಮರಾದಕರಾದಾ ದಾ

೨೭. ನಿವಾಸನಿವಾಸಿಗಳಾದ ಚೆಂನರಾಯವಡೆಯರು ಚೆಂನರಾಯವಡೆಯರ ಮಕ್ಕಳು ಲಿಂಗಪ್ಪವಡೆ

೨೮. ಯರು ಲಿಂಗಪ್ಪವಡೆಯರ ಮಕ್ಕಳು ಪಾದೋದಕಪ್ರಸಾದಸಂಪನ್ನರಾದ ಚೆನ್ನವೀರಪ್ಪವಡೆಯರು ಚೆಂನ

೨೯. ವೀರಪ್ಪವಡೆಯರ ಸತಿ ಪರ್ವತಂಮದಂಪತಿಗಳು ತಂಮ ಭಕ್ತಿಯಿಂದ ತೋಂಟದ ಸ್ವಾಮಿಗೆ ಕಲ್ಲ ಮಟವ ಕಟ್ಟ

೩೦. ಬೇಕೆಂದು ಚಿಟ್ಟಿಗದೇವರಿಗೆ ಪದಾರ್ತಮಂ ನಮಸ್ಕಾರಮಂ ಮಾಡಲಾಗಿ ಭಕ್ತಿಪದಾರ್ತಮಂ ಕೈಕೊಂಡು ಯೆ

೩೧. ಡೆಯೂರಿಗೆ ಬಿಜೆಯಂಗೆಯಿದು ತೋಂಟದ ಸ್ವಾಮಿಗೆ ಕಲ್ಲಮಟವನು ಯೆಂಟು ಜೆಡೆಯ ಬಗೆಯ ಹಿ

೩೨. ರಿಯರು ಚಿಟ್ಟಿಗದೇವರು ಕಟ್ಟಿಸಿದರು [||*] ಯೆಡೆಯೂರುಸ್ತಲದಲಿ ಆದ ಕೊಡಗಿಮಾನ್ಯ ನಿತ್ಯಾ ಬಂ

೩೩. ದ ಕಾಣಿಕೆ ಸೀಮೇ ಮೇಲೆ ತಂದ ನಂ[ದಾ*]ದೀಪದ ಕಾಣಿಕೆ ಯಿಷ್ಟು ಯಿ ಮಟದ ಹಿರೀರು ಪಚೆಕಂತೆ

೩೪. ಯ ಚೆನಮಲ್ಲಿಕಾರ್ಜುನದೇವರದು ಯೆಂಟು ಜಡೆಯ ಬಗೆಯ ಹಿರೀರು ಚಿಟ್ಟಿಗದೇವರು ಪ

೩೫. ಡದ ಪುರವರ್ಗವು ಸಹಮುಕದಲ್ಲಿ ಬಂದ ಕಾಣಿಕೆ ತೋಂಟದ ಶ್ವಾಮಿಯ ದಾಸೋಹ

೩೬. ದ ದ್ರವ್ಯ ಯಿ ಮಟದಲ್ಲಿ ತೋಂಟದ ಸ್ವಾಮಿಯ ದಾಸೋಹವನು ಚಿಟ್ಟಿಗದೇವರು ಯಿ

೩೭. ಡ್ಸಿದ ಅ . ದಲಿ ವಡೆಯರು ಭಕ್ತರು ವಪ್ಪಿದ ಸತ್ಪುರುಸರು ಯಿ ದಾಸೋಹವನು ಮಾ

೩೮. ಡುವರು ಯಿ ದ್ರವ್ಯ ತೋಂಟ ಸ್ವಾಮಿಯ ದಾಸೋಹಕ್ಕೆ ಸಲುವದು ಆರಿಗೂ ವರ್ಗಪಾ

೩೯. ರಂಪರಿಗೆ ಸಲ್ಲದು ಸಜ್ಜನಸತ್ಪುರುಸರು ಯಿ ಮಟದಲಿ ಯಿ ಪದಾರ್ತವ ಅನು

೪೦. ಭವಿಸುವರು ಯೀ ಮಠದಲ್ಲಿ ಕಟ್ಟಿಸಿದ ಅಡಿಗೆ ಮನೆ ಉಗ್ರಾಣದ ಮನೆಯೂ

೪೧. ಈ ತೋಟದ ಸ್ವಾಮಿಯ ದಾಸೋಹಕ್ಕೆ ಸಲುವದು [||*] ಶ್ರೀ ಸಿದ್ಧೇಶ್ವರ (ಎಪಿಗ್ರಾಫಿಯ ಕರ್ನಾಟಿಕ ಸಂ.೨೪( ಪರಿಷ್ಕೃತ), ಪು.ಸಂ.೨೨೬-೨೨೭)

ಎಡೆಯೂರ ಶಾಸನದ ಗದ್ಯಾನುವಾದ 

ಕೊಡಗಿಹಳ್ಳಿ ದೇವರು ತಾವು ಪಡೆದ ಮಠದ ಭೂಮಿಯಲ್ಲಿ ತೋಂಟದ ಸಿದ್ಧಲಿಂಗೇಶ್ವರರಿಗೆ ತಮ್ಮ ಭಕ್ತಿಯಿಂದ ಕಟ್ಟಿಸಿಕೊಟ್ಟ ಮಠ, ಈ ತೋಂಟದ ಸಿದ್ದಲಿಂಗೇಶ್ವರರ ಮಹಿಮೆ ಎಂತೆಂದಡೆ ಶ್ರೀಮತು ಸಚ್ಚಿದಾನಂದ ನಿತ್ಯಪರಿಪೂರ್ಣವನುಳ್ಳ ಅನಾಧಿ ಭಕ್ತ ಆ ಭಕ್ತನ ಹೃದಯದಲ್ಲಿ ಜಂಗಮ, ಜಂಗಮದ ಮುಕುಟದಲ್ಲಿ ಶೂನ್ಯಲಿಂಗ, ಆ ಲಿಂಗದಲ್ಲಿ, ಚಿದಂಬರ ಶಿವಶಕ್ತಿ, ಪಂಚಶಕ್ತಿ, ಪಂಚನಾದ, ಪರಬ್ರಹ್ಮ, ಈಶ್ವರಾಷ್ಟಕ, ಮಹೇಶ್ವರ ಪಂಚವಿಂಶತಿ ರುದ್ರರೇಕಾದಶತ್ರಯವಯ ಹಿರಣ್ಯಗರ್ಭ ವಿರಾಟಮೂರ್ತಿ ಇಂತೀ ಎಂಬತ್ತೊಂದು ಮೂರ್ತಿಯೇ ಲಿಂಗವಾಗಿಪ್ಪಾತನೇ ಅನಾದಿ ಭಕ್ತನು ಆಭಕ್ತನ ಪ್ರಾಣಕಳಾ ಚೈತನ್ಯ ಸ್ವರೂಪೇ ತೋಂಟದ ಸಿದ್ಧಲಿಂಗೇಶ್ವರನು ಆ ಸಿದ್ದಲಿಂಗೇಶ್ವರನ ಮೂರ್ತಿ ಕ್ರಮವೆಂತೆಂದರೆ ಪ್ರಣಮವೇ ಶಿರಸ್ಸು, ನಮಸ್ಕಾರವೇ ಭುಜ, ಶಿಕಾರವೇ ದೇಹ, ವಯಸ್ಕಾರವೇ ಪಾದ, ಅನಂತಕೋಟಿ ಬ್ರಹ್ಮಾಂಡಗಳೇ ಮುಕುಟ, ಸಮಸ್ತಲೋಕಾದಿಲೋಕಂಗಳು ದೇಹದ ಚಲವಳಯ ಆಕಾಶವೇ ಮುಖ, ದಶದಿಕ್ಕುಗಳೇ ತೋಳು, ಚಂದ್ರ ಸೂರ್ಯಾದಿಗಳೇ ನಯನ, ಪಾತಾಳವೇ ಎದೆ, ಮೇಘಂಗಳೇ ಜಟಾಬಂಧ, ಆ ಜಟಾಬಂಧದಲ್ಲಿ ಶೂನ್ಯಲಿಂಗ, ವೇದ ಪುರಾಣಗಳೇ ಕ್ರೀ, ನಕ್ಷತ್ರಗಳೇ ಪುಷ್ಪ, ಚಂದ್ರಪ್ರಕಾಶವೇ ವಿಭೂತಿ, ಅಷ್ಟಕುಲಪರ್ವತಗಳೇ ರುದ್ರಾಕ್ಷಿ, ಸಪ್ತಸಮುದ್ರಗಳೇ ಕಮಂಡಲ, ಭುವನಸೃಷ್ಟಿಯೇ ಕಂಡೆ, ದಿನರಾತ್ರಿಗಳೇ ಮಠ, ಷಡುಋತುಗಳೇ ಷಡುಸ್ಥಲ, ಮಹಾಶೇಷನೇ ಸೂತ್ರ, ಪರಿಪೂರ್ಣ ಜ್ಞಾನವೇ ಪಂಚಮುದ್ರ ತ್ರಿಕಾಲ ಜ್ಞಾನವೇ ಮಹದೈಶ್ವರ್ಯ ಮಹಾಮೇರುವೇ ದಂಡ, ಸದ್ಗುಣವೇ ಕರ್ಪರ, ಕುಲವೇ ಶಿವಕುಲ ಇಂತಪ್ಪ ಅನಾದಿ ಜಂಗಮವೇ ಜಗಹಿತಾರ್ಥವಾಗಿ ಕ್ರಮವೆಂತೆಂದರೆ: ಜ್ಞಾನಕ್ರಿಯಾ ಸ್ವರೂಪನು ಸರ್ವಾಂಗಲಿಂಗಿ ಷಟ್‌ಸ್ಥಲಜ್ಞಾನಿ, ಸರ್ವಾಚಾರ ಸಂಪನ್ನ ಪಾದೋದಕಮ ಪ್ರಸಾದ ಪ್ರತಿಷ್ಠಾಚಾರ್ಯರು ಅಷ್ಟಾವರಣಾಲಂಕರಣ, ದ್ವೈತಾದ್ವೈತ ತಿಮಿರ, ಮಾರ್ತಾಂಡನುಂ ಇಂತಪ್ಪ ದಿವ್ಯ ಶಿವಯೋಗಿ ಸಿದ್ಧಲಿಂಗೇಶ್ವರರಿಗೆ ಸಮ್ಯಕ್‌ ಜ್ಞಾನೋದಯವಾಗಿ ಸಂಸಾರಹೇಯವನ್ನು ಮಾಡಿ ಶರಣುಹೊಕ್ಕ ಶಿಷ್ಯಜನರ ವಾಮಪರಿಕ್ರಮಗಳೆಂದರೆ: ಸಪ್ಪೆದೇವರು, ಉಪ್ಪಿನ ಹಳ್ಳಿಯ ಸ್ವಾಮಿ, ಸಿದ್ದೇದೇವರು, ನಂಜೇದೇವರು, ಬೋಳಬಸವರಾಜ ದೇವರು, ಗುಮ್ಮಳಾಪುರದ ಸಿದ್ಧಲಿಂಗದೇವರು, ಪಟ್ಟಣ ದೇವರು, ರೇವಣ ಸಿದ್ಧೇದೇವರು, ಶೀಲವಂತ ದೇವರು, ಚೆಟ್ಟಿಗದೇವರು, ಇಂತಿವರು ಮುಖ್ಯವಾದ ಭಕ್ತಮಹೇಶ್ವರರಿಗೆ ಷಡುಸ್ಥಲಜ್ಞಾನ ಲಿಂಗಾಂಗ ಸಂಬಂಧ ಸಮರಸ ಏಕಾರ್ಥವನ್ನು ಭೋದಿಸಿ ಮುಕ್ತರನ್ನು ಮಾಡಿ ಷಡುಸ್ಥಲ ಏಕಾರ್ಥವಾಗಿ ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಎಡೆಯೂರಲ್ಲಿ ತಮಗೆ ಕಟ್ಟಿಸಿದ ಮಠದಲ್ಲಿ ಶಿವಯೋಗಸಮಾಧಿ ಸನ್ನದ್ಧರಾದರು. ತೋಂಟದ ಸಿದ್ಧಲಿಂಗೇಶ್ವರರ ಪಾದಪದ್ಮಾರಾಧಕರಾದ ದಾನಿವಾಸದ ನಿವಾಸಿ ಚನ್ನರಾಯ ಒಡೆಯರು, ಅವರ ಮಕ್ಕಳು ಲಿಂಗಪ್ಪ ಒಡೆಯರು, ಅವರ ಮಕ್ಕಳಾದ ಪಾದೋದಕ ಪ್ರಸಾದ ಸಂಪನ್ನರಾದ ಚನ್ನವೀರಪ್ಪ ಒಡೆಯರು, ಅವರ ಸತಿ ಪಾರ್ವತಮ್ಮ ದಂಪತಿಗಳು ತಮ್ಮ ಭಕ್ತಿಯಿಂದ ತೋಂಟದ ಸಿದ್ಧಲಿಂಗೇಶ್ವರರಿಗೆ ಕಲ್ಲುಮಠವ ಕಟ್ಟಬೇಕೆಂದು ಚಿಟ್ಟಿಗದೇವರಿಗೆ ಪದಾರ್ತವನ್ನು ನಮಸ್ಕಾರವನ್ನು ಮಾಡಲಾಗಿ ಭಕ್ತಿ ಪದಾರ್ಥವನ್ನು ಕೈಗೊಂಡು ಎಡೆಯೂರಿಗೆ ಬಿಜಯಂಗೈದು ತೋಂಟದ ಸ್ವಾಮಿಯವರಿಗೆ ಕಲ್ಲುಮಠವನ್ನು ಎಂಟುಜಡೆಯ ಬಗೆಯ ಹಿರಿಯರು ಚಿಟ್ಟಿಗದೇವರು ಕಟ್ಟಿಸಿದರು. ಎಡೆಯೂರು ಸ್ಥಳದಲ್ಲಿ ಆದೆ ಕೊಡಗಿ ಮಾನ್ಯ ನಿತ್ಯಾಬಂದ ಕಾಣಿಕೆ ಸೀಮೆಮೇಲೆ ತಂದ ನಂದಾದೀಪದ ಕಾಣಿಕೆ ಇಷ್ಟ ಈ ಮಠದ ಹಿರಿಯರು ಪಂಚಕಂತೆಯ ಚನ್ನಮಲ್ಲಿಕಾರ್ಜುನದೇವರದು. ಎಂಟು ಜಡೆಯ ಬಗೆಯ ಹಿರಿಯರು ಚಿಟ್ಟಿಗದೇವರು ಪಡೆದ ಪುರವರ್ಗವು ಸಮ್ಮುಖದಲ್ಲಿ ಬಂದ ಕಾಣಿಕೆ ತೋಂಟದ ಸ್ವಾಮಿಯ ದಾಸೋಹವ ದ್ರವ್ಯ ಈ ಮಠದಲ್ಲಿ ತೋಂಟದ ಸ್ವಾಮಿಯ ದಾಸೋಹವನ್ನು ಚಿಟ್ಟಿಗದೇವರು ಇಡಿಸಿದ ಆ ಮಠದಲ್ಲಿ ಒಡೆಯರು ಭಕ್ತರು ಒಪ್ಪಿದ ಸತ್ಪುರುಷರು ಈ ದಾಸೋಹವನ್ನು ಮಾಡುವರು. ಈ ದ್ರವ್ಯ ತೋಂಟದ ಸ್ವಾಮಿಯ ದಾಸೋಹಕ್ಕೆ ಸಲ್ಲುವದು. ಯಾರಿಗೂ

ವರ್ಗಪಾರಂಪರಿಗೆ ಸಲ್ಲದು ಸಜ್ಜನ ಸತ್ಪುರುಷರು ಈ ಪದಾರ್ಥವನ್ನು ಅನುಭವಿಸುವರು.ಈ ಮಠದಲ್ಲಿ ಕಟ್ಟಿಸಿದ ಅಡಿಗೆ ಮನೆ ಉಗ್ರಾಣದ ಮನೆಯು ಈ ತೋಂಟದ ಸ್ವಾಮಿಯ ದಾಸೋಹಕ್ಕೆ ಸಲ್ಲುವದು ಶ್ರೀ ಸಿದ್ದೇಶ್ವರ. 

    ತೋಂಟದ ಸಿದ್ಧಲಿಂಗ ಯತಿಗಳಿಗೆ ಅವರ ಶಿಷ್ಯ ಚಿಟ್ಟಿಗದೇವನು ದಾನಿವಾಸಿ ದಂಪತಿಗಳ ಕೋರಿಕೆಯ ಮೇರೆಗೆ ಕಲ್ಲು ಮಠವನ್ನು ಮತ್ತು ನಿತ್ಯದಾಸೋಹದ ಕಾಯಕಕ್ಕೆ ಅಡಿಗೆ ಮನೆ ಮತ್ತು ಉಗ್ರಾಣದ ಮನೆಯನ್ನು ಕಟ್ಟಿಕೊಟ್ಟ ವಿವರವಿದೆ. ಮೂಜಗಕ್ಕೊಡೆಯನಾದ ಸಿದ್ಧೇಶನು ಮೂರ್ತನಾದ ನೆಲೆಮಾಳಿಗೆಯ ಮೇಲಿನ ಸಜ್ಜೆಯ ಗೃಹವನ್ನು ಮರೆ ವಿಗ್ರಹ (ಉತ್ಸವ ಮೂರ್ತಿ, ಲಿಂಗ ಮೂರ್ತಿ)ವಿಟ್ಟು ಸಕಲ ಸಂಭ್ರಮಗಳಿಂದ ಅಲಂಕರಿಸಿ ಅದಕ್ಕೆ ತಲತಲನೆ ಹೊಳೆಯುವ ನಾಗಾಭರಣವನ್ನು ಅಳವಡಿಸಿ ಮಝರೆ ಎಂದು ಹರ್ಷಧ್ವನಿಗೈದು ಸಹಸ್ರ ನಾಮದ ಪೂಜೆಗೂ ಅಣಿ ಮಾಡಿರುವುದನ್ನು ಈಗಲೂ ಕಾಣಬಹುದಾಗಿದೆ. ಆ ಸಿದ್ಧಲಿಂಗನ ಗುಡಿಗೆ ಲಗತ್ತಿಸಿದಂತೆ ಬಸವನಂಕಣ, ಕುಳಿತು ಪ್ರಸಾದವನ್ನು ನೀಡುವ ಮಂಚವಿರುವ ಪಟ್ಟಸಾಲೆ, ಕುಶಲ ಕೆತ್ತನೆಯ ನವರಂಗ ಮತ್ತು ಪಾತಾಳಂಕಣ ಇವುಗಳ ಕಂಭಗಳು ಹೊಸ ರೀತಿಯಲ್ಲಿ ನಿರ್ಮಿಸಲ್ಪಟ್ಟಿವೆ. ನವರಂಗದ ಮಧ್ಯದ ಹೊತ್ತಿನಲ್ಲಿ ಚಿತ್ರಕಾರರಿಂದ ರಚಿತವಾದ ನಾನಾ ವಿಧ ಪ್ರತಿಮೆಗಳು ಇಡಲ್ಪಟ್ಟಿವೆ. ಹಾಗೆಯೇ ಭುವನೇಶ್ವರಿ ಮೇಲ್ಗಡೆಯಲ್ಲಿ  ಶಿವರಣರ, ಸದ್ಭಕ್ತರ ಹಾಗೂ ವ್ರತಿಗಳ ಪ್ರತಿಮೆಗಳು ಅಲಂಕೃತವಾಗಿ ಕೆತ್ತಲ್ಪಟ್ಟಿವೆ. ಗುಡಿಯ ಸುತ್ತಲೂ ಬಳಸಿಕೊಂಡಿದ್ದ ಪ್ರಾಕಾರದಂಕಣ ಕೆತ್ತುಗಲ್ಲಿನ ಕಳಶಗಳು ಮತ್ತು ಚಿತ್ರಗಾರರು ಬರೆದ ನಾನಾ ಬಗೆಯ ಪ್ರತಿಮೆಗಳು ವಿರಾಜಿತವಾಗಿವೆ. ಈಗಲೂ ದೇವಾಲಯದ ಹೊರ ಗೋಡೆ ಮತ್ತು ಒಳ ಗೋಡೆಯ ಮೇಲೆ ಆತ್ಮ ಲಿಂಗ ಶರಣನ ಶಿಲ್ಪ ತಪೋವನಗೈದ ಹುತ್ತದ ಪ್ರಸಂಗ ಶಿಲ್ಪಗಳು ಕಂಡು ಬರುತ್ತವೆ. ದೇವಾಲಯದ ಪ್ರಾಕಾರದ ಸುತ್ತಲೂ ಸಿದ್ಧಲಿಂಗರು ಮಾಡಿದರೆನ್ನಲಾದ ಪವಾಡಸದೃಶ ಘಟನೆಗಳ ವಿವರಗಳನ್ನು ಚಿತ್ರ ಸಮೇತ ನಂತರದ ಕಾಲದಲ್ಲಿ ನಿರ್ಮಿಸಿದ್ದಾರೆ.

    ತೋಂಟದ ಸಿದ್ಧಲಿಂಗಯತಿಗಳ ಗದ್ದುಗೆ ದೇವಾಲಯವು ಹದಿನಾರನೇ ಶತಮಾನದ ಕಟ್ಟಡವಾಗಿದ್ದು ಗರ್ಭಗುಡಿ, ಸುಖನಾಸಿ, ಮುಖಮಂಟಪವನ್ನು ಒಳಗೊಂಡಿದೆ. ಮುಖಮಂಟಪವು ತೆರೆದ ಅಂಕಣವಾಗಿದ್ದು ಅದನ್ನು ಹದಿನೈದು ಅಡಿ ಎತ್ತರದ ಕಂಬಗಳು ಹೊತ್ತುನಿಂತಿವೆ. ಮುಖಮಂಟಪದಲ್ಲಿ ಸುಖನಾಸಿಗೆ ಹೋಗುವ ಮಾರ್ಗದಲ್ಲಿ ಎರಡೂ ಕಡೆ ಜಗುಲಿ ಇದೆ. (ಇಂದು ಅವುಗಳೆಲ್ಲ ಆಧುನೀಕರಣಗೊಂಡಿವೆ.) ಮುಖಮಂಟಪದ ಕಂಬಗಳ ಮೇಲೆ ಅನೇಕ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ. ಅಂತಹ ಉಬ್ಬು ಶಿಲ್ಪಗಳಲ್ಲಿ ತೋಂಟದ ಸಿದ್ಧಲಿಂಗಯತಿಗಳ ಶಿವಪೂಜಾನುಷ್ಠಾನ ಶಿಲ್ಪವಿದೆ. ಇದು ಅತ್ಯಂತ ಮನಮೋಹಕವಾಗಿದೆ. ಮೇಲ್ಭಾಗದ ಚಾವಣಿಯ ಸುತ್ತ ಸಿದ್ಧಲಿಂಗಯತಿಗಳ ಬದುಕಿಗೆ ಸಂಬಂಧಿಸಿದ ಗಾರೆಮೂರ್ತಿಗಳನ್ನು ಬಿಡಿಸಲಾಗಿದ್ದು ಅವುಗಳನ್ನು ಗೂಡುಗಳಲ್ಲಿಡಲಾಗಿದೆ.

ಮುಖ್ಯ ಕಟ್ಟಡದ ಮೇಲ್ಭಾಗದಲ್ಲಿ ಮಂಟಪವೊಂದನ್ನು ನಿರ್ಮಿಸಲಾಗಿದೆ. ಅದರಲ್ಲಿ ನಾಲ್ಕು ಕಂಬಗಳಿದ್ದು ಅದರ ಮೇಲೆ ಶಿಖರವಿದೆ. ಸುತ್ತಲೂ ಅನೇಕ ಕಂಬಗಳುಳ್ಳ ಅಂಕಣಗಳಿವೆ. ಆ ಕಂಬಗಳಲ್ಲಿ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ. ಅವುಗಳಲ್ಲಿ ಒಂದು ಅಂಕಣದ ಕಂಬದಲ್ಲಿ ಶಿಲಾಶಾಸನವಿದೆ. ಆ ಶಾಸನ ಇಂತಿದೆ;

ಹೆಗರನ ಕಟ್ಟಿದ ತೋಂಟದೈ

ಕಟ್ಟಿಸ್ತ ಅಂಕಣ

ಸಿದ್ದೇಶ್ವರಂಗೆ ಸ ಷ ಶ್ರೀ ಶ್ರೀ

ಆ ಅಂಕಣವನ್ನು ಹೆಗರನಕಟ್ಟದ ತೋಟದಯ್ಯನು ಕಟ್ಟಿಸಿರುವುದು ಸ್ಪಷ್ಟವಾಗುತ್ತದೆ. ಆ ಅಂಕಣದಲ್ಲಿ ಇದೀಗ ವೀರಭದ್ರನ ದೇವಾಲಯವಿದೆ. ಈ ಕಂಬಶಾಸನದಲ್ಲಿ ಪಕ್ಕದಲ್ಲಿಯೇ ಆ ಅಂಕಣವನ್ನು ಕಟ್ಟಿಸಿದ ತೋಂಟದಯ್ಯ ಮತ್ತು ಆತನ ಪತ್ನಿಯ ಉಬ್ಬುಶಿಲ್ಪಗಳಿವೆ. ಇದೀಗ ಈ ಸ್ಥಳ ಸಂಪೂರ್ಣ ನವೀಕರಣಗೊಂಡಿದ್ದು ಮುಂಭಾಗದಲ್ಲಿ ಐವತ್ತು ಅಡಿ ಎತ್ತರದ ಪ್ರವೇಶದ್ವಾರವಿದೆ. 

 ಯಡೆಯೂರಿನ ದೇವಾಲಯದ ಪ್ರಾಂಗಣದಲ್ಲಿ ಸ್ಥಳೀಯ ವ್ಯಕ್ತಿಗಳು  ಮತ್ತು ಇತರರು  ಸಿದ್ಧಲಿಂಗರಿಗೆ ಸಲ್ಲಿಸಿದ  ಸೇವಾ ಕೈಂಕರ್ಯದ ಬಗೆಗೆ ಲಘುಬರೆಹಗಳ ಶಾಸನಗಳು ಕಂಡು ಬರುತ್ತವೆ. ಯಾವ ಲಘುಶಾಸನಗಳಲ್ಲಿಯೂ  ಕಾಲದ ಉಲ್ಲೇಖ ಇಲ್ಲ. ಜೊತೆಗೆ  ಈ ಬರೆಹಗಳಲ್ಲಿ ಅಂತಹ  ವಿಶೇಷ ಸಂಗತಿಗಳು ಅಷ್ಟಾಗಿ ಇಲ್ಲ. ಈ ಶಾಸನಗಳಲ್ಲಿ ಗ್ರಾಂಥಿಕ ಭಾಷೆಯ ಬಳಕೆಗಿಂತ  ಹೆಚ್ಚಾಗಿ ಗ್ರಾಮ್ಯ ಭಾಷೆಯ ಪದಗಳನ್ನು ಕಾಣಬಹುದಾಗಿದೆ. ಆ ಲಘು ಬರೆಹವುಳ್ಳ ಶಾಸನಗಳ ವಿವರಗಳು ಇಂತಿವೆ.

೧.ಎಡೆಯೂರು ಶಾಸನ ಸಂಖ್ಯೆ 60 (ಹಳೆಯ ಇ.ಸಿ. ಸಂಪುಟ XVI ಕು 68) 

ಸಿದ್ಧಲಿಂಗೇಶ್ವರ ದೇವಸ್ಥಾನದ ಬೆಳ್ಳಿ ಕೊಳಗದ ಮೇಲಿರುವ ಶಾಸನ

ಬಿರೂರ || ತೋಟಪ್ಪನ ಶಿದ್ದಪ್ಪನ ಭಕ್ತಿ 

೨. ಶಾಸನ ಸಂಖ್ಯೆ: ೬೧ (ಹಳೆಯ ಇ.ಸಿ. ಸಂಪುಟ XVI ಕು 69) 

ಅದೇ ದೇವಸ್ಥಾನದ ಪಾದಗಳುಳ್ಳ ಶೇಷನ ಲಘು ಶಾಸನ

    ಅತಿಗುಪೆ ಅವಲಕಿ ಸಿದಂಮನ ಭಕ್ತಿ

೩.ಶಾಸನ ಸಂಖ್ಯೆ: 62 (ಹಳೆಯ ಇ.ಸಿ. ಸಂಪುಟ XVI ಕು 70) 

ಅದೇ ದೇವಸ್ಥಾನದ ಗದ್ದಿಗೆ ತಗಡಿನ ಮೇಲಿರುವ ಲಘುಶಾಸನ

1. ಸಿದಲಿಂಗೇಶ್ವರ

2. ಸ್ವಾಮಿಪಾದಕೆ ತುರು

3. ವೆಕೆ[ರೆ] ಅರಳೆ ಸಿ

4. ದಲಿಂಗೈಯನ

5. ಮಗ ರುದ್ರೈಯ

6. ವಪ್ಪಿಸಿದ ಭಕ್ತಿ

ಶಾಸನ ಸಂಖ್ಯೆ 63 (ಹಳೆಯ ಇ.ಸಿ. ಸಂಪುಟ XVI ಕು 71) 

ಅದೇ ದೇವಸ್ಥಾನದ ಹಿತ್ತಾಳೆ ತಟ್ಟೆಯ ಮೇಲಿರುವ ಲಘುಶಾಸನ

೧. ಯಡೆಯೂರ ಸಿಧಲಿಂಗೇಶ್ವರಸ್ವಾಮಿ ಪಾಧಕೆ

2. ಬೋರಸಂದ್ರದ ಮರಡಶೆಟ್ಟಿ ಭಕ್ತಿ

೪.ಶಾಸನ ಸಂಖ್ಯೆ:64 (ಹಳೆಯ ಇ.ಸಿ. ಸಂಪುಟ XVI ಕು 72)

 ಅದೇ ದೇವಸ್ಥಾನದ ಹಿತ್ತಾಳೆ ಅರಕಂಚಟ್ಟಿ ಮೇಲಿರುವ ಲಘು ಶಾಸನ

ಯಡೆಯೂರ ಸಿದ್ಧೇಶ್ವರಸ್ವಾಮಿಯವರ ಮಾಡೊ ಪಾದಕೆ ಚನ್ನರಾಯಪಟಣ ಸಿದ್ದಲಿಂಗೈಯ ಮಾಡೊ ಬಕ್ತಿ


೫.ಶಾಸನ ಸಂಖ್ಯೆ: 65 (ಹಳೆಯ ಇ.ಸಿ. ಸಂಪುಟ XVI ಕು 73)

ಅದೇ ದೇವಸ್ಥಾನದ ಹಿತ್ತಾಳೆ ಬಿಂದಿಗೆಗಳಲ್ಲಿ

ಒಂದನೆಯ ಬಿಂದಿಗೆಯ ಮೇಲೆ

ಯಡಿಯುರ ಸಿದ್ಧೇಶ್ವರಸ್ವಾಮಿಗೆ | ತೊರೆಬೊಮ್ಮನಳ್ಳಿಯ || ಬಸವೈಯ್ಯನು ಕೊಠ್ಠ ಬಿಂದಿಗೆ ಭಕ್ತಿ 

೬.ಶಾಸನ ಸಂಖ್ಯೆ: 66 (ಹಳೆಯ ಇ.ಸಿ. ಸಂಪುಟ XVI ಕು 74)

ಎರಡನೆಯ ಬಿಂದಿಗೆಯ ಮೇಲೆ

ಯಡೆಯೂರ ಸಿದ್ದಲಿಂಗೇಶ್ವರಸ್ವಾಮಿ ಪಾದಕ್ಕೆ ಬಾಚಿಹಳ್ಳಿ ಚಿಕ್ಕಸಂಗಪನ ಬಕ್ತಿ

೭.ಶಾಸನ ಸಂಖ್ಯೆ:67 (ಹಳೆಯ ಇ.ಸಿ. ಸಂಪುಟ XVI 6 75)

ಮೂರನೆಯ ಬಿಂದಿಗೆಯ ಮೇಲೆ

ಗೋವಿಂದನಳ್ಳಿ ಚಂನಮಲಸೆಟಿ ಯಡೂರ ಶಿದಲಿಂಗೇಸ್ವರಗೆ ವೊಪಿಸಿದ ಸೆವರ್ತ ||

೮. ಶಾಸನ ಸಂಖ್ಯೆ: 68 (ಹಳೆಯ ಇ.ಸಿ. ಸಂಪುಟ XVI ಕು 76)

ನಾಲ್ಕನೆಯ ಬಿಂದಿಗೆಯ ಮೇಲೆ

ಅಂಕನತಪುರಧ ಶಿದಲಿಂಗಶೆಠ್ಠರ ಮಗಳ ತೈರ್ರಿನ ಹಣ ಬಕ್ತಿ | ಯಡೆಯುರ ಸಿದಲಿಂಗೇಶ್ವರನ ಪಾದಕ್ಕೆ ಶಿವನಮ್ಮ ವಪಿಸಿದ ಭಕ್ತಿ ಸಂತು 

೯.ಶಾಸನ ಸಂಖ್ಯೆ: 69 (ಹಳೆಯ ಇ.ಸಿ. ಸಂಪುಟ XVI ಕು 77)

ಅದೇ ದೇವಸ್ಥಾನದ ಬೆಳ್ಳಿಕೋಲುಗಳ ಮೇಲಿರುವ ಶಾಸನ

ಯಡೆಯೂರ ತೋಂಟದ ಸಿಧಲ್ಲಿಂಗಶ್ವಾಮಿಪಾದಕ್ಕೆ | ಮಂಜ್ರಬಾದು ತಾಲೂಕು 

ಯಸಳೂರು ಪೇಟೆ | ಹದಲು ಗುರುಶಾಂತ್ತಪನ ಭಕ್ತಿ ಬೆಳಿಕೊಲು ಯರಡು 

೧೦.ಶಾಸನ ಸಂಖ್ಯೆ: 70 (ಹಳೆಯ ಇ.ಸಿ. ಸಂಪುಟ XVI ಕು 78)

ಅದೇ ದೇವಸ್ಥಾನದ ರಥದ ಕಲಶದ ಮೇಲಿರುವ ಶಾಸನ

ಶ್ರೀಗುರುವೇ ಗತಿ || ಹೊನ್ನವರದ ಲಿಂಗಸೆಟರ ಮಗ ಸಿಂದಲಿಂಗಸಟಿ ಯಡವುರ 

ಸಿದಲಿಂಗೇಶ್ವರಸೋಮಿ ಪದಕೆ ಮಲರ(|)ಸೈನ ಕಳಸ ॥ ಯೀ ನಗದ ತೂಕ ||

ದೊಡ ಹಳತ || ನ ೨ || ೩ ಮೂರು ಸೇರು

೧೧.ಶಾಸನ ಸಂಖ್ಯೆ: 71 (ಹಳೆಯ ಇ.ಸಿ. ಸಂಪುಟ XVI ಕು 79)

ಅದೇ ದೇವಸ್ಥಾನದ ಬೆಳ್ಳಿಸತ್ತಿಗೆಯ ಮೇಲಿರುವ ಶಾಸನ

ಅಂಕಿಹ(ಂ)ಳಿಯ ಚಂನಬಸಪನ ಮಗ ತೊಠಪ ಯಡೆಉರ ಸಿಧೇಸ್ವರ[ಸ್ವಾ]ಮಿಯವರ 

ಪದಕೆ ವಪಿಸಿದ ಸತ್ತಿಗೆ ಕೊಂಬು ಸ್ತಳ 

೧೨.ಶಾಸನ ಸಂಖ್ಯೆ: 72 (ಹಳೆಯ ಇ.ಸಿ. ಸಂಪುಟ XVI ಕು 80)

ಅದೇ ದೇವಸ್ಥಾನದ ಹಂಡೆಯ ಮೇಲಿರುವ ಶಾಸನ

ಯಡೂರು ತೋ ॥ ಶಿಧಲ್ಲಿಂಗೇಶ್ವರ ಸ್ವಮಿಯವರಿಗೆ ಹಳೇಬೀಡು ಮರಿಶೆಟ್ರ ಮಗ ತೋಟಶೆಟ್ಟಿ ಸೇವಾರ್ತ

೧೩.ಶಾಸನ ಸಂಖ್ಯೆ: 73 (XVI ಕು 81)

ಅದೇ ದೇವಸ್ಥಾನದ ಮೇಲ್ಪಾವಣಿಗೆ ಕಟ್ಟಿರುವ ಎಡಗಡೆ ದೊಡ್ಡ ಗಂಟೆಯ ಮೇಲೆ (ಮೇಲ್ಬಾಗದಲ್ಲಿ)

ದಳವಾಯಿ ಬಸವರಾಜೈಯನವರ ಪತ್ನಿಯಾದ ಮೀನಾಕ್ಷಂಮನವರ ಸೇವೆ |

೧೪. ಶಾಸನ ಸಂಖ್ಯೆ: 74 (ಹಳೆಯ ಇ.ಸಿ. ಸಂಪುಟ XVI ಕು 82)

ಅದೇ ಗಂಟೆಯ ಕೆಳಭಾಗದಲ್ಲಿರುವ ಶಾಸನ

ಸಿಧಲಿಂಗೇಶ್ವರಸ್ವಾಮಿಯವರ್ರಿಗೆ ಬಾದಶಹ ಟಿಪ್ಪುಸುಲುತಾನ ಕಾನಜಾರಿ ಅಮೀಲು ಜಾಪರಕಾನ ಬೊಂಮಣಿಯವರ ಸೇವೆ

೧೫.ಶಾಸನ ಸಂಖ್ಯೆ:75 (ಹಳೆಯ ಇ.ಸಿ. ಸಂಪುಟ XVI ಕು 83)

ಅದೇ ಸ್ಥಳದಲ್ಲಿ ಬಲಗಡೆ ಗಂಟೆಯ ಮೇಲಿರುವ ಶಾಸನ

ಸಿಧಲಿಂಗೇಶ್ವರಸ್ವಾಮಿಯವರ್ರಿಗೆ ಬಾದಶಹ ಟಿಪುಸುಲುತಾನ ಕಾನಜಾರಿ ಅಮೀಲ ಜಾಪರಕಾನ ಬೊಂಮಣಿಯವರ ಸೇವೆ

ಶಾಸನ ಸಂಖ್ಯೆ ೭೩, ೭೪ ಮತ್ತು ೭೫ ರ ಲಘು ಬರೆಹದ ವಿವರಗಳಲ್ಲಿ  ದಳವಾಯಿ ಬಸವರಾಜಯ್ಯ ಮತ್ತು ಟಿಪ್ಪು ಸುಲ್ತಾನರ ಪ್ರಸ್ತಾಪ ಇದ್ದು, ತೋಟದ ಸಿದ್ಧಲಿಂಗರ ದೇವಾಲಯದ ನಿತ್ಯದ ಪೂಜೆಯ ಸಂದರ್ಭದಲ್ಲಿಯ ಘಂಟೆ ಸೇವೆಯ ಸಲುವಾಗಿ ದೊಡ್ಡ ಘಂಟೆಯನ್ನು ಒದಗಿಸಿರುವುದನ್ನು ಕಾಣಬಹುದಾಗಿದೆ.ಈ ಲಘು ಶಾಸನಗಳ ಬರೆಹದಲ್ಲಿ  ಮೈಸೂರು ಸಂಸ್ಥಾನದ ವ್ಯಕ್ತಿಗಳ ಪ್ರಸ್ತಾಮ ಕಂಡು ಬಂದಿದೆ.

೧೬.ಶಾಸನ ಸಂಖ್ಯೆ: 76 (ಹಳೆಯ ಇ.ಸಿ. ಸಂಪುಟ XVI 6 84)

ಅದೇ ದೇವಸ್ಥಾನದ ವೀರಭದ್ರ ಗುಡಿಯ ಬಾಗಿಲ್ವಾಡದ ಮೇಲಿರುವ ಶಾಸನ

೧. ಶಿದ್ದಲಿಂಗೇಶ್ವರಸ್ವಾ

2. ಮಿಗೆ ಬಸರಾಳ

3. ಚಂನಸಠ್ಠರು |

೪. ಮಕ್ಕಳು ಸಿಧ

5. ವೀರಸರಿ ಬಸ

೬. ಠ್ಠಿ ಮಾಡಿದ

೭. ಬಕ್ತಿ [||*] ಬಾಗಿ

೮. ಲವಾಡ

೯. ಸಣಬದ ಶಂಕರ ಸ್ವಾಮಿ ಪದ

೧೦. ಕೆ ಮಾಡಿದ ಬಕ್ತಿ [||*] 

   ಎಡೆಯೂರು ದೇವಾಲಯದ ಪ್ರಾಂಗಣದಲ್ಲಿರುವ ಒಟು ೧೬ ಲಘು ಶಾಸನ ಬರೆಹಗಳು  ಸಿದ್ಧಲಿಂಗೇಶ್ವರರು ಐಕ್ಯವಾದ ಎಡೆಯೂರಿನಲ್ಲಿ ಸ್ಥಾಪಿತವಾದ ಅವರ ಹೆಸರಿನ ದೇವಾಲಯದ ಪೂಜೆ-ಪುರಸ್ಕಾರಗಳು  ದಿನನಿತ್ಯ ನಿರಂತರವಾಗಿ ನಡೆಯಲು ಸಿದ್ಧಲಿಂಗೇಶ್ವರರ ಭಕ್ತರುಗಳಾದ ಸ್ಥಳೀಯ ಜನ ಸೇವೆಯನ್ನು ಒದಗಿಸಿರುವುದನ್ನು ಪ್ರಸ್ತಾಪಿಸಿವೆ.

   

೨. ತೋಟದ ಸಿದ್ಧಲಿಂಗರು ತಪಸ್ಸು ಮಾಡಿದ ಕಗ್ಗೆರೆಗ್ರಾಮದ ಬಳಿ ಇರುವ ಶಾಸನ ಕಲ್ಲುಗಳು 

ತೋಂಟದ ಸಿದ್ಧಲಿಂಗರು ತಪೋನುಷ್ಠಾನಗೈದ ಕಗ್ಗೆರೆಯಲ್ಲಿರುವ ಸಿದ್ಧಲಿಂಗೇಶ್ವರ ದೇವಾಲಯ ಗರ್ಭಗೃಹ, ಸುಖನಾಸಿ, ರಂಗಮಂಟಪ ಹಾಗೂ ತೆರೆದ ಮುಖಮಂಟಪವನ್ನು ಒಳಗೊಂಡಿದೆ. ದೇವಾಲಯದ ಮುಖಮಂಟಪ ಹಾಗೂ ನವರಂಗದ ಕಂಭಗಳಲ್ಲಿ ಧ್ಯಾನಾಸಕ್ತರಾದ ಸಿಧ್ಧಲಿಂಗರ ನಾಲ್ಕುಉಬ್ಬುಶಿಲ್ಪಗಳನ್ನು ಕಾಣ ಬಹುದಾಗಿದೆ. ದೇವಾಲಯದ ಗರ್ಭಗುಡಿಯ ಬಲಭಾಗದಲ್ಲಿ ಸಿದ್ಧಲಿಂಗರ ಹುತ್ತದ ಪ್ರಸಂಗಕ್ಕೆ ಕಾರಣಕರ್ತರಾದ ನಂಬೆಣ್ಣ ದಂಪತಿಗಳ ಉಬ್ಬು ಶಿಲ್ಪವನ್ನು ಕಾಣಬಹುದಾಗಿದೆ.ಸಿದ್ದಲಿಂಗೇಶ್ವರರಿಗೆ ಭಕ್ತಿಯಿಂದ ನಡೆದುಕೊಂಡಲ್ಲಿ ಇಷ್ಟಾರ್ಥಸಿದ್ಧಿಯಾಗುತ್ತೆಂಬ ನಂಬುಗೆ ಜನಗಳಲ್ಲಿ ಬಲವಾಗಿ ಬೇರೂರಿದೆ.

  ಕಗ್ಗೆರೆ ಶಾಸನ:

  (ಎಪಿಗ್ರಾಫಿಯ ಕರ್ನಾಟಿಕ ಸಂ.೨೪(ಪರಿಷ್ಕೃತ), ಪು.ಸಂ.೧೯೧-೧೯೨) (ಹಳೆಯಸಂಪುಟ: ಇ.ಸಿ.XII 6 46)

ಒಂದನೆಯ ಕಲ್ಲು

1. ಶುಭಮಸ್ತು [||*] ನಮಸ್ತುಂಗಸಿರಶ್ಚುಂಬಿ

೨. ಚಂದ್ರಚಾಮರಚಾರವೇ [|*] ತ್ರೈಲೋಕ್ಯನಗರಾ

3. ರಂಭಮೂಲಸ್ತಂಭಾಯ ಶಂಭವೇ [||*] ಶುಭಮಸ್ತು [||*]

4. ಸ್ವಸ್ತಿ [||*] ಶ್ರೀ ವಿಜಯಾಭ್ಯುದಯ ಶಾಲಿವಾಹನಶಕವ

5. ರುಷ ೧೫೮೫ ಸಂದ ವರ್ತಮಾನವಾದ ಕ್ರೋಧಿ ಸಂ

6. ವತ್ಸರದ ಕಾರ್ತಿಕ ಶು ೨ ಲು ಶ್ರೀಮದ್ರಾಜಾಧಿರಾಜ ರಾಜ

7. ಪರಮೇಶ್ವರ ಶ್ರೀವೀರಪ್ರತಾಪ ವೀರ ಶ್ರೀರಂಗರಾಯ(ರ)ದೇವ

8. (ದೇವ) ಮಹಾರಾಯರೈಯ್ಯನವರು ಪ್ರುಥ್ವೀಸಾಂಬ್ರಾಜ್ಯಂ ಗೈ

೯. ಉತ್ತಿರಲು ಆತ್ರೇಯಗೋತ್ರರಾದ ಮೈಸೂರ ರಾಜವಡೇರ ಪ

10. ಉತ್ರರಾದ ದೇವರಾಜವಡೇರ ಪುತ್ರರಾದ ದೇವರಾಜವಡೇ

11. ರೈಯ್ಯನವರು ಕಗ್ಗೆರೆಯ ತೋಂಟದ ಸಿದೇಶ್ವರಸ್ವಾಮಿಯವರಿ

12. ಗೆ ಸಮರ್ಪಿಸಿದ ಗ್ರಾಮದ ಸಿಲಾಶಾಸನದ ಕ್ರಮವೆಂತೆಂ

13. ದರ್ರೆ [||*] ದಳವಾಯಿ ನಂದಿನಾಥೈಯ್ಯನು ಸಮರಸಂನಾಹ

14. ವ ಮಾಡಿ ಯಿಕೇರ್ರಿಯವರ ಮೇಲಣ ಕಾರಕ್ಕೆ ಕಳುಹಿಸು

15. ವಲ್ಲಿ ಪ್ರಾರ್ಥನೆ ಮಾಡಿ

ಎರಡನೆಯ ಕಲ್ಲು

16. ಕೊಂಡು ಯಿದೇವಾದ ನಿಮಿತ್ಯ ಆ ಕಾರ್ಯ್ಯಉ ನಮ

17. ಗೆ ದಿಗ್ವಿಜಯವಾಗಲಾಗಿ ನಂಮ್ಮ ಆಳಿವಿಕೆಗೆ ಸಲ್ಲು

18. ವ ಕುಣಿಗಿಲಸ್ತಳದ ಕಗ್ಗೆರೆ ಗ್ರಾಮದ ಚತುಸೀಮೆ

19. ವಳಗಾದ ಭೂಮಿಯನು ತುಲಾಸಂಕ್ರಮಣಪುಂ

20. ಣ್ಯಕಾಲದಲ್ಲಿ ಸ್ವಾಮಿಸೇವೆಗೆ ಸಮರ್ಪಿಸಿ ಸಿಲಾಪ್ರ

21. ತಿಷ್ಠೆ ಮಾಡಿಸ್ತೆಉ ಯೆಂದು ಬರದ ಶಾಸನಾ || ಸ್ವದ

22. ತ್ತಾ ದ್ವಿಗುಣಂ ಪುಂಣ್ಯಂ ಪರದತ್ತಾನುಪಾಲನಂ [|*] ಪ

23. ರದತ್ತಾಪಹಾರೇಣ ಸ್ವದತ್ತಂ ನಿಷ್ಪಲಂ ಭವೇತ್ [|*] ಸ್ವದ

24. ತಂ ಪರದತಂ ವಾ ಯೋ ಹರೇತಿ ವಸುಂಧರ [|*] ಷಷ್ಟಿವ

25. ರುಷಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿ ||೧ ಯಿ

26. ಧರ್ಮವ ಅಪಹರ್ರಿಸೇನು ಯಂದು ಯೋಚಿಸ್ತವನು

27. ತಂಮ ಮಾತಾಪಿತ್ರುಗಳ ಕಾಸಿಯಲ್ಲಿ ವಧೆಮಾಡಿದ

28. ವನೂ [||*]

 ಮೈಸೂರಿನ ರಾಜ ಒಡೆಯರ ಮೊಮ್ಮಗ, ದೇವರಾಜ ಒಡೆಯರ ಮಗನಾದದೇವರಾಜ ಒಡೆರಯ್ಯನು ಹಿಂದೆ ಮೈಸೂರು ಒಡೆಯರ್ ದಳವಾಯಿ ನಂದಿನಾಥಯ್ಯ ಎಂಬುವರು ಇಕ್ಕೇರಿಯ ಜನರೊಂದಿಗೆ ನಡೆದ ಯುದ್ಧ ಪ್ರಸಂಗದಲ್ಲಿ ಮೈಸೂರು ಅರಸರಿಗೆ ದಿಗ್ವಿಜಯ ಲಭಿಸಿದ ನಿಮಿತ್ತವಾಗಿ ತಮ್ಮ ಆಳ್ವಿಕೆಯ ವ್ಯಾಪ್ತಿಯಲ್ಲಿಯ  ಕುಣಿಗಲ ಸ್ಥಳದ  ಕಗ್ಗೆರೆ ಗ್ರಾಮದ ಈ ಕ್ಷೇತ್ರಕ್ಕೆ ಭೂಮಿಯನ್ನು ಬಿಟ್ಟುಕೊಟ್ಟ ವಿವರವನ್ನು ಮೇಲಿನ ಶಾಸನ ದಾಖಲಿಸಿದೆ.

ಶಾಸನ ಸಂಖ್ಯೆ: 8 (ಹಳೆಯ ಇ.ಸಿ. ಸಂಪುಟ XII ಕು 47)

 ಕಗ್ಗೆರೆಯ ಸಿದ್ಧಲಿಂಗೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ನೆಟ್ಟ ಕಲ್ಲಿನ ಮೇಲಿರುವ ಶಾಸನ

1. ಸಿದ್ದೇಶ್ವರನ ಶ್ವಸ್ತಿ [||*] ಆವವ

2. ನದರು ಆಲಿಪಿದರೆ ಆ

3. ವಾನೂ ದೇವಲೋಕಕೆ

4. ಮರ್ತ್ಯಲೋಕಕೆ ಹೊರ

5. ಗೂ ಸಿಧೇಶ್ವರ

6. . . . . . . . . . ಅಸ್ಪಷ್ಟ ಬರೆಹವಿದೆ


ಶಾಸನ ಸಂಖ್ಯೆ: 9 (ಹಳೆಯ ಇ.ಸಿ. ಸಂಪುಟ XII ಕು 48)

ಕಗ್ಗೆರೆಯ ದೇವಸ್ಥಾನದ ಬಂಡಿಯ ಚಕ್ರದ ಮೇಲಿರುವ ಶಾಸನ

1. ಕಗ್ಗೆರೆ ಶ್ರೀಶಿದ್ದಲಿಂಗೇಶ್ವರಸ್ವಾಮಿಪಾದಕ್ಕೆ ಕುಣಿಗಲು ಚನ್ನಬ

2. ಸಪ್ಪನ ಮಗ ರೇಶ್ಮೆ ದಲ್ಲಾಳಿ ವೀರಸೆಟಪ್ಪನ ಹೆಂಡತಿ ಗಂಗ

3. ಮ್ಮನ ಭಕ್ತಿ ಹೇವಳಂಬಿ ಸಂ ।

4. ಸನ್ ೧೮೯೮ ನೇ ಯ್ಸ್ವಿ

ಶಾಸನ ಸಂಖ್ಯೆ: 10 (ಹಳೆಯ ಇ.ಸಿ. ಸಂಪುಟ XVI ಕು 85)

ಸಿದ್ಧಲಿಂಗೇಶ್ವರ ದೇವಸ್ಥಾನದ ಹಿತ್ತಾಳೆ ಕೊಳಗದ ಮೇಲೆ

1. ಶ್ರೀ ಕಗ್ಗೆರೆಯ ಸಿಧಲಿಂಗೇಶ್ವರಸ್ವಾಮಿಯರವರಿಗೆ ಹೆ || ಪುಟ್ಟಿಯ

2. ನ ಮಗ ಚಂನಬಸಪನ ಬಕ್ತಿ || ಜಯ ಸಂ ॥ ಮಾರ್ಗಿಶ್ವರ ಶು

೩. ಧ ೧೩ ಲು || ಂ

ಸಿದ್ಧಲಿಂಗರಿಗೆ ಸಂಬಂಧಿಸಿದ  ಕಗ್ಗೆರೆಯಲ್ಲಿಯ ೮, ೯. ೧೦ ನೇ ಸಂಖ್ಯೆಯ ಲಘು ಶಾಸನಗಳ ಬರೆಹವು ಅಸ್ಪಷ್ಟವಾಗಿ ಕೂಡಿದ್ದರೂ  ಸ್ಥಳೀಯ ಜನತೆ ಸಿದ್ಧಲಿಂಗರಿಗೆ ಭಕ್ತಿಯಿಂದ ನಡೆದು ಕೊಳ್ಳುತ್ತಿದ್ದುದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿವೆ.

೩. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕಾಮಿಡಿಹಳ್ಳಿ ಗ್ರಾಮದ ಬಸವನ ಗುಡಿಯ ಎದುರಿನ ಶಿಲಾಶಾಸನ( ಕಾಲ: ಕ್ರಿ.ಶ.೧೫೨೧, ಏಪ್ರಿಲ್ ೧೭, ಬುಧವಾರ)


  ವಿಜಯನಗರ ಅರಸು  ಕೃಷ್ಣದೇವರಾಯನ ಕಾಲಕ್ಕೆ ಸೇರಿದ ಕಾಮಿಡಿಹಳ್ಳಿ ಶಾಸನವು ಸಿದ್ಧಲಿಂಗರಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ದಾಖಲಿಸಿದೆ. ಈ ಶಾಸನವು ತೋಂಟದ ಸಿದ್ದಲಿಂಗೇಶ್ವರರ ಜೀವಿತಾವಧಿಯ ಪ್ರಪ್ರಥಮ ಶಾಸನವಾಗಿದೆ. ಜೊತೆಗೆ ಇಲ್ಲಿಯವರೆಗೂ ಇವರ ಕಾಲದ ಬಗೆಗೆ ಎಳೆದಾಡಿದ್ದ ಸಂಶೋಧಕರ ಅನಿಸಿಕೆಗಳಿಗೆ ಖಚಿತತೆಯನ್ನು ಒದಗಿಸಿದೆ.

ಸಿದ್ಧಲಿಂಗಯತಿಗಳ ಕಾಲನಿರ್ಣಯಕ್ಕಾಗಿ ನೇರವಾಗಿ ಪ್ರಯತ್ನಿಸಿದ ಕೆಲವು ವಿದ್ವಾಂಸರ ಲೇಖನಗಳನ್ನೆಲ್ಲ ಅವಲೋಕಿಸಿದಾಗ ಈ ಕೆಳಕಂಡ ನಿರ್ಣಯಗಳು ವ್ಯಕ್ತವಾಗುತ್ತವೆ. 

1. ಕಾಲನಿರ್ಣಯಕ್ಕೆ ಸಂಬಂಧಿಸಿದಂತೆ  ಸಿದ್ಧಲಿಂಗೇಶ್ವರರ ವಚನ ಕೃತಿ ಷಟ್‍ಸ್ಥಲ ಜ್ಞಾನಾಮೃತದಲ್ಲಿ ಕಾಲದ ಸೂಚನೆ ಇಲ್ಲ.

2. ಕೇವಲ ಪುರಾಣಗಳಲ್ಲಿ ದೊರೆಯುವ ಪರೋಕ್ಷ ಪ್ರಮಾಣಗಳನ್ನು ಅವಲಂಬಿಸಬೇಕಾಗಿದೆ.

3. ಸಿಕ್ಕಿರುವ ಸಾಮಗ್ರಿಯು ತೀರ ಸ್ವಲ್ಪ.

4. ಈ ಮಿತಿಯಲ್ಲಿಯೇ ತೋಂಟದ ಸಿದ್ಧಲಿಂಗ ಯತಿಗಳ ಕಾಲ ನಿರ್ಣಯಕ್ಕಾಗಿ ವಿದ್ವಾಂಸರು ಪ್ರಯತ್ನಿಸಿದ್ದಾರೆ.

5. ಸದ್ಯಕ್ಕಂತೂ ಹೆಚ್ಚಿನ ಹೊಸ ಸಾಕ್ಷ್ಯಾಧಾರಗಳು ಅನುಪಲಬ್ಧತೆ.

ಈ ಅಂಶಗಳನ್ನು ಗಮನಿಸಿದಾಗ ತೋಂಟದ ಸಿದ್ಧಲಿಂಗ ಯತಿಗಳ ಕಾಲನಿರ್ಣಯ ಅತ್ಯಂತ ತೊಡಕಿನದಾಗಿದ್ದು; ಖಚಿತವಾದ ಕಾಲನಿರ್ಣಯ ಸಾಧ್ಯವಾಗದೆ ಅಂದಾಜು ಕಾಲಮಾನವನ್ನು ನಿರ್ಣಯಿಸಲಾಗಿದೆ.ವಿದ್ವಾಂಸರು ಸೂಚಿಸಿರುವ ಕಾಲದ ವಿವರ ಈ ರೀತಿ ಇದೆ.

1. ಶ್ರೀ ಬಸಪ್ಪ ವೀರಪ್ಪ ಕೋಟಿ ಕ್ರಿ.ಶ. 1281-1381

2. ಪ್ರೊ. ಸಿ. ಮಹಾದೇವಪ್ಪ ಕ್ರಿ.ಶ. 1400-1470

3. ಶ್ರೀ ಆರ್. ನರಸಿಂಹಾಚಾರ್ಯರು ಕ್ರಿ.ಶ. 1470

4. ಪ್ರೊ. ಎಚ್. ದೇವೀರಪ್ಪ ಕ್ರಿ.ಶ. 1450-1500

5. ಪ್ರೊ. ಆರ್.ಸಿ. ಹಿರೇಮಠ ಕ್ರಿ.ಶ. 1480

6. ಶ್ರೀ ಎಂ.ಆರ್. ಶ್ರೀನಿವಾಸಮೂರ್ತಿ ಕ್ರಿ.ಶ. 1510

ಈ ಎಲ್ಲಾ ಅಭಿಪ್ರಾಯಗಳು  ಸಿದ್ಧಲಿಂಗರ ಬಗೆಗೆ ಹೆಚ್ಚಿನ ಆಧಾರಗಳು ದೊರೆಯುವ ಪೂರ್ಣದಲ್ಲಿ ವ್ಯಕ್ತಪಡಿಸಿರುವ ಪ್ರಾಥಮಿಕ ಹಂತದ ಪ್ರಯತ್ನಗಳು ಆಗಿವೆ. 

  ಜಿಗುನಿ ಮರುಳಾರ್ಯನು ‘ನಿಜಗುರುಸಿದ್ಧಶಾಂತ’ ಅಂಕಿತದಲ್ಲಿ ಸ್ವರವಚನಗಳನ್ನು ರಚಿಸಿದ್ದಾನೆ. ಒಂದು ಸ್ವರವಚನದಲ್ಲಿಯ  ‘ಯೋಗಿಬಂದಕಾಣೆಯಮ್ಮ ರಾಗ ವಿರಾಗ ವಿದೂರ ಜಂಗಮಲಿಂಗಯೋಗಿ ಬಂದ ಕಾಣೆ’ ಎಂಬ ಪಲ್ಲವಿಯೊಂದಿಗೆ ಆರಂಭವಾಗಿದೆ.  ಈ ಸ್ವರವಚನದಲ್ಲಿ ಜಂಗಮಲಿಂಗ ಯೋಗಿ ವಿರಕ್ತ ಸಿದ್ಧಲಿಂಗನ ವರ್ಣನೆ ಬಂದಿದ್ದು ಅವರು ತೋಂಟದ ಸಿದ್ಧಲಿಂಗರೇ ಆಗಿದ್ದಾರೆ. ಎಲ್.ಬಸವರಾಜರವರು ತಮ್ಮ ಲೇಖನವೊಂದರಲ್ಲಿ  ತೋಂಟದ ಸಿದ್ಧಲಿಂಗ ಯತಿಗಳು ಕ್ರಿ.ಶ.1530ರವರೆಗೆ ಇನ್ನೂ ಹುಟ್ಟಿರಲಿಲ್ಲ ಎಂಬುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. 

  ಎಸ್.ಶಿವಣ್ಣನವರು ಲೇಖನವೊಂದರಲ್ಲಿ ತೋಂಟದ ಸಿದ್ಧಲಿಂಗ ಯತಿಗಳ ಕಾಲ ವಿಚಾರ ಕುರಿತಂತೆ ಮರು ಪರಿಶೀಲನೆ ಮಾಡಿದ್ದಾರೆ. ತೋಂಟದಾರ್ಯನ ಪ್ರಮುಖ ಶಿಷ್ಯರಲ್ಲೊಬ್ಬನಾದ ಘನಲಿಂಗಿ ದೇವನ ಪರಂಪರೆಯಲ್ಲಿ ಬರುವ ಪರ್ವತದೇವ - ಭಂಡಾರಿ ಬಸವಪ್ಪೊಡೆಯರಿಗೆ ಸಂಬಂಧಿಸಿದ ಕ್ರಿ.ಶ.1514ರ ಎರಡು ಶಾಸನಗಳು ನಂಜನಗೂಡಿನಲ್ಲಿ ಸಿಗುತ್ತವೆ. ತಲೆ ಮಾರಿಗೆ 26 ವರ್ಷ ಹಿಡಿದರೆ ಶಿಷ್ಯ ಕೂಗಲೂರು ನಂಜಯ್ಯನ ಕಾಲ ಕ್ರಿ.ಶ. 1539. ಪ್ರಶಿಷ್ಯ ಘನಲಿಂಗಿದೇವನ ಕಾಲ ಕ್ರಿ.ಶ. 1564 ಆಗುತ್ತದೆ. ಈ ಘನಲಿಂಗಿ ದೇವರಿಗೆ ಹಿರಿಯ ಸಮಕಾಲೀನನಾದ ಸಿದ್ಧಲಿಂಗ ಯತಿಯ ಕಾಲವು ಕ್ರಿ.ಶ.1564 ಆಗಿರಬಹುದು. ಹೀಗೆ ಘನಲಿಂಗಿ ದೇವನು ಹೇಳಿಕೊಂಡಿರುವ ತನ್ನ ಪರಂಪರೆಯ ಜಾಡನ್ನು ಅವಲಂಬಿಸಿ ಎಸ್.ಶಿವಣ್ಣನವರು ಹೇಳುವ ಕ್ರಿ.ಶ.1561 ಮತ್ತು ವಿವಿಧ ಮೂಲಗಳಿಂದ ಎಲ್.ಬಸವರಾಜು ತಳೆದ ಅಭಿಪ್ರಾಯ ಕ್ರಿ.ಶ. 1584 ಇವುಗಳಲ್ಲಿ ಕಾಣುವ ಅಂತರ ಅಷ್ಟೇನು ದೊಡ್ಡದಲ್ಲ. ತೋಂಟದಾರ್ಯರು ಚೆನ್ನಬಸವ ಪುರಾಣದ ಕಾಲವಾದ ಕ್ರಿ.ಶ.1584ರ ವರೆಗೆ ಬದುಕಿದ್ದರೆಂದು ಇನ್ನೂ ಸ್ಪೃಷ್ಟವಾಗುತ್ತದೆ. ಈ ಅವಧಿಯಲ್ಲಿ ಗುರು ತೋಂಟದಾರ್ಯರ ಸ್ಮಾರಕವೊಂದು ಇಮ್ಮಡಿ ಚಿಕ್ಕಭೂಪಾಲನು ಸಿದ್ಧಾಪುರ ಹೆಸರಿನ ಗ್ರಾಮವನ್ನು ಕಟ್ಟಿಸಿರಬಹುದೆಂದು ಸಿದ್ಧಾಪುರ ಶಾಸನ (ಕ್ರಿ.ಶ.1594) ದಿಂದ ಭಾವಿಸಬಹುದಾಗಿದೆ. ಈ ಎಲ್ಲ ಸಂಗತಿಗಳ ಆಧಾರದಿಂದ ತೋಂಟದ ಸಿದ್ಧಲಿಂಗಯತಿಗಳು  ಬದುಕಿದ ಅವಧಿ ಎಸ್. ಶಿವಣ್ಣ, ಬಿ.ಆರ್., ವೀರಣ್ಣ , ಸಿ.ನಾಗಭೂಷಣ ಮುಂತಾದ ಸಂಶೋಧಕರು ಸೂಚಿಸಿರುವ ಹಾಗೂ ಹೆಚ್ಚು ಕಡಿಮೆ ಎಲ್.ಬಸವರಾಜುರವರು ವ್ಯಕ್ತಪಡಿಸಿರುವ ಕಾಲನಿರ್ಣಯವನ್ನೇ ಒಪ್ಪಬಹುದಾಗಿದೆ. ಈ ವಿಷಯವನ್ನು ಇನ್ನೂ ಹೆಚ್ಚು ಖಚಿತಗೊಳಿಸಲು ಡಿ. ವಿ. ಪರಮಶಿವ ಮೂರ್ತಿಯವರು ಶೋಧಿಸಿರುವ ಕಾಮಿಡಿಹಳ್ಳಿ ಶಾಸನದ ವಿವರಗಳು ನೆರವಾಗಿವೆ.

 ಆ ಶಾಸನದ ಪಾಠ ಇಂತಿದೆ. 

೧ ಶ್ರೀ ಜಯಾಭ್ಯುದಯ ಶಾಲಿವಾಹನ ಶಕವರ್ಷಂಗಳು ೧೪೪೩ನೆಯ ವೃಷ ಸಂ

೨ ವತ್ಸರದ ವಯಿಶಾಖ ಶು ೧೧ ಬುಧವಾರದಲು ಶ್ರೀಮನ್‌ಮಹಾರಾಜಾಧಿರಾಜ ರಾಜ.

೩ ರಮೇಶ್ವರ ಶ್ರೀ ವೀರಪ್ರತಾಪ ಕ್ರುಷ್ಣರಾಯ ಮಹಾರಾಯರ ರಾಣಿವಾಸ ದೇವಿಯರಾದ ಚಿಂ

೪ ನಾದೇವಿಯಂಮನವರು ವಿಜಯನಗರದ ವಿರೂಪಾಕ್ಷದೇವರ ಹಂಪೆಯೊಳಗಣ

೫ ತೋಟಮಠದ ನಿರಂಜನದೇವರಿಗೆ ಮಲ್ಲಿಕಾರ್ಜುನ ದೇವರಿಗು ಯಿಬ್ಬರಿಗೂ ಕೊಟ್ಟ, ದಾನವಾ ಕ್ರ

೬ ಮವೆಂತೆಂದರೆ ನಮ್ಮ ತಂದೆ ಚೊಕ್ಕಣನಾಯಕರ ಚಿಕ್ಕನಾಯಕ್ಕರ ಮಗ ಸೇನಾಸಮು.

೭ ಸಾಳುವ ಗಜಸಿಂಹ ವೀರಪ್ಪೊಡೆಯರ ನಾಯಕತನಕೆ ಸಲುವ ನಾಗಮಂಗಲ

೮ ಸ್ಥಳದ ದಡಿಗದ ಸೀಮೆಯವೊಳಗಣ ಕಾಮಿಡಿಹಳ್ಳಿಯ ಗ್ರಾಮವನು ಪೂರ್ವದ ಹೆಸ..

೯ ಲಿ ಸಿವಧರ್ಮ ಹೆಸರಲಿನಲಿ ಬಸವೋಜಯ್ಯಂಗಳಪುರವೆಂಬ ಹೆಸರನು ಕೊಟ್ಟು ಶ್ರೀ

೧೦ ಮದ್ ಶಕ್ತಿ.......ವಾಗಿ ಶ್ರೀಕೃಷ್ಣರಾಯರಿಗೆ ಧರ್ಮವಾಗಿ ಬಸವೋಜಯ್ಯ...

೧೧ ಪುರವನು....... ತ್ರಿ…………… ಕೆರೆಯನು ಕಟ್ಟಿಸಿ ಕೊ.....

೧೨ ಟ್ಟು ಗ್ರಾಮಂ........ ಪುರವಾಗಿ ಕೊಟ್ಟ ಗ..ಗ್ರಾಮ.....

೧೩ ವನು ನಿಮಗೆ ಕೊಟ್ಟು……….. ಸೀಮೆಯನು ನಿಮ…..ವರು.

೧೪ ಯ ವೊಪಹಾಕಿಸಿ ಕೊಟು......... ಸೀಮೆವೊಳಗಾದ.......

೧೫ ಲು ತೋಟ ತುಡಿಕೆ ಆದಾಯ…… ಬೞಿಯಲು ಸಲುವ......

೧೬ ಭ ನೀರಾರಂಭ ಕಿಱುಕುಳ ಸುವರ್ಣಾದಾಯ ಸುಂಕ ಮಗ್ಗ ಮನೆವಣ......

೧೭ ಸ್ವಾಸ್ಥೆಯನು ಆಗುಮಾಡಿಕೊಂಡು ನೀವೆ ಅನುಭವಿಸಿಬಹಿರೆಂದು.......

೧೮....ನ ಸಂನಿಧಿಯಲ್ಲಿ ಶ್ರೀಕ್ರುಷ್ಣರಾಯರಿಗೆ ಆಯುರಾರೋಗ್ಯ…….

೧೯ ದ್ಧಿಯಾಗಬೇಕೆಂದು ಪೂಜೆಯಂ ಮಾಡಿಕೊಂಡು ಆ ಚಂದ್ರಾ..........

೨೦ ಪಾರಂಪರ್ಯೆಯಾಗಿ ಆ....ಯ.. ವಾಗಿ............

೨೧ ಳ ನಿಧಿನಿಕ್ಷೇಪ ಜಲಪಾಷಾಣ…… ಯಾಗಾಮಿ ಸಿದ್ಧ...

೨೨ ನಾಳು…… ಯೆಂದು ನಂಮ ಸ್ವಾನು……….

೨೩ ನಪಾಲನಯೋರ್ಮಧ್ಯೇ ದಾನಾಛ್ರೇಯೋನುಪಾಲ.......

೨೪ ತಂ ಪದಂ ಸ್ವದತ್ತಂ ದ್ವಿಗುಣಂ ಪುಣ್ಯಂ………ಸ್ವದತ್ತಂ

೨೫ ನಿಷ್ಪಲಂಭವೇತ್……………………………….

೨೬ ವಸುಂಧರಾಂ ಷಷ್ಟಿರ್ವರ್ಷ……………..ಹನಾ ಕೈಗಳ…..

೨೭ ಆದಿ ದಿಕ್ಕಿನ....................................................................

೨೮ ವ.......ಬಹ ಯೀ ಕ್ರಮಕ್ಕೆ ಯಾವನೊಬ್ಬ ಆಳುಪಿದವರು ತಂ

೨೯ ಮ ತಂದೆ ತಾಯಿಗಳ ವಾರಣಾಶಿಯಲಿ ಕೊಂದ ಪಾಪಕ್ಕೆ ಹೋಹರು ಬ್ರಂಹಹತ್ಯ ಗೋಹತ್ಯ ಶ್ರೀ

೩೦ ಹತ್ಯಾ ಸುರಾಪಾನವ ಸೇವಿಸಿದ ಪಾಪಕ್ಕೆ ಹೋಹರು ಕಪಿಲೆಯ ಕೊಂದ ಪಾಪಕ್ಕೆ ಹೋಹರು

೩೧....ನ ಪಾದಕ್ಕೆ ತಪ್ಪಿದವ ವೀರವೊಡೆಯರ ವೊಪ್ಪ ವೀರೈಯ

( ಕೃಷ್ಣದೇವರಾಯನ ಶಾಸನಗಳು ಸಂ: ಡಿ.ವಿ.ಪರಮಶಿವಮೂರ್ತಿ, ಪುಟ ಸಂಖ್ಯೆ ೨೮೯-೨೯೦, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦)

     ಎಡೆಯೂರಿನ ತೋಂಟದ ಸಿದ್ದಲಿಂಗೇಶ್ವರರು ತಮ್ಮ ಪ್ರವಾಸ ಕಾಲದಲ್ಲಿ ಹಂಪೆಗೆ ಬಂದು ವಿರೂಪಾಕ್ಷನದರ್ಶನ ಪಡೆದರೆಂದೂ ಮತ್ತು ಅಲ್ಲಿದ್ದ ಸೋಮವಾರದ ಬಸಮ್ಮ ಎಂಬುವಳ ಭಕ್ತಿ ಆತಿಥ್ಯವನ್ನು ಸ್ವೀಕರಿಸಿದರೆಂದೂ ಅನೇಕ ಕಾವ್ಯಗಳು ವರ್ಣಿಸಿವೆ. ಆದರೆ ಸಿದ್ಧಲಿಂಗಯತಿಗಳು ಯಾವ ಕಾಲದಲ್ಲಿ ಹಂಪಿಗೆ ಆಗಮಿಸಿ ವಿರೂಪಾಕ್ಷನ ದರ್ಶನ ಮಾಡಿದರು ಎಂಬುದಕ್ಕೆ ಇದೂವರೆಗೂ ಸಿದ್ಧಲಿಂಗರನ್ನು ಕುರಿತ ಕಾವ್ಯ-ಪುರಾಣಗಳಲ್ಲಿ  ನಿಖರ ಮಾಹಿತಿ ಕಂಡು ಬಂದಿರಲಿಲ್ಲ. 

   ಆದರೆ ಮೇಲಿನ ಕ್ರಿ.ಶ.೧೫೨೧ರ ಕಾಮಿಡಿಹಳ್ಳಿಯ ಶಾಸನದ ಪಠ್ಯದ ಆಧಾರದಿಂದ ಸಿದ್ದಲಿಂಗಯತಿಗಳ ಕಾಲದ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರ ತಳೆಯಬಹುದಾಗಿದೆ. ತೋಂಟದಸಿದ್ಧಲಿಂಗಯತಿಗಳು ಮತ್ತು ಮಲ್ಲಿಕಾರ್ಜುನ ದೇವರು ಹಂಪೆಗೆ ಆಗಮಿಸಿದಾಗ ಕೃಷ್ಣದೇವರಾಯನ ಪ್ರಿಯರಾಣಿ ಚಿಂನಾದೇವಿಯಂಮನು ಇವರ ಗೌರವಾರ್ಥ ಪೂಜಾಕಾರ್ಯಕ್ಕಾಗಿ ತನ್ನತಂದೆಯಾದ ವೀರಪೊಡೆಯನು ಆಳುತ್ತಿದ್ದ ನಾಗಮಂಗಲ ಸೀಮೆಯ ದಡಿಗದ ಸ್ಥಳದ ಕಾಮಿಡಿಹಳ್ಳಿಯನ್ನು ದಾನವಾಗಿ ನೀಡುತ್ತಾಳೆ. ಈ ಕಾಮಿಡಿಹಳ್ಳಿಗೆ ಪೂರ್ವದ ಹೆಸರಾದ ಬಸವೋಜಯ್ಯಂಗಳಪುರವೆಂಬ ಹೆಸರಿಟ್ಟು ದಾನ ನೀಡುವಳು. ಶಾಸನವು ದಾನದ ವಿವರದ ಭಾಗದಲ್ಲಿ ತುಟಿತವಾಗಿರುವುದರಿಂದ ಹೆಚ್ಚಿನ ವಿವರ ದೊರೆಯದೆ ಕೇವಲ ದೇವಾಲಯ ಮತ್ತು ಶಾಸನದಲ್ಲಿ ತೋಂಟದ ಸಿದ್ಧಲಿಂಗರ ಹೆಸರನ್ನು ನೇರವಾಗಿ ಪ್ರಸ್ತಾಪ ಮಾಡದಿರುವುದನ್ನು ಸಂಪಾದಕರು ಪ್ರಸ್ತಾಪಿಸಿದ್ದಾರೆ. ಆದಾಗ್ಯೂ ಈ ಶಾಸನದಲ್ಲಿ  ಉಲ್ಲೇಖಿತರಾಗಿರುವ ತೋಟಮಠದ ನಿರಂಜನ ದೇವರು  ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರೇ ಎಂದು ನಿಖರವಾಗಿ ಗುರುತಿಸ ಬಹುದಾಗಿದೆ. ಈ ಶಾಸನದಲ್ಲಿ  ತೋಂಟದ ಸಿದ್ಧಲಿಂಗಯತಿಗಳ ಬಗೆಗಿನ ಪ್ರತ್ಯಕ್ಷ ಹಾಗೂ ಪರೋಕ್ಷ ವಿವರಗಳು ಈ ಕೆಳಕಂಡಂತೆ ಕಂಡು ಬರುತ್ತವೆ.

೧.ಕಾಮಿಡಿಹಳ್ಳಿಯ ಶಾಸನದ ಕಾಲ ಕ್ರಿ.ಶ.೧೫೨೧, ಏಪ್ರಿಲ್ ೧೭, ಬುಧವಾರ

೨. ಸಿದ್ದಲಿಂಗಯತಿಗಳು ಹಂಪೆಯ ವಿರೂಪಾಕ್ಷ ದರ್ಶನಕ್ಕೆ ಬಂದಿದ್ದರೆಂಬ ಅಂಶವನ್ನು ಈ ಶಾಸನವು ಸಮರ್ಥಿಸಿರುವುದರಿಂದ ಕ್ರಿ.ಶ.೧೫೨೧, ಏಪ್ರಿಲ್ ೧೭, ಬುಧವಾರದಂದು ಸಿದ್ದಲಿಂಗಯತಿಗಳು ಹಂಪಿಯ ವಿರೂಪಾಕ್ಷದೇವನ ದರ್ಶನಕ್ಕೆ ಬಂದಿದ್ದರೆಂದು ತಿಳಿಯಬಹುದಾಗಿದೆ. 

೩. ಕೃಷ್ಣದೇವರಾಯನ ರಾಣಿ ಚಿನ್ನಾದೇವಿಯು ಸಿದ್ಧಲಿಂಗಯತಿಗಳಿಗೆ ಕಾಮಿಡಿಹಳ್ಳಿ(ಬಸವೋಜಯ್ಯಂಗಳ ಪುರ)ಯನ್ನು ದಾನವಾಗಿ ನೀಡಿರುವಳು.

೪. ಕ್ರಿ.ಶ.೧೫೨೧ರ ವೇಳೆಗೆ ಸಿದ್ಧಲಿಂಗಯತಿಗಳು ದಾನ ಪಡೆಯುವಷ್ಟು ಪ್ರಸಿದ್ಧರಾಗಿದ್ದರೆಂದರೆಅವರ ವಯಸ್ಸು ಕಡಿಮೆಯೆಂದರೂ ೩೦ ವರ್ಷಗಳಾದರೂ ಆಗಿರುತ್ತದೆ. ಇದರಿಂದ ಸಿದ್ಧಲಿಂಗಯತಿಗಳು ಕ್ರಿ.ಶ.೧೪೯೦-೯೫ರ ನಡುವೆ ಜನಿಸಿರುವರು ಎಂದು ಊಹಿಸಲು ಅವಕಾಶ ಇದೆ.

 ೫. ಪ್ರಸ್ತುತ ಶಾಸನ ಮತ್ತು ವಿವಿಧ ವಿದ್ವಾಂಸರ ಅಭಿಪ್ರಾಯಗಳನ್ನು ಒರೆಗಲ್ಲಿಗೆ ಹಚ್ಚಿ ಹೇಳುವುದಾದರೆ ಸಿದ್ಧಲಿಂಗರ ಜೀವಿತಾವಧಿ ಕ್ರಿ.ಶ.೧೪೯೫ ರಿಂದ ಕ್ರಿ.ಶ.೧೫೮೫ ಎಂದು ಹೇಳಬಹುದು. ಸಿದ್ಧಲಿಂಗರನ್ನು ಕುರಿತ ಸಾಹಿತ್ಯ ಕೃತಿಗಳಲ್ಲಿ ಅವರನ್ನು ಮುದಿಯಯ್ಯ ಎಂದು ಕರೆದಿರುವುದನ್ನು ಗಮನಿಸಿದರೆ ಅವರು ಹೆಚ್ಚು ಕಾಲ ಬದುಕಿದ್ದರು ಎಂದೆನಿಸುತ್ತದೆ

೬. ಕಾಮಿಡಿಹಳ್ಳಿಯ ಶಾಸನವು ಸಿದ್ಧಲಿಂಗಯತಿಗಳ ಜೀವತಾವಧಿಯ ಪ್ರಥಮ ಶಾಸನವಾಗಿದೆ. 

೭. ಶಾಸನಶಿಲ್ಪದಲ್ಲಿ ಸಿದ್ಧಲಿಂಗಯತಿಗಳು ಅಂಗೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಧ್ಯಾನಾಸಕ್ತರಾದಂತೆ ಕುಳಿತಿರುವ ಶಿಲ್ಪವಿದ್ದು, ಈ ಶಿಲ್ಪವು ಅವರ ಜೀವಿತಾವಧಿಯ ಪ್ರಥಮಶಿಲ್ಪವಾಗಿ ಕಂಡುಬರುತ್ತದೆ.

೮. ಸಿದ್ಧಲಿಂಗಯತಿಗಳು ಬಹುಶ್ಯಃ ಕ್ರಿ.ಶ.೧೫೧೮-೧೯ರಲ್ಲಿ ತಮ್ಮ ಶಿಷ್ಯಗಣದ ಜೊತೆ ದೇಶಸಂಚಾರಕ್ಕಾಗಿ ಕಗ್ಗೆರೆಯಿಂದ ಹೊರಟು ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಕಡೆಯಿಂದ ಹಂಪೆಯ ವಿರೂಪಾಕ್ಷನ ದರ್ಶನಕ್ಕೆ ಕ್ರಿ.ಶ.೧೫೨೧ಕ್ಕೆ ಆಗಮಿಸಿದರೆಂದು ಊಹಿಸಬಹುದು. ಸುವ್ವಿಮಲ್ಲನ ಸಿದ್ಧೇಶ್ವರ ಸಾಂತ್ಯದಲ್ಲಿ ತೋಂಟದ ಸಿದ್ಧಲಿಂಗ ಯತಿಗಳು ವಿದ್ಯಾನಗರಿಗೆ ಆಂಧ್ರಪ್ರದೇಶದ ಕಣೆಕಲ್‌ ಮಾರ್ಗವಾಗಿ ಪ್ರಯಾಣಿಸಿದರು ಎಂದು ಉಲ್ಲೇಖಿಸಿದ್ದಾನೆ.

  ಸಿದ್ಧಲಿಂಗ ಯತಿಗಳನ್ನು ಕುರಿತ ಕಾವ್ಯ-ಪುರಾಣಗಳಲ್ಲಿ, ವಿದ್ಯಾನಗರಿ/ವಿಜಯನಗರಕ್ಕೆ ಸಿದ್ಧಲಿಂಗರು ಬಂದಿದ್ದರೆ ಆ ವಿವರವು, ಸಾಂಗತ್ಯ ಕವಿ ಸುವ್ವಿಮಲ್ಲನಲ್ಲಿ, ತೋಂಟದ ಸಿದ್ಧಲಿಂಗ ಯತಿಗಳು ಕಣಿಯಕಲ್ಲಿನಿಂದ ‘ವಿದ್ಯಾನಗರಿ’ಗೆ ಬಂದನು. ‘ಆ ಊರಿನಲ್ಲಿದ್ದ ಸೋಮವಾರದ ಬಸವಮ್ಮನೆಂಬ ದೃಢಭಕ್ತೆಯು, ಸಿದ್ಧೇಶನು ಬಂದ ಕೂಡಲೆ ಭಿನ್ನಹವನ್ನು ಮಾಡಿದಳು’ ಆಕೆಯ ಬಿನ್ನಹವನ್ನು ಸ್ವೀಕರಿಸಿದ ಯತಿಗಳು ಆಕೆಯ ಮನೆಯಲ್ಲಿ ಪೂಜೆಗೆ ಮೂರ್ತಗೊಂಡಾಗ ಪಾದೋದಕವನ್ನು ಕರುಣಿಸಲು, ಆಕೆಯು ಚಿನ್ನದ ಮಿಳ್ಳೆಯಲ್ಲಿ ಕಾಶಿ ತೀರ್ಥವನ್ನು ತಂದು ಇದು ವಿಶೇಷವಾದ ತೀರ್ಥವೆಂದು ಸಿದ್ಧೇಶನ ಮುಂದಿಟ್ಟಳು(ಪ.80). ದೋಷರಹಿತನಾದ ಸಿದ್ಧೇಶನು ಪಾದೋದಕ ಮತ್ತು ಕಾಶಿಯುದಕಗಳೆರಡನ್ನು ತಕ್ಕಡಿ(ತ್ರಾಸಿ)ಯಲ್ಲಿ ತೂಗಿ ಜಂಗಮ ಪಾದ ತೀರ್ಥವೇ ಅಧಿಕವೆಂದು, ಆ ಪಾದ ತೀರ್ಥ ಸೇವನೆಯೇ ಮುಕ್ತಿಗೆ ಸೋಪಾನವೆಂದು ತೋರಿದುದನ್ನು ಭಕ್ತರು ನೋಡಿ ಅತ್ಯಾಶ್ಚರ್ಯಗೊಂಡರು. ಇದಕ್ಕೆ ದೃಷ್ಟಾಂತವನ್ನು ನೀಡುತ್ತಾ, ಸಿದ್ಧೇಶ್ವರನು ಸೋಮವಾರದ ಬಸವಮ್ಮನಿಗೆ ಪಾದೋದಕ್ಕಿಂತಲೂ ಕಾಶೀ ತೀರ್ಥವು ಮಿಗಿಲಲ್ಲವೆಂದು ತಿಳಿಸಿ ಇದನ್ನು ನೀನು ಪ್ರಚಾರ ಮಾಡು ಎಂದು ನೀತಿ ಬೋಧನೆ ಮಾಡಿದನು. ಹಾಗಿಯೇ ಪ್ರಸಾದ ,ವಿಭೂತಿ, ರುದ್ರಾಕ್ಷಿಗಳ ಮಹತ್ವದ ಬಗ್ಗೆ ದೃಷ್ಟಾಂತಗಳ ಮೂಲಕ ಬಸವಮ್ಮನಿಗೆ ಬೋಧಿಸಿ, ಅರಿವನ್ನುಂಟು ಮಾಡಿದನು ಎಂಬ ವಿವರಗಳು ಸುವ್ವಿ ಮಲ್ಲನಲ್ಲಿ ದೊರೆಯುತ್ತವೆ. ಸುಮಾರು 33 ಪದ್ಯಗಳಲ್ಲಿ ಸುದೀರ್ಘವಾಗಿ (79ರಿಂದ 112 ಪದ್ಯಗಳವರೆಗೆ) ವಿದ್ಯಾನಗರಿಯಲ್ಲಿನ ಸೋಮವಾರದ ಬಸವಮ್ಮನ ಪ್ರಸಂಗದ ವಿವರಗಳಿವೆ.

೯. ಇವರು ಹಂಪಿಗೆ ಬಂದಾಗ ಗ್ರಾಮದಾನ ಪಡೆದಿದ್ದಲ್ಲದೆ ಆ ಅವಧಿಯಲ್ಲಿ ಹಂಪಿಯಲ್ಲಿದ್ದ ವೀರಶೈವ ಮಠಗಳ ಜೀರ್ಣೋದ್ದಾರ ಅಥವಾ ನೂತನ ಮಠಗಳ ನಿರ್ಮಾಣ ನಡೆಸಿರಬೇಕು. ವಿರೂಪಾಕ್ಷನೆಂಬ ಭಕ್ತನಿಗೆ ದೀಕ್ಷೆ ನೀಡಿದ್ದು ಮತ್ತು ಸೋಮವಾರದ ಬಸಮ್ಮಳೆಂಬ ಭಕ್ಕಳ ಆತಿಥ್ಯ ಸ್ವೀಕರಿಸಿದ್ದು ಇತ್ಯಾದಿ ಕಾವ್ಯ-ಪುರಾಣಗಳಲ್ಲಿಯ ಈ ಅಂಶವನ್ನು ಪುಷ್ಠೀಕರಿಸುತ್ತದೆ.

೧೦. ತೋಂಟದ ಸಿದ್ದಲಿಂಗಯತಿಗಳ ಮತ್ತು ವಿಜಯನಗರದ ಅರಸ ಕೃಷ್ಣದೇವರಾಯನ ರಾಣಿ ಚಿನ್ನಾದೇವಿಗೂ ಭಕ್ತಿಪೂರ್ವಕ ಸಂಬಂಧವಿದ್ದುದು ಈ ಶಾಸನದಿಂದ ತಿಳಿದು ಬರುತ್ತದೆ.  

   ಡಿ.ವಿ.ಪರಮಶಿವಮೂರ್ತಿರವರು ಶೋಧಿಸಿರುವ  ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೋಕಿನ ಬೆಳ್ಳೂರು ಹೋಬಳಿಗೆ ಸೇರಿದ ಕಾಮಿಡಿಹಳ್ಳಿಯ ಬಸವಣ್ಣನ ಗುಡಿಹತ್ತಿರದ ವಿಜಯನಗರದರಸ ಕೃಷ್ಣದೇವರಾಯನ ಆಳ್ವಿಕೆಯ ಕಾಲದ ಕ್ರಿ.ಶ.1521ರ ಶಾಸನದಲ್ಲಿ  ಕೃಷ್ಣದೇವರಾಯನ ಪ್ರಿಯರಾಣಿ ಚಿಂನಾದೇವಿ ಯಂಮನು ತೋಂಟದ ಸಿದ್ಧಲಿಂಗಯತಿಗಳು ಮತ್ತು ಮಲ್ಲಿಕಾರ್ಜುನ ದೇವರುಗಳು  ಹಂಪೆಗೆ ಶ್ರೀ ವಿರೂಪಾಕ್ಷನ ದರ್ಶನಾರ್ಥ ಆಗಮಿಸಿದಾಗ ಇವರ ಗೌರವಾರ್ಥ ಪೂಜಾಕಾರ್ಯಕ್ಕಾಗಿ ತನ್ನ ತಂದೆಯಾದ ವೀರಪ್ಪೊಡೆಯನು ಆಳುತ್ತಿದ್ದ ನಾಗಮಂಗಲ ಸೀಮೆಯ ದಡಿಗದ ಸ್ಥಳದ ಕಾಮಿಡಿಹಳ್ಳಿಯನ್ನು ಪೂರ್ವದ ಹೆಸರಾದ ಬಸವೋಜಯ್ಯಂಗಳಪುರವೆಂದು ಹೆಸರಿಟ್ಟು ದಾನ ನೀಡುವಳು. ಈ ಶಾಸನದಲ್ಲಿ ತೋಂಟದ ಸಿದ್ಧಲಿಂಗಯತಿಗಳ ಹೆಸರನ್ನು ನೇರವಾಗಿ ಹೇಳದಿದ್ದರೂ ತೋಟಮಠದ ನಿರಂಜನ ದೇವನೆಂದು ಹೇಳಿದೆ. ಇವರು ತೋಂಟದ ಸಿದ್ಧಲಿಂಗಯತಿಗಳೆ ಎಂದು ಪೂರಕ ಆಕರಗಳ ಮೂಲಕ ನಿರ್ಧರಿಸ ಬಹುದಾಗಿದೆ.  ಕಾಮಿಡಿಹಳ್ಳಿಯ ಈ ಶಾಸನವು ತೋಂಟದಸಿದ್ಧಲಿಂಗಯತಿಗಳು ಬದುಕಿದ್ದ ಕಾಲಾವಧಿಯಲ್ಲಿ ಹಾಕಿಸಿದ ಪ್ರಥಮ ಶಾಸನವಾಗಿದೆ.  ಅಲ್ಲದೆ  ಈ ಶಾಸನಶಿಲ್ಪದಲ್ಲಿ  ಸಿದ್ಧಲಿಂಗಯತಿಗಳು ಅಂಗೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಧ್ಯಾನಾಸಕ್ತರಾದಂತೆ ಕುಳಿತಿರುವ ಶಿಲ್ಪವಾಗಿದ್ದು ಅದೂ ಕೂಡಾ ಅವರ ಜೀವಿತಾವಧಿಯ ಪ್ರಥಮ ಶಿಲ್ಪವಾಗಿದೆ. ತೋಂಟದ ಸಿದ್ಧಲಿಂಗಯತಿಗಳನ್ನು ಉಲ್ಲೇಖಿಸಿರುವ ಈ ಶಾಸನವು ಇವರ ಕಾಲವನ್ನು ತಿಳಿಯಲು ಸಹಕಾರಿಯಾಗಿದೆ. ವಿವಿಧ ವಿದ್ವಾಂಸರ ಉಲ್ಲೇಖ ಹಾಗೂ  ಇತ್ತೀಚೆಗೆ ದೊರೆತ ಕಾಮಿಡಿಹಳ್ಳಿ ಶಾಸನಗಳಲ್ಲಿ ಮಾಹಿತಿಗಳನ್ನು ಕ್ರೂಢೀಕರಿಸಿ ಹೇಳುವುದಾದರೆ  ಕ್ರಿ.ಶ.1೪೯೫-158೫ರ ನಡುವೆ ತೋಂಟದ ಸಿದ್ಧಲಿಂಗ ಯತಿಗಳು ಜೀವಿಸಿರಬೇಕೆಂಬ  ನಿಲುವನ್ನು ಸದ್ಯಕ್ಕೆ ತಾಳಬಹುದಾಗಿದೆ.

ಶಾಸನವು ಬಹಳ ತ್ರುಟಿತವಾಗಿದ್ದು, ಕಾಲವನ್ನು ಶಕವರ್ಷಂಗಳು ೧೪೪೩ನೆಯ ವೃಷಭ ಸಂವತ್ಸರದ ವಯಿಶಾಖ ಶು ೧೧ ಬುಧವಾರದಲು ಎಂದು ನೀಡಿದ್ದು, ಇದು ಕ್ರಿ.ಶ. ೧೫೨೧ ಏಪ್ರಿಲ್ ೧೭, ಬುಧವಾರಕ್ಕೆ ಸಮನಾಗುತ್ತದೆ. ಈ ಅವಧಿಯಲ್ಲಿ ಕೃಷ್ಣದೇವರಾಯನ ರಾಣಿ ವಾಸದ ಚಿಂನಾದೇವಿಯಮನು ಹಂಪೆಗೆ ಆಗಮಿಸಿದ್ದ ತೋಂಟಮಠದ ನಿರಂಜನದೇವರು ಮತ್ತು ಮಲ್ಲಿಕಾರ್ಜುನ ದೇವರ ಸೇವಾರ್ಥ ವೀರವೊಡೆಯರ ನಾಯಕತನಕ್ಕೆ ಸಂದ ನಾಗಮಂಗಲ ಸ್ಥಳದ, ದಡಿಗದ ಸೀಮೆಯ ಕಾಮಿಡಿಹಳ್ಳಿಯನ್ನು ದಾನವಾಗಿ ನೀಡಿದೆ ವಿಷಯ ತಿಳಿದುಬರುತ್ತದೆ. ಶಾಸನದಲ್ಲಿ ದಾನ ಪಡೆದಿರುವ ತೋಂಟಮಠದ ನಿರಂಜನದೇವನು ಸುಪ್ರಸಿದ್ದ ವೀರಶೈವ ಯತಿ ಎಡೆಯೂರಿನ ತೋಂಟದ ಸಿದ್ಧಲಿಂಗೇಶ್ವರರೇ ಆಗಿದ್ದಾರೆ. ಈ ಕಾಮಿಡಿಹಳ್ಳಿಗೆ ಪೂರ್ವದ ಹೆಸರಾದ ಬಸವೋಜಯ್ಯಂಗಳಪುರವೆಂದು ಮರು ಹೆಸರಿಟ್ಟು, ಈ ದಾನವನ್ನು ನೀಡಲಾಗಿದೆ. ಈ ಶಾಸನದ ಪ್ರಕಾರ ರಾಣಿ ಚಿನ್ನಾದೇವಿಯು ವೇಶ್ಯೆ ಅಲ್ಲವೆಂದು ಅವಳು ವಿಜಯನಗರದ ಅಧಿಕಾರಿಗಳ ಕುಟುಂಬದವಳೆಂದು ತಿಳಿದುಬರುತ್ತದೆ. ಈ ಶಾಸನ ದೊರೆತ ಸ್ಥಳವು ತೋಂಟದ ಸಿದ್ದಲಿಂಗೇಶ್ವರರ ಎಡೆಯೂರಿಗೆ ಸುಮಾರು ಹದಿನೈದು ಕಿ.ಮೀ.ದೂರದಲ್ಲಿದೆ. ಈ ಶಾಸನ ಶಿಲ್ಪದ ಭಾಗದಲ್ಲಿ ಸಿದ್ದಲಿಂಗೇಶ್ವರರು ಕೈಯಲ್ಲಿ ಇಷ್ಟ ಲಿಂಗವನ್ನು ಹಿಡಿದು ಧ್ಯಾನಾಸ್ತರಾಗಿರುವಂತೆ ಚಿತ್ರವಿದೆ ಶಾಸನದ ರಚನೆಕಾರ ವೀರಯ್ಯನೆಂಬುವವನಾಗಿದ್ದಾನೆ.  ಒಟ್ಟಾರೆ ಡಿ.ವಿ.ಪರಮಶಿವ ಮೂರ್ತಿ ಅವರಿಂದ ಶೋಧಿಸಲ್ಪಟ್ಟ ಕ್ರಿ.ಶ. 1521ರ ‘ಕಾಮಿಡಿಹಳ್ಳಿಯ ಶಾಸನ ದಲ್ಲಿನ ವಿವರಗಳು ಸಿದ್ಧಲಿಂಗ ಯತಿಗಳ ಕಾಲದ ಬಗೆಗೆ ಸ್ಪಷ್ಟವಾದ ನಿಲುವನ್ನು ತಳೆಯಲು ಪುಷ್ಟಿ ನೀಡುತ್ತದೆ.  

೪. ತೋಂಟದ ಸಿದ್ಧಲಿಂಗರ ವಚನ ಉತ್ಕೀರ್ಣವಾಗಿರುವ  ಚಿತ್ರದುರ್ಗದ ಶಾಸನ

ಇನ್ನೊಂದು ಶಾಸನದಲ್ಲಿ ಸಿದ್ಧಲಿಂಗ ಶಿವಯೋಗಿಗಳ ಷಟ್ಸ್ಥಲ ಜ್ಞಾನ ಸಾರಾಮೃತ ವಚನ ಸಂಕಲನದ  ವಚನವು ಚಿತ್ರದುರ್ಗದ ಶಾಸನದಲ್ಲಿ ಉದ್ಧೃತವಾಗಿದೆ. ಚಿತ್ರದುರ್ಗದ ಮೋಕ್ಷಗುಂಡಂ ಶ್ರೀನಿವಾಸ ಅವಧಾನಿಗಳ ತೋಟದೊಳಗಿನ ಒಂದು ಶಿಲಾಶಾಸನದಲ್ಲಿ:

ನಾದ ಬಿಂದು ಕಳೆ ಭೇದವ ಶಿಳಿದಲ್ಲ 

ಆರಕ್ಷರವಾದ ತೆರವನರಿಯ ಬಾ 

ರದು | ಆರಕ್ಷಕೆ ಮೂಲಪ್ರಣಮನ 

ತಿಳಿದಲ್ಲದೆ ನಾದಕಲೆದೋರದು ಆ ನಾದದೊ 

ಳಗಿನ ಕಳೆಯ ನೋಡಿ ಕಂಡಲ್ಲದೆ ರಾಜಶಿವಯೋ 

ಗಿಯಾಗಬಾರದು 1 ರಾಜಶಿವಯೋಗವೆಂಬುದು 

ಆದಿಯಲ್ಲಿ ಶಿವಬೀಜವಾದ ಮಹಾಮಹಿ 

ಮರಿಗೆ ಸಾಧ್ಯವಪ್ಪುದಲ್ಲದೆ ತ್ರೈಜಗದಲ್ಲಾರಿ 

ಗು ಅಸಾಧ್ಯ ನೋಡಾ ಮಹಾಲಿಂಗಗುರುಶಿವ ಸಿದ್ಧೇಶ್ವರ ಪ್ರಭುವೆ 

ಎಂಬ ವಚನವಿದೆ. ಈ ಶಿಲಾಶಾಸನವನ್ನು ಯಂತ್ರದ ಕಲ್ಲೆಂದು ಕರೆಯಲಾಗುತ್ತಿದೆ. ಜನರು ದನಕರುಗಳಿಗೆ ಬೇನೆ ಬಂದಾಗ ಇದನ್ನು ತೊಳೆದ ನೀರನ್ನು ಅವುಗಳಿಗೆ ಕುಡಿಸುತ್ತಾರೆ. ರೋಗ ಗುಣವಾಗುತ್ತದೆಯೆಂಬ ಭಾವನೆ ಆ ಜನರಲ್ಲಿದೆ. ಇದೊಂದು ಯಂತ್ರದ ಕಲ್ಲಾಗಿರುವುದು ನಿಜವೆಂದು ತೋರುತ್ತದೆ. ಏಕೆಂದರೆ ಈ ವಚನದ ಮೇಲ್ಬಾಗದಲ್ಲಿ ಷಡಕ್ಷರ ಮಂತ್ರದ ಕುಂಡಲಿಯು ಉದ್ಧೃತವಾಗಿದೆ. ದತ್ತಿ ಮುಂತಾದ ಬೇರೆ ಯಾವ ವಿಷಯವೂ ಈ ಶಾಸನದಲ್ಲಿಲ್ಲದ ಮೂಲಕ ಇದನ್ನು ಕೇವಲ ಈ ಮಂತ್ರಮಹಿಮೆಯನ್ನು ಬಿತ್ತರಿಸುವುದಕ್ಕಾಗಿಯೇ ಕೆತ್ತಿದಂತೆ ತೋರುತ್ತದೆ. ಇಲ್ಲಿ ಸಿದ್ಧಲಿಂಗ ಶಿವಯೋಗಿಗಳ ವಚನವನ್ನು ಉದ್ಧರಿಸಿರುವುದರಿಂದ ಈ ಶಾಸನದ ಕಾಲಕ್ಕೆ ಅಂದರೆ ಕ್ರಿ. ಶ. ೧೭೩೮ರ ಹೊತ್ತಿಗೆ ಶಿವಯೋಗಿಗಳ ವಚನಗಳು ಮಂತ್ರಸ್ವರೂಪವನ್ನು ತಳೆದಿದ್ದವೆಂಬ ಮಾತು ದೃಢವಾಗುತ್ತದೆ. ಇದು ಅವರ ಘನವಾದ ವ್ಯಕ್ತಿತ್ವದ ಬಗೆಗೆ ಜನತೆ ಇಟ್ಟುಕೊಂಡ ಭಕ್ತಿ ವಿಶ್ವಾಸಗಳ ಕುರುಹಾಗಿದೆ.

   ಒಟ್ಟಾರೆ ಸಿದ್ಧಲಿಂಗೇಶ್ವರರು ತಮ್ಮ ಅದ್ಭುತ ದೈವಿ ಶಕ್ತಿ ಪವಾಡಗಳನ್ನು ನಡೆಸುವುದರ ಜೊತೆಗೆ ವಚನಗಳನ್ನು ರಚಿಸಿ, ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯಗಳನ್ನು ಎಚ್ಚರಗೊಳಿಸಿ ಅವರಲ್ಲಿ ಧರ್ಮ ಜಾಗೃತಿ ಉಂಟು ಮಾಡುವಲ್ಲಿ ಸಫಲರಾದವರು. ತಮ್ಮ ಶಿಷ್ಯರೊಂದಿಗೆ ಇಡೀ ಭರತ ಖಂಡವನ್ನು ಸುತ್ತಿ ಭೂಮಿಯನ್ನು ಪವಿತ್ರಗೊಳಿಸಿ ಕೊನೆಗೆ ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಹೊಂದಿದರು. ಅವರು ನಿರ್ವಿಕಲ್ಪ ಸಮಾಧಿ ಹೊಂದಿ 410 ವರ್ಷಗಳಾಗಿದ್ದರೂ ಇಂದಿಗೂ ಜಾಗೃತಾವಸ್ಥೆಯಲ್ಲಿದ್ದುಕೊಂಡು ಭಕ್ತ ಕೋಟೆಯನ್ನು ಹರಸುತ್ತಾರೆಂದು ಅವರ ಅಭಿಷ್ಟಗಳನ್ನು ತಮ್ಮ ತಪಶಕ್ತಿಯಿಂದ ಪೂರ್ಣಗೊಳಿಸುತ್ತಾರೆಂಬುದು ಸದ್ಭಕ್ತರ ನಂಬಿಕೆಯಾಗಿದೆ. ತೋಂಟದ ಸಿದ್ಧಲಿಂಗರನ್ನು ಕುರಿತು ಶಾಸನಗಳು ಪರೋಕ್ಷವಾಗಿಯಾದರೂ  ಇವರ ಕಾಲದ ಬಗೆಗೆ ಹಾಗೂ  ಭಕ್ತರು ಇವರ ಮೇಲೆ ಇಟ್ಟುಕೊಂಡಿದ್ದ ಭಕ್ತ ಭಾವದ ಬಗೆಗೆ, ಸಲ್ಲಿಸಿದ ಸಾಂಸ್ಕೃತಿಕ ಸೇವೆಯ ಬಗೆಗೆ ಬೆಳಕು ಚೆಲ್ಲುತ್ತವೆ.

ಗ್ರಂಥ ಋಣ

1. ಸುವ್ವಿಮಲ್ಲನ ತೋಂಟದ ಸಿದ್ಧೇಶ್ವರನ ಸಾಂಗತ್ಯ ಸಂ:ಎಂ.ಎಸ್.ಬಸವರಾಜಯ್ಯ,

ಶಿವಧರ್ಮ ಗ್ರಂಥಮಾಲ, ಗುರು ನಿವಾಸ, ತಿಪಟೂರು. 1995

೨. ಎಪಿಗ್ರಫಿಯಾ ಕರ್ನಾಟಿಕ  ಸಂಪುಟ-೨೪ ( ಪರಿಷ್ಕೃತ)

   ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ,ಮೈಸೂರು ವಿ.ವಿ.ಮೈಸೂರು. 20೦೯

೪. ಕೃಷ್ಣದೇವರಾಯನ ಶಾಸನಗಳು ಸಂ.ಡಿ.ವಿ. ಪರಮಶಿವಮೂರ್ತಿ

   ಸಂಪುಟ ೧,  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೦

5.    ತೋಂಟದ ಸಿದ್ಧಲಿಂಗ ಶಿವಯೊಗಿವಿರಚಿತ ಷಟಸ್ಥಲ ಜ್ಞಾನಸಾರಾಮೃತ ಸಂ:ಆರ್.ಸಿ.ಹಿರೇಮಠ,

ವೀರಶೈವ ಅಧ್ಯಯನ ಸಂಸ್ಥೆ  ಶ್ರೀಜಗದ್ಗುರು ತೋಂಟದಾರ್ಯ   ಸಂಸ್ಥಾನ ಮಠ, ಗದಗ. 1999 

9. ಸಿ.ನಾಗಭೂಷಣ,   ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ   ಅಮೃತ ವರ್ಷಿಣಿ ಪ್ರಕಾಶನ, ನಂದಿ ಹಳ್ಳಿ. 1999

10. ಸಿ.ನಾಗಭೂಷಣ, ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು  , ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 2000

11. ಆರ್.ಸಿ.ಹಿರೇಮಠ, ಷಟ್‍ಸ್ಥಲ ಪ್ರಭೆ  :   ಪ್ರ:ಕ.ವಿ.ವಿ., ಧಾರವಾಡ. 1966              ಡಾ.ಸಿ.ನಾಗಭೂಷಣ

               ಹಿರಿಯ ಪ್ರಾಧ್ಯಾಪಕರು

               ಕನ್ನಡ ಅಧ್ಯಯನ ಕೇಂದ್ರ 

       ಬೆಂಗಳೂರು ವಿಶ್ವವಿದ್ಯಾಲಯ

              ಬೆಂಗಳೂರು ೫೬೦೦೫೬


ಸೋಮವಾರ, ಮೇ 5, 2025

              ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯದ ವೈಶಿಷ್ಟ್ಯಗಳು

                                                         ಡಾ. ಸಿ.ನಾಗಭೂಷಣ

 

 ಆಧುನಿಕಪೂರ್ವ ಕಾಲಘಟ್ಟದಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಮಾಡುವ ಮೂಲಕ ತುಮಕೂರು ಜಿಲ್ಲೆಯ ಸಾಹಿತ್ಯವು ತನ್ನದೆ ಆದ ವೈಶಿಷ್ಟ್ಯತೆಯನ್ನು ಪಡೆದಿದೆ ಮತ್ತು ಕೆಲವು ಸಂಗತಿಗಳಲ್ಲಿ ಮೊದಲಾಗಿದೆ. ಬಹುಮಟ್ಟಿಗೆ ಸಾಹಿತ್ಯದ ವಿವಿಧ ಪ್ರಕಾರಗಳಾದ ಚಂಪು, ಕಂದ, ವೃತ್ತ, ರಗಳೆ, ಷಟ್ಪದಿ, ಸಾಂಗತ್ಯ ವಚನ, ಸ್ವರವಚನ, ಕೀರ್ತನೆ, ನಾಮಾವಳಿ, ತಾರಾವಳಿ, ಅಷ್ಟಕ, ದಂಡಕ, ಶತಕ, ಸಂಕಲನ, ಟೀಕೆ, ವ್ಯಾಖ್ಯಾನ, ಶೂನ್ಯಸಂಪಾದನೆ, ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಈ ಜಿಲ್ಲೆಯ ಕವಿಗಳು ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಆಧುನಿಕ ಕಾಲದಲ್ಲಿಯು ತುಮಕೂರು ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೆ ಮಹಾನ್ ಸಾಹಿತಿಗಳನ್ನು ನೀಡುವುದರ ಮೂಲಕ ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ. 

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಲ್ಪತರು ನಾಡಿನ ಸಾಹಿತ್ಯವು ಆಧುನಿಕ ಪೂರ್ವ ಕಾಲಘಟ್ಟದಲ್ಲಿ, ಅದರಲ್ಲಿಯೂ ದೇಸಿ ಸಾಹಿತ್ಯ ಪ್ರಕಾರದಲ್ಲಿ ತನ್ನದೇ ಆದ ಕೆಲವು ಹೆಗ್ಗಳಿಕೆಗಳನ್ನು, ವೈಶಿಷ್ಟ್ಯವನ್ನು ಪಡೆದಿದೆ.

 1. ಜಿಲ್ಲೆಯು ಕನ್ನಡ ಸಾಹಿತ್ಯಕ್ಕೆ ಎರಡು ಐತಿಹಾಸಿಕ ಕಾವ್ಯಗಳನ್ನು ಕೊಡುಗೆಯಾಗಿ ನೀಡಿದೆ, ನಂಜುಂಡ ಕವಿಯ ಕುಮಾರ ರಾಮನ ಸಾಂಗತ್ಯ, ಲಿಂಗಣ್ಣ ಕವಿಯ ಕೆಳದಿನೃಪ ವಿಜಯ, ಗೋವಿಂದ ವೈದ್ಯನ ಕಂಠೀರವ ನರಸರಾಜ ವಿಜಯ ಮೊದಲಾದ ಐತಿಹಾಸಿಕ ಕಾವ್ಯಗಳ ಸಾಲಿಗೆ ತುಮಕೂರು ಜಿಲ್ಲೆಯ ಮಲ್ಲಿಕಾರ್ಜುನ ಕವಿಯ ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯನ್ನು ನಾವು ಪರಿಗಣಿಸ ಬಹುದಾಗಿದೆ. ಅದೇ ರೀತಿ ಮದ್ದಗಿರಿ ನಂಜಪ್ಪನ ಕೃಷ್ಣರಾಜ ವಿಲಾಸ ಕಾವ್ಯವು ಸಹ ಚಾರಿತ್ರಿಕ ಮತ್ತು ಸ್ತುತಿಕಾವ್ಯವಾಗಿದ್ದು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ ಇಲ್ಲಿ ಕವಿಯು ತನ್ನ ಆಶ್ರಯದಾತನಾದ ಕೃಷ್ಣರಾಜ ಒಡೆಯರ ಸ್ತುತಿಯನ್ನು ಮಾಡುವುದರ ಜೊತೆಗೆ ರಾಜನ ಸಾಮ್ರಾಜ್ಯದ ಸಂಪೂರ್ಣವಾದ ವಿವರವನ್ನು ಕೊಡುವುದರ ಮೂಲಕ ಇದು ಸಾಹಿತ್ಯ ಕೃತಿಯಾಗುವುದರೊಂದಿಗೆ ಐತಿಹಾಸಿಕವಾದ ಅಂಶಗಳನ್ನೂ ಕೂಡ ತಿಳಿಯಪಡಿಸುತ್ತದೆ. ರಾಜನ ದಿನಚರಿ, ರಾಜೋಪಚಾರಗಳು, ಮೆರವಣಿಗೆ, ರಾಜನ ಸಭಾಪ್ರವೇಶ, ರಾಜನೀತಿ, ಮೆರವಣಿಗೆ, ಪುತ್ರೋತ್ಸವ ಮೊದಲಾದವುಗಳನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾನೆ.

2.ತೋಂಟದ ಸಿದ್ಧಲಿಂಗಯತಿಗಳು ವಚನ ಪರಂಪರೆಯಲ್ಲಿ ವಚನ ರಚನೆ ಹಾಗೂ ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ಅಳಿದುಳಿದ ವಚನಗಳನ್ನು ಸಂರಕ್ಷಿಸುವ ಸಂಕಲಿಸುವ, ಸಂಪಾದಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. ಆಕರ, ವಸ್ತು ವಿನ್ಯಾಸ, ನಿರೂಪಣಾ ಕ್ರಮ, ನಾಟಕೀಯತೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿರುವ ಮತ್ತು ಸಿದ್ಧವಚನಗಳನ್ನು ಬಳಸಿಕೊಂಡು ಸಂವಾದರೂಪದಲ್ಲಿ ಹೆಣೆದ ಹೊಸ ರೀತಿಯ ಸಾಂಸ್ಕೃತಿಕ ಪಠ್ಯಗಳು ಎಂದು ವಿದ್ವಾಂಸರಿಂದ ಕರೆಯಿಸಿಕೊಂಡು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಶೂನ್ಯಸಂಪಾದನೆಗಳು ವಚನ ಸಂಕಲನ ಗ್ರಂಥಗಳಲ್ಲಿಯೇ ಮಹತ್ತರವಾದವುಗಳು. ಇವು ತುಮಕೂರು ಜಿಲ್ಲೆ ಹೆಮ್ಮೆಯ ಕೊಡುಗೆಗಳು ಎಂದು ಹೇಳುವಲ್ಲಿ ಸಂತಸ ಎನಿಸುತ್ತದೆ. ಇವು ತೋಂಟದ ಸಿದ್ಧಲಿಂಗರ ಶಿಷ್ಯರಾದ ಗುಮ್ಮಳಾಪುರದ ಸಿದ್ದಲಿಂಗಯತಿ, ಗೂಳೂರು ಸಿದ್ಧವೀರಣ್ಣೊಡೆಯರ ಮೂಲಕ ಪರಿಷ್ಕರಣೆಗೊಂಡು ಪ್ರಸಿದ್ಧಿಯನ್ನು ಪಡೆದವುಗಳಾಗಿವೆ. ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯನ್ನು ಪರಿಷ್ಕರಿಸಿದ ನಂತರದ ಶೂನ್ಯಸಂಪಾದನಕಾರರು ತುಮಕೂರು ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರು ಆಗಿರುವುದು. ಈ ಹಿನ್ನೆಲೆಯಲ್ಲಿ ತುಮಕೂರು ದ್ವಿತೀಯ ಘಟ್ಟದ ವಚನ ಸಾಹಿತ್ಯ ಚಟುವಟಿಕೆಗಳಲ್ಲಿ ಗಮನೀಯ ಪಾತ್ರವಹಿಸಿದೆ. ಇನ್ನೊಂದು ಅಂಶ ಎಂದರೆ ಪಾಶ್ಚಾತ್ಯರಿಂದ ಭಾರತಕ್ಕೆ ಆಗಮಿಸಿತೆಂದು ಹೇಳಲಾಗುವ ಗ್ರಂಥ ಸಂಪಾದನೆಯ ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ ಹಾಗೂ ವಿಶ್ಲೇಷಣೆ ಎಂಬ ಮೂರು ಹಂತಗಳ ಪರಿಚಯ 16ನೇ ಶತಮಾನದಲ್ಲಿಯ ತುಮಕೂರು ಜಿಲ್ಲೆಯ ಸಂಕಲನಕಾರರಿಗೆ ತಿಳಿದಿದ್ದಿತು ಎಂಬುದು. ಅಳಿದುಳಿದ ವಚನರಾಶಿಯನ್ನು ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ ಜೋಡಿಸುವಲ್ಲಿ, ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ ಸಂಪಾದಿಸುವಲ್ಲಿ, ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ ಅನುಸರಿಸಿದ್ದಾರೆ. ಇದರಿಂದಾಗಿ ಪಾಶ್ಚಾತ್ಯರ ಮೂಲಕ ಈ ತತ್ವಗಳು ನಮ್ಮಲ್ಲಿಗೆ ಪ್ರವೇಶಿಸುವುದಕ್ಕಿಂತ ಪೂರ್ವದಲ್ಲಿಯೇ ತುಮಕೂರು ಜಿಲ್ಲೆಯ ನಮ್ಮ ಸಂಕಲನಕಾರರು ಮತ್ತು ಸಂಪಾದಕರಿಗೆ ತಿಳಿದಿದ್ದವು ಎಂಬುದು ದಾಖಲಾರ್ಹವಾಗಿದೆ.

3. 17ನೇ ಶತಮಾನದಲ್ಲಿ ತುಮಕೂರು ಪರಿಸರದ ಬಿಜ್ಜಾವರದ ಮಹಾನಾಡುಪ್ರಭುಗಳು ಅದರಲ್ಲಿಯು ಇಮ್ಮಡಿ ಚಿಕ್ಕಪ್ಪಗೌಡರ ಆಳ್ವಿಕೆಯ ಕಾಲದಲ್ಲಿ ತಮ್ಮ ಅರಮನೆಯಲ್ಲಿ ಶಾರದಾ ಭಂಡಾರವನ್ನು ಹೊಂದಿದ್ದರು ಎಂಬ ಸಂಗತಿ ಐತಿಹಾಸಿಕ ಮಹತ್ವ ಪಡೆದಿದೆ. ತಮ್ಮ ಅರಮನೆಯ ಶಾರದಾ ಭಂಡಾರಕ್ಕೆ ಬೇರೆಯವರಿಂದ ಪ್ರತಿಮಾಡಿಸಿ ಸೇರಿಸುತ್ತಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಮಹಾನಾಡು ಸಂಸ್ಥಾನದ ಶಾರದ ಭಂಡಾರದಲ್ಲಿ ಹಸ್ತಪ್ರತಿಗಳ ಬಗೆಗೆ ಸಂಬಂಧಿಸಿದ ಹಾಗೆ ಕ್ರಿ.ಶ.1601ರಿಂದ1621 ಕಾಲಾವಧಿಯಲ್ಲಿ 7 ಹಸ್ತಪ್ರತಿಗಳ ಪುಷ್ಟಿಕೆಗಳು ಲಭ್ಯವಿವೆ. ಸಾನಂದ ಪುರಾಣ, ಭರತೇಶ ಚರಿತೆ, ಪಂಚಪ್ರಕಾರ ಗದ್ಯ, ಪಾರಮಾರ್ಥಿಕ ಪುಸ್ತಕ ಸ್ತೋತ್ರಭಾಷ್ಯಗಳ ಪುಸ್ತಕ, ಆರಾಧ್ಯ ಚಾರಿತ್ರೆ, ಜನವಶ್ಯ ಕೃತಿಗಳನ್ನು ಬರೆಸಿ ಶಾರದ ಭಂಡಾರಕ್ಕೆ ಸೇರಿಸಿದ್ದರ ಬಗೆಗೆ ಪುಷ್ಪಿಕೆಗಳಿಂದ ತಿಳಿದು ಬರುತ್ತದೆ. ಮಹಾನಾಡ ಪ್ರಭುಗಳ ಒಡ್ಡೋಲಗದಲ್ಲಿ ಕವಿ-ಗಮಕಿ-ವಾದಿ-ವಾಗ್ಮಿಗಳ ಕೂಟವಿದ್ದುದನ್ನು ಹಾಗೂ ಕುಮಾರ ರಾಮನ ಸಾಂಗತ್ಯದ ಓಲೆಕಟ್ಟೊಂದನ್ನು ತಂದು ರಾಜನ ಆಸ್ಥಾನದಲ್ಲಿ ವಾಚಿಸಿದ ಸಂದರ್ಭವೊದನ್ನು ಇಮ್ಮಡಿ ಚಿಕ್ಕಭೂಪಾಲನ ಕೃತಿಯು ಪ್ರಸ್ತಾಪಿಸಿದೆ. 

 4. ತುಮಕೂರು ಜಿಲ್ಲೆಗೆ ಸಂಬಂಧಿಸಿದ ಹಸ್ತಪ್ರತಿಗಳಲ್ಲಿಯ ಕೆಲವು ಪುಷ್ಟಿಕೆಗಳಲ್ಲಿಯ ಉಲ್ಲೇಖಗಳು ಕವಿಗಳ ಹೆಸರನ್ನು ಕಾವ್ಯಗಳ ಕಾಲವನ್ನು ಅರ್ಥೈಸಲು ಸಹಕಾರಿಯಾಗಿವೆ.ಈ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿಯ ಸಂಗತಿಗಳು ಸಾಹಿತ್ಯ ಚರಿತ್ರೆಯ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸಿವೆ. 

 ಪ್ಲವ ಸಂವತ್ಸರ ಮಾಘಶುದ್ಧ 15ರಲ್ಲು ಚಿಗನಾಯಕನಹಳ್ಳಿ ಲಿಂಗಪ್ಪನು ಮಹಾರಾಜೇಶ್ರೀ ಚೆನ್ನಾಜಮ್ಮನವರಿಗೆ ಪಾರಮಾರ್ಥಿಕದ ಪುಸ್ತಕ ಬರೆದು ಒಪ್ಪಿಸಿದಂಥಾ ಉಲ್ಲೇಖವು ಚಿಗನಾಯಕನಹಳ್ಳಿ ಲಿಂಗಪ್ಪನು ಕ್ರಿ.ಶ.1607ರಲ್ಲಿ ಪಾರಮಾರ್ಥಿಕ ಪುಸ್ತಕವನ್ನು ಪ್ರತಿಮಾಡಿ ಮಹಾರಾಜೇ ಶ್ರೀಚೆನ್ನಮ್ಮಾಜಿಯವರಿಗೆ ಒಪ್ಪಿಸಿದ್ದನ್ನು ತಿಳಿಸುತ್ತದೆ. ಪಾರಮಾರ್ಥಿಕದ ಪುಸ್ತಕ ಸರ್ವಜ್ಞನ ವಚನ ಸಂಕಲನ ವಾಗಿದ್ದು ಇದರಲ್ಲಿ 77ಪದ್ಧತಿಗಳಿದ್ದು 937 ತ್ರಿಪದಿಗಳಿವೆ, ಹಸ್ತಪ್ರತಿ ತಜ್ಞರಾಗಿದ್ದ ದಿವಂಗತ ಎಸ್.ಶಿವಣ್ಣನವರ ಪ್ರಕಾರ ಈ ಪುಷ್ಪಿಕೆಯಲ್ಲಿಯ ಉಲ್ಲೇಖವು ಕಾಲೋಲ್ಲೇಖವಿರುವ ಸರ್ವಜ್ಞನ ಕೃತಿಯ ಪ್ರತಿಗಳಲ್ಲಿ ಅತ್ಯಂತ ಪ್ರಾಚೀನವಾದ ಕೃತಿಯಾಗಿದ್ದು, ಈ ಪ್ರತಿಯಲ್ಲಿಯ ಕಾಲದ ಉಲ್ಲೇಖವು ಸರ್ವಜ್ಞನ ಕಾಲನಿರ್ಣಯಕ್ಕೆ ಒಂದು ಮೈಲುಗಲ್ಲಾಗಿದೆ. 

 ಸ್ವಸ್ತಿಶ್ರೀ ವಿಜಯಾಭ್ಯುದಯ ಸಾಲಿವಾಹನ ಶಕ ವರುಷಂಗಳು.. ನೆಯ ಕ್ರೋಧ ಸಂವತ್ಸರ ಭಾದ್ರಪದ ಶುದ್ಧ 12ರಲ್ಲು ಮುದಿಯಪ್ಪ ನಾಯಕರ ಬಂಟನಾದಂಥ ಗಡೆಯ ಪಾಪಯ್ಯನ ಸುಪುತ್ರ ಕೃಷ್ಣಯ್ಯನು ಬರೆದು ಸಮರ್ಪಸಿದ ಪುಣ್ಯ ಪುರಾತನರ ಶಾಸ್ತ್ರ ಪುಸ್ತಕ, ಹಂಪೆಯ ಹರೀಶ್ವರ ದೇವರು ವಿರಚಿಸಿದ ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ ಮಂಗಳಾಮಹಾ ಶ್ರೀ ಶ್ರೀ ಶ್ರೀ. ಈ ಪುಷ್ಪಿಕೆಯಲ್ಲಿ ಇಮ್ಮಡಿ ಮುದಿಯಪ್ಪ ನಾಯಕನು ಕೃಷ್ಣಯ್ಯ ಎಂಬ ಪ್ರತಿಕಾರನಿಂದ ಪುರಾತನರನ್ನು ಕುರಿತ ಕೃತಿಯನ್ನು ಪ್ರತಿ ಮಾಡಿಸಿದ್ದಾನೆ. ಕುತೂಹಲಕರ ಸಂಗತಿ ಎಂದರೆ ಇಲ್ಲಿಯ ಹೇಳಿಕೆಯಲ್ಲಿಯ ಹರೀಶ್ವರ ದೇವರು ವಿರಚಿಸಿದ ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ ಎಂಬುದು ಹರಿಹರ ಕವಿಯು ರಚಿಸಿರುವ ರಗಳೆಗಳ ಸಂಖ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ.

 ಬೇಡತ್ತೂರಿನ ಡಾ.ರಾಮಾಂಜನೇಯ ಅವರ ಮನೆಯಲ್ಲಿದ್ದ ಪ್ರಭುಲಿಂಗಲೀಲೆಯ ಹಸ್ತಪ್ರತಿಯ ಪುಷ್ಪಿಕೆಯಲ್ಲಿಯ ಹಂಪೆಯ ಚಾಮರಸೈನವರು ನಿರೂಪಿಸಿದ ಪ್ರಭುಲಿಂಗಲೀಲೆ ಬರೆಯುವುದಕ್ಕೆ ನಿರ್ವಿಘ್ನಮಸ್ತು ಹೇಳಿಕೆಯ ಪ್ರಕಾರ ಪ್ರಭುಲಿಂಗಲೀಲೆಯ ಕರ್ತೃ ಚಾಮರಸ, ಆತ ಹಂಪೆಯವನ್ನು ಎಂಬುದು ನಮಗೆ ಅಧಿಕೃತವಾಗಿ ಮನದಟ್ಟಾಗುತ್ತದೆ.

5. ಕನ್ನಡ ನಾಡಿನ ಕವಿಗಳ ಸಾಹಿತ್ಯ ಚಟುವಟಿಕೆಗಳನ್ನು ಪರಿಶೀಲಿಸಿದರೆ ತುಮಕೂರು ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಯಾವ ಭಾಗದಲ್ಲಿಯೂ ಒಂದೇ ಮನೆತನದ ಕವಿಗಳು ಮನೆತನದುದ್ದಕ್ಕೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡುಬಂದಿರುವುದಿಲ್ಲ. ಜಿಲ್ಲೆಯ ಅಮರಗೊಂಡ (ಗುಬ್ಬಿ)ದ 1. ಅಮರಗೊಂಡ ಮಲ್ಲಿಕಾರ್ಜುನ ತಂದೆ, 2. ಗುಬ್ಬಿಯ ಮಲ್ಲಣ, 3. ಗುಬ್ಬಿಯ ಮಲ್ಲಣಾರ್ಯ, 4. ಶಾಂತೇಶ, 5, ಚೇರಮಾಂಕ 6. ಅಮರಗುಂಡದ ಮಲ್ಲಿಕಾರ್ಜುನನ ವಂಶೋದ್ಭವನಾದ ಶಾಂತಲಿಂಗನ ಮಗನಾದ ಸಾಸಲದ ಚಿಕ್ಕಣಾರಾಧ್ಯ ಕವಿಗಳು ಒಂದೇ ಮನೆತನದವರಾಗಿದ್ದು ಸಾಹಿತ್ಯ ಕೃಷಿ ನಡೆಸಿದ್ದಾರೆ.

7. ಜಿಲ್ಲೆಯ ಶಂಕರದೇವ, ವಿರಕ್ತ ತೋಂಟದಾರ್ಯ, ಮಲ್ಲಿಕಾರ್ಜುನ ಕವಿ, ಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳು, ಚಂದ್ರಸಾಗರವರ್ಣಿಯಂತಹ ಕವಿಗಳು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾವ್ಯ ರಚನೆಯನ್ನು ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.

 8. ಹರಿಹರನಂತಹ ಮಹಾಕವಿ ಹುಟ್ಟುಹಾಕಿದ ದೇಸೀಯ ಛಂದೋ ಪ್ರಕಾರಗಳಲ್ಲಿ ಒಂದಾದ ರಗಳೆ ಸಾಹಿತ್ಯದ ಪ್ರಕಾರವನ್ನು ಹರಿಹರನ ನಂತರ ಬಂದಂತಹ ಕವಿಗಳು ಈ ಪ್ರಕಾರವನ್ನು ಅಷ್ಟಾಗಿ ಮುಂದುವರಿಸಲಿಲ್ಲ ಎಂಬ ಮಾತು ಸಾಹಿತ್ಯ ಚರಿತ್ರೆಯಲ್ಲಿ ಅಲ್ಲಲ್ಲಿ ಕೇಳಿಬರುತ್ತಿತ್ತು, ಹರಿಹರನ ನಂತರ ಅವನಷ್ಟು ವಿಪುಲವಾಗಿ ಮತ್ತು ಸಮರ್ಥವಾಗಿ ಮುಂದುವರೆಸಿಕೊಂಡು ಅಧಿಕ ಸಂಖ್ಯೆಯಲ್ಲಿ ರಗಳೆ ಸಾಹಿತ್ಯ ಪ್ರಕಾರದಲ್ಲಿ ಕಾವ್ಯಗಳನ್ನು ರಚಿಸಿರುವ ಶಂಕರದೇವ, ವಿರಕ್ತ ತೋಂಟದಾರ್ಯ, ಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳು ಸೋಸಲೆರೇವಣಾರಾಧ್ಯ, ನಿಡುಮಾಮಿಡಿ ಕರಿಸಿದ್ದಯ್ಯ ಕವಿಗಳು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಶಂಕರದೇವನು ಸುಮಾರು ಐವತ್ತರಿಂದ ಅರವತ್ತು ರಗಳೆಗಳನ್ನು ರಚಿಸಿದ್ದಾನೆ. ಆದ್ದರಿಂದ ರಗಳೆ ಸಾಹಿತ್ಯ ಪ್ರಕಾರವನ್ನು ಹೆಚ್ಚು ವ್ಯಾಪಕವಾಗಿ ಬಳಸಿದ ಕೀರ್ತಿ ತುಮಕೂರು ಜಿಲ್ಲೆಯ ರಗಳೆ ಕವಿಗಳಿಗೆ ಸಲ್ಲುತ್ತದೆ. 

8. ಸಾಂಗತ್ಯ ಪ್ರಕಾರದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ರಚಿತವಾಗಿರುವ ವೈದಿಕ ರಾಮಾಯಣಗಳಲ್ಲಿ, ಶೇಷಗಿರಿ ವಿರಚಿತ ಶ್ರೀರಾಮ ಚರಿತೆಯು ಮೊದಲನೆಯ ವೈದಿಕ ರಾಮಾಯಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕವಿಯು ವೈದಿಕ ರಾಮಾಯಣದಲ್ಲಿ ಬುದ್ಧನ ಹೆಸರನ್ನು ಸೇರಿಸಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಶ್ರೀರಾಮನ ಚರಿತ್ರೆಯನ್ನು ಜನರು ಕೇಳಿ, ಓದಿ ಆನಂದಿಸಲಿ ಹಾಗೂ ರಾಮನ ಕತೆಯಲ್ಲಿ ತಲ್ಲೀನವಾಗಲಿ ಎಂದು ಕವಿಯು ಆಶಿಸಿದ್ದಾನೆ. 

9. ಪಾಲ್ಕುರಿಕೆ ಸೋಮನಾಥನ ಬಸವಪುರಾಣದ ಪರಂಪರೆಯಲ್ಲಿ ಬರುವ ಭೀಮಕವಿ ಮತ್ತು ಷಡಕ್ಷರಕವಿಗಳಿಗಿಂತ ಭಿನ್ನವಾಗಿ ಗರುಣಿಯ ಬಸವಲಿಂಗ ಕವಿಯು ಬಸವಣ್ಣನವರನ್ನು ಕುರಿತು ಹಾಡುಗಬ್ಬ ಪ್ರಕಾರವಾದ ಸಾಂಗತ್ಯ ಪ್ರಕಾರದಲ್ಲಿ ಬಸವೇಶ್ವರನ ಕಾವ್ಯವನ್ನು ರಚಿಸಿದ್ದಾನೆ. ಗರುಣಿ ಬಸವಲಿಂಗನ ಬಸವೇಶ್ವರ ಕಾವ್ಯವು ಸಾಂಗತ್ಯದಲ್ಲಿ ರಚಿತಗೊಂಡಿದ್ದು ಬಸವಣ್ಣನ ಬಗ್ಗೆ ಹೆಚ್ಚಿನ ಸಂಗತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಗರುಣಿ ಬಸವಲಿಂಗನು ಈ ಕೃತಿಯಲ್ಲಿ ಬಸವಣ್ಣನನ್ನು ಒಬ್ಬ ಪವಾಡಪುರುಷನಾಗಿ ನೋಡುವುದಕ್ಕಿಂತ ಹೆಚ್ಚಿನದಾಗಿ ಒಬ್ಬ ಐತಿಹಾಸಿಕ ವ್ಯಕ್ತಿಯನ್ನಾಗಿ ಚಿತ್ರಿಸುವ ಪ್ರಯತ್ನವನ್ನು ಮಾಡಿದ್ದಾನೆ. 

10.ಕನ್ನಡ ಟೀಕಾ ಸಾಹಿತ್ಯ ಮತ್ತು ಸಂಕಲನ ಸಾಹಿತ್ಯದಲ್ಲಿ ತುಮಕೂರು ಜಿಲ್ಲೆ ಕೊಡುಗೆ ಅಪಾರವಾದುದು. ಇವರುಗಳು ಸಂಸ್ಕೃತ ಕಾವ್ಯಗಳಿಗೆ ಟೀಕು ಮತ್ತು ವ್ಯಾಖ್ಯಾನಗಳನ್ನು ಬರೆಯುವುದರ ಮೂಲಕ ಆಕಾಲಕ್ಕೆ ಕನ್ನಡವನ್ನು ಸಂಸ್ಕೃತದ ಸರಿಸಮಾನವಾದ ಮಟ್ಟಕ್ಕೆ ಕೊಂಡೊಯ್ಯುವ ಮತ್ತು ಕನ್ನಡವನ್ನು ಕಟ್ಟುವ ಕೆಲಸವನ್ನು ಗುಬ್ಬಿಯ ಮಲ್ಲಣ, ಯಾಗಂಟಿ ಚೆನ್ನವೀರ, ಮಲ್ಲಿಕಾರ್ಜುನ ಕವಿ, ವಿರಕ್ತ ತೋಂಟದಾರ್ಯ ಮುಂತಾದ ಟೀಕಾಕಾರರು ಮಾಡಿರುವುದು ಗಮನಾರ್ಹವಾದ ಸಂಗತಿಯಾಗಿದೆ.

11. ಮಧುಗಿರಿಯ ತಿಮ್ಮಾಂಬೆ : ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಒಂದಾದ ತಾರಾವಳಿ ಸಾಹಿತ್ಯವನ್ನು ಕುರಿತು ಕವಿಗಳು ವಿಪುಲ ಸಂಖ್ಯೆಯಲ್ಲಿ ರಚಿಸಿದ್ದರೂ ಸ್ತ್ರೀಯೊಬ್ಬಳು ರಚಿಸಿರುವುದು ಇತ್ತೀಚಿನವರೆಗೂ ಗಮನಕ್ಕೆ ಬಂದಿರಲಿಲ್ಲ. ತಾರಾವಳಿ ಸಾಹಿತ್ಯ ಪ್ರಕಾರದಲ್ಲಿ ಕಾವ್ಯ ರಚಿಸಿರುವ ಏಕೈಕ ಮಹಿಳಾ ಕವಿ. ಕ್ರಿ.ಶ.1700 ರ ಮಧುಗಿರಿ ತಿಮ್ಮಾಂಬೆ. ಈಕೆಯು ತಾರಾವಳಿ ಸಾಹಿತ್ಯ ಪ್ರಕಾರದಲ್ಲಿ `ಮಧುಗಿರಿ ಮಲ್ಲೇಶ್ವರ ಬಿಲ್ವ ವೃಕ್ಷೋತ್ಸವ' ತಾರಾವಳಿಯನ್ನು ರಚಿಸಿ `ತಾರಾವಳಿ ಸಾಹಿತ್ಯ ಪ್ರಕಾರದ ಏಕೈಕ ರಚನಕಾರ್ತಿ' ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ತನ್ನ ಜನ್ಮಭೂಮಿಯಲ್ಲಿ ಜರುಗುವ ಉತ್ಸವವನ್ನು ವರ್ಣಿಸಿದ್ದಾಳೆ. ಈ ಕೃತಿ ಚಿಕ್ಕ ತಾರಾವಳಿ ಕೃತಿಯಾದರೂ ಚೊಕ್ಕವಾಗಿ ಹಿತಮಿತವಾಗಿ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ನಾಟುವಂತೆ ರಚಿತವಾಗಿದೆ. ಈ ಕೃತಿಯು ವೀರಣ್ಣ ರಾಜೂರ ಅವರು ಸಂಪಾದಿಸಿರುವ ತಾರಾವಳಿ ಸಂಪುಟದಲ್ಲಿ ಪ್ರಕಟಗೊಂಡಿದೆ.

12.ಕೇಶಿರಾಜನ ಶಬ್ದಮಣಿದರ್ಪಣಕ್ಕೆ ಎರಡು ಟೀಕೆಗಳು ರಚಿಸಿದ್ದು ಅದರಲ್ಲಿ ನಿಟ್ಟೂರು ನಂಜಯ್ಯನ ಕೇಶಿರಾಜನ ಶಬ್ದಮಣಿ ದರ್ಪಣಕ್ಕೆ ಟೀಕೆಯೇ ಗ್ಯಾರೆಟ್, ಕಿಟೆಲ್, ಡಿ.ಎಲ್.ನರಸಿಂಹಾಚಾರ್ಯಾದಿಯಾಗಿ ತಮ್ಮ ಸಂಪಾದನೆಗೆ ಅನುಸರಿಸಿರುವುದು ಮತ್ತು ಇಂದಿಗೂ ಪ್ರಸಿದ್ಧಿಯನ್ನು ಪಡೆದಿರುವುದು.

6. ಕನ್ನಡ ನವೋದಯ ಸಾಹಿತ್ಯದ ಆರಂಭಕಾಲದ ಸ್ವತಂತ್ರ ಕಾಲ್ಪನಿಕ ಶೃಂಗಾರಾದ್ಭುತವಾದ ವಸ್ತುವನ್ನೊಳಗೊಂಡ ಕಾದಂಬರಿ ಎಂಬ ಕೀರ್ತಿಗೆ ಪಾತ್ರವಾದ ʼಶೃಂಗಾರಚಾತುರ್ಯೋಲ್ಲಾಸಿನಿʼ ಕಾದಂಬರಿ ರಚನಾಕಾರರು ಗುಬ್ಬಿ ಸೋ ಮುರಿಗಾರಾಧ್ಯ.

13.ಕರ್ಣಾಟಕಶಬ್ದ ಮಂಜರಿ :

ಜಿಲ್ಲೆಯ ವಿರಕ್ತ ತೋಂಟದಾರ್ಯರು ಕರ್ನಾಟಕ ಶಬ್ದ ಮಂಜರಿಯಂತಹ ನಿಘಂಟು ಸಂಬಂಧಿ ಕೃತಿಯನ್ನು ರಚಿಸಿದ್ದಾನೆ. ಕರ್ನಾಟಕ ಶಬ್ದ ಮಂಜರಿಯು ವಾರ್ಧಕ ಷಟ್ಪದಿಯಲ್ಲಿದೆ. ಈ ಕಾವ್ಯವು 120 ಪದ್ಯಗಳನ್ನು ಒಳಗೊಂಡಿದೆ. ಹಳಗನ್ನಡ ಪದಗಳಿಗೆ ಅರ್ಥವನ್ನು ತಿಳಿಸುವ ನಿಘಂಟು ರೂಪವಾದ ಗ್ರಂಥವಾಗಿದೆ. “ಅಚ್ಛಗನ್ನಡ ಗೂಢಪದ ತತ್ಸಮಂ ತದ್ಭವಗಳೆಂಬ ಶಬ್ದ ನಾಮಗಳನೋರಂತೆ ವಿರಚಿಸಿದೆನೆಲ್ಲಾ ಕವೀರರುದಾಹರಣಸನ್ಮಾರ್ಗವಿಡಿದು” ಎಂದು ಕವಿ ಹೇಳುತ್ತಾನೆ. 

14. ವೆಂಕಮಾತ್ಯ:

 ತುಮಕೂರು ಜಿಲ್ಲೆಯ ಕೊರಟೆಗೆರೆ ತಾಲ್ಲೂಕಿನ ಅಕ್ಕಿರಾಮಪುರದ ಕವಿಯಾದ ವೆಂಕಮಾತ್ಯನ ಬಗೆಗೆಪ್ರಸ್ತಾಪಿಸಲೇ ಬೇಕಾಗಿದೆ. ಜಿಲ್ಲೆಯಲ್ಲಿ ಬೃಹತ್ ಕಾವ್ಯವನ್ನು ರಚಿಸಿದ ಹೆಗ್ಗಳಿಕೆಗೆ ಈತ ಬಾಜನನಾಗಿದ್ದಾನೆ. ಈತನು ವೆಂಕಮಾತ್ಯ ವಿರಚಿತ ಶ್ರೀ ಮದ್ರಾಮಾಯಣಂ ಎಂಬ ರಾಮಾಯಣ ಕೃತಿಯನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ”ನಾಗಚಂದ್ರನ ಪಂಪರಾಮಾಯಣ,ಕುಮುದೇಂದು ರಾಮಾಯಣ, ಕುಮಾರ ವಾಲ್ಮಿಕಿಯ ತೊರವೆರಾಮಾಯಣ, ಮುಂತಾದವು ಪ್ರಸಿದ್ಧವಾಗಿವೆ. ಪಂಪರಾಮಾಯಣವು ಜೈನಸರಣಿಯನ್ನನುಸರಿಸಿ ಬರೆಯಲ್ಪಟ್ಟಿದೆ. ಇಷ್ಟೆಲ್ಲಾ ರಾಮಾಯಣಗಳಿದ್ದರೂ ಷಟ್ಪದಿಗಳಲ್ಲಿ ಹಿರಿದೆನಿಸಿದ ವಾರ್ಧಕ ಷಟ್ಪದಿಯಲ್ಲಿ ಬರೆದ ರಾಮಾಯಣಗಳಾವುವೂ ಇದುವರೆಗೆ ಪ್ರಕಟವಾಗಿಲ್ಲ. ಮಾತ್ರವಲ್ಲ, ವಾಲ್ಮಿಕಿರಾಮಾಯಣದ ಕಥೆಯನ್ನೇ ಯಥವತ್ತಾಗಿ ಕನ್ನಡಕ್ಕೆ ಕಾವ್ಯರೂಪದಲ್ಲಿ ಪರಿವರ್ತಿಸಿದ ಗ್ರಂಥಗಳಾವೂವೂ ಈತನಕ ಬೆಳಕಿಗೆ ಬಂದಿಲ್ಲ. ಈ ಕೊರತೆಯನ್ನು ನಿವಾರಿಸಲು ಕೈಗೊಂಡ ಪ್ರಯತ್ನದ ಫಲ ರೂಪವಾಗಿ ಕನ್ನಡಿಗರಿಗೆ ಅರ್ಪಿಸಿರುವ ಮೊದಲ ಕೃತಿಯೇ ವೆಂಕಮಾತ್ಯ ವಿರಚಿತ ಶ್ರೀ ಮದ್ರಾಮಾಯಣಂ. ಈ ಸುಂದರಕಾಂಡವು”(ವೆಂಕಮಾತ್ಯಕವಿ ವಿರಚಿತಂ ಶ್ರೀಮದ್ರಾಮಾಯಣಂ ಸುಂದರಕಾಂಡಂ. ಸಂಪಾದಕರು ಟಿ. ಚಂದ್ರಶೇಖರನ್, 1952. ಪು. ಸಂ iii) ಎಂದು ಸಂಪಾದಕರಾದ ಮದ್ರಾಸು ಸರ್ಕಾರದ ಸರ್ಕಾರಿ ಪ್ರಾಚ್ಯ ಹಸ್ತಪ್ರತಿ ಭಂಡಾರದ ಕ್ಯೂರೇಟರ್ ಮತ್ತು ಸಂಪಾದಕರಾದ ಟಿ.ಚಂದ್ರಶೇಖರನ್ ಅವರು ಹೇಳಿದ್ದಾರೆ. 

 ಈ ಕೃತಿಯು 195 ಸಂಧಿ 9865 ಪದ್ಯಗಳನ್ನು ಒಳಗೊಂಡಿದ್ದು ವೆಂಕಮಾತ್ಯನ ರಾಮಾಯಣವೆಂದೆ ಪ್ರಸಿದ್ದವಾಗಿದೆ. ಈ ಕೃತಿಯನ್ನು 1952-62ರ ಅವಧಿಯಲ್ಲಿ ಮದ್ರಾಸ ಸರ್ಕಾರದ ಸರ್ಕಾರಿ ಪ್ರಾಚ್ಯ ಹಸ್ತಪ್ರತಿ ಭಂಡಾರವು ಹಂತ ಹಂತವಾಗಿ ಪ್ರಕಟಿಸಿದೆ. ”ಈ ಕಥೆಯನ್ನಯ ಶಿವನು ಪಾರ್ವತಿಗೆ ಹೇಳಿದಂತೆಯೂ ಆಮೇಲೆ ಸೂತನು ಋಷಿಗಳಿಗೆ ಹೇಳಿದಂತೆಯೂ ತಿಳಿಯುತ್ತದೆ.” ಈ ಕೃತಿಯ ಪ್ರತಿಯೊಂದು ಕಾಂಡದ ಕೊನೆಯಲ್ಲಿ “ ಇದು ರಾಮಚಂದ್ರ ಪಾದಾರವಿಂದ ವಂದನ ಪವನಂದನ ವರಪ್ರಾಸಾದಾಸದಿತ ಸರಸಸಾಹಿತ್ಯ ಸಾಮ್ರಾಜ್ಯ, ರಾಮಪುರೀ ಹಂಪೆಯಾಮಾತ್ಯ ತನೂಭವ ವೆಂಕಾಹ್ವಯ ವಿರಚಿತಮಾದ ಶ್ರೀಮಾದ್ರಾಮಾಯಣ ಮಹಾಪ್ರಬಂಧದೊಳ್….. ಸಮಾಪ್ತಂ” ಎಂದಿದೆ. 

 ತುಮಕೂರು ಜಿಲ್ಲೆಯಲ್ಲಿ 18ನೇ ಶತಮಾನದಿಂದ 20ನೇ ಶತಮಾನದ ಪೂರ್ವಾರ್ಧದಲ್ಲಿ ಎಷ್ಟೋ ಜನ ಸ್ವರವಚನಕಾರರೂ, ಕವಿಗಳು ಆಗಿಹೋಗಿದ್ದಾರೆ. ಅವರ ಉಲ್ಲೇಖ ಎಲ್ಲಿಯೂ ದಾಖಲಾಗದಿರುವುದು ದುರಾದೃಷ್ಟಕರಸಂಗತಿಯಾಗಿದೆ. ಸಿರಿಗನ್ನಡ ಗ್ರಂಥ ಚರಿತ್ರ ಕೋಶದಲ್ಲಿ ಕೆಲವು ಕವಿಗಳ ಉಲ್ಲೇಖ ಮಾತ್ರ ಸಿಗುತ್ತದೆ. ಕೆಲವು ಕವಿಗಳ ಉಲ್ಲೇಖ ಎಲ್ಲಿಯೂ ಸಿಕ್ಕಿಲ್ಲ. ಆದಾಗ್ಯೂ ಎಸ್. ಶಿವಣ್ಣನವರು ಹಸ್ತಪ್ರತಿ ಸಂಗ್ರಹಗಳಲ್ಲಿಯ ಹಸ್ತಪ್ರತಿಗಳ ಪರಿಶೀಲಿಸಿ ಹಾಗೂ ಸ್ವರವಚನ ಸಂಪುಟಗಳಲ್ಲಿ ದಾಖಲಾಗಿರುವ ಜಿಲ್ಲೆಯ ಕವಿಗಳ, ಸ್ವರವಚನಕಾರರ ಹೆಸರುಗಳು ಹಾಗೂ ಕೃತಿಗಳ ಬಗೆಗೆ ಗಮನ ಸೆಳೆದಿದ್ದಾರೆ. ಈ ಕವಿಗಳ ಬಗೆಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಈ ಬಗೆಗೆ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ. ಬಹಳಷ್ಟು ಅನಾಮಧೇಯ ಕವಿಗಳು ಮಧುಗಿರಿ ತಾಲ್ಲೋಕಿನಲ್ಲಿಯೇ ಕಂಡುಬಂದಿರುವುದನ್ನು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ. ಮದ್ದಗಿರಿ ಪದ್ದಯ್ಯ, ಮಧುಗಿರಿ ಬ್ರಹ್ಮಸೂರಿ ಕವಿ (ಭಾವನಾಸ್ತುತಿ, ಸಾಂಗತ್ಯ), ಮಧುಗಿರಿ ಪದುಮಯ್ಯ (ವಿಮಲನಾಥ ಸ್ವಾಮಿ ಪಂಚಕಲ್ಯಾಣ ದ್ವಿಪದಿ), ಮಧುಗಿರಿ ಒಡೆಯ (ಸ್ವರವಚನ) ಮಧುಪುರಿವಾಸ ಮಲ್ಲಿಕಾರ್ಜುನ, ಸ್ವರವಚನ, ಮಿಡಗೇಸಿ ಮುದ್ದಮಲ್ಲ (ಸ್ವರವಚನ) ಇತ್ಯಾದಿ. ಹಾಗೆಯೇ ಜಿಲ್ಲೆಯಲ್ಲಿ ಕವಿಗಳ ಹೆಸರುಗಳು ಅನಾಮಧೇಯವಾಗಿದ್ದು ಅವರು ರಚಿಸಿರುವ ಸ್ವರವಚನಗಳ ಅಂಕಿತ ದೊರೆತಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ನಿಡುಗಲ್ಲು ವೀರಭದ್ರಾಷ್ಟಕ, ಅಮರಕುಂಡ ಮಲ್ಲಿನಾಥಯ್ಯ, ಕರಿಗಿರಿಚೆನ್ನ, ಕರಿಗಿರಿನಾರಸಿಂಹ (ನರಸಿಂಹಾಷ್ಟಕ) ಗುಬ್ಬಿ ಮಲ್ಲೇಶ, ಗುಬ್ಬಿಪುರದ ಮುರಿಗೆ ಚೆನ್ನಬಸವ, ಮಧುಗಿರಿ ಲಿಂಗ, ಮಧುಗಿರಿ ವರನಿಲಯ, ಮಧುಗಿರಿ ಪುರಾವರಧೀಶ್ವರ ಇತ್ಯಾದಿ ಅಂಕಿತಗಳಲ್ಲಿ ಸ್ವರವಚನಗಳನ್ನು ರಚಿಸಿದ್ದಾರೆ. ಈ ಹಾಡುಗಾರರ ಇತಿವೃತ್ತದ ಬಗೆಗೆ ಇನ್ನೂ ಹೆಚ್ಚನ ಸಂಶೋಧನೆ ನಡೆಸಲು ಅವಕಾಶವಿದೆ. ಅದೇರೀತಿ ಗೂಳೂರು ಶಂಕರ ಕವಿಯ ಇತಿವೃತ್ತದ ಬಗೆಗೆ ಬೆಳಕು ಚೆಲ್ಲಬಹುದಾಗಿದೆ. ಈ ಅನಾಮಧೇಯ ಕವಿಗಳು ರಚಿಸಿರುವ ಹಾಡುಗಳು, ಕೃತಿಗಳು ಹಸ್ತಪ್ರತಿಗಳಲ್ಲಿಯೇ ಉಳಿದಿವೆ. ಇವುಗಳನ್ನು ಶೋಧಿಸಿ, ಸಂಪಾದಿಸಿ ಪ್ರಕಟಿಸುವ ಕಾರ್ಯವನ್ನು ಮಾಡ ಬಹುದಾಗಿದೆ. ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಾಗಲೀ, ವೈಯಕ್ತಿಕ ಸಾಹಿತ್ಯ ಚರಿತ್ರೆಯಲ್ಲಾಗಲೀ ಜಿಲ್ಲೆಯ ಆಧುನಿಕ ಪೂರ್ವದ ಕವಿಗಳಿಗೆ ಯೋಗ್ಯಸ್ಥಾನ ದೊರೆತಿಲ್ಲ. ಇದಕ್ಕೆ ಕಾರಣವೂ ಇದೆ. ಜಿಲ್ಲೆಯ ಬಹಳಷ್ಟು ಕವಿಗಳ ಕೃತಿಗಳು ಹಸ್ತಪ್ರತಿಗಳಲ್ಲಿಯೇ ಅಡಗಿ ಕುಳಿತಿರುವುದು. ಮೊದಲಿಗೆ ಜಿಲ್ಲೆಯ ಅಪ್ರಕಟಿತ ಸಾಹಿತ್ಯ ರಾಶಿಯನ್ನು ಶೋಧಿಸಿ ಪ್ರಕಟಿಸುವ ಕಾರ್ಯ ಜರೂರಾಗಿ ಆಗಬೇಕಾಗಿದೆ. ಇಲ್ಲವಾದರೆ ಅಪ್ರಕಟಿತ ಹಾಗೂ ಅಲಕ್ಷಿತ ಸಾಹಿತ್ಯವಾಗಿಯೇ ಉಳಿಯುವ ಸಂಭವ ಇದೆ. ಇತ್ತೀಚಿನ ಸಂಶೋಧನೆಯನ್ನು ಆಧರಿಸಿ ಹೇಳುವುದಾದರೆ ಇತ್ತೀಚಿನ ಸಂಶೋಧನೆಯನ್ನು ಆಧರಿಸಿ ಹೇಳುವುದಾದರೆ ಆಧುನಿಕ ಪೂರ್ವಕಾಲದಲ್ಲಿಯೇ ಸುಮಾರು 800 ಜನ ಪ್ರಮುಖ ಹಾಗೂ ಅಪ್ರಮುಖ ಕವಿಗಳು ಜಿಲ್ಲೆಯಲ್ಲಿ ದಾಖಲಾಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಬಹಳಷ್ಟು ಕವಿಗಳ ಕೃತಿಗಳ ಹೆಸರು ದೊರೆತಿದ್ದು ಪ್ರಕಟವಾಗದೆ ಅಜ್ಞಾತವಾಗಿಯೇ ಉಳಿದಿವೆ. ಅವುಗಳನ್ನು ಶೋಧಿಸುವ ಅಭಿಜ್ಞಿಸುವ ಪ್ರಯತ್ನ ಇನ್ನು ಮುಂದೆಯಾದರೂ ನಡೆಯ ಬೇಕಾಗಿದೆ ಜಿಲ್ಲೆಯ ಕವಿಗಳ ಬಗೆಗೆ ಇನ್ನು ಮುಂದೆಯಾದರೂ ವ್ಯವಸ್ಥಿತ ಅಧ್ಯಯನ ನಡೆದು ಸಾಹಿತ್ಯ ಚರಿತ್ರೆಯಲ್ಲಿ ಸೂಕ್ತವಾದ ಸ್ಥಾನ ಸಿಗಲು ನಾವೆಲ್ಲರೂ ಪ್ರಯತ್ನಿಸ ಬೇಕಾಗಿದೆ. ಜೊತೆಗೆ ಪ್ರಾಚೀನ ಸಾಹಿತ್ಯದಲ್ಲಿ ಕೇವಲ ಕವಿಪ್ರತಿಭೆಯನ್ನಷ್ಟೇ ಗುರುತಿಸದೆ ಅದರಲ್ಲಿರುವ ಮಾನವೀಯತೆ, ಭ್ರಾತೃತ್ವ, ಸಮಾನತೆಯ ಅಂಶಗಳನ್ನು ತಿಳಿಯಬೇಕಾಗಿದೆ. ಆ ಮೂಲಕ ನಮ್ಮ ಪೂರ್ವ ಕವಿಗಳು ಸಮಾಜವನ್ನು ಗ್ರಹಿಸಿದ ಮತ್ತು ಮಾನವೀಯತೆಗೆ ಮಿಡಿದ ಬಗೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಲ್ಲದೆ ನಮ್ಮಕನ್ನಡದ ವಿವಿಧ ಬಗೆಗಳನ್ನು, ಅವುಗಳ ನಡುವೆಯಿರುವ ಒಳ ಸಂಬಂಧಗಳನ್ನು ಶೋಧಿಸಲು ಸಾಧ್ಯವಾಗುತ್ತದೆ. ಬಹುತ್ವದ ಕರ್ನಾಟಕದಂತೆಯೇ ಬಹುತ್ವದ ಸಾಹಿತ್ಯದ ಮೂಲಕಬದುಕಿನ ಮೂಲಸೆಲೆಗಳನ್ನು ಇಂದು ನಾವು ಕಂಡುಕೊಳ್ಳ ಬೇಕಾಗಿದೆ.

 ಆಧುನಿಕ ಕಾಲಘಟ್ಟದಲ್ಲಿಯಂತು ಜಿಲ್ಲೆಯ ಸಾಹಿತ್ಯವು ಸಂಶೋಧನೆ, ಸೃಜನ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ವೈವಿಧ್ಯತೆಯಿಂದ ಕೂಡಿದೆ. ಜಿಲ್ಲೆಯಲ್ಲಿ ಕನ್ನಡವಿದ್ವತ್ ಪರಂಪರೆಯಲ್ಲಿ ಗುರುತಿಸಿಕೊಂಡಿರುವ ಬಿ.ಎಂ.ಶ್ರೀಕಂಠಯ್ಯ, ಬೆಳ್ಳಾವೆ ನಾರಾಣಪ್ಪ, ತೀನಂಶ್ರೀ, ಕೆ.ವೆಂಕಟರಾಮಪ್ಪ, ಸಿ.ಕೆ. ಪರಶುರಾಮಯ್ಯ, ಜಿ.ಬ್ರಹ್ಮಪ್ಪ, ಬೆಳ್ಳಾವೆ ವೆಂಕಟನಾರಾಣಪ್ಪ, ಜಿ.ಎಸ್.ಸಿದ್ಧಲಿಂಗಯ್ಯ, ಬಿ.ನಂ.ಚಂದ್ರಯ್ಯ, ಸಾ.ಶಿ.ಮರುಳಯ್ಯ, ಕಮಲಾ ಹಂಪನಾ, ಬರಗೂರು ರಾಮ ಚಂದ್ರಪ್ಪ, ಎಸ್. ಜಿ. ಸಿದ್ಧರಾಮಯ್ಯ, ವೀ.ಚಿ. ಕೆ.ಬಿ.ಸಿದ್ಧಯ್ಯ, ಕೆ.ಜಿ.ನಾಗರಾಜಪ್ಪ, ಡಿ.ಕೆ.ರಾಜೇಂದ್ರ,ಎಚ್.ಜಿ.ಸಣ್ಣಗುಡ್ಡಯ್ಯ ಕವಿತಾಕೃಷ್ಣ, ಬೀಚನಹಳ್ಳಿ ಕರೀಗೌಡ, ದೊಡ್ಡರಂಗೇಗೌಡ ಪಿ.ವಿ.ನಾರಾಯಣ, ತಿ,ನಂ.ಶಂಕರನಾರಾಯಣ ಜಿ.ರಾಮಕೃಷ್ಣ, ವಡ್ಡಗೆರೆ ನಾಗರಾಜಯ್ಯ, ಬಿ.ಸುನಂದಮ್ಮ, ನಿರುಪಮ, ಎ.ಪಂಕಜ, ಮುಂತಾದ ಸಾಹಿತಿಗಳ ಸೃಜನಶೀಲ ಸಾಹಿತ್ಯ, ಸಂಶೋಧನೆ, ವಿಮರ್ಶೆ ಇತ್ಯಾದಿ ವೈವಿಧ್ಯಮಯ ಸಾಹಿತ್ಯ ಕೃಷಿ ಜಿಲ್ಲೆಯ ಆಧುನಿಕ ಸಾಹಿತ್ಯ ಪರಂಪರೆಯನ್ನು ಮೇಲ್ದರ್ಜೆಗೇರಿಸಿದೆ. ಇತ್ತೀಚಿನ ಯುವ ಕವಿಗಳು, ಮತ್ತು ಬರೆಹಗಾರರು, ಮಹಿಳಾ ಬರೆಹಗಾರ್ತಿಯರ ಸಾಹಿತ್ಯವು ಹೊಸ ದೃಷ್ಟಿಕೋನ, ಹೊಸ ಆಲೋಚನೆಗಳಿಂದ ಕೂಡಿದ್ದು ಸಾಹಿತ್ಯವನ್ನು ಅರ್ಥೈಸುವಲ್ಲಿ ಹೊಸತನವನ್ನು ಕಾಣಬಹುದಾಗಿದೆ. ರಂಗಭೂಮಿಗೆ ಗುಬ್ಬಿ ಕಂಪನಿಯ ಕೊಡುಗೆ ಏನು ಎಂಬುದು ಎಲ್ಲರೂ ತಿಳಿದಿರತಕ್ಕ ಸಂಗತಿಯೇ ಆಗಿದೆ. ಜಿಲ್ಲೆಯ ವೈವಿಧ್ಯಮಯ ಜನಪದ ಸಾಹಿತ್ಯವು ಇಂದು ಜನಪದ ವಿದ್ವಾಂಸರ ಮೂಲಕ ಬೆಳಕು ಕಂಡಿದೆ. ಉಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕಲ್ಪತರು ನಾಡಿನ ಸಾಹಿತ್ಯ ಯಥೇಚ್ಚವಾಗಿದ್ದು, ಕನ್ನಡ ಸಾಹಿತ್ಯ ಚರಿತ್ರೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. 

 ಜಿಲ್ಲೆಯಲ್ಲಿ ಸಾಹಿತ್ಯದವಿಷಯಕ್ಕೆ ಸಂಬಂಧಿಸಿದ ಹಸ್ತಪ್ರತಿಗಳ ಜೊತೆಗೆ ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಅಲಕ್ಷಿತ ಅಥವಾ ಉಪೇಕ್ಷಿತ ಹಸ್ತಪ್ರತಿಗಳು ಬಹಲಷ್ಟು ಲಭ್ಯ ಇವೆ. ಇವುಗಳ ಬಗೆಗೆ ಹೇಳುವುದಾದರೆ, ಕೆಲವೊಂದು ಹಸ್ತಪ್ರತಿ ಭಂಡಾರಗಳಲ್ಲಿ ಸಂಗ್ರಹಗೊಂಡು ಅನಾದಾರಣೆಗೆ ಒಳಗಾಗಿರುವ ಉಪೇಕ್ಷಿತ ಹಸ್ತಪ್ರತಿಗಳೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಈ ಶಾಸ್ತ್ರಕೃತಿಗಳನ್ನು ಜರೂರಾಗಿ ಸಂಪಾದಿಸಿ ಪ್ರಕಟಗೊಳಿಸುವುದರ ಮೂಲಕ ಅವುಗಳಲ್ಲಿ ಹುದುಗಿರುವ ದೇಸಿಸಂಸ್ಕೃತಿಯ ಪರಂಪರೆಯನ್ನು ಶೋಧಿಸ ಬೇಕಾಗಿದೆ. ಉಪೇಕ್ಷಿತ ಹಸ್ತಪ್ರತಿಗಳಲ್ಲಿರುವ ಅಪಾರ ವಿಷಯ ಸಾಮಗ್ರಿಗಳನ್ನು, ಮಾಹಿತಿಗಳನ್ನು ಆಧುನಿಕ ಚಿಂತನಾ ಕ್ರಮಕ್ಕೆ ಅಳವಡಿಸ ಬೇಕಾಗಿದೆ. ಇಲ್ಲಿಯ ಮಾಹಿತಿ ಸಂಪತ್ತನ್ನು ಸಮಕಾಲೀನ ಮೌಲ್ಯಗಳೊಂದಿಗೆ ಸಮೀಕರಿಸುವುದು, ಪ್ರಾಚೀನ ನಂಬಿಕೆ, ವಿಚಾರ, ಮೌಲ್ಯಗಳನ್ನು ಸಂವಾದಕ್ಕೆ ಪ್ರೇರೇಪಿಸುವುದು, ಆಯಾ ಜ್ಞಾನಶಾಸ್ತ್ರಗಳ ಪಾರಂಪರಿಕ ಹಾಗೂ ಸಮಕಾಲೀನ ಕ್ಷೇತ್ರಗಳ ಮೌಲ್ಯ ವಿವೇಚನೆ ಮಾಡುವುದು, ಹಸ್ತಪ್ರತಿ ಸಂಪತ್ತನ್ನು ಇಂದಿನ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ ಅನ್ವಯಿಸುವುದು ಇತ್ಯಾದಿ ಕಾರ್ಯಗಳನ್ನು ಆಯೋಜಿಸಬೇಕಾಗಿದೆ. ಸಾತ್ರೆಯ ಪಟ್ಟಿಯ ವಿವರ ಎಂಬ ಹಸ್ತಪ್ರತಿಯಲ್ಲಿ, ( ಕ.ಹ.ವ.ಸೂ. ಸಂ.9 ಕ್ರ.ಸಂ.103) ಬರುವ ಶ್ರೀ ವೀರಪ್ರದಾಪ ವೀರವೆಂಕಟಪತ್ತಿರಾಯರವರು ಪೃತ್ವಿರಾಜ್ಯಗೈವಲ್ಲಿ ಆಮತು ನರಸರಾಜ ಅಯ್ಯನವರ ನಿರೂಪದಿಂದಿಂದಲ್ಸು ದಳವಾಯಿ ನಂಜರಾಜಯ್ಯನವರು ಶಂಕರ ಭಟ್ಟರಿಗೆ ಕೊಟ್ಟ ಸಾತ್ರೆಯ ಪಟ್ಟಿಉ ಕ್ರಮವೆಂತೆಂದಡೆ ಎಂಬ ಆದಿಯ ಪದ್ಯ ಹಾಗೂ ಅಂತ್ಯದಲ್ಲಿಯ ಆ ತೋಟದ ಫಲಕ್ಕೆ ಬಂದಾಗ ಮೊದಲೊರುಷ ಮಾನ್ಯ ಯರಡನೆ ವರುಷ ಮುಕ್ಕುಪ್ಪೆ ಮೂಱುನೆ ವರುಷ ವಾರ ನಾಲ್ಕನೆ ವರುಷಕ್ಕೆ ಯೆಣಿಸಿಕೊಂಬಲ್ಲಿ ದಶವಿಧ ಮರನ ಕಳಿವವಿವರ ಕೋಡಿ ಕಲ್ಲುಳಿ ಕತೆವಾಲ ಬಾವಿತಡಿ ಬಿಸಿಲ ಹೊಡೆ ಬಿಸಮರ ತಾಟಿ ಪೋಟಿ ತೊಂನ ತುರುಗ ಕಡಲ ಗರಿಕೆ ಯಿಂತೀ ದಶವಿಧದ ಮರನ ಕಳಿದು ದ್ರಷ್ಟಮರ ಸಾವಿರಕ್ಕೆ ಅಡಕೈಕ್ಷವನ್ನು ಸುಲಿವಾಗ ದಶವಿಧದ ಅಡಕೆಯ ಕಳಿವ ವಿವರ ಕಾಟಿ ಪೋಟಿ ಗೋಟು ಗಂಟಿಕೆ ಚಿಲ್ಲು ಹೊಡೆ ಹುಣುಬು ತೊಂನ್ನ ಕಡಲ ಗರಿಕೆ ಯಿಂತೀ ದಶವಿಧದ ಅಡಕೆಯಂ ಎಂಬ ವಿವರದಲ್ಲಿ ದಶವಿಧ ಅಡಕೆಯ ವಿವರ ಅಡಿಕೆ ತೋಟವನ್ನು ಬೆಳಸಿ ಅನುಭವಿಸುವ ಷರತ್ತುಗಳ ವಿವರವನ್ನು ಆರ್ಥಿಕ ಹಾಗೂ ವ್ಯವಹಾರಿಕ ಒಪ್ಪಂದದ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಗ್ರಹಿಸ ಬಹುದಾಗಿದೆ. ಇಂದು ಉಪೇಕ್ಷಿತ ಹಸ್ತಪ್ರತಿಗಳು ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಹಸ್ತಪ್ರತಿಗಳಲ್ಲಿರುವ ಮಾಹಿತಿಯನ್ನು ನಾವು ಪ್ರಾಯೋಗಿಕವಾಗಿ ಆಚರಣೆಗೆ ತರಬೇಕಾಗಿದೆ. ಉಪೇಕ್ಷಿತ ಹಸ್ತಪ್ರತಿಗಳಲ್ಲಿಯ ವಿವರಗಳನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ ಪ್ರಶ್ನೆ. ಅವರು ಏನ್ಹೇಳಿದ್ದಾರೆ ಅದನ್ನು ಮೊದಲು ಆಚರಣೆಗೆ ತರಲು ಪ್ರಯತ್ನಿಸಬೇಕು. ಅದು ದೇಸಿ ಪದ್ಧತಿಯೇ ಇರಬಹುದು. ಅದನ್ನು ಪರೀಕ್ಷಾರ್ಥವಾಗಿಯಾದರೂ ಅನುಸರಿಸಬೇಕಾಗಿದೆ. ಆ ಹಿನ್ನಲೆಯಲ್ಲಿ ನಾವು ಉಪೇಕ್ಷಿತ ಹಸ್ತಪ್ರತಿಗಳಲ್ಲಿರುವ ಮಾಹಿತಿ ಸಂಪತ್ತನ್ನು ಒಂದು ರೀತಿ ಜನತೆಯ ಕಲ್ಯಾಣದ ಹಿನ್ನಲೆಯಲ್ಲಿ ಬಳಸಿಕೊಳ್ಳುವತ್ತ ಗಮನಹರಿಸಬೇಕಾಗಿದೆ. ಇಂದು ನಮ್ಮ ಪರಂಪರೆಯ ದೇಸಿಸಂಸ್ಕೃತಿಯನ್ನು ಗುರುತಿಸಿ ಅದನ್ನು ಉಳಿಸಿ ಬೆಳಸುವುದರ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುವ ತುರ್ತು ಇಂದು ನಮ್ಮೆಲ್ಲರ ಪ್ರಮುಖ ಹೊಣೆಯಾಗಿದೆ. ಒಟ್ಟಾರೆ ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯವು ಅನೇಕ ವೈಶಿಷ್ಟ್ಯಗಳಿಂದ ಕೂಡಿದ್ದು ಕನ್ನಡ ಸಾಹಿತ್ಯ ಚರಿತ್ರೆಯ ಪರಿಧಿಯನ್ನು ವಿಸ್ತರಿಸಲು ಆಕರಗಳನ್ನು ಒದಗಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.                                            

 ಪರಾಮರ್ಶನ ಕೃತಿಗಳು:   

೧.  ಕನ್ನಡ ಸಾಹಿತ್ಯ ಚರಿತ್ರೆ,  ರಂ.ಶ್ರೀ.ಮುಗಳಿ  ಪ್ರ: ಉಷಾ ಸಾಹಿತ್ಯ ಮಾಲೆ, ಮೈಸೂರು. 1971

೨.  ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ.೪-೬, ಸಂ.ಜಿ.ಎಸ್.ಶಿವರುದ್ರಪ್ಪ

      ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೮.

೩.ಮಹಾನಾಡ ಪ್ರಭುಗಳು ( ಬಿಜ್ಜಾವರ – ಮಧುಗಿರಿ ವೀರಶೈವ ಅರಸುಮನೆತನಗಳು) 

    ಸಂ:ಆರ್ .ಬಸವರಾಜು, ಎಸ್ ಪರಮಶಿವಮೂರ್ತಿ, ನೊಳಂಬ ವೀರಶೈವ ಸಂಘ, ಬೆಂಗಳೂರ. 1995.  

೪.ಎನ್. ಯೋಗೀಶ್ವರಪ್ಪ‌: ಕಲ್ಪಶೋಧ, ಪ್ರಗತಿ ಗ್ರಾಫಿಕ್ಸ್‌, ಬೆಂಗಳೂರು, ೨೦೧೨

೫. ಸಿ.ನಾಗಭೂಷಣ 

    ೧. ಶರಣಸಾಹಿತ್ಯಸಂಸ್ಕೃತಿ ಕೆಲವು ಅಧ್ಯಯನಗಳು ಕನ್ನಡ ಸಾಹಿತ್ಯಪರಿಷತ್,   ಬೆಂಗಳೂರು -2000

    ೨. ಸಾಹಿತ್ಯ-ಸಂಸ್ಕೃತಿ ಹುಡುಕಾಟ ಅಮೃತ ವರ್ಷಿಣಿ ಪ್ರಕಾಶನ, ಯರಗೇರ - ರಾಯಚೂರು, 2002

    ೩. ತೋಂಟದ ಸಿದ್ಧಲಿಂಗೇಶ್ವರ, ಶ್ರೀ.ಸಿದ್ಧಲಿಂಗೇಶ್ವರ ಪ್ರಕಾಶನ   ಸರಸ್ವತಿ ಗೋದಾಮ,     ಗುಲಬರ್ಗಾ- 2006    

    ೪. ವೀರಶೈವ ಸಾಹಿತ್ಯ-ಸಂಸ್ಕೃತಿ: ಕೆಲವು ಒಳನೋಟಗಳುವಿಜೇತ ಪ್ರಕಾಶನ,ಗದಗ-2008, 

    ೫. ಶರಣ ಸಾಹಿತ್ಯ ದೀಪಿಕೆ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ 2017   

೬. ಎಸ್.ಶಿವಣ್ಣ, ಬಿಡುಮುತ್ತು (ಸಂಶೋಧನಾ ಲೇಖನಗಳು)

    ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು,೨೦೦೪

೭. ಎಸ್. ವಿದ್ಯಾಶಂಕರ ವೀರಶೈವ ಸಾಹಿತ್ಯ ಚರಿತ್ರೆಯ೬ಸಂಪುಟಗಳು ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೧೪, ೨೦೧೫.

೮. ಜಯಮಂಗಲಿ ೬೯ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ ಸಂ.ಡಿ.ಎನ್.ಯೋಗೀಶ್ವರಪ್ಪ, - ಕನ್ನಡ ಸಾಹಿತ್ಯ ಪರಿಷತ್ತು . ಬೆಂಗಳೂರು, ೨೦೦೨

೯. ಕಲ್ಪಸಿರಿ - ಅಖಿಲ ಭಾರತ 69 ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರು. ಸಂ. ಡಾ. ಬಿ ನಂಜುಂಡಸ್ವಾಮಿ- 2002.

೧೦. ಚೆನ್ನುಡಿ ಸ್ಮರಣ ಸಂಚಿಕೆ, ಪ್ರ.ಸಂ.ಕೆ.ಎಸ್. ಸಿದ್ಧಲಿಂಗಪ್ಪ, ತುಮಕೂರು ಜಿಲ್ಲಾ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಗುಬ್ಬಿ ೧೯೯೭                                             


                                                  


                                                                ಅಂಬಳೆ ವೆಂಕಟಸುಬ್ಬಯ್ಯ ಡಾ.ಸಿ.ನಾಗಭೂಷಣ   ಅಂಬಳೆ ವೆಂಕಟಸುಬ್ಬಯ್ಯನವರು ಆರ್. ನರಸಿ...